ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, February 16, 2012

ಮರೆಯಾದ ಆಚಾರ್ಯರು, ಮರೆಯಾಗುತ್ತಿದ್ದ ಆಯುರ್ವೇದ ಮತ್ತಷ್ಟು ....



ಮರೆಯಾದ ಆಚಾರ್ಯರು, ಮರೆಯಾಗುತ್ತಿದ್ದ ಆಯುರ್ವೇದ ಮತ್ತಷ್ಟು ....

ಹಾಗೆ ನೋಡಿದರೆ ಸಜ್ಜನರಿಗೆ ಅದೊಂದು ದುಃಸ್ವಪ್ನ! ಹಾಗೆ ಉಡುಪಿಯಿಂದ ಬಂದ ಆಚಾರ್ಯರು ಹೀಗೆ ಮೊನ್ನೆ ಕುಸಿದು ಇಹಲೋಕವನ್ನೇ ತ್ಯಜಿಸಿದರು. ಸುದ್ದಿ ತಿಳಿದಾಗ ಕ್ಷಣಕಾಲ ಎಲ್ಲೆಲ್ಲೂ ಜನ ಸ್ತಂಭೀಭೂತರಾದರು! ವೇದವ್ಯಾಸರು ಹಿಂದೆ ವೇದಗಳನ್ನು ವಿಂಗಡಿಸಿದಂತೇ ಈ ವೇದವ್ಯಾಸರು ಜನಸಂಘದ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ವಿಂಗಡಿಸುತ್ತಾ ಜನಸೇವೆಯಲ್ಲಿ ತೊಡಗಿಸಿಕೊಂಡು ಬೆಳಗಿನ ತಿಂಡಿಯನ್ನೂ ಬಿಟ್ಟು ಕಾರ್ಯತತ್ಪರರಾಗಿದ್ದರು ಎಂದಮೇಲೆ ಜನ ಅವರನ್ನು ಮರೆತಾರ್ಯೇ ? ಸಜ್ಜನ ರಾಜಕಾರಣಿಗಳಿಗೆ ಇವತ್ತು ಕಾಲವಲ್ಲ. ಆದರೂ ಕಣದಲ್ಲಿ ಇದ್ದಮೇಲೆ ಕರ್ತವ್ಯ ಮಾಡಲೇಬೇಕಲ್ಲಾ ? ನಮ್ಮ ಯಕ್ಷಗಾನದಲ್ಲಿ ಭಾಗವತರಿಗೆ ಸೂತ್ರಧಾರರು ಎನ್ನುತ್ತಾರೆ-ಇಡೀ ಆಟ ನಡೆಯುವುದು ಅವರು ಹೇಳುವ ಹಾಡುಗಳ ಮೇಲೆ! ಅದೇ ರೀತಿ ಭಾಜಪದ ಮೇಳಕ್ಕೆ ಸೂತ್ರಧಾರನಾಗಿ ಮರೆಯಲ್ಲಿ ನಿಂತೇ ಜನಸೇವೆಯಲ್ಲಿ ತೊಡಗಿದ್ದ ನಿಸ್ಪೃಹ ವ್ಯಕ್ತಿ ಡಾ| ವಿ.ಎಸ್. ಆಚಾರ್ಯ. ಸತ್ತ ಎಮ್ಮೆಗೆ ಹತ್ತು ಸೇರು ಹಾಲು ಎಂಬುದು ನಮ್ಮಲ್ಲಿನ ಗಾದೆ, ಜನ ಹೋದವರನ್ನು ಸ್ಮರಿಸಿ ಹಾಗಿದ್ದರು ಹೀಗಿದ್ದರು ಎಂಬುದು ಸಹಜವೇ; ಆಚಾರ್ಯರ ವಿಷಯದಲ್ಲಿ ಹಾಗಿಲ್ಲ, ಅದು ಪ್ರಜೆಗಳ ಆಂತರ್ಯದ ಮಾತು, ಕುಟುಂಬದ ಹಿರಿಯನೊಬ್ಬ ಅಗಲಿದ ನೋವು ಇದ್ದಂತೇ!

ಬ್ರಾಹ್ಮಣ ವಿರೋಧೀ ಭಾವದವರಿಗೆ ಒಂದು ಮಾತು ಹೇಳಬೇಕು: ೪೦ ವರ್ಷಗಳ ಹಿಂದೆಯೇ ಉಡುಪಿಯಲ್ಲಿ ಮಲಹೊರುವ ಪದ್ಧತಿಯನ್ನು ನಿಷೇಧಿಸಿದ್ದು ಇದೇ ವಿ.ಎಸ್. ಆಚಾರ್ಯರು. ರಾಜಕಾರಣಿಗಳಿಗೆ ಆ ಕೆಲಸ ಮಾಡಬೇಕೆಂದೇನೂ ಇರಲಿಲ್ಲ; ಮಾಡದೇ ಇರುವ ಜನ ಇವರಾಗಿರಲಿಲ್ಲ! ಉತ್ತರ ಕರ್ನಾಟಕದಲ್ಲಿ ಮಲ ಹೊರುವ ಪದ್ಧತಿ ಎನ್ನುವ ಮಂದಿ ಕಣ್ಣು ತೆರೆದರೆ ಇವತ್ತಿನ ಮಹಾನಗರಗಳಲ್ಲಿ ಮ್ಯಾನ್‍ಹೋಲ್‍ಗಳಲ್ಲಿಳಿದು ಎದೆಮಟ್ಟದ ಹೊಲಸುನೀರಲ್ಲಿ ನಿಂತೇ ಕೆಲಸಮಾಡುವ ಜನರು ಕಾಣಸಿಗುತ್ತಾರೆ. ಇದು ಮಲಹೊರುವ ಪದ್ಧತಿಯಲ್ಲವೇ? ಶಿಕ್ಷಿತ ಜನಾಂಗ ಕೈಗೆ ಮಣ್ಣು ಹತ್ತಿದರೆ ಡೆಟ್ಟಾಲ್ ಹಾಕಿ ತೊಳೆಯುವ ಈ ಕಾಲದಲ್ಲೂ ಮಹಾನಗರದ ಗಲ್ಲಿಗಲ್ಲಿಗಳಲ್ಲಿ ಅಲ್ಲಲ್ಲಿ ಮಲಶೋಧಿಸುವ ಕೊಳವೆಗಳಲ್ಲಿ ಸಿಲುಕಿದ ಘನ ಕಲ್ಮಶಗಳನ್ನೂ ಕಸಗಳನ್ನೂ ಸ್ವತಃ ಕೈಯ್ಯಿಂದಲೇ ತೆಗೆಯುವ ಜನರಿಗೆ ಯಾವ ಡೆಟ್ಟಾಲ್ ಯಾರು ನೀಡಿದ್ದಾರೆ? ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳೇ ಸಂದಿವೆ, ಇಲ್ಲೀವರೆಗೂ ಬರೇ ಭಾಜಪವೇನೂ ಅಧಿಕಾರದಲ್ಲಿರಲಿಲ್ಲವಲ್ಲ, ಹಾಗಾದ್ರೆ ಉಳಿದ ಪಕ್ಷಗಳು ಅವುಗಳ ಕಾರ್ಯಕರ್ತರು ಏನು ಮಾಡಿದರು ? ಅನೇಕಬಾರಿ ಓಡಾಡುವಾಗ ನಾನು ರಸ್ತೆಗಳಲ್ಲಿ ನಿಂತು ನೋಡುವುದಿದೆ; ಯಾರೋ ಅನಾಥ ಮಕ್ಕಳು ಕಸ ವಿಲೇವಾರಿಗೆ ಬರುತ್ತಾರೆ. ಅಪ್ಪ ಇಲ್ಲ-ಅಮ್ಮ ಇಲ್ಲ, ಹೆಚ್ಚುಕಮ್ಮಿ ಆದರೆ ಕೇಳುವುದಕ್ಕೆ ಯಾರೂ ದಿಕ್ಕಿಲ್ಲ!-ಇಂಥಾ ಪಾಪದವರ ಬದಲಿಗೆ ಪರ್ಯಾಯ ಯಂತ್ರಗಳ ಬಗ್ಗೆ ಯಾವುದೇ ಆಲೋಚನೆ ಇಲ್ಲೀವರೆಗೂ ಬರಲಿಲ್ಲವೇ ?

ಭಾಜಪದ ಮಂದಿಯೇ ಒಪ್ಪುವಂತೇ ಭಾಜಪದ ಸರಕಾರದ ಪ್ರತೀ ಮುಂಗಡಪತ್ರದಲ್ಲೂ ಮತ್ತು ಚುನಾವಣಾ ಪ್ರಣಾಳಿಕೆಯಲ್ಲೂ ಆಚಾರ್ಯರೇ ಪ್ರಧಾನ ಅಧ್ವರ್ಯುಗಳಾಗಿ ಇರುತ್ತಿದ್ದರು. ಹುಂಬ ಯಡ್ಯೂರಣ್ಣನವರ ಡೊಂಬರಾಟ ಆರಂಭವಾದಗಲೂ ಅನಿವಾರ್ಯವಾಗಿ ಪಕ್ಷದ ಹಿತಾಸಕ್ತಿಯಿಂದ ಅವರ ಜೊತೆಗಿದ್ದವರು ಆಚಾರ್ಯರು! ೭೪ ವಯೋಮಾನದ ಈ ಮಂತ್ರಿಗೆ ಹಗಲಿರುಳೂ ಜನತಾ ಜನಾರ್ದನನ ಕುರಿತೇ ಯೋಚನೆ. ಜನರಿಗೆ ಹೇಗೆ ಮಾಡಿದರೆ ಒಳಿತಾದೀತು ಎಂಬುದೇ ಅವರ ಚಿಂತನೆ. ಇಡೀ ವಿಧಾನ ಪರಿಷತ್ತಿನ ಕಲಾಪ ಮುಗಿದರೂ ಇನ್ನೂ ಅದೇ ಕುರ್ಚಿಯಲ್ಲೇ ಕುಳಿತು ಆ ದಿನದ ಮಂಡನೆಗಳನ್ನು ಆಮೂಲಾಗ್ರವಾಗಿ ಪರಿಶೋಧಿಸುವ/ಅವಲೋಕಿಸುವ ವ್ಯಕ್ತಿಯೊಬ್ಬರಿದ್ದರೆಂದರೆ ಅವರೇ ಆಚಾರ್ಯರಾಗಿದ್ದರು. ತನ್ನ ಮಕ್ಕಳಗಿಂತಲೂ ಕಿರಿಯ ವಯಸ್ಸಿನ ಶಾಸಕರು ಹಗರಣಗಳಲ್ಲಿ ಸಿಲುಕಿಕೊಂಡಾಗ ನಿಜವಾಗಿ ನೋವುಂಡವರು ಇದೇ ಆಚಾರ್ಯರು. ಜನತಂತ್ರದ ಅಪಮೌಲ್ಯವಾಗಕೂಡದು ಎಂಬ ಅನಿಸಿಕೆಯಿಂದ ಎಲ್ಲೆಲ್ಲೂ ಪೈಸೆಯನ್ನೂ ಸ್ವಂತಕ್ಕಾಗಿ ಖರ್ಚುಮಾಡದೇ ಇದ್ದ ಇವರು ದಕ್ಷಿಣ ಕನ್ನಡದೆಡೆ ಎಲ್ಲೇ ಹೋದರೂ ಐಬಿಗಳಲ್ಲಿರದೇ ಕೆಲಸ ಮುಗಿಸಿ ನೇರವಾಗಿ ತನ್ನ ಮನೆಗೇ ತೆರಳುತ್ತಿದ್ದರು!

ಮೀಸಾ ಕಾಯಿದೆಯಡಿ ಬಂಧಿಸಲ್ಪಟ್ಟು ಜೈಲು ಸೇರಿದಾಗ ಅವರಿಗಿನ್ನೂ ಮೂರನೆಯ ಚಿಕ್ಕ ಮಗುವೊಂದಿತ್ತು. ಆ ಮಗು ವಿಪರೀತ ಭೇದಿಯಿಂದ ನರಳುತ್ತಿತ್ತು. ಸ್ವತಃ ವೈದ್ಯರಾದ ಇವರು ಮನೆಯಿಂದ ಸುದ್ದಿ ಬಂದಾಗ ವಿನಂತಿಸಿ ಒಮ್ಮೆ ಹೋಗಲು ಅವಕಾಶ ಪಡೆದರೂ ಮಗುವಿನ ಆರೋಗ್ಯ ಸುಧಾರಿಸುವವರೆಗೆ ಮನೆಯಲ್ಲಿರಲು ಅವಕಾಶ ದೊರೆಯಲಿಲ್ಲ. ಹೋಗಿ ಅರ್ಧಗಂಟೆ ನೋಡಿ ಮರಳಿ ಬಂದಿದ್ದರು. ದಿನಗಳೆರಡರಲ್ಲೇ ಆ ಮಗು ಅಸು ನೀಗಿತು. ಸಮಾಜ ಸೇವೆಗಾಗಿ ನಿಂತ ಯುವ ನೇತಾರನೊಬ್ಬ ತನ್ನದೇ ಮಗುವನ್ನು ಕಳೆದುಕೊಳ್ಳಬೇಕಾಗಿ ಬಂದಿತ್ತು. ಆದರೂ ತನ್ನೆಲ್ಲಾ ವೈಯ್ಯಕ್ತಿಕ ನೋವುಗಳನ್ನೂ ಬದಿಗೊತ್ತಿ ದೇಶದ/ರಾಜ್ಯದ ಜನತೆಯ ಹಿತಾಸಕ್ತಿಯೆಡೆಗೆ ಮನಮಾಡಿದವರು ಆಚಾರ್ಯರು! ಭಾಜಪದಲ್ಲಿರುವ ಮೊಂಡರು, ಶುಂಠರು, ಜಾತೀವಾದಿಗಳು, ಸಮಾಜಘಾತುಕರು, ಗಣಿಧಣಿಗಳು, ಲಂಪಟರು ತನ್ನ ಮಾತಿಗೆ ಸೊಪ್ಪುಹಾಕದಿದ್ದರೂ ಎಲ್ಲರನ್ನೂ ಸಹೃದಯ ಮನೋಭಾವದಿಂದ ಕಂಡು ಎಲ್ಲರಿಗೂ ಹಿತವಚನಗಳನ್ನು ಹೇಳುತ್ತಿದ್ದರು. ಅಷ್ಟೇ ಏಕೆ ಯಡ್ಯೂರಣ್ಣ ರಾಜೀನಾಮೆ ಕೊಟ್ಟಾಗ ಅನಾಯಾಸವಾಗಿ ದೊರೆಯುತ್ತಿದ್ದ ಮುಖ್ಯಮಂತ್ರಿ ಗದ್ದುಗೆ ತನಗೆ ಬೇಡ, ತನ್ನ ವಯಸ್ಸು ಜಾಸ್ತಿ ಆಗಿದೆ, ಒತ್ತಡ ಜಾಸ್ತಿಯಾಗುತ್ತದೆ - ಸದಾನಂದ ಗೌಡರು ಆ ಜಾಗಕ್ಕೆ ಹಡಂಗ ಎಂದು ಸೂಚಿಸಿದವರು ಇದೇ ಆಚಾರ್ಯರು ಎಂಬುದು ಬಹಳ ಜನರಿಗೆ ತಿಳಿದಿಲ್ಲ! ಮೌಲ್ಯಗಳಿಗೆ ಮೌಲ್ಯವೇ ಕಳೆದುಹೋಗಿರುವ ಇಂದಿನ ದಿನಮಾನದಲ್ಲಿಯೂ ಮೌಲ್ಯಾಧಾರಿತ ರಾಜಕೀಯ ನಿರ್ಧಾರಗಳನ್ನು ಕೈಗೊಳ್ಳುವುದು ಆಚಾರ್ಯರ ಇಚ್ಛೆಯಾಗಿತ್ತು; ಈ ಕಾರಣದಿಂದಲೇ ವಿಪಕ್ಷಗಳ ಜನರೂ ಸೇರಿದಂತೇ ಎಲ್ಲರಿಗೂ ಬೇಕಾಗಿದ್ದರು! ರಾಜ್ಯ ಕಂಡ ಮುತ್ಸದ್ಧಿಗಳಲ್ಲಿ ಒಬ್ಬರಾದ ಆಚಾರ್ಯರು ಪಾಠಮಾಡುತ್ತಲೇ ಮತ್ತೆಲ್ಲೋ ಕಾಣದ ಶಾಲೆಗೆ ನಡೆದುಹೋದರು ! ಜನರ ಜೀವನಾಡಿಯಾಗಿದ್ದ ಅವರು ಜನಸಂಪರ್ಕಕ್ಕಾಗಿ ೨೦೦೭ ರಿಂದ ಬ್ಲಾಗ್ ಕೂಡ ಬರೆಯುತ್ತಿದ್ದರು [ http://drvsacharya.blogspot.in]. ಇದೇ ಫೆಬ್ರುವರಿ ೯ ರಂದು ಅವರ ಕೊನೆಯ ಬ್ಲಾಗ್ ಪೋಸ್ಟ್ ಪ್ರಕಟಿಸಲ್ಪಟ್ಟಿತ್ತು ಎಂದು ತಿಳಿದುಬರುತ್ತದೆ. ಅವರ ಆ ದಿವ್ಯ ಚೇತನಕ್ಕೊಂದು ಸಾಷ್ಟಾಂಗ ನಮನ.

ಎರಡನೆಯದಾಗಿ, ಮರೆಯಾಗುತ್ತಿರುವ ಭಾರತೀಯ ಸಂಸ್ಕೃತಿ-ಪರಂಪರೆಯಬಗ್ಗೆ ಭಾರತೀಯ ಮೂಲದ ಪದ್ಧತಿಯಿಂದಲೇ ಅವಲೋಕನ ಮಾಡುವುದಕ್ಕೆ ನಮ್ಮ ಶತಾವಧಾನಿಗಳು ಮುಂದಾಗಿದ್ದಾರೆ. ಇದುವರೆಗೆ ಸಂಶೋಧಿಸುತ್ತೇವೆ ಎಂದುಕೊಂಡು ವಿದೇಶೀ ಸಂಶೋಧನಾ ರೀತ್ಯಾ ನಮ್ಮ ಸಂಸ್ಕೃತಿಯ ಕುರಿತು ಸಂಶೋಧನೆಗಳು ನಡೆದಿವೆ, ಅವೆಲ್ಲವೂ ಪೂರ್ವಾಗ್ರಹ ಪೀಡಿತವೇ ಆಗಿವೆ. ಇಲ್ಲಿಯದೇ ಸಂಶೋಧನಾ ಪದ್ಧತಿಯಲ್ಲೇ ಇಲ್ಲಿನ ಸಂಸ್ಕೃತಿಯ ಸಂಶೋಧನೆ ನಡೆದರೆ ಉತ್ತಮವೆಂಬ ಅಭಿಲಾಷೆಯಿಂದ ಇದೇ ಫೆಬ್ರುವರಿ ೨೧, ೨೨, ೨೩ ದಿನಾಂಕಗಳಂದು ಸಾಯಂಕಾಲ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ರಾಷ್ಟ್ರೋತ್ಥಾನ ಸಂಶೋಧನಾ ಪರಿಷತ್ ಆಶ್ರಯದಲ್ಲಿ ಈ ಕೆಲಸ ಜರುಗುತ್ತದೆ-ಸಂಜೆ ೬:೩೦ ರಿಂದ ೮:೦೦ರ ವರೆಗೆ. ಆಸಕ್ತರು ಭಾಗವಹಿಸಬಹುದಾಗಿದೆ; ತಿಳಿದುಕೊಳ್ಳುವ ಮನಸ್ಸಿಗೆ ಸುಗ್ರಾಸ ’ಭೋಜನ’ ಸಿಗುತ್ತದೆ! ಈ ಕೆಳಗೆ ಇರುವ ಆಮಂತ್ರಣವನ್ನು ಕ್ಲಿಕ್ಕಿಸಿ ಹಿಗ್ಗಿಸಿ ಓದಿಕೊಳ್ಳಿ:


ಮರೆಯಾಗುತ್ತಿರುವ ಭಾರತೀಯ ಸಂಸ್ಕೃತಿಯ ಭಾಗವಾಗಿದ್ದು, ೩೦೦೦ ವರ್ಷಗಳಿಗೂ ಹಿಂದೆಯೇ ಬಳಕೆಯಿದ್ದ ಇತಿಹಾಸವುಳ್ಳ, ಚರಕ-ಸುಶ್ರುತರಾದಿಯಾಗಿ ಅನೇಕ ಆಯುರ್ವೇದಾಚಾರ್ಯರುಗಳಿಂದ ಬಳಸಲ್ಪಟ್ಟು ಅಂದಿನ ರಾಜಮಹಾರಾಜರುಗಳಿಗೂ ಪ್ರಜೆಗಳಿಗೂ ಉಪಯೋಗಕರವಾಗಿದ್ದ ಆಯುರ್ವೇದ ಭವಿಷ್ಯದ ಭಾರತದ ರೋಗಿಗಳನ್ನು ನಿರೋಗಿಗಳನ್ನಾಗಿ ಮಾಡಲಿ ಎಂಬುದು ನನ್ನ ಬಯಕೆ. ಆಯುರ್ವೇದದ ಹಲವು ಮೂಲಿಕೆಗಳನ್ನೂ ಔಷಧ ತಯಾರಿಕಾ ಸೂತ್ರಗಳನ್ನೂ ವಿದೇಶೀಯರು ಈಗಾಗಲೇ ಅರಿತಿದ್ದಾರೆ. ಜಾಗತಿಕ ವಾಣಿಜ್ಯ ಮಾರುಕಟ್ಟೆಯಲ್ಲಿ ಲಾಭಗಳಿಸುವ ಹುನ್ನಾರದಿಂದ ಆಯುರ್ವೇದಕ್ಕೇ ಪೇಟೆಂಟ್ ಪಡೆಯಲು ಅವರೆಲ್ಲಾ ಮುಂದಾಗುತ್ತಿದ್ದರೆ ನಾವೆಲ್ಲಾ ಕುರುಡು ಅನುಯಾಯಿಗಳಾಗಿ ಅವರ ಕೆಮಿಕಲ್ ಔಷಧೀಯ ಕ್ರಮವನ್ನು ಅನುಸರಿಸುತ್ತಿದ್ದೇವೆ!

ವೈದ್ಯರೊಬ್ಬರು ವಾರಪತ್ರಿಕೆಯೊಂದರಲ್ಲಿ ಕಳೆದವಾರ ಅರ್ಬುದ ರೋಗದ ಕುರಿತು ಬರೆದಿದ್ದಾರೆ. ಕ್ಯಾನ್ಸರ್ ರೋಗಕ್ಕೆ ಆಯುರ್ವೇದದಲ್ಲಿ ಅರ್ಬುದ ರೋಗ ಎನ್ನುತ್ತಾರೆ. ಅಂತಹ ಅರ್ಬುದ ರೋಗದಲ್ಲಿ ಹಲವು ವಿಧಗಳಿವೆ. ಆಂಗ್ಲ ಔಷಧೀಯ ಪದ್ಧತಿಯಲ್ಲಿ ಒಂದೊಂದಕ್ಕೂ ವಿಭಿನ್ನ ಕಾರಣಗಳನ್ನು ಹೇಳುತ್ತಾರಾದರೂ ಆಯುರ್ವೇದ ಹೇಳುವುದು ಅರ್ಬುದ ರೋಗಕ್ಕೆ ಸೇವಿಸುವ ದೂಷಿತ ಆಹಾರ, ಆಹಾರದಲ್ಲಿನ ಕೆಮಿಕಲ್ ಜೀವಕೋಶ ನಿರೋಧಕ ಅಂಶಗಳು, ಕಲ್ಮಶಗೊಂಡ ರಕ್ತ ಇವೇ ಕಾರಣಗಳಾಗಿರುತ್ತವೆ! ಲೇಖನ ಬರೆದ ವೈದ್ಯರು ರೋಗಿಯೊಬ್ಬಳ ಸತ್ಯಕಥೆಯನ್ನು ಉದಾಹರಿಸಿದ್ದಾರೆ. ಅವಳ ತಂದೆಯೂ ವೈದ್ಯರಾಗಿದ್ದು ವಿದೇಶದ ವರೆಗೂ ಅವಳನ್ನು ಕರೆದೊಯ್ದು ಚಿಕಿತ್ಸೆ, ಕೀಮೋಥೆರಪಿ ಎಲ್ಲಾ ಮಾಡಿಸಿದರೂ ಯಾವುದೇ ಪರಿಣಾಮ ಕಾಣದೇ ಮತ್ತೆ ಮರುಕಳಚಿದ ಅರ್ಬುದ ರೋಗವನ್ನು ಕೇವಲ ಭಾರತೀಯ ಮೂಲದ ಶುದ್ಧ ಅರಿಷಿನಪುಡಿ ಮತ್ತು ಕಾಣುಮೆಣಸಿನ ಕಷಾಯ ಪರಿಹಾರ ಮಾಡಿದೆ ಎಂದರೆ ಆಯುರ್ವೇದದ ಮಹತ್ವ ನಮಗೆ ಅರಿವಾಗಬಹುದು! ಹೀಗೆ ಕಂಡುಕೊಂಡ ಪರಿಹಾರವನ್ನು ದಾಖಲೆ ಸಮೇತ ವಿದೇಶೀ ವೈದ್ಯರಲ್ಲಿ ತೋರಿಸಿದರೂ ಆಯುರ್ವೇದ ಚಿಕಿತ್ಸೆಯನ್ನು ಅವರು ಒಪ್ಪುವ ಮನಸ್ಸು ಮಾಡಲಿಲ್ಲ ಎಂದು ನಮ್ಮ ಈ ವೈದ್ಯ ಬರೆದಿದ್ದಾರೆ; ಎಂತಹ ವಿಪರ್ಯಾಸ! ಒಳಗೊಳಗೇ ಅದರಲ್ಲೇನೋ ಇದೆ ಎಂಬ ಅನಿಸಿಕೆಯಿರುವ ನಾಸ್ತಿಕವಾದಿಗಳಂತೇ ಆ ವೈದ್ಯರು ತಮ್ಮಿಂದಾಗದ್ದನ್ನು ಆಯುರ್ವೇದ ಸಾಧಿಸಿದಾಗ ಒಪ್ಪಲು ಸಿದ್ಧರಾಗಲಿಲ್ಲ!

ಆಯುರ್ವೇದದಲ್ಲಿ ಭಾರತೀಯ ಮೂಲದ ಹಳೆಯ ಕಂಪನಿಯೊಂದು ಬೆಂಗಳೂರಿನಲ್ಲೇ ಇದೆ. ಹಿಮಾಲಯ ಡ್ರಗ್ ಕಂಪನಿ ಎಂದು ಅದರ ಹೆಸರು. ಅದು ನೂರಾರು ಆಯುರ್ವೇದೀಯ ಔಷಧಗಳನ್ನು ತಯಾರಿಸುತ್ತದೆ! ಕೆಲವಂತೂ ವಿದೇಶಗಳಿಗೂ ರಫ್ತಾಗುತ್ತವೆ-ಆ ಮೂಲಕ ಕಂಪನಿಯ ಆದಾಯ ಹೆಚ್ಚಿಸಿ ಕಂಪನಿಯ ಬೆಳವಣಿಗೆಗೆ ಕಾರಣವಾಗಿವೆ. ಉದಾಹರಣೆಗೆ ಲಿವ್-೫೨ ಎಂಬ ಔಷಧ ಮನುಷ್ಯರಿಗೂ ಪಶುಗಳಿಗೂ ಉಪಯೋಗಕ್ಕೆ ಬರುವ ಉತ್ಕೃಷ್ಟ ಔಷಧವಾದರೆ, ಸ್ಪೆಮೆನ್ ಪೋರ್ಟ್ ಎಂಬ ಮಾತ್ರೆ ಮುದುಕರಲ್ಲಿ ವೀರ್ಯೋತ್ಫಾದಕ ಗ್ರಂಥಿಗಳ ವಿಕೃತ ಬೆಳವಣಿಗೆಯನ್ನು ನಿಯಂತ್ರಿಸುವಲ್ಲಿ ಸಹಕರಿಸುತ್ತವೆ. ಸಿಸ್ಟೋನ್ ಎಂಬ ಮಾತ್ರೆ ಮೂತ್ರಾಶಯದ ಕಲ್ಲುಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ! ಯಾವುದೇ ಅಡ್ಡಪರಿಣಾಮಗಳಿಲ್ಲದೇ ಬಳಸಿ ಆರೋಗ್ಯ ಮರಳಿ ಗಳಿಸಬಹುದಾದ ಆಯುರ್ವೇದವನ್ನು ಭಾರತೀಯರಾಗಿ ನಾವು ಅನೇಕಬಾರಿ ಅಲ್ಲಗಳೆಯುತ್ತೇವೆ. ಚರಕ-ಸುಶ್ರುತಾಚಾರ್ಯರುಗಳು ಅಂದೇ ಆಪರೇಷನ್ ಕೂಡ ಮಾಡಿದ್ದರಂತೆ! ಆದರೆ ಈ ನಡುವೆ ಸರಿಯಾದ ಪರಿಣತರಿಲ್ಲದೇ ಆ ವಿದ್ಯೆ ಕೈಬಿಟ್ಟು ಹೋಗಿತ್ತು, ಅರೆಜೀವವಾಗಿದ್ದ ಅದಕ್ಕೆ ಮತ್ತೆ ಜೀವಬಂದಿದೆ! ಭಾರತೀಯ ಮೂಲದ ಯಾವುದೇ ತತ್ವದಲ್ಲೂ ಸತ್ವವಿದೆ; ಅದು ಫೀನಿಕ್ಸ್ ಪಕ್ಷಿಯಂತೇ ಮತ್ತೆ ಜನಿಸುತ್ತದೆ ಹೊರ್ತು ಸಾಯುವುದಿಲ್ಲ!

ಬಡರೈತರಿಗೆ ಹಿಮಾಲಯ ಡ್ರಗ್ ಕಂಪನಿ ಯೋಜನೆಯೊಂದನ್ನು ಇದೀಗಾಗಲೇ ಜಾರಿಗೊಳಿಸಿದೆ. ಸಾಮಾನ್ಯ ಗದ್ದೆಯಲ್ಲೂ ಬೆಳೆಯಲು ಆಗಬಹುದಾದ ಬೀಜಗಳನ್ನು ಅದೇ ಒದಗಿಸಿ ಬೆಳೆದ ಮೂಲಿಕೆಗಳನ್ನು ಅದೇ ಕಂಪನಿ ಸ್ವೀಕರಿಸುತ್ತದೆ. ಬೆಳೆಗಾರನಿಗೆ ತಿಂಗಳಿಗೆ ೪೦೦೦ ರೂಪಾಯಿ ಸಂಬಳದಂತೇ ಅದು ಕೊಡಮಾಡುತ್ತದೆ. ಈಗಾಗಲೇ ಬೆಂಗಳೂರಿನ ಕೇಂದ್ರ ಕಾರಾಗ್ರಹದ ಖೈದಿಗಳೂ ಮತ್ತು ಬೆಂಗಳೂರಿನ ಹೊರವಲಯದ ಕೆಲವು ರೈತರು ಇದರ ಪ್ರಯೋಜನ ಪಡೆದಿದ್ದಾರೆ. ನೇರವಾಗಿ ರೈತರ ಸಂಪರ್ಕಕ್ಕೆ ಅವಕಾಶ ನೀಡುವುದರಿಂದ ರೈತರಿಗೆ ಹಣದ ಭರವಸೆ ಇದೆ, ಅಲ್ಲದೇ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ. ವರ್ಷಕ್ಕೆ ಎಕರೆಯೊಂದಕ್ಕೆ ೫೦,೦೦೦ ರೂ ನಿಗದಿತ ಹಣವನ್ನು ರೈತರು ಯಾವುದೇ ಒತ್ತಡವಿಲ್ಲದೇ ಗಳಿಸಬಹುದಾಗಿದೆ. ಇಂತಹ ಅವಕಾಶವನ್ನು ಕನ್ನಡ ನೆಲದಲ್ಲೇ ಹುಟ್ಟಿಬೆಳೆದ ಈ ಕಂಪನಿ ಕನ್ನಡಿಗರಿಗಾಗಿ ಕೊಡುತ್ತಿದ್ದು ನಂತರ ಆಂಧ್ರ ಮತ್ತು ತಮಿಳುನಾಡು ರಾಜ್ಯಕ್ಕೂ ಇದನ್ನು ವಿಸ್ತರಿಸಲು ಕಂಪನಿ ಮುಂದಾಗುತ್ತಿದೆ. ವಿದೇಶಗಳಲ್ಲೂ ಕಛೇರಿಗಳನ್ನು ಹೊಂದಿರುವ ಈ ಕಂಪನಿಯಂತೇ ಇನ್ನೂ ಹಲವು ಕಂಪನಿಗಳು ಹುಟ್ಟಲಿ, ಬೆಳೆಯಲಿ ಮತ್ತು ಆಯುರ್ವೇದದ ಬಳಕೆ ಎಲ್ಲೆಲ್ಲೂ ಜಾರಿಗೆ ಬಂದು ಜನರೆಲ್ಲಾ ಆರೋಗ್ಯದಿಂದ ಬದುಕಲಿ ಎಂಬುದು ನನ್ನ ಹಾರೈಕೆಯಾಗಿದೆ. ಹಿಮಾಲಯ ಡ್ರಗ್ ಕಂಪನಿಯ ವಿವರಗಳ ಕೊಂಡಿ ಇಲ್ಲಿದೆ:

http://www.himalayahealthcare.com