ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, March 30, 2012

ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ ಎಲ್ಲೆಲ್ಲು ನೋಡಿದರಲ್ಲಿ ಶ್ರೀರಾಮ !

ಚಿತ್ರಗಳ ಋಣ: ಅಂತರ್ಜಾಲ

ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ ಎಲ್ಲೆಲ್ಲು ನೋಡಿದರಲ್ಲಿ ಶ್ರೀರಾಮ !

ಶ್ರೀರಾಮನ ಬಗ್ಗೆ ಆತನ ಜೀವನದ ಕುರಿತಾಗಿ ಇರುವ ರಾಮಾಯಣ ಕೇವಲ ಕಾಲ್ಪನಿಕ ಎಂದು ವಾದಿಸುವವರಿಗೆ ಕೊರತೆಯೇ ಇಲ್ಲ! ಅಂತೆಯೇ ರಾಮನ ಹೆಸರು ಕೇಳಿದಾಕ್ಷಣ ಮೈಯ್ಯ ರಕ್ತಕಣಕಣದಲ್ಲಿ ಮಿಂಚಿನ ಸಂಚಾರದ ವಿಶಿಷ್ಟ ಅನುಭೂತಿಯನ್ನು ಪಡೆಯುವವರಿಗೂ ಕೊರತೆಯಿಲ್ಲ. ರಾಮ ಸೀತಾಪರಿತ್ಯಾಗ ಮಾಡಿದ್ದು ಸರಿಯಲ್ಲವೆಂದು ವಾದಿಸಿ ರಾಮನನ್ನು ವಿರೋಧಿಸುವ ಮಹಿಳಾಮಣಿಗಳೂ ಅವರನ್ನು ಅನುಮೋದಿಸುವ ಗಂಡುಮಣಿಗಳೂ ಇದ್ದಾರೆ! ರಾಮ ತನ್ನೆಲ್ಲ ಅನುಕೂಲಗಳನ್ನೂ ಸೌಲಭ್ಯಗಳನ್ನೂ ತೊರೆದು ತಂದೆಯ ಮೂಕ ಆಜ್ಞಾಧಾರಕನಾಗಿ ವನವಾಸವನ್ನೂ ತನ್ಮೂಲಕ ಬಹುತೇಕ ಜೀವಿತದ ನೋವಿನ ಭಾಗವನ್ನೂ ಸಹಿಸಿ ಸಂಯಮದಿಂದ ಅನುಭವಿಸಿದ್ದನ್ನು ಹಾಡಿ ಹೊಗಳುವ ಜನವೂ ಇದ್ದಾರೆ. ರಾಮನ ಬಗ್ಗೆ ಹಲವಾರು ಸರ್ತಿ ಬರೆದಿದ್ದಿದೆ, ಆಗಾಗ ಬರೆಯುವುದೂ ಇದೆ. ಬರೆದದ್ದನ್ನೇ ಬರೆದಗತಿಯಲ್ಲೇ ಮತ್ತೆ ಬರೆದರೆ ಓದುವ ಅಧುನಿಕರಿಗೆ ಅದು ರುಚಿಸದೇ ಹೋಗಬಹುದು. ಮಗ್ಗಲು ತಿರುವಿದಾಗ ಸಿಕ್ಕ ಶ್ರೀರಾಮನ ಜೀವನದ ಒಂದೆರಡು ಘಟನೆಗಳನ್ನು ರಾಮನವಮಿಯ ಈ ಸುಸಂದರ್ಭದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುವ ಅವಕಾಶ ನನ್ನದಾಗಿದ್ದಕ್ಕೆ ಶ್ರೀರಾಮನಿಗೆ ಭೂಯೋ ಭೂಯೋ ನಮಾಮ್ಯಹಮ್ ಎಂದು ಸಾಷ್ಟಾಂಗವೆರಗುತ್ತಾ ಈ ಪೀಠಿಕೆ ಇಡುತ್ತಿದ್ದೇನೆ.

ಶ್ರೀರಾಮನ ಕುರಿತಾಗಿ ಹೇಳಿಕೊಳ್ಳಬಹುದಾದ ಕೆಲವು ಶ್ಲೋಕಗಳ, ಮಂತ್ರಗಳ ಜೊತೆಗೆ ಅವುಗಳಿಂದ ಸಿಗಬಹುದಾದ ಫಲವನ್ನೂ ಸೂಚಿಸುತ್ತಾ ಈ ಹೊಸ ಶ್ರೀರಾಮ ಕಥೆಯನ್ನು ನನ್ನ ಬಾಯಲ್ಲಿ ಕೇಳುವರೇ ನಿಮಗೆಲ್ಲಾ ಹಾರ್ದಿಕ ಸ್ವಾಗತ. ಶ್ರೀರಾಮ ರಾಜಾರಾಮನಾಗಿದ್ದನಷ್ಟೇ ? ರಾಜಾರಾಮನ ಸ್ವಾಗತಕ್ಕೆ ರಾಜೋಚಿತ ವಂದನಾ ಶ್ಲೋಕದೊಂದಿಗೆ ಆರಂಭಿಸುತ್ತಿದ್ದೇನೆ:

ರಾಮಂ ಲಕ್ಷ್ಮಣ ಪೂರ್ವಜಂ ರಘುವರಂ ಸೀತಾಪತಿಂ ಸುಂದರಂ
ಕಾಕುಸ್ಥಂ ಕರುಣಾನಿಧಿಂ ಗುಣನಿಧಿಂ ವಿಪ್ರಪ್ರಿಯಂ ಧಾರ್ಮಿಕಂ |
ರಾಜೇಂದ್ರಂ ಸತ್ಯಸಂದಂ ದಶರಥತನಯಂ ಕೇವಲಮ್ ಶಾಂತಮೂರ್ತಿಂ
ವಂದೇ ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಮ್||

ರಾಮಾಯಣದ ಸುತ್ತಮುತ್ತ ನಾವು ಹೇಳಿಕೊಳ್ಳಬಹುದಾದ ಯಾವುದೇ ಕಥೆಯಿರಲಿ ಅಲ್ಲಿ ಮನೀಷಿ ವಾಲ್ಮೀಕಿಯನ್ನು ನೆನಪಿಸಿಕೊಳ್ಳುವುದು ಸೂಕ್ತ. ಯಾಕೆಂದರೆ ಪ್ರಥಮವಾಗಿ ರಾಮಾಯಣ ಎಂಬ ರಾಮನ ಜೀವನಚರಿತ್ರೆ ಬರೆಯಲ್ಪಟ್ಟಿದ್ದು ವಾಲ್ಮೀಕಿಯಿಂದಲೇ.

ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್ |
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿಕೋಕಿಲಮ್ ||

ವಾಲ್ಮೀಕೇರ್ಮುನಿಸಿಂಹಸ್ಯ ಕವಿತಾವನಚಾರಿಣಃ |
ಶೃಣ್ವನ್ರಾಮಕಥಾನಾದಂ ಕೋ ನ ಯಾತಿ ಪರಾಂ ಗತಿಮ್ ||

ಯಃ ಪಿಬನ್ ಸತತಂ ರಾಮಚರಿತಾಮೃತಸಾಗರಮ್ |
ಅತೃಪ್ತಸ್ತಂ ಮುನಿಂ ವಂದೇ ಪ್ರಾಚೇತಸಮಕಲ್ಮಷಮ್ ||

ವಾಲ್ಮೀಕಿ ಮುನಿಗಳನ್ನು ರಾಮಾ ರಾಮಾ ಎಂದು ಕೂಗುವ ಕೋಗಿಲೆಯೆಂದೂ, ಕವಿತಾವನದಲ್ಲಿ ಸಂಚರಿಸುವ ಮುನಿಸಿಂಹವೆಂದೂ ಸ್ತುತಿಸಿದ್ದನ್ನು ಈ ಮೇಲಿನ ಶ್ಲೋಕಗಳಲ್ಲಿ ಕಾಣಬಹುದಾಗಿದೆ.

ಯತ್ರ ಯತ್ರ ರಘುನಾಥ ಕೀರ್ತನಂ
ತತ್ರ ತತ್ರ ಕೃತ ಮಸ್ತಕಾಂಜಲಿಮ್ |
ಬಾಷ್ಪ ವಾರಿಪರಿಪೂರ್ಣಲೋಚನಂ
ಮಾರುತಿಂ ನಮತ ರಾಕ್ಷಸಾಂತಕಮ್ ||

ದಶರಥನ ಆಸ್ಥಾನಕ್ಕೆ ಆಗಮಿಸಿದ ಗುರು ವಿಶ್ವಾಮಿತ್ರರು ಎಳೆಯ ಮಕ್ಕಳಾದ ರಾಮ-ಲಕ್ಷ್ಮಣರನ್ನು ಗುರುಕುಲ ವಿದ್ಯಾಭ್ಯಾಸಕ್ಕೆ ಕಳುಹಿಸಲು ದಶರಥನಲ್ಲಿ ಕೇಳಿದಾಗ ರಾಜಾ ದಶರಥನಿಗೆ ಅಷ್ಟು ಚಿಕ್ಕಮಕ್ಕಳನ್ನು ಕಾಡಿಗೆ ಹೇಗೆ ಕಳುಹಿಸುವುದೆಂಬ ಕಳವಳ. ಅದನ್ನರಿತ ವಿಶ್ವಾಮಿತ್ರರು ರಾಮ ಸಾಮಾನ್ಯದವನಲ್ಲ, ಆತನ ಸಾಮರ್ಥ್ಯ ಬೆಳಗಲು ಆತ ಈಗಲೇ ವಿದ್ಯಾಭ್ಯಾಸ ಮಾಡಬೇಕು ಎಂದು ಮತ್ತೆ ಮತ್ತೆ ಹೇಳಿದಾಗ ಮನಸ್ಸೇಕೋ ಹಿಂದೇಟು ಹಾಕುತ್ತಿದ್ದರೂ ಜೊತೆಗೆ ಇರುವವರು ವಿಶ್ವಾಮಿತ್ರರು ಎಂಬ ಅಭಿಪ್ರಾಯ ತಳೆದು ಕಳುಹಿಸಿದ್ದ. ವಿಶ್ವಾಮಿತ್ರರ ಜೊತೆಗೆ ಕಾಡಿಗೆ ನಡೆದ ಅಣ್ಣ-ತಮ್ಮಂದಿರು ಕಾಡ ದಾರಿಯಲ್ಲಿ ಗುಡ್ಡ ಬೆಟ್ಟಗಳನ್ನು ಹತ್ತಿ-ಇಳಿಯುತ್ತಾ ಏದುಸಿರು ಬಿಡುತ್ತಾ ಕ್ರಮಿಸಿದ ಹಾದಿ ಬಹುದೂರ.ನಡೆದೂ ನಡೆದೂ ನಡೆದೂ ದಣಿವಾಗಿ ಸರಿರಾತ್ರಿ ವಿಶಾಲವಾದ ಬಂಡೆಯೊಂದರಮೇಲೆ ಮಲಗಿದ ಮೂವರಲ್ಲಿ ವಿಶ್ವಾಮಿತ್ರರು ಬೆಳಗಿನ ಬ್ರಾಹ್ಮೀಮುಹೂರ್ತದಲ್ಲೇ ಇನ್ನೂ ಗಾಢ ನಿದ್ದೆಯಲ್ಲಿದ್ದ ಮುದ್ದು ಬಾಲಕ ಶ್ರೀರಾಮನನ್ನು ಕುರಿತು

ಕೌಸಲ್ಯಾ ಸುಪ್ರಜಾ ರಾಮಾ
ಪೂರ್ವಾ ಸಂಧ್ಯಾ ಪ್ರವರ್ತತೇ |
ಉತ್ತಿಷ್ಠ ನರಶಾರ್ದೂಲ
ಕರ್ತವ್ಯಂ ದೈವಮಾಹ್ನಿಕಂ ||

ಎಂದು ಎಬ್ಬಿಸುವ ಆ ದೃಶ್ಯ ಮಕ್ಕಳಿರುವ ಯಾವ ಪಾಲಕರ ಕಣ್ಣಲ್ಲೂ ನೀರುತರಿಸದೇ ಇರುವಂತಹುದಲ್ಲ. ಜಗದ ಜೀವರಾಶಿಗಳ ದುಃಖವನ್ನು ತೊಡೆಯುವ ಇಂತಹ ಶ್ರೀರಾಮ ಜನಿಸಿದ್ದು ಚೈತ್ರ ಶುದ್ಧ ನವಮಿಯಂದು ಬೆಳಗಿನ ಜಾವದಲ್ಲಿ. ಪ್ರಜಾರಂಜಕ ಗುಣವೂ ಸೇರಿದಂತೇ ಸಕಲ ಸದ್ಗುಣಗಳ ಗಣಿಯಾಗಿದ್ದ ಶ್ರೀರಾಮ ಅದಕ್ಕೇ ಇಂದಿಗೂ ಸರ್ವಜನಾನುರಾಗಿ. ರಾಮನಿಗೆ ಕ್ಷುದ್ರ ಶಕ್ತಿಗಳು ನಿಶಾಚರ ಶಕ್ತಿಗಳು ಹೆದರುತ್ತವಂತೆ. ರಾಮ ಹೆಜ್ಜೆಯಿಟ್ಟಲ್ಲಿ ಅವುಗಳು ನಾಶಹೊಂದುತ್ತವಂತೆ.

ವಾಲ್ಮೀಕಿ ರಾಮಾಯಣದ ಬಾಲಕಾಂಡದಲ್ಲಿ ಅಹಲ್ಯೆಯ ಪ್ರಸ್ತಾಪ ಬರುತ್ತದೆ. ಮಹರ್ಷಿ ಗೌತಮರ ರೂಪವತೀ ಸಾಧ್ವಿ ಅಹಲ್ಯೆ. ಗೌತಮರು ತಮ್ಮ ಪರ್ಣಕುಟಿಯಿಂದ ದೂರವೆಲ್ಲೋ ತೆರಳಿದ್ದಾಗ ದೇವೇಂದ್ರ ಗೌತಮರ ರೂಪದಲ್ಲಿ ಅಹಲ್ಯೆಗೆ ಕಾಣಿಸಿಕೊಂಡ! ಅಹಲ್ಯೆಯ ಪತಿವ್ರತಾ ಭಂಗವೊಂದು ಕಡೆಗಾದರೆ ಅಹಲ್ಯೆಯನ್ನು ಪಡೆದ ಮೋಜು ಇನ್ನೊಂದು ಕಡೆ ಎಂಬ ಒಳತೋಟಿಯಿಂದ ಗೌತಮರ ವೇಷದಲ್ಲಿ ಬಂದ ಇಂದ್ರನನ್ನು ಅಹಲ್ಯೆ ತನ್ನ ಪತಿಯೆಂದೇ ಭಾವಿಸಿದಳು. ಅಕಾಲದಲ್ಲಿ ಅವಳರಿವಿಗೆ ಬಾರದಾಗಿ ಇಂದ್ರ ಅವಳೊಡನೆ ಸುಖಿಸಿದ, ತನ್ಮೂಲಕ ಅಹಲ್ಯೆ ಪರಪುರುಷನೊಬ್ಬನಿಗೆ ತನ್ನನ್ನು ಅರ್ಪಿಸಿಕೊಂಡಳು. ಇನ್ನೇನು ಇಂದ್ರ ಹೊರಟು ತಪ್ಪಿಸಿಕೊಳ್ಳಬೇಕೆನ್ನುವಷ್ಟರಲ್ಲಿ ಸ್ವತಃ ಗೌತಮರು ಅಲ್ಲಿಗೆ ಆಗಮಿಸಿಬಿಟ್ಟರು! ಅಹಲ್ಯೆ ಇಬ್ಬಿಬ್ಬರು ಗೌತಮರುಗಳನ್ನು ಕಾಣುತ್ತಾ ತಬ್ಬಿಬಬ್ಬಾದಳು. ತಾನು ಯಾರೊಡನಿದ್ದೇನೆ? ಏನು ನಡೆಯುತ್ತಿದೆ? -ಎಂಬುದೇ ತೋಚದಾಯ್ತು. ಗೌತಮರು ತಮ್ಮ ಜ್ಞಾನ ಚಕ್ಷುವಿನಿಂದ ಬಂದಾತ ಇಂದ್ರ ಎಂಬುದನ್ನು ಅರಿತುಕೊಂಡರು. ಇಂದ್ರನಿಗೆ ವೃಷಣವೇ ಇಲ್ಲದೇ ಹೋಗಲಿ ಎಂದು ಶಪಿಸಿಬಿಟ್ಟರು! ಅರಿಯದೇ ಮಾಡಿದ್ದರೂ ಅಹಲ್ಯೆಗೆ ಸಾವಿರಾರು ವರ್ಷಗಳ ಕಾಲ ಶಿಲೆಯಾಗಿ ಬಿದ್ದಿರು ಎಂದು ಶಾಪವಿತ್ತರು. ಪಾಪದ ಅಹಲ್ಯೆ ಆ ಕ್ಷಣದಲ್ಲೇ ಅತ್ತೂ ಕರೆದೂ ಪರಿಪರಿಯಿಂದ ಪ್ರಾರ್ಥಿಸಿಕೊಳ್ಳಲಾಗಿ ತ್ರೇತಾಯುಗದಲ್ಲಿ ರಾಮ ಬರುವವರೆಗೂ ಹಾಗೇ ಬಿದ್ದಿರಬೇಕೆಂದೂ ರಾಮನ ಸ್ಪರ್ಶಮಾತ್ರದಿಂದ ಶಾಪ ವಿಮೋಚನೆಯಾಗುವುದೆಂದೂ ಉಶ್ಶಾಪ[ವಿಮೋಚನಾ ಸೂತ್ರ]ವಿತ್ತರು.


ಮಹರ್ಷಿ ವಿಶ್ವಾಮಿತ್ರರೊಡನೆ ಬಾಲ ರಾಮ ಮತ್ತು ಲಕ್ಷ್ಮಣರು ಕಾಡೊಳಗೆ ನಡೆಯುತ್ತಿರುವಾಗ ಒಂದೆಡೆಯಲ್ಲೊಂದು ದಿನ ಒಂದು ಶಿಲೆಯೆದುರು ನಿಂತ ವಿಶ್ವಾಮಿತ್ರರು ರಾಮನಿಗೆ ಅಹಲ್ಯೆಯ ಕುರಿತು ತಿಳಿಸುತ್ತಾ ಸಂಸ್ಕೃತದಲ್ಲಿ ಉತ್ತಮರಿಗೆ ಸಂಬೋಧಿಸುವ ’ಮಹಾಭಾಗ’ ಎನ್ನುವ ಪದವನ್ನು ಬಹಳ ಸರ್ತಿ ಬಳಸಿದರು. ಗುರುಗಳ ಆಂತರ್ಯವನ್ನರಿತ ಶ್ರೀರಾಮ ಆ ಶಿಲೆಯನ್ನು ಸ್ಪರ್ಶಿಸಿದ. ಆ ಕ್ಷಣದಲ್ಲಿ ಶಿಲೆ ಮಾಯವಾಗಿ ಅಹಲ್ಯೆ ಎದ್ದು ನಿಂತಳು. ಶ್ರೀರಾಮನಿಗೆ ತನ್ನ ಜೀವನದ ಕಹಿ ಘಟನೆಯನ್ನು ಅರುಹಿದಳು. ತನ್ನದಲ್ಲದ ತಪ್ಪಿಗೆ ತಾನು ಅನುಭವಿಸಬೇಕಾಗಿ ಬಂದುದನ್ನು ತಿಳಿಸುತ್ತಾ ಕಾಯಾ ವಾಚಾ ಮನಸಾ ತಾನು ಗೌತಮರಿಗೆ ಮಾತ್ರ ಅರ್ಪಿತಳು ಎಂದು ಹೇಳಿದಾಗ ರಾಮ ಅದಕ್ಕೆ ಸಮ್ಮತಿಸಿದ; ನಡೆದುಹೋದ ಘಟನೆಗೆ ವಿಷಾದಿಸಿದ. ಹೀಗೇ ಅಹಲ್ಯೆಗೆ ಮರುಜನ್ಮ ಕೊಟ್ಟ ಪುಣ್ಯಪುರುಷ ಶ್ರೀರಾಮ ಅಹಲ್ಯಾರಾಮನಾದ.

ವಿದ್ಯಾಭ್ಯಾಸವನ್ನು ವಿಶ್ವಾಮಿತ್ರರಲ್ಲಿ ಪೂರೈಸಿದ ರಾಮನನ್ನು ಮಿಥಿಲೆಯ ಜನಕರಾಯ ಏರ್ಪಡಿಸಿದ್ದ ಸ್ವಯಂವರಕ್ಕೆ ಹೋಗಲು ಪ್ರೇರೇಪಿಸಿದವರು ವಿಶ್ವಾಮಿತ್ರರು. ವಿದೇಹ ರಾಜನ ಮಗಳಾಗಿ ವೈದೇಹಿಯೆಂದೂ, ಜನಕನ ಮಗಳಾಗಿ ಜಾನಕಿಯೆಂದೂ ಹೆಸರುಳ್ಳ ಸೀತೆಯ ಸ್ವಯಂವರ ಅಲ್ಲಿ ನಡೆಯುತ್ತಿತ್ತು. ಅನೇಕ ಮಂದಿ ರಾಜಕುಮಾರರು ಅಲ್ಲಿಗೆ ಬಂದು, ಅಲ್ಲಿ ಇಡಲ್ಪಟ್ಟಿದ್ದ ಶಿವಧನುಸ್ಸನ್ನು ಎತ್ತಲಾಗದೇ ತೆರಳಿದ್ದರು. ಶ್ರೀರಾಮಚಂದ್ರ ಸಭೆಗೆ ನಡೆದ. ಮನದಲ್ಲಿ ಗುರುಹಿರಿಯರನ್ನು ನೆನೆದು ಶಿವಧನುಸ್ಸನ್ನು ಹೆದೆಯೇರಿಸುತ್ತಿದ್ದಂತೆಯೇ ಅದು ಮುರಿದುಹೋಯ್ತು! ಸ್ಫುರದ್ರೂಪಿ ಸೀತೆ ಮೆಲ್ಲನೆ ನಡೆತಂದು ಶ್ರೀರಾಮನ ಕೊರಳಿಗೆ ಪುಷ್ಪಮಾಲಿಕೆಯನ್ನು ಅರ್ಪಿಸಿದಳು ಎಂಬಲ್ಲಿಗೆ ಸೀತಾರಾಮರ ಕಲ್ಯಾಣ ನಡೆದು ಶ್ರೀರಾಮ ಸೀತಾರಾಮನಾದ.

ಆಪದಾಮಪಹರ್ತಾರಂ ದಾತಾರಂ ಸರ್ವಸಂಪದಾಮ್ |
ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಮ್ ||

[ಈ ಶ್ಲೋಕದಿಂದ ಆಪತ್ತು ತೊಲಗಿ, ಸಂಪತ್ತು ಪ್ರಾಪ್ತವಾಗುತ್ತದೆ]

ರಾಮ-ಸೀತೆಯರ ವಿವಾಹ ವೈಭವಗಳೆಲ್ಲ ಮುಗಿದು ಕೆಲವು ಸಮಯದ ನಂತರ ಮಂಥರೆ ಎಂಬ ಕೆಟ್ಟ ಮನದ ಸೇವಕಿಯ ಕಿವಿಯೂದುವಿಕೆಗೆ ದಶರಥನ ಮಡದಿ ಕೈಕೇಯಿ ಓಗೊಟ್ಟಳು. ಯುವರಾಜ ಪಟ್ಟಾಭಿಷೇಕದಲ್ಲಿ ರಾಮನಿಗೆ ಬದಲು ಕೈಕೇಯಿಯ ಮಗ ಭರತನಿಗೇ ಪಟ್ಟವಾಗಬೇಕೆಂದೂ, ರಾಮ ಅಯೋಧ್ಯೆಯಲ್ಲೇ ಇದ್ದರೆ ಅದು ಅಸಾಧ್ಯವಾಗುವುದರಿಂದ ರಾಮನನ್ನು ೧೪ ವರುಷ ಕಾಡಿಗಟ್ಟಬೇಕೆಂದೂ, ಹಿಂದೆ ಕೊಟ್ಟಿದ್ದ ವರಗಳಿಗೆ ಈ ವಿಷಯಗಳನ್ನಿಟ್ಟು ಕೇಳಬೇಕೆಂದೂ ಮಂಥರೆ ಹೇಳಿಕೊಟ್ಟ ಪ್ರಕಾರ ಕೈಕೇಯಿ ಕುಣಿದಳು. ಪರಿಸ್ಥಿತಿಯ ಅರಿವಾದ ದಶರಥ ತನ್ನ ರಾಜ್ಯವೇ ಹಾಳಾಗುತ್ತದೆಂಬ ಭಾವನೆ ತಳೆದ. ಚಿಕ್ಕಮ್ಮನಿಗೆ ಅಪ್ಪಕೊಟ್ಟ ವರಗಳನ್ನು ಮನಸಾ ಈಡೇರಿಸಿಕೊಡುವುದಾಗಿ ಶ್ರೀರಾಮ ಘೋಷಿಸಿದ.

ಧರ್ಮಾತ್ಮಾ ಸತ್ಯಸಂಧಶ್ಚ ರಾಮೋ ದಶರಥಿರ್ಯದಿ |
ಪೌರುಷೇ ಚಾಪ್ರತಿದ್ವಂದ್ಯಃ ಶರೈನಂ ಜಹಿ ರಾವಣಿಮ್ ||

[ಈ ಶ್ಲೋಕದಿಂದ ಕಾಮ-ಕ್ರೋಧಾದಿಗಳನ್ನು ಜಯಿಸಲು ಮನಸ್ಸು ಹೆಜ್ಜೆಯಿಡುತ್ತದೆ]


ಪ್ರೀತಿಯ ಮಗನನ್ನು ಅಗಲಿರಲಾರದ ದಶರಥ ಅನ್ನ-ನೀರನ್ನು ತ್ಯಜಿಸಿದ್ದರಿಂದ ರಾಮ ಕಾಡಿಗೆ ನಡೆದ ಕೆಲವೇ ದಿನಗಳಲ್ಲಿ ಕ್ಷೀಣಿಸುತ್ತಾ ನಡೆದ. ಕ್ಷಣ ಕ್ಷಣದಲ್ಲೂ ಶ್ರವಣಕುಮಾರನ ತಂದೆಯ ಶಾಪ ದಶರಥನನ್ನು ಕೆಣಕುತ್ತಿತ್ತು. ವೃದ್ಧಾಪ್ಯದ ತಂದೆ-ತಾಯಿಗಳಿಗೆ ಇದ್ದೊಬ್ಬ ಮಗನಾದ ಶ್ರವಣಕುಮಾರನನ್ನು ಅರಿವಿಲ್ಲದೇ, ಶಬ್ದವೇದಿ ವಿದ್ಯೆಯಿಂದ ಬಾಣ ಬಿಟ್ಟು ಕೊಂದಿದ್ದ ದಶರಥ! ಮೃಗಬೇಟೆಗೆ ತೆರಳಿದ್ದ ದಶರಥ ಕಾಡುಗಿಡಗಳ ಪೊದೆಯೊಳಗೆ ಅವಿತಿದ್ದು ದೂರದ ಕೊಳದಲ್ಲಿ ನೀರು ಕುಡಿಯಲು ಪ್ರಾಣಿಯಾವುದೋ ಬಂದಿರಬೇಕೆಂದು ಕೇವಲ ಅಲ್ಲುಂಟಾದ ಶಬ್ದದಿಂದ ಗ್ರಹಿಸಿದ. ಪ್ರತ್ಯಕ್ಷವಾಗಿ ಕಾಣದೇ ಇರುವಲ್ಲಿಂದಲೇ ಅಲ್ಲಿಗೆ ಬಾಣ ಹೊಡೆದ. ಬಾಯಾರಿಕೆಯಿಂದ ಬಳಲುತ್ತಿದ್ದ ತಂದೆ-ತಾಯಿಗಳಿಗಾಗಿ ಬಿಂದಿಗೆಯಲ್ಲಿ ನೀರನ್ನು ತುಂಬಿಸಿಕೊಳ್ಳುತ್ತಿದ್ದ ಶ್ರವಣನಿಗೆ ಬಾಣ ನಾಟಿತ್ತು. ಬಾಣತಾಗಿ ಸತ್ತಿರಬಹುದಾದ ಪ್ರಾಣಿಯನ್ನು ಹುಡುಕುತ್ತ ಬಂದ ದಶರಥ ಕಂಡಿದ್ದು ಮಾತ್ರ ಕೊನೆಯ ಘಳಿಗೆಯಲ್ಲಿ ಇರುವ ಶ್ರವಣನನ್ನು. ಅವನಿಂದಲೇ ಅವನ ಮಾತಾ-ಪಿತೃಗಳಿರುವುದನ್ನೂ ತಿಳಿದ. ಪಶ್ಚಾತ್ತಾಪ ಪಟ್ಟು, ಬಿಂದಿಗೆಯಲ್ಲಿ ನೀರನ್ನು ತಾನೇ ತುಂಬಿಸಿಕೊಂಡು ಶ್ರವಣನ ಪಾಲಕರೆಡೆಗೆ ನಡೆದಿದ್ದ. ಶ್ರವಣನ ನಿರೀಕ್ಷೆಯಲ್ಲಿದ್ದ ಆ ವೃದ್ಧ ಕುರುಡರು ಹೆಜ್ಜೆಯ ಸಪ್ಪಳ ಕೇಳಿ ಮಗನೇ ಬಂದಿರಬೇಕು ಎಂದುಕೊಳ್ಳುವಾಗ ದಶರಥ ತನ್ನಿಂದಾದ ತಪ್ಪನ್ನು ತಿಳಿಸಿ ಕ್ಷಮೆ ಯಾಚಿಸಿದ. ಕೋಪಗೊಂಡ ಶಾಂತನವ ಮತ್ತು ಜ್ಞಾನವತಿ, ಮುಪ್ಪಿನಲ್ಲಿ ತಮಗಾದಂತೇ ದಶರಥನಿಗೂ ಪುತ್ರವಿಯೋಗದ ದುಃಖ ಬಾಧಿಸಲಿ ಎಂದು ಶಾಪವಿತ್ತರು. ಅಂದು ಅವರು ನೀಡಿದ ಶಾಪದ ಫಲವಾಗಿ ದಶರಥ ಮಗನನ್ನು ಕಾಡಿಗೆ ಕಳುಹಿಸುವ ಪ್ರಸಂಗ ಬಂದಿತ್ತು. ಮುದ್ದಿನ ಮಗನ ವಿಯೋಗದಿಂದ ಬಸವಳಿದ ದಶರಥ ಬಹುಕಾಲ ಬಾಳಲಿಲ್ಲ.

ದಶರಥನ ದೇಹಾಂತ್ಯವಾದ ಘಳಿಗೆಯಲ್ಲಿ ಅಯೋಧ್ಯೆಗೆ ಅಜ್ಜನಮನೆಯಿಂದ ಮರಳಿದ ಇನ್ನೊಬ್ಬ ಮಗ ಭರತ ಅಣ್ಣ ರಾಮನೆಲ್ಲಿದ್ದಾನೆ ಎಂದು ತಾಯಿಯನ್ನು ಕೇಳಿದ. ನಿಮಿಷಗಳಲ್ಲಿ ಅಲ್ಲಿನ ವ್ಯವಹಾರಗಳನ್ನೆಲ್ಲಾ ಅರಿತ ಭರತನಿಗೆ ತಾಯಿ ಕೈಕೇಯಿಯ ಅಪ್ರಬುದ್ಧ ಮನಸ್ಸು ಅರ್ಥವಾಗಿತ್ತು. ನೋವಿನಿಂದ ಭರತ ರಾಮನನ್ನರಸಿ ಕಾಡಿಗೆ ತೆರಳಲು ಅನುವಾದ. ಭರತ ಕಾಡಿಗೆ ರಾಮನನ್ನು ಕಾಣಲು ಹೋಗುವ ಸುದ್ದಿಯನ್ನು ಕೇಳಿ ಅಯೋಧ್ಯಾವಾಸಿಗಳು ಪುಳಕಿತರಾದರು. ರಾಮನಿಲ್ಲದೇ ಅವರೂ ಬಹಳಕಾಲ ಇರಲಾರರು. ಎಲ್ಲರಿಗೂ ರಾಮ ಬೇಕು..ರಾಮ ಬೇಕೇ ಬೇಕು. ಸಾವಿರಾರು ಸಂಖ್ಯೆಯಲ್ಲಿ ಪುರಜನರು, ಪರಿಜನರು, ಸೈನಿಕರು ಎಲ್ಲರೂ ಭರತನನ್ನು ಸೇರಿಕೊಂಡರು. ಆ ಮಹಾ ತಂಡ ಸರಯೂ ನದಿಯನ್ನು ದಾಟಿ ಅಡವಿಯ ಹಾದಿಯನ್ನು ಕ್ರಮಿಸುತ್ತಾ ದಂಡಕಾರಣ್ಯದಲ್ಲಿದ್ದ ರಾಮನನ್ನು ಕಾಣಲು ಮುನ್ನಡೆದು ಬಂದಿತು. ಅಹೋರಾತ್ರಿ ನಡೆದೂ ನಡೆದೂ ರಾಮನಿರುವ ಕುರುಹನ್ನು ದೂರದಿಂದ ಅವರೆಲ್ಲಾ ಕಂಡರು. ಅಣ್ಣ ಶ್ರೀರಾಮಚಂದ್ರನನ್ನು ಪ್ರೀತಿಯ ತಮ್ಮ ಮನದಲ್ಲೇ ನೆನೆದ:

ಶ್ರೀರಾಘವಂ ದಶರಥಾತ್ಮಜಮಪ್ರಮೇಯಂ
ಸೀತಾಪತಿಂ ರಘುಕುಲಾನ್ವಯ ರತ್ನದೀಪಮ್ |
ಆಜಾನುಬಾಹುಮ್ ಅರವಿಂದದಳಾಯತಾಕ್ಷಮ್
ರಾಮಂ ನಿಶಾಚರವಿನಾಶಕರಮ್ ನಮಾಮಿ ||

[ಈ ಶ್ಲೋಕವನ್ನು ಪಠಿಸುವುದರಿಂದ ಭಯ ನಿವಾರಣೆಯಾಗುತ್ತದೆ.]

ದೂರದಲ್ಲಿ ಸೈನಿಕರೊಟ್ಟಿಗೆ ಬರುತ್ತಿರುವ ಭರತನನ್ನು ಕಂಡು ಲಕ್ಷ್ಮಣನಿಗೆ ಎಲ್ಲಿಲ್ಲದ ಕೋಪವುಕ್ಕೇರಿತು! ನಾಡಿನ ಹಂಗುತೊರೆದು ಕಾಡೊಳಗೆ ಇರಬಂದರೂ ಇಲ್ಲಿಯೂ ತಮಗೆ ನೆಮ್ಮದಿಯಿಂದಿರಲು ಬಿಡುವುದಿಲ್ಲವಲ್ಲ ಎಂಬ ಅನಿಸಿಕೆಯಿಂದ ಲಕ್ಷ್ಮಣ ಕ್ರುದ್ಧನಾದ. ಲಕ್ಷ್ಮಣನ ಕೋಪವನ್ನರಿತ ಶ್ರೀರಾಮ ಸನ್ನೆಯಲ್ಲೇ ಲಕ್ಷ್ಮಣನಿಗೆ ಸುಮ್ಮನಿರುವಂತೇ ಆಜ್ಞೆಮಾಡಿದ. ಭರತ ಮುಂದಾಗಿ ಬರಲಿ ಆತ ಯುದ್ಧಕ್ಕಾಗಿಯೇ ಬಂದರೂ ಆತ ನಮ್ಮವನೇ. ನಮಗಿಂತಾ ಚಿಕ್ಕವಯಸ್ಸಿನವನಾದ ಆತನಿಗೆ ತಿಳಿಹೇಳಿದರಾಯ್ತು ಎಂಬ ಭಾವನೆ ರಾಮಚಂದ್ರನದ್ದು. ಸಾಗಿಬಂದ ಭರತ ಬಹುಕಾಲದಿಂದ ಕಂಡಿರದ ಅಣ್ಣನನ್ನು ಕಂಡು ಕೈಮುಗಿದ, ಬಿಗಿದಪ್ಪಿ ತನ್ನ ತಾಯಿ ಎಸಗಿದ ಕೃತ್ಯಕ್ಕೆ ಪಶ್ಚಾತ್ತಾಪ ಪಟ್ಟು ಕಣ್ಣೀರ್ಗರೆದ.

ತಮ್ಮ ಭರತನನ್ನು ಆದರಿಸಿದ ರಾಮ ಅಯೋಧ್ಯೆಯಿಂದ ಅಲ್ಲಿನವರೆಗೆ ಅಭಿಮಾನ-ಪ್ರೀತಿಯಿಂದ ಭರತನೊಟ್ಟಿಗೆ ನಡೆದುಬಂದ ಜನಸ್ತೋಮಕ್ಕೆ ವಂದಿಸಿದ. ಎಲ್ಲರಲ್ಲಿಯೂ ಕ್ಷೇಮವೇ ? ಎಂದು ಸಾಮೂಹಿಕವಾಗಿ ವಿಚಾರಿಸಿದ. ತಮ್ಮ ಭರತನಲ್ಲಿ ಆಮೇಲೆ ಮನೆಯ ಕಡೆಗಿನ ವಿಷಯ ಕೇಳತೊಡಗಿದ. ರಾಮ ಕಾಡಿಗೆ ನಡೆದ ತರುವಾಯ ನಡೆದ ಘಟನೆಗಳನ್ನು ಭರತ ಅಣ್ಣನಿಗೆ ಚಾಚೂ ತಪ್ಪದೇ ತಿಳಿಸಿ, ತಂದೆ ಸ್ವರ್ಗಸ್ಥರಾದ ವಿಷಯವನ್ನೂ ತಿಳಿಸಿದ. ತಮ್ಮೆಲ್ಲರನ್ನೂ ಅತ್ಯಂತ ಪ್ರೀತಿಯಿಂದ ಸಲಹುತ್ತಿದ್ದ ತಂದೆಯ ಅವಸಾನವನ್ನು ಆಲಿಸಿದ ಶ್ರೀರಾಮನ ಅರವಿಂದ ಲೋಚನಗಳಿಂದ ಧಾರಾಕಾರವಾಗಿ ನೀರು ಹರಿಯಿತು. ಪಿತೃವಾಕ್ಯ ಪರಿಪಾಲನೆಯ ಕರ್ತವ್ಯಕ್ಕೆ ತಲೆಬಾಗಿ ಕಾಡಿಗೆ ತಾನು ಬಂದಿದ್ದೇ ತನ್ನ ತಂದೆಯ ಅವಸಾನಕ್ಕೆ ಕಾರಣವಾಯ್ತೇ ಎಂದು ಮಮ್ಮಲ ಮರುಗಿದ. ಚೇತರಿಸಿಕೊಂಡ ಶ್ರೀರಾಮ ತಮ್ಮಂದಿರಾದ ಭರತ ಮತ್ತು ಲಕ್ಷ್ಮಣರೊಂದಿಗೆ ಹತ್ತಿರದಲ್ಲಿರುವ ಕೊಳದಲ್ಲಿ ಮುಳುಗೆದ್ದು ಶುಚಿರ್ಭೂತನಾಗಿ ಪಿತೃಕಾರ್ಯವಾಗಿ ತನ್ನಲ್ಲಿರುವ ಭುಂಜಿಸುವ ವಸ್ತುಗಳಿಂದ ಪಿಂಡಪ್ರದಾನ ಮಾಡಿದ.

ಬಂದ ದಣಿವಾರಿಸಿಕೊಂಡ ಜನರೆಲ್ಲರೂ ಹೊರಡಲಣಿಯಾಗಿ ತಾವು ರಾಮನನ್ನು ಮರಳಿ ಕರೆದೊಯ್ಯಲು ಬಂದಿದ್ದನ್ನು ತಿಳಿಸಿದರು. ಭರತ ಒಂದೇ ಸಮನೆ ರಾಮ ಬರಲೇಬೇಕೆಂದು ಹಠಹಿಡಿದ. ವ್ರತಭಂಗವಾಗಕೂಡದೆಂದು ತಿಳಿಸಿದ ರಾಮನಲ್ಲಿ ಕೊನೇಪಕ್ಷ ಪಾದುಕೆಯನ್ನಾದರೂ ಕೊಡುವಂತೆಯೂ, ಅಣ್ಣ ಬರುವವರೆಗೆ ತಾನು ಅದನ್ನೇ ಸಿಂಹಾಸನದಮೇಲೆ ಇರಿಸಿ ರಾಮನ ಹೆಸರಿನಲ್ಲಿ ರಾಜ್ಯಭಾರ ಮಾಡುವುದಾಗಿ ವಿನಂತಿಸಿದ. ತಮ್ಮ ಭರತನ ಉತ್ಕಟೇಚ್ಛೆಯಂತೇ ಶ್ರೀರಾಮ ಪಾದುಕಾ ಪ್ರದಾನ ನಡೆಸಿದ. ೧೪ ವರುಷಗಳನ್ನು ಕಳೆದು ತಾನು ಮರಳುವುದಾಗಿಯೂ ಭರವಸೆಯಿತ್ತ. ರಾಮಪಾದುಕೆಗಳೊಡನೆ ಅಯೋಧ್ಯೆಗೆ ಮರಳಿದ ಆ ಮಹಾಜನಸಂದಣಿ ಪಾದುಕಾ ಪಟ್ಟಾಭಿಷೇಕ ನಡೆಸಿತು. ನಂದಿಗ್ರಾಮದಲ್ಲಿ ನೆಲೆನಿಂತು ಅಲ್ಲಿಂದಲೇ ಅಣ್ಣನ ಹೆಸರಿನಲ್ಲಿ ಭರತ ರಾಜ್ಯಭಾರವನ್ನು ನಡೆಸಿದ.

ನಮೋಸ್ತು ರಾಮಾಯ ಸುಲಕ್ಷ್ಮಣಾಯ ದೇವ್ಯೈ ಚ ತಸ್ಯೈ ಜನಕಾತ್ಮಜಾಯೈ |
ನಮೋಸ್ತುರುದ್ರೇಂದ್ರಯಯಾನಿಲೇಭ್ಯೋ ನಮೋಸ್ತು ಚಂದ್ರಾರ್ಕಮರುದ್ಗಣೇಭ್ಯಃ ||

[ಈ ಶ್ಲೋಕದಿಂದ ಉತ್ತಮ ಸಂಕಲ್ಪದಿಂದ ಪ್ರಾರಂಭಿಸಿದ ಕಾರ್ಯವು ಸಫಲವಾಗುತ್ತದೆ]


ಎಲ್ಲಿಲ್ಲದ ಬಂಗಾರದ ಮೈಬಣ್ಣದ ಜಿಂಕೆ ಕಾಣಿಸಿಕೊಂಡು ಸೀತೆಯ ಮನಸ್ಸನ್ನು ಕದ್ದು ಆಕೆ ಬೇಕೆಂದು ಹಠ ಹಿಡಿದಾಗ, ವಿಧಿಯಿಲ್ಲದೇ ಜಿಂಕೆಯ ಬೆನ್ನಟ್ಟಿದ ರಾಮನಿಗೆ ಸೀತೆಯ ಅಪಹರಣ ಆಗಬಹುದು ಎಂಬ ಭಾವನೆಯಿರಲಿಲ್ಲ. ಆಡವಿಯಲ್ಲಿ ಮಾಯಾವಿಗಳು-ರಕ್ಕಸರು ಇರುತ್ತಾರೆ-ಉಪಟಳ ನೀಡುತ್ತಾರೆ ಎಂಬುದೆಲ್ಲಾ ತಿಳಿದದ್ದೇ ಆಗಿತ್ತು. ಗುಡಿಸಲಿನಲ್ಲಿ ಲಕ್ಷ್ಮಣ ಸೀತೆಯ ಬೆಂಗಾವಲಿಗೆ ಇದ್ದನೆಂಬ ಭರವಸೆಯಿತ್ತು. ಯಾವಾಗ ಮಾಯಾಜಿಂಕೆ ರಾಮನ ಬಾಣದಿಂದ ಮಾರೀಚನಾಗಿ ಬದಲಾಗುತ್ತಾ ಸಾಯುವುದಕ್ಕೂ ಮೊದಲು " ಹಾ ಸೀತಾ, ಹಾ ಲಕ್ಷ್ಮಣಾ " ಎಂದು ಕೂಗಿದ್ದು ಕೇಳಿಸಿತೋ ಆಗ ರಾಮನಿಗೆ ಏಲ್ಲೋ ತಾಳತಪ್ಪುತ್ತಿರುವ ಅನುಭವ ಸ್ವಲ್ಪ ಆಯ್ತು. ಅಣ್ಣನ ದನಿಯ ಅಣುಕುದನಿಯನ್ನು ಗುರುತಿಸಲು ವಿಫಲನಾದ ಲಕ್ಷ್ಮಣ, ಅಣ್ಣನಿಗೇನೋ ಆಪತ್ತು ಬಂದಿದೆಯೆಂದು ಭಾವಿಸಿ ತಳಮಳಗೊಂಡು ಅನ್ಯಮಾರ್ಗವಿಲ್ಲದೇ, ಗುಡಿಸಲಿನ ಸುತ್ತ ಹೊರಗೆ ಮೂರು ರೇಖೆಗಳನ್ನೆಳೆದು ಅಗ್ನಿಯಲ್ಲಿ ಪ್ರಾರ್ಥಿಸಿದ. " ಭವತಿ ಭಿಕ್ಷಾಂ ದೇಹಿ" ಎಂದ ವೇಷಧಾರೀ ರಾವಣನಿಗೆ ಗುಡಿಸಲಿನೊಳಗೆ ನುಗ್ಗದಂತೇ ಅಗ್ನಿ ಜ್ವಲಿಸಿ ತಡೆದ! "ತಾಯೀ ಒಬ್ಬಳೇ ಇದ್ದೀಯಲ್ಲಾ ನಾನು ಒಳ ಬರುವುದು ತರವಲ್ಲ ನೀನೇ ಹೊರಗೆ ಬಂದು ನೀಡು" ಎಂದ ಕಳ್ಳ ಸನ್ಯಾಸಿಗೆ ಭಿಕ್ಷೆ ನೀಡಲು ಹೋದ ಆ ಕ್ಷಣದಿಂದ ಸೀತೆ ರಾವಣನ ರಾಜ್ಯಕ್ಕೆ ಹೋಗಬೇಕಾಯ್ತು! ವನವಾಸದಲ್ಲಿದ್ದಾಗ ಸೀತಾಪಹರಣದಿಂದ ಬಹುವಾಗಿ ನೊಂದಿದ್ದ ರಾಮ ಅಡವಿಯ ಗಿಡ-ಗೋಪಾಲರ ಕೂಡ, ಹರಿವ ತೊರೆ-ಝರಿಗಳ ಕೂಡ ಸಹಿತ " ಓ ಗಿಡಮರಗಳೇ ನನ್ನ ಸೀತೆಯನ್ನು ಕಂಡಿರೇ? ಓ ಪಶುಪಕ್ಷಿಗಳೇ ನನ್ನ ಸೀತೆಯನ್ನು ಕಂಡಿರೇ? ಓ ಹರಿಯುವ ತೊರೆಗಳೇ ನನ್ನ ಸೀತೆಯನ್ನು ಕಂಡಿರೇ?" ಎನ್ನುತ್ತಿದ್ದನಂತೆ.

ತದುನ್ನ ಸಂ ಪಾಂಡು ರದಂತಮವ್ರಣಂ ಶುಚಿಸ್ಮಿತಂ ಪದ್ಮಪಲಾಶಲೋಚನಮ್|
ದ್ರಕ್ಷ್ಯೇ ತದಾರ್ಯಾವದನಂ ಕದಾ ನ್ವಹಂ ಪ್ರಪನ್ನ ತಾರಾಧಿಪತುಲ್ಯ ದರ್ಶನಮ್ ||

[ಈ ಶ್ಲೋಕದಿಂದ ಕಳೆದುಹೋದ ವಸ್ತುವು ಪುನರ್ಪ್ರಾಪ್ತಿಯಾಗುತ್ತದೆ]

ಸಾದಾ ಮಾನವನಾಗಿ ಸೀತೆಯನ್ನು ಹುಡುಕುತ್ತಾ ಸವೆಸಿದ ಕಾಡಹಾದಿ ಅದೆಷ್ಟು ಯೋಜನಗಳೋ, ಎಷ್ಟು ಗಾವುದಗಳೋ ಲೆಕ್ಕವಿಲ್ಲ. ಆ ಕಲಘಟ್ಟದಲ್ಲಿ ಈ ಅಣ್ಣ-ತಮ್ಮ ಅನುಭವಿಸಿದ ಮಾನಸಿಕ ವ್ಯಾಧಿ ಅಳೆಯಲಾಗುವುದಿಲ್ಲ. ಎಲ್ಲೆಲ್ಲಿ ಇದ್ದರೋ ಏನನ್ನು ತಿಂದರೋ ಹಗಲೂ ರಾತ್ರಿ ಸೀತೆಯನ್ನರಸುತ್ತಾ ಮುನ್ನಡೆದಿದ್ದರು. ಜಠಾಯು, ಸಂಪಾತಿ ರಾವಣನನ್ನು ಕಂಡೆವೆಂದರು, ಆತ ಸೀತೆಯನ್ನು ಪುಷ್ಪಕ ವಿಮಾನದಲ್ಲಿ ಕದ್ದೊಯ್ವಾಗ ಆತನ ಕೂಡ ಜಗಳವಾಡಿದ್ದಕಾಗಿ ಖಡ್ಗದಿಂದ ಆತ ಜಠಾಯುವಿನ ರೆಕ್ಕೆಯನ್ನು ಕಡಿದು ಬಿಸುಟಿದ್ದ. ರೆಕ್ಕೆಮುರಿದ ಹದ್ದು ಕೆಳಗೆ ಬಿದ್ದು, ರಾಮನ ಬರುವಿಕೆಗಾಗಿ ಕಾದು ಜೀವಹಿಡಿದಿದ್ದು, ರಾಮನಿಗೆ ಎಲ್ಲವನ್ನೂ ಅರುಹಿತು.

ರಾಮಭದ್ರ ಮಹೇಶ್ವಾಸ ರಘುವೀರ ನೃಪೋತ್ತಮ|
ಭೋ ದಶಾಸ್ಯಾಂತ ಕಾಸ್ಮಾಕಂ ರಕ್ಷಾಂ ದೇಹಿ ಶ್ರಿಯಂ ಚ ಮೇ ||

[ಈ ಶ್ಲೋಕದಿಂದ ವ್ಯಾಧಿ ನಿವಾರಣೆಯಾಗುತ್ತದೆ]

ನಡೆಯುತ್ತಾ ನಡೆಯುತ್ತಾ ಋಷ್ಯಮೂಕ ಪರ್ವತದ ತಪ್ಪಲಿಗೆ ಬಂದಾಗ ಪರ್ವತದ ಎತ್ತರದ ತುದಿಯಿಂದ ಸುಗ್ರೀವ ಇವರನ್ನು ಕಂಡ. ಇಬ್ಬರನ್ನೂ ಕರೆತರುವಂತೇ ಮಂತ್ರಿ ಹನುಮನನ್ನು ಕಳಿಸಿದ. ನಡೆಯಲು ಬಹುದೂರವಾಗುವ ಕಾರಣ ಹನುಮ ಇಬ್ಬರನ್ನೂ ಹೆಗಲಮೇಲೆ ಹೊತ್ತು ಸುಗ್ರೀವನಲ್ಲಿಗೆ ಬಂದ. ಇಲ್ಲಿಯೇ ರಾಮ-ಹನುಮರ ಮೊದಲ ಭೇಟಿ ನಡೆದಿದ್ದು. ಸುಗ್ರೀವನದ್ದೂ ಹೆಂಡತಿಯನ್ನು ಕಳೆದುಕೊಂಡ ಕಥೆ! ಅಣ್ಣ ವಾಲಿ ಅಕ್ರಮದಿಂದ ಸುಗ್ರೀವನ ಹೆಂಡತಿಯನ್ನು ತನ್ನ ರಾಣಿಯನ್ನಾಗಿ ಮಾಡಿಕೊಂಡು ರಾಜ್ಯನಡೆಸುತ್ತಿದ್ದ. ಅದರ ಹಿನ್ನೆಲೆಯರಿತ ಸದ್ಧರ್ಮಿ ಶ್ರೀರಾಮ ವಾಲಿಯನ್ನು ವಧಿಸಿ ಸುಗ್ರೀವನಿಗೆ ಪಟ್ಟಗಟ್ಟಿದ. ಆ ಸಹಾಯಕ್ಕೆ ಪ್ರತಿ ಸಹಾಯವಾಗಿ ಇಡೀ ವಾನರಸೇನೆ ಸೀತೆಯ ಹುಡುಕುವಿಕೆಯಲ್ಲಿ ತೊಡಗಿತು. ಹನುಮನ ಮುಂದಾಳತ್ವದಲ್ಲಿ ಮುನ್ನಡೆದ ಆ ಸೇನೆಗೆ ಯಾವ ದಿಕ್ಕಿನಲ್ಲಿ ಹೇಗೆ ಹೋಗಬೇಕೆಂಬುದನ್ನು ಸನ್ಯಾಸಿಯೊಬ್ಬ ಹನುಮನಿಗೆ ವಿವರಿಸಿದ. ಬೃಹದಾಕಾರವಾಗಿ ಬೆಳೆದ ವೀರಾಂಜನೇಯ ಸಾಗರೋಲ್ಲಂಘನ ಮಾಡಿ ಲಂಕೆಗೆ ತೆರಳಿದ. ಅಲ್ಲಿ ಎಲ್ಲೆಲ್ಲೂ ಹುಡುಕಾಡಿ ಕೆಲವು ರಕ್ಕಸರನ್ನು ಬಡಿದುರುಳಿಸಿ ಅಶೋಕವನದಲ್ಲಿ ಕುಳಿತಿರುವ ಸೀತಾಮಾತೆಯನ್ನು ಕಂಡ.

ಸರ್ವಾನ್ ಲೋಕಾನ್ ಸುಸಂಹೃತ್ಯ ಸಭೂತಾನ್ ಸಚರಾಚರಾನ್|
ಪುನರೇವ ತಥಾ ಸ್ರಷ್ಟುಂ ಶಕ್ತೋ ರಾಮೋ ಮಹಾಯಶಾಃ ||

[ಈ ಶ್ಲೋಕದಿಂದ ದುಷ್ಕರ ಕಾರ್ಯಸಿದ್ಧಿಯಾಗುತ್ತದೆ]

ರಾಮನ ದೂತನಾಗಿ ಹನುಮ ತಾನು ಬಂದೆನೆಂದೂ ಶ್ರೀರಾಮಚಂದ್ರ ಕ್ಷೇಮವೆಂದೂ ಸೀತೆಯಲ್ಲಿ ವಿಷಯ ಭಿನ್ನವಿಸಿ ಶೀಘ್ರದಲ್ಲಿ ಆಕೆಯನ್ನು ರಕ್ಷಿಸಿ ಕರೆದೊಯ್ಯುವುದಾಗಿ ಭರವಸೆಯಿತ್ತ ಹನುಮ ಸೀತೆಯಿಂದ ಗುರುತಿಗಾಗಿ ಚೂಡಾಮಣಿಯನ್ನು ಪಡೆದು, ತಾನು ಬಂದ ಸುದ್ದಿ ತಿಳಿದು ತನ್ನನ್ನು ಕರೆಯಿಸಿ ಅವಮಾನಿಸಿದ ರಕ್ಕಸ ರಾವಣನಿಗೆ ಬುದ್ಧಿ ಕಲಿಸುವ ಸಲುವಾಗಿ, ಲಂಕೆಗೇ ಬೆಂಕಿ ಇಟ್ಟು ಹೊರಟ ಹನುಮಂತ ಮರಳಿ ರಾಮನಲ್ಲಿಗೆ ಬಂದ. ಗುರುತಿಗಾಗಿ ಚೂಡಾಮಣಿಯನ್ನು ತಂದೆನೆಂದು ರಾಮನ ಕೈಗೆ ಅದನ್ನಿತ್ತ ವೇಳೆ ರಾಮನಿಗೆ ಸೀತೆಯೆಂಬ ಅನರ್ಘ್ಯರತ್ನದ ಪ್ರೀತಿ ಮತ್ತೆ ಹೃದಯ ತುಂಬಿತು. ಸಕಲ ವಾನರಸೇನಾ ಸಮೇತನಾಗಿ ನಡೆದ ಶ್ರೀರಾಮ ಸಾಗರದ ದಡದಲ್ಲಿ ನಿಂತು ದಾಟುವ ಪರಿಯನ್ನು ಚಿಂತಿಸಿದ. ಸೇತುವೆಯನ್ನು ಕಟ್ಟುವುದೇ ಅನಿವಾರ್ಯ ಎಂದು ನಿರ್ಣಯಿಸಿದ ರಾಮನ ಸೇವೆಗೆ ಪುಟ್ಟ ಅಳಿಲೂ ಸೇರಿದಂತೇ ವಾನರರೆಲ್ಲರೂ ಕಲ್ಲು-ಮಣ್ಣುಗಳನ್ನು ತಂದು ತಂದು ಸುರಿದರು.

ಜಯತ್ಯತಿಬಲೋ ರಾಮೋ ಲಕ್ಷ್ಮಣಶ್ಚ ಮಹಾಬಲಃ |
ರಾಜಾ ಜಯತಿ ಸುಗ್ರೀವೋ ರಾಘವೇಣಾಭಿಪಾಲಿತಃ ||

ದಾಸೋಹಂ ಕೋಸಲೇಂದ್ರಸ್ಯ ರಾಮಸ್ಯಾಕ್ಲಿಷ್ಟಕರ್ಮಣಃ |
ಹನುಮಾನ್ ಶತ್ರುಸೈನ್ಯಾನಾಂ ನಿಹಂತಾ ಮಾರುತಾತ್ಮಜಃ ||

ನ ರಾವಣ ಸಹಸ್ರಂ ಮೇ ಯುದ್ಧೇ ಪ್ರತಿಬಲಂ ಭವೇತ್ |
ಶಿಲಾಭಿಸ್ತು ಪ್ರಹರತಃ ಪಾದಪೈಶ್ಚ ಸಹಸ್ರಶಃ ||

ಅರ್ದಯಿತ್ವಾ ಪುರೀಂ ಲಂಕಾಮಭಿವಾದ್ಯ ಚ ಮೈಥಿಲೀಮ್ |
ಸಮೃದ್ಧಾರ್ಥೋ ಗಮಿಷ್ಯಾಮಿ ಮಿಷತಾಂ ಸರ್ವರಕ್ಷಸಾಮ್ ||

ಅರ್ಥಸಿದ್ಧಿಂ ತು ವೈದೇಹ್ಯಾ ಪಶ್ಯಾಮ್ಯಹ ಮುಪಸ್ಥಿತಾಮ್ |
ರಾಕ್ಷಸೇಂದ್ರ ವಿನಾಶಂ ಚ ವಿಜಯಂ ರಾಘವಸ್ಯ ಚ ||

[ ಆ ಶ್ಲೋಕಗಳಿಂದ ಸರ್ವಕಾರ್ಯ ಸಿದ್ಧಿಯಾಗುತ್ತದೆ]

ರಾಮಸೇತುವಿನ ನಿರ್ಮಾಣ ನಡೆದೇ ಹೋಯ್ತು. ಎಲ್ಲೆಲ್ಲೂ ಜಯಜಯಕಾರ ಮೊಳಗುತ್ತಿತ್ತು. ಶಂಖ, ಜಾಗಟೆ, ಕೊಂಬು-ಕಹಳೆ, ಭೇರಿ, ನಗಾರಿ ಮುಂತಾದ ವಾದ್ಯಗಳು ಮೊಳಗುತ್ತಿದ್ದವು. ಕಪಿವೀರರು ಈಟಿ, ಭರ್ಚಿ, ಬಿಲ್ಲು-ಬಾಣ, ಮುಸಲ, ತೋಮರ ಮೊದಲಾದ ಹಲವಾರು ಆಯುಧಗಳನ್ನು ಹಿಡಿದು ಲಂಕೆಗೆ ಧಾವಿಸಿದರು. ಘನಘೋರ ಯುದ್ಧದಲ್ಲಿ ರಾವಣ, ಕುಂಭಕರ್ಣ, ಮೇಘನಾದ ಮೊದಲಾದ ಮಹಾ ಮಹಾ ರಕ್ಕಸರು ಮಡಿದರು. ವಿನೀತನಾಗಿ ರಾಮನಲ್ಲಿ ಶರಣುಬಂದಿದ್ದ, ಧರ್ಮಮಾರ್ಗಿಯಾದ ವಿಭೀಷಣನನ್ನು ಯುದ್ಧಾನಂತರದಲ್ಲಿ ರಾವಣನ ಲಂಕೆಗೆ ಅಧಿಪತಿಯನ್ನಾಗಿ ಕೂಡ್ರಿಸಿ ಪಟ್ಟಾಭಿಷೇಕ ಮಾಡಲಾಯ್ತು. ಸೀತೆಯ ಪುನರ್ಮಿಲನವಾದ ಸಂತಸದಲ್ಲಿ ವಿಜಯೋತ್ಸವ ನಡೆದು ಸೀತಾಸಮೇತ ಶ್ರೀರಾಮ ಅಯೋಧ್ಯೆಗೆ ಮರಳಿದ. ಅಲ್ಲಿಗೆ ಹದಿನಾಲ್ಕುವರ್ಷಗಳ ವನವಾಸವೂ ಮುಗಿದು ರಾಮ ಅಯೋಧ್ಯೆಗೆ ಬರುವ ನಿರೀಕ್ಷೆ ಇದ್ದಿದ್ದರಿಂದ ಇಡೀ ಅಯೋಧ್ಯಾ ನಗರ ತಳಿರುತೋರಣಗಳಿಂದ ಕಂಗೊಳಿಸುತ್ತಿತ್ತು. ಪುರದ ಜನರು ರಸ್ತೆಗಳನ್ನು ಸ್ವಚ್ಛಗೊಳಿಸಿ ಸಗಣಿಯಿಂದ ಸಾರಿಸಿ ರಂಗೋಲಿಗಳನ್ನು ಬರೆದಿದ್ದರು. ಭರತ-ಶತ್ರುಘ್ನರು ಅಣ್ಣನ ಬರುವಿಕೆಗಾಗಿ ಕಾದಿದ್ದರು. ಹೇಳಿದ ಮಾತಿನಂತೇ ಶ್ರೀರಾಮ ಸಪತ್ನೀಕನಾಗಿ, ಲಕ್ಷ್ಮಣ ಸಹಿತನಾಗಿ ನಡೆದುಬಂದ. ಜೊತೆಗೆ ಹೊಸ ಸೇರ್ಪಡೆಯಾಗಿ ಹನುಮನೂ ಇದ್ದ!

ಅಯೋಧ್ಯೆಯ ಪ್ರಜೆಗಳು ರಾಮ ಬರುವ ರಸ್ತೆಯ ಇಕ್ಕೆಲಗಳಲ್ಲಿ ಇರುವೆಯೋಪಾದಿಯಲ್ಲಿ ಜಾಗವೇ ಇಲ್ಲದಷ್ಟು ಜಮಾಯಿಸಿದ್ದರು. ಎಲ್ಲರೂ ಕೈಯ್ಯಲ್ಲಿ ಆರತಿ ತಟ್ಟೆಗಳನ್ನು ಹಿಡಿದಿದ್ದರು. ಗಜಗಾಂಭೀರ್ಯದಿಂದ ನಗುಮೊಗಹೊತ್ತು ನಡೆದುಬಂದ ಸೀತಾ-ರಾಮ-ಲಕ್ಷ್ಮಣರಿಗೆ ಗುಲಾಬಿ ಹೂವಿನ ದಳಗಳನ್ನೆರಚಿ ಸ್ವಾಗತ ನಡೆಯಿತು. ಅರಮನೆಯ ಪುರೋಹಿತರುಗಳು ವೇದಘೋಷ ನಡೆಸಿದರು. ತೆಂಗಿನಕಾಯಿ ಸುಳಿದು ನೆಲಕ್ಕೆ ಅಪ್ಪಳಿಸಿದರು. ಹೆಂಗಳೆಯರು ಪಾದಗಳನ್ನು ತೊಳೆದು ಅರಿಶಿನ-ಕುಂಕುಮಾದಿ ಮಂಗಳದ್ರವ್ಯಗಳನ್ನು ಪೂಸಿದರು. ವಿಧವಿಧದ ಹೂಗಳಿಂದ ಅರ್ಚಿಸಿದರು. ಕೆಲವರು ಓಕುಳಿಯೆತ್ತಿದರೆ ಇನ್ನೂ ಕೆಲವರು ದೃಷ್ಟಿ ಬಳಿದರು. ಒಟ್ಟಾರೆ ತಮತಮಗೆ ತೋಚಿದ ರೀತಿಯಲ್ಲಿ ಭವ್ಯವಾಗಿ ಸ್ವಾಗತ ಕೋರಿದರು. ಪಂಚವಾದ್ಯಾದಿ ಮಂಗಳವಾದ್ಯಗಳು ಮೊಳಗುತ್ತಲಿದ್ದವು. ಎಲ್ಲೆಲ್ಲೂ " ಶ್ರೀರಾಮ್ ಜೀ ಕೀ ಜೈ ಶ್ರೀರಾಮ್ ಜೀ ಕೀ ಜೈ " ಎಂಬ ಜೈಕಾರ ಕೇಳಿಬರುತ್ತಲಿತ್ತು.

ಮೆಲ್ಲಗೆ ಎಲ್ಲರೊಡನೆ ಒಂದಾಗುತ್ತಾ ನಡೆದುಬಂದ ಶ್ರೀರಾಮ ಅರಮನೆಯೆಡೆಗೆ ನಡೆದ. ಅರಮನೆಯಲ್ಲಿ ಮತ್ತೆ ಅರಮನೆಯ ಮುಖಪಂಟಪದಲ್ಲಿ ವಿಶೇಷ ಸ್ವಾಗತ ದೊರೆಯಿತು. ತಮ್ಮಂದಿರಾದ ಭರತ-ಶತ್ರುಘ್ನರು ಅಣ್ಣನ-ಅತ್ತಿಗೆ-ಲಕ್ಷ್ಮಣರ ಪಾದಗಳನ್ನು ತೊಳೆದರು. ಸುಗಂಧಭರಿತ ಹೂಹಾರಗಳನ್ನು ಅರ್ಪಿಸಿದರು. ನೀರಾಜನಗಳನ್ನು ಬೆಳಗಿ ಓಕುಳಿಯೆತ್ತಿ ಒಳಗೆ ಕರೆತಂದರು.

ಅಯೋಧ್ಯಾಗಮನದ ಕೆಲವುದಿನಗಳ ತರುವಾಯ ಒಂದು ಶುಭ ಮುಹೂರ್ತವನ್ನು ರಾಜಗುರುಗಳು ನಿರ್ಧರಿಸಿದರು. ಅಂದಿನದಿನ ನಸುಕಿನಲ್ಲೇ ಶೌಚ-ಸ್ನಾನಾದಿಗಳನ್ನೂ, ಮಧುಪರ್ಕಾದಿಗಳನ್ನೂ ತೀರಿಸಿಕೊಂಡ ಶ್ರೀರಾಮಚಂದ್ರ ವಿಧಿಯುಕ್ತವಾಗಿ ವೈದಿಕ ಹೋಮ-ಪೂಜಾದಿಗಳನ್ನು ನೆರವೇರಿಸಿದ. ಅತಿ ವಿಶಿಷ್ಟವಾಗಿ ಅಲಂಕೃತಗೊಂಡಿದ್ದ ಅರಮನೆಯಲ್ಲಿ, ಗೊತ್ತಾದ ಸಮಯಕ್ಕೆ ಸರಿಯಾಗಿ ಮಂಗಳವಾದ್ಯಗಳ ಇಂಪಾದ ಸಂಗೀತದಲ್ಲಿ ಶ್ರೀರಾಮಚಂದ್ರನನ್ನು ಸೀತಾಸಹಿತನಾಗಿ ಬಂಗಾರದ ಸಿಂಹಾಸನದಮೇಲೆ ಕುಳ್ಳಿರಿಸಿದ ರಾಜಗುರುಗಳು ರಾಮನ ತಲೆಗೆ ವಜ್ರ-ವೈಡೂರ್ಯಖಚಿತ ರಾಜಕಿರೀಟ ತೊಡಿಸಿದರು. ವೇದಘೋಷಗಳೂ ಜೈಕಾರಗಳೂ ಮುಗಿಲುಮುಟ್ಟಿದವು. ಪುಣ್ಯನದಿಗಳ ಅಭಿಮಂತ್ರಿತ ಜಲವನ್ನು ಮಾವಿನ ಎಲೆಗಳಿಂದ ಪ್ರೋಕ್ಷಿಸಿದ ರಾಜಗುರುಗಳು ರಾಜಾರಾಮನ ಪಟ್ಟಾಭಿಷೇಕದಲ್ಲಿ ರಾಜೋಪಚಾರ ಪೂಜೆಯನ್ನು ನಡೆಸಿದರು. ಭರತ-ಶತ್ರುಘ್ನ-ಲಕ್ಷ್ಮಣ-ಹನುಮತ್ಸಮೇತ ಶ್ರೀಸೀತಾರಾಮಚಂದ್ರರ ಪಟ್ಟಾಭಿಷೇಕ ಮಹೋತ್ಸವವು ಬಹಳ ವಿಜೃಂಭಣೆಯಿಂದ ಸಂಪನ್ನವಾಯ್ತು ಎಂಬಲ್ಲಿಗೆ ಕಥೆಗೆ ಸಾಕ್ಷೀಭೂತನಾಗಿ ಕಣ್ತುಂಬಿಕೊಂಡ ಆಂಜನೇಯ ಆನಂದಬಾಷ್ಪ ಸುರಿಸಿದ.

ವೈದೇಹೀಸಹಿತಂ ಸುರದ್ರುಮತಲೇ ಹೈಮೇ ಮಹಾಮಂಟಪೇ
ಮಧ್ಯೇಪುಷ್ಪಕಮಾಸನೇ ಮಣಿಮಯೇ ವೀರಾಸನೇ ಸುಸ್ಥಿತಮ್ |
ಅಗ್ರೇ ವಾಚಯತಿ ಪ್ರಂಭಂಜನಸುತೇ ತತ್ತ್ವಂ ಮುನಿಭ್ಯಃ ಪರಂ
ವ್ಯಾಖ್ಯಾಂತಂ ಭರತಾದಿಭಿಃ ಪರಿವೃತಂ ರಾಮಂ ಭಜೇ ಶ್ಯಾಮಲಮ್ ||

ವಾಮೇ ಭೂಮಿಸುತಾ ಪುರಶ್ಚ ಹನುಮಾನ್ ಪಶ್ಚಾತ್ ಸುಮಿತ್ರಾಸುತಃ
ಶತ್ರುಘ್ನೋ ಭರತಶ್ಚ ಪಾರ್ಶ್ವದಲಯೋರ್ವಾಯ್ವಾದಿಕೋಣೇಷು ಚ|
ಸುಗ್ರೀವಶ್ಚ ವಿಭೀಷಣಶ್ಚ ಯುವರಾಟ್ ತಾರಾಸುತೋ ಜಾಂಬವಾನ್
ಮಧ್ಯೇ ನೀಲಸರೋಜಕೋಮಲರುಚಿಂ ರಾಮಂ ಭಜೇ ಶ್ಯಾಮಲಮ್ ||

[ ಅಹ...ಅಹ..ಅಹ ...ರಾಗವಾಗಿ ಉಚ್ಚರಿಸಲು ಬರುವವರಿಗೆ ಎಂತಹ ಸುಲಲಿತ ಮಧುರಸಪಾನವೀ ಶ್ಲೋಕಗಳು ಅಲ್ಲವೇ? ಸಂಸ್ಕೃತಕ್ಕಿರುವ ಈ ತಾಕತ್ತು ಬೇರಾವ ಭಾಷೆಗೂ ಒಗ್ಗದಲ್ಲ! ಇದಲ್ಲವೇ ಭಾಷಾ ಸೊಬಗು ? ]

ಮಂಗಲಂ ಕೋಸಲೇಂದ್ರಾಯ ಮಹನೀಯಗುಣಾಬ್ಧಯೇ |
ಚಕ್ರವರ್ತಿತನೂಜಾಯ ಸಾರ್ವಭೌಮಾಯ ಮಂಗಳಮ್ ||

ಮಹನೀಯರೇ, ಅತ್ಯಾಸಕ್ತಿಯಿಂದ ರಾಮಕಥೆಯನ್ನು ಶ್ರೀರಾಮನ ಹುಟ್ಟಿನಿಂದ ಪಟ್ಟದವರೆಗೂ ಕೇಳಿದಿರಿ. ರಾಮಕಥೆಯೇ ಹಾಗೆ, ಅದು ವಾಲ್ಮೀಕಿ ಎಂಬ ಕೋಗಿಲೆಗೊಂದೇ ಅಲ್ಲ ಮಿಕ್ಕುಳಿದ ಹಕ್ಕಿಗಳಿಗೂ ಕೋಗಿಲೆಯ ಉಲಿಯನ್ನು ಅನುಕರಿಸಲು ಕಲಿಸುತ್ತದೆ, ಎಷ್ಟುಸರ್ತಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ. ಮತ್ತೊಮ್ಮೆ ಸಪರಿವಾರ ಸಹಿತನಾದ ಶ್ರೀ ಪಟ್ಟಾಭಿರಾಮನಿಗೆ ಸಾಷ್ಟಾಂಗವೆರಗುತ್ತಾ, ನಮ್ಮೆಲ್ಲರಿಗೂ ಶ್ರೀರಾಮಚಂದ್ರ ಸಕಲ ಸುಖವನ್ನೂ-ಸಮೃದ್ಧಿಯನ್ನೂ ಕರುಣಿಸಲಿ ಎಂಬ ಪ್ರಾರ್ಥನಾ ಶ್ಲೋಕದೊಂದಿಗೆ ರಾಮಕಥೆಗೆ ಸದ್ಯಕ್ಕೆ ಮಂಗಳಹಾಡೋಣ.

ಸ್ವಸ್ತಿಪ್ರಜಾಭ್ಯಃ ಪರಿಪಾಲಯಂತಾಂ ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾಃ |
ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ ಲೋಕಾಃ ಸಮಸ್ತಾ ಸುಖಿನೋ ಭವಂತು ||