ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, May 12, 2011

ಮೀನ್ ತಿಂದ್ರೆ ಮಾಪಾಪ ಕಾಶೀಗ್ಹೋದ್ರೆ ಮಾಪುಣ್ಯ!


ಮೀನ್ ತಿಂದ್ರೆ ಮಾಪಾಪ ಕಾಶೀಗ್ಹೋದ್ರೆ ಮಾಪುಣ್ಯ!

ಒಂದಾನೊಂದು ಸರೋವರವಿತ್ತಂತೆ, ಅದರಲ್ಲಿ ಕೊಕ್ಕರೆ ಮಹರ್ಷಿಗಳು ಒಂಟಿಕಾಲಲ್ಲಿ ನಿಂತು ಘೋರವಾದ ತಪಸ್ಸಿನಲ್ಲಿ ತೊಡಗುತ್ತಿದ್ದರಂತೆ! ಅವರು ಉಚ್ಚರಿಸುತ್ತಿದ್ದ ಮಂತ್ರ ’ಮೀನ್ ತಿಂದ್ರೆ ಮಾಪಾಪ ಕಾಶೀಗ್ಹೋದ್ರೆ ಮಾಪುಣ್ಯ.’ ಋಷಿಗಳ ತಪಸ್ಸನ್ನು ನೋಡಿ ಹಲವು ಮೀನುಗಳು ತಮ್ಮ ಆತ್ಮೋದ್ಧಾರಕ್ಕಾಗಿ ಕೊಕ್ಕರೆ ಋಷಿಗಳ ಹತ್ತಿರ ಹತ್ತಿರ ಬರುತ್ತಿದ್ದವಂತೆ. ತೀರಾ ಹತ್ತಿರಬಂದ ಮೀನಿಗೆ ಮಹರ್ಷಿಗಳು ತಮ್ಮ ಅದಮ್ಯ ತಪೋಬಲವನ್ನು ಉಪಯೋಗಿಸಿ ಒಂದೇ ಉಸುರಿಗೆ 'ಮೋಕ್ಷ' ಕರುಣಿಸುತ್ತಿದ್ದರಂತೆ. ಈ ಕಥೆ ಇಂದಿಗೂ ಹಲವಾರ್ ಸರ್ತಿ ಚಾಲ್ತಿಗೆ ಮರಳುತ್ತಿರುತ್ತದೆ. ನಮ್ಮ ರಾಜಕೀಯ ರಂಗದಲ್ಲಂತೂ ಇದು ಸತತ ಬಳಕೆಗೆ ಬೇಕಾಗುವ ತತ್ವಭರಿತ ಸಂಗತಿಯಾಗಿದೆ.

ಇದನ್ನೆಲ್ಲಾ ಇಲ್ಲ್ಯಾಕೆ ಹೇಳುತ್ತಿದ್ದೇನೆಂದರೆ ಮಣ್ಣಿನ ಮಕ್ಕಳ ರಾಜ್ಯಪರ್ಯಟನೆ ಶುರುವಾಗಿದೆ. ದೇವೇಗೌಡರು ತಮ್ಮ ಪ್ರಾಬಲ್ಯ ಕಡಿಮೆಯಾದಾಗ, ತಾವು ಸೋಲುವುದು ಅನುಭವಕ್ಕೆ ಬರುತ್ತಿರುವಾಗ, ತಮ್ಮ ತಂತ್ರ-ಪ್ರತಿತಂತ್ರ-ಕುತಂತ್ರಗಳು ಬುಡಮೇಲಾಗಿ ರಾಜಕೀಯ ಹೊಟ್ಟೆಯಮೇಲೆ ಒದ್ದೆಬಟ್ಟೆಹೊದ್ದುಕೊಳ್ಳುವ ಪ್ರಸಂಗ ಬಂದಾಗ ಅಥವಾ ಇನ್ನು ಯಾವ ಮಾರ್ಗವೂ ಉಳಿದಿಲ್ಲಾ ಎಂದು ಯೋಚಿಸುತ್ತಿರುವಾಗ ಅವರ ಕಣ್ಣಿಗೆ ಯಾರಾದರೂ ಕಾಣುತ್ತಾರೆ. ಸಿದ್ಧು, ಸಿಂಧ್ಯಾ, ಎಂ.ಪಿ.ಪ್ರಕಾಶ್ ಮುಂತಾದ ಹಲವು ಜನರನ್ನು ದಳದಿಂದ ಓಡಿಸಿದ ಅಪ್ಪ-ಮಕ್ಕಳಿಗೆ ಇತ್ತೀಚೆಗೆ ಅವರ ಹಣಬಲದಿಂದ ಉಳಿಸಿಕೊಂಡಿರುವ ಕೆಲವು ಕೆಲಸಕ್ಕೆಬಾರದ ತಲೆಗಳನ್ನು ಬಿಟ್ಟರೆ ಈಗ ಪಕ್ಷದಲ್ಲಿ ಹೇಳಿಕೊಳ್ಳುವ ಮುತ್ಸದ್ಧಿಗಳಾಗಲೀ, ಬುದ್ಧಿವಂತ ರಾಜಕಾರಣಿಗಳಾಗಲೀ ಉಳಿದಿಲ್ಲ.

ಒಂದುಕಡೆ ಕುಮಾರಣ್ಣನ ಸರ್ಕಸ್ ಕಂಪನಿಯ ಕೆಲಸಗಾರರೆಲ್ಲಾ ಮರದಕೆಳಗೆ ಬಿದ್ದ ಮಂಗನರೀತಿ ಒದ್ದಾಡುತ್ತಿದ್ದರೆ, ಕೆಲವರು ರಿಂಗ್ ಮಾಷ್ಟರ್ ಹೆದರಿಸಿದರೂ ಹೆದರದ ಮಟ್ಟಕ್ಕೆ ಬೆಳೆದುಬಿಟ್ಟಿದ್ದಾರೆ! ಅತ್ತ ಮನೆಯಲ್ಲಿ ಒಳಗೊಳಗೇ ಹೊಗೆಯುವ ಕಿಡಿಗಳು ಹೊರತೋರಿಕೆಗೆ ಪೂಜೆ-ಪುನಸ್ಕಾರಗಳನ್ನು ಅನುಸರಿಸುತ್ತವೆ. ’ರಾಧಿಕಾ ಕಲ್ಯಾಣ’ ವಾದಮೇಲಂತೂ ಗೌಡರು ಗರಮ್ಮಾಗಬೇಕೋ ಮುಗುಮ್ಮಾಗಬೇಕೋ ಅಥವಾ ಬಾಯಿಗೆ ಗಮ್ಮು ಹಾಕಿಕೊಂಡು ಸುಮ್ಮನಾಗಬೇಕೋ ತಿಳಿಯದೇ ಹಳಸಿದ ಮುಖಹೊತ್ತು ಹಾಸಿಗೆ ಕೊಡವಿಹಾಸಿದಂತೇ ಆಗಾಗ ಆಗಾಗ ಪಕ್ಷ ಹೇಗೆಲ್ಲಾ ಸಾಧನೆಮಾಡಿದೆ, ತಮಗೆ ಯಾವೆಲ್ಲಾ ಕಳಕಳಿ ಇದೆ ಎಂಬುದನ್ನು ಇಪ್ತಾರ್ ಕೂಟದವರೆಗೂ ಹೋಗಿ ತೋರಿಸಲು ಪ್ರಯತ್ನಿಸುತ್ತಾರೆ. ಸರ್ಕಸ್ ಮೇಷ್ಟ್ರಂತೂ ೩೦೦ ಕೋಟಿ ತರಿಸಿಕೊಂಡು ೫೦ ಕೋಟಿ ಸರ್ಕಸ್ಸಿಗೆ ಬಳಸಿದ್ದರಂತೆ, ಸರ್ಕಸ್ ಗೋತಾಹೊಡೆದಾಗ ೩೦೦ಕೋಟಿ ಕೊಟ್ಟ ಜನ ನಿಧಾನವಾಗಿ ಅದನ್ನು ಹಲುಬಲು ಶುರುವಿಟ್ಟಿದ್ದಾರಂತೆ! ಕೈಗೆ ಬಂದ ತುತ್ತು ಬಾಯಿಗೆ ಬರದಿದ್ದುದಕ್ಕೆ ನಮ್ಮ ಯಡ್ಯೂರಣ್ಣಂಗೆ ಮೇಷ್ಟ್ರು ಶಾಪ ಹಾಕಿದ್ದೇ ಹಾಕಿದ್ದು. ಸಾಲದ್ದಕ್ಕೆ ಅದ್ಯಾವನೋ ಮಾಂತ್ರಿಕ " ಇನ್ನು ಹದಿನೈದು ದಿನಗಳಲ್ಲಿ ನೀನೇ ಮುಖ್ಯಮಂತ್ರಿ, ನಿನ್ನನ್ನು ತಡೆಯುವ ಗಂಡಸ್ತನ[ಗಂಡಸುತನ] ಯಾರಿಗಿದೆ ? " ಎಂದು ಒದರುತ್ತಾ ೪೦ ಲಕ್ಷ ಬ್ಯಾಗಿಗೆ ಇಳಿಸಿಕೊಂಡು ಊರಿಗೆ ಹೋಗಿ ಮಲಗಿಬಿಟ್ಟನಂತೆ! ವಿಜ್ಞಾನಿಗಳೇ ತುಂಬಿದ ಬೆಂಗಳೂರೆಂಬ ಬೆಂಗಳೂರಲ್ಲಿ ವಿಧಾನಸೌಧದ ಸುತ್ತ ಕುರಿಕೋಳಿ ಬಲಿಗಳು, ಮಾಟ-ಮಂತ್ರ! ಅಕಟಕಟಾ ಇದೆಂಥಾ ವಿಪರ್ಯಾಸ!

ಗಾಂಧೀಜಿಗೆ ಅವಮಾನವಾಗುವ ಹಾಗೆ " ಈಗ ಗಾಂಧೀಜಿ ಇದ್ದಿದ್ದರೆ ಅವರೂ ಬ್ರಷ್ಟಾಚಾರವನ್ನು ಒಪ್ಪಿಕೊಳ್ಳುತ್ತಿದ್ದರು " ಎಂದೆಲ್ಲಾ ಹೇಳಿದ ತಪ್ಪಿಗೆ ಮಾಧ್ಯಮಗಳ ಹಲ್ಲಿಗೆ ಸಿಕ್ಕಿಹಾಕಿಕೊಂಡ ಕುಮಾರಣ್ಣನಿಗೆ ಮಾಧ್ಯಮವೊಂದು ಪ್ರಶ್ನಿಸಿದ್ದು " ನೀವು ಬ್ರಷ್ಟಾಚಾರ ನಿರ್ಮೂಲನೆಗೆ ಸಹಕರಿಸುತ್ತೀರಾ ? " ಅದಕ್ಕೆ ತನ್ನ ಒಪ್ಪಿಗೆ ಎಂದ ಕುಮಾರಣ್ಣ ಮಾಧ್ಯಮದ ಮಾತಿನಮಂಚದಲ್ಲಿ ಕುಳಿತಿದ್ದ ವಯೋವೃದ್ಧ ಎಚ್.ಎಸ್.ದೊರೆಸ್ವಾಮಿಗಳ ಬೆನ್ನುಹತ್ತಿದರು. ಇದನ್ನೆಲ್ಲಾ ಮನೆಯಲ್ಲೇ ನೋಡುತ್ತಾ ಕುಳಿತ ಅಪ್ಪಂಗೆ ’ಯುರೇಕಾ ಯುರೇಕಾ’ ಎಂದಹಾಗೇ ಏನೋ ನೆನಪಾಯಿತು. ಅದೇ ಅಣ್ಣಾಹಜಾರೆಯವರು ಹರವಿದ ಚಾದರದಲ್ಲಿ ತಮ್ಮ ಪಕ್ಷವನ್ನೇ ತೂರಿಸಿ ಜನರ ಕಣ್ಣಿಗೆ ಮಣ್ಣೆರಚುವುದು! ಯಾವ ದಾರಿಯೂ ಕಾಣದಾಗ ಈ ದಾರಿ ಸುಲಭವೂ ಪ್ರತಿಫಲದಾಯಕವೂ ಆಗಿ ಕಂಡುಬಂತು. ಆದರೆ ಮೌಲ್ಯಕುಸಿದ ತಾವೇ ಕೆಲವರು ಹಸಿರು-ಕೆಂಪು ಯಾವುದೇ ಟವೆಲ್ಲು ಹೊದ್ದು ವೇದಿಕೆಯೇರಿದರೂ ಜನ ಒಪ್ಪುವ ಥರ ಕಾಣಲಿಲ್ಲ. ಅದಕ್ಕೇ ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿಗಳನ್ನೂ ಮತ್ತು ಅವರಜೊತೆ ಕೈಜೋಡಿಸಿರುವ ಹಲವರನ್ನೂ ತಾವೂ ಬೆಂಬಲಿಸುತ್ತೇವೆ ಎಂಬ ಹೇಳಿಕೆಯೊಡನೆ ನಿಧಾನವಾಗಿ ದೊರೆಸ್ವಾಮಿಗಳನ್ನು ತಮ್ಮೆಡೆಗೆ ಸೆಳೆಯತೊಡಗಿರುವುದು ಕಂಡುಬಂದಿದೆ.

ಮುತ್ಸದ್ಧಿಯಾದ ದೊರೆಸ್ವಾಮಿಗಳು ಇಲ್ಲೀವರೆಗೆ ಪಕ್ಷಾತೀತವಾಗಿ ಧ್ಯೇಯನಿಷ್ಠರಾಗಿ, ನ್ಯಾಯಕ್ಕಾಗಿ ಹೋರಾಡುತ್ತಾ ಬಂದವರು. ತೀರಾ ಪ್ರಚಾರಪ್ರಿಯರೂ ಅಲ್ಲದ ಶ್ರೀಯುತರು ಅನೇಕ ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಯ ಮುಂಭಾಗದಲ್ಲಿ ಕುಳಿತು ಆನಂದಿಸುತ್ತಿದ್ದರು. ತನ್ನೊಳಗಿನ ಆಕ್ರೋಶಕ್ಕೆ ಅಣ್ಣಾ ಹಜಾರೆ ದನಿಯಾದಾಗ ತಾವೂ ಸಹಜವಾಗಿ ದೇಶಾಭಿಮಾನದಿಂದ ಮುನ್ನುಗ್ಗಿ ಫ್ರೀಡಂ ಪಾರ್ಕ್‍ನಲ್ಲಿ ಧರಣಿಕುಳಿತರು. ದೊರೆಸ್ವಾಮಿಗಳ ಆಢ್ಯತೆ ಮತ್ತು ಅವರ ವ್ಯಕ್ತಿತ್ವಕ್ಕಿರುವ ಗೌರವವನ್ನು ಮನಗಂಡ ಮಣ್ಣಿನ ಮಕ್ಕಳು ಈಗ ನಿಧಾನವಾಗಿ ಅವರನ್ನು ಸೆಳೆದುಕೊಂಡು ಅವಕಾಶವನ್ನು ಉಪಯೋಗಿಸಿಕೊಂಡು ಕಾಲಾನಂತರದಲ್ಲಿ ಅವರ ಹೆಸರಿಗೂ ಕಳಂಕ ತರುವುದರಲ್ಲಿ ಸಂದೇಹವಿಲ್ಲ.

ದೊರೆಸ್ವಾಮಿಗಳು ಇದನ್ನೆಲ್ಲಾ ಅರಿತು ಆ ವೇದಿಕೆಯನ್ನು ರಾಜಕೀಯ ಪಕ್ಷಗಳನ್ನು ಹೊರಗಿಟ್ಟು ನಡೆಸಿದರೆ ಅದು ನಿಜವಾಗಿಯೂ ಉಳಿದುಕೊಂಡು ತನ್ನ ಧ್ಯೇಯವನ್ನು ಈಡೇರಿಸಿಕೊಳ್ಳುವಲ್ಲಿ ಸಫಲತೆಯನ್ನು ಕಾಣಬಹುದು. ಅದನ್ನು ಬಿಟ್ಟು ಅಪ್ಪ-ಮಕ್ಕಳ ಜೊತೆ ವೇದಿಕೆ ಹಂಚಿಕೊಳ್ಳುತ್ತಾ ಬೇಡದ ಕೈಗಳಿಗೆ ಪಂಜು-ಹಿಲಾಲು ಕೊಡುತ್ತಾ ತೆರಳಿದರೆ ದೊರೆಸ್ವಾಮಿಗಳನ್ನೂ ಹಳ್ಳಕ್ಕೆ ಬೀಳಿಸಲು ರಾಜಕೀಯದ ಆ ಜನ ರೆಡಿಯಾಗಿ ಕುಳಿತಿದ್ದಾರೆ. ಆಮೇಲೆ ರಾಜಕೀಯದ ಜನಗಳಿಗೂ ದೊರೆಸ್ವಾಮಿಗಳಿಗೂ ಯಾವುದೇ ಬದಲಾವಣೆ ಇಲ್ಲದಂತಾಗಿ ಅಣ್ಣಾಹಜಾರೆಯವರ ತತ್ವ ಮತ್ತು ದೊರೆಸ್ವಾಮಿಗಳು ಮನದಲ್ಲಿ ಸಂಕಲ್ಪಿಸಿದ ಆ ತತ್ವ ಹಾಗೇ ಕರಗಿಹೋಗಿ ಹೊರಟ ಪಂಜು ಇನ್ಯಾವುದೋ ಹಲಕಟ್ಟು ವೇದಿಕೆಯಲ್ಲಿ ಬೆಳಗುತ್ತದೆ! ಹೇಗೆ ಮಾಷ್ಟರ್ ಹಿರಣ್ಣಯ್ಯನವರು ಪಕ್ಷಗಳನ್ನು ದೂರವಿಟ್ಟು ಲಂಚಾವತಾರ ತಾಳಿದರೋ ಹಾಗೇ ದೊರೆಸ್ವಾಮಿಗಳೂ ಈಗಿರುವ ಮಾಜಿ-ಹಾಲಿಗಳನ್ನು ಬಿಟ್ಟು ಜನಸಾಮಾನ್ಯರ ಮತ್ತು ಸಮಾನ ಮನಸ್ಕರ ಜೊತೆ ಪ್ರತ್ಯೇಕವಾಗಿ ಗುರುತಿಸಿಕೊಂಡು ’ಬ್ರಷ್ಟಾಚಾರ ನಿರ್ಮೂಲನಾ ಆಂದೋಲನ’ ನಡೆಸಿದರೆ ಅದು ಸರಿಯಾದ ಮಾರ್ಗವಾಗುತ್ತದೆಯೇ ಹೊರತು ಈಗ ಅವರು ತುಳಿದಿರುವ ಆ ಮಾರ್ಗ ನನಗಂತೂ ಸರಿಕಾಣಲಿಲ್ಲ.

ಬಿದ್ದಾಗ ಸೀರೇನೋ ಟವೆಲ್ಲನ್ನೋ ಮುಚ್ಚಿಕೊಂಡು ಗೋಳೋ ಎನ್ನುವ ಗೌಡರು ಅವುಗಳ ಮರೆಯಲ್ಲಿರುವುದರಿಂದ ನಕ್ಕರೋ ಅತ್ತರೋ ತಿಳಿಯುವುದು ಕಷ್ಟ! ಅದಲ್ಲದೇ ಅನುಕೂಲಕ್ಕೊಮ್ಮೆ ಹಲವು ಗಣ್ಯರನ್ನು ಮಾನ್ಯರನ್ನು ಕರೆಯುವ ಕಳಿಸುವ ಎರಡೂ ವಹಿವಾಟು ಉಳ್ಳ ’ಮಹಾಮಹೋಪಾಧ್ಯಾಯ’ರಾದ ಅವರು ಯಾರನ್ನು ಎಷ್ಟುಕಾಲ ತಮ್ಮ ಜೊತೆ ಇಟ್ಟುಕೊಳ್ಳುತ್ತಾರೆ ಮತ್ತು ಯಾರನ್ನು ಎಲ್ಲಿ ಹೊಸಕಿಹಾಕುತ್ತಾರೆ ಎನ್ನುವುದು ಸಾಧ್ಯವಿಲ್ಲ. ಅಟ್ಟ ಹತ್ತಾದಮೇಲೆ ಏಣಿಯ ಹಂಗೇಕೆ ಎನ್ನುವ ತನ್ನ ಸ್ವಭಾವದಿಂದ ಹಿಂದೆ ರಾಮಕೃಷ್ಣ ಹೆಗಡೆಯವರನ್ನು ಪಕ್ಷದಿಂದಲೇ ಉಚ್ಛಾಟಿಸಿದ ಅವರು ಪರೋಕ್ಷವಾಗೈ ಇಂದು ಅದರ ಪ್ರತಿಫಲವನ್ನು ಉಣ್ಣುತ್ತಿದ್ದಾರೆ. ಉಚ್ಛಾಟಿತ ಹೆಗಡೆಯವರ ಮೇಲಿನ ದ್ವೇಷ ಎಷ್ಟಿತ್ತೆಂದರೆ " ಹೆಗಡೆ ಎನ್ನುವವರಿಗೆಲ್ಲಾ ಹೊಡೀರಿ " ಎಂದು ಪೋಲೀಸರಿಗೆ ತಾಕೀತುಮಾಡಿದ ಮಾ.ಪ್ರ. ಅವರು. ಇದನ್ನೇ ಅನುಸರಿಸಿದ ಪೋಲೀಸ್ ಪೇದೆಗಳು ಯಾವುದೋ ಸಮಸ್ಯೆಗಳಿಗೆ ಪರಿಹಾರಬಯಸಿ ಧರಣಿಗೋ ಮುಷ್ಕರಕ್ಕೋ ತೊಡಗಿದ ಹೆಗಡೆ-ಭಟ್ಟ ಎನ್ನುವವರಿಗೆಲ್ಲಾ ಹೊಡೆದದ್ದು ಮರೆಯಲಾರದ ಇತಿಹಾಸ. ಅದರಂತೇ ಕಾಕತಾಳೀಯವೋ ಯಾವ ನ್ಯೂನತೆಯೋ ನಂತರದ ಒಂದೆರಡು ಚುನಾವಣೆಗಳಲ್ಲಿ ಬೆಂಗಳೂರು ನಗರದಲ್ಲಿ ಮತದಾರರ ಯಾದಿಯಲ್ಲಿ ಹೆಗಡೆ ಮತ್ತು ಭಟ್ಟ ಎಂಬ ಅಡ್ಡ ಹೆಸರುಳ್ಳವರ ಹೆಸರುಗಳೇ ನಾಪತ್ತೆಯಾಗಿದ್ದವು!

ಆ ನಂತರ ಕೆಲವೇ ವರ್ಷಗಳಲ್ಲಿ ಹೆಗಡೆಯವರು ಸತ್ತರೂ ಅವರು ಸಭೆಯಲ್ಲಿ ಉದ್ಘೋಷಿಸಿದಂತೇ ದಳ ಇಬ್ಭಾಗವಾಯಿತು, ’ದಳಪತಿ’ಗಳು ಯಾರದೋ ದಾಳಗಳಾಗಿ ಕೆಲಸಮಾಡಹತ್ತಿದಾಗ ಅಪ್ಪ ತನ್ನ ರಾಜಕೀಯ ಅರಿಯದ ಮಕ್ಕಳನ್ನು ಕಟ್ಟಿಕೊಂಡು ನಿಧಾನವಾಗಿ ಆರಂಭಿಸಿದ್ದೇ ಸೆಕ್ಯೂಲರ್ ದಳ. ಮಕ್ಕಳಿಗೆ ’ಪಾಠ’ ಮುಗಿಯುವವರೆಗೆ ಖುರ್ಚಿಗಳು ಕಾಲಿ ಇರಬಾರದೆಂಬ ಉದ್ದೇಶದಿಂದಲೂ ಜನರಿಗೆ ’ಓಹೋ ಇದೊಂದು ದೊಡ್ಡ ರಾಷ್ಟ್ರೀಯ ಪಕ್ಷವಾಗುವ ಪಕ್ಷ’ ಎಂಬ ಅನಿಸಿಕೆ ಮೂಡಲೆಂದೂ ಅವಿಭಕ್ತ ದಳದಲ್ಲಿದ್ದ ಕೆಲವು ಮುಖಂಡರನ್ನು ತನ್ನೆಡೆ ಸೆಳೆದುಕೊಂಡರು. ಏನೋ ಗೌಡರು ಕರೆಯುತ್ತಿದ್ದಾರಲ್ಲ ಅಂತ ತೆರಳಿದ ಕೆಲವು ಜನರಿಗೆ ಬಿಸಿ ತಟ್ಟತೊಡಗಿದ್ದು ಸಿದ್ಧುವನ್ನು ಗುದ್ದಿ ಓಡಿಸಿದಾಗ! ಅದಾದ ನಂತರದ ಹಲವು ಬೆಳವಣಿಗೆಗಳು ನಿಮಗೆಲ್ಲಾ ತಿಳಿದೇ ಇವೆ; ಬೀದಿ ನಾಟಕಗಳು, ಸರ್ಕಸ್ಸುಗಳು ಅವಿರತವಾಗಿ ನಡೆದೇ ಇವೆ. ಆದರೆ ತನ್ನ ಕುಟುಂಬದ ಅನುಕೂಲಕ್ಕಾಗಿ ಕಟ್ಟಿಕೊಂಡ ಆ ಪಕ್ಷಮಾತ್ರ ಕೆಲವೊಮ್ಮೆ ರಾಜ್ಯದಲ್ಲಿಯೇ ಬುಡಮೇಲಾಗಿ ಮಲಗಿಬಿಡುತ್ತದೇನೋ ಅನಿಸುವ ಹೊತ್ತು ಬರುತ್ತಲೇ ಇದೆ. ಹೀಗೆ ಬುಡವೇ ಅಲ್ಲಾಡತೊಡಗಿದಾಗ ಗೌಡರು ಹೆಣೆಯುವ ಹಲವು ತಂತ್ರಗಳಲ್ಲಿ ಅವರು ’ಹೊತ್ತು ಬಂದಾಗ ಕತ್ತೆಯ ಕಾಲನ್ನಾದರೂ ಹಿಡಿ’ ಎಂಬ ಗಾದೆಯನ್ನು ಅಕ್ಷರಶಃ ನಡೆಸಿಕೊಂಡು ಬಂದಿದ್ದಾರೆ!

ಕೇವಲ ೧೧ ಎಕರೆ ಪಿತ್ರಾರ್ಜಿತ ಕೃಷಿ ಭೂಮಿಯನ್ನು ಪಡೆದ ಒಬ್ಬ ವ್ಯಕ್ತಿ ಏಕಾಏಕಿ ಕೋಟಿಗಟ್ಟಲೆ ಆಸ್ತಿಗೆ, ಹಲವು ಎಕರೆ ಭೂಮಿಗಳಿಗೆ ಒಡೆಯನಾಗುವುದು ಬ್ರಷ್ಟಾಚಾರದ ರಜಕೀಯದಿಂದ ಮಾರ ಸಾಧ್ಯ ಎಂಬುದು ಅನುಭವಿಕರ ಮಾತು. [ಇದಕ್ಕೆ ಕೆಲವು ಉದ್ದಿಮೆದಾರರು ಹೊರಾತಾಗಿರಬಹುದು]. ಈಗಿನ ಸರಕಾರ ಬರುವುದಕ್ಕಿಂತ ಮುಂಚೆ ಸರಕಾರದ ಎಲ್ಲಾ ಕಡತಗಳೂ, ಮಾಹಿತಿಗಳೂ ಗಣಕಯಂತ್ರಗಳಲ್ಲಿ ಲಭ್ಯವಿರದಿದ್ದ ಕಾರಣದಿಂದಲೂ ಮತ್ತು ಅಂದಿನ ವಿರೋಧ ಪಕ್ಷದಲ್ಲಿ ನಾಯಕರಾಗಿ ಕುಳಿತಿದ್ದ ಯಡ್ಯೂರಣ್ಣನವರ ಬಹುಕಾಲದ ನಿದ್ದೆಯಿಂದಲೂ ಆಳುವ ಧಣಿಗಳು ಚೆನ್ನಾಗಿ ಮೆಂದವು! ಎಲ್ಲೆಲ್ಲಿ ಯಾವ ರೀತಿಯ ಹಸಿರು ಹುಲ್ಲಿದೆ, ಎಷ್ಟು ಎತ್ತರಕ್ಕೆ ಬೆಳೆದು ಹುಲುಸಾಗಿ ತಿನ್ನಲು ಸಿಗುತ್ತದೆ ಎಂಬ ಅರಿವಿದ್ದ ಮಾಜಿ ಧಣಿಗಳು ಇಂದಿನ ಗಣಕೀಕೃತ ಮಾಹಿತಿ ಪಡೆದು ತಿಂದಿರಬಹುದಾದ ಹುಲ್ಲುಗಾವಲುಗಳ ನಿವ್ವಳ ತೂಕವನ್ನು ಲೆಕ್ಕಮಾಡತೊಡಗಿದರು! ಹಿಂದೆ ತಾವು ಮೆಂದ ಜಾಗದ ಮಾಹಿತಿಯುಳ್ಳ ಜನ ಇವರಾಗಿರುವುದರಿಂದ ಹಾಲಿ ಮುಖ್ಯಮಂತ್ರಿಗಳು ಮೆಂದಿರಬಹುದಾದ ಮತ್ತು ಮೇಯದೇಬಿಟ್ಟ ಎಲ್ಲಾ ಜಾಗವನ್ನೂ ಸೇರಿಸಿ ’ಮೆಂದ ಜಾಗ’ ಎಂದು ಬೋರ್ಡುಹಾಕಿ ಬಿಟ್ಟರು!

ಬಹುತೇಕ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿಬಂದ ಒಂದೇ ಪಕ್ಷದ ಶಾಸಕರಿಗೆ ಒಗ್ಗಟ್ಟಿನಿಂದ ಸರಕಾರ ರಚಿಸಲು ಅನುವುಮಾಡಿಕೊಟ್ಟು ಅವರು ಸರಕಾರ ನಡೆಸುವಾಗ ಎಡವದಂತೇ, ತಪ್ಪುಮಾಡದಂತೇ ನೋಡಿಕೊಳ್ಳಬೇಕಾದ ವಿರೋಧ ಪಕ್ಷಗಳವರು ಜಾತೀರಾಜಕೀಯ, ಗೂಂಡಾರಾಜಕೀಯ, ಕುದುರೆವ್ಯಾಪಾರಾದಿ ಎಲ್ಲಾ ಕಸರತ್ತುಗಳನ್ನೂ ಆಳುವ ಪಕ್ಷಕ್ಕೂ ಕಲಿಸಿಕೊಟ್ಟರಲ್ಲದೇ ಆಳುವ ಜನರಿಗೆ ಒಂದೇ ಒಂದು ನಿಮಿಷ ರಾಜ್ಯಾಡಳಿತದ ಯಂತ್ರಕ್ಕೆ ತಲೆಹಾಕಲು ಅವಕಾಶ ನೀಡದೇ ಕೇವಲ ಕಾಲೆಳೆಯುವುದರಲ್ಲೇ ಕಾಲಕಳೆದುಬಿಟ್ಟರು. ಭೋಗಸ್ ಜ್ಯೋತಿಷಿಗಳು, ಹೊತ್ತಿಗೊಂದು ಮಾತನಾಡುವ ರಾಜ್ಯಪಾಲರು ಎಲ್ಲರೂ ಸೇರಿ ಎಲ್ಲಿಗೋ ಹೊರಟಿದ್ದ ವಾಹನ ಇನ್ನೆಲ್ಲಿಗೋ ಸಾಗತೊಡಗಿತು! ಇದು ಕರ್ನಾಟಕದ ಜನತೆಯ ದುರಾದೃಷ್ಟವೆಂದರೆ ತಪ್ಪೇ ? ಸದಾ ವಿರೋಧಪಕ್ಷದಲ್ಲೇ ಕುಳಿತು ಆಡಳಿತದಲ್ಲಿ ಅನನುಭವಿಯಾದ ಯಡ್ಯೂರಣ್ಣನವರ ಹುಂಬತನ ಮತ್ತು ಮುಂಗೋಪ ಮಿಕ್ಕುಳಿದ ಶಾಸಕರಿಗೆ, ಮಂತ್ರಿ-ಸಹೋದ್ಯೋಗಿಗಳಿಗೆ ಇರುಸುಮುರುಸು ಉಂಟುಮಾಡಿತು. ಅವಕಾಶ ರಾಜಕಾರಣಕ್ಕೆ ಪ್ರಸಿದ್ಧಿ ಪಡೆದ ಕುಮಾರಣ್ಣ ಆಂಡ್ ಕಂಪನಿ ಸರ್ಕಸ್ ಕಂಪನಿಯಾಗಿ ಪರಿವರ್ತಿತವಾಯಿತು! ಅಧಿಕಾರ ಹಿಡಿದವರನ್ನು ಹಲವು ಮೇಲಾಟವಾಡಿದರೂ ಮರ್ದಿಸಲಾಗದೇ ಮುಖ ಸುಟ್ಟ ಬೆಕ್ಕಿನಂತಾಗಿ ತನ್ನ ಮೈಯ್ಯನ್ನೇ ಪರಚಿಕೊಳ್ಳುವಂತಾದ ಪರಿಸ್ಥಿತಿಯಲ್ಲಿ ಸದ್ರೀ ಸರ್ಕಸ್ ಕಂಪನಿಯ ಮಾಲೀಕರು ಆಗಾಗ ಆಗಾಗ ಏನಾದರೂ ಕೆದಕುತ್ತಲೇ ಉಳಿದರು; ಹಾರುವ ನೊಣವನ್ನು ಹೊಡೆದು ಉಣ್ಣುವ ಗಂಜಿಯಲ್ಲಿ ಹಾಕಿ " ನೋಡು ನೊಣ ಬಿದ್ದಿದೆ " ಎಂದರು!

ಇಂತಹ ಸರ್ಕಸ್ ಕಂಪನಿಯ ಹೊಚ್ಚ ಹೊಸಾ ವರಸೆ ಅಣ್ಣಾ ಹಜಾರೆಯವರು ಆರಂಭಿಸಿದ " ಬ್ರಷ್ಟಾಚಾರ ನಿರ್ಮೂಲನಾ ಆಂದೋಲನ’ವನ್ನು ರಾಜ್ಯಾದ್ಯಂತ ತಮ್ಮ ಕಂಪನಿಯ ಬ್ರಾಂಡಿನಲ್ಲಿ ಬ್ಯಾನರಿನಡಿಯಲ್ಲಿ ಸಿನಿಮಾದಂತೇ ಜನತೆಗೆ ತೋರಿಸುವುದು! ಇದಕ್ಕೆ ಆಧಾರಕ್ಕಾಗಿ ಕಂಪನಿಯವರು ಬ್ರಾಂಡ್ ಅಂಬಾಸೆಡರ್ ಹುದ್ದೆಗೆ ಮಹನೀಯರೂ ಮರ್ಯಾದಿತರೂ ಆದ ದೊರೆಸ್ವಾಮಿಗಳನ್ನು ಆತುಕೊಂಡಿದ್ದಾರೆ! ಇಲ್ಲದಿದ್ದರೆ ಸಭೆಗಳಿಗೆ ಜನ ಬರಬೇಕಲ್ಲ ? ಕೊಕ್ಕರೆ ಮಹರ್ಷಿಗಳು ಕಾಶಿಗೆ ಹೋಗುವುದು ನಿಮಗೆ ತಿಳಿದೇ ಇದೆಯಲ್ಲಾ ಅದರಂತೇ ಎರಡೂ ಕೈಲಿ ಸಾಲದೆಂಬಂತೇ ದೇಹದ ಅಣುರೇಣುವಿನಲ್ಲೂ ಉಂಡುಂಡು ಉದ್ದಿನೆವಡೆಗಿಂತಲೂ ಉಬ್ಬಿದ ಬ್ರಷ್ಟಾಚಾರದ ಹರಿಕಾರರೇ ಈಗ ಅದರ ನಿರ್ಮೂಲನೆ ಮಾಡುತ್ತೇವೆ ಎಂದರೆ ಅದು ಕೊಕ್ಕರೆ ಮಹರ್ಷಿಗಳ ಕಾಶೀಯಾತ್ರೆಯಾಗಿ ಕಾಣುತ್ತದೆ ಮತ್ತು ಪರಿಣಮಿಸುತ್ತದೆ. ಪ್ರಸಕ್ತ ಕಾಲಮಾನದಲ್ಲಿ ಬ್ರಷ್ಟಾಚಾರ ನಿರ್ಮೂಲನೆಯಾಗಬೇಕಾದರೆ ಪಕ್ಷಭೇದವಿಲ್ಲದೇ ಈಗಿರುವ ಎಲ್ಲಾ ’ಸರ್ಕಸ್ ಕಂಪನಿ’ಗಳು ಮುಚ್ಚಬೇಕು, ಅವುಗಳ ’ಪ್ರಾಣಿ’ಗಳನ್ನು ಕಾಡಿನಲ್ಲಿ ಬಿಟ್ಟುಬರಬೇಕು, ಅವುಗಳ ಹಳೆಯ ಹರಕಲು ಗುಡಾರಕ್ಕೆ ಬೆಂಕಿಹಚ್ಚಬೇಕು. ಯಾರ ಶರೀರದಲ್ಲಿ ರಕ್ತದಲ್ಲಿ ದೇಶಭಕ್ತಿಯ ನಿಜವಾದ ತುಡಿತವಿದೆಯೋ, ಯಾರಿಗೆ ಹಣದ ದಾಹ ಇರುವುದಿಲ್ಲವೋ ಅಂತಹ ಜನಗಳ ಕೈಗೆ ಅಧಿಕಾರ ಸಿಗಬೇಕು. ಆಗ ಮಾತ್ರ ಬ್ರಷ್ಟಾಚಾರ ನಿರ್ಮೂಲನೆಯಾಗಲು ಸಾಧ್ಯ. ಅಲ್ಲೀವರೆಗೂ ನಡೆಯುವುದೆಲ್ಲಾ ಬರೇ ಡೊಂಬರಾಟ! ’ಕೊಕ್ಕರೆ ಮಹರ್ಷಿ’ಗಳು ಎಲ್ಲೀವರೆಗೆ ಒಂದೇಕಾಲಲ್ಲಿ ನಿಂತು ಈ ಮಂತ್ರವನ್ನು ಜಪಿಸಿತ್ತಾರೆಂಬುದನ್ನು ಕಾದುನೋಡೋಣ, ನಮಸ್ಕಾರ.