ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, October 4, 2010

'ಅರ್ಥಹೀನ'


'ಅರ್ಥಹೀನ'

[ನವ್ಯ ಪ್ರೇಮೀ ಸ್ನೇಹಿತರೇ ನಿಮಗಾಗಿ ಬರೆಯುತ್ತಿರುವ ಕಾವ್ಯಗಳ ಸಾಲಿನಲ್ಲಿ ಸದ್ಯಕ್ಕೆಇಲ್ಲೊಮ್ಮೆ ನಿಲ್ಲುತ್ತೇನೆ--ಈ ಕವನದೊಂದಿಗೆ, ಮತ್ತೆ ಬಿಡುವಾದಾಗ ನವ್ಯದಲ್ಲಿ, ಅಲ್ಲೀವರೆಗೆ ಬೇರೆಲ್ಲಾ ಕೃತಿಗಳು ]


ಪಕ್ಕದೂರಲ್ಲೇ ಕವಿ ಇದ್ದಾನೆಂದು
ಒಂಬತ್ತುಮೊಳದ ಧೋತಿ ಉಟ್ಟು
ಅಲ್ಲಾಡಿಸುತ್ತಾ ಬಂದಿದ್ದರು ಗಣಪತಿರಾಯರು
ದೇಶಾವರಿ ನಗೆ ನಕ್ಕರು
ನಾನೂ ಅಂದರಾಗಲಿಲ್ಲವಂತೆ
ತುಂಬಾ ಅಭಿಮಾನವಂತೆ !
ತನ್ನ ಜೀವನವನ್ನೇ ಒಂದು
ಕವನಮಾಡಿದರೆ ಹೇಗೆ ಎಂಬುದು
ಅವರ ಚಿಂತನೆ !
ಕೆಲವೊಮ್ಮೆ ನನ್ನೊಳಗೆ ನಾನೇ
ಅಂದುಕೊಳ್ಳುವುದಿದೆ
ಅಯ್ಯಾ ನಾ ಬರೆದ ಅರ್ಥವಿಲ್ಲದ
ಕವನಕ್ಕೆ ಜನ ಬಹಳ ಅರ್ಥಹಚ್ಚುತ್ತಾರೆ !
ಯಾಕೆಂದರೆ ಅದು ಅವರಿಗೂ ಅರ್ಥವಾಗದ್ದು!
ಹೀಗೇ ಅರ್ಥವಿಲ್ಲದ ನೂರಾರು ಕವನಗಳು
ನನ್ನ ಬತ್ತಳಿಕೆಯಲ್ಲಿವೆ
ನೀವು ನಂಬುವುದಾದರೆ ನಂಬಿ ಬಿಟ್ಟರೆಬಿಡಿ
ಶೇಂಗಾರಾಶಿಯಲ್ಲಿ ಪೊಕ್ಕು ಟೊಳ್ಳು ಶೇಂಗಾ ಇರುವಂತೇ !
ಕುಂಬಾರನ ಮನೆಯಲ್ಲಿ ಅರ್ಧವಾಗಿ ಬಿದ್ದ
ಮಣ್ಣಿನ ಮಡಿಕೆ-ಪಾತ್ರೆಗಳಿರುವಂತೇ !
ಶಿಲ್ಪಿಯ ಚಾಣದ ಚೇಣನ್ನು ತಿಂದು
ಇನ್ನೂ ಪೂರ್ತಿಯಾಗಿ ಮೂರ್ತಿಯಾಗದೇ ಉಳಿದ
ಶಿಲಾಭಾಗದಂತೇ !

ಹಾಗಂತ ಹೋಯ್ ಇಲ್ಕೇಳಿ
ನಾನಿದನ್ನೆಲ್ಲಾ ಗಣಪತಿರಾಯರಿಗಿರಲಿ
ನನ್ನ ಹೆಂಡತಿಗೇ ಹೇಳಿದವನಲ್ಲ
ಅಕಸ್ಮಾತ್ ಹೀಗೆಲ್ಲಾ ಹೇಳಿದರೆ
ಕವಿಯವಿತೆಗೆದುಪಿಬರೆದರೆ ಕಷ್ಟ!
ಹಾಗಂತ ನನಗೇನೂ ಜ್ಞಾನಪೀಠ
ಪ್ರಶಸ್ತಿಯೆಲ್ಲ ಬೇಡ
ಒಂದೊಮ್ಮೆ ಬಂದರೆ ಅದು ನನ್ನ ತಪ್ಪಲ್ಲ !
ನನ್ನ ಪಾಡಿಗೆ ನಾನು ಬರೆಯುವುದು ಬರೆಯುವುದೇ.
ಎಷ್ಟೋ ಕಲಾವಿದರ ನವ್ಯಶೈಲಿಯ ಚಿತ್ರಗಳಂತೇ !
ಅನೇಕ ಸಂಗೀತಜ್ಞರ ದನಿಹೊರಡದ ಗಾಯನದಂತೇ !
ಅದು ಕಲೆಯ-ಸಂಗೀತದ ಆಳವಾದ ಭಾವ !
ಅರ್ಥವಾಯಿತೇ ? ಇನ್ನೂ ಅರ್ಥವಾಗಲಿಲ್ಲಾ ಎಂದರೆ
ಜಪ್ಪಿಕೊಳ್ಳಲಿಕ್ಕೆ ಸದ್ಯ ನಾನು ಕೂತಿದ್ದು ಸೈಬರ್ ಕೆಫೆಯಲ್ಲಿ
ಸೌಂಡಿಗೆ ಎದ್ದು ಓಡಿಬರುವ ಕೆಫೆಯ ಮಾಲೀಕ
ಗಡದ್ದಾಗಿ 'ಕಾಫೀ' ಕೊಟ್ಟರೆ ಕಷ್ಟ!
ಒಟ್ಟಾರೆ ಎಲ್ಲೂ ಸುಸೂತ್ರವಿಲ್ಲ.

ಬರೆದೆ ಕೊಟ್ಟೆ
ತೆಗೆದುಕೊಂಡಿದ್ದು ಒಂದಿಡೀದಿನ!
ಉದ್ಯೋಗವಿಲ್ಲದ ಆಚಾರಿ
ಮಗುವಿನ ಕುಂಡೆ ಕೆತ್ತನಂತೆ !
ಅದೇ ರೀತಿ ನಮ್ಮ ಗಣಪತಿರಾಯರಿಗೆ
ಅವರ ಜೀವನಕಾವ್ಯ ಬರೆದುಕೊಟ್ಟೆ
ಓದಿದರು ತಿರುಗಿಸಿ ಮುರುಗಿಸಿ ಓದೇ ಓದಿದರು
ಬಹಳ ಚೆನ್ನಾಗಿದೆ ಎಂದರು
ಬ್ಲಾಗಿಗರು ಹಾಕಲಾರದೇ ಕಾಮೆಂಟು ಹಾಕುವ ರೀತಿ !
ಅದೊಂಥರಾ ಭಾವಮಿಲನ !
ಬ್ರಾಂಡು ಬಿದ್ದ ಮೇಲೆ ಮುಗಿಯಿತು
ಬರುವುದು ಸೊರಬಿತುಂಬಿದ ಆಕ್ಕಿಯಾದರೂ ಸರಿ
ಸಕ್ಕರೆ ರಹಿತ ಸ್ಪೆಷಲ್ ಮಿಲ್ಕ್ ಬ್ರೆಡ್ ಆದರೂ ಸರಿ
ವಾಸನೆಯೇ ಆಗಿದ್ದರೂ ಸಹಿಸುವ ಬಯಕೆ
ಅದು ಬ್ರಾಂಡಿನ ಮಹಿಮೆ !
ಕವಿಯ ಬ್ರಾಂಡು ಬಿದ್ದ ಕವನ
ಮತ್ತೊಮ್ಮೆ ಬಹಳ ಅರ್ಥಗರ್ಭಿತ ಎಂದರು
ಗಣಪತಿರಾಯರು ಹೊರಟುನಿಂತು
ಹೆಂಡತಿ ಕಣ್ಣಲ್ಲೇ ನನಗೆ ಕೇಳಿದಳು
ಪೈಸೆ ಬಂತೇ ?
ಕವಿಗೆ ಪೈಸೆಯೆಲ್ಲಾ ಯಾವ ಲೆಕ್ಕ ?
ಆತನ ಲೋಕವೇ ಬೇರೆ ! ಬರೇ ಪೈಸೆಗಾಗಿ
ಬರೆವ ಜನವಲ್ಲ ಇದು ! ನಮ್ಗೂ ಸ್ವಲ್ಪ
ಧರ್ಮ-ಕರ್ಮ ಇದೆ ಸ್ವಾಮೀ
ಗಣಪತಿರಾಯರು ಆಗರ್ಭಶ್ರೀಮಂತರು
ಹೀಗಾಗಿ ಕೇಳಿದಳು ಅವರು ಏನಾದರೂ ಕೊಟ್ಟರೇ ?
ನಾನು ಕಣ್ಣು ಸ್ವಲ್ಪ ದೊಡ್ಡದುಮಾಡಿದೆ
ಕೈ ಮರೆಯಲ್ಲಿ : ಗಣಪತಿರಾಯರು ನೋಡಬಾರ್ದಲ್ಲ!
ಮತ್ತೆ ಅದೇ ದೇಶಾವರಿ ನಗೆ ನಕ್ಕರು
ನಾನೂ ನಕ್ಕೆ
ಇಲ್ಲಿಗೆ ಕಥೆ ಕಾಶಿಗೆ ಹೋಯಿತು ನಾನು ಮನೆಗೆ ಹೊರಟೆ
ಅರ್ಥವಾಯಿತೇ ? ಅರ್ಥವಾದರೆ ಇದು
ಮಹಾನ್ವೇಷಣಂ ಮಹಾಕಾವ್ಯದ ಒಂದು ಭಾಗ
ಅರ್ಥವಾಗಗಲಿಲ್ಲವೋ ನಿಮ್ಮೆದುರಿಗಿರುವ
ಮಾನಿಟರ್ ಕುಟ್ಟಿ ಅಥವಾ ಪೇಜು ಹರಿದು
ಮಾಡಿ ಇಬ್ಭಾಗ !
ಅಲ್ಲೇ ಕಾಣಿರಿ ಕವನದ ಸಿರಿ ವೈಭೋಗ!

Saturday, October 2, 2010

’ ರಾಜಕೀಯ ಸನ್ಯಾಸ ’


’ ರಾಜಕೀಯ ಸನ್ಯಾಸ ’

ನಮ್ಮ ದೇಶದಲ್ಲಿ ಫಸ್ಟ್ ಕ್ಲಾಸಿನವರು
ಡಾಕ್ಟರು-ಎಂಜಿನೀಯರು
ಹೀಗಾಗಿ ಅವರೆಲ್ಲಾ ಅವರವರ
ಕೆಲಸದಲ್ಲಿ ತೊಡಗಿ ಬ್ಯೂಸಿಯಾಗಿದ್ದಾರೆ
ಸೆಕೆಂಡ್ ಕ್ಲಾಸಿನವರು ಎಂಬಿಎ ಗಳು ಅವರು
ಫಸ್ಟ್ ಕ್ಲಾಸಿನವರನ್ನು ಕಂಟ್ರೋಲ್ ಮಾಡುತ್ತಾರೆ
ಥರ್ಡ್ ಕ್ಲಾಸಿನವರು ರಾಜಕಾರಣಿಗಳು
ಅವರು ಫಸ್ಟ್ ಮತ್ತು ಸೆಕೆಂಡ್ ಕ್ಲಾಸಿನವರನ್ನು
ಕಂಟ್ರೋಲ್ ಮಾಡುತ್ತಾರೆ
ಫೇಲ್ ಆದವರು ಅಂಡರ್ವರ್ಲ್ಡಿನಲ್ಲಿದ್ದು
ಎಲ್ಲರನ್ನೂ ಕಂಟ್ರೋಲ್ ಮಾಡುತ್ತಾರೆ
ಎಂಬ ಎಸ್ಸೆಮ್ಮೆಸ್ಸು ಬಂದ ಮರುಘಳಿಗೆಯೇ
ಹೊರಟು ಮಂತ್ರಿಮಾಲಿನ ಮೂರನೇ ಮಹಡಿಯ
ಮೂಲೆಯೊಂದನ್ನು ಹಿಡಿದು ತಪಸ್ಸಿಗೆ ಕುಳಿತುಬಿಟ್ಟೆ
ತಪೋಭಂಗಕ್ಕೆ ಹಲವರು ರಂಭೆ
ಮೇನಕೆ ತಿಲೋತ್ತಮೆಯರು ಬಂದರು
ಹಿಡಿಂಬೆ ಪೂತನಿಗಳಂತವರೂ ಬಂದರು
ರಾವಣ ಭಕಾಸುರ ಎಲ್ಲರ
ಏಷ್ಯಾದಲ್ಲೇ ಮರೆಯಲಾರದ
ಗುಡಾಣಹೊಟ್ಟೆಗಳನ್ನೂ ಕಂಡೆ
ಹತ್ತು ಮೀಟರ್ ಬಟ್ಟೆಯಲ್ಲೂ ಹೊಲಿದು
ಯಾವ ಆಕಾರದಿಂದಲೂ ಒದಗಿಸಿ ಮುಗಿಸಲಾರದ
ಅಕರಾಳ ವಿಕರಾಳ ಸ್ವರೂಪ ಕಂಡಾಗ
ಶ್ರೀಕೃಷ್ಣನ ನೆನಪಾಯ್ತು
ನನಗೆ ದಿವ್ಯಚಕ್ಷುವೇ ಬೇಕೇನೋ ಅಂತ !
ಮಾಲಿನ ಬಿಲ್ಡಿಂಗಿನ ಪಿಲ್ಲರುಗಳು ಕಣ್ಮುಂದೆ ಬಂದು
"ಸ್ವಾಮೀ" ಅಂದಹಾಗೆನಿಸಿ ಪಾಪ ಅನ್ನಿಸಿತು !
ಆದಷ್ಟೂ ಬೇಗ [ಪುಣ್ಯ?] ಒಂದಷ್ಟು ಕೋಟಿಮಾಡಿ
ನಿಮಗೆಲ್ಲಾ ಮೋಕ್ಷಕರುಣಿಸುತ್ತೇನೆಂದು ಭರವಸೆಗಳ
ಇಪ್ಪತ್ತು ಅಂಶಗಳ ಮಾಲಿಕೆಯನ್ನೇ ಕೊಟ್ಟೆ!

ತಪಸ್ಸಿನ ಮಧ್ಯೆ ಹಲವು ಅಪಶಕುನಗಳು
ಕಟ್ಟಾನ ಬಾಲಬಡುಕರು ಅಟ್ಟಿಸಿಕೊಂಡು ಬಂದಹಾಗೇ
ನಿತ್ಯಾನಂದ ಕಿವಿ ತೂತು ಬೀಳುವಂತೇ
ಗಹಗಹಿಸಿ ನಕ್ಕಹಾಗೇ !
ರೇಣುಕನ ವ್ಯಾಯಾಮ ಬೇಳೂರಿನ ಊಳು
ಹಾಲಪ್ಪನ ತುಪ್ಪದ ರಂಪ
ಸಂಪಂಗಿಯ ಘಮಘಮ ಘಾಟುಪರಿಮಳ
ಲಿಂಬೆಹುಳಿ ಉಪ್ಪು ಖಾರ ಎಲ್ಲಾ ತೆಗೆದಮೇಲೆ
ಮೊಳೆ ತಂತಿ ಫೆವಿಕಾಲು ಸುತ್ತಿಗೆ ಇಟ್ಟುಕೊಂಡು
ಡಾ| ಯಡ್ಯೂರಣ್ಣ ಖುರ್ಚಿ ರಿಪೇರಿಮಾಡುತ್ತಿರುವ ಹಾಗೆ
ಯಾರೋ ಮೈಸೂರಿಂದ ಕೂಗುತ್ತಿದ್ದರು !
ಇನ್ನಾರೋ ಬಸ್ಸಿಗೆ ಕಲ್ಲು ತೂರಲು ಹೇಳಿ
ತನ್ನ ಕಸುವನ್ನು ಮೆರೆಯುತ್ತಿದ್ದರು
ಮತ್ಯಾರೋ ಬೆಂಕಿ ಹಚ್ಚಿ ಅಮೇಲೆ ನೋಡುವಾ ಅಂದರು !
ಬಲಗಡೆಯಿಂದ ರಾಜಕೀಯದ ಕರಿಬೆಕ್ಕು
ಎಡಕ್ಕೆ ಹೋಗಿ ಎಡವಿಬಿದ್ದಹಾಗೇ !
ಬಡವರ ತಲೆಯನ್ನೆಲ್ಲಾ ನುಣ್ಣಗೆ ಬೋಳಿಸಿ
ಡಾಮರು ಬಳಿದ ಹಾಗೇ !
ಛೇ, ಎಂಥೆಂಥಾ ಕೆಟ್ಟ ಶಕುನಗಳು
ತುಪ್ಪದ ದೀಪಹಚ್ಚಿದರೂ ಇಲ್ಲ, ಕೈಮುಗಿದರೂ ಅಲ್ಲ
ಕಾಲಿಗೆರಗಿ ಬೇಡಲೂ ಸಲ್ಲ ಮತ್ತಿನ್ನೇನು ಮಾಡಲಿ ?

ಪ್ರಯತ್ನಿಸುತ್ತಲೇ ಇದ್ದೆ
ಫಲಾಫಲ ಭವಂತನಿಗೆ ಬಿಟ್ಟಿದ್ದು !
ತಪಸ್ಸು ಮಾಡುವುದು ಮಾಡುವುದೇ.
ಅದೂ ಕುಳಿತದ್ದು ಮಂತ್ರಿಮಾಲೆಂಬ ಜನಾರಣ್ಯದಲ್ಲಿ !
ಅನೇಕ ’ಸಿದ್ಧಪುರುಷರು’ ಸಾಧನೆಗೈದ
ಏಷ್ಯಾದಲ್ಲೇ ಮೊದಲಸ್ಥಾನವೆಂದು
ತಾವೇ ಘೋಷಿಸಿಕೊಂಡ ದಿವ್ಯಕ್ಷೇತ್ರ !
ಬರೋಬ್ಬರಿ ೩ ತಾಸು ಜಪಮಾಡಿದ್ದೇನೆ!
ಕಲಿಯುಗದಲ್ಲಿ ’ದರ್ಶನ’ವೆಲ್ಲ ಬೇಗನೇ!
ಬರಿದೇ ಈ ಮೂಲೆ ಹಿಡಿದು ಕುಂತರೆ ಆಗದು
ಎಂಬ ಜ್ಞಾನೋದಯವಾಗುತ್ತಿದ್ದಂತೆಯೇ
ನನಗೆ ’ಸಾಕ್ಷಾತ್ಕಾರ’ವಾಗಿದೆಯೆಂದು ಹೇಳಿ ಕಳಿಸಿದಾಗ
[ಡಾ|| ?]ಕುಮಾರಣ್ಣ [ನಮ್ಮನ್ನು]ಸ್ವಾಮಿಗಳನ್ನು ನೋಡಲು
ಡೀನೋಟಿಫೈ ಮಾಡಿರುವ ದಾಖಲೆಗಳ
ಆರತಿ ತಟ್ಟೆಹಿಡಿದು ಬಂದಿದ್ದ!
ಸ್ವೀಕರಿಸಿ ಅವರನ್ನೆಲ್ಲಾ ಹರಸಿ
ನಾನಿನ್ನು ಇಲ್ಲಿದ್ದಿದ್ದು ಸಾಕು
ಭಕ್ತರಾದ ನೀವೆಲ್ಲಾ ನನ್ನನ್ನು
ಇಷ್ಟೊಂದು ಪ್ರೀತಿಸುತ್ತಿರುವಾಗ
ನಿಮ್ಮ ’ಕೈ’ ’ಕಮಲ’ ’ದಳ’ಗಳನ್ನು ಅರ್ಪಿಸುತ್ತಿರುವಾಗ
ನಾನು ವಿಧಾನಸೌಧದಲ್ಲೇ
ತಪಸ್ಸಿಗೆ ಕೂರುತ್ತೇನೆ
ನಿಮ್ಮೆಲ್ಲರ ಕಷ್ಟಗಳನ್ನೂ ನಿವಾರಿಸಿ
ತನ್ಮೂಲಕ ನಾನೂ ’ಕೋಟಿ- ಜನ್ಮ’ದ ಫಲವನ್ನ
ಪಡೆಯುತ್ತೇನೆ ಎಂದು ಹೊರಟೆ!

Friday, October 1, 2010

ಲಿವಿಂಗ್ ಇನ್ ದಿ ಹೆವನ್ ---ಭಾಗ ೨


ಲಿವಿಂಗ್ ಇನ್ ದಿ ಹೆವನ್ ---ಭಾಗ ೨

ಬಹೂನಾಂ ಜನ್ಮನಾಮಂತೇ ಜ್ಞಾನವಾನ್ಮಾಂ ಪ್ರಪದ್ಯತೇ |
ವಾಸುದೇವಃ ಸರ್ವಮಿತಿ ಸ ಮಹಾತ್ಮಾ ಸುದುರ್ಲಭಃ ||

[ಪ್ರತ್ಯಾಹಾರವನ್ನು ಜೀವನಪೂರ್ತಿ ಅಳವಡಿಸಿಕೊಂಡಿದ್ದ ಮಹಾತ್ಮಾಗಾಂಧೀಜಿಯವರಿಗೆ ನಮಸ್ಕರಿಸಿ ಅವರ ಜನ್ಮದಿನದ ನೆರಳಿನಲ್ಲಿ ಪ್ರತ್ಯಾಹಾರ ಕುರಿತ ಎರಡನೇ ಕಂತನ್ನು ಕೊಡುವ ಪ್ರಯತ್ನ ಮಾಡುತ್ತಿದ್ದೇನೆ.]

ಹೇಮಾಮಾಲಿನಿ ಬಂದರೆ ಇವತ್ತಿಗೂ ಕಣ್ಣನ್ನು ಇಷ್ಟಗಲ ತೆರೆದು, ತೆರೆದ ಬಾಯ್ ತೆರೆದಂತೇ ಕೂರುವ ಜನರಿದ್ದಾರೆ. ಶ್ರೀದೇವಿಯೋ ಮಾಧುರಿ ದೀಕ್ಷಿತೋ ನೃತ್ಯಮಾಡಿದರೆ ತಾವೂ ಕುಣಿದು ಕೇಕೇ ಹಾಕುವ ಮಂದಿಯಿದ್ದಾರೆ. ಉಪೇಂದ್ರನ ಸಿನಿಮಾವನ್ನು ಜೀವನದಲ್ಲಿ ಅನುಕರಣೆಗೆ ತಂದ ಪಾತಕಿಗಳಿದ್ದಾರೆ! ಹಳೆಯ ಹಾಡುಗಳನ್ನು ಮತ್ತೆ ಮತ್ತೆ ಕೇಳುತ್ತಾ ಮನಸೋಲುವ ನಾವೆಲ್ಲಾ ಇದ್ದೇವೆ! ಕಾಂಚೀ ಸೀರೆ ಎಂದು ಬೋರ್ಡು ಕಂಡಾಗೆಲ್ಲ ಪುಳಕಗೊಳ್ಳುವ ಗೃಹಿಣಿಯರಿದ್ದಾರೆ; ಈಗಂತೂ ಹಲವು ಗೃಹಿಣಿಯರು ಮಾಲ್ ಗಳಲ್ಲೇ ಕಾಲಕಳೆಯತೊಡಗಿದ್ದಾರೆ! ಗೃಹಿಣೀ ಗೃಹಮುಚ್ಚತೇ ಎನ್ನುವ ಸಂಸ್ಕೃತದ ವ್ಯಾಖ್ಯೆ ಗೃಹಿಣೀ ಗೃಹಮುಚ್ಚಿತೇ ? ಎಂದು ಕನ್ನಡದಲ್ಲಿ ಕೇಳುವಷ್ಟು ಅವರ ದೈನಂದಿನ ಬದುಕು ’ಮಾಲಾಯಮಾನ’ವಾಗಿದೆ! ಏನಿದ್ದರೂ ಸುಖವಿಲ್ಲ; ಕೊಂಡಷ್ಟೂ ಸಾಲುವುದಿಲ್ಲ--ಇದು ಇಂದಿನ ನಾರೀಮಣಿಗಳ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಮೂಲಮಂತ್ರ! ಅವರನ್ನು ಆಕರ್ಷಿಸಿದರೇನೆ ತಮ್ಮ ಬೇಳೆ ಬೇಯುತ್ತದೆ ಎಂಬುದನ್ನು ಕಂಡಿಕೊಂಡ ವ್ಯಾಪಾರಿಗಳಿಗೆ ಹೊಸ ಹೊಸ ಸ್ಕೀಮ್ ಮಾಡುವುದೇ ಅವರು ಕಂಡುಕೊಂಡ ತಂತ್ರ!’ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು’ ಇರಲೇಬೇಕಾದ ದಿನಮಾನ ಇದಾಗಿದೆ. ಇಲ್ಲವೋ ಗಂಡ ಹೆಂಡತಿ ಹೇಳಿಕೊಳ್ಳಬೇಕಾದ ಹಾಡು ಇದು--ನಾನೊಂದು ತೀರಾ ನೀನೊಂದು ತೀರಾ ಮನಸು ಮನಸು ದೂರಾ !

ಬೂಂದಿಲಾಡು ಕಂಡರೆ ಯಾರಿಗಾದರೂ ತಿನ್ನಬೇಕೆನಿಸುವುದು ಸಹಜ. ಒಳ್ಳೆಯ ಮಾವಿನಹಣ್ಣು ಕಂಡರೂ ಅಷ್ಟೇ! ಮಲ್ಲಿಗೆ-ಜಾಜಿ ಮೊದಲಾದ ಪರಿಮಳಭರಿತ ಹೂವನ್ನು ಕಂಡರೆ ನಾರಿಯರಿಗೆ ಮುಡಿಯುವ ಬಯಕೆ. ಧನಿಕಶಿಖಾಮಣಿಗೆ ದುಡ್ಡನ್ನು ಮತ್ತಷ್ಟು ಗಳಿಸುವ ಬಯಕೆ. ಲೋಭಿಗೆ ದುಡಿದ ಹಾಗೂ ಪಡೆದ ಯಾವುದನ್ನೂ ಒಂಚೂರು ಯಾರಿಗೂ ದಾನಮಾಡಿಯಾಗಲೀ ಕೊಟ್ಟಾಗಲೀ ಗೊತ್ತಿಲ್ಲ, ಬದಲಾಗಿ ಅದನ್ನೆಲ್ಲ ಕಟ್ಟಿಡುವ ಆಸೆ. ಒಳ್ಳೆಯ ಸಂಗೀತ ತೇಲಿ ಬಂದಾಗ ಮನಸ್ಸು ಪ್ರಪುಲ್ಲವಾಗುತ್ತದೆ. ಲಹರಿ ಜನರಿಗೆ ಹಾಸ್ಯದ ಹೊನಲು ಬಹಳ ಖುಷಿ ತರುತ್ತದೆ. ಹರೆಯದ ಹುಡುಗರಿಗೆ ಹುಡುಗಿಯರ ಕೈ ಮೈ ಸೋಕಿದಾಗ ಒಳಗೊಳಗೇ ಮನಸ್ಸು ಹುಚ್ಚೆದ್ದು ಕುಣಿಯುತ್ತದೆ. ಫಾರಿನ್ ಸೆಂಟಿನ ಪರಿಮಳವನ್ನು ಆಸ್ವಾದಿಸುತ್ತ ಮೂಗು ಮತ್ತದನ್ನೇ ಹುಡುಕುತ್ತದೆ. ಇವೆಲ್ಲಾ ನಮ್ಮ ದೈನಂದಿನ ಸಹಜ ಚಟುವಟಿಕೆಗಳು. ಯಾರೂ ಗಬ್ಬುನಾತ ಹೊಡೆಯುವಲ್ಲಿ ಇರಲು ಬಯಸುವುದಿಲ್ಲ! ಕಾಗೆಯ ಕರ್ಕಶ ಕೂಗು ಯಾರಿಗೂ ಕರ್ಣಾನಂದಕರ ಸಂಗೀತವೆನಿಸುವುದಿಲ್ಲ! ಹಳಸಿದ ಮೃಷ್ಟಾನ್ನ ಯಾರಿಗೂ ರುಚಿಸುವುದಿಲ್ಲ! ಮುದುಕಿಯನ್ನು ಮೆಚ್ಚಿ ಬಸ್ಸಿನಲ್ಲಿ ಜಾಗಕೊಡುವ ಪುಣ್ಯಾತ್ಮರು ಬಹಳ ಕಡಿಮೆ, ಕೊಟ್ಟರೂ ಕನಿಕರದಿಂದ ಮಾತ್ರ-ಅದೇ ಹುಡುಗಿಯಾಗಿದ್ದರೆ ವಿಷಯವೇ ಬೇರೆ! ಒಣಗಿದ ಗಿಡಗಂಟೆಗಳನ್ನೋ ಸತ್ತವರ ದೇಹಗಳನ್ನೋ ಯಾರೂ ನೋಡಿ ಸಂತಸಪಡುವುದಿಲ್ಲ! ಹಾಗೇನಾದರೂ ವ್ಯತ್ಯಾಸ ಕಂಡರೆ ಅವರನ್ನು ಮಾನಸ ಶಾಸ್ತ್ರಜ್ಞರು ಪರೀಕ್ಷಿಸಬೇಕಾಗುತ್ತದೆ! ಹೀಗೇ ಎಲ್ಲವನ್ನೂ ನಮಗೆ ಇಷ್ಟವಾಗುವ ರೀತಿಯಲ್ಲಿ ನಾವು ಪಡೆದರೇನೇ ನಮ್ಮ ಮನಸ್ಸು ಖುಷಿಗೊಳ್ಳುತ್ತದೆ;ಇಲ್ಲವೆಂದರೆ ಇಲ್ಲ.

ಇಷ್ಟೆಲ್ಲಾ ಗೊತ್ತಿದ್ದರೂ ನಾವು ಈ ಜಗದ ಈ ಐದು ಮಾರ್ಗಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ! ಒಂದೊಮ್ಮೆ ನಾವು ಇಂದ್ರಿಯಗಳನ್ನು ನಿಗ್ರಹಿದ್ದೇವೆ ಎಂದುಕೊಂಡರೂ ಅದಾಗಲೇ ನಮ್ಮ ಮನಸ್ಸು ಹೀರಿಕೊಂಡ ಕಲ್ಮಷಗಳು ಒಳಗೇ ಇವೆಯಲ್ಲ--ಅವುಗಳ ವ್ಯುತ್ಪತ್ತಿಯಿಂದಾಗುವ ಹಾನಿಯನ್ನು ತಡೆಗಟ್ಟಬಹುದೇ ? ಅದನ್ನು ಹೇಗೆ ನಿಭಾಯಿಸಬೇಕು--ನಿಜಕ್ಕೂ ಇದೊಂದು ದೊಡ್ಡ ಸವಾಲೇ ಸರಿ. ಈ ಹಂತದಲ್ಲೂ ಒಳಗೆ ಸೇರಿರುವ ವಿಷಯವಸ್ತುಗಳೆಂಬ ಕಲ್ಮಷವನ್ನು ಶರೀರದಲ್ಲಿ ಸೇರಿದ ಕೆಟ್ಟ ಬ್ಯಾಕ್ಟೀರಿಯಾಗಳ ರೀತಿ ಬಡಿದೋಡಿಸುವ ಎದೆಗಾರಿಗೆ ಇರುವಾತ ನಿಜವಾದ ಸನ್ಯಾಸಿಯಾಗುತ್ತಾನೆ! ಒನ್ ವಿಲ್ ಬಿ ದಿ ಸೀಯರ್ ಓನ್ಲಿ ವ್ಹೆನ್ ಹಿ/ಶಿ ಒವರ್ಕಮ್ಸ್ ದಿಸ್ ಸ್ಟೇಜ್! ಇದನ್ನು ಗೆದ್ದಾತನಿಗೆ ಬಾಹ್ಯಜಗತ್ತಿನ ಆಗುಹೋಗುಗಳು ಗಾಢ ಪರಿಣಾಮ ಬೀರುವುದಿಲ್ಲ. ಪ್ರಕೃತಿಯೇ ಅಂಥವರನ್ನು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುತ್ತದೆ ಎಂದರೆ ತಪ್ಪಲ್ಲ! ಇಂಥವರು ಸ್ಥಿತಪ್ರಜ್ಞರಾಗಿರುವ ಜೊತೆಗೆ ನಿಗ್ರಹಾನುಗ್ರಹ ಶಖ್ತಿಯನ್ನೂ ಪಡೆದಿರುತ್ತಾರೆ--ಇದೇ ವಿಶಿಷ್ಟ, ವಿಚಿತ್ರ ಮತ್ತು ವಿಶೇಷ!

ನಮ್ಮ ಚಾಪಲ್ಯಕ್ಕೆ ನಾವು ಮದ್ಯಸೇವಿಸುತ್ತೇವೆ! ಮೊದಲು ನಮ್ಮ ನಾಲಿಗೆ ಮದ್ಯವನ್ನು ಬಯಸಿತು-ಅಂದರೆ ಮನಸ್ಸು ಮದ್ಯವನ್ನು ಬಯಸಿತು. ಆಮೇಲೆ ಕುಡಿದ ಮದ್ಯದ ನೆಶೆಯನ್ನು ಅರಿತ ಮನಸ್ಸು ಅದರೆಡೆಗೆ ಮತ್ತೆ ವಾಲಿತು! ಒಳಗೆ ಕುಳಿತ ’ಮದ್ಯಸಾರ’ ವನ್ನು ನಮ್ಮ ಮನಸ್ಸು ಹೀರಿ ಅದರ ಪರಿಣಾಮ ಆ ಮದ್ಯಸಾರವೇ ಮನಸ್ಸನ್ನು ತನ್ನ ನಿಗ್ರಹದಲ್ಲಿ ಹಿಡಿಯಿತು. ಮತ್ತೆ ಮದ್ಯವನ್ನು ಬಯಸುತ್ತೇವೆ, ಮತ್ತೆ ಕುಡಿಯುತ್ತೇವೆ, ಅದರಿಂದ ಮನಸ್ಸಿಗೆ ಅಂಧಕಾರಕವಿಯುವುದರಿಂದ ನಮಗೇನೋ ನಮ್ಮ ಲೌಕಿಕದ ನೋವಿಗೆ ಪರಿಹಾರ ಸಿಕ್ಕಂತೇ ಅನಿಸುತ್ತದೆ! ಆದರೆ ಅದು ಪರಿಹಾರವಲ್ಲ! ಕುಡಿದಷ್ಟೂ ಬೇಕು. ಕುಡಿದೂ ಕುಡಿದೂ ನಮ್ಮ ಅನ್ನಾಂಗಗಳು ತಮ್ಮತನವನ್ನು ಕಳೆದುಕೊಳ್ಳುತ್ತವೆ;ಲಿವರ್ನಲ್ಲಿ ಹುಣ್ಣಾಗುತ್ತದೆ! ಸಿಗರೇಟು ಸೇದುತ್ತೇವೆ, ಗುಟ್ಕಾ ಜಗಿಯುತ್ತೇವೆ--ಇವೆಲ್ಲಾ ಹೀಗೇ.ಇವೆಲ್ಲದರ ಸಾರ ಒಳನುಗ್ಗಿ ನಮ್ಮ ಮನಸ್ಸಿಗೆ ಮಂಕು ಆವರಿಸುತ್ತದೆ! ಹುಡುಗಿಯ ಮೋಹದ ಬಲೆಯಲ್ಲಿ ಬಿದ್ದ ಹುಡುಗನಿಗೆ ಅವಳೇ ಲೋಕವಾಗುತ್ತಾಳೆ! ಅವಳಿಲ್ಲದ ಜೀವನ ಯಾಕೆ ಎಂಬ ಸ್ಥಿತಿಗೆ ಆತ ಬರುತ್ತಾನೆ. ಒಳಗೆ ಸೇರಿದ ಹುಡುಗಿಯ ಸೌಂದರ್ಯದ ಸಾರ ನಮ್ಮ ಮನಸ್ಸಿಗೆ ಮಂಜುಕವಿಸುತ್ತದೆ! ಕೊನೆಗೆ ತನಗೇ ಸಿಗದ ಅವಳು ಇನ್ಯಾರಿಗೂ ಸಿಗದಿರಲಿ ಎಂಬ ಹಂತಕ್ಕೆ ಬಂದು ಆಮ್ಲವನ್ನು [ಆಸಿಡ್] ಎರಚಿ ಘಾಸಿಗೊಳಿಸುವಷ್ಟರಮಟ್ಟಿಗೆ ಹೇಳಿಕೊಡುವ ಕೆಟ್ಟ ಸಿನಿಮಾಗಳು ಹುಟ್ಟಿಕೊಳ್ಳುತ್ತವೆ, ಅಂತಹ ಸಿನಿಮಾ ಹೀರೋವನ್ನು ನಾವು ದೇವರಂತೆ ಮೆರೆಸುವ ಮಂಕುದಿಣ್ಣೆಗಳಾಗಿ ಅವನಿಂದ ದುರ್ದೀಕ್ಷೆಯನ್ನು ಗೊತ್ತಿಲ್ಲದೇ ಪಡೆದಿರುತ್ತೇವೆ!

ಇವುಗಳನ್ನೆಲ್ಲ ಮೆಟ್ಟಿನಿಲ್ಲಲು ನಮ್ಮಿಂದ ಸಾಧ್ಯವೇ ಇಲ್ಲವೇ ? ಪರಿಸ್ಥಿತಿಯ ಕೈಗೊಂಬೆಯಾದರೂ ಆ ಪರಿಸ್ಥಿತಿಯನ್ನೇ ತಿರುಗಿಸಿ ಸದ್ವಿನಿಯೋಗ ಮಾಡಿಕೊಳ್ಳಬಲ್ಲ ತಾಕತ್ತು ನಮ್ಮದಾಗಬಹುದೇ? ಇದಕ್ಕೆಲ್ಲಾ ನಾವು ಉತ್ತರ ಹುಡುಕಬೇಕಾದ್ದೇ ಸರಿ. ಪ್ರಕೃತಿಯಲ್ಲಿ ಮೂರು ತೆರನಾದ ಜನರಿರುತ್ತಾರಂತೆ. ಪ್ರವಾಹ ಹರಿವ ದಿಕ್ಕಿನಲ್ಲಿ ಈಜುವವರು, ಪ್ರವಾಹದ ವಿರುದ್ಧವಾಗಿ ಈಜುವವರು ಮತ್ತು ಪ್ರವಾಹದ ದಿಕ್ಕನೇ ಬದಲಿಸುವವರು! ಈ ಮೂರರಲ್ಲಿ ನಾವು ಯಾರೆಂದು ನಾವೇ ಸಂಕಲ್ಪಿಸಿಕೊಳ್ಳಬೇಕು! ಪ್ರವಾಹದ ದಿಕ್ಕಿನಲ್ಲೇ ಈಜುವುದು ನಮ್ಮತನವನ್ನು ಕಳಕೊಂಡ ಸ್ಥಿತಿ. ಪ್ರವಾಹಕ್ಕೆ ಎದುರಾಗಿ ಈಜುವುದು ಹುಂಭತನ ಹಾಗಾದ್ರೆ ಪ್ರವಾಹದ ದಿಕ್ಕನ್ನೇ ತಿರುಗಿಸಿಬಿಟ್ಟರೆ? ಇದು ಎಲ್ಲರಿಗೂ ಸಾಧ್ಯವೇ ? ಮೊದಲು ಮನಸ್ಸು ಮಾಡಿ-ಆಮೇಲೆ ನೋಡಿ. ಇದು ಕಠಿಣ ಹೋಉದು, ಸಾಮಾನ್ಯರಿಗೆ ಸಾಧ್ಯವೂ ಇಲ್ಲ. ಆದರೆ ಈ ದಿಸೆಯಲ್ಲಿ ಸ್ವಲ್ಪ ಚಿಂತನಾಶೀಲರಾಗಿ ತೊಡಗಿಕೊಂಡಾಗ ನಮ್ಮ ಇಂದ್ರಿಯಗಳಿಗೆ ಬ್ರೇಕು ಬೀಳುತ್ತದೆ! ಯಾವಾಗ ಇಂದ್ರಿಯಗಳಿಗೆ ಬ್ರೇಕು ಬೀಳುತ್ತದೋ ಆವಾಗ ಸಮಸ್ಯೆಗಳ ಪ್ರವಾಹ ತಂತಾನೇ ಕಮ್ಮಿಯಾಗುತ್ತದೆ. ಯಾವಾಗ ಸಮಸ್ಯೆಗಳಪ್ರವಾಹ ಇಳಿದು ಹೋಗುತ್ತದೋ ಆಗ ನಿಜದ ಅರಿವು ನಮಗೆ ಹತ್ತಿರವಾಗುತ್ತದೆ!

ಇವತ್ತು ಜೇಬಲ್ಲಿ ೧ ರೂಪಾಯಿ ನಾಣ್ಯಮಾತ್ರ ಇದೆ! ನಾಳೆ ಏನುಗತಿ? ಚಿಂತಿಸಬೇಡಿ--ಚಿಂತಿಸಿದರೆ ಹುಚ್ಚರಾಗುತ್ತೀರಿ..ನಾಳೆಯನ್ನು ಇಂದೇ ಯಾರೂ ಗುರುತಿಸಿಲ್ಲ, ನಾಳೆ ಬರುತ್ತದೆ ಸಾಗುತ್ತದೆ ಅಂತ ಅಂದುಕೊಂಡಿರುತ್ತೇವೆ. ಆ ಒಂದೇ ರೂಪಾಯಿಯನ್ನು ಒಂದು ಲಕ್ಷದಂತೇ ನೋಡಿ,ಖುಷಿಯಿಂದಿರಿ, ಭಗವಂತನಲ್ಲಿ ಪ್ರಾರ್ಥನೆ ಮಾಡಿ...ನಿಮಗೇ ಗೊತ್ತಿಲ್ಲದಂತೆ ಸಹಾಯ ಒದಗಿಬರುತ್ತದೆ. ಈ ಸಹಾಯ ನೀವು ಶುದ್ಧಹಸ್ತರಾಗಿದ್ದರೆ ಮಾತ್ರ ಎನುವುದನ್ನು ಮರೆಯಬಾರದು.ಸುಮಾರು ೩೦ ವರ್ಷಗಳ ಹಿಂದಿನ ಕತೆಯನ್ನು ನನ್ನಜ್ಜ ಹೇಳಿದ್ದರು ಕೇಳಿ- ಕುಮಟಾ ಊರಿನಲ್ಲಿ ನಮ್ಮ ಅಜ್ಜ ಅಡಿಕೆಮಂಡಿ ಇಟ್ಟಿದ್ದರು. ಹಳ್ಳಿಯ ಜನ ಬಹಳಮಂದಿ ರಾತ್ರಿ ತಂಗುತ್ತಿದ್ದರು. ಹಳ್ಳಿಯಜನರೆಂದರೆ ಅಜ್ಜನವರಿಗೆ ಬಹಳ ಪ್ರೀತಿಯಿತ್ತು. ಅವರು ಪ್ರಾಮಾಣಿಕವಾಗಿ ರೈತಾಭಿವೃತ್ತಿ ಮಾಡುತ್ತ ಬದುಕುವವರು ಎಂಬ ಕಳಕಳಿಯಿತ್ತು.ಹೀಗೇ ಒಂದು ರಾತ್ರಿ ಒಬ್ಬಾತ ಉಳಿದುಕೊಳ್ಳಬಹುದೇ ಎಂದು ಕೇಳಿದಾಗ ಅಸ್ತು ಎಂದಿದ್ದರು. ಅಕ್ಕ-ಪಕ್ಕದಲ್ಲೇ ಮಲಗಿದ್ದ ಅಜ್ಜನವರಿಗೆ ಮೂತ್ರಶಂಕೆ ಕಾಡಿ ಹತ್ತಿರ ಇಟ್ಟುಕೊಂಡಿದ್ದ ಟಾರ್ಚ ಹುಡುಕಿದರಂತೆ. ಅಲ್ಲಿ ಟಾರ್ಚೂ ಇರಲಿಲ್ಲ, ಆ ಮಲಗಿದ್ದ ವ್ಯಕ್ತಿಯೂ ಇರಲಿಲ್ಲ! ಆತ ಜುಗಾರು ಆಡುತ್ತಿದ್ದನಂತೆ. ಅಜ್ಜನವರಿಗೆ ಅದು ಗೊತ್ತಿರಲಿಲ್ಲ! ಹೀಗಾಗಿ ಸಹಜವಾಗಿ ಉಪಚರಿಸಿದ್ದರು. ಆ ವ್ಯಕ್ತಿ ಚಿಂತಿಸಿದ್ದೇ ಅದನ್ನು. ರಾತ್ರೋರಾತ್ರಿ ಆ ಟಾರ್ಚನ್ನು ಯಾರಿಗೋ ಮಾರಿ ಹಣಪಡೆದು ಅದನ್ನೂ ಜುಗಾರಿಗೆ ಖರ್ಚುಮಾಡಿ ಮಾರನೇ ದಿನ ದಾರಿಯಲ್ಲಿ ಆತ ಹೊಡೆತತಿನ್ನುತ್ತಿದ್ದಾಗಲೇ ಅಜ್ಜನವರಿಗೆ ಆತ ಮತ್ತೆ ಕಾಣಿಸಿದ್ದು. ಜನ್ಮದಲ್ಲೇ ಆತ ಮತ್ತೆ ಸಹಾಯಪಡೆಯದಾದ! ನಾವು ಸರಿಯಾಗಿದ್ದರೆ, ಸಾತ್ವಿಕರಾಗಿದ್ದರೆ, ಒಳ್ಳೆಯ ಮನಸ್ಸುಳ್ಳವರಾಗಿದ್ದರೆ, ವ್ಯವಹಾರ ಶುದ್ಧರಾಗಿದ್ದರೆ ನಮ್ಮ ಕಷ್ಟವನ್ನೇ ತಮ್ಮ ಕಷ್ಟವೇನೋ ಎಂದು ಸಹಕರಿಸುವ ಬಹಳ ಜನ ನಮಗೆ ಸಿಗುತ್ತಾರೆ. ತಮ್ಮಿಂದಾಗುವ ಸಹಾಯವನ್ನು ಪ್ರಾಮಾಣಿಕವಾಗಿ ಕೊಡಲು ಮುಂದೆಬರುತ್ತಾರೆ.

ಜೀವಿತದಲ್ಲಿ ಬಹಳ ಆಸೆಯನ್ನು ಮತ್ತು ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಳ್ಳದೇ ಮುನ್ನಡೆದರೆ ಅದು ಬಹಳಮಟ್ಟಿಗೆ ನಮಗೆ ಹಿತವನ್ನು ನೀಡುತ್ತದೆ. ಪ್ರತಿಫಲವನ್ನು ಬಯಸದೇ ಮಾಡಿದ ಕೆಲಸ, ಪ್ರಚಾರ ಬಯಸದ ದಾನ, ತನ್ನದಲ್ಲವೆಂದು ಕೊಟ್ಟ ಸಹಾಯ, ಹಸಿದ ವ್ಯಕ್ತಿಗೆ ಇತ್ತ ಅನ್ನ, ನಿರ್ಗತಿಕ ವಿದ್ಯಾರ್ಥಿಗೆ ನೀಡಿದ ವಿದ್ಯಾದಾನ, ಆರ್ತರಿಗೆ ಮಾಡಿದ ಆಪತ್ಕಾಲದಸೇವೆ, ಅನಾಥರಿಗೆ ಮಿಡಿದು ನೀಡಿದ ಅನುಕೂಲ ಇವೆಲ್ಲಾ ಯಾವಕಾಲಕ್ಕೂ ಮೌಲ್ಯಕಳಕೊಳ್ಳುವುದಿಲ್ಲ. ಅವುಗಳ ಫಲ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಸಿಕ್ಕೇಸಿಗುವುದು ಖಂಡಿತ. ಕೆಲಸಗಳನ್ನು ನಾವು ಪೂರೈಸುವಾಗ ಅದರ ಪ್ರತಿಫಲಾಪೇಕ್ಷೆ ಇಲ್ಲದೆಯೇ ಪೂರೈಸಿದರೆ ಅದು ಉತ್ಕೃಷ್ಟವೆನಿಸುತ್ತದೆ;ಅದು ನಿಷ್ಕಾಮ್ಯಕರ್ಮವೆನಿಸುತ್ತದೆ.

|| ಉಪಕಾರೋಪಿ ನೀಚಾಣಾಂ ಅಪಕಾರಾಯಕಲ್ಪತೇ || ಎಂಬುದು ಸಂಸ್ಕೃತ ವ್ಯಾಖ್ಯೆ. ಯಾರಿಗೋ ನಾವು ಉಪಕರಿಸಿದ್ದರೂ ಕೆಲವೊಮ್ಮೆ ಅವರು ನಮಗೆ ಅಪಾಯಕಾರಿಯಾಗೇ ಪರಿಣಮಿಸಬಹುದು. ಅದನ್ನರಿತೇ ದಾಸರು

ಬೇವುಬೆಲ್ಲದೊಳಿಡಲೇನು ಫಲ ?
ಹಾವಿಗೆ ಹಾಲೆರೆದೇನು ಫಲ ?
ಕುಟಿಲವ ಬಿಡದಿಹ ಕುಜನರು ಮಂತ್ರವ ಪಠನೆಯೆ ಮಾಡಿದರೇನು ಫಲ?
ಸಟೆಯನ್ನಾಡುವ ಮನುಜರು ಹಲವರು ವಿಠಲನ ನೆನೆದರಿನ್ನೇನು ಫಲ ?

---ಎಂದಿದ್ದಾರೆ.

ಎಲ್ಲೋ ಕೆಲವೊಮ್ಮೆ ಈ ಥರದ ಸನಿವೇಶಗಳು ಎದುರಾಗುವುದು ನಮಗೆ ಕಂಡುಬರುತ್ತದೆ. ನಾವು ಕಥೆಯೊಂದರಲ್ಲಿ ಕೇಳುತ್ತೇವೆ- ಹುಲಿಯೊಂದು ಬೇಟೆಗಾರನ ಪಂಜರದಲ್ಲಿ ಸಿಲುಕಿದ್ದು ಹಾದಿಹೋಕನೊಬ್ಬನ ಕೂಡ ಆರ್ತನಾದಮಾಡಿ ಬಿಡಿಸುವಂತೆ ಪ್ರಾರ್ಥಿಸುತ್ತದೆ, ಆತ ಬಿಡಿಸಿದಾಗ ಆತನನ್ನೇ ತಿನ್ನಲು ಹೊರಡುತ್ತದೆ! ಇದೇರೀತಿ ಅಪಾತ್ರರಿಗೆ ದಾನಮಾಡಿದಾಗ ಕೂಡ ಆಗಬಹುದು. ಯಾವಕೆಲಸ, ಯಾವಾಗ, ಎಲ್ಲಿ,ಯಾತಕ್ಕಾಗಿ, ಯಾರಸಲುವಾಗಿ ಮಾಡುತ್ತಿದ್ದೇವೆ ಎಂದು ಯೋಚಿಸಿ ಮಾಡುವುದು ಬಹಳ ಒಳಿತು. ಯೋಚಿಸಿ ಮಾಡಿದ ಯಾವ ಕೆಲಸವೂ ಹಾಳಾಗುವುದಿಲ್ಲ; ಇದಕ್ಕೆ ನಿಮ್ಮ ’ಒಳಗಿನ ಕರೆ’ ಸಮ್ಮತಿಸಿದರೆ ಮಾತ್ರ ಆಕೆಲಸ ಮಾಡಿ, ಇಲ್ಲಾಂದರೆ ಮಾಡದಿರುವುದೇ ಒಳಿತು.

" ಹಾಗಾದರೆ ಇಷ್ಟೆಲ್ಲಾ ಪುರಾಣ ಓದಿದ ನಾವು ಸನ್ಯಾಸಿಯಾಬೇಕೆನ್ನುತ್ತೀರೇನು" ಎಂದು ನೀವು ಕೇಳಬಹುದು. ಖಂಡಿತಾ ಇಲ್ಲ. ನಮ್ಮ ಮನೋನಿಗ್ರಹಕ್ಕೆ ಬೇಕಾಗಿ ನಾವು ಸನ್ಯಾಸಿಗಳೇ ಆಗಬೇಕಿಲ್ಲ. ನಾವು ನಾವಾಗಿದ್ದೇ ಪ್ರತ್ಯಾಹಾರದ ಸೂತ್ರಗಳನ್ನು ಅಳವಡಿಸಿಕೊಳ್ಳಬಹುದು. ಈ ಸೂತ್ರಗಳು ಯಾವವು ಮತ್ತು ಅವುಗಳ ಪಾಲನೆ ಹೇಗೆ ಎಂಬುದನ್ನು ಮೂರನೆಯ ಹಾಗೂ ಕೊನೆಯ ಭಾಗದಲ್ಲಿ ಕೆಲವೇ ದಿನಗಳಲ್ಲಿ ನೋಡೋಣ.

ರಾಮ ಮತ್ತು ಕೃಷ್ಣರೆಲ್ಲ ಒಂದೇ ಆದರೂ ಇವತ್ತಿನ ಈ ನಿರೂಪವನ್ನು ಮಹಾತ್ಮಾಜಿಯವರು ಸಾರ್ವತ್ರಿಕವಾಗಿ ಉಪದೇಶಿಸಿದ ರಾಮನಾಮಸ್ಮರಣೆಯೊಂದಿಗೆ ಮುಗಿಸಲು ಮನ ಬಯಸುತ್ತಿದೆ.

ರಘುಪತಿ ರಾಘವ ರಾಜಾರಾಂ ಪತಿತ ಪಾವನ ಸೀತಾರಂ
ಈಶ್ವರ ಅಲ್ಲಾ ತೇರೋ ನಾಮ್ ಸಬಕೋ ಸನ್ಮತಿ ದೇ ಭಗವಾನ್

ಶ್ರೀರಾಘವಂ ದಶರಥಾತ್ಮಜಮಪ್ರಮೇಯಂ
ಸೀತಾಪತಿಂ ರಘುಕುಲಾನ್ವಯರತ್ನದೀಪಮ್ |
ಆಜಾನುಬಾಹುಮ್ ಅರವಿಂದದಳಾಯತಕ್ಷಾಮ್
ರಾಮಂ ನಿಶಾಚರವಿನಾಶಕರಮ್ ನಮಾಮಿ ||

|| ಹರೇ ರಾಮ || || ಓಂ ತತ್ಸತ್ ||


Thursday, September 30, 2010

’ಸುಬ್ರಾಯ ಪರಿಭ್ರಮಣ ’!

ಚಿತ್ರ ಋಣ : ಅಂತರ್ಜಾಲ

[ಆತ್ಮೀಯ ನವ್ಯ ಓದುಗ ಪ್ರಿಯರೇ, ನಿಮ್ಮ ಖುಷಿಗಾಗಿ ಮಧ್ಯೆ ಮಧ್ಯೆ ಬರೆಯುವ ನವ್ಯದ ವ್ಯಂಜನ ತಗೊಳ್ಳಿ ]

’ಸುಬ್ರಾಯ ಪರಿಭ್ರಮಣ ’!

ಏನೋ ಬಹಳ ಮಂದಿ ಬರೆಯುತ್ತಾರಲ್ಲಾ
ತಾನೂ ಬರೆದರೆ ತೊಂದರೆಯೇನು
ಎಂಬ ಪರಿಕಲ್ಪನೆಯ ತೊಳಲಾಟದಲ್ಲಿ ಸಿಲುಕಿದ್ದ
ಸಾಣ್ಮನೆ ಸುಬ್ರಾಯ
ತಟ್ಟೆತೊಳೆಯುತ್ತಾ ನಿರ್ಧರಿಸಿಯೇ ಬಿಟ್ಟ
ಇನ್ನೇನಿದ್ದರೂ ಜೀವನದಬಿಸೈಡು
ಬರೆಯದೇ ಹೋದರೆ ಯಾರಿಗೂ
ತನ್ನಬಗ್ಗೆ ತಿಳಿಯುವುದೇ ಇಲ್ಲ ಹೀಗಾಗಿ
ರೇನಾಲ್ಡ್ ಪೆನ್ನಿನ ಇಂಕು
ಖಾಲಿಯಾಗುವವರೆಗೂ ಬರೆದ
ಗುಂಯ್ ಎನ್ನುವ ಸೊಳ್ಳೆಗಳನ್ನೂ ಲೆಕ್ಕಿಸದೇ
ಹೊರಗಿನಿಂದ ಬರುತ್ತಿರುವ
ಚರಂಡಿ ವಾಸನೆಗೂ ಮನಸ್ಸಲ್ಲಿ ಮಣೆಹಾಕದೇ
ಬರೋಬ್ಬರಿ ೩೦೦ ಪೇಜು ಬರೆದ!
ಪ್ರಕಟಿಸಿದ ಆತ್ಮಕಥೆಯನ್ನು
ಹತ್ತಾರು ಪುಸ್ತಕಗಳಂಗಡಿಗೆ ಕೊಂಡೊಯ್ದು ತೋರಿಸಿದ
ಯಾರೂ ತೆಗೆದುಕೊಳ್ಳುವ ಮನಸ್ಸುಮಾಡಲಿಲ್ಲ !
ಅಬ್ಬಾ ಎಂಥಾ ಖೂಳರು
ಒಬ್ಬರಿಗೂ ತನ್ನಿರುವಿಕೆಯ ಪರಿವೆಯೇ ಇಲ್ಲವೇ ?
ಬೀಡಿ ಅಂಗಡಿ ಇಟ್ಟುಕೊಂಡು
ತಾನು ಸಲ್ಲಿಸಿದ ಸೇವೆ ಮಾನ್ಯಮಾಡುವವರೇ ಇಲ್ಲವೇ ?
ಪ್ರಶಸ್ತಿ ಹಾಳಾಗಿ ಹೋಗಲಿ
ಕೊನೇಪಕ್ಷ ತನಗೊಂದು ಸಣ್ಣ
ಪೌರ ಸನ್ಮಾನ ಮಾಡಿದರೆ
ಅವರ ಗಂಟೇನು ಹೋಗುತ್ತಿತ್ತು!

ಯಾವಾಗ ಹಾಸಿಗೆಯಲ್ಲಿಬಿಸೈಡ್ ಆದನೋ
ಆಗಲೇ ಕುಸಿದುಬಿದ್ದ ಕನಸಿನಿಂದ
ಆಚೆ ಬಂದ ಆತನಿಗೆ ಬಾಯಾರಿದಂತಾಗಿತ್ತು
ಬಾಯಿಂದ ಮಾತೇ ಹೊರಡದ ರೀತಿ !
ಅಷ್ಟಕ್ಕೂ ತಾನುಮಾಡಿದ ಮಹಾಪರಾಧವೇನು ?
ಕನಸುಕಾಣುವುದು ತಪ್ಪಲ್ಲವಲ್ಲ!
ಕನಸಿಗೆ ಬಣ್ಣವಿಟ್ಟು ಬಾಲಹಚ್ಚಿ
ಬಾಲಂಗೋಚಿಯಂತೇ ಹಾರಬಿಟ್ಟರೆ
ಅದು ಮೇಲೇರಲು ಸಾಧ್ಯವೇ ?

ಹೌದೌದು ವಿಜ್ಞಾನ ಇಷ್ಟೆಲ್ಲಾ ಮುಂದುವರಿದಿದೆ
ಕನಸೇ ಬೀಳದ ಹಾಗೇ ಅಥವಾ
ನಮಗೆ ಬೇಕಾದ ಕನಸುಗಳು ಮಾತ್ರ
ಬೀಳುವ ಹಾಗೇ ಮಾಡಲಾಗದೇ ?
ಏನೇನೋ ಮಾಡುತ್ತೇವೆ ಎನ್ನುತ್ತಾರಪ್ಪ
ಹಾಲು ಹಿಂಡಲು ಯಂತ್ರಮಾಡಿದರು
ಅಡಿಕೆ ಸಿಪ್ಪೆ ಸುಲಿಯಲು ಯಂತ್ರಮಾಡಿದರು
ಹಾಲನ್ನು ಪ್ಲಾಸ್ಟಿಕ್ ಕೊಟ್ಟೆಯಲ್ಲಿ
ತುಂಬಿಸಿ ಸೋರದಂತೇ ಅಂಟಿಸುವ ಯಂತ್ರವನ್ನೂ ಮಾಡಿದರು
ಸೊಳ್ಳೆ ಹೊಡೆಯಲು ಬ್ಯಾಟುಮಾಡಿದರು
ಸೊಳ್ಳೆ-ನೊಣ ಹಿಡಿಯಲು ಯಂತ್ರಮಾಡಿದರು
ಇಷ್ಟೆಲ್ಲಾ ಮಾಡಿದವರಿಗೆ
ಅವೆಲ್ಲದರ ಜೊತೆ
ಸತ್ತ ಮನುಷ್ಯರಿಗೆ ಜೀವಕೊಡುವ ಯಂತ್ರ ?
ಪುನಃಸೈಡ್ ತಿರುಗಿತು ಬಾಡಿ !
ಹಾಸಿಗೆಯಲ್ಲಿ ನಡೆದ ಮಹಾಯುದ್ಧದಲ್ಲಿ
ಸುಬ್ರಾಯ ಹೈರಾಣಾಗಿದ್ದ !
೯೦ ಎಮ್ಮೆಮ್ ಕ್ಯಾಸೆಟ್ಟಿನ ಟೇಪು
ಸುಮಾರಾಗಿ ಓಡಿ ಸಿಕ್ಕಾಕಿಕೊಂಡಿತ್ತು!
ಪಡ್ಡು ಮಾಡಿದ್ದೇನೆಂದು ಹೆಂಡತಿ ಕರೆದಾಗ
ಗಡ್ಡ ತುರಿಸಿಕೊಳ್ಳುತ್ತಾ ಎದ್ದುಹೋದ !

Wednesday, September 29, 2010

ಕೋಲು ಕೋಲಣ್ಣ ಕೋಲು ಬಣ್ಣದ್ ಕೋಲೆ ಹೋಯ್


ಕೋಲು ಕೋಲಣ್ಣ ಕೋಲು ಬಣ್ಣದ್ ಕೋಲೆ ಹೋಯ್

ಮಂಗನ ಕೈಲಿ ಮಾಣಿಕ್ಯ ಕೊಟ್ಟರೆ
ಅಂಗಕೆ ಒರೆಸಿ ನೋಡಿತದು
ಕಂಗಳಿಗೇನೂ ಕಾಣದೆ ಇರಲು
ಮುಂಗಡೆಗೆಲ್ಲೋ ಎಸೆಯಿತದು ಹೋಯ್ |
ಕೋಲು ಕೋಲಣ್ಣ ಕೋಲು ಬಣ್ಣದ್ ಕೋಲೆ ಹೋಯ್ || ||

ಬೆಂಗಳೂರ ಜನ ಮೊಬೈಲು ಸಿಕ್ಕರೆ
ಪುಂಗಿಯ ಮುಂದಿನ ಹಾವಂತೇ
ತಿಂಗಳ ಬೆಳಕಲೋ ಬಿರುಬಿಸಿಲಲ್ಲೋ
ಭಂಗವಿರದೆ ಮಾತನಾಡುವರು ಹೋಯ್ |
ಕೋಲು ಕೋಲಣ್ಣ ಕೋಲು ಬಣ್ಣದ್ ಕೋಲೆ ಹೋಯ್ || ||

ಬಂಗಾಳಿಗಳು ಬಿಹಾರಿಗಳು ತಾವ್
ಸಂಘವ ಕಟ್ಟಿ ಬಂದಿಹರು
ನಂಗಳಜನಗಳಿಗಿಲ್ಲದ ಕೆಲಸವ
ತಿಂಗಳೊಳಗೆ ಗಿಟ್ಟಿಸುತಿಹರು ಹೋಯ್ |
ಕೋಲು ಕೋಲಣ್ಣ ಕೋಲು ಬಣ್ಣದ್ ಕೋಲೆ ಹೋಯ್ || ||

ರಂಗಿನ ನಾರಿಯರೆಲ್ಲರು ರಂಜಿಸಿ
ಮುಂಗಡ ಸೇರುತ ಮಾಲ್ಗಳಲಿ
ತಂಗಿತಮ್ಮ ಬಳಗವ ಕರೆದೆಳೆಯುತ
ನಿಂಗೇನ್ ನೋಡು ಎನ್ನುತಲಿಹರು ಹೋಯ್ |
ಕೋಲು ಕೋಲಣ್ಣ ಕೋಲು ಬಣ್ಣದ್ ಕೋಲೆ ಹೋಯ್ || ||

ಮಂಗಳ ಮುಖಿಯರು ಕಂಡೆಡೆ ಚಾಚುತ
ಹಿಂಗೇನಾವಿರೋದು ಎನ್ನುತಲಿ
ಚಂಗನೆ ಜಿಗಿಯುತ ಹಲವರ ತಟ್ಟುತ
ಹೆಂಗಾದರೂ ಮಾಡಿ ಕೀಳುವರು ಹೋಯ್ |
ಕೋಲು ಕೋಲಣ್ಣ ಕೋಲು ಬಣ್ಣದ್ ಕೋಲೆ ಹೋಯ್ || ||

ಸಂಘಟಕರು ಕರೆಯೋಲೆಯ ಮುದ್ರಿಸಿ
ಬೆಂಗಡೆಯಲಿ ದೇಣಿಗೆ ಕೂಪನ್
ಮಂಗಳಮೂರುತಿ ಕೂರಿಸುವುದಕೆನೆ
ಅಂಗಳದಲಿ ಕರೆಯುತಲಿಹರು ಹೋಯ್ |
ಕೋಲು ಕೋಲಣ್ಣ ಕೋಲು ಬಣ್ಣದ್ ಕೋಲೆ ಹೋಯ್ || ||

ಅಂಗಿ ಪ್ಯಾಂಟನು ಕಿತ್ತೆಳೆದಾಡುತ
ನಂಗೇನ್ಕಮ್ಮಿ ಮಂತ್ರಿಯಮಾಡಿ
ಮಂಗನಮಾಡಿದಿರೆನ್ನುತ ಬೆಂಕಿಯ
ಕಂಗೆಡಿಸಲು ಹಚ್ನೋಡಿದರು ಹೋಯ್ |
ಕೋಲು ಕೋಲಣ್ಣ ಕೋಲು ಬಣ್ಣದ್ ಕೋಲೆ ಹೋಯ್ || ||

ಕಾಂಗೈ ದಳಗಳು ಕಮಲವ ಮುದುಡಿಸೆ
ಭಾಂಗೀಕಟ್ಟಲು ಶುರುವಿಟ್ಟು
ಸಾಂಗೋಪಾಂಗದಿ ನೆಂಟರೇ ಮೊದಲಲಿ !
ಮ್ಯಾಂಗೋ ಜೂಸನು ಕುಡಿದಿಹರು ಹೋಯ್ |
ಕೋಲು ಕೋಲಣ್ಣ ಕೋಲು ಬಣ್ಣದ್ ಕೋಲೆ ಹೋಯ್ || ||

ಮಂಗಳಕರುಮಾರಮ್ಮನ ಬೇಡುತ
ಹೆಂಗೋ ಮುಗಿಸಿರೆ ಸಂಪುಟವ
ಹಿಂಗೇ ಆದರೆ ನಮ್ ಸಂಪಂಗಿಯ
ಹೆಂಗ್ಬಿಡ್ತಾರೆಂದ್ರು ಕೋಲಾರದಲಿ ಹೋಯ್ |
ಕೋಲು ಕೋಲಣ್ಣ ಕೋಲು ಬಣ್ಣದ್ ಕೋಲೆ ಹೋಯ್ || ||

ಅಂಗದ ಜಾಂಬವ ಹನುಮರು ಜಿಗಿದರು
ಅಂಗಾಂಗಕೆ ಮಸ್ಸಾಜಿರದೇ !
ಹೆಂಗೈತೊಮ್ಮೆ ನೋಡಿರಿ ಎಂದರು
ಹಿಂಗಡೆ ಬೇರೆ ತೋರಿಸುತ ! ಹೋಯ್ |
ಕೋಲು ಕೋಲಣ್ಣ ಕೋಲು ಬಣ್ಣದ್ ಕೋಲೆ ಹೋಯ್ || ||

Tuesday, September 28, 2010

ಆಧ್ಯಾತ್ಮ-ವಿಜ್ಞಾನ

ಚಿತ್ರ ಋಣ : ಅಂತರ್ಜಾಲ
ಆಧ್ಯಾತ್ಮ-ವಿಜ್ಞಾನ

ಹಾರುವ ಮೊಲವನ್ನು ಕಂಡು
ಮೂರೇ ಕಾಲು ಎಂದರು !
ಬಾರಿ ಬಾರಿ ಸಾರಿ ಹೇಳೆ
ಯಾರೂ ಅರಿಯದಾದರು !

ಜಾರುವ ಬಂಡೆಯಮೇಲೆ
ಏರಬೇಡಿರೆಂದರೂ
ನೀರಪಸೆಯ ಕಂಡೂ ಕಂಡೂ
ದಾರಿತುಳಿದು ಬಿದ್ದರು !

ಊರ ಜನರ ಅಂಬೋಣಕೆ
ಮಾರಿಕೊಳ್ಳಬೇಡೆನೆ
ಖಾರವಾದ ಮಾತನಾಡಿ
ಹಾರಿ ಹಾಯ್ದುಬಂದರು

ಹಾರಿದಾ ವಿಮಾನವಿಳಿಯೆ
ಮಾರಜನಕ ದಯೆಯದು
ನೀರಿಗಿಳಿದ ಹಡಗು ಮರಳಿ
ದೂರದಡವ ಸೇರ್ವುದು !

ದಾರಿಕಂಡ ಋಷಿಮುನಿಗಳು
ಧಾರೆಯೆರೆದ ಜ್ಞಾನಕೇ
ಖಾರ-ಉಪ್ಪು-ಹುಳಿಯ ಹುಡುಕಿ
ತೋರಿಸೆಂಬ ನಿಲುವೇಕೆ ?

ಬೇರೆಯದೇ ಲೋಕವಿಹುದು
ತೂರಿಕೊಳ್ಳಲದರಲಿ
ಮೇರೆ ಮೀರಿದಂತ ಸುಖವು
ಭೂರಿಭೋಜನವಲಿ

Monday, September 27, 2010

ಅದಮ್ಯ ಚೇತನಗಳು





ಅದಮ್ಯ ಚೇತನಗಳು

ಮಂಗಳದ ಭಾರತದ ಅಂಗಳದಿ ಬಹುಜನರು
ತಿಂಗಳು-ವರ್ಷಗಳು ನಡೆಸಿ ಹೋರಾಟ
ಅಂಗಾಂಗ ಕಳೆದರೂ ಪ್ರಾಣವನೆ ತೆತ್ತರೂ
ಸಂಘದಲಿ ನಡೆಸಿದರು ಬಹಳ ಸೆಣಸಾಟ

ನನ್ನ ಭಾರತಕಾಗಿ ದುಡಿದವರ ನೆನೆವುದಕೆ
ಅನ್ನವನು ಉಂಬಾಗ ಸರಿಸಮಯವಾಯ್ತು !
ಮುನ್ನ ಸ್ವಾತಂತ್ರ್ಯ ದೊರಕಿಸಲೆಂದು ಮಡಿದವರ
ಚೆನ್ನಾಗಿ ಸ್ಮರಿಸುವೊಲು ಮನ ಸಿದ್ಧವಾಯ್ತು

ನನೆಪಿನಾ ಮೂಟೆಯಲಿ ನಾ ತಿಳಿದು ಓದಿರುವ
ದಿನಪಬೆಳಗಿದ ರೀತಿ ಬದುಕಿದಾ ಜನರ
ಒನಪು ಒಯ್ಯಾರದಲಿ ಬದುಕಿತಿಹ ನಮ್ಮನ್ನು
ನುಣುಪಾದ ಬಾಳ್ವೆ ಬಾಳಗೊಟ್ಟವರ

ಗಲ್ಲಿಗೇರುತ ಕೂಗಿ ಭಾರತದ ಹೆಸರನ್ನು
ಅಲ್ಲಿ ಪ್ರಾಣವ ತೆತ್ತ ಮಂಗಲ ಪಾಂಡೆ
ಕಲ್ಲುಮನಸಿನ ಆಂಗ್ಲರಿಗೆ ಕಠಿಣ ದಿನಗಳನು
ನಿಲ್ಲಿಸದೇ ಮುಂದಿಟ್ಟನಾ ಭಗತ್ ಸಿಂಗ

ರಾಣಿ ಲಕ್ಷ್ಮೀಬಾಯಿ ಪ್ರಾಣಕ್ಕೆ ಭಯಪಡದೆ
ಜಾಣೆಯಾಗಿದ್ದು ಸೆಣಸಿದಳು ಬಹುದಿನದಿ
ಕಾಣಿಸದ ಕೈಗಳು ಹತ್ತಾರು ಸಾವಿರವು
ಬಾಣಬಿಟ್ಟೆಡೆಗೆಲ್ಲ ಜೈಕಾರ ಕೇಳಿದವು

ಅಗೋ ನನ್ನ ಭಾರತವು ನಿಂತಿಹುದು ಶಾಶ್ವತದಿ
ಸಗರಪುತ್ರನು ತಂದ ಗಂಗೆಯನು ಧರಿಸಿ
ಮಿಗಿಲುಂಟೆ ಜಗದಿ ನನ್ನದೇಶಕೆ ಇನ್ನು ?
ಬಗೆಬಗೆಯಲೊಂದಿಪೆನು ತಾಯರೂಪವನು

Sunday, September 26, 2010

|| ಮಯಿ ಮೇಧಾಂ ಮಯಿ ಪ್ರಜಾಂ ಮಯ್ಯಗ್ನಿಸ್ತೇಜೋ ದಧಾತು ||

ಚಿತ್ರ ಋಣ : ಅಂತರ್ಜಾಲ

|| ಮಯಿ ಮೇಧಾಂ ಮಯಿ ಪ್ರಜಾಂ ಮಯ್ಯಗ್ನಿಸ್ತೇಜೋ ದಧಾತು ||

ನಮ್ಮ ಪೂರ್ವಜರ ಪರಮಾನುಗ್ರಹದಿಂದ ನಮಗೆ ದೊರೆತ ಅನರ್ಘ್ಯರತ್ನಗಳಲ್ಲಿ ವೇದ, ವೇದಾಂಗಳೂ, ಉಪನಿಷತ್ತುಗಳೂ, ಭಾಷ್ಯಗಳೂ, ಪುರಾಣ-ಸಂಕೀರ್ತನೆಗಳೂ ಇದುವರೆಗೂ ನಮಗೆ ಲಭ್ಯವಿವೆ. ಇಂತಹ ವೇದಮಂತ್ರಗಳ ಸಾಲಿನಲ್ಲಿ ಕೃಷ್ಣಯಜುರ್ವೇದದ ಮೇಧಾಸೂಕ್ತವನ್ನು ಆಧರಿಸಿ ಸ್ವಲ್ಪ ವ್ಯಾಖ್ಯಾನಿಸಬೇಕೆನಿಸಿತು. ಇಲ್ಲಿ ನಾವು ಪ್ರಾರ್ಥಿಸುವುದು " ಓ ದೇವರೇ ನಮಗೆ ನಮ್ಮ ಬುದ್ಧಿಗೆ ಅಗ್ನಿಯ ತೇಜಸ್ಸನ್ನೂ, ಇಂದ್ರನ ಇಂದ್ರಿಯಗಳನ್ನೂ, ಸೂರ್ಯನ ಪ್ರಖರತೆಯನ್ನೂ ಕರುಣಿಸು" ಎನ್ನುವುದು ಸ್ಥೂಲರೂಪ. ನಮ್ಮಲ್ಲಿ ನಾವು ಇಂತಹ ಒಳ್ಳೆಯದೆಲ್ಲವನ್ನೂ ಬಿಟ್ಟು ಬೇಡದ್ದನ್ನು ಓದಲು ಹಾತೊರೆಯುತ್ತೇವೆ. ಯಾವುದು ಅಪಥ್ಯವೋ ಅದನ್ನು ಬಯಸುತ್ತೇವೆ.

ಮನುಷ್ಯ ಬೆಳೆಯಬೇಕಾದರೆ ಆತನಿಗೆ ವಿದ್ಯೆಯ ಜೊತೆಗೆ ವಿನಯ ಬೇಕೇ ಬೇಕು. ಕೆಲವರನ್ನು ಕಂಡಾಗ ನಮ್ಮ ಮನಸ್ಸು ಸಹಜವಾಗಿ ನಾವು ಹೊರಗೆ ಕೈಮುಗಿಯದೇ ಇದ್ದರೂ ಅದು ತನ್ನ ಕೆಲಸವನ್ನು ಮುಗಿಸಿರುತ್ತದೆ, ಅಂದರೆ ನಾವು ಮನಸಾ ಅವರಿಗೆ ವಂದಿಸಿರುತ್ತೇವೆ. ಅವರಲ್ಲಿನ ಸೂಜಿಗಲ್ಲಿನ ಆಕರ್ಷಣೆಯೇ ಅದಕ್ಕೆ ಕಾರಣ. ಇದು ಯಾವುದೋ ಹರೆಯದ ಹುಡುಗ-ಹುಡುಗಿಯರ ಕಾಮ-ಪ್ರೇಮದ ಆಕರ್ಷಣೆಯಲ್ಲ, ಬದಲಾಗಿ ಮಹಾತ್ಮ ಸಾಧಕರೊಬ್ಬರ ಸಾಹಸಗಾಥೆಯನ್ನು ಕೇಳಿದಾಗ, ಅವರನ್ನು ಸಂಪರ್ಕಿಸುವ ಮನಸ್ಸಾಗುತ್ತದೆ, ಸಂಪರ್ಕವಾದಮೇಲೆ ಸಾನ್ನಿಧ್ಯದ ಬಯಕೆಯಾಗುತ್ತದೆ, ಸಾನ್ನಿಧ್ಯದಲ್ಲಿ ಮೊದಲಾಗಿ ಅವರು ಕಂಡಾಗ ನಮ್ಮ ಮನಸ್ಸು ನಮಗೆ ತಿಳಿಯದೇನೆ ಅವರನ್ನು ಅಭಿನಂದಿಸುತ್ತದೆ!

ಒಂದುಕಡೆ ಇಬ್ಬರು ಸನ್ಯಾಸಿಗಳು ಕೂತಿದ್ದರಂತೆ, ಒಬ್ಬರು ಅತಿ ಪುರಾತನ ಪರಂಪರೆಯಿಂದ ಜಗದ್ಗುರುವೆನ್ನಿಸಿಕೊಂಡವರು, ಇನ್ನೊಬ್ಬರು ಇತ್ತೀಚೆಗೆ ಜಗದ್ಗುರುವೆಂದು ಬೋರ್ಡು ತಗುಲಿಸಿಕೊಂಡವರು! ಪರಂಪರೆಯಿಂದ ಬಂದವರು ಸಾದಾ ಆಸನದಲ್ಲಿ ಕೂತಿದ್ದರೆ ’ಬೋರ್ಡಿನವರು’ ಬಹಳ ಚಂದದ ಬೆಳ್ಳಿಯ ಸಿಂಹಾಸನದಲ್ಲಿ ಆಸೀನರಾಗಿದ್ದರಂತೆ. ನೆರೆದಿದ್ದ ಸಭಿಕರು ಸನ್ಯಾಸಿಗಳಿಬ್ಬರಿಗೂ ನಮಿಸುವಾಗ ಜ್ಞಾನವೃದ್ಧರೂ, ತಪೋಧನರೂ, ಪರಂಪರೆಯಿಂದ ಬಂದ ಪೀಠದವರೂ ಆದ ಜಗದ್ಗುರುಗಳಿಗೆ ನಮಿಸುತ್ತಿದ್ದರಂತೇ ಹೊರತು ’ ಜಗದ್ಗುರು’ವೆಂಬ ಬೋರ್ಡಿನವರಿಗಲ್ಲ. ಬೋರ್ಡಿನ ಜಗದ್ಗುರುಗಳಿಗೆ ನಿಜವಾದ ಜ್ಞಾನೋದಯ ಅಂದಿಗೆ ಆಗಿರಬೇಕು. ಅದರ ನಂತರ ಅವರ ಲೌಕಿಕ ಮೆರೆಯುವಿಕೆ ಸ್ವಲ್ಪ ತಗ್ಗಿತು ಎಂದು ಕೇಳಿದ್ದೇನೆ.

ಕೇವಲ ಡಿಗ್ರೀ ಮಾಡಿ ಡಾಕ್ಟರೋ ಎಂಜಿನೀಯರೋ ಅಥವಾ ಇನ್ನೇನೋ ಆಗಿಬಿಟ್ಟರೆ ನಾವೆಲ್ಲಾ ನಮ್ಮಪಾಡಿಗೆ ’ಲೈಫು ಇಷ್ಟೇನೆ’ ಎಂದುಬಿಡುತ್ತೇವೆ, ಆದರೆ ನಾವು ಕಾಣದ ಅಗಣಿತ ಘಟನಾ ಮಾಯಾವಿನೋದ ವಿಲಾಸಗಳಿಂದ ಕೂಡಿದ ನಿಜವಾದ ಲೋಕ ಬೇರೊಂದಿದೆ-ಅದನ್ನು ಪಡೆಯಲು ಲೌಕಿಕ ಡಿಗ್ರೀ ಸಾಲದು ಎಂಬುದರ ಅರಿವು ನಮಗಿರುವುದಿಲ್ಲ! ವಿದ್ಯೆಗೂ ಸಂಸ್ಕಾರಕ್ಕೂ ಬಹಳ ಅಂತರವೂ ಇದೆ. ವಿದ್ಯೆ ಕಲಿತವರೆಲ್ಲಾ ಸಂಸ್ಕಾರವಂತರೇನಲ್ಲ, ಅಥವಾ ವಿದ್ಯೆಯಿಲ್ಲದವರು ಸಂಸ್ಕಾರವಂತರಲ್ಲವೆಂದೇನೂ ಅಲ್ಲ. ಇವೆರಡೂ ಪರಸ್ಪರ ಪೂರಕವಾಗಿದ್ದರೆ ಅದು ಬಹಳ ಉತ್ತಮ ಸ್ಥಿತಿ. ಎರಡೂ ಇಲ್ಲದಿದ್ದರೆ ಅದು ಮಧ್ಯಮ ಸ್ಥಿತಿ. ವಿದ್ಯೆಯಿದ್ದೂ ಸಂಸ್ಕಾರವಿಲ್ಲದಿದ್ದರೆ ಅದು ಅಧಮಸ್ಥಿತಿ.

ಒಮ್ಮೆ ನಾನು ಸಣ್ಣವನಿದ್ದಾಗ, ಹಳ್ಳಿಯಲ್ಲಿದ್ದಾಗ ಅನಿವಾರ್ಯವಾಗಿ ಎಲ್ಲಿಗೋ ಹೋದಾಗ ಮಳೆ ಬಂದುಬಿಟ್ಟಿತು. ನನ್ನ ಹತ್ತಿರ ಕೊಡೆ ಇರಲಿಲ್ಲ. ಅಲ್ಲೇ ಮರವೊಂದರ ನೆರಳಲ್ಲಿ ನಿಂತಿದ್ದೆ. ಕಣ್ಣಿಗೆ ಕಾಣುವ ದೂರದಲ್ಲಿ ಹರಿಜನರ ಚಿಕ್ಕ ಗುಡಿಸಲೊಂದಿತ್ತು. ಅವರಿಗೆ ನಾನು ನಿಂತಿದ್ದು ಕಂಡಿತೋ ಏನೋ. ಪಾಪ ಒಳಗೊಳಗೇ ಅಳುಕು, ಪರಿಚಯದ ಮನೆಯ ನನಗೆ ಕೊಡೆ ಕೊಟ್ಟರೆ ಮೇಲ್ವರ್ಗದವನಾದ ನಾನು ಏನಾದರೂ ಅಂದುಬಿಟ್ಟರೆ ಎಂಬ ಅಂಜಿಕೆಯಿರಬೇಕು. ಚಿಕ್ಕವಯಸ್ಸಿನ ನಮಗೆಲ್ಲಾ ಅವರು ಭಟ್ರೇ ಅಂತಲೋ ಒಡೆಯಾ ಅಂತಲೋ ಕರೆಯುವಾಗ ನನಗೆ ಅದು ಭಾರವಾದಂತೆನಿಸುತ್ತಿತ್ತು. ಅಂತೂ ಆ ಮನೆಯ ಹುಡುಗನೊಬ್ಬ ನನಗೆ ಕೊಡೆ ತಂದುಕೊಟ್ಟ. ನಾನು ಸ್ವಲ್ಪ ಹೊತ್ತು ಅಲ್ಲಿದ್ದು, ಮಳೆ ಕಮ್ಮಿಯಾದಮೇಲೆ ಕೃತಜ್ಞತೆಯೊಂದಿಗೆ ಕೊಡೆ ಮರಳಿಸಿ ಹೊರಟುಬಂದೆ. ಮಳೆಯಲ್ಲಿ ನೆನೆದುದನ್ನು ಕಂಡು, ಮಡಿವಂತಿಕೆಗೆ ಹೆದರಿಯೂ ಕೊಡೆಕೊಡುವ ಮನಸ್ಸನ್ನು ಮಾಡಿದ ಅವರ ಸಹಾಯದ ಹೃದಯವನ್ನು, ಆ ಸಂಸ್ಕಾರವನ್ನು ಏನೆನ್ನಬೇಕು?

ಹಿಂದೆ ಒಮ್ಮೆ ಇನ್ಫೋಸಿಸ್ ನ ಒಡತಿ ಶ್ರೀಮತಿ ಸುಧಾಮೂರ್ತಿ ತಮಿಳುನಾಡಿನ ಯಾವುದೋ ಜಿಲ್ಲೆಯಲ್ಲಿ ಹಳ್ಳಿಯಲ್ಲಿ ಓಡಾಡುತ್ತ ಇರುವಾಗ ಅವರ ಕಾರು ಕೆಟ್ಟುನಿಂತಿತಂತೆ. ಆಗ ಅವರು ಕಾರನ್ನು ಅಲ್ಲಿಯೇ ನಿಲ್ಲಿಸಿ ರಿಪೇರಿ ಆಗುವವರೆಗೆ ಕಾಲಹಾಕಲು ಹತ್ತಿರದಲ್ಲಿಯೇ ಇರುವ ಹಳೆಯ ದೇವಸ್ಥಾನವೊಂದಕ್ಕೆ ಹೋದರಂತೆ. ಅಲ್ಲಿ ಒಳಗೆ ಹೋದಾಗ ಅವರಿಗೆ ಕಂಡಿದ್ದು ಅದು ಈಶ್ವರನ ದೇವಸ್ಥಾನವಾಗಿತ್ತು ಮತ್ತು ಯಾರೋ ಮುದುಕರೊಬ್ಬರು ಪೂಜೆ ಸಲ್ಲಿಸುತ್ತಿದ್ದರಂತೆ. ಸುಧಾರವರು ಮಾತನಾಡಿಸಲಾಗಿ ಆ ಮುದುಕರು ಹೊರಬಂದು ಮಾತನಾಡಿದರಂತೆ. ತಾನು ವೇದಾಧ್ಯಾಯಿಯೆಂದೂ ಇದು ತ್ರಿಕಾಲ ಪೂಜೆಯ ಸ್ಥಳವೆಂದೂ,ತನಗೆ ಸರಿಯಾಗಿ ಕಣ್ಣುಕಾಣದೆಂದೂ ಹೇಳಿದ ಅವರು ಸುಧಾ ಅವರ ಬಗ್ಗೆ ತಿಳಿದುಕೊಂಡು ಅವರಹತ್ತಿರ ಅಂದು ಅಲ್ಲೇ ಉಳಿಯಿರಿ, ತಾನೇ ಉಳಿಯಲು ವ್ಯವಸ್ಥೆಮಾಡುವುದಾಗಿ ಹೇಳಿದರಂತೆ. ಅಲ್ಲದೇ ದೇವರಿಗೆ ಆರತಿ ಮಾಡಿ ಅದನ್ನು ಸುಧಾರವರ ಎದುರು ಹಿಡಿದಾಗ ಸುಧಾಮೂರ್ತಿಯವರು ಐನೂರು ರೂಪಾಯಿಯ ನೋಟನ್ನು ದಕ್ಷಿಣೆಯಾಗಿ ನೀಡಿದರಂತೆ. ತಕ್ಷಣವೇ ಅದನ್ನು ಕೇಳಿತಿಳಿದ ಆ ಮುದುಕರು ಅದನ್ನು ಹಿಂದಿರುಗಿಸುತ್ತಾ ಇದು ತನಗೆ ಸಲ್ಲ, ತಾನು ದಕ್ಷಿಣೆಯನ್ನು ಸ್ವೀಕರಿಸುವುದಿಲ್ಲ ಎಂದರಂತೆ. ನೋಡಿ ಎಂತಹ ಆಶ್ಚರ್ಯ! ಹಳ್ಳಿಯ ಮೂಲೆಯಲ್ಲಿ ಕಡುಬಡತನದಲ್ಲಿ ಕಣ್ಣುಕಾಣಿಸದಿದ್ದರೂ ದೇವರ ಸನ್ನಿಧಿಯಲ್ಲಿ ಎಲ್ಲವನ್ನೂ ಪಡೆದ ಸೌಭಾಗ್ಯವೆಂಬ ತೃಪ್ತಿಯಿಂದ ಬದುಕುತ್ತಿರುವ ಮತ್ತು ಬಂದ ಅತಿಥಿಯನ್ನು ಆದರಿಸಿ ಉಪಚರಿಸಿದ ಮುದುಕರ ತಾಳ್ಮೆ ಮತ್ತು ಸಂಸ್ಕಾರ ಎಂಥದು ಅಲ್ಲವೇ ?

ಗೋಕರ್ಣದಲ್ಲಿ ಕಳೆದ ಶತಮಾನದಲ್ಲಿ ಅಂದರೆ ೧೯೭೫ರ ವೆರೆಗೂ ಬ್ರಹ್ಮರ್ಷಿಯೊಬ್ಬರು ಮಾನವದೇಹದಿಂದಿದ್ದರು ಎಂಬುದು ತಿಳಿದುಬಂದಿದೆ. ಹುಟ್ಟಿನಿಂದ ಶ್ರೀ ಗಣೇಶಭಟ್ಟರೆಂದು ನಾಮಾಂಕಿತರಾಗಿದ್ದ ಶ್ರೀಯುತರು ಜ್ಞಾನಕ್ಕಾಗಿ ಅಲೆಯದ ಊರಿಲ್ಲ. ಎಳವೆಯಲ್ಲೇ ಮನೆ ತೊರೆದು, ಮಹಾರಾಷ್ಟ್ರ, ಕಾಶಿ,ಹಿಮಾಲಯ, ರಾಮೇಶ್ವರ ಹೀಗೇ ಒಂದರ್ಥದಲ್ಲಿ ಆಸೇತು ಹಿಮಾಚಲ ಪರ್ಯಂತ ಓಡಾಡಿದ ಅವರಿಗೆ ಜ್ಞಾನದ ತೆವಲು ಅಷ್ಟಿಷ್ಟಾಗಿರಲಿಲ್ಲ. ಅಂತೂ ರಮಣ ಮಹರ್ಷಿಗಳ ಶಿಷ್ಯರಾದ ಕಾವ್ಯಕಂಠ ಗಣಪತಿ ಮುನಿಗಳ ಮಾರ್ಗದರ್ಶನದಲ್ಲಿ ತಮಿಳುನಾಡಿನ ಗುಹೆಯೊಂದರಲ್ಲಿ ವರುಷಗಳಕಾಲ ತಪಸ್ಸಾಚರಿಸುವಾಗ, ಸಮಾಧಿ ಸ್ಥಿತಿಯಲ್ಲಿ ಶಿಷ್ಯನ ಬಾಯಿಂದ ಪ್ರಯಾಸರಹಿತವಾಗಿ ಬಂದ, ಸಂಸ್ಕೃತದಲ್ಲಿರುವ ವಿಚಿತ್ರ ಕಾವ್ಯವನ್ನು ಸ್ವತಃ ಗುರು ಕಾವ್ಯಕಂಠ ಗಣಪತಿಉ ಮುನಿಗಳೇ ಬರೆದು ದಾಖಲಿಸಿದರಂತೆ. ಅದನ್ನು ಪುಸ್ತಕವಾಗಿ ಬರೆದು ಅದಕ್ಕೆ ’ಛಂದೋದರ್ಶನ’ ಎಂಬ ಹೆಸರಿಟ್ಟು, ವೇದದ ತತ್ಸಮಾನರೂಪ ಅದಾಗಿರುವುದರಿಂದ ಅದನ್ನು ಮಹಾಮಹೋಪಾಧ್ಯಾಯರ ಸಮಕ್ಷಮ ತರ್ಕಿಸಿ, ಅರ್ಥೈಸಿ, ಅಂತಹ ಪರಿಪೂರ್ಣ ವೇದಸಾರವನ್ನು ತನಗೇ ಅರಿವಿಲ್ಲದೇ ತನ್ನ ಬಾಯಿಂದ ಹೊರಡಿಸಿದ ಶಿಷ್ಯನಿಗೆ ’ಬ್ರಹ್ಮರ್ಷಿ ದೈವರಾತ’ ಎಂಬ ಅಭಿದಾನವಿತ್ತು ನಮಿಸಿದರಂತೆ! ತಾಳ್ಮೆಯಿಂದ ಅನೇಕ ಕ್ಷೇತ್ರಗಳನ್ನು ಸಂದರ್ಶಿಸಿದ ದೈವರಾತರಿಗೆ ಸುಮಾರು ೧೫ ಭಾಷೆಗಳು ಕರಗತವಾಗಿದ್ದವಂತೆ. ಜಯಂತ್ ಕಾಯ್ಕಿಣಿಯವರ ತಂದೆ ದಿ|ಗೌರೀಶ್ ಕಾಯ್ಕಿಣಿಯವರು ಅವರ ಕುರಿತಾಗಿ ಬರೆಯುತ್ತ, ದೈವರಾತರು ನೆಲೆಸಿದ್ದರಿಂದ ಗೋಕರ್ಣಕ್ಕೇ ಅದು ಸಂದ ಗೌರವ ಎಂದಿದ್ದನ್ನೂ, ಮತ್ತು ಅಂದಿನ ಸರಕಾರಕ್ಕೆ ಪತ್ರಿಸಿ ದೈವರಾತರಿಗೆ ಮಾಶಾಸನವಾಗಿ ಗೌರವಧನ ನೀಡಬೇಕೆಂದು ತಿಳಿಸಿದ್ದರಂತೆ. ಹಾಗಂತ ದೈವರಾತರು ಗೃಹಸ್ಥರಾಗಿದ್ದರೂ ಕಾಲಾನಂತರದಲ್ಲಿ ಗೃಹಸ್ಥರಿಗೆ ಹೇಳಿದ ಬ್ರಹ್ಮಚರ್ಯವನ್ನು ಅನುಸರಿಸಿದರು. ಇಂತಹ ’ಛಂದೋದರ್ಶನ’ವೆಂಬ ವೇದವನ್ನೇ ಬರೆದವರೂ ಕೂಡ ತಾನು ಬ್ರಹ್ಮರ್ಷಿ ಎಂಬುದು ತನ್ನ ಆತ್ಮಕ್ಕೆ ತಿಳಿದಿದ್ದರೂ ಅದನ್ನು ಪ್ರಚುರಗೊಳಿಸಲಿಲ್ಲ ಮತ್ತು ತಾನು ಪ್ರಚಾರವನ್ನೂ ಬಯಸಲಿಲ್ಲ!

ಕ್ಯಾಪ್ಟನ್ ಗೋಪೀನಾಥ್ ರವರ ಕಥೆ ಓದುತ್ತಿದ್ದೆ. ಬಾಲ್ಯದಲ್ಲೇ ಅತಿಸಹಜವಾಗಿ ಏನೋ ಹೊಸದನ್ನು ಮಾಡಬೇಕೆನ್ನುವ ತುಡಿತ ಅವರಲ್ಲಿತ್ತು. ಆಗಲೇ ಅವರು ಮಿಲಿಟ್ರಿ ಎಂಬ ಹೆಸರಿನಿಂದ ಆಕರ್ಷಿತರಾಗಿದ್ದು, ನಂಜುಡಯ್ಯನೆಂಬ ಮೇಷ್ಟ್ರ ಸಹಕಾರದಲ್ಲಿ ಅವರು ಸೇನಾಪರೀಕ್ಷೆಗೆ ಕೂತು ತೇರ್ಗಡೆಯಾಗಿ ಸೈನ್ಯಕ್ಕೆ ಸೇರಿ, ತನ್ನ ಗುಂಪಿನವರೂ ಕರ್ನಾಟಕದವರೂ ಆದ ಹಲವರನ್ನು ಯುದ್ಧದಲ್ಲಿ ಕಳೆದುಕೊಂಡು ನಂತರ ಅನೇಕ ವರ್ಷಗಳ ತರುವಾಯ ಊರಿಗೆ ಮರಳಿದ್ದು, ಹೇಮಾವತಿ ಜಲಾನಯನ ಪ್ರದೇಶದಲ್ಲಿ ಅವರ ಹಳ್ಳಿ ಮುಳುಗಡೆಯಾದಾಗ ಹಾಸನ ಜಿಲ್ಲೆಯ ಜಾವಗಲ್ಲಿನಲ್ಲಿ ಹೋಗಿ ತೋಟಮಾಡಿ ಬದುಕಿದ್ದು, ಅದರ ನಂತರದ ಅವರ ಬುಲೆಟ್ ಬೈಕ್ ಡೀಲರ್ ಶಿಪ್, ಹೆಲಿಕಾಪ್ಟರ್ ನಿರ್ಮಾಣ, ಜನಸಾಮಾನ್ಯನ ಪ್ರವಾಸಕ್ಕೆ ಅನುಕೂಲ ಕಲ್ಪಿಸುವ ವಿಮಾನಯಾನ ಆರಂಭ ಹೀಗೇ ಒಂದೊಂದನ್ನೂ ಎಳೆಯೆಳೆಯಾಗಿ ಬರೆದಿದ್ದಾರೆ. ಬಡತನದ ಮೂಸೆಯಲ್ಲಿ ಅರಳಿದ ಈ ಗಿಡಕ್ಕೆ ತನ್ನಲ್ಲೇ ಮರವಾಗುವ, ಹಲವರಿಗೆ ನೆರಳಾಗುವ, ಕಾಯಿ-ಹಣ್ಣುಗಳನ್ನೀಯುವ ಚೈತನ್ಯ ಅಡಗಿತ್ತು. ಕನಸುಗಳ ಜೊತೆಗೆ, ಶ್ರಮಿಸುವ ಮನಸ್ಸಿತ್ತು, ಅಚಲ ನಿರ್ಧಾರವಿತ್ತು, ಅಪಾರ ಶ್ರದ್ಧೆ-ಆಸಕ್ತಿಗಳಿದ್ದವು, ಅವಿರತ ಪ್ರಯತ್ನವೂ ಇತ್ತು. ಸೋಲಲೊಪ್ಪದ ಅವರ ಮನಸ್ಸು ಗೆಲುವಿಗೆ ಮಾರ್ಗ ಹುಡುಕುತ್ತಿತ್ತು. ಇಂತಹ ಗೋಪಿನಾಥ್ ತಮ್ಮ ಸಾಧನೆಯ ಹಾದಿಯಲ್ಲಿ ಕಂಡ ಕಲ್ಲು-ಮುಳ್ಳುಗಳು ಕಮ್ಮಿಯೇನಿಲ್ಲ! ಬೇಕರಿಯ ವ್ಯವಹಾರವನ್ನೂ ನಡೆಸಿದ ಅವರನ್ನು ನಾನು ಖುದ್ದಾಗಿ ನೋಡಿಲ್ಲ ಆದರೆ ಅವರ ಹೆಂಡತಿ ಶ್ರೀಮತಿ ಭಾರ್ಗವಿ ಗೋಪಿನಾಥ್ ರನ್ನು ಮಲ್ಲೇಶ್ವರದ ಅವರ ಬೇಕರಿಯಲ್ಲಿ ಕಂಡಿದ್ದೇನೆ, ಮಾತಾಡಿದ್ದೇನೆ. ಒಮ್ಮೆ ಕ್ಯಾಪ್ಟನ್ ಸಾಹೇಬರನ್ನು ಕಾಣುವ ಇಚ್ಛೆ ಇದೆ. ಮೊನ್ನೆ ಅವರ ’ಬಾನಯಾನ’ ಪುಸ್ತಕ ಬಿಡುಗಡೆಗೆ ಆಹ್ವಾನವಿದ್ದರೂ ಹೋಗಲಾಗಲಿಲ್ಲ. ಒಂದು ರೂಪಾಯಿಯಲ್ಲಿ ವಿಮಾನವೇರುವಷ್ಟು ವ್ಯವಸ್ಥೆ ಕಲ್ಪಿಸಿದ ಸಮಾಜಪ್ರೇಮಿ ಈ ಗೋಪೀನಾಥ್ ರವರು. ನೋಡಿ ಎಂತಹ ಒಳ್ಳೆಯ ಸಂಸ್ಕಾರವಂತ ನಿಗರ್ವೀ ಸಹೃದಯಿ!

ನಾನು ಬಹುವಾಗಿ ಇಷ್ಟಪಟ್ಟ ವಿಜ್ಞಾನಿಗಳಲ್ಲಿ ಒಬ್ಬರು ಡಾ| ರಾಜಾರಾಮಣ್ಣ. ಅವರು ಬರೇ ವಿಜ್ಞಾನಿಯಷ್ಟೇ ಅಲ್ಲ ತತ್ವಜ್ಞಾನಿಯೂ ಆಗಿದ್ದರು. ಅವರು ಬಹಳ ಸಮಯಪಾಲನೆಯ ಶಿಸ್ತಿನ ಸಿಪಾಯಿ ಎಂದೂ ಸರಳ ಸಜ್ಜನಿಕೆಯುಳ್ಳವರೆಂದೂ ಕೇಳಿದ್ದೆ. ೨೦೦೪ ರ ಸಪ್ಟೆಂಬರ್ ವರೆಗೆ ಬದುಕಿದ್ದ ಅವರನ್ನು ಭೇಟಿಮಾಡುವ ಇಚ್ಛೆ ಬಹಳವಿತ್ತು. ಆದರೂ ಮನಸ್ಸಿನ ಮೂಲೆಯಲ್ಲಿ ನಮ್ಮಂಥವರಿಗೆಲ್ಲಾ ಅವರು ಸಮಯ ನೀಡುವರೇ ಎಂಬುದೇ ನನ್ನೊಳಗಿನ ಸಂದೇಹವಾಗಿತ್ತು. ಮೊನ್ನೆ ಫ್ರೊ. ಕೆ.ಈ.ರಾಧಾಕೃಷ್ಣ ದಿನಪತ್ರಿಕೆಯೊಂದರಲ್ಲಿ ಅವರ ಬಗ್ಗೆ ಬರೆದಾಗ ಅವರ ಸರಳ ಸಜ್ಜನಿಕೆಯ ಅರ್ಥವಾಯಿತು. ಈಗ ಅಂದುಕೊಂಡೆ ಅಂದು ಅವರನ್ನು ಭೇಟಿಮಾಡಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಕಾಲದ ತಿರುಗುವಿಕೆಯಲ್ಲಿ ಹಲವನ್ನು ಕಳೆದುಕೊಳ್ಳುತ್ತೇವೆ, ಕೆಲವನ್ನು ಪಡೆಯುತ್ತೇವೆ. ಒಂದರ್ಥದಲ್ಲಿ ಭಾವಸಂಬಂಧಗಳ ಕೊಡುಕೊಳ್ಳುವಿಕೆಯೇ ಜೀವನ !

ಹಿರಿಯರಾದ ಮಾಸ್ಟರ್ ಹಿರಣ್ಣಯ್ಯ ಅಂದು ಬ್ಲಾಗಗೆ ಬಂದು ನನ್ನನ್ನು ಮೇಲ್ ಮುಖಾಂತರ ಹರಸಿದರು.ಇದನ್ನು ಪ್ರಚಾರಕ್ಕಾಗಿ ಹೇಳುತ್ತಿಲ್ಲ, ಬದಲಾಗಿ ಅವರ ಸೌಜನ್ಯವನ್ನೂ ಸರಳ ಮನಸ್ಸನ್ನೂ ಉಲ್ಲೇಖಿಸಲು ಬರೆಯುತ್ತಿರುವೆ. ದಶಕಗಳ ಕಾಲ ತನ್ನ ನಾಟಕ ಜೀವನದಿಂದ ಅನೇಕರ ಜೀವನ ನಾಟಕದಲ್ಲಿ ಉತ್ಸಾಹ ತುಂಬಿದ, ಬದಲಾವಣೆ ತಂದ ಶ್ರೀಯುತರು ನನ್ನ ಸಂಪರ್ಕದಲ್ಲಿ ನನಗೇ ಗೊತ್ತಿರದೇ ಬಂದಿದ್ದರು! ತುಂಬಿದ ಕೊಡ ತುಳುಕುವುದಿಲ್ಲ ಎಂಬುದು ಸದಾ ಸರ್ವದಾ ಸತ್ಯ.

ನಮ್ಮ ಯುವ ಪೀಳಿಗೆಯಲ್ಲಿ ಕೆಲವು ಬರಹಗಾರರನ್ನು ಕಂಡಿದ್ದೇನೆ. ಅವರ ಬರಹಕ್ಕಿಂತ ಅವರ ತಲೆಭಾರ[ಹೆಡ್ ವ್ಹೇಟ್]ತುಂಬಾ ಜಾಸ್ತಿ ಅನಿಸುತ್ತಿದೆ. ಬಹುಶಃ ಅವರ ಲೆಕ್ಕದಲ್ಲಿ ಹಿಂದಿನ ಕವಿ-ಸಾಹಿತಿಗಳೂ ಏನೂ ಅಲ್ಲ! ಬರೆದ ಮೂರು ಮತ್ತೊಂದು ಲೇಖನಗಳು ಒಂದೆರಡು ಪತ್ರಿಕೆಗಳಲ್ಲಿ ಬಂದಿವೆ ಎಂಬ ಕಾರಣಕ್ಕೆ ಅವರು ನೆಲದಮೇಲೇ ಉಳಿದಿಲ್ಲ! ಅಲ್ಲಲ್ಲಿ ಕೆಲವು ಸಭೆಗಳಲ್ಲಿ ಕಾಣಸಿಗುವ ಅವರು ತಾವೇ ಬೇರೆ ತಮ್ಮ ಲೆವೆಲ್ಲೇ ಬೇರೆ ಎಂದು ಯಾರೊಡನೆಯೂ ಬೆರೆಯದೇ ಮೌನವಾಗಿ ಮಹಾನ್ ದಾರ್ಶನಿಕರಂತೇ ಪೋಸುಕೊಡುತ್ತಾರೆ. ಅವರ ಕನಸುಗಳಲ್ಲಿ ಅವರು ಈಗಾಗಲೇ ಹಲವು ಪ್ರಶಸ್ತಿಗಳನ್ನು ಪಡೆದಾಗಿದೆ! ಅನೇಕರಿಗೆ ಆಟೋಗ್ರಾಫ್ ಬರೆದೂ ಕೊಟ್ಟಾಗಿದೆ!ಬುದ್ಧಿಮಟ್ಟದಲ್ಲಿ ತಮ್ಮನ್ನೂ ಹಾಗೂ ತಮ್ಮ ಕೃತಿಗಳನ್ನೂ ಮೀರಿಸುವ ಇನ್ನೊಬ್ಬರಿಲ್ಲಾ ಎಂಬ ಅನಿಸಿಕೆ ಅವರನ್ನು ಅವಿಶ್ರಾಂತವಾಗಿ ಅಟ್ಟದಮೇಲೇ ಇಟ್ಟಿದೆ! ಸರಿಯಾಗಿ ಪಿಲ್ಲರ್ ಇಲ್ಲದ ಆ ಬಿಲ್ಡಿಂಗ್ ಯಾವಾಗ ಉದುರಿಹೋಗುತ್ತದೋ ಅವರಿಗೇ ಗೊತ್ತಿಲ್ಲ! ನೀರಲ್ಲಿ ಮೀನಿನ ಹೆಜ್ಜೆಯೆ ಗುರುತನ್ನು ಪತ್ತೆ ಹಚ್ಚುವುದು ಎಷ್ಟುಕಷ್ಟವೋ ಅವರ ಮನವನ್ನು ತಿಳಿಯುವುದು ಅದಕ್ಕಿಂತಾ ಕಷ್ಟ ಎಂಬುದು ಹಲವು ಮಿತ್ರರ ಅಂಬೋಣ. ಮನದ ಮೌನದಲ್ಲೇ ಮಂಡಿಗೆ ತಿನ್ನುತ್ತಿರುವ ಹಲವು ಸ್ನೇಹಿತರಿಗೆ ಅಂತಹ ಮೀನುಗಳಿಗೆ ಗಾಳಹಾಕುವುದು ಬೇಕಾಗಿಲ್ಲ ಎಂಬುದು ತಿಳಿದಿಲ್ಲ. ಇದೊಂದು ವಿಪರ್ಯಾಸ! ಇದು ಯಾರೊಬ್ಬರ ಸಲುವಾಗಿ ಹೇಳುತ್ತಿರುವುದಲ್ಲ, ಬದಲಾಗಿ ನಮ್ಮ ಎಲ್ಲಾ ದುರಭಿಮಾನೀ ಬ್ಲಾಗಿಗ ಹಾಗೂ ಬರಹಗಾರ ಮಿತ್ರರನ್ನು ಉದ್ದೇಶಿಸಿ ಬರೆದಿದ್ದು. ಅಹಂಕಾರಕ್ಕೆ ಉದಾಸೀನವೇ ಮದ್ದೆಂಬುದು ಅವರೆಲ್ಲರಿಗೂ ತಿಳಿದರೆ[ತಿಳಿಯಬೇಕಲ್ಲ!] ಸಾಕು. ಕೇವಲ ಪ್ರತಿಕ್ರಿಯೆಗಳಿಗಾಗಿ ಆಸೆಪಡುವ, ಚೆನ್ನಾಗಿದೆಯೆಂದು ಹೇಳಿಬಿಟ್ಟರೆ ನೆಲಬಿಟ್ಟು ಕುಣಿಯುವ ಅಪ್ರಬುದ್ಧ ಮನಸ್ಥಿತಿಯನ್ನು ವಿಸರ್ಜಿಸಿ ನಾವೆಲ್ಲಾ ಪ್ರಬುದ್ಧರಾಗೋಣ. ಕೆಲವೊಮ್ಮೆ ಕೆಲವು ಬ್ಲಾಗಿಗ ಮಿತ್ರರ ಅಂಕಣ ಅಥವಾ ಕೃತಿಗಳಿಗೆ-ಅವರ ಕಾಗುಣಿತ, ವ್ಯಾಕರಣ ತಪ್ಪಿದ್ದಾಗ, ವಸ್ತುವಿಷಯ ನನಗೆ ಬಾಲಿಶವಾಗಿ ಕಂಡಾಗ ನೇರವಾಗಿ ಖಾರವಾಗಿ ನಾನು ಪ್ರತಿಕ್ರಿಯಿಸುವುದಿದೆ, ಇದು ನನ್ನ ಜಾಯಮಾನ. ನನ್ನ ಕೃತಿಗಳಿಗೂ ಕೂಡ ನಾನು ಎಲ್ಲಾರೀತಿಯ ಪ್ರತಿಕ್ರಿಯೆಗಳನ್ನೂ ಪಡೆಯಲು ಸಿದ್ಧನಿದ್ದೇನೆ ; ಸ್ವೀಕರಿಸಿದ್ದೇನೆ.

ಎಲ್ಲಾ ಹಿರಿಯ ಕವಿ-ಸಾಹಿತಿಗಳು ಅತ್ಯಂತ ವಿನಯವಂತರೂ, ಸೌಹಾರ್ದಶೀಲರೂ ಆಗಿದ್ದರು. ತಮ್ಮಲ್ಲಿ ಅಂತಹ ಮಹತ್ತರವಾದುದೇನೋ ಇದೆ ಎಂದು ಅವರೆಂದೂ ತಿಳಿದಿರಲಿಲ್ಲ. ಈಶ್ವರಚಂದ್ರ ವಿದ್ಯಾಸಾಗರ್ ರವರು ಯಾವುದೋ ಕಾರ್ಯಕ್ರಮಕ್ಕೆ ಬರುವವರಿದ್ದರೆಂಬುದನ್ನು ತಿಳಿದ ಹುಡುಗನೊಬ್ಬ ರೈಲ್ವೇ ನಿಲ್ದಾಣಕ್ಕೆ ಹೋಗಿ ನಿಂತಿದ್ದದಂತೆ. ಅವರು ಬರಬೇಕಾದ ರೈಲ್ವೇ ಬಂತು. ಕೆಲವರು ಇಳಿದರು. ಯಾರೋ ಒಬ್ಬಾತ ತಲೆಯಮೇಲೆ ಸೂಟ್ಕೇಸ್ ಹೊತ್ತು ನಡೆದ. ಆತ ಎದುರಾದ ಆ ಹುಡುಗನ ಹತ್ತಿರ ಕೇಳಿದ " ಮಗೂ ಇಲ್ಲಿ ಈಶ್ವರಚಂದ್ರ ವಿದ್ಯಾಸಾಗರ್ ರವರ ಭಾಷಣ ಕಾರ್ಯಕ್ರಮವಿದೆಯಲ್ಲಪ್ಪಾ ಅಲ್ಲಿಗೆ ಹೇಗೆ ಹೋಗಬೇಕು " ಹುಡುಗ ದಾರಿಯನ್ನು ಕೈಮಾಡಿ ತೋರಿಸಿದ. ಹುಡುಗ ಆ ವ್ಯಕ್ತಿಯ ಪರಿಚಯ ಕೇಳಲಿಲ್ಲ, ಆ ವ್ಯಕ್ತಿಯೂ ಹೇಳಲಿಲ್ಲ.ಹುಡುಗನ ಮನಸ್ಸಲ್ಲಿ ಬರುವ ಈಶ್ವರಚಂದ್ರರು ಬಹಳ ಸೂಟುಬೂಟಿನವರೆಂಬ ಚಿತ್ರತುಂಬಿತ್ತು. ಬಂದ ಈ ವ್ಯಕ್ತಿಯಂತೂ ಬಹಳ ಸಿಂಪಲ್ಲು ಹೀಗಾಗಿ ಆತನಂತೂ ಅಲ್ಲ ಎಂದು ಹುಡುಗ ಚಿಂತನೆ ನಡೆಸಿದ. ಬಹಳ ಹೊತ್ತಾಯಿತು ಇನ್ನೂ ಬರಲಿಲ್ಲವೆಂದುಕೊಳ್ಳುತ್ತಾ ಹುಡುಗ ಸಭಾಂಗಣಕ್ಕೆ ಬಂದರೆ ಅಲ್ಲಿ ಭಾಷಣಕ್ಕೆ ನಿಂತಿದ್ದ ವ್ಯಕ್ತಿ ರೈಲ್ವೇ ನಿಲ್ದಾಣದಿಂದ ನಡೆದು ಬಂದವರೇ ಆಗಿದ್ದರು! ಅವರೇ ಈಶ್ವರಚಂದ್ರ ವಿದ್ಯಾಸಾಗರ್! ಸನ್ಮಾನ್ಯ ಡೀವೀಜಿಯವರು ಪ್ರತೀವ್ಯಕ್ತಿಯನ್ನು [ಆತ ಚಿಕ್ಕವನೇ ಇರಲಿ, ದೊಡ್ಡವನೇ ಇರಲಿ]ಅತ್ಯಂತ ಪ್ರೀತಿಯಿಂದ ಮಾತನಾಡಿಸುತ್ತಿದ್ದರು, ಎಲ್ಲರ ಜೊತೆ ಬೆರೆಯುತ್ತಿದ್ದರು. ವರಕವಿ ಬೇಂದ್ರೆಯವರು ಹೋದಲ್ಲಿ ಜನಜಾತ್ರೆಯೇ ನೆರೆಯುತ್ತಿದ್ದುದು ಅವರ ಪ್ರಾದೇಶಿಕ ಭಾಷಾಶೈಲಿ ಮತ್ತು ಸ್ನೇಹಪರತೆಯಿಂದ. ಕುವೆಂಪು ತನ್ನ ಅನೇಕ ಕೃತಿಗಳನ್ನು ಬರೆಯಲು ಸಾಧ್ಯವಾಗಿದ್ದು ಎಲ್ಲರೊಡನೆ ಅವರ ಒಡನಾಟ. ಕಾರಂತರು ಕಡಲ ತೀರದ ಭಾರ್ಗವರಾದದ್ದು ಅವರು ಬೆಟ್ಟದ ಹೂವಾಗಿ ಎಲ್ಲರ ಕಣ್ಣಿಗೂ ಕಾಣಿಸಿದ್ದರಿಂದ. ಅಷ್ಟೇ ಏಕೆ ಮಹಾನ್ ಕಲಾವಿದರೂ ತಾವು ಬೆಳೆದಿದ್ದು ತಮ್ಮ ವಿನಯವಂತಿಕೆಯಿಂದ: ಡಾ| ರಾಜ್ ಕುಮಾರ್ ಯಾರಾನ್ನಾದರೂ ಮೊದಲಾಗಿ ಕಂಡಾಗ ಬಂದವರು ಚಿಕ್ಕವರೇ ಇದ್ದರೂ ಎದ್ದುನಿಂತು ಅವರನ್ನು ಸ್ವಾಗತಿಸುತ್ತಿದ್ದರಂತೆ, ದಿ | ವಿಷ್ಣುವರ್ಧನ್ ಕೂಡ ಈ ವಿಷಯದಲ್ಲಿ ಹಿಂದೆಬಿದ್ದಿರಲಿಲ್ಲ.

ಬ್ಲಾಗಿಗ ಮಿತ್ರರಲ್ಲಿ ಒಂದು ಕಳಕಳಿಯ ವಿನಂತಿ:

ಬ್ಲಾಗಿಗರಲ್ಲಿ ಕೆಲವರು ಬರೆದುಕೊಳ್ಳುತ್ತಿರುವ ರಾಜಕಾರಣ-ಕೂಟ ಇವುಗಳ ಬಗ್ಗೆಲ್ಲ ಓದಿದೆ, ಮನಸ್ಸಿಗೆ ಅವೆಲ್ಲಾ ಸ್ವಲ್ಪ ನೋವುಂಟುಮಾಡಿದವು. ಅಷ್ಟಾಗಿ ಬರೇ ಬ್ಲಾಗಿಗ ಮಿತ್ರರು ಯಾರೂ ಯಾರನ್ನೂ ಎಲ್ಲೂ ಬಂಧಿಸಿಲ್ಲವಲ್ಲ! ಒಬ್ಬರ ಹಿಂದೆಯೋ ಸುತ್ತವೋ ಸುತ್ತುವುದು ಆ ವ್ಯಕ್ತಿಯನ್ನು ಇಷ್ಟಪಟ್ಟಾಗ ಮಾತ್ರವಷ್ಟೇ ? ಕೇವಲ ವ್ಯಕ್ತಿಗಳನ್ನು ಇಷ್ಟಪಟ್ಟಾಗ ಅವರ ವ್ಯವಹಾರಾವನ್ನಗಲೀ ಅಥವಾ ಅವರ ಎಲ್ಲಾ ವೈಯಕ್ತಿಕ ಧೋರಣೆಗಳನ್ನಾಗಲೀ ಒಪ್ಪಬೇಕೆಂದೇನೂ ಇಲ್ಲವಲ್ಲ ! ವಿಶಾಲವಾದ ನದಿಯಿಂದ ನಮಗೆ ಬೇಕಾದಷ್ಟು ಒಳ್ಳೆಯ ನೀರನ್ನು ಪಡೆಯೋಣ ಅಲ್ಲವೇ ? ಅದು ಬಿಟ್ಟು ಪ್ರತಿಕ್ರಿಯೆಗಳ ಬಗ್ಗೆ, ಹಳೇ-ಹೊಸ ಬ್ಲಾಗರ್ಸ್ ಎಂಬ ಧೋರಣೆಗಳ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳುವುದು. ಸಕ್ಕರೆ ಇರುವಲ್ಲಿ ಇರುವೆಗಳು ಬರುವಂತೇ ಒಳ್ಳೇಯತನವಿದ್ದು ಉತ್ತಮ ಕೃತಿಗಳನ್ನು ಬರೆಯುವ ಲೇಖಕರನ್ನು ಸಾಹಿತ್ಯಾಸಕ್ತರು ಹುಡುಕಿ ಬಂದೇ ಬರುತ್ತಾರೆ. ಬರಲು ದಾರಿ ಸಿಗದೇ ಸ್ವಲ್ಪ ತಡವಾಗಬಹುದಷ್ಟೇ! ನನ್ನ ಬ್ಲಾಗ್ ಆರಂಭದಲ್ಲಿ ನಾನು ಎಲ್ಲಾ ಸ್ನೇಹಿತರಿಗೆ ಮೇಲ್ ಅಲರ್ಟ್ ಮಾಡಿ ಬ್ಲಾಗ್ ಅಪ್ಡೇಟ್ ಆಗಿದ್ದನ್ನು ಸೂಚಿಸುತ್ತಿದ್ದೆ ಮತ್ತು ಲಿಂಕ್ ಕೊಡುತ್ತಿದ್ದೆ, ಇದಕ್ಕೆ ಕಾರಣ ಅವರು ಬರಲೇಬೇಕೆಂಬ ಹಠವಾಗಿರಲಿಲ್ಲ, ಬದಲಾಗಿ ನಾನೂ ಬರೆಯಲು ಪ್ರಾರಂಭಿಸಿದ್ದೇನೆ ಸಾಧ್ಯವಾದರೆ ಓದಿ ನಿಮ್ಮ ಅಭಿಪ್ರಾಯ ಹೇಳಿ ಎಂಬುದಾಗಿತ್ತು. ಅದನ್ನೇ ಬಹಳವಾಗಿ ಇಷ್ಟಪಟ್ಟ ಹಲವು ಮಿತ್ರರು ತಮಗೆ ಈಗ ಯಾಕೆ ಮೇಲ್ ಮಾಡುವುದೇ ಇಲ್ಲಾ ಎಂದು ಕೇಳುತ್ತಾರೆ. ನಾನು ಕಳಿಸುವ ಅಂತಹ ಮಿಂಚಂಚೆಯಲ್ಲಿ ಬ್ಲಾಗ್ ನಲ್ಲಿ ನಾನು ಬರೆಯದ ಕೆಲವು ಆಪ್ತ ವಿಷಯಗಳು ಬರುತ್ತವೆ ಎಂಬುದು ಅವರೆಲ್ಲರ ಅಭಿಪ್ರಾಯ. ದಿನವೂ ನಿಮ್ಮ ಲೇಖನ ಓದದಿದ್ದರೆ ಏನನ್ನೋ ಕಳೆದುಕೊಂಡಹಾಗಾಗುತ್ತದೆ ಎಂಬ ಅನನ್ಯ ಆಪ್ತತೆಯನ್ನು ಹೇಳುತ್ತಾರೆ. ಆದರೆ ಕೆಲಸದ ಒತ್ತಡದಲ್ಲಿ ನನಗೇ ಮೇಲ್ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವೊಮ್ಮೆ ನನಗೆ ಬರೆಯಲೇ ಸಮಯವಿರದಿದ್ದರೂ ಬಹಳಜನ ಮಿತ್ರರು ಕಾಯುತ್ತಿರುತ್ತಾರಲ್ಲಾ ಎಂಬ ಅನಿಸಿಕೆಗೆ ಕಟ್ಟುಬಿದ್ದು ಬರೆದ ದಿನಗಳಿವೆ.

ಕಳೆದವಾರ ವಿಜಯ ನೆಕ್ಸ್ಟ್ ಪತ್ರಿಕೆಯಲ್ಲಿ ಬ್ಲಾಗಿಗರ ಬರೆದಾತ ಯಾರೋ ಪರಿಚಯವಿಲ್ಲ. ಆತ ಏನು ಬರೆದನೆಂಬುದೇ ನನಗೆ ತಿಳಿಯಲಿಲ್ಲ! ಎಲ್ಲರ ಬಗ್ಗೆಯೂ ಬರೆಯುತ್ತೇನೆ ಲಿಂಕ್ ಕೊಡಿ ಎಂದಾಗ ಸಹಜವಾಗಿ ಬಹಳ ಬ್ಲಾಗಿಗರು ಅದಕ್ಕೆ ಸ್ಪಂದಿಸಿದ್ದಾರೆ. ಆತ ’ವಿಜಯಕರ್ನಾಟಕ’ದಲ್ಲಿ ಮುಂದಿನ ತನ್ನ ’ನೆಟ್ಟಣಿಗ’ ಚುಟುಕು ಮಾಹಿತಿಗೆ ತಯಾರಿ ನಡೆಸಲು ಕಂಡುಕೊಂಡ ದಾರಿ ಇದು ಎಂಬುದು ನನ್ನ ಅನಿಸಿಕೆ. ನಮ್ಮಲ್ಲಿ ಅಂತವರ ಸಂಪರ್ಕಕ್ಕೆ ಬಂದವರು ಅವರು ಬರೆಯುವ ಲೇಖನಗಳನ್ನು ಪ್ರಕಟಣಾ ಪೂರ್ವ ಓದಿ ಸಮ್ಮತಿಸಿದರೆ ಒಳಿತು ಎಂಬುದೂ ನನ್ನ ಅಭಿಮತ. ಎಲ್ಲಾ ಮಾಹಿತಿಯನ್ನೂ ಪಡೆದು ಆಮೇಲೆ ಯಾರೋ ಒಬ್ಬಿಬ್ಬರನ್ನೇ ಕುರಿತು ಬರೆಯುವ
ಅವರ ರೀತಿ ನನಗೆ ಹಿಡಿಸಲಿಲ್ಲ. ಹೀಗೆ ಬರೆಯಲೂ ನನಗೆ ಅಳುಕಾಗಲೀ, ಮುಜುಗರವಾಗಲೀ ಇಲ್ಲ, ಯಾಕೆಂದರೆ ನಾನು ರಬ್ಬರ್ ಸ್ಟಾಂಪ್ ಬರೆಹಗಾರನಲ್ಲ! ಲೀಡರ್ ಶಿಪ್ ಬಹಳ ಜನರಲ್ಲಿಒ ಇರಬಹುದು, ಆದರೆ ಅದರ ವ್ಯಾಪ್ತಿ ಮತ್ತು ಅವಶ್ಯಕತೆ ಸೀಮಿತಗೊಳಿಸಿರಬಹುದು. ಕೆಲವರಿಗೆ ಅವರವರ ನಿರಂತರ ಕೆಲಸದ ಒತ್ತಡ ಮತ್ತು ಆರ್ಥಿಕ ಅನಾನುಕೂಲತೆಯಿಂದ ಅವರು ಮುನ್ನುಗ್ಗದೇ ಇರಬಹುದು. ಆದರೆ ನಮ್ಮಲ್ಲಿ ಅನುಕೂಲವಿರುವ ಯಾರೊಬ್ಬರಾದರೂ ಮುಂದಾಗಿ ಒಂದು ಕೆಲಸ ನಡೆದಾಗ ಅದನ್ನು ಮೆಚ್ಚಿಕೊಳ್ಳಬೇಕಾದುದು ನಮ್ಮ ಧರ್ಮ.

ಬ್ಲಾಗ್ ಮತ್ತು ಬಜ್ ಮೂಲಕ ವ್ಯವಹಾರ ಚೆಂದಕಾಣುವುದಿಲ್ಲ! ನೋ ಬ್ಯಾಕ್ಡೋರ್ ಎಂಟ್ರಿ ಪ್ಲೀಸ್ ! ನನ್ನದೂ ವ್ಯವಹಾರವಿದೆ, ಆದ್ರೆ ನಾನು ಅದನ್ನು ನಿಮ್ಮ ಮುಂದೆ ಈ ದಾರಿಯಿಂದ ತಳ್ಳುವುದಿಲ್ಲ. ಇದೇನಿದ್ದರೂ ಜ್ಞಾನಕ್ಕಾಗಿ, ಮಿತಮನೋರಂಜನೆಗಾಗಿ ಮೀಸಲಾದ ಕ್ಷೇತ್ರವಾಗಿರಲಿ ಎನ್ನುವುದು ನನ್ನ ಅಂಬೋಣ. ಆದಾಗ್ಯೂ ನಿಮ್ಮಲ್ಲಿ ಅಂತಹ ಅತಿವಿಶೇಷ ಕೊಡುಗೆಗಳು, ಮಾರಾಟದ ವಸ್ತುಗಳು ಉತ್ತಮ ಗುಣಮಟ್ಟದವಾಗಿದ್ದು ಯಾರೂ ಕೊಡದ ಅಗ್ಗದ ದರದಲ್ಲಿ ನೀವು ಪೂರೈಸುತ್ತಿದ್ದರೆ ಅದರ ಪ್ರಶ್ನೆಯೇ ಬೇರೆ! ಹೀಗಾಗಿ ಬ್ಲಾಗನ್ನು ವ್ಯಾಪಾರೀಕರಣಕ್ಕಾಗಿ ಬಳಸುವುದು ಬೇಡ ಎಂಬುದು ನನ್ನ ಸಲಹೆ. ವ್ಯವಹಾರಕ್ಕಾಗಿ ಬೇಕಾಗಿ ಅದರ ಕುರಿತಾದ ಒಂದು ಬ್ಲಾಗನ್ನೋ ಅಥವಾ ವೆಬ್ ಸೈಟನ್ನೋ ಪ್ರತ್ಯೇಕ ಇಟ್ಟುಕೊಂಡರೆ ಅದು ಉತ್ತಮ.

ಎಲ್ಲಾ ಬ್ಲಾಗಿಗರಲ್ಲಿ ನನ್ನದೊಂದು ವಿನಂತಿ. ನಾವೆಲ್ಲಾ ಋಜುಮಾರ್ಗದವರು. ವಿದ್ಯೆಯಿರುವವರು. ವಿದ್ಯೆಗೆ ವಿನಯವೇ ಭೂಷಣ. ನಮ್ನಮ್ಮಲ್ಲಿ ಚೂರುಪಾರು ಕುಂದುಕೊರತೆಗಳಿದ್ದರೆ ನೇರ ಸಂವಹಿಸಿ ಪರಿಹರಿಸಿಕೊಳ್ಳೋಣ. ಬ್ಲಾಗನ್ನು ಬರೆಯಲು ಮುಕ್ತ ಅವಕಾಶವನ್ನು ಬ್ಲಾಗ್ ಸ್ಪಾಟ್ ಮತ್ತು ವರ್ಡ್ ಪ್ರೆಸ್ಸ್ ನವರು ಕೊಟ್ಟಿದ್ದನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕು. ವಿನಾಕಾರಣ ಒಬ್ಬೊಬ್ಬರೇ ಅನೇಕ ಬ್ಲಾಗ್ ಗಳನ್ನು ಹುಟ್ಟುಹಾಕುವ ಬದಲು ಬರೆಯುವ ಬ್ಲಾಗನ್ನೇ ಸಮರ್ಪಕವಾಗಿ ನಿಭಾಯಿಸಿ, ಆಗ ಅದಕ್ಕೆ ಅರ್ಥವಿರುತ್ತದೆ. ರಸವಿರದ ಕಬ್ಬನ್ನೂ ಒಣಗಿರುವ ಲಿಂಬೆಯ ಹಣ್ಣನ್ನೂ ಯಾರೂ ಬಯಸುವುದಿಲ್ಲ. ಅಂತಹ ಕಸಗಳಿಂದಲೇ ರಸತೆಗೆಯುವ ಪ್ರಯತ್ನದಲ್ಲಿ ನಾವಿರಬೇಕಾಗುತ್ತದೆ. ನಾವು ಪರಸ್ಪರ ಏನೇನೋ ಅಂದುಕೊಳ್ಳುತ್ತಾ, ಕೆಲವರಿಗೆ ಗುಂಪುಗಾರಿಕೆ ಅಂದೆಲ್ಲಾ ಯಾರನ್ನೋ ಉದ್ದೇಶಿಸಿ ಬರೆಯುತ್ತಾ ಇರುವ ಬದಲು, ನಮ್ಮ ನ್ಯೂನತೆಗಳನ್ನು ನಾವೇ ತಿದ್ದಿಕೊಂಡರೆ ಆಗ ಎಲ್ಲ ಗುಂಪಿನಲ್ಲೂ ನಾವಿರುತ್ತೇವೆ ಅಥವಾ ಯಾವ ಗುಂಪಿನಲ್ಲೂ ನಾವಿರುವುದಿಲ್ಲ. ಹೀಗಾಗಿ ಆರೋಪ-ಪ್ರತ್ಯಾರೋಪಗಳು, ತಕರಾರುಗಳು ಬೇಡವೆಂಬುದು ನನ್ನ ಅನಿಸಿಕೆ. ಹೃತ್ಪೂರ್ವಕವಾಗಿ ಎಲ್ಲರಿಗೂ ಶುಭವನ್ನು ಹಾರೈಸುತ್ತೇನೆ.

ಪ್ರಾರಂಭಿಸಿದ ಅದೇ ಮಂತ್ರದಿಂದ ಪೂರ್ಣವಿರಾಮ ಹಾಕುವುದು ಒಳ್ಳೆಯದು ಅನಿಸುತ್ತಿದೆ--

|| ಮಯಿ ಮೇಧಾಂ ಮಯಿ ಪ್ರಜಾಂ ಮಯ್ಯಗ್ನಿಸ್ತೇಜೋ ದಧಾತು ಮಯಿ ಮೇಧಾಂ ಮಯಿ ಪ್ರಜಾಂ ಮಯೀಂದ್ರ ಇಂದ್ರಿಯಂ ದಧಾತು ಮಯಿ ಮೇಧಾಂ ಮಯಿ ಪ್ರಜಾಂ ಮಯಿ ಸೂರ್ಯೋಭ್ರಾಜೋ ದಧಾತು ||

|| ಓಂ ಶಾಂತಿಃ ಶಾಂತಿಃ ಶಾಂತಿಃ ||

Friday, September 24, 2010

ಮುಸಲಧಾರೆ


ಮುಸಲಧಾರೆ

ಏನಿದೀ ಅಬ್ಬರದ ಕಾರ್ಮೋಡ ಕರಗಿರಲು
ಲಕ್ಷಣವ ತೋರ್ಗೊಡದ ಮುಸಲಧಾರೆ ?
ಭೂಮಿಯಾಕಾಶಗಳ ಬೆಸೆದಂತೆ ನೆಟ್ಟಿರುವ
ತಂತಿ ರೂಪದ ಮಳೆಯ ಧಾರೆ ಧಾರೆ

ಸೃಷ್ಟಿ ಕಟ್ಟಳೆಯಂತೆ ವರುಣ ಭೋರ್ಗರೆದಂತ
ಪ್ರಕೃತಿ ವಿಸ್ಮಯ ರೂಪ ಜಲಲಧಾರೆ !
ಅಷ್ಟದಿಕ್ಕುಗಳಲ್ಲು ಮೋಡಗಳು ಮೇಳೈಸಿ
ಒತ್ತಟ್ಟಿಗೇ ಸುರಿದ ತಂಪುಧಾರೆ

ಇಂದ್ರಸಭೆಯಲಿ ಕೋಪಗೊಂಡ ದೇವೇಂದ್ರನ
ಶಾಪಕೀಡಾದ ಅಪ್ಸರೆಯರತ್ತರೇ?
ಚಂದ್ರಲೋಕದ ಕಾಣದಾ ಜೀವರಾಶಿಗಳು
ಕೂಪಗಳ ಮಡಿಲಿಂದ ಹರಿಬಿಟ್ಟರೇ ?

ಗುಡುಗಿನಬ್ಬರ ಕೇಳಿದಾಗೊಮ್ಮೆ ಅನಿಸುತಿದೆ
ಗಡಬಡಿಸಿ ಮೇಲ್ಯಾರೋ ಓಡಿದಂತೆ !
ಬಡಗುದಿಕ್ಕಲಿ ಸೆಳೆ ಮಿಂಚೊಮ್ಮೆ ಮಿಂಚಿರಲು
ಬೆಳಗೋ ಬೈಗೋ ಸಮಯ ಅರಿಯದಂತೆ !

ಭುವಿಯ ಲಿಂಗವಮಾಡಿ ಆಗಸದ ಪಾತ್ರೆಯಿಂ
ಅಭಿಷೇಚಿಸಿದ ದೇವತೆಗಳದಾರು ?
ಭವದ ಜಗಗುಡಿಯಲ್ಲಿ ಭಕ್ತಿಯರ್ಪಿಸಬಂದ
ಮಹಶೇಷ ರೊಪಿಗಳೇ ಅವರಿದ್ದಾರು !

ಯಾವ ಕೆಲಸಕೊ ತೃಪ್ತಿಗೊಂಡಿರುವ ದೇವತೆಗಳ್
ಭಾವಪೂರಿತವಾಗಿ ಭಾಷ್ಪವಿಳಿಸಿದರೇ ?
ಹಾವಭಾವಗಳನ್ನು ತೋರ್ಗೊಡಿಸಲೀಜಗಕೆ
ಜಾವದಲೇ ದನಿಮಾಡಿ ಮಿಂಚುತಿಹರೇ ?

Thursday, September 23, 2010

ಚಕ್ಕುಲಿ-ಕೋಡುಬಳೆ !!


[ಹಲವು ಸ್ನೇಹಿತರ ಬೇಡಿಕೆ ಇತ್ತು ಚೌತಿಯ ಚಕ್ಕುಲಿ-ಕೋಡುಬಳೆ ತನ್ನಿ ಎಂದು, ನಿಮಗಿದೋ ಕೊಡುತ್ತಿದ್ದೇನೆ,ಕೆಮ್ಮಿಗೆ ನಾನು ಜವಾಬ್ದಾರನಲ್ಲ ! ! ]

ಚಕ್ಕುಲಿ-ಕೋಡುಬಳೆ !!

ಹೊಸತನಕೊಡಬೇಕೆನ್ನುವ ಹಂಬಲ
ಹೊಸೆಯಲು ಕುಳಿತೇ ಕವನವನು
ಮಿಸುಕಾಡುತ ನೊಸಲಲಿ ಬೆವರಿಳಿಯಲು
ಬಸಿದಿರುವೇ ಈ ಕವಿತೆಯನು

ಗೊರಗೊರ ಗಂಟಲ ಸದ್ದಲಿ ಮಧ್ಯದಿ
ಸರಸರ ಹಾಡಲು ಯತ್ನಿಸುತ
"ಹರಹರ ಏನದು ವಿಚಿತ್ರ ಶಬ್ದ ?"
ಭರದಿ ಕೇಳಿದಳು ಮಡದಿಯು ತಾ

ಚಕ್ಕುಲಿ ಕೋಡುಬಳೆಗಳವು ಕುಣಿದವು
ಬಿಕ್ಕಿತು ಮನವು ತಿಂದುದಕೆ !
ಒಕ್ಕೊರಲಲಿ ಮಾತಾಡಲು ಬರದಕೆ
ಪಕ್ಕನೆ ನಕ್ಕಿತು ಬಯಸಿದಕೆ !

ಗಣಗಣ ಗಣಪತಿ ಬಂದಾ ಘಳಿಗೆಯ
ಬಣಬಣ ಎನ್ನಿಸಿ ಕಳಿಸುವುದೇ ?
ಒಣಕೆಮ್ಮಿಗೆ ’ಅತಿಮಧುರ’ ಕಷಾಯವ
ಹಣತೆತ್ತಾದರೂ ಕೊಳ್ಳುವುದೇ !

ದಿನವೂ ಇರುವುದು ಬಜ್ಜಿಪಕೋಡವು
ನನಗೇನದು ಹೊಸತೆನಿಸಿಲ್ಲ!
ಮನವೇ ನಿಲ್ಲಿಸು ಉಜ್ಜಿ ಚಪಲಗಳ
ತನುವಾನೆಯ ಹೋಲುವುದಲ್ಲ !

Wednesday, September 22, 2010

ಸರ್ ಡಬ್ ವಾಂಯ್ !!

ಚಿತ್ರ ಋಣ : ಅಂತರ್ಜಾಲ
ಸರ್ ಡಬ್ ವಾಂಯ್ !!

ತೆನ್ನಾಲಿ ರಾಮಕೃಷ್ಣನ ಕಥೆಗಳನ್ನು ಕೇಳುವಾಗ ಕೆಲವೊಮ್ಮೆ ನನಗೆ ನೆನಪಾಗುವುದು ಅವನ ಸರ್ ಡಬ್ ವಾಂಯ್ ಕಥೆ! ಪ್ರಾಯಶಃ ಅಂದಿನ ಕಾಲಘಟ್ಟದಲ್ಲಿ ಬಹಳ ಸೃಜನಶೀಲತೆ [ಕ್ರಿಯೇಟಿವಿಟಿ] ಇರುವ ಜನರಲ್ಲಿ ಆತ ಒಬ್ಬನಾಗಿದ್ದ. ದುಡಿಮೆಗೆ ಮಾರ್ಗವಿಲ್ಲದೇ ಹೊಟ್ಟೆಗೆ ಹಿಟ್ಟಿಲ್ಲದ ಕಾಲದಲ್ಲಿ ಕೇವಲ ತನ್ನ ಬುದ್ಧಿವಂತಿಕೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ರಾಜಮರ್ಯಾದೆ ಪಡೆದ ಮಹಾನುಭಾವ ತೆನ್ನಾಲಿರಾಮ. ಆಸ್ಥಾನ ವಿದ್ವಾನ್ ಬಿರುದಿಗೆ ಪಾತ್ರನಾಗುವಷ್ಟು ಪಾಂಡಿತ್ಯವನ್ನು ಸ್ವಯಾರ್ಜಿತವಾಗಿ ಅಭ್ಯಸಿಸಿ ಕರಗತ ಮಾಡಿಕೊಂಡ ತೆನ್ನಾಲಿ ಸಮಾಜಕ್ಕೆ ನ್ಯಾಯಪರತೆಯಿಂದ ನಡೆದುಕೊಂಡವ. ಶ್ರಾದ್ಧಕ್ಕೆ ಬರುವ ಪುರೋಹಿತರು ಶಾಸ್ತ್ರಸಮ್ಮತವಲ್ಲದ ಹೊರೆಕಾಣಿಕೆಗ ಭಾರವನ್ನು ಬಡಬಗ್ಗರಿಗೆ ಹೊರಿಸುವುದು ತಿಳಿದಾಗ ಕಾಯಿಸಿ ಬರೆ ಎಳೆದು ಪುರೋಹಿತರನ್ನೇ ದಂಗುಬಡಿಸಿದ ಅಪ್ಪಟ ಜನಪ್ರೇಮಿ. ರಾಜರು ಯಾವುದೇ ಮಹತ್ತಿನ ಕೆಲಸ ಮಾಡುವಾಗಲೂ ತನ್ನ ಸಲಹೆಯನ್ನು ಪಡೆಯುವಷ್ಟು ಎತ್ತರಕ್ಕೆ ಬೆಳೆದ ಮಹಾನ್ ಮೇಧಾವಿ. ಅಧಿಕಪ್ರಸಂಗಿಗಳಾಗಿ ತಾವೇ ಪಂಡಿತರೆಂದು ಮೆರೆಯುತ್ತಿದ್ದ ಹಲವಾರು ಜನರನ್ನು ತನ್ನ ಹಲವಾರು ಹಾಸ್ಯಪ್ರಸಂಗಗಳಿಂದಲೇ ಸೋಲಿಸಿ ಅವರಿಗೆ ಮಂಕುಕವಿದ ಬುದ್ಧಿಗೆ ಬೆಳಕು ಹರಿಸಿದ್ದೂ ಅಲ್ಲದೇ ಆ ಕಾರ್ಯದಲ್ಲೇ ಜನರಂಜಕನಾಗಿ ರಾಜರಂಜಕನಾಗಿ ಬಹುಪ್ರಸಿದ್ಧಿಯನ್ನು ಪಡೆದ ಹಾಸ್ಯರತ್ನ. ವಿಜಯನಗರ ಸಂಸ್ಥಾನಕಂಡ ಅದ್ಬುತ ವ್ಯಕ್ತಿಗಳಲ್ಲಿ ತೆನ್ನಾಲಿಯೂ ಒಬ್ಬ.

ತೆನ್ನಾಲಿಯ ಅನೇಕ ಕಥೆಗಳನ್ನು ನೀವು ಕೇಳಿಯೇ ಇರುತ್ತೀರಿ. ಯಾಕೆಂದರೆ ಪ್ರತಿಯೊಂದೂ ಕಥೆ ಅಷ್ಟು ಪ್ರಸರಿಸಲ್ಪಟ್ಟಿದೆ, ಜನಪ್ರಿಯವಾಗಿದೆ. ಅಲ್ಲಿ ಬರುವ ಕ್ಷುಲ್ಲಕ ಸಂಗತಿಗಳೇ ಕಥೆಗಳ ಜೀವಜೀವಾಳ. ತೆನ್ನಾಲಿ ರಾಮಕೃಷ್ಣನ ಬೆಕ್ಕು ಹಾಲು ಕುಡಿದಿದ್ದು, ತೆನ್ನಾಲಿಯ ಕುದುರೆ ಕಾಂಪಿಟಿಶನ್, ತಿಲಕಾಷ್ಠ ಮಹಿಷ ಬಂಧನ ಇವೆಲ್ಲಾ ಅನಾಯಾಸವಾಗಿ ಎಲ್ಲರ ಕಿವಿಗೂ ತಲ್ಪಿದ ಹಾಸ್ಯಕಥಾನಕಗಳು. ಕೆಲವನ್ನು ಕನ್ನಡದ ’ಹಾಸ್ಯರತ್ನ ರಾಮಕೃಷ್ಣ’ ಸಿನಿಮಾ ನೋಡಿದರೆ ಕೆಲವು ಕಥೆಗಳು ದೃಶ್ಯರೂಪದಲ್ಲೂ ಲಭ್ಯ. ಅದಲ್ಲದೇ ’ಕೃಷ್ಣದೇವರಾಯ’ ಸಿನಿಮಾದಲ್ಲೂ ದಿ| ನರಸಿಂಹರಾಜು ತೆನ್ನಾಲಿಯ ಪಾತ್ರವನ್ನು ಬಹಳ ಸುಲಲಿತವಾಗಿ ಅಭಿನಯಿಸಿದ್ದಾರೆ. ಇಂತಹ ಕಥೆಗಳ ಪೈಕಿ ’ಸರ್ ಡಬ್ ವಾಂಯ್’ ಕೂಡ ಒಂದು.

ಮಹಾಮೇಧಾವಿ ಅಂದುಕೊಂಡು ಬಂದ ವ್ಯಕ್ತಿಯೊಬ್ಬನಿಗೆ ಪಾಠ ಕಲಿಸುವ ಸಲುವಾಗಿ ತಲೆತುರಿಸಿಕೊಂಡ ತೆನಾಲಿ, ಬರುವ ದಾರಿಯಲ್ಲೇ ಘಟಿಸಿದ ಘಟನೆಯೊಂದನ್ನು ಅಸ್ತ್ರವಾಗಿ ಬಳಸಿ ಆತನನ್ನು ಹಿಮ್ಮೆಟ್ಟಿಸಿದ ಪ್ರಸಂಗ ನಮಗಿಲ್ಲಿ ಕಾಣಸಿಗುತ್ತದೆ. ಅವು ಮೂರು ವಿಭಿನ್ನ ಶಬ್ಧಗಳು ಒಂದನ್ನೊಂದು ಅವಲಂಬಿಸಿ ನಡೆದ ಕ್ರಿಯೆಗಳ ಸುತ್ತ ಬಳಸಲ್ಪಟ್ಟು ತೆನ್ನಾಲಿಯ ಮನದಲ್ಲಿ ಹುಟ್ಟಿ ಭಯಂಕರವಾದ ಅರ್ಜುನನ ಪಾಶುಪತಾಸ್ತ್ರವೋ ರಾಮನ ನಾರಾಯಣಾಸ್ತ್ರವೋ ಅಥವಾ ಅದಕ್ಕಿಂತ ಹೆಚ್ಚಿನ ಪರಿಣಾಮವುಳ್ಳದ್ದೋ ಎಂದೆನಿಸುವ ಈ ಅಸ್ತ್ರದ ನಿಜರೂಪ ತಿಳಿದಾಗ ನಾವು ನಗುತಡೆಯದಾಗುತ್ತೇವೆ. ಏನಿಲ್ಲಾ ಸ್ವಾಮಿ ಇದರಲ್ಲಿ ಇಷ್ಟೇ ಎನಿಸುವುದುದಾದರೂ ಮುಳ್ಳನ್ನು ಮುಳ್ಳಿಂದಲೇ ತೆಗೆವ ಚಾಕಚಕ್ಯತೆಯನ್ನು ಮೆರೆದು ವಿಜಯನಗರದ ಮಾನಕಾಪಾಡಿದ ಹಾಗೂ ಮಾನಸಮ್ಮಾನವನ್ನು ಪಡೆದ ತೆನ್ನಾಲಿ ಇಂದಿಗೂ ಸ್ತುತ್ಯಾರ್ಹ.

ಸರ್ ಎಂದರೆ[ ಇಂಗ್ಲೀಷ್ ಸರ್ ಅಲ್ಲ! ಅದೊಂದು ಸದ್ದು]ಹಿತ್ತಲಲ್ಲಿ ನಿಂತ ತೆಂಗಿನ ಮರದ ಗರಿ ಜಾರುವುದು, ಡಬ್ ಎಂದರೆ ಅದು ಕೆಳಗೆ ಬಿದ್ದಾಗಿನ ಸದ್ದು, ವಾಂಯ್ ಎಂದರೆ ಹತ್ತಿರದಲ್ಲೇ ಮೇಯುತ್ತಿದ್ದ ಎಮ್ಮೆ ಹೆದರಿ ಕೂಗಿದ್ದು. ಇದು ಒಟ್ಟಿಗೆ ಸೇರಿ ’ಸರ್ ಡಬ್ ವಾಂಯ್’ ಆಗಿದೆ. ಇದನ್ನು ಅರ್ಥೈಸದೇ ಹೈರಾಣಾದ ಮಹಾಪಂಡಿತ, ತೆನ್ನಾಲಿಯ ಕರ್ತೃತ್ವ ಶಕ್ತಿಗೆ ತಲೆಬಾಗಿ ನಮಿಸಿ ಹೊರಟುಹೋದದ್ದು ಇಂದಿಗೆ ನಮಗೆ ಇತಿಹಾಸ. ವೈರಸ್ ಬಂದಾಗ ಕಂಪ್ಯೂಟರಿಗೆ ಆಂಟಿವೈರಸ್[ಆಂಟಿ ಯಲ್ಲ ಸ್ವಾಮೀ ತಪ್ಪಾಗಿ ಭಾವಿಸಬೇಡಿ!] ಬೇಕೇಬೇಕು. ಅಲ್ಲಿ ಬರುವ ವೈರಸ್ ಗಳು ಈ ಕಥೆಯಲ್ಲಿ ಇರುವ ಮಹಾಪಂಡಿತನಂತೇ ಕಂಪ್ಯೂಟರನ್ನೇ ತಿಂದುಹಾಕುವಂತಿರುತ್ತವೆ! ಅಸಲಿಗೆ ಅವುಗಳ ದುರಹಂಕಾರ ಅಟಾಟೋಪ ಬಹಳ ಜಾಸ್ತಿ[ಟಿವಿಯಲ್ಲಿ ’ಡೊಮೆಕ್ಸ್’ ಜಾಹೀರಾತು ನೋಡಲು ಕೋರಲಾಗಿದೆ!]. ತನಗೆ ಮದ್ದೇ ಇಲ್ಲಾ ಅಂತ ತಿಳಿದರೆ ಅವು ಮಗ್ಗಲು ಬದಲಿಸಿ ದೈತ್ಯಾಕಾರವಾಗಿ ಇಡೀ ಕಂಪ್ಯೂಟರ್ ವ್ಯಾಪಿಸಿ ಇರಿಸಿರುವ ಮಾಹಿತಿಗಳನ್ನು ಅಳಿಸುವುದೋ, ನಾಪತ್ತೆಮಾಡುವುದೋ, ಪ್ರಿಂಟ್ ಬರದಂತೆಯೋ ನೆಟ್ ಕನೆಕ್ಟ್ ಆಗದಂತೆಯೋ ಮಾಡುವುದೋ ಮೆಮರಿ ಅಥವಾ ಹಾರ್ಡ್ ಡಿಸ್ಕ್ ಸುಟ್ಟುಹೋಗುವಂತೆ ಮಾಡುವುದೋ ಅವುಗಳ ’ಕ್ರಿಮಿ’ನಲ್ ಕೆಲಸ! ಈ ಕ್ರಿಮಿ ಸೂಕ್ಷಾಣುವಲ್ಲ, ಇದು ಕೂಡ ಒಂದು ತೆರನ ಸುಪ್ತಾಂಶವೇ! ಎಷ್ಟೋ ಜನ ಇನ್ನೂ ಕಂಪ್ಯೂಟರ್ ವೈರಸ್ ಎಂದರೆ ಅದು ಡೊಮೆಕ್ಸ್ ಜಾಹೀರಾತಿನಲ್ಲಿ ಬರುವ ರೂಪದಲ್ಲೋ ಅಥವಾ ಮನುಷ್ಯರಿಗೆ ಕಾಯಿಲೆತರುವಂಥದ್ದೇ ಕೀಟಾಣುವಾಗಿರಬಹುದೆಂದು ಅಂದುಕೊಂಡಿರುತ್ತಾರೆ, ಆದರೆ ಯಾರಲ್ಲಿ ಕೇಳುವುದು-ಕೇಳಿದರೆ ತನಗೆ ಗೊತ್ತಿಲ್ಲಾ ಎಂಬುದು ಆ ಕೇಳಿದ ವ್ಯಕ್ತಿಗೆ ತಿಳಿದು ತನ್ನನ್ನು ಆತ ’ಇಷ್ಟೇನೆ ಈತ’ ಎಂದು ತಿಳಿದುಬಿಟ್ಟರೆ ಕಷ್ಟ ಎಂದುಕೊಂಡು ನಮ್ಮ ಎಗೋ[ದುರಭಿಮಾನ]ಕ್ಕೆ ಧಕ್ಕೆಯಾಗದಂತೆ ಹಾಗೆ ಕೇಳಬೇಕಾದ ಹಲವು ಪ್ರಶ್ನೆಗಳನ್ನು ನಮ್ಮೊಳಗೇ ಹತ್ತಿಕ್ಕಿ ಬಂಧಿಸಿರುತ್ತೇವೆ. ಒಂದೇ ವ್ಯಾಖ್ಯೆಯಲ್ಲಿ ಹೇಳಬಹುದಾದರೆ- ವೈರಸ್ ಈಸ್ ಆಲ್ಸೋ ಎ ಸಾಪ್ಟವೇರ್ ಡಿಸ್ಟ್ರಕ್ಟಿವ್ ಇನ್ ನೇಚರ್ ! ಇಂತಹ ವೈರಸ್ ಬಂದಾಗ ಅದನ್ನು ತೆಗೆಯಲು ಉಪಾಯಹುಡುಕಿ ಅದಕ್ಕೆ ಬೇಕಾದ ತಂತ್ರಾಂಶ ಬರೆಯುವವರು ಕೆಲವರು[ ಅಸಲಿಗೆ ವೈರಸ್ ಬಿಡುವವರೂ ಅವರೇ, ಅವರ ಕೆಲಸವೇ ಅದು.ಕೆಲವೊಮ್ಮೆ ಹಾವಾಡಿಗರು ಹಳ್ಳಿಯ ಮನೆಗಳ ಹತ್ತಿರದಲಿ ಹಾವನ್ನು ಬಿಟ್ಟು ದೂರ ಹೋಗಿ ಒಂದೆರಡು ಗಂಟೆ ಕಳೆದು ಮತ್ತೆ ಬರುತ್ತಾರೆ-ಆಗ ಅವರಿಗೆ ಹಾವು ಹಿಡಿಯುವ ’ಅವಕಾಶ’ ಸಿಗುತ್ತದೆ. ಇದು ಹೊಟ್ಟೆ ಹೊರೆದುಕೊಳ್ಳುವ ವಿವಿಧೋದ್ದೇಶ ಯೋಜನೆಗಳಲ್ಲೊಂದು! ]

ಇರಲಿ, ನಾನು ಹೇಳ ಹೊರಟ ’ಸರ್ ಡಬ್ ವಾಂಯ್’ ಬೇರೇನೇ ಇದೆ! ನಾವೆಲ್ಲಾ ಪ್ರಾಥಮಿಕ ಶಾಲೆಗೆ ಹೋಗುವಾಗ ನಮ್ಮಗಿಂತ ಮೇಲಿನ ತರಗತಿಗಳಲ್ಲಿ ಕೆಲವು ವಿದ್ಯಾರ್ಥಿಗಳು ಸ್ವಲ್ಪ ಕಿಡಿಗೇಡಿಗಳಿದ್ದರು. ಹೇಳಿದ ಕೆಲಸವನ್ನು ಮಾಡದೇ ಹಾಗೇ ಬಂದು ತರಗತಿಯಲ್ಲಿ ಕೂತುಕೊಳ್ಳುವುದು, ಶಿಕ್ಷಕರು ಶಿಕ್ಷೆ ವಿಧಿಸಿದರೆ ಅನುಭವಿಸುವುದು, ಆಮೇಲೆ ದಿನವೊಪ್ಪತ್ತು ಶಿಕ್ಷೆಕೊಟ್ಟ ಶಿಕ್ಷಕರಮೇಲೆ, ಅವಮಾನದಿಂದ ಕೆಂಡಾಮಂಡಲವಾಗಿ ಏನಾದ್ರೂ ಅನ್ನುತ್ತಿರುವುದು-ಇದೆಲ್ಲಾ ಅವರ ಚಾಳಿ. ಒಮ್ಮೆ ನಾವೆಲ್ಲಾ ಮೂರನೇ ಕ್ಲಾಸಿನಲ್ಲಿದ್ದ ವೇಳೆ ಇರಬೇಕು, ಆಗ ಐದನೇ ಈಯತ್ತೆಯಲ್ಲಿ ಒಬ್ಬ ಹುಡುಗನಿದ್ದ. ಹೆಸರು ವಿನಾಯಕ. ಆತ ವಿನಾಯಕನೇ ಹೌದು! ಆ ವಿನಾಯಕನಿಗೂ ಈ ವಿನಾಯಕನಿಗೂ ಅಂತರ ಬರೇ ಸೊಂಡಿಲು ಎಂಬಷ್ಟು ಬಹಳ ಕೀಟಲೆಯುಕ್ತ ಜಾಣ. ಆದರೆ ಸೊಂಬೇರಿ[ಆಳಸಿ]. ಮೈಗಳ್ಳನಾದ ಆತ ಕೆಲವೊಮ್ಮೆ ಹೋಮ್ ವರ್ಕ್ ಮಾಡದೇ ಹಾಗೇ ಬರುತ್ತಿದ್ದ. ಅವನ ಕ್ಲಾಸ್ ಟೀಚರ್ ಮುಕ್ತಕ್ಕವರು. ಅವರೂ ಅಷ್ಟೇ ಮಕ್ಕಳಿಲ್ಲದ ಅವರಿಗೆ ಮಕ್ಕಳನ್ನು ಪಾಲನೆ ಮಾಡುವ ಬಗ್ಗೆ ಅಷ್ಟಾಗಿ ತಿಳಿದಿರಲಿಲ್ಲಾ ಎನಿಸುತ್ತದೆ; ಬಹಳ ಕೋಪ ಜಾಸ್ತಿ.

ನಾವೆಲ್ಲಾ ಆಗಾಗ ಅಜ್ಜನಮನೆಗೆ ತಾಯಿಯ ಜೊತೆ ಹೋಗಿಬಿಟ್ಟರೆ ಒಂದೆರಡು ದಿನ ಸ್ಕೂಲಿಗೆ ಬಂಕ್! ಮರಳಿ ಬಂದಾಗ ಶಾಲೆಗೆ ಮುಖತೋರಿಸಲೂ ಒಂಥರಾ. ನಮಗಿಂತ ನಮ ಸಹಪಾಠಿಗಳು ಹೆಚ್ಚು ವಿಷಯಗಳನ್ನು ಕಲಿತುಬಿಡುತ್ತಿದ್ದರಲ್ಲ! ಹೆದರಿಕೆ ಒಂದುಕಡೆಗಾದ್ರೆ ಬಾಕಿಬಿದ್ದ ವಿಷಯಗಳ ಕಲಿಯುವಿಕೆ ನೆನೆದು ಮನಸ್ಸು ಹೈರಾಣಾಗುತ್ತಿತ್ತು. ಆದ್ರೂ ಮಾತ್ರೆ ತಿಂದೂ ತಿಂದೂ ಅಭ್ಯಾಸ ಆಗಿ ಹೋದ ರೋಗಿಯರೀತಿ ನಮ್ಮ ಮನಸ್ಸು ಕೊನೆಗೊಮ್ಮೆ ಬರುವಂತಹ ಶಿಕ್ಷೆಗಳನ್ನೂ,ನಿಭಾಯಿಸಬೇಕಾದ ಬಾಕಿ ಕೆಲಸಗಳನ್ನೂ ಒಪ್ಪಿಕೊಳ್ಳುತ್ತಿತ್ತೇ ವಿನಃ ಅಜ್ಜನಮನೆಯ ಅಥವಾ ನೆಂಟರಮನೆಯ ವಿಸಿಟ್ ನಾವು ತಪ್ಪಿಸಿಕೊಳ್ಳುತ್ತಲೇ ಇರಲಿಲ್ಲ! ಹಳ್ಳಿ ಜೀವನ ನೋಡಿ--ಅಲ್ಲಿ ಬಸ್ ವ್ಯವಸ್ಥೆ ಸ್ವಲ್ಪ ಕಮ್ಮಿಯೇ ಇರುತ್ತಿತ್ತು. ಸಾರಿಗೆಯ ಅಭಾವದಿಂದ ಅಮ್ಮ ಒಂದುದಿನ ಜಾಸ್ತಿ ಅಲ್ಲಿ ಉಳಿದರೆ ನಮಗೆ ಅಲ್ಲಿನ ಮಕ್ಕಳೊಂದಿಗೆ ಮತ್ತೊಂದು ದಿನದ ಹಬ್ಬ! ಮರಳಿ ನಮ್ನಮ್ಮ ಶಾಲೆಗೆ ಬಂದಾಗ ಟೀಚ ಕೇಳಿದರೆ ನಾವು " ಅಜ್ಜನ ಮನೆಯಲ್ಲಿ ಎಮ್ಮೆ ಕರುಹಾಕಿತ್ತು ಅದಕ್ಕೇ ನೋಡಲು ಹೋಗಿದ್ದೆವು" ಅಂತಲೋ ಅಥವಾ " ಅತ್ತೆಮನೆಯಲ್ಲಿ ಸತ್ಯನಾರಾಯಣ ಕಥೆ ಇತ್ತು " ಅಂತಲೋ ಪ್ರಾಮಾಣಿಕವಾಗಿ ಹೇಳುತ್ತಿದ್ದೆವು. ಗ್ರಾಮ್ಯ ಜೀವನಶೈಲಿಯ ಅನುಭವದಲ್ಲಿದ್ದು ಬಿಡುವುಸಿಕ್ಕಾಗ ಹಳ್ಳಿಯ ಕೆಲವುಜನರೊಂದಿಗೆ ಇಸ್ಪೀಟ್ ಆಟ, ತೆಂಗಿನಕಾಯಿ ವ್ಯಾಪಾರ ಇವೆಲ್ಲಾ ಮಾಡಿ ಗೊತ್ತಿದ್ದ ಕೆಲವು ಶಿಕ್ಷಕರು ಮತ್ತೇನೂ ಕೇಳದೇ ಹಿಂದೆ ಕಲಿಸಿದ್ದನ್ನು ಓದಿ,ಬರೆದು ತಯಾರಾಗಿ ಬರಲು ತಾಕೀತು ಮಾಡುತ್ತಿದ್ದರು. ಛೆ! ಅಷ್ಟಕ್ಕೆಲ್ಲಾ ಎಂದಾದ್ರೂ ನಾವು ಸೋಲುವುದುಂಟೇ !

ಕೋಪ ಬಂದ ಒಂದು ದಿನ ವಿನಾಯಕನಿಗೆ ಇಡೀ ಶಾಲೆಯನ್ನು ಮೂರುಸುತ್ತು ಬರುವಂತೇ ಮತ್ತು ಆಮೇಲೆ ಬೆಂಚಿನಮೇಲೆ ನಿಲ್ಲುವಂತೇ ಮುಕ್ತಕ್ಕವರ ಆಜ್ಞೆಯಾಯಿತು! ವಿನಾಯಕ ಕುದ್ದುಹೋದ. ಅವನಿಗೆ ಎಲ್ಲಾತರಗತಿಗಳವರೂ ಸುತ್ತುಹಾಕುವಾಗ ನೋಡುತ್ತಾರಲ್ಲ ಎಂಬ ಅವಮಾನವಾಗಿ ಬಹಳ ಹಳಹಳಿಸಿದ, ಕೇಳಿಕೊಂಡ. ಆದ್ರೂ ಮುಕ್ತಕ್ಕವರು ಪ್ರಸನ್ನರಾಗಲಿಲ್ಲ. ಶಿಕ್ಷೆ ಪಾಲಿಸಲೇ ಬೇಕಾಗಿತ್ತು! ಅಷ್ಟಕ್ಕೂ ಅದು ಸರಿಯೇ ಆದರೂ ವಿನಾಯಕನ ದೃಷ್ಟಿಯಲ್ಲಿ ಅದು ತಪ್ಪು. ವಿನಾಯಕ ತಡಮಾಡಲಿಲ್ಲ ಮೂರುಸುತ್ತು ಹಾಕೇ ಬಿಟ್ಟ. ಹಾಗೇ ಬೆಂಚಿನ ಮೇಲೆ ನಿಂತು ಶಾಲೆಯ ಅಂದಿನ ದಿನ ಮುಗಿಸಿದ.

ಮಾರನೇ ದಿನ ಬೆಳಿಗ್ಗೆ ಶಾಲೆಯ ಬಾಗಿಲು ತೆಗೆದಿದ್ದೇ ತಡ, ವಿನಾಯಕ ಅಲ್ಲಿದ್ದ. ಯಾಕೆ ಆ ದಿನ ಮಾತ್ರ ಅಷ್ಟುಬೇಗ ಎಂಬುದು ನಮಗೆ ತಿಳಿಯಲಿಲ್ಲ. ಶಾಲೆ ಎಂದಿನಂತೇ ಆರಂಭವಾಯಿತು. ಅರ್ಧಗಂಟೆಯೂ ಕಳೆದಿರಲಿಲ್ಲ. ಮುಕ್ತಕ್ಕವರು ಕೈ ಮೈ ತುರಿಸಿಕೊಳ್ಳುತ್ತಾ ಓಡುತ್ತಾ ಏನೋ ಆಗಿದೆಯೆಂದು ತಿಳಿಸಲು ಮುಖ್ಯಾಧ್ಯಾಪಕರ ಕೋಣೆಗೆ ಬಂದರು! ಇಡೀ ಮೈಕೈ ಲಿಬಿಲಿಬಿ ತುರಿಕೆ, ತುರಿಸಿದಷ್ಟೂ ಮತ್ತಷ್ಟು ಜಾಸ್ತಿ. ನಾನೆಲ್ಲೋ ಸಂದಿಯಲ್ಲಿ ಸುಮ್ಮನೇ ನೋಡುತ್ತಾ ವಿನಾಯಕ ಕಂಡ! ಗೆದ್ದ ಸಂಭ್ರಮದಲ್ಲಿ ಒಳಗೊಳಗೇ ನಗುತ್ತಿದ್ದ! ತುರಿಕೆ ಜಾಸ್ತಿಯಾಗಿ ವೈದ್ಯರನ್ನು ಕಾಣುತ್ತೇವೆ ಎಂದು ತಿಳಿಸಿ ಮುಕ್ತಕ್ಕವರು ಮನೆಗೆ ತೆರಳಿದರು. ಶಾಲೆಯಲ್ಲಿ ಅವರು ತೆಗೆದುಕೊಳ್ಳುತ್ತಿದ್ದ ಪಠ್ಯಾವಧಿಗಳು ಖಾಲೀ ಬಿದ್ದವು. ಅಂತೂ ಅಂದಿಗೆ ಶಾಲೆಯ ಅವಧಿ ಮುಗಿದು ಮನೆಗೆ ತೆರಳಲು ಸೂಚಿಸುವ ಗಂಟೆಬಡಿಯಿತು. ಎಲ್ಲರೂ ಮನೆಗೆ ತೆರಳುವಾಗ ವಿನಾಯಕ ಬಹಳ ಸಂತೋಷದಿಂದ ನಗುತ್ತಿದ್ದ. " ಸರ್ ಡಬ್ ವಾಂಯ್ " ಎಂದ.

ಕೊನೆಗೆ ಗೊತ್ತಾಗಿದ್ದು ಇಷ್ಟು: ಹಿಂದಿನ ಸಾಯಂಕಾಲವೇ ವಿನಾಯಕ ಕೋಪದಿಂದ ಚೊಣಗಿ ಗಿಡ[ತುರಿಕೆ ಗಿಡ]ದ ಎಲೆಗಳನ್ನು ಪೇಪರಿನಲ್ಲಿ ಕಟ್ಟಿ ತಂದಿಟ್ಟುಕೊಂಡಿದ್ದ, ಬೆಳಿಗ್ಗೆ ಶಾಲೆಗೆ ಬಂದವನೇ ಮುಕ್ತಕ್ಕವರು ಕೂರುವ ಚೇರಿನ ಹಿಡಿಕೆ ಹಾಗೂ ಇನ್ನುಳಿದ ಎಲ್ಲಾ ಭಾಗಕ್ಕೆ ಅದನ್ನು ಸವರಿದ್ದ! ಅದರ ಪರಿಣಾಮ ಹೇಗಿರುತ್ತದೆ ಎಂದರೆ ಅನುಭವಿಸಿದ ಹಳ್ಳಿಗರಿಗೆ ಅಥವಾ ಹಳ್ಳಿಯ ಮೂಲದ ಜನರಿಗೆ ಮಾತ್ರ ಗೊತ್ತು! ಖುರ್ಚಿಯ ಮೇಲೆ ಕುಳಿತ ಮುಕ್ತಕ್ಕವರು ಕೈಮೈ ಖುರ್ಚಿಗೆ ಸೋಕಿರುವುದರಿಂದ ಆ ಸೊಪ್ಪಿನ ಪಸೆ ಮೈಗೆ ಹತ್ತಿಕೊಂಡಿದೆ, ತುರಿಕೆ ಶುರುವಾದಾಗ ಸರ್ ಅಂತ ಚೇರ್ ಎಳೆದು ಜಾರಿದ್ದಾರೆ, ಕೈಲಿದ್ದ ಡಸ್ಟರ್ ಡಬ್ ಎಂದಿ ನೆಲಕ್ಕೆ ಬಿದ್ದಿದ್ದೆ, ’ ಅಯ್ಯೋ ಏನಪ್ಪಾ ಇದು ’ ಎಂದು ಅವರು ತುರಿಸಿ ತುರಿಸಿ ಸುಸ್ತಾಗಿ ಕೈಮೈ ಕೆಂಪಗಾಗುತ್ತ ನಡೆದಿದೆ! ಕೊಬ್ಬರಿ ಎಣ್ಣೆ ಸವರಿಕೊಂಡರೆ ಆ ತುರಿಕೆ ನಿಲ್ಲುತ್ತಿತ್ತು. ಆದ್ರೆ ಹೇಳುವವರಾರು. ಯಾರಾದ್ರೂ ಬಾಯಿಬಿಟ್ಟರೆ ವಿನಾಯಕ ಮತ್ತೆ ಕಠಿಣ ಶಿಕ್ಷೆಗೆ ಗುರಿಯಾಗುತ್ತಾನೆ. ಮೇಲಾಗಿ ಯಾವಮಕ್ಕಳನ್ನೂ ಎಂದಿಗೂ ಪ್ರೀತಿಯಿಂದ ಕಾಣದ ಮುಕ್ತಕ್ಕವರ ಮೇಲೆ ಬಹುತೇಕ ಮಕ್ಕಳಿಗೆ ಕೋಪವಿತ್ತು. ಯಾಕೆಂದರೆ ಒಂದಲ್ಲಾ ಒಂದುದಿನ ಅವರೂ ಬರೆಯದೇ ಬಂದವರೋ ಅಜ್ಜನಮನೆಗೆ ಹೋಗಿ ೩ ದಿನ ಬಿಟ್ಟು ಬಂದವರೋ ಆಗಿ ಶಿಕ್ಷೆ ಅನಿಭವಿಸಿದ್ದುಂಟು. ಹೀಗಾಗಿ ಯಾರೂ ಏನೂ ಚಕಾರವೆತ್ತಲಿಲ್ಲ. ವಿನಾಯಕನ ಕೈ ಮೇಲಾಯಿತು!

ಉಪಸಂಹಾರ [ ಇದು ಯಾರ ಸಂಹಾರವೂ ಅಲ್ಲ ಎಂಬುದಕ್ಕೆ !]
ಇದು ತಪ್ಪೋ ಒಪ್ಪೋ ಬೇರೆ ಪ್ರಶ್ನೆ. ತಪ್ಪೇ ಎಂದಿಟ್ಟಿಕೊಳ್ಳೋಣ. ಆದ್ರೆ ಇದೆಲ್ಲಾ ಅಂದಿನ ಬಾಲಕರ ಅಟಾಟೋಪಗಳು. ಅಂದು ಬಾಲಕರಿಗೆ ಮನೆಯಲ್ಲಿ ಯಾವ ಸಪ್ಪೋರ್ಟ್ ಸಿಗುತ್ತಿರಲಿಲ್ಲ. ಇಂದಾದರೆ ಸ್ವಲ್ಪ ಅಬ್ಬರಿಸಿದರೆ ಸಾಕು ಶಿಕ್ಷಕರಿಗೆ ಗ್ರಹಚಾರ ಕಾದಿರುತ್ತದೆ, ಪಾಲಕರು ಶಾಲೆಗಳಿಗೆ ನುಗ್ಗುತ್ತಾರೆ, ಕೊನೇಪಕ್ಷ ಯಾಕೆ ಹಾಗೆ ಮಾಡಿದ್ದು ಎಂದು ವಿಚಾರಿಸಿ ಮತ್ತೆ ಹಾಗೆ ಮಾಡದಂತೇ ಹೇಳುತ್ತಾರೆ. ಅಂದಿನ ನಮ್ಮ ಬಾಲ್ಯಕಾಲದಲ್ಲಿ ನಮಗೆ ನಾವೇ ಮಕ್ಕಳ ಮರಿ ಸೈನ್ಯ! ಏನಿದ್ದರೂ ನಾವೇ ಬಗೆಹರಿಸಿಕೊಳ್ಳಬೇಕು. ಶಾಲೆಗಳಲ್ಲಿ ಏನಾದರೂ ವಿಶೇಷವಿದ್ದರೆ ಮಾತ್ರ ಮನೆಯವರು ಬರುತ್ತಿದ್ದರು. ಅವರು ಎಂದಿಗೂ ಶಿಕ್ಷಕರಿಗೆ ಎದುರಾಡಿದವರಲ್ಲ! ನಮ್ಮಗಳ ಮನೆಯಲ್ಲಿ ಶಿಕ್ಷಕರು ಹಬ್ಬ ಹರಿದಿನಗಳಲ್ಲಿ ಆಗಾಗ ಆಮಂತ್ರಣದ ಮೇಲೆ ಊಟಕ್ಕೆ ಬರುತ್ತಿದ್ದರು.ಅವರು ಬಂದು ಹೋಗುವವರೆಗೂ ನಾವು ಕೋಣೆಯಿಂದಾಚೆ ಕಾಲಿಟ್ಟವರೇ ಅಲ್ಲ! " ಎಲ್ಲಿ ಇವನು " ಅಂತ ಮಾಸ್ತರು ಕೇಳಿದರೆ " ಇದ್ದಾನೆ ಇದ್ದಾನೆ, ಅವನಿಗೆ ನೀವು ಬಂದಿದ್ದೀರಲ್ಲಾ ಅದಕ್ಕೇ ನಾಚಿಕೆ " ಎಂದುತ್ತರಿಸುವ ಮನೆಯವರು ನಮ್ಮನ್ನು ಕರೆದು ಹೊರಬರುವಂತೇ ಹೇಳುತ್ತಿದ್ದರು. ಬಂದು ಹೋದ ಶಿಕ್ಷಕರು ಒಂದೆರಡು ದಿನ ಮೊಬೈಲ್ ಚಾರ್ಜ್ ಇದ್ದಹಾಗೇ ನಮ್ಮಗಳ ಮನೆಯ ನೆನಪಿನಲ್ಲಿದ್ದು ಆ ಮನೆಯ ಮಕ್ಕಳಿಗೆ ಶಿಕ್ಷೆ ಕೊಡುತ್ತಿರಲಿಲ್ಲ, ಮೂರನೇ ದಿನ ಯಥಾಸ್ಥಿತಿ ಅಂದ್ಕೊಳಿ! ಆದರೂ ನಮ್ಮ ಪಾಲಕರು ಕೊಡುವ ಊಟ ಮಕ್ಕಳನ್ನು ಶಿಕ್ಷಿಸದಿರಲಿ ಎಂಬುದಕ್ಕೆ ಲಂಚವಲ್ಲವಲ್ಲ,ಬದಲಾಗಿ ಮಕ್ಕಳನ್ನು ಇನ್ನೂ ಬಡಿದು,ತಿದ್ದಿ-ತೀಡಿ ಎಂಬ ಒತ್ತೇ ಅದರಲ್ಲಿರುತ್ತಿತ್ತು.

ಓದಿದಿರಿ ತಾನೇ? ಇಷ್ಟುಸಾಕು, ಸರ್ ಡಬ್ ವಾಂಯ್ ನಿಮ್ಮಲ್ಲೂ ಇದ್ದರೆ ಹೇಳಿ, ನಾನು ಕೇಳಬೇಕು. ಈ ಸರ್ ಡಬ್ ವಾಂಯ್ ಹಲವು ತೆನ್ನಾಲಿಗಳನ್ನು ಹುಟ್ಟುಹಾಕಲಿ ಎಂದು ಹಾರೈಸುತ್ತೇನೆ,ನಮಸ್ಕಾರ.

’ಅಹಂ ಬ್ರಹ್ಮಾಸ್ಮಿ’ !!


’ಅಹಂ ಬ್ರಹ್ಮಾಸ್ಮಿ’!!

[ ಅನೇಕ ಮಿತ್ರರು ಮೇಲ್ ಮಾಡಿ ಕೇಳಿದ್ದರಿಂದ ನನಗೆ ನವ್ಯಕಾವ್ಯ ಬರೆಯಲು ಇಷ್ಟವಿಲ್ಲದಿದ್ದರೂ ಬರೆಯಬೇಕಾಗಿ ಬರೆದೆ, ಓದಿನೋಡಿ, ಖುಷಿಕೊಡಲಿ ಬಿಡಲಿ ಓದುವುದು ನಿಮ್ಮ ಧರ್ಮ, ಬರೆಯುವುದು ನಮ್ಮ ನಿತ್ಯಕರ್ಮ ! ]

ಹದಿನಾರು ಸಲ ಬರೆದೆ
ಹದಿನಾರು ಅಪೂರ್ಣ ಕೃತಿಗಳು
ಎಲ್ಲವೂ ನನಗಂತೂ ಭಾವಪೂರ್ಣ
ಮಿಕ್ಕವರಿಗೆ ಅರ್ಥಹೀನ !
ಇದು ನನ್ನ ಪ್ರಾಮಾಣಿಕ ಪ್ರಯತ್ನ
ಹಲವುದಿನಗಳ ನಿದ್ದೆಗೆಟ್ಟ ಶ್ರಮ
ಶಬ್ದಗಳನ್ನೆಲ್ಲ ಕಲೆಹಾಕಿ
ಬೇಯಿಸಿ ಸೋಸಿ ಬಸಿದು ಕೊಟ್ಟ
ಹೊಚ್ಚಹೊಸ ಕವನಗಳು
ನೀವು ನಂಬಿ ಬಿಡಿ ಇದು ನನ್ನವೇ
ಸದ್ಯಕ್ಕೆ ನೀವು ನಂಬುತ್ತೀರಿ
ಯಾಕೆಂದರೆ ಇವೆಲ್ಲವೂ ಅಪೂರ್ಣ!
ಅವುಗಳಿಗೆ ಹಾಲು-ಮೊಸರನ್ನವುಣಿಸಿ
ನೀರೆರೆದು ಎಣ್ಣೆಹಚ್ಚಿ ತಲೆಬಾಚಿ
ಒಳ್ಳೆಯ ಬಟ್ಟೆ ತೊಡಿಸಿ ರಂಗಿಗೆ ಪೌಡರ್ ಹಾಕಿ
ಕಾಲಿಗೆ ಸಾಕ್ಸು ಶೂ ಹಾಕಿ
ನಿಮ್ಮ ಮುಂದೆ ನಡೆಯಬಿಟ್ಟಾಗಲೇ ನೀವೆನ್ನುತ್ತೀರಿ
ವಾ ವಾ ಎಂತಹ ಚೆಂದದ ಕವಿತೆಗಳಪ್ಪಾ!

ನನ್ನಗೋಳು ನನಗೇ ಗೊತ್ತು
ಮಲಬದ್ಧತೆಯಾದವರ ರೀತಿ
ಅವುಗಳ ಮುನ್ನಡೆಸುವಿಕೆ ಇನ್ನೂ ಹೊಳೆದಿಲ್ಲ
ನನ್ನೊಳಗೆ ಹಲವು ಕವಿ ಹುಟ್ಟಿ ಹುಟ್ಟಿ
ಮತ್ತೆ ಮತ್ತೆ ಸತ್ತುಹೋದ ಅನುಭವ
ಆದರೂ ಬಿಡಲಾರದ ತ್ರಿವಿಕ್ರಮ ನಂಟು !
ಹೊರಪ್ರಪಂಚಕೆ ಇದರ ಅರಿವುಂಟೇ ?
ನಿದ್ದೆ ಬಾರದೇಕೆ ಕನಸು ಬೀಳದೇಕೆ
ಕನಸಿನಲ್ಲಿ ಯಾರೋ ಬಂದು ಹೇಳಿಕೊಟ್ಟರೆ
ಮಾರನೇ ಬೆಳಿಗ್ಗೆಯೊಳಗೆ ಕವನಗಳನ್ನು
ಬರೆದು ಪ್ರಕಟಿಸಿಬಿಡುತ್ತಿದ್ದೆ
ಆಗ ಒತ್ತಟ್ಟಿಗೆ ಕೊಡುವ ಕೃತಿಗಳನ್ನು
ನೋಡಿ ಬೇಗ ಓದಿ ಅರ್ಥಮಾಡಿಕೊಳ್ಳಲಾರದ
ನಿಮ್ಮನ್ನು ಮರೆಯಲ್ಲಿ ನಿಂತು
ರಾಮ ವಾಲಿಗೆ ಬಾಣ ಬಿಟ್ಟಂತೇ
ಛೂಬಾಣ ಬಿಟ್ಟು ನಿಮ್ಮನ್ನು ಗೆದ್ದು ತೃಪ್ತನಾಗುತ್ತಿದ್ದೆ!
ಆದರೂ ರಾಮ ಕನಿಕರಿಸಿದಂತೆ
ಆಮೇಲೆ ನಿಮಗೆಲ್ಲಾ ನಾನೇ ಹೇಳಿಬಿಡುತ್ತಿದ್ದೆ
"ಓದಿದ ಮಹನೀಯರೇ ನಿಮಗಿದೋ ನಮನ" ಎಂದು

ಒಮ್ಮೆ ಹೀಗೂ ಅನಿಸುತ್ತದೆ
ಇಷ್ಟೆಲ್ಲಾ ಮಾಡುವುದು ಯಾವ ಪುರುಷಾರ್ಥಕ್ಕೆ ?
ನಾಕು ಜನರಿಗೆ ಅನ್ನಹಾಕಲಾರೆ
ಬೇಕಾದಂತೆಲ್ಲಾ ಬದುಕಲಾರೆ
ಸಂಬಳವೂ ಇಲ್ಲ ಗಿಂಬಳವೂ ಇಲ್ಲ
ಅಂದಮೇಲೆ ಇಂತಹ ನನಗೆ ಅಪೂರ್ವವಾದ
ಕೃತಿಗಳನ್ನು ಸುಮ್ಮನೇ ತಲೆಕೆಡಿಸಿಕೊಂಡು ನಾ ಬರೆದರೆ
ಓದುವ ಜನರಿಗೆ ಅರ್ಧವಾದ ರೀತಿಯಲ್ಲಿ
ಅದು ರುಚಿಸದೇ ಇದ್ದಾಗ
ಯಾವೊಬ್ಬನೂ ಹೂತ ರಥದ ಚಕ್ರವನ್ನು
ಎತ್ತಲು ಕರ್ಣನಿಗೆ ಸಹಾಯಮಾಡದಾಗ
ಚಕ್ರವ್ಯೂಹದಿಂದ ಹೊರಬರುವ
ಪ್ಲಾನು ಹೇಳಿಕೊಡದಾದಾಗ
ಮರುಕ ಹುಟ್ಟುತ್ತದೆ ನನ್ನ ಬಗೆಗೇ ನನಗೆ
ಜಗತ್ತೇ ಹೀಗೆ--ಸ್ವಾರ್ಥವೇ ತುಂಬಿದೆ!

ಅದಾಗಿ ಮೂರುದಿನ ಮಂಚಬಿಟ್ಟೇಳದಷ್ಟು
ಚಳಿಜ್ವರ ಬಂದಾಗ ನಾನು ಹಲವತ್ತಿದ್ದೇನೆ
ಯಾಕಪ್ಪಾ ಇದೂ ಬದುಕೇ ?
ನಾನು ಭಂಡಾಯನಲ್ಲ ಭಕ್ತಿ ಭಂಡಾರಿಯೂ ಅಲ್ಲ
ವರಕವಿಯೂ ಆಗಲಿಲ್ಲವೆಂಬ ನರಕಯಾತನೆ!
ಬರೆದೂ ಬರೆದೂ ಬರೆದೂ ತೂರಿಬಿಡುತ್ತೇನೆ
ಓದುವರು ಓದಲಿ ಓದದೇ ಇದ್ದರೆ ಬಿದ್ದಿರಲಿ
ಇವತ್ತಲ್ಲಾ ನಾಳೆ ಹಳೇ ಪೇಪರ್ ಮಾರುವ ಹುಡುಗ
ಅವನ ಪೇಪರ್ ಗಂಟಿನಿಂದ ಹೊರಡುವ
ಅಸಾಧ್ಯ ದನಿಕೇಳಿ ಬಿಚ್ಚಿ ತೆಗೆದು ನೋಡುತ್ತಾನೆ
ಸರಿಯಾಗಿ ಅರ್ಥವಾಗದಾಗ
ಹಿರಿಯರಿಗೆ ಕೊಡುತ್ತಾನೆ ಆಗ
ಅಲ್ಲಿ ಘಟಿಸುತ್ತದೆ ಶುಭಮುಹೂರ್ತ
ಮತ್ತೆ ಚಿಗುರುತ್ತವೆ ನನ್ನ ಕೃತಿಗಳು
ಮಂಕುತಿಮ್ಮನ ಕಗ್ಗದಂತೆ
ಮೈಸೂರು ಮಲ್ಲಿಗೆಯಂತೆ
ಹೆಚ್ಚೇಕೆ ಬೇಂದ್ರೆಯರನಾಕು ತಂತಿಯಂತೇ
ಹೀಗೆಂದುಕೊಂಡು ಮುಸುಕೆಳೆದು ಮಲಗುತ್ತೇನೆ
ತಪಸ್ಸು ಮಾಡುತ್ತೇನೆ ಮನಸಾರೆ
ಮುಂದೆಂದಾದರೂ ಮತ್ತೆ ಕವಿಯಾಗಿ ನಾ ಕಣ್ತೆರೆದರೆ
ಆಗ ನೀವೆನ್ನುತ್ತೀರಿಕಾವ್ಯ ಬ್ರಹ್ಮರ್ಷಿ’ !
ಅಂದಾದರೂ ಅನ್ನಿ ಬಿಟ್ಟಾದರೂ ಬಿಡಿ
ನಾನು ಬರೆದೇ ತೀರುತ್ತೇನೆ
ಇಂದಿಂಗೂ ಎಂದಿಗೂ ನಾನಿರುವವರೆಗೂ !

Monday, September 20, 2010

|| ಬರ್ಮುಡೇಶ್ವರ ಮತ್ತು ನೈಟೀದೇವಿ ಪ್ರಸನ್ನಾ ||



|| ಬರ್ಮುಡೇಶ್ವರ ಮತ್ತು ನೈಟೀದೇವಿ ಪ್ರಸನ್ನಾ ||


ಹೆಸರು ಕೇಳಿದಾಕ್ಷಣ ನಿಮಗೆ ಅಚ್ಚರಿಯೇ ? ಛೆ ಛೆ ಹಾಗೇನೂ ಗಾಬರಿ ಬೀಳಬೇಡಿ. ಇವು ನಮ್ಮ ಇವತ್ತಿನ ಸಮಾಜದ ದೇವ ದೇವಿಯರು ! ಇದೆಂತಾ ಹೆಸರು ಎಂದು ನೀವು ವಿಚಾರಿಸ ಬಂದರೆ ನಾನು ಹೇಳುವುದಕ್ಕಿಂತ ನೀವೇ ಸುತ್ತ ನೋಡಿದರೆ ನಿಮಗೇ ಸಿಗುತ್ತಾರೆ ನಡೆದಾಡುವ ಈ ದೇವ ದೇವಿಯರು! ಛೆ ಇವರನ್ನೆಲ್ಲಾ ದೇವ ದೇವಿರಎಂದು ಬಿಟ್ಟಿರಲ್ಲಾ ನಿಮಗೇನು ಕೆಲಸವಿಲ್ಲವೇ ಎಂದರೆ ನನಗನ್ನಿಸಿದ್ದನ್ನು ಹೇಳುವ ಅಢಿಕ ಪ್ರಸಂಗಿಯೂ ನಾನಾಗ ಬಾರದೇ ? ಅಬಬಬಬ ! ಅಲ್ರೀ ನಿವೂ ಹೇಳುವುದಿಲ್ಲ ನಂಗೂ ಹೇಳಲು ಬಿಡುವುದಿಲ್ಲಾ ಎಂದರೆ ಇದೆಂಥದ್ದು ನಮ್ಮ ಕರ್ಮ!

ಬ್ಯಾಂಕಿನಲ್ಲಿ ಅರ್ಜೆಂಟಾಗಿ ಕೆಲಸವಿತ್ತೆಂದು ಹೋಗಿದ್ದೆನಾ ಅಲ್ಲಿ ನೋಡಿದರೆ ಬರ್ಮುಡೇಶ್ವರ ಪ್ರತ್ಯಕ್ಷ! ಆತನ ಬಗಲಲ್ಲಿ ಸಣ್ಣ ಮಗು ಬೇರೇ ರೊಚ್ಚೆ ಹಿಡಿದಿತ್ತು. ೨೧ ನೇ ಶತಮಾನ ಕಳೆದು ೨೨ನೇ ಶತಮಾನದ ಹೊಸ್ತಿಲು : ಈಗಾದರೂ ನಾವು ವಿದೇಶೀಯರ ಅದರಲ್ಲೂ ಅಮೇರಿಕನ್ನರ ಅನುಕರಣೆ ಮಾಡದೇ ಹೋದರೆ ನಮ್ಮಷ್ಟು ದಡ್ಡರು ಇನ್ನೊಬರಿಲ್ಲ! ನಿಮಗೆ ಗೊತ್ತೇ ? ನಾನು ಕೇಳಿರಲೂ ಇಲ್ಲ ಆದರೂ ಎದುರಿಗೆ ಬಂದ ಬರ್ಮುಡೇಶ್ವರ " ಹಾಯ್ " ಅಂದ ! ಬಹಳ ಕ್ರತ್ರಿಮವಾಗಿ ನಕ್ಕ. ಜೊತೆಗೆ ಆ ನಗು ಯಾವುದೋ ಡಬ್ಬದ ಮುಚ್ಚಳ ಓ ಸರಿ ಸರಿ ಕೋಕಾ ಕೋಲಾ, ಪೆಪ್ಸಿ ಟಿನ್ ಗಳ ಓಪನರ್ ಭಾಗ ಇರುತ್ತದಲ್ಲ--ಆ ಶೇಪಿನ ಗಡ್ಡದ ಮಧ್ಯದ ಬಾಯಿಂದ ಹೊರಟಿರುವುದರಿಂದ ನನಗೆ ಬಹಳ ಕೋಪ! ನನಗೆ ಮೊದಲೇ ಬರ್ಮುಡೇಶ್ವರರನ್ನು ಕಂಡ್ರೆ ಆಗುವುದಿಲ್ಲ, ಅದರಲ್ಲೂ ಓಪನರ್ ಗಡ್ಡದ ಬರ್ಮುಡೇಶ್ವರ ಸಿಕ್ಕರೆ ಝಾಡಿಸಿ ಒದೆಯುವಷ್ಟು ಕೋಪ! ಇದೆಲ್ಲಾ ನಾನಂದುಕೊಳ್ಳುವುದಷ್ಟೇ ! ನನ್ನನ್ಯಾರಾದರೂ ಕೇಳುತ್ತಾರೆಯೇ ? ನಾನೇನಾದರೂ ಅಂದರೆ ಕೆಂಗಣ್ಣಿನಿಂದ ಗುರಾಯಿಸಿ ನೋಡಿ ಹೋದಾರು!

" ಹ್ವಾಯ್ ಎಂತು ಮಾರಾಯರೆ ನಿಮ್ಮದು, ಈಗ ನೀವು ಎಲ್ಲಿ ಇರುವುದು? ನೋಡದೇ ಬಹಳ ಸಮಯವಾಯಿತು "
ಧ್ವನಿಬಂದ ಕಡೆಗೆ ಮುಖ ತಿರುಗಿಸಿದರೆ ಅಲ್ಲೂ ಅದೇ ಗೋಳು ಮತ್ತೊಬ್ಬ ಪರಿಚಯದ ಬರ್ಮುಡೇಶ್ವರ! ಮುರುಡೇಶ್ವರನನ್ನು ನೀವೆಲ್ಲಾ ನೋಡಿಯೇ ಇರುತ್ತೀರಿ. ಬರ್ಮುಡೇಶ್ವರ ಯಾರೆಂದು ಬೇಕಲ್ಲ ! ಇದು ನಮ್ಮ ಅಜ್ಜಿಯೋ ತಾತನೋ ಯಾವುದೋ ಹರಕೆ ಹೊತ್ತು ಆ ಕಾಲದಲ್ಲಿ ಹೆಸರು ಇಡುತ್ತೇನೆಂದು ಇಟ್ಟಿದ್ದಲ್ಲ! ಅಸಲಿಗೆ ಇದು ದೇವರ ಹೆಸರೇ ಅಲ್ಲ! ಹಾಗಾದರೆ ಬರ್ಮುಡೇಶ್ವರ ಅಂದರೆ ಯಾರು. ಇದು ಕನ್ನಡದ ಬಹುವ್ರೀಹಿ ಸಮಾಸವನ್ನು ಮಟ್ಟಸವಾಗಿ ಬಳಸಿಕೊಂಡು ಇಟ್ಟ ಹೆಸರು: ಬರ್ಮುಡಾ ಚಡ್ಡಿಯನ್ನು ಧರಿಸಿದವರು ಯಾರೋ ಅವರೇ ಬರ್ಮುಡೇಶ್ವರರು!

ಕನ್ನಡ ವ್ಯಾಕರಣಕ್ಕೆ ಎಷ್ಟು ಒಳ್ಳೇಯ ಉದಾಹರಣೆ ನೋಡಿ. ಅಷ್ಟಾಗಿ ಕನ್ನಡ ವ್ಯಾಕರಣ ಕಲಿಯದವರೂ ಸುಲಭವಾಗಿ ಜೀರ್ಣಿಸಿಕೊಳ್ಳಬಲ್ಲ ಶಾಂಪಲ್ಲು [ಈ ಶಬ್ದ ಕಾಗೋಡು ತಿಮ್ಮಪ್ಪರ ಅನುಗ್ರಹದಿಂದ ಗಳಿಸಿದ್ದು!] ಹೀಗಾಗಿ ನಮ್ಮ ಕನ್ನಡ ಭಾಷೆ ಇದೆಯಲ್ಲ ಇದು ಬಹಳ ಅಡ್ಜಸ್ಟೇಬಲ್ಲು! ಎಲ್ಲಿ ಹೋದರೂ ತನ್ನತನವನ್ನು ಉಳಿಸಿಕೊಳ್ಳುವುದರ ಜೊತೆಗೆ ಬೇರೆ ಸಂಸ್ಕೃತಿಗೂ ಪುರಸ್ಕಾರ ಕೊಡುತ್ತದೆ. ಹೀಗಾಗಿಯೇ ನಮ್ಮಲ್ಲಿ ಬರ್ಮುಡೇಶ್ವರರ ಉಗಮವಾಗಿದ್ದು! ಕರ್ನಾಟಕದಲ್ಲಿ ಅವರ ಅಗ್ಮ ಸ್ಥಾನ ತಲಕಾವೇರಿಯೋ ಅಂಬು ತೀರ್ಥವೋ ಇನ್ಯಾವುದೋ ಗೊತ್ತಿಲ್ಲ. ಆದರೆ ಅವರು ಹರಿದದ್ದು ಮಾತ್ರ ಕರ್ನಾಟಕದಾದ್ಯಂತ. ಕಾವೇರಿ ನದಿಯಲ್ಲಿ ಒಂದೊಮ್ಮೆ ನೀರಿರದಿದ್ದರೂ ಚಿಂತೆಯಿಲ್ಲ ನಮ್ಮಲ್ಲಿ ಬರ್ಮುಡೇಶ್ವರರ ಬರ್ಮುಡಾಗಳು ಬಾಳ ಇವೆ. ಬರ್ಮುಡೇಶ್ವರರು ಸಿಗದಿದ್ದ ದಿನ ನಾನು ನನ್ನೊಳಗೇ ಖುಷಿಯಿಂದ ಜಗಗೆದ್ದ ಹರುಷದ ಖಳನಗೆ [ಯಾಕೆಂದರೆ ಬರ್ಮುಡೇಶ್ವರರಿಗೆಲ್ಲ ನಾನು ಖಳನಾಯಕನ ಥರ ಕಾಣಬಹುದೇನೋ ಅಂತ!] ನಗುತ್ತೇನೆ -" ಮುಗೇಂಬೋ ಬಹುತ್ ಖುಷ್ ಹುವಾ "

ಹಾಕಿಕೊಳ್ಳಲಿ ಪಾಪ, ಮನೆಯಲ್ಲಿ ಹೆಂಡತಿ ಮಕ್ಕಳ ಮುಂದೆ ಚಹ್ಡ್ಡಿ ಹಾಕಿಕೊಂಡರೆ ಬೇಸರವಿಲ್ಲ. ಕೆಲವರು ಈ ಚಡ್ಡಿಗೂ ಮುನ್ನ ಬಣ್ಣದ ಲುಂಗಿ ಉಡುತ್ತಿದ್ದರೆ ಇನ್ನು ಕೆಲವರು ಪೈಜಾಮಾ ಬಳಸುತ್ತಿದ್ದರು. ಬಣ್ಣದ ಲುಂಗಿಯನ್ನು ನಾನು ತಿಳಿದ ಮಟ್ಟಿಗೆ ೧೫ ದಿನಗಳಿಗೊಮ್ಮೆಯೂ ತೊಳೆದವರನ್ನು ಕಾಣೆ! ಅದು ವಾಕರಿಕೆ ಬರಿಸಬೇಕೆ --ಆಗ ತೊಳೆಯಬೇಕೆ! ಈಗ ಅದರ ಸರದಿ ಹೋಗಿದೆ. ಅದರ ಬದಲಿಗೆ ಬಳಕೆಗೆ ಬಂದಿದ್ದೇ ಬರ್ಮುಡಾ! ಬರ್ಮುಡಾ ಹಿಡಿದ ಬಚ್ಚಾಗಳು ತರಾವರಿ ಮೊಬೈಲು ಹಿಡಿದು ಬೆಳ್ಳಂಬೆಳಿಗ್ಗೆ ಹಾಲು ತರಲೋ ಕೊತ್ತಂಬರಿ ಸೊಪ್ಪು ತರಲೋ ಅಥವಾ ಒಂದು ರೂಪಾಯಿಗೆ ಶುಂಠಿ, ಅಷ್ಟೇ ಬೆಲೆಯೆ ಹಸಿಮೆಣಸು ಮತ್ತು ಕರಬೇವು ಇದನ್ನೆಲ್ಲಾ ತರಲೋ ಅಡ್ಡಾಡುವುದು ಒಂದು ತೆರನ ಗುಂಪಾದರೆ, ಟೆರೇಸಿನಲ್ಲಿ ಕುಳಿತು ಮೊಬೈಲು ಚಾಟಿಂಗ್ ನಲ್ಲಿ ತೊಡಗುವುದು ಇನ್ನೊಂದು ಬಗೆಯ ಗುಂಪು! ಒಟ್ಟಿನಲ್ಲಿ ನಾಯಿಗಳಿಗೆ ಹಿಂದೆ ಬಾಲವಿದ್ದರೆ ಬರ್ಮುಡೇಶ್ವರರಿಗೆ ಮುಂದೆ ಅಲೆಯುವ ಬಾಲವಿರುತ್ತದೆ! ಪಡ್ಡೆ ಬರ್ಮುಡೇಶ್ವರರಂತೂ ಪಾತಾಳದಿಂದ ಎದ್ದು ಬಂದವರಂತೇ ಮಾಡುತ್ತಾರೆ. ವಾಕಿಂಗ್ ಹೋಗುವಾಗ ಎರಡು ಮೂರು ಮಂದಿ ಒಟ್ಟಿಗೆ ಹೊರಡುವ ಇವರದ್ದು ಲಿವಿಂಗ್ ಇನ್ ಇಂಡಿಯಾ ಥಿಂಕಿಂಗ್ ಅಮೇರಿಕಾ. ತಮಗೆ ಒಂದು ಮಾತು ಗೊತ್ತೇ ನನಗೆ ಗೊತ್ತಿರುವ ಒಬ್ಬರು ಎದುರಿಗೆ ಬಂದ ಮಳ್ಳೇಗಣ್ಣಿ[ಮಾಲಗಣ್ಣು,ಕೊಂಬಗಣ್ಣು]ನವನನ್ನು ಹೆಸರಿಸುವ ಸಲುವಾಗಿ ಒಂದು ಕೋಡ್ ಉಪಯೋಗಿಸುತ್ತಿದ್ದರು. ಎಲ್ ಎಲ್ ಟಿ.ಟಿ. ಅಂತ. ನನಗ್ಯಾಕೋ ಅದು ಹಿಡಿಸಲಿಲ್ಲ--ಅದು ಅಪಹಾಸ್ಯವಾಗುತ್ತದೆ ಎಂಬ ಸಲುವಾಗಿ ಇರಬಹುದೆನ್ನಿ. ಅಂದಹಾಗೆ ಎಲ್.ಎಲ್.ಟಿ.ಟಿ. ಯ ವಿಸ್ತಾರದ ರೂಪ-ಲುಕಿಂಗ್ ಟು ಲಂಡನ್ ಟಾಕಿಂಗ್ ಟು ಟೋಕಿಯೋ ಅಂತ! ಅಂದರೆ ಎಲ್ಲೋ ನೋಡುತ್ತಾ ಇಲ್ಲಿ ಮಾತನಡುವುದು ಎಂದರ್ಥ! ಮಳ್ಳೆಗಣ್ಣಿನವರದು ಹಾಗೇ ತಾನೇ ? ಅವರು ನಮ್ಮನ್ನು ನೋಡುತ್ತಿದ್ದಾರೋ ಬೇರೇ ಯಾರನ್ನೋ ನೋಡುತ್ತಿದ್ದಾರೋ ಗೊತ್ತೇಆಗುವುದಿಲ್ಲವಲ್ಲ, ಪಾಪ ದೈವೀ ಅವಕೃಪೆ! ಆದರೂ ಕೆಲವೊಮ್ಮೆ ಒಳ್ಳೆಯ ಹುಡುಗಿಯರನ್ನು ನೊಡುವಾಗ ಮಳ್ಳೆಗಣ್ಣಿನ ಪಡ್ಡೆಗಳಿಗೆ ಇದು ವರದನವೇ ಆಗಿರಬಹುದೇನೋ ಅನಿಸುತ್ತದೆ !

ನಿಮಗೆ ಇಷ್ಟೇ ಗೊತ್ತಿರುವುದು ಎಂಬುದು ನನಗೆ ಈಗಲೇ ತಿಳಿದದ್ದು. ಯಾಕೆ ಗೊತ್ತೇ ? ನೀವೇ ಹೇಳಿಬಿಡಿ ನೋಡೋಣ! ಕೆಲವರು ಇಂತಹದೇ ಪ್ರಶ್ನೆ ಕೇಳುತ್ತಾರಲ್ಲವೇ ? ಆನೆ ಇರುವೆಯನ್ನು ಮದುವೆಯಾದ ಕಥೆ ತಮಗೆ ಇದೇ ರೀತಿಯಲ್ಲಿ ಮೊಬೈಲಿನಲ್ಲಿ ಫಾರ್ವರ್ಡ್ ಆಗಿರುತ್ತದೆ. ಆಗಲಿಲ್ಲವೇ ಹಾಗಾದರೆ ಯಾಕೆ ಆಗಲಿಲ್ಲ ಎಂದು ಆನೆಯನ್ನೇ ಕೇಳಿ ! ಈಗಂತೂ ದಿನಂಪ್ರತಿ ಮೊಬೈಲಿನಲ್ಲಿ ಮೆಸ್ಸೇಜೋ ಮೆಸ್ಸೇಜು, ಚೆನ್ನಾಗಿ ಉಜ್ಜಿ ಮಸ್ಸಾಜುಮಡಿಕೊಳ್ಳುವಷ್ಟು ಮೆಸ್ಸೇಜು! ಬೇಕಾದ್ದು ಬೇಡಾದ್ದು ಅಂತೂ ಬಂದೇ ಬರುತ್ತವೆ. ನೋಡುತ್ತಲೇ ಇರಬೇಕು! ಯಾಕೆಂದರೆ ನಮಗೆ ನೋಡುವ ಚಟ ಅಲ್ಲವೇ ? ಬರ್ಮುಡಾದ ಬಗ್ಗೆ ಮಾತ್ರ ಒಂದೂ ಜೋಕು ಬರಲಿಲ್ಲ ಇದುವರೆಗೆ, ಯಾಕೆಂದರೆ ಅದರ ಸಂಖ್ಯೆ ಜಾಸ್ತಿ ಇರುವುದರಿಂದ. ಇನ್ನು ದಿನಗಳೆಯುತ್ತಾ ಬರ್ಮುಡಾದಿನಾಚರಣೆ, ಬರ್ಮುಡಾ ರಕ್ಷಣಾ ವೇದಿಕೆ ಇವೆಲ್ಲಾ ಹುಟ್ಟಿಕೊಂಡರೆ ಆಶ್ಚರ್ಯವೇನೂ ಇಲ್ಲ! ಅಲ್ಲಾರೀ ಪಾಪ ಒಂದು ಚಡ್ಡೀ ಹಾಕಿಕೊಳ್ಳಲಿಕ್ಕೂ ಸ್ವಾತಂತ್ರ್ಯವಿಲ್ಲವೇನ್ರೀ ಎನ್ನುತ್ತೀರಾ ಹಾಕ್ಕೊಳಿ ಸ್ವಾಮೀ ಒಂದ್ಯಾಕೆ ಹತ್ತರು ಚೆಡ್ಡಿ ಹಾಕ್ಕೊಳಿ. ಆರ್.ಎಸ್.ಎಸ್. ನವರು ಖಾಕಿ ಚೆಡ್ಡಿ ಧರಿಸಿದರೆ ನಿಮಗೆ ಕೆಂಗಣ್ಣು, ಅವರಿಗೆ ಚೆಡ್ಡಿ ಅನ್ನುತ್ತೀರಿ, ಆದ್ರೆ ನೀವು ಮಾತ್ರ ಹಾಕಿಕೊಳ್ಳಬಹುದೇ ? ಬಣ್ಬಣ್ಣದ ಚೆಡ್ಡಿ, ಪಟ್ಟಾಪಟ್ಟಿ, ಲಾಲ್ ರಂಗೀ, ನೀಲ್ ರಂಗೀ, ಪಂಚರಂಗೀ .....
ಅಂತೂ ಬರ್ಮುಡಾ ಮಹಾತ್ಮೆ ಬಹಳ ಅಗಾಧ. ಕೆಲವು ವರ್ಷ ಕಳೆದರೆ ಅದರ ಮೇಲೆ ಪಿ.ಎಚ್.ಡಿ.ಮಾಡುತ್ತಾರೇನೋ ಅನಿಸುತ್ತದೆ;ಯಾಕೆಂದರೆ ನಮ್ಮಲ್ಲಿ ಬಹುತೇಕರು ಸಂಶೋಧನೆಮಾಡುವುದು ಅಂಥದ್ದೇ ವಿಷಯಗಳಮೇಲಲ್ಲವೇ ?

ದಾಸರ ಪದವನ್ನು ಸ್ವಲ್ಪ ತಿರುಗಿಸಿ ಹಾಡಿದರೆ ಅದರಿಂದ ಸಿಗುವ ಮಜಾನೇ ಬೇರೇ ಅನ್ನಿಸ್ತು-

ಎಂದಿಗಾದರೊಮ್ಮೆ ಜನರು ಬಂದು ಭೂಮಿಯಲ್ಲಿ ನಿಂದು
ಬರ್ಮುಡಾವ ಧರಿಸಿಕೊಂಡು ಆನಂದದಿಂದ ಮೊಬೈಲುಚಾಟ್ ಮಾಡದ
ಜನ್ಮವೇತಕೋ ಅಮೇರಿಕಾ ಬದುಕ ಬದುಕದ

ಇನ್ನೂ ಹಲವು ಹಾಡುಗಳಿವೆ ಹಾಗೇ ಹೇಳಿಕೊಂಡು ಕಡಲೆಪುರಿ ತಿನ್ನಿ --

೨> ಸದಾ ಎನ್ನ ಜೋಳಿಗೆಯಲಿ ಬರಲಿ ಮೂರು ಬರ್ಮುಡಾ
ಬರ್ಮುಡಾವನ್ನು ಬಳಸುವುದಕೆ ಎನಗೆಮನವ ಈಯೊದೇವ


೩> ಕೈಲಾಸವಾಸ ಗೌರೀಶ ಈಶ
ಬಾಲಮುಂದಲೆವಂತ ಬರ್ಮುಡವ ಕೊಡೊ ಎನಗೆ ಶಂಭೋ .......

ಯುವ ಗೃಹಸ್ಥರನೇಕರು ಬರ್ಮುಡಾವನ್ನೇ ನೆಚ್ಚಿಕೊಂಡಿದ್ದಾರೆಂದಮೇಲೆ ಯಾರೋ ಕೆಲವು ನಮ್ಮಂಥವರು ತಪ್ಪಿಸಿಕೊಂಡಿರಬಹುದು ಅಷ್ಟೇ! ಬಕ್ರೀಕಾ ದಾಡಿ ಅಥವಾ ಓಪನರ್ ಶೇಪ್ ದಾಡಿ ಇವೆರಡರಲ್ಲಿ ಒಂದು ದಾಡಿ ಬಿಟ್ಟು, ಬರ್ಮುಡಾ ತೊಟ್ಟು, ಕೈಲಿ ಮೊಬೈಲ್ ಹಿಡಿದಾಗಲೇ ನಿಜವಾದ ಅಮೇರಿಕನ್ ದೀಕ್ಷೆ ! ಬರ್ಮುಡಾವನ್ನು ಕಾಲೇಜಿಗೂ ಹಾಕಿಕೊಂಡು ಹೊದರೆ ತಪ್ಪಿಲ್ಲವೆಂತ ನನ್ನ ಅಭಿಪ್ರಾಯ. ಬೇರೇಡೆಗೆಲ್ಲಾ ಅಡ್ಡಿಲ್ಲವಾದರೆ ಕಾಲೇಜಿನಲ್ಲಿ ಮಾತ್ರ ಬೇಡವೇ ? ಕಾಲೇಜಿನಲ್ಲಿ ಯುವ ಅಧ್ಯಾಪಕರಿಂದಲೇ ಈ ಕುರಿತು ಪ್ರಾರಂಭವಾಗಿಬಿಟ್ಟರೆ ಆಮೇಲೆ ವಿದ್ಯಾರ್ಥಿಗಳಲ್ಲೂ ಸಹಜವಗಿ ಬರುತ್ತದೆ. ಅಮೇಲೆ ಎಲ್ಲಾ ಅಫೀಸುಗಳಲ್ಲಿ, ಸರಕಾರೀ ಕಚೇರಿಗಳಲ್ಲಿ ಎಲ್ಲೆಲ್ಲೂ ಬರ್ಮುಡಾ ಬಳಕೆ ಕಡ್ಡಾಯವಾಗಿ ಅನ್ಯಾಯವಾಗಿ ಸಾವಿರಾರು ರೂಪಾಯಿ ಪೋಲುಮಾಡಿ ಪ್ಯಾಂಟು ಖರೀದಿಸುವ ಬದಲು, ನ್ಯಾಷನಲ್ ವೇಸ್ಟ್ ಮಾಡುವ ಬದಲು ಕೇವಲ ಬರ್ಮುಡಾ ಧರಿಸಿ ಎಲ್ಲೆಡೆಯೂ ಕೆಲಸಮಾಡಬಹುದು. ಮುಂಬೈ ಡಬ್ಬಾವಾಲಾಗಳಿಗೂ ಆರಾಮು, ನಮಗೂ ಆರಾಮು, ನಿಮಗೂ ಆರಾಮು ಅಲ್ಲವೇ ? ಆರಾಮಾಗಿ ನಿರುಂಬಳವಾಗಿ ಒಂದು ಬರ್ಮುಡಾ ಮತ್ತು ಟೀ ಶರ್ಟ್ ಹಾಕಿಕೊಂಡು ಬಿಟ್ಟರೆ ಬದುಕೆಷ್ಟು ಸುಂದರ ಅಂತೀರಿ ? ಸ್ವಲ್ಪ ವಿವೇಚಿಸಿ ನೋಡಿ. ನಿಮಗೆ ಒಪ್ಪಿಗೆಯಾದರೆ ಆಮೇಲೆ ಒಂದು ವೇದಿಕೆ ಸ್ಥಾಪಿಸಿಕೊಂಡು ನಮ್ಮ ಅಧ್ಯಕ್ಷರಿಗೆ ಕೆಂಪು ಗೂಟದ ಕಾರು ಕೊಡಿಸೋಣ ಮತ್ತು ಅದಕ್ಕೆ ಮುಂದೆ ಬರ್ಮುಡಾಧ್ವಜವಿರಿಸೋಣ.

ಮಂಗಲಂ ಬರ್ಮುಡೇಶಾಯ ಓಪನರ್ ಗಡ್ಡಧರಾಯಚ |
ಮಂಗಲಂ ಸಂಸ್ಕೃತೀಶಾಯ ಮಂಗಲಂ ಬರ್ಮುಡಧ್ವಜಃ ||

ಹೀಗೇ ಬರ್ಮುಡೆಶ್ವರರನ್ನು ಸ್ಮರಿಸುತ್ತ ಈಗ ನಟೀದೇವಿಯ ಕಥೆ ಕೇಳೊಣ ಬನ್ನಿ. ದೇವನಿಗೊಬ್ಬ ದೇವಿ ಇದ್ದರೆ ಚೆಂದ ಅನಿಸಿತು ಮತ್ತು ಇಲ್ಲಿ ಸರಿಹೊಂದುವ ’ದೇವಿ’ಯೂ ಸಿಕ್ಕಳು. ಅದಕ್ಕೇ ನೈಟೀ ದೇವಿಯಬಗ್ಗೆ ಮುಂದಿನ ಮಾತುಕತೆ.
ನೈಟಿ ಎನ್ನುವುದು ನೈಟ್ ಗೌನ್ ಎನ್ನುವುದರ ಶಾರ್ಟ್ ಫಾರ್ಮ್ ಎಂದು ಕೆಲವರು ಹೇಳಿದ್ದಾರೆ. ನಾನು ಅದಕ್ಕೆಲ್ಲಾ ಜಾಸ್ತಿ ತಲೆಕೆಡಿಸಿಕೊಂಡಿಲ್ಲ. ಆದರೆ ತಲೆತಿರುಗುವುದು ನೈಟೀ ದೇವಿಯರು ತಪಸ್ಸಿಲ್ಲದೆಯೂ ಕಣ್ಣೆದುರಿಗೆ ಧುತ್ತೆಂದು ಬಂದು ನಿಂತಾಗ. ಇಲ್ಲೂ ಅದೇ ರಾಗ ಅದೇ ಹಾಡು! ಆಕಾರ ಸ್ವಲ್ಪ ಬದಲು! ನೈಟೀ ದೇವಿಯರೆಂದರೆ ನೈಟಿಂಗೇಲ್ ಗೆ ನೆಂಟರೆಂದು ತಿಳಿಯಬೇಡಿ. ಕೆಲವೊಮ್ಮೆ ಬೆಳಗಿನ ಜಾವ ಕೋಳಿಕೂಗುವ ಮೊದಲೇ ನೈಟೀದೇವಿಗಳ ಬೀದಿ ರಂಪ ಶುರುವಾಗಿರುತ್ತದೆ. ಅವರ ಶುದ್ಧ ಸಂಸ್ಕೃತದ ಸುಪ್ರಭಾತವನ್ನು ಕೇಳಲೂ ಯೋಗಬೇಕು!

ನೈಟಿ ಧರಿಸಲು ಇಂಥದ್ದೇ ಅಂತ ಅರ್ಹತಾ ಪತ್ರವೆಲ್ಲ ಬೇಕಿಲ್ಲ. ಪ್ರಾಯಶಃ ಬರ್ಮುಡಾದ ಜೊತೆ ಜೊತೆಗೋ ಅಥವಾ ಸ್ವಲ್ಪ ಮೊದಲೋ ಹುಟ್ಟಿದ್ದು ಈ ನೈಟೀರೂಪ. ಒಂದು ನೈಟಿ ಸಿಕ್ಕಾಕಿಕೊಂಡರೆ ಜಗತ್ತಿನ ವ್ಯವಹರವನ್ನೇ ಅದರಲ್ಲಿ ನಿಭಾಯಿಸಬಲ್ಲಷ್ಟು ನಿಪುಣ ಗೃಹಿಣಿಯರು ನಮ್ಮಲ್ಲಿದ್ದಾರೆ. ಖರ್ಚಿನ ಲೆಕ್ಕದಲ್ಲಿ ಹಲವರು ಸೀರೆಗಳ ಉಳಿತಾಯ! ಅಗೇನ್ ನ್ಯಾಶನಲ್ ವೇಸ್ಟ್ ಆಗುತ್ತಿದ್ದುದನ್ನು ತಡೆಗಟ್ಟುವುದು! ನೈಟಿ ತೊಟ್ಟ ದೇವಿ ಹೊರಗೆ ಕಾಲಿಟ್ಟರೆ ಆಕೆ ಬರೇ ಅವಳ ಮನೆಯ ಹೊರಬಾಗಿಲಲ್ಲ ಅವಳ ಮನೆಯಿರುವ ಬೀದಿಯೂ ಅಲ್ಲ, ಇಡೀ ಊರನ್ನೆ ಸುತ್ತುಹಾಕಲು ಅದೇ ಸಾಕು. ಸೀರೆ ಉಡುವುದು ರಾಮಾರಗಳೆ! ಮೇಲಾಗಿ ಪ್ರತೀದಿನ ತೊಳೆದು, ಇಸ್ತ್ರಿ ಮಾಡಬೇಕು-ಇವೆಲ್ಲಾ ಯಾರಿಗೆ ಬೇಕು. ಒಮ್ಮೆ ಶುಭ ಮುಹೂರ್ತ್ವನ್ನೂ ನೋಡದೇ ಹಾಗೇ ತೊಡಬಹುದಾದ ಕಾಲಾತೀತ ನೈಟಿಯನ್ನು ತೊಟ್ಟುಬಿಟ್ಟ್ರೆ ವಾಸ್ನೆ ಹೊಡೆಯುವವರೆಗೆ ತೊಳೆಯುವ ಗೋಜೇ ಇಲ್ಲ. ಅಡಿಗೆಮನೆಯಲ್ಲಿ ಕೆಲಸಮಾಡುವಾಗ ಕೈತೊಳೆದು ಒರೆಸಲೂ ನೈಟಿಯ ಇಕ್ಕೆಲಗಳು ಸಹಾಯಕ್ಕ ಬರುತ್ತವೆ! ಬಣ್ಣದ ನೈಟಿಗೆ ಕೈ ಒರೆಸಿದ ಜಾಗದ ಮತ್ತೊಂದು ಬಣ್ಣ ಬಹಳ ಕಳೆಗಟ್ಟಿಸುತ್ತದೆ!

ಕೆಲವೊಮ್ಮೆ ಇವರೂ ಬೆಳಿಗ್ಗೆ ಅಂಗಡಿಗಳಿಗೆ ಅರ್ಧ ಲೀಟರ್ ಹಾಲು ತರಲೋ ಅಥವಾ ಮಾಮೂಲಿ ಮೇಲೆ ಹೇಳಿದ ಹಾಗೇ ಶುಂಠಿ, ಕರಬೇವು, ಕೊತ್ತಂಬ್ರಿ ಸೊಪ್ಪು ಅದಕ್ಕೆ ಇದಕ್ಕೆ ಅಂತ ಓಡಾಡುತ್ತ ಬರುತ್ತಾರೆ. ಹೀಗೆ ಓಡಾಡುವಾಗ ಕೆಲವರಂತೂ ಖಂಡ್ಗಕ್ಕಿ ಮುನಿಯ ರೀತಿ ಕಂಡರೆ ಇನ್ನು ಕೆಲವರು ಸಣ್ಣ ಮರಿಯಾನೆ ಬಂದಂತೇ ತೋರ್ಪಡುತ್ತಾರೆ! ಇದುವರೆಗೆ ಕಾಡುಕೋಣ, ಹಂದಿ, ಕಡವೆ ಇಂಥಾ ಪ್ರಾಣಿಗಳನ್ನು ನೋಡದ ಜನ ಹೀಗೇ ಇರುತ್ತಿದ್ದವಂತೆ ಎಂದು ನೋಡಿದ ತೃಪ್ತಿಪಡೆಯಬಹುದು. ಈ ನೈಟೀದೇವಿಯರಲ್ಲಿ ಕೆಲವರು ಮೇಲೊಂದು ಟವಲು ಹಾಕಿಕೊಳ್ಳುತ್ತಾರೆ. ಇದು ವೇಲಿನ ಬದಲಿಗೋ ಅಥವಾ ಸಿಂಬಳ ಒರೆಸಲೋ ಗೊತ್ತಿಲ್ಲ. ಅಂತೂ ನೈಟೀದೇವಿಗಳಿಗೆ ಹೀಗೇ ಇರಬೇಕೆಂಬ ನಿಯಮವೇನಿಲ್ಲ.

ವಿಪರ್ಯಾಸವೆಂದರೆ ನೈಟೀದೇವಿಗಳಲ್ಲಿ ಹುಡುಗಿಯರು ಕಮ್ಮಿ. ಹುಡುಗಿಯರದೇನಿದ್ದರೂ ಲೋ ಜೀನ್ಸು ಮತ್ತು ಮಿನಿ ಟಾಪು! ಇಲ್ಲಾಂದ್ರೆ ಹುಡುಗಿಯರಿಗೂ ನೈಟಿ ಬಹಳ ಉಪಯೋಗಕ್ಕೆ ಬರುತ್ತಿತ್ತೇನೋ. ಹಾಗಾಗಿ ಕಾಲೇಜಿಗೆ ನೈಟೀ ಧರಿಸಿಬರುವವರಿದ್ದರೆ ಅವರು ಅಧ್ಯಾಪಕಿಯರು ಮಾತ್ರ! ಬರಲೇಬೇಕೆಂಬುದು ನನ್ನ ತಕರಾರಲ್ಲ, ಆದ್ರೆ ಬಂದರೂ ಬರಬಹುದೇನೋ ಎನಿಸುತ್ತದೆ. ಆದರೆ ಅವರು ಒಂದೊಮ್ಮೆ ನೈಟೀದೇವಿಗಳಾದರೂ ಹುಡುಗಿಯರು ಮಾತ್ರ ಅದಕ್ಕೆ ಒಗುವುದಿಲ್ಲ. ಈಗ ಕಾಲವೇ ಹಾಗಲ್ಲವೇ. ಹುಡುಗಿಯರು ಹುಡುಗರ ಡ್ರೆಸ್ಸು ಹುಡುಗರು ಹುಡುಗಿಯರ ಡ್ರೆಸ್ಸನ್ನು ಇನ್ನೂ ಶುರುಮಾಡಿಲ್ಲ......ಮಾಡಲೂ ಬಹುದು. ಹಲವಾಅರು ಸಲ ಗಾಡಿಯಲ್ಲಿ ಓಡುವಾಗ ನಮಗೆ ಕಾಣಸಿಗುವ ಉದ್ದ ಕೂದಲಿನ ಹುಡುಗಿ ಮುಂದೆ ಓಪನರ್ ಗಡ್ಡ ಬಿಟ್ಟಿದ್ದನ್ನು ನೋಡಿದಾಗಲೇ ಅದು ಹುಡುಗಿಯಲ್ಲ ಎಂಬುದು ತಿಳಿಯುತ್ತದೆ! ಹೀಗೇ ಹೇಂಗೂದಲನ್ನು ಬಿಟ್ಟ ಗಂಡಸು ಬಹಳಷ್ಟು ಹೆಂಗಸನ್ನೇ ಹೋಲುವುದರಿಂದ ವೇಷವನ್ನೂ ಹೆಂಗಸರದ್ದೇ ಹಾಕ್ಕೊಂಡುಬಿಟ್ಟರೆ ರಗಳೆಯೇ ಇಲ್ಲ!

ಸಮಸ್ಯೆ ಇರುವುದು ಎಲ್ಲಿ ಗೊತ್ತೇ ಇಂದಿನ ನಮ್ಮ ಹೊಸ ಸಮಾಜದಲ್ಲಿ ಮಂಗಳ ಮುಖಿಯರು ಯಾರು,ಗಂಡಸು ಯಾರು ಮತ್ತು ಹೆಂಗಸು ಯಾರು ಎಂದು ಗುರುತಿಸಲು ಕಷ್ಟವಾಗುವ ಕಾಲ ಬರುತ್ತಿದೆ! ಎಲ್ಲರಿಗೂ ಯುನಿಸೆಕ್ಸ್ ಉಡುಗೆಗಳು-ತೊಡುಗೆಗಳು, ಚಪ್ಪಲಿಗಳು ಹೀಗೇ ಎಲ್ಲವೂ ಯುನಿ ಯುನಿ ಯಾಗಿ ಕೊನೆಗೊಮ್ಮೆ ಕಣಿಕೇಳುವ ಪ್ರಸಂಗ ಬಂದರೂ ತಪ್ಪೇನಿಲ್ಲ. ವಾಸ್ತವವಾಗಿ ಇಂದಿನ ಎಷ್ಟೋ ಜೀನ್ಸ್ ಹುಡುಗಿಯರು ಮೋಟು ಕೂದಲನ್ನೂ ಬಾಬ್ ಮಾಡಿಕೊಂಡು ಥೇಟ್ ಹುಡುಗರೇಯೇನೋ ಅನ್ನಿಸುವಷ್ಟು ರೆಡಿಯಾಗಿರುತ್ತಾರೆ. ಹುಡುಗಿಯರಲ್ಲಿರುವ ನಯ-ನಾಜೂಕುತನ ಇವನ್ನೆಲ್ಲಾ ಕಳೆದುಕೊಂಡು ಗಡುಸುತನವನ್ನೂ ಪಡೆದುಕೊಂಡಿರುತ್ತಾರೆ. ಇವತ್ತು ಬೀದಿಯಲ್ಲಿ ನಡೆಯುವಾಗ ತಲೆ ತಗ್ಗಿಸಿ ನಡೆಯುವುದು ಹುಡುಗನೇ ಹೊರತು ಹುಡುಗಿ ತನ್ನೆದುರಿಗೆ ಬರುವ ಹುಡುಗನನ್ನು ದಿಟ್ಟಿಸಿ ನೋಡುತ್ತಾ ನಡೆಯುತ್ತಾಳೆ. ನಾಚಿಕೆ, ಮರ್ಯಾದೆ ಇವುಗಳೆಲ್ಲಾ ವ್ಯಾಕರಣದ ಶಬ್ದಗಳು-ನಮಗ್ಯಾಕೆ ಅವುಗಳ ಗೋಳು! ಕೆಲವೊಮ್ಮೆ ಹುಡುಗರೇ ನಾಚಿ ನೀರಾಗುವುದನ್ನು ನಾನು ನೋಡಿದ್ದೇನೆ! ಈಗ ಹಾಡು ಹಾಡುವ ಗೌರಮ್ಮನ ಬದಲು ಪಾಪ್ ಹಾಡುವ ಜೆನ್ನಿಪರ್ ಗಳಿದ್ದಾರೆ! ಎಲ್ಲವುದರಲ್ಲೂ ಸೈ ಎನಿಸಿಕೊಂಡ ಹೆಂಗಸರು ಸಮಾಜಕ್ಕೆ ತಮ್ಮದೂ ಒಂದು ಕೊಡುಗೆ ಇರಲಿ ಎಂದು ತಮ್ಮಲ್ಲೇ ನೈಟೀದೇವಿಗಳನ್ನು ಸೃಷ್ಟಿಸಿಕೊಂಡಿದ್ದಾರೆ!

ಮೊದಲ ನೈಟಿಗೂ ಎರಡ್ನೇ ನೈಟಿಗೂ ಹದಿನೈದು ದಿನದ ಅಂತರ
ತೊಳೆದು ಉಟ್ಟರೆ ವಾಸನೆಯು ಬರ ಅದಕೆ ತೊಳೆವುದೇ ಒಂಥರಾ !

ಸ್ನೇಹದಾ ನೈಟೀಯಲೀ ಕಳೆದೆ ಒಂದು ವರುಷವ
ಕೊನೆಗೂ ಹರಿದೇ ಹೋಯಿತೇ ಮುಗಿಯದಿರಲೀ ಬಂಧನ !

ತಮ್ಮ ವಾಸನಾಬಲದಿಂದಲೇ ಒಂದು ನೈಟೀದೇವಿ ಇನ್ನೊಂದು ನೈಟೀದೇವಿಯನ್ನು ಪತ್ತೆಹಚ್ಚಬಲ್ಲಳು! ಅವರ ಅಘೋಷಿತ ಸಂಘದ ಕಾರ್ಯ ವೈಖರಿ ಡಬ್ಬಾವಾಲಗಳ ಕಾರ್ಯವೈಖರಿಯಂತೆಯೇ! ಏನನ್ನೇ ಖರೀದಿಸಲಿ, ಮಾಡ್ಲಿ-ಮಟ್ಲಿ ಎಲ್ಲಾದಕ್ಕೂ ಜೊತೆಗಾಗಿ ನೈಟೀದೇವಿಯ ಸಹಭಾಗಿತ್ವ ಇದ್ದೇ ಇರುತ್ತದೆ. ಒಮ್ಮೊಮ್ಮೆ ಬೌ ಬೌ ಅಂತ ಪರಸ್ಪರ ಕಚ್ಚಾಡಿಕೊಂಡರೂ ಮತ್ತೆ ಯಥಾವತ್ ಮುಂದಿನ ಅಮಾವಾಸ್ಯೆಯೋ ಹುಣ್ಣಿಮೆಯೋ ಬಂದಾಗ ಒಂದಾಗುತ್ತಾರೆ. ನೋ ಟೂ ಆರ್ ನೋ ಸೇ ! ಇದೊಂಥರಾ ಮಕ್ಕಳಾಟದಂತೇ! ನೆಚ್ಚಿಕೊಂಡು ಯಾರದಾದರೂ ಪಕ್ಷವಹಿಸಿ ಮಾತನಾಡಿದರೆ ಆಡಿದವರು ಸೋಲುತ್ತಾರೆ! ನೋಡಿ ಎಂತಹ ಅದ್ಬುತ ಸಂಘಟನೆ. ಹೀಗಾಗಿ ಅಪ್ಪಿತಪ್ಪಿಯೂ ನೈಟೀದೇವಿಗಳ ಅವಕೃಪೆಗೆ ಪಾತ್ರರಾಗಬೇಡಿ. ಇಲ್ಲೂ ಕೂಡ ನೈಟೀ ಹಿತರಕ್ಷಣಾ ಸಮಿತಿ ರಚನೆಯಾಗುವುದರಲ್ಲಿದೆ !

ಅಂತೂ ಇಂತೂ ದೇವ ದೇವಿಯರ ಮಹಾತ್ಮೆ ಕೇಳಿ ಕೊನೆಯ ಘಟ್ಟಕ್ಕೆ ಬಂದು ನಿಂತಿದ್ದೀರಿ. ಇಲ್ಲಿ ಎಲ್ಲಾ ಬರ್ಮುಡೇಶ್ವರರೂ ಮತ್ತು ನೈಟೀದೇವಿಗಳೂ ಗಂಡಹೆಂಡಂದಿರಲ್ಲ,ಆದರೆ ಅಲ್ಲಲ್ಲಿ ಆಗಾಗ ಆ ಶಾಂಪಲ್ಲುಗಳೂ ಸಿಗುತ್ತವೆ! ಈಗ ಏನ್ ಕೊಡ್ಲಿ ಬರ್ಮುಡಾ ? ನೈಟಿ ? ಹೋಗ್ಲಿಬಿಡಿ ಇಲ್ಲಿ ಈ ವಿಷಯದಲ್ಲಿ, ಅದೂ ಇದನ್ನೆಲ್ಲಾ ಓದಿದಮೇಲೆ ನೀವೇನೂ ಖರೀದಿ ಮಾಡದ ಖಂಜೂಸು ಅಂತ ನನಗ್ಗೊತ್ತು! ಹೋಗಿ ನಿನ್ಮಿಮ್ ಕೆಲ್ಸ ನೋಡ್ಕಳಿ. ಮತ್ತೆ ಎಲ್ಲಾದ್ರೂ ಬರ್ಮುಡೇಶ್ವರ ಅಥವಾ ನೈಟೀದೇವಿ ಕಂಡರೆ ನಾನು ಹೇಳಿದೆ ಅಂತ ಹೇಳಬೇಡಿ, ಉ[ಚ್ಚೆ]ಚ್ಚ ಸಂಸ್ಕೃತಿಯ ಹರಿಕಾರರಾದ ಅವರನ್ನು ಸುಮ್ನೇ ಕೇಳಿ ನೋಡಿ--ಬಹಳ ಚೆನ್ನಾಗಿರುತ್ತೆ ಅಲ್ವಾ ಅಂತ. " ಮುಗೇಂಬೋ ಅಭಿ ನಹೀ ಖುಷ್ ಹುವಾ " !!

Sunday, September 19, 2010

ಚಿಗುರು


ಚಿಗುರು

ಬತ್ತಿಹೋದ ಭಾವಗಳನು
ಮತ್ತೆ ಚಿಗುರುವಂತೆ ಬೆದಕಿ
ಎತ್ತಿ ತೆಗೆದು ಮೂಟೆ ಕಟ್ಟಲಾಯ್ತು ಹಾಡು ಕ್ಷಣದಲಿ !
ಸತ್ತು ಹೋಗುತಿದ್ದ ಗಿಡಕೆ
ಸುತ್ತ ನೀರಹನಿಸಿ ಒಮ್ಮೆ
ಮತ್ತೆ ಗಾಳಿ ಪೂಸಲಾಗ ಅರಳಿ ಹೂವು ಮುದದಲಿ !

ಕುತ್ತುಗಳವು ಹಿಂಡಿ ಮನವ
ಕುತ್ತಿಗೆಯನು ಒತ್ತಿ ಹಿಡಿದು
ಎತ್ತೆತ್ತಲೂ ಕಗ್ಗತ್ತಲು ನಗುತಲಿದ್ದ ದಿನದಲಿ
ಬೆತ್ತಲಾದ ಆಗಸದಲಿ
ಮತ್ತೆ ಮಿಂಚು ಹರಿದು ಭರದಿ
ಬುತ್ತಿ ಅನ್ನ ನೀಡಿತೆನಗೆ ಚಿಗಿತ ನೆಲದ ನೆರಳಲಿ

ಮೆತ್ತಗಿರುವ ದಿಂಬು ಗಾದಿ
ಅತ್ತುಕರೆಯೆ ಸಹಕರಿಸುತ
ಇತ್ತ ಆಸರೆಯೊಳ ಬದುಕು ನೀರಸವೆನಿಸಿರಲಲಿ
ತುತ್ತತುದಿಗೆ ಇರುವ ಹಣ್ಣು
ಗೊತ್ತಿಲ್ಲದೆ ಕೈಗೆ ಎಟುಕಿ
ನಿತ್ತ ನನ್ನ ಚಲಿಸುವಂತೆ ಮಾಡಿತಾಗ ಮನದಲಿ

ನೆತ್ತಿಯಲ್ಲಿ ಉರಿವ ಸೂರ್ಯ
ಕತ್ತಲಲ್ಲಿ ಹೊಳೆವ ಚಂದ್ರ
ಇತ್ತಯಾರೂ ಬರಲೇ ಇಲ್ಲ ಕಷ್ಟದಿನಗಳೆಡೆಯಲಿ
ಪತ್ತಿನಲ್ಲಿ ದೈವಲೀಲೆ
ಹತ್ತಿಬಂದು ಮೆಟ್ಟಿಲುಗಳ
ಪಿತ್ತನೆತ್ತಿಗೇರದಂತೆ ಹಿಡಿದು ಮನವ ಬಿಡದಲಿ

ಅತ್ತ ನೆಂಟರಿಷ್ಟರೆಲ್ಲ
ಎತ್ತಿನೋಡಿ ನೀರ ಆಳ
ಒತ್ತುಕೊಡದೆ ದೂರವಿರಲು ಕಹಿಸಮಯದ ನಡುವಲಿ
ಬಿತ್ತ ಬೀಜ ಬೆಳೆವರಿಲ್ಲ !
ಉತ್ತುತೆಗೆದು ಮುಗಿವುದಲ್ಲ !
ಇತ್ತಲಾಯ್ತು ದೈವಕೃಪೆಯು ಕವಿಸಮಯದ ಬಿಡುವಲಿ