ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, February 11, 2010

ಶಿವರಾತ್ರಿ ಪ್ರ-'ಯಾಣ'


ಶಿವರಾತ್ರಿ ಪ್ರ-'ಯಾಣ'

ಶಿವನ ಒಂದು ರೂಪವಾದ ಭೈರವೇಶ್ವರನ ತಾಣ-'ಯಾಣ' ತುಂಬಾ ಮನಮೋಹಕ ಪ್ರದೇಶ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ದಿಂದ ಸುಮಾರು ೩೬ ಕಿಲೋ ಮೀಟರ್ ದೂರದಲ್ಲಿದೆ. ಕುಮಟಾದಿಂದ ಶಿರಸಿಗೆ ಹೋಗುವ ಮಾರ್ಗದಲ್ಲಿ ಕತಗಾಲ್ ಹತ್ತಿರದ ಆನೆಗುಂದಿ ಎಂಬಲ್ಲಿ ಇಳಿದುಕೊಂಡರೆ ಅಲ್ಲಿಂದ ಎಡಕ್ಕೆ ಸುಮಾರು ೧೬ ಕೀ.ಮೀ. ಹೋಗಬೇಕು. ಎರಡನೇ ಮಾರ್ಗ-ಶಿರಸಿಯಿಂದ ಮತ್ತಿಘಟ್ಟಕ್ಕೆ ಹೋಗುವ ದಾರಿಯಲ್ಲಿ ವಡ್ಡಿ ಕ್ರಾಸ್ ಎಂಬಲ್ಲಿ ಇಳಿದುಕೊಂಡರೆ ಸುಮಾರು ಕೀ.ಮೀ. ನಡೆಯಬೇಕು. ಸ್ವಂತದ ವಾಹನ ಇದ್ದರೆ ತುಂಬಾ ಅನುಕೂಲ, ನಡೆಯುವ ಪ್ರಮೇಯ ಇರುವುದಿಲ್ಲ, ಇದ್ದರೂ ಹೆಚ್ಚೆಂದರೆ ಕೀ.ಮೀ. ಅಷ್ಟೇ. ಉಳಿದುಕೊಳ್ಳಲು ಹತ್ತಿರದ ಪಟ್ಟಣಗಳೆಂದರೆ ಶಿರಸಿ ಅಥವಾ ಕುಮಟಾ ಮಾತ್ರ. ಎರಡೂ ಅಜಮಾಸ್ ೫೦ ಕೀ.ಮೀ. ದೂರ ಇವೆ. ಯಾಣದಲ್ಲಿ ಸದ್ಯಕ್ಕೆ ತಿಂಡಿ-ಊಟದ ವ್ಯವಸ್ಥೆ ಇರುವುದಿಲ್ಲ, ಪೂರ್ವ ತಯಾರಿ ಇಟ್ಟುಕೊಂಡೇ ಹೋದರೆ ಸೂಕ್ತ, ಇಲ್ಲವೆಂದರೆ ದಾರಿಯಲ್ಲಿ ಸಿಗುವ ಚಿಕ್ಕಪುಟ್ಟ ಅಂಗಡಿಗಳಿಂದ ಏನಾದರೂ ಕುರುಕಲು,ಬಿಸ್ಕತ್ ಪಡೆಯಬಹುದು ಅಷ್ಟೇ. ನೀರಿನ ತೊಂದರೆ ಇರುವುದಿಲ್ಲ, ನೈಸರ್ಗಿಕವಾಗಿ ಹರಿದು ಬರುವ ಮಿನರಲ್ ವಾಟರ್ ಲಭ್ಯ! ಇದೊಂದು ವಿಶಿಷ್ಟ ನೈಸರ್ಗಿಕ ಪ್ರವಾಸೀ ಸ್ಥಳ. ಕಾಡಿನ ಮಧ್ಯೆ ಯಾವ ಗೌಜು-ಗದ್ದಲವಿಲ್ಲದ ಪ್ರದೇಶ, ಹಸಿರು ಕಾನನ, ಎಂದಿಗೂ ಬತ್ತದ ನೀರಿನ ತೊರೆ ಇತ್ಯಾದಿ ಕಣ್ಣಿಗೆ 'ಹಬ್ಬ'ಕಟ್ಟುವ ಶಿವನ ವಾಸಸ್ಥಳ.

ಸ್ಥಳ ಪುರಾಣದಲ್ಲಿ ಭಸ್ಮಾಸುರ-ಮೋಹಿನಿ

ಕಲ್ಲಿನಿಂದ ಕೂಡಿದ ಭಸ್ಮವನ್ನು ಶಿವ ಕೋಪದಿಂದ ಬೀಸಾಡಿದಾಗ ದೈತ್ಯಶಕ್ತಿಯೊಂದರ ಉಗಮವಾಗುತ್ತದೆ. ಅವನೇ 'ಭಸ್ಮಾಸುರ' . ಹೀಗೆ ಹೆಸರು ಬರಲು ಕಾರಣ ಶಿವನಿಂದ ಅಸುರ ಪಡೆದ ವರ. ಹುಟ್ಟಿದ ತಕ್ಷಣ ಶಿವನನ್ನು ಒಲಿಸಿ-ಓಲೈಸಿ ತನ್ನ ಬಲಗೈಯನ್ನು ಯಾರ ತಲೆಯಮೇಲೆ ಇಡುತ್ತೇನೋ ಇಡಿಸಿಕೊಂಡವರು ಭಾಸ್ಮವಾಗಿಹೊಗಬೇಕು ಎಂಬ ವರವನ್ನು ಪಡೆದ. ಪಕ್ಕದಲ್ಲಿ ಅತಿ ಲಾವಣ್ಯವತಿಯಾದ ಶಿವೆಯನ್ನ ಕಂಡ. ಅವಳನ್ನೇ ಮೋಹಿಸಹೊರಟ. ಶಿವನ ಕೆಂಗಣ್ಣಿಗೆ ಗುರಿಯಾದ. ಶಿವನನ್ನೇ ಬೆದರಿಸಿ ಶಿವನ ಶಿರದ ಮೇಲೆ ಕೈ ಇಡುವುದಾಗಿ ಆರ್ಭಟಿಸಿದ. ಕಂಗಾಲಾದ ಶಿವ ಓಟಕ್ಕಿತ್ತ. ಅಟ್ಟಿಸಿಕೊಂಡು ಬಂದ ಭಸ್ಮಾಸುರ. ಈರ್ವರೂ ಓಡುತ್ತಾ ಓಡುತ್ತಾ ಯಾಣಕ್ಕೆ ಬಂದರು.

ಇಷ್ಟರಲ್ಲಿ ದೇವಗಣ ಸಭೆಸೇರಿದರು. ಏನಾದರೂ ಮಾಡಿ ಸಮಸ್ಯೆಯನ್ನು ಬಗೆಹರಿಸಬೇಕು! ಆಗ ಮಹಾವಿಷ್ಣು ಒಂದು ನಾಟಕವನ್ನು ರೂಪಿಸಿದ. ತನ್ನ ಶಕ್ತಿಯಿಂದ ಅತಿ ರೂಪವತಿಯಾದ 'ಮೋಹಿನಿ'ಯನ್ನು ಸೃಷ್ಟಿಸಿದ. ಮೋಹಿನಿ ಧರೆಗೆ ಬಂದಳು. ಭಸ್ಮಾಸುರ ಹತ್ತಿರದಲ್ಲಿ ಸುಳಿದಾಡಿದಳು. ಮೋಹಿನಿಯನ್ನು ಕಂಡ ಭಸ್ಮಾಸುರ ಅವಳಿಗೆ ಮನಸೋತ, ಅವಳು ಹೇಳಿದ್ದನ್ನೆಲ್ಲ ಮಾಡುವುದಾಗಿಯೂ ಹೇಗಾದರೂ ಅವಳು ತನ್ನವಳಾಗಬೇಕೆಂದು ಪರಿ ಪರಿಯಿಂದ ಅವಳಿಗೆ ದುಂಬಾಲುಬಿದ್ದ. ಮೋಹಿನಿ ತಾನು ಹೇಳಿದ ರೀತಿ ನೃತ್ಯವನ್ನು ಮಾಡಿದರೆ ಅವನನ್ನು ವರಿಸುವುದಾಗಿ ಹೇಳಿದಳು. ಇಬ್ಬರೂ ನೃತ್ಯಮಾಡಲು ಪ್ರಾರಂಭಿಸಿದರು. ನಿಧಾನವಾಗಿ ಮೋಹಿನಿ ತನ್ನ ಬಲಗೈಯನ್ನು ತನ್ನ ತಲೆಯಮೇಲೆ ಇಟ್ಟುಕೊಂಡಳು; ಅನುಸರಿಸುತ್ತಿರುವ ಭಸ್ಮಾಸುರ ಕೂಡ ಅದೇ ರೀತಿ ಮಾಡಿದ. ಕ್ಷಣದಲ್ಲಿ ಆತ ಅಲ್ಲೇ ಭಸ್ಮವಾದ!


ಶಿಲಾಮಯ, ನಿಸರ್ಗ್ ನಿರ್ಮಿತ, ಆಧಾರ ರಹಿತ ನಿಲುವು. ಒಂದನ್ನು ಭೈರವೇಶ್ವರ ಶಿಖರ ವೆಂದೂ ಇನ್ನೊಂದನ್ನು ಮೋಹಿನಿ ಶಿಖರವೆಂತಲೂ ಜನ ಗುರುತಿಸಿದ್ದಾರೆ. ಭೈರವೇಶ್ವರ ಶಿಖರ
ಅಗಲವಾಗಿದೆ, ಮೋಹಿನಿ ಅಮ್ಮನವರ ಶಿಖರ ಸ್ವಲ್ಪ ಮೊನಚಾಗಿದೆ. ನೋಡಲು ಮೋಹಿನಿ ಶಿಖರ ಎತ್ತರವಾಗಿ ಕಂಡರೂ ಭೈರವೇಶ್ವರ ಶಿಖರಕ್ಕಿಂತ ಮೋಹಿನಿ ಶಿಖರ ದೊಡ್ದದಾಗಿಲ್ಲ ಎಂಬುದು ಹೇಳಿಕೆ. ಮೋಹಿನಿ ಶಿಖರ ಬೆಳೆಯುತ್ತದೆಂದೂ ಆದರೂ ಭೈರವೇಶ್ವರ ಶಿಖರಕ್ಕಿಂತ ಎತ್ತರ ಬೆಳೆದಾಗ ತನ್ನಿಂದ ತಾನೇ ಶಿಖರದ ತುದಿ ಉದುರಿ ಬೀಳುತ್ತದೆಂದೂ ಅಲ್ಲಿನ ಜನ ಹೇಳುತ್ತಾರೆ. ಭೈರವೇಶ್ವರ ಶಿಖರದ ಒಳಗೆ ಗುಹೆಗಳಿವೆ, ನೋಡಲು ನಯನ ಮನೋಹರವಾಗಿವೆ, ಭೀತಿ ಹುಟ್ಟಿಸುವಷ್ಟು ದೊಡ್ಡದಾದಗುಹೆಗಳವು! ಇಂತಹ ಒಂದು ಮುಖ್ಯ ಗುಹೆಯಲ್ಲಿ ಭೈರವೇಶ್ವರ ದೇವರು ನೆಲೆಸಿದ್ದಾನೆ. ಹಿಂದೆ ನಡೆದ ಪುರಾಣೋಕ್ತ ಐತಿಹ್ಯದನೆನಪಿಗೆ ಈ ದೇವಸ್ಥಾನದಲ್ಲಿ ಶಿವ-ಮೋಹಿನಿ ಅಮ್ಮನವರಿಗೆ ಪೂಜೆ ಪ್ರತಿದಿನ ಸಲ್ಲುತ್ತದೆ.

ಇಲ್ಲಿ ಹತ್ತಿರದಲ್ಲಿಯೇ, ಕುಮಟಾದಿಂದ ಬರುವ ಮಾರ್ಗದಲ್ಲಿಯೇ ಒಂದು ಗುಡ್ಡವಿದ್ದು ಅದನ್ನು ಭಸ್ಮಾಸುರ ಬೂದಿಯಾದ ಸ್ಥಳವೆನ್ನುತ್ತಾರೆ, ಆಶ್ಚರ್ಯವೆಂದರೆ ಸುತ್ತಲ ಎಲ್ಲಾ ಗುಡ್ಡಗಳ ಮಣ್ಣು ಕೆಂಪು, ಇದು ಮಾತ್ರ ಕಪ್ಪು ಮಣ್ಣಿನಿಂದ ಕೂಡಿದೆ! ಇದು ವಿಜ್ಞಾನಿಗಳಿಗೂ ಸೋಜಿಗ ಉಂಟುಮಾಡಿದ ವಿಷಯವಾಗಿದೆ. ಯಾಣದ ದೇವರ ಗುಹೆಯಲ್ಲಿ ಕತ್ತಲು, ಇದನ್ನು ನೀಗಲು ಬಹಳ ಹಿಂದೆಯೇ ಸೌರ ವಿದ್ಯುತ್ ನಿಂದ ಉರಿಯುವ ದೀಪಗಳನ್ನು ಕೆಲ ವಿಜ್ಞಾನಿಗಳು ಬಂದು ಅಳವಡಿಸಿದ್ದಾರೆ. ಶಿಖರದಲ್ಲಿ ಅಲ್ಲಲ್ಲಿ ಜೇನು ಗೂಡುಗಳಿವೆ, ದೇವಸ್ಥಾನದಲ್ಲಿ ಸ್ವಚ್ಛತೆಯ ಕೊರತೆಯಾದಲ್ಲಿ, ಮೈಲಿಗೆಯಾದಲ್ಲಿ ಹೆಜ್ಜೇನುಗಳು
ಕಡಿಯುತ್ತವೆ
ಎಂಬ ಪ್ರತೀತಿ ಇದೆ. ಭೈರವೇಶ್ವರ ಗುಹಾಂತರ ದೇವಸ್ಥಾನದಲ್ಲಿ ನೀರು ಜೇನಹನಿಯ ರೀತಿ ದೇವರಮೇಲೆ ಸದಾ ತೊಟ್ಟಿಕ್ಕುತ್ತಿರುತ್ತದೆ. ಹಾಗೆ ತೊಟ್ಟಿಕ್ಕಿದ ನೀರು ಗುಹೆಯ ನೆಲದಲ್ಲಿ ಹರಿದು ಹೊರಗೆ ಹೋಗುತ್ತದೆ.

ಜಾತ್ರೆ
ಪ್ರತೀವರ್ಷ ಮಹಾಶಿವರಾತ್ರಿಯಂದು ಈ ದೇವಳದಲ್ಲಿ ಜಾತ್ರೆ ನಡೆಯುತ್ತದೆ. ಜಾತ್ರೆಯಲ್ಲಿ ಇಡೀದಿನ ನಾ ನಾ ಥರದ ಉತ್ಸವಗಳು, ಅಖಂಡ ಭಜನೆಗಳು, ಪಲ್ಲಕ್ಕಿ ಉತ್ಸವವೇ ಮೊದಲಾದ ಹಲವು ಸೇವೆಗಳು ನಡೆದು, ಶಿವರಾತ್ರಿಯ ಜಾಗರಣೆಯೊಂದಿಗೆ ಜಾತ್ರೆ ಕೊನೆಗೊಳ್ಳುವುದು. ಈ ಸಂದರ್ಭ ಸುತ್ತ-ಮುತ್ತಲ ಎಲ್ಲಾ ಪ್ರದೇಶಗಳಿಂದ ಸುಮಾರು ಹತ್ತಾರು ಸಾವಿರಜನ ಬಂದು ಹೋಗುತ್ತಾರೆ.

----
ಶಿವರಾತ್ರಿ

ಬೇಡನೊಬ್ಬ ಒಂದು ಸಂಜೆ ಆಹಾರ ಹುಡುಕುತ್ತ ಹೊರಟು ಒಂದು ಮೃಗವನ್ನು ಕಂಡು ಬೇಟೆಯಾಡಲು ಬೆನ್ನಟ್ಟಿ ಹೋಗುತ್ತಾನೆ. ಬಹಳ ಹಸಿದ ಕುಟುಂಬ,ಮನೆಯಲ್ಲಿ ಬೇರೆ ಏನೂ ತಿನ್ನಲು ಇರುವುದಿಲ್ಲ. ಹೀಗಾಗಿ ಬೇಟೆ ಸಿಗಲೇಬೇಕೆಂಬ ಹಠದಿಂದ ಮುಂದೆ ಮುಂದೆ ಹೋಗುತ್ತಾ ಕಾಡಲ್ಲಿ ಕತ್ತಲಾವರಿಸುತ್ತದೆ. ಕತ್ತಲಿನಲ್ಲಿ ಒಂದಷ್ಟು ದೂರ ನಡೆದ ಬೇಡ, ಬೇಸರಗೊಂಡು ತನ್ನ ಕುಟುಂಬವನ್ನು ನೆನೆಯುತ್ತ ಕ್ರೂರ ಮೃಗಗಳಿಂದ ತಪ್ಪಿಸಿಕೊಳ್ಳಲು ಆ ರಾತ್ರಿ ಕಾಡಲ್ಲೇ ಇರುವ ಯವುದೋ ಮರವೊಂದನ್ನೇರಿ ಕುಳಿತುಕೊಳ್ಳುತ್ತಾನೆ. ಏನೇ ಮಾಡಿದರೂ ಇಡೀ ರಾತ್ರಿ ಅವನಿಗೆ ನಿದ್ದೆ ಬರುವುದಿಲ್ಲ. ಹೀಗಾಗಿ ಮರದ ಟೊಂಗೆಯಲ್ಲಿ ಕೈಗೆಸಿಗುವ ಎಲ್ಲಾ ಎಲೆಗಳನ್ನು ಒಂದೊಂದಾಗಿ ಕಿತ್ತು ಕೆಳಗೆ ಹಾಕುತ್ತ ಬೇಸರ ಕಳೆಯುತ್ತಾನೆ. ಅವನ ಅರಿವಿಗೆ ಗೋಚರವಾಗದ ಒಂದು ಘಟನೆ ನಡೆಯುತ್ತದೆ, ಅದೆಂದರೆ ಆ ಮರದ ಕೆಳಗೆ ಒಂದು ಶಿವಲಿಂಗವಿದ್ದು, ಆ ಮರ ಬಿಲ್ವ ಪತ್ರೆಯದ್ದಾಗಿರುತ್ತದೆ! ರಾತ್ರಿಯಿಡೀ ಆತ ಹಾಕಿದ ಬಿಲ್ವದ ಎಲೆಯಿಂದ ಗೊತ್ತಿಲ್ಲದೇ ನಡೆದ ಆ ಪೂಜೆಯಿಂದ ಶಿವ ಪ್ರಸನ್ನನಾಗಿ ಅವನಿಗೆ ಪ್ರತ್ಯಕ್ಷ ದರುಶನವಿತ್ತು ಅವನ ಕಷ್ಟಗಳನ್ನು ಕಳೆಯುತ್ತಾನೆ. ಮುಂದೆ ಪ್ರತೀವರ್ಷ ಮಾಘಮಾಸದ ಕೃಷ್ಣಪಕ್ಷದ ಚತುರ್ದಶಿಯಂದು ಆ ರಾತ್ರಿ ’ಮಹಾಶಿವರಾತ್ರಿ’ ಎಂದು ಪರಿಗಣಿಸಲ್ಪಡುತ್ತದೆ; ಹಬ್ಬವಾಗಿ ದೇಶಾದ್ಯಂತ ಆಚರಿಸಲ್ಪಡುತ್ತದೆ.


ಶಿವನೊಬ್ಬ ಭಕ್ತರ ಭಕ್ತಾಗ್ರೇಸರ-ಬೋಳೆಶಂಕರ-ಬೋಲೆನಾಥ್
ನಿಜವಾಗಿಯೂ ಹೌದು. ನೀವು ಶಿವನ ಯಾವುದೇ ಕಥಾಮಾಲಿಕೆಯನ್ನು ತೆಗೆದುಕೊಳ್ಳಿ ಹಿಂದೆ-ಮುಂದೆ ನೋಡದೆ "ಭಕ್ತಾ , ನಿನ್ನ ಭಕ್ತಿಗೆ ಮೆಚ್ಚಿದ್ದೇನೆ, ಏನು ಬೇಕೋ ಕೇಳು", ಆಕ್ಷಣ ನಮ್ಮ ಶಿವ ತನ್ನನ್ನೇ ಮರೆತಿರುತ್ತಾನೆ! ಏನೋ ಕೇಳಿದರೂ "ತಥಾಸ್ತು"ಎಂದುಬಿಡುತ್ತಾನೆ! ಹೀಗೇ ಮಾಡಿ ರಾವಣನಿಗೆ ಆತ್ಮಲಿಂಗ ಕೊಟ್ಟ. ಹೀಗೇ ಮಾಡಿ ಭಕ್ತ ಮಾರ್ಕಾಂಡೇಯನಿಗೆ ಜೀವದಾನ ಕೊಟ್ಟ. ಜಪಿಸಿದರೆ ಹುಚ್ಚೆದ್ದು ಕುಣಿವ ವ್ಯಕ್ತಿತ್ವ ನಮ್ಮ ಈಶನದ್ದು. ಅಷ್ಟೇ ಕೋಪವೂ ಬರುತ್ತದೆ. ಅಷ್ಟೇ ಸ್ವಾಭಿಮನಿಯೂ ಹೌದು. ಶಿವನ ಕೋಪದಿಂದ ದಕ್ಷಯಜ್ಞವೇ ಒಂದು ದೊಡ್ಡ ಪ್ರಮಾದದ ಘಟನೆಯಾಯಿತು. ತನ್ನ ಭಕ್ತರನೇಕರಿಗೆ ವಿಶೇಷ ವರದಾನ ಮಾಡಿದ ಶಿವ " ದೇಹಿ " ಎಂದು ಬರುವವರಿಗೆ " ಅಸ್ತು " ಎಂದು ಕೊಟ್ಟುಬಿಡುವ ಕರುಣಾಮೂರ್ತಿ! ಬೇಡರ ಕಣ್ಣಪ್ಪನನ್ನು ನೋಡಿ, ಹಿರಣ್ಯಕಶಿಪುವನ್ನು ನೋಡಿ, ರಾವಣನನ್ನು ನೋಡಿ ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಶಂಭುವಿನಿಂದ ವರಪದೆದವರೇ.


' ಶಿವ 'ನೆಂದರೆ ಶುಭ ಎಂದರ್ಥ
ಶಿವನನ್ನು ಮೆಚ್ಚಿಸಲು ಹಲವಾರು ಪೂಜೆ-ಉಪಾಸನೆಗಳಿದ್ದರೂ ಗಜಚರ್ಮಧರ, ರುಂಡಮಾಲಧರ, ಭಸ್ಮವಿಲೇಪಿತ ಹೀಗೆಲ್ಲ ಕರೆಸಿಕೊಳ್ಳುವ ನಮ್ಮ ಸ್ವಯಂಭೂವಿಗೆ ನಮಕ-ಚಮಕಸಹಿತ
ರುದ್ರಾಭಿಷೇಕ, ಶ್ರೀರುದ್ರ ಇವುಗಳಿಂದಲೂ ಮೃತ್ಯುಂಜಯ,ಅಘೋರಾಸ್ತ್ರ ಮುಂತಾದ ಜಪಗಳಿಂದಲೂ ಶಿವ ಭಕ್ತರಿಗೆ ಸುಲಭಸಾಧ್ಯನಾಗುತ್ತಾನೆ. ರುದ್ರಪಾರಾಯಣಮಾಡುವುದರಿಂದ ಏಕಾಗ್ರತೆಯಿಂದ ಅದರ ಘೋಷವನ್ನು ಕೇಳುವುದರಿಂದ ನಮ್ಮ ರಕ್ತದೊತ್ತಡ ಸುಸ್ಥಿತಿಯಲ್ಲಿರುತ್ತದೆ[truly,scientifically proven sequence]. ಶ್ರೀರುದ್ರದ ಒಂದೊಂದು ಶ್ಲೋಕವೂ ಆಯುರ್ವೇದೀಯ ಔಷಧಿಗಳನ್ನು ಸೂಚಿಸುತ್ತದೆ. ರುದ್ರಪಾರಾಯಣದಿಂದ ಅನೇಕ ಹಂತದ ಮಾನಸಿಕ ವ್ಯಾಧಿಗಳು ನಿವಾರಣೆಯಾಗುತ್ತವೆ! ಅಭಿಷೇಕ ಇರುವಲ್ಲಿ ರುದ್ರವಿಲ್ಲದಿದ್ದರೆ ಅದು ಗೌಣ ! ಅಭಿಷೇಕದ ಕಲ್ಪನೆಯೇ ರುದ್ರದಿಂದ ಜನಿಸಿತೇನೋ ಎಂಬಷ್ಟು ಅದು ಅಭಿಷೇಕದ ಅವಿಭಾಜ್ಯ ಅಂಗ.

ಹರಿ-ಹರರಲ್ಲಿ ಭೇದವೆಣಿಸಬಾರದು
ಮೂಲ ಪರಬ್ರಹ್ಮನ ವಿವಿಧ ರೂಪಗಳಲ್ಲಿ ಎರಡು ರೂಪಗಳು. ಇವುಗಳಲ್ಲಿ ಭೇದ ಮಾಡಬಾರದು. ಹರಿ-ಹರ ಈರ್ವರೂ ಒಂದೇ. ನಮ್ಮ ಕೆಲವು ಹುಚ್ಚು ಆಚರಣೆಗಳಿಂದ ದೇವರನ್ನೇ divide & rule ಪಾಲಿಸಿಗೆ ಹಚ್ಚಿಬಿಟ್ಟಿದ್ದೇವೆ ನಾವು. ಇದನ್ನು ಗಮನಿಸಿಯೇ ಹಿರಿಯ ಕವಿ ಪು.ತಿ. ಅವರು 'ಹರಿಯ ಹೃದಯದಿ ಹರನ ಕಂಡೆನು ಹರನ ಹೃದಯದಿ ಹರಿಯನು.......' ಎಂಬ ಹಾಡನ್ನು ಬರೆದರು. ಶಿವ-ಕೇಶವ,ಶಂಕರ-ನಾರಾಯಣ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುವ ದೈವಶಕ್ತಿಯ ಮೂಲ ಒಂದೇ. ಆರಾಧನೆಗೆ ಮೂರ್ತರೂಪ ಮಾತ್ರ ಬೇರೆ.




ಶಿವ
ಅರ್ಧನಾರೀಶ್ವರ. ಶಿವ ಬಂದರೆ ಅಲ್ಲಿ ಶಿವೆಯೂ ಬಂದಳು ಎಂದೇ ತಿಳಿದಿರಬೇಕು. ಜಗದ ಹಿತಕ್ಕಾಗಿ ಸದಾ ಓಡಾಡುವ ಇವರನ್ನು " ಜಗತಃ ಪಿತರೌ ಒಂದೇ ಪಾರ್ವತೀ ಪರಮೇಶ್ವರೌ " ಎನ್ನುತ್ತಾರೆ, ಜಗತ್ತಿನ ತಂದೆ-ತಾಯಿ ಎಂದು ಗುರುತಿಸಲ್ಪಡುವ ಶಿವ-ಶಿವೆಯರನ್ನು ಸ್ಮರಿಸುತ್ತ ಶಿವನಲ್ಲಿ ಹೀಗೆ ಪ್ರಾರ್ಥಿಸೋಣ-






ಕರಚರಣ
ಕೃತಂ ವಾಕ್-ಕಾಯಜಂ ಕರ್ಮಜಂ ವಾ
ಶೃವನಯನಜಂ ವಾ ಮಾನಸಂ ವಾಪರಾಧಂ|
ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯಜಯ ಕರುಣಾ
ಬ್ಧೇ ಶ್ರೀ ಮಹಾದೇವ ಶಂಭೋ ||

[ ಹೇ ಪರಶಿವನೇ, ನಮ್ಮ ದೇಹ,ವಚನ,ಮನಸ್ಸು.ಇವುಗಳ ಕರ್ಮಗಳಿಂದಲೂ, ಕೇಳುವುದು-ನೋಡುವುದು ಮೊದಲಾದ ಪಂಚೇಂದ್ರಿಯಗಳಿಂದ ಎಸಗುವ ಕರ್ಮಗಳಿಂದಲೂ ದೋಷಪೂರಿತರಾಗುವ ನಮಗೆ ಯಾವುದು ಹಿತ-ಯಾವುದು ಅಹಿತ, ಯಾವುದು ಒಳ್ಳೆಯದು-ಯಾವುದು ಕೆಟ್ಟದ್ದು ಇದರಬಗೆಗೆ ಗೊತ್ತಿರದೇ, ನಮ್ಮ ಅಜ್ಞಾನದಿಂದ ಎಸಗುವ ಸಮಸ್ತದೋಷಗಳನ್ನು ದೂರಮಾಡಿ ನಮ್ಮನ್ನೆಲ್ಲ ಕ್ಷಮಿಸಿ ರಕ್ಷಿಸು, ಅಸತ್ಯದಿಂದ ಸತ್ಯದೆಡೆಗೆ,ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನಮಾರ್ಗದೆಡೆಗೆ ಕರೆದೊಯ್ಯು ಎನ್ನುವುದು ಇದರಲ್ಲಿ ಅಡಗಿದ ತಾತ್ಪರ್ಯ ]

|| ಹರನಮಃ ಪಾರ್ವತೀಪತಯೇ ಹರ ಹರ ಮಹಾದೇವ ||