ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, March 31, 2010

ಕೈಲಾಗದು ಎಂದು ಕೈಕಟ್ಟಿ ಕುಳಿತರೆ !



[ಚಿತ್ರಗಳ ಋಣ: ಅಂತರ್ಜಾಲ ]

ಕೈಲಾಗದು ಎಂದು ಕೈಕಟ್ಟಿ ಕುಳಿತರೆ !

ಹಲವು ಸಲ ನಾವು ಎಷ್ಟು ಚಿಕ್ಕದಾಗಿ ವಿಚಾರಿಸುತ್ತೇವೆಂದರೆ ಸಣ್ಣದೊಂದು ಕೆಲಸ ಕೂಡ ಮಾಡಲು ನಮ್ಮಿಂದ ಸಾಧ್ಯವೇ ಇಲ್ಲ ಎಂದು. ಇಲ್ಲಾ ಅದು ನನ್ನಿಂದ ಸಾಧ್ಯವಿಲ್ಲ, 'ಇದು ನನ್ನಿಂದ ಆಗದ ಮಾತು','ಅದೆಂದರೆ ನನಗೆ ತಲೆನೋವು', 'ಅದರ ಹತ್ತಿರ ಕೂಡ ಸುಳಿಯೋದಿಲ್ಲ', 'ನಾನು ಮಾಡಲಾರೆನಪ್ಪಾ ಬೇಕಾದ್ರೆ ಅವರು ಮಾಡಿಕೊಳ್ಳಲಿ' -- ಈ ಧೋರಣೆ ಸರಿಯಲ್ಲ. ಮನುಷ್ಯ ಪ್ರಯತ್ನ ಶೀಲನಾಗಿರಬೇಕು. ಬಹಳ ಪ್ರಯತ್ನಿಸಿಯೂ ಫಲಸಿಗದಿದ್ದರೆ ಹಿಡಿದ ಮಾರ್ಗ ಬದಲಾಯಿಸಿ ಬೇರೆ ಮಾರ್ಗದಲ್ಲಿ ತೊಡಗಿಕೊಳ್ಳಬೇಕು. ಅಂತೂ ಸರಿಯಾದ ಸತ್ಸಂಕಲ್ಪದಿಂದ ಪ್ರಯತ್ನಶೀಲರಾದರೆ ಅದಕ್ಕೆ ಫಲ ಇದ್ದೇ ಇದೆ.

ತೊಡಗಿಕೊಳ್ಳುವ ಕೆಲಸಗಳಲ್ಲಿ ಎರಡು ಬಗೆ. ಒಂದು ಏಕ ವ್ಯಕ್ತಿ ನಿರ್ವಹಿಸಬಹುದಾದದ್ದು, ಇನ್ನೊಂದು ಬಹುವ್ಯಕ್ತಿಗಳು ಸೇರಿ ನಿರ್ವಹಿಸಬಹುದಾದ ಕೆಲಸಗಳು. ಅನೇಕ ವೈಯಕ್ತಿಕ ಕೆಲಸಗಳನ್ನು ಒಬ್ಬರೇ ಮಾಡಿಕೊಳ್ಳಬಹುದು. ಹಾಗೇಯೇ ಅನೇಕ ಸಾಮಾಜಿಕ ಕೆಲಸಗಳನ್ನೂ ಕೂಡ. ಉದಾಹರಣೆಗೆ
ವೈಯಕ್ತಿಕ ಕೆಲಸಗಳು --
ನಮ್ಮ ಬಟ್ಟೆ ನಾವೇ ಒಗೆಯುವುದು, ಬಟ್ಟೆ ಇಸ್ತ್ರಿ ಮಾಡಿಕೊಳ್ಳುವುದು, ಬೇಕಾದ ಸಾಮಾನು ತಂದುಕೊಳ್ಳುವುದು, ತಿಂಡಿ-ತೀರ್ಥ ತಯಾರಿಸಿಕೊಳ್ಳುವುದು, ಪಾತ್ರೆ-ಪಗಡೆ ತೊಳೆದುಕೊಳ್ಳುವುದು,
ಸಾಮಾಜಿಕ ಕೆಲಸಗಳು--
ಮಂದಿರ ಮಸೀದಿಗಳನ್ನು ಸ್ವಚ್ಛಗೊಳಿಸುವುದು, ಬೀದಿ ದೀಪಗಳು ಇರದಿದ್ದರೆ ಹಾಕಿಸಲು ಪ್ರಯತ್ನಿಸುವುದು, ವೃದ್ಧರು-ಕುರುಡರು ರಸ್ತೆ ದಾಟುವಾಗ ಸ್ವಲ್ಪ ಸಹಾಯ ಮಾಡುವುದು, ಸರಕಾರೀ ಶಾಲೆಗೆ ಬೇಕಾದ ಯವುದೋ ಪರಿಕರ ತಂದುಕೊಡುವುದು, ಬೀದಿ ಗುಡಿಸುವವರನ್ನು ಪ್ರೀತಿಯಿಂದ ಮಾತನಾಡಿಸಿ ಅವರಿಂದ ಅದು ಸರಿಯಾಗಿ ನಡೆಯುವ ಹಾಗೆ ನೋಡಿಕೊಳ್ಳುವುದು.
ಇವೆಲ್ಲ ಯಾರೂ ಮಾಡಬಹುದಾದ ಅತಿ ಚಿಕ್ಕ ಕೆಲಸಗಳು.





ಇನ್ನು ಕೆಲವು ಕೆಲಸಗಳು ಸಾಮೂಹಿಕವಾಗಿರುತ್ತವೆ. ಆದರೆ ಕೆಲವು ಕೆಲಸಗಳಿಗೆ ಸಮೂಹ ಶಕ್ತಿಯೇ ಬೇಕು. ಅಲ್ಲಿಯೂ ವೈಯಕ್ತಿಕ ಮತ್ತು ಸಾಮಾಜಿಕ ಎಂದು ಎರಡು ವಿಭಾಗಗಳು. ಉದಾಹರಣೆಗಳು
ವೈಯಕ್ತಿಕ ಕೆಲಸಗಳು---
ಸ್ವಂತಕ್ಕೆ ಮನೆ ಕಟ್ಟಿಕೊಳ್ಳುವುದು, ದೊಡ್ಡ ಜಮೀನನ್ನು ಉತ್ತು ಬಿತ್ತುವುದು ಇತ್ಯಾದಿ.
ಸಾಮಾಜಿಕ ಕೆಲಸಗಳು--
ರಸ್ತೆ, ಸೇತುವೆ ನಿರ್ಮಾಣ, ಕುಡಿಯುವ ನೀರಿನ ಪೂರೈಕೆಗೆ ಮಾರ್ಗ ರಚನೆ ಇತ್ಯಾದಿ.



ಕೆಲಸಗಳಲ್ಲಿ ನಮಗೆ ಆದರ್ಶವೆನ್ನಿಸುವ ಕೀಟಗಳು, ಪಶು-ಪಕ್ಷಿಗಳು ನಮ್ಮೆದುರಿಗೆ ಜೀವನಾಸಕ್ತಿಯನ್ನು ಕೆರಳಿಸಿ ಮನಸ್ಸಿಗೆ ಬೇಕಾದ ಆಸಕ್ತಿಯೆಂಬ ಇಂಧನವನ್ನು ದೊರಕಿಸಿಕೊಡುತ್ತವೆ. ಗೀಜಗ ಪಕ್ಷಿ ತನ್ನ ಗೂಡು ಅಲಂಕರಿಸಿಕೊಳ್ಳುವುದು, ಲಕ್ಷಾಂತರ ಗೆದ್ದಲುಗಳು ಸೇರಿ ಹುತ್ತ ಕಟ್ಟುವುದು, ಸಾವಿರಾರು ಜೇನುಗಳು ಸೇರಿ ಗೂಡುಕಟ್ಟುವುದು. ಮಾರೆತ್ತರ-ಅಗಲ ಬೆಳೆದ ಹುತ್ತ ನೋಡಿದರೆ ನಮಗೇ ಆಶ್ಚರ್ಯ, ಬಾಟಲಿಗಳಲ್ಲಿ ಲೀಟರ್ ಗಟ್ಟಲೆ ಜೇನುತುಪ್ಪ ನೋಡಿದಾಗ ನಮಗನ್ನಿಸುವುದು ಇಷ್ಟೊಂದು ಜೇನುತುಪ್ಪ ಬರುತ್ತದೆಯೇ ಎಂದು---ಯಸ್, ಎಲ್ಲವೂ ಸಾಧ್ಯ ಪ್ರಗತಿ ಪಥದಲ್ಲಿ, ಸದಾ ಚಲಶೀಲತೆಯಲ್ಲಿರುವ ವ್ಯಕ್ತಿತ್ವದಲ್ಲಿ, ಕೆಲಸಮಾಡುವ ಮನೋಧರ್ಮ ಬೆಳೆಸಿಕೊಂಡವರಲ್ಲಿ. ನಿಸರ್ಗ ನಮಗೆ ಇದರ ಜೊತೆಜೊತೆಗೆ ಒಗ್ಗಟ್ಟಿನ ತತ್ವವನ್ನೂ ಬೋಧಿಸುತ್ತದೆ. ಹಲವು ಗೆದ್ದಲುಗಳ ಪರಿಶ್ರಮ ಒಂದು ಹುತ್ತ! ಹಲವು ಜೇನುನೊಣಗಳ ಪರಿಶ್ರಮ ಹಲವು ಲೀಟರ್ ಜೇನುತುಪ್ಪ ! ಅಲ್ಲಿ ಜಗಳಗಳಿಲ್ಲ,ನಿತ್ಯದ ದೊಂಬಿಗಳಿಲ್ಲ, ಅಘೋಷಿತ ನಾಯಕತ್ವ, ಅದೇನೋ ಸಂಕೇತ- ನಮಗೆ ಅರ್ಥವಾಗದ್ದು, ಅವುಗಳಿಗೆ ಅರ್ಥವಾಗಿದ್ದು. ಕೆಲಸ ಯಾರು ಎಂದು ಹೇಗೆ ಎಲ್ಲಿ ಮಾಡಬೇಕೆಂಬುದನ್ನು ಯಾರು ನಿರ್ಣಯಿಸುತ್ತಾರೆ ಅಲ್ಲಿ ? ಹುತ್ತಕ್ಕೆ ಇದೇ ಆಕಾರವೆಂದೂ, ಜೇನುಗೂಡು ಹೀಗೇ ಜೋತು ಬಿದ್ದರೂ ಬೀಳದ ಅಂಟಿನಿಂದ ಕೂಡಿರಬೇಕೆಂದೂ ಯಾರು ಹೇಳಿದರು ? ಗೀಜಗ ಹಕ್ಕಿಗೆ ನೇಯ್ಗೆ ಕಲಿಸಿದ ಗುರು ಯಾರು. ಇದನ್ನು ನೋಡಿದಾಗ ನಮಗೆ ನಮ್ಮ basic instinct ಸರಿಯಾಗಿದ್ದರೆ ಕೆಲಸ ಮಾಡಲು ಮಾರ್ಗ ತನ್ನಿಂದ ತಾನೇ ತೋರುತ್ತದೆ.

ಶತಮಾನವೂ ಸರಿಯಾಗ ಮುಗಿದಿರದ ಇತಿಹಾಸದಲ್ಲಿ ನಾವು ಸರ್ ವಿಶ್ವೇಶ್ವರಯ್ಯನವರನ್ನು ನೋಡಿದ್ದೇವೆ. ಆ ಕಾಲದಲ್ಲಿ ರಭಸದಿಂದ ದುಮ್ಮಿಕ್ಕಿ ಹರಿವ ನದಿಗಳಿಗೆ ಒಡ್ಡು ಕಟ್ಟಲು ದೇಶದುದ್ದಗಲ ಸಂಚರಿಸಿದ ಕೆಲಸ ಮಾಡಿದ ಮಹಾನುಭಾವ ಅವರು. ಪ್ರಾರಂಭದಲ್ಲಿ ಕೆಲವರು ಅವರನ್ನು ಅಪಹಾಸ್ಯಮಾಡಿದರು. 'ತಲೆ ಇಲ್ಲದ ವ್ಯಕ್ತಿ ತರಲೆ ಕೆಲಸಕ್ಕೆ ಕೈಹಾಕಿದ್ದಾನೆ ಇದೆಲ್ಲಾ ಆಗುವುದು ಉಂಟೇ? ' ಆದರೆ ಅದು ಆಗಿದ್ದರಿಂದಲೇ ನಾವು ಇಂದು ಅನೇಕಕಡೆ ನೀರು, ವಿದ್ಯುಚ್ಛಕ್ತಿ ಪಡೆಯುತ್ತಿದ್ದೇವೆ.

ಆಗಲೂ ತರಲೆಗಳಿಗೇನೂ ಕಮ್ಮಿಯಿರಲಿಲ್ಲ. ಯಾರೋ ಒಬ್ಬಾತ ಕೇಳಿದ



" ನಾವು ಕಾರ್ಮಿಕರು ಇಷ್ಟು ಶ್ರಮ ವಹಿಸುತ್ತೇವೆ, ನಮಗೆ ಸಂಬಳ ಕಡಿಮೆ, ಆದರೆ ಎಂಜಿನೀಯರ್ ಎನಿಸಿಕೊಂಡು ಮೇಜು-ಕುರ್ಚಿ ಹತ್ತಿ ಕೂರುವ ವಿಶ್ವೇಶ್ವರಯ್ಯಗೆ ಮಾತ್ರ ಜಾಸ್ತಿ ಸಂಬಳವೇಕೆ ? "

ವಿಶ್ವೇಶ್ವರಯ್ಯನವರ ಕಿವಿಗೆ ಇದು ಬಿತ್ತು, ಅವರು ಆತನನ್ನು ಕರೆದು ಒಂದು ಕೋಳಿಮೊಟ್ಟೆ ತರಲು ಹೇಳಿದರು. ಆತ ತಂದ. ಅದನ್ನು ಮೇಜಿನಮೇಲೆ ನೆಟ್ಟಗೆ ನಿಲ್ಲಿಸುವಂತೆ ಹೇಳಿದರು, ಆತ ಪ್ರಯತ್ನಿಸಿ ಸೋತ. ತಾವು ನಿಲ್ಲಿಸುವ ಪ್ಲಾನ್ ಹೇಳಿ ಮಾಡಿ ತೋರಿಸಿದರು- ಒಂದು ಉಂಗುರವನ್ನು ಮೇಜಿನಮೇಲಿಟ್ಟು ಅದರಲ್ಲಿ ಮೊಟ್ಟೆ ನಿಲ್ಲಿಸಿದರು. ಆಮೇಲೆ ಹೇಳಿದರು ವಿಶ್ವೇಶ್ವರಯ್ಯನ ಇಂತಹ ಪ್ಲಾನಿಗೆ ಸಂಬಳವಪ್ಪಾ ಎಂದು. ವಿಶ್ವೇಶ್ವರಯ್ಯ ಪಡೆದ ಸಂಬಳದ ಬಹುಭಾಗವನ್ನು ಸಮಾಜಕ್ಕಾಗಿಯೇ ಕೊಟ್ಟರು! --ಇದೂ ಕೂಡ ಸ್ತುತ್ಯಾರ್ಹ. ನಮ್ಮಲ್ಲಿ ಸಂಬಳ ಪಡೆದ ನಾವು ಹತ್ತು ರೂಪಾಯಿ ದಾನವಾಗಿ ಕೊಡುವಾಗ ಹಿಂದೆ-ಮುಂದೆ ನೋಡುತ್ತೇವೆ, ಆದರೆ ಮಹಾತ್ಮರು ದಾನ ಮತ್ತು ತ್ಯಾಗಗಳನ್ನು ಮೈಗೂಡಿಸಿಕೊಂಡಿರುತ್ತಾರೆ.



ಹೀಗೇ ಇಂತಹ ವಿಶ್ವೇಶ್ವರಯ್ಯ ಅಂದಿನ ದೊಂದಿ ದೀಪದ ಕಾಲದಲ್ಲಿ ಅದು ಹೇಗೆ ಅಷ್ಟೊಂದು ಕ್ರಿಯಾಶೀಲರಾದರು ? ಅಲ್ಲವೇ ? ಅವರು ಮಾಡಲೇಬೇಕಾದ ಕೆಲಸವಂತೂ ಅದಾಗಿರಲಿಲ್ಲ, ಆದರೆ ಭವಿಷ್ಯದ ದೇಶದ ಕನಸನ್ನು ಕಂಡ ಭವ್ಯ ಭಾರತದ ಭಾಗ್ಯ ವಿಧಾತ ಅವರು. ತಮ್ಮ ವೈಯಕ್ತಿಕ ಜೀವನವನ್ನು ಕಡೆಗಣಿಸಿ ಸಮಾಜಮುಖಿಯಾಗಿನಿಂತು ಪ್ರಜೆಗಳ ಕ್ಷೇಮಕ್ಕಾಗಿ ತ್ಯಾಗ ಮಾಡಿದ ಕರ್ಮಯೋಗಿ ಅವರು. ಬೀದಿಯಲ್ಲಿ ಯಾರೋ ಅಪಘಾತಕ್ಕೀಡಾದರೆ ಸಂಬಂಧವೇ ಇಲ್ಲವೇನೋ ಎಂದುಕೊಂಡು ಸಾಗುವ ನಮಗೂ ಸಮಾಜದಲ್ಲಿ ಯಾರಿಗೂ ತೊಂದರೆಯಾಗದಿರಲಿ ಎಂಬ ವಸುದೈವಕುಟುಂಬ ಉದ್ದೇಶ ಹೊಂದಿ ಬದುಕಿದ್ದ ಅವರಿಗೂ ಅಜಗಜಾಂತರ ! ನಾವು ಸಂಬಳ-ಸಮಯ ಈ ಲೆಕ್ಕ ಮಾತ್ರ ಸರಿಯಾಗಿ ಕಲಿಯುತ್ತೇವೆ, ಆದರೆ ನಾವೇನು ಮಾಡಿದೆವು-ಏನು ಕೊಟ್ಟೆವು ಅದು ನಮಗೆ ನೆನಪಿಗೆ ಬರುವುದಿಲ್ಲ,ಬೇಕಾಗುವುದೂ ಇಲ್ಲ. ಇದು ಸರಿಯೇ ? ಬೀದಿಯಲ್ಲಿ ನಾಯಿಯೂ ಹಂದಿಯೂ ಬದುಕುತ್ತವೆ, ಅವುಗಳದ್ದೂ ಜೀವನವೇ. ಕೆಲಸಮಯದ ನಂತರ ಸತ್ತುಹೋಗುತ್ತವೆ-ಗೊತ್ತಿರದ ಇತಿಹಾಸ, ಅವುಗಳ ನಡೆಯೇ ಹಾಗೆ. ಬದುಕಿದರೆ ಇಂತಹ ಬದುಕಿಗೆ ಹೊರತಾದ ಧೀರ, ಗಂಭೀರ, ವೀರ ಬದುಕನ್ನು ತಮ್ಮ ಸಾಧನೆಯಿಂದ ತೋರಿಸುವ ಬದುಕು ಬದುಕಬೇಕು. ವೀರ ಎಂದ ತಕ್ಷಣ ಮಚ್ಚು-ಲಾಂಗು ಝಳಪಿಸುವುದಲ್ಲ-ಅದು ರೌಡಿಸಂ, ಧೀರ ಎಂದ ತಕ್ಷಣ ಹದಿನೆಂಟು ಮದುವೆಯಾಗಿ ನೂರಿಪ್ಪತ್ತು ಮಕ್ಕಳನ್ನು ಹುಟ್ಟಿಸುವುದಲ್ಲ-ಅದು ಪಿಡುಗು, ಗಂಭೀರ ಎಂದಾಕ್ಷಣ ಯಾರಿಗೂ ಉಪಕರಿಸದೇ ಮುಖ ಸಿಂಡರಿಸಿ ತನ್ನ ಪಾಡಿಗೆ ತಾನು ಕೆಲಸ ನಿರ್ವಹಿಸುವುದಲ್ಲ- ಅದು ವ್ಯರ್ಥ.

ಹಳ್ಳಿಯ ಮತ್ತು ಪಟ್ಟಣದ ಕಬ್ಬಿನಾಲೆಯ ಕಥೆ ನೆನಪಾಗುತ್ತಿದೆ-
ಹಳ್ಳಿಯಲ್ಲಿ ಕಬ್ಬಿನಾಲೆ ತಾವು ನೋಡಿರುತ್ತೀರಿ, ಅಲ್ಲಿ ಹೋರಿಯೊಂದು ಗಾಣವನ್ನು ತಿರುಗಿಸುವಂತಹ ವ್ಯವಸ್ಥೆ ಇರುತ್ತದೆ, ಹೋರಿಯ ಕೊರಳಿಗೆ ಒಂದು ಗಂಟೆ. ಎಲ್ಲೋ ಮೂಲೆಯಲ್ಲಿದ್ದು ಒಬ್ಬಾತನೆ ಬೆಲ್ಲದ ಕೊಪ್ಪರಿಗೆ ಮತ್ತದರ ಬೆಂಕಿ ಎಲ್ಲವನ್ನೂ ನಿರ್ವಹಿಸುತ್ತಾ ಕೇವಲ ತನ್ನ ' ಹೇ ..ಹೇ ..' ಎಂಬ ಶಬ್ಧದಿಂದ ಹೋರಿ ತಿರುಗುತ್ತಿರುವಂತೆ ಮಾಡುವುದು ಗಾಣದವನ ಕೆಲಸ, ಅಲ್ಲಿ ಆತ ಗಂಟೆಯ ಸದ್ದನ್ನು ಆಲಿಸುತ್ತಿರುತ್ತಾನೆ, ಗಂಟೆ ಕೇಳಿ ಬರುತ್ತಿದ್ದರೆ ಹೋರಿ ತಿರುಗುತ್ತಿದೆ ಎಂದು ಅರ್ಥ. ಅದು ಹಳ್ಳಿಯ ಹೋರಿ ಅದಕ್ಕೇ ಹಾಗೆ ತಿರುಗುತ್ತಿರುತ್ತದೆ. ಪಟ್ಟಣದ ಹೋರಿಗೆ ತಲೆ ಜಾಸ್ತಿ ! ಅದೂ ಕೆಟ್ಟವಿಚಾರದಲ್ಲಿ ! ಇಲ್ಲಿನ ಹೋರಿ ಯಜಮಾನಿಗೆ ಗಂಟೆ ಸದ್ದು ಕೇಳಿಸಿದರೆ ಸಾಕು ಎಂಬುದನ್ನು ಅರಿತು ನಿಂತಲ್ಲೇ ಕೊರಳನ್ನು ಅಲ್ಲಾಡಿಸುತ್ತದೆ ! ಬಡಪಾಯಿ ಗಾಣದವ ತಿರುಗಿ ನೋಡುವವರೆಗೂ ಹಾಗೇ ನಡೆದಿರುತ್ತದೆ. ಇದು ಮೈಗಳ್ಳತನಕ್ಕೆ ಒಂದು ಉದಾಹರಣೆ ಅಷ್ಟೇ !



ಸಜ್ಜನರು-ಮಾಹತ್ಮರು ಅನೇಕರು ಹೇಗೆ ಬದುಕಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರ ಬಗೆಗೆ ಓದಿಕೊಂಡು, ಅವರ ಆದರ್ಶಗಳನ್ನು ನಮ್ಮದಾಗಿಸಿಕೊಂಡು ಒಳ್ಳೆಯ ಸಂಕಲ್ಪದಿಂದ, ಒಳ್ಳೆಯ ಆಶಯ ಹೊತ್ತು, ಹೊತ್ತು ಕಳೆಯುವಾಗ ಚಿಂತನೆ ಮಾಡಿ ಕಳೆಯೋಣ, ಕ್ರಿಯಾಶೀಲರಾಗೋಣ, ಕೆಲಸ ಮಾಡೋಣ, ನಿಸ್ವಾರ್ಥರಾಗೋಣ, ಭಾರತ ಗುಡಿಯ ಕಟ್ಟೋಣ!