ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, July 15, 2010

ದೊಡ್ಡವರಾಗಿ !



ದೊಡ್ಡವರಾಗಿ !


ಇದೇನಪ್ಪಾ ನಾವೆಲ್ಲಾ ದೊಡ್ಡವರಾಗಿ ಬಹಳ ಸಮಯವೇ ಸರಿಯಿತಲ್ಲ, ಇನ್ನೂ ದೊಡ್ಡವರಾಗಿ ಎಂದರೆ ಏನಿದರರ್ಥ ಎಂಬ ಯೋಚನೆ ಸಹಜ. ಆದರೆ ದೊಡ್ಡವರಾಗಿ ಎನ್ನಲು ಕಾರಣವಿದೆ. ಅದನ್ನು ಮುಂದೆ ನೀವೇ ತಿಳಿಯುತ್ತೀರಿ.

ಬಹಳ ಜನ ಹಾಗೇ ಗಾಳಿಗೆ ಮುದುಕರಾಗಿಬಿಟ್ಟಿದ್ದಾರೆ ಎನ್ನುವುದು ನಮ್ಮಲ್ಲಿನ ಒಂದು ಮಾತು! ಗಾಳಿಗೆ ಮುದುಕಾಗುವುದು ಅಂದರೇನು ? ಬದುಕಿನಲ್ಲಿ ಯಾವೊಂದೂ ಸಣ್ಣ ಜವಾಬ್ದಾರಿಯನ್ನೂ ಹೊರದೇ, ಹಲವಕ್ಕೆ ಪರಾವಲಂಬಿಯಾಗಿ, ಸ್ವಾರ್ಥಿಯಾಗಿ ಬರೇ ತನ್ನ ಬದುಕೊಂದನ್ನೇ ನೋಡಿಕೊಂಡಿರುವ ಹಲವು ವಿಷಯಗಳಲ್ಲಿ ಅನುಭವ ಶೂನ್ಯರಾದ ವ್ಯಕ್ತಿಗಳನ್ನು ತಮಾಷೆಗೆ ’ಗಾಳಿಗೆ ಮುದುಕಾದವರು’ ಅಥವಾ ಗಾಳಿಗೇ ಕೂದಲೆಲ್ಲ ಹಣ್ಣಾದವರು ಎನ್ನುವುದು ನಮ್ಮಲ್ಲಿನ ವಾಡಿಕೆ!

ಮನುಷ್ಯ ಬೆಳೆಯ ಬೇಕಾದರೆ ತನ್ನೊಳಗಿನ ಹಲವು ಅನಿಷ್ಟಗಳನ್ನು ತೊಡೆದುಹಾಕಬೇಕು. ಅದರಲ್ಲಿ ಮುಖ್ಯವಾದವು ಅಸೂಯೆ ಮತ್ತು ಸಣ್ಣತನ! ನಮ್ಮ ಸಹೋದ್ಯೋಗಿಗೆ ಪ್ರಮೋಶನ್ ಬಂದಿದ್ದಕ್ಕಾಗಿ, ಪಕ್ಕದ ಮನೆಯವರಿಗೆ ಲಾಟರಿಯಲ್ಲಿ ಲಕ್ಷರೂಪಾಯಿ ಸಿಕ್ಕಿದ್ದಕ್ಕಾಗಿ, ಎದುರು ಮನೆ ಹುಡುಗಿ ನಮ್ಮ ಮಗಳಿಗಿಂತ ಹೆಚ್ಚಿನ ಅಂಕ ಗಳಿಸಿದ್ದಕ್ಕಾಗಿ, ಆಚೆಮನೆ ಸೀತಮ್ಮ ಸುಂದರ ರೇಷ್ಮೆ ಸೀರೆ ಖರೀದಿಸಿದ್ದಕ್ಕಾಗಿ, ವಿಪಕ್ಷದಲ್ಲಿ ಕುಳಿತ ನಮಗೆ ಆಡಳಿತ ನಡೆಸುತ್ತಿರುವ ಪಕ್ಷದ ಯಾವುದೋ ಸಾಧನೆ ಧುತ್ತೆಂದು ಕಣ್ಣಿಗೆ ಬಿದ್ದುದಕ್ಕಾಗಿ, ಅಷ್ಟೆಲ್ಲಾ ಪ್ರೀತಿಸುತ್ತಿದ್ದ ಆ ಹುಡುಗಿ ಕೈಕೊಟ್ಟು ಇನ್ನೊಬ್ಬನ ಜೊತೆ ಮದುವೆಯಾಗುತ್ತಿರುವುದಕ್ಕಾಗಿ, ಇದೇ ಓಣಿಯ ಕೊನೇ ಮನೆಯಲ್ಲಿರುವ ಚಿಕ್ಕ ಹುಡುಗ ರಮೇಶ ಸಾಫ್ಟ್ ವೇರ್ ಎಂಜಿನೀಯರ್ ಆಗಿ ರಾಶಿ ಸಂಬಳ ಪಡೆಯುತ್ತಿರುವುದಕ್ಕಾಗಿ ಹೀಗೆ ಹಲವಾರು ಕಾರಣಗಳಿಗೆ ನಾವು ಒಂದಿಲ್ಲೊಂದು ಸಮಯ ಮತ್ಸರಿಸುತ್ತೇವೆ. ನಮಗೆ ದಕ್ಕದ ಆ ಭಾಗ್ಯಕ್ಕಾಗಿ ಕೈಕೈ ಹಿಸುಕಿಕೊಳ್ಳುತ್ತೇವೆ, ಆಡಲೂ ಆಗದೆ ಅನುಭವಿಸಲೂ ಆಗದೆ ನಮ್ಮೊಳಗೇ ನಾವು ಕಾಯುತ್ತೇವೆ-ಬೇಯುತ್ತೇವೆ! ಒಂದು ಕ್ಷಣ ವಿವೇಚಿಸಿದರೆ ನಮಗೆ ತಿಳಿದು ಬರುವ ಸೀದಾ ಸಾದಾ ಅಂಶ-ನಾವು ನಮಗೆ ಸಂಬಂಧವೇ ಇಲ್ಲದ ಯಾವುದೋ ವಿಷಯಕ್ಕಾಗಿ ಅಷ್ಟೆಲ್ಲಾ ತಲೆಕೆಡಿಸಿಕೊಂಡಿರುತ್ತೇವೆ. ಇದು ಬೇಕೆ?

ಹಿಂದಕ್ಕೆ ಅವಿಭಕ್ತ ಕುಟುಂಬ ಪದ್ಧತಿ ಜಾರಿಯಲ್ಲಿತ್ತು. ಇಂದು ಕೇವಲ ಟಿ.ವಿ. ಪರದೆಯಲ್ಲಿ ಅಪರೂಪಕ್ಕೆ ಕಾಣಬಹುದಾದ ಇಂತಹ ಕುಟುಂಬಗಳು ಹಿಂದೆ ಬಹಳವಾಗಿದ್ದವು. ಅಲ್ಲಿ ಅಜ್ಜ-ಅಜ್ಜಿ, ಅಪ್ಪ-ಅಮ್ಮ, ದೊಡ್ಡಪ್ಪ-ದೊಡ್ಡಮ್ಮ, ಚಿಕ್ಕಪ್ಪ-ಚಿಕ್ಕಮ್ಮ, ಅತ್ತೆ, ಚಿಕ್ಕಪ್ಪನ ಮಕ್ಕಳು, ದೊಡ್ಡಪ್ಪನ ಮಕ್ಕಳು, ಮತ್ತೊಬ್ಬ ದೊಡ್ಡಪ್ಪನ ಕುಟುಂಬ ಮತ್ತು ಅವರ ಮಕ್ಕಳು, ಇನ್ನೊಬ್ಬ ಸಣ್ಣ ಚಿಕ್ಕಪ್ಪ-ಅವರ ಕುಟುಂಬ-ಮಕ್ಕಳು ಹೀಗೇ ಹಲವಾರು ಅಣ್ಣ-ತಮ್ಮಂದಿರು ಸೇರಿ ಒಂದೇ ಮನೆಯಲ್ಲಿ ಅಡಿಗೆ-ಊಟ-ಆಟ ಎಲ್ಲವನ್ನೂ ನಡೆಸುತ್ತ ಹಾಯಾಗಿ ಸುಖದಿಂದಿದ್ದರು. ಮನೆಯಲ್ಲಿ ಯಾರಾದರೂ ಚಿಕ್ಕ ಮಕ್ಕಳಿದ್ದರೆ ಅವುಗಳ ಆರೈಕೆಯನ್ನು ಮುದಿ ಜೀವಗಳು ಕೈಲಾಗುವವರೆಗೂ ಬಹಳವಾಗಿ ನಡೆಸಿಕೊಡುತ್ತಿದ್ದವು. ಮಕ್ಕ್ಳಿಗೆ ಕಥೆ-ಕವನ, ದೇವರ ಸ್ತೋತ್ರ ಇವುಗಳನ್ನೂ ನೀತಿ ಕಥೆ-ಪಂಚತಂತ್ರದ ಕಥೆ ಇವುಗಳನ್ನೆಲ್ಲಾ ಹೇಳುತ್ತಾ ಮುಂದಿನ ಪೀಳಿಗೆಗೆ ಬೇಕಾಗುವ ನೈತಿಕತೆಯನ್ನು ಆ ಮೂಲಕ ಕುಟುಂಬದ ಹಿರಿಯರು ಧಾರೆ ಎರೆಯುತ್ತಿದ್ದರು. ಇಂತಹ ಕುಟುಂಬಗಳಲ್ಲಿ ಬಟ್ಟೆ-ಬರೆ ಖರೀದಿ, ಹೆಂಗಸರಿಗೆ ಬೇಕಾಗುವ ಬಳೆ-ಓಲೆ ಇತ್ಯಾದಿ ಖರೀದಿ, ಮಕ್ಕಳ ಆಟಿಕೆ ಖರೀದಿ, ಶಾಲೆಗೆ ಹೋಗುವ ಒಂದೇ ಓರಗೆಯ [ಅಣ್ಣ-ತಮ್ಮಂದಿಅರ್ ಮಕ್ಕಳು]ಮಕ್ಕಳಿಗೆ ಪುಸ್ತಕಗಳ ಖರೀದಿ ಇವನ್ನೆಲ್ಲ ಒಟ್ಟಾಗಿ ಒಂದೇ ಸಲ ಮಾಡುತ್ತಿದ್ದರು. ಅಂಗಿ, ಸೀರೆ, ಮಕ್ಕಳ ಅಂಗಿ-ಚಡ್ಡಿ ಇಂತಹ ಬಟ್ಟೆಗಳನ್ನು ಸ್ಕೂಲ್ ಯೂನಿಫಾರ್ಮ್ ಇದ್ದಹಾಗೇ ಪನ್ನಾ ಲೆಕ್ಕದಲ್ಲಿ ಒಟ್ಟಿಗೇ ಖರೀದಿಸಿ ಅಮೇಲೆ ಅವರವರ ಅಳತೆಗೆ ತಕ್ಕಂತೆ ಹೊಲಿಸಿಕೊಳ್ಳುತ್ತಿದ್ದರು. ಕೇವಲ ವರ್ಷಕ್ಕೊಂದಾವರ್ತಿ ಜವಳಿ ತರುವುದು ಅಂತಲೇ ಇರುತ್ತಿತ್ತು. ಮನೆಯ ಯಾರಿಗೇ ಯಾವುದೇ ಹೆಚ್ಚು-ಕಮ್ಮಿ ಎನಿಸಿದರೂ ಹೊಂದಾಣಿಕೆಯೇ ಜೀವನದ ಸೂತ್ರವಾಗಿತ್ತು. ವಸ್ತು-ಒಡವೆಗಳನ್ನು ಸಂಖ್ಯೆಯಲ್ಲಿ ಕಮ್ಮಿ ಇದ್ದರೆ ಯಾರದರೂ ಉದಾರವಾಗಿ ಅದನ್ನು ಕೆಲವರು ಬಳಸಿಕೊಳ್ಳಲಿ ಎಂದು ಸುಮ್ಮನಿರುತ್ತಿದ್ದರು.

ಇಂತಹ ಒಂದು ಮನೆಯಲ್ಲಿ ಇಬ್ಬರು ಚಿಕ್ಕ ಹೆಣ್ಣುಮಕ್ಕಳು [ಅಣ್ಣ-ತಮ್ಮನ ಮಕ್ಕಳು] ಒಂದೇ ಇರುವ ಮಲ್ಲಿಗೆಯ ದಂಡೆಗಾಗಿ ಜಗಳಕಾದರು. ಒಬ್ಬಳ ಅಪ್ಪ ಮಧ್ಯೆ ಬಂದು ತನ್ನ ಮಗಳನ್ನು ಚೆನ್ನಾಗಿ ಗದರಿಸಿ ಇಸಿದುಕೊಂಡು ಇನ್ನೊಬ್ಬ ಹುಡುಗಿಗೆ ಅದನ್ನು ಕೊಟ್ಟ. ಆ ಹುಡುಗಿ ಸಂತೋಷಗೊಂಡು ತನ್ನ ತಂದೆ-ತಾಯಿಯೆಡೆಗೆ ನಡೆದಳು.--ಇಲ್ಲಿ ಮೊದಲನೇ ಹುಡುಗಿ ತನ್ನ ಕೈಲಿರುವ ಮಲ್ಲಿಗೆ ದಂಡೆಯನ್ನು ತ್ಯಾಗಮಾಡ್ಬೇಕಾಯಿತು, ಹಾಗೆ ಮಾಡಲು ಮನಸ್ಸು ಮಾಡಿಸಿದ್ದು ಈ ಹುಡುಗಿಯ ಅಪ್ಪ. ಈತನಿಗೆ ಆ ಇನ್ನೊಬ್ಬ ಹುಡುಗಿ ತನ್ನ ಸಹೋದರನ ಮಗಳೇ ತಾನೆ-ಚೆನ್ನಾಗಿರಲಿ ಎಂಬ ಭಾವವಿತ್ತು. ತನ್ನ ಮಗಳಿಗೆ ಇಲ್ಲದಿದ್ದರೂ ಸರಿ ಅವಳು ಚೆನ್ನಗಿರಲಿ ಎಂದು ದೊಡ್ಡಮನಸ್ಸಿನಿಂದ ಇಸಿದುಕೊಟ್ಟಿದ್ದಾನೆ. ಈ ಥರದ ಹಲವು-ಹತ್ತು ಘಟನೆಗಳು ಅವಿಭಕ್ತ ಕುಟುಂಬಗಳಲ್ಲಿ ಹಾಸುಹೊಕ್ಕಾಗಿದ್ದವು. ಅಲ್ಲಿ ದುಡ್ಡಿನ ದುರಹಂಕಾರವಿರಲಿಲ್ಲ, ಬಡತನದ ಬವಣೆ ಗೊತ್ತಿರಲಿಲ್ಲ. ಇಡೀ ಕುಟುಂಬದ ಸದಸ್ಯರು ಒಟ್ಟಾಗಿ ದುಡಿಯುತ್ತಿದ್ದರು, ಒಟ್ಟಾಗಿ ತಿನ್ನುತ್ತಿದ್ದರು, ಒಟ್ಟಾಗಿ ಕುಳಿತು ದೈನಂದಿನ ಆಗು-ಹೋಗುಗಳನ್ನು ಪರಸ್ಪರ ಮೆಲುಕು ಹಾಕುತ್ತಿದ್ದರು. ಒಬ್ಬರ ಅನುವು-ಆಪತ್ತಿನಲ್ಲಿ ಇಡೀ ಕುಟುಂಬವೇ ನೆರವಿಗೆ ನಿಲ್ಲುತ್ತಿತ್ತು. ಒಬ್ಬ ಕಾಯಿಲೆಯಿಂದ ಬಳಲುತ್ತಿದ್ದರೆ ಮಿಕ್ಕುಳಿದವರು ಆತನೂ ಸೇರಿದಂತೆ ಆತನ ಕುಟುಂಬವನ್ನು ಪೊರೆಯುತ್ತಿದ್ದರು! ಅಲ್ಲಿ ಅನ್ಯೋನ್ಯತೆ ಇತ್ತು, ಪ್ರೀತಿ ಇತ್ತು, ವಿಶ್ವಾಸವಿತ್ತು, ಅವಲಂಬನೆ ಹಿತಮಿತವಾಗಿತ್ತು, ಪ್ರಾಮಾಣಿಕತೆ ಇತ್ತು, ದುಡಿಯುವ ಮನೋಭಾವವಿತ್ತು, ಹಂಚಿತಿನ್ನುವ ದೊಡ್ಡತನವಿತ್ತು.

ಅಧುನಿಕೀಕರಣದಿಂದಾಗಿ ಅವಿಭಕ್ತ ಕುಟುಂಬಗಳು ಬಹುಪಾಲು ವಿಭಕ್ತವಾದವು-ಮಾಯವಾದವು, ಚಿಕ್ಕ ಚಿಕ್ಕ ವಿಭಜಿತ ಕುಟುಂಬಗಳು ಪೇಟೆ ಪಟ್ಟಣ ಸೇರಿದವು. ಅಲ್ಲಿರುವ ಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು ಹಿರಿಯರು ಯಾರೂ ಇರಲಿಲ್ಲ! ನೀತಿಕಥೆ, ರೀತಿ-ರಿವಾಜು ಇವುಗಳನ್ನು ತಿಳಿಸಿಕೊಡಲು ಅಪ್ಪ-ಅಮ್ಮಗೆ ಪುರುಸೊತ್ತಿಲ್ಲ! ಶಾಲೆಯಿಂದ ಬರುವ ಮಗುವನ್ನು ಮನೆಯಲ್ಲಿ ಸ್ವಾಗತಿಸುವುದು ಬೀಗಹಾಕಿದ ಬಾಗಿಲು! ಅನಾರೋಗ್ಯ ಪೀಡಿತ ಗಂಡನಿಗೆ ಊಟ ಅಂತ ಅಲ್ಲೆಲ್ಲೋ ಮಾಡಿಟ್ಟು ಕೆಲಸಕ್ಕೆ ಹೋಗುವ ಹೆಂಡತಿ, ಕಾಯಿಲೆಬಿದ್ದ ಹೆಂಡತಿಯನ್ನು ಮೂತ್ರವಿಸರ್ಜಿಸಲು ಕರೆದುಕೊಂಡು ಹೋಗಲು ಸಮಯವಿರದ ಗಂಡ, ಬೆಳಗಿನ ಧಾವಂತದಲ್ಲಿ ಹೋಟೆಲಿನದೇ ತಿಂಡಿ-ಅರ್ಧ ಬೆಂದ ಇಡ್ಲಿ ತಿಂದು ಸ್ವಲ್ಪ ಅದನ್ನೇ ಕಟ್ಟಿಕೊಂಡು, ಮಗುವಿಗೆ ಅದನ್ನೇ ತುರುಕಿ ಎಲ್ಲರೂ ಅವರವರ ಅಖಾಡಾಕ್ಕೆ ಪ್ರಯಾಣ, ಸಮಯ ಮೀರಿದ್ದಕ್ಕೆ ನಾಲ್ಕು ಗರಮ್ ಮಾತು- ಸಂಸಾರದ ದೋಸೆ ತೂತು! ಇಂತಹ ಪರಿಸರದಲ್ಲಿ ೪೦ ವಯಸ್ಸಿಗೇ ದಂಪತಿಗೆ ಬಿ.ಪಿ., ಶುಗರು ಇವೆಲ್ಲಾ ಕೇವಲ ಮಾನಸಿಕ ಒತ್ತಡದ ಪರಿಣಾಮ, ಈ ಮಾನಸಿಕ ಒತ್ತಡ ಹೆಚ್ಚಿನ ಮನೆಗಳಲ್ಲಿ ವಿಭಕ್ತ ಕುಟುಂಬದಲ್ಲಿನ ಅನಿವಾರ್ಯತೆಯ ಪರಿಣಾಮ!

" ತಮ್ಮಾ ಆರಾಮೇನೋ " ಎಂದು ಹಳ್ಳಿಯಿಂದ ಅಣ್ಣ ದೂರವಾಣಿಯಲ್ಲಿ ಮಾತನಾಡಿದರೆ ಮನಸ್ಸು ತುಂಬಿಬರುತ್ತದೆ. ಅವಿಭಕ್ತ ಕುಟುಂಬದ ಆ ಆಪ್ತತೆ ಇನ್ನೆಲ್ಲಿ ಎಂದು ಮನಸ್ಸಿಗೆ ಅದರ ಅಲೆಬಂದು ಅಪ್ಪಳಿಸುತ್ತದೆ. ಅಣ್ಣನ ಮುಂದೆ ತಮ್ಮ ಸಣ್ಣವನೇ ಆಗಿದ್ದರೂ ಬದುಕು ಕೊಟ್ಟ ನೋವಿನಿಂದ ಇನ್ನೂ ಸಣ್ಣವನಾಗಿಬಿಡುತ್ತಾನೆ. ಅಣ್ಣ ಎದುರಿಗೆ ಬಂದರೆ ಅವನನ್ನು ಆತುಕೊಂಡು ಗೋಳೋ ಎಂದು ದೊಡ್ಡದಾಗಿ ಅತ್ತುಬಿಡುವಾ ಎನಿಸುತ್ತದೆ! ಅಣ್ಣ ಊರಲ್ಲಿದ್ದು ಅಪ್ಪ-ಅಮ್ಮನನ್ನಾದರೂ ಸೇವೆಗೈಯ್ಯುತ್ತಿದ್ದಾನೆ ಆದರೆ ತಾನು ಸ್ವಾರ್ಥಿಯಾಗಿ ತನ್ನ ಕುಟುಂಬವನ್ನು ಮಾತ್ರ ಹೊಟ್ಟೆಹೊರೆದುಕೊಳ್ಳುತ್ತ ಹಲವಾರು ಒತ್ತಡ-ಜಂಜಡಗಳ ಮಧ್ಯೆ ಯಾಕಪ್ಪಾ ಸಿಕ್ಕಿಹಾಕಿಕೊಂಡೆ ಎಂದೆನಿಸುತ್ತದೆ ಆ ತಮ್ಮನಿಗೆ!

ಬಹುತೇಕ ವಿಭಕ್ತ ಮನೆಗಳಲ್ಲಿ ಇದಕ್ಕೆ ಮೂಲಕಾರಣ ಹೆಂಗಳೆಯರಾಗಿರುತ್ತಾರೆ. ಅವರು ದೊಡ್ಡವರಾಗಿರುವುದಿಲ್ಲ! ಅವರ ಸಣ್ಣತನ ಇಡೀ ಕುಟುಂಬದ ಸೌಹಾರ್ದತೆಯನ್ನೇ ಬಲಿತೆಗೆದುಕೊಳ್ಳುತ್ತದೆ. "ನನಗೆ ನಿಮ್ಮ ಅಪ್ಪ-ಅಮ್ಮನ ಜೊತೆ, ಅಣ್ಣ-ಅತ್ತಿಗೆ ಜೊತೆ ಇರಲು ಸಾಧ್ಯವಿಲ್ಲ, ಬೇಕಾದರೆ ಬೇರೆ ಮನೆ ಮಾಡಿ, ಇಲ್ಲಾಂದರೆ ನನ್ನ ದಾರಿ ನನಗೆ-ನಿಮ್ಮ ದಾರಿ ನಿಮಗೆ" ಎಂದು ಸವಾಲೊಡ್ಡಿ ಬಡಗಂಡನಿಗೆ ವಿಭಜಿಸುವ ಸೂತ್ರದ ಕಂಕಣಕಟ್ಟುವ ಜನ ಇವರೇ! ಎಲ್ಲೋ ಕೆಲವೊಮ್ಮೆ ಅಪವಾದವಿರಬಹುದುಷ್ಟೇ.

ಇನ್ನೊಂದು ಘಟನೆ, ಒಂದು ಕಡೆ ಇಬ್ಬರು ಒಂದೇ ಊರಿನ ಹುಡುಗಿಯರು ಸೇರಿ ಒಂದು ಕೋಣೆ ಬಾಡಿಗೆಗೆ ಪಡೆದು ಪಟ್ಟಣದಲ್ಲಿ ಓದುಮುಂದುವರಿಸುತ್ತಿದ್ದರು. ಅವರು ದಿನಾಲೂ ಅಧ ಲೀಟರ್ ಹಾಲು ಖರೀದಿಸಿ ಉಪಯೋಗಿಸುತ್ತಿದ್ದರು. ಆವರಲ್ಲಿ ಒಬ್ಬಳಿಗೆ ಹಾಲು ಸ್ವಲ್ಪ ಕಡಿಮೆ ಸಾಲುತ್ತಿತ್ತು. ಇನ್ನೊಬ್ಬಳು ಸ್ವಲ್ಪ ಹಾಲು ಕುಡಿಯುವ ತರಗತಿಯವಳು. ಇದನ್ನೇ ಸದಾ ನೋಡುತ್ತಿದ್ದ ಮೊದಲನೆಯವಳಿಗೆ ತನ್ನ ಸ್ನೇಹಿತೆ ತನಗಿಂತ ಹಾಲನ್ನು ಜಾಸ್ತಿ ಉಪಯೋಗಿಸುವುದು ಖರ್ಚಿನ ವಿಷಯದಲ್ಲಿ ಸಹಿಸಲಾಗಾಲಿಲ್ಲ. ಶುರು ತಗೊಳಿ-ಮಾರನೇ ದಿನದಿಂದಲೇ ಅವರು ಅರ್ಧರ್ಧ ಲೀಟರ್ ಪ್ರತ್ಯೇಕ ತೆಗೆದುಕೊಂಡು ಪ್ರತ್ಯೇಕವಾಗಿ ಇಟ್ಟುಕೊಳ್ಳಹತ್ತಿದರು. ಮುಂದೆ ಆ ಇಬ್ಬರಲ್ಲಿ ಮೊದಲನೆಯವಳು ಯಾವುದೋ ಕಂಪನಿಯಲ್ಲಿ ಸ್ವಾಗತಕಾರಿಣಿಯಾದರೆ ಎರಡನೆಯವಳು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಮ್ಯಾನೇಜರ್ ಆದಳು. ಇದರರ್ಥ ಹಾಲು ಜಾಸ್ತಿ ಕುಡಿಯುವವರು ದೊಡ್ಡ ಹುದ್ದೆಗೆ ಏರುತ್ತಾರೆಂದಲ್ಲ, ಅವಳಲ್ಲಿ ದೊಡ್ಡತನವಿತ್ತು- ಅವಳು ಧಾರಾಳಿಯಾಗಿದ್ದಳು, ಆ ಧಾರಾಳಿತನ ಅವಳ ಹೆಚ್ಚಿನ ಓದಿಗೆ ಮತ್ತು ಹಲವು ವೃತ್ತಿಪರ ಪರೀಕ್ಷೆಗಳನ್ನು ಬರೆಯಲು ಅನುವುಮಾಡಿಕೊಟ್ಟಿತು. ಎಂದೋ ಒಮ್ಮೆ ಭೇಟಿಯಾದ ಇಬ್ಬರೂ ಪರಸ್ಪರ ಹಳೆಯ ನೆನಪನ್ನು ಕೆದಕಿದರು, ಬ್ಯಾಂಕ್ ಮ್ಯಾನೇಜರ್ ಆಗಿರುವವಳು ಮೊದಲನೆಯವಳಿಗೆ ದುಬಾರಿ ಬೆಲೆಯ ಸೀರೆಯೋಮ್ದನ್ನು ಉಡುಗೊರೆಯಾಗಿ ನೀಡಿದಳು! ಅವಳ ಮುಂದೆ ಮೊದಲನೆಯವಳು ಕುಬ್ಜಳಾಗಿಹೋದಳು,ಹಾಲಿನ ಬಳಕೆಯ ಬಗ್ಗೆ ತಾನು ತೋರಿದ ಸಣ್ಣತನ ನೆನದು ಮನಸ್ಸಲ್ಲೇ ಮರುಗಿದಳು.

ದೊಡ್ಡವ್ಯಕ್ತಿಗಳು ದೊಡ್ಡತನವನ್ನೇ ಮೈಗೂಡಿಸಿಕೊಂಡಿರುತ್ತಾರೆ. ಅವರಿಗೆ ಎಲ್ಲಿದ್ದರೂ ಜನಮೆಚ್ಚುಗೆ ಮತ್ತು ಮನ ಮೆಚ್ಚುಗೆ ಎರಡೂ ಸಿಗುತ್ತವೆ. ಕೊನೇಪಕ್ಷ ನಾಲ್ಕಾರು ಜನ ಅವರನ್ನು ಸಮಾಜದಲ್ಲಿ ಗುರುತಿಸಿ ಗೌರವಿಸುತ್ತಾರೆ. ಅವರಿಗೆ ಬೇಕಾದ ಯಾವುದೋ ಕೆಲಸವನ್ನು ಇನ್ಯಾರೋ ಗೌರವಪೂರ್ವಕವಾಗಿ ಮಾಡಿಕೊಡುತ್ತಾರೆ. ಅವರು ಹತ್ತಾರು ಜನ ಇಷ್ಟಪಡುವ ವ್ಯಕ್ತಿಯಾಗುತ್ತಾರೆ. ತುಂಬಿದ ಕೊಡ ತುಳುಕುವುದಿಲ್ಲ ಎಂಬಂತೆ [ಕಾಲೀ ಕೊಡವೂ ತುಳುಕುವುದಿಲ್ಲ ಎನ್ನಬೇಡಿ!] ಸಮಾಜದ ಕೆಲವು ಸಮಸ್ಯೆಗಳಿಗಾದರೂ ಅವರು ಸ್ಪಂದಿಸುತ್ತಾರೆ. ಬಡಜನತೆಗೆ ತಮ್ಮಿಂದಾಗಬಹುದಾದ ಸಹಾಯ ಸಹಕಾರಗಳನ್ನು ನೀಡುತ್ತಾರೆ. ಸರ್ ಎಮ್. ವಿಶ್ವೇಶ್ವರಯ್ಯನವರು ಎಂತಹ ದೊಡ್ಡವರಾಗಿದ್ದರೆಂದರೆ ತನಗೆ ಮಹಾರಾಜರಿಂದ ಬಂದ ಪುರಸ್ಕಾರದ ಹಣವನ್ನು ಬೆಂಗಳೂರಿನಲ್ಲಿ ಎಸ್.ಜೆ.ಪಾಲಿಟೆಕ್ನಿಕ್ ಕಟ್ಟುವಂತೇ ಕೊಟ್ಟುಬಿಟ್ಟರು, ಅಭಿಮಾನೀ ಬಳಗ ಅಪರೂಪವಾಗಿ ಏರ್ಪಡಿಸಿದ್ದ ಸನ್ಮಾನದಲ್ಲಿ ತಮಗೆ ಕೊಟ್ಟ [ಅಂದಿನಕಾಲಕ್ಕೆ] ಒಂದು ಲಕ್ಷರೂಪಾಯಿ ನಗದನ್ನು ದೊಡ್ಡವರಾದ ನಮ್ಮ ಡೀವೀಜಿ ಗೋಖಲೆ ಸಾರ್ವಜನಿಕ ಸಂಸ್ಥೆಯ ಬೆಳವಣಿಗೆಗೆ ಕೊಟ್ಟರು!

ನಾವು ನಮಗೇ ಅರಿವಿಲ್ಲದೆ ಪ್ರತೀ ಸೇಕಂದಿಗೂ ಬೆಳೆಯುತ್ತಲೇ ಇದ್ದೇವೆ, ವಯಸ್ಸು ಜಾಸ್ತಿಯಾಗುತ್ತಲೇ ಇದೆ, ಒಂದರ್ಥ ನಾವು ಗಾಳಿಗೆ ಮುದುಕರಾಗುತ್ತಿದ್ದೇವೆ. ಅದಿಲ್ಲಾ ನಾವು ನಮ್ಮನ್ನೂ ನಮ್ಮ ಬದುಕಿನ ಗತಿಯನ್ನೂ ಸಿಂಹಾವಲೋಕನ ಮಾಡಿಕೊಳ್ಳಬೇಕು. ಬದುಕಿನ ತೂಮ್ಬ ನಮ್ಮಲ್ಲಿ ನಾವು ಇದುವರೆಗೆ ತುಂಬಿಕೊಂಡು ನಡೆದ ಸಣ್ಣತನ ಮತ್ತು ಅಸೂಯೆ ಈ ಎರಡು ಅಂಶಗಳನ್ನು ಬಿಡಬೇಕು. ಶಕ್ಯವಾದಷ್ಟೂ ಧಾರಾಳಿಗಳಾಗಬೇಕು. ಆಗ ಮಾತ್ರ ನಾವು ದೊಡ್ಡವರಾಗಲು ಸಾಧ್ಯ, ನಿಜ ಅರ್ಥದಲ್ಲಿ ಬೆಳೆಯಲು ಸಾಧ್ಯ.