ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, April 5, 2013

ಮೂರ್ತಿ ಕಣ್ಣೆದುರು ಪ್ರತ್ಯಕ್ಷವಾದಾಗ....................!!!




ಮೂರ್ತಿ ಕಣ್ಣೆದುರು ಪ್ರತ್ಯಕ್ಷವಾದಾಗ....................!!!
                     
ತುಸು ವಿಶಾಲವಾದ ಜಾಗವನ್ನು ಹೊಂದಿದ ಕಾಂಪೌಂಡಿನ ಒಳಗೆ ಕಳೆದ ಶತಮಾನದ ಕಟ್ಟಡ. ಮೆಟ್ಟಿಲೇರಿ ಮಹಡಿಯನ್ನು ತಲುಪಿದರೆ ಅಲ್ಲೊಂದು ಹಜಾರ ಅಥವಾ ಹಾಲ್.  ತೀರಾ ಆಡಂಬರವಲ್ಲದ ಸಾದಾ ಸೀದಾ ಆದರೂ ವಿಶೇಷವೆನಿಸುವಂಥಾ ಮೆತ್ತೆಗಳಿರುವ ಸೋಫಾಗಳು, ಒಂದೆಡೆ ಅತಿ ಉದ್ದನೆಯ ಪೆಂಡೂಲಮ್ ಹೊಂದಿರುವ [ಮೈಸೂರು ಅರಮನೆಯಲ್ಲಿ ಸಿಕ್ಕಿತೇನೋ ಎಂಬಂತಹ]ಅತಿವಿಶಿಷ್ಟ ನಿಲುಗಡಿಯಾರ, ಬಿರುಬೇಸಿಗೆಯ ಸೆಕೆ ಬಂದವರಿಗೆ ತಾಗದಿರಲೆಂದು ಅಳವಡಿಸಿರುವ ಏಸಿ, ಜೀನ್ಸ್ ಮತ್ತು ಟೀ ಶರ್ಟ್ ನಲ್ಲಿ, ಎಂದಿನಂತೇ ಮುಗುಳುನಗುತ್ತ ರತ್ನಗಂಬಳಿಯಮೇಲೆ ಎದ್ದುನಿಂತು ಸ್ವಾಗತಿಸಿದ ಮೂರ್ತಿಯ ಚಿತ್ರ ತಲೆಯಲ್ಲಿ ಸ್ಥಿರವಾಗಿ ನಿಂತಿದೆ. ಮೈಕ್ರೋಸಾಫ್ಟ್ ನಲ್ಲಿ ಪ್ರೋಗ್ರಾಮರ್ ಆಗಿದ್ದ ಈ ಮೂರ್ತಿ ಅಂತಿಂಥ ಮೂರ್ತಿಯಲ್ಲ! ಕ್ಯಾಲಿಫೋರ್ನಿಯಾದಲ್ಲಿ ಮೂರು ಕಂಪನಿಗಳಿಗೆ ಹುಟ್ಟುನೀಡಲು ಪಾಲುದಾರರಾಗಿ ಕಾರಣರಾಗಿದ್ದ ಮೂರ್ತಿ, ಸ್ಥಾಪಿಸಿದ್ದ ’ಎಲಿಗ್ರೋ ಸಿಸ್ಟಮ್ಸ್’ ಎಂಬ ಐಪಿ ಸೆಕ್ಯುರಿಟಿ ಕಂಪನಿಯ ಬೆಳವಣಿಗೆಯನ್ನು ಕಂಡು ಸಿಸ್ಕೋ ಅದನ್ನು ಕೊಂಡುಕೊಂಡಿತು. ನೆಟ್ ವರ್ಕ್ ಎಂಜಿನೀಯರ್ ಆದ ಮೂರ್ತಿ ನನ್ನ ಮೂಲ ವೃತ್ತಿ ಮಾರ್ಗದವರೇ ಎಂಬುದನ್ನು ತಿಳಿದಾಗ ಸಂತಸವಾಯ್ತು. ಎಲ್ಲಿಯ ನೆಟ್ ವರ್ಕು ಎಲ್ಲಿಯ ಬರಹಲೋಕ, ಎಲ್ಲಿಯ ಸಂಗೀತ-ಸಾಹಿತ್ಯ, ಸಂಬಂಧವೇ ಇಲ್ಲದ ಈ ಎರಡು ದಾರಿಗಳಲ್ಲಿ ಸಂಬಂಧವನ್ನು ಕಲ್ಪಿಸುವ ಜನರಿದ್ದಾರೆ ಎಂಬುದು ನಿಮ್ಮ ಮುಂದೆ ಸಾಬೀತಾಗಿರುವ ವಿಷಯ. ಮೂರ್ತಿಯ ಸಂಗೀತವನ್ನು ನೀವು ಅಲಿಸಿದ್ದೀರಿ, ನನ್ನ ಬರಹಗಳನ್ನೂ ನೀವು ಓದಿ ಆಸ್ವಾದಿಸಿದ್ದೀರಿ; ಯಾಕೆ ಹೀಗೆ ಹೇಳಿದೆನೆಂದರೆ ವ್ಯಕ್ತಿಗೆ ಮಾದುವ ವೃತ್ತಿಯಲ್ಲಿ ವೃತ್ತಿಸಂತೋಷ ಇದ್ದರೆ, ಓದು ಯಾವುದೇ ಆದರೂ ಮಡುವುದು ಬಯಸಿದ್ದನ್ನೇ!  

ನಮ್ಮ ನಡುವೆ ನಾವು ಅನೇಕರನ್ನು ನೋಡುತ್ತೇವೆ. ಇಲೆಕ್ಟ್ರಿಕಲ್, ಮೆಕಾನಿಕಲ್, ಸಿವಿಲ್ ಮೊದಲಾದ ಎಂಜಿನೀಯರಿಂಗ್ ಓದಿಕೊಂಡ ಜನ ತೊಡಗಿಕೊಳ್ಳುವುದು ತದ್ವಿರುದ್ಧವಾದ ವೃತ್ತಿಗಳಲ್ಲಿ. ಏನನ್ನೂ ಓದದ ವ್ಯಕ್ತಿ ಮಲೆನಾಡ ಕಾಡಿನ ಭಾಗಗಳಲ್ಲಿ ವಿದ್ಯುಜ್ಜನಕಗಳನ್ನು ನಿರ್ಮಿಸಿಕೊಟ್ಟು ದಾಖಲೆಮಾಡಿದ್ದಾರೆ. ಕೃಷಿಕರಿಗೆ ಉಪಯೋಗವಾಗುವ ಹಲವು ಯಂತ್ರೋಪಕರಣಗಳನ್ನು ಜಾಸ್ತಿ ಓದಿರದ ಹಳ್ಳಿಗರೇ ತಯಾರಿಸಿಕೊಡುತ್ತಿದ್ದಾರೆ. ತೀರಾ ಇತ್ತೀಚೆಗೆ ಬಂದ ಮೊಬೈಲ್ ಸಿಮ್ ಬಳಸಿ, ಆ ಮೂಲಕ ನಿಯಂತ್ರಿಸಬಲ್ಲ ಯಂತ್ರಗಳನ್ನೂ ಸಹ ಕೆಲವರು ಸಿದ್ಧಪಡಿಸಿದ್ದಾರೆ. ಎಂಜಿನೀಯರಿಂಗ್ ಕಾಲೇಜುಗಳಲ್ಲಿ ಪ್ರಾಜೆಕ್ಟ್ ಮಾಡುವ ಹುಡುಗರು ಇಂಥವರಿಂದ ಮಾಹಿತಿ ಪಡೆದರೂ ತಪ್ಪಿಲ್ಲ. ಬದುಕು ಮನುಷ್ಯನಿಗೆ ಪಾಠಕಲಿಸುತ್ತದೆ; ಬದುಕು ಕಲಿಸುವ ಪಾಠವನ್ನು ಯಾವ ವಿಶ್ವವಿದ್ಯಾಲಯವೂ ಹೇಳಿಕೊಡಲು ಸಾಧ್ಯವಾಗುವುದಿಲ್ಲ. ವ್ಯಕ್ತಿಯ ಮನದಲ್ಲಿ ನಿಶ್ಚಿತ ಉತ್ತಮ ಗುರಿಯೊಂದು ಹುಟ್ಟಿಬಿಟ್ಟರೆ, ಅದನ್ನು ಸಾಧಿಸಲು ಆತ ಸನ್ನದ್ಧನಾಗೇ ಇರುತ್ತಾನೆ, ಅದಕ್ಕಾಗಿಯೇ ಸತತ ಪರಿಶ್ರಮಿಸುತ್ತಾನೆ. ಚಾರ್ಟರ್ಡ್ ಅಕೌಂಟಂಟ್ ಆಗಿರುವ ಯಂಡಮೂರಿ ವೀರೇಂದ್ರನಾಥ್ ಅವರು ’ದುಡ್ಡು ದುಡ್ಡು’ ಎಂಬ ಕಾದಂಬರಿಯನ್ನು ಬರೆದು ಹೆಸರುವಾಸಿಯಾದರು. ಅವರ ಬರಹಗಳು ಇಂದಿಗೂ ಹಾಗೇ ಹಸೀ ಗೋಡೆಗೆ ಹರಳನ್ನು ಮೆತ್ತುವ ಪ್ರಾತ್ಯಕ್ಷಿಕೆಯನ್ನು ಅವರು ಬರಹಗಳ ಮೂಲಕ ಉಣಬಡಿಸುತ್ತಾರೆ. ಕನ್ನಡ ಬರುವುದಿಲ್ಲವಾದರೂ, ನನ್ನ ಬರಹಗಳನ್ನು ಬೇರೆಯವರಿಂದ ತರ್ಜುಮೆ ಮಾಡಿಸಿ ತಿಳಿದುಕೊಂಡೆ ಎಂದು ಅವರೊಮ್ಮೆ ನನಗೆ, ಶುಭಾಶಯ ತಿಳಿಸಿ ಮಿಂಚಂಚೆ ಕಳಿಸಿದ್ದಾರೆ.

ಪಂಜೆಯವರು ತಮ್ಮ ಕವನದಲ್ಲಿ

ಏರುವನು ರವಿ ಏರುವನು
ಬಾನೊಳು ಸಣ್ಣಗೆ ತೋರುವನು
ಏರಿದವನು ಚಿಕ್ಕವನಿರಬೇಕೆಲೆ
ಎಂಬಾ ಮಾತನು ಸಾರುವನು

ಎಂದಿದ್ದಾರೆ. ಆ ಪ್ರಕಾರ ನಾನು ಭೇಟಿಯಾದ ಮೂರ್ತಿ, ನನಗೆ ಮಿಂಚಂಚೆ ಕಳಿಸಿದ ಯಂಡಮೂರಿ ಇವರೆಲ್ಲಾ ಬಹಳ ಎತ್ತರಕ್ಕೆ ಏರಿದರೂ, ನಿಗರ್ವಿಗಳಾಗಿ ಸರಳ ಜೀವನವನ್ನು ನಡೆಸಿದ್ದಾರೆ. ಅಂದಹಾಗೆ ಆ ಮೂರ್ತಿ ನನ್ನ-ನಿಮ್ಮೆಲ್ಲರ ಮನದಮೂರ್ತಿ; ಮನೋಮೂರ್ತಿ! ಅವರ ಮನೆಯೊಳಗೆ ಅವರೆದುರು ಕುಳಿತುಕೊಳ್ಳುತ್ತಿದ್ದಂತೆಯೇ, ಸಹಾಯಕನ ಮೂಲಕ ಕಾಫಿ ತರಿಸಿಕೊಟ್ಟರು. ಇದುವರೆಗೆ ಎಲ್ಲೂ ಭೇಟಿಯಾಗಿರದ, ನನ್ನಂತಹ ಸಾಮಾನ್ಯನನ್ನೂ ಸಹ ಅವರು ನಡೆಸಿಕೊಂಡ ರೀತಿ ನನಗೇ ಮುಜುಗರವನ್ನುಂಟುಮಾಡಿತ್ತು. ಮಾತನಾಡುತ್ತಿದ್ದರೆ ಹತ್ತಿರದ ನೆಂಟರೊಡನೆ ಹರಟಿದ ಅನುಭವ; ಮಾತಿನಲ್ಲಿ ತೀರಾ ಔಪಚಾರಿಕತೆಯಿಲ್ಲ, ಡಂಬಾಚಾರವಿಲ್ಲ, ತೂಕದ ಮಾತು, ಮಿತಮಾತು, ಶುದ್ಧ ಕನ್ನಡದಲ್ಲೇ ಮಾತು. ಸಹಜವಾಗಿ ಹೊರಹೊಮ್ಮುವ ಮುಖಭಾವಗಳು, ಆಗಾಗ ತಿಳಿನಗೆ, ಯಾವುದನ್ನೂ ಗೌಪ್ಯವಾಗಿಡದಂಥಾ ನೇರ ಮಾತುಗಾರಿಕೆ-ಇವುಗಳನ್ನೆಲ್ಲಾ ಮೂರ್ತಿಯವರಲ್ಲಿ ಕಂಡೆ.

ಬೆಂಗಳೂರು ವಿಶ್ವವಿದ್ಯಾಲಯದ ವಿಶ್ವೇಶ್ವರಯ್ಯ ಎಂಜಿನೀಯರಿಂಗ್ ಕಾಲೇಜಿನಲ್ಲಿ, ಇಲೆಕ್ಟ್ರಿಕಲ್ ಎಂಜಿನೀಯರಿಂಗ್ ಓದುತ್ತಿರುವಾಗಲೇ ಮನೋಮೂರ್ತಿಯವರು ಡ್ರಮ್ ಬಾರಿಸುತ್ತಿದ್ದರಂತೆ. ಕರ್ನಾಟಕ ಸಂಗೀತಕ್ಕೆ ಒತ್ತುಕೊಟ್ಟ  ಹಿನ್ನೆಲೆಯ ಮನೆತನದಲ್ಲಿ ಜನಿಸಿದ ಅವರಿಗೆ ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿ. ಎಲ್ಲೇ ಸಂಗೀತ ಗೋಷ್ಠಿ, ವಾದ್ಯಗೋಷ್ಠಿಗಳು ನಡೆದರೂ ಸಾಧ್ಯವಾದಲ್ಲೆಲ್ಲಾ ಅದನ್ನು ನೋಡುವುದು ಮೂರ್ತಿಯ ಆಸಕ್ತಿಯ ವಿಷಯಗಳಲ್ಲೊಂದು. ಸಂಗೀತಕ್ಕೇ ಮನಸ್ಸು ಸೋತಿದ್ದರೂ ಮನೆಯವರು ಪದವಿ-ಗಿದವಿ ಓದಿಸದೇ ಹಾಗೇ ಬಿಟ್ಟುಬಿಡುತ್ತಾರ್ಯೇ? ಸಹಜವಾಗಿ ಮನೆಯವರೆಲ್ಲರ ಒತ್ತಾಯದಮೇರೆಗೆ, ಉನ್ನತ ವ್ಯಾಸಂಗಕ್ಕಾಗಿ ಕ್ಯಾಲಿಫೋರ್ನಿಯಾಗೆ ಹಾರಿದವರು ಮನೋಮೂರ್ತಿ-ಅಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಮತ್ತು ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯಗಳಲ್ಲಿ ಓದಿದರಂತೆ. ಓದು ನಡೆದೇ ಇದ್ದರೂ ಜೊತೆಜೊತೆಗೇ ಸಂಗೀತರಂಗವೂ ಕೈಬೀಸಿ ಕರೆಯುತ್ತಿತ್ತು. ಹಸಿರುಮೇವನ್ನು ಕಂಡ ಹಸಿದ ದನದಂತೇ ಸಂಗೀತದ ಹಸಿವನ್ನು ನೀಗಿಸಿಕೊಳ್ಳಲು ಮೂರ್ತಿಯ ಮನಸ್ಸು ಸದಾ ಅವಕಾಶ ಹುಡುಕುತ್ತಿತ್ತು.

ಸಂಗೀತದಲ್ಲಿ ತೊಡಗಿಕೊಂಡ ಮೂರ್ತಿ ಕನ್ನಡತಾಯ್ನೆಲದಲ್ಲಿ, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ, ’ಅಮೇರಿಕಾ ಅಮೇರಿಕಾ’ ಚಲನಚಿತ್ರಕ್ಕೆ ಸಂಗೀತವೊದಗಿಸಿದರಾದರೂ ಅವರ ಸಂಗೀತದಿಂದ ಜನರ ಹೃದಯವೀಣೆಯನ್ನು ಮೀಟಿದ್ದು ’ಮುಂಗಾರುಮಳೆ’ಯಲ್ಲಿ. ’ಅಮೇರಿಕಾ ಅಮೇರಿಕಾ’ ಚಿತ್ರದ ’ನೂರು ಜನುಮಕೂ....’ ಮತ್ತು ’ಅಮೇರಿಕಾ ಅಮೇರಿಕಾ’ ಹಾಡುಗಳೂ ಸಹ ಜನರನ್ನು ಆಕರ್ಷಿಸಿವೆ. ನಂತರ ’ನನ್ನ ಪ್ರೀತಿಯ ಹುಡುಗಿ’ ಎಂಬ ಚಿತ್ರಕ್ಕೆ ಸಂಗೀತ ನೀಡಿದಾಗ ’ಕಾರ್ ಕಾರ್ ಕಾರ್’ ಹಾಡು ಬಹಳ ಜನಪ್ರಿಯವಾಯ್ತು. ರಾಷ್ಟ್ರ ಪ್ರಶಸ್ತಿಯನ್ನು ಗಳಿಸಿದ ’ಪ್ರೀತಿ ಪ್ರೇಮ ಪ್ರಣಯ’ ಚಿತ್ರಕ್ಕೂ ಸಂಗೀತ ಮೂರ್ತಿಯವರೇ ನೀಡಿದ್ದಾರೆ. ಜೋಕ್ ಫಾಲ್ಸ್ ಎಂಬ ಹಾಸ್ಯಮಯ ಚಿತ್ರದಲ್ಲೂ ಮನೋಮೂರ್ತಿಗಳು ಸಂಗೀತದಿಂದ ಗಮನಸೆಳೆದಿದ್ದಾರೆ. ಎಲ್ಲೆಡೆಯಲ್ಲೂ ಮಳೆಯಾಗಿದ್ದರೂ ಮೂರ್ತಿಯವರ ಹೊಲದಲ್ಲಿ ಮಾತ್ರ ಮಳೆ ಬಿದ್ದಿದ್ದು ’ಮುಂಗಾರುಮಳೆ’ ಚಿತ್ರ ಬಿಡುಗಡೆಯಾದಮೇಲೆಯೇ. ನಿರ್ಮಾಪಕರಿಗೆ ೭೫ ಕೋಟಿ ಆದಾಯ ತಂದುಕೊಟ್ಟ ಈ ಚಿತ್ರ ಕನ್ನಡದಲ್ಲಿ ಅತ್ಯಂತ ಹಿಟ್ ಚಿತ್ರವೆನಿಸಿದ್ದು ಅದಕ್ಕೆ ಮೂರ್ತಿಯವರ ಸುಮಧುರ ಸಂಗೀತವೂ ಒಂದು ಕಾರಣವಾಗಿದೆ. ನಂತರ ೨೦೦೭ರಲ್ಲಿ ಇನ್ನೊಂದು ಯಶಸ್ವೀ ಚಿತ್ರ ’ಚೆಲುವಿನ ಚಿತ್ತಾರ’ ಬಿಡುಗಡೆಯಾಗಿ, ಇನ್ನೊಮ್ಮೆ ಮೂರ್ತಿ ಲೈಮ್ ಲೈಟ್ ನಲ್ಲಿ ಕಾಣಿಸಿಕೊಂಡರು. ನಾದಮಧುರ್ಯದ ಕೈಚಳಕ ಮತ್ತು ಇಂಪಾದ ಸ್ವರಸಮ್ಮೇಳನ ಮೂರ್ತಿಯವರಿಗೆ ಕರಗತವಾಗಿದ್ದರಿಂದ ಅನೇಕ ನಿರ್ಮಾಪಕರು ಮೂರ್ತಿಯವರನ್ನು ಮೂರ್ತಿಯವರನ್ನೇ ಸಂಗೀತಕ್ಕೆ ಆಯ್ಕೆಮಾಡಿಕೊಳ್ಳತೊಡಗಿದರು. ೨೦೦೫ರಲ್ಲಿ ಹಿಂದೀ ಚಿತ್ರವೊಂದಕ್ಕೆ ಸಂಗೀತವನ್ನೊದಗಿಸಿದ್ದರೂ ಆ ಚಿತ್ರ ಬಿಡುಗಡೆ ಕಾಣದಿದ್ದುದು ವಿಷಾದನೀಯ.

ಸಂದರ್ಶನದ ಆಯ್ದ ಭಾಗ ಈ ಕೆಳಗಿನಂತಿದೆ:

  • ನಿಮ್ಮ ಬಗ್ಗೆ ಸ್ವಲ್ಪ ಹೇಳ್ತೀರಾ ?

೧೯೭೬ ರಿಂದ ನಾನು ಕಂಪ್ಯೂಟರ್ ನೆಟ್ ವರ್ಕಿಂಗ್ ನಲ್ಲಿದ್ದೆ. ೧೯೯೦ರ ಆದಿಭಾಗದಲ್ಲಿ ನನಗನ್ನಿಸಿತು. ನಾನು ಕಂಪ್ಯೂಟರ್ ಗಳ ಜೊತೆ ಮಾತನಾಡುವುದರ ಹೊರತಾಗಿ ಇನ್ನೇನನ್ನಾದರೂ ಮಾಡಬೇಕು ಎಂದು. ಸಂಗೀತ ಹೇಗೂ ನನ್ನ ಐಚ್ಛಿಕ ವಿಷಯವಾಗಿದ್ದು ಸಂಗೀತವೆಂಬುದು ಶರೀರದ ಕಣಕಣವನ್ನೂ ವ್ಯಾಪಿಸಿತ್ತು. ಯುವಿಸಿಇ ಯಲ್ಲಿ ಕಲಿಯುತ್ತಿರುವಾಗ ನನ್ನದೇ ಆದ ಪಾಪ್ ಬ್ಯಾಂಡನ್ನು ಹೊಂದಿದ್ದೆ. ಕನ್ನಡಲ್ಲಿ ಕೆಲವು ಪಾಪ್ ಹಾಡುಗಳನ್ನು ಅದಾಗಲೇ ನಾನು ತಯಾರಿಸಿದ್ದೆ. ಮತ್ತು ಸಾಕಷ್ಟು ಟ್ಯೂನ್ ಗಳನ್ನು ಸಿದ್ಧಪಡಿಸಿಕೊಂಡಿದ್ದೆ. ಪ್ರಥಮವಾಗಿ ೧೯೯೫-೯೬ ರಲಿ ಕನ್ನಡದಲ್ಲಿ ’ಅಮೇರಿಕಾ ಅಮೇರಿಕಾ’ ಎಂಬ ಸಿನಿಮಾಕ್ಕೆ ಸಂಗೀತನೀಡಿದೆ. ನಾನು ಸಾಮಾನ್ಯವಾಗಿ ವರ್ಷಕ್ಕೆ ೨ ಸಿನಿಮಾಗಳಿಗೆ ಸಂಗೀತವೊದಗಿಸುತ್ತಿದ್ದು ಕಳೆದ ಕೆಲವರ್ಷಗಳಿಂದ ವರ್ಷಕ್ಕೆ ಒಂದೇ ಸಿನಿಮಾಕ್ಕೆ ಸಂಗೀತ ನೀಡಲು ನಿರ್ಧರಿಸಿದ್ದೇನೆ. ಹೈಟೆಕ್ ಕೆಲಸ ಯಾಂತ್ರಿಕವಾಗಿ ಇದ್ದೇ ಇರುತ್ತದೆ ಆದರೆ ಸಂಗೀತಮಾತ್ರ ನನ್ನನ್ನು ಸದಾ ಅದರಲ್ಲಿ ತೊಡಗಿಕೊಳ್ಳುವಂತೇ ಮಾಡುತ್ತದೆ, ಸಂಗೀತಕ್ಕಾಗಿ ದಿನದ ೨೪ ಗಂಟೆ ಕೆಲಸಮಾಡಿದರೂ ಬೇಸರವೆನಿಸುವುದಿಲ್ಲ.

  • ನಿಮಗೆ ಸಂಗೀತ ಕ್ಷೇತ್ರದಲ್ಲಿ ಕೆಲಸಮಾಡಲು ಸಮಯ ಸಿಗುತ್ತದೆಯೇ?

ಏನನ್ನಾದರೂ ಸಾಧಿಸಬೇಕೆಂದರೆ ಸಂಬಂಧಿಸಿದ ರಂಗಕ್ಕಾಗಿ ಸಮಯವನ್ನು ನಾವೇ ಹೊಂಚಿಕೊಳ್ಳಬೇಕಲ್ಲವೇ? ನಾನು ಪ್ರಾಜೆಕ್ಟ್ ಗಳನ್ನು ನಡೆಸುವಾಗ ಪ್ರತಿರಾತ್ರಿ ೩-೪ ಗಂಟೆಯಷ್ಟೇ ನಿದ್ದೆಮಾಡುತ್ತೇನೆ.

  • ಯಾಕೆ ಸಂಗೀತವೇ ನಿಮ್ಮ ಆಯ್ಕೆ?

ಚಿಕ್ಕವನಿದ್ದಾಗ ಬೇಸಿಗೆಯ ರಜಾದಿನಗಳಲ್ಲಿ ಪಾಲಕರೊಟ್ಟಿಗೆ ಕರ್ನಾಟಕ ಸಂಗೀತ ಕಛೇರಿಗಳಿಗೆ ಹೋಗುತ್ತಿದ್ದೆ. ಅಂದಿನಿಂದಲೂ ಸಂಗೀತವೆಂದರೆ ಕಿವಿನಿಮಿರುತ್ತದೆ. ಗಣಕತಜ್ಞರಲ್ಲಿ ಅನೇಕರು ತಮ್ಮ ದಿನನಿತ್ಯದ ಯಾಂತ್ರಿಕತೆಯ ಕೆಲಸಗಳ ಒತ್ತಡಗಳನ್ನು ಪರಿಹರಿಸಿಕೊಳ್ಳಲು, ಪ್ರತಿರಾತ್ರಿ ಮನೆಗೆ ಮರಳಿದ ನಂತರ ಯಾವುದಾದರೊಂದು ಸಂಗೀತದ ಉಪಕರಣವನ್ನು ನುಡಿಸುತ್ತಾರೆ.

  • ನಿಮ್ಮಲ್ಲಿ ಸ್ಟುಡಿಯೋ ಏನಾದರೂ ಇಟ್ಟುಕೊಂಡಿದ್ದೀರೇ?

ಹೌದು, ನಾನು ಸಂಗೀತದ ಅಳವಡಿಕೆಗೆ ಬೇಕಾದ ವ್ಯವಸ್ಥೆಗಳನ್ನು ಇಟ್ಟುಕೊಂಡಿದ್ದೇನೆ. ಅಲ್ಲೇ ರೆಕಾರ್ಡಿಂಗ್ ಕೂಡ ಮಾಡುತ್ತೇನೆ. ಅಲ್ಲೇ ನಾನು ಎಲ್ಲವನ್ನೂ ಮಾಡಬಹುದಾದರೂ, ವೃತ್ತಿನಿರತ ರೆಕಾರ್ಡಿಂಗ್ ನಿಪುಣರಿಂದ ಅದನ್ನು ಸಮರ್ಪಕವಾಗಿ ನೆರವೇರಿಸುವ ದೃಷ್ಟಿಯಿಂದ ರೆಕಾರ್ಡ್ ಮಾಡಿದ್ದನ್ನು ಇಲ್ಲಿಗೆ ಹೊತ್ತುತರುತ್ತೇನೆ. ಯಾವುದೇ ಹಾಡಿಗೆ ನೇರವಾದ ವಾದ್ಯಗೋಷ್ಠಿಯ ಅಳವಡಿಕೆ ಬೇಕಾಗಿ ಕಂಡರೆ, ಆಗ ನೇರವಾಗಿ ಭಾರತದಲ್ಲಿಯೇ ವಾದ್ಯಗೋಷ್ಠಿಗಳನ್ನು ಬಳಸಿಕೊಳ್ಳುತ್ತೇನೆ. 

  • ಭಾರತದ ಸಂಗೀತ ಸ್ಟುಡಿಯೋಗಳು ಹಿತಕರವಾಗಿವೆಯೇ?

ಹೌದೌದು, ಬಹಳ ಹಿತಕರವಾಗಿವೆ. ಅಮೇರಿಕಾಗಿಂತ ನಮ್ಮ ಭಾರತದ ಸ್ಟುಡಿಯೋಗಳೇ ವಾಸಿ ಎಂದೆನಿಸುತ್ತದೆ.  ಇಲ್ಲಿನ ತಂತ್ರಜ್ಞರು ಭಾರತೀಯ ಸಂಗೀತ ಹೇಗಿರಬೇಕೆಂಬ ಅನುಭೂತಿಯನ್ನು ಹೊಂದಿರುವುದೂ ಇದಕ್ಕೆ ಒಂದು ಕಾರಣ. ಸಂಗೀತದ ಉಪಕರಣಗಳು ಅವವೇ ಆಗಿದ್ದರೂ ಅವುಗಳನ್ನು ನುಡಿಸುವವರ ಶೈಲಿಯಿಂದ ವಿಭಿನ್ನ ರಾಗಗಳೂ ಪದ್ಧತಿಗಳೂ ಹೊರಡುತ್ತವೆ.

  • ಅಪ್ಪಟ ಭಾರತೀಯ ಸಂಗೀತ  ಅಥವಾ ಪಾಶ್ಚಾತ್ಯ ಸಮ್ಮಿಶ್ರ ಸಂಗೀತ-ಇವುಗಳಲ್ಲಿ ಯಾವುದರ ಬಳಕೆ ನಿಮ್ಮ ಗುರಿ ?

ನಾನು ಇನ್ನೂ ಕಲಿಯುತ್ತಿದ್ದೇನೆ, ಕಲಿಯುವಿಕೆಗೆ ಕೊನೆಯಿಲ್ಲ. ಅನುಭವ ತಂದುಕೊಡುವ ಜ್ಞಾನ ಬೇರಾವುದಕ್ಕಿಂತಲೂ ದೊಡ್ಡದು. ಸಂಗೀತದಲ್ಲಿ ನಿಜವಾಗಿಯೂ ಬೇರೊಂದೇ ಏನನ್ನೋ ನಾನು ಬಯಸುತ್ತಿದ್ದೇನೆ. ಉದಾಹರಣೆಗೆ, ಹಿನ್ನೆಲೆ ಸಂಗೀತಕ್ಕೆ ಇಂತಿಂಥದೇ ಒಂದಷ್ಟು ಸೂತ್ರಗಳಿವೆ-ಅವುಗಳನ್ನು ಎಲ್ಲರೂ ಅನುಸರಿಸುತ್ತಾರೆ. ಅವುಗಳ ಮೇಲೆ ವಿಭಿನ್ನ ಪ್ರಯೋಗಗಳನ್ನು ಮಾಡುವ ಮನಸ್ಸಿದೆ. ಹಾಡುಗಳಲ್ಲೂ ಕೂಡ ಹಾಗೇ. ಈ ಕ್ಷಣಕ್ಕೆ ಇಂಥಾದ್ದೇ ಎಂದು ನಾನು ಎತ್ತಿ ತೋರಿಸಲು ಆಗುವುದಿಲ್ಲ, ಆದರೆ ಖಂಡಿತವಾಗಿಯೂ ನಾನು ಹೊಸತನವನ್ನು ಅಳವಡಿಸುವುದರಲ್ಲಿ ಯಶಸ್ವಿಯಾಗುತ್ತೇನೆ.

  • ಕನ್ನಡ ಸಿನಿಮಾರಂಗದಲ್ಲಿನ ಬೆಳವಣಿಗೆಗಳ ಬಗ್ಗೆ ಏನು ಹೇಳ್ತೀರಿ?

ನಾನು ಸತ್ಯ ಹೇಳುತ್ತೇನೆ. ನಾನು ಕನ್ನಡದ ಸಂಗೀತವನ್ನು ಬಹಳ ಆಲಿಸುವುದಿಲ್ಲ; ಕಾರಣವಿಷ್ಟೇ: ನನಗೆ ಅಷ್ಟೊಂದು ಸಮಯ ಲಭ್ಯವಾಗುವುದಿಲ್ಲ. ಇನ್ನೊಂದೆಂದರೆ, ಯಾವಾಗ ನಾನು ಒಂದು ಆಲ್ಬಮ್ ಆಲಿಸುತ್ತೇನೆಯೋ, ಅಲ್ಲಿನ ಹಾಡುಗಳಿಗೆ ನನ್ನ ಮನ ತಂತಾನೇ ಸೋಲಬೇಕು-ಮತ್ತೆ ಮತ್ತೆ ಅವುಗಳನ್ನೇ ಆಲಿಸುವಷ್ಟು ಹಿಡಿಸಬೇಕು, ಹಾಗೆ ಅವುಗಳಲ್ಲಿ ಮಿಂದೆದ್ದು ಬಂದಾಗ ನನಗೇನಾದರೂ ಹೊಸ ಪ್ರಯೋಜನ ಸಿಗುವಂತಿರಬೇಕು. ಈಗಿರುವ ಹಾಡುಗಳನ್ನಷ್ಟೇ ಕೇಳುವುದರಲ್ಲಿ ಅರ್ಥವಿಲ್ಲ, ಈಗಿರುವ ಹಾಡುಗಳಿಗಿಂತಾ ವಿಭಿನ್ನವಾದ ಹಾಡುಗಳನ್ನು ಕೇಳುವುದೊಳಿತು. ಕನ್ನಡದ ಈಗಿರುವ ಹಾಡುಗಳನ್ನು ಬಹಳವಾಗಿ ಆಲಿಸುವುದರಿಂದ, ಮುಂದಿನ ನನ್ನ ಸಂಗೀತದಲ್ಲಿ ಅವುಗಳ ಆಯಾಮಗಳು ಪ್ರತಿಫಲಿತವಾಗಲೂ ಬಹುದು!      

  • ಕನ್ನಡದಲ್ಲಿ ಈಗಿರುವ ಹಾಡುಗಳನ್ನು ಕೇಳುವುದರಿಂದ ಅವುಗಳಲ್ಲಿನ ಧನಾತ್ಮಕ ಅಂಶಗಳನ್ನು ನೀವು ಮುಂದೆ ಅಳವಡಿಸಿಕೊಂಡು, ಆದರೆ ಅವುಗಳಿಗಿಂತ ವಿಭಿನ್ನವಾದ ಹಾಡುಗಳನ್ನು ಕೊಡುವ ಸಾಧ್ಯತೆ ಕಾಣಬಾರದೇಕೆ?

ನೀವು ಅತ್ಯಂತ ಸಮಂಜಸವಾಗಿ ಹೇಳಿದ್ದೀರಿ. ಕೆಲವೊಮ್ಮೆ ನಾವು ಉದಾಹರಣೆಗಳಿಂದ ಕಲಿಯಬೇಕಾಗುತ್ತದೆ. ಜನ ಅಪೇಕ್ಷೆ ಪಟ್ಟಾಗ, ಕೆಲವುಬಾರಿ ನಾನು ಹಾಗೆ ಕನ್ನಡ ಹಾಡುಗಳನ್ನು ಕೇಳುವುದಿದೆ, ಅವು ಹಿತಕರವಾಗಿರಲಿ, ಹಿಡಿಸದಿರಲಿ, ಹೇಗಿದ್ದರೂ ತಾಳ್ಮೆಯಿಂದ ಆಲಿಸುತ್ತೇನೆ. 

  • ಸಂಗೀತ ನಿಮ್ಮ ನೆಚ್ಚಿನ ವಿಷಯ, ನೀವೊಬ್ಬ ಸಿನಿಮಾ ನಿರ್ಮಾಪಕ ಕೂಡಾ, ನಿರ್ಮಾಪಕನಾಗಲು ಯಾವುದು ಕಾರಣವಾಯ್ತು?

ಅದೊಂದು ಕಾಕತಾಳೀಯವಷ್ಟೇ. ನಾನು ಅಂತಾರಾಷ್ಟ್ರೀಯ ನಿರ್ಮಾಪಕನೇನೂ ಅಲ್ಲ. ಯಾರಾದರೂ ಯೋಗ್ಯರು ಸಹಾಯ ಬಯಸಿದರೆ, ಅವರು ಹಿಡಿದಿರುವ ಸಿನಿಮಾದಲ್ಲಿ ನನಗೆ ಭರವಸೆ ಹುಟ್ಟಿದರೆ, ಸಹಾಯಮಾಡಲು ತೊಂದರೆಯಿಲ್ಲ.

ಸಿನಿಮಾ ಸಂಗೀತದ ಬಗ್ಗೆ ನಿಮ್ಮ ಅನಿಸಿಕೆ ಏನು?

ಒಳ್ಳೇ ಪ್ರಶ್ನೆ, ಸಿನಿಮಾ ಸಂಗೀತವೆಂಬುದು ಕೇಳುಗರ ಸಲುವಾಗಿ ತಯಾರಿಸುವಂಥದ್ದು. ಶ್ರೋತೃಗಳು/ವೀಕ್ಷಕರು ಮತ್ತು ನಿರ್ದೇಶಕರು ಏನನ್ನು ಅಪೇಕ್ಷಿಸುತ್ತಾರೆ ಎಂಬುದನ್ನು ನಾನು ಅವಲಂಬಿಸುತ್ತೇನೆ. ಆದಾಗ್ಯೂ ಕಥೆಯ ಅವಲಂಬನೆ ಬಹಳವಾಗಿರುತ್ತದೆ. ಹೀಗಾಗಿ ಸಿನಿಮಾ ಸಂಗೀತದಲ್ಲಿ ಹೆಚ್ಚಿನ ನಮನೀಯತೆ-ಹೊಂದಾಣಿಕೆ ಸಾಧ್ಯವಾಗುವುದಿಲ್ಲ. 

  • ಕನ್ನಡದಲ್ಲಿ ಯಾವುದಾದರೂ ಸಿನಿಮಾ ನಿರ್ಮಾಣಮಾಡುವ ಸಾಧ್ಯತೆ ಇದೆಯೇ?

ಗೊತ್ತಿಲ್ಲ, ಉತ್ತಮವಾದ ಪ್ರಾಜೆಕ್ಟ್ ಕಂಡರೆ ಮಾಡಲೂಬಹುದು. ಹಾಗೊಮ್ಮೆ ಮಾಡಿದರೆ ಸಂಗೀತಕ್ಕೆ ಹೇಗೂ ನಾನೇ ಇರುತ್ತೇನೆ.

  • ಸಂಗೀತದಲ್ಲಿ ಯಾರಾದರೂ ಅಥವಾ ಯಾವುದಾದರೂ ಬ್ಯಾಂಡ್ ಅಥವಾ ಶೈಲಿ ನಿಮ್ಮನ್ನು ಹುರಿದುಂಬಿಸುತ್ತದೆಯೇ?

ಹೌದು, ನನಗೆ ಚಾವಡಿ ಸಂಗೀತ[ಲೌಂಜ್ ಮ್ಯೂಸಿಕ್] ಬಹಳ ಇಷ್ಟ, ಅಲ್ಲಿ ಜಗತ್ತಿನ ಎಲ್ಲಾವಿಧದ ಸಂಗೀತಗಾರರೂ ಉಪಕರಣಗಳೂ ಬಳಸಲ್ಪಡುತ್ತವೆ, ಉತ್ತಮ ಸಂಗೀತಗಾರ್ರಾದ ಪಂಡಿತ್ ಜಸ್ ರಾಜ್, ಪತೇ ಅಲಿ ಖಾನ್ ಮೊದಲಾದವರ ಕಚೇರಿಗಳನ್ನು ನಾನು ಇಷ್ಟಪಡುತ್ತೇನೆ. ನನಗೆ ಜಾಜ್ ಮ್ಯೂಸಿಕ್ ಕೂಡ ಇಷ್ಟ, ಅದನ್ನು ಭಾರತೀಯ ಸಿನಿಮಾಗಳಲ್ಲಿ ಇನ್ನೂ ಅಳವಡಿಸಿಲ್ಲ; ಕನ್ನಡ ಹಾಗಿರಲಿ, ಹಿಂದೀ ಸಿನಿಮಾರಂಗ ಕೂಡ ಅದನ್ನು ಪ್ರಯತ್ನಿಸಲಿಲ್ಲ.    

  • ನೀವು ಹಿಂದೀ ಅಥವಾ ಇತರ ಯಾವುದೇ ಭಾಷೆಯ ಹಾಡುಗಳನ್ನು ಕೇಳುತ್ತೀರೇ? ಹಿಂದೀ ಆಲ್ಬಂ ಗಳನ್ನು ಕೇಳುವಿರೇ?

ಹಾಂ ಹೌದು, ಮೊದಲೇ ಹೇಳಿದಂತೇ, ಕನ್ನಡ ಸಿನಿಮಾ ಹಾಡುಗಳನ್ನು ಕೇಳುವಂತೇ ಹಿಂದೀ ಹಾಡುಗಳನ್ನೂ ಕೇಳುತ್ತೇನೆ. ಹಿಂದೀ ಗೀತೆಗಳ ಡಿವಿಡಿಗಳನ್ನು ನನ್ನ ಹೆಂಡತಿ ಕೊಂಡು ತರುತ್ತಾಳೆ; ಮುಂಜಾನೆ ಟ್ರೆಡ್ ಮಿಲ್ ನಲ್ಲಿ ವ್ಯಾಯಾಮ ಮಾಡುತ್ತಿರುವಾಗ ನಾನು ಅವುಗಳನ್ನು ಆಲಿಸುತ್ತೇನೆ. ಕೆಲವು ಉತ್ತಮ ಸಂಗೀತ ನಿಯೋಜಿತವಾದ ಹಾಡುಗಳೂ ಇವೆ. ಹಿಂದೀ ನಿರ್ಮಾಪಕರು ತೆಗೆದುಕೊಳ್ಳುವ ಹೊಣೆಗಾರಿಕೆಯನ್ನು ಕನ್ನಡದ ನಿರ್ಮಾಪಕರು ತೆಗೆದುಕೊಳ್ಳಲು ತಯಾರಿಲ್ಲ. ಹೊಸತನದ ಅಳವಡಿಸುವಿಕೆಗೆ ಒಗ್ಗಿಕೊಳ್ಳಬಹುದಾದ ಶ್ರೋತೃಗಳು ಬಹಳ ಇದ್ದಾರೆಂದು ನಿರೀಕ್ಷಿಸಲು ಸಾಧ್ಯವಿಲ್ಲ. ಹಿಂದೀ ಮತ್ತು ಇಂಗ್ಲೀಷಿನಲ್ಲಿ ಹಾಗಿಲ್ಲ; ಅಲ್ಲಿ ಹೊಸತನಕ್ಕೆ ಒತ್ತು ಸಿಗುತ್ತದೆ. ವಿಶಾಲವಾದ ಮಾರುಕಟ್ಟೆ ಇರುವುದರಿಂದ ರಿಸ್ಕ್ ತೆಗೆದುಕೊಳ್ಳಲು ಅಲ್ಲಿನ ನಿರ್ಮಾಪಕರು ಹೆದರುವುದಿಲ್ಲ. ಅವರು ಪ್ರತಿಶತ ಒಬ್ಬರನ್ನೇ ತೃಪ್ತಗೊಳಿಸಿದರೂ ಅವರಿಗೆ ನಷ್ಟವಾಗುವುದಿಲ್ಲ.

  • ಪ್ರಸಕ್ತ ನೀವೇನು ಮಾಡುತ್ತಿದ್ದೀರಿ ?

ಕೆಲವು ಪ್ರಾಜೆಕ್ಟ್ ಗಳನ್ನು ನಡೆಸುತ್ತಿದ್ದೇನೆ, ಅವುಗಳ ಪೈಕಿ-ಹೊಸಬರು ಸೇರಿ ನಿರ್ಮಿಸುತ್ತಿರುವ ’ಅಲೆ’ ಸಿನಿಮಾಕ್ಕೆ ಸಂಗೀತ ಸಂಯೊಜನೆಯಲ್ಲಿ ತೊಡಗಿಕೊಂಡಿದ್ದೇನೆ. ಮತ್ತು ಪಬ್ಲಿಕ್ ಟಿವಿ ನಡೆಸುತ್ತಿರುವ ’ಫ್ರೆಶ್ ವೈಸ್ ಆಫ್ ಕರ್ನಾಟಕ’ ರಿಯಾಲಿಟಿ ಶೋ ನಲ್ಲಿ ಇನ್ನೊಬ್ಬ ಸಂಗೀತಗಾರ ಸಾಗರ್ ಅವರಜೊತೆ ತೀರ್ಪುಗಾರನಾಗಿ ಕುಳಿತು ನಡೆಸಿಕೊಡುತ್ತಿದ್ದೇನೆ.    

  • ನಿಮ್ಮಂಥವರಿಗೆ ಹಣವೇ ಮುಖ್ಯವಲ್ಲ ಆದರೆ ಸಂಗೀತವೆಂದರೆ ಪಂಚಪ್ರಾಣ ಮತ್ತು ಅದೇ ಮುಖ್ಯ. ನಿರ್ಮಾಪಕ/ನಿರ್ದೇಶಕರು ನಿಮ್ಮಂಥವರನ್ನು ಪ್ರೋತ್ಸಾಹಿಸುತ್ತಾರೆ ಎಂದುಕೊಂಡಿಲ್ಲವೇ? ಒಂದೊಮ್ಮೆ ಹೊಸಹೊಸ ನಿರ್ಮಾಪಕ, ನಿರ್ದೇಶಕರು ನಿಮ್ಮನ್ನು ಕರೆದರೆ ನೀವು ಕೈಜೋಡಿಸಬಹುದೇ?

ಮಾಡಬೇಕು ಎಂದುಕೊಂಡಿದ್ದೇನೆ. ಅಂತಹ ನಿರ್ಮಾಪಕ/ನಿರ್ದೇಶಕರು ಕನ್ನಡದಲ್ಲಿ ಇರಬಹುದು. ಈಗೀಗ ಉತ್ತಮ  ನಿರ್ಮಾಪಕ/ನಿರ್ದೇಶಕರು ರಂಗಕ್ಕೆ ಬರುತ್ತಿದ್ದಾರೆ. ಆದರೆ ಇಲ್ಲಿನವರೆಗೆ ನಾನು ಹೊಸಬರ ಜೊತೆ ಕೆಲಸ ಮಾಡಿರಲಿಲ್ಲ. ನಾನು ಕವಿತಾ, ನಾಗತಿಹಳ್ಳಿ ಮತ್ತು ಈಗ ನಾಗೇಂದ್ರ ಅವರ ಜೊತೆ ಕೆಲಸಮಾಡಿದ್ದೇನೆ; ಮಾಡಿದ ಕೆಲಸ ನನಗೆ ತೃಪ್ತಿ ತಂದಿದೆ.

  • ಕನ್ನಡ ಚಿತ್ರರಂಗದ ಅಭಿವೃದ್ಧಿಯ ಬಗ್ಗೆ ನಿಮ್ಮ ಸಲಹೆಗಳೇನಾದರೂ ಸಿಗಬಹುದೇ?

ನನ್ನ ಅನಿಸಿಕೆಯನ್ನು ಹೇಳುವುದಾದರೆ, ನಾವು ಗುಣಮಟ್ಟದ ಚಿತ್ರಗಳನ್ನು ಮಾತ್ರ ನಿರ್ಮಿಸುವತ್ತ ಮುಂದಾಗಬೇಕು. ಕಥೆಯಿಂದ ಹಿಡಿದು ತಾಂತ್ರಿಕತೆಯವರೆಗೆ ಪ್ರತೀ ಹಂತದಲ್ಲೂ ಕಠಿಣಶ್ರಮ ವಹಿಸಿ ಸಾಧಿಸಬೇಕು. ಕಥೆಯೊಂದನ್ನು ತೆಗೆದುಕೊಂಡರೆ, ಕಥೆ ಉತ್ತಮವೇ ಆಗಿದ್ದರೂ ಸಿನಿಮಾ ಮಾಡುವಾಗ ಚೆನ್ನಾಗಿಯೂ ಮಾಡಬಹುದು, ಕಳಪೆಯಾಗಿಯೂ ಮಾಡಬಹುದು. ಚಿತ್ರಮಂದಿರಗಳು ಉತ್ತಮವಾಗಿಲ್ಲ ಎಂಬುದು ಜನಾಭಿಪ್ರಾಯ. ಅದಕ್ಕಾಗಿಯೂ ಹೆಚ್ಚಿನಮಂದಿ ಚಿತ್ರಮಂದಿರಗಳಿಗೆ ಹೋಗುವುದೇ ಇಲ್ಲ. ನಾನು ಕಪಾಲಿ ಮತ್ತಿತರ ಚಿತ್ರಮಂದಿರಗಳಲ್ಲಿ ಕೆಲವು ಸಿನಿಮಾಗಳನ್ನು ನೋಡಿದ್ದೇನೆ; ಅವುಗಳಲ್ಲಿನ ವ್ಯವಸ್ಥೆ ಇಂದಿನ ತಾಂತ್ರಿಕತೆಯ ಮುನ್ನಡೆಯಲ್ಲೂ ಹಾಗೆ ಹಿಂದೆಬಿದ್ದಿರುವುದು ಬೇಸರ ತರಿಸಿದೆ. ಚಿತ್ರ ನಿರ್ಮಾಣಮಾಡಿದಷ್ಟೇ ಚಿತ್ರವನ್ನು ಜನರಿಗೆ ತಲ್ಪಿಸುವುದೂ ಉತ್ತಮವಾಗಿ ನಡೆಯಬೇಕು. ಗೊತ್ತು, ಇದಕ್ಕೆಲ್ಲಾ ಹಣಬೇಕು, ಆದರೆ ಒಮ್ಮೆ ಇವುಗಳನ್ನೆಲ್ಲಾ ಉತ್ತರಿಸಿದರೆ ಜನ ಹಣತೆತ್ತು ನೋಡಲು ಮುಂದೆಬರುತ್ತಾರೆ. ಅದಿಲ್ಲದಿದ್ದರೆ ನಮ್ಮಲ್ಲಿನ ಸಿನಿಮಾಗಳನ್ನು ಉಳಿದ ಭಾಷೆಗಳ ಸಿನಿಮಾಗಳಿಗೆ ಹೋಲಿಸಿ ತುಲನೆಮಾಡುವುದರಲ್ಲಿ ಜನ ಕಾಲಕಳೆಯುತ್ತಾರೆಯೇ ವಿನಹ ಚಿತ್ರಮಂದಿರಗಳಿಗೆ ಬರುವುದಿಲ್ಲ.

  • ನಿಮ್ಮ ಮುಂದಿನ ಯೋಜನೆಗಳೇನು ?

ನಡೆಸುತ್ತಿರುವುದನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ಧನಾತ್ಮಕವಾದ ಅಂಶಗಳ ಅಳವಡಿಕೆಗೆ ಸತತವಾಗಿ ಶ್ರಮಿಸುತ್ತೇನೆ, ಸಂಗೀತ ಕ್ಷೇತ್ರದಲ್ಲಿ ಕಠಿಣಶ್ರಮವಹಿಸಿ ತೊಡಗಿಕೊಳ್ಳುತ್ತಾ ನನ್ನನ್ನೇ ನಾನು ಉತ್ತಮವಾದುದನ್ನು ತಿದ್ದಿಕೊಳ್ಳುತ್ತಿರುತ್ತೇನೆ.