ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, January 31, 2012

ಅಜ್ಜನ ರಾಮರಾಜ್ಯದಲ್ಲಿ ಹುಲಿ-ಆನೆಗಳಿಗಾಗಿ ತವಕಿಸುತ್ತ ಕಳೆದ ದಿನಗಳು !


ಅಜ್ಜನ ರಾಮರಾಜ್ಯದಲ್ಲಿ ಹುಲಿ-ಆನೆಗಳಿಗಾಗಿ ತವಕಿಸುತ್ತ ಕಳೆದ ದಿನಗಳು !

ಚಳಿಗಾಲದ ಸಂಜೆಯ ಚುಮು ಚುಮು ಚಳಿಯಲ್ಲಿ ಅಜ್ಜ ಕೇರಿಯ ಯಾರೊಟ್ಟಿಗೋ ಮಾತು-ಕಥೆಯಾಡುತ್ತಿರುವಾಗ ಎಡತಡಸುವ ಚಿಕ್ಕ ಹುಡುಗ ನಾನಾಗಿದ್ದೆ. ಅಡ್ಡ ಬರುವುದಕ್ಕೆ ಸಿಟ್ಟುಬಂದರೂ ಮೊಮ್ಮಗನ ಮೇಲಿನ ವ್ಯಾಮೋಹಕ್ಕೇನೂ ಕೊರತೆಯಿರಲಿಲ್ಲ; ಹಾಗೆ ಕರೆದು ತನ್ನ ಕಾಲ ಸಂದಿಯಲ್ಲಿ ಕೂರಿಸಿಕೊಂಡಾಗ ಅಜ್ಜ ಹೊದ್ದ ಪಂಚೆಯೋ ಶಾಲೋ ನನ್ನನ್ನೂ ಮುಚ್ಚುತ್ತಿತ್ತು. ಅಜ್ಜನ ಮೈಯ್ಯ ಶಾಖ ಆ ಬಟ್ಟೆಯೊಳಗೇ ಇದ್ದು ಹೊರಗಿನ ಚಳಿ ತಾಗದೇ ಒಂಥರಾ ಹಾಯೆನಿಸುವ ಖುಷಿ ಬೇರೆ. ರೈತರ ಮನೆಯಾಗಿದ್ದರಿಂದ ರೈತಾಪಿ ವರ್ಗದ ಅನೇಕ ಕಷ್ಟಸುಖಗಳ ಕಥಾನಕಗಳು ಮಾತುಕಥೆಗಳಲ್ಲಿ ಅಡಕವಾಗೇ ಇರುತ್ತಿದ್ದವು. ಬೆಳೆದ ಫಸಲಿಗೆ ಸಿಗಬಹುದಾದ ಧಾರಣೆಯಿಂದ ಹಿಡಿದು ಬೆಳೆಗಳಿಗೆ ತಗಲುವ ಬಾಧೆಗಳು, ಗಂಟಿ[ದನ]ಕರುಗಳ ರೋಗ-ರುಜಿನಗಳು, ಆಹಾರ-ಧಾನ್ಯಗಳು, ಮದುವೆ-ಮುಂಜಿ ಕಾರ್ಯಕಟ್ಲೆ ಸುದ್ದಿಗಳು ಹೀಗೇ ವೈವಿಧ್ಯಮಯ ವಿಚಾರಗಳು ಜಗಲಿಯಲ್ಲಿ ಮಂಡಿಸಲ್ಪಡುತ್ತಿದ್ದವು. ಅಜ್ಜ ಹಾಗೆ ಸಿಗುವುದು ತೀರಾ ಅಪರೂಪ; ಇದು ನಿತ್ಯದ ವೈಖರಿಯಲ್ಲ, ಅಪರೂಪಕ್ಕೆ ೧೫ ದಿನಕ್ಕೋ ೨೨ ದಿನಕ್ಕೋ ಸಿಗುವ ಅವಕಾಶ. ಒಮ್ಮೊಮ್ಮೆ ಈ ಕೂಟ ಚಾ ಕುಡಿಯುವುದರೊಂದಿಗೆ ಮುಗಿಯುತ್ತಿತ್ತು. ಚಾ ಕುಡಿದರೆ ಆಗುವ ಅಡ್ಡ-ಉದ್ದ ಪರಿಣಾಮಗಳ ಬಗ್ಗೆ ನಮಗೆ ಅರಿವಿರದ್ದರಿಂದ ’ಬರಿದೇ ಮಕ್ಕಳು ಚಾ ಕುಡಿಯಬಾರದೆಂದು ಹೇಳ್ತಾರೆ ತಾವು ಮಾತ್ರ ಕುಡೀತಾರೆ’ ಎಂಬ ಗೊಣಗಿಕೊಳ್ಳುವಿಕೆಯಿಂದ ಸುಮ್ಮನಾಗುತ್ತಿದ್ದೆವು.

ಅಜ್ಜ ಸ್ವಾತಂತ್ರ್ಯ ಪೂರ್ವದಲ್ಲಿ ೧೯೧೭ರಲ್ಲಿ ಜನಿಸಿದ್ದ. ತಕ್ಕಮಟ್ಟಿಗೆ ಸ್ವಾತಂತ್ರ್ಯ ಸಂಗ್ರಾಮಗಳ ಗಾಳಿ ಅಜ್ಜನಿಗೆ ತಟ್ಟಿದ್ದರೂ ತಾನು ಸ್ವಾತಂತ್ರ್ಯ ಹೋರಾಟಗಾರ ಎಂದು ಯಾವತ್ತೂ ಅಜ್ಜ ಹೇಳಿಕೊಳ್ಳಲಿಲ್ಲ. ಮನೆಯಲ್ಲಿ ಅಜ್ಜನ ತಂದೆಯವರಿಗೆ ಮೂರ್ನಾಲ್ಕು ಮಕ್ಕಳು. ಸಹಜವಾಗಿ ಕಿತ್ತು ತಿನ್ನುವ ಬಡತನ. ಆ ಕಾಲಕ್ಕೆ ಏನೂ ಇರಲಿಲ್ಲವಂತೆ. ಬಡತನ ಎಷ್ಟಿತ್ತೆಂದರೆ ಆನಬಾಳೇಕಾಯಿ[ದಪ್ಪ ಬಾಳೇಕಾಯಿ]ಪಲ್ಯವನ್ನು ಬೆಳಿಗ್ಗೆಯ ತಿಂಡಿಯಾಗಿ ತಿನ್ನುತ್ತಿದ್ದರಂತೆ. ಅಂದು ಇಂದಿನಂತೇ ಅಂಗಡಿಮುಂಗಟ್ಟುಗಳು ತಾಲೂಕು ಬಿಟ್ಟು ಹಳ್ಳಿಗಳಲ್ಲಿ ಇರಲಿಲ್ಲ. ಹಿಟ್ಟಿನ, ಅವಲಕ್ಕಿಯ ಗಿರಣಿಗಳು ಇರಲಿಲ್ಲ. ಎಲ್ಲವೂ ಮನೆಯಲ್ಲೇ ಇರುವ ಬೀಸುವ ಒಳಕಲ್ಲು, ಗೋಧಿ ಕಲ್ಲು, ಅವಲಕ್ಕಿ ಕುಟ್ಟುವ ಕಲ್ಲು ಇವುಗಳಲ್ಲೇ ಆಗಬೇಕು! ಅವಲಕ್ಕಿ ಮತ್ತು ಅಕ್ಕಿಗಳನ್ನು ಒನಕೆಯಿಂದ ಕುಟ್ಟಿಯೇ ತಯಾರಿಸುತ್ತಿದ್ದರಂತೆ. ಚಿಟಗನಕ್ಕಿ ಭತ್ತದ ಅವಲಕ್ಕಿ ತಿನ್ನಲು ತುಂಬಾ ರುಚಿಯಿರುತ್ತಿತ್ತು. [ಆ ತಳಿಯ ಭತ್ತದ ಅವಲಕ್ಕಿ ನಾನು ಚಿಕ್ಕವನಿರುವಾಗ ಕೂಡ ನನಗೆ ಸಿಕ್ಕಿತ್ತು!] ಆದರೆ ಪ್ರತಿದಿನ ಮಾಡಿಕೊಳ್ಳುವಷ್ಟು ಅಜ್ಜ ಸಿರಿವಂತನಾಗಿರಲಿಲ್ಲ. ಆ ಕಾಲಕ್ಕೆ ದೋಸೆ ಎಂಬುದು ಒಂದು ವಿಶೇಷ ಕಜ್ಜಾಯವಾಗಿತ್ತು ಎಂದು ಅಜ್ಜ ಹೇಳುತ್ತಿದ್ದುದು ನೆನಪಿದೆ! ಅಜ್ಜ ೧೬ನೇ ವಯಸ್ಸಿಗೇ ತಂದೆಯನ್ನು ಕಳೆದುಕೊಂಡ; ಕುಟುಂಬದ ಭಾರ ಹೆಗಲಿಗೆ ಬಿತ್ತು. ಆಗಲೇ ಅಣ್ಣ-ತಮ್ಮಂದಿರಿಗೆ ಮದುವೆ ಬೇರೆ. ಅಣ್ಣ-ತಮ್ಮಂದಿರು ಇರುವ ಭೂಮಿ ಹಿಸ್ಸೆಮಾಡಿಕೊಂಡು ಬೇರೇ ಬೇರೆಯಾಗಿದ್ದರು.

ಅಜ್ಜನಿಗೆ ಮುಂದೆ ನಾಕು ಗಂಡು ಎರಡು ಹೆಣ್ಣು ಒಟ್ಟಿಗೆ ಆರು ಮಕ್ಕಳು ಜನಿಸಿದರು. ಮಕ್ಕಳ ಲಾಲನೆ-ಪಾಲನೆ ಜೊತೆಗೆ ಅಜ್ಜ-ಅಜ್ಜಿ ಇಬ್ಬರೂ ಇರುವ ಅಡಕೆಯ ತೋಟದಲ್ಲಿ ಸ್ವತಃ ಗೇಯುತ್ತಿದ್ದರು. ಅಜ್ಜಿ ಕೊಟ್ಟಿಗೆಯಿಂದ ಆಕಳ ಗೊಬ್ಬರವನ್ನು ಹೆಡಗೆಗಳಲ್ಲಿ ಹೊತ್ತು ತಾನೂ ಸಹಕರಿಸುತ್ತಿದ್ದಳಂತೆ. ಒಮ್ಮೆ ಚಿಕ್ಕ ಮಗುವಾಗಿದ್ದ ಚಿಕ್ಕಪ್ಪನನ್ನು ತೋಟದ ಅಡಕೆಮರದ ಮರದ ಬೊಪ್ಪೆಯ[ಬುಡದ]ಮೇಲೆ ಮಲಗಿಸಿಟ್ಟು ತುಸುದೂರದಲ್ಲಿ ಕೆಲಸಮಾಡುತ್ತಿರುವಾಗ ಮಗು ಹೊರಳಿ ಅಂಬೆ ಹರೆದು ನೀರಿಲ್ಲದ ಚಿಕ್ಕ ೭-೮ ಅಡಿಯ ಬಾವಿಗೆ ಬಿದ್ದುಬಿಟ್ಟಿತಂತೆ! ದೇವರು ದೊಡ್ಡವನು-ಮಗು ಸಾಯಲಿಲ್ಲ, ಚಿಕ್ಕಪುಟ್ಟ ಪೆಟ್ಟುಗಳಾಗಿದ್ದವಂತೆ. ಆಗೆಲ್ಲಾ ಕತ್ತಲ ಕಾಲ; ವಿದ್ಯುದ್ದೀಪ ಇನ್ನೂ ಬಂದಿರಲಿಲ್ಲ. ರಾತ್ರಿ ಚಿಮಣಿ ಬುಡ್ಡಿ ದೀಪವೇ ಎಲ್ಲದಕ್ಕೂ. ಒಮ್ಮೆ ಬುಡ್ಡಿಯನ್ನು ದೂರದಲ್ಲಿಟ್ಟು ಆಗ ಮಗುವಾಗಿದ್ದ ಇನ್ನೊಬ್ಬ ಚಿಕ್ಕಪ್ಪನನ್ನು ಮಲಗಿಸಿ ಹೋಗಿದ್ದರೆ ಆ ಪುಣ್ಯಾತ್ಮ ಸೂರ್ಯನನ್ನು ಹಣ್ಣೆಂದು ಭಾವಿಸಿದ ಹನುಮನಂತೇ ಬೆಂಕಿಯ ಜೊತೆ ಸರಸವಾಡಲು ಬುಡ್ಡಿಯನ್ನೇ ಬರಸೆಳೆದು ಅಜ್ಜಿ ಓಡಿಬರುವಷ್ಟರಲ್ಲಿ ಹೊಟ್ಟೆಯ ಕೆಲಭಾಗ ಸುಟ್ಟುಹೋಗಿತ್ತು! ಇಲ್ಲೂ ಅಷ್ಟೇ ಭಗವಂತ ದೊಡ್ಡವನು; ತೀರಾ ಸಾಯುವಷ್ಟು ಸುಟ್ಟಿರಲಿಲ್ಲ, ಆದರೂ ಕಲೆ ಈಗಲೂ ಇದೆ.

ಸಂಸಾರದ ಭಾರವನ್ನು ಹೊತ್ತ ಅಜ್ಜನಿಗೆ ಇರುವ ತೋಟದ ಗಳಿಕೆ ವರ್ಷದ ಮೂರುತಿಂಗಳೂ ಸಾಲುವಷ್ಟಿರಲಿಲ್ಲವಂತೆ. ಆಗ ಮರ್ಯಾದೆಗೆ ಬಹುದೊಡ್ಡ ಮೌಲ್ಯವಿದ್ದಕಾಲ. ಯಾರಾದರೂ ನೆಂಟರು-ಇಷ್ಟರು ಬಂದರೆ ಸತ್ಕರಿಸಬೇಕು. ಊರೂರು ಅಲೆಯುವ ಸಂಭಾವನೆ ಬೇಡುವವರು, ಯಾವುದೋ ವಂತಿಗೆ-ವರಾಡಿಯವರು, ಭಿಕ್ಷುಕರು ಅವರು ಇವರು ಅಂತ ಯಾರ್ಯಾರೋ ಬರುತ್ತಿದ್ದರಂತೆ. ಊಟದ ಹೊತ್ತಿಗೆ ಬಂದ ಯಾರನ್ನೂ ಹಾಗೇ ಕಳಿಸುವ ವೈವಾಟು ನಮ್ಮಲ್ಲಿರಲಿಲ್ಲ. ಕಷ್ಟದ ದಿನಗಳಲ್ಲಿ ಅಜ್ಜ ಕೈಚೆಲ್ಲಿ ಕೂತಿರಲಿಲ್ಲ. ಬೇರೆಯವರ ಮನೆ ಕೂಲಿ ಕೆಲಸಮಾಡಿ ದುಡಿಯುತ್ತಿದ್ದರು. ನಮ್ಮಲ್ಲಿನ ರೈತಾಪಿ ಕೆಲಸಗಳಾದ ಕೊಟ್ಟೆಕಟ್ಟುವುದು[ ಅದು ಈಗ ಬರೇ ಇತಿಹಾಸದ ಪುಟದಲ್ಲಿ ಮಾತ್ರ ಕೇಳಸಿಗುತ್ತದೆ] ಕೊನೆಕೊಯ್ಯುವುದೇ ಮೊದಲಾಗಿ ಮರಗೆಲಸ[ಮರದಮೇಲಿನ ಕೆಲಸ]ಗಳನ್ನೂ ಮಾಡಿ ಮಕ್ಕಳನ್ನೂ ಹೆಂಡತಿಯನ್ನೂ ಸಲಹಿದ್ದು ಕೇಳಿದ್ದೇನೆ. ಇಂತಹ ಅಜ್ಜ ಕಲಿತಿದ್ದು ಕನ್ನಡ ಪ್ರಾಥಮಿಕದ ಮೂರನೇ ತರಗತಿಯನ್ನು. ಆದರೂ ಆತನ ವ್ಯವಹಾರದ ಶಿಸ್ತು ಸಿಪಾಯಿಯ ಶಿಸ್ತಿನಂತಿತ್ತು. ಹಲವರ ಒಡನಾಟದಿಂದ ಅಜ್ಜ ಅನೇಕ ಆಂಗ್ಲ ಮತ್ತು ಹಿಂದೀ ಪದಗಳನ್ನು ಅರ್ಥಮಾಡಿಕೊಳ್ಳುತ್ತಿದ್ದ, ಅಂಥವರ ಜೊತೆ ಅಂತಂಥದೇ ಶಬ್ದಗಳನ್ನು ಬಳಸುವುದನ್ನು ನೋಡಿದ ನನಗೇ ಆಶ್ಚರ್ಯವಾಗುತ್ತಿತ್ತು.

ಸರಿಯಾಗಿ ಉಳಿದುಕೊಳ್ಳಲು ಮನೆಯೂ ಇಲ್ಲದ ಗುಡಿಸಲಿನ ವಾತಾವರಣವಿದ್ದ ಕಾಲದಲ್ಲಿ ಅಜ್ಜನಿಗೆ ಹೇಗಾದರೂ ಮಾಡಿ ಚಿಕ್ಕ ಮನೆ ಕಟ್ಟುವ ಅಸೆಯಾಯ್ತು. ದುಡಿಯುವ ದುಡ್ಡಿನಲ್ಲಿ ಬಿಡಿಗಾಸೂ ಉಳಿಯುತ್ತಿರಲಿಲ್ಲ. ಅದಕ್ಕಾಗಿ ಅಜ್ಜ ಅಡಕೆ ವ್ಯಾಪಾರಕ್ಕೆ ತೊಡಗಿದ. ವ್ಯಾಪಾರ ಅಜ್ಜನ ಕೈಹಿಡಿಯಿತು ಎಂದು ಅವರ ಜೀವನದ ಗತಿಯೇ ಹೇಳುತ್ತದೆ. ಇದೇ ಸಮಯದಲ್ಲಿ ಮಹಾತ್ಮರಾದ ಭಗವಾನ್ ಶ್ರೀಧರರು ನಮ್ಮಲ್ಲಿಗೆ ಬಿಜಯಂಗೈದಿದ್ದರು. ಅಜ್ಜ ಭಕ್ತಿಯಿಂದ ಪಾದಪೂಜೆ ನಡೆಸಿದ್ದನಂತೆ. " ತಮ್ಮಾ ಕರಿಕಾನಮ್ಮನ ದೇವಸ್ಥಾನ ಕಟ್ಟುವುದಕ್ಕೆ ನನ್ನ ಜೊತೆಗೆ ಬಂದವರಿಗೆ ಏನಾದರೂ ಕೊಡು ಅದು ನಿನಗೆ ಮೂರುಪಟ್ಟಾಗುವುದು" ಎಂದಿದ್ದರಂತೆ. [ಆಗ ಜಾಗ್ರತ ಸ್ಥಳವಾದ ಹೊನ್ನಾವರ ತಾಲೂಕಿನ ಶ್ರೀಕರಿಕಾನ್ ಪರಮೇಶ್ವರೀ ದೇಗುಲವನ್ನು ಕಟ್ಟಲು ಅನೇಕ ಜನ ಸೇರಿ ಸಂಕಲ್ಪಿಸಿದ್ದರೂ ಅದು ದೈವೀಶಕ್ತಿಯಿರುವ ಜನರಿಂದ ಮಾತ್ರ ಸಾಧ್ಯ ಎಂಬ ಕಾರಣಕ್ಕೆ ನಿಂತುಹೋಗಿದ್ದು ಶ್ರೀಧರರು ಅದನ್ನು ತಿಳಿದು ತಾವೇ ಆ ಕೆಲಸ ಮುಗಿಸಿಕೊಡಲು ಮುಂದೆ ನಿಂತಿದ್ದರು.] ಸರ್ವಸಂಗ ಪರಿತ್ಯಾಗಿಯಾದ ಪರಮಹಂಸ ಸನ್ಯಾಸಿಯೊಬ್ಬರು ನಿಸ್ಪೃಹರಾಗಿ ಸ್ವತಃ ತನ್ನಲ್ಲಿ ಏನಾದರೂ ಕಟ್ಟಡಕ್ಕೆ ಕೊಡು ಎಂದಿದ್ದನ್ನು ಕೇಳಿ ಅಜ್ಜನಿಗೆ ಮನಸ್ಸು ಬಹಳ ಆರ್ದ್ರವಾಯ್ತು. ಅಂದಿನ ಕಾಲಕ್ಕೆ ವ್ಯಾಪಾರದಲ್ಲಿ ಬಳಸುತ್ತಿದ್ದ ಒಂದು ಸಾವಿರವನ್ನು ಅಜ್ಜ ಗುರುಗಳ ಜೊತೆಗಾರರಿಗೆ ನೀಡಿದನಂತೆ. ಕೈಲಿದ್ದ ನಗದನ್ನೆಲ್ಲ ಅಜ್ಜ ದೇವರಿಗೆ ನೀಡಿದ್ದ, ಮುಂದಿನ ಖರ್ಚಿಗೆ ದುಡ್ಡು ಬೇಕೆಂದರೆ ಇದ್ದ ಅಡಕೆ ಮಾರಬೇಕು. ಖರೀದಿಸಿದ ಅಡಕೆ ಮನೆಯಲ್ಲಿ ರಾಶಿ ಬಿದ್ದಿತ್ತು. ಅದನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಒಯ್ದಾಗ ಅಜ್ಜನಿಗೆ ಅದಕ್ಕೆ ತಗುಲಿದ ವೆಚ್ಚಕ್ಕೆ ಮೂರುಪಟ್ಟು ಹಣ ಬಂತು ! ಸದ್ಗುರುಗಳ ಸಂಕಲ್ಪವನ್ನು ಅಜ್ಜ ಕೊನೆಯವರೆಗೂ ನೆನೆಯುತ್ತಿದ್ದ.

ಹೀಗೇ ಮುಂದೆ ವ್ಯಾಪಾರದಲ್ಲಿ ಅಷ್ಟಿಷ್ಟು ಹಣಗಳಿಸಿ ಮನೆಯೊಂದನ್ನು ಅಜ್ಜ ಕಟ್ಟಿದ. ಅದೂ ಆ ಕಾಲಕ್ಕೆ ಮಹಡಿ ಮನೆ. ಕೈಲಾಗುತ್ತಿಲ್ಲ; ಮನಸ್ಸು ಕೇಳುತ್ತಿಲ್ಲ. ಖರ್ಚಿಗೆ ಪೂರ್ತಿ ಹಣವಿಲ್ಲ. ಯಾರೋ ಉದ್ರಿಯಲ್ಲಿ ಬಿಜಗರ, ಮೊಳೆ, ಕಬ್ಬಿಣ-ಹಿತ್ತಾಳೆ ಸಾಮಗ್ರಿಗಳನ್ನು ಕೊಟ್ಟರು. ಇನ್ಯಾರೋ ಗೋಡೆಕಟ್ಟಲು ಕಲ್ಲು[ನಮ್ಮಲ್ಲಿನ ಲ್ಯಾಟರೈಟ್] ತರಿಸಿಕೊಟ್ಟರು. ಅದ್ಯಾರೋ ಮರದ ತೊಲೆಗಳನ್ನೂ ದಿಮ್ಮಿಗಳನ್ನೂ ಕೊಟ್ಟರು, ಮತ್ತಿನ್ಯಾರೋ ಗಿಲಾಯಿಮಾಡಿ ಬಣ್ಣ-ಸುಣ್ಣ ಬಳಿಯಲು ಅನುಕೂಲ ಮಾಡಿಕೊಟ್ಟರು! ಇದೆಲ್ಲಾ ನಡೆದುದು ಗುರು ಶ್ರೀಧರರ ಕೃಪೆಯಿಂದ ಎಂಬುದು ಅಜ್ಜನ ಅನಿಸಿಕೆಯಾಗಿತ್ತು; ಅದು ಸತ್ಯವೂ ಕೂಡ. ಎಲ್ಲೆಲ್ಲೂ ಅಜ್ಜನಿಗೆ ತುಂಬಾ ವ್ಯಕ್ತಿಮೌಲ್ಯ[ಕ್ರೆಡಿಬಲಿಟಿ] ದೊರೆತಿತ್ತು. ಹೇಗೋ ತಮಗೆ ಹಣ ಮರಳಿಸುವನೆಂಬ ನಂಬಿಕೆ ಎಲ್ಲರದಾಗಿತ್ತು. ಅಜ್ಜನ ಸ್ನೇಹ ಬಯಸಿ ಅನೇಕ ಜನ ಒಡನಾಡುತ್ತಿದ್ದರು. ಯಾರೋ ಆರ್ತರು, ಯಾರೋ ಅನಾಥರು, ಯಾರೋ ಬಡವರು ದೇಹಿ ಎಂದರೆ ಅಜ್ಜ ಕೂಡ ಹಾಗೇ ಕೈ ತಿರುಗಿಸುತ್ತಿರಲಿಲ್ಲ. ಅನೇಕ ಜನರಿಗೆ ಅಜ್ಜ ದಾರಿ ಕಲ್ಪಿಸಿದ್ದನ್ನು ನಾನು ಕೇಳಿಬಲ್ಲೆ. ಇಂತಹ ಅಜ್ಜನ ಮೊಮ್ಮಗನಾಗಿ ನಾನು ಜನಿಸಿದ್ದು ನನ್ನ ಪುಣ್ಯ ಎಂದು ಏಷ್ಟೋ ಸರ್ತಿ ನಾನಂದುಕೊಂಡಿದ್ದೇನೆ.


ಅಜ್ಜ ಊರಲ್ಲಿ ಜಮೀನು ಖರೀದಿಸಿದ. ಹಲವು ದೋಸ್ತರ ಬಳಗದೊಂದಿಗೆ ಕುಮಟಾದಲ್ಲಿ ಅಡಕೆ ಮಂಡಿ ಆರಂಭಿಸಿದ. ಆರಂಭಿಸಿದ ವರ್ಷವೊಂದರಲ್ಲೇ ಊರಕಡೆಯ ಆ ದೋಸ್ತರೆಲ್ಲಾ ತಮಗೆ ಬೇಕಾದವರಿಗೆ ಸಾಲ ಕೊಡು ಎಂದು ಚೀಟಿಕೊಟ್ಟು [ಇಂದಿನ ಎಮ್ಮೆಲ್ಲೆ ಶಿಫಾರಸ್ಸಿನ ಹಾಗೇ!] ಕುಮಟಾದಲ್ಲಿರುತ್ತಿದ್ದ ಅಜ್ಜನ ಹತ್ತಿರ ಕಳಿಸುತ್ತಿದ್ದರು. ದುಡಿವ ಬಂಡವಾಳ ಖಾಲಿಯಾಗುತ್ತಾ ನಡೆದಾಗ ವ್ಯವಹಾರ ನಿಭಾಯಿಸುವುದು ಕಷ್ಟವಾಗಿ ಅದನ್ನು ಗಮನಿಸಿದ ಅಜ್ಜ ಸಾಲ ಕೊಡುವುದಕ್ಕೆ ಮೂಲ ಬಂಡವಾಳ ಜಾಸ್ತಿ ಕ್ರೋಡೀಕರಿಸಬೇಕೆಂದು ಕೇಳಿದ್ದಕ್ಕೆ ಎಲ್ಲಾ ದೋಸ್ತರ ಕಣ್ಣೂ ಕೆಂಪಗಾಗಿದೆ; ತೊಡಗಿಸಿದ ಬಂಡವಾಳದ ಭಾಗವನ್ನು ಮರಳಿ ಕೊಡುವಂತೇ ಹಿಂದೆಬಿದ್ದಿದ್ದಾರೆ. ಗುರುವನ್ನು ಸ್ಮರಿಸಿ ಇಡೀ ಮಂಡಿಯ ವ್ಯವಹಾರವನ್ನು ಒಬ್ಬನೇ ವಹಿಸಿಕೊಂಡು ಕೇವಲ ಅತಿ ಸಣ್ಣ ಸಮಯಾವಧಿಯಲ್ಲಿ ಎಲ್ಲರ ಹಣವನ್ನೂ ಮರಳಿಸಿದ ಛಾತಿ ಅಜ್ಜನದು. ಮಾತ್ರವಲ್ಲ ಅಲ್ಲೇ ದುಡಿದು ಅದೇ ಜಾಗವನ್ನು ಖರೀದಿಸಿದ್ದೂ ಆಯ್ತು! ಅದೇ ಸಮಯಕ್ಕೆ ಸ್ವಲ್ಪ ಕಾಸು ಹೊಂದಿಸಿ ಮಕ್ಕಳ ಮುಂದಿನ ಜೀವನಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ನಮ್ಮೂರಿಂದ ೧೦ ಕಿ.ಮೀ ದೂರದಲ್ಲಿ ಜಮೀನನ್ನೂ ಖರೀದಿಸಿದ.

ಅಜ್ಜ ಖರೀದಿಸಿದ ದೂರದ ಆ ಜಮೀನು ಕಾಡ ಮಧ್ಯೆ ಇತ್ತು. ಒಂದು ಕಡೆ ತೊರೆಯೊಂದು ಚಿಕ್ಕ ನದಿಯಾಗಿ ಹರಿಯುತ್ತಿತ್ತು. ಇನ್ನೊಂದೆಡೆ ದಟ್ಟ ಕಾಡು. ಜಮೀನಿಗೆ ೩ ಕಿ.ಮೀ. ಕಾಲ್ನಡಿಗೆಯಲ್ಲಿ ತೆರಳಬೇಕಿತ್ತು. ನಡೆಯುವಾಗ ಆ ಕಾಲು ಹಾದಿ ಕಾಡ ಮಧ್ಯೆಯೇ ಹಾದುಹೋಗುತ್ತಿತ್ತು. ಹಾದಿಯ ಕೆಲವೆಡೆ ಚಿಕ್ಕ ಪುಟ್ಟ ತೊರೆಗಳು ಹರಿಯುವುದನ್ನು ನೋಡಬಹುದಿತ್ತು. ಎಲ್ಲೆಲ್ಲೂ ಹಸಿರು ತುಂಬಿದ ಮರಗಳು. ಮರಗಳ ಮೇಲೆ ಹಲವುವಿಧದ ವನಚರಗಳು, ಪಕ್ಷಿಗಳು. ಝೀಂಕರಿಸುವ ಜೀರುಂಡೆಗಳು, ಬಿಸಿಲ ಹೊತ್ತಿಗೆ ಗುಟುರ್ ಗುಟುರ್ ಎಂದು ವಿಶಿಷ್ಟವಾಗಿ ಧ್ವನಿಹೊಮ್ಮಿಸುವ ಹಕ್ಕಿಗಳು. ಕೇಶಳಿಲು-ಕೆಂಬೂತಗಳು. ನವಿಲು-ಗಿಳಿಗಳು. ಸಿಳ್ಳೆ ಕ್ಯಾತ-ಮಸಿಮಂಗ[ಕೋಡ] ಮತ್ತು ಬಿಳಿಮಂಗಗಳು....ಹೀಗೇ ಹತ್ತಾರು ಜೀವವೈವಿಧ್ಯವನ್ನು ನಾವು ಚಿಕ್ಕಮಕ್ಕಳು ಅಲ್ಲಿ ಕಂಡಿದ್ದೇವೆ. ಶಾಲೆಗೆ ರಜಾ ಬರುವುದನ್ನೇ ಕಾಯುತ್ತಿದ್ದ ನಾವು ಅಲ್ಲಿಗೆ ತೆರಳಲು ತುದಿಗಾಲಿನಲ್ಲಿರುತ್ತಿದ್ದೆವು. ಜಮೀನು ನೋಡಿಕೊಳ್ಳಲು ಅಜ್ಜ ಮಗಳು-ಅಳಿಯನನ್ನು ಅಲ್ಲಿ ಬಿಟ್ಟಿದ್ದ; ವಿಷಯವಿಷ್ಟೇ ಒಬ್ಬ ಮಗಳು-ಅಳಿಯನಿಗೆ ಮನೆಯಲ್ಲಿ ತೀರಾ ಏನೂ ಇರಲಿಲ್ಲ. ಅವರನ್ನೂ ಅಜ್ಜನೇ ನೋಡಬೇಕಾದ ಸ್ಥಿತಿ ಇತ್ತು. ಕೊಂಡ ಜಮೀನಿನಲ್ಲಿ ಅರ್ಧವನ್ನು ಕೊಡುವ ಮನಸ್ಸಿನಲ್ಲಿ ಅವರನ್ನೇ ಆ ಜಮೀನಿನ ಉಸ್ತುವಾರಿಗೆ ಬಿಟ್ಟಿದ್ದ. ಆಗಾಗ ಖರ್ಚಿಗೆ [ಇನ್ನೂ ಹೊಸ ಜಮೀನಾಗಿದ್ದುದರಿಂದ ಅಲ್ಲಿ ಏನೂ ಇರಲಿಲ್ಲ]ಹಣ, ಧವಸ-ಧಾನ್ಯಗಳನ್ನು ಕಳುಹಿಸಿಕೊಡುತ್ತಿದ್ದ. ನಾವು ಮಕ್ಕಳು ಅತ್ತೆಮನೆಗೆ ಹೋಗುತ್ತೇವೆ ಎಂಬ ನೆವದಿಂದ ಜಮೀನಿಗೆ ತೆರಳಲು ಅವಕಾಶ ಹುಡುಕುತ್ತಿದ್ದೆವು!

ಹೊಸದಾಗಿ ಖರೀದಿಸಿದ ಜಮೀನಿನ ಕೆಲವು ಭಾಗದಲ್ಲಿ ಗದ್ದೆಗಳು ಇದ್ದವು. ಹಸಿರು ತುಂಬಿದ ಗದ್ದೆಗಳ ಮಧ್ಯೆ ರಾತ್ರಿಯ ಹೊತ್ತಿನ ಕಾವಲಿಗಾಗಿ ಒಂದೆರಡು ಮಾಳಗಳನ್ನು ನಿರ್ಮಿಸಲಾಗಿತ್ತು. ಮಾಳಗಳಲ್ಲಿ ಆಳುಗಳಾಗಲೀ ನಮ್ಮ ಮಾವನಾಗಲೀ [ಅತ್ತೆಯ ಯಜಮಾನ್ರು]ಇರುತ್ತಿದ್ದು ಆಗಾಗ ಎದ್ದು ಬೆಳೆದ ಬೆಳೆಗಳನ್ನು ಕಾಡುಪ್ರಾಣಿಗಳು ನಾಶಪಡಿಸಿದಂತೇ ಏನಾದರೂ ಸದ್ದುಮಾಡುವುದು, ಹಳೆಯ [ಎಣ್ಣೆತುಂಬಲು ಬಳಸುವ ದೊಡ್ಡ ಸೈಜಿನ ] ಡಬ್ಬಿಕಡಿ ಬಡಿಯುವುದು ಇತ್ಯಾದಿ ನಡೆಸಿ ಆ ಶಬ್ದಕ್ಕೆ ಪ್ರಾಣಿಗಳು ಹೆದರಿ ಜಮೀನಿಗೆ ಕಾಲಿಡದಂತೇ ರಕ್ಷಿಸುತ್ತಿದ್ದರು. ಪ್ರಾಣಿಗಳಿಗೂ ಕಾಡಿನಲ್ಲೇ ಸಾಕಷ್ಟು ತಿಂಡಿ-ತೀರ್ಥ ಲಭ್ಯವಿತ್ತಾದ್ದರಿಂದ ಅವೂ ಹೊಟ್ಟೆಗಾಗಿ ಅನಿವಾರ್ಯವಾಗಿ ಮಾನವ ನಿರ್ಮಿತ ಪ್ರದೇಶಗಳಿಗೋ ಗದ್ದೆ-ತೋಟಗಳಿಗೋ ನುಗ್ಗುತ್ತಿರಲಿಲ್ಲ. ಎಲ್ಲೋ ಆಹಾರಕ್ಕಾಗಿ ಅಲೆಯುವಾಗ ಅಪ್ಪಿತಪ್ಪಿ ಬಂದರೆಮಾತ್ರ ಬೆಳಗಿನ ಜಾವದವರೆಗೂ ಕೈಲಾಗುವಷ್ಟನ್ನು ತಿಂದು ಮುಗಿಸಿಯೇ ಹೋಗುವುದು ಅವುಗಳ ಅಭ್ಯಾಸವಾಗಿತ್ತು. ಒಂದೆರಡು ಬಾರಿ ಇದನ್ನು ನೋಡಿದ ಜಮೀನಿನ ಉಸ್ತುವಾರೀ ಅಧಿಕಾರಿ ಮಾವ ಅದಕ್ಕೆ ಪರಿಹಾರವಾಗಿ ಮಾಳಹಾಕಿ ಕಾವಲುಕಾಯುವ ರೂಢಿ ಬೆಳೆಸಿದ್ದರು; ಅದು ಇಂದಿಗೂ ಕಾಡ ಪಕ್ಕದ ಹಳ್ಳಿಗಳಲ್ಲಿ ಅಲ್ಲಲ್ಲಿ ತೋರಿಬರುವ ನಡಪತ್ತು.

ಜಮೀನಿರುವ ಆ ಪ್ರದೇಶಕ್ಕೆ ಕೊಟ್ಗೆಮಕ್ಕಿ ಎಂಬ ಹೆಸರು. ಕೊಟ್ಗೆಮಕ್ಕಿಗೆ ನಾವು ಹೋದಾಗ ನಮಗೆ ಹಗಲಿರುಳೂ ಕಥೆಗಳಲ್ಲಿ ಕೇಳಿದ್ದ ಕಾಡುಪ್ರಾಣಿಗಳನ್ನೂ ಪಕ್ಷಿಗಳನ್ನೂ ಕಾಂಬ ಆಸೆ. ಒಮ್ಮೆ ಜಮೀನಿಗೆ ಹರಿದು ಬರುವ ನೀರು ನಿಂತುಹೋಗಿತ್ತು. ಕಾನ ದಾರಿಯಲ್ಲಿ ದೂರದ ಕೆಂಬಾಲ್ ಕಡೆಗೆ ಕಿಲೋಮೀಟರುಗಟ್ಟಲೆ ನಡೆದು ಅದರ ಮೂಲದೆಡೆಗೆ ಹೋಗಿ ಎಲ್ಲಿ ಏನಾಗಿದೆ ಎಂಬುದನ್ನು ಹುಡುಕಬೇಕಿತ್ತು. ಮಾವನ ಮಕ್ಕಳು ಮತ್ತು ನಾವು ಹಾಗೊಮ್ಮೆ ಕಾಡ ಹಾದಿಯಲ್ಲಿ ಸಾಗಿಬರುವ ಆ ನೀರ ಅವಳೆಯ ಪಕ್ಕದಲ್ಲೇ ನಡೆಯುತ್ತಾ ಸಾಗುತ್ತಿದ್ದೆವು. ಮಾವನ ಮಕ್ಕಳಿಗೆ ಅದಾಗಲೇ ಕಾಡುಜೀವನ ಕರಗತವಾಗಿತ್ತು. " ಅಗೋ ಅಲ್ಲಿನೋಡು ಆನೆ ಹೆಜ್ಜೆ ಇಲ್ಲಿ ನೋಡು ಹಂದಿ ಅಗೆದಿದ್ದು " ಎನ್ನುತ್ತಾ ಅವರು ಮುಂದೆಸಾಗಿದರೂ ನಾವು ಅದರ ಹತ್ತಿರವೇ ನಿಂತು ಆನೆ ಎಷ್ಟು ಹೊತ್ತಿಗೆ ಬಂದು ಹೋಗಿರಬಹುದು? ಹೇಗಿತ್ತೋ ಏನೋ? ಹಂದಿ ಯಾವ ರೀತಿ ಅಗೆಯುತ್ತದೆ?-ಎಂಬುದನ್ನೆಲ್ಲಾ ಮನಸ್ಸಲ್ಲೇ ಊಹಿಸಿಕೊಳ್ಳುತ್ತಾ ತೆರಳುತ್ತಿದ್ದೆವು. ಇದನ್ನೆಲ್ಲಾ ನೋಡಿದ ಮಾವನ ಮಕ್ಕಳು ನಮ್ಮನ್ನು ಛೇಡಿಸುವುದಿತ್ತು. ಹಾದಿಯಲ್ಲಿ ಕೆಲವೊಮ್ಮೆ ಆನೆಯ ಲದ್ದಿಗಳನ್ನೂ ನೋಡಿದ್ದಿದೆ. ಎಲ್ಲಾದರೂ ಜಿಂಕೆ, ಕಡವೆ , ಸಾರಂಗಗಳು ನಮಗೆ ಕಾಣಸಿಗಬಹುದೇ ಎಂಬ ಬಾಲ್ಯ ಸಹಜ ಕುತೂಹಲದಿಂದ ಕಣ್ಣರಳಿಸಿ ಹುಡುಕುತ್ತಿದ್ದೆವು. ಯಾವುದೋ ಸರಸರ ಸಪ್ಪಳ ಕೇಳಿದರೆ ಕಾಡುಕೋಳಿ ಓಡಿಹೋಗಿರಬೇಕು ನೋಡಲಾಗುತ್ತಿತ್ತಲ್ಲಾ ಅಯ್ಯೋ ದೇವರೇ ಎಂದು ವಿಷಾದಪಡುವುದೂ ಇತ್ತು! ನೀರಿನ ಅವಳೆಗೆ ಮರದ ಬೊಡ್ಡೆಯೊಂದು ಅಡ್ಡ ಬಿದ್ದು ನೀರು ಬೇರೆಡೆಗೆ ಹರಿದುಹೋಗುತ್ತಿತ್ತಾದ್ದರಿಂದ ನೀರು ಕೆಳಪ್ರಾಂತದಲ್ಲಿರುವ ನಮ್ಮ ಜಮೀನಿಗೆ ಬರುವುದು ನಿಂತಿತ್ತು, ಇದು ಗಾಳಿ-ಮಳೆಯ, ಪ್ರಾಣಿಗಳ ಓಡಾಟದ ಪರಿಣಾಮವಾಗಿ ಆಗಾಗ ಮರುಕಳಿಸುವ ನೈಸರ್ಗಿಕ ಪ್ರಕ್ರಿಯೆಯಾಗಿತ್ತು.

ಜಮೀನಿನಲ್ಲಿ ಹಾಕಿರುವ ಮಾಳಗಳಲ್ಲಿ ಸಾಯಂಕಾಲದ ಹೊತ್ತಿಗೆ ಹೋಗಿ ಕೂತುಬಿಟ್ಟರೆ ಮಾವನ ಮಕ್ಕಳ ಜೊತೆಗೆ ಹುಲಿ, ಕರಡಿ, ಕತ್ತೆಕಿರುಬ ಮೊದಲಾದ ಪ್ರಾಣಿಗಳ ಸುದ್ದಿ. ಅವರುಗಳೂ ಆಗಾಗ " ಹುಲಿ ನಾಕು ದಿನದ ಕೆಳಗೆ ಅಲ್ಲಿ ಬಂದಿತ್ತು ಇಲ್ಲಿ ಬಂದಿತ್ತು " ಎಂಬ ಘಟನೆಗಳನ್ನು ಮೆಲುಕುಹಾಕುತ್ತಿದ್ದರು. ಜಮೀನಿನಲ್ಲಿ ಮಾವ ಸಾಕಿದ ಹಸುಕರು-ಹೋರಿಗಳು ನಿತ್ಯ ಕಾಡಿಗೆ ಹಸಿರು ಮೇವರಸಿ ಹೋಗುತ್ತಿದ್ದವು. ಸಾಯಂಕಾಲ ೫ ಗಂಟೆಗೆಲ್ಲಾ ಅವುಗಳನ್ನು ಹುಡುಕಿ ಮರಳಿಸಿಕೊಂಡು ಬರುತ್ತಿದ್ದರು. ಒಮ್ಮೆ ಒಂದು ಹೋರಿ ಗುಂಪಿನಿಂದ ಬೇರೆಯಾಗಿಬಿಟ್ಟಿತ್ತು. ಆ ದಿನ ಮಾವನವರಿಗೆ ಅದು ಹೇಗೂ ಹುಲಿಯ ಬಾಯಿಗೆ ಬಿತ್ತು ಎಂದೇ ಅನಿಸಿತ್ತಂತೆ. ಆ ರಾತ್ರಿ ಮಾವ ಮತ್ತು ಮನೆಯವರೆಲ್ಲಾ ಬಹಳ ಹೊತ್ತು ಚಿಂತೆಗೀಡಾಗಿದ್ದರು. ಮಾವ ಇನ್ನೇನು ಸರಿಯಾಗಿ ಊಟವನ್ನೂ ಮಾಡದೇ "ದೇವರು ಇಟ್ಟಹಾಗಾಗಲಿ” ಎಂದುಕೊಂಡು ಕೋವಿ ಹೆಗಲಿಗೇರಿಸಿಕೊಂಡು ಗದ್ದೆಯ ಮಾಳಕ್ಕೆ ಹೊರಟಿದ್ದಾಗ ಕೊಟ್ಟಿಗೆಯ ಹತ್ತಿರ ಬೆದರಿದ ಧ್ವನಿಯಲ್ಲಿ "ಅಂಬಾ ಅಂಬಾ " ಎಂದು ಒಂದೇ ಸಮನೆ ಕೂಗುತ್ತಿದ್ದ ಹೋರಿ ಕಂಡುಬಂದಿತ್ತು. ನಿಜ ಅದನ್ನು ಹುಲಿ ಅಟ್ಟಿಸಿಕೊಂಡು ಮೈಮೇಲೆ ಹಾರಿ ತನ್ನ ಪಂಜಾಗಳಿಂದ ಸಾಕಷ್ಟು ಹೊಡೆದಿತ್ತು. ಇಡೀ ಮೈಯ್ಯೆಲ್ಲಾ ರಕ್ತಸಿಕ್ತವಾಗಿತ್ತು. ಆದರೂ ಆ ಹೋರಿ ತಪ್ಪಿಸಿಕೊಂಡು ಬದುಕುಳಿದು ಬಂದಿತ್ತು! ಆ ಹೋರಿಯನ್ನು ನಾನೂ ಕಣ್ಣಾರೆ ಕಂಡಿದ್ದೇನೆ. ಅದರ ಮೈಮೇಲೆ ಕೆಲವೆಡೆ ಮಾಸಿದ ಗಾಯದ ಕಲೆಗಳಿದ್ದವು. [ಇದಾದ ಕೆಲವು ವರ್ಷಗಳನಂತರ ’ಗಾಂವ್ ಕಾ ಶೇರ್’ ಹಿಂದೀ ಪಾಠವನ್ನು ನಾನೋದಿದ್ದೆ. ಅದರಲ್ಲಿರುವ ಹೋರಿಗೂ ನಾನು ಹೇಳಿದ ಹೋರಿಗೂ ವ್ಯತ್ಯಾಸ ಕಾಣಲಿಲ್ಲ.] ಇಂತಹ ರೋಮಾಂಚಕ ಕಾನನದ ಕಥೆಗಳು ಮಕ್ಕಳಾದ ನಮ್ಮನ್ನು ಬಹಳವಾಗಿ ತಟ್ಟುತ್ತಿದ್ದವು.

ಹುಲಿ ಹೇಗಿರಬಹುದು? ಅದು ಪೊದೆಯೊಳಗೆ ಅಡಗಿ ಕೂತು ಹೇಗೆ ಕದ್ದು ನೋಡಬಹುದು? ಹುಲಿಗೂ ಚಿರತೆಗೂ ಎದುರಾ ಬದುರಾ ಸಿಕ್ಕಿ ಜಗಳವಾದರೆ ಯಾವುದು ಗೆಲ್ಲಬಹುದು? ಚಿರತೆಯ ಕೂಗು ಹುಲಿಯ ಕೂಗಿಗಿಂತ ಭಿನ್ನ ಹೇಗೆ ? ಅಷ್ಟೆತ್ತರದ ಆನೆ ಮನಸ್ಸು ಮಾಡಿ ಕಾಲಿನಿಂದ ಝಾಡಿಸಿ ಒದ್ದರೆ ಹುಲಿಯೆಲ್ಲಾ ಯಾವ ಮಹಾ ಅಲ್ಲವೇ? ---ಎಂಬೀಥರದ ನೂರಾರು ಪ್ರಶ್ನೆ-ಮರುಪ್ರಶ್ನೆಗಳು ಉದ್ಭವಿಸಿ ಹುಲಿಯ ಬರುವಿಕೆಯನ್ನು ನಿರೀಕ್ಷಿಸುತ್ತಾ ಮಾಳದಲ್ಲೇ ಕಾಯುತ್ತಿದ್ದೆವು! [ಅಂದಿಗೆ ನಮಗೆ ನ್ಯಾಷನಲ್ ಜಿಯಾಗ್ರಫಿಕ್ ಮುಂತಾದ ವಾಹಿನಿಗಳಾಗಲೀ, ಟಿವಿ ಮಾಧ್ಯಮವಾಗಲೀ ಇರಲಿಲ್ಲವಲ್ಲಾ...ಅಸಲಿಗೆ ಬಹಳ ಹೊತ್ತು ವಿದ್ಯುತ್ ಸೌಲಭ್ಯ ಇರುವುದೇ ದೊಡ್ಡ ಉಪಕಾರವಾಗುತ್ತಿತ್ತು, ಹಾಗಂತ ಜಮೀನಿನಲ್ಲಿ ನಾವು ಪ್ರಾಥಮಿಕ ಶಾಲೆ ಮುಗಿಸುವವರೆಗೂ ವಿದ್ಯುತ್ ಸೌಲಭ್ಯ ಇರಲಿಲ್ಲ.] ಕತ್ತಲಾದಮೇಲೆ ಬ್ಯಾಟರಿ ಡೌನ್ ಆದ ವಾಹನದಂತೇ ನಮ್ಮ ಗತಿ ! ಒಳಗೊಳಗೇ ಪುಕುಪುಕು ಆರಂಭವಾಗಿ ಕಕ್ಕಸು ಬಂದೇ ಬಿಡುತ್ತದೇನೋ ಎಂದು ಭಾಸವಾಗಿ ನಿಧಾನಕ್ಕೆ ಎತ್ತರದ ಮಾಳದಿಂದ ಕೆಳಗಿಳಿದು ನಾವು ಮಾಳಕ್ಕೆ ಹೋಗಿದ್ದೇ ಸುಳ್ಳು ಎನ್ನುವ ರೀತಿಯಲ್ಲಿ ಮನೆ ಸೇರಿಕೊಳ್ಳುತ್ತಿದ್ದೆವು! [ಯಾರಿಗೋ ಹೇಳಬೇಡಿ,
ಇದು ನಮ್ನಿಮ್ಮಲ್ಲೇ ಆದ್ರಿಂದ ಹೇಳ್ತಾ ಇದೇನೆ; ಹುಲಿ ವಿಷಯ ನೋಡಿ! ಸಾಮಾನ್ಯದ್ದಾದ್ರೆ ತೊಂದ್ರೆ ಇಲ್ಲ, ಹಾಗೆಲ್ಲಾ ಹೆದರೋ ಮರಿಗಳಲ್ಲ ನಾವು ...... ಸುಮ್ನೆ ಯಾಕೆ ಅಂತ ಅಷ್ಟೇ!]


[ ಬಹಳ ವಿಸ್ತೃತವಾದುದರಿಂದ ಮುಂದಿನ ಭಾಗದಲ್ಲಿ ಓದೋಣ ಆಗದೇ... ?]

Thursday, January 26, 2012

ಪದ್ಮಶ್ರೀ ಪಡೆದ ಯಕ್ಷನಟಸಾರ್ವಭೌಮನಿಗೆ ಅಕ್ಷರಾಭಿನಂದನೆಗಳು !

ಭಸ್ಮಾಸುರ ವೇಷದ ಚಿತ್ರ ಋಣ : ಪ್ರಕಾಶ್ ಹೆಗಡೆ

ಪದ್ಮಶ್ರೀ ಪಡೆದ ಯಕ್ಷನಟಸಾರ್ವಭೌಮನಿಗೆ ಅಕ್ಷರಾಭಿನಂದನೆಗಳು !

ಹಳ್ಳಿ ಕೊಂಪೆಯ ಮುಗ್ಧ ಬಾಲಕನೊಬ್ಬನಿಗೆ ನರ್ತಿಸುವುದೇ ಬೇಕಾದದ್ದಾಗಿತ್ತು. ಹೇಳಿಕೇಳಿ ಶಾಲೆಗಳೂ ಜಾಸ್ತಿ ಇಲ್ಲದ ಕುಗ್ರಾಮಗಳ ಬೀಡಾದ ಉತ್ತರಕನ್ನಡದ, ಹೊನ್ನಾವರದ, ಹೊಸಾಕುಳಿಯಲ್ಲಿ ಚಿಟ್ಟಾಣಿ ಎಂಬುದೊಂದು ಚಿಕ್ಕ ಮಜರೆ! ಭಾಸ್ಕೇರಿ ಹೊಳೆಯ ಬದುವಿನಲ್ಲಿನ ಚಿಕ್ಕ ಕೇರಿ ಚಿಟ್ಟಾಣಿ ಒಬ್ಬನೇ ವ್ಯಕ್ತಿಯಿಂದಾಗಿ ಆ ಹೆಸರನ್ನೇ ಹಲವು ಜನ ಮೆಲುಕುವಂತೇ ಆದದ್ದು ಚಿಟ್ಟಾಣಿ ವಾಸಿಗರ ಸೌಭಾಗ್ಯ! ಅಂಗಳದ ತುದಿಯ ಬಚ್ಚಲ ಮೂಲೆಯಲ್ಲಿದ್ದ ಮಶಿನಿಂಗಳ[ಇದ್ದಿಲು]ವನ್ನು ತೇಯ್ದು ಕಪ್ಪು ಬಣ್ಣವನ್ನೂ ಕೆಮ್ಮಣ್ಣು,ಅರಿಶಿನ-ಕುಂಕುಮಗಳಿಂದ ಉಳಿದ ಬಣ್ಣಗಳನ್ನೂ ಮಾಡಿ ಆಡುತ್ತಿದ್ದ ಅಂದಿನ ಆ ದಿನಗಳಲ್ಲಿ ಹಿರಿಯರ ಕಣ್ಣುತಪ್ಪಿಸಿ ಹೊರಟಿದ್ದು ಗುಡ್ಡಧರೆಗಳ ಸಮತಟ್ಟಿನ ಪ್ರದೇಶಗಳಿಗೆ! ಶಾಲೆ ಕಲಿ ಎಂದು ತೀರಾ ಒತ್ತಾಯಿಸುವವರಿಲ್ಲ, ಖರ್ಚಿಗೆ ಜಾಸ್ತಿ ಹಣವೂ ಇಲ್ಲದ ಬಡಸ್ತಿಕೆಯಲ್ಲಿ ಮಗ ದೊಡ್ಡವನಾಗಿ ಇರುವ ಏನೋ ಅಲ್ಪ ಅಡಕೆ-ಪಡಕೆ ತೋಟ-ಗದ್ದೆಗಳಲ್ಲಿ ಕಾಟಾಕಸರಿ ಕೆಲಸಮಾಡಿಕೊಂಡು ಬದುಕನ್ನು ನಡೆಸಲಿ ಎಂಬುದು ಹಿರಿಯರ ಅಪೇಕ್ಷೆಯಾಗಿತ್ತು. ಆದರೆ ಮಗನ ಮನಸ್ಸಿನ ಭಾವನೆಗಳು ಕುಣಿಯತೊಡಗಿದ್ದು ಅವರಿಗೆ ಅರ್ಥವಾಗಿರಲೇ ಇಲ್ಲ!

ಚಿಟ್ಟಾಣಿ ಎಂಬೀ ಮಜರೆ ನಮ್ಮೂರಿಗೆ ಕೂಗಳತೆಯ ದೂರದ ಜಾಗ! ಬಾಲ್ಯದಿಂದಲೂ ನಾನು ಈ ಚಿಟ್ಟಾಣಿಯನ್ನೂ ಮತ್ತು ನಮ್ಮ ಕಲಾವಿದ ಚಿಟ್ಟಾಣಿಯನ್ನೂ ಕೇಳಿಬಲ್ಲೆ. ಶಾಲೆ ಓದದ ಬಾಲಕನಿಗೆ ಮಾತಿನ ಗಮ್ಮತ್ತು ಮೈಗೂಡಿರಲಿಲ್ಲ! ಸಾಹಿತ್ಯಕ ಶಬ್ದಭಂಡಾರವಿರಲಿಲ್ಲ. ಅವರದೇನಿದ್ದರೂ ಬರೇ ನರ್ತನ, ಹಾವ-ಭಾವ. ಮೋಹಿನಿಗೆ ಕಣ್ಣು ಹೊಡೆಯುವ ಭಸ್ಮಾಸುರನನ್ನು ನೋಡಿ ಅದೆಷ್ಟು ಜನ ಅದನ್ನೇ ಅಭ್ಯಾಸಮಾಡಿಯೂ ವಿಫಲರಾದರೋ ಗೊತ್ತಿಲ್ಲ! ಕಾಲು ಹಿಂದಕ್ಕೆ ಅಡ್ಡಡ್ಡ ಬೀಸುವ ಚಿಟ್ಟಾಣಿ ಕುಣಿತವೆಂದೇ ಕರೆಸಿಕೊಂಡ ಆ ಮಟ್ಟು ಯಕ್ಷರಂಗದಲ್ಲೇ ಬೇರೇ ಯಾರಿಗೂ ಸಾಧ್ಯವಾಗಲಿಲ್ಲ. ಬಾಲಕ ಯುವಕನಾಗುವ ಹೊತ್ತಿಗೆ ಆಗಿನ್ನೂ ಯಕ್ಷಕಲೆಗೆ ಅಷ್ಟೊಂದು ಪ್ರೋತ್ಸಾಹವಿರಲಿಲ್ಲ. ಕೆಲಸಕ್ಕೆ ಬಾರದವರು ಯಕ್ಷಗಾನ ಕುಣೀತಾರೆ ಎಂಬರ್ಥವೂ ಇತ್ತು ಎಂದಿಟ್ಟುಕೊಳ್ಳೋಣ! ಹುಡುಗಿ ಕೊಟ್ಟು ಮದುವೆಮಾಡುವುದಂತೂ ಯಾವ ಮಾವಂದಿರಿಗೂ ತೆಗೆದು ಹಾಕಿದ ವಿಷಯ! ಇಂತಹ ಕಾಲಘಟ್ಟದಲ್ಲಿ ಹಲವು ವೈರುಧ್ಯಗಳ ನಡುವೆ ತಾನು ಯಕ್ಷಗಾನಕ್ಕೇ ಮೀಸಲು ಎಂದು ಅದನ್ನೇ ಆತುಕೊಂಡ ಕಲಾವಿದ ರಾಮಚಂದ್ರ ಹೆಗಡೆಯವರು.

ವಾಸ್ತವಿಕವಾಗಿ ಮೂಡಲಪಾಯ ನಿಜವಾದ ಯಕ್ಷಗಾನವಲ್ಲ. ಯಕ್ಷಗಾನವೆಂಬುದು ಜಾನಪದವೂ ಅಲ್ಲ. ಯಕ್ಷಗಾನಕ್ಕೆ ದಕ್ಷಿಣೋತ್ತರಕನ್ನಡ [ಅಂದಿನ ಅವಿಭಜಿತ]ಜಿಲ್ಲೆಗಳ ಅನೇಕ ಕವಿಗಳ ರಸಭಾವಗಳು ಹೊಮ್ಮಿದ ಚಂದದ ಕೃತಿಗಳ ಆಧಾರವಿದೆ. ಯಕ್ಷಗಾನವೊಂದು ಸಮಗ್ರ ಕಲೆ ಎಂಬುದನ್ನು ಯಕ್ಷಗಾನದ ಕುರಿತಿರುವ ಹಿಂದಿನ ನನ್ನ ಬರಹಗಳಲ್ಲಿ ಎಷ್ಟೋ ಸಲ ಹೇಳಿದ್ದೇನೆ. ಮಹಾವಿಷ್ಣುವಿನ ದಶಾವತಾರದ ಪೌರಾಣಿಕ ಪ್ರಸಂಗಗಳನ್ನೇ ಇಲ್ಲೂ ಪ್ರಸಂಗಗಳೆಂದೇ ಬರೆದಿದ್ದಾರೆ! ತೆಂಕು, ಬಡಗು, ಬಡಾಬಡಗುಗಳೆಂಬ ಮೂರು ತಿಟ್ಟುಗಳಲ್ಲಿ ಯಕ್ಷಗಾನ ಪ್ರತಿಪಾದಿತವಾಗಿ ಇನ್ನೂ ಊರ್ಜಿತವಾಗಿದೆ. ತೆಂಕಿನ ವೇಷಗಳಲ್ಲಿ ನೃತ್ಯ ಮತ್ತು ಹಾವ-ಭಾವಕ್ಕೆ ಹೆಚ್ಚಿನ ಆದ್ಯತೆ ನೀಡದೇ ಆಕರ್ಷಕ ಬಣ್ಣಗಾರಿಕೆ ಮತ್ತು ಕಥಕ್ಕಳಿಯನ್ನು ಹೋಲುವ ವೇಷಭೂಷಣಗಳನ್ನು ಅಳವಡಿಸಿದ್ದರೆ ಬಡಗು ಮತ್ತು ಬಡಾಬಡಗುಗಳಲ್ಲಿ ಯಕ್ಷಗಾನಕ್ಕೆ ಪೊಗಡೆ, ಕಿರೀಟ ಇತ್ಯಾದಿಗಳೂ ಸೇರಿದಂತೇ ಅದರದ್ದೇ ಆದ ಸ್ವಂತಿಕೆಯ ವೇಷಭೂಷಣಗಳು ಅಳವಡಿಸಲ್ಪಟ್ಟಿವೆ. ಸಮಗ್ರ ಕಲೆಯ ದಿವ್ಯಾನುಭೂತಿಯನ್ನು ಬಡಾಬಡಗು ತಿಟ್ಟಿನಲ್ಲಿ ಮಾತ್ರ ಪರಿಪೂರ್ಣವಾಗಿ ಅನುಭವಿಸಲು ಸಾಧ್ಯ. ಕೇವಲ ಚಂಡೆ, ಮದ್ದಳೆ, ಹಾರ್ಮೋನಿಯಂ ಮತ್ತು ತಾಳಗಳಿಂದ ಹೊರಹೊಮ್ಮುವ ಕರ್ಣಾನಂದಕರ ಸಂಗೀತಕ್ಕೆ ಮರುಳಾಗದ ಜನವಿಲ್ಲ! ಯಾಕೆಂದರೆ ಯಕ್ಷಗಾನದಲ್ಲಿರುವ ಪ್ರತೀ ಹಾಡುಗಳೂ ಅಂದಿನ ಕವಿಗಳು ಹೊಸೆದವಾಗಿದ್ದು ಎಲ್ಲವೂ ಪ್ರಾಸಬದ್ಧವಾಗಿಯೂ ಛಂದೋಬದ್ಧವಾಗಿಯೂ, ವ್ಯಾಕರಣ ಶುದ್ಧವಾಗಿಯೂ ಇವೆ. ನನಗೆ ಸಾಹಿತ್ಯದ ಗೀಳು ಹಿಡಿಸಿದ್ದೇ ನಮ್ಮ ಈ ಯಕ್ಷಗಾನ ಕಲೆ. ಪುರಾತನ ಭಾರತದ ಮೂಲ ಸಂಸ್ಕೃತಿಯ ಮೌಲ್ಯಗಳನ್ನೂ ಆದರ್ಶಗಳನ್ನೂ ಎತ್ತಿ ಹಿಡಿಯುವ ಯಕ್ಷಗಾನ ಪುಸ್ತಕಗಳನ್ನೂ/ಮಹದ್ಗ್ರಂಥಗಳನ್ನೂ ಓದಲಾಗದ ಜನತೆಗೆ ಪೌರಾಣಿಕ ಕಥಾಹಂದರಗಳ ಮೂಲಕ ಅವುಗಳನ್ನು ತಲ್ಪಿಸುವಲ್ಲಿ ಯಶಸ್ವಿಯಾಗಿದೆ; ಚಿಕ್ಕ ಹುಡುಗನಾಗಿದ್ದ ಆ ಕಾಲದಲ್ಲಿ ಅದರ ಫಲಾನುಭವಿಗಳಲ್ಲಿ ನಾನೂ ಒಬ್ಬ!

ಚಿಟ್ಟಾಣಿಯವರ ಮೇಲೆ ನಾನು ಬರೆಯುತ್ತಿರುವುದು ಇದೇ ಮೊದಲಲ್ಲ; ಇದಕ್ಕೂ ಮೊದಲಿನ ಕಥೆಯನ್ನು ಇಲ್ಲಿ ನೀವು ಓದಬಹುದಾಗಿದೆ : ನಿನ್ನಯ ಬಲು ಹೇಳು ಮಾರುತಿಯನ್ನು ನಿರೀಕ್ಷಿಪೆನು.....ಚಿಕ್ಕ ವಯಸ್ಸಿನಲ್ಲಿ ನಾವೆಲ್ಲಾ ಕೇಳಿದ್ದು ಯಕ್ಷಗಾನದಲ್ಲಿ ಮೂಡ್ಕಣಿ ನಾರಾಯಣ ಹೆಗಡೆ, ಮೂರೂರು ದೇವರು ಹೆಗಡೆ, ಕಾಸರಕೋಡ ಸದಾನಂದ ಹೆಗಡೆ, ಕರ್ಕಿ ಪರಮ ಹಾಸ್ಯಗಾರರು, ಇವೇ ಮೊದಲಾದ ಹಳೆಯ ತಲೆಮಾರಿನ ಹೆಸರುಗಳು. ಆಗೆಲ್ಲಾ ಯಕ್ಷಗಾನವೆಂದರೆ ಬಯಲಾಟವೆಂದೇ ಕರೆಯುತ್ತಿದ್ದರು! ಬೇಸಿಗೆಯಲ್ಲಿ ಊರ ಪಕ್ಕದ ಗದ್ದೆ ಬಯಲುಗಳಲ್ಲಿ ಆಡುವ ಆಟ ಬಯಲಾಟ ಎನಿಸಿಕೊಂಡಿತ್ತು. ನಂತರ ಕೆರೆಮನೆ ಶಿವರಾಮ ಹೆಗಡೆಯವರು ಅದಕ್ಕೆ ಮೇಳದ ರೂಪಕೊಟ್ಟು ತಂಬು[ಟೆಂಟ್] ವ್ಯವಸ್ಥೆ, ರಂಜಸಜ್ಜಿಕೆಯ ವ್ಯವಸ್ಥೆ ಪರಿಕಲ್ಪಿಸಿಕೊಂಡು ವಾಣಿಜ್ಯದ/ವೃತ್ತಿಯ ಮೇಳವಾಗಿ ಮುನ್ನಡೆಸಿದರು. ಕಾಸರಕೋಡ ಸದಾನಂದ ಹೆಗಡೆಯವರ ಕೊನೆಯ ಪಾತ್ರ[ ೯೦ಕ್ಕೂ ಹೆಚ್ಚು ವಯಸ್ಸಿನ ಮುದುಕರಾಗಿದ್ದರಿಂದ ಕೇವಲ ವೇಷಹಾಕಿ ಮಾತಿನಾಡಿದ ಪಾತ್ರ], ಕೆರೆಮನೆ ಶಿವರಾಮ ಹೆಗಡೆಯವರ ಪಾತ್ರ, ಇತ್ತೀಚಿನವರೆಗೂ ಬದುಕಿದ್ದ ಕೆರೆಮನೆ ಶಂಭು ಹೆಗಡೆ-ಮಹಾಬಲ ಹೆಗಡೆಯವರುಗಳ ಪಾತ್ರವನ್ನು ನೋಡಿದ ಅನುಭವವಿದೆ. ಅದೇ ರೀತಿ ಚಿಟ್ಟಾಣಿಯವರ ಹಲವು ಪಾತ್ರಗಳನ್ನೂ ನಾನು ನೋಡಿದ್ದೇನೆ. ಒಬ್ಬೊಬ್ಬರಲ್ಲೂ ಭಿನ್ನ ಭಿನ್ನ ತಿಟ್ಟು ಸಾಮರ್ಥ್ಯಗಳನ್ನು ಕಂಡಿದ್ದೇನೆ. ನರ್ತನದಲ್ಲಿ ಚಿಟ್ಟಾಣಿಯವರಷ್ಟು ವೈಶಿಷ್ಟ್ಯ ಒಗ್ಗೂಡಿಸಿ ಮೆರೆದ ಕಲಾವಿದ ನನಗೆ ಬೇರೇ ಸಿಗಲಿಲ್ಲ!

ಒಂದಕೊಟ್ಟರೆ ಶಿವ ಇನ್ನೊಂದ ಕೊಡ ಎನ್ನುವಂತೇ ಅಭಿನಯ ಚಾತುರ್ಯವನ್ನು ಸಂಪೂರ್ಣವಾಗಿ ಅನುಗ್ರಹಿಸಿದ್ದ ಭಗವಂತ ಚಿಟ್ಟಾಣಿಗೆ ಮಾತುಗಾರಿಕೆಯ ಪ್ರಾವೀಣ್ಯತೆಯನ್ನು ಕೊಡಲಿಲ್ಲ. ಏನಿದ್ದರೂ ಕುಣಿತದಲ್ಲಿ-ಹಾವಭಾವ ಭಂಗಿಗಳಲ್ಲೇ ರಥ ಮುಂದಕ್ಕೆ ಹೊಡೆದುಕೊಂಡು ಹೋಗಬೇಕಾಗಿತ್ತು. ಆ ಅನಿವಾರ್ಯತೆ ಅವರನ್ನು ಚಿಂತನೆಗೆ ಹಚ್ಚಿ ಜನರನ್ನು ಕೇವಲ ತನ್ನ ಮುಖವರ್ಣಿಕೆ, ಮುಖದ ನರನಾಡಿಗಳಲ್ಲೂ ಕಣ್ಣುಗಳಲ್ಲೂ ಭಾವಸ್ಪಂದನ, ವಿಶಿಷ್ಟ ಭಂಗಿಗಳ ಕುಣಿತ ಇವುಗಳಿಂದಲೇ ತನ್ನತ್ತ ಸೆಳೆದುಕೊಂಡು ರಂಜಿಸುವ ಗತ್ತುಗಾರಿಕೆಯನ್ನು ಅವರು ಬೆಳೆಸಿಕೊಂಡರು. ಅಂದಿನ ಸಮಾಜದ ಅನೇಕರು ಅಕ್ಷರ ಓದಲು ಬಾರದ ಜನರಾಗಿದ್ದರೂ ಅಸಂಸ್ಕೃತರೇನಲ್ಲವಲ್ಲಾ ! ಮನುಷ್ಯನಿಗೆ ಮೂಲಭೂತವಾಗಿ ಬೇಕಾಗುವುದೇ ಆಂಗಿಕಾಭಿನಯ. ಇದನ್ನೇ ಬಾಡೀ ಲ್ಯಾಂಗ್ವೇಜ್ ಎನ್ನುತ್ತಾರಲ್ಲಾ, ಅಂತಹ ಬಾಡೀ ಲ್ಯಾಂಗ್ವೇಜ್ ಮೂಲಕವೇ ಚಿಟ್ಟಾಣಿ ಚಪ್ಪಾಳೆ ಗಿಟ್ಟಿಸಿದರು; ಒಪ್ಪುವಂತೇ ಮಂದಿಗೆ ಪಾತ್ರವನ್ನು ತೋರಿಸಿದರು. ದುರುಳರ ಪಾತ್ರಗಳಲ್ಲಿ ಅವರ ಪರಕಾಯಪ್ರವೇಶವೇ ಆಗಿಬಿಟ್ಟಿರುತ್ತಿತ್ತೋ ಎನ್ನುವಂತೇ ಅಂತಹ ಪಾತ್ರಗಳು ರಂಗಸ್ಥಳಕ್ಕೆ ಪ್ರವೇಶಿಸುವಾಗಲೇ ಅತಿವಿಶಿಷ್ಟ ಗತ್ತನ್ನು ಮೆರೆದ ತಾಕತ್ತು ಅವರದ್ದು. ನಾನಿನ್ನೂ ಹರೆಯಕ್ಕೆ ಬರುವ ಮೊದಲು ಕೊಳಗದ್ದೆ ತೇರಿನಲ್ಲೋ ಕವಲಕ್ಕಿಯಲ್ಲೋ ನಡೆಸಿದ [ಅಂದು ಅವರು ಅಮೃತೇಶ್ವರೀ ಯಕ್ಷಗಾನ ಮಂಡಳಿಯಲ್ಲಿದ್ದರು]ಆಟಗಳಲ್ಲಿ ಜನ ಟೆಂಟು ಹರಿಯುತ್ತಿದ್ದರು--ಇದರರ್ಥ ಏನೆಂದರೆ ಪ್ರೇಕ್ಷಕರು ಎಲ್ಲೆಲ್ಲಿಂದಲೋ ಕಿತ್ತೆದ್ದು ಬಂದು ಟಿಕೆಟ್ ಸಿಗದಾಗ ವಾಪಸ್ಸು ಹೋಗುವ ಪರಿಪಾಟ ಇರಲಿಲ್ಲ, ಬದಲಾಗಿ ಮೇಲೆಬಿದ್ದು ಹೇಗಾದರೂ ಮಾಡಿ ಒಳಗೆ ಪ್ರವೇಶ ಪಡೆದು ನಿಂತೇ ನೋಡಿದ ದಾಖಲೆಗಳು ಇವೆ.



ಉತ್ತರಕನ್ನಡದ ಹೊನ್ನಾವರದ ಗುಂಡಬಾಳೆ ವರ್ಷದಲ್ಲೀಗ ೬ ತಿಂಗಳು ಸತತ ಒಂದೇ ಕಡೆ ಯಕ್ಷಗಾನ ನಡೆಯುವ ಸ್ಥಳವಾಗಿದೆ. ಮೊದಲು ೩-೪ ತಿಂಗಳು ಮಾತ್ರ ನಡೆಯುತ್ತಿತ್ತು. ಅಲ್ಲಿನ ಮುಖ್ಯಪ್ರಾಣನಿಗೆ ಯಕ್ಷಗಾನವೆಂದರೆ ಎಲ್ಲಿಲ್ಲದ ಪ್ರೀತಿ! ಆತ ಜನರಿಂದ ಕೇಳುವ ಅತಿದೊಡ್ಡ ಹರಕೆಯೇ ಅದು! ಆತನ ಎದುರಿಗೆ ಯಕ್ಷಗಾನ ನಡೆಸಿ ಕಲಾವಿದರಿಗೆ ಸಂಭಾವನೆ ಕೊಡುವುದು ಒಂದು ಸೇವೆ. ಆ ಸೇವೆಯಿಂದ ಭಕ್ತ-ಭಾವುಕ ಜನರ ಇಷ್ಟಾರ್ಥ ಸಿದ್ಧಿ ! ಅದು ಇಂದಿಗೂ ನಡೆದಿದೆ. ಚಿಟ್ಟಾಣಿ ಮತ್ತು ಅವರ ಸಮಕಾಲೀನ ಬಹುತೇಕ ಕಲಾವಿದರು ಅಲ್ಲಿಯೇ ಅನೇಕ ದಿನಗಳಕಾಲ ಪಾತ್ರಪೋಷಿಸಿದ್ದಾರೆ. ಈಗಲೂ ವರ್ಷಕೊಮ್ಮೆಯಾದರೂ ಒಂದು ಪಾತ್ರವನ್ನು ಮಾಡಿ ಮುಖ್ಯಪ್ರಾಣನಿಗೆ ನಮಿಸಿ ಬರುವುದು ಅವರ ವಾಡಿಕೆ. ನಾವು ಚಿಕ್ಕವರಿದ್ದಾಗ ಅಲ್ಲಿಗೆ ವಾಹನ ಸೌಕರ್ಯ ಇರಲಿಲ್ಲ. ಅಡವಿಯ ಹಾದಿ. ಕಾಲುನಡಿಗೆಯಲ್ಲೇ ತೆರಳಬೇಕು. ನಮ್ಮೂರಿಂದ ಗುಂಡಬಾಳೆ ೬. ಕಿ. ಮೀ ದೂರ. ಚಿಟ್ಟಾಣಿ ಅಲ್ಲಿಗೆ ಬರುವುದು ಅನಿರೀಕ್ಷಿತವಾಗಿರುತ್ತಿತ್ತು. ಆದರೂ ಯಾವ ಜಾಹೀರಾತು ಕೂಡ ಇರದೇ ಚಿಟ್ಟಾಣಿ ಬರುತ್ತಾರೆ ಎಂಬ ಮೂಗ್ಗಾಳಿಯಿಂದಲೇ ಸುತ್ತಲ ಹತ್ತಾರು ಹಳ್ಳಿಗಳ ಜನ ಸಾವಿರ ಸಾವಿರ ಸಂಖ್ಯೆಯಲ್ಲಿ ಜಮಾಯಿಸಿ ಬಿಡುತ್ತಿದ್ದರು! ಒಂದೊಂದು ಪದ್ಯಕ್ಕೂ ಚಪ್ಪಾಳೆ ಚಪ್ಪಾಳೆ ಚಪ್ಪಾಳೆ! ಕಣ್ಣಿನ ಚರ್ಯೆಯನ್ನು ಗಮನಿಸಲಾಗಿ ಇಂತಿಂಥಾ ಕಡೆಗೇ ಕೂತುಕೊಳ್ಳ ಬಯಸುವ ಜನರೂ ಪ್ರೇಕ್ಷಕ ಗಣದಲ್ಲಿರುತ್ತಿದ್ದರು!

ಯಕ್ಷಗಾನದ ಮುಮ್ಮೇಳದ ಕಲಾವಿದನಿಗೆ ಹಿಮ್ಮೇಳದ ಉತ್ತಮ ಕಲಾವಿದರ ಸಾಥ್ ಬಹಳ ಮುಖ್ಯ. ಅಲ್ಲಿ ಕೆಲಸಕ್ಕೆ ಬಾರದ ವೃತ್ತಿಪರರಲ್ಲದ, ನಿಪುಣರಲ್ಲದ ಜನರಿದ್ದರೆ ಎಂತಹ ಕಲಾವಿದನನ್ನೂ ಅದು ಕಂಗೆಡಿಸುತ್ತದೆ. ಅಂತಹ ಸನ್ನಿವೇಶಗಳಲ್ಲೂ ತಾವೇ ತೂಗಿಸಿಕೊಂಡು ಹೋಗುವ ಚಾಕಚಕ್ಯತೆ ಚಿಟ್ಟಾಣಿಗೆ ಇತ್ತೆಂದರೆ ಜನ ಅವರನ್ನು ಎಷ್ಟು ಬಯಸಿದ್ದರು ಎಂಬುದನ್ನು ತಾವು ಅರಿತುಕೊಳ್ಳಬಹುದು. ಗುಂಡ್ಮಿ ಕಾಳಿಂಗ ನಾವುಡರು ಬಂದಮೇಲೆ ಭಾಗವತಿಕೆಯಲ್ಲಿ ಹೊಸ ಆಯಾಮಗಳನ್ನು ಅವರು ಹುಟ್ಟುಹಾಕಿದರು! ದುರ್ಗಪ್ಪ ಗುಡಿಗಾರರು ಮದ್ದಳೆಯನ್ನು ಮಾತನಾಡಿಸುತ್ತಿದ್ದರು ! ಇಂತಹ ಹಿಮ್ಮೇಳದ ಜೊತೆ " ನೀಲ ಗಗನದಲಿ ಮೋಡಗಳಾ ಕಂಡಾಗಲೆ ....ನವಿಲು ಕುಣಿಯುತಿದೆ .." ಎಂಬ ಶೃಂಗಾರ ರಸಪೂರಿತ ಸನ್ನಿವೇಶಕ್ಕೆ ಚಿಟ್ಟಾಣಿ ನವಿಲನ್ನೂ ನಾಚಿಸುವ ರೀತಿ ನರ್ತಿಸುತ್ತಿದ್ದನ್ನು ಕಣ್ಣಾರೆ ಕಂಡಿದ್ದೇನೆ. ಇಂದು ಆ ಕಾಳಿಂಗನಾವುಡರಾಗಲೀ ದುರ್ಗಪ್ಪ ಗುಡಿಗಾರರಾಗಲೀ ಬದುಕಿಲ್ಲ. ಆದರೂ ಹೊಸ ಪೀಳಿಗೆಯ ಹಿಮ್ಮೇಳದ ಜೊತೆಗೆ ಹೆಜ್ಜೆಹಾಕುತ್ತಿರುವ ಚಿಟ್ಟಾಣಿಯವರಿಗೆ ಅದಾಗಲೇ ೭೭ ತುಂಬಿದೆ ಎಂದರೆ ನಂಬಲೂ ಆಗುತ್ತಿಲ್ಲ! ದೇಶ-ವಿದೇಶಗಳಲ್ಲಿ ಅವರಾಗಲೇ ಕುಣಿದು, ನರ್ತಿಸಿ, ಯಕ್ಷಗಾನ ಪ್ರದರ್ಶಿಸಿ ಹೆಸರುವಾಸಿಯಾಗಿದ್ದಾರೆ ಎಂಬುದು ಮಾತ್ರ ಗೊತ್ತು.

೬೦ ವಯಸ್ಸಿನ ನಂತರ " ನಮ್ದೆಲ್ಲಾ ಇನ್ನೆಂಥದಪ್ಪಾ ಊರು ಹೋಗು ಹೇಳ್ತು ಕಾಡು ಬಾ ಹೇಳ್ತು " ಎನ್ನುತ್ತಾ ಮೊಳಕಾಲುಗಳಿಗೆ ಎಣ್ಣೆ ಉಜ್ಜಿಕೊಳ್ಳುತ್ತಾ ಇರುವ ಅನೇಕರಿಗೆ ಚಿಟ್ಟಾಣಿ ಸೊಂಟ ಕುಲುಕಿಸಿ ಚಟ್ಟನೆ ಜಿಗಿಯುತ್ತಾ ಕುಣಿಯುವ ದೃಶ್ಯಕಂಡಾಗ ಏನಿದು ವಿಚಿತ್ರ ಎನ್ನಿಸಬಹುದು. ಚಿಟ್ಟಾಣಿಯ ಶರೀರದ ಎಂಜಿನ್ನಿಗೆ ಯಾವ ಕೀಲೆಣ್ಣೆಯನ್ನು ಪರಮಾತ್ಮ ಕೊಟ್ಟಿರಬಹುದು? ಸದಾ ಬೀಡಿ ಸೇದುವ ಚಿಟ್ಟಾಣಿಗೆ ಕವಳದ ಹಿಡಿಸುವುದಿಲ್ಲ. ಮೋಟು ಬೀಡಿಯನ್ನೂ ಕೈಗೆ ಇನ್ನೇನು ಬೆಂಕಿತಾಗುತ್ತದೆ ಎನ್ನುವವರೆಗೂ ದಮ್ಮು ಎಳೆದು ಆಮೇಲೆ ಬಿಸಾಕಿದರೇ ಅವರಿಗೆ ಸಮಾಧಾನ! ಚೌಕಿಯಲ್ಲಿ ವೇಷಕಟ್ಟಿಕೊಂಡು ಹಚ್ಚಿದ ಬೀಡಿಕಚ್ಚಿಕೊಂಡು ಅದರ ಹೊಗೆ ಒಳಗೂ ಹೊರಗೂ ಆಡುತ್ತಿರುವಾಗಲೇ ಅಲ್ಲೇ ಮುಂದಿನ ತನ್ನ ವೇಷದ ಪರಿಪೂರ್ಣ ಪರಿಕಲ್ಪನೆಯನ್ನು ಮನದಲ್ಲಿ ರೂಪಿಸಿಕೊಳ್ಳುವ ಚಿಟ್ಟಾಣಿಗೆ ಬೀಡಿ ಇಲ್ಲದಿದ್ದರೆ ಆಗುವುದೇ ಇಲ್ಲ! ಬೀಡೀ ಸೇದುವುದರಲ್ಲೂ ದಾಖಲೆಯನ್ನೇ ನಿರ್ಮಿಸಿರಬಹುದು-ಲೆಕ್ಕ ಇಟ್ಟವರಾರು ?

ಯಕ್ಷಗಾನ ಕಲೆಯನ್ನು ಆಸ್ವಾದಿಸುತ್ತಿದ್ದ ಜನ ಬೆಳಗಿನ ಜಾವ ೬ ಗಂಟೆಗೆ ಸುಮ್ಮನೆ ಪುಸಕ್ಕನೆ ಜಾಗ ಖಾಲಿ ಮಾಡುತ್ತಿದ್ದರು. ಯಕ್ಷಗಾನದಿಂದ ಸಿಗುವ ಸಂಭಾವನೆ ಬದುಕಿನ ಯಾವ ಮೂಲೆಗೆ ತಾಗುತ್ತಿರಲಿಲ್ಲ. ಅಂತಹ ದಿನಗಳಲ್ಲಿ ಅಂಗಡಿಗಳಲ್ಲಿ ಸಾಲಮಾಡಿ ಬದುಕಿದ ಬಡತನ ಇದೇ ನಮ್ಮ ಚಿಟ್ಟಾಣಿಯವರದ್ದು! ಚಿಟ್ಟಾಣಿಯ ಕಲೆಯ ಮೌಲ್ಯವರಿಯದ ಅಂಗಡಿಕಾರರಿಂದ " ಇನ್ನುಮೇಲೆ ಸಾಲ ಕೊಡುವುದಿಲ್ಲಾ" ಎನಿಸಿಕೊಂಡಿರಲೂ ಬಹುದು ಯಾಕೆಂದರೆ ಪಡೆದ ಸಾಲ ಮರಳಿಸಲು ಅವರು ಪಡಬೇಕಾಗಿದ್ದ ಪಾಡು ಹೇಳತೀರ. ಆದರೂ ನಿಧಾನವಾಗಿ ಪರಿಸ್ಥಿತಿಯಲ್ಲಿ ಬದಲಾವಣೆ ಬಂತು! ಅಲ್ಲಿಲ್ಲಿ ಸನ್ಮಾನಿಸಿ ಕೊಟ್ಟ ಹಣದಲ್ಲೇ ಚಿಕ್ಕದೊಂದು ಜಮೀನನ್ನು ಖರೀದಿಸಿದರು. ಹೊನ್ನಾವರದ ಅಳ್ಳಂಕಿಯ ಹತ್ತಿರದ ಗುಡೇಕೇರಿಯಲ್ಲಿ ಈಗಿನ ವಾಸ. ಮೂರು ಗಂಡುಮಕ್ಕಳು ಸುಬ್ರಹ್ಮಣ್ಯ, ನಾರಾಯಣ ಮತ್ತು ನರಸಿಂಹ. ಸುಬ್ರಹ್ಮಣ್ಯ ಮತ್ತು ನರಸಿಂಹ ಯಕ್ಷಗಾನ ಪಾತ್ರ ಮಾಡುತ್ತಾರೆ, ನಾರಾಯಣ ಮನೆಕಡೆ ಜಮೀನು-ಭೂಮಿ ನೋಡಿಕೊಳ್ಳುತ್ತಾನೆ. ಅವರ ಮಗಳನ್ನು ನಮ್ಮೂರಿಗೇ ಕೊಟ್ಟಿದ್ದಾರೆ. ನಮ್ಮೂರು ಹಡಿನಬಾಳದ ಶೇಡಿಕುಳಿ ಅವರ ಮಗಳಮನೆ. ಹೀಗಾಗಿ ನಮ್ಮೂರಿಗೆ ಅವರ ಸಂಬಂಧವೂ ಇದೆ ಅಂತಿಟ್ಕೊಳಿ. ಹಾಗಂತ ನಾನು ಊರು ಬಿಟ್ಟು ಬೆಂಗಳೂರು ಸೇರಿ ಎಷ್ಟೋ ವರ್ಷಗಳಾದರೂ ಆಗೀಗ ಅವರಿಗೆ ಕಲಾಕ್ಷೇತ್ರದಲ್ಲೋ ಏಡಿಏ ರಂಗಮಂದಿರದಲ್ಲೋ ಸಿಗುತ್ತಿದ್ದೇನೆ. ಈಗ ಪರವಾಗಿಲ್ಲ, ಉಪಜೀವನಕ್ಕೊಂದು ಆರ್ಥಿಕ ಆಧಾರವಾಗಿ ಜಮೀನಿದೆ; ಜೀವನ ಸುಲಲಿತವಾಗಿ ಸಾಗಿದೆ.

ಇಂತಹ ನಮ್ಮ ಚಿಟ್ಟಾಣಿಗೆ ಜನರಾಗಲೇ ನಟಸಾರ್ವಭೌಮ, ರಸಿಕರರಾಜ ಎಂದೆಲ್ಲಾ ನಾಮಕರಣ ಮಾಡಿದ್ದಾರೆ. ಅದನ್ನು ಸರಕಾರ ಕೊಡಬೇಕಾಗಿಲ್ಲ ಬಿಡಿ. ಊಟಕ್ಕುಂಟು ಆಟಕ್ಕಿಲ್ಲ ಎಂಬುದು ಇಲ್ಲಿನ ಗಾದೆ, ಅದು ಒಂದುಕಾಲಕ್ಕೆ ಯಕ್ಷಗಾನ ಕಲಾವಿದರಿಗೆ ವಿರುದ್ಧವಾಗಿ ಅಪ್ಲೈ ಆಗಿತ್ತು. ’ಆಟ’ಕ್ಕುಂಟು ಊಟಕ್ಕಿಲ್ಲ ಎಂದು! ಇಡೀ ರಾತ್ರಿ ಅಷ್ಟೆಲ್ಲಾ ನೋಡಿ ಚಪ್ಪಾಳೆಮೇಲೆ ಚಪ್ಪಾಳೆ ತಟ್ಟಿ ರಂಜನೆಗೊಳಗಾದ ಅದೇ ಜನ ಬೆಳಗಾದಮೇಲೆ ಚಿಟ್ಟಾಣಿ ಯಾರೋ ನಾವು ಯಾರೋ ಎನ್ನುವ ಹಾಗೇ ಹೊರಟುಬಿಡುತ್ತಿದ್ದರು. ಎಲ್ಲೋ ಅಲ್ಲಿಲ್ಲಿ ಯಾರೋ ಆತಿಥ್ಯ ನೀಡಿದರೆ ಅವರಲ್ಲಿ ಕಲಾವಿದರಾದವರು ತಮ್ಮ ಕಷ್ಟ-ಸುಖ ಹೇಳಿಕೊಳ್ಳಲಾದೀತೇ ? ಬೆಂಗಳೂರಿನಲ್ಲಿ ಕಡ್ತೋಕೆಯ ವಿ.ಆರ್ ಹೆಗಡೆಯವರು ’ಯಕ್ಷಗಾನ ಯೋಗಕ್ಷೇಮ ಅಭಿಯಾನ’ವನ್ನು ಆರಂಭಿಸಿದಮೇಲೆ ಒಮ್ಮೆ ಸನ್ಮಾನಿಸಿ ಲಕ್ಷಕ್ಕೂ ಅಧಿಕ ಮೊತ್ತವನ್ನು ಸಂಗ್ರಹಿಸಿ ನೀಡುವ ಮೂಲಕ ನೆರವಾಗಿದ್ದರು. ಹೀಗೇ ದಕ್ಷಿಣೋತ್ತರ ಕನ್ನಡದ ತಿಳುವಳಿಕೆ ಉಳ್ಳ ಕೆಲವು ಜನ ಆಗಾಗ ಸನ್ಮಾನ ಮಾಡುತ್ತಾ ಚಿಕ್ಕಚಿಕ್ಕ ಮೊತ್ತವನ್ನು ಕೊಡುತ್ತಾ ಕಲಾವಿದನ ಬದುಕು ಇಂದಿನ ಸುಂದರ ಹಂತವನ್ನು ತಲ್ಪುವಲ್ಲಿ ಅನುಕೂಲವಾಯ್ತು. ಈಗ ಮಕ್ಕಳು ಬೆಳೆದಿದ್ದಾರೆ. ಮೊಮ್ಮಗ ಕೂಡ ಯಕ್ಷಗಾನ ಕುಣಿಯಬಲ್ಲ ಎಂದು ಕೇಳಿದ್ದೇನೆ-ನೋಡಿಲ್ಲ. ಮಗ ಸುಬ್ರಹ್ಮಣ್ಯ ಕುಣಿತ ಮತ್ತು ಮಾತು ಎರಡನ್ನೂ ತಕ್ಕಮಟ್ಟಿಗೆ ಮೇಳೈಸಿಕೊಂಡಿದ್ದಾರೆ. ನರಸಿಂಹನಿಗೆ ಅಪ್ಪನ ಕುಣಿತದ ಕೆಲವು ತಿಟ್ಟುಗಳು ಕರಗತವಾದರೂ ಮಾತಿನಲ್ಲಿ ತಾಕತ್ತಿಲ್ಲ!

ನಮಗೆಲ್ಲಾ ಟಿವಿ ಮಾಧ್ಯಮದಲ್ಲಿ ಬರುವ ಮಿಸ್ಟರ್ ಬೀನ್ ಪಾತ್ರಧಾರಿ ರೋವನ್ ಅಟ್ಕಿನ್ ಸನ್ ಬಹಳ ಇಷ್ಟ. ಅದು ದೇಶದ, ಭಾಷೆಯ ಹಂಗಿಲ್ಲದ ಮಾನವ ಸಹಜ ಭಾವನೆ! ಹಾಗೆಯೇ ಕೇವಲ ತನ್ನ ಆಕರ್ಷಕ ಕುಣಿತಗಳಿಂದ ಮೈನುಗ್ಗಾಗಿಸಿಕೊಂಡು ಇಂದಿಗೂ ಜನರನ್ನು ರಂಜಿಸುವ ಅಪೇಕ್ಷೆ ಹೊತ್ತಿರುವ ಚಿಟ್ಟಾಣಿಗೆ ಪದ್ಮಶ್ರೀ ಕಮ್ಮಿಯೇ; ಪದ್ಮಭೂಷಣ ಕೊಡಬೇಕಿತ್ತು. ಇರಲಿ ಯಕ್ಷಗಾನ ಕಲಾವಿದರಲ್ಲಿ ಪದ್ಮ ಪ್ರಶಸ್ತಿ ಪಡೆಯುವಲ್ಲಿ ಮೊದಲಿಗರಾಗಿ ಯಕ್ಷಗಾನ ರಂಗಕ್ಕೂ ಆ ಕೀರ್ತಿಯ ಗರಿಯನ್ನು ತಂದ ಸಾಧನೆ ಕಮ್ಮಿಯದೇನಲ್ಲ ಅದು ಅವರ ಮಾತಿನಲ್ಲಿ "ಬಯಸದೇ ಬಂದ ಭಾಗ್ಯ!" ಪ್ರಶಸ್ತಿಗಾಗಿ ಚಿಟ್ಟಾಣಿ ಎಂದೂ ಕುಣಿಯಲಿಲ್ಲ; ರಾಜಕೀಯ ಮಾಡಲಿಲ್ಲ. ಪ್ರೇಕ್ಷಕರ ಕಣ್ಣನೋಟದಲ್ಲಿ ಕಾಣುವ ಸಂತೃಪ್ತ ಭಾವವೇ ಅವರಿಗೆ ದಕ್ಕಿದ ಅತ್ಯಪೂರ್ವ ಪ್ರಶಸ್ತಿ ಎಂಬುದು ಅವರ ಅನಿಸಿಕೆ. ಸಭಾಂಗಣದಲ್ಲಿ ಯಾವುದೋ ಕಾರಣದಿಂದ ಜನರು ಕಮ್ಮಿ ಇದ್ದರೂ ತನ್ನ ಪಾತ್ರಪೋಷಣೆಯಲ್ಲಿ ಕುಣಿತದಲ್ಲಿ ’ಕಳ್ಳಬಿದ್ದ’ ಜನವಲ್ಲ ಅವರು! ಇದ್ದ ಜನರನ್ನು ಎಷ್ಟೇ ಸಂಖ್ಯೆಯಲ್ಲಿದ್ದರೂ ಅಭಿನಯದಲ್ಲಿ ಗುಲಗುಂಜಿ ತೂಕವನ್ನೂ ಕಮ್ಮಿ ಮಾಡದೇ ಆಡಿ ರಂಜಿಸಿದ ದಿನವೂ ಇದೆ. ದೈಹಿಕ ಅನಾರೋಗ್ಯದಿಂದ ಆಟಕ್ಕೆ ಬರಲಾಗುತ್ತಿಲ್ಲ ಎಂಬ ಸುದ್ದಿ ಬಂದಾಗ ಸೇರಿದ ಜನ ಬಹಳ ಸಿಟ್ಟಾಗುತ್ತಿದ್ದರು; ರೇಗುತ್ತಿದ್ದರು, ವ್ಯವಸ್ಥಾಪಕರಲ್ಲಿ ಜಗಳವಾಡುತ್ತಿದ್ದರು. ಇದನ್ನರಿತ ವ್ಯವಸ್ಥಾಪಕರು ’ಅನಿರೀಕ್ಷಿತವಾಗಿ ತಲೆದೋರಬಹುದಾದ ಬದಲಾವಣೆಗಳಿಗೆ ಪ್ರೇಕ್ಷಕರ ತುಂಬುಹೃದಯದ ಸಹಕಾರವನ್ನು ಬಯಸುತ್ತೇವೆ" ಎಂದು ಹ್ಯಾಂಡ್ ಬಿಲ್ಲಿನಲ್ಲಿ ಪ್ರಕಟಿಸುತ್ತಿದ್ದ ದಿನಮಾನವನ್ನು ಕಂಡಿದ್ದೇನೆ. ಜಗಳ ಮತ್ಯಾಕೂ ಅಲ್ಲ; ಇವತ್ತು ಭಸ್ಮಾಸುರನನ್ನು/ದುಷ್ಟಬುದ್ಧಿಯನ್ನು/ಕೀಚಕನನ್ನು /ಕೌರವನನ್ನು/ಶೃಂಗಾರ ರಾವಣನನ್ನು ನೋಡಲೇಬೇಕು ಎಂದು ಸಂಕಲ್ಪಿಸಿಕೊಂಡು ಬರುತ್ತಿದ್ದ ಪ್ರೇಕ್ಷಕರಿಗೆ ರಸಭಂಗವಾಗುವ ಸನ್ನಿವೇಶ ಎದುರಾದಾಗಿನ ವರ್ತನೆ ಅದಾಗಿರುತ್ತಿತ್ತು. ಅಮೃತೇಶ್ವರೀ, ಬಚ್ಚಗಾರು, ಪಂಚಲಿಂಗೇಶ್ವರ ಮೊದಲಾದ ಮೇಳಗಳಲ್ಲಿ ಕೆಲಸ ನಿರ್ವಹಿಸಿ ದಶಕದ ಹಿಂದೆ ’ವೀರಾಂಜನೇಯ ಯಕ್ಷಗಾನ ಮಂಡಳಿ’ ಎಂಬುದನ್ನು ಕಟ್ಟಿಕೊಂಡು ಯಕ್ಷಾಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇನ್ನೂ ಶತಮಾನ ಕಾಲ ನಮ್ಮೊಂದಿಗೆ ಇರಲಿ, ಅವರ ಶಕೆ ಅಡಗದಿರಲಿ, ಅವರ ಆ ಜೋಶ್ ಇಂದಿನ ಕಲಾವಿದರಿಗೆ ಮಾದರಿಯಾಗಲಿ ಎಂದು ಹಾರೈಸುತ್ತಾ ಅಭಿಮಾನಪೂರ್ವಕ ಅಭಿನಂದನೆಗಳನ್ನೂ, ವಂದನೆಗಳನ್ನೂ ಸಲ್ಲಿಸುತ್ತಿದ್ದೇನೆ, ಚಿಟ್ಟಾಣಿಯವರೇ ತಮಗೊಮ್ಮೆ ಸಾಷ್ಟಾಂಗ ನಮಸ್ಕಾರ.

Tuesday, January 24, 2012

’ಪದ್ಯಪಾನ’ಮತ್ತನಾಗುತ್ತ ಸಾಗಿದ ನಿನ್ನೆಯ ದಿನ !


’ಪದ್ಯಪಾನ’ಮತ್ತನಾಗುತ್ತ ಸಾಗಿದ ನಿನ್ನೆಯ ದಿನ !

ಭಾವುಕ ಮನಕ್ಕೆ ಧನ-ಕನಕದಿಂದ ಸುಖದ ಸೊಬಗಿಲ್ಲ. ಅದು ಚಿಂತಿಸುವ ವೈಖರಿಯೇ ಬೇರೆ! ಅಲ್ಲಿ ಭಾವನೆಗಳಿಗೆ ಬೆಲೆಯೇ ವಿನಃ ಮಿಕ್ಕುಳಿದವು ಗೌಣ. ಕವಿಜನಗಳು ಬಯಸುವುದು ಭಾವದೌತಣವನ್ನು.ಅವರ ಜೀವನ ಅತ್ಯಂತ ಆಡಂಬರದ್ದಲ್ಲ, ಬದಲಿಗೆ ಸಾದಾ ಸೀದಾ. ನಳನಳಿಸುವ ಬಣ್ಣದ ಬೆಡಗಿನ ಥಳುಕು ತುಂಬಿದ ಈ ಜಗದಲ್ಲಿ ಕಾವಿ ತೊಟ್ಟ ಸನ್ಯಾಸಿ ಒಂದು ಕಡೆಗಾದರೆ ಭಾವ ತೊಟ್ಟ ’ಭಾವ್ಯಾಸಿ’ ಇನ್ನೊಂದೆಡೆ. ಭಾವ ಲೋಕದ ಹಕ್ಕಿಗಳು ನರ್ತಿಸುವ ತಾಳಗತಿಗಳೇ ಬೇರೆ. ಅಲ್ಲಿ ಮಾಮೂಲೀ ಲೋಕದ ಖರ್ಚು-ವೆಚ್ಚ ಬೇಡುವ ಅಟಾಟೋಪಗಳಿರುವುದಿಲ್ಲ. ನೋಡಿದರೆ ದೂರದಿಂದ ಎಂತೆಂಥವರೋ ಎಂಬ ಧೋರಣೆಯನ್ನು ಹೊಂದಿರುವ ಇನ್ನೂ ಮೊಕ್ತಾ ನೋಡದ ಜನರಿಗೆ ನೇರವಾಗಿ ಅಂಥವರು ಮುಖಾಮುಖಿಯಾದಾಗ " ಓ ಇವ್ರೇನಾ ? " ಎಂಬ ಸಂದೇಹದ ಭಾವನೆ. "ಹೌದು ಅವರೇ" ಎಂದು ಇನ್ಯಾರೋ ಪರಿಚಿತರು ಹೇಳಿದಮೇಲೆ ಅವರೇ ಎಂಬುದನ್ನು ತಡವಾಗಿ ಒಪ್ಪಿಕೊಳ್ಳುವುದು.

ಅನೇಕ ಕಡೆ ಬಸ್ಸಿನಲ್ಲೋ ಗಾಡಿಯಲ್ಲೋ ಬುರ್ರನೆ ಬೆಂಗಳೂರಿಗರು ನಾವು ಸಾಗುತ್ತಿರುವಾಗ ಆಗಾಗ ಎದುರಾಗುವ ಗುಂಗುರು ಗೂದಲಿನ ಚಸ್ಮಾ ಧರಿಸಿದ ಉದ್ದನೆಯ ವ್ಯಕ್ತಿ ಶತಾವಧಾನಿ ಆರ್.ಗಣೇಶ್. ಹಾಗೇ ಗಣೇಶ್ ಎಂದರೆ ಎಷ್ಟೋ ಜನರಿದ್ದಾರೆ ಯಾರಿಗೂ ಗುರ್ತು ಸಿಗುವುಇದಿಲ್ಲ; ಅದೇ ’ಶತಾವಧಾನಿ’ ಎನ್ನುವ ಪದ ಹೆಸರಿನ ಹಿಂದೆ ಸೇರ್ಪಡೆಯಾಗಿಬಿಟ್ಟರೆ ಗೊತ್ತು ನಮ್ಮ ಮಂದಿಗೆ- ಇಡೀ ಕರ್ನಾಟಕಕ್ಕೇ ಆ ಹೆಸರಿನ ವ್ಯಕ್ತಿ ಒಬ್ಬರೇ, ಒಬ್ಬರೇ ಮತ್ತು ಒಬ್ಬರೇ! ಮಹಾಭಾರತದಲ್ಲಿ ಸವ್ಯಸಾಚಿ ಎಂಬ ಪದಪ್ರಯೋಗವಿದೆ. ಅದು ಅರ್ಜುನನಿಗೆ ಮಾತ್ರ ಲಾಗು. ಅದು ಏಕಲವ್ಯನಿಗೂ ದಕ್ಕಬಾರದೆಂಬ ಉದ್ದೇಶದಿಂದ ದ್ರೋಣರು ಅವನ ಹೆಬ್ಬೆರಳನ್ನೇ ಗುರುದಕ್ಷಿಣೆಯನ್ನಾಗಿ ಕೇಳಿ ಪಡೆದುಬಿಟ್ಟರು ಪಾಪ. ಸವ್ಯಸಾಚಿ ಏಕಮೇವಾದ್ವಿತೀಯ. ಎರಡನೇ ವ್ಯಕ್ತಿ ಎಂಬಮಾತು ಅಲ್ಲಿರುವುದೇ ಇಲ್ಲ. ಅದೇ ರೀತಿ ನಮ್ಮ ಈ ಕನ್ನಡನಾಡಿನಲ್ಲಿ ಶತಾವಧಾನ ನಡೆಸುವ ಪುಣ್ಯವಂತ ಒಬ್ಬರಿದ್ದರೆ ಅವರೊಬ್ಬರೇ ಶತಾವಧಾನಿ ಆರ್. ಗಣೇಶ್.

’ಅವಧಾನ ಕಲೆ’ ಎಂಬ ಅವರ ಥೀಸಿಸ್ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಅರ್ಪಿತವಾದಾಗ ಅಲ್ಲಿ ಅದನ್ನು ಪರಿಶೀಲಿಸುವ ಮಹಾನುಭಾವರಾಗಲೀ ಪರಿಣತರಾಗಲೀ ಯಾರೂ ಇರಲಿಲ್ಲ! ಆಮೇಲೆ ವಿದ್ವಾನ್ ರಂಗನಾಥ ಶರ್ಮರು ಮತ್ತು ವಿದ್ವಾನ್ ಟಿ.ವಿ.ವೇಂಕಟಾಚಲಶಾಸ್ತ್ರಿಗಳು[ಈ ಇಬ್ಬರಲ್ಲಿ ರಂಗನಾಥ ಶರ್ಮರು ಸಂಸ್ಕೃತ ಮತ್ತು ಕನ್ನಡದ ಘನ ವಿದ್ವಾಂಸರೂ ಹೊಸ ಮತ್ತು ಹಳಗನ್ನಡ ಕಾವ್ಯವನ್ನು ವ್ಯಾಖ್ಯಾನಿಸ ಬಲ್ಲ ತಾಕತ್ತಿನವರೂ ಹಲವು ಕೃತಿಗಳ ಲೇಖಕರೂ ಆಗಿದ್ದರೆ, ಶಾಸ್ತ್ರಿಗಳು ಮೈಸೂರುವಿ.ವಿ.ಯಲ್ಲಿದ್ದ ಮಹಾವಿದ್ವಾಂಸರು, ಹಳಗನ್ನಡಭಾಷೆ-ಛಂದಸ್ಸು-ವ್ಯಾಕರಣ- ಶಾಸನ - ನಿಘಂಟು - ಚಿತ್ರಕವಿತೆ ಮುಂತಾದ ವಿಷಯಗಳಲ್ಲಿ ಕನ್ನಡಕ್ಕಿಂದು ಕಟ್ಟಕಡೆಯ ನಿರ್ಣಯವಾಗಿ ಹೇಳಬಲ್ಲವರೆಂದರೆ ಅವರೊಬ್ಬರೇ! ಶತಾಧಿಕಗ್ರಂಥಕರ್ತರು ಕೂಡ. ] ಸೇರಿ ಅದನ್ನು ಓದಿ, ಅರ್ಥೈಸಿಕೊಂಡು ಅದನ್ನು ಒಪ್ಪಿ ವಿಶ್ವವಿದ್ಯಾಲಯಕ್ಕೆ ಡಿ.ಲಿಟ್ ಕೊಡುವಂತೇ ಸಲಹೆ ನೀಡಿದರು! ಒಂದುಕಾಲಕ್ಕೆ ಕರ್ನಾಟಕದ ಬಹಳ ಕಡೆ ಇದ್ದ ಕುಟುಂಬಗಳು ಅವಧಾನಿ ಎಂಬ ಅಡ್ಡ ಹೆಸರನ್ನು ಹೊಂದಿದ್ದು ಅವರು ಅವಧಾನ ಕಲೆಯನ್ನು ನಡೆಸಿದ್ದರು ಎಂಬುದು ತಿಳಿಯುತ್ತದೆ. ಬರುಬರುತ್ತಾ ಅವಧಾನ ಕಲೆ ಸಮಾಜದಲ್ಲಿ ಕಾಣದಾಗಿತ್ತು, ಮರೆಯಾಗಿ ಹೋಗಿತ್ತು. ನಮ್ಮ ಚಿಕ್ಕಂದಿನಲ್ಲಿ ನಾವು ಅಲ್ಲಲ್ಲಿ ಅವಧಾನಿ ಎಂಬ ಹೆಸರನ್ನು ಕೇಳಿದ್ದೆವಾದರೂ "ಪಾಪ ದಾನ ಜಾಸ್ತಿ ಕೊಟ್ಟಿರಬೇಕು ಅದಕ್ಕೇ ಅವಧಾನಿ ಎನ್ನುತ್ತಾರೋ ಏನೋ" ಎಂತಲೋ "ಅವರು ಅವಧೂತರ ಸಂಗಡ ಸಹಾಯಕರಾಗಿ ಅವರ ಕೈಕೆಲಸಕ್ಕೆ ಇರುವವರಿರಬೇಕು" ಎಂತಲೋ ಪರಸ್ಪರ ಹೇಳಿಕೊಳ್ಳುವುದಿತ್ತು! ಪ್ರಾಯಶಃ ನಮ್ಮ ಹಿರಿಯರಿಗೂ ’ಅವಧಾನಿ’ ಹೆಸರಿನ ಮಹಿಮೆ ಗೊತ್ತಿತ್ತೋ ಇಲ್ಲವೋ ಕೇಳಿದವರ್ಯಾರು! ಏಕವ್ಯಕ್ತಿ ಏಕಕಾಲಕ್ಕೆ ಅನೇಕ ವ್ಯಕ್ತಿಗಳ ಸಂಖ್ಯಾಬಂಧ-ಚಕ್ರಬಂಧ-ಪದಬಂಧಗಳನ್ನು ಕರಾರುಗಳ ಸಹಿತ ಛಲವಾಗಿ ಸ್ವೀಕರಿಸಿ ಅದನ್ನು ನಿರ್ವಹಿಸುವ ಕ್ರಮ ಅವಧಾನ. ಅದರಲ್ಲಿ ಸಾಹಿತ್ಯ, ಕಾವ್ಯ, ಮೀಮಾಂಸೆ, ತರ್ಕ, ವ್ಯಾಕರಣ, ದತ್ತಪದ, ಸಂಖ್ಯಾಬಂಧ, ಛಂದಸ್ಸು, ಅಲಂಕಾರ, ಉಪಮೆ, ಶಾಸ್ತ್ರ, ರಾಜಕೀಯ, ಪ್ರಸಕ್ತ ಸಮಾಜದ ವಿದ್ಯಮಾನ ಒಂದೇ ಎರಡೇ ಎಲ್ಲವನ್ನೂ ನಿಭಾಯಿಸುವ ವ್ಯವಧಾನವಿದ್ದರೆ ಅದು ಅವಧಾನಿಗೆ ಮಾತ್ರವೇ ಹೊರತು ಇನ್ಯಾರಾದರೂ ಆದರೆ ಎಲ್ಲವನ್ನೂ ಕಿತ್ತು ಬಿಸಾಕಿ ತಲೆನೋವೇ ಬೇಡಾ ಎಂದು ಎದ್ದೋಡಿ ಹೋಗುವಂತಹ ಜಟಿಲ ಸಮಸ್ಯೆಗಳ ಸುಕ್ಕುಬಿಡಿಸುವ ಕುಸುರಿಕೆಲಸ! ಭಾಗ್ಯಶಾಲಿಗಳಾದ ನಾವು ಇಂದಿಗೆ ನಮ್ಮ ಸಮಕಾಲೀನರಾಗಿ ಗಣೇಶರನ್ನು ಪಡೆದಿದ್ದೇವೆ ಎನ್ನುತ್ತಾ ಬೀಗಲು, ಹೆಮ್ಮೆ ಪಡಲು ಹಿಂಜರಿಯಬೇಕಿಲ್ಲ.

ಸರ್ವಭಾಷಾಮಯೀ ಭಾಷಾ ಎಂದೆನಿಸಿಕೊಂಡ ’ಸಿರಿಭೂವಲಯ’ ಗ್ರಂಥದಂತೇ ಬಹುಭಾಷಾ ಕೋವಿದರಾದ ಗಣೇಶರು ಮಾತೃಭಾಷೆ ಕನ್ನಡಕ್ಕಾಗಿ ತಮ್ಮ ಸಕಲವನ್ನೂ ತೊಡಗಿಸಿ ಅಖಂಡವಾಗಿ ಕನ್ನಡ ಸೇವೆ ಮಾಡುತ್ತಿರುವ ಶಕ್ತಿ. ಶಕ್ತಿ ಏಕೆಂದರೆ ಇವತ್ತಿನ ಯಾವ ಕವಿ-ಸಾಹಿತಿಗೂ ಇರದ ಅಪ್ರತಿಮ ಮೇಧಾ ಶಕ್ತಿಯನ್ನು ಪಡೆದು ನಡೆದಾಡುವ ಗಣಕಯಂತ್ರವೆನಿಸಿದ ಗಣೇಶರು ಕೃತಿ ರಚನೆಯಲ್ಲಿ ತೊಡಗಿದ್ದರೆ ಇಷ್ಟೊತ್ತಿಗೆ ಅದು ಎಷ್ಟು ಸಾವಿರವಾಗುತ್ತಿತ್ತೋ ಗೊತ್ತಾಗದಲ್ಲಾ! ಎಂತಹ ಕ್ಲಿಷ್ಟ, ಸಂದಿಗ್ಧ ಸಮಸ್ಯೆಗಳನ್ನೂ ಒಳಸುಳಿಗಳನ್ನರಿತು ಬಾಳೆಹಣ್ಣು ಸುಲಿದಷ್ಟೇ ಸುಲಭವಾಗಿ ತಿಳಿಸಿಕೊಡುವ, ಬಿಡಿಸಿಕೊಡುವ ಅರ್ಹತೆ ಇರುವುದು, ಆ ಯೋಗ್ಯತೆ ಇರುವುದು ಗಣೇಶರಿಗೆ ಮಾತ್ರ ಎಂದರೆ ತಪ್ಪಾಗಲಾರದು ಎನಿಸುತ್ತದೆ. ಒಬ್ಬ ತಂತ್ರಜ್ಞನಾಗಿ ನಂತರ ಐಚ್ಛಿಕ ವಿಸ್ತರವಾದ ಸಾರಸ್ವತ ಲೋಕಕ್ಕೆ ಹೊಕ್ಕ ಈ ಗಣೇಶರಿಗೂ ಮೇಲೆ ಕೂತಿರುವ ಆ ಗಣೇಶನಿಗೂ ಅನೇಕ ಸಾಮ್ಯತೆ ಕಾಣುತ್ತದೆ-ಬುದ್ಧಿಯಲ್ಲಿ! ದೈಹಿಕವಾಗಿ ಅದು ಅಜ-ಗಜಾಂತರ ಬಿಡಿ ಮಾತಾಡುವ ಪ್ರಶ್ನೆಯೇ ಇಲ್ಲ, ಇವರು ಕೃಶ ಶರೀರಿ ಆತ ಡೊಳ್ಳಿನ ಮುದ್ದು ಗಣಪ. ಅನೇಕರು ನನ್ನಲ್ಲಿ ಕೇಳುತ್ತಿದ್ದುದು ಒಂದೇ ಪ್ರಶ್ನೆ ತಂತ್ರಜ್ಞನೊಬ್ಬ ಈ ರಂಗದಲ್ಲಿ ಸಾಧಿಸುವುದು ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಇರುವ ಸಂಬಂಧದಂತೇ ಅಲ್ಲವೇ ಎಂದು ? ಆದರೆ ಕನ್ನಡ ಸಾಹಿತ್ಯಲೋಕವನ್ನು ತಿಳಿಯ ಹೊರಟರೆ ಇಂದು ಮುಂಚೂಣಿಯಲ್ಲಿ ಕಾರ್ಯನಿರತರಾಗಿರುವ ಕವಿ-ಸಾಹಿತಿಗಳಲ್ಲಿ ತಂತ್ರಜ್ಞರೇ ಹೆಚ್ಚಿಗೆ ಇದ್ದಾರೆ ಎಂಬುದು ಮನಗಾಣಬೇಕಾದ ವಿಷಯ.

ಮೆಕಾನಿಕಲ್ ಎಂಜಿನೀಯರಿಂಗ್ ಮುಗಿಸಿದ ಮೇಲೆ ಉನ್ನತ ಹುದ್ದೆಗಳು ಕೈ ಬೀಸಿ ಕರೆದರೂ ಅವುಗಳಿಗೆ ಟಾ ಟಾ ಹೇಳಿದ ಗಣೇಶರು ಓದಿನ ಅರಮನೆಯಲ್ಲಿ ಸ್ವತಃ ತಮ್ಮನ್ನು ತಾವೇ ರಂಜಿಸಿಕೊಳ್ಳುತ್ತಾ ಸಮಾಜದ ಸಾಹಿತ್ಯ ಪ್ರೇಮಿಗಳ ಸೇವೆಗೆ ತೊಡಗಿದ್ದು ನಮ್ಮ ಸೌಭಾಗ್ಯ ಎನ್ನದೇ ಇನ್ನೇನು ಹೇಳಲಿ ? ಇಷ್ಟೆಲ್ಲಾ ಇದ್ದೂ ಅವರು ಏನೂ ಇಲ್ಲವೇನೋ ಎಂಬ ರೀತಿಯಲ್ಲಿ ಇರುವ ಸರಳತೆ ಇದೆಯಲ್ಲಾ ಅದನ್ನು ನೆನೆದಾಗ ಯಾರೋ ನಮ್ಮಣ್ಣ ಮಾತಾಡಿದ ಅನುಭವ ಆಗುತ್ತದೆ. ಅವರ ಒಡನಾಟಕ್ಕಾಗಿ ಹಗಲೂ ರಾತ್ರಿ ಅವರಲ್ಲಿಗೆ ತೆರಳಿ ತೊಂದರೆ ಕೊಟ್ಟಿದ್ದುಂಟು. ಆದರೂ ಕೊಂಚವೂ ಬೇಸರಿಸದೇ ಪ್ರೀತಿಯಿಂದ ಕಂಡ ಅವರ ಸೌಜನ್ಯಕ್ಕೆ, ಆ ಸಜ್ಜನಿಕೆಗೆ ಆಜನ್ಮ ಪರ್ಯಂತ ಶರಣು. ಮುಪ್ಪಿನಲ್ಲಿ ಎಲ್ಲವನ್ನೂ ಮರೆತು ಮಗುವಿನಂತಾದ ಅಮ್ಮನನ್ನು ಮನೆಯಲ್ಲಿ ಸಂಭಾಳಿಸಿಕೊಳ್ಳುತ್ತಾ ಈ ಬ್ರಹ್ಮಚಾರಿ ಉದರಂಭರಣೆಗೆ ಆಹಾರ ತಾವೇ ಸಿದ್ಧಪಡಿಸಿಕೊಂಡು ಅಮ್ಮನಿಗೆ ತುತ್ತು ನೀಡಿ ಆಮೇಲೆ ತಾವು ಸ್ವೀಕರಿಸುತ್ತಾರೆ. ಮೊದಲೇ ಸಾಕಷ್ಟು ನನ್ನ ಲೇಖನಗಳಲ್ಲಿ ಹೇಳಿದಂತೇ ಕವಿ-ಸಾಹಿತಿಗಳಿಗೆ ತನ್ನ ನೋವು ನೋವಲ್ಲ, ಅದನ್ನೇ ನಲಿವೆಂದು ಸ್ವೀಕರಿಸಿ ಅದರಲ್ಲೇ ಇದ್ದು ಹಲವು ಕೃತಿಗಳಿಂದ ಸಮಾಜವನ್ನು ರಂಜಿಸುತ್ತಾರೆ ಎಂದು...ಅದು ಇಲ್ಲೂ ಸತ್ಯ ಎಂಬುದು ಮತ್ತೊಮ್ಮೆ ಕಾಣುವ ವಿಷಯ. ತಾನು ಕವಿಯೋ ಸಾಹಿತಿಯೋ ವಿಮರ್ಶಕನೋ ಎಂದು ಗಣೇಶರು ಹೇಳಿಕೊಳ್ಳುವುದಿಲ್ಲ. ಅವರನ್ನು ಜನ ಗುರುತಿಸಿದ್ದು ಶತಾವಧಾನಿ ಎಂದೇ! ಅದೇ ಹೆಸರು ಕಾಯಂ ಆಗಿಹೋಯ್ತು.

ಕನ್ನಡ ಸಾಹಿತ್ಯದಲ್ಲಿ ಛಂದೋಬದ್ಧ ಮತ್ತು ವ್ಯಾಕರಣ ಶುದ್ಧ ಕಾವ್ಯ ಬರೆಯುವವರ ಸಂಖ್ಯೆ ನಶಿಸುತ್ತಿದೆ, ಅದನ್ನು ಬೆಳೆಸಬೇಕೆಂಬ ಹಂಬಲದಿಂದ ’ಪದ್ಯಪಾನ’ ಎಂಬ ಜಾಲತಾಣವೊಂದನ್ನು ನಿರ್ಮಿಸಿ ಅನೇಕರಿಗೆ ಅವುಗಳನ್ನು ಕಲಿಸುತ್ತಿದ್ದಾರೆ, ಮಾರ್ಗದರ್ಶಕರಾಗಿದ್ದಾರೆ. ಆಸಕ್ತ ಹತ್ತಾರು ಕವಿ ಮನೋಭಾವದವರು ಅಲ್ಲಿ ತೊಡಗಿಕೊಂಡು ತಮ್ಮನ್ನು ರೀಫೈನ್ ಮೆಂಟ್ ಮಾಡಿಕೊಳ್ಳುತ್ತಿದ್ದಾರೆ. ಏಕಕಾಲದಲ್ಲಿ ಕವನ ಕೇಳಲೂ ಓದಲೂ ಸೊಗಸಾಗಿದ್ದು ಸ್ವಲ್ಪ ಹ್ಯೂಮರಸ್ ಅಗಿದ್ದರೆ, ಅದು ಛಂದೋಬದ್ಧ ಮತ್ತು ವ್ಯಾಕರಣ ಶುದ್ಧವಾಗಿದ್ದರೆ ಸಹಜವಾಗಿ ಅದು ಗೇಯವಾಗುತ್ತದೆ. ಕವನ ಗೇಯವಾದಾಗ ಬಾಯಿಂದ ಬಾಯಿಗೆ ಅದು ಹಬ್ಬುತ್ತದೆ. ಅನೇಕ ವೇದಿಕೆಗಳಲ್ಲಿ ಅದರ ಪ್ರಸ್ತುತಿ ಆಗಲೂ ಬಹುದು. ಜನಸಂದೋಹವನ್ನು ಸಮರ್ಪಕವಾಗಿ ತಲ್ಪಿ ಕವನದಲ್ಲಿನ ವಿಷಯ ಮನದಟ್ಟಾದಾಗ ರಚಿಸಿದ ವ್ಯಕ್ತಿಗೆ ಅದೊಂದು ಖುಷಿಯ ಸಂಗತಿಯಾಗುತ್ತದೆ. ಗದ್ಯದಲ್ಲಿ ಸಾವಿರ ಶಬ್ದಗಳಲ್ಲಿ ಹೇಳಲಾಗದ ಗಹನವಾದ ವಿಷಯವನ್ನು ಪದ್ಯದಲ್ಲಿ ಮೂರ್ನಾಲ್ಕು ಪದಗಳಿಂದ ಬಂಧಿಸುವ ಕಲೆ ಎಲ್ಲರಿಗೂ ಕರಗತವಲ್ಲ. ಅದೊಂದು ಎಣ್ಣೆಗಂಬ. ಹತ್ತಿದಷ್ಟೂ ಜಾರಿ ಜಾರಿ ಜಾರಿ ಬೀಳುವ ಪರಿಸ್ಥಿತಿಯಲ್ಲಿ ಹತ್ತು ಪುಟ ಬರೆದು-ಹರಿದು ದೂರ್ವಾಸಾವತಾರ ತಾಳಿ ಬಿಟ್ಟೆದ್ದು ಹೋಗುವ ಪೈಕಿಯ ಜನವೇ ಹೆಚ್ಚು! ಅಂತಹ ಮಲ್ಲಗಂಬವನ್ನು ಏರಿ ಅದರಲ್ಲೇ ಗಂಟೆಗಟ್ಟಲೆ ಕೂತು ಯೋಗಾಸನದ ಭಂಗಿಗಳನ್ನು ತೋರುವ ಪಟುವಿನಂತೇ ನವರಸಗಳನ್ನು ಸ್ಫುರಿಸುವ ಪದಪುಂಜಗಳಿಂದ ಕವನ ಕಟ್ಟುವುದು ಜಾಣ್ಮೆಯ ವಿಷಯ. ಇಲ್ಲಿ ಬರೆಯುವಾತ ಶಬ್ದ ಭಂಡಾರಿಯಾಗಿರಬೇಕು, ಭಾವುಕನಾಗಿರಬೇಕು, ಪ್ರಸಕ್ತ ವಿದ್ಯಮಾನಗಳನ್ನೂ ಪೂರ್ವದ ಘಟನೆಗಳನ್ನೂ ಅರಿತಿರುವವನಾಗಿರಬೇಕು, ಬರೆದ ಪದಗಳಿಂದ ಯಾರಿಗೂ ನೋವಾಗದ ರೀತಿ ಇರಬೇಕು ಮತ್ತು ಸಮಾಜಕ್ಕೆ ಯಾವುದಾದರೂ ಪ್ರಯೋಜನವಾಗುವ ವಸ್ತುವಿಷಯವನ್ನು ಕಾವ್ಯ ಒಳಗೊಂಡಿರಬೇಕು.

ನಮ್ಮ ಭಾವನೆಗಳಿಗೆ ಬೆಲೆಯೇ ಇಲ್ಲವೇ ಎಂಬ ನವ್ಯೋತ್ತರ ಕವಿಗಳಿಗೆ ನಾನು ಹೇಳುವುದಿಷ್ಟೇ : ಈಗೀಗ ಬರೆಯುತ್ತಿರುವ ಕೆಲವರ ಕವನಗಳನ್ನು ಗದ್ಯ ಎನ್ನಬೇಕೋ ಅಥವಾ ಪದ್ಯ ಎನ್ನಬೇಕೋ ತಿಳಿಯದಲ್ಲಾ ? ಎರಡರಲ್ಲಿ ಯಾವ ಲಿಂಗಕ್ಕೂ ಸೇರದ ವ್ಯಕ್ತಿಗಳ ಗುಂಪಿನ ಜನರ ರೀತಿ ಕಾವ್ಯ ಅಲ್ಲಿಗೇ ಸಲ್ಲುತ್ತದೆ ವಿನಃ ಅದು ಸರಿಯಾದ ಮಾರ್ಗ ಎಂದು ನನಗೆಂದೂ ಅನಿಸಲೇ ಇಲ್ಲ. ಯಾರೋ ಸ್ನೇಹಿತರು ಹೇಳಿದ್ದ ಹಾಗೇ ಪುಟಪೂರ್ತಿ ಬರೆದು ಎಡ ಬಲಗಳಲ್ಲಿ ಆ ಕಡೆ ಒಂದಿಂಚು ಈ ಕಡೆ ಒಂದಿಂಚು ಕತ್ತರಿಸಿದರೆ ಇಂದಿನ ಹಾಡು ಸಿದ್ಧ! ಅನೇಕ ಜನ ಅದನ್ನೇ ಮೆಚ್ಚಿ " ಬಹಳ ಭಾವವಿದೆ ಆಹಹಾ ಎಂಥಾ ಅರ್ಥಗರ್ಭಿತ" ಎನ್ನುವುದನ್ನು ಕಾಣುತ್ತಿದ್ದೇನೆ. ಕನ್ನಡದ ತರುಣ ಪೀಳಿಗೆಯಲ್ಲಿ ವಿದ್ವತ್ಪೂರ್ಣ ಕಾವ್ಯ-ಸಾಹಿತ್ಯವನ್ನು ಓದುವ ಅಭಿರುಚಿ ಕಮ್ಮಿಯಾಗಿದೆ; ಕಮ್ಮಿಯಾಗುತ್ತಿದೆ. ಸೆಲ್ಫ್ ಸರ್ವಿಸ್ ನಲ್ಲಿ ಇಡ್ಲಿವಡೆ ತಿಂದು ಅರ್ಧಕಾಫಿ ಕುಡಿದು ಕೈತೊಳೆದು ಬಸ್ ಏರುವ ಗಡಿಬಿಡಿಯಲ್ಲಿ, ಆ ಧಾವಂತದಲ್ಲಿ ಅವರಿಗೆ ಅರ್ಥವಾಗುವುದು ಕೇವಲ ನವ್ಯೋತ್ತರದ ಕವನಗಳು ಮಾತ್ರ!

ಸದೃಢವಾದ ಕಾವ್ಯ ಗೇಯತೆಯನ್ನು ಪಡೆದುಕೊಂಡು ಸಂಗೀತಗಾರನ ಕೈಗೆ ಸಿಕ್ಕಾಗ ಅದು ಹಾಡಲ್ಪಡುತ್ತದೆ. ಹಾಡಿದ ಹಾಡು ಸಪ್ತಸ್ವರಗಳನ್ನು ಮೇಳೈಸಿಕೊಂಡು ಕರ್ಣಾನಂದಕರ ವಾದ್ಯ ಸಂಗೀತಗಳನ್ನು ಜೊತೆಗೆ ಪೇರಿಸಿಕೊಂಡು ಕೇಳಲು ಹಿತಕರವಾಗಿರುತ್ತದೆ. ಕವನದ ಸಾಹಿತ್ಯ ಅರ್ಥವಾಗುತ್ತಿರುವಂತೆಯೇ ರಾಗ, ತಾಳ, ಲಯ ಸ್ವರಮೇಳಗಳು ಆ ಸಾಹಿತ್ಯಕ್ಕೆ ನೆಕ್ಲೇಸ್, ಹಾರ, ಉಂಗುರ, ವಡ್ಯಾಣಗಳಂತೇ ಆಭರಣಗಳ ರೀತಿ ಶೋಭಿಸುತ್ತವೆ. ಆನೆಗೆ ಅಲಂಕಾರವೇ ಎಂಬುದೊಂದು ಗಾದೆ ಇದೆಯಲ್ಲ! ಕವನವೇ ಅದ್ಭುತವಾಗಿದ್ದರೆ ಆಗ ಅದನ್ನು ಸಂಗೀತಕ್ಕೆ ಅಳವಡಿಸಿದಾಗ ಜಂಬೂಸವಾರಿಯ ಪ್ರಧಾನ ಆನೆಯಂತೇ ಅದು ಕಂಗೊಳಿಸುತ್ತದೆ; ಬಹುಸಂಖ್ಯಾಕರನ್ನು ಅದು ತಲ್ಪಲು ಸಾಧ್ಯವಾಗುತ್ತದೆ. ರುದ್ರ ನಮಕ-ಚಮಕ ಮಂತ್ರಗಳಂತೇ ಸ್ವರಬದ್ಧವಾದ ಸಂಗೀತ ಮನುಷ್ಯನಿಗೆ ಉತ್ತಮ ಆರೋಗ್ಯವನ್ನು ನೀಡುವಲ್ಲಿ ಸಹಕಾರಿಯಾಗುತ್ತದೆ. ಇದನ್ನೆಲ್ಲಾ ಅರಿತಿದ್ದ ಹಿಂದಿನ ನಮ್ಮ ಕವಿಗಳು ಅದನ್ನು ಪಾಲಿಸುತ್ತಾ ಬಂದಿದ್ದರು. ಸಂಸ್ಕೃತದ ಎಲ್ಲಾ ಕವಿಗಳೂ ಅದನ್ನು ಪಾಲಿಸಿದ್ದಾರೆ. ಸಂಸ್ಕೃತ ಕನ್ನಡದ ಹಾಗಲ್ಲ, ಅದು ಹೇಗೆಲ್ಲಾ ಬರೆದರೂ ಸ್ವೀಕರಿಸುವುದಿಲ್ಲ- ಎಂಬುದು ಮಿತ್ರ ಕೊಳ್ಳೇಗಾಲದ ಮಂಜುನಾಥರ ಅಭಿಪ್ರಾಯ. ಅದನ್ನೇ ನಾನೂ ಹೇಳುತ್ತಿದ್ದೇನೆ. ಅದೇ ಜಾಡಿನಲ್ಲಿ ನಮ್ಮ ಕನ್ನಡ ಕಾವ್ಯ-ಸಾಹಿತ್ಯವೂ ಬಲಾಢ್ಯವಾದರೆ ಆಗ ನೋಡಲು ತುಂಬಾ ಖುಷಿಯಾಗುತ್ತದೆ. ಇಲ್ಲದಿದ್ದರೆ ಕನ್ನಡಮ್ಮ ಯಾವುದೋ ಕಾರಣಗಳಿಂದ ಬಳಲಿದಂತೇ ತೋರುತ್ತದೆ. ಹಾಗಾಗದಂತೇ ಎಚ್ಚರವಹಿಸಬೇಕಾದ್ದು ನಮ್ಮ ಕರ್ತವ್ಯ ಎಂಬುದು ಸದಭಿರುಚಿಯ ಸಾರಸ್ವತರ ಅನಿಸಿಕೆ.

ಹೊಸಪೀಳಿಗೆಯನ್ನು ತಯಾರಿ ಮಾಡುವಲ್ಲಿ ಗಣೇಶರ ಈ ಪ್ರಯತ್ನ ಅತ್ಯಂತ ಶ್ಲಾಘನೀಯ. ಅವರಿಗಿರುವ ಕೆಲಸದೊತ್ತಡಗಳ ಮಧ್ಯೆ ನಾನಾಗಿದ್ದರೆ ಇದನ್ನೆಲ್ಲಾ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಾನೇಕೆ ನೀವೂ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಒಂದು ಕಡೆ ಯಾವುದೋ ವೇದಿಕೆಯಲ್ಲಿ ವ್ಯಾಖ್ಯಾನ, ಇನ್ನೊಂದು ಕಡೆ ಅಷ್ಟಾವಧಾನ, ಮನೆಯಲ್ಲಿ ಅಡಿಗೆ- ಬೇಕಾದ ಪರಿಕರಗಳ/ದಿನಸಿಗಳ ಪೂರೈಕೆ, ಅಮ್ಮನ ಆರೈಕೆ, ಆಗಾಗ ಮೊಳಗುವ ದೂರವಾಣಿಗೆ ಉತ್ತರ, ಕಲಾವಿದರಾದರನೇಕರಿಗೆ ಥೀಮ್ ಬೇಸ್ಡ್ ನೃತ್ಯಕ್ಕೆ ಹಿನ್ನೆಲೆ ಸಾಹಿತ್ಯ-ಪರಿಕಲ್ಪನೆ, ಏಕವ್ಯಕ್ತೀ ಯಕ್ಷಗಾನ ಪರಿಕಲ್ಪನೆ-ಪ್ರಸಂಗ ರಚನೆ, ಕನ್ನಡ-ಸಂಸ್ಕೃತಗಳಲ್ಲಿ ಕೃತಿಗಳ ರಚನೆ, ಯಾರಿಗೋ ಮುನ್ನುಡಿ-ಬೆನ್ನುಡಿ, ಮತ್ತೆಲ್ಲೋ ಶಾಲೆಯಲ್ಲಿ ಮಕ್ಕಳಿಗೆ ಪಾಠ, ಕಾಲೇಜುಗಳಲ್ಲಿ ಅಧ್ಯಾಪನ ---ಹೀಗೇ ಅವರ ನಿತ್ಯಜೀವನವೇ ಒಂದು ಅಷ್ಟಾವಧಾನ. ಅಷ್ಟರ ಮಧ್ಯೆಯೂ ಹಲವರ ರಚನೆಗಳನ್ನು ಪರಿಶೀಲಿಸಿ ಉತ್ತರಿಸುವುದು, ತಿದ್ದುವುದು ಸಾಮಾನ್ಯದ ತಾಳ್ಮೆಯೇ ಸ್ವಾಮೀ ? ಅಂತಹ ಘನಪಾಠಿ, ಅಂತಹ ಚತುರ್ವೇದಿ, ಅಂತಹ ನಡೆದಾಡುವ ಅದ್ಭುತ ಮಾನವ ಯಂತ್ರ ನಮ್ಮ ಮಧ್ಯೆ ಇದೆ! ಯಾವ ವಿಷಯವನ್ನೇ ಎಲ್ಲೇ ಎಷ್ಟೇ ಹೊತ್ತಿಗೆ ಪ್ರಸ್ತಾಪಿಸಿದರೂ ಅದಕ್ಕೆ ಸಮರ್ಪಕ ಉತ್ತರ ದೊರೆಯುವುದು ಗಣಕಯಂತ್ರದಲ್ಲೂ ಸಾಧ್ಯವಿಲ್ಲ, ಅದು ಇಲ್ಲಿ ಮಾತ್ರ ಸಾಧ್ಯ; ಗಣೇಶರಿಂದ ಮಾತ್ರ ಸಾಧ್ಯ! ಅಂತಹ ಹಿರಿಯ ವ್ಯಕ್ತಿಯೊಬ್ಬರ ಸಂಗ ನನಗೆ ದೊರಕಿದ್ದು ಯೋಗಾಯೋಗವೇ ಇರಬಹುದು.



’ಪದ್ಯಪಾನ’ದಲ್ಲಿ [http://padyapaana.com] ನಿನ್ನೆ ನನ್ನ ಅನಿಸಿಕೆಗಳನ್ನು ಹಂಚಿಕೊಂಡಿದ್ದೆ. ಮೇಲಿನ ಈ ಚಾಪ ಹಸ್ತದ ಬೇಡತಿಯ ಚಿತ್ರಕ್ಕೆ ಇಷ್ಟವಾದ ರೀತಿಯಲ್ಲಿ ಕವನ ಬರೆಯಬೇಕು ಎಂದು ತಿಳಿಸಿದ್ದರು . ಅದರ ಸ್ಯಾಂಪಲ್ಲುಗಳು ಈ ರೀತಿ ಇವೆ:

ನಾಡ ಹರೆಯದ ಹೈಕಳೆದೆಯಲಿ
ಮಾಡಿ ಮೋಡಿಯ ಜಾಗಪಡೆಯುತ
ಕಾಡು ಹೊಕ್ಕರೆ ಮರಳಿ ಸೆಳೆವರು ಬಿಡುವಜನವಲ್ಲ !
ಬೇಡಿ ಬರುವರು ಪ್ರೇಮಭಿಕ್ಷೆಯ
ಕಾಡಿ ಹುಡುಕುತ ನಿನ್ನ ಮೂಲದ
ಜಾಡ ಹಿಡಿವರು ಕೂಡುವಾಸೆಗೆ ಗೊಡವೆ ತರವಲ್ಲ !

ಬೆಡಗಿ ನಿನ್ನಯ ನಡು ನಿತಂಬವ
ಅಡಗುಗಣ್ಣಲೆ ಕಂಡು ಸೋತೆನು
ತುಡುಗು ಬುದ್ಧಿಯು ದೇಹಸಖ್ಯವ ಬಯಸುತಿಹುದಲ್ಲ |
ಒಡೆಯನಾಗುವ ಹುಚ್ಚು ಹಂಬಲ
ಬಿಡದೆ ನೆನೆವೆನು ರಾಮಚಂದ್ರನ
ಕೊಡಲಿ ನಿನ್ನನು ಶಾಶ್ವತಕೆ ನಾ ಬಿಡುವುದೇ ಇಲ್ಲ ||

ನೆಚ್ಚಿಕೊಳ್ಳುವೆ ನಿನ್ನನೋರ್ವಳ
ಅಚ್ಚಕನ್ನಡ ’ಕಾವ್ಯ’ ಜನಿಸಲಿ
ತುಚ್ಛನಾನೆಂದೆಣಿಸಿ ದೂರುತ ದೂರಹೋಗದಿರು |
ಅಚ್ಯುತನ ಪದದಾಣೆಯಲಿಪದ-
ಹಚ್ಚಿ ಪೊಗಳುವೆ ನಿನ್ನನೀ ಪರಿ
ಮೆಚ್ಚಿನೆನೆವೆನು ಭುವನದೊಳು ನೀ ಬಿಟ್ಟರೆನಗಿಲ್ಲ ! ||

ವಿಸ್ತರದಿ ಸಿರಿವತ್ಸಗಾದರ
ಮಸ್ತಕಕೆ ಕಸ್ತೂರಿ ಪೂಸುತ
ವಸ್ತುವಿಷಯವು ಗಹನವಿದ್ದರು ಗೆಲುವು ನಿಚ್ಚಳವು |
ಬೆಸ್ತ ಹುಡುಗಿಯ ಸುತನ ದಯೆಯಿರೆ
ಸುಸ್ತು ಎನಿಸದು ಬದುಕು ಸುಂದರ
ಅಸ್ತು ಎನ್ನುವ ಶತವಧಾನಿಗೆ ಜಯಜಯತು ಜಯವು ||

ಈ ಕವನದ ಭಾಗಗಳಲ್ಲಿ ಕೆಲವರ ಹೆಸರುಗಳೂ ಮತ್ತು ಅವರಿಗೆ ಸ್ವಾಗತಕೋರಿದ್ದು, ವಂದಿಸಿದ್ದೂ ಸೇರಿದೆ! ಮೂಲ ವಸ್ತುವಿಷಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಅದನ್ನು ಭಾಮಿನಿ ಷಟ್ಪದಿಯಲ್ಲಿ ಬರೆಯಲು ಪ್ರಯತ್ನಿಸಿದ್ದೇನೆ. ಪಾಠ ಬಹಳ ದೀರ್ಘವಾಯ್ತು, ಇವತ್ತಿಗೆ ಇಷ್ಟು ಸಾಕು, ಇಷ್ಟದ ಅಷ್ಟಾವಧಾನಿಗೆ ಸಾಷ್ಟಾಂಗ ನಮಸ್ಕಾರಗಳು. ಜೊತೆಗೆ ಪಾಠ ಕೇಳಿದ ನಿಮಗೆಲ್ಲರಿಗೂ ’ಪದ್ಯಪಾನ’ಕ್ಕೆ ಸ್ವಾಗತ ಮತ್ತು ನಮನಗಳು.

Monday, January 23, 2012

ಖಾಲೀ ಕೊಡವಾದರೂ ಪರವಾಗಿಲ್ಲ ಭಾಗಶಃ ತುಂಬಿದ ಕೊಡವಾಗಬೇಡಿ!


ಖಾಲೀ ಕೊಡವಾದರೂ ಪರವಾಗಿಲ್ಲ ಭಾಗಶಃ ತುಂಬಿದ ಕೊಡವಾಗಬೇಡಿ!

ಲಜ್ಜೆಗೇಡಿಗಳಿಗೆ ಮತ್ತೊಂದು ಹೆಸರು ಮಹಾತ್ಮರನ್ನು ದೂಷಿಸುವವರು ಎಂದೂ ಆಗಬಹುದು. ಈಗಿನ ಪತ್ರಿಕೆಗಳನ್ನು ನೋಡಿದರೆ ಮತ್ತು ಅದರಲ್ಲಿ ಬರೆಯುವ ಕೆಲವರನ್ನು ನೋಡಿದರೆ ವಿಷಯದ ವಿವೇಚನೆ ಇಲ್ಲದೇ ಕೇವಲ ಏಕಮುಖದಿಂದ ಬರೆಯುವುದು ಕಾಣುತ್ತದೆ. ಆಳವಾದ ಅಧ್ಯಯನದ ಕೊರತೆ ಒಂದು ಕಡೆಗಾದರೆ ವಿವಾದದಿಂದ ಓದುಗರನ್ನು ತನ್ನತ್ತ ಸೆಳೆಯುವ ತಂತ್ರಕೂಡ ಇದಾಗಿದೆ ಎಂಬುದು ಯಾರಿಗಾದರೂ ತೋರಿಬರುವ ಸಂಗತಿ. ಹಿಂದಕ್ಕೆ ಪತ್ರಿಕೆಗಳ ಮತ್ತು ಮಾಧ್ಯಮ ವಾಹಿನಿಗಳ ಸಂಖ್ಯೆ ಕಮ್ಮಿ ಇದ್ದಾಗ ವರದಿಗಾರರು ಅಲ್ಲಿಲ್ಲಿ ಏನನ್ನಾದರೂ ಹೆಕ್ಕಿ ತರುತ್ತಿದ್ದರು. ಇವತ್ತು ಅವುಗಳ ಸಂಖ್ಯೆ ಜಾಸ್ತಿಯಾಗಿ ’ಹುಲ್ಲುಗಾವಲು’ ಬರಿದಾಗಿದೆ, ಬಾವಿಯಲ್ಲಿ ನೀರಿನ ಸೆಲೆ ಕಮ್ಮಿ ಇದೆ-ಮೊದಲು ಹೋದವರಿಗೆ ಆದ್ಯತೆ ಇರುತ್ತದೆ. ಆದಗ್ಯೂ ಬಡಿದಾಡಿಕೊಂಡು ತಮ್ಮದೇ ಎಕ್ಸ್‍ಕ್ಲೂಸಿವ್ ವರದಿ ಎಂದು ಬೋರ್ಡು ಹಾಕಿಕೊಂಡು ಬಿತ್ತರಿಸುವ ಪತ್ರಿಕೆಗಳು/ವಾಹಿನಿಗಳು ಇನ್ನೊಂಡೆಡೆ ಅದೇ ವಿಷಯ ಪ್ರಸ್ತಾಪವಾಗುತ್ತಿರುವುದನ್ನು ಓದುಗರು/ವೀಕ್ಷಕರು ತಿಳಿದಿಲ್ಲ/ಕಂಡಿಲ್ಲ ಎಂದು ಹೀಗೆ ಗೂಬೆ ಕೂರಿಸುವ ಕೆಲಸ ತಪ್ಪು. ಕೆಲವು ಕಾಯಂ ಬರಹಗಾರರಿಗೆ ಕೆಲವು ವಾರಗಳಲ್ಲಿ ವಿಷಯವೇ ಇರುವುದಿಲ್ಲ! ಆಗೇನು ಮಾಡುವುದು? ಮಹಾತ್ಮರ ಚರಿತ್ರೆಗಳನ್ನೂ ಕೆದಕಿ ಅಲ್ಲಿನ ಚಿಕ್ಕ ವಿಷಯಗಳನ್ನು ’ಇಲಿ’ ಬದಲಿಗೆ ’ಹುಲಿ’ ಮಾಡಿ ಹೇಳುವುದು ಅವರ ಕರ್ಮ! ಸಸಾರ ನೋಡಿ ಕೇವಲ ಒಂದಕ್ಷರದ ಬದಲಾವಣೆ-ಅಲ್ಲೂ ಕೂಡ ಅಷ್ಟೇ ಕೇವಲ ದೂಷಣೆ, ಜನರಿಗೆ ಗೊತ್ತಿಲ್ಲದ ವಿಷಯಗಳನ್ನು ತಾನು ಆಕರಗಳ ಆಳದಿಂದ ಎತ್ತಿ ಹೇಳುತ್ತಿದ್ದೇನೆ ಎಂಬ ಹಮ್ಮು-ಬಿಮ್ಮು.

ದಿನಪತ್ರಿಕೆಯೊಂದರಲ್ಲಿ ಕೆಲದಿನಗಳ ಹಿಂದೆ ವಿವೇಕಾನಂದರ ಬಗ್ಗೆ ಒಬ್ಬರು ಬರೆದಿದ್ದಾರೆ. ಪಾಪ ಅವರಿಗೆ ಅಷ್ಟಾಗಿ ವಿವೇಕ ಜಾಗ್ರತಗೊಳ್ಳಲಿಲ್ಲ ಎನಿಸುತ್ತದೆ. ನನ್ನ ಗೆಳೆಯರ ಬಳಗದಲ್ಲಿ ಅವರೂ ಇದ್ದಾರೆ, ಹಾಗಂತ ಸ್ನೇಹಿತರೋ ಮನೆಯವರೋ ತಪ್ಪು ಮಾಡಿದರೆ ಅದನ್ನು ಒಪ್ಪುವ ಜಾಯಮಾನ ನನ್ನದಲ್ಲವಲ್ಲಾ! ನದೀಮೂಲ ಋಷಿ ಮೂಲ ಮತ್ತು ಸ್ತ್ರೀ ಮೂಲಗಳನ್ನು ಕೆದಕಬಾರದು ಎಂದು ಹಿಂದೆಯೇ ಶಾಸ್ತ್ರಕಾರರು ಬರೆದಿದ್ದಾರೆ. ಅಲ್ಲಿ ನಮಗೆ ಬೇಡದ ವಿಷಯಗಳೂ ಇರಬಹುದು. ಹಂಸಕ್ಷೀರ ನ್ಯಾಯದಂತೇ ಕೇವಲ ಬೇಕಾದ್ದನ್ನು ಪಡೆದು ಬೇಡದ್ದನ್ನು ಬಿಡುವ ಚಾಕಚಕ್ಯತೆ ನಮ್ಮಲ್ಲಿರಬೇಕು. ಅದಕ್ಕೆಂತಲೇ ಭಗವಂತ ನಮಗೆ ’ತಲೆ’ ಕೊಟ್ಟಿದ್ದಾನೆ. ನಾವೆಲ್ಲಾ ಶಾಲೆಗೆ ಹೋಗುವಾಗ ಓದಿದ್ದನ್ನು ಮರೆತು ಏನೇನೋ ತಪ್ಪು ಉತ್ತರಗಳನ್ನು ಹೇಳಿದರೆ ಮಾಸ್ತರು " ತಲೆಯಲ್ಲಿ ಏನಿದೆಯಪ್ಪಾ ಕೊಳೆತ ಬಟಾಟೆ ಇದ್ಯೋ ಅಥವಾ ಕೊಳೆತ ಉಳ್ಳಾಗಡ್ಡೆ[ಈರುಳ್ಳಿ]ನೋ ? " ಎನ್ನುತ್ತಿದ್ದರು. ಬರಹಗಾರರ ತಲೆಯಲ್ಲಿ ಇವತ್ತು ಏನಿದೆ ಎಂದು ಅವರೇ ಕೇಳಿಕೊಳ್ಳಬೇಕಾಗಿದೆ. ನಿನ್ನೆ ಒಬ್ಬರು ರಾಂಟ್ RANT ಶಬ್ದ ಬಳಸಿದ್ದರು. ಹಾಗೆಂದರೆ ನಾವೆಲ್ ಎಂದೂ ಅಥವಾ ವಾಂತಿಯೆಂದೂ ಅರ್ಥವಾಗುತ್ತದೆ. ನಿಮಗೆ ಹೇಗೇ ಬೇಕೋ ಹಾಗೆ ಅರ್ಥಮಾಡಿಕೊಳ್ಳಬಹುದು! ಚೆನ್ನಾಗಿದ್ದರೆ ನಾವೆಲ್ ಎನಿಸಿ ಮರು ಮರು ಮುದ್ರಣ ಕಾಣಬಹುದಾದ ಕೃತಿ ಓದಲಾಗದ ರೀತಿ ಇದ್ದರೆ ಅದನು ರಾಂಟ್ ಎನ್ನಬಹುದಾಗಿದೆ. ಅಂತಹ ರಾಂಟ್‍ಗಳ ಸಾಲಿಗೆ ತನ್ನ ಬರಹ ಇನ್ನೊಂದು ಸೇರ್ಪಡೆಯೇ ಎಂಬ ತಜ್ಜನಿತ[ಅಲ್ಲಲ್ಲೇ ಹುಟ್ಟಿದ] ಆತ್ಮಾವಲೋಕನ ಕ್ರಿಯೆ ಬರಹಗಾರನಿಗೆ ಇದ್ದರೆ ಬರಹಗಾರ ಗೆಲ್ಲಬಹುದು, ಅಥವಾ ಆಕ್ಷಣಕ್ಕೆ ಬರಹಗಾರ ಕಿಸೆ ಭರ್ತಿಮಾಡಿಕೊಳ್ಳಬಹುದೇ ಹೊರತು ಅದು ಪರೋಕ್ಷ ಸಮಾಜದ ದಾರಿತಪ್ಪಿಸಿದ ನಯವಂಚಕ ಮಾರ್ಗದಿಂದ ಬಂದ ಹಣ ಎನಿಸಿಕೊಳ್ಳುತ್ತದೆ!

ಯಾವುದೇ ವಿಷಯವಸ್ತುವನ್ನು ವಿಶ್ಲೇಷಿಸುವಾಗ ನಮಗೆ ಅದರಲ್ಲಿ ಪ್ರೌಢಿಮೆ ಇದೆಯೇ ಎಂಬುದು ಪ್ರಮುಖವಾಗಿ ನೋಡಬೇಕಾದ ಅಂಶ. ವಿವೇಕಾನಂದರ ಒಂದು ಪುಸ್ತಕವನ್ನೂ ಸರಿಯಾಗಿ ಓದದ ವ್ಯಕ್ತಿ ವಿವೇಕಾನಂದರ ಕುರಿತು ಬರೆಯುವುದು ಹೇಗೆ? ಹಿರಿಯ ಮಿತ್ರರಾದ ಶ್ರೀ ಆರ್. ಗಣೇಶರ ಪುಸ್ತಕವೊಂದರ ಕುರಿತು ನಾನು ಬರೆಯುವಾಗ ಅವರು ನನಗೆ ಹೇಳಿದ್ದಿಷ್ಟು : " ಭಟ್ಟರೇ, ಪುಸ್ತಕವನ್ನು ಓದದೇ ಅದರ ಬಗ್ಗೆ ವಿಶ್ಲೇಷಿಸುವುದು ಸರ್ವದಾ ತಪ್ಪು. ಅದು ನಾನೇ ಬರೆದದ್ದಿರಲಿ ಮತ್ತೊಬ್ಬ ಬರೆದಿದ್ದಿರಲಿ." ಎಂತಹ ಔಚಿತ್ಯಪೂರ್ಣ ಮಾತು. ಹಾಗಂತ ನಾನೊಬ್ಬ ವಿಮರ್ಶಕನೆಂಬ ಬೋರ್ಡು ಹಾಕಿಕೊಂಡವನಲ್ಲ. ಮಾಧ್ಯಮಗಳ ಕಛೇರಿಯಲ್ಲಿ ಕುರ್ಚಿ ಅಲಂಕರಿಸಿಲ್ಲ. ಆದರೂ ಅವರು ನನ್ನಲ್ಲಿ ಹೇಳಿದ್ದು ಹಾಗೆ. ಪ್ರಾಯಶಃ ’ತುಂಬಿದ ಕೊಡ ತುಳುಕಿವುದಿಲ್ಲ’ ಎಂದಿದ್ದು ಗಣೇಶ್ ರಂಥವರನ್ನು ನೋಡಿಯೇ ಇರಬೇಕು. ತುಂಬಿದ ಕೊಡವೊಂದೇ ಅಲ್ಲ, ಖಾಲೀ ಕೊಡವೂ ತುಳುಕುವುದಿಲ್ಲ ಎಂಬ ಇಂದಿನ ಹುಡುಗಾಟಿಕೆಯ ಉತ್ತರವನ್ನು ಮೊದಲಾಗಿಯೇ ಪರಿವೀಕ್ಷಿಸಿ ಅದಕ್ಕೂ ಹೇಳಿಬಿಡುತ್ತಿದ್ದೇನೆ: ಖಾಲೀ ಕೊಡವಾದರೂ ಪರವಾಗಿಲ್ಲ, ಭಾಗಶಃ ತುಂಬಿದ ಕೊಡ ಮಾತ್ರ ಆಗಬೇಡಿ! ಗೊತ್ತಿಲ್ಲದ ವಿಷಯಗಳಲ್ಲಿ ಮೂಗು ತೂರಿಸಿ ಬರೆಯಬೇಡಿ ಎಂಬುದು ಆ ಮಿತ್ರರಿಗೆ ನನ್ನ ಸಲಹೆ. ಈಗ ನೀವೆಲ್ಲಾ ಓದುತ್ತಿರುವಂತೇಯೇ ಅವರೂ ಇದನ್ನು ಓದುತ್ತಿರಬಹುದು, ಅವರ ಪಾಡಿಗೆ ಅವರಿಗೆ ಜ್ಞಾನೋದಯವಾಗಬಹುದು ಎಂದುಕೊಳ್ಳುತ್ತೇನೆ.

ವಿವೇಕಾನಂದರು ಹುಟ್ಟಾ ಬ್ರಾಹ್ಮಣ ಜಾತಿಯವರಲ್ಲ. ಹಿಂದೂ ಸಂಪ್ರದಾಯವನ್ನು ಮುರಿದು ಸನ್ಯಾಸ ಸ್ವೀಕರಿಸಿದರು, ಅವರಿಗೆ ಒಂದಲ್ಲಾ ಎರಡಲ್ಲಾ ಮೂವತ್ತೊಂದು ಕಾಯಿಲೆಗಳಿದ್ದವು, ಅವರು ಮಾಂಸಾಹಾರಿಯಾಗಿದ್ದರು, ಅವರಿಗೆ ಎಳವೆಯಲ್ಲೇ ಮುಪ್ಪು ಆವರಿಸಿತ್ತು, ಯಾರಾದರೂ ಮೈಯ್ಯನ್ನು ಮುಟ್ಟಿದರೂ ನೋವು ಎನ್ನುತ್ತಿದ್ದರು, ಕೂದಲು ಪ್ರಾಯದಲ್ಲೇ ಹಣ್ಣಾಗಿತ್ತು. ಸನ್ಯಾಸಿಯಾಗಿಯೂ ಅವರು ಮ್ಲೇಚ್ಛರ ಮನೆಯಲ್ಲಿ ಊಟಮಾಡುತ್ತಿದ್ದರು, ಏಸು ಬದುಕಿದ್ದರೆ ಅವನ ಪಾದವನ್ನು ಕಣ್ಣಹನಿಯಿಂದಲ್ಲ ಹೃದಯದ ರಕ್ತದಿಂದ ತೊಳೆಯುತ್ತಿದ್ದೆ ಎಂದ ಹಿಂದೂ ವಿರೋಧಿಗಳು -ಮುಂತಾಗಿ ಸಿಕ್ಕ ಸಿಕ್ಕ ಹಾಗೇ ಹಲುಬಿದ್ದಾರೆ ಅವರ ಅಂಕಣದಲ್ಲಿ. ಸ್ವಾಮೀ ವಿವೇಕಾನಂದರು ಅವರ ಶರೀರಧರ್ಮಕ್ಕೆ ತಕ್ಕಂತೇ ಏನನ್ನೋ ಮಾಡಿರಲಿ ಆದರೆ ಅವರು ಕೊಟ್ಟ ಸುದೀರ್ಘ ಪ್ರಬಂಧಗಳಲ್ಲಿ ಒಂದನ್ನಾದರೂ ನೀವು ಓದಿ ಅರ್ಥೈಸಿಕೊಂಡಿರೇ? ಖಂಡಿತಾ ಇಲ್ಲ! ನೀವು ಓದಿದ್ದು ಎರಡೇ ವಾಕ್ಯ. ಮೊದಲನೆಯದು " ನೀನು ನಿನ್ನನ್ನು ತಿದ್ದಿಕೋ ಜಗತ್ತಿನಲ್ಲಿ ಒಬ್ಬ ಮೂರ್ಖನ ಸಂಖ್ಯೆ ಕಡಿಮೆಯಾದೀತು" ಇನ್ನೊಂದು " ಎದ್ದೇಳಿ ಯುವಕರೇ ಭಾರತದ ಕಲಿಗಳೇ ಏಳಿ ಎಚ್ಚರಗೊಳ್ಳಿ" ಇವೆರಡು ವಾಕ್ಯಗಳಲ್ಲೇ ಮೊದಲನೇ ವಾಕ್ಯ ನಿಮಗೆ ರುಚಿಸಲಿಲ್ಲ, ಎರಡನೆಯದು ಜೀರ್ಣವಾಗಲಿಲ್ಲ! ಹೀಗಿರುವಾಗ ವಿವೇಕಾನಂದರ ಬಗ್ಗೆ ಯಾರೋ ವಿದೇಶೀ ಮಹಿಳೆ ಬರೆದಿದ್ದಳು ಎಂದೆಲ್ಲಾ ಆಧಾರ ಕೊಡುತ್ತಾ ಇಲ್ಲಸಲ್ಲದ್ದನ್ನು ನೀವು ಬರೆದಿದ್ದು ನೋಡಿದರೆ ನೀವು ’ಜ್ಞಾನದ ಆಗರ’ ಎಂಬುದು ಸಾಬೀತಾದ ವಿಷಯದಂತೇ ಕಾಣುತ್ತದೆ! ಸಂಶಯವಿಲ್ಲ.

ಬಹಳ ಹಿಂದೆಯೇ ನಾನು ಬರೆದಿದ್ದೆ, ಬರಹಗಾರರಲ್ಲಿ ಎರಡು ವಿಧ. ಹೊಟ್ಟೆಪಾಡಿನ ಬರಹಗಾರರು ಮತ್ತು ಉತ್ತಮ ಬರಹಗಾರರು ಎಂದು ಮೊದಲನೆಯವರು ಪತ್ರಿಕೆಗಳಲ್ಲೋ ಮಾಧ್ಯಮಗಳಲ್ಲೋ ಕೂತು ’ಜಾಗ ತುಂಬಿಸುವ’ ಕೆಲಸ ಮಾಡಿಕೊಡುತ್ತಾರೆ. ಎರಡನೇ ವರ್ಗದವರು ಸಮಾಜಮುಖಿಗಳಾಗಿ ಅಲ್ಲಲ್ಲಿ ಅಲ್ಲಲ್ಲಿ ತಮ್ಮ ಬರಹಗಳನ್ನು ಪ್ರಕಟಿಸುತ್ತಾ ಆಗಬೇಕಾದ ಕೆಲಸಕ್ಕೆ ಸಂದೇಶ ರವಾನೆ ಮಾಡುತ್ತಿರುತ್ತಾರೆ. ಸದ್ರೀ ಲೇಖಕರು ಮೊದಲನೆಯ ಗುಂಪಿಗೆ ಸೇರಿದವರಾಗಿದ್ದು ಈ ಲೇಖನವನ್ನೋದುತ್ತಿದ್ದಂತೆಯೇ ಅವರ ಚೇಲಾಗಳು ಫ್ಯಾನುಗಳು ವಿಚಿತ್ರ ಕಾಮೆಂಟುಗಳನ್ನು ಹಾಕುವುದು ನಿರೀಕ್ಷಿತವೇ. ಅದಕ್ಕೆಲ್ಲಾ ಹೆದರಿ ಬರೆಯದೇ ಇರುವ ವ್ಯಕಿ ನಾನಂತೂ ಅಲ್ಲ. ’ದಿನೇಶ’ನ ಕಿರಣ ಮೈಮೇಲೆ ಬಿದ್ದಾಗಿನಿಂದ ಆ ಸೂರ್ಯನ ಹೆಸರನ್ನು ಹಾಳುಗೆಡಹುವ ಜನರನ್ನು ಕಂಡರೆ ನನಗೆ ಎಲ್ಲಿಲ್ಲದ ಕೋಪ ಬರುತ್ತದೆ.

ಕಸದಿಂದ ರಸ ಎಂಬುದಕ್ಕೆ ಗೋವು ಸಾಕ್ಷಾತ್ ಉದಾಹರಣೆ. ಕಸವನ್ನೇ ತಿಂದು ಅಮೃತತುಲ್ಯ ’ಹಾಲು’ ಎಂಬ ರಸವನ್ನು ಅದು ಕೊಡುವುದರಿಂದ ಹೀಗೆ ಹೇಳುತ್ತಿದ್ದೇನೆ. ಗೋವಿನ ಕೆಚ್ಚಲಲ್ಲಿ ರಕ್ತವನ್ನು ಬಯಸುವ ಕೆಲಜನ ಅದು ಹಾಲು ಕೊಡುತ್ತಿರುವುದಕ್ಕೆ ಅದನ್ನೇ ಬೈಯ್ಯುತ್ತಾರೆ. ಸಂತ-ಮಹಂತರು ಗೋವಿನ ಹಾಗೇ ಇರುತ್ತಾರೆ. ವಿವೇಕಾನಂದರೂ ಇದಕ್ಕೆ ಹೊರತಾಗಿರಲಿಲ್ಲ. ತಮ್ಮಲ್ಲಿನ ದೌರ್ಬಲ್ಯಗಳನ್ನು ಅವರು ರಾಮಕೃಷ್ಣರಲ್ಲಿ ಹೇಳಿಕೊಂಡರು. ಆಹಾರ ಅವರ ಜನ್ಮಮೂಲದಿಂದ ಬಂದಿದ್ದಾದ್ದರಿಂದ ಕೆಲ ಮಟ್ಟಿಗೆ ಅವರು ಮಾಂಸಾಹಾರವನ್ನು ಭುಂಜಿಸಿರಬಹುದು. ನಮ್ಮ ಅವತಾರಗಳಲ್ಲಿ ರಾಮ, ಕೃಷ್ಣ ಇವರೆಲ್ಲಾ ಮಾಂಸಾಹಾರಿಗಳೇ ಆಗಿದ್ದರು ಸ್ವಾಮೀ. ಆದರೆ ನಾವು ಅವರನ್ನು ದೇವರೆಂದು ಪೂಜಿಸುತ್ತಿಲ್ಲವೇ? ಭಗವಂತ ಅವರಾಗಿ ಅವತಾರ ಎತ್ತಲಿಲ್ಲವೇ? ಇನ್ನು ನನಗೆ ಪರೋಕ್ಷವಾಗಿ ವೇದವನ್ನು ಓದಲು ಪ್ರೇರೇಪಿಸಿದವರು ಮಹರ್ಷಿ ಮಹೇಶ್ ಯೋಗಿ ! ಅವರ ಪಾಠಶಾಲೆಯಲ್ಲೇ ನಾನು ಪ್ರಥಮವಾಗಿ ಕಲಿತಿದ್ದು. ತಿಂಗಳಿಗೆ ಹನ್ನೊಂದು ರೂಪಾಯಿ ಕೊಟ್ಟು ಕಲಿಸಿದರು ಆ ಮಹಾತ್ಮ! ಜನ್ಮ ಮೂಲದಿಂದ ಮಹೇಶ್ ಯೋಗಿ ಬ್ರಾಹ್ಮಣ ಕುಲದವರಲ್ಲಾ ಸ್ವಾಮೀ! ಅವರು ಯಾರು ಎಂಬುದು ಮುಖ್ಯವಲ್ಲ- ಅವರ ಕೊಡುಗೆ ಮುಖ್ಯ. ವಿರಾಗಿಯಾಗಿ, ಸನ್ಯಾಸಿಯಾಗಿ ಮಹೇಶ್ ಯೋಗಿ ಸಾಧನೆಮಾಡಿ ಸ್ವಿಟ್ಜರ್ಲ್ಯಾಂಡ್ ನಲ್ಲಿ ಅನೇಕವರ್ಷಗಳ ಕಾಲ ಧರ್ಮದ ಪುನರುತ್ಥಾನ ಕ್ರಿಯೆಯನ್ನು ನಡೆಸಿದರು. ಇವತ್ತಿಗೂ ಅವರು ಗುರುವೆಂಬ ಭಾವ ನನ್ನಲ್ಲಿದೆ. ಮಹರ್ಷಿ ವಾಲ್ಮೀಕಿ ಒಬ್ಬ ಬೇಡನಾಗಿದ್ದರು. ಮಹರ್ಷಿ ವಿಶ್ವಾಮಿತ್ರರು ಮೊದಲು ಕ್ಷತ್ರಿಯರಾಗಿದ್ದರು. ಇಲ್ಲೆಲ್ಲಾ ನಾವು ಋಷಿ ಮೂಲವನ್ನು ಕೆದಕಲಿಲ್ಲ, ಅವೇ ಕಾಣಿಸಿದವು. ಸ್ವಾಮಿ ವಿವೇಕಾನಂದರ ಮೂಲ ಕೂಡ ಹುದುಗಿಸಿಟ್ಟ ಗೌಪ್ಯದ ವಿಷಯವೇನಲ್ಲ. ಅದನ್ನು ಮೊದಲು ಮನಗಾಣಬೇಕಾದ್ದು ನೀವು.

ಸನ್ಯಾಸಿಯಾದ ಮಾತ್ರಕ್ಕೆ ಈ ಜನ್ಮಕ್ಕೆ ಅಂಟಿದ ಕಾಯಿಲೆಗಳು ವಿನಾಶವಾಗಿಬಿಡುವುದಿಲ್ಲ. ಹಿಂದಿನ ಕರ್ಮಫಲಗಳನ್ನು ಆತ ಅನುಭವಿಸಲೇ ಬೇಕಾಗುತ್ತದೆ. ದೃಷ್ಟಾಂತವೊಂದನ್ನು ಹೇಳುತ್ತಿದ್ದೇನೆ: ಒಮ್ಮೆ ಭಗವಾನ್ ಶ್ರೀಧರರು ಕಾಶಿಯಲ್ಲಿರುವಾಗ ಅವರಿಗೆ ರಕ್ತಬೇಧಿ ಆರಂಭವಾಗಿತ್ತು. ಹತ್ತಿರ ಇದ್ದ ಶಿಷ್ಯರು ಏನೇ ಉಪಚರಿಸಿದರೂ ಅದು ಕಮ್ಮಿಯೇ ಆಗಿರಲಿಲ್ಲ. ಇನ್ನೇನು ಕೃಶಕಾಯರಾಗಿ ಗುರುಗಳು ದೇಹವನ್ನೇ ವಿಸರ್ಜಿಸುವರೋ ಎಂಬ ಹಂತ ತಲ್ಪಿತ್ತು. ಶಿಷ್ಯರ ಒತ್ತಾಯದ ಮೇರೆಗೆ ಲೋಟವೊಂದರಲ್ಲಿ ನೀರನ್ನು ತರಿಸಿದ ಶ್ರೀಧರರು, ಶಿಷ್ಯನ ಕೈಲೇ ಆ ಲೋಟವನ್ನಿರಿಸಿ ಅವರೇ ರಚಿಸಿದ " ನಮಃ ಶಾಂತಾಯ ದಿವ್ಯಾಯ....." ಎಂಬ ಮಂತ್ರವನ್ನು ನೂರೆಂಟಾವರ್ತಿ ಪಠಿಸಲು ಹೇಳಿದರು. ಪ್ರತೀ ಹೊತ್ತಿಗೂ ನೂರೆಂಟಾವರ್ತಿ ಹಾಗೆ ಪಠಿಸುತ್ತಾ ನೀರನ್ನು ಕುಡಿಸುತ್ತಾ ಇದ್ದ ಅಲ್ಲಿದ್ದ ಶಿಷ್ಯ. ವಾರದಲ್ಲಿ ಕ್ರಮೇಣ ಹಂತಹಂತವಾಗಿ ರಕ್ತಬೇಧಿ ನಿಲ್ಲುತ್ತಾ ಬಂತು! ನಾನು ನೋಡಿದ ಅನೇಕ ಸನ್ಯಾಸಿಗಳೂ ಮಹಾನ್ ತಪಸ್ವಿಗಳೂ ತಮ್ಮ ಶರೀರಕ್ಕೆ ಒದಗಿದ ಕಾಯಿಲೆಯನ್ನು ಹಾಗೆ ಇದ್ದಕ್ಕಿದ್ದಲ್ಲೇ ಮಂಗಮಾಯ ಮಾಡುವುದಿಲ್ಲ, ಬದಲಾಗಿ ಎಲ್ಲರಂತೇಯೇ ಅನುಭವಿಸೇ ಹಿಂದಿನ ಋಣವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ ರಮಣ ಮಹರ್ಷಿಗಳೂ ಶಿರಡೀ ಸಾಯಿಬಾಬರೂ ಉದಾಹರಣೆಗಳಾಗುತ್ತಾರೆ. ರಮಣ ಮಹರ್ಷಿಗಳಿಗೆ ಹುಣ್ಣಾಗಿ ಹುಣ್ಣಿನಲ್ಲಿ ಹುಳಗಳೂ ಓಡಾಡುತ್ತಿದ್ದವು! ಹುಣ್ಣಿನ ಹುಳಗಳನ್ನು ಅವರು ನಾಶಪಡಿಸುತ್ತಿರಲಿಲ್ಲ, ಬದಲಿಗೆ ಅವು ಋಣದಿಂದ ಮುಕ್ತಿ ಕೊಡುತ್ತಿವೆ ಎನ್ನುತ್ತಿದ್ದರು!

ಅನೇಕಾವರ್ತಿ ಹೇಳುತ್ತಲೇ ಬಂದಿದ್ದೇನೆ. ವಿವೇಕಾನಂದರಂತಹ ಕುಲೀನ ಕ್ಷತ್ರಿಯ ಸನ್ಯಾಸಿಯನ್ನು ಸಮಾಜ ಒಪ್ಪಿಕೊಂಡಿದ್ದು ಯಾಕೆಂದರೆ ಅವರ ಆಳವಾದ ಅಧ್ಯಯನ ಮತ್ತು ಅಧ್ಯಾಪನಕ್ಕಾಗಿ. ರಾಮಕೃಷ್ಣರು ಮಗುವಿನಲ್ಲಿನ ಸಾಮಾಜಿಕ ಕಳಕಳಿಯನ್ನು ನೋಡಿ ಸನ್ಯಾಸವನ್ನು ನೀಡಿದರು; ಶಕ್ತೀಪಾತ ಯೋಗವೆಂಬ ಸಿದ್ಧಿಯಿಂದ ತಾವು ಪಡೆದಿದ್ದ ಪರಿಪೂರ್ಣ ಜ್ಞಾನವನ್ನು ವಿವೇಕಾನಂದರಿಗೆ ಅನುಗ್ರಹಿಸಿದರು. ವಿವೇಕಾನಂದರ ಬಾಳಿನ ಆ ತಿರುವಿನ ನಂತರ ವಿವೇಕಾನಂದರು ಇಡೀ ವಿಶ್ವಕ್ಕೇ ಅಧ್ಯಾಪನ ನಡೆಸಿದರು! ವಿಶ್ವವಂದ್ಯರಾದರು. ಕಮಲದ ಹುಟ್ಟು ಕೆಸರಲ್ಲೇ ಹೊರತು ಸಾಮಾನ್ಯ ನೀರಿನಲ್ಲಿ ಆಗುವುದಿಲ್ಲ. ಕೆಸರಲ್ಲಿ ಹುಟ್ಟಿತೆಂದು ದೇವರಿಗೆ ಅದನ್ನು ಅರ್ಪಿಸುವುದಿಲ್ಲವೇ? ದೇವರು ಅದನ್ನೇ ತನ್ನ ಕುಳಿತುಕೊಳ್ಳುವಿಕೆಗೂ ತನ್ನ ಹೊಕ್ಕಳಿನಿಂದ ಹೊರಹೊರಡಿಸಿ ಅದರಲ್ಲಿ ಬ್ರಹ್ಮನ ಕೂತುಕೊಳ್ಳುವಿಕೆಗೂ ಕಾರಣನಾದನಲ್ಲವೇ? ಸ್ವಾರಸ್ಯ ಹೀಗಿದೆ: ಮನೆಗಳಲ್ಲಿ ನಾವು ಚಪ್ಪಲಿ ಇಡುವಲ್ಲಿ ದೇವರ ಚಿತ್ರಪಟಗಳನ್ನು ಇಡುವುದಿಲ್ಲ. ಆದರೆ ಚಮ್ಮಾರನೊಬ್ಬ ತನ್ನ ಅಂಗಡಿಯಲ್ಲಿ ಚಪ್ಪಲಿಗಳ ಪಕ್ಕದಲ್ಲೇ ಚಿಕ್ಕ ಜಾಗದಲ್ಲಿ ದೇವರ ಪಟ ಇಟ್ಟು ಪೂಜಿಸುತ್ತಾನೆ. ಅದರಂತೇ ಆ ಯಾ ವೃತ್ತಿಯವರು ತಮಗಿರುವ ಜಾಗದಲ್ಲೇ ಭಗವಂತನಿಗೂ ಒಂದು ಪುಟ್ಟ ಜಾಗ ಕೊಡುತ್ತಾರಲ್ಲಾ ಆ ಮನದ ಭಕ್ತಿಯನ್ನು ಭಗವಂತ್ ಅಪೇಕ್ಷಿಸುತ್ತಾನೆ, ನಿರೀಕ್ಷಿಸುತ್ತಾನೆ. ಸಪ್ತರ್ಷಿಗಳ ಅಂಶವೊಂದು ಜಾರಿ ನರೇಂದ್ರನಾಥ[ವಿವೇಕಾನಂದರ ಪೂರ್ವಾಶ್ರಮದ ಹೆಸರು]ನ ಜನನವಾಯಿತೆಂಬ ಹೇಳಿಕೆಯಿದೆ. ಮಹಾತ್ಮರು ಮಿಕ್ಕವರ ಹಾಗೇ ಬಹಳಕಾಲ ಇಲ್ಲೇ ಉಳಿಯುವುದಿಲ್ಲ. ಬಂದ ಸಂಕಲ್ಪ ಸಿದ್ಧಿಯಾದಮೇಲೆ ಅವರು ಹೊರಟುಹೋಗುತ್ತಾರೆ.

೩೯ ವರ್ಷ ೫ ತಿಂಗಳು ೨೪ ದಿನ ಬದುಕಿದ್ದೂ ಆ ಕಾಲದಲ್ಲೇ ಇಷ್ಟೆಲ್ಲಾ ಹೆಸರುಗಳಿಸಲು ಕಾರಣ ಅವರ ಆಂಗ್ಲ ಭಾಷಾ ಪ್ರೌಢಿಮೆ ಎನ್ನುವ ಈ ಲೇಖಕ ವಿವೇಕಾನಂದರು ತರಗತಿಯಲ್ಲಿ ಶತ ದಡ್ಡರಾಗಿದ್ದರು ಎನ್ನುತ್ತಾನೆ. ಖೇತ್ರಿ ಮಹಾರಾಜರ ಮಾಸಿಕ ವೇತನದಿಂದ ವಿವೇಕಾನಂದರ ಅಮ್ಮ ಬದುಕು ನಡೆಸಿದರು ಎನ್ನುತ್ತಾನೆ. ಸನ್ಯಾಸಿಗೆ ಸಂಸಾರದ ಬಂಧವಿಲ್ಲ. ಅಷ್ಟಕ್ಕೂ ವಿವೇಕಾನಂದರು ಅವರಮ್ಮನಿಗೆ ಏಕಮಾತ್ರ ಸಂತಾನ ಎಂದೇನೂ ಇರಲಿಲ್ಲ. ಉಳಿದ ಹತ್ತು ಮಕ್ಕಳು ಏನು ಮಾಡಿದರು ಸರ್ ? ಅಮ್ಮನನ್ನು ಮರೆತುಹೋದರೇ? ವಿವೇಕಾನಂದರು ನಿರುದ್ಯೋಗಿಯಾಗಿದ್ದು ಹರಕಲು ಬಟ್ಟೆ ತೊಟ್ಟು ಕಲ್ಕತ್ತಾದ ಬೀದಿಗಳಲ್ಲಿ ಸುತ್ತುತ್ತಿದ್ದರಂತೆ ಎಂದಿರಲ್ಲಾ ಸನ್ಯಾಸಿಗಳಿಗೆ ತಪಸ್ಸು, ಅಧ್ಯಯನ ಮತ್ತು ಸನ್ಮಾರ್ಗ ಬೋಧನೆ ಬಿಟ್ಟು ಬೇರೇನು ಉದ್ಯೋಗ ಇರುತ್ತದೆ ?

ವಿವೇಕಾನಂದರ ವಿವೇಕ, ಅವರ ಅಗಾಧ ಜ್ಞಾನ, ಧರ್ಮಾಂಧತೆಯ ವಿರುದ್ಧದ ಅವರ ಧೋರಣೆ, ಘನತರ ವಿಷಯಗಳನ್ನೂ ಸುಲಭವಾಗಿ ಎಲ್ಲರಿಗೂ ಅರಿವಾಗುವಂತೇ ತಿಳಿಸಿಕೊಡುವ ಜಾಣ್ಮೆ, ಇತಿಹಾಸದ ಅರಿವು, ಪ್ರಸಕ್ತ ವಿದ್ಯಮಾನಗಳ ಅರಿವು ಇದೆಲ್ಲಾ ಇದ್ದು ಅವರು ಬರೆದ ಬೃಹತ್ ಸಂಹಿತೆಗಳನ್ನು ಅರ್ಥಮಾಡಿಕೊಳ್ಳಲಾಗದವರು ಆಗಲೂ ಇದ್ದರು, ಈಗಲೂ ಇದ್ದಾರೆ. ಹೇಗೆ ಮೂಲ ಭಗವದ್ಗೀತೆ ಎಲ್ಲರಿಗೂ ಅರ್ಥವಾಗುವುದು ಕಷ್ಟಸಾಧ್ಯವೋ ಹಾಗೆಯೇ ವಿವೇಕ ವಾಣಿ ಎಲ್ಲರಿಗೂ ರುಚಿಸುವುದಿಲ್ಲ, ಅರ್ಥವಾಗುವುದಿಲ್ಲ. ದೇಹ ದಾರ್ಡ್ಯತೆಯ ಬಗ್ಗೆ ಹಾಗೆ ತೊಂದರೆಯಿತ್ತು ಹೀಗೆ ಕೊಸರೊಂದಿತ್ತು ಎಂದು ಸರ್ಟಿಫಿಕೇಟ್ ಕೊಟ್ಟಿದ್ದೀರಲ್ಲ ಅವರ ನಿಲುವನ್ನು ಚಿತ್ರದಲ್ಲಾದರೂ ಸರಿಯಾಗಿ ಒಮ್ಮೆ ನೋಡಿದ್ದೀರೇ ? ವಾರಗಳ ಕಾಲ ಸ್ನಾನ ಮಾಡದ ವ್ಯಕ್ತಿ ಕುಂತಲ್ಲೇ ನಾರುವ ಹಾಗೇ ನಿಮ್ಮಂಥಾ ’ಮಹಾಜ್ಞಾನಿಗಳು’ವಾಸನೆ ಹೊಡೆಯುತ್ತಿರುವುದು ಸುತ್ತಲ ಜನರಿಗೆ ಕೂತುಕೊಳ್ಳಲಿಕ್ಕೆ ಆಗುತ್ತಿಲ್ಲ! ಇನ್ನು ಮೇಲಾದರೂ ತಾನೇ ಪಂಡಿತ, ತನ್ನ ಶಂಖದಿಂದ ಬಂದಿದ್ದೇ ತೀರ್ಥ ಎಂಬ ನಿಮ್ಮ ಲಹರಿಯನ್ನು ಕೈಬಿಟ್ಟು ಲೋಕಮುಖರಾಗಿ ವಿವೇಚಿಸಿ ಬರೆಯಿರಿ ಎಂದು ಉನ್ನತ ಶಬ್ದಗಳಲ್ಲಿ ಗೌರವಿಸಿ ಬರೆದಿದ್ದೇನೆ. ಅರ್ಧ ತುಂಬಿದ ಅಥವಾ ಭಾಗಶಃ ತುಂಬಿದ ಕೊಡವಾದರೆ ಬಹಳ ಕಷ್ಟ; ಜನ ಹಿಡಿದು ಬಡಿದೂಬಿಡಬಹುದು! |ಅಲ್ಪವಿದ್ಯಾ ಮಹಾಗರ್ವೀ .....ಕೇಳಿದ್ದೀರಲ್ಲಾ ?

[ಮಾಹಿತಿಗೆ ೧೬.೧.೨೦೧೨ ರ ಕನ್ನಡ ದಿನಪತ್ರಿಕೆಯೊಂದನ್ನು ನೀವು ಬಳಸಿಕೊಳ್ಳಬಹುದು; ಲೇಖನ ಯಾವುದಕ್ಕೆ ಉತ್ತರ ಎಂಬುದು ತಮಗೂ ಸರಿಯಾಗಿ ತಿಳಿಯುತ್ತದೆ]


Friday, January 20, 2012

ಅರ್ಪಾ, ಅಪಸ್ಮಾರ ಮತ್ತು ಅಗೋಚರ ಕಾರಣಗಳು.

ಚಿತ್ರಗಳ ಋಣ : ಅಂತರ್ಜಾಲ

ಅರ್ಪಾ, ಅಪಸ್ಮಾರ ಮತ್ತು ಅಗೋಚರ ಕಾರಣಗಳು.

ಕಳೆದವಾರದಲ್ಲಿ ಈ ಪ್ರಪಂಚ ಅತ್ಯಂತ ಚಿಕ್ಕ ವಯಸ್ಸಿನ ಒಂದು ಪ್ರತಿಭೆಯನ್ನು ಕಳೆದುಕೊಂಡಿತು. ಅರ್ಪಾ ಕರೀಮ್ ರಾಂಧವಾ ಎಂಬ ಈ ಪಾಕಿಸ್ತಾನೀ ಹುಡುಗಿಯ ಸಾಧನೆ ಕಮ್ಮಿಯದೇನಲ್ಲ. ೯ನೇ ವಯಸ್ಸಿನಲ್ಲೇ ಮೈಕ್ರೋ ಸಾಫ್ಟ್ ಸರ್ಟಿಫೈಡ್ ಪ್ರೊಫೆಶನಲ್ [ಎಮ್.ಸಿ.ಪಿ] ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದ ಅರ್ಪಾ ಮೈಕ್ರೋ ಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್‍ನ ಅಚ್ಚರಿಗೆ ಕಾರಣಳಾಗಿದ್ದಳು. ಬದುಕಿದ್ದರೆ ಗೇಟ್ಸ್ ನ ಸಹಾಯ ಪಡೆದು ಇನ್ನೇನೋ ಆಗುವವಳಿದ್ದಳು, ಆದರೆ ವಿಧಿಯಿಚ್ಛೆ ಬೇರೇನೇ ಇತ್ತು! ಕಂಪ್ಯೂಟರ್ ಎಂಬುದು ಹಲವರಿಗೆ ಅನೇಕ ಸೌಲಭ್ಯಗಳನ್ನೂ ಸದವಕಾಶಗಳನ್ನೂ ತಂದುಕೊಟ್ಟಿದೆ. ಅಂಗವಿಕಲರೂ ಕೂಡ ಕುಳಿತಲ್ಲೇ ಕಂಫ್ಯೂಟರ್ ಬಳಸಿ ಏನೇನೋ ಸಾಹಸ ತೋರಿದ್ದನ್ನು ನಾವು ನೋಡಿಯೇ ಇದ್ದೇವೆ. ಆದರೆ ಎಮ್.ಸಿ.ಪಿ. ಎಂಬ ಪರೀಕ್ಷೆಯನ್ನು ೯ನೇ ವಯಸ್ಸಿಗೇ ಪಾಸು ಮಾಡುವುದು ಬಾಳೆಹಣ್ಣು ತಿಂದಹಾಗಲ್ಲ! ಸಾಮಾನ್ಯವಾಗಿ ಹಲವು ವಯಸ್ಕರಿಗೂ ಬರೆದು ಜಯಗಳಿಸಲಾಗದ ಪ್ರಶ್ನೆಗಳಿರುತ್ತವೆ ಅದರಲ್ಲಿ. ಹಾಗಂತ ಅರ್ಪಾ ಅಂಗವಿಕಲಳೇನೂ ಆಗಿರಲಿಲ್ಲ. ಎಲ್ಲರಂತೇ ಸಹಜ ಬೆಳವಣಿಗೆ ಹೊಂದಿದ್ದಳು. ಆದರೆ ಅವಳಿಗೆ ಇದ್ದ ಒಂದೇ ತೊಂದರೆ ಎಂದರೆ ಅಪಸ್ಮಾರ ಅಥವಾ ಮೂರ್ಛೆರೋಗ.



ಮೂರ್ಛೆರೋಗಕ್ಕೆ ಕಾರಣಗಳು ಇಂದಿಗೂ ಲಭ್ಯವಿಲ್ಲ. ವೈಜ್ಞಾನಿಕವಾಗಿ ಅದು ಆ ಸಿಂಡ್ರೋಮ್ ಈ ಸಿಂಡ್ರೋಮ್ ಎಂದು ಗುರುತಿಸಿದರೂ ಮೂರ್ಛೆರೋಗದಿಂದ ಸಂಪೂರ್ಣ ಗುಣಮುಖರಾದವರು ಕಮ್ಮಿ. ಇದ್ದಕ್ಕಿದ್ದಂತೇ ಯಾವುದೋ ಕೆಟ್ಟ ಸಂದೇಶ ಮೆದುಳಿನ ನರಗಳಲ್ಲಿ ಒಡಮೂಡಿ ವ್ಯಕ್ತಿಯು ಕೆಲಹೊತ್ತು ತನ್ನತನವನ್ನೇ ಕಳೆದುಕೊಂಡು ಇಡೀ ಶರೀರ ಅಥವಾ ಭಾಗಶಃ ಶರೀರ ವಿಚಿತ್ರಗತಿಯಲ್ಲಿ ಕಂಪಿಸುವುದು ಯಾ ಒದ್ದಾಡುವುದೇ ಅಪಸ್ಮಾರ. ಅಪಸ್ಮಾರದಲ್ಲಿ ಪ್ರಮುಖವಾಗಿ ಎರಡು ಮಟ್ಟ : ಒಂದು ಲಘು ಅಪಸ್ಮಾರ ಮತ್ತೊಂದು ಗರಿಷ್ಠ ಅಪಸ್ಮಾರ. ಅದೇ ರೀತಿ ಅಪಸ್ಮಾರ ಕೆಲವೊಮ್ಮೆ ಬಾಲ್ಯದಲ್ಲಿ ಮಾತ್ರ ಕಾಡುತ್ತದೆ. ಕೆಲವೆಡೆ ಇದನ್ನು ಬಾಲಗ್ರಹ ಬಾಧೆ ಎನ್ನುವುದೂ ಇದೆ. ಇನ್ನು ಇಡಿಯೋಪಥಿಕ್ ಅಥವಾ ಅನುವಂಶೀಯವಾಗಿ ಬರುವ ಅಪಸ್ಮಾರ ಒಂದು ತೆರನದ್ದಾದರೆ ಕ್ರಿಪ್ಟೋಜೆನಿಕ್ ಅಥವಾ ಕಾರಣವಿಲ್ಲದೇ ಕಾಡುವ ಅಪಸ್ಮಾರ ಇನ್ನೊಂದು ವಿಧದ್ದಾಗಿದೆ. ಅನುವಂಶೀಯತೆಯಿಂದ ಬರುವ ಮೂರ್ಛೆರೋಗ ಬಾಲ್ಯದಲ್ಲಿ ಕಾಡುವುದಿಲ್ಲವಾದ್ದರಿಂದ ಇದಕ್ಕೆ ಚೈಲ್ಡ್ ಹುಡ್ ಎಬ್ಸೆನ್ಸ್ ಎಪಿಲೆಪ್ಸಿ ಎಂದೂ ಅಲ್ಲದೇ ಜುವೆನೈಲ್ ಎಪಿಲೆಪ್ಸಿ, ಎಪಿಲೆಪ್ಸಿ ವಿತ್ ಗ್ರ್ಯಾಂಡ್ ಮಾಲ್ ಸೀಜರ್ಸ್ ಎಂದೂ ಕರೆಯುತ್ತಾರೆ. ಕೆಲವೊಮ್ಮೆ ಇದು ಬಾಲ್ಯದಲ್ಲಿ ಎಲ್ಲೋ ಸಲ್ಪ ಲಘುವಾಗಿ ಕೆಲವರಿಗೆ ಕಾಡುವುದರಿಂದ ಬಿನೈನ್ ಫೋಕಲ್ ಎಪಿಲೆಪ್ಸಿ ಆಫ್ ಚೈಲ್ಡ್ ಹುಡ್ ಎಂದೂ ಪರಿಗಣಿಸಲ್ಪಟ್ಟಿದೆ. ಎರಡನೆಯದ್ದು ಕಾರಣವಿಲ್ಲದೇ ಕಾಡುವಂಥದ್ದು, ಇದಕ್ಕೆ ಗರಿಷ್ಠವಾಗಿ ಸಂಭವಿಸುವುದಕ್ಕೆ ವೆಸ್ಟ್ ಸಿಂಡ್ರೋಮ್ ಮತ್ತು ಲಿನಾಕ್ಸ್ ಗೆಸ್ಟಾಟ್ ಸಿಂಡ್ರೋಮ್ ಎಂದೂ ಹೆಸರಿಸಿದ್ದಾರೆ. ಇದರಲ್ಲಿ ಲಘು ಅಥವಾ ಪಾರ್ಶಿಯಲ್ ಆಗಿ ಸಂಭವಿಸುವುದಕ್ಕೆ ಟೆಂಪೋರಲ್ ಲೋಬ್ ಎಪಿಲೆಪ್ಸಿ ಮತ್ತು ಫ್ರಂಟ್ ಲೋಬ್ ಎಪಿಲೆಪ್ಸಿ ಎಂದಿದ್ದಾರೆ ವಿಜ್ಞಾನಿಗಳು ಮತ್ತು ವೈದ್ಯವಿಜ್ಞಾನ ಪರಿಣತರು.

ಅಪಸ್ಮಾರದ ಮೆದುಳಿನ ತಂತು ಚಿತ್ರಣ

ಹೀಗೇ ಅಪಸ್ಮಾರದ ವೈಖರಿ ಈ ರೀತಿ ಇದ್ದರೂ ಅದಕ್ಕೆ ಸಂಪೂರ್ಣವಾದ ಕಾರಣ ಇಂದಿಗೂ ಒದಗಿ ಬಂದಿಲ್ಲ. ನರಸಂಬಂಧೀ ನಿಯಮಿತ ಔಷಧಗಳ ಸತತ ಸೇವನೆಯಿಂದ ಅದನ್ನು ನಿವಾರಿಸಬಹುದೆಂದು ವೈದ್ಯರುಗಳು ಹೇಳಿದರೂ ಸಂಪೂರ್ಣ ನಿವಾರಣೆ ಆಗಿರುವುದು ಕಾಕತಾಳೀಯವಷ್ಟೇ! ನರರೋಗ ತಜ್ಞರು ಅಥವಾ ಮನಶ್ಶಾಸ್ತ್ರಜ್ಞರು ಕೊಡುವ ಅಲೋಪಥಿಕ್ ಮಾತ್ರೆಗಳ ಸತತ ಸೇವನೆಯಿಂದ ಅಡ್ಡ/ಪ್ರತಿಕೂಲ ಪರಿಣಾಮಗಳಂತೂ ಗ್ಯಾರಂಟಿ! ಅಪಸ್ಮಾರ ತಪ್ಪಿಸುವ ಅಂತಹ ಔಷಧ ಕೆಲವರಿಗೆ ನಿದ್ದೆಯ ಮಂಪರು ನೀಡಿದರೆ, ಇನ್ನು ಕೆಲವರು ಆಲಸ್ಯದಿಂದ ಬಳಲುವಂತೇ ಮಾಡುತ್ತದೆ. ಇನ್ನು ಕೆಲವರಿಗೆ ಪರೋಕ್ಷವಾಗಿ ಶರೀರದ ಉಳಿದ ಅಂಗಾಂಗಗಳ ಮೇಲೆ ಆ ಔಷಧಗಳು ಅಡ್ಡ ಪರಿಣಾಮ ಬೀರುತ್ತವೆ ಎಂಬುದರಲ್ಲಿ ಎರಡುಮಾತಿಲ್ಲ. ಆದರೂ ಸಮಾಜದಲ್ಲಿ ಹತ್ತರಜೊತೆ ಹನ್ನೊಂದನೆಯ ವ್ಯಕ್ತಿಯಾಗಿ ಬದುಕು ನಿರ್ವಹಿಸಲು ಮಾತ್ರೆಗಳ ಬಳಕೆ ಅನಿವಾರ್ಯವಾಗಿದೆ ಎನ್ನುತ್ತಾರೆ ಅದನ್ನು ಅನುಭವಿಸಿದವರು.

ಅಪಸ್ಮಾರ ಬಂದಾಗ ಮೆದುಳಿನ ನೂರಾರು ಜೀವಕೋಶಗಳು ಸಾಯುತ್ತವೆ ಎಂಬುದು ಪರೀಕ್ಷೆಗಳಿಂದ ತಿಳಿದುಬಂದಿದೆಯಾದರೂ ಈಈಜಿ [ಇಲೆಕ್ಟ್ರೋಎನ್ಸಿಫಾಲೋಗ್ರಾಫಿ]ಯಂತ್ರದಲ್ಲಿ ಅಪಸ್ಮಾರದ ಅವತರಣಿಕೆ ಮಾತ್ರ ಕಾಣಲು ಸಾಧ್ಯವಾಗುವುದಿಲ್ಲ. ಪ್ರತೀಬಾರಿ ಅಪಸ್ಮಾರ ಅಪ್ಪಳಿಸಿದಾಗ ವ್ಯಕ್ತಿ ಲಘುವಾದರೆ ಸ್ವಲ್ಪ ಅಥವಾ ಗರಿಷ್ಠವಾದರೆ ತುಂಬಾ ಬಳಲಬೇಕಾಗುತ್ತದೆ. ಗರಿಷ್ಠ ಪ್ರಮಾಣದಲ್ಲಿ ಅಪಸ್ಮಾರ ಘಟಿಸಿದ ಗಂಟೆಗಟ್ಟಲೆ ರೋಗಿಗೆ ಎಚ್ಚರವಿರುವುದಿಲ್ಲ ಯಾಕೆಂದರೆ ಮೆದುಳು ಸಹಜ ಸ್ಥಿತಿಗೆ ಮರಳಿರುವುದಿಲ್ಲ. ಲಘು ಮತ್ತು ಗರಿಷ್ಠ ಎರಡೂ ತೆರನಾದ ಅಪಸ್ಮಾರ ರೋಗಿಗಳನ್ನು ನಾನು ನೋಡಿದ್ದೇನೆ. ಒಮ್ಮೆ ಒಬ್ಬರ ಜೊತೆ ಊಟ ಮಾಡುತ್ತಿದ್ದಾಗ ಅವರಿಗೆ ತುತ್ತು ತಲೆಗೆ ಹತ್ತಿತು, ನೀರು ಕುಡಿಸಿದರೂ ಮಾತಾಡುತ್ತಿರಲಿಲ್ಲ, ಕರೆದರೂ ಮಾತಾಡುತ್ತಿರಲಿಲ್ಲ, ಕಣ್ಣೆಲ್ಲಾ ತಕ್ಷಣಕ್ಕೆ ಕೆಂಪಗಾಗಿ ಅವರು ಸ್ತಬ್ಧವಾಗಿದ್ದರು! ಮೊದಲಾಗಿ ನನಗೆ ಆ ಬಗ್ಗೆ ತಿಳಿದಿರಲಿಲ್ಲ. ಆ ನಂತರವೇ ತಿಳಿದದ್ದು ಅದು ಲಘು ಅಪಸ್ಮಾರ. ಇನ್ನು ಸ್ನೇಹಿತರೊಬ್ಬರು ದ್ವಿಚಕ್ರ ವಾಹನ ಓಡಿಸುವಾಗ ಬಿದ್ದು ಒದ್ದಾಡುತ್ತಿರುವುದನ್ನು ಯಾರೋ ಹೇಳಿದ್ದರು, ಆಮೇಲೆ ಅವರಲ್ಲಿಗೆ ಧಾವಿಸಿ ಅವರನ್ನು ಆಸ್ಪತ್ರೆಗೆ ಸೇರಿಸಿದಾಗಲೇ ತಿಳಿದದ್ದು ಅದು ಗರಿಷ್ಠ ಪ್ರಮಾಣದ ಅಪಸ್ಮಾರ ಅಂತ. ಆ ವ್ಯಕ್ತಿ ತನ್ನನ್ನು ನಾವು ಹತ್ತರಜೊತೆ ಹನ್ನೊಂದಲ್ಲಾ ಎಂದು ದೂರ ಇಡಬಹುದೆಂಬ ಸಂಶಯದಿಂದ ನಮಗೆ ತಿಳಿಸಿರಲೇ ಇಲ್ಲ. ಮೇಲಾಗಿ ಅಪಸ್ಮಾರವಿದ್ದರೆ ಮದುವೆ ಮಾಡಿಕೊಳ್ಳಲು ಹುಡುಗಿ ಕೊಡುತ್ತಾರೋ ಇಲ್ಲವೋ ಎಂಬ ಕಾರಣವೂ ಅವರಲ್ಲಿತ್ತು! ಮಿತ್ರರೇ ಒಂದು ವಿನಂತಿ: ಅಪಸ್ಮಾರವಿದ್ದವರು ಹತ್ತಿರ ಇರುವವರ ಕೂಡ ಅದನ್ನು ತಿಳಿಸಿಟ್ಟರೆ ತುಂಬಾ ಅನುಕೂಲ. ಬಿ.ಎಮ್.ಟಿ.ಸಿ ಬಸ್ ಚಾಲಕನೊಬ್ಬ ಅಪಸ್ಮಾರ ಬಂದು ಅಪಘಾತವಾದ ಘಟನೆ ಕೆಲವು ದಿನಗಳ ಹಿಂದೆ ವರದಿಯಾಗಿತ್ತು. ಅಪಸ್ಮಾರ ಕಾಯಿಲೆ ಇರುವವರು ದಯವಿಟ್ಟು ವಾಹನ ಚಲಾಯಿಸಬೇಡಿ; ಅದು ನಿಮಗೂ ಮತ್ತು ಸಾರ್ವಜನಿಕರಿಗೂ ಒಳ್ಳೆಯದಲ್ಲ.

ಧ್ಯಾನನಿರತ ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳು

ಅಪಸ್ಮಾರಕಾಯಿಲೆಯನ್ನು ಜನ್ಮಾಂತರದ ಕುಕೃತ್ಯದ ಅವಶೇಷದಿಂದ ಬರುವ ಕಾಯಿಲೆ ಎಂದು ಹಿಂದೂ ಮೈಥಾಲಜಿ ಬಣ್ಣಿಸುತ್ತದೆ. ಒಪ್ಪಿಕೊಳ್ಳೋಣ-ಇಹದ ಈ ಜನ್ಮವೂ ಮತ್ತು ಬರುವ ಎಲ್ಲಾ ಕಾಯಿಲೆಗಳೂ ಜನ್ಮಾಂತರದಿಂದ ಪಡೆದ ಫಲಗಳೇ ಎಂಬುದನ್ನು ನಾನು ಅಲ್ಲಗಳೆಯುವುದಿಲ್ಲ. ಯಾಕೆಂದರೆ ಅದರ ಅನುಭೂತಿಯನ್ನು ಹಲವಾರು ನಿದರ್ಶನಗಳ ಮೂಲಕ ಆಳವಾಗಿ ಅಧ್ಯಯನ ಮಾಡಿದ್ದೇನೆ-ಇನ್ನೂ ಮಾಡುತ್ತಲೇ ಇದ್ದೇನೆ. ಆ ಕುರಿತು ಇಲ್ಲಿ ಮತ್ತೆ ಹೆಚ್ಚಿಗೆ ಬರೆಯುವುದಿಲ್ಲ. ಚಿಕ್ಕದೊಂದು ಘಟನೆ ಹೀಗಿದೆ: ಕರ್ನಾಟಕಕ್ಕೇ ಅಥವಾ ಭಾರತಕ್ಕೇ ಪ್ರಕಾಂಡ ಪಂಡಿತರೆನಿಸಿದ ಶಾಸ್ತ್ರಿಗಳೊಬ್ಬರು[ಹೆಸರನ್ನು ಬುದ್ಧ್ಯಾಪೂರ್ವಕ ಹೇಳುತ್ತಿಲ್ಲ, ಕ್ಷಮಿಸಿ] ಯಾವುದೋ ಕಾರಣವನ್ನು ಆಮೂಲಾಗ್ರ ಗ್ರಹಿಸದೇ ಸನ್ಯಾಸಿಯೊಬ್ಬರನ್ನು ನಿಂದಿಸಿದ್ದರಂತೆ. ಆ ಗುರು ಪ್ರತ್ಯಕ್ಷವಾಗಿ ಬಾಯಿಂದ ಶಪಿಸಲಿಲ್ಲವಾದರೂ ಪರೋಕ್ಷವಾಗಿ ಅವರ ಮನ ನೊಂದಿತ್ತು. ಸನ್ಯಾಸಿಯ ನೊಂದ ಮನದ ಪ್ರತಿಫಲನ ಮಾರನೇ ದಿನದಿಂದಲೇ ಅಪಸ್ಮಾರದ ರೂಪದಲ್ಲಿ ಶಾಸ್ತ್ರಿಗಳಿಗೆ ಕಾಡಿತ್ತು. ಯಾವುದೇ ಔಷಧಿಯಿಂದಲೂ ವಾಸಿಯಾಗದ ಅದರಿಂದ ಬೇಸತ್ತ ಅವರು ಭಗವಾನ್ ಶ್ರೀಧರ ಸ್ವಾಮಿಗಳನ್ನು ಭೇಟಿಯಾಗಿ ಕಣ್ಣೀರ್ಗರೆದು ತೋಡಿಕೊಂಡರು-ಬೇಡಿಕೊಂಡರು. ತಾಯಿಯ ವಾತ್ಸಲ್ಯವನ್ನು ಸಹಜವಾಗಿ ಹೊಂದಿದ್ದ ಶ್ರೀಧರರು ತಮ್ಮ ತೀರ್ಥ-ಮಂತ್ರಾಕ್ಷತೆಗಳನ್ನು ನೀಡಿ ಆ ಮೂಲಕ ಶಾಸ್ತ್ರಿಗಳು ಗುರುನಿಂದನೆಯಿಂದ ಪಡೆದಿದ್ದ ಅಪಸ್ಮಾರವನ್ನು ನಿವಾರಿಸಿದರು ಎಂಬುದು ದಾಖಲಿಸಲ್ಪಟ್ಟ ಇತಿಹಾಸ. ಇದೇ ಸಮಯದಲ್ಲಿ ಶ್ರೀಧರರು ಮಾತನಾಡುತ್ತಾ " ಮಕ್ಕಳೇ, ಇಹದ ಈ ಬಂಧನವನ್ನು ಹಂತಹಂತವಾಗಿ ಕಳಚಿ ಮುಮುಕ್ಷುತ್ವದೆಡೆಗೆ ನಿಮಗೆ ಸಾಗಲಿಕ್ಕೆ ತೀರ್ಥ, ಮಂತ್ರಾಕ್ಷತೆ ಮತ್ತು ಭಸ್ಮಗಳೆಂಬ ಔಷಧಿಗಳನ್ನು ಕೊಡುವ ವೈದ್ಯನಾನಾಗಿದ್ದೇನೆ " ಎಂದಿದ್ದಾರೆ! ಅದಕ್ಕೇ ಇಂತಹ ಯೋಗಿಗಳನ್ನೂ ಮಹಾತ್ಮರನ್ನೂ ’ಭವರೋಗ ವೈದ್ಯಂ ’ ಎನ್ನುತ್ತಾರೆ ಸಂಸ್ಕೃತದಲ್ಲಿ. ಬಹುಶಃ ಇಂತಹ ಅಪಸ್ಮಾರ ಕಾಯಿಲೆಗೆ ಸಂಪೂರ್ಣ ಪರಿಹಾರ ತಪಸ್ಸಿದ್ಧಿಯನ್ನು ಪಡೆದ ಯೋಗಿಗಳಿಂದಲೇ ಆಗಬೇಕೇ ವಿನಃ ಲೌಕಿಕವಾದ ಯಾವುದೇ ಔಷಧಿಯೂ ತಾತ್ಕಾಲಿಕ ಮತ್ತು ಸಮರ್ಪಕ ನಿವಾರಣೋಪಾಯವಲ್ಲ ಎಂಬುದು ನನ್ನ ಅಭಿಪ್ರಾಯವಾಗಿದೆ.

ಮರಳಿ ಅರ್ಪಾಳ ಕುರಿತು ಚಿಂತಿಸೋಣ. ಅರ್ಪಾ ಎಳೆವೆಯಲ್ಲೇ ಅತ್ಯಂತ ಪ್ರಬುದ್ಧ ಮನಸ್ಕಳಾಗಿದ್ದಳು, ಕಂಪ್ಯೂಟರ್ ಜೀನಿಯಸ್ ಎನಿಸಿದ್ದಳು. ಅಪಸ್ಮಾರ ಎಷ್ಟೋ ಲಕ್ಷ ಲಕ್ಷ ಜನರಲ್ಲಿ ಇದೆ. ಅಪಸ್ಮಾರ ಇರುವವರೆಲ್ಲಾ ಸಾಯುವುದಿಲ್ಲ, ಆದರೆ ಅಪಸ್ಮಾರ ಕೆಲವೊಮ್ಮೆ ಸಾವಿಗೂ ಕಾರಣವಾಗುತ್ತದೆ ಎಂಬುದು ತಿಳಿದುಬಂದ ವಿಷಯ. ಹಿಂದೆ ಹೇಳಿದಂತೇ ಅಪಸ್ಮಾರ ಘಟಿಸಿದಾಗ ಮೆದುಳಿನ ಜೀವಕೋಶಗಳಲ್ಲಿ ವಿಚಿತ್ರ ವಿದ್ಯುತ್ತು ಪ್ರವಹಿಸುತ್ತದೆ, ಆ ಮೂಲಕ ಜೀವಕೋಶಗಳು ಸತ್ತುಹೋಗುತ್ತವೆ. ಸತ್ತಜೀವಕೋಶಗಳಲ್ಲಿ ಸಂಗ್ರವಾಗಿದ್ದ ಸಂದೇಶಗಳೂ ಮಾಹಿತಿಗಳೂ ಅಳಿಸಿಹೋಗುತ್ತವೆ. ಕೆಲವೊಮ್ಮೆ ಅಪಸ್ಮಾರ ರೋಗಿಗಳು ಯಾವುದೋ ಕುರಿತಾಗಿ ಯೋಚಿಸುವಾಗ ಅದು ಸಂಪೂರ್ಣ ಸ್ಮರಣೆಗೆ ಬಾರದೇ ಹೋಗಬಹುದು. ಅಪಸ್ಮಾರ ರೋಗವಿದ್ದೂ ಕಂಪ್ಯೂಟರ್ ಅಪರೇಟಿಂಗ್ ಸಿಸ್ಟಮ್ ಕುರಿತಾದ ಅಗಾಧ ಮಾಹಿತಿಯನ್ನು ಚಾಚೂ ತಪ್ಪದೇ ಓದಿ ಅದನ್ನು ನೆನಪಿಸಿಕೊಂಡು ಎಮ್.ಸಿ.ಪಿ ಮುಗಿಸಿ ತೇರ್ಗಡೆಯಾಗಿದ್ದು ನಿಜಕ್ಕೂ ಅವಳ ದೊಡ್ಡ ಸಾಧನೆ.


ಬಿಲ್ ಗೇಟ್ಸ್ ಜೊತೆಗೆ ಅರ್ಪಾ

ಸಾಧನೆಮಾಡಿ ಮನೆಮಂದಿಗೂ ಜನಿಸಿದ ದೇಶಕ್ಕೂ ಕೀರ್ತಿ ತಂದುಕೊಟ್ಟ ಅರ್ಪಾ ಇನ್ನು ನೆನಪುಮಾತ್ರ. ಸಂತಸದಿಂದಿದ್ದ ಆಕೆಯ ಮಾತಾ-ಪಿತೃಗಳಿಗೆ ಅದೆಷ್ಟು ನೋವಾಗಿರಬಹುದು ಅಲ್ಲವೇ? ದೇಶವಾಸಿಗಳಿಗೇ ಏಕೆ ಜಗತ್ತಿನ ಜನರೆಲ್ಲಾ ಚಣಕಾಲ ಭಾರವಾದ ಹೃದಯದಿಂದ ಕೇಳಬೇಕಾದ ಜೀನಿಯಸ್ ಒಬ್ಬಳ ಅಕಾಲಿಕ ವಿದಾಯದ ಕಥೆ ಇದು. ಕೆಲವೊಮ್ಮೆ ಹೀಗೇ ಎಷ್ಟೋ ಘಟನೆಗಳು ನಡೆಯುತ್ತವೆ. ಬಾಲ್ಯದಲ್ಲಿ ಅತ್ಯಂತ ಹೆಚ್ಚಿನ ಸಾಧನೆಮಾಡಿ ಹರೆಯಕ್ಕೆ ಬರುತ್ತಿದ್ದಂತೇಯೇ ಯಾವುದೋ ಕಾರಣದಿಂದ ಇಹಲೋಕಕ್ಕೆ ವಿದಾಯ ಹೇಳುವ ಮೂಲಕ ಜನ್ಮದಾತರಿಗೆ ಆಜನ್ಮ ಪರ್ಯಂತ ನೋವನ್ನು ಬಿಟ್ಟುಹೋಗಿಬಿಡುತ್ತಾರೆ. ಹೋದವರ ನೋವಿಗಿಂತಾ ಮನೆಯವರ ಗೋಳು ದುಃಖ ತರುವ ವಿಷಯ. ಗತಿಸಿದ ಜೀನಿಯಸ್ ಅರ್ಪಾ ಮತ್ತೆ ಇನ್ನೂ ಹೆಚ್ಚಿನ ಸಾಧನೆ ಮಾಡುವ ಉನ್ನತ ಜನ್ಮ ಪಡೆಯಲಿ, ಜಗತ್ತಿಗೇ ಮಾದರಿಯಾಗುವ ಸೌಭಾಗ್ಯ ಆಕೆಗೊದಗಲಿ ಎಂಬ ಶುಭಹಾರೈಕೆಗಳೊಡನೆ ನಮ್ಮೆಲ್ಲರ ಅಶ್ರುತರ್ಪಣ.

Friday, January 13, 2012

’ರತ್ನಾವತಿ ಕಲ್ಯಾಣ ’ದಿಂದ ರಂಜಿಸಿದ ಮುದ್ದಣ ಕವಿ


’ರತ್ನಾವತಿ ಕಲ್ಯಾಣ ’ದಿಂದ ರಂಜಿಸಿದ ಮುದ್ದಣ ಕವಿ

ಕೆಲವು ಕವಿ-ಸಾಹಿತಿಗಳಿಗೆ ತಾವು ಬರೆಯುತ್ತೇವೆ ಎಂದು ಹೇಳಿಕೊಳ್ಳುವುದು ಸಾಧ್ಯವಾಗುವುದೇ ಇಲ್ಲ. ವಿದ್ಯೆಯಲ್ಲಿ ಯಾವುದೇ ಹೆಚ್ಚಿನ ಪದವಿ ಪಡೆದಿರದ ವೃತ್ತಿಯಲ್ಲೂ ಎಲ್ಲೋ ಉದರಂಭರಣೆಗಾಗುವ ಒಂದಷ್ಟು ಕಾಸು ಒದಗಿಸುವ ರೀತಿಯಲ್ಲಿ ಬದುಕನ್ನು ನಿರೂಪಿಸಿಕೊಳ್ಳುವ ಕೆಲವರು ಕೀಳರಿಮೆಯಲ್ಲೇ ದಿನ ದೂಡುತ್ತಾರೆ. ಬರೆದ ಕೃತಿಗಳನ್ನು ಹಿಂದೆಂದೋ ಒಬ್ಬ ಮಹಾನುಭಾವ ಬರೆದಿದ್ದ-ಅದನ್ನು ಪ್ರಸ್ತುತ ಪಡಿಸಿದ್ದೇನೆ ಎನ್ನುತ್ತಾ ತಮ್ಮ ಇರವನ್ನು ಹೊರಗೆಡಹದೇ, ಬೇರೆ ಬೇರೆ ಹೆಸರುಗಳಲ್ಲಿ ಪದ್ಯ ಮತ್ತು ಗದ್ಯಗಳನ್ನು ರಚಿಸುತ್ತಾರೆ. ಎಲೆಮರೆಯ ಕಾಯಿಯಾಗಿ ಮಾಗಿ ಹಣ್ಣಾಗುವವರು ಕೆಲವರಾದರೆ ಕಾಯಿದ್ದಾಗಲೇ ಕಾಯಿಲೆಕಸಾಲೆಯಿಂದ ಉದುರಿಹೋಗುವವರೂ ಇದ್ದಾರೆ. ಹಾಗೆ ಉದುರಿ ಹೋದ ಕನ್ನಡದ ನಕ್ಷತ್ರಗಳಲ್ಲಿ ಒಬ್ಬ ಕವಿ ಮುದ್ದಣ.

ಪಠ್ಯಪುಸ್ತಕಗಳಲ್ಲಿ ಮುದ್ದಣನೆಂಬ ಕವಿ ಹಿಂದೆಂದೋ ೧೦-೧೨ ನೆಯ ಶತಮಾನದಲ್ಲಿ ಬದುಕಿದ್ದನೇನೋ ಎಂಬ ಹಾಗೇ ಓದುವ ನಾವು ಮುದ್ದಣನ ಕಾಲಮಾನವನ್ನು ನಿಖರವಾಗಿ ಅಳೆಯಲು ಸಾಧ್ಯವಾಗಿರಲಿಲ್ಲ. ೨೧ನೇ ಶತಮಾನದ ಹಿಂದಿನ-ಇಂದಿನ ಕೊಂಡಿಯಾಗಿ ಹಲವು ಜನಪ್ರಿಯ ಕವನಗಳನ್ನು ಸೃಜಿಸಿದ ಕವಿ ಡಾ| ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ಹೇಳಿಕೆಯಂತೇ ಮುದ್ದಣ ಬಹಳ ಹಿಂದಿನವನಲ್ಲ. ಆತ ೧೯೦೧ರ ವರೆಗೂ ಬದುಕಿದ್ದ. ಉಡುಪಿಯ ನಂದಳಿಕೆ ಗ್ರಾಮದಲ್ಲಿ ಜನಿಸಿದ್ದ ಈ ವ್ಯಕ್ತಿ ವೃತ್ತಿಯಿಂದ ದೈಹಿಕ ಶಿಕ್ಷಕನಾಗಿದ್ದ. ದೈಹಿಕ ಶಿಕ್ಷಕನಾದ ತನ್ನ ಬರಹಗಳನ್ನು ಜನ ಓದಿ ಮೆಚ್ಚಬಹುದೇ ಎಂಬ ಅನುಮಾನದಿಂದಲೇ ಬರೆದ ಎಲ್ಲಾ ಕೃತಿಗಳನ್ನೂ ಮುದ್ದಣನ ಕೃತಿ ಎಂದು ಹೆಸರಿಸಿದ! ಭಟ್ಟರ ಬಾಲ್ಯ ಶಿವಮೊಗ್ಗೆಯಲ್ಲಿ ಕಳೆಯಿತು. ಭಟ್ಟರ ಕುಟುಂಬ ಅಂದಿಗೆ ವಾಸವಿದ್ದಿದ್ದೂ ಮತ್ತು ಮುದ್ದಣನ ಹೆಂಡತಿ ಮನೋರಮೆಯ ತವರುಮನೆ ಇದ್ದಿದ್ದೂ ಒಂದೇ ಕೇರಿಯಲ್ಲಿ! ಎಳವೆಯಲ್ಲಿ ತನ್ನ ಮೂವತ್ತೊಂದನೇ ವಯಸ್ಸಿಗೆ ಕ್ಷಯರೋಗಕ್ಕೆ ತುತ್ತಾಗಿ ತೀರಿಕೊಂಡ ಮುದ್ದಣನ ಹೆಂಡತಿ ಮುಂದಿನ ತನ್ನ ಜೀವನವನ್ನು ಶಿವಮೊಗ್ಗೆಯ ಕಾಗೆ ಕೋಡಮಗ್ಗಿ ಎಂಬ ಜಾಗದಲ್ಲೇ ಕಳೆದಳು. ಮುದ್ದಣನ ಮೊಮ್ಮಗ ಭಟ್ಟರ ಚಡ್ಡೀ ದೋಸ್ತನಾಗಿದ್ದ! ಮುದ್ದಣನ ಮಗನ ಮನೆಗೆ ನಿತ್ಯ ಕೇರಂ ಆಟ ಆಡಲು ಹೋಗುತ್ತಿದ್ದ ಭಟ್ಟರು ತಾನು ಸಾಕ್ಷಾತ್ ಮನೋರಮೆಯನ್ನು ನೋಡಿದ್ದಾಗಿ ಹೇಳಿಕೊಂಡಿದ್ದಾರೆ! ಇದಕ್ಕೇ ಎನ್ನುವುದು ಪಠ್ಯವೆಂಬ ಬದನೇಕಾಯಿಗಳಲ್ಲಿ ಸಿಗುವ ಮಾಹಿತಿ ಪರಿಪೂರ್ಣವಲ್ಲ, ದೋಷರಹಿತವೂ ಅಲ್ಲ. ಬೇರೇ ಆಕರಗಳನ್ನು ಓದಿದಾಗಲೇ ನಿಜದ ಅರಿವು ನಮಗೆ ಆಗಲು ಸಾಧ್ಯ.

’ಮುದ್ದಣ’ನೆಂಬ ಕಾವ್ಯನಾಮದಲ್ಲಿ ಕವಿ ತಾನು ರಚಿಸಿದ ಕೆಲವೇ ಕೃತಿಗಳಿಂದ ಜನಪ್ರಿಯನಾಗಲು ಕಾರಣ ಆತನೇ ತನ್ನ ಕೃತಿಗಳನ್ನು ಮೂರನೇ ವ್ಯಕ್ತಿಯಾಗಿ ನಿಂತು ವಿಮರ್ಶೆಮಾಡಿಕೊಂಡಿದ್ದು. ’ಮುದ್ದಣ-ಮನೋರಮೆ’ಯರ ಸರಸ ಸಲ್ಲಾಪ ಎಲ್ಲರಿಗೂ ಗೊತ್ತಿರುವ ವಿಚಾರ. ’ರತ್ನಾವತಿ ಕಲ್ಯಾಣ’ವಂತೂ ಯಕ್ಷಗಾನದ ಅತ್ಯಂತ ರಸಮಯ ಪ್ರಸಂಗ. ಅಲ್ಲಿನ ಶಬ್ದಲಾಲಿತ್ಯದಲ್ಲಿ ಕವಿ ಕೇಳುಗರನ್ನು/ಓದುಗರನ್ನು ಯಾವುದೋ ಆನಂದದ ವಿಹಾರಕ್ಕೆ ಕರೆದೊಯ್ಯುತ್ತಾನೆ. ಅದರಲ್ಲಿನ ಸನ್ನಿವೇಶಗಳು ವಿಲಾಸಪೂರ್ಣ. ಯಕ್ಷಗಾನದಲ್ಲಿ ಕೆಲವು ಪ್ರಸಂಗಗಳನ್ನು ಬೀಳು ಪ್ರಸಂಗಗಳು ಎಂದು ಗುರುತಿಸಲಾಗಿದೆ. ಯಾವ ಪ್ರಸಂಗ ಕೆಲವೊಮ್ಮೆ ತನ್ನದೇ ಏಕತಾನತೆಯಿಂದ ಬೋರುಹೊಡೆಸುತ್ತದೋ ಅಂಥಾದ್ದನ್ನು ಬೀಳು ಪ್ರಸಂಗ ಎನ್ನುತ್ತಾರೆ. ಪೂರ್ಣರಾತ್ರಿ ಯಕ್ಷಗಾನದಲ್ಲಿ ಬೋರು ಹೊಡೆಸುವ ಸನ್ನಿವೇಶಗಳು ಬಂದಾಗ ನಾವೆಲ್ಲಾ ಎದ್ದು ಚಾ ಕುಡಿಯಲು ಹೋಗುತ್ತಿದ್ದುದು ನೆನಪಿದೆ. ಪ್ರಸಂಗ ಬೀಳು ಎನಿಸಿದರೂ ಕಥೆ ಪೌರಾಣಿಕವಾಗಿ ಮನ್ನಣೆಗಳಿಸಿರುವುದರಿಂದ ಅಂತಹ ಪ್ರಸಂಗಗಳನ್ನು ಆಡುವುದಿತ್ತು. ಬೇಸತ್ತ ಜನರಿಗೆ ಅಂತಹ ಪ್ರಸಂಗಗಳ ಜೊತೆಯಲ್ಲಿ ’ರತ್ನಾವತಿ ಕಲ್ಯಾಣ'ಆಡಿ ರಂಜಿಸುವುದು ಮೇಳದವರ ಪ್ರಯತ್ನವಾಗಿತ್ತು! ಅದೇ ಮುದ್ದಣ ’ಕುಮಾರ ವಿಜಯ’ ಎಂಬ ಯಕ್ಷಗಾನವನ್ನೂ ಬರೆದಿದ್ದಾನೆ.

ಪುರಾತನ ಕೃತಿಗಳು ಎಂದರೆ ಜನ ಕುತೂಹಲ ಸಹಜದಿಂದ ಓದುತ್ತಾರೆ ಎಂಬ ಅನಿಸಿಕೆಯಿಂದ ಮಾರುವೇಷತೊಟ್ಟು ಕನ್ನಡ ಸಾರಸ್ವತಲೋಕದಲ್ಲಿ ಬದುಕಿದ್ದವ ಈ ಮುದ್ದಣ. ’ರತ್ನಾವತಿ ಕಲ್ಯಾಣ’, ’ಕುಮಾರ ವಿಜಯ’, ’ಅದ್ಭುತ ರಾಮಾಯಣ’, ರಾಮ ಪಟ್ಟಾಭಿಷೇಕ’, ’ರಾಮಾಶ್ವಮೇಧ’ ಮುಂತಾದ ಹೆಚ್ಚಿನದಾಗಿ ರಾಮಕಥೆಯನ್ನೇ ಆಧರಿಸಿದ ಕೃತಿಗಳನ್ನು ಬರೆದ. ೧೮೭೦ ರ ಜನವರಿ ೨೪ರಲ್ಲಿ ಉಡುಪಿಯ ನಂದಳಿಕೆಯಲ್ಲಿ ಜನಿಸಿದ ಲಕ್ಷ್ಮೀನಾರಣಪ್ಪ ಬದುಕಿದ್ದು ಕೇವಲ ೩೧ ವರ್ಷ. ವ್ಯಾಯಾಮ ಶಿಕ್ಷಕನಾಗಿದ್ದ ಈತ ಶ್ರಮಪಟ್ಟು ಹಳಗನ್ನಡವನ್ನು ಅಭ್ಯಾಸ ಮಾಡಿ ಹಳಗನ್ನಡದಲ್ಲೇ ಕೃತಿಗಳನ್ನು ರಚಿಸುವ ಪಾಂಡಿತ್ಯ ಗಳಿಸಿದ. ಹೆಂಡತಿಯ ನಿಜ ನಾಮಧೇಯ ಕಮಲಾಬಾಯಿ. ವಿನೋದಪ್ರಿಯನಾಗಿದ್ದ ಮುದ್ದಣ ಮುಗ್ಧೆಯಾದ ಹದಿಹರೆಯದ ಮನೋರಮೆಯನ್ನು ಆಗಾಗ ರೇಗಿಸಿ ನಗಿಸುತ್ತಿದ್ದನಂತೆ! ಕಮಲಾಬಾಯಿಯನ್ನು ತಾನೇ ಇಟ್ಟ ’ಮನೋರಮೆ’ ಎಂಬ ಹೆಸರಿನಿಂದಲೇ ಕರೆಯುತ್ತಿದ್ದನಂತೆ. ೧೮೯೩ರಲ್ಲಿ ಮುದ್ದಣನಿಗೆ ವಿವಾಹವಾಗಿತ್ತು. ೧೯೦೦ ರಲ್ಲಿ ಮಗ ’ರಾಧಾಕೃಷ್ಣ’ ಹುಟ್ಟಿದ್ದ. ೧೯೦೧ ರಲ್ಲಿ ಮುದ್ದಣ ಗತಿಸಿದಾಗ ಕಮಲಾಬಾಯಿಗೆ ಹದಿನೆಂಟೋ ಇಪ್ಪತ್ತೋ ವಯಸ್ಸಿರಬಹುದು. ಮುಂದೆ ಅವಳನ್ನೂ ರಾಧಾಕೃಷ್ಣನನ್ನೂ ಆಕೆಯ ತವರು ಮನೆಯವರು ತಮ್ಮಲ್ಲಿಗೆ ಕರೆದೊಯ್ದರು ಎನ್ನುತ್ತಾರೆ ಕವಿ ಲಕ್ಷ್ಮೀನಾರಾಯಣ ಭಟ್ಟರು.

ದೊಡ್ಡವನಾದಮೇಲೆ ಮುದ್ದಣನ ಮಗ ರಾಧಾಕೃಷ್ಣಯ್ಯ ಶಿವಮೊಗ್ಗೆಯ ಎ.ವಿ.ಗರ್ಲ್ಸ್ ಸ್ಕೂಲ್‍ನಲ್ಲಿ ಅಧ್ಯಾಪಕರ ಕೆಲಸಕ್ಕೆ ಸೇರಿದ. ಗೆಳೆಯರು ಪರಿಚಿತರು ಬಾಬುರಾವ್ ಎಂಬ ತೋಂಡಿ ಹೆಸರಿನಿಂದ ಅವರನ್ನು ಕರೆಯುತ್ತಿದ್ದರು. ಭಟ್ಟರ ಕಡೆಯ ಅಕ್ಕ ಸಾವಿತ್ರಿ ಎಂಬಾಕೆ ರಾಧಾಕೃಷ್ಣರ ವಿದ್ಯಾರ್ಥಿನಿಯಾಗಿದ್ದಳಂತೆ. ಭಟ್ಟರ ಬಾಲ್ಯದ ಮನೆ ಮತ್ತು ರಾಧಾಕೃಷ್ಣರ ಮನೆ ಇದ್ದಿದ್ದು ಒಂದೇ ಸಾಲಿನಲ್ಲಿ. ಒಂದು ವಠಾರದ ಮನೆಯಲ್ಲಿ ರಾಧಾಕೃಷ್ಣ ಮತ್ತು ಹೆಂಡತಿ ಸರಸ್ವತಮ್ಮ ಹಾಗೂ ಅವರ ಐದು ಜನ ಮಕ್ಕಳು ಜೊತೆಗೆ ತಾಯಿ ಕಮಲಾಬಾಯಿ[ಮನೋರಮೆ] ಇದ್ದರಂತೆ. ಕಮಲಾಬಾಯಿಗೆ ಆಗ ಸುಮಾರು ೬೫ ವರ್ಷ ಕಳೆದಿತ್ತೋ ಏನೋ ಎನ್ನುತ್ತಾರೆ ಭಟ್ಟರು. ಮಕ್ಕಳೆಲ್ಲರ ’ಕಮಲಜ್ಜಿ’ಯಾಗಿದ್ದಳು ಮುದ್ದಣನ ಆ ಮನೋರಮೆ! ರಾಧಾಕೃಷ್ಣಯ್ಯನವರ ಎರಡನೇ ಮಗ ಸೀತಾರಾಮು ಭಟ್ಟರಿಗೆ ಸಹಪಾಠಿಯೂ ಸ್ನೇಹಿತನೂ ಆಗಿದ್ದು ಕೇರಂ ಆಟದ ಹುಚ್ಚು ಭಟ್ಟರನ್ನು ಪ್ರತೀನಿತ್ಯ ಕೇರಂ ಬೋರ್ಡ್ ಇರುವ ರಾಧಾಕೃಷ್ಣಯ್ಯನವರ ಮನೆಗೆ ಹೋಗುವಂತೇ ಮಾಡುತ್ತಿತ್ತು. ಅಲ್ಲಿಗೆ ಹೋದಾಗ ಪ್ರತಿದಿನ ಮನೆಯ ಹಾಲ್ ನಲ್ಲಿ ಗೋಡೆಗೆ ತಗುಲಿಹಾಕಿದ್ದ ಚಿತ್ರಪಟವೊಂದು ಭಟ್ಟರನ್ನು ಸೆಳೆಯುತ್ತಿತ್ತಂತೆ. ಅದರ ಕೆಳಗೆ ’ನಂದಳಿಕೆ ಲಕ್ಷ್ಮೀನಾರಣಪ್ಪ’ ಎಂದು ಬರೆದಿತ್ತು ಎಂದಿದ್ದಾರೆ ಭಟ್ಟರು. ಆ ಚಿತ್ರ ಮುದ್ದಣ ಕವಿಯದ್ದೆಂದಾಗಲೀ ಕಮಲಜ್ಜಿಯೇ ’ಮನೋರಮೆ’ ಎಂದಾಗಲೀ ಅರಿತಿರದ ಭಟ್ಟರಿಗೆ ಆಗ ಹದಿಮೂರು-ಹದಿನಾಲ್ಕು ವಯಸ್ಸು. ಹೇಳಬೇಕೂಂದ್ರೆ ಭಟ್ಟರಿಗೆ ಹೆಚ್ಚಿನ ಕವಿಗಳ ಅದರಲ್ಲೂ ಮುದ್ದಣನ ಹೆಸರೇ ಗೊತ್ತಿರದ ಕಾಲಘಟ್ಟ ಅದು.

ಒಂದು ದಿನ ಎಂದಿನಂತೇ ಬಾಲಕ ಭಟ್ಟರು ಆಡಲು ಹೋದಾಗ ಮಕ್ಕಳ್ಯಾರೂ ಮನೆಯಲ್ಲಿರಲಿಲ್ಲ. ಹಾಲ್ ನಲ್ಲಿ ಗೋಡೆಗೆ ಆನಿಸಿಟ್ಟಿದ್ದ ಕೇರಂ ಬೋರ್ಡ್ ಮತ್ತು ಪಾನು[ಕಾಯಿ]ಗಳ ಡಬ್ಬ ಎತ್ತಿಕೊಂಡು ಆ ಮನೆಯ ವಠಾರದಲ್ಲಿ ಮನೆಯ ಮುಂದಿರುವ ಮಣ್ಣ ಜಗಲಿಯಮೇಲೆ ಹರಡಿಕೊಂಡು ಒಬ್ಬರೇ ಆಟವಾಡುತ್ತಿದ್ದಾಗ " ಏನೋ ಸೀತಾರಾಮು, ನಿನ್ನ ಸ್ನೇಹಿತ ಇನ್ನೂ ಬಂದೇ ಇಲ್ಲ, ಬೆಳಿಗ್ಗೆ ಸಂಜೆ ಬರೇ ಆಟ, ಓದುವುದು ಯಾವಾಗಪ್ಪಾ? " ಎಂದು ಮೊಮ್ಮಗನೇ ಆಡುತ್ತಿದ್ದಾನೆ ಎಂಬ ಭ್ರಮೆಯಲ್ಲಿ ಗದರಿಕೊಂಡಹಾಗೇ ಕೇಳಿದ್ದರಂತೆ. ಅವರಿಗೆ ಆಗ ಸರಿಯಾಗಿ ಕಣ್ಣು ಕಾಣಿಸುತ್ತಿರಲಿಲ್ಲವಂತೆ. " ಸೀತಾರಾಮ ಅಲ್ಲ ಕಮಲಜ್ಜಿ ನಾನು ಅಣ್ಣ [ಭಟ್ಟರ ಬಾಲ್ಯದ ಅಡ್ಡ ಹೆಸರು]ಸೀತಾರಾಮ ಎಲ್ಲೋ ಹೋಗಿದ್ದಾನೆ, ನಾನು ಅವನಿಗೇ ಕಾಯ್ತಿದ್ದೀನಿ" ಎಂದಾಗ " ಓ ನೀನಾ ! ಸರಿ ಬಿಡು " ಎಂದಿದ್ದರಂತೆ. " ನಿನ್ನ ಅಮ್ಮ, ಗೌರ, ಸಾವಿತ್ರಿ[ಗೌರಿ, ಸಾವಿತ್ರಿ ಭಟ್ಟರ ಅಕ್ಕಂದಿರು] ಚೆನ್ನಾಗಿದ್ದಾರಾ? " ಎಂದು ಅನೇಕ ದಿನ ಕೇಳುತ್ತಿದ್ದುದೂ ಇತ್ತಂತೆ. ಹೀಗೇ ಮನೋರಮೆಯೊಟ್ಟಿಗೆ ನೇರವಾಗಿ ಸಂಭಾಷಿಸಿದ ಹೆಗ್ಗಳಿಕೆ ಭಟ್ಟರದು. ಭಟ್ಟರ ಬಾಲ್ಯ ಕಳೆದು ಕನ್ನಡ ಆನರ್ಸ್ ಮಾಡಲು ಮೈಸೂರಿಗೆ ಅವರು ಹೋದಾಗ ಅಲ್ಲಿ ಎಸ್.ವಿ.ಪರಮೇಶ್ವರ ಭಟ್ಟರು ಸಂಪಾದಿಸಿದ್ದ ’ಅದ್ಭುತ ರಾಮಾಯಣ’ದ ಮುನ್ನುಡಿಯನ್ನು ಓದುತ್ತಿರುವಂತೆಯೇ ಭಟ್ಟರಿಗೆ ಮುದ್ದಣ-ಮನೋರಮೆಯರ ಬಗ್ಗೆ, ಮುದ್ದಣ ಎಂದರೆ ನಂದಳಿಕೆ ಲಕ್ಷ್ಮೀನಾರಣಪ್ಪ ಎಂಬಬಗ್ಗೆ ತಿಳಿಯಿತೆಂದು ಹೇಳಿದ್ದಾರೆ.

ಮುದ್ದಣ ಬದುಕಿದ್ದರೆ ಮಹಾಕವಿ ಎನಿಸಿಕೊಳ್ಳುವ ಸಾಮರ್ಥ್ಯವನ್ನು ಪಡೆದಿದ್ದ. ಅವನು ’ಗೋದಾವರಿ’ ಎಂಬ ಕದಂಬರಿಯನ್ನು ಅರ್ಧ ಬರೆದಿದ್ದ. ವಿಧಿ ಅದನ್ನು ಪೂರ್ತಿಮಾಡಲು ಅವಕಾಶ ಕೊಡಲಿಲ್ಲ. ಹಸ್ತಪ್ರತಿಯಲ್ಲಿದ್ದ ಅದೆಲ್ಲೋ ಹಾಗೇ ಜೀರ್ಣವಾಗಿ ಹೋಯ್ತು. ’ರಾಮಪಟ್ಟಾಭಿಷೇಕ’ ಪದ್ಯ ರೂಪದಲ್ಲಿದ್ದರೆ ’ಅದ್ಭುತ ರಾಮಾಯಣ’ ಮತ್ತು ’ರಾಮಾಶ್ವಮೇಧ’ ಗದ್ಯ ರೂಪದಲ್ಲಿವೆ. ಆದರೂ ’ರಾಮಾಶ್ವಮೇಧ’ ಹೆಚ್ಚು ಕಾವ್ಯ ಸತ್ವದಿಂದ ಕೂಡಿದೆ. ’ಜೋ ಜೋ’ ಎಂಬ ಶಬ್ದಾರ್ಥ ಸಂಶೋಧನ ಲೇಖನವೊಂದನ್ನು ’ಚಕ್ರಧಾರಿ’ ಎಂಬ ಕಾವ್ಯನಾಮದಿಂದ ’ಸುವಾಸಿನಿ’ ಎಂಬ ಪತ್ರಿಕೆಯಲ್ಲಿ ಪ್ರಕಟಿಸಿದ್ದ. ತನ್ನ ಕೃತಿಗಳನ್ನು ತನ್ನದೆನ್ನದೇ ಹಿಂದಿನ ಯಾರೋ ಹಳಗನ್ನಡದ ಕವಿಯ ಕೃತಿಗಳೆಂದು ಹೇರ್‍ಳಿಕೊಂಡ ಆತನಿಗೆ ತನ್ನ ಕವಿತ್ವವನ್ನು ಜನ ಗುರುತಿಸಿ ತನ್ನ ಕೃತಿಗಳು ಮೆರೆಯುವ ಕಾಲವನ್ನು ನೋಡಬಿಡಲಿಲ್ಲ ಆ ವಿಧಿ; ಉತ್ತಮ ಕೃತಿಗಳನ್ನು ರಚಿಸಿಯೂ ಗೊತ್ತಾಗದಂತೇ ಕರ್ಪೂರದಂತೇ ಕರಗಿಹೋದ ಕವಿ ಮುದ್ದಣ. ಮೈಸೂರಿನ ’ಕಾವ್ಯ ಮಂಜರಿ’ ಮತ್ತು ’ಕಾವ್ಯ ಕಲಾನಿಧಿ’ ಮಾಸಪತ್ರಿಕೆಗಳು ಮುದ್ದಣನ ಮೂರೂ ರಾಮಕಥೆಗಳನ್ನು ಭಾಗ ಭಾಗವಾಗಿ ಪ್ರಕಟಿಸಿದ್ದವಂತೆ. ’ರಾಮಾಶ್ವಮೇಧ’ ಪೂರ್ತಿ ಪ್ರಕಟವಾಗುವುದಕ್ಕೂ ಮೊದಲೇ ತೀರಿಕೊಂಡ ಮುದ್ದಣ ಪ್ರೀತಿಯ ಪತ್ನಿಯನ್ನೂ, ವರ್ಷವೊಂದು ತುಂಬಿದ ಮಗನನ್ನೂ ಬಿಟ್ಟು ಹೊರಟುಹೋದ; ದುರಂತ ಕಥೆಯಾದ. ಲಕ್ಷ್ಮೀನಾರಣಪ್ಪನೇ ಮುದ್ದಣನೆಂದೂ ರಾಮಕಥೆಗಳೆಲ್ಲಾ ಅವನವೇ ಎಂದೂ ತಿಳಿದದ್ದು ಆತ ಮರಣಸಿದ ನಂತರವೇ.

ಮುದ್ದಣನ ಕೃತಿಯಲ್ಲಿ ಪ್ರತಿಮಾತ್ಮಕವಾಗಿ ಪ್ರಕಟಗೊಳ್ಳುವ ವಿಮರ್ಶಾತತ್ವ ಅವನಿಗೆ ಕನ್ನಡದಲ್ಲಿ ಪ್ರತ್ಯೇಕವಾದ ಉನ್ನತ ಸ್ಥಾನ ಕಲ್ಪಿಸಿದೆ. ಆಂಗ್ಲ ಕವಿ ಟಿ.ಎಸ್. ಎಲಿಯೆಟ್ ಬರುವುದಕ್ಕಿಂತ ಮೊದಲು ಕಾವ್ಯ ಸಾಹಿತ್ಯ ಕೇವಲ ಪ್ರತಿಭೆಯ ಫಲ ಎಂಬ ರೋಮಾಂಚಕ ಕಲ್ಪನೆ ಇತ್ತು. ಕಾವ್ಯಕ್ಕೆ ಪ್ರತಿಭೆಯೇನೋ ಅವಶ್ಯಕವೇ ಆದರ ಜೊತೆಜೊತೆಗೆ ಕವಿಯ ಶ್ರಮ ಮತ್ತು ಬುದ್ಧಿಮತ್ತೆ ಬಹಳ ಬೇಕು ಎಂಬುದನ್ನು ಎಲಿಯಟ್ ವಿಷದಪಡಿಸಿದ್ದಾನೆ. ತಾನು ಬರೆದ ಅದೆಷ್ಟೋ ಸಾಲುಗಳನ್ನು ಹೊಡೆದು, ತಿದ್ದಿ, ಬದಲಿಸಿ ಕವಿತೆಗೆ ಬುದ್ಧಿಯ ಚುಚ್ಚುಮದ್ದನ್ನು ನೀಡುವ ಕವಿ ಕೆಲವೊಮ್ಮೆ ಬರಡು ಭೂಮಿಯಲ್ಲಿ ಬೀಜಬಿತ್ತಿ ನೀರು-ಗೊಬ್ಬರ ತಕ್ಕಮಟ್ಟಿಗೆ ಪೂರೈಸಿ, ಮಳೆಗಾಗಿ-ಬೆಳೆಗಾಗಿ ಪ್ರಾರ್ಥಿಸಿ ಕುಳಿತ ರೈತನಂತಿರುತ್ತಾನೆ! ಉತ್ತಮ ಫಸಲು ಬರಬಹುದು ಬರದೇ ಇರಬಹುದು ಅದು ಅವನ ಅದೃಷ್ಟದಾಟ!!

ಇದನ್ನೇ, ಎಲಿಯಟ್ ಬರುವುದಕ್ಕಿಂತಾ ಮೊದಲೇ, ಕನ್ನಡದ ಕವಿ ಮುದ್ದಣ ತನ್ನ ’ರಾಮಾಶ್ವಮೇಧ’ದಲ್ಲಿ ವಾರೆನೋಟದಲ್ಲಿ ಪ್ರತಿಬಿಂಬಿಸಿದ್ದ ಎಂದರೆ ತಪ್ಪಾಗಲಾರದು. ಹೃದ್ಯವಾದ ಪ್ರಸಂಗದಲ್ಲಿ ಮುದ್ದಣ ಮತ್ತು ಪತ್ನಿ ಮನೋರಮೆ ಅ ಕಾವ್ಯದೊಳಗೆ ಸೂತ್ರಧಾರ ನಟನಟಿಯರಂತೇ ಬಂದು ಪಾತ್ರನಿರ್ವಹಿಸುತ್ತಾರೆ. ಮುದ್ದಣ ನಿರ್ದಿಷ್ಟವಾದ ಉದ್ದಿಶ್ಯದಿಂದ ನಿರ್ಮಿಸಿಕೊಂಡಿದ್ದು ಈ ಕಾವ್ಯತಂತ್ರ! ಹಿಂದಿನ ಕವಿಗಳು ತಮ್ಮ ಪಾಂಡಿತ್ಯವನ್ನು ಮೆರಸಲು ಬಳಸಿದ ಕ್ಲಿಷ್ಟಕರ ಶಬ್ದಪ್ರಯೋಗಗಳೂ, ದೇವತಾ ಸ್ತುತಿಗಳೂ , ಅನವಶ್ಯಕವಾದ ವಿದ್ವತ್ಪೂರ್ಣ ಆಡಂಬರದ ಪದಗಳೂ ಕಾವ್ಯವನ್ನು ಕೆಡಿಸುತ್ತವೆ ಎಂಬ ಕಲ್ಪನೆ ಮುದ್ದಣನಿಗಿತ್ತು. ನಡೆದುಬಂದ ಸಂಪ್ರದಾಯಕ್ಕೆ ಏಕಾಏಕಿ ಪೂರ್ಣವಿರಾಮ ಹಾಕಿಬಿಟ್ಟರೆ ಓದುವ ಜನ " ಓಹೋ ಈತನಿಗೆ ಪಾಂಡಿತ್ಯವಿಲ್ಲ" ಎಂದು ಭಾವಿಸಲೂ ಬಹುದು ಅಥವಾ ಕೃತಿಗಳು ಅಂತಹ ಸಂಪ್ರದಾಯವಾದಿಗಳ ಅವಜ್ಞೆಗೆ ಕಾರಣವೂ ಆಗಬಹುದು ಎಂಬ ದೃಷ್ಟಿಕೋನದಿಂದ ತನ್ನ ಕಾವ್ಯವನ್ನೇ ಒರೆಗೆ ಹಚ್ಚುವಲ್ಲಿ ತಾನು ಕಾವ್ಯದೊಳಗೇ ಸೂತ್ರಧಾರ ಪಾತ್ರವಾಗಿ ಸೇರಿಕೊಂಡು ಹೆಂಡತಿಯನ್ನೂ ಹಾಗೇ ಸೇರಿಸಿಕೊಂಡುಬಿಟ್ಟ! ಸೂತ್ರಧಾರ ನಲ್ಲ-ನಲ್ಲೆಯರ ಮಧ್ಯೆ ನಡೆಯುವ ಸರಸ ಸಂಭಾಷಣೆ ಕಾವ್ಯವನ್ನು ವಿಮರ್ಶಿಸುತ್ತಾ ನಡೆಯಿತು!

" ಸ್ವಸ್ತಿ ಶ್ರೀಮತ್ ಸುರಾಸುರೇಂದ್ರ ಮುನೀಂದ್ರ ಫಣೀಂದ್ರ ಮಣಿಮುಕುಟ ತಟಘಟಿತ " ಮುಂತಾಗಿ ಕಾವ್ಯಾರಂಭ ಮಾಡಿದಾಗ ಸುಂದರಿಯೂ ಜಾಣೆಯೂ ಆದ ಮನೋರಮೆ ಆತನನ್ನು ತಡೆದು " ಇದೇನು ನಿನ್ನ ಕಥೆಯ ಹೇಳಾಟ? ನೀರಿಳಿಯದ ಗಂಟಲಲ್ಲಿ ಕಡುಬು ತುರುಕುವುದೇ? ಸಾಮಾನ್ಯಳಾದ ನನಗೆ ಕಥೆ ಹೇಳಲು ಇಂಥಾ ಕಷ್ಟದ ಶೈಲಿ ಬಳಸುತ್ತೀಯಾ? ತಿಳಿಯುಂಥಾ ಮಾತಿನಲ್ಲಿ ಕಥೆ ಹೇಳಬೇಡವೇ? " ಎಂದು ಮೂಗು ಮುರಿಯುತ್ತಾಳೆ. ಮುಂದೆ ಮತ್ತೆಲ್ಲೋ ಆಗಾಗ ಆಡಂಬರದ ಅಲಂಕಾರಗಳು ಜಾಸ್ತಿಯಾದಾಗ " ಯಾರಿಗೆ ಬೇಕು ಆ ವರ್ಣನೆ ಕಥೆ ಮುಂದುವರಿಸು" ಎಂದು ಛೇಡಿಸುತ್ತಾಳೆ. ಇದೇ ರಸಸಂವಾದ ರಾಮಕಥಾನಕವೆಂಬ ರೇಷ್ಮೆಯ ಪೀತಾಂಬರಕ್ಕೆ ಬಂಗಾರದ ಜರಿಯ ಅಂಚಿನಂತಿದ್ದು ಕೃತಿ ಅನನ್ಯವಾಗಿ ಎದ್ದು ನಿಲ್ಲುತ್ತದೆ. ಶೃಂಗಾರ ರಸತುಷಾರದ ಸಿಂಚನದೊಂದಿಗೆ ಪರೋಕ್ಷವಾಗಿ ಕಾವ್ಯವನ್ನು ತಾನೇ ವಿಮರ್ಶೆಗೆ ಒಳಪಡಿಸಿಕೊಳ್ಳುವ ಕನ್ನಡದ ಏಕೈಕ ಕವಿಯನ್ನು ಮುದ್ದಣನಲ್ಲಿ ಕಾಣಬಹುದಾಗಿದೆ!

ಕಡಲಂಚಿನ ಕಾವ್ಯಲಹರಿಯೇ ಯಕ್ಷಗಾನದ ಮೂಲ ಸ್ವತ್ತು! ಹಲವು ರಾಗಗಳಲ್ಲಿ, ಛಂದಸ್ಸುಗಳಲ್ಲಿ ಪ್ರಸಂಗಗಳನ್ನು ಹಾಡುವಂತೇ ಹೊಸೆಯುವ ಕವಿತ್ವವೇ ಅದರಲ್ಲಿನ ತಾಕತ್ತು! ಭಾಮಿನಿ ಷಟ್ಪದಿ, ಭೋಗ ಷಟ್ಪದಿ ರಾಗಗಳನ್ನು ಹಾಡುವಾಗ ಸಹಜವಾಗಿ ಹಳಗನ್ನಡದ ಮೇರು ಕವಿಗಳು ನೆನಪಿಗೆ ಬರುತ್ತಾರೆ.

ನಾಂದಿಯೊಳು ವರವ್ಯಾಸ ಮುನಿವರ ......
ಕವಿಜನಸಂದಣಿಗೆ ಬಲಬಂದು .....
.
.
ಅಂಬುನಿಧಿಯಾತ್ಮಜಗೆ ಕೈಮುಗಿದಂಬುಜಾಸನ ವಾಣಿಯರ
ಪಾದಾಂಬುಜಕೆ ಪೊಡಮಟ್ಟು ಪೇಳುವೆನೀಕಥಾಮೃತವ ...............

ಎಂದು ಭಾಗವತರು ರಾಗವಾಗಿ ನಾಂದಿಹಾಡುತ್ತಿರುವಾಗಲೇ ರನ್ನ, ಪಂಪ, ಹರಿಹರ, ಕುಮಾರವ್ಯಾಸಾದಿ ಹಲವು ಕನ್ನಡ ಕವಿಗಳು ನಮ್ಮ ಮನದಲ್ಲಿ ಹಾದುಹೋಗುವುದು ಸಾಹಿತ್ಯ ರುಚಿಸುವ ಯಕ್ಷಗಾನಾಸಕ್ತರಿಗೆ ಸಹಜ. ಹಿತಮಿತ ಸಂಗೀತ, ಅದ್ಭುತ ಪ್ರಾಸಬದ್ಧ ಸಾಹಿತ್ಯ, ನವರಸಗಳಿಗೆ ತಕ್ಕುದಾದ ರಾಗಪ್ರಸ್ತಾರ, ಅದರದ್ದೇ ಆದ ತಾಳ, ಲಯ, ಬಿಡ್ತಿಗೆ, ಚಂಡೆ-ಮದ್ದಳೆ-ಗೆಜ್ಜೆಗಳ ಸಮ್ಮಿಶ್ರ ಸ್ವರಸಂದೋಹ, ಗೆಜ್ಜೆಯ ನಾದವನ್ನೇ ಹೋಲುವ ತಾಳದ ಸದ್ದು --ಇವೆಲ್ಲಾ ಹಿಮ್ಮೇಳದ ಕೊಡುಗೆಯಾದರೆ ಹಾಡಲು ಸುಲಭವಾಗುವಂತಹ ಪ್ರಾಸಬದ್ಧ ಮತ್ತು ಸ್ವರಶುದ್ಧ ಹಾಡುಗಳಲ್ಲಿ ಯಕ್ಷಗಾನ ಪ್ರಸಂಗಗಳನ್ನು ಪೋಣಿಸಿಕೊಟ್ಟ ಮಹತಿಯ ಔದಾರ್ಯ ಕನ್ನಡ ಕವಿಗಳದ್ದಾಗಿದೆ. ಅಂತಹ ಕವಿಜನಸಂದಣಿಯಲ್ಲಿ ಮುದ್ದಣ ಕೂಡ ಒಬ್ಬ ಎಂಬುದು ನಮಗೆಲ್ಲಾ ಹೆಮ್ಮೆಯ ವಿಷಯ. ಆ ಕವಿಜನಸಂದಣಿಗೂ ನಮಸ್ಕರಿಸುವುದರ ಜೊತೆಗೇ ನಾನು ಬಹಳವಾಗಿ ಮೆಚ್ಚುವ ಕವಿ ಶ್ರೀ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರಿಗೂ ವಂದಿಸುವುದು ಇಂದಿನ ಈ ಲೇಖನದ ಔಚಿತ್ಯ.

Wednesday, January 11, 2012

ಯಾರಾದ್ರೆ ನಂಗೇನು ?

ಚಿತ್ರ ಕೃಪೆ : ಚಿತ್ರಲೋಕ.ಕಾಂ --ದ್ವಾರಾ : ಅಂತರ್ಜಾಲ

ಯಾರಾದ್ರೆ ನಂಗೇನು ?

ಹಾಂ...ಹಾಂ....ಹಾಂ ಹೌದಮ್ಮಾ ಯಾರಾದ್ರೆ ನಿಂಗೇನು ? ಆದ್ರೆ ಮಿಕ್ಕಿದ ನಾವುಗಳು ಇದ್ದೇವಲ್ಲಾ ನಮಗೆಲ್ಲಾ ಯಾರಾದ್ರೂ ಆಗೋ ಹಾಗಿಲ್ಲ ಹೀಗಾಗಿ ಆ ಒಕ್ಕಣೆ ಬೇಡ ಎಂಬುದು ನಮ್ಮ ವಾದ! ಒಂದು ಕಡೆ ಯೋಗಿಗಳೂ ಸನ್ಯಾಸಿಗಳೂ ಕೆಡುತ್ತಿರುವ ಸಮಾಜವನ್ನು ಸುಧಾರಿಸಲು ಭಗವದ್ಗೀತೆಯನ್ನು ಬೋಧಿಸುತ್ತಿದ್ದಾರೆ; ಗೀತೆಯ ಸೂತ್ರಗಳನ್ನು ಬಳಸಲು ಹೇಳುತ್ತಿದ್ದಾರೆ. ಇನ್ನೊಂದುಕಡೆ ಅಧೋಗತಿಗೆ ಎಳೆಯುವ ಸಿನಿಮಾಗಳು ಹುಚ್ಚುಚ್ಚಾಗಿ ಈ ಥರದ ದುರ್ಬೋಧನೆಗೂ ಇಳಿದುಬಿಡುತ್ತಿವೆ.

|| ಗೋಕರ್ಣಸ್ಸಮಃ ಕಾಶೀ ವಿಶ್ವನಾಥೋ ಮಹಾಬಲ || ಎಂಬ ಉಕ್ತಿಯೊಂದಿತ್ತು. ಗೋಕರ್ಣದಲ್ಲಿರುವ ತಾಮ್ರಗೌರಿ [ಪಾರ್ವತಿ] ತಕ್ಕಡಿಯಲ್ಲಿ ಕಾಶೀ ಮತ್ತು ಗೋಕರ್ಣಗಳೆರಡನ್ನೂ ತೂಗಿದಳಂತೆ. ತೂಕದಲ್ಲಿ ಎರಡೂ ಸಮಕ್ಕೆ ಸಮ ಆಗಿ ತೋರಿದ್ದರಿಂದ ಕಾಶಿಗೆ ಹೋಗಲಾಗದವರು ಗೋಕರ್ಣಕ್ಕೆ ಹೋದರೂ ಪರವಾಗಿಲ್ಲ ಎಂಬ ಭಕ್ತಿಭಾವ ಹಿಂದಿನವರಲ್ಲಿತ್ತು. ಅಂತೆಯೇ ಕಾಶಿ, ಗೋಕರ್ಣ ಮುಂತಾದ ಕ್ಷೇತ್ರಗಳ ಹೆಸರುಗಳನ್ನು ಸಿನಿಮಾಕ್ಕೆ ಬಳಸುತ್ತಿರಲಿಲ್ಲ. ಡಾ| ರಾಜಕುಮಾರ್ ಕಲದ ’ಶಂಕರ್ ಗುರು’ ಎಂಬಲ್ಲಿಂದ ಯಾಕೋ ಸಿನಿಮಾ ಮಂದಿಗೆ ಜನರನ್ನು ಪಶೆಬೀಳಿಸುವ ನೆಶೆ ಹೆಚ್ಚಾಯಿತು. ’ಶಂಕರ್ ಗುರು’ವನ್ನು ಶಂಕರಾಚಾರ್ಯರ ಕುರಿತಾದ ಸಿನಿಮಾ ಎಂದು ನೋಡಿದವರಲ್ಲಿ ನನೂ ಒಬ್ಬ ಪಡ್ಡೆ ಇದ್ದೆ! ಇವತ್ತು ಗತಿ ಹೇಗಾಗಿದೆ ಎಂದರೆ ಹೊರಗಿನ ಹೆಸರನ್ನು ನೋಡಿಕೊಂಡು ಯಾವ ಸಿನಿಮಾವನ್ನೂ ನೋಡುವಹಾಗಿಲ್ಲ, ಹೊರಕವಚದ ಮೇಲೆ ತೋರಿಸಿದಷ್ಟು ಗೋಡಂಬಿ ಬೀಜ ಬಿಸ್ಕತ್ತಿನಲ್ಲಿ ನಮಗೆಂದೂ ದಕ್ಕುವುದಿಲ್ಲ! ಪರವಾಗಿಲ್ಲ. ಅದು ಬೇರೇ ಪ್ರಶ್ನೆ. ಆದ್ರೆ ಅದಕ್ಕಿಂತಾ ಭಿನ್ನವಾಗಿ ಇರುವ ಸಮಸ್ಯೆ ಸಿನಿಮಾಗಳದ್ದು.

ಇಬ್ಬರು ಸ್ನೇಹಿತರು ಮಾತಾಡಿಕೊಂಡಿದ್ರು. ಆಗ ಹಾದಿಹೋಕ ಮುದುಕನೊಬ್ಬ ದಪ್ಪಗಾಜಿನ ಕನ್ನಡಕವನ್ನು ಸರಿಸಿಕೊಳ್ಳುತ್ತಾ ಊರುಗೋಲು ಮುಂದೆ ಹಾಕುತ್ತಾ ನಡೆಯುತ್ತಾ ಹತ್ತಿರ ಬರುತ್ತಿದ್ದ.

" ಹೋಗ್ಲಿಲ್ವಾ ಕಾಶಿಗೆ ? "

" ಹೋಗ್ಲಿಲ್ಲ ಕಣೋ ಹೋಗ್ಬೇಕಾಗಿತ್ತು. "

ಹತ್ತಿರ ಬಂದ ಮುದುಕನ ಕಿವಿ ಬಹಳ ಸೂಕ್ಷ್ಮವಾಗಿತ್ತು; ಎಲ್ಲವನ್ನೂ ಕೇಳಿಸಿಕೊಳ್ಳುತ್ತಿತ್ತು.

" ಪರವಾಗಿಲ್ಲ ನಿಮ್ಗೇನು ಇನ್ನೂ ಪ್ರಾಯದವ್ರು ಕಾಶಿಗೆ ಯಾವಾಗ ಬೇಕಾದ್ರೂ ಹೋಗ್ಬಹುದು " --ಎಂದು ತನ್ನ ಮಾತನ್ನೂ ಸೇರಿಸಿದ ಮುದುಕ. ಎದುರಿದ್ದ ಯುವಕರು ತಮ್ಮೊಳಗೇ ನಕ್ಕವು, ಅರ್ಥವಾಗದ ಮುದುಕನ ಹಲ್ಲಿಲ್ಲದ ಬಾಯಿ ಸಣ್ಣಗೆ ನಗುಸೂಸಿತು ಪಾಪ! ಯುವಕರು ಹೋಗಲಿಕ್ಕಾಗಲಿಲ್ಲ ಎಂದುಕೊಂಡಿದ್ದು ’ ಕಾಶಿ ಬಾರ್ ಅಂಡ್ ರೆಸ್ಟಾರೆಂಟ್’ಗೆ !!

ಇನ್ನೊಂದು ಪ್ರಸಂಗ ಹೀಗಿದೆ ಮಲೆನಾಡಿನ ಅಜ್ಜಿಯೊಬ್ಬರು ತಮ್ಮ ಸ್ನೇಹಿತೆಯಾದ ಇನ್ನೊಬ್ಬ ಅಜ್ಜಿಯಲ್ಲಿ ಕಷ್ಟ-ಸುಖ ಮಾತಾಡಿಕೊಳ್ಳುತ್ತಿದ್ದರು. ಒಬ್ಬ ಅಜ್ಜಿ ಇನ್ನೊಬ್ಬರ ಕೂಡ ಹೀಗೆ ಹೇಳಿದ್ರು" ’ಗೋಕರ್ಣ’ ಸಿನಿಮಾ ಬಂದಿದ್ಯಂತಲ್ಲಾ ಗೋಕರ್ಣಕ್ಕಂತೂ ಹೋಗಕ್ಕಾಗ್ಲಿಲ್ಲ ಅದ್ಕೇ ಆ ಸಿನಿಮಾದಲ್ಲಾದ್ರೂ ಗೋಕರ್ಣ ನೋಡೋಣ ಎಂಬಾಸೆ "! ಉಪೇಂದ್ರ ’ಗೋಕರ್ಣ’ ಎಂಬ ಸಿನಿಮಾ ತಯಾರಿಸಿದ. ಆದರೆ ಯಾಕೆ ಆ ಹೆಸರು ಬೇಕಾಗಿತ್ತು ಎಂಬುದು ನನ್ನಂತಹ ಕೆಲ ಜನರ ಪ್ರಶ್ನೆ. ಅದಕ್ಕೆ ಯಾರಲ್ಲೂ ಉತ್ತರವಿಲ್ಲ.

ಹಣಮಾಡುವ ಒಂದೇ ಉದ್ದೇಶದಿಂದ ಸಿನಿಮಾ ಮಾಡುವುದು ಯಾವ ನ್ಯಾಯ? ಒಬ್ಬ ನಿರ್ದೇಶಕರು ತಮ್ಮ ಸಿನಿಮಾ ಟೈಟಲ್ ಸಮರ್ಥಿಸಿಕೊಳ್ಳುತ್ತಾ " ನಾವು ಎಸ್ಟಂದ್ರೂ ಎಂಟರ್ಟೈನ್‍ಮೆಂಟ್ ಕೊಡೋರು ನಮಗೆ ಅದು ಮಾತ್ರ ಮುಖ್ಯ. ನಿಜಜೀವನದಲ್ಲಿ ನಡೆಯದ ಘಟನೆಗಳನ್ನೇ ಸಿನಿಮಾ ತೋರಿಸುತ್ತದೆ." ಹೌದು ಸ್ವಾಮೀ ಸಿನಿಮಾ ಮತ್ತು ಧಾರಾವಾಹಿಗಳನೇಕವು ಬಂದಮೇಲೇ ಹಲವು ಮನೆಗಳು ಮನಗಳು ಮುರಿದುಹೋಗಿವೆ! ಮನೋರಂಜಕ ಸಿನಿಮಾ ಮನೆಹಾಳು ಕೆಲಸವನ್ನು ನಡೆಸುವ ಉಪದ್ವ್ಯಾಪ ನಿಮಗೇನು ಗೊತ್ತು. ನೀವು ಸಿನಿಮಾ ತೋರಿಸಿ ಕಾಸೆಣಿಸಿಕೊಳ್ಳುತ್ತೀರಿ, ಸಮಾಜದಲ್ಲಿ ಅದರ ಅರ್ಥವನ್ನು ಸರಿಯಾಗಿ ಗ್ರಹಿಸದವರು ಅದನ್ನೇ ಅನುಕರಿಸುತ್ತಾರೆ; ಹದಿಹರೆಯದವರು ಅಂಥದ್ದನ್ನೇ ಆದರ್ಶವೆಂದು ಭಾವಿಸುತ್ತಾರೆ!

ಹುಡುಗ-ಹುಡುಗಿಯ ಹದಿಹರೆಯದ ಜೀವನದ ಕೆಲವು ವರ್ಷಗಳು ಬದುಕನ್ನು ನಿರೂಪಿಸುವ ಹಂತವಾಗಿರುತ್ತವೆ. ಅದೇ ಹೊತ್ತಲ್ಲಿ ಉತ್ತಮ ವಿದ್ಯಾಭ್ಯಾಸ ನಡೆಯಬೇಕು, ಅದೇ ಸಮಯದಲ್ಲಿ ಪ್ರಾಯ ಉಕ್ಕೇರಿ ಸೌಂದರ್ಯ ವರ್ಧಿಸಿ ಪರಸ್ಪರ ದೈಹಿಕ ಆಕರ್ಷಣೆ ’ಪ್ರೀತಿ-ಪ್ರೇಮ’ ಎಂಬ ಹಚ್ಚಡವನ್ನು ಹೊದ್ದು ಬರುತ್ತದೆ. " ನಿನ್ನನ್ನು ಬಿಟ್ಟರೆ ನಂಗೆ ಬದುಕೇ ಇಲ್ಲಾ " ಎಂಬ ಮನೋಭಾವ ಪ್ರೇಮಿಸುತ್ತೇವೆ ಎಂದುಕೊಳ್ಳುವ ಹುಡುಗ ಯಾ ಹುಡುಗಿಯಲ್ಲಿ ಹುಟ್ಟಿಕೊಳ್ಳುತ್ತದೆ. ತಮ್ಮ ಮಗು/ಮಕ್ಕಳು ಓದಲಿ, ತಮ್ಮ ಕಷ್ಟ ಕಳೆಯಲಿ, ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸಲಿ, ಚೆನ್ನಾಗಿ ದುಡಿದು ಬಾಳಲಿ ಎಂಬ ಪಾಲಕರ ಬಯಕೆ ಇನ್ನೊಂದೆಡೆ. ಅದೇ ವೇಳೆಗೆ ಹರೆಯದ ಹುಚ್ಚು ಪ್ರೇಮಿಗಳ ಕುರಿತು ಉಪೇಂದ್ರನಂತಹ ಕಮಂಗಿಗಳ ಆಸಿಡ್ ಪ್ರೇಮದ ಸಿನಿಮಾ ಬರುತ್ತದೆ. ಆಸಿಡ್ ಪ್ರಯೋಗ ಕೇಳಿಯೂ ಗೊತ್ತಿರದ ಹುಡುಗ ಅಂಥಾ ಕೆಟ್ಟ ಸಿನಿಮಾ ನೋಡಿ ಅಂಥದ್ದಕ್ಕೆ ಸಿದ್ಧವಾಗುತ್ತಾನೆ. ಉಪೇಂದ್ರನ ಆಸಿಡ್ ಸಿನಿಮಾ ಬಂದಮೇಲೆ ಬೆಂಗಳೂರಿನಲ್ಲೇ ಹಲವು ಆಸಿಡ್-ಪ್ರೇಮ ಘಟನೆಗಳು ಜರುಗಿ ಸುಂದರವಾಗಿದ್ದ ಹೆಣ್ಣುಮಕ್ಕಳು ಕುರೂಪಿಗಳಾಗಿದ್ದಾರೆ, ಕಿವಿ-ಕಣ್ಣು ಕಳೆದುಕೊಂಡಿದ್ದಾರೆ. ಅಂಥಾ ಕೆಟ್ಟ ಸಿನಿಮಾಗಳನ್ನು ನಿರ್ಬಂಧಿಸುವವರು ಯಾರಾದರೂ ಇದ್ದಾರ್ಯೇ ? ಇಲ್ಲ. ಹೋಗಲಿ ಅದರಲ್ಲಿರುವ ಅಂತಹ ಘಟನೆಗಳನ್ನು ತೆಗೆದು ಬೇರೇ ರೀತಿ ಮಾರ್ಪಡಿಸಿ ಎನ್ನುವ ನಿರ್ಣಾಯಕ ನಿರ್ದೇಶನ ನೀಡಬೇಕಾದ ಸೆನ್ಸಾರ್ ಮಂಡಳಿ ಇದೆಯೇ? ಇಲ್ಲ. ಸೆನ್ಸಾರ್ ಮಂಡಳಿಯೂ ಹಣ ಪೀಕುವ ಅನುಮಾನ ನನಗಂತೂ ಇದೆ! ಅಲ್ಲಿ ಕೂತವರು ತೀರಾ ನೀಲಿ ಚಿತ್ರವೊಂದನ್ನು ಬಿಟ್ಟು ಮಿಕ್ಕೆಲ್ಲಕ್ಕೂ ಸರ್ಟಿಫಿಕೇಟ್ ನೀಡಿಬಿಡುತ್ತಾರೆ!

ಪುಟ್ಟಣ್ಣ ಕಣಗಾಲ್‍ರಂತಹ ನಿರ್ದೇಶಕರು ಇರುವವರೆಗೆ ಪ್ರೀತಿ-ಪ್ರೇಮ ಕಥೆಗಳಿಗೆ ಒಂದು ಮಿತಿಮೀರದ ಔಪಚಾರಿಕ ಲೆಪ್ಪ ಇರುತ್ತಿತ್ತು. ಬೆತ್ತಲೆ/ಅರೆಬೆತ್ತಲೆ ತೋರಿಸಬೇಕಾದ ದೃಶ್ಯಗಳನ್ನೂ ಕೂಡ ಆದಷ್ಟು ತಡೆಹಿಡಿಯುತ್ತಿದ್ದರು, ತೋರಿಸಲು ಮುಂದಾಗುತ್ತಿರಲಿಲ್ಲ. ತುಟಿಗೆ-ತುಟಿ ಸೇರುವುದನ್ನು ಸಾಂಕೇತಿಕವಾಗಿ ಹೂ-ದುಂಬಿಗಳ ಚಿತ್ರ ತೋರಿಸಿ ಕಲ್ಪಿಸಲಗುತ್ತಿತ್ತು. ಆ ಕಾಲ ಹೋಗೇ ಬಿಡ್ತುಬಿಡಿ. ಈಗೇನಿದ್ದರೂ ಎಷ್ಟೋ ಮನೆಗಳಲ್ಲೇ ಕದ್ದು-ಮುಚ್ಚಿ ನೀಲಿ ಚಿತ್ರಗಳನ್ನು ನೋಡುವ ಕಾಲ. ವಿದ್ಯೆ ಹೆಚ್ಚಾದ ಅಪ್ಪ-ಮಕ್ಕಳು ಮನೆಯ ರೂಫ್-ಟಾಪ್ ಗಾರ್ಡನ್‍ನಲ್ಲಿ ಒಟ್ಟಾಗಿ ಕೂತು ಕುಡಿಯುವ ಕಾಲ ಬಂದಿದೆ. ಇವತ್ತು ಒಟ್ಟಾಗಿ ಕುಡಿಯುವವರು ನಾಳಿನ ಜನಾಂಗದಲ್ಲಿ ಒಟ್ಟಾಗಿ ಇನ್ನೇನೇನು ಮಾಡುತ್ತಾರೋ ತಿಳಿಯುವುದಿಲ್ಲ.

ಪ್ರಸಕ್ತ ನಾವು ಇಲ್ಲೊಂದು ಚಿಕ್ಕ ಹೆಸರನ್ನು ಗಮನಿಸೋಣ. ’ಯಾರಾದ್ರೆ ನಂಗೇನು ? ’ ಹುಡುಗಿಯೊಬ್ಬಳು ಬೆತ್ತಲೆ ನಿಂತಿರುವ ದೃಶ್ಯದ ಕೆಳಗೆ ’ಯಾರಾದ್ರೆ ನಂಗೇನು ?’ ಎಂಬ ಘೋಷವಾಕ್ಯ ಬರೆದರೆ ಅದರ ಅರ್ಥವಾದರೂ ಸಾಮಾನ್ಯವಾಗಿ ಏನಿರಬಹುದು? ಸಿನಿಮಾ ಕಥೆಯಲ್ಲಿ ಅಂತಹ ದೃಶ್ಯ ಇದ್ದೀತೋ ಇಲ್ಲವೋ ಬೇರೇ ಪ್ರಶ್ನೆ ಆದರೆ ತಕ್ಷಣದ ನೋಡುಗನಿಗೆ ಅಂತಹ ಗೋಡೆಚಿತ್ರಗಳನ್ನು ನೋಡಿದಾಗ ಏನನ್ನಿಸುತ್ತದೆ? ಹಣವೊಂದು ದೊರೆತರೆ ಸಾಕು ಯಾರಾದ್ರೆ ನಂಗೇನು ನಾನು ಎಲ್ಲಾರ್ಜೊತೆ ರೆಡಿ ಎಂಬ ಅರ್ಥ ಬರುವುದಿಲ್ಲವೇ? ಇದು ಬೀದಿನಾಯಿಗಳ ’ಆ ಚಟುವಟಿಕೆಗಳಿ’ಗಿಂತಲೂ ಭಿನ್ನ ಅಲ್ಲ ಹೇಗೆ ? ಸಿನಮಾದಲ್ಲಿ ಉತ್ತಮ ಸಂದೇಶವಿದೆಯಂತೆ. [ಎಲ್ಲರೂ ಆರಂಭದಲ್ಲಿ ಹೇಳೋದೇ ಇದನ್ನು! ಸಂದೇಶ ಯಾವುದೇ ಇರಲಿ, ಸದ್ಯಕ್ಕೆ ಆ ಗೋಡೆಚಿತ್ರ ಹಬ್ಬಿಸುವ ಸಂದೇಶವೇನು ?

ಸಿನಿಮಾ ಮತ್ತು ಮಾಧ್ಯಮ ವಾಹಿನಿಗಳು ನಾಗರಿಕರಿಗೆ ಸಂದೇಶಗಳನ್ನು ಕೊಡುವಾಗಾಗಲೀ ಅಥವಾ ಮನರಂಜನೆ ಒದಗಿಸುವಾಗಾಗಲೀ ತಾವು ಬಳಸುವ ಶಬ್ದಗಳನ್ನೂ ಮತ್ತು ಉಪಯೋಗಿಸುವ ದೃಶ್ಯಗಳನ್ನೂ ನೆನಪಿಟ್ಟುಕೊಂಡು ನಡೆಸುವುದು ಮುಖ್ಯವಾಗಿರುತ್ತದೆ. ಸಮಾಜ ಹೇಗೆ ಸಾಗಿದೆ ಎಂದರೆ ನಮಗೆ ಕೆಲವೊಮ್ಮೆ ಅಲೋಪಥಿಕ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾ ಅವು ಮೈಗೊಂಡುಹೋಗುತ್ತವೆ. ಅವುಗಳಲ್ಲಿನ ರೋಗವಾಸಿಮಾಡುವ ತಾಕತ್ತು ನಮಗೆ ಸಾಕಾಗುವುದಿಲ್ಲ. ಅದೇ ರೀತಿ ಪ್ರತಿನಿತ್ಯ ಮಾಧ್ಯಮಗಳಲ್ಲಿ ಕ್ರೌರ್ಯಗಳನ್ನೂ ಬೆತ್ತಲೆ ದೃಶ್ಯಗಳನ್ನೂ ನೋಡ್ತಾ ನೋಡ್ತಾ ಈಗೀಗ ನೋಡುಗ ಮತ್ತೇನನ್ನೋ ಬಯಸುವಷ್ಟು ಕೆಟ್ಟ ಹಂತಕ್ಕೆ ತಲ್ಪಿದ್ದಾನೆ; ಕ್ರೌರ್ಯವನ್ನು ವೈಭವೀಕರಿಸಿ ಉಣಬಡಿಸಿದ ಕುಖ್ಯಾತಿ ಮಾಧ್ಯಮವಾಹಿನಿಗಳಿಗೆ ಸಲ್ಲುತ್ತದೆ! ಕೆಲವು ಮನೆಗಳಲ್ಲಿ ಮಧ್ಯ ವಯಸ್ಕರಿಗೆ ಪ್ರತೀ ರಾತ್ರಿ ಟಿವಿಗಳಲ್ಲಿ ಒಂದೆರಡು ಹೆಣ ಬಿದ್ದಿದ್ದು ನೋಡಿದ ಹೊರತು ನಿದ್ದೆ ಬರುವುದಿಲ್ಲವಂತೆ ! ಯಾರೋ ರೌಡಿ ಇನ್ನೊಬ್ಬನನ್ನು ಹತ್ಯೆಗೈದಿದ್ದು-ಯಾವನೋ ಪಾಪಿ ವರದಕ್ಷಿಣೆಗೆ ಹೆಂಡತಿಯನ್ನು ಕೊಂದಿದ್ದು, ಯಾವುದೋ ಹುಡುಗ ಹುಡುಗಿ ತನಗೆ ಸಿಗಲಿಲ್ಲಾ ಎಂಬ ಕಾರಣಕ್ಕೆ ಆಕೆ ಪ್ರೀತಿಸುತ್ತಾಳೆ ಎನ್ನಲಾದ ಇನ್ನೊಬ್ಬ ಹುಡುಗನನ್ನು ಬಲಿಹಾಕುವುದು, ವಿಕೃತಕಾಮಿಯೊಬ್ಬ ಹೆಂಗಸಿನ್ನು ಬಲಾತ್ಕರಿಸುವುದು ಇದೆಲ್ಲಾ ನಮಗ್ಯಾಕೆ ಬೇಕ್ರೀ ?

ಒಂದು ಕಾಲಕ್ಕೆ ಪೋಲೀಸ್ ನ್ಯೂಸ್ ಎಂಬ ಪೇಪರ್ ಬರುವುದನ್ನೇ ಕಾಯುವ ವರ್ಗವೊಂದಿತ್ತು. ಆಮೇಲೆ ರವಿಬೆಳಗೆರೆ ಕುಚ್ ಕಟ್ಟಾ ಕುಚ್ ಮೀಟಾ ಅನ್ನೋ ಥರ ಹೊಸ ಶೈಲಿಯಲ್ಲಿ ಅಂತಹ ಕಥೆಗಳನ್ನು ತನ್ನ ಪತ್ರಿಕೆಯಲ್ಲೂ ಮಾಧ್ಯಮವೊಂದರಲ್ಲೂ ತೋರಿಸಿದರು. ರೋಲ್ ಕಾಲ್ ಮಾಡಿ ನಡೆಸುತ್ತಿದ್ದ ಪತ್ರಿಕೆಗಳು ಇಂತಹ ಕಥೆಗಳನ್ನು ಬರೆಯಲು ತೊಡಗಿದ ಮೇಲೆ ಸಮಾಜದ ’ಆ ವರ್ಗ’ ಇಂತಹ ಪತ್ರಿಕೆಗಳನ್ನು ಬಿಸಿ ಬಿಸಿ ದೋಸೆಯಂತೇ ಕೊಂಡುಕೊಂಡವು, ಪತ್ರಿಕೆಗಳು ಹಣಮಾಡಿದವು! ಸಮಾಜದ ’ಆ ವರ್ಗ’ ಮಿಕ್ಕುಳಿದ ವರ್ಗಕ್ಕೂ ಅಂತಹ ಕಥೆಗಳನ್ನು ಓದಲು/ನೋಡಲು ಪ್ರೇರೇಪಿಸಿತು. ಸುದ್ದಿಗಳಿಲ್ಲದೇ ಒದ್ದಾಡುತ್ತಿದ್ದ ಮಾಧ್ಯಮವಾಹಿನಿಗಳಿಗೆ ’ಆ ಕಥೆಗಳು’ ಟೈಂ ಪಾಸ್ ಮಾಡಲು ಅನುಕೂಲವಾದವು. ಊಟದ ನಂತರ ರಾತ್ರಿ ಕೂತು ವಿರಮಿಸುವ ವೇಳೆ ಎಲ್ಲಾ ವಾಹಿನಿಗಳಲ್ಲೂ ಅಂಥದ್ದೇ ಕಥೆಗಳು, ಕೆಲವೊಮ್ಮೆ ಒಂದೇ ಅದೇ ಕಥೆ! ವೀಕ್ಷಕರು ಭಿಕ್ಷುಕರಂತಾದರು-ಬೆಗ್ಗರ್ಸ್ ಆರ್ ನಾಟ್ ಚೂಸರ್ಸ್ ಎಂಬಂತೇ ವೀಕ್ಷಕರಿಗೆ ಬೇರೇ ಆಯ್ಕೆ ಇರಲಿಲ್ಲವಾಗಿ ಅನಿವಾರ್ಯವಾಗಿ ಕೆಲವರು ಅಂಥದ್ದನ್ನೇ ನೋಡಿದರು! ಇನ್ನು ಕೆಲವರು ಟಿವಿ ಸ್ವಿಚ್ ಆಫ್ ಮಾಡಿದರು. ಮಾಧ್ಯಮ ವಾಹಿನಿಗಳ ವೀಕ್ಷಕರಲ್ಲೂ ನನ್ನದೊಂದು ವಿನಂತಿ: ಕ್ರೌರ್ಯವನ್ನು ತೋರಿಸುವ ಕಥೆಗಳು ಇನ್ನೆಷ್ಟು ದಿನ ಹೀಗೇ ಬೇಕು ? ಅವುಗಳ ಬದಲಿಗೆ ಉತ್ತಮ ಸಂಸ್ಕೃತಿ-ಸಂಸ್ಕಾರಗಳ ಕುರಿತಾದ ಸಂವಾದಗಳನ್ನೋ ಮತ್ತೇನನ್ನೋ ತೋರಿಸಲಿ ಅಲ್ಲವೇ?

ಸಿನಿಮಾ ಮಂದಿ ಮತ್ತು ಮಾಧ್ಯಮಗಳವರು ಇನ್ನಾದರೂ ಅರಿತುಕೊಳ್ಳಲಿ. ಕೇವಲ ಒಳಗೆ ಅಂಥಾ ಸಂದೇಶ ಇದೆ ಇಂಥಾ ಸಂದೇಶ ಇದೆ ಎಂದು ರೈಲು ಬಿಡುವುದಕ್ಕಿಂತ ಅಂಥಾ ಸಂದೇಶ ಇದೆ ಎಂಬುದನ್ನು ಸಮಾಜ ಹೇಳಬೇಕು ಹಾಗೆ ನಿರೂಪಿಸಿ ತೋರಿಸಿ. ಕೇವಲ ಏನನ್ನೋ ಮನಸ್ಸಿಗೆ ಬಂದಿದ್ದನ್ನು ತೋರಿಸಿ ದುಡ್ಡು ಬಾಚಿಕೊಂಡು ಜಾಗ ಖಾಲಿ ಮಾಡಲಿಕ್ಕೆ ಇದೇನು ಡೊಂಬರಾಟವೋ ಮಂಗನಾಟವೋ ? ಅದಾದ್ರೆ ಸರಿ ಪಾಪ ಹೊಟ್ಟೆಪಾಡಿಗೆ ಕಸರತ್ತು ಮಾಡುವಾಗ ಏನನ್ನೋ ತೋಚಿದ್ದನ್ನು ತೋರಿಸುತ್ತಾರೆ ಎನ್ನಬಹುದು, ಆದರೆ ಸಿನಿಮಾ ಯಾ ಮಾಧ್ಯಮಗಳವರು ತಾವುಗಳು ಓದಿಕೊಂಡ ಮಹನೀಯರು, ತಾವುಗಳು ಸೆರೆಹಿಡಿದು ತೋರಿಸುವ ದೃಶ್ಯಾವಳಿಗಳು ಒಂದರ್ಥ ಡಾಕ್ಯುಮೆಂಟರಿಗಳು! ಅವು ಯಾವಕಾಲಕ್ಕೂ ಪುನರ್ಲಭ್ಯವಾಗುವಂಥವು ಮಾತ್ರವಲ್ಲ ಸಮಾಜದ ಎಲ್ಲಾ ಸ್ತರಗಳಿಗೂ ಬಹುವೇಗದಲ್ಲಿ ತಲ್ಪುವಂಥವು. ಅವುಗಳಲ್ಲಿನ ಕಥೆ-ಆಖ್ಯಾಯಿಕೆಗಳು ಜನರ ಮನಃಪಟಲದಲ್ಲಿ ನಿಲ್ಲುತ್ತವೆ. ಅದರಲ್ಲಂತೂ ಹದಿಹರೆಯದ ಮಕ್ಕಳು ನಿಮ್ಮ ಕೆಟ್ಟ ಸಂದೇಶಗಳನ್ನೇ‍ ಪ್ರೀತಿಯಿಂದ ಸ್ವೀಕರಿಸಿ ಅಪ್ಪ-ಅಮ್ಮ ಕೊಡುವ ಉತ್ತಮ ಸಂದೇಶಗಳನ್ನೂ ಪಾಲಿಸದಂತಾಗುತ್ತಾರೆ. ಮಕ್ಕಳು ಮನೆಯಲ್ಲಿ ಅಪ್ಪ-ಅಮ್ಮನನ್ನೇ ದ್ವೇಷಿಸತೊಡಗುತ್ತಾರೆ. ಹೀಗಾಗಿ ಸ್ವೇಚ್ಛಾಚಾರವನ್ನು ವೈಭವೀಕರಿಸುವ ನಿಮ್ಮ ಸಂದೇಶಗಳನ್ನು ಹದ್ದುಬಸ್ತಿನಲ್ಲಿಡಿಸಿ ಸಮಾಜ [ಈಗಲೇ ಕೆಲಭಾಗ ಕೆಟ್ಟಿದೆ]ಕೆಟ್ಟುಹೋಗದಂತೇ ನೋಡಿಕೊಳ್ಳಬೇಕಾದ ಸಾಮಾಜಿಕ ಜವಾಬ್ದಾರಿ ಕೂಡ ನಿಮ್ಮದಿರುತ್ತದೆ, ಅಂದಾಗ ಮಾತ್ರ ನಿಮ್ಮ ಮನೋರಂಜನೆಗೊಂದು ಮೌಲ್ಯವಿರುತ್ತದೆ. ಅದು ಬಿಟ್ಟು ಸಿಕ್ಕ ಸಿಕ್ಕ ಹಾಗೆಲ್ಲಾ ಹೇಳಿಕೆ ಕೊಡೋದು, ಸಂದೇಶ ಕೊಡ್ತೀವಿ ಅಂತ ಕೆಟ್ಟ ಸಿನಿಮಾ ತೆಗೆಯೋದು ಮಾಡ್ಬೇಡಿ.

ನನ್ನ ಈ ಅನಿಸಿಕೆಗೆ ಸಮಾಜದಲ್ಲಿ ಕೆಲವರ ಸ್ಪಂದನೆಯಾದರೂ ಇರಬಹುದು. ದುರ್ಗಮ ಪ್ರದೇಶವನ್ನು ಕ್ರಮಿಸುವಾಗ ಅತ್ಯಂತ ಜಾಗರೂಕತೆ ಬೇಕಂತೆ, ಶಿಖರವನ್ನೇರುವಾಗ ಸಹಾಯಕ್ಕೆ ಹಗ್ಗ ಮೊದಲಾದವು ಬೇಕಂತೆ, ಸಮಾಜ ಅಜ್ಞಾನವನ್ನು ತೊಡೆದುಹಾಕುವಾಗ ಭಗವದ್ಗೀತೆಯಂತಹ ಕೈಗನ್ನಡಿ ಬೇಕಂತೆ. ಸಹಸ್ರ ವರ್ಷಗಳ ಹಿಂದೆ ಯುದ್ಧಭೂಮಿಯಲ್ಲಿ ಪ್ರವಚಿಸಿದ್ದೆನ್ನಲಾದ ಗೀತೆ ಎಂಬ ಮಾನವ ಜೀವನ ಧರ್ಮ ಸೂತ್ರಗಳು ಇವತ್ತಿಗೂ ಎಷ್ಟು ಪ್ರಸ್ತುತ ಎಂಬುದು ಆಗೀಗ ನಮಗೆ ತಿಳಿಯುತ್ತಲೇ ಇರುತ್ತದೆ. ನೀತಿಬಾಹಿರ ಕೆಲಸಗಳನ್ನು ನಿರ್ಬಂಧಿಸುವ ಮಾನವ ಕಲ್ಯಾಣವನ್ನು ಎತ್ತಿಹಿಡಿದ ಗೀತಾಚಾರ್ಯ ಶ್ರೀಕೃಷ್ಣನನ್ನು ಅದಕ್ಕೇ ಜಗದ್ಗುರು ಎನ್ನುತ್ತಾರಲ್ಲವೇ? ನಮಗೆ ಗೀತೆಯನ್ನೋದಲು ಸಮಯವಿಲ್ಲ, ಗೀತೆಯ ಉಪನ್ಯಾಸಗಳನ್ನು ಕೇಳಲು ಅನುಕೂಲವಿಲ್ಲ. ಗೀತೆ ಹಿಂದೂ ಧರ್ಮ ಪ್ರಚಾರವೆಂಬ ವಿಷಬೀಜವನ್ನು ನಾವು ಯಾರದೋ ಬಾಯಿಂದ ಕೇಳಿ ಮತ್ತಷ್ಟು ಜನರಿಗೆ ಹಬ್ಬಿಸುತ್ತೇವೆ! ಆದರೆ ಹಗಲೂ-ರಾತ್ರಿ ಮಾಧ್ಯಮವಾಹಿನಿಗಳಲ್ಲಿ ಬರುವ ಕ್ರೌರ್ಯಗಳನ್ನೂ ಕಾಮತೀಟೆಗಳ ಎಪಿಸೋಡ್‍ಗಳನ್ನು ನೋಡಲು ನಮಗೆ ಸಮಯವಿದೆ, ಅನುಕೂಲವೂ ಇದೆ, ಮನಸ್ಸೂ ಇದೆ. ಅಂದಮೇಲೆ ನಮ್ಮ ಮನಸ್ಸು ಅಂಧಕಾರದೆಡೆಗೆ ಹೆಜ್ಜೆಹಾಕುತ್ತಿದೆ; ಬೆಕ್ಕು ಕದ್ದು ಹಾಲು ಕುಡಿಯಲು ಬಯಸುತ್ತದೆ! ಈಗಲೇ ನಿರ್ಧರಿಸಿ, ಈ ಕ್ಷಣ ಅದನ್ನು ನಿಯಂತ್ರಿಸಿ, ಅಸತ್ಯದಿಂದ ಸತ್ಯದೆಡೆಗೆ-ಕತ್ತಲೆಯಿಂದ ಬೆಳಕಿನೆಡೆಗೆ-ಮೃತ್ಯುವಿನಿಂದ ಅಮೃತತ್ವದೆಡೆಗೆ ನಡೆಯೋಣ; ಗೀತೆಯನ್ನು ಸಮರ್ಪಕವಾಗಿ ಅರಿತು ನಮ್ಮ ಜೀವನಧರ್ಮವಾಗಿ ಅದನ್ನು ಅನುಸಂಧಾನಗೊಳಿಸೋಣ, ಧನ್ಯವಾದ.

Monday, January 9, 2012

’ಪುನರ್ಜನ್ಮ’!!


’ಪುನರ್ಜನ್ಮ’!!
[ಇಂದು ನಿನ್ನೆ ಎರಡು ಕೃತಿಗಳು ಶೀಘ್ರಗತಿಯಲ್ಲಿ ಪ್ರಕಟಗೊಂಡಿರುವುದರಿಂದ ಶಂಕರ ಭಗವತ್ಪಾದರ ಕುರಿತ ಇದಕ್ಕೂ ಹಿಂದಿನ ಕೃತಿ ಬಹಳ ಮೌಲ್ಯಯುತವಾಗಿರುವುದರಿಂದ ಅದನ್ನು ಇನ್ನೂ ಓದಿರದ ಓದುಗ ಮಿತ್ರರಲ್ಲಿ ಅದನ್ನೂ ಮರೆಯದಂತೆ ಓದಿಕೊಳ್ಳಲು ಪ್ರಾರ್ಥಿಸುತ್ತೇನೆ]

" ನಾನು ಒಂದು ಎರಡು ಮೂರು ಅಂತ ಎಣಿಸುತ್ತಿರುವುದನ್ನೇ ನೋಡುತ್ತಿರಬೇಕು. ನಿಧಾನಕ್ಕೆ ಮಲಕ್ಕೋ, ನಿಧಾನಕ್ಕೆ ಎರಡೂ ಕಣ್ಣುಗಳನ್ನು ಮುಚ್ಚು. ನಿಧಾನಕ್ಕೆ ಶ್ವಾಸವನ್ನು ಒಳಗೆಳೆದುಕೊಂಡು ನಿಧಾನಕ್ಕೆ ಹೊರಗೆ ಬಿಡಬೇಕು....ಒನ್ ಟೂ ತ್ರೀ ಗೋ ...........ಈಗ ನೀನು ನಿನ್ನ ಹಿಂದಿನ ಜನ್ಮದಲ್ಲಿದ್ದೀಯಾ. ನಿನ್ನ ಕಾಲುಗಳನ್ನು ನೋಡ್ಕೋ. ಏನು ಹಾಕಿಕೊಂಡಿದ್ದೀಯಾ ಕಾಲಿಗೆ ? "

" ಹವಾಯಿ ಹಾಕಿಕೊಂಡಿದ್ದೇನೆ "

" ಹೌದಾ ...ಅಲ್ಲೇ ಸುತ್ತಮುತ್ತ ಇರುವ ವ್ಯಕ್ತಿಗಳನ್ನು ಗುರುತಿಸು ನೋಡೋಣ. ಯಾರ್ಯಾರಿದ್ದಾರೆ? "

" ಯಾರ್ಯಾರೋ ನಿಂತಿದ್ದಾರೆ. ಕಾಡು ಮನುಷ್ಯರ ಥರಾ ಕಾಣಿಸ್ತಾರೆ. ಕಾಡಿನ ಜಾಗದಲ್ಲಿ ಒಂದು ಹಳೇ ಗುಡಿಸಲು. ಏನೇನೂ ವೇಷ ಹಾಕ್ಕೊಂಡಿದಾರೆ. ಮೈಗೆ ಪ್ರಾಣಿ ಚರ್ಮ ಸುತ್ಕೊಂಡಿದಾರೆ. ತಲೆಗೆ ಹಕ್ಕಿಗಳ ಬಣ್ಣಬಣ್ಣದ ಪುಕ್ಕಗಳಿಂದ ಮಾಡಿದ ಟೋಪಿ ಧರಿಸಿದ್ದಾರೆ. ಎಲ್ಲರ ಕೈಲೂ ಈಟಿ-ಭರ್ಚಿಯಂಥಾ ಆಯುಧಗಳಿವೆ. ಹುರ್ರಾ ಹುರ್ರಾ ಹುರ್ರಾ ಹುರ್ರಾ ಅಂತ ಧ್ವನಿ ಹೊರಡಿಸ್ತಾ ಇದ್ದಾರೆ. ಆದರೆ ಒಬ್ಬರದೂ ಪರಿಚಯವಿಲ್ಲ"

" ಹಾಂ ಹೌದಾ ....ಈಗ ಮತ್ತೆ ಒನ್ ಟೂ ತ್ರೀ ಎಣಿಸ್ತಾ ನಿಧಾನಕ್ಕೆ ಹಿಂದಕ್ಕೆ ಹಿಂದಕ್ಕೆ ಹಿಂದಕ್ಕೆ ಹೋಗ್ತಾ ನಿನ್ನ ಅದಕ್ಕೂ ಹಿಂದಿನ ಜನ್ಮಕ್ಕೆ ಹೋಗು..ಒನ್..ಟೂ...ತ್ರೀ...ಗೋ....ಈಗ ನೋಡು ಅಲ್ಲಿ ಯಾರ್ಯಾರೆಲ್ಲಾ ಇದ್ದಾರೆ? "

" ನಮ್ಮಮ್ಮ-ಅಪ್ಪ, ಅಣ್ಣ ಎಲ್ಲಾ ಇದ್ದಾರೆ...ಮೈಸೂರಿನ ಹಳ್ಳಿ. ನಮ್ದು ಹಳ್ಳಿಮನೆ. ಹೊರಗಡೆ ನಾಯಿ ಮಲ್ಕೊಂಡಿದೆ.ಅದರ ಹೆಸರು ’ಟಾಮಿ’. ಮನೆ ಪಕ್ಕ ಒಂದು ತುಂಬಾನೇ ಆಳವಾದ ಒಂದು ಬಾವಿ ಇದೆ. "

" ನಿಮ್ಮಪ್ಪ-ಅಮ್ಮ ಅವರೆಲ್ಲಾ ಏನ್ ಮಾಡ್ತಾ ಇದ್ದಾರೆ ನೋಡು "

" ’ಅಶೂ ಮದುವೆಗೆ ಮೋದಲೇ ಗರ್ಭಿಣಿ ಆಗಿದ್ದು ಕುಟುಂಬದ ಮಾರ್ಯಾದೆಯನ್ನು ಬೀದಿಪಾಲುಮಾಡಿದ ಹಾಗಾಯ್ತು. ಇಂಥಾ ಮಗಳು ಹುಟ್ಟೋದಕ್ಕಿಂತಾ ಹುಟ್ಟದಿದ್ದರೇ ಚೆನ್ನಾಗಿತ್ತು’ ಅಂತ ಮಾತಾಡ್ಕೋತಾ ಇದಾರೆ"

" ನೀನು ಏನಾಗಿದೀಯ ಅಲ್ಲಿ ? "

" ನಾನು ಆ ಮನೆ ಮಗಳು. ಎಸ್. ಎಸ್, ಎಲ್.ಸಿ ಮುಗಿದಮೇಲೆ ಕಾಲೇಜಿಗೆ ಹೋಗಬೇಕು ಅಂದ್ಕೊಂಡಿದ್ದೆ, ಅಪ್ಪ ಬೇಡಾ ಅಂದ್ಬುಟ್ರು. ರಮೇಶ ನನ್ನ ಬಾಲ್ಯದ ಗೆಳೆಯ. ನಾವಿಬ್ರೂ ಬಿಟ್ಟಿರ್ತಾ ಇರ್ಲಿಲ್ಲ. ಸ್ಕೂಲಿಗೆ ಹೋದಾಗ ಏನಿದ್ರೂ ಹೇಳ್ಕೋತಾ ಇದ್ವಿ. ನಮ್ಮಿಬ್ರಲ್ಲಿ ಯಾರಾದ್ರೂ ಸ್ಕೂಲು ತಪ್ಪಿಸ್ಕೊಂಡ್ರೆ ಮಾರನೇದಿನ ನೋಟ್ಸು ಪರಸ್ಪರ ಪಡ್ಕೋತಾ ಇದ್ವಿ. ಆತ ಕಾಲೇಜಿಗೆ ಸೇರ್ಕೊಂಡ್ನಾ ನಾನು ಮಾತ್ರ ಓದಕ್ಕಾಗ್ಲಿಲ್ಲ. "

" ಮುಂದೇನಾಯ್ತು....?"

" ನಾನೂ ಬಿಡ್ಲಿಲ್ಲ. ಹಠಮಾಡಿಕೊಂಡು ಚಿಕ್ಕಮ್ಮನ ಮನೆಗೆ ಹೋಗಿ ಅಲ್ಲಿಂದ ಕಾಲೇಜಿಗೆ ಹೋಗಲು ಆರಂಭಿಸಿದೆ ...ಪಿಯೂ ಮೊದಲ ವರ್ಷದಲ್ಲಿ ನಂಗೆ ಇಂಗ್ಲೀಷ್ ಮೀಡಿಯಮ್ಮಿನಲ್ಲಿ ಅಷ್ಟಾಗಿ ಅರ್ಥವಾಗ್ತಿರಲಿಲ್ಲ. ರಮೇಶ ತುಂಬಾನೇ ಜಾಣ. ಅವನು ಹೇಗೋ ಎಲ್ಲಾನೂ ತಿಳ್ಕೋತಿದ್ದ. ಕಾಲೇಜಿಗೆ ಬಂದ ಆರೇಳು ತಿಂಗ್ಳಲ್ಲೇ ತುಂಬಾ ಎತ್ತರವಾಗಿ ಕಟ್ಟುಮಸ್ತಾಗಿ ಬೆಳೆದಿದ್ದು. ೫ ಫೂಟು ೮ ಇಂಚು ಎತ್ತರ ಇದ್ನೋ ಇರ್ಬೇಕು. ಗೋಧಿ ಮೈಬಣ್ಣದ ಆತನನ್ನು ನೋಡಿದಾಗ ನಂಗೆ ಈಗೀಗ ಅವನನ್ನೇ ಗಂಡನನ್ನಾಗಿ ಪಡೆವ ಆಸೆ ಹುಟ್ಕೊಂಡಿತ್ತು. "

" ಮುಂದೆ... ?"

" ರಮೇಶಂಗೂ ನಾನೆಂದ್ರೆ ಅಷ್ಟಿಷ್ಟ. ಮನೆಯಿಂದ ತಂದ ತಿಂಡಿ ಒಟ್ಟಿಗೇ ತಿಂತಾ ಇದ್ವಿ. ಕೆಲವೊಮ್ಮೆ ಹೋಟೆಲ್ಗೂ ಹೋಗ್ತಾ ಇದ್ವಿ. ಆಗಾಗ ಕಾಲೇಜಿಗೆ ಚಕ್ಕರ್ ಹಾಕಿ ಸಿನಿಮಾಗೂ ಹೋಗ್ತಾ ಇದ್ವಿ. ಮೈಸೂರು ಮಹಾರಾಜರು ನಮ್ಮಂಥಾ ಜನಗೋಳ್ಗೆ ಅಂತ ಒಂದು ಸಿನಿಮಾ ಟಾಕೀಸು ಕಟ್ಸಿದ್ರು. ಅದೇ ಟಾಕೀಸ್ನಾಗೆ ಒಂದೆರಡು ಸಿನಿಮಾ ನೋಡಿದ್ವಿ. ಅವನು ಹತ್ರ ಕುಂತಾಗೆಲ್ಲಾ ಒಂಥರಾ ಆಗ್ತಾ ಇತ್ತು. ಪ್ರೀತಿ ಅಂದ್ರೆ ಅದೇ ಇರ್ಬೇಕು. "

" ಮುಂದೆ ....?"

" ಒಂದಿನ ರಮೇಶ ಅಲ್ಲೆಲ್ಲೋ ಹೋಗೋಣ ಬರ್ತೀಯಾ ? ಅಂದ. "

" ನೀನೇನೆಂದೆ ?......."

" ಆಯ್ತು ಬರ್ತೀನಿ ಎಂದೆ. ಅವನೆಂದ್ರೆ ನಂಗೆ ತುಂಬಾನೇ ಆಸೆ. ಅದ್ಕೇ ಅವನ್ಜೊತೆ ಮೈಸೂರಿನಿಂದ ಕೊಡಗಿಗೆ ಹೋದೆ. ಕೊಡಗು ನೋಡಲು ತುಂಬಾ ಸುಂದರ. ಚಳಿಗಾಲದಲ್ಲಂತೂ ಅಲ್ಲಿನ ವಾತಾವರಣ ನೆನೆಸ್ಕೊಂಡ್ರೆ ಕರ್ನಾಟಕದ ಕಾಶ್ಮೀರ ಅನ್ಬೇಕು. ಅಂಥಾ ಕೊಡಗಿನಲ್ಲಿ ಒಂದೆರಡು ದಿನ ತಂಗಿದ್ವಿ. ತುಂಬಾ ದಿವಸದಿಂದ ಮನಸ್ಸು ಒಟ್ಟಿಗೇ ಇರ್ಬೇಕು ಅಂತ ಬಯಸ್ತಾ ಇತ್ತು. ಅದೆಷ್ಟೋ ದಿನಗಳು ಕಳೆದಮೇಲೆ ಈಗ ಅದಕ್ಕೆ ಕಾಲ ಕೂಡಿಬಂದಿತ್ತು. ಒಟ್ಟಿಗೇ ಇದ್ವಲ್ಲ, ಹಾಗೇ ಒಂದಾಗೋಣ ಅಂದ ರಮೇಶ. ಅವನ ತೋಳಿನಲ್ಲಿ ಬಂಧಿಯಾಗಿದ್ದ ನಂಗೆ ಸ್ವರ್ಗಕ್ಕೆ ಮೂರೇಗೇಣು. ರಮೇಶ ನನ್ನವನೇ ಅಲ್ವೇ ಅದಕ್ಕೇ ಇರ್ಬೇಕು ಮತ್ತು ಆತ ಎಂದೆಂದಿಗೂ ನನ್ನವನಾಗೇ ಇರ್ತಾನೆ ಎಂಬ ಕಾರಣಕ್ಕೂ ಇರ್ಬೇಕು "

" ಮುಂದೆ ......? "

" ಕೊಡಗಿನಲ್ಲಿ ಕಳೆದ ಎರಡೂ ರಾತ್ರಿ ನಾನು ಜೀವನದಲ್ಲೇ ಮರೆಯೋ ಹಾಗಿಲ್ಲ. ಅದೇನು ಖುಷಿ ಏನು ಮಜಾ. ಇಬ್ಬರೂ ಬಹಳ ಸಮಯ ಒಅಬ್ಬರನ್ನೊಬ್ಬರು ತಬ್ಬಿಕೊಂಡೇ ಇದ್ವಿ. ನಮ್ಮಿಬ್ಬರ ಮೈಮನಗಳೆರಡೂ ಬೆರೆತು ಒಂದೇ ಆಗಿಬಿಟ್ಟಿದ್ದವು. ರಾತ್ರಿ ಕಳೆದು ಬೆಳಗಾದರೂ ರಮೇಶನಿಂದ ಬಿಡಿಸಿಕೊಳ್ಳಲು ಇಷ್ಟವಾಗ್ತಿರಲಿಲ್ಲ. "

" ಮುಂದೇನಾಯ್ತು.... ? "

" ಕೊಡಗಿನಿಂದ ಮರಳಿದ ನಂಗೆ ಸ್ವಲ್ಪ ಕಷ್ಟಾನೇ‍ ಕಾದಿತ್ತು. ಮೊದಲಿಗೆ ಮನೇಲಿ ಅಪ್ಪ ಕೋಪಗೊಂಡು ಮೊದ್ಲೇ ಕಾಲೇಜಿಗೆ ಕಳ್ಸಿರ್ಲಿಲ್ಲ. ಈಗ ಇಲ್ಲಿ ಚಿಕ್ಕಮ್ಮನೂ ಹೇಳ್ದೇ ಕೇಳ್ದೇ ಅದ್ಯಾಕೆ ಎಲ್ಲೋ ಹೋಗಿದ್ದಿ ? ಎಂದು ತಗಾದೆ ತಗೆದಿದ್ಲು. ಇದ್ದೊಬ್ಬ ಚಿಕ್ಕಮ್ಮನ್ನೂ ಕೊಂಚ ವಿರೋಧ ಮಾಡ್ಕೊಳೋ ದಿನ ಬಂದ್ಬುಡ್ತು. ಆದ್ರೂ ಏನೋ ಸಬೂಬು ಹೇಳ್ದೆ, ಆ ಕ್ಷಣಕ್ಕೆ ಚಿಕ್ಕಮ್ಮ ಹೋಗ್ಲಿ ಹುಡುಗಿ ಪಾಪ ಅಂತ ಸುಮ್ಮನಾದಳು"

" ಆಮೇಲೆ ....? "

" ಎರಡುವಾರ ಕಳೀತಿರ್ಬೇಕು. ಒಂದಿನ ಕಾಲೇಜಿಗೆ ಹೋದಾಗ ವಾಂತಿ ವಾಂತಿ ವಾಂತಿ. ಶರೀರಕ್ಕೆ ಯಾವ ಆಹಾರಾನೂ ಬೇಡ. ಸುಸ್ತಗಿ ಸುಮ್ನೇ ಮಲಗಿಬಿಟ್ಟೆ. ಚಿಕ್ಕಮ್ಮಂಗೆ ವಾಂತಿ ಬಂದಿದ್ದನ್ನು ಹೇಳಲೇ ಇಲ್ಲ. ಯಾಕೋ ಮೈ ಸರಿಯಿಲ್ಲ ಊಟಬೇಡ ಅಂತ ಸುಮ್ಮನೇ ಮಲಗಿಬಿಟ್ಟೆ. ಹಾಗೂ ಹೀಗೂ ದಿನಗಳು ಕಳೆದ್ವು "

" ಮುಂದೆ ...? "


" ನಂಗಂತೂ ಈಗೀಗ ತುಂಬಾನೇ ಸುಸ್ತು. ನಿಂತ್ರೂ ನಿದ್ದೆ ಕುಂತ್ರೂ ನಿದ್ದೆ. ಮಲ್ಕೊಂಡೇ ಇರೋಣಾ ಅನ್ನಿಸ್ತಿತ್ತು. ಡಾಕ್ಟರ್ ಹತ್ತಿರ ಹೋದಾಗ ಸುಸ್ತು ಕಮ್ಮಿಯಾಗೋ ಮಾತ್ರೆ ಕೊಟ್ರು. ಊಹೂಂ ಏನೂ ಪ್ರಯೋಜನವಾಗಲಿಲ್ಲ. ಮೇಲಾಗಿ ತಿಂಗಳಿಗೆ ಸರಿಯಾಗಿ ನಂಗೆ ಪೀರಿಯಡ್ಸ್ ಆಗ್ತಿರ್ಲಿಲ್ಲ. ಈಗ್ಲೂನೂ ಅಷ್ಟೇ ಮೂರೂವರೆ ತಿಂಗ್ಳು ಆದ್ರೂನೂ ಮುಟ್ಟು ಬಂದಿರ್ಲಿಲ್ಲ."

" ಹೌದಾ..ಹಾಗೆಲ್ಲಾ ಕೆಲವ್ರಿಗೆ ಇರುತ್ತೆ ಬಿಡಮ್ಮ, ಮುಂದೇನಾಯ್ತು ?"

" ಒಂದಿನ ನಾನು ಮನೇಲಿರೋವಾಗ ಸುಸ್ತಾಗಿ ಪ್ರಜ್ಞೆ ತಪ್ಪಿ ಬಿದ್ದೆ. ಆಗ ಚಿಕ್ಕಮ್ಮ ಮತ್ತು ಅವರ ಮನೇಜನರೆಲ್ಲಾ ಸೇರ್ಕೊಂಡು ಸರಿಯಾಗಿ ಪರೀಕ್ಷಿಸಬೇಕು ಅಂತ ಮೈಸೂರಿನ ಮಹಾರಾಜಾ ಆಸ್ಪತ್ರೆಗೆ ಕರೆದುಕೊಂಡು ಹೋದ್ರು. ಅಲ್ಲಿನ ವೈದ್ಯರು ಎಲ್ಲಾ ರೀತಿ ಟೆಸ್ಟ್ ಮಾಡಿ ನಾನು ಬಸುರಿ ಎಂದು ಹೇಳಿಬಿಟ್ಟರು"

" ಹೌದಾ ಆಂ........ಆಮೇಲೆ ? "

" ವಿಷಯ ಕೇಳಿ ನಮ್ಮ ಚಿಕ್ಕಮ್ಮ ಎಲ್ಲಾ ತುಂಬಾ ಗಾಬರಿಯಾಗಿದ್ರು. ನಮ್ಮಪ್ಪ-ಅಮ್ಮಂಗೂ ಕಾಗ್ದ ಬರ್ದು ವಿಷಯ ತಿಳಿಸಿದ್ರು. ಮೊದಲೇ ನನ್ಕಂಡ್ರೆ ಅಪ್ಪಂಗೆ ಆಗ್ತಿರ್ಲಿಲ್ಲ, ಯಾಕಂದ್ರೆ ತನ್ಮಾತು ಮೀರಿ ಕಾಲೇಜಿಗೆ ಹೋಗ್ತಾಳಲ್ಲ ಅಂತ. ಕಾಗದ ತಲ್ಪಿದ್ದೇ ತಲ್ಪಿದ್ದು ನಮ್ಮಪ್ಪ-ಅಮ್ಮ-ಅಣ್ಣ ಎಲ್ಲಾ ಮನೆಗೆ ಬೀಗ ಜಡಿದು ಚಿಕ್ಕಮ್ಮನ ಮನೆಗೇ ಬಂದುಬಿಟ್ರು. "

" ಅರೆರೇ ಅದೇನೀಗ .......? "

" ಹಾಗೇ, ನಾನು ಬಸುರಿ ಆಗಿದ್ನಲ್ಲಾ ಅದಕ್ಕೇ ಅವರಿಗೆ ಬೆಟ್ಟದಷ್ಟು ಕೋಪ ಬಂದಿತ್ತು. ಬಂದವ್ರೇ ’ಮನೆಹಾಳಿ ಮೊದ್ಲೇ ಹೇಳಿದ್ನಾ ಕಾಲೇಜಿಗೆ ಬೇಡಾ ಅಂತ. ನಿನ್ನ ಮುಗಿಸದೇ ಇದ್ರೆ ನಮ್ಮ ಹೆಸರಿಗೆಲ್ಲಾ ಮಸೀ ಬಳಿದೇ ಹಾಗೇ ಇರೋ ಆಸಾಮಿನೇ ಅಲ್ಲ ನೀನು ’ ಅಂತ ತುಂಬಾನೇ ಬಯ್ದ್ರು "

" ಹೌದಾಅ..ಛೆ.ಛೆ.. ಪಾಪ ಅವರಿಗೇನ್ಗೊತ್ತು ನಿಮ್ ಪ್ರೀತಿ ಮಹತ್ವ ಅಲ್ವೇ ? ಮುಂದೆ "

" ಅದೇ ಆವಗ್ಲೇ ಅಂದ್ನಲ್ಲ ನಮ್ಮಮ್ಮ-ನಮ್ಮಪ್ಪ-ನಮ್ಮಣ್ಣ ಎಲ್ಲಾ ಸೇರಿ ಕುಟುಂಬದ ಮರ್ಯಾದೇನ ಬೀದಿಪಾಲು ಮಾಡಿದ್ಲು ಅಂತ ಚೆನ್ನಾಗಿ ಥಳಿಸಿದ್ರು. ಅದಷ್ಟೇ ಅಲ್ಲ ಯಾರಿಗೂ ತಿಳೀದ ಹಾಗೇ ಅದ್ಯಾವ್ದೋ ನರ್ಸಿಂಗ್ ಹೋಮ್ ನಲ್ಲಿ ಭ್ರೂಣನ ತೆಗ್ಸೋ ವ್ಯವಸ್ಥೆ ಮಾಡಿದ್ರು."

" ಛೆ..ಎಂಥಾ ಕೆಲ್ಸ ಮಾಡ್ದ್ರು... ಸುಮ್ನೇ ನಿಮ್ಮಿಬ್ಬರ್ಗೆ ಮದ್ವೆ ಮಾಡ್ಬುಟ್ರೆ ಆಗ್ತಿತ್ತು ಅಲ್ವೇ ? ಮುಂದೆ ..."

" ಮಾರನೇದಿನವೇ ಅದ್ಯಾವ್ದೋ ನರ್ಸಿಂಗ್ ಹೋಮ್‍ಗೆ ಕರ್ಕೊಂಡ್ಹೋದ್ರು. ಆಪರೇಷನ್ ಥೇಟರ್ನಲ್ಲಿ ದಾಕ್ಟ್ರು ಅದೇನೇನೋ ಮಾಡ್ದ್ರು. ಆಮೇಲೆ ಇನ್ನೂ ಬಲಿತಿರದ ಶಿಶುವನ್ನು ಹೊರಗೆ ತೆಗೆದ್ರು. ಎಷ್ಟು ಮುದ್ದಾದ ಶಿಶು. ಆ ನನ್ ಕಂದ ಇನ್ನೂ ಕಣ್ಣೇ ತೆರೆದಿರಲಿಲ್ಲ. ಒಮ್ಮೆ ಸರಿಯಾಗಿ ನೋಡೋಕೂ ಬಿಡ್ದೇ ಆ ಮಗುನ್ನ ಹಂಗಿಂದಂಗೇ ಅದೆಲ್ಲಿಗೋ ಕಳಿಸಿಬುಟ್ರು. ಮಗುವಿನ ಅಮ್ಮ ನನಗಾದ್ರೂ ಏನಾಗಿರ್ಬೇಡ! ರಮೇಶಂಗೆ ತಿಳಿದ್ರೆ ಆತ ಎಷ್ಟು ನೊಂದ್ಕೋತಾನೋ ಗೊತ್ತಿಲ್ಲ. ನಂಗಂತೂ ಅಲ್ಲಿಂದಾನೇ ತಲೆನೋವು ಆರಂಭವಾಗಿದ್ದು. ಆ ಪ್ರೀತಿಯ ಮಗುವಿನ ಮುಖಾನ ನಾನೆಂದೂ ಮರೀಲಾರೆ. "

" ಮುಂದೆ....."

" ಯಾರೋ ಕೆಲಸದೋರು ಹೇಳ್ತಾ ಬರ್ತಿದ್ರು ’ರೋಡಲ್ಲಿ ತಿಪ್ಪೆಗುಂಡಿ ಪಕ್ಕ ಅದ್ಯಾರೋ ಪಾಪಿಗಳು ಮಗೂನ ಬಿಸಾಕಿದಾರೆ’ ಅಂತ. ಹೆಚ್ಚುಪಕ್ಷ ಅದು ನನ್ಮಗೂನೇ ಇರ್ಬೇಕು. ನಮ್ಮನೆಜನ ಡಾಕ್ಟ್ರು ಎಲ್ಲಾ ಸೇರಿ ಮಗೂನ ಹಾಗೆ ಬಿಸಾಕಿರ್ಬೇಕು. ಅದನ್ನೆಲ್ಲಾ ಕೇಳಿ ನಂಗೆ ಎದೆಗೆ ಹೊನ್ನಶೂಲ ಹೊಕ್ಕಿದ ಅನುಭವ ಆಗ್ತಾ ಇತ್ತು. ನಾನು ಜೋರಾಗಿ ಕಿರಿಚ್ಕೋತಿದ್ದೆ. ’ಎಲ್ಲಿ ನನ್ನ ಮಗು ಎಲ್ಲಿ ನನ್ನ ಪುಟ್ಟ ನನ್ಕೈಗೆ ಕೊಡಿ’ ಎಂದು ಒಂದೇ ಸಮನೆ ಕೂಗ್ತಾ ಇದ್ದೆ. "

" ಆಮೇಲೆ.....? "

" ಕೊನೆಗೂ ಅವರ್ಯಾರೂ ನನ್ನ ಮಾತನ್ನು ಕೇಳಲೇ ಇಲ್ಲ. ಮಗೂನ ನಂಗೆ ಕೊಡ್ಲೇ ಇಲ್ಲ. ಆ ನಡುವೆ ರಮೇಶ ಕೂಡ ಬಂದಿರಲೇ ಇಲ್ಲ. ನಂಗೆ ತುಂಬಾ ಬೇಸರವಾಗಿತ್ತು. ಇದೂ ಜೀವನವೇ ಅನ್ನಿಸಿಬಿಟ್ಟಿತ್ತು. ಅದ್ಕೇ ಒಂದು ನಿರ್ಧಾರಕ್ಕೆ ಬಂದ್ಬುಟ್ಟೆ. ಹೇಗಾದ್ರೂ ಮಗೂನ ಕಳ್ಕೊಂಡೆ. ಇನ್ನು ಯಾರಿಗಾಗಿ? ಅಂಗಡಿಯಿಂದ ನಿದ್ರೆ ಮಾತ್ರೆ ಒಂದಷ್ಟು ಕಟ್ಟಿಸ್ಕೊಂಡು ಮನೆಗೆ ಬಂದಳ್ವೇ ಮನೇಲಿ ಎಲ್ಲರೂ ಹೊರಗೆ ಹೋದವೇಳೆ ಇಪ್ಪತ್ತು ನಿದ್ರೆ ಮಾತ್ರೆ ಸೇವಿಸಿದೆ. ನಿದ್ದೆ ಬರೋಕೂ ಮುನ್ನ ಹೊಟ್ಟೆಯಲ್ಲಿ ಬೆಂಕಿಹಾಕಿದಷ್ಟು ನೋವು, ತಲೆಯಲ್ಲಿ ಇನ್ನೇನೋ ನೋವು ಸಹಿಸಲಸಾಧ್ಯ ವೇದನೆ. ಅಂತೂ ಅದೆಷ್ಟೋ ಹೊತ್ತು ಮಲಗೇ ಇದ್ದೆ! ಮನೆಯವರೆಲ್ಲಾ ಬಂದ್ರು, ಮುಟ್ಟಿ ಎಬ್ಬಿಸ್ತಾ ಇದ್ರು. ನಾನು ಏಳಲೇ ಇಲ್ಲ. ನಾನು ಮತ್ತೆ ಆ ಮನೇಲಿ ಉಳಿಯೋ ಇಷ್ಟ ನಂಗಿರ್ಲಿಲ್ಲ."

" ಈಗ ಹೇಳಮ್ಮ ..ನಿಂಗೆ ಆ ಮಗು ತುಂಬಾ ಇಷ್ಟವಾಗಿತ್ತು ತಾನೇ? ರಮೇಶ ಕೂಡ ಅಷ್ಟೇ ಇಷ್ಟ ಹೌದಲ್ಲಾ? ಈ ಜನ್ಮದಲ್ಲಿ ರಮೇಶ ಎಲ್ಲಿದ್ದಾನೆ ಕಾಣಿಸ್ತಾ ಇದ್ಯಾ? "

" ಈಗ ರಮೇಶ ಸುರೇಶ ಆಗಿದ್ದಾನೆ. ದಿನಾ ನಂಗೆ ಕಾಣಿಸ್ತಾನೆ. ಥೇಟ್ ರಮೇಶನೇ ಅನ್ಬೇಕು, ಅಂಥಾ ಸುಂದರ ಮೈಕಟ್ಟು. ಮುದ್ದ್ಮುದ್ದಾಗಿದಾನೆ. ಮೈಸೂರು ಪ್ರಾಡಕ್ಟ್ಸ್‍ನಲ್ಲಿ ಮ್ಯಾನೇಜರ್ ಆಗಿ ಕೆಲಸಮಾಡ್ತಾ ಇದ್ದಾನೆ. ಸೂಟು ಬೂಟು ಹಾಕ್ಕೊಂಡು ಕಾರಲ್ಲೇ ಓಡಾಡ್ತಾನೆ. ಕೈತುಂಬಾ ಸಂಬಳ "

" ಈಗ ಒಂದೊಮ್ಮೆ ನಿನ್ನನ್ನು ಸುರೇಶನಿಗೆ ಕೊಟ್ಟು ಮದುವೆ ಮಾಡಿಬಿಟ್ಟರೆ ಮತ್ತದೇ ಮಗು ನಿನ್ನ ಹೊಟ್ಟೇಲಿ ಜನಿಸುತ್ತೆ ಅಲ್ವೇ? ಹಾಗ್ಮಾಡಿದ್ರೆ ನಿಂಗೆ ಇಷ್ಟಾನಾ ? ಅಲ್ಲಿಗೆ ನಿನ್ನ ನೋವು ಎಲ್ಲಾ ಮಾಯ ಅಂದ್ಕೋತೀನಿ ? "

" ಹೌದು ಹೌದು....ಸುರೇಶನ ಜೊತೆ ನಂಗೆ ಮದುವೆ ಮಾಡ್ಬಿಟ್ರೆ ಎಲ್ಲಾ ಪ್ರಾಬ್ಲಮ್ಮೂ ಸಾಲ್ವ್ ಆಗುತ್ತೆ "

" ಈಗ ನಿಧಾನಕ್ಕೆ ಆ ಜನ್ಮದಿಂದ ಹಿಂದಿನ ಹಾಗೂ ಹಿಂದಿನ ಜನ್ಮದಿಂದ ಈ ಜನ್ಮಕ್ಕೂ ಬರ್ತಾ ಇದ್ದೀಯಾ. ನಾನು ಒನ್ ಟೂ ತ್ರೀ ಎಂದ ತಕ್ಷಣ ಈ ಜನ್ಮದ ರೇಣುಕಾ ನಿಧಾನಕ್ಕೆ ಎಚ್ಚೆತ್ತುಕೊಳ್ಳಬೇಕು.ಎರಡೂ ಹಸ್ತದಿಂದ ಕಣ್ಣನ್ನು ಮೆತ್ತಗೆ ಉಜ್ಜಿಕೊಳ್ಳುತ್ತಾ ನಿಧಾನವಾಗಿ ಕಣ್ಣುತೆರೆಯಬೇಕು. ಒನ್ ಟೂ ತ್ರೀ ....ಯಸ್ ರಿಲಾಕ್ಸ್ ರಿಲಾಕ್ಸ್ ರಿಲಾಕ್ಸ್ "

----

" ಏನಮ್ಮಾ ಸುರೇಖಾ ಈಗ ಹೇಗನ್ನಿಸ್ತಾ ಇದೆ ? "

" ತುಂಬಾನೇ ಡಿಫರೆಂಟಾಗಿದೆ ಗುರೂಜಿ"

" ಡಿಫರೆಂಟ್ ಅಂದ್ರೆ ಏನು ಚೆನ್ನಾಗಿದೆ ಅಂತಾನೋ? ಪ್ರಾಬ್ಲಮ್ಮು ಸಾಲ್ವಾಯ್ತು ಅನ್ನಿಸ್ತಾ ಇದ್ಯೋ ಹೇಗೆ‍ ? "

" ಹೌದು ಗುರೂಜಿ. ನನ್ನಲ್ಲಿರುವ ಪ್ರಶ್ನೆಗಳಿಗೆ ನನಗೆ ಉತ್ತರಗಳು ಸಿಕ್ಕಿವೆ. ಮನಸ್ಸು ಖುಷಿಯಾಗಿದೆ. ಈಗ ಹಾಯಾಗಿದ್ದೇನೆ. ಹೊಸ ಜೀವನವನ್ನು ಎದುರಿಸಲು ತಯಾರಿದ್ದೇನೆ. "

" ಆಯ್ತಮ್ಮ ನಿಮ್ಮ ಮನೆ ಹಿರಿಯರಿಗೆ ಹೇಳಿ ಆದಷ್ಟು ಬೇಗ ಮುಂದಿನ ಕೆಲಸದ ಏರ್ಪಾಟು ಮಾಡೋಣ. "

***

Sunday, January 8, 2012

ದೀಪಂ ದೇವ ದಯಾನಿಧೇ-೩


ದೀಪಂ ದೇವ ದಯಾನಿಧೇ-೩

[ಜಗದ್ಗುರು ಶ್ರೀ ಶಂಕರಾಚಾರ್ಯರ ಅತಿ ಸಂಕ್ಷಿಪ್ತ ಜೀವನ ಚರಿತ್ರೆ]
ಭಗವದ್ಗೀತೆಯ ಸಮರ್ಪಣೆಯಲ್ಲಿ ನಿರತರಾಗಿರುವ ಜಗದ್ಗುರು ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಪದಕಮಲಕ್ಕೆ ಭಾಗವು ಅರ್ಪಿತವಾಗಿದೆ.


ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಮ್ |
ಸಮೂಢಮಸ್ಯ ಪಾಗ್ಂಸುರೇ||

ಕೃಷ್ಣಯಜುರ್ವೇದದ ವಿಷ್ಣುಸೂಕ್ತದ ಈ ಶ್ಲೋಕದ ಮೂಲಕ ಮೂಢಮನಸ್ಸಿಗೆ ಕವಿದ ಮೋಡವನ್ನು ದೂಡಿ ಕತ್ತಲೆಯಿಂದ ಬೆಳಕಿನೆಡೆಗೆ ನಡೆಸು ಎಂಬುದಾಗಿ ಮೊದಲಾಗಿ ಇಲ್ಲೊಂದು ಪ್ರಾರ್ಥನೆ. ಯಾವುದೇ ಯಜ್ಞಕಾರ್ಯಗಳನ್ನು ಮಾಡುವಾಗ ಮಧ್ಯೆ ನಿಲ್ಲಿಸಬೇಕಾದ ಪ್ರಸಂಗ ಬಂದರೆ ಅದನ್ನು ಪುನಃ ಮುಂದುವರಿಸುವ ಸಮಯದಲ್ಲಿ ಈ ಮೇಲಿನ ಶ್ಲೋಕವನ್ನು ಉಚ್ಚರಿಸುವುದು ವಾಡಿಕೆ. ಭಗವತ್ಪಾದರ ಜೀವನಚರಿತ್ರೆಯನ್ನು ಬರೆಯುವುದು, ಓದುವುದು ಯಾ ಪುನರಪಿ ಅವಲೋಕಿಸುವುದು ಅಥವಾ ಗೊತ್ತಿದ್ದೂ ಮನನ ಮಾಡುವುದು ಮಾಡುವವರಿಗೂ/ಮಾಡಿಸುವವರಿಗೂ ಯಜ್ಞದಂತಹ ಒಂದು ಪುಣ್ಯತಮ ಕೆಲಸವೇ ಎಂದು ಭಾವಿಸಿ ಹೀಗೆ ಆ ಶ್ಲೋಕವನ್ನು ಉಚ್ಚರಿಸಿ ಜ್ಞಾನ ದಾಹಿಗಳಾದ ತಮ್ಮೆಲ್ಲರನ್ನೂ ಶಂಕರ ಚರಿತ್ರೆಯ ಈ ಭಾಗಕ್ಕೆ ಸ್ವಾಗತಿಸುತ್ತಿದ್ದೇನೆ. ಹೀಗೆ ಮಾಡುವುದಕ್ಕೆ ಕಾರಣವಿಷ್ಟೇ: ವರ್ಷವೊಂದಕ್ಕೂ ಹಿಂದೆ ಈ ಚರಿತ್ರೆಯನ್ನು ಹೇಳಲಾರಂಭಿಸಿದ್ದೆ, ಆದರೆ ಕಾರಣಾಂತರಗಳಿಂದ ಮುಂದುವರಿಸದೇ ಹಾಗೇ ಬಿಟ್ಟಿದ್ದೆ, ಈಗ ಮುಂದುವರಿಸುತ್ತಿದ್ದೇನೆ. ಹಿಂದಿನ ಭಾಗಗಳನ್ನು ’ದೀಪಂ ದೇವ ದಯಾನಿಧೇ’ ಹೆಸರಿನಲ್ಲೇ ’ಭಕ್ತಿ ಸಿಂಚನ’ಮಾಲಿಕೆಯಲ್ಲಿ ಓದಿಕೊಳ್ಳಬಹುದಾಗಿದೆ. ಮಧ್ಯೆ ಮಧ್ಯೆ ಬೇರೆ ಬೇರೆ ಕೃತಿಗಳ ಜೊತೆ ಇನ್ನು ಮುಂದೆ ಈ ಚರಿತ್ರೆಯ ಭಾಗವೂ ಆಗಾಗ ಬರುತ್ತಿರುತ್ತದೆ; ಮುಂದುವರಿಸಲ್ಪಡುತ್ತದೆ.

ಮೂರನೆಯ ವಯಸ್ಸಿನಲ್ಲಿ ಬಾಲಕ ಶಂಕರನಿಗೆ ತಂದೆ ಶಿವಗುರು ಚೂಡಾಕರ್ಮ ನೆರವೇರಿಸಿದನು. ನಂತರದ ಕೆಲವು ತಿಂಗಳಲ್ಲೇ ಶಿವಗುರು ವಿಧಿವಶನಾದನು. ಶಂಕರರ ಹಾಗೂ ಮನೆಯ ಸಂಪೂರ್ಣ ಜವಬ್ದಾರಿ ಈಗ ಆರ್ಯಾಂಬೆಯ ಹೆಗಲಿಗೆ ಬಂದಿತ್ತು. ವೇದಾಂತದಲ್ಲಿ ಅಪ್ರತಿಮ ಆಸಕ್ತಿ ತೋರುತ್ತಿದ್ದ ಮಗನಿಗೆ ವಿದ್ಯಾಭ್ಯಾಸ ಕೊಡಿಸುವ ಇಚ್ಛೆ ಆರ್ಯಾಂಬೆಯದು. ಆದರೆ ವಿದ್ಯಾಭ್ಯಾಸ ನಡೆಸಲು ಉಪನಯನವಾಗಬೇಕಿತ್ತು. ಕಷ್ಟದಲ್ಲೇ ಹೇಗೋ ತಾನೇ ಮುಂದೆನಿಂತು ಮಗನಿಗೆ ಉಪನಯನವನ್ನು ನಡೆಸಿದಳು ಆರ್ಯಾಂಬೆ. ಪೂರ್ಣಾನದಿಯ ದಡದಲ್ಲಿದ್ದ ಅಗ್ರಹಾರದಲ್ಲಿ ಗುರುಕುಲವಿದ್ದು ಅಲ್ಲಿಗೆ ಶಂಕರರನ್ನು ವಿದ್ಯಾಭ್ಯಾಸಕ್ಕಾಗಿ ಸೇರಿಸಿದಳು. ಗುರುಕುಲದಲ್ಲಿ ಗುರುಗಳು ಹೇಳಿದ ಕೆಲಸಗಳನ್ನು ಪಾಲಿಸುತ್ತಾ ಶ್ರದ್ಧೆಯಿಂದ ಅವರು ಹೇಳಿಕೊಡುವ ವಿದ್ಯೆಗಳನ್ನು ಕಲಿಯಬೇಕಾದುದು ಸಂಪ್ರದಾಯವಾಗಿತ್ತು. ಗುರುಗಳೂ ಕೂಡ ಆದರ್ಶಪ್ರಾಯರಾಗಿದ್ದು ಶಿಷ್ಯರನ್ನು ಸ್ವಂತ ಮಕ್ಕಳಂತೇ ಪರಿಭಾವಿಸಿ ತಮ್ಮಲ್ಲಿರುವ ವಿದ್ಯೆಗಳನ್ನು ಹೇಳಿಕೊಡುತ್ತಿದ್ದರು. ಬಹುಕುಶಾಗ್ರಮತಿಯಾದ ಶಂಕರರು ಗುರುಕುಲದಲ್ಲೇ ಇದ್ದುಕೊಂಡು ವೇದ, ವೇದಾಂಗಗಳು, ಉಪನಿಷತ್ತುಗಳು, ಪುರಾಣಗಳು, ತತ್ವಶಾಸ್ತ್ರ, ನ್ಯಾಯ, ತರ್ಕಶಾಸ್ತ್ರ, ಮೀಮಾಂಸೆ, ವೈಶೇಷಿಕ, ಸ್ಮೃತಿ ಹೀಗೇ ಎಲ್ಲವನ್ನೂ ಕಲಿತುಕೊಂಡರು.

ಗುರುಕುಲದಲ್ಲಿರುವ ವಟುಗಳು ಭಿಕ್ಷಾನ್ನದಿಂದ ಜೀವಿಸಬೇಕೆಂಬ ಒಂದು ಕಟ್ಟುಕಟ್ಟಳೆ ಇದ್ದಿತು. ಪ್ರತಿದಿನ ಬೆಳಿಗ್ಗೆ ಶೌಚಕರ್ಮಗಳನ್ನು ತೀರಿಸಿಕೊಂಡು ಶುಚಿರ್ಭೂತರಾದ ವಟುಗಳು ವಿದ್ಯಾಭ್ಯಾಸದ ಆಯಾದಿನಗಳ ಪಾಠ-ಪ್ರವಚನಗಳನ್ನು ಮುಗಿಸಿಕೊಂಡು ಊರ ಸಜ್ಜನರ ಮನೆಗಳೆದುರು ಭಿಕ್ಷೆ ಎತ್ತುತ್ತಿದ್ದರು. ಹಾಗೆ ತಂದ ಭಿಕ್ಷೆಯನ್ನು ಮಧ್ಯಾಹ್ನದ ಹೊತ್ತಿಗೆ ಭುಂಜಿಸುತ್ತಿದ್ದರು. ಒಂದು ದಿನ ಹೀಗೆ ಮನೆಯೊಂದರ ಮುಂದೆ ನಿಂತು ಭಿಕ್ಷೆ ಬೇಡುತ್ತಿದ್ದಾಗ ಆ ಮನೆಯೊಡತಿ ಹೊರಗೆ ಬಂದು ಮನೆಯಲ್ಲಿ ಏನೂ ಇಲ್ಲವೆಂದೂ ಮನಸಾ ಭಿಕ್ಷೆ ನೀಡುವುದಕ್ಕೆ ಸಿದ್ಧವಿದ್ದರೂ ಕೈಲಾಗದ ಬಡತನಕ್ಕೆ ತಮ್ಮನ್ನು ಕ್ಷಮಿಸಬೇಕು ವಟುವೇ ಎಂದು ಅಲವತ್ತುಕೊಂಡಳು. " ಅಮ್ಮಾ ಏನೂ ಇಲ್ಲಾ ಎನ್ನಬೇಡಮ್ಮಾ ಏನಾದರೂ ಪರವಾಗಿಲ್ಲ ನಿನಗೆ ಕಾಣಿಸುವುದನ್ನು ಕೊಡಮ್ಮಾ " ಎಂದು ಹಠಕ್ಕೆ ಬಿದ್ದ ಶಂಕರರಿಗೆ ಉಪ್ಪಿನಲ್ಲಿ ಹಾಕಿಟ್ಟಿದ್ದ ನೆಲ್ಲಿಯ ಕಾಯೊಂದನ್ನು ತಂದು ಭಿಕ್ಷೆಯಾಗಿ ಅದನ್ನು ಕೊಡುತ್ತಿರುವುದಕ್ಕೆ ಪುನರಪಿ ಕ್ಷಮೆಯಾಚಿಸಿದಳು. ಶಂಕರರು ಅದನ್ನೇ ತೃಪ್ತಿಯಿಂದ ಅಲ್ಲೇ ಸ್ವೀಕರಿಸಿ ಲೋಟ ನೀರು ತರಿಸಿ ಕುಡಿದು ದಾರಿದ್ರ್ಯ ತುಂಬಿದ ಆ ಮನೆಯಲ್ಲಿ ಸಿರಿ-ಸಂಪತ್ತು ತುಂಬಲೆಂದು ತಾಯಿ ಮಹಾಲಕ್ಷ್ಮಿಯನ್ನು ಕುರಿತು ಪ್ರಾರ್ಥಿಸಿದರು. ಮಹಾಲಕ್ಷ್ಮಿ ಶಂಕರರಿಗೆ ಕಾಣಿಸಿಕೊಂಡು " ಹಿಂದಿನ ಜನ್ಮದಲ್ಲಿ ಮಾಡಿದ ಪಾಪದ ಫಲವಾಗಿ ಈ ಜನ್ಮದಲ್ಲಿ ಆ ಮನೆಗೆ ಇದೇ ಗತಿ" ಎಂದರೂ ಶಂಕರರು ಆಕೆಯ ಮನವೊಲಿಸುವಲ್ಲಿ ಯಶಸ್ವಿಯಾದರು. ಆಗ ಲಕ್ಷ್ಮೀಕಟಾಕ್ಷಕ್ಕಾಗಿ ಶಂಕರರ ಬಾಯಿಂದ ಹೊರಟಿದ್ದೇ ಕನಕಧಾರ ಸ್ತೋತ್ರ. ಶಂಕರರ ಸ್ತುತಿಗೆ ಒಲಿದ ಮಹಾಲಕ್ಷ್ಮಿ ಆ ಮನೆಯಲ್ಲಿ ಬಂಗಾರದ ನೆಲ್ಲಿಕಾಯಿಗಳ ಮಳೆಯನ್ನೇ ಸುರಿಸಿದಳು!

ಶ್ರದ್ಧಾವಾನ್ ಲಭತೇ ಜ್ಞಾನಂತತ್ಪರಃ ಸಂಯತೇಂದ್ರಿಯಃ |
ಜ್ಞಾನಂ ಲಬ್ಧ್ವಾ ಪರಾಂ ಶಾಂತಿಮ್ ಆಚಿರೇಣಾಧಿಗಚ್ಛತಿ ||

ಇದು ಭಗವದ್ಗೀತೆಯ ಒಂದು ಉಲ್ಲೇಖ. ಶ್ರದ್ಧೆಯುಳ್ಳ ಜಿತೇಂದ್ರಿಯನಾದ ಸಾಧಕನು ಆತ್ಮಜ್ಞಾನ ಲಭಿಸಿ ಪರಮಶಾಂತಿಯನ್ನು ಹೊಂದುತ್ತಾನೆ. ಶಂಕರರು ಶ್ರದ್ಧೆಯುಳ್ಳವರಾಗಿದ್ದರು. ಕರ್ನಾಟಕದ ಕರಾವಳಿಗಳಲ್ಲಿ ಯಕ್ಷಗಾನವಿರುವಂತೇ ಕೇರಳದಲ್ಲಿ ಮೋಹಿನಿಯಾಟ್ಟಂ ಇದೆ. ಅದರ ಅನೇಕ ಪ್ರಸಂಗಗಳನ್ನು ಶಂಕರರು ಅದಾಗಲೇ ನೋಡಿ ಕಥಾಭಾಗಗಳನ್ನು ತಿಳಿದುಕೊಂಡಿದ್ದರು. ಕಲಿತ ವಿದ್ಯೆ ಮತ್ತು ಪರಿಸರ ಶಂಕರರು ತನ್ನನ್ನು ಆಳವಾದ ಚಿಂತನೆಗೆ ಒಳಪಡಿಸಿಕೊಳ್ಳುವಂತೇ ಪ್ರೇರೇಪಿಸಿತು. ವೇದವೇದಾಂತಗಳೇ ಮೂಲ ಗಮನವಾಗಿ ಆತ್ಮಜ್ಞಾನದ ಉತ್ಕಟೇಚ್ಛೆಯಿಂದ ಸದಾ ಸನ್ಯಾಸಿಯಾಗಲು ಹಂಬಲಿಸತೊಡಗಿದ-ಆ ಎಳೆಯ ಬಾಲಕ ಶಂಕರ.

ನ ಕರ್ಮಣಾ ನ ಪ್ರಜಯಾ ಧನೇನ
ತ್ಯಾಗೇನೈಕೇ ಅಮೃತತ್ವಮಾನಶುಃ |
ಪರೇಣ ನಾಕಂ ನಿಹಿತಂ ಗುಹಾಯಾಂ
ವಿಭ್ರಾಜದೇತದ್ಯತಯೋ ವಿಶಂತಿ |
ವೇದಾಂತ ವಿಜ್ಞಾನ ಸುನಿಶ್ಚಿತಾರ್ಥಾಃ
ಸನ್ಯಾಸ ಯೋಗಾದ್ಯತಯಃ ಶುದ್ಧ ಸತ್ತ್ವಾಃ |
ತೇ ಬ್ರಹ್ಮ ಲೋಕೇ ತು ಪರಾಂತ ಕಾಲೇ
ಪರಾಮೃತಾತ್ಪರಿಮುಚ್ಯಂತಿ ಸರ್ವೇ ||

ಕೈವಲ್ಯೋಪನಿಷತ್ತಿನ ಈ ಹೇಳಿಕೆ ಸಾರುವುದು ಯಾವುದೇ ಕರ್ಮಬಂಧನವಿರದ, ಮಕ್ಕಳು-ಸಂಸಾರ ಎಂಬ ಮೋಹಪಾಶವಿರದ, ಧನ-ಕನಕ ಸಂಪತ್ತಿನ ಒಡೆತನವಾಗಲೀ ಅಪೇಕ್ಷೆಯಾಗಲೀ ಇರದ, ತ್ಯಾಗದಿಂದ ಅಮೃತತ್ವದೆಡೆಗೆ ನಡೆಸುವ ಸನ್ಯಾಸ ಜೀವನವೇ ಶ್ರೇಷ್ಠ. ವೇದಾಂತದ ಅರ್ಥವನ್ನು ಸರಿಯಾಗಿ ಗ್ರಹಿಸಿ ಎಳ್ಳಷ್ಟೂ ಸಂದೇಹವಿರಿಸಿಕೊಳ್ಳದೇ ತಿಳಿದು ಆಚರಣೆಗೆ ತರುವುದು ಕೇವಲ ಸಾಮಾನ್ಯರಿಂದ ಸಾಧ್ಯವಿಲ್ಲದ ಮಾತು, ಮತ್ತು ಅದನ್ನು ಸಾಧಿಸುವ ಅಧಿಕಾರ ಅಂದರೆ ಅರ್ಹತೆ ಮತ್ತು ಔಚಿತ್ಯ ಇರುವುದು ಸನ್ಯಾಸ ಯೋಗಕ್ಕೆ ಮಾತ್ರ, ಜೀವಿತಾವಧಿಯಲ್ಲಿಯೇ ಇಹ[ ಈ ಲೋಕ] ಮತ್ತು ಪರ[ಬ್ರಹ್ಮಲೋಕ]ಎರಡನ್ನೂ ಅರಿಯುವ ಮತ್ತು ಜನನ-ಮರಣಗಳ ಚಕ್ರದಿಂದ ಮುಕ್ತಿಪಡೆಯುವ ಸನ್ಯಾಸಿ ನಿಜಕ್ಕೂ ಧನ್ಯ. ಮೋಕ್ಷದಾಯಕವಾದ ವೇದಾಂತವನ್ನು ಆಮೂಲಾಗ್ರ ಅರಿಯತೊಡಗಿದ ಶಂಕರರು ’ತನ್ನೊಳಗಿನ ತನ್ನ’ ಪ್ರಭೆಯಿಂದ ಪರಿಪೂರ್ಣ ಜ್ಞಾನವನ್ನು ಪಡೆದರು; ಅದು ಜ್ಞಾನದ ಪರಿಸಮಾಪ್ತಿ! ಯಾವುದನ್ನು ಅರಿಯುವುದರಿಂದ ಎಲ್ಲದರ ಅರಿವುಂಟಾಗುವುದೋ ಮತ್ತು ಯಾವುದನ್ನು ಅರಿಯದೇ ಅರಿತಿದ್ದೆಲ್ಲವೂ ಮಿಥ್ಯವಾಗಿ ತೋರುತ್ತದೋ ಆ ಗಹನವಾದ ವಿಷಯವೇ ವೇದಾಂತದ ಗುರಿ ಎಂದಿದ್ದಾರೆ ಪ್ರಾಜ್ಞರು. ಅಷ್ಟು ಚಿಕ್ಕವಯಸ್ಸಿಗೇ ಪರಮಜ್ಞಾನವನ್ನು ಪಡೆಯುವ ಹಂಬಲ ಶಂಕರರಲ್ಲಿ ಉಂಟಾಗಿದ್ದು ಅವರೊಬ್ಬ ದೈವಾಂಶ ಸಂಭೂತನೆಂಬುದನ್ನು ತೋರಿಸುತ್ತದೆ.

ವಿದ್ಯಾಭ್ಯಾಸ ಪೂರೈಸಿದ ಶಂಕರರಿಗಿನ್ನೂ ತೀರಾ ಚಿಕ್ಕವಯಸ್ಸು. ಆಗಿನ್ನೂ ಎಂಟನೇ ವಯಸ್ಸು ತುಂಬಿದ್ದ ಕಾಲ. ಆ ಮುಗ್ಧ ಬಾಲಕ ತಾಯಿಯ ಜೊತೆಗೆ ಮನೆಯಿಂದ ತುಸು ದೂರವಿರುವ ಪೂರ್ಣಾ ನದಿಗೆ ಸ್ನಾನಕ್ಕೆ ಹೋಗುತ್ತಿದ್ದ. ಬೇಸಿಗೆಯ ಬಿಸಿಲಿನ ಝಳಕ್ಕೆ ಆ ನದಿಯ ನೀರು ಆರಿಹೋಗಿ ಅಲ್ಲಲ್ಲಿ ನದಿಯ ಮಧ್ಯಭಾಗದಲ್ಲಿ ಮಾತ್ರ ನೀರು ಹರಿಯುತ್ತಿತ್ತು. ನದಿಸ್ನಾನ ಮಾಡುವುದು ತಾಯಿ ಆರ್ಯಾಂಬೆಯ ನಿತ್ಯಕರ್ಮಗಳಲ್ಲಿ ಒಂದು. ನದಿಸ್ನಾನವಿಲ್ಲದೇ ಒಂದು ದಿನವೂ ಹಾಗೇ ಆಹಾರ ಸೇವಿಸಿದ್ದೇ ಇಲ್ಲ. ನದಿ ಸ್ನಾನಕ್ಕಾಗಿ ಹೋಗುವಾಗ ಬತ್ತಿದ ನದೀಪಾತ್ರದ ಭಾಗಗಳಲ್ಲಿರುವ ಮರಳುದಿಬ್ಬಗಳನ್ನು ಕ್ರಮಿಸಿ ಸಾಗಬೇಕಾಗಿತ್ತು. ಒಮ್ಮೆ ಹಾಗೆ ಸ್ನಾನಮಾಡಿಬರುವಾಗ ಜೊತೆಯಲ್ಲಿ ಬಾಲಕ ಶಂಕರನಿದ್ದ. ಅಮ್ಮನ ಕೈಹಿಡಿದು ನಡೆದು ಬರುತ್ತಿದ್ದಾಗ ಶಾರೀರಿಕವಾಗಿ ದುರ್ಬಲಳಾಗಿದ್ದ ಆ ತಾಯಿ ಬಿಸಿಲಲ್ಲಿ ಕುಸಿದು ಬಿದ್ದು ಬಿಟ್ಟಳು. ಉರಿಯುವ ಸೂರ್ಯನ ಪ್ರಖರ ಕಿರಣಗಳ ಸೋಕಿನಿಂದ ಬಸವಳಿದರೋ ಏನೋ. ತಲೆಸುತ್ತು ಬಂದು ಬಿದ್ದ ಅಮ್ಮನನ್ನು ಕಂಡು ಶಂಕರರು [ಅಮ್ಮ ಬಿಂದಿಗೆಯಲ್ಲಿ ತಂದಿದ್ದ] ಪಕ್ಕದಲ್ಲಿ ಬಿದ್ದು ಚೆಲ್ಲುತ್ತಿದ್ದ ಬಿಂದಿಗೆಯ ನೀರನ್ನು ಬೊಗಸೆಯಲ್ಲಿ ಎತ್ತಿಕೊಂಡು ಅಮ್ಮನ ಮುಖದಮೇಲೆ ಪ್ರೋಕ್ಷಿಸಿ ತಲೆಗೂ ಸ್ವಲ್ಪ ನೀರು ಹಾಕಿ ತಟ್ಟಿದರು. ಏನೂ ಅರಿಯದ ವಯಸ್ಸಿಗೇ ಇದನ್ನೆಲ್ಲಾ ಶಂಕರರು ಅದು ಹೇಗೆ ಅರಿತರು ಎಂಬುದನ್ನು ಇಲ್ಲಿಯೇ ಅವಲೋಕಿಸಬೇಕು.

ಸಾವರಿಸಿಕೊಂಡ ಅಮ್ಮ ಎದ್ದನಂತರ ನಿಧಾನವಾಗಿ ಕೈಹಿಡಿದು ಮನೆಗೆ ನಡೆಸಿ ತಂದರು. ಅಂದು ರಾತ್ರಿ ಶಂಕರರು ಜಾಗ್ರತರಾಗಿದ್ದರು. ಅವರಿಗೆ ವಿಶ್ರಾಂತಿಯೇ ಬೇಕಿರಲಿಲ್ಲ. ಕೈಮುಗಿದು ಕುಳಿತು ಪೂರ್ಣಾದೇವಿಯಲ್ಲಿ ಪ್ರಾರ್ಥಿಸಿದರು. " ಹೇ ಜಗನ್ನಿಯಾಮಕ ಶಕ್ತಿಯೇ, ನದಿಯ ರೂಪದಲ್ಲಿ ಅಷ್ಟು ದೂರ ಹರಿಯುತ್ತಿರುವ ನಿನ್ನಲ್ಲಿ ನನ್ನ ಪ್ರಾರ್ಥನೆ. ಅಮ್ಮನಿಗೆ ಮುಪ್ಪು, ಜಾಸ್ತಿ ಓಡಾಡಲಾಗದು, ಕೃಪೆಮಾಡಿ ನೀನು ನಮ್ಮ ಮನೆಗೆ ಹತ್ತಿರದಲ್ಲೇ ಹರಿದು ಅಮ್ಮನ ನದಿಸ್ನಾನದ ಬಯಕೆಯನ್ನು ಪೂರೈಸುವವಳಾಗು." ಆ ರಾತ್ರಿ ಮುಗಿಲುತುಂಬ ಮೋಡ ಕಟ್ಟಿ ಎಲ್ಲಿಲ್ಲದ ಮಳೆ ಭೋರ್ಗರೆಯಿತು. ಎಲ್ಲೆಲ್ಲೂ ನೀರು. ಬೆಳಿಗ್ಗೆ ನೋಡಿದಾಗ ಪೂರ್ಣಾ ತನ್ನ ಪಾತ್ರವನ್ನು ಬದಲಾಯಿಸಿ ಶಂಕರರ ಮನೆಯ ಸಮೀಪವೇ ಹರಿಯತೊಡಗಿದ್ದಳು. ದಿವ್ಯಪುರುಷನಾದ ಆ ಬಾಲಕ ಅಮ್ಮನ ಸಲುವಾಗಿ ತೋಡಿಕೊಂಡ ಅಳಲನ್ನು ದಿವ್ಯಶಕ್ತಿ ಪೂರ್ಣೆ ಮನ್ನಿಸಿದ್ದಳು. ಪ್ರಾಯಶಃ ಶಂಕರರ ಸಾಂಗತ್ಯವೂ ಪರೋಕ್ಷವಾಗಿ ಪೂರ್ಣೆಗೆ ಬೇಕಿತ್ತೋ ಏನೋ. ಊರ ಜನತೆಗೆ ಆಶ್ಚರ್ಯ ಹುಟ್ಟಿಸಿದ ಈ ಘಟನೆ ಶಂಕರ ಎಲ್ಲರಂತೇ ಸಾದಾ ಬಾಲಕನಲ್ಲ ಎಂಬ ಅನಿಸಿಕೆಯನ್ನೂ ನೀಡಿತ್ತು!


ಭಾಗ್ಯದ ಬಾಗಿಲು ತೆರೆಯಿತು ಜಗದಲಿ
ಬಾಲಕ ಶಂಕರ ರೂಪದಲಿ |
ಯೋಗ್ಯತೆ ಬಲು ಅಪರೂಪವು ಯುಗದಲಿ !
ಪಾಲಕರಿಗೆ ಮುದನೀಡುತಲಿ ||

ಪೂರ್ಣಾನದಿಯಾದಂಡೆಯ ಮನೆಯೊಳು
ಪೂರ್ಣಚಂದ್ರನವ ಉದಯಿಸಿದ |
ಕರ್ಣಾನಂದದ ಕೃತಿಗಳ ಕೊಡುವೊಲು
ಪರ್ಣಕುಟಿಯೆಡೆಗೆ ತಾ ನಡೆದ ||

ನೆಲ್ಲಿಯ ಕಾಯಿಯ ಭಿಕ್ಷೆಯ ಪಡೆಯುತ
ಒಲ್ಲದ ಲಕ್ಷ್ಮಿಯ ಪ್ರಾರ್ಥಿಸಿದ |
ಬೆಲ್ಲಭಕ್ಷಗಳು ಧನ-ಕನಕಂಗಳು
ಸಲ್ಲುವ ಧಾರೆಯ ಮಂತ್ರಿಸಿದ ||

ತಾಪಸವೊಂದೇ ಕಳೆವುದು ತಾಪವ
ಈಪರಿ ಜನನ-ಮರಣಗಳ |
ಆಪದ್ಭಾಂಧವನೆಲೆಯನು ತೋರುವ
ರೂಪದೊಳಾತ್ಮವ ನೋಡೆನುತ ||

ಬಲುಮುದದಿಂದಾ ಅಮ್ಮನ ರಮಿಸುತ
ಹಲವೆನ್ನದೆ ಕರಜೋಡಿಸಿದ |
ಗೆಲುವಾಗಲು ಹರಸೆನ್ನನು ನ್ಯಾಸಕೆ
ಕಳುಹಿಸುವಂತೇ ಗೋಗರೆದ ||

|| ಸರ್ವೇ ಜನಾಃ ಸುಖಿನೋ ಭವಂತು ||

.......ಮುಂದುವರಿಯುವುದು