ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, October 4, 2010

'ಅರ್ಥಹೀನ'


'ಅರ್ಥಹೀನ'

[ನವ್ಯ ಪ್ರೇಮೀ ಸ್ನೇಹಿತರೇ ನಿಮಗಾಗಿ ಬರೆಯುತ್ತಿರುವ ಕಾವ್ಯಗಳ ಸಾಲಿನಲ್ಲಿ ಸದ್ಯಕ್ಕೆಇಲ್ಲೊಮ್ಮೆ ನಿಲ್ಲುತ್ತೇನೆ--ಈ ಕವನದೊಂದಿಗೆ, ಮತ್ತೆ ಬಿಡುವಾದಾಗ ನವ್ಯದಲ್ಲಿ, ಅಲ್ಲೀವರೆಗೆ ಬೇರೆಲ್ಲಾ ಕೃತಿಗಳು ]


ಪಕ್ಕದೂರಲ್ಲೇ ಕವಿ ಇದ್ದಾನೆಂದು
ಒಂಬತ್ತುಮೊಳದ ಧೋತಿ ಉಟ್ಟು
ಅಲ್ಲಾಡಿಸುತ್ತಾ ಬಂದಿದ್ದರು ಗಣಪತಿರಾಯರು
ದೇಶಾವರಿ ನಗೆ ನಕ್ಕರು
ನಾನೂ ಅಂದರಾಗಲಿಲ್ಲವಂತೆ
ತುಂಬಾ ಅಭಿಮಾನವಂತೆ !
ತನ್ನ ಜೀವನವನ್ನೇ ಒಂದು
ಕವನಮಾಡಿದರೆ ಹೇಗೆ ಎಂಬುದು
ಅವರ ಚಿಂತನೆ !
ಕೆಲವೊಮ್ಮೆ ನನ್ನೊಳಗೆ ನಾನೇ
ಅಂದುಕೊಳ್ಳುವುದಿದೆ
ಅಯ್ಯಾ ನಾ ಬರೆದ ಅರ್ಥವಿಲ್ಲದ
ಕವನಕ್ಕೆ ಜನ ಬಹಳ ಅರ್ಥಹಚ್ಚುತ್ತಾರೆ !
ಯಾಕೆಂದರೆ ಅದು ಅವರಿಗೂ ಅರ್ಥವಾಗದ್ದು!
ಹೀಗೇ ಅರ್ಥವಿಲ್ಲದ ನೂರಾರು ಕವನಗಳು
ನನ್ನ ಬತ್ತಳಿಕೆಯಲ್ಲಿವೆ
ನೀವು ನಂಬುವುದಾದರೆ ನಂಬಿ ಬಿಟ್ಟರೆಬಿಡಿ
ಶೇಂಗಾರಾಶಿಯಲ್ಲಿ ಪೊಕ್ಕು ಟೊಳ್ಳು ಶೇಂಗಾ ಇರುವಂತೇ !
ಕುಂಬಾರನ ಮನೆಯಲ್ಲಿ ಅರ್ಧವಾಗಿ ಬಿದ್ದ
ಮಣ್ಣಿನ ಮಡಿಕೆ-ಪಾತ್ರೆಗಳಿರುವಂತೇ !
ಶಿಲ್ಪಿಯ ಚಾಣದ ಚೇಣನ್ನು ತಿಂದು
ಇನ್ನೂ ಪೂರ್ತಿಯಾಗಿ ಮೂರ್ತಿಯಾಗದೇ ಉಳಿದ
ಶಿಲಾಭಾಗದಂತೇ !

ಹಾಗಂತ ಹೋಯ್ ಇಲ್ಕೇಳಿ
ನಾನಿದನ್ನೆಲ್ಲಾ ಗಣಪತಿರಾಯರಿಗಿರಲಿ
ನನ್ನ ಹೆಂಡತಿಗೇ ಹೇಳಿದವನಲ್ಲ
ಅಕಸ್ಮಾತ್ ಹೀಗೆಲ್ಲಾ ಹೇಳಿದರೆ
ಕವಿಯವಿತೆಗೆದುಪಿಬರೆದರೆ ಕಷ್ಟ!
ಹಾಗಂತ ನನಗೇನೂ ಜ್ಞಾನಪೀಠ
ಪ್ರಶಸ್ತಿಯೆಲ್ಲ ಬೇಡ
ಒಂದೊಮ್ಮೆ ಬಂದರೆ ಅದು ನನ್ನ ತಪ್ಪಲ್ಲ !
ನನ್ನ ಪಾಡಿಗೆ ನಾನು ಬರೆಯುವುದು ಬರೆಯುವುದೇ.
ಎಷ್ಟೋ ಕಲಾವಿದರ ನವ್ಯಶೈಲಿಯ ಚಿತ್ರಗಳಂತೇ !
ಅನೇಕ ಸಂಗೀತಜ್ಞರ ದನಿಹೊರಡದ ಗಾಯನದಂತೇ !
ಅದು ಕಲೆಯ-ಸಂಗೀತದ ಆಳವಾದ ಭಾವ !
ಅರ್ಥವಾಯಿತೇ ? ಇನ್ನೂ ಅರ್ಥವಾಗಲಿಲ್ಲಾ ಎಂದರೆ
ಜಪ್ಪಿಕೊಳ್ಳಲಿಕ್ಕೆ ಸದ್ಯ ನಾನು ಕೂತಿದ್ದು ಸೈಬರ್ ಕೆಫೆಯಲ್ಲಿ
ಸೌಂಡಿಗೆ ಎದ್ದು ಓಡಿಬರುವ ಕೆಫೆಯ ಮಾಲೀಕ
ಗಡದ್ದಾಗಿ 'ಕಾಫೀ' ಕೊಟ್ಟರೆ ಕಷ್ಟ!
ಒಟ್ಟಾರೆ ಎಲ್ಲೂ ಸುಸೂತ್ರವಿಲ್ಲ.

ಬರೆದೆ ಕೊಟ್ಟೆ
ತೆಗೆದುಕೊಂಡಿದ್ದು ಒಂದಿಡೀದಿನ!
ಉದ್ಯೋಗವಿಲ್ಲದ ಆಚಾರಿ
ಮಗುವಿನ ಕುಂಡೆ ಕೆತ್ತನಂತೆ !
ಅದೇ ರೀತಿ ನಮ್ಮ ಗಣಪತಿರಾಯರಿಗೆ
ಅವರ ಜೀವನಕಾವ್ಯ ಬರೆದುಕೊಟ್ಟೆ
ಓದಿದರು ತಿರುಗಿಸಿ ಮುರುಗಿಸಿ ಓದೇ ಓದಿದರು
ಬಹಳ ಚೆನ್ನಾಗಿದೆ ಎಂದರು
ಬ್ಲಾಗಿಗರು ಹಾಕಲಾರದೇ ಕಾಮೆಂಟು ಹಾಕುವ ರೀತಿ !
ಅದೊಂಥರಾ ಭಾವಮಿಲನ !
ಬ್ರಾಂಡು ಬಿದ್ದ ಮೇಲೆ ಮುಗಿಯಿತು
ಬರುವುದು ಸೊರಬಿತುಂಬಿದ ಆಕ್ಕಿಯಾದರೂ ಸರಿ
ಸಕ್ಕರೆ ರಹಿತ ಸ್ಪೆಷಲ್ ಮಿಲ್ಕ್ ಬ್ರೆಡ್ ಆದರೂ ಸರಿ
ವಾಸನೆಯೇ ಆಗಿದ್ದರೂ ಸಹಿಸುವ ಬಯಕೆ
ಅದು ಬ್ರಾಂಡಿನ ಮಹಿಮೆ !
ಕವಿಯ ಬ್ರಾಂಡು ಬಿದ್ದ ಕವನ
ಮತ್ತೊಮ್ಮೆ ಬಹಳ ಅರ್ಥಗರ್ಭಿತ ಎಂದರು
ಗಣಪತಿರಾಯರು ಹೊರಟುನಿಂತು
ಹೆಂಡತಿ ಕಣ್ಣಲ್ಲೇ ನನಗೆ ಕೇಳಿದಳು
ಪೈಸೆ ಬಂತೇ ?
ಕವಿಗೆ ಪೈಸೆಯೆಲ್ಲಾ ಯಾವ ಲೆಕ್ಕ ?
ಆತನ ಲೋಕವೇ ಬೇರೆ ! ಬರೇ ಪೈಸೆಗಾಗಿ
ಬರೆವ ಜನವಲ್ಲ ಇದು ! ನಮ್ಗೂ ಸ್ವಲ್ಪ
ಧರ್ಮ-ಕರ್ಮ ಇದೆ ಸ್ವಾಮೀ
ಗಣಪತಿರಾಯರು ಆಗರ್ಭಶ್ರೀಮಂತರು
ಹೀಗಾಗಿ ಕೇಳಿದಳು ಅವರು ಏನಾದರೂ ಕೊಟ್ಟರೇ ?
ನಾನು ಕಣ್ಣು ಸ್ವಲ್ಪ ದೊಡ್ಡದುಮಾಡಿದೆ
ಕೈ ಮರೆಯಲ್ಲಿ : ಗಣಪತಿರಾಯರು ನೋಡಬಾರ್ದಲ್ಲ!
ಮತ್ತೆ ಅದೇ ದೇಶಾವರಿ ನಗೆ ನಕ್ಕರು
ನಾನೂ ನಕ್ಕೆ
ಇಲ್ಲಿಗೆ ಕಥೆ ಕಾಶಿಗೆ ಹೋಯಿತು ನಾನು ಮನೆಗೆ ಹೊರಟೆ
ಅರ್ಥವಾಯಿತೇ ? ಅರ್ಥವಾದರೆ ಇದು
ಮಹಾನ್ವೇಷಣಂ ಮಹಾಕಾವ್ಯದ ಒಂದು ಭಾಗ
ಅರ್ಥವಾಗಗಲಿಲ್ಲವೋ ನಿಮ್ಮೆದುರಿಗಿರುವ
ಮಾನಿಟರ್ ಕುಟ್ಟಿ ಅಥವಾ ಪೇಜು ಹರಿದು
ಮಾಡಿ ಇಬ್ಭಾಗ !
ಅಲ್ಲೇ ಕಾಣಿರಿ ಕವನದ ಸಿರಿ ವೈಭೋಗ!