ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, April 1, 2010

ನಶ್ವರದಲ್ಲಿರುವ ಶಾಶ್ವತ ನಾದ

ಶ್ರೀ ಆದಿ ಶಂಕರರು ' ಅಯಿಗಿರಿ ನಂದಿನಿ ' ಅಂತ ಅಮ್ಮನವರನ್ನು ಕಂಡು ಹಾಡಿ ನುತಿಸಿದರು. ಅದೇ ದಾಟಿಯಲ್ಲಿ ಬೇರೆ ಅರ್ಥದಲ್ಲಿ ಒಂದು ಹಾಡು ಬರೆಯುವ ಹೀಗೊಂದು ಪ್ರಯತ್ನ ನಡೆಯಿತು. ಪ್ರಕೃತಿಯಲ್ಲಿ ಒಂದು ಅಘೋಷಿತ ನಡೆಯಿದೆ, ಅಲ್ಲಿ ದೈವ ನಿರ್ಮಿತ ಪಂಚಭೂತಗಳ ವಿಲಂಬಿತ ಮತ್ತು ಶಾಶ್ವತ ಒಂದು ನಾದವಿದೆ. ಅದನ್ನು ಆಸ್ವಾದಿಸಲೇ ನಮಗೆ ಬಿಡುವೆಲ್ಲಿದೆ ? big bang ಅಂದರೆ ಕಿವಿ ನಿಮಿರುತ್ತದೆ ನಮಗೆ, ಆದರೆ ನಮ್ಮ ವೇದ-ಶಾಸ್ತ್ರಗಳು ತಮ್ಮ ಬೆಳಕಿಂಡಿಯಿಂದ ನಮಗೆ ಎತ್ತಿ ಕೊಡುತ್ತಿದ್ದರೆ ನಾವು ಬಾಲಿಶರಾಗುತ್ತೇವೆ; ಪೂರ್ವಾಗ್ರಹ ಪೀಡಿತರಾಗುತ್ತೇವೆ; ಹಿತ್ತಾಳೆಕಿವಿಯವರಾಗುತ್ತೇವೆ ! ನಮಗೆ ಅಮೇರಿಕ ಹೇಳಿದ್ದೇ ವೇದ. ಎಲ್ಟನ್ ಜಾನ್ ಬಾರಿಸಿದ್ದೇ ಗಿಟಾರು ! ನಮ್ಮ ಮೂಲ ಸಂಸ್ಕೃತಿಯ ಅಂದ-ಚಂದ ಯಾರಿಗೆ ಬೇಕು ಸ್ವಾಮಿ ? ಅದೆಲ್ಲಾ ಪುಸ್ತಕದ ಬದನೇಕಾಯಿ, ಕಾಲಹರಣ ಮಾಡುವ ಕಾಡುಹರಟೆ ಅಂದುಕೊಳ್ಳುತ್ತೇವೆ, ಅಲ್ಲವೇ ? ಶಾಲೆಯಲ್ಲಿ ನಮಗೆ ಇಂಗ್ಲೀಷ್ ಮಾಧ್ಯಮವೇ ಬೇಕು. ಮಕ್ಕಳು ಶಾಲೆಗೆ ಹೋದ ಮರುದಿನವೇ ಹರುಕು ಮುರುಕು ಆಂಗ್ಲಭಾಷೆಯಲ್ಲಿ 'ನೋ ಯಾ ಗೋ ಯಾ ' ಅಂದರೆ ನಮ್ಮೊಳಗೊಳಗೇ ಒಂಥರಾ ಅದಮ್ಯ ಆನಂದ, ಮೈಮನ ವೆಲ್ಲ ಗಾಳಿಯಿಂದ ಬಲೂನು ಬೀಗಿದಂತೆ ಬೀಗಿ ಖುಷಿಯೋ ಖುಷಿ ! ಎಲ್ಲರಲ್ಲೂ ಹೇಳಿಕೊಳ್ಳುವ ತವಕ! ಇನ್ನು ಸಿಕ್ಕಾಪಟ್ಟೆ ಬೇಕಾದ್ದನ್ನ ಬೇಡದ್ದನ್ನ ಎಲ್ಲವನ್ನೂ ತಿಂದು ತಿಂದು ಹೊಟ್ಟೆ ಬರಿಸಿಕೊಂಡು ಬೆಳಿಗ್ಗೆ ಉದ್ಯಾನದಲ್ಲಿ ವ್ಯಾಯಾಮ ಮಾಡಲು ಜಾಗಿಂಗ್ ಹೋಗುವಾಗ ದಾರಿಯಲ್ಲಿ ಅರ್ಧ ಕಾಪಿ ಕುಡಿದು ಪಾರ್ಕಿನಿಂದ ಮರಳಿ ಬರುವಾಗ ಪೂರಿಸಾಗು, ಕೇಸರಿಬಾತು ಕಂಪೆನಿಗೆ ಇಡ್ಲಿವಡೆ ಎಲ್ಲಾ ಮುಕ್ಕಿ ನೆಮ್ಮದಿಯಿಂದ ಜಾಗಿಂಗ್ ಪೂರೈಸಿ ಮರಳುತ್ತೇವೆ ! ಎಲ್ಲೋ ಯಾಕೋ ಸುಮ್ಮನೇ ಹುಡುಗರು ಹೊಡೆದಾಡಿದರೆ ರಾಜಕೀಯದ ಬಣ್ಣ ಹಚ್ಚಿ 'ಕೋಮು ಗಲಭೆ' ಎನ್ನುತ್ತೇವೆ ! ಪ್ರಕೃತಿ ಇವೆಲ್ಲವನ್ನೂ ನೋಡುತ್ತಾ ಸುಮ್ಮನೇ ನಮ್ಮೊಟ್ಟಿಗೆ ಹಾಗೆ ಸಾಗಿದೆ. ಅದು ನಮಗೆ ಮಿಥ್ಯಾಲೋಕದ ಹಲವು ಅನುಕೂಲಗಳನ್ನೂ ನೀಡದಂತೆ ಮಾಡಿ ನಾವು ಬಹಳ ಸುಖವೆಂದು ತಿಳಿದಾಗ ಸಮಸ್ಯೆಗಳನ್ನೂ ತಂದೊಡ್ಡುತ್ತದೆ ! ಹೀಗಾಗಿ ಪ್ರಕೃತಿಯಲ್ಲಿ ಅನನ್ಯವಾಗಿ ಅನುರಳಿಸುವ ಆ ನಾದವನ್ನು ಆಲಿಸಲು ಪ್ರಯತ್ನಿಸಿದರೆ ಪ್ರಕೃತಿಗೆ ಅನುಗುಣವಾಗಿ ನಡೆದರೆ ನಮಗೆ ಸಮಸ್ಯೆಗಳು ಕಡಿಮೆ ಬರಬಹುದು. ಇಲ್ಲಿ ನಭೋಮಂಡಲದ ಅವಕಾಶಗಳ ನಡುವೆ ಬ್ರಹ್ಮಾಂಡದ ಒಂದೇ ರಾಗದ ಕೂಗು ಸದಾ ಹೊಮ್ಮುತ್ತಿದೆ, ಅದನ್ನು ಹಲವರು ' ಓಂ' ಕಾರವೆಂದರೆ ಕೆಲವರು ಏನೋ ಶಬ್ಧಎಂದಿದ್ದಾರೆ, ವಿಜ್ಞಾನಿಗಳು ಇನ್ನೂ big bang ತಲೆಯಲ್ಲೇ ಇದ್ದಾರೆ ! ಆ ಸ್ವರವನ್ನು ಅಲೈಸುತ್ತ, ಚೋದ್ಯವಾಗಿ ಬರೆದ ಒಂದು ಹಾಡು ನಿಮಗಾಗಿ---




[ಚಿತ್ರ ಋಣ : ಅಂತರ್ಜಾಲ]

ನಶ್ವರದಲ್ಲಿರುವ ಶಾಶ್ವತ ನಾದ

ಚಕಚಕ ಚಂಚಲ ಮಿಂಚಿನ ಗೊಂಚಲ
ಕಂಚಿನ ಶಬ್ಧದ ಮಾರ್ದನಿಯು
ಪಂಚಭೂತಗಳ ಇಂಚಿಂಚಲು ಅದು
ಸಂಚರಿಸುವ ಪರಿ ಅದ್ಬುತವು

ವತ್ಸರ ವತ್ಸರ ಕಳೆದು ವಿಲಂಬಿತ

ತಾತ್ಸಾರವು ಇರದಿಹ ನಡೆಯು
ಕುತ್ಸಿತ ಬುದ್ಧಿಯ ಹುಲುಮಾನವಗಿದು
ತತ್ಸಮ ಪ್ರತಿರೋಧದ ಗಣಿಯು

ನಶ್ವರದೀಜಗ ಬಲು ಬಲು ಸೋಜಿಗ

ಶಾಶ್ವತ ಮಡಿಲೊಳು ಅವಿತಿಡುತ
ಅಶ್ವಗಂಧ ಗೋಮೇದಿಕ ಕೇಸರಿ
ಈಶ್ವರನಾಟದ ದಾಳಗಳು

ಕಾಮ ಕ್ರೋಧ ಲೋಭ ಮೋಹ ಮದ
ಆಮಶಂಕೆ ಥರ ಮತ್ಸರವು
ರಾಮ-ಹನುಮ ದೈವಾದಿಗಳನು ನಾವ್
ಕೋಮಿಗೀಡುಮಾಡುವ ವಿಧಿಯು

ತಜ್ಜನಿತ ಜನಿತ ನವತಾಪದ

ಮಜ್ಜನದೋಳ್ ಮನ ಕಲುಷಿತವು
ಅಜ್ಜ-ಅಜ್ಜಿಯರ ಬಿಡದೀ ಮಾಯೆಯು
ನುಜ್ಜಾದರು ಗುಜ್ಜಾಡುತಲಿ

ಘಾತುಕ ಪಾತಕ ಬುದ್ಧಿಯು ನಮ್ಮದು

ಜಾತಕದಲಿ ಅದು ಬರೆದಿಹುದು
ನೀತಿಶತಕ ನೂರೆಂಟು ಓದಿದರು
ಭೀತಿಯೇ ಇಲ್ಲದ ಭಂಡತನ

ಮಜಮಜ ಬಲುಮಜ ಬಲು ಮೋಜಿನ ಮಜ

ನಿಜದರಿವದು ಯಾತಕೆ ಬೇಕು ?
ಅಜಗಜಾಂತರವು ಇರೆ ತೊಂದರೆಯೇನ್ ?
ರಜೋಗುಣದಿ ಮುನ್ನಡೆಯುವೆವು

ಬೀಗುತ ತೇಗುತ ಗಾತ್ರದ ಉದರವ

ಹಾಗೆ ಒಮ್ಮೆ ನೇವರಿಸುತಲಿ
ನೀಗುತಪಾನವಾಯು ಮಂದಸ್ಮಿತ
ರೋಗದ ಕಣಜವ ಬಚ್ಚಿಡುತ