ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, April 14, 2010

ನಿವೇದನೆ

ದೇಹದ ಶುದ್ಧಿಗೆ, ಸ್ವಚ್ಛತೆಗೆ ಸ್ನಾನ ಹೇಗೆ ಬೇಕೋ ಹಾಗೇ ಮನಸ್ಸನ್ನು ಶುದ್ಧೀಕರಿಸಲು ಧ್ಯಾನದ ಅವಶ್ಯಕತೆಯಿದೆ. ಆಗಾಗ ಆಗಾಗ ಅನುಕೂಲವಾದಾಗ ಇದ್ದಲ್ಲೇ ಇದ್ದು ಭಾವ ತನ್ಮಯತೆಯಿಂದ ಮನಸ್ಸನ್ನು ಬಂಧಿಸಿ ಹಿಡಿದುಕೊಂಡು ನಮಗೆ ಇಷ್ಟವಾದ ಒಂದು ಶಕ್ತಿಯನ್ನೂ ದೇವರನ್ನೋ ನೆನೆದು, ನಾವೇನು ಮಾಡುತ್ತಿದ್ದೇವೆ ಎಂಬ ವರದಿಯನ್ನು ಒಪ್ಪಿಸುವ ಕೆಲಸ ಸಾಗುತ್ತಿರಬೇಕು. ಜಗಮೆಚ್ಚುವ ಮುನ್ನ ಮನ ಮೆಚ್ಚಬೇಕು, ಮನ ಮೆಚ್ಚುವ ಮುನ್ನ ನಮ್ಮೊಳಗಿನ ಆ ಆಂತರ್ಯದ ಕೂಗು ಆತ್ಮದ ಮೆಚ್ಚುಗೆಯ ಕೂಗು [echo] ಬರಬೇಕು. ನಾವೆಲ್ಲೇ ಕೆಲಸಮಾಡಲಿ ಕೆಲಸದ ಪರಿಯನ್ನು ಅದರಹಂತವನ್ನು ನಮ್ಮ ಮೇಲಧಿಕಾರಿಗಳಿಗೆ ವರದಿಯ ರೂಪದಲ್ಲಿ ಒಪ್ಪಿಸುತ್ತೇವೆ ಅಥವಾ ನಾವೇ ನಡೆಸುವ ವ್ಯವಹಾರವಾದರೆ ಅದನ್ನುಸರಿಯಾಗಿ ಅವಲೋಕಿಸುತ್ತೇವೆ ಹೇಗೋ ಹಾಗೇ ನಮ್ಮದಲ್ಲದ ಬದುಕೆಂಬ ನೌಕರೀ ವೃತ್ತಿಯಲ್ಲಿ ನಮಗೆ ಕಾಣದ ಮೇಲಧಿಕಾರಿಕರೆದಿದ್ದಾನೆ, ಕರೆದಿರುತ್ತಾನೆ-ಅವನ ಅವ್ಯಕ್ತ ಕರೆಯನ್ನು ಅರ್ಥೈಸಿ ಅವನಿಗೆ ಆಗಾಗ ನಮ್ಮ ದೈನಂದಿನ ಕೆಲಸದ ವರದಿಒಪ್ಪಿಸಿದರೆ ಆತ ಮುಂದೆ ಹೇಗೆ ಹೋಗಬೇಕೆಂದು, ಹೇಗೆ ಮಾಡಬೇಕೆಂದು, ಯಾವುದನ್ನು ಎತ್ತಿಕೊಳ್ಳಬೇಕೆಂದು, ಯಾವುದುಬೇಡವೆಂದು ಎಲ್ಲವನ್ನೂ ನಮ್ಮ ಮನದ ಮೂಲಕ ಆದೇಶಿಸುತ್ತಾನೆ. ಅವನು ಬೇಡವೆಂದ ಕೆಲಸ ಮಾಡಿನೋಡಿ ಅಲ್ಲಿ ನಾವುಸೋಲುತ್ತೇವೆ, ಅವನ ಪರವಾನಿಗೆ ಸಿಕ್ಕ ಕೆಲಸದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ, ಯಾಕೆಂದರೆ ಫಲಾಫಲಗಳ ಹಿಡಿತ ಅವನ ಕೈಲೇಇದೆ. ಅವನು ಬೇಡವೆಂದಾಗ ನೀವು ಬಾವಿ ತೋಡಿದರೆ ನೀರು ಸಿಗುವುದಿಲ್ಲ, ಯವುದೋ ಕೆಲಸಕ್ಕೆ ಹಠಹಿಡಿದು ಹೋದರೆವಿಜಯಿಯಾಗುವುದಿಲ್ಲ! ಅಂದಮೇಲೆ ನಮ್ಮ ಮೇಲೆ ನಮ್ಮ ನಿಯಂತ್ರಣವೆಷ್ಟು ಆತನ ನಿಯಂತ್ರಣವೆಷ್ಟು ? ಅಲ್ಲವೇ?

ಮಹಾತ್ಮರೊಬ್ಬರು ಹೇಳಿದ್ದಾರೆ, ತ್ಯಾಗ ಭೋಗಗಳ ಸಮನ್ವಯವೇ ಯೋಗ ಎಂಬುದಾಗಿ. ಅಂದರೆ ಜೀವನದಲ್ಲಿ ತ್ಯಾಗವೂ ಬೇಕು ಭೋಗವೂ ಬೇಕು, ಆ ತ್ಯಾಗಭೋಗಗಳಿಗೆ ಕೆಲವು ನಿಬಂಧನೆಗಳಿವೆ,ಅವುಗಳನ್ನು ಮೀರದ ರೀತಿಯಲ್ಲಿ ನಡೆದರೆ ಆಗ ಅವುಗಳ ಸಮನ್ವಯವಾಗುತ್ತದೆ. ಆ ಸಮಯನ್ವಯಕ್ಕೆ ಗುರುಮುಖದ ಅವಶ್ಯಕತೆಯಿದೆ. ಅರಿವೇ ಗುರು-ಅರಿವಿನ ದಾರಿಯಲ್ಲಿ ನಮಗಿಂತ ಬಹಳ ಮುಂದೆ ಸಾಗಿದಾತ ಗುರುವಾಗಿರುತ್ತಾನೆ. ಅಂತಹ ಸದ್ಗುರುವನ್ನು ಹುಡುಕಿ ಸೇವೆಗೈದು ಅವರ ಮನವೊಲಿಸಿ ಅವರಿಂದ ಈ ಧ್ಯಾನದ ಮಾರ್ಗವನ್ನು, ಸಮನ್ವಯತೆಯ ಮಾರ್ಗವನ್ನು ಹೇಳಿಸಿಕೊಳ್ಳಬೇಕು. ಆತ ಒಲಿದು ಹರಸಿದರೆ ನಮ್ಮ ಸಂಸಾರವೆಂಬ ಜೀವನವೆಂಬ ಯವುದೋ ರಾಜ್ಯದಲ್ಲಿ ಅರ್ಧವನ್ನು ಗೆದ್ದಂತೆ ! ಇನ್ನರ್ಧ ಅದು ನಮ್ಮ ವರದಿವಾಚನ,ನಿತ್ಯಾನುಸಂಧಾನ, ಸತತ ಸಮನ್ವಯ ಇವುಗಳ ಮೇಲೆ ಅವಲಂಬಿತ ! ನಮ್ಮನ್ನೇ ನಾವು ನಿಜವಾಗಿಯೂ ಪ್ರೀತಿಸುವವರಾಗಿದ್ದರೆ ನಾವೆಂದೂ ನಮ್ಮೊಳಗಿನ ಆ ಮಾರ್ದನಿಯನ್ನು ಮರೆಯುವುದಿಲ್ಲ ! ಬದಲಾಗಿ ಆ ಮಾರ್ದನಿಗೆ ಕಟ್ಟುಬಿದ್ದು ಅದನ್ನು ಕೇಳಿ ನಂತರ ನಮ್ಮ ಕೆಲಸದಲ್ಲಿ ಮುಂದೆ ನಡೆಯುತ್ತೇವೆ. ಹೀಗೆಲ್ಲ ನಾವು ಚಿಂತನೆಯಲ್ಲಿ ತೊಡಗಿದಾಗ ನಮಗೆ ಧ್ಯಾನ ಎಂಬುದೂ ಒಂದು ಔಷಧಿಯ ರೂಪ ಎಂಬುದು ಸ್ಪಷ್ಟವಾಗುತ್ತದೆ! ನಮ್ಮ ಶರೀರದ ಅನೇಕ ಕಾಯಿಲೆಗಳಿಗೆ ನಮ್ಮ ಮನಸ್ಸೇ ಕಾರಣ ! ಅಂತಹ ದುರ್ಬಲ ಮನಸ್ಸನ್ನು ಸಬಲಗೊಳಿಸಲು ಯೋಗ-ಧ್ಯಾನ ಬೇಕು. [ amplifying the good weak signals of the mind into strong useful signals] ಅಂತಹ ಧ್ಯಾನಕ್ಕೆ ಕಟ್ಟುಬಿದ್ದಾಗ ಜನಿತ ಧ್ವನಿಯೇ ಈ ಕವನ ---



ನಿವೇದನೆ


ಎನ್ನ ಚಿತ್ತದ ವೃತ್ತಿ ಚಿನ್ನದ ಹರಿವಾಣದೊಳಿಟ್ಟು
ಘನ್ನ ಮಹಿಮನೆ ಅರ್ಪಿಸುವೆ ನಿನ್ನ ಪದಕೆ
ಮುನ್ನ ಮಾಡಿದ ಕರ್ಮಬಂಧನವ ತೆಗೆದಿಟ್ಟು
ಚೆನ್ನಾಗಿಡುತ ಹರಸೋ ಜೀವನದೀ ಪಥಕೆ


ಇಂದು ನಿನ್ನೆಯದಲ್ಲ ನನ್ನ ನಿನ್ನಯ ಒಸಗೆ

ಕಂದುಮಸುಕದ ಲೋಹದಲ್ಲದಾ ಬೆಸುಗೆ
ಸಂದ ಕಾಲವದೆಷ್ಟೋ ನೊಂದ ಸಮಯವದೆಷ್ಟೋ
ಎಂದು ದರುಶನ ಈವೆ ಜೀವನಾಟಕಕೆ ?


ದೇಹದೀ ಮನೆಯಲ್ಲಿ ಹೃದಯ ತೊಟ್ಟಿಲ ಕಟ್ಟಿ
ಮಾಯದಾ ಮನದ ಜೋಗುಳವ ಹಾಡೀ
ನೋಯದಿರಲೀ ನಿನ್ನ ನಾಜೂಕು ಕಾಯವದು
ವಾಯಿದೆಯ ಮಿತಿಯಿಡದೆ ಜೋಪಾನ ಮಾಡಿ


ನರನಾಡಿಗಳ ಹುರಿಯ ಹಗ್ಗವನು ಹಿಡಿಯುತ್ತ
ಕರದಿ ತೂಗುತ ಹೇಳಲೆ ಹಲವು ಕಥೆಯ ?
ವರ ವಿರಂಚಿಯೇ ನಿನ್ನ ಅರಿವಿಗಿರದೇನಿಹುದು ?
ಬರಿದೇ ಸುಮ್ಮನೇ ಅದುವೆ ಕಳೆಯಲೀ ವ್ಯಥೆಯ


ಆಜಾನು ಬಾಹು ಕಮನೀಯ ಲೋಚನ ನಿನ್ನ
ಜೂಜಾಟದಲಿ ಬೇಗ ಸೋಲಿಸುವ ತವಕ
ಗಾಜಿನಾ ಬಿರಡೆಯಂತಿಹ ಜೀವದೀ ದೇಹ
ಕೋಜಾಗರೀ ಹಾಡಿ ನುತಿಸುವಾ ತನಕ
------