ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, June 7, 2011

ದುಃಸ್ವಪ್ನವಾಗಿ ಕಾಡಿದ ಮನೆ ’ಪ್ಯಾಕರ್ಸ್ ಆಂಡ್ ಮೂವರ್ಸ್’


ದುಃಸ್ವಪ್ನವಾಗಿ ಕಾಡಿದ ಮನೆಪ್ಯಾಕರ್ಸ್ ಆಂಡ್ ಮೂವರ್ಸ್

ಮನುಷ್ಯನ ಜೀವನಪೂರ್ತಿ ಆತ ಕಲಿಯುವುದಕ್ಕಿದೆ. ಹಿಂದಿನಕಾಲದಲ್ಲಿ ಸ್ವಲ್ಪ ಕಮ್ಮಿ ಇತ್ತೋ ಏನೋ ಈಗಂತೂ ಕ್ಷಣ ಕ್ಷಣವೂ ಕಲಿಯುವುದು ಅನಿವಾರ್ಯವಾಗಿದೆ; ಕಲಿತದ್ದು ಕಮ್ಮಿ ಎಂದುಕೊಂಡು ಮರುಗಬೇಕಾಗಿದೆ. ಯಾವಾಗ ಎಲ್ಲ ಕ್ಷೇತ್ರಗಳಲ್ಲೂ ಕಾಂಚಾಣವೇ ಮುಖ್ಯ ಎಂಬುದು ಹಲವರ ಅನಿಸಿಕೆಯಾಯಿತೋ ಆಗ ಮಾನವೀಯ ಮೌಲ್ಯಗಳು ಕುಸಿದುಹೋಗಿವೆ. ಬದುಕುವ ಹಲವು ರೀತಿಗಳಲ್ಲಿ ಕೆಲವರದು ಬಸಿದುಕೊಂಡು ಬದುಕುವುದು, ಇನ್ನೂ ಕೆಲವರದು ಇಸಿದುಕೊಂಡು ಬದುಕುವುದು, ಮತ್ತೂ ಕೆಲವರದು ಕಸಿದುಕೊಂಡು ಬದುಕುವುದು! ’ನನ್ನದು ನನ್ನದೇ ನಿನ್ನದೂ ನನ್ನದೇಎಂಬ ತತ್ವವನ್ನು ಜನತಾದಳದವರು ಹೇಳಿಕೊಟ್ಟರು. ಆವಾಗಿನಿಂದ ಶುರುವಾದ ತಮ್ಮದೆನ್ನುವ ಪರಿಪಾಟ ಇಂದು ಅತಿರೇಕಕ್ಕೆ ಹೋಗುತ್ತಿದೆ; ಹೋಗಿದೆ. ಭೂಮಿಯ ವ್ಯವಹಾರವಿರಲಿ, ಆಡಳಿತಾತ್ಮಕ ವಿಷಯವಿರಲಿ ಅಲ್ಲೆಲ್ಲಾ ಪರರ ಹಕ್ಕನ್ನು ಕಸಿದು ಎಲ್ಲವೂ ತಮ್ಮದೇ ಎಂಬ ಧೋರ್ಅಣೆಯನ್ನು ಹೊಂದಿ ವಿನಾಕಾರಣ ಹಲವರಿಗೆ ತೊಂದರೆಯಾಗುತ್ತಿದೆ.

ಮಾತಾಡ ಹೊರಟಿದ್ದು ಅತಿ ಚಿಕ್ಕ ವಿಷಯವೇ ಆದರೂ ಇದರ ಅನುಭವ ನಿಮಗೂ ಧಕ್ಕಲಿ ಮೂಲಕ ಎಲ್ಲಾದರೂ ಅಪ್ಪಿತಪ್ಪಿ ನಿಮಗೂ ಆಗಬಹುದಾದ ಇಂತಹ ತೊಂದರೆಗಳು ಬಾಧಿಸದೇ ಇರಲಿ ಎಂಬ ಉದ್ದೇಶದಿಂದ ಹೀಗೆ ಬರೆಯಲು ಹೊರಟಿದ್ದು. ಜೇನು ಹುಳುಗಳು ತಮ್ಮ ಅತಿ ಸಣ್ಣ ಬಾಯಿಯಲ್ಲಿ ಹೀರಿದ ಮಕರಂದವನ್ನು ಗೂಡಿನಲ್ಲಿ ಪೇರಿಸಿ ಪೇರಿಸಿ ಪೇರಿಸಿ ಅಂತೂ ಅದು ಲೀಟರುಗಟ್ಟಲೆಯಾಗುತ್ತದೆ! ಹಾಗೆ ಅವು ಶೇಖರಣೆ ಮಾಡುವುದು ತಮ್ಮ ಮರಿಗಳಿಗಾಗಿ; ಹಾರಲಾಗದ ಅವುಗಳಿಗೂ ಮತ್ತು ಮಕರಂದ ಸಿಗದ ವೇಳೆ ತಮ್ಮೆಲ್ಲರಿಗೂ ಆಹಾರವಾಗಿ ಅದನ್ನು ಬಳಸಲಾಗಿ. ಆದರೆ ಪಾಪಿ ಮನುಷ್ಯನ ಕಣ್ಣಿಗೆ ಬಿದ್ದ ಜೇನುಗೂಡು ಅಮೃತತುಲ್ಯ ಮಕರಂದ ರಹಿತವಾಗಿ ಮತ್ತೆ ಹುಳುಗಳು ತಡಕಾಡುವಂತೇ ಆಗುತ್ತದೆ. ಅದೇ ರೀತಿ ತನ್ನ ಬದುಕಿನ ಮುಂದಿನ ಅಧ್ಯಾಯಕ್ಕಾಗಿ ತನ್ನ ಸುತ್ತ ಗೂಡನ್ನು ಸುತ್ತಿಕೊಳ್ಳುವ ರೇಷ್ಮೆ ಹುಳು ಕಣ್ಣಿಗೆ ಕಂಡಾಗ ಅದನ್ನು ಬಿಸಿನೀರಲ್ಲಿ ಅದ್ದಿ ಸಾಯಿಸಿ ಆಮೇಲೆ ರೇಷ್ಮೆ ದಾರವನ್ನು ಬಿಡಿಸಲಾಗುತ್ತದೆ. ಒಂದೊಂದು ರೇಷ್ಮೆ ಸೀರೆಯ ಹಿಂದೆ, ಬಟ್ಟೆಯ ಹಿಂದೆ ಸಹಸ್ರಾರು ಹುಳಗಳ ಸಾವಿನ ನೋವು ಅಡಗಿರುತ್ತದೆ. ಆದರೂ ಮನುಷ್ಯ ಸಭೆ-ಸಮಾರಂಭಗಳಲ್ಲಿ, ಪೂಜೆ-ಪುನಸ್ಕಾರಗಳಲ್ಲಿ ಬಣ್ಣ ಬಣ್ಣದ ರೇಷ್ಮೆ ಬಟ್ಟೆಗಳನ್ನು ಧರಿಸಿ ತನ್ನ ಅಂದವನ್ನು ಹೆಚ್ಚಿಸಿಕೊಳ್ಳುತ್ತಾನೆ, ಮೆರೆಯುತ್ತಾನೆ. ಕರುವಿನ ಪಾಲಿನ ಹಾಲನ್ನು ತಾನು ಹಿಂಡಿಕೊಂಡು ಕರುವಿಗೆ ಬೇರೇ ಆಹಾರ ನೀಡುತ್ತಾನೆ....ಹೀಗೇ ಎಣಿಸುತ್ತಾ ನಡೆದರೆ ಪ್ರಪಂಚ ಬರೀ ಸ್ವಾರ್ಥದಿಂದ ಕೂಡಿರುತ್ತದೆ. ಯಾರೊಬ್ಬರೂ ಪರರ ನೋವು-ನಲಿವುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಅಲ್ಲವೇ?

ಹೇಗೆ ಜೇನುಹುಳು ಮಕರಂದ ಸಂಗ್ರಹಿಸುತ್ತದೋ ಹೇಗೆ ಗೆದ್ದಲು ಮಣ್ಣಿನ ಕಣಗಳನ್ನು ಪೇರಿಸಿ ಹುತ್ತಕಟ್ಟುತ್ತದೋ ಹಾಗೆಯೇ ನಾವು ಹಲವರು ನಮ್ಮ ಅನುಕೂಲಕ್ಕಾಗಿ ಮನೆಯೊಂದನ್ನು ಕಟ್ಟಿಯೋ ಬಾಡಿಗೆ ಪಡೆದೋ ವಾಸಿಸುತ್ತೇವೆ. ಕಟ್ಟಿದ ಮನೆಗೋ ಇನ್ನೊಂದು ಬಾಡಿಗೆ ಮನೆಗೋ ನಾವು ಸದ್ಯ ಇರುವ ಮನೆಯಿಂದ ನಮ್ಮ ಸಾಮಾನು ಸರಂಜಾಮುಗಳನ್ನು ಸಾಗಿಸುತ್ತೇವಲ್ಲ. ಅದಕ್ಕೇ ಅಂತಲೇ ಕೆಲವು ಕಂಪನಿಗಳು ಬಾಗಿಲು ತೆರೆದಿವೆ. ನಗರಗಳಲ್ಲಿ ಒಂದು ಪ್ರದೇಶದಿಂದ ಇನ್ನೊಂದಕ್ಕೆ ಅಥವಾ ಒಂದು ನಗರದಿಂದ ಇನ್ನೊಂದಕ್ಕೆ ಸಾಮಾನುಗಳನ್ನು ಸುರಕ್ಷಿತವಾಗಿ ಸಾಗಿಸಿಕೊಡುವುದೇ ಅವರ ಕಸುಬು: ಅದಕ್ಕೆ ಅವರು ಪ್ರತಿಫಲವಾಗಿ ಹಣವನ್ನು ತೆಗೆದುಕೊಳ್ಳುತ್ತಾರೆ. ಆಧುನಿಕ ಜೀವನದಲ್ಲಿ ಸಾಗಾಟ ಇದ್ದಿದ್ದೇ. ಹಾಗೆ ಸಾಗಿಸುವಾಗ ಕೇವಲ ಒಬ್ಬಿಬ್ಬರು ಸಾಕಾಗುವುದಿಲ್ಲ. ದೊಡ್ಡ ವಾಹನದ ಅವಶ್ಯಕತೆ ಕೂಡ ಇರುತ್ತದೆ. ಸಾಮಾನುಗಳು ನಜ್ಜುಗುಜ್ಜಾಗದಂತೇ, ನುಗ್ಗಿಹೋಗದಂತೇ. ಐಬಿಗೆ ಈಡಾಗದಂತೇ ನೋಡಿಕೊಳ್ಳುವುದೇ ಒಂದು ಹರಸಾಹಸ! ಹಾಗೆ ಮಾಡಲು ರಟ್ಟಿನ ಹಲವು ಪೆಟ್ಟಿಗೆಗಳು, ಹಗ್ಗಗಳು, ಗುಳ್ಳೆಪದರದ ಪ್ಲಾಸ್ಟಿಕ್ಗಳು[ಬಬಲ್ ಶೀಟ್], ದಾರಗಳು, ಗಮ್ ಟೇಪ್ಗಳು, ಸುತ್ತಿಗೆ, ಇಕ್ಕಳ, ಅಲೆನ್ ಕೀಸ್, ಸ್ಕ್ರ್ ಡ್ರೈವರ್ಸ್, ನಟ್ ಡ್ರೈವರ್ಸ್, ಸ್ಪಾನರ್ ಮುಂತಾದವುಗಳಿರುವ ಟೂಲ್ ಬಾಕ್ಸ್ ಇವೆಲ್ಲಾ ಬೇಕಾಗುತ್ತವೆ. ಇದೆಲ್ಲವನ್ನೂ ತಿಳಿದು ಸಾಗಾಟವನ್ನೇ ದಂಧೆಯನ್ನಾಗಿ ನಡೆಸುವ ಕಂಪನಿಗಳು ಹುಟ್ಟಿದವು. ಏನಾದರೂ ಸಾಗಿಸಬೇಕೆಂದರೆ ಅಂಥವರನ್ನು ಸಂಪರ್ಕಿಸಿದರೆ ಅವರು ಮಾಡಿಕೊಡುತ್ತಾರೆ.

ಹಲವು ದಿನಗಳ, ತಿಂಗಳುಗಳ, ವರುಷಗಳಕಾಲ ವಾಸಿಸಿ ತನ್ಮೂಲಕ ಭಾವನಾತ್ಮಕವಾಗಿದ್ದೂ ಹೇಳಿಕೊಳ್ಳಲಾಗದ ಅವಿನಾಭಾವ ಸಂಬಂಧವನ್ನು ಹೊಂದಿರುವ ಮನೆಯನ್ನು ಮನಮುರಿದು ನಮ್ಮ-ನಿನ್ನ ಸಂಬಂಧ ಮುಗಿಯಿತು ಎಂದು ಹೇಳಿ ಬೇರೆ ಮನೆಗೆ ತೆರಳಬೇಕಾಗುತ್ತದೆ. ಓಡಾಡಿ, ನಿಂಟು, ಮಲಗಿ, ಕೂತು, ತಿಂಡಿ-ಊಟ-ವಿಶ್ರಾಂತಿ ಮಾಡಿ ಕಳೆದ ಹಲವು ಅಮೂಲ್ಯ ಗಳಿಗೆಗಳ ಸಾಕ್ಷೀಭೂತವಾದ ಮನೆಯನ್ನು ನಮ್ಮದಲ್ಲದ ಕಾರಣಕ್ಕೆ ಬಿಟ್ಟು ಹೊರಡುವುದು ಅನಿವಾರ್ಯ-ಸಹಜ. ನಮ್ಮ ನಲಿವಿನ ಕ್ಷಣಗಳಲ್ಲಿ ಅಲ್ಲಿನ ಗೋಡೆಗಳು ನಕ್ಕಿವೆ, ನಮ್ಮ ನೋವಿನ ಚಣಗಳಲ್ಲಿ ಅವು ಅತ್ತಿವೆ, ನಮ್ಮ ಅನುವು-ಆಪತ್ತುಗಳಲ್ಲಿ ನಮಗೆ ಕಾಣದ ಯಾವುದೋ ರೀತಿಯಲ್ಲಿ ಸಾಂತ್ವನ ನೀಡಿವೆ! ಇಷ್ಟೇ ಅಲ್ಲ: ಕತ್ತಲಲ್ಲೇ ನಾವು ನಡೆದುಹೋದರೂ ಮನೆಯಲ್ಲಿ ಎಲ್ಲೆಲ್ಲಿ ಏನೇನಿದೆ, ಎಷ್ಟು ದೂರದಲ್ಲಿದೆ ಇವುಗಳೆಲ್ಲಾ ನಮಗೆ ಮನದಲ್ಲಿ ಅಚ್ಚೊತ್ತುಬಿಟ್ಟಿರುತ್ತದೆ. ನಾಳೆಯೇ ಮನೆಯನ್ನು ಬಿಟ್ಟು ಹೊರಡುವವರಿದ್ದರೂ ಇಂದು ರಾತ್ರಿ ಕೂಡ ಮನೆಯ ಒಂದು ಸಂಪರ್ಕ ಕಡಿದುಹೋಗುವುದನ್ನು ನಾವು ಇಷ್ಟಪಡುವವರಲ್ಲ! ಮನೆ ಬಹಳ ಆಧುನಿಕವಲ್ಲದಿರಬಹುದು, ಇಕ್ಕಟ್ಟಾಗಿರಬಹುದು ಅಥವಾ ದೊಡ್ಡದಾಗಿರಬಹುದು, ಅಂದವಾಗಿರಬಹುದು ಅಥವಾ ಆದಿಮಾನವನ ಚಿತ್ರಕಲಾಶಾಲೆಯಂತೇ ಇರಬಹುದು --ಆದರೂ ಮನೆಯನ್ನು ನಾವು ತುಚ್ಛೀಕರಿಸುವುದಿಲ್ಲ: ಅದು ನಮ್ಮನೆ!

ದಾಸರು ಹೇಳುತ್ತಾರೆ: ಅಲ್ಲಿರುವುದು ನಮ್ಮನೆ ಇಲ್ಲಿರುವುದು ಸುಮ್ಮನೆ. ಆದರೆ ಸುಮ್ಮನೇ ಇರಲೆಂದಾದರೂ ಉಳಿದ ಮನೆಯಲ್ಲಿ, ಮನೆಯ ವ್ಯವಸ್ಥೆಯಲ್ಲಿ ಒಳಹೊಕ್ಕು ನಮ್ಮ ಮನಸ್ಸು ಮನೆಗೆ ಒಗ್ಗಿಕೊಂಡಿರುತ್ತದೆ. ತಾಯಿ ಸುಂದರವಾಗಿರದಿದ್ದರೂ ತಾಯಿಯೇ ಅಲ್ಲವೇ ? ಹಾಗೇ ಸುಮ್ಮನೆಹೇಗೂ ಇರಲಿ ಅಲ್ಲಿ ಉಳಿದಾಗ ನಿತ್ಯವೂ ಅದೂ ಇದೂ ಅಂತ ಏನಾದರೊಂದನ್ನು ತಂದು ಜೋಡಿಸುತ್ತಲೇ ಇರುತ್ತೇವೆ. ಅಕ್ಕ ಫಾರಿನ್ ನಿಂದ ತಂದ ಸೆಂಟು, ಗೆಳೆಯ ದಿಲ್ಲಿಯಿಂದ ತಂದ ಜರ್ಕಿನ್ನು, ಇನ್ನೊಬ್ಬ ಗೆಳೆಯ ದುಬೈಯಿಂದ ತಂದ ಶರ್ಟ್ ಫೀಸು, ಅಂಚಿಮನೆ ಸುಬ್ರಾಯ ಕಾಶಿಯಿಂದ ತಂದ ಗಂಗೆಯ ಸಣ್ಣ ಕರಂಡಕ, ಶೋಲೆ ಸಿನಿಮಾ ಸೀಡಿ ಹೀಗೇ ಅತಿ ಚಿಕ್ಕ ವಸ್ತುಗಳಿಂದ ಹಿಡಿದು ವಾಶಿಂಗ್ ಮಶಿನ್ನು, ಫ್ರಿಜ್ಜು, ದಿವಾನ್ ಕಾಟು ಹೀಗೆ ಪಟ್ಟಿ ಬಹಳ ದೊಡ್ಡ! ಇಲ್ಲಿರುವ ಪ್ರತಿಯೊಂದೂ ವಸ್ತುಗಳ/ಪರಿಕರಗಳ ಹಿಂದೆ ನಮ್ಮ ಶ್ರಮ ಅಡಗಿರುತ್ತದೆ. ಅವುಗಳಲ್ಲಿ ಕೆಲವು ಸಿಂಪ್ಲೀ ನಥಿಂಗ್ ಅಂತ ಅನಿಸಿದರೂ ಅವುಗಳನ್ನು ಬಿಡಲು ನಮ್ಮ ಮನಸ್ಸು ತಯಾರಾಗುವುದೇ ಇಲ್ಲ. ಎಲ್ಲವೂ ಇರಲಿ ಇರಲಿ ಆಮೇಲೇ ಏನೋ ಕೆಲಸಕ್ಕೆ ಬರಬಹುದು; ಮುಂದೆಲ್ಲೋ ಯಾವುದಕ್ಕೋ ಉಪಕಾರವಾಗಬಹುದು ಎಂಬ ಒತ್ತಾಸೆಯಿಂದ ರಟ್ಟಿನ ಹಳೆಯ ಪೆಟ್ಟಿಗೆಗಳು, ಬಳಸದೇ ಬಿಟ್ಟ ಬಾಚಣಿಗೆಗಳು, ಹಳೆಯ ಕರ್ಲಾನ್ ದಿಂಬುಗಳು, ಅಲ್ಲಿಲ್ಲಿ ಕಿತ್ತುಹೋದ ಬೆತ್ತದ ಖುರ್ಚಿಗಳು, ಓಬೀರಾಯನ ಕಾಲದ ಎಕ್ಸ್-‍ಟೆನ್ಶನ್ ಬಾಕ್ಸುಗಳು, ಫೂಟ್ಪಾತ್ನಲ್ಲಿ ತಂದ ಹಳೆಯ ಇಂಗ್ಲೀಷ್ ಕಾದಂಬರಿಗಳು, ಬಿವಿ ಕಾರಂತರ ಬಗ್ಗೆ ಯಾರೋ ಬರೆದ ಲೇಖನಗಳಿರುವ ಹಳೆಯ ಪುಟಗಳು, ೧೯೯೮ರಲ್ಲಿ ಯಾಕೋ ಬೇಕು ಎನಿಸಿ ಎತ್ತಿಟ್ಟಿದ್ದ ನಾಲ್ಕುತಿಂಗಳಸುಧಾಪತ್ರಿಕೆ, ಏನೂ ಅಲ್ಲದ ನಮಗೆ ನೀವೂ ಗಣ್ಯರೆಂದು ಅರ್ಪಿಸಿದ್ದ ಪರಿಮಳ ರಹಿತಗಂಧದ ಹಾರಗಳು ಎಲ್ಲವೂ ಬೇಕು ಎಲ್ಲವೂ ಬೇಕು! ಅವುಗಳನ್ನು ಬಳಸದೇ ನೋಡದೇ ವರ್ಷಗಳೇ ಸಂದರೂ ಪರವಾಗಿಲ್ಲ ಅಂತೂ ಅವು ಬೇಕು. ಇವೆಲ್ಲವುಗಳ ಜೊತೆಗೆ ಇರುವ ಸಂಬಂಧವೇ ಅಂಥದ್ದು!

ಮೊನ್ನೆ ನನ್ನ ಮನೆಯನ್ನು ಬದಲಾಯಿಸುತ್ತಿದ್ದೆ. ಹಾಗೆ ಬದಲಾಯಿಸುವಾಗ ಹೊಸ ಬಾಡಿಗೆ ಮನೆ ಈಗಿರುವ ಮನೆಗಿಂತ ತುಸು ದೂರವೇ ಇದ್ದರೂ ತಲೆಯಲ್ಲಿ ಹೊತ್ತೋ ಕೈಯ್ಯಲ್ಲಿ ಎತ್ತೋ ಸಾಗಿಸಿ ಮುಗಿಸಲಾಗದಷ್ಟು ಸಾಮಾನುಗಳಿರುವುದರಿಂದಪ್ಯಾಕರ್ಸ್ ಆಂಡ್ ಮೂವರ್ಸ್ತಿಳಿದುಕೊಳ್ಳಲು ಜಸ್ಟ್ ಡಯಲ್ಗೆ ಕರೆಮಾಡಿದೆ. ಅವರು ಕಳುಹಿಸಿದ ಸಂದೇಶದಲ್ಲಿ - ಕಂಪನಿಗಳ ಹೆಸರುಗಳಿದ್ದವು. ಜಸ್ಟ್ ಡಯಲ್ನಲ್ಲಿ ಹೆಸರು ನೋಂದಾಯಿಸಿದ ಕೆಲವುಪ್ಯಾಕರ್ಸ್ ಆಂಡ್ ಮೂವರ್ಸ್ಗಳಿಗೆ ಸಂದೇಶಗಳು ಕಳುಹಿಸಲ್ಪಟ್ಟು ಅವರು ನೇರವಾಗಿ ನನ್ನ ಜಂಗಮವಾಣಿಗೆ ಕರೆಮಾಡಲು ಆರಂಭಿಸಿದರು. ಅವರಲ್ಲಿ ಒಂದೆರಡು ಕಂಪನಿಗಳು ತುಂಬಾ ಆಸಕ್ತಿ ತೋರಿಸಿದವು. ಅವುಗಳ ಪೈಕಿ ಒಂದುಕಂಪನಿ ಮಾರ್ಕೆಟಿಂಗ್ ಪ್ರತಿನಿಧಿ ನಮ್ಮನೆಗೆ ಬಂದು ಇರುವ ಒಟ್ಟೂ ಸಾಮಾನುಗಳಿಗೆ ಕಣ್ಣು ಹೊಡೆದು ಆಮೇಲೆ ನನ್ನೊಡನೆ ಮಾತನಾಡಿ ಒಂದುರೀಸನೇಬಲ್ರಕಮಿಗೆ ಬಾಯಲ್ಲಿ ಒಪ್ಪಂದ ಮಾಡಿಕೊಂಡ. ವಿಸಿಟಿಂಗ್ ಕಾರ್ಡ್ ಕೇಳಿದಾಗ ತಾನು ಎಲ್ಲೋ ಇದ್ದೆ, ನಿಮಗೆ ಬೇಕಿ ಅಂತ ಕರೆಬಂದ ಕೂಡಲೇ ಬಂದುಬಿಟ್ಟೆ, ಅದಕ್ಕಾಗಿ ಕಾರ್ಡ್ ತನ್ನ ಜೇಬಲ್ಲಿಲ್ಲ, ಆಮೇಲೆ ಕಳಿಸುತ್ತೇನೆ ಎಂದ ಮತ್ತು ನೀವು ಮನೆ ಬದಲಾಯಿಸುವ ಮುನ್ನಾದಿನ ಕರೆನೀಡುವುದಾಗಿ ಹೇಳಿದ. ನಾನು ಎಷ್ಟು ಕಾಳಜಿಯಿಂದ ಮಾಡುತ್ತಾರಪ್ಪಾ ಎಂದು ಖುಷಿಯಿಂದಿದ್ದೆ. ವಿಸಿಟಿಂಗ್ ಕಾರ್ಡ್ ಕಳಿಸಲಿಲ್ಲ. ಮನೆ ಬದಲಾಯಿಸುವ ದಿನ ಬಂದೇ ಹೋಯ್ತು. ಮುನ್ನಾದಿನ ರಾತ್ರಿ ಆತ ಹೇಳಿದಹಾಗೇ ಕರೆಬರಲಿಲ್ಲ; ಕೊನೆಗೆ ನಾನೇ ಅವರು ಬರುತ್ತಾರಾ ಇಲ್ಲವಾ ತಿಳಿದುಕೊಳ್ಳುವಾ ಅಂತ ಆತ ನೀಡಿದ್ದ ಜಂಗಮವಾಣಿಗೆ ಕರೆಮಾಡಿದೆ. ಕರೆಯನ್ನು ಸ್ವೀಕರಿಸಲಿಲ್ಲ. ಜಸ್ಟ್ ಡಯಲ್ನವರು ನೀಡಿದ್ದ ಅವರ ಪ್ರಥಮ ಮೊಬೈಲ್ ನಂಬರಿಗೆ ಕರೆಮಾಡಿದಾಗ ಅಲ್ಲಿರುವ ವ್ಯಕ್ತಿರೋಹಿತ್ಎಂಬ ವ್ಯಕ್ತಿ ಬಂದಮೇಲೆ ತಾನು ತಿಳಿಸುವುದಾಗಿ ಹೇಳಿದ. ಆಮೇಲೆ ಅರ್ಧಘಂಟೆ ಬಿಟ್ಟು ನನಗೊಮ್ಮೆ ನನ್ನನ್ನು ಮೊದಲು ಸಂಪರ್ಕಿಸಿದ್ದರೋಹಿತ್ಕರೆಮಾಡಿದ, " ಬೆಳಿಗ್ಗೆ :೩೦ಕ್ಕೆ ನಿಮ್ಮನೆ ಮುಂದೆ ನಮ್ಗಾಡಿ ಬರುತ್ತೆ " ಎಂದ.

ಮನೆ ಬದಲಾಯಿಸುವಾಗ ಸಹಜವಾಗಿ ಇರುವ ಪ್ಯಾಕಿಂಗ್ ತಲೆನೋವು ನಮ್ಮನ್ನು ರಾತ್ರಿ ಯೋಚನೆಗೀಡುಮಾಡಿತ್ತು. ತೀರಾ ವೈಯ್ಯಕ್ತಿಕ ಎನ್ನುವ ಕೆಲವು ಒಡವೆ-ಒಸ್ತುಗಳನ್ನು ನಾವೇ ಪ್ಯಾಕ್ ಮಾಡಿಕೊಂಡು ಗುರುತಿಸಿಕೊಂಡೆವು. ರಾತ್ರಿ ಕಳೆದು ಬೆಳಗಿನ :೩೦ ಗಂಟೆ ಸಮೀಪಿಸಿತು. ಅವರ ಗಾಡಿ ಬರಲಿಲ್ಲ. ಇನ್ನೇನು ನಾನು ವಿಚಾರಿಸಬೇಕು ಎನ್ನುವ ಸಮಯದಲ್ಲಿ :೦೦ ಘಂಟೆಗೆ ಒಬ್ಬಾತ ಕರೆಮಾಡಿ " ನಾವು ಇಲ್ಲಿದೀವಿ ದಾರಿ ತಿಳಿಸಿ" ಎಂದ. ದಾರಿ ಹೇಳಿದ ಕಾಲುಘಂಟೆಗೆ ಗುಜರಿಗೆ ಹಾಕುವ ಥರದ ಮೆಟಡಾರ್ ಒಂದು ಬಂದುನಿಂತಿತು. ಅದರಿಂದ ನಾಲ್ವರು ಹುಡುಗರು ದಬದಬ ಇಳಿದು ನಮ್ಮನೆಗೆ ಬಂದರು. ’ರೋಹಿತ್ಕಳ್ಸಿದಾರೆ ಎನ್ನುತ್ತಾ ಕೈಯ್ಯಲ್ಲಿ ಒಂದೆರಡು ರಟ್ಟಿನ ಬಾಕ್ಸ್ ಗಳನ್ನೂ ಒಂದು ಬಾಂಬ್ ಟೇಪನ್ನೂ ಹಿಡಿದು ಬಂದರು. ನಾನು ಕೆಲಸಗಾರರ ಮುಖ್ಯಸ್ಥನೆನಿಸುವ " ಮೇಸ್ತ್ರಿ ಯಾರು? " ಎಂದು ಕೇಳಿದೆ. ಅವರಿಗೆ ಅದು ಗೊತ್ತೇ ಇರಲಿಲ್ಲ. "ಟೂಲ್ ಬಾಕ್ಸ್ ಇದ್ಯಾ ?" ಎಂದೆ, " ಇದೆ ಸರ್ ಏನ್ ಬೇಕ್ ಹೇಳಿ ? " ಉತ್ತರಬಂತೇ ವಿನಹ ಅದು ಕಾಣಿಸಲಿಲ್ಲ! ಬಂದವರೇ "ನಮಗೆ ಇವತ್ತು ಆಮೇಲೆ ಇನ್ನೊಂದು ಕಡೆ ಶಿಪ್ಟಿಂಗ್ ಇದೆ ಸಾರ್ ಜಲ್ದಿ ಮುಗಿಸಿ ಹೋಗ್ಬೇಕು " ಎನ್ನುತ್ತಾ ಬಡಬಡ ಸಾಮಾನುಗಳನ್ನು ತಂದಿರುವ ನಾಲ್ಕಾರೇ ಬಾಕ್ಸ್ಗಳಲ್ಲಿ ತುಂಬಿಸತೊಡಗಿದರು. ನಾನು " ಯಾಕೆ ಹಳೇ ಗುಜರೀಗಾಡಿ ಕಳ್ಸಿದಾರಲ್ಲಾ ಕ್ಲೋಸ್ಡ್ ಕಂಟೇನರ್ ಇಲ್ವಾ ? " ಎಂದು ಕೇಳಿದೆ. " ನಮ್ಗಾಡಿ ಕೆಟ್ಟೋಗಿದೆ ಸಾರ್ ನಿಮ್ಗೆ ತೊಂದ್ರೆ ಆಗ್ಬಾರ್ದು ಅದ್ರ ಬದ್ಲೀ ಗಾಡಿ ಕಳ್ಸವರೆ " ಬಂತು ಉತ್ತರ. ಬಂದವರೆಲ್ಲಾ ಅಹೋರಾತ್ರಿ ಎಣ್ಣೆಯ ಉಪಾಸಕರು ! ಮೈತುಂಬಾ ವಾಸನೆ ಹೊಡೆಯುತ್ತಿದ್ದರು. ಅವರು ಬಂದ ಕ್ಷಣದಲ್ಲೇ ನಮ್ಮನೆಎಣ್ಣೆಯ ಬಾರ್ಆದಂತೇ ಭಾಸವಾಗುತ್ತಿತ್ತು. ಯಾವುದೇ ಬಬಲ್ ರೋಲ್, ಪಕ್ಕಾ ಪ್ಯಾಕಿಂಗ್ ಮಟೀರಿಯಲ್, ಟೂಲ್ ಬಾಕ್ಸ್, ಹಗ್ಗ ಯಾವುದೂ ಇರಲಿಲ್ಲ!

ನಮಗೆ ಅನಿವಾರ್ಯತೆ ಇತ್ತು. ನಾವು ದಿನ ಕಚೇರಿಗೆ ರಜವಿರುವುದರಿಂದ ಶಿಫ್ಟ್ ಕೆಲಸ ಮುಗಿಸಲೇ ಬೇಕಿತ್ತು. ಯಾಕೋ ಬಂದ ಗಾಡಿಯನ್ನೇ ದುರ್ಬಲ ಮನಸ್ಸು "ಆಯ್ತು ಹೋಗಲಿ" ಎಂದು ಒಪ್ಪಿಬಿಟ್ಟಿತ್ತು. ಬಾಕ್ಸ್ ಗಳು ಸಾಲದಾಗ ನಮ್ಮಲ್ಲೇ ಇರುವ ಕೆಲವು ಬಾಕ್ಸ್ ಗಳಿಗೆ ತುಂಬಿಸಿದರು. ಟೇಪ್ ಕಾಲಿಯಾದಾಗ ಬಾಕ್ಸ್ ಗಳು ಮುಚ್ಚದೇ ಹಾಗೇ ತೆರೆಯಲ್ಪಟ್ಟಿದ್ದವು. ಅಂತೂ ಧಾವಂತದಲ್ಲಿ ಗಾಡಿಗೆ ಏರಿಸಲು ಆರಂಬಿಸಿಯೇ ಬಿಟ್ಟರು. ಕೇವಲ ನಾಲ್ಕಾರು ಮುಖ್ಯರಸ್ತೆಗಳ ಕಡೆಗೆ ಇನ್ನೊಂದು ಮನೆಗೆ ನಾವು ಹೋಗುತ್ತಿರುವುದರಿಂದ ನಂಗೂ ತೀರಾ ಅದೆಲ್ಲಾ ಅವಶ್ಯಕವೇನೋ ಅನಿಸಲಿಲ್ಲ. ನನ್ನ ಔದಾರ್ಯಬಂದವರಿಗೆ ಬಹಳ ಅನುಕೂಲಕರವಾಗಿತ್ತು. ಗಾಡಿಯಲ್ಲಿ ಮುಂದೆ ನನ್ನನ್ನು ಕೂರಿಸಿಕೊಂಡು ಹಿಂದೆ ಹುಡುಗರು ಹತ್ತಿಕೊಂಡು ಹೊರಟರು, ಸೇರಬೇಕಾದ ಮನೆ ತಲುಪಿ ಎಲ್ಲವನ್ನೂ ಮತ್ತೆ ಅವಸರದಿಂದ ಇಳಿಸತೊಡಗಿದರು. ಬಾಕ್ಸ್ ‍ಗಳಿಗೆ ಹೆಸರು, ಸಂಖ್ಯೆ ಏನೊಂದೂ ಇರಲಿಲ್ಲ. ಕೆಲವು ವಸ್ತುಗಳನ್ನು ಪ್ಲಾಸ್ಟಿಕ್ ಕ್ಯಾರೀ ಬ್ಯಾಗ್ಗಳಲ್ಲೇ ಹಾಗೇ ತುಂಬಿಸಿ ತಂದಿದ್ದರು. ಒಟ್ಟೂ ಟ್ರಿಪ್ ಮಾಡಿದರು. ಅಲ್ಮೆರಾ ಇಳಿಸುವಾಗ ಅಸಹ್ಯಕರವಾಗಿ ಕಾಣುವಸ್ಟು ಅದನ್ನು ಸಂಪೂರ್ಣ ಡ್ಯಾಮೇಜು ಮಾಡಿದರು. ಒಂದು ಬೆಲ್ಜಿಯಮ್ ಗ್ಲಾಸಿನ ಕನ್ನಡಿ ಒಡೆದು ಹಾಕಿದರು. ನಾಲ್ಕಾರು ಹೂವಿನಕುಂಡಗಳ ಕಥೆ ಮುಗಿದುಹೋಗಿತ್ತು. ಟಿವಿ ವಾಲ್ ಕ್ಯಾಬಿನೆಟ್ ಅಲ್ಲಲ್ಲಿ ಕಣ್ಣೀರಿಡುತ್ತಿತ್ತು! ಫ್ರಿಜ್ ಮತ್ತು ವಾಶಿಂಗ್ ಮಶಿನ್ ಮಾತ್ರ ನನ್ನ ಅತೀ ಕಾಳಜಿ ಇದ್ದಿದ್ದರಿಂದ ತೀರಾ ಏನೂ ಡ್ಯಾಮೇಜಾಗದಂತೇ ತಂದರು. ಮಂಚಗಳು ಮೈಕೈ ತರಚಿಕೊಂಡಿದ್ದವು. ಅಂತೂ ನಾಜೂಕಿನ ಹಲವು ವಸ್ತುಗಳು ಅನಾಯಾಸವಾಗಿ ತಮ್ಮ ಮೂಲರೂಪವನ್ನು ಕಳೆದುಕೊಂಡವು!

ಶಿಫ್ಟಿಂಗ್ ಮುಗಿಸಿದಾಗ ಮಧ್ಯಾಹ್ನ ಘಂಟೆಯಾಗಿತ್ತು, ನಮಗೆ ಬೆಳಿಗ್ಗೆಯಿಂದಲೇ ತಿಂಡಿ ಸಹಾ ಮಾಡಲಾಗಿರಲಿಲ್ಲ. ಹೊಟ್ಟೆಯಲ್ಲಿರೋ ಹುಳಗಳೆಲ್ಲಾ ಸತ್ತು ಮಲಗಿದ್ದವು! ಹಸಿವು ತಾಂಡವವಾಡಲು ತೊಡಗಿತ್ತು. ಸಾಮಾನುಗಳನ್ನು ಪುನಃ ಜೋಡಿಸಿಕೊಡುವ ಮಾತಿತ್ತು. ಹಾಗೆ ಅದನ್ನು ಕೇಳಿದಾಗ ತೀರಾ ಕುಡಿದಿರದ ಒಬ್ಬ ಹುಡುಗನನ್ನುನಮ್ಮ ಸಹಾಯಕ್ಕೆಅಂತ ನೇಮಿಸಿ ಮಿಕ್ಕವರು ತಾವು ತಿಂಡಿ ತಿಂದು ಬರುತ್ತೇವೆ ಎಂದು ಹೊರಟುಹೋದರು. ನಮ್ಜೊತೆ ಇರುವ ಹುಡುಗ ಅದೂ ಇದೂ ಮಾಡುತ್ತಾ ಅವರೇ ತಂದಿದ್ದ ಕೆಲವೇ ಬಾಕ್ಸ್ ಗಳು ತುರ್ತಾಗಿ ಬೇಕಾಗುತ್ತವೆ ಎನ್ನುತ್ತಾ ಅವುಗಳನ್ನು ಮೊದಲು ಖಾಲೀ ಮಾಡಹತ್ತಿದ. ಹೊಟ್ಟೆಗೆ ಒಂದಷ್ಟು ನೀರು ತುಂಬಿಸಿಕೊಂಡು ನಾವೇ ಎಲ್ಲವನ್ನೂ ಅಲ್ಲಿಲ್ಲಿ ಎತ್ತಿಟ್ಟುಕೊಳ್ಳುತ್ತಿದ್ದೆವು. ತಿಂಡಿತಿಂದು ಮರಳಿ ಬಂದ ಹುಡುಗರಲ್ಲಿ ಡ್ರೈವರ್ ಆಗಿರುವಾತ " ಸಾರ್ ಎಲ್ಲಾ ಮುಗಿತ್ಲೂವೆ ಇವನತ್ರ ಕಾಸು ಕೊಟ್ಬಿಡಿ ಅಂತೇಳವ್ರೆ " ಅಂದ. ನಾನು ಒಡೆದುಹೋದ ನಜ್ಜುಗುಜ್ಜಾದ ವಸ್ತುಗಳ-ಪರಿಕರಗಳ ಬಗ್ಗೆ ಕೇಳಿದಾಗ " ನೋಡೀ ಸಾರ್ ನಾವೂ ಕಷ್ಟಪಟ್ಟು ನಿಯತ್ತಿನಿಂದ ಎಲ್ಲಾ ಸಾಗ್ಸಿದೀವಿ ನೀವೆಲ್ಲಾನಾ ಕೇಳ್ಕೊಳಿ ಹಾಗೆ ಒಂದ್ಸ್ವಲ್ಪ ಆಗೇ ಆಗುತ್ತೆ ಸಾರ್ " ಅಂದ. ಜಗಳಮಾಡಿ ಗೊತ್ತಿರದ ನಾವು ಸುಮಾರಾಗಿ ಎಲ್ಲಾ ಸಾಮಾನುಗಳು ಬಂದಿವೆ ಎಂಬುದನ್ನು ಮನದಟ್ಟುಮಾಡಿಕೊಂಡು ಕಾಸುಕೊಟ್ಟು ಅವರನ್ನು ಕಳಿಸಿಬಿಟ್ಟೆವು. ಹೋಗುವಾಗ ನಿಯತ್ತಿನ ಜನ " ನೋಡ್ಕೊಳಿ ಸಾರ್ ಗಾಡಿಯಲ್ಲಿ ಏನೂ ಇಲ್ಲಾ " ಎಂದು ಕರೆದು ತೋರಿಸಿ ತಮ್ಮನಿಯತ್ತನ್ನು ಪ್ರದರ್ಶಿಸಿದರು! ಇನ್ನಿಲ್ಲದ ತಲೆನೋವಿಗೂ ವಾಕರಿಗೆಗೂ ಕಾರಣವಾದಎಣ್ಣೆಯ ಉಪಾಸಕರುಹೋದರೆ ಸಾಕಾಗಿತ್ತು.

ಸುಮಾರು ಸಂಜೆ :೩೦ ರವರೆಗೆ ಎಲ್ಲವನ್ನೂ ಜೋಡಿಸಿ ಮೊದಲೇ ಕರೆದಿದ್ದ ಹತ್ತಿರದ ಬಂಧುವೊಬ್ಬರ ಮನೆಗೆ ಊಟಕ್ಕೆ ಹೋದೆವು. ಊಟ ಮುಗಿಸಿ ೩೦ ನಿಮಿಷಗಳಲ್ಲಿ ಮರಳಿದೆವು. ಮತ್ತೆ ಜೋಡಿಸುವ ಕೆಲಸ. ನಡುವೆ ನಮ್ಮ ಹೊಸಮನೆಯ ಪಕ್ಕದ ಮನೆಯವರ ಪರಿಚಯವಾಯಿತು. ಅವರು ಮಾತನಾಡುತ್ತಾ "ನಿಮ್ಮ ಸಾಮಾನುಗಳನ್ನು ಶಿಫ್ಟ್ ಮಾಡುವ ಜನ ಮೇಲಿನಿಂದ ಏನನ್ನೋ ಒಂದೆರಡು ಕವರ್‍‍ಗಳನ್ನು ನಮ್ಮನೆ ಹಾಗೂ ಮನೆ ನಡುವೆ ಇರುವ ಖಾಲೀ ಸೈಟಿನಲ್ಲಿ ಹಾಕಿದ್ದರು. ಆಮೇಲೆ ಬಂದು ಎತ್ತಿಕೊಂಡು ಹೋದರು. ನಮಗೆ ನಿಮ್ಮ ಪರಿಚಯವಿರಲಿಲ್ಲ. ಆದರೂ ಈಗ ಪರಿಚಯವಾಯ್ತಲ್ಲಾ ಅದಕ್ಕೇ ಹೇಳೋಣಾಂತ ಬಂದೆ" ಎಂದರು. ನಂಗಂತೂ ಸಾಕಾಗಿ ಹೋಗಿತ್ತು. ಜೋಡಿಸುತ್ತಾ ಹೋದ ಹಾಗೇ ಹಲವಾರು ವಸ್ತುಗಳು-ಪರಿಕರಗಳು ನಾಪಾತ್ತೆಯಾಗಿರುವುದು ಕಂಡುಬಂತು. ಅಜಮಾಸು - ಸಾವಿರ ಬೆಲೆಯ ವಸ್ತುಗಳನ್ನು ಕದ್ದುಹೋಗಿದ್ದರು. ಸಂಜೆ ಮರಳಿಕಂಪನಿ ಮೊಬೈಲ್ಗಳಿಗೆ ಕರೆಮಾಡಲು ಆರಂಭಿಸಿದರೆ ಜಸ್ಟ್ ಡಯಲ್ ಕೊಟ್ಟ ಮೊದಲನೇ ಅವರ ನಂಬರು ಕರೆ ಸ್ವೀಕರಿಸಲಿಲ್ಲ. ಎರಡನೇದನ್ನು ಪ್ರಯತ್ನಿಸಲಾಗಿ ಅದೂ ಕೂಡ ಅಷ್ಟೇ. ರಾತ್ರಿ ನಾನು ಆತಂಕದ ನಡುವೆತೀರಾ ಕೋಪಬಂದಿದೆ, ಟಿವಿ೯ ಗೆ ತಿಳಿಸುತ್ತೇನೆಎಂದಿದ್ದೇ ತಡ ರಾತ್ರಿಯಿಂದಲೇರೋಹಿತ್ಎಂಬಾತನ ಮೊಬೈಲು ಮಲಗಿಬಿಟ್ಟಿತ್ತು! ಮಾರನೇದಿನ ೧೨ ಗಂಟೆಯಾದರೂ ಅದಕ್ಕೆ ಎಚ್ಚರವಾಗಲೇ ಇಲ್ಲ. ೫೦-೬೦ ಸರ್ತಿ ಕರೆಮಾಡಿಸಿಕೊಂಡ ಮೊದಲ ನಂಬರು ಒಮ್ಮೆ " ಹಲೋ" ಎಂದಿತು. ಸಮಸ್ಯೆಗಳನ್ನು ಕೇಳಿದ ಆತ ತಾನು ಒಂದು ಘಂಟೆಯಲ್ಲಿ ನೋಡಬರುವುದಾಗಿ ತಿಳಿಸಿದ. ಬಂದೂಬಿಟ್ಟ: ’ತುಂಬಾ ನಿಯತ್ತು’ !

"ರೋಹಿತ್ ಎಲ್ಲಪ್ಪಾ? " ಎಂದಿದ್ದಕ್ಕೆ

" ಅವರ ಬ್ರದರ್ ಆಕ್ಸಿಡೆಂಟ್ ಆಗ್ಬುಟ್ಟು ತೀರ್ಕೊಂಡವ್ರೆ ಸರ್ ಅದ್ಕೇ ಉಡುಪಿಗೆ ಹೋಗವ್ರೆ."

" ಯಾವಾಗ ಬತ್ತಾರಪ್ಪಾ ? ನಾನು ಮಾತಾಡ್ಬೇಕು "

" ಯಾವಾಗ ಬತ್ತಾರೋ ಗೊತ್ತಿಲ್ಲ ಸಾರ್ ಬನ್ನಂತ್ರ ಹೇಳ್ತೀವಿ " -’ಕಂಪನಿಯಿಂದ ಬಂದಡ್ಯಾಮೇಜು ಸರ್ವೇಮಾಡುವವನ ಉತ್ತರ.

ದಿನ ನನಗೆ ಕೂತುಕೊಳ್ಳಲಾಗಲಿಲ್ಲ. ಆಫೀಸಿನ ಕೆಲಸಕ್ಕೆ ಹೋಗಲಾಗಲಿಲ್ಲ. ಬದಲಾಗಿ ಮಧ್ಯಾಹ್ನ ನಾನುನಿಯತ್ತಿನ ಪ್ಯಾಕರ್ಸ್ ಕಂಪನಿಯನ್ನು ಹುಡುಕಿ ಹೊರಟಿದ್ದೆ. ಜಸ್ಟ್ ಡಯಲ್ ಕೊಟ್ಟಿದ್ದ ಅವರ ವಿಳಾಸಕ್ಕೆ ಹೋಗಿ ನೋಡಿದರೆ ಅಲ್ಲಿ ಯಾವ ಕಂಪನಿಯೂ ಇರಲಿಲ್ಲ. ಮತ್ತೆ ಮೊದಲ ಮೊಬೈಲಿಗೆ ಕರೆಮಾಡಿದಾಗ ವ್ಯಕ್ತಿ

" ಯಶವಂತಪುರ ಲಾರಿ ಟರ್ಮಿನಲ್ ಹತ್ತಿರ ಬನ್ನಿ ಸಾರ್ ಅಲ್ಲೈತೆ ತೋರುಸ್ತೀವಿ " ಅಂದ.

ಜೋರಾಗಿ ಮಳೆ ಸುರಿಯುತ್ತಿತ್ತು. ಆದರೂ ಬಿಡಲಿಲ್ಲ. ಹೊರಟುಹೋದೆ. ಅಂತೂ ಅವರಕಂಪನಿ ಆಫೀಸು ನೋಡಿದೆ. ಅದು ಯಾವುದೋ ಬೇರೇ ಒಬ್ಬರ ಲಾಜಿಸ್ಟಿಕ್ ಹೆಸರಿನ ಅಂಗಡಿ. ಅಳತೆ ಅಡಿ ಅಗಲ ಮೂರು ಅಡಿ ಉದ್ದ! ಅದರೊಳಗೆ "ಚಪ್ಪಲಿ ಹಾಕಿಕೊಂಡು ಹೋಗುವ ಹಾಗಿಲ್ಲ"! ಒಳಗೆ ಒಂದು ಮೇಜು ಅದರ ಹಿಂದೆ ಒಂದು ಖುರ್ಚಿ, ಎದುರುಗಡೆ ಬಂದವರಿಗೋ ಇನ್ಯಾರಿಗೋ ಕೂರಲು ಕಿತ್ತುಹೋಗಿರುವ ಎರಡು ಪ್ಲಾಸ್ಟಿಕ್ ಖುರ್ಚಿಗಳು. ಪಕ್ಕದಲ್ಲಿ ನಿನ್ನೆ ನಮ್ಮನೆಗೆ ತಂದಿದ್ದ ಅರ್ಜೆಂಟಾಗಿ ಮರಳಿ ಕೊಂಡೊಯ್ದ ಖಾಲೀ ಬಾಕ್ಸ್ಗಳು! ಮೇಜಿನ ಕಡೆ ಇರುವ ಖುರ್ಚಿಯಲ್ಲಿಕಂಪನಿ ಯಜಮಾನ ರೋಹಿತ್ ಕುಳಿತಿದ್ದ. ನನ್ನನ್ನು ಕಂಡ ಕೂಡಲೇ ಮುಖಸುಟ್ಟುಕೊಂಡ ಬೆಕ್ಕಿನಂತಾದ! ಬಂದು ಅರ್ಧ ಘಂಟೆ ಆಯ್ತು ಅಂದ. ಬಹುಶಃ ಉಡುಪಿಯಿಂದ ಪ್ರತ್ಯೇಕ ಹೆಲಿಕಾಪ್ಟರ್ನಲ್ಲಿ ಬಂದಿರಬೇಕು. ಕೂತೆ, ನನಗಾಗಿರುವ ತೊಂದರೆ ಹೇಳಿ ಸರಿಪಡಿಸುವಂತೇ ಹೇಳಿದೆ.

" ಇಲ್ಲಾ ಸಾರ್ ನಮ್ ಕಂಪ್ನಿ ಗಾಡಿ ಕೆಟ್ಟೋಗಿತ್ತು ಅದ್ಕೇ ಮಾರ್ಕೆಟ್ ಗಾಡಿ ಅಡ್ಜೆಸ್ಟ್ ಮಾಡಿ ಕಳ್ಸಿರೋದು.. ಅವರಿಗೈತೆ ಬಿಡಿ ಇವತ್ತು ಸರಿಯಾಗಿ ಕ್ಲಾಸ್ ತಗೋತೀನಿ ಒಟ್ನಲ್ಲಿ ನಾಳೆ ಅರ್ಲಿ ಮಾರ್ನಿಂಗ್ :೩೦ ರೊಳಗೆ ನಿಮ್ಗೆ ಸೆಟ್ಲ್ ಮಾಡಸ್ತೀನಿ" ಅಂದ. " ಬೇಡಾ" ಎಂದರೂ ಬಲವಂತಮಾಡಿ ಅರ್ಧ ಗ್ಲಾಸು ಕೆಟ್ಟ ಚಾ ಕುಡಿಸಿದ. ಹೊರಟುಬಂದೆ. ಮಾರನೇ ದಿನ ಬೆಳಿಗ್ಗೆ : ೫೦ರ ತನಕ ಸುಮ್ಮನೇ ಇದ್ದೆ. ಯಾವ ಕರೆಯೂ ಬರಲಿಲ್ಲ. ಮರಳಿ ನಾನೇ ಕರೆಮಾಡಲು ಆರಂಭಿಸಿದೆ. ಮೊದಲ ಮೊಬೈಲು ಹತ್ತುಸಲ ಕರೆಮಾಡಿದ ನಂತರ ಒಮ್ಮೆ ಆತನೇ ವಾಪಸ್ಸು ಕರೆಮಾಡುವದೊಡ್ಡವ್ಯಕ್ತಿಯಾಗಿ " ರೋಹಿತ್ ಸಾರ್ ಇನ್ನೂ ಬಂದಿಲ್ಲ ೧೦:೩೦ ಆಗ್ಬೌದು " ಎಂದ. ಅದೂ ಮುಗಿದು ೧೨ ಬಾರಿಸಿತು. [ಈಗ ಬಾರಿಸುವುದಿಲ್ಲ ಬಿಡಿ ಹಾಗೆ ಹೇಳುವುದು ವಾಡಿಕೆ ಅಷ್ಟೇ] ನಾನು ಮತ್ತೆ ಮೊದಲ ನಂಬರಿಗೆ ಕರೆಮಾಡಿದಾಗ " ನಂಗೂ ಅದ್ಕೂ ಸಂಬಂಧವಿಲ್ಲಾ ನೀವು ರೋಹಿತ್ ಹತ್ರ ನೋಡ್ಕೊಳಿ" ಎಂದ. ನಾನು ಜಸ್ಟ್ ಡಯಲ್ಗೆ ಕರೆಮಾಡಿ

" ಇಂಥಾ ಬೋಗಸ್ ಕಂಪನಿಯನ್ನು ನನಗೆ ಪರಿಚಯಿಸಿ ಉಪಕರಿಸಿದ್ದೀರಿ ಇನ್ನುಮುಂದಾದರೂ ಇಂಥವನ್ನೆಲ್ಲಾ ಫಿಲ್ಟರ್ ಮಾಡಿ" ಎಂದು ಹೇಳಿದಾಗ ಅವರು ಲೈನ್ ನಲ್ಲೇ ಇರಿ ಎಂದರು. ಕಡೆ ಅವರುಕಂಪನಿ ಮೊದಲ ನಂಬರಿಗೆ ಕರೆಮಾಡಿ ಆಲ್ಲಿರುವಾತನ ಹತ್ತಿರ ಮಾತನಾಡಿ ಟೆಲಿ ಕಾನ್ಫರೆನ್ಸಿಂಗ್ ನಡೆಸಿದರು. ಅವರ ಕೋರಿಕೆಯ ಮೇರೆಗೆ ಒಂದು ವಾರದ ಸಮಯಾವಕಾಶ ನೀಡಿದ್ದೇನೆ. ಮುಂದಿನವಾರ ಅವರು ಡ್ಯಾಮೇಜು ತುಂಬಿಸಿಕೊಡದಿದ್ದಲ್ಲಿ ಮಾಧ್ಯಮಗಳಲ್ಲಿ ಬರುವ ಸಾಧ್ಯತೆ ಖಂಡಿತಾ ಇದೆ. ಇದು ಪ್ರಚಾರಕ್ಕಾಗಿ ಅಲ್ಲ; ಮತ್ತೆ ಯಾರಿಗೂ ಇಂಥಾ ಬೋಗಸ್ ಕಂಪನಿಗಳಹಲಾಲ್ ಕಟ್ನಡೆಯುವ ಮೊದಲು ಅವರ ನಜರಿಗೆ, ಗಮನಕ್ಕೆ ವಿಷಯ ತಂದುಬಿಟ್ಟರೆ ಹಲವು ಜನರಿಗೆ ಅದು ಉಪಕಾರವಾಗಬಹುದು.