ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, March 15, 2012

ಗುಂಡಪ್ಪನಾದೊಡೇಂ ಕುಂಡೆಯದು ನೋಯದೇಂ ?

ಈ ಚಿತ್ರಕೃಪೆ : ಅಂತರ್ಜಾಲ
ಗುಂಡಪ್ಪನಾದೊಡೇಂ ಕುಂಡೆಯದು ನೋಯದೇಂ ?

ಮೊದಲಾಗಿ ತಪ್ಪು ನಿವೇದನೆ: ಮೊನ್ನೆಯ ನನ್ನ ಲೇಖನವೊಂದರಲ್ಲಿ ಚಿಕ್ಕ ದೋಷವಾಗಿದೆ. ಡೀವೀಜಿಯವರಿಗೆ ಸನ್ಮಾನಧನವಾಗಿ ಬಂದಿದ್ದು ಅಂದಿಗೆ ರೂ. ಒಂದುಲಕ್ಷ[೪೦ ವರ್ಷಗಳ ಹಿಂದೆ] ಅದು ಇಂದಿಗೆ ರೂ. ಒಂದು ಕೋಟೀ ಇಪ್ಪತ್ತು ಲಕ್ಷಕ್ಕೂ ದೊಡ್ಡಮೊತ್ತವಾಗುತ್ತದೆ. ಅಂದಿನ ಆ ಹಣದಲ್ಲಿ ಅವರು ಗೋಖಲೆ ಸಾರ್ವಜನಿಕ ಸಂಸ್ಥೆಯನ್ನು ಕಟ್ಟಿಸಿದರು ಎಂದಾಗಬೇಕಿತ್ತು. ಹೀಗಾಗಿ ಸಹೃದಯೀ ಓದುಗರಲ್ಲಿ ಇದಕ್ಕಾಗಿ ಕ್ಷಮೆಯಿರಲಿ ಎಂದು ಪ್ರಾರ್ಥಿಸುತ್ತಾ ನಾಳಿನ ಕಾರ್ಯಕ್ರಮಗಳ ವಿವರಗಳು ಕೆಲಮಟ್ಟಿಗೆ ಲಭ್ಯವಾಗಿದ್ದನ್ನು ತಮಗೆ ತಿಳಿಸುತ್ತಿದ್ದೇನೆ :

ದಾರ್ಶನಿಕ ಡಿವಿಜಿ ಅವರ 125ನೇ ಹುಟ್ಟುಹಬ್ಬಕ್ಕೆ ಬನ್ನಿ:

ಬಸವನಗುಡಿಯ ಸಮಾಜ ಸೇವಕರ ಸಮಿತಿಯು 17 ಮಾರ್ಚ್ 2012 ರಂದು ಡೀವೀಜಿಯವರ 125ನೆಯ ಜನ್ಮದಿನ ಮಾ.17ರಂದು ಆಚರಿಸುತ್ತಿದೆ. ಈ ಕಾರ್ಯಕ್ರಮದ ಅಂಗವಾಗಿ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಎಲ್ಲಾ ಕಾರ್ಯಕ್ರಮಗಳಿಗೂ ಅಂತರಾಷ್ಟ್ರೀಯ ಖ್ಯಾತಿಯ ಎನ್.ಎ.ಎಲ್ ನ ಮಾಜಿ ನಿರ್ದೇಶಕರಾಗಿದ್ದ ಪ್ರೊ. ರೊದ್ದಂ ನರಸಿಂಹ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿರುತ್ತಾರೆ.

ಬೆಳಗಿನ ಕಾರ್ಯಕ್ರಮ :
______________

* ಚಿನ್ಮಯ ಮಿಷನ್‌ನ ಪೂಜ್ಯ ಶ್ರೀ ಬ್ರಹ್ಮಾನಂದ ಸ್ವಾಮಿಗಳು ಮಂಕುತಿಮ್ಮನ ಕಗ್ಗದ ಆಯ್ದ ಕಗ್ಗಗಳ ಪ್ರವಚನ ಮಾಡಲಿದ್ದಾರೆ.

* ಸಾಹಿತ್ಯ ಪರಿಚಾರಕ ಹೆಚ್.ಎಸ್. ಲಕ್ಷ್ಮೀನಾರಾಯಣಭಟ್ಟರಿಂದ ಡೀವೀಜಿಯವರ ಸಾಹಿತ್ಯ-ಒಂದು ನೋಟ.

* ಹಿರಿಯ ಐ.ಎ.ಎಸ್ ಅಧಿಕಾರಿ ಕೆ.ಎಚ್. ಗೋಪಾಲಕೃಷ್ಣೇಗೌಡರು ಡಿ.ಆರ್. ವೆಂಕಟರಮಣನ್ ವಿರಚಿತ ವಿರಕ್ತರಾಷ್ಟ್ರಕ ಪುಸ್ತಕ ಕುರಿತು ಮಾತನಾಡಲಿದ್ದಾರೆ.

* ಕಾವ್ಯಾಲಯ ಪ್ರಕಾಶಕರು (ಮೈಸೂರು)ರವರ ಡೀವೀಜಿ ವಿರಚಿತ A compendium of writings on political issues’ by Dr. D.V. Gundappa ಪುಸ್ತಕದ ಬಿಡುಗಡೆ ಸಮಾರಂಭ.

* ವಿದ್ವಾನ್ ಎಸ್. ಶಂಕರ್ ಮತ್ತು ತಂಡದಿಂದ ಡೀವೀಜಿಯವರ ಗೀತೆಗಳ ಗೇಯಗಾಯನವಿರುತ್ತದೆ.

ಡೀವೀಜಿಡೀವೀಜಿಯವರ ಸಾಹಿತ್ಯ ಪ್ರಚಾರ ಮಾಡುತ್ತಿರುವ ಹಲವು ಮಹನೀಯರಿಗೆ ಗೌರವಾರ್ಪಣೆ ಮಾಡುವ ಪುಟ್ಟ ಕಾರ್ಯಕ್ರಮವಿರುತ್ತದೆ.

ಸಂಜೆ ಕಾರ್ಯಕ್ರಮ:
__________

5 ಗಂಟೆಯ ನಂತರ ಖ್ಯಾತ ವಿಮರ್ಶಕ ಡಾ|| ಜಿ.ಬಿ. ಹರೀಶ್‌ರಿಂದ ಡೀವೀಜಿಯವರ ಇಂಗ್ಲೀಷ್ ಬರವಣಿಗೆಗಳ ಒಂದು ನೋಟ.


* ನರಸಿಂಹ ಭಟ್, ಕಾಸರಗೋಡು ಇವರಿಂದ ಮರುಳಮುನಿಯನ ಕಗ್ಗದ ವ್ಯಾಖ್ಯಾನವಿರುತ್ತದೆ.

*ಶ್ರೀಮತಿ ವೇದಪುಷ್ಪ ಅವರ ತಂಡದವರಿಂದ, ಡೀವೀಜಿಯವರ 'ಶ್ರೀಕೃಷ್ಣ ಪರೀಕ್ಷಣಂ' ಕೃತಿಯಾಧಾರಿತ ನೃತ್ಯರೂಪಕವಿರುತ್ತದೆ.

* ಖ್ಯಾತ ಗಾಯಕಿ ಶ್ರೀಮತಿ ಎಂ.ಡಿ. ಪಲ್ಲವಿಯವರಿಂದ ಡೀವೀಜಿಯವರ ಕೃತಿಗಳಗಾಯನವಿರುತ್ತದೆ.

* ಖ್ಯಾತ ಸಂಗೀತ ನಿರ್ದೇಶಕ ಪ್ರವೀಣ್. ಡಿ. ರಾವ್ ಪಕ್ಕವಾದ್ಯದ ನಿರ್ವಹಣೆ
ವಹಿಸಲಿದ್ದಾರೆ.

* ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಅಪರ್ಣಾ ವಸ್ತಾರೆ ನಡೆಸಿಕೊಡಲಿದ್ದಾರೆ.

ಸ್ಥಳ: ಗಾಯನ ಸಮಾಜ, ಕೆ.ಆರ್.ರಸ್ತೆ. ಬೆಂಗಳೂರು
ದಿನಾಂಕ: 17 ಮಾರ್ಚ್ 2012, ಶನಿವಾರ
ಸಮಯ: ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ

ತಮ್ಮೆಲ್ಲರಿಗೂ ಇನ್ನೊಮ್ಮೆ ಈ ಮೂಲಕ ಆಮಂತ್ರಣ.

------------------

ಡೀವೀಜಿ ಯವರ ಬಗ್ಗೆ ಒಂದೆರಡು ಪ್ರಸಂಗಗಳನ್ನು ಮೆಲುಕು ಹಾಕುತ್ತಿದ್ದೇನೆ :

* ಡೀವೀಜಿ ವ್ಯಂಜನಪ್ರಿಯರೂ ಸಿಹಿತಿಂಡಿಗಳನ್ನು ಬಹಳವಾಗಿ ಇಷ್ಟಪಡುವವರೂ ಆಗಿದ್ದರು. ನಾಗಸಂದ್ರದ ಹತ್ತಿರವಿದ್ದ ಅವರ ಮನೆಗೆ ನಿತ್ಯವೂ ಅನೇಕ ಅತಿಥಿಗಳೂ ಕವಿ-ಸಾಹಿತಿಗಳೂ ಬರುತ್ತಿದ್ದರಂತೆ. ಜಿಲೇಬಿ ಅಚ್ಚುಮೆಚ್ಚಿನ ಖಾದ್ಯ. ಅವರ ಮನೆಯಲ್ಲಿ ತಿಂಡಿ-ತಿನಿಸು ತಿನ್ನದ ಅತಿಥಿಗಳು ಕಮ್ಮಿ.

* ಕಗ್ಗದ ಮುಕ್ತಕಗಳನ್ನು ಚಿಕ್ಕಚಿಕ್ಕ ಚೀಟಿಗಳಲ್ಲಿ ಬರೆದಿಡುತ್ತಿದ್ದ ಡೀವೀಜಿಗೆ ಅದನ್ನು ಪ್ರಕಟಿಸಲೇ ಬೇಕೆಂಬುದೇನೂ ಇರಲಿಲ್ಲವಂತೆ. ಜಿ.ಪಿ.ರಾಜರತ್ನಂ ಅವರು ಖುದ್ದಾಗಿ ನಿಂತು ಹಲವು ಅಂತಹ ಚೀಟಿಗಳನ್ನು ಸಂಗ್ರಹಿಸಿ ಪ್ರಕಟಿಸಲು ಮುಂದಾಗಿದ್ದರ ಪರಿಣಾಮ ನಮಗಿಂದು ಕಗ್ಗ ಲಭ್ಯವಾಗಿದೆ! ಇಲ್ಲಿ ಜಿ.ಪಿ. ರಾಜರತ್ನಂ ಆ ವಿಷಯಕ್ಕಾಗಿ ಅಭಿನಂದನೀಯರು, ಸ್ಮರಣೀಯರು.

* ಸಂಘವೊಂದು ಕಾರ್ಯಕ್ರಮವೊಂದನ್ನು ಹಮ್ಮಿಕೊಂಡು ಡೀವೀಜಿಯವರನ್ನು ಅತಿಥಿಗಳನ್ನಾಗಿ ಆಹ್ವಾನಿಸಿತು. ಒತ್ತಾಯಕ್ಕೆ ಕಟ್ಟುಬಿದ್ದ ಡೀವೀಜಿಯವರಿಗೆ ಕಾರ್ಯಕ್ರಮದ ದಿನ ಮೂಲವ್ಯಾಧಿ ಹೆಚ್ಚಾಗಿ ಕೂರಲೂ ಆಗದ ಸ್ಥಿತಿ! ಕಾರ್ಯಕ್ರಮ ಇಟ್ಟುಕೊಂಡವರಿಗೆ ತೊಂದರೆಕೊಟ್ಟಹಾಗಾಯಿತಲ್ಲಾ ಎಂದುಕೊಳ್ಳುತ್ತಾ ಮತ್ತೆ ಕರೆಕಳುಹಿಸಿದ ವ್ಯವಸ್ಥಾಪಕರಿಗೆ ಬರಲಾಗದ ಅನಿವಾರ್ಯತೆ ತಿಳಿಸುತ್ತಾ ಸಣ್ಣ ಚೀಟಿ ಕಳಿಸಿದರಂತೆ. ಅದರಲ್ಲಿ ಅವರು ಬರೆದ ತಮಾಷೆಯ ಒಕ್ಕಣೆ ಹೀಗಿತ್ತು: "ಗುಂಡಪ್ಪನಾದೊಡೇಂ ಕುಂಡೆಯದು ನೋಯದೇಂ" ! ವಾಸ್ತವವಾಗಿ ಗುಂಡಪ್ಪನವರ ಮನೆಯಲ್ಲಿ ಹಿಂದೆ ಅನೇಕ ಮಕ್ಕಳು ಹುಟ್ಟು ಸತ್ತುಹೋಗಿದ್ದವಂತೆ. ಮಕ್ಕಳು ಬದುಕುವುದೇ ಕಷ್ಟವೆನಿಸಿ ಆ ಮನೆಯ ಹಿರಿಯರು ಹುಟ್ಟಿದ ಗಂಡುಮಕ್ಕಳಿಗೆಲ್ಲಾ ಗುಂಡಪ್ಪ, ಕಲ್ಲಪ್ಪ ಎಂಬ ಹೆಸರುಗಳನ್ನೇ ಇಡುತ್ತಿದ್ದರಂತೆ; ಅದೊಂದು ಭಾವನೆ-ಕಲ್ಲು ಗುಂಡಿನ ಹಾಗೇ ಮಗು ಗಟ್ಟಿಯಾಗಿರಲಿ ಎಂಬ ಹಾರೈಕೆ ಇರಬೇಕು. ಅದೇರೀತಿ ನಮ್ಮ ಡೀವೀಜಿಯವರ ಹೆಸರೂ ಗುಂಡಪ್ಪ ಎಂದಾಗಿತ್ತು. ಗುಂಡಪ್ಪನಾದ ಮಾತ್ರ ಕಲ್ಲುಗುಂಡಿನ ಹಾಗೇ ಇರಲಾಗುತ್ತದೆಯೇ ಶಾರೀರಿಕ ಬಾಧೆಗಳು ತಮಗೆ ಇರುವುದಿಲ್ಲವೇ ಎಂಬುದನ್ನು ಹಾಸ್ಯಮಯವಾಗಿ ಬಿಂಬಿಸಿದ ಡೀವೀಜಿ ಹಾಸ್ಯಪ್ರಿಯರೂ ಆಗಿದ್ದರು ಎಂಬುದನ್ನು ತೋರಿಸುತ್ತದೆ.

* ಡೀವೀಜಿಯವರು ಉದರಂಭರಣೆಗಾಗಿ ಹಲವು ವೃತ್ತಿಗಳಲ್ಲಿ ತೊಡಗಿಕೊಂಡಿದ್ದರು. ಅವುಗಳಲ್ಲಿ ಪತ್ರಿಕೋದ್ಯಮವೂ ಒಂದು. ನಿಷ್ಠುರವಾದಿಯಾಗಿದ್ದ ಅವರ ಪತ್ರಿಕೆಯನ್ನೇ ಬಹಿಷ್ಕರಿಸಬೇಕೆಂದು ಕೆಲವು ಜನ ಸನ್ನಾಹ ನಡೆಸಿದ್ದರು. ಆದರೂ ಮೌಲ್ಯಗಳೇ ಮೂರ್ತಿವೆತ್ತ ಇನ್ನೊಬ್ಬ ಮಹನೀಯ ಸರ್ ಎಂ.ವಿಶ್ವೇಶ್ವರಯ್ಯ ಅಂದಿನ ಮೈಸೂರು ಸಂಸ್ಥಾನದ ದಿವಾನರಾಗಿದ್ದು-ಅವರು ಸಮ್ಮತಿಸಲಿಲ್ಲ. ಕಾರಣವಿಷ್ಟೇ ವಿಶ್ವೇಶ್ವರಯ್ಯನವರಿಗೂ ಡೀವೀಜಿ ಮಾರ್ಗದರ್ಶನ ಮಾಡುತ್ತಿದ್ದರು ಎಂದರೆ ಡೀವೀಜಿಯವರ ಬುದ್ಧಿಮತ್ತೆಯನ್ನು ನಾವು ತಿಳಿದುಕೊಳ್ಳಬಹುದಾಗಿದೆ. ವಿಶ್ವೇಶ್ವರಯ್ಯನವರೆಂದರೆ ಡೀವೀಜಿಗೂ ಬಹಳ ಅಚ್ಚುಮೆಚ್ಚು, ಅಂತೆಯೇ ವಿಶ್ವೇಶ್ವರಯ್ಯನವರಿಗೂ ಡೀವೀಜಿಯವರ ಕೃತಿಗಳು ತುಂಬಾ ಇಷ್ಟವಾಗುತ್ತಿದ್ದವಂತೆ.

* ಡೀವೀಜಿಯವರು ಅತೀವ ಬಡತನದಲ್ಲೇ ಇದ್ದರೂ ಅನೇಕ ಸಂಘ-ಸಂಸ್ಥೆಗಳು ತಮಗೆ ಕೊಡಮಾಡಿದ ಎಷ್ಟೋ ಚೆಕ್ಕುಗಳನ್ನು ಎನ್‍ಕ್ಯಾಷ್ ಮಾಡದೇ ಹಾಗೇ ಬಿಟ್ಟಿದ್ದರು; ಅವೆಲ್ಲಾ ಈಗ ಬೆಂಗಳೂರಿನ ಬಸವನಗುಡಿಯ ಬಿ.ಎಂ.ಎಸ್ ಕಾಲೇಜಿಗೆ ತುಸು ದೂರದಲ್ಲಿರುವ ಡೀವೀಜಿಯವರೇ ಕಟ್ಟಿಸಿದ ಗೋಖಲೆ ಸಂಸ್ಥೆಯಲ್ಲಿ ಪ್ರದರ್ಶನಗೊಳ್ಳುತ್ತಿವೆ.

* ಡೀವೀಜಿಯವರ ಜೀವನದ, ಕವಿಸಮಯದ ವೈವಿಧ್ಯಮಯ ಘಟನೆಗಳ ಬಗ್ಗೆ ಶತಾವಧಾನಿ ಡಾ| ಆರ್.ಗಣೇಶ್ ಅವರು ಬರೆದು, ಹುಬ್ಬಳ್ಳಿಯ ’ಸಾಹಿತ್ಯ ಪ್ರಕಾಶನ’ ಪ್ರಕಟಿಸಿದ ’ಬ್ರಹ್ಮಪುರಿಯ ಭಿಕ್ಷುಕ’ ಪುಸ್ತಕವನ್ನು ಕೊಂಡು ಓದಬಹುದಾಗಿದೆ.

ಡೀವೀಜಿಯವರ ಹಸ್ತಾಕ್ಷರ ಮತ್ತು ಅವರ ಮಾನವೀಯ ಸಂಬಂಧಗಳ ಸಂಭ್ರಮೋಲ್ಲಾಸ ಹೇಗಿತ್ತು ಎಂಬುದರ ಬಗ್ಗೆ ಅವರ ಪತ್ರವೊಂದನ್ನು ತಮಗೆಲ್ಲಾ ತೋರಿಸುತ್ತಿದ್ದೇನೆ:



ಡೀವೀಜಿಯವರ ಹಸ್ತಾಕ್ಷರದಲ್ಲಿ ಅವರೇ ಬರೆದ ಪತ್ರ
[ಚಿತ್ರಗಳಮೇಲೆ ಕ್ಲಿಕ್ಕಿಸಿ ಗಾತ್ರ ಹೆಚ್ಚಿಸಿಕೊಂಡು ಓದಬಹುದಾಗಿದೆ]

ಮೇರು ವ್ಯಕ್ತಿಗಳಾಗಿದ್ದ ಡೀವೀಜಿಯವರಿಗೆ ಅವರ ’ವನಸುಮದೊಳೆನ್ನ ಜೀವನವು ವಿಕಸಿಸುವಂತೇ..’ಹಾಡಿನ ಜಾಡಿನಲ್ಲಿ ಬರೆದ ನನ್ನ ಕವನವೊಂದರ ಮೂಲಕ ನುಡಿನಮನಗಳು:


ನಿನ್ನಳೊನ್ನೆಯ ಒಸಗೆ ಕನ್ನಡದಲೀ..

ಎನ್ನಾತ್ಮನಿಧಿಯಾಗಿ ಮುನ್ನಡೆಪ ಪರಮಾತ್ಮ
ನಿನ್ನಳೊನ್ನೆಯ ಒಸಗೆ ಕನ್ನಡದಲೀ |
ಚೆನ್ನಾಗಿ ನಡೆಯುವೊಲು ಸನ್ನಡತೆ ನೀ ಕಲಿಸು
ಘನ್ನಮಹಿಮನೆ ಬೆಸುಗೆಯನ್ನಿಡುತಲೀ ||

ಆನೆಯೊಳಗೂ ನೀನೆ ಆಡಿನೊಳಗೂ ನೀನೆ
ಬಾನು ಶಶಿ ಭಾನು ನಕ್ಷತ್ರಗಳಲೀ |
ದೀನನೊಳಗೂ ನೀನೆ ದಲಿತನೊಳಗೂ ನೀನೆ
ಸೇನೆ ಕಾನನವೆಲ್ಲ ಕ್ಷೇತ್ರಗಳಲೀ ||

ಚಿನ್ನದೊಳಗೂ ನೀನೆ ಮಣ್ಣಿನೊಳಗೂ ನೀನೆ
ಭಿನ್ನಲೋಹದ ರೂಪವ್ಯಾಪಕದಲೀ |
ಪನ್ನಗದಲೂ ನೀನೆ ಪುನ್ನಾಗದಲು ನೀನೆ
ಚೆನ್ನಾಯ್ತು ಕಾಣುವುದೇ ಮಾಪಕದಲೀ ?

ಚಣಚಣದೊಳೂ ನೀನೆ ಕಣಕಣದೊಳೂ ನೀನೆ
ಅಣುರೇಣು ತೃಣಕಾಷ್ಠವೆಲ್ಲದರಲೀ |
ಗುಣಕರ್ಮದಿಂ ನೀನೆ ಗಣಗುಂಪಲೂ ನೀನೆ
ಮಣಿವೆ ನನ್ನೀಶಿರವ ನಿನ್ನೆದುರಲೀ ||