ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, August 14, 2010

ಭಾರತಾಂಬೆಯೇ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ !


ಭಾರತಾಂಬೆಯೇ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ !

ನಮ್ಮಲ್ಲಿ ಇವತ್ತಿನ ಮಕ್ಕಳಿಗೆ ಇಂಡಿಯಾ ಅಂದರೆ ಗೊತ್ತಾಗಬಹುದೇ ವಿನಃ ಭಾರತ ಎಂದರೆ ತಿಳಿಯುವುದು ಕಷ್ಟ. ಯಾಕೆ ಭಾರತ ಎನ್ನುವ ಹೆಸರು ಬಂತು ಎಂದು ನಾವು ಚಿಂತಿಸುವುದೇ ಇಲ್ಲ. ನಮ ಪೂರ್ವಜರಲ್ಲಿ ದುಷ್ಯಂತ-ಶಕುಂತಲೆ ಕೂಡ ಇದ್ದರಲ್ಲ ? ಆ ದುಷ್ಯಂತ-ಶಕುಂತಲೆಗೆ ಭರತನೆಂಬೊಬ್ಬ ಮಗನಿದ್ದ ಎಂದು ಕೆಲವು ನನ್ನ ಓರಗೆಯ ಜನ ಅಥವಾ ಇದಕ್ಕೂ ದೊಡ್ಡ ವಯಸ್ಸಿಗರು ತಿಳಿದಿರುತ್ತಾರೆ. ಆದರೆ ಆ ಭರತನಿಗೂ ಈ ಭಾರತಕ್ಕೂ ಏನು ಸಂಬಂಧ ? ಇಮಮ್ ಸಾಬಿಗೂ ಗೋಕುಲಾಷ್ಟಮಿಗೂ ಇರುವ ಸಂಬಂಧವೇ ? ಖಂಡಿತ ಅಲ್ಲ! ಹಾಗಾದರೆ ಅದೇ ಭರತ ಜಡಭರತನಾಗದೇ ಬಹಳ ಕರ್ತೃತ್ವ ಶಕ್ತಿಯನ್ನು ಹೊಂದಿದ್ದ. ವಿಕ್ರಮಿಯೂ ಅತಿ ಪರಾಕ್ರಮಿಯೂ ಆಗಿದ್ದ. ಸಣ್ಣವನಿರುವಾಗಲೇ ಸಿಂಹಗಳ ಬಾಯಿಗೆ ಕೈಹಾಕುತ್ತಾ ಅವುಗಳ ಜೊತೆಗೆ ಆಟವಾಡಿದ್ದನೆಂದು ನಾವು ಕೇಳಿದ್ದೇವೆ ಅಲ್ಲವೇ ? ಆ ಭರತ ಬೆಳೆದು ಚಕ್ರವರ್ತಿಯಾದ. ಭರತೇಶನಾದ. ಅಂತಹ ಭರತ ತಮ್ಮ ಮೇಲೆ ಒಂದುಕಾಲಕ್ಕೆ ಇನ್ನೊಬ್ಬ ಚಕ್ರವರ್ತಿಯಾದ ರುಕ್ಮಾಂಗದನ ಮಗ ದಾಳಿಗೆ ಬಂದಾಗ ಆತನ ಚಹರೆಗಳನ್ನು ನೋಡಿ ಅವನಿಗೆ ಮನಸೋತ; ಇದ್ದರೆ ಇರಬೇಕು ಇಂತಹ ಪರಾಕ್ರಮಶಾಲಿ ಅಳಿಯ ಎಂದು ನಿರ್ಧರಿಸಿ ನೇರವಾಗಿ ಯುದ್ಧಕ್ಕೆ ಬಂದಿದ್ದ ಧರ್ಮಾಂಗದನಲ್ಲಿ ಪ್ರಸ್ತಾವಿಸಿದ. ಮಹಾವಿಷ್ಣುವಿನ ಪರಮ ಭಕ್ತನಾದ ಧರ್ಮಾಂಗದ ತನ್ನ ಒಪ್ಪಿಗೆಯಿತ್ತ ಪರಿಣಾಮ ಭರತ ಚಕ್ರವರ್ತಿ ರುಕ್ಮಾಂಗದ ಚಕ್ರವರ್ತಿಯ ಮಗನಿಗೆ ತನ್ನ ಹೆಣ್ಣು ಮಕ್ಕಳನ್ನು ಧಾರೆ ಎರೆದ. ಇದರಿಂದ ಅಖಂಡ ಹಿಂದೂಸ್ಥಾನದ ಬಹುಭಾಗ ಭರತ ಹಾಗೂ ಮತ್ತವನ ಅಳಿಯನ ಸಾಮ್ರಾಜ್ಯಕ್ಕೆ ಒಳಪಟ್ಟಿತು. ಆ ಕಾಲದಲ್ಲಿ ಪ್ರಜೆಗಳನ್ನು ಅತ್ಯಂತ ಗೌರವಯುತವಾಗಿ ಅತ್ಯಂತ ಕಾಳಜಿಯಿಂದ ನೋಡಿಕೊಂಡ ಭರತನ ನೆನಪಿಗಾಗಿ ಪ್ರಜೆಗಳೇ ಇಟ್ಟು ಪ್ರೀತಿಯಿಂದ ಕರೆದ ಹೆಸರು ಈ ’ ಭರತಖಂಡ’ ! ಒಂದುಕಾಲಕ್ಕೆ ಭರತನಾಳಿದ್ದ ಈ ಭೂ ಖಂಡ ಭೌಗೋಳಿಕವಾಗಿ ದೊಡ್ಡ ಖಂಡವಲ್ಲದೇ ಇದ್ದರೂ ಒಮ್ಮೆ ಅದನ್ನು ಜನ ಖಂಡವೆಂದೇ ಕರೆದರು. ಈ ಭರತಖಂಡವೆನ್ನುವ ಹೆಸರು ಕಾಲಕ್ರಮದಲ್ಲಿ ’ಭಾರತ’ ವಾಯಿತು. ಇವತ್ತಿಗೂ ಅಖಂಡ ಭಾರತವನ್ನು ಹಿಂದೂಗಳು ಪೂಜೆಯಲ್ಲಿ ಕೈಗೊಳ್ಳುವ ಸಂಕಲ್ಪದಲ್ಲಿ " ಭರತ ಖಂಡೇ ಭಾರತ ದೇಶೇ " ಅಂತ ಸಂಬೋಧಿಸುತ್ತಾರೆ. ಒಟ್ಟಾರೆ ಇದು ಜನಪ್ರಿಯ ಚಕ್ರವರ್ತಿಯ ನೆನಪಿಗೆ ಜನರೇ ಇಟ್ಟು ಕರೆದ ಹೆಸರು.


ಇವತ್ತು ನಮ್ಮ ರಾಜಕೀಯ ನಾಯಕರುಗಳಿದ್ದಾರಲ್ಲ, ಅವರು ಪ್ರಜೆಗಳ ಬಗ್ಗೆ ಮಾಡಿದ ಕೆಲಸ ಹಾಗಿರಲಿ, ಒಮ್ಮೆ ಗೆದ್ದು ಖುರ್ಚಿ ಸಿಕ್ಕಿಬಿಟ್ಟರೆ ಅದನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ಶುರುಮಾಡುತ್ತಾರೆ. ನ್ಯಾಯವೋ ಅನ್ಯಾಯವೋ ಅವರಿಗೆ ದುಡ್ಡುಬೇಕು. ಈ ಸ್ಥಾನ ಭದ್ರತೆಗಾಗಿ ಇವರು ಮಾಡುವ ಹಲವು ಕೆಲಸಗಳಲ್ಲಿ ಒಂದು ತಮ್ಮ ಹೆಸರನ್ನು ಕಂಡ ಕಂಡಲ್ಲಿ ಅದಕ್ಕೆ ಇದಕ್ಕೆ ಅಂತ ಇಡುತ್ತ ಹೋಗುವುದು. ಉದಾಹರಣೆಗೆ : ದೇಶಪಾಂಡೆ ನಗರ. ನಮಗೆ ಈ ದೇಶಪಾಂಡೆ ಮಾಡಿದ ಘನಂದಾರಿ ಸಹಾಯವೇನು? ದೇಶಪಾಂಡೆ ಇದುವರೆಗಿನ ಸಕ್ರಿಯ ರಾಜಕೀಯದಲ್ಲಿ ಬೆಳೆದು ಬಂದ ಮಾರ್ಗ ಹೇಗೆ ? ಹಾಗೂ ಅವರ ನಡೆ-ನುಡಿ ಸ್ವಭಾವಗಳು ಹೇಗೆ? ಅವರು ಚುನಾವಣೆಯಲ್ಲಿ ಗೆಲ್ಲಲು ಬಳಸುವ ಸೀರೆ-ಪಂಚೆ-ಬಂಗಾರದ ನತ್ತು ಇವುಗಳ ಹಿಂದಿರುವ ಅವರ ತಾಕತ್ತು ಎಂಥದು?---ಎಲ್ಲವನ್ನೂ ಅವಲೋಕಿಸಿದರೆ ಪೆದ್ದನೂ ಅಳೆಯಬಲ್ಲ ರಾಜಕೀಯ ಆದಾಯದ ಒಳಹರಿವು ಹೊರಹರಿಯುತ್ತದೆ! ಹರುಕು ಪೈಜಾಮಿನಲ್ಲಿ ಬರುವ ರಾಜಕಾರಣಿಗಳು ವರ್ಷದಲ್ಲೇ ಬದಲಾವಣೆ ಕಂಡು ಕಾರು ಬಂಗಲೆ ಖರೀದಿಸುವುದು, ಎಸ್ಟೇಟ್ ಮತ್ತು ಫಾರ್ಮ ಲ್ಯಾಂಡ್ ಎಂದು ಸಾವಿರಗಟ್ಟಲೆ ಎಕರೆ ಜಮೀನು ಮಾಡುವುದು ಇದೆಲ್ಲಾ ಹೇಗೆ ಸಾಧ್ಯ ? ಬಿಕನಾಸಿಗಳಾಗಿದ್ದ ಅವರುಗಳನ್ನೆಲ್ಲ ಸುಕನಾಸಿಯ ಮೇಲೆ ಹತ್ತಿಸಿ ಥೈ ಥೈ ಎಂದು ಕುಣಿಯುವಂತೆ ನೋಡಿಕೊಂಡಿದ್ದರಿಂದಲೇ ಅವರು ಇದನ್ನೆಲ್ಲಾ ಮಾಡಲು ದಾರಿಸಿಕ್ಕಿತು ಎನ್ನೋಣವೇ ? ಲೋಕಾಯುಕ್ತರು ಸರಕಾರೀ ಅಧಿಕಾರಿಗಳನ್ನು ಪರಿಶೀಲಿಸಿದಂತೆ ರಾಜಕಾರಣಿಗಳ ಆಸ್ತಿಯನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಲಿ. ಮುಂದೆ ನುಸಿ ಹಾರಿದರೆ ಹಿಡಿಯಿರಿ ಎನ್ನುವ ಸರಕಾರ ಹಿಂದೆ ಆನೆ ಓಡುತ್ತಿರುವುದನ್ನು ಹಿಡಿಯಲು ಯಾಕೆ ಅನುಮತಿಸುವುದಿಲ್ಲ? ಇದು ಜಾಣ ಜಾರಿಕೆಯೇ ? ಲೋಕಾಯುಕ್ತರು ಮೊದಲು ಹಿಡಿಯಬೇಕಾದದ್ದು ರಾಜಕೀಯ ಹಲವು ಮುಖಂಡರನ್ನು. ಈ ಕುತ್ಸಿತ ರಾಜಕೀಯದವರ ಮನೆಗಳಲ್ಲಿ ಧಕ್ಕಿರುವ ಆಸ್ತಿಯ ಹಿಂದೆ ಹಲವು ರೋಚಕ ಮತ್ತು ರೋದಕ ಕಥೆಗಳಿವೆ. ಅವರ ಒಂದೊಂದು ಆಸ್ತಿಯ ಗಳಿಕೆಯೂ ಒಂದೊಂದು ಅಕ್ರಮ ವ್ಯವಹಾರವನ್ನು ಬಯಲಿಗೆಳೆಯುತ್ತದೆ, ಅದಕ್ಕೆಂದೇ ನಮ್ಮ 'ರಾಜಕಾರಣಿಗಳ ಮಹಾಒಕ್ಕೂಟ' ಲೋಕಾಯುಕ್ತರಿಗೆ ಯಾವುದೇ ಕಾರಣಕ್ಕೂ ಪೂರ್ಣಪ್ರಮಾಣದ ಅಧಿಕಾರ ಕೊಡುವುದಿಲ್ಲ! ಹೀಗಾಗಿ ಯಾವುದೇ ರಾಜಕೀಯ ಧುರೀಣನನ್ನು ಲೋಕಾಯುಕ್ತರು ಪ್ರಶ್ನಿಸುವಂತಿಲ್ಲ! ಇಲ್ಲಿ ಒಂದು ಮಜಾ ನೋಡಿ- ಶಹರ, ಪಟ್ಟಣಗಳ ಬಹುತೇಕ ಹೆಸರುಗಳೆಲ್ಲ ರಾಜಕೀಯ ಪ್ರೇರಿತವೇ ಹೊರತು ಅವು ಜನಪ್ರಿಯವಲ್ಲ! ಜನ ಪ್ರೀತಿಯಿಂದ ಆ ಹೆಸರನ್ನು ಇಟ್ಟಿದ್ದಲ್ಲ, ಬದಲಾಗಿ ಕಳ್ಳ ರಾಜಕಾರಣಿಗಳು ತಾವು ಸತ್ತರೂ ತಮ್ಮ ನೆನಪಿಗೆ ಇರಲಿ ಎಂದು ಅಂತಹ ಬೋರ್ಡು ಬರೆಸುತ್ತಾರೆ. ಪ್ರಜೆಗಳು ಇಷ್ಟವೋ ಕಷ್ಟವೋ ಅಂತೂ ಗುರುತಿಸಲಾಗಿ ಬೇಕಲ್ಲ ಎಂದು ಆ ಹೆಸರುಗಳನ್ನು ಅನಿವಾರ್ಯವಾಗಿ ಬಳಸುತ್ತಾರೆ.

ಇಷ್ಟೆಲ್ಲಾ ಬರೆಯುವ ಕಾರಣವೆಂದರೆ ಇಂದಿಗೂ ಹಿಂದಿನ ರಾಜರ ಆಳ್ವಿಕೆಗೂ ಬಹಳ ವ್ಯತ್ಯಾಸವಿದೆ! ಅಂದಿನ ರಾಜರ ಆಳ್ವಿಕೆಯೇ ಬಹುಪಾಲು ಮೇಲಾಗಿತ್ತು. || ರಾಜಾ ಪ್ರತ್ಯಕ್ಷ ದೇವತಾ || ಎಂದು ಪ್ರಜೆಗಳು ನಂಬಿದ್ದರೆ || ಯಥಾರಾಜಾ ತಥಾ ಪ್ರಜಾ || ಎಂಬುದನ್ನು ಮನಗಂಡಿದ್ದ ರಾಜರುಗಳು ಪ್ರಜೆಗಳ ಪರಿಪಾಲನೆಯಲ್ಲಿ ಮಾನವಧರ್ಮ ಮಾರ್ಗವನ್ನು ಅನುಸರಿಸುತ್ತಿದ್ದರು. ಇವತ್ತು ಆಳುವ ಪಕ್ಷಗಳಲ್ಲೇ ಹಲವು ಅಪಸ್ವರಗಳು ಹೊರಡುತ್ತಿರುತ್ತವೆ. ಉದಾಹರಣೆಗೆ ನಿನ್ನೆಯ ಪತ್ರಿಕೆಯೊಂದರಲ್ಲಿ ಉತ್ತರಕರ್ನಾಟಕದ ಶಾಸಕರೊಬ್ಬರು ವೈದ್ಯಕೀಯ ಸೌಲಭ್ಯ ವಂಚಿತ ಬಡವನೊಬ್ಬನ ಬಗ್ಗೆ ಹೇಳುತ್ತ ತನ್ನದೇ ಪಕ್ಷದ ಸರಕಾರದಲ್ಲಿ ವೈದ್ಯಕೀಯ ಶಿಕ್ಷಣ ಮಂತ್ರಿಗಳನ್ನು ತರಾಟೆಗೆ ತೆಗೆದುಕೊಳ್ಳಬೇಕಾಗಿ ಬಂದ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ. ಆಳುವವರಿಗೆ ಏನಾಗಿದೆ ? ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಇದು ನಾವು ಮಾಡಿಕೊಂಡ ವ್ಯವಸ್ಥೆಯೋ ಅಥವಾ ದೇಶದ/ರಾಜ್ಯದ ಬೊಕ್ಕಸವನ್ನು ಬರಗಿ ತುಂಬಿಕೊಳ್ಳಲು ಜನರನ್ನು ನೇಮಕಮಾಡಿಕೊಳ್ಳುವ ವ್ಯವಸ್ಥೆಯೋ ಅರ್ಥವಾಗಿಲ್ಲ;ಅರ್ಥವಾಗೊಲ್ಲ ಎಲ್ಲೀವರೆಗೆ ಎಂದರೆ ನಮ್ಮ ಕಟ್ಟಕಡೆಯ ಅಂದಿನದಿನದ ಪುಡಿ ದುಡ್ಡಿಗಾಗಿ ಹಲ್ಲು ಗಿಂಜುತ್ತ ಕಂಡಲ್ಲಿ ಮತವೊತ್ತುವ ಹಲಕಟ್ಟು ಮತದಾರ ಇರುವವೆರೆಗೂ! ರಾಜಕಾರಣಿಗಳಿಗೂ ಇದೇ ಆಸ್ತಿ! ಎಲ್ಲಿ ಅನಕ್ಷರತೆ ಮತ್ತು ಬಡತನವಿದೆಯೋ ಅಲ್ಲಿ ಅವರ ಬೇಳೆ ಬೇಯುತ್ತದೆ!

ನೋಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ನಮ್ಮ ಹಳ್ಳಿಗಳಿಗೆ ರಸ್ತೆಗಳಿಲ್ಲ, ಕುಡಿಯುವ ನೀರಿನ ವ್ಯವಸ್ಥೆಯಿಲ್ಲ, ಓದಲು ಶಾಲೆಗಳಿಲ್ಲ, ಸರಿಯಾಗೆ ಕೆಲಸ ಮಾಡುವ ಆರೋಗ್ಯಕೇಂದ್ರಗಳಿಲ್ಲ, ತೀವ್ರ ಸ್ಥಿತಿಗೆ ಸಾಗಿಸಲು ವಾಹಕಗಳಿಲ್ಲ[ಆಂಬುಲೆನ್ಸ್]. ಆದರೆ ನಮ್ಮಲ್ಲಿ ಮತವೈಷಮ್ಯಗಳಿವೆ, ಮೀಸಲಾತಿಗಳಿವೆ, ಮೈನಾರಿಟಿ-ಮೆಜಾರಿಟಿ ಎಂಬ ಪ್ರಬೇಧ-ಕುಲಬೇಧಗಳಿವೆ--ಈ ವಿಷಯಗಳಲ್ಲಿ ನಾವು ಶ್ರೀಮಂತರು! ಜನಸಂಖ್ಯೆ ಈ ಗಾತ್ರಕ್ಕೆ ಬೆಳೆದು ಊಟಕ್ಕೆ ಪರದಾಡುವ ಸ್ಥಿತಿ ಬಂದರೂ ಇನ್ನೂ ಮೈನಾರಿಟಿಯೆಂಬ ವಿಷಬೀಜ ಬಿತ್ತಿ ಬೆಳೆಯುತ್ತಿರುವವರು ರಾಜಕಾರಣಿಗಳೇ ! ಓಬೀರಾಯನ ಕಾಲದ ಸಂವಿಧಾನದ ಕರಡು ಹಾಗೇ ಇದೆ. ಅಂದಿನ ಕಾಲಕ್ಕೆ ಅರ್ಜೆಂಟಿಗೆ ಮಾಡಿಕೊಂಡಿದ್ದನ್ನು ಮತ್ತೆ ಇವರು ತಿದ್ದಲು ಬಿಡುವುದಿಲ್ಲ ಯಾಕೆಂದರೆ ತಿದ್ದಿಬಿಟ್ಟರೆ ಹಲವು ರಾಜಕಾರಣಿಗಳು ಮೂಲೆಗುಂಪಾಗುತ್ತಾರೆ, ಮತ್ತೆ ಕೆಲವರು ಕಂಬಿಯ ಹಿಂದೆ ನಿಲ್ಲುತ್ತಾರೆ, ಇನ್ನೂ ಕೆಲವರು ದೇಶ ಬಹಿಷ್ಕಾರಕ್ಕೆ ಒಳಗಾಗುತ್ತಾರೆ! ಅದಕ್ಕೇ " ಅದೆಲ್ಲಾ ಈಗ ಬೇಕಾಗಿಲ್ಲ, ನಮಗೆ ಹೇಗೆ ಬೇಕೋ ಹಾಗೆ ಅಂಬೇಡ್ಕರ್ ಮಾಡಿಟ್ಟಿದ್ದಾರೆ " ಎಂದು ಅದನ್ನೇ ಆತುಕೊಂಡಿದ್ದಾರೆ. ಒಂದು ಉದಾಹರಣೆ ನೋಡಿ- ಬೆಂಗಳೂರಿಗೆ ಮೊದಲಾಗಿ ನೀರು ಪೂರೈಕೆ ಮತ್ತು ಒಳಚರಂಡಿ ವ್ಯವಸ್ಥೆಯನ್ನು ದಿ| ಸರ್ ವಿಶ್ವೇಶ್ವರಯ್ಯ ಮಾಡಿದರು. ಇವತ್ತು ಜನಸಂಖ್ಯೆ ಬೆಳೆದಂತೆ ಹಲವು ನಗರಗಳು ಸಮರದೋಪಾದಿಯಲ್ಲಿ ಒಮ್ಮೆಲೇ ತಲೆ ಎತ್ತಿ ನಿಂತವು-- ಇವುಗಳಿಗೆಲ್ಲಾ ವಿಶ್ವೇಶ್ವರಯ್ಯನವರು ಮಾಡಿದ ಪ್ಲಾನು ಸಾಕಾಯಿತೇ ? ಇಲ್ಲವಲ್ಲ, ಅವರ ಪ್ಲಾನು ಬುನಾದಿ-ಈಗ ಮಾಡುವ ಪ್ಲಾನು ಅದರ ಮುಂದುವರಿದ ಭಾಗ ಅಲ್ಲವೇ? ಅಂತೆಯೇ ಸಂವಿಧಾನಕ್ಕೆ ಅಂದಿಗೆ ಅಂದಿನ ಜನಮಾನಸ ಬದಲಿದ್ದ ಕಾರಣ ಅದನ್ನು ಕೆಲವು ನ್ಯೂನತೆಗಳಿಂದಲೇ ನಾವು ಒಪ್ಪ್ಕೊಂಡಿದ್ದೇವೆ - ಈಗ ಅದರಲ್ಲಿ ಬದಲಾವಣೆ ಬೇಕಿದೆ. ಅದಿಲ್ಲದಿದ್ದರೆ ಅದೇ ಅಸ್ತ್ರ ಬಳಸಿ ಕೆಟ್ಟ ರಾಜಕಾರಣಿಗಳು ಯುದ್ಧ ಗೆಲ್ಲುತ್ತಲೇ ಇರುತ್ತಾರೆ.

ಇಂದಿಗೆ ಒಂದು ಮಾತು ನೆನಪಿಡಿ- ಸಮಾಜವನ್ನು ಉದ್ಧಾರಮಾಡುವ ರಾಜಕಾರಣಿ ಇಂದಿಗೆ ಯಾರೂ ಬದುಕಿಲ್ಲ! ಅಂಥವರು ಇದ್ದರೆ ಎದೆತಟ್ಟಿ ಮುಂದೆ ಬರಲಿ ನಾವವರಿಗೆ ಸನ್ಮಾನ ಮಾಡೋಣ-ನಿರ್ಭಿಡೆಯವಾಗಿ. ಇಂದಿರುವ ರಾಜಕಾರಣಿಗಳು ಬರೇ ಬಕಗಳು. ಅವರಲ್ಲಿ ಪರ್ಸಂಟೇಜು ವ್ಯತ್ಯಾಸ ಅಷ್ಟೇ! ಜೇನು ತೆಗೆದವರು ಕೈ ನೆಕ್ಕುತ್ತಾರಂತೆ ಅಂಬೋದೊಂದು ಗಾದೆ, ಇರಲಿ ಇಲ್ಲಿ ಜೇನು ಹುಟ್ಟನ್ನೇ ಗುಳುಂ ಸ್ವಾಹಾ ಮಾಡಿ ಬರೇ ಕೈಗೆ ತಾಗಿರುವುದನ್ನು ಸಮಾಜದ ಮೂತಿಗೆ ಒರೆಸಿಬಿಡುತ್ತಿದ್ದಾರಲ್ಲ ಯಾಕೆ ನಮಗೆ ಅರ್ಥವಾಗುತ್ತಿಲ್ಲ? ಇದರ ಬದಲಾವಣೆ ಸಾಧ್ಯವಿಲ್ಲವೇ ? ಅಮೇರಿಕಾದ ಥರ ಕೇವಲ ಎರಡೇ ರಾಷ್ಟ್ರೀಯ ಪಕ್ಷಗಳು ನಮ್ಮಲ್ಲಿ ಇದ್ದಿದ್ದರೆ ಪಕ್ಷಾಂತರ ಮತ್ತು ಕುದುರೆವ್ಯಾಪಾರ ಇಲ್ಲವಾಗುತ್ತಿತ್ತು. ಅಪವಿತ್ರ ಮೈತ್ರಿ ಎಂಬುದು ಅಧಿಕಾರಕ್ಕಾಗಿ ಹುಟ್ಟಿಕೊಳ್ಳುತ್ತಿರಲಿಲ್ಲ. ಹರಿದ ಲಡ್ಡಾದ ಬಟ್ಟೆಗೆ ಹಳೆಯ ದಾರದಿಂದ ತೇಪೆ ಹಾಕಿದಂತೆ ಸಮ್ಮಿಶ್ರ ಸರಕಾರಗಳ ಉಗಮವಾಗುತ್ತಿರಲಿಲ್ಲ. ಉಪಚುನಾವಣೆಗಳು, ಮರುಚುನಾವಣೆಗಳು, ಮತ್ತೆ ಚುನಾವಣೆಗಳು, ಮತ್ತಷ್ಟು ಚುನಾವಣೆಗಳು ಇವೆಲ್ಲದರ ಹೊರೆ ಮತದಾರನ ತಲೆಗೆ ಬರುತ್ತಿರಲಿಲ್ಲ, ಅತಂತ್ರ ರಾಜಕೀಯ ಹುಟ್ಟಿಕೊಳ್ಳುತ್ತಿರಲಿಲ್ಲ.

ಸಮಾಜದ ನೆಮ್ಮದಿಗೆ ಪರೋಕ್ಷವಾಗಿ ಮಾರಕರಾದ ಹೆಂಡದ ದೊರೆಗಳಿಗೆ ನಾವು ಗೌರವ ಡಾಕ್ಟರೇಟ್ ಕೊಡುತ್ತೇವೆ ಎನ್ನುವುದು ನಮ್ಮ ಸಂಸ್ಕೃತಿಯ ಅಧಃಪತನಕ್ಕೆ ಹಿಡಿದ ಬಹುದೊಡ್ಡ ಕನ್ನಡಿ! ನಮ್ಮ ಬಿಳಿಯ ಬಟ್ಟೆಯ ರಾಜಕಾರಣಿಗಳು ಜೀವಿತದಲ್ಲೇ ಕೇಳರಿಯದ ವಿದೇಶೀ ಡಾಕ್ಟರೇಟ್ ಖರೀದಿಸಿ ಕಪ್ಪು ಗೌನು ಹಾಕಿ ಚಿತ್ರ ತೆಗೆಸಿಕೊಳ್ಳುವುದು ನಮ್ಮ ಹಣೆಗೆ ಹಚ್ಚಿದ ಮಸಿಯ ನಾಮ! ವಿಶ್ವವಿದ್ಯಾಲಯಗಳ ಪದವಿಗಳು, ಹಲವು ಪ್ರಶಸ್ತಿಗಳು ಬೀದಿಯಲ್ಲಿ ಬೇಕಾಬಿಟ್ಟಿ ಬಿಕರಿಯಾಗುತ್ತಿರುವುದು ನಮ್ಮ ಚಿಂತಾಜನಕ ಸ್ಥಿತಿ, ತೆಲ್ಗಿ-ಹರ್ಷದ್ ರಂತಹ ಪ್ರಕರಣಗಳಲ್ಲಿ ಅವರನ್ನು ಶಿಕ್ಷಿಸಲಾಗದಿರುವುದು ಆ ಮೇಳಗಳಲ್ಲಿ ತಾವೂ ಶಾಮೀಲಾಗಿರುವ ನಮ್ಮ ರಾಜಕಾರಣಿಗಳು ನಮಗೆ ನಮ್ಮ ಆರ್ಥಿಕತೆಗೆ ಅಂಟಿಸಿದ ಏಡ್ಸ್ ರೋಗ ! ರಾಮನು ಹುಟ್ಟಿದ ದೇಶದಲ್ಲಿ ಅವನನ್ನೇ ರಾಜಕೀಯಕ್ಕೆ ಬಳಸಿಕೊಂಡಿದ್ದು ನಮ್ಮ ದುರ್ದೈವ! ನಾವಿನ್ನೂ ಇಂತಹ ಜೀವಿತವನ್ನೇ ಜೀವಿಸಬೇಕಾಗಿ ಬಂದಿರುವುದು ನಮ್ಮ ಹಣೆಬರಹ!

ಪ್ರತೀ ಸರ್ತಿ ನೋಡಿ ವೇದಿಕೆಯ ತುಂಬಾ ಅದೇ ಘರ್ಜನೆ: " ಮಹಾತ್ಮಾ ಗಾಂಧಿ ಏನಂದ್ರು, ಸರ್ದಾರ್ ಪಟೇಲ್ ಏನ್ಮಾಡದ್ರು, ಲೋಕಮಾನ್ಯ ತಿಲಕರು ಯಾವ ರೀತಿ ತಿದ್ದಿದರು " ಇಷ್ಟಿಷ್ಟೇ, ಇದಕ್ಕೂ ಜಾಸ್ತಿ ಆಳಕ್ಕೆ ಇಳಿದರೆ ಅವರೆಲ್ಲರ ಬಗ್ಗೆ ನಮ್ಮ ರಾಜಕೀಯಣ್ಣಗಳಿಗೆ ಏನುಗೊತ್ತು ? ಹಾಡಿದ್ದೇ ಹಾಡೋ ಕಿಸ್ಬಾಯಿದಾಸರಾಗುವ ಬದಲು ಸಮಾಜಕ್ಕೆ ನಾವಿದನ್ನು ಮಾಡಿದ್ದೇವೆ ಎಂದು ಬರಿದೇ ಕಾಲ್ನಡಿಗೆ,ಕೈನಡಿಗೆ, ಸರ್ಕಸ್ಸು, ಸಮಾವೇಶ ಇದನ್ನೆಲ್ಲಾ ಮಾಡದೇ ಕೃತಿಯಲ್ಲಿ ಜನಮೆಚ್ಚುವ ಕೆಲಸ ಮಾಡಿದ್ದರೆ ಇಂದಿಗೆ ನಮ್ಮ ಭಾರತ ಖಂಡಿತ ಉದ್ಧಾರವಾಗುತ್ತಿತ್ತು. ಎಂದಿಗೆ ನಮ್ಮ ಭಾರತ ಉದ್ಧಾರವಾಗುತ್ತಿತ್ತೋ ಅಂದಿಗೆ ಪಾಕಿಸ್ತಾನಿಗಳಾಗಲೀ ಬಾಂಗ್ಲಾದೇಶಿಗಳಾಗಲೀ ಅಥವಾ ಚೀನೀಯರೇ ಆಗಲಿ ನಮ್ಮ ಒಗ್ಗಟ್ಟನ್ನು ನಮ್ಮ ತಾಳ್ಮೆಯನ್ನು, ನಮ್ಮ ಸಾಧನೆಯನ್ನು ನೋಡಿ ತಂತಾನೇ ಹಿಮ್ಮೆಟ್ಟುತ್ತಿದ್ದರು. ಇವತ್ತಿಗೆ ಅವರೆಲ್ಲಾ ಮೂತಿ ತೂರಿಸುತ್ತಿದ್ದರೆ ಅದಕ್ಕೆ ಅವಕಾಶ ನಮ್ಮಲ್ಲಿರುವ ನಮ್ಮ ದೌರ್ಬಲ್ಯ. ಯಾರೇ ಬಾಂಬುಹಾಕುವವರು ಬಂದು ವರ್ಷಾನುಗಟ್ಟಲೆ ನಮ್ಮ ಪಕ್ಕದಲ್ಲೇ ಇದ್ದು, ಚೆನ್ನಾಗಿ ಬೇಕಾದ್ದನೆಲ್ಲ ಮೆದ್ದು, ಮೈಕೊಡವಿ ಎದ್ದು ಓಡಿಹೋಗಿ ಸರಿಯಾಗಿ ಮತ್ತೆ ಹಾಕುವಾಗ ಗುದ್ದು -ನಾವೆಲ್ಲಾ ಬುದ್ದು ನಾವೆಲ್ಲಾ ಬುದ್ದು! ನಾವಿನ್ನೂ ಮಲಗೇ ಇದ್ದೇವೆ-ದೇಶಕ್ಕೆ ಸ್ವಾತಂತ್ರ್ಯ ಬಂದು ೬೪ ವರ್ಷಗಳಾದವು ಎನ್ನುತ್ತಾ ಅಲ್ಲೇ ಹರಿದ ಕಂಬಳಿ ಹಾಸಿ ಕುಕ್ಕರುಬಡಿದಿದ್ದೇವೆ!

ಒಬ್ಬ ಚಂದ್ರಾಸ್ವಾಮಿ, ಒಬ್ಬ ನಿತ್ಯಾನಂದ, ಒಬ್ಬ ಎಮ್.ಎಫ್.ಹುಸೇನ್ ಹುಟ್ಟಿ ಮೆರೆಯುವುದು ನಮ್ಮ ಭಾರತದ ಇಂದಿನ ಹೆಮ್ಮೆ!!! ನಮ್ಮ ನಡುವೆ ಸ್ವಾರ್ಥಿಗಳೂ ವಿಷಯಲಂಪಟರೂ, ಮತಾಂಧರೂ ಆಗಿರುವ ಇಂಥವರನ್ನೆಲ್ಲ ನಾವು ಮೆಹರ್ಬಾನ್ ಮಾಡಿ ಸಾಕುತ್ತಿರುವುದು ನಮಗಿರುವ ನರದೌರ್ಬಲ್ಯ! ಆಗಾಗ ನಿಷ್ಕಾಳಜಿಯ ಅತಿ ಸಣ್ಣ ಕಾರಣಗಳೇ ದೊಡ್ಡದಾಗಿ ರೈಲು,ಬಸ್ಸು ಮುಂತಾದ ಅಪಘಾತಗಳಾಗುವುದು ನಮಗೆ ಬರುತ್ತಿರುವ ಫಿಟ್ಸ್ [ ಮಲರೋಗ] ! ಕಾಡು-ಗಣಿ-ಭೂಸಂಪತ್ತು ನಾಶಮಾಡುವ ಹೊಸ ರಕ್ಕಸರ ಮುಂದೆ ತಲೆಬಾಗಿ ಕೈಕಟ್ಟಿ ನಿಲ್ಲುವುದು ನಮ್ಮ ದೈನ್ಯ ಸ್ಥಿತಿ! ಸಾಮಾಜಿಕ ಕಾರ್ಯಗಳನ್ನು ಒಂಚೂರೂ ಸರಿಯಾಗಿ ಮಾಡದ ರಾಜಕೀಯದವರನ್ನು ಪರೋಕ್ಷವಾಗಿ ಸಾಕಬೇಕಾಗಿ ಬಂದಿರುವುದು ಸಾಕುತ್ತಿರುವುದು ನಮಗೆ ಬಂದ ಸ್ವಯಾರ್ಜಿತ ಆಸ್ತಿ! ಇವುಗಳನ್ನೆಲ್ಲಾ ಮೆಟ್ಟಿನಿಲ್ಲುವ ಎಲ್ಲಾ ಸಾಧ್ಯತೆಗಳ ಕುರಿತು ಚರ್ಚಿಸಲು, ಕ್ರಮಕೈಗೊಳ್ಳಲು ಯಾರಿಗೂ ಸಮಯವೂ ಇಲ್ಲ, ಬೇಕಾಗಿಯೂ ಇಲ್ಲ. ಏನಾದರೂ ನಡೆದರೆ ಅದಕ್ಕೊಂದು ಸಮಿತಿ ರಚಿಸಿ ಪರಿಶೀಲನೆ ಮಾಡಿ ಅಂತ ಕಳಿಸಿ ಹತ್ತಾರು ವರ್ಷಗಳ ನಂತರ ಸಮಾಜ ಅದನ್ನು ಮರೆತಮೇಲೆ ತಾವೂ ಮರೆತುಬಿಡುವುದು ನಮ್ಮ ರಾಜಕೀಯ ಮುತ್ಸದ್ಧಿತನ! ಪರಸ್ಪರರ ಮೇಲೆ ಗೂಬೆ ಕೂರಿಸುತ್ತಾ ಹಾಗೆ ಹೀಗೆ ಎನ್ನುತ್ತಾ ಬೇಳೆಬೇಯಿಸಿಕೊಳ್ಳುವ ರಾಜಕಾರಣಿಗಳ ದಾಳಕ್ಕೆ ಸಿಕ್ಕ ಮೀನುಗಳು ನಾವು ! ಅತಂತ್ರ ಪ್ರಜಾತಂತ್ರವೆಂಬ ನಾವೇ ಬೆಳೆಸಿದ ಹುಲಿಯಬಾಯಿಗೆ ಸಿಕ್ಕ ಹಸುಗಳು ನಾವು! ಬದುಕಿದ್ದೇವೆ, ಬದುಕುತ್ತಿದ್ದೇವೆ ಕ್ಯಾನ್ಸರ್ ಹಿಡಿದ ರೋಗಿಗಳಂತೆ, ಕುಷ್ಠ ಹಿಡಿದ ಪಾಪಣ್ಣನಂತೆ, ಕದಿರು ಬಂದು ಎಣ್ಣೆಯಾರುತ್ತಿರುವ ದೀಪದಂತೆ!

ಇನ್ನಾದರೂ ನಾವು ಅರಿತರೆ, ಬದಲಾದರೆ, ಓದಿಕೊಂಡರೆ, ರಾಜಕಾರಣಿಗಳ ರಟ್ಟೆಹಿಡಿದು ವಿಮಾನದಿಂದ/ ಕಾರಿಂದ ಕೆಳಗಿಳಿಸಿ ಮುಖಕ್ಕೆ ’ಮಂಗಲಾರತಿ’ ಮಾಡುವ ಮಟ್ಟಕ್ಕೆ ಬೆಳೆದರೆ ಆಗ ಬರುವುದು ನಿಜವಾದ ಸ್ವಾತಂತ್ರ್ಯ, ಕಾಡನ್ನು-ಭೂಗರ್ಭದ ಸಂಪತ್ತನ್ನು ಶಾಶ್ವತವಾಗಿ ಉಳಿಸಿಕೊಂಡರೆ ಆಗ ದೊರೆವುದು ನಿಜವಾದ ಸ್ವಾತಂತ್ರ್ಯ. ನಮಗೆಲ್ಲಾ ಬೇಕಾಗುವ ಮೂಲ ಸೌಲಭ್ಯಗಳು ಎಂದು ಸಿಗುತ್ತವೋ ಅಂದು ನಮಗೆ ಸಿಗುವುದು ಪರಿಪೂರ್ಣ ಸ್ವಾತಂತ್ರ್ಯ. ರಾಜಕೀಯದಲ್ಲಿರುವ ಪ್ರತೀ ವ್ಯಕ್ತಿ ತಾನೊಬ್ಬ ಸಮಾಜದ ಆಳು ಎಂಬ ತಿಳುವಳಿಕೆ ಹೊತ್ತು ನಡೆಯುವ ಕಾಲವನ್ನು ತರಿಸಿದರೆ ಅಂದು ನಮಗೆ ನಿಲುಕುವುದು ಪರಿಪಕ್ವ ಸ್ವಾತಂತ್ರ್ಯ. ಬಡವರು, ದೀನರು, ದಲಿತರು, ನಿರಕ್ಷರಕುಕ್ಷಿಗಳು, ಭಿಕ್ಷುಕರು ಎಂದಿಗೆ ನಮ್ಮಲ್ಲಿ ಸಹಜವಾಗಿ ಇರುವುದಿಲ್ಲವೋ ಅಂದೇ ನಮಗೆ ಉಂಟಾಗುವುದು ಸಬಲ, ಸಮರ್ಥ ಸ್ವಾತಂತ್ರ್ಯ.

ಆಗ ನಾವು ನಿಜವಾದ ಅರ್ಥದಲ್ಲಿ ಹಾಡಬೇಕಾದ ಹಾಡು ಭಾರತಾಂಬೆಯೇ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ ! ನಮಸ್ಕಾರ

ಜೈ ಹಿಂದ್ ಜೈ ಹಿಂದ್ ಜೈ ಹಿಂದ್

ಬೀಡಾಡಿಗಳ ಸ್ವಾತಂತ್ರ್ಯೋತ್ಸವ !!

[ಗಮನಿಸಿ : ನಾಳೆಯ ಸ್ವಾತಂತ್ರ್ಯೋತ್ಸವಕ್ಕೆ ಬೇರೆ ಕೃತಿ ಪ್ರಕಟವಾಗುತ್ತದೆ-ಇದು ಸದ್ಯಕ್ಕೆ ಟೈಂ ಪಾಸ್ ಕಡ್ಲೇಕಾಯಿ ]

ಬೀಡಾಡಿಗಳ ಸ್ವಾತಂತ್ರ್ಯೋತ್ಸವ !!

" ತಲೆಗೆ ರುಮಾಲು ಸುತ್ತದ್ರೆ ಜಾಸ್ತಿ ಬಟ್ಟೆ ಬೇಕಾತದೆ ಅಂತ ಮಾತ್ಮಾ ಗಾಂಧಿ ಟೋಪಿ ಹಾಕ್ಕೊಂಡ್ರು ಹಂಗೇಯ ನೀವೆಲ್ಲಾ ಅದ್ನೇ ಬಳಸಿ ಅಂತದ್ರು "

" ಅದ್ಕೇ ಕಣಪ್ಪಾ ದೇಸದ ಜನವೆಲ್ಲಾ ಸರ್ಯಾಗಿ ಬಟ್ಟೆ ಇಲ್ದೇ ಇರ್ವಾಗ ತಂಗ್ ಮಾತ್ರ ಯಾಕೆ ಎಂದು ಮಲ್ಲಿಕಾ ಸೇರಾವತ್ ಬಟ್ಟೇನೆ ಕಮ್ಮಿ ಮಾಡ್ಬುಟ್ಳು "

---------------

" ಅಲ್ಲಾಲೇ ಆಗಸ್ಟ್ ಹದ್ನೈದು ಯಾವ ಹಬ್ಬ ? "

" ಓ ಅದಾ ಅದೂ ಅದೂ ನಮ್ಮೂರ್ ಮೇಷ್ಟ್ರುಗೋಳೆಲ್ಲ ಬಾವುಟ ಹಾರ್ಸೋ ಹಬ್ಬ, ಯಾವಗ್ಲೂ ಹಾರ್ಸಾಕಿಲ್ಲ ನೋಡು ಅದ್ಕೇಯ ಇಂತಾ ದಿವ್ಸ ಅಂತ ಒಂದಷ್ಟ್ ದಿನ ಮಡೀಕಬುಟ್ಟವ್ರೆ "

---------------

" ರಾಜ್ಯದ ಖಜಾನ್ಯಾಗೆ ದುಡ್ಡೇ ಇಲ್ವಂತೆ ? "

" ಯಾರ್ಲಾ ಹೇಳಿದ್ದು ಹಾಂಗೆಲ್ಲಾ ಮಾಡಕಾಯ್ತದೇನಲೇ ಅದಕ್ಕೇ ಅಲ್ವಾ ಸಮಾವೇಸ ಮಾಡ್ಬುಟ್ಟು ದ್ರುಷ್ಟಿ ಬಳ್ದು ಮತ್ತೊಂದಿಷ್ಟು ಸದ್ಯಕ್ಕಿರ್ಲಿ ಅಂತ ಅಲ್ಲಿಂದಾ ಇಲ್ಲಿಂದಾ ಎಲ್ಲೆಲ್ಲಾತದೋ ಕಿತ್ತಾಂಕಬರ್ರಲೇ ಅಂತ ಓಯಾಸೀಸು ನ ಕಳ್ಸ್ಕತಾರೆ "

" ಅದ್ಯೇನಯ್ಯಾ ಹಂಗಂತೀಯಾ ಓಯಾಸಿಸು ಇರೋದು ಮರ್ಭೂಮಿಲಿ ಅಂತಾ ರಂಗಣ ಮೇಷ್ಟ್ರು ಹೇಳಿದ್ ಮರ್ತ್ಬುಟ್ಟಾ ? "

" ಅದಲ್ಲ ಕಣಲೇ ಗುಗ್ಗು ಓಯಾಸೀಸು ಅಂದ್ರೆ ಇಲ್ಲಿ ಇಂಥಿಂಥಾ ಮಂಕ್ರೀಗೆ ಇಂಥಿಂಥಾ ಸಕ್ಕರೆಟ್ರಿ ಅಂತ ಮಡೀಕತಾರಲ್ಲ ಅವ್ರು ಅವ್ರು "

" ಓ ಆಯ್ ಏ ಎಸ್ ಅನ್ನಪ್ಪಾ ಓಯಾಸೀಸಲ್ಲ ಕಣ್ಲಾ ಅದು "

" ಎರ್ಡೂ ಒಂದೇಯ ನಂಗ್ಯಾಕ್ ಹೇಳ್ತ್ಯಾ ಸುಮ್ಕೆ...ಅಲ್ಲಿ ನೀರಿರ್ದಿದ್ರೆ ಅದು ನೀರ್ ಕೊಡ್ತೈತೆ ಇಲ್ಲಿ ಕಾಸಿರ್ದಿದ್ರೆ ಅವರು ಕಾಸ್ ಮಾಡೋ ಪ್ಲಾನ್ ಕೊಡ್ತಾರಪ್ಪಾ ಅವರ್ನ ಕರ್ದು ’ ಕಾಸೆಲ್ಲಾ ಖಾಲಿ ಆಗೈತೆ ಇಸ್ಯ ನಿಮ್ತಾವನೇ ಇರ್ಲಿ ಬೇಗ ಹುಡಕ್ಕಂಬನ್ನಿ ’ ಅಂದ್ಬುಟ್ರೆ ಮುಗ್ದೇ ಹೋಯ್ತು ತಕ ಎಲ್ಲೆಲ್ಲಿ ಹೆಂಗೆಂಗೆ ಫಿಟಿಂಗ್ ಇಡ್ಬೈದು ಅನ್ನೋ ಐಡಿಯಾನ ತಕಂಬತ್ತವೆ ಕಾಸ್ ಮಾಡಕ್ಕೆ ಮತ್ತೆ ಸುಮ್ನೇನಾ ಅವರ್ನ ಮಡೀಕಳದು ? ನಂಗೇನ್ ಅಷ್ಟೂ ತಲೇ ಇಲ್ಲಾಂತ್ ತಿಳ್ದಾ ಮೂದೇವಿ ? "

--------------

" ಅಣೆಕಟ್ಟೆಲ್ಲಾ ಸೋರ್ತಾ ಅವೆ ಅಂತಾರಲ್ಲಯ್ಯ ? ಅದೇನ್ ಒಸಿ ರಿಪೇರಿ ಮಾಡಾಕಿಲ್ವ ? "

"ನೀ ಕೇಳ್ತಾಲೇ ಇರು ನಾಯೇಳ್ತಾಲೇ ಇರ್ತೀನಿ ರಿಪೇರಿಗೆಲ್ಲಾ ಬಗ್ಗೋ ಸ್ಟೇಜ್ ಪಾಸಾಗ್ಬುಟ್ಟೈತೆ ಮಗಾ ಒಂದೊಂದಕ್ಕೂ ಸ್ವಾತಂತ್ರ ಬಂದಷ್ಟ್ ವೈಸಾಗೈತೆ ಇನ್ನೇನಲ್ಲಿ ಹಣೇಬರ ಹೋದಮ್ಯಾಲೆ ಒಟ್ಗೇ ಹೊಸದಾಗೇ ಮಾಡ್ಬುಟ್ರೆ ಇಂತಿಷ್ಟ್ ಸಾವ್ರ ಕೋಟಿ ಅಂತ ಕೆಡೀಕೋಬೈದು ಎಲ್ಲಿಟ್ಟೆ ತಲೇನಾ ? "

----------------

" ಜನ ಗಣ ಮನ ....ಅನ್ನೋ ಹಾಡೈತಲ್ಲಪ್ಪಾ ಅದೇ ನಾವು ಸ್ಕೂಲಾಗೆ ಹಾಡ್ಲೇ ಬೇಕು ಅಂತ ಬೆಂಚ್ ಮೇಲೆ ನಿಲ್ಸಿ ಮೇಷ್ಟ್ರು ಬಾಯ್ಪಾಠ ಮಾಡ್ಸಿದ್ದು "

" ಏನಾಯ್ತು ಹೇಳು "

" ಏನಿಲ್ಲಾ ನಮ್ ರಾಜ್ಕೀಯದ್ ಜನಕ್ಕೆ ಅದನ್ನ್ ಕೇಳ್ದ್ರೆ ಸಾಕು ಒಳ್ಳೇ ನಿದ್ದೆ ಬತ್ತದಂತೆ ಏನಾದ್ರೂ ತಲೆಬಿಸಿ ಆದ್ರೆ ಆ ಹಾಡ್ನ ಸೀಡಿ ಹಾಕ್ಕಂಡು ಮಲ್ಕಬುಟ್ರೆ ಆಗೋಯ್ತಂತೆ "

" ಅದ್ಕೇನಪ್ಪಾ ಈ ದೇಸ ಹೀಗಿರೋದು ಅವ್ರೂ ಅದ್ನ ಹಾಡಿದ್ದ್ರೆ ಅಮೇರಿಕಾದವ್ರು ತಮ್ಮನ್ನೆಲ್ಲ ಬಿಟ್ಟೋಯ್ತರೆ ಅಂತ ಅದೆಲ್ಲಾ ಏನಿದ್ದ್ರೂ ನೀವ್ಗೋಳು ಹಾಡಿ ನಾವು ಮೊಳಕೈಗೆ ಏನಾರೂ ಕೋಲು ಕೊಟ್ಗಂಡು ನಿಂತ್ಗೋಬುಡ್ತೀವಿ ಅಂತಾರೆ "

" ಅಲ್ಲಾ ನೀ ಹೇಳಿದ್ದು ಸರೀ ಅನ್ನು ಯಾವುದ್ರಾಗ್ ಒಕ್ಕಟ್ಟಿಲ್ದಿದ್ರು ಈ ಹಾಡು ಬರೋದಿಲ್ಲಾ ಅಂತ ಮೊದ್ಲೇ ಗೊತ್ತಿರೋದ್ರಿಂದ ಹಂಗೇ ಪಾಲ್ಟಿ-ಪಕ್ಸನೆಲ್ಲಾ ಮರ್ತು ಹಾಡ್ ಹಾಡುವತ್ಗೆ ಸುಮ್ನಾಯ್ಕಂತವೆ ನೋಡು "

----------------

" ಸೆಂಟ್ರಲ್ ನೋರು ಅದೇನೋ ಆಹಾರ ಹಾಳಮಾಡವ್ರಂತೆ "

" ಸೆಂಟ್ರಲ್ಲು ಅಂದ್ರೆ ಬಟ್ಟೆ ಬರೆ ಸಿಗೋ ದೊಡ್ಡ ಸಾವ್ಕಾರ್ರ ಜಾಗ ಕಣಪ್ಪಾ ಅಲ್ಲೇಲ್ಲಾ ಅವ್ರು ಯಾಪಾರ ಮಾಡಕೇ ಅಂತ್ಲೇ ಕೂತಿರಾದು ಅದೇನ್ ಹಾಳ್ಮಾಡ್ಕಂಡು ಲಾಸ್ ಮಾಡ್ಕಳಕಲ್ಲ ಅಷ್ಟೂ ಗೊತ್ತಾಯಾಕಿಲ್ವೆ ಗೂಬೆನ್ ತಂದು "

" ಅದಲ್ಲಲೇ ನಾ ಹೇಳಿದ್ದು ಕೇಂದ್ರ ಸರ್ಕಾರ ಆಹಾರ ಹಾಳಮಾಡದೆ ಅಂತಾವ "

" ಅದೆಲ್ಲಾ ಎಷ್ಟೋ ಆತದೆ ಬಿಡಪ್ಪಾ ಯಾಕ್ ಸುಮ್ನೇ ಉಚ್ಚೇಲ್ ಗಾಳ ಹಾಕ್ತೀಯ ದೊಡ್ ಮನ್ಸ ಆಗ್ಬೇಕು ಅಂದ್ರೆ ಇಂತಾ ಚಿಕ್ಪುಟ್ ಇಸ್ಯಾನೆಲ್ಲಾ ನಂತಾವ ಕೊರೀತಾ ಇರ್ಬಾರ್ದು ನಾ ನೋಡು ಹೇಂಗಿದ್ದೆ ಈಗೊಂದಾರ್ತಿಂಗ್ಳು ಅಲ್ಲೀ ಇಲ್ಲೀ ಒಸಿ ಅವ್ರಿವ್ರ ಜೊತೆ ಸಲ್ಪ ಓಡಾಡ್ದೆ ನೋಡು ಹೆಂಗಿವ್ನಿ ಈಗ....ನೀನು ಕಲ್ತ್ಕೊಳಲೇ ಇಲ್ಲಾಂದ್ರೆ ಇಲ್ಲೇ ಕುಂತಿರು ಅವ್ರಿವ್ರ ತಾವ ಅರ್ಧ ಬೀಡಿ ಕೇಳ್ಕೋತ "

-------------------

" ಬೆಂಗ್ಳೂರ್ ತುಂಬಾ ಒಂಟೆಗ್ಳು ಬಂದ್ಬುಟ್ಟವಂತೆ "

" ಹಾಂ ಇನ್ನೊಂದ್ ೨೫ ದಿನ ಇರ್ತವೆ ಅಷ್ಟೇಯ ಬ್ರಮ್ಮ ಬರ್ದ್ಬುಟವ್ನೆ ಅವುಗ್ಳ ಹಣೇಬರ ತೀರೋಗದೆ ಗೊತ್ತಿಲ್ದೇ ಬಬಲ್ ಗಮ್ ತಿನ್ನೋ ಹಂಗೆ ಮೂತಿ ತಿರ್ಗಿಸ್ಕೋತ ಅಡ್ಡಾಡ್ತವೆ ಪಾಪ ..... ಹೊಟ್ಟೆಗೂ ಸರಿ ಐತೋ ಇಲ್ವೋ "

-------------------

" ಅದೇನೋ ೬೪ನೇ ಸ್ವಾತಂತ್ರ ಅಂದ್ರು ಟೀವಿನಾಗೆ ? "

" ಅಷ್ಟೂ ಗೊತ್ತಾಯಕಿಲ್ವೇನೋ ನಿಂಗೇ ಚಮ್ಚಾ ತಗಂಡು ತಿನ್ನಸ್ಬೇಕು ಆದ್ರೆ ಚಮಚಾಗಿರಿ ಮಾತ್ರ ಮಾಡಕ್ ಬಲ್ನನ್ಮಗ ನೀನು ...ಅದೂ ನಮ್ ಗಾಂಧೀಜಿ ಇದ್ರಲ್ಲಾ ಆವಯ್ಯಾ ಹೋಗಿ ಅಷ್ಟ್ ವರ್ಸ ಆಯ್ತೂ ಅಂತ ಇನ್ನಾರು ತಿಳ್ಕೋ ಬರೇ ಬಿಟ್ಟಿಲ್ ತಿಂದಾಗಲ್ಲ... ನಾನೂ ಒಂದ್ಕಿತಾ ಅದೇನ್ ಮಾಡಾರು ಅಂತ ನೋಡಾಕೋಗಿದ್ನ ಒಂದ್ಕಿತಾ ಹೊರ್ಗಡೀಕೆ ಬಾವುಟ ಹಾರ್ಸ್ಬುಟ್ಟಿದ್ದೆ ಆಮೇಲೆ ಸುರು ಹಚ್ಕಬುಟ್ರು ಕಣ್ಲಾ..ಆವಯ್ಯನ್ ಬಗ್ಗೆ ಮಾತಾಡಿದ್ದೇ ಮಾತಾಡಿದ್ದು .. ಹಂಗಂತೆ ಹಿಂಗಂತೆ...ಆದ್ರೆ ಆವಯ್ಯನ್ ಥರ ಒಬ್ಬ್ರಾದ್ರೂ ಉಪ್ಪಿನ್ ಸತ್ಯಾಗ್ರಹ ಮಾಡದ್ರ ? "

" ಮಾಡ್ದ್ರಲ್ಲಪ್ಪಾ ನೀ ಎಲ್ಲಿದ್ದೆ ’ ಟಾಟಾ ಉಪ್ಪು ದೇಸದ ಉಪ್ಪು ’ ಅಂತ ಟೀವಿನಾಗೆ ಆ ಪಾಟಿ ಒದರ್ತಾಇದ್ರು ಅದೂ ಬಿಟ್ಟು ಮೊನ್ನೆ ನಮ್ ಕೈಯ್ಯೋರು ಕಾಲೆಳ್ಕೋತ ಬಳ್ಳಾರಿ ತಂಕ ಕ್ವಿಂಟಾಲ್ಗಟ್ಲೆ ಡ್ರೈಫ್ರೂಟ್ಸ್ ತಿಂದಿಲ್ವೆ...ನಂಗೇನು ತಿಳ್ಯಾಕಿಲ್ಲ ಅನ್ಬೇಡ ನೀನು ನಾನು ಒಸಿ ತಿಳ್ಕಂಡಿದೀನಿ ನೆಪ್ಪಿರ್ಲಿ "

------------

" ವರಮಾಲಕ್ಸ್ಮಿ ಹಬ್ಬ ಬಂತಲ್ವಾ ? "

" ಹೌದು ಯಾಕಪ್ಪಾ ಹೆಂಗುಸ್ರ ಹಬ್ಬ ನಿಂಗೆ ಯಾದಾರೂ ಮಾಲಕ್ಸ್ಮೀನ ಕಂಡ್ಕೊಂಡಿದೀಯೋ ಏನ್ಕತೆ ? "

" ಅಯ್ಯೋ ನಿನ್ ಮನೆಕಾಯೋಗ ನಾ ಹೇಳಿದ್ದು ಸುಸ್ಮಮ್ಮ ಬರ್ತಾರಲ್ಲ ಬಳ್ಳಾರಿಗೆ ಅಂತಾವ "

" ಬತ್ತಾರೆ ಬತ್ತಾರೆ ಮಕ್ಳವ್ರೆ ನೋಡು ಒಸಿ ನೋಡ್ಕಂಡು ತಲೆಮೇಲೆ ಕೈಯ್ಯಿಟ್ಟು ಆಮೇಲೆ ಮಾಲಕ್ಸ್ಮೀನ ಬಳ್ಳಾರೀಲೇ ಕೂರ್ಸಿ ಹೊಂಟೋಗ್ಬುಡ್ತರೆ ಆಕಡೀಕೆ ನಮ್ ರಾಮ್ಲು ಹೋದ್ರೆ ಅಮ್ಮಂಗೆ ಮನೆ ಖರ್ಚಿಗಿರ್ಲಿ ಅಂತ ಸಲ್ಪ ನಿಪ್ಪಟ್ಟು ಕೋಡ್ಬಳೆ ಜೊತೆ ಮಾಲಕ್ಸ್ಮೀ ಬಾಗಿನನೂ ಕೊಟ್ಬುಟ್ ಬತ್ತಾನೆ "

------------------

" ಇದ್ಯಾಕಣ್ಣಾ ನಿಮ್ಮನೇಲಿ ಬಣ್ ಬಣ್ದ ಬ್ರಸ್ಸು ಹಲ್ಲುಜ್ಜಾಕೆ ಬೋ ಸುಧಾರ್ಸ್ದೋರು ಬೆಳಿಗ್ಗೆಲೇ ಒಂದ್ ಬಣ್ಣದ್ದು ಇನ್ನು ಮದ್ಯಾನ್ಕೆ ಇನ್ನೊಂದ್ ಬಣ್ಣದ್ದು ಸೈಂಕಾಲ ಮತ್ತೊಂದು ಬಣ್ಣದ್ದು "

" ಇದಾ ಇಸ್ಯಾ ನೀ ಬಂದಾವಾಗ್ಲೇ ಅಂದ್ಕೊಂಡೆ ಏನಾರೂ ಮಾಡ್ತೀಯಾ ಅಂತ ಗಬ್ ನನ್ಮಗ್ನೆ ಅದ್ಕೇ ಎಲ್ಲಾ ಬ್ರಸ್ಸು ಬೀಡಿ ವಾಸ್ನೆ ಅಂತವೆ ಹೆಂಗುಸ್ರು "

----------------------

" ಏನ್ಲಾ ಹಿಂಗ್ಯಾಕ್ ನಿನ್ ಮುಖ ನಾಟ್ಕಕ್ಕೆ ಬಣ್ಣ ಹಚ್ದಂಗೈತೆ ? "

" ಅಷ್ಟೂ ಗೊತ್ತಾಯಾಕಿಲ್ವ ನೀವೆಲ್ಲಾ ಹಚ್ಕತೀರಲ್ಲ ಕಿರೀಮು ಅಂಥದ್ದೇ ಒಂದ್ನ ಕಂಡ್ಬುಟ್ನಾ ಬಿಡ್ದೇ ಸಲ್ಪ ಹಚ್ಚ್ಕೊಂಡಿವ್ನಿ ನೋಡು ಸಖತ್ತಾಗೈತಲ್ವಾ ? "

" ಯಾವ ಕಿರೀಮು ತೋರ್ಸು ನೋಡವಾ "

" ಅದು ಕಾಲ್ಗೇಟಲೇ ಅದು ಹಲ್ಲುಜ್ಜೋದು ಕಣ್ಲಾ ಮಕಕ್ಕಲ್ಲಾ ಅದು "


---------------------

" ಬಿಹಾರ್ದಗೆ ರಾಬರಿ ದೇವಿ ......"

" ರಾಬರಿ ಅಲ್ಲಪ್ಪಾ ರಾಬ್ಡಿ ದೇವಿ ಹನ್ನೋ "

" ಹಾಂ ರಾಬ್ಡಿ ದೆವೀನೂ ಆವಯ್ಯ ಮೇವುತಿಂದು ಕಿವೀಲಿ ಹುಲ್ ಬೆಳ್ಸವ್ನಲ್ಲಾ ಲಾಲೂ ಅವ್ನೂನೂ ಎಲ್ದೂ ಜನ ರಾಸ್ಥ್ರು ಗೀತೆ ಹಾಡುವಾಗ ಕುಂತೇ ಇದ್ರಂತೆ ? "

" ಗಣಿಯಂತೂ ಇಲ್ಲಾ ಅಲ್ಲಿ ಅದಕ್ಕೇ ಧಣಿಗಾರ್ಕೆ ತೋರ್ಸುವಾ ಅಂತ ಕುಂತಿದ್ರಂತೆ ಏನಾಯ್ತಪ್ಪ ಕುಂತ್ಕಂಡ್ರೇನು ಮಲೀಕಂಡ್ರೇನು ನಿಂಗೇನ್ ತೊಂದ್ರೆ ಬಿಡು "

----------------------

" ಇನ್ನೇನ್ಲಾ ಇಸ್ಯಾ ? "

" ಏನಿಲ್ಲಾ ಕಣಪ್ಪಾ ಎಲ್ಡೆಲ್ಡ್ ದಿನಕ್ಕೂ ನೀನು ಹಿಂಗೇ ಅಲೀತಾ ಬಾ ನಾನೂ ಬತ್ತೀನಿ ಅದೂ ಇದೂ ಅಂತ ಮಾತಾಡ್ಬುಟ್ಟು ಹಂಗೇ ಸಲ್ಪ ಸಂಕ್ರಣ್ಣನ್ ತಾವ ಸಲ್ಪ ಇಸ್ಗಂಡು ಒಳೀಕ್ಬಿಟ್ಟು ಹೊಂಟೋಗ್ವ "

" ಅಂದಂಗೆ ಮರ್ತೇ ಬಿಟ್ಟೆ ಕಣಪ್ಪಾ ನಮ್ ಹೆಮ್ಮೆಲ್ಲೇ ಬರಹೇಳವ್ರೆ ಬಾವುಟಹಾರ್ಸಕೆ, ಬಾವುಟ ಹಾರ್ಸೂತ್ಲೂವೆ ನಾವೆಲ್ಲಾ ಅಲ್ಲೇ ಪಕ್ಕಕ್ಕೆ ನಾವು ಕೂತ್ಗಂಬುದು ಕೊರೀವರ್ ಕೊರ್ಕತರೆ ಅದ್ಯೇನೇನೋ ಒದರ್ಕತರೆ ನಮ್ಗದೆಲ್ಲಾ ಯಾಕ್ಬೇಕಪ್ಪಾ ಹೋದವ್ರ್ ಹೋದ್ರು ಇದ್ದವ್ರು ಸುಮ್ಕಿರೋದು ಬಿಟ್ಟು ಅವ್ರಹಂಗೆ ಇವ್ರ ಹಿಂಗೆ ಅಂತಾನೇ ಇರಾದು ಪ್ರತೀ ಸಲಿ ಅದೇ ಪ್ಲೇಟು ಬದ್ಲಾಯಕೇ ಇಲ್ಲ ಹೋಗ್ಲಿ ಬಿಡು ಆದಾದ್ ಮ್ಯಾಲೆ ಪಾಲ್ಟಿ ಅದೆ ಅಂತ ನಮ್ ಹೆಮ್ಮೆಲ್ಲೆ ಕಣ್ಮಡದವ್ರೆ ....ಹೋಗ್ ಕೂತಿರೋತು ಕೈಗೊಂದ್ ನೂರ್ರುಪಾಯ್ ಮಡೀಕಾ ಅಂತ ಕೊಟ್ಟಾಗ ಇಸ್ಕಳದು ಸಲ್ಪ ತುಂಡ್ ತಿಂದು ಒಂದು ಕ್ವಾರ್ಟ್ರು ಏರಿಸ್ಗೊಂಬುಟ್ರೆ ಎಲ್ಲಾ ಫ್ರೀಡಮ್ಮು "