ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, August 22, 2010

ಕಾವ್ಯನಯನ
[ಕಾವ್ಯದಲ್ಲಿ ಜಲನಯನ-ಗುಬ್ಬಿ ಎಂಜಲು ಕೃತಿಗಳ ಬಿಡುಗಡೆ ಸಮಾರಂಭದ ನೆನೆಪು ; ಇಲ್ಲಿ ಶ್ರೀ ಡುಂಢಿರಾಜ್ ಮತ್ತು ಹಾಲ್ದೊಡ್ಡೇರಿ ಸುಧೀಂಧ್ರರು ಪರಸ್ಪರ ಎರಡೂ ಕೃತಿಗಳ ಬಗ್ಗೆ ಹೇಳಿದ್ದನ್ನ ಬಿಂಬಿಸಿದ್ದೇನೆ !]

ದೀಪಿಕಾ ಹಾಡುತ ದೇವರ ನೆನೆದಿರೆ
ವ್ಯಾಪಿಸಿ ಕೊಂಡರು ಆಸನದಿ
ರೂಪವ ತೋರುವ ಮೊದಲಿಗೆ ಗಣ್ಯರು
ದೀಪವ ಬೆಳಗುತ ಸ್ಟೇಜಿನಲಿ

ಸುಗುಣ ಮಹೇಶರು ಮುಗುದಮನದಿಂದ
ನಗುನಗುತಲಿ ಮುನ್ನಡೆಸಿದರು
ಬಗೆಬಗೆ ಜನಗಳ ಪರಿಚಯ ಹೇಳುತ
ಲಗುಬಗೆಯಲಿ ಓಡಾಡಿದರು !

’ಗುಬ್ಬಿ ಎಂಜಲು’ ಬಿಡಿಸುತ ರಂಜಿಸಿ
ಅಬ್ಬರದುಕ್ಕಿಸಿ ಜೋಕುಗಳ
ತಬ್ಬಿಬ್ಬಾಗುವ ಹನಿಗವನಂಗಳ
ಹಬ್ಬಿಸಿ ನಲಿದರು ಡುಂಢಿಗಳು

ಹಾಲ್ದೊಡ್ಡೇರಿಯ ಸುಧೀಂಧ್ರ ನುಡಿದರು
ಜಾಲತಾಣಗಳು ಬಲು ವಿಹಿತ
ಸಾಲಂಕೃತ ವೇದಿಕೆಯಲಿ ಅರಳಿಸಿ
ಓಲೆಯತಿರುವುತ ’ಜಲನಯನ’

ಭೀಷಣವಲ್ಲದ ಮುಖ್ಯ ಭಾಷಣಗಳ್
ಆಶಯಗಳ ತಾವ್ ತೆರೆದಿಡುತ
ರಾಶಿ ಅನುಭವದ ಪಾಕವ ಇಳಿಸುತ
ಶೈಶವ ನೆನೆದರು ಶಾಸ್ತ್ರಿಗಳು

ಪಾಕುಮಾಮ ಸಹ ಮಿತ್ರರ ಸೇರಿಸಿ
ಚಾಕಚಕ್ಯತೆಯ ಮೆರೆದಿಹರು
ಬೇಕಾಗಿಲ್ಲದ ವಸ್ತುವ ನೀಡುತ
ಪೀಕಲಾಟದಲಿ ನಗಿಸಿಹರು !

ಜೋಗದ ಸಿರಿಯನು ತಂದು ಬಡಿಸಿದರು
ರಾಗದಿ ಹಾಡುತ ’ಕೊಳಲ’ಜನ !
ವೇಗದಿ ಈ ಕಥೆ ಬ್ಲಾಗಲಿ ಹಾಕುತ
ಭೋಗಿಸಲಿಟ್ಟರು ಪರಾಂಜಪೆ !

ಇಂತೀಪರಿಯಲಿ ನಡೆಯಿತು ಸಂಭ್ರಮ
’ತುಂತುರು’ ಹನಿಗಳ ಸೇಚಿಸುತ
ಕುಂತರು ನಿಂತರು ಮರೆಯಲಸಾಧ್ಯವು
ಎಂತಹ ಸ್ವರ್ಗವು ಬ್ಲಾಗಿನದು !