ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, November 7, 2010

ಕಾವ್ಯ ಕಾರಣ

ಚಿತ್ರಋಣ : ಅಂತರ್ಜಾಲ
ಕಾವ್ಯ ಕಾರಣ

[ ಚಿತ್ರವನ್ನು ಬಹಳ ಜನ ನೋಡಿರುತ್ತೀರಿ, ಸ್ವಲ್ಪ ಹೊತ್ತು ದಿಟ್ಟಿಸಿ ನೋಡುತ್ತಿದ್ದರೆ ಅದರ ವಿಶೇಷ ತಿಳಿಯುತ್ತದೆ ! ಮನದ ಕಲ್ಪನೆಗೆ ಅದನ್ನು ಸಾಂಕೇತಿಕವಾಗಿ ಬಳಸಿದ್ದೇನೆ. ದೀಪಾವಳಿಯನ್ನು ಮಳೆಯಿದ್ದರೂ ಹರುಷದಿಂದಲೇ ಆಚರಿಸಿ ಬೀಳ್ಕೊಟ್ಟೆವು, ಮತ್ತೆ ಬರಲಿ ; ಶುಭವ ತರಲಿ ದೀಪಾವಳಿ ಎಂದು ಜಗನ್ನಿಯಾಮಕನಲ್ಲಿ ಪ್ರಾರ್ಥಿಸಿ ಇಂದು ಕವನವನ್ನು ನಿಮ್ಮ ಮುಂದಿಡುವ ಮನಸ್ಸು, ಓದುವಿರಲ್ಲವೇ ? ]

ಮಥಿಸಿ ಮನದ ಶರಧಿಯನ್ನು
ಚಿಂತನೆಯ ಕಡೆಗೋಲಲಿ
ಚಕಿತನಾಗಿ ಕಾದು ಕುಳಿತೆ ಬರುವ ವಿಧದ ಬರಹಕೇ
ಮುಕುತಿಯಿಲ್ಲ ಚಿಂತೆಗಳಿಗೆ
ಅಂತ್ಯವಿಲ್ಲ ನೋವುಗಳಿಗೆ
ಶಕುತನಾಗಿ ಮೀರಿ ಬೆಳೆವ ಪರಿಯ ತಿಳಿಯುವುದಕೇ

ಒಂದು ಕವನ ಬರೆಯುವಾಗ
ನೊಂದು ಬರೆವ ರೀತಿ ತರವೇ ?
ಇಂದು ನನ್ನ ಮಿತ್ರರೆಲ್ಲ ಕರೆದು ಬೈವರಲ್ಲವೇ ?
ಮಿಂದು ಸ್ವಚ್ಛವಾದ ದೇಹ
ಚಂದದಿಂದ ಹೊಳೆಯುವಂತೆ
ಬಂಧಿಸೊಮ್ಮೆ ಈ ಮನವನು ಚೊಕ್ಕಗೊಳಿಸಬೇಡವೇ ?

ಅಡಿಗೆಮಾಡುವಾಗ ಉಪ್ಪು
ಸಿಹಿಯು ಹುಳಿಯು ಖಾರವನ್ನು
ಹದವನರಿತು ಹಾಕಿದಾಗ ರುಚಿಯು ಸಹಜವಪ್ಪುದು
ಗಡಿಬಿಡಿಯಲಿ ಬರೆದು ಮೂರು
ಪದದ ಜೊತೆಗೆ ಇನ್ನೊಂದಾರು
ಸೇರಿಸಲ್ಕೆ ಬರೆದ ಪದ್ಯ ನೆಲವ ಕಚ್ಚುತಿರ್ಪುದು !

ಬರೆದುದೆಲ್ಲಾ ಓದಬೇಕೆ ?
ಓದುವುದಕೆ ಸಾಧ್ಯವುಂಟೇ ?
ನನ್ನ ಪಾತ್ರೆಯಲ್ಲಿ ಒಳಗೆ ಹಣಕಿ ಇಣುಕಿ ನೋಡುತಾ
ಚಿನ್ನದಂಥ ಶಬ್ದಗಳನು
ಕನ್ನಡಿಯೊಳು ತೆರೆದುತೋರಿ
ಬನ್ನಿರಯ್ಯ ಓದಲೆಂದು ಕರೆದು ನಿಂತು ಕಾಯುತಾ

ಜೀವದಲ್ಲಿ ಭಾವತುಂಬಿ
ಭಾವದಲ್ಲಿ ಜೀವತುಂಬಿ
ಜೀವ-ಭಾವ ಸಮ್ಮಿಳಿತದ ಸಂವಿಧಾನ ಬರೆಹವು
ಆವ ಘಳಿಗೆ ಬರೆಯಬೇಕು
ಎಲ್ಲಿ ಕುಳಿತು ಹೊಸೆಯಬೇಕು
ಯಾವೊಂದನು ತಿಳಿಯದಂಥ ಸಂಯಮದಾ ಶಿಖರವು

ಒಳಗೆ ಇರುವ ಕಾಣದಾತ
ಇಳೆಗೆ ಹಾರಿ ಹತ್ತಿ ಕುಣಿದು
ಬಳಸಿ ಬಂದು ಹರಿವ ರೂಪ ಕಾವ್ಯ-ಕಾದಂಬರಿ
ಅಳುಕು ಮನದ ಅಡುಗೆಗಳನು
ಬಳುಕುತಲೇ ಹೊರಗೆ ಇಡುವ
ಬಡಿವಾರದ ಮನದ ಕನ್ಯೆ ಆಗೆ ನಿರಾಡಂಬರಿ