ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, January 28, 2010

ಯಾವುದೀ ಹೊಸಸಂಚು ಎದೆಯಂಚಿನಲಿ ಮಿಂಚಿ...


ಯಾವುದೀ ಹೊಸಸಂಚು ಎದೆಯಂಚಿನಲಿ ಮಿಂಚಿ...

ಜಯದೇವಾ ಜಯದೇವಾ
ಜಯಶ್ರೀ ಗುರುವರಗೆ ಜಯ ಸದ್ಗುರುವರಗೆ
ಜಯಜಯ ನಿತ್ಯ ನಿರಂಜನ ನಿರುತಾನಂದನಿಗೆ ”

ಯಾವ ಮಿಲಿಟರಿ ಪಡೆಯೂ ಕೂಡ ಅಷ್ಟು ಅಚ್ಚುಕಟ್ಟಾಗಿ ದೇಶ ಭಕ್ತಿಗೀತೆ ಹಾಡಲಿಕ್ಕಿಲ್ಲ, ಅಂತಹ ರೀತಿಯಲ್ಲಿ ಸುಲಭ-ಸರಳಸಾಹಿತ್ಯಹೊಂದಿರುವ ಅಜ್ಞಾತ ಕವಿಯಿಂದ ರಚಿಸಲ್ಪಟ್ಟ ಸ್ತುತಿಗೀತೆಯನ್ನು ನೀವೊಮ್ಮೆ ಕೇಳಬೇಕು. ಅಲ್ಲಿ pindrop silence. ಅದರ ಭಾವತರಂಗಗಳು ನಮ್ಮ ಮನಕ್ಕೆ ತಲ್ಪುತ್ತಿದ್ದಂತೆ ಏನೋ ಒಂದು ಅವಿಸ್ಮರಣೀಯ ಆನಂದ.



ಬಹುಶಃ ಇದರಬಗ್ಗೆ ತಮಗೆ ತಿಳಿದಿರದಿದ್ದರೂ ಮುರುಡೇಶ್ವರದ ಬಗ್ಗೆ ತಮಗೆ ಹೊಸದಾಗಿ ಹೇಳುವುದು ಬೇಡ. ಇವತ್ತು ಜಗತ್ಪ್ರಸಿದ್ಧಿ
ಪಡೆದ ಮುರುಡೇಶ್ವರ ದೇವಸ್ಥಾನ ಸುಮಾರು ೪೦ ವರ್ಷಗಳ ಹಿಂದೆ ಕುಸಿದು ಬೀಳುವಷ್ಟು ಶಿಥಿಲವಾಗಿತ್ತು. ಅದು ಮುಂದೆ ಸರಿಯಾದ ವ್ಯಕ್ತಿಯೊಬ್ಬರಿಂದ ಜೀರ್ಣೋದ್ಧಾರಗೊಂಡು ಬಹಳ ಉತ್ತಮ ಮಟ್ಟಕ್ಕೆ ತಲ್ಪುತ್ತದೆ ಎಂದು ತಮ್ಮ ಯೋಗಬಲದಿಂದ ಆಗಲೇ ಸಾರಿದ್ದ, ಮಕ್ಕಳಿರದಿದ್ದ ಮೈಸೂರು ಜಯಚಾಮರಾಜೇಂದ್ರರಿಗೆ ಮಗು ಶ್ರೀಕಂಠದತ್ತನರಸಿಂಹರಾಜರು ಜನಿಸುವಂತೆ ಆಶೀರ್ವದಿಸಿದ್ದ, ಮೈಸೂರಿನಲ್ಲಿ ಏಕಕಾಲದಲ್ಲಿ ಸ್ಥಳಗಳ ವೇದಿಕೆಯಲ್ಲಿ ಆಶೀರ್ವಚನ ನೀಡಿದ್ದ, ನಮ್ಮ ವಿಧಾನಸೌಧದ ಕಟ್ಟಡ ಅದ್ಬುತವಾಗಿ ರೂಪುಗೊಳ್ಳಲೆಂದು ಹರಸಿದ್ದ ಅದಮ್ಯ ದಿವ್ಯ ಚೇತನ ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳು.

ಉತ್ತರ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯ ಲಾಡ್
ಚಿಂಚೋಳಿಯಲ್ಲಿ ಬಡ ಬ್ರಾಹ್ಮಣ ಕುಟುಂಬದಲ್ಲಿ ದತ್ತಾತ್ತ್ರೇಯನ ಅವತಾರವಾಗಿ ಜನಿಸಿದ್ದರು. ದೇಶದುದ್ದಗಲ ಸಂಚರಿಸಿ ಜನರ ಕಷ್ಟಕಾರ್ಪಣ್ಯಗಳನ್ನು ದೂರಮಾಡಿದ ಮಹಾನ್ ಚೇತನಗಳಲ್ಲಿ ಶ್ರೀಗಳೂ ಒಬ್ಬರು. ಬಹುಶಃ ಶ್ರೀ ಆದಿಶಂಕರರ ನಂತರ ದೇಶದುದ್ದಗಲ ಸಂಚರಿಸಿ ಜನರಿಗೆ ನೆರವಾದ ಸನ್ಯಾಸಿ ಇವರೊಬ್ಬರೇ ಅಂದರೆ ತಪ್ಪಾಗಲಾರದು.

ನಾವು ಅನೇಕ ಮಹಾತ್ಮರ ಬಾಲ್ಯದ ಬಗ್ಗೆ ಕೇಳಿದ್ದೇವೆ. ಆದರೆ ಅತೀವ ಕಷ್ಟದ, ಬಡತನದ ಬಾಲ್ಯ ಮಿಕ್ಕುಳಿದವರ ಚರಿತ್ರೆಗಳಲ್ಲಿ
ಕಂಡುಬರುವುದಿಲ್ಲ. ಪ್ರಾಯಶಃ ಅವರ ಬಾಲ್ಯದ ಬಗೆಗೆ ಓದುವಾಗ ನಮಗೆ ಕಣ್ಣೀರೊರೆಸಿ ಹಿಂಡಲು ಪ್ರತ್ಯೇಕ ಬಟ್ಟೆಯೇ ಬೇಕು. ಇಂತಹ ಅತಿ ಕಠಿಣ ಬಾಲ್ಯವನ್ನು ಸಹಿಸಿ, ಕುಟುಂಬದ ಎಲ್ಲರನ್ನೂ ಕಳೆದುಕೊಂಡು, ವಾಸಿಸಲು ಸರಿಯಾದ,ಸ್ಥಿರವಾದ ಮನೆಯಿಲ್ಲದೇ ಮುನ್ನಡೆದ ಬಾಲಕ ಮುಂದೊಂದು ದಿನ ಆರ್ತರ ಕಣ್ಣೀರೊರೆಸುವ ಮಹಾನ್ ಯೋಗಿಯಾಗಬಹುದೆಂದು ಯಾರೂ ಊಹಿಸಿರಲಿಲ್ಲ. ಅವರು ಹುಟ್ಟಿದ್ದೇ ಬೇರೆಯವರ ಸೇವೆಗಾಗಿ ಎಂಬುದು ಸ್ಥೂಲವಾಗಿ ನೋಡಿದಾಗ ಗೊತ್ತಾಗುತ್ತದೆ.

|| ಮೋಕ್ಷಶ್ರಿಯಂ ಧರತೀ ಇತಿ ಶ್ರೀಧರಃ ||

ಶ್ರೀಧರಎನ್ನುವ ಹೆಸರು ಬಹಳ ಅರ್ಥಗರ್ಭಿತ. ಮೋಕ್ಷಶ್ರೀಯನ್ನು ಧರಿಸಿದಾತನೇ ಶ್ರೀಧರ. ಸಂಸ್ಕೃತದಲ್ಲಿ || ವರ್ಣಮಾತ್ರಂ
ಗುರುಃ || ಎನ್ನುತ್ತಾರೆ. ಅಂದರೆ ಒಂದೇ ಒಂದು ಅಕ್ಷರವನ್ನು ಕಲಿಸಿ/ತಿಳಿಸಿಕೊಟ್ಟರೂ ಆತಗುರುಎಂದು ಗೌರವಿಸುತ್ತಾರೆ. ಜನನಿ ಮೊದಲಗುರು ಎಂದೂ ನಂತರ ಮಿಕ್ಕುಳಿದ ಹಲವಾರು ರೀತ್ಯಾ ಗುರುಗಳು ಜೀವನದಲ್ಲಿ ಬರುತ್ತಾರೆ. ಆದರೆ ನಮ್ಮ ಆತ್ಮಕ್ಕೆ ಸರಿಯಾದ ಪಾರಮಾರ್ಥಿಕ ದಾರಿಯನ್ನು ತೋರಿ ನಮ್ಮನ್ನು ಜನ್ಮಾಂತರಗಳ ಬಂಧನದಿಂದ, ಕುಣಿಕೆಯಿಂದ ತಪ್ಪಿಸುವಾತನೇ ನಿಜವಾದ ಗುರು ಎಂದು ಪರಿಗಣಿಸಲ್ಪಡುತ್ತಾನೆ. ಇಲ್ಲಿ ನಾಸ್ತಿಕರು ವಾದಿಸಿದರೆ ಅವರಲ್ಲಿ ನನ್ನ ಪ್ರಶ್ನೆಗಳೊಂದೆರಡು-

ಆತ್ಮ ಎಂಬ ಚೇತನ ಯಾವರೂಪದಲ್ಲಿದೆ? ಅದು ದೇಹದಲ್ಲಿ ಎಲ್ಲಿರುತ್ತದೆ? ಅದು ಬರುವಾಗ ಎಲ್ಲಿಂದ ಬಂತು? ಸತ್ತಮೇಲೆ ಎಲ್ಲಿಗೆ
ಹೋಗುತ್ತದೆ ?

. ಸೂರ್ಯ ಚಂದ್ರಾದಿ ಆಕಾಶ ಕಾಯಗಳನ್ನು ಯಾ ಸ್ಥಾನಗಳಲ್ಲಿ ಸರಿಯಾಗಿ ಇರುವಂತೆ ಆಡಳಿತ ನಡೆಸುವ ಗುರುತ್ವ
ಶಕ್ತಿ ಯಾಕೆ, ಹೇಗೆ ಸೃಜಿಸಲ್ಪಟ್ಟಿತು?

. ವಿಜ್ಞಾನಿಗಳು ಕುಳಿತು ನಮಗೆ ಬೇಕಾದ ನೀರಿಗಾಗಿ H2O Formula ಮಾಡಿ ನೀರು ತಯಾರಿಸುತ್ತಾರೆಯೇ? ಅಥವಾ
ಗಾಳಿಯಲ್ಲಿ ಆಮ್ಲಜನಕವನ್ನು ತುಂಬಿದವರು ಅವರೇನಾ?

ಇಂತಹ ಅನೇಕ ಪ್ರಶ್ನೆಗಳು ಇಂದಿಗೂ ಉತ್ತರ ರಹಿತ ! ಹೀಗಾಗಿ ಮಾರ್ಮಿಕವಾಗಿ ಚಿಂತನ ನಡೆಸುವಾಗ ನಮ್ಮ ಹೃದಯದಲ್ಲಿ
ಇರುವ ಸಂಚಿನ ಅರ್ಥ ನಮಗೇ ಅರಿವಿಲ್ಲವಲ್ಲ ಎಂಬುದು ಸ್ಪಷ್ಟ !

ಜೀವನದಲ್ಲಿ ಸದ್ಗುರುವನ್ನು ಪಡೆಯಲೂ ಯೋಗಬೇಕು, ಅವರ ಅಪ್ಪಣೆ ಸಿಗಬೇಕು. ಗುರುವನ್ನು ಕಾದು ದರ್ಶನ ಮಾಡಬೇಕು.ಜನರ
ಅಹವಾಲುಗಳನ್ನು ಸ್ವೀಕರಿಸಿ ಅವರ ಕಷ್ಟಗಳನ್ನೆಲ್ಲ ತಾನು ಅನುಭವಿಸವಂತೆ ಪಡೆದು, ತಪೋಬಲದಿಂದ ಅವರೆಲ್ಲರ ಕಣ್ಣೀರೊರೆಸಿದ, ಅವರಿಗೆ ಹೊಸ ಜೀವನ, ಮಾರ್ಗ ಕಲ್ಪಿಸಿದ ಶ್ರೀಧರರು ಮಹಾರಾಷ್ಟ್ರದ ಸನ್ಯಾಸಿ ಸಮರ್ಥ ರಾಮದಾಸರ ಶಿಷ್ಯರಾಗಿ, ದೇಶಾಂತರ ತಿರುಗುತ್ತ ಶಿವಮೊಗ್ಗೆಯ ಸಾಗರ ಪ್ರಾಂತದಲ್ಲಿ ವರದಪುರ ಎಂಬ ಗುಡ್ಡದಮೇಲೆ ಲೋಕೋದ್ಧಾರಕ್ಕಾಗಿ ಅಖಂಡ ತಪಸ್ಸನ್ನು ನಡೆಸಿದರು.ಹಾಗೆ ಮಾಡಲು ಕಾರಣಗಳಿವೆ.ವರದಪುರ ಬಹಳ ರಮ್ಯ-ಮನಮೋಹಕ ತಾಣ. ಸಹಜವಾಗಿ ಋಷಿಗಳಿಗೆ ಹೇಳಿಮಾಡಿಸಿದ ಹಾಗಿರುವ , ಹಿಂದೆ ಅಗಸ್ತ್ಯರಾದಿಯಾಗಿ ಅನೇಕರು ತಪಸ್ಸುನಡೆಸಿದ ತಪೋಭೂಮಿ. ಇಂತಹ ಕ್ಷೇತ್ರವನ್ನು ಆಯ್ದುಕೊಂಡು ಅಲ್ಲಿ ಪವಿತ್ರ ತೀರ್ಥವನ್ನು ಸೃಜಿಸಿ ಗಂಗಾದಿ ಸರ್ವ ತೀರ್ಥಗಳನ್ನೂ ಅಲ್ಲಿಗೆ ಆಕರ್ಶಿಸಿ ತಮ್ಮ ತಪದ ಧಾರೆಯನ್ನೇ ಆ ಜಲಧಾರೆಗೆ ತುಂಬಿ ಅದನ್ನೇ ದಿವ್ಯೌಷಧವೆಂದು ಘೋಷಿಸಿದರು.




೧೯೦೮ ರಲ್ಲಿ ಜನಿಸಿದ ಶ್ರೀಗಳು ೧೯೭೩ ತನಕ ದೇಹದಿಂದಿದ್ದರು. ಅವರ ಬಗೆಗಿನ ಅವರ ಚರಿತ್ರೆಯಲ್ಲಿ ಸಾ
ವಿರ ಸಾವಿರದೋಪಾದಿಯಲ್ಲಿ ವಿಚಿತ್ರ ಘಟನೆಗಳು ನೋಡಸಿಗುತ್ತವೆ. ಅವೆಲ್ಲವನ್ನೂ ಕಾಲದ ಹಾಗೂ ಸ್ಥಳದ ಪರಿಮಿತಿಯಿಂದ ಇಲ್ಲಿ ಹೇಳಲಾಗುತ್ತಿಲ್ಲ. ಆಸಕ್ತರು ನೇರವಾಗಿ ಶ್ರೀಧರರ ಅಶ್ರಮಕ್ಕೆ ಹೋಗಿ ಪಡೆಯಬಹುದು. ಬೆಂಗಳೂರಿಗೆ ಬಂದ ಗುರುಗಳನ್ನು ಗೌಡರೊಬ್ಬರು ತಮ್ಮ ಮನೆಯವರ ವಾಸಿಮಾಡಲಾಗದ ಕಾಯಿಲೆಯನ್ನು ನಿವಾರಿಸುವಂತೆ ಪ್ರಾರ್ಥಿಸಿದಾಗ ಅವರ ಕಾಯಿಲೆ ವಾಸಿಯಾಗಿ, ಗುರುಗಳಿಗೆ ಪ್ರತಿಯಾಗಿ ಏನಾದರೂ ಸ್ವೀಕರಿಸಬೇಕೆಂದು ಹಠ ಹಿಡಿದರಂತೆ. ಯಾವತ್ತೂ ಯಾರಿಂದಲೂ ಏನನ್ನೂ ಬಯಸದ-ಸ್ವೀಕರಿಸದ ಶ್ರೀಗಳು ವಸಂತಪುರದಲ್ಲಿ ಗೌಡರ ಮನೆಯ ಪಕ್ಕದಲ್ಲಿ ಸ್ವಲ್ಪ ಜಾಗವನ್ನು ದಾನವಾಗಿ ಪಡೆದರು. ಅದು ನಮ್ಮ ಬೆಂಗಳೂರಿಗರಿಗೆ ಇಂದು ಶ್ರೀಧರ ಪಾದುಕಾಶ್ರಮವಾಗಿ ಹರಸುತ್ತಿದೆ.

ಅವರ ಉಪಸ್ಥಿತಿಯಲ್ಲಿ ಪಶು-ಪಕ್ಷಿಗಳೂ ಕೂಡ ಆನಂದವನ್ನು ಅನುಭವಿಸುತ್ತಿದ್ದವು ಎಂಬುದಕ್ಕೆ ಸಾಕ್ಷಿಯಾಗಿ ವರದಪುರದಲ್ಲಿ ಅವರ ಸಮಾಧಿಗೆ
ಮಧ್ಯಾಹ್ನದ ಮಂಗಲಾರತಿ ವೇಳೆ ಎಲ್ಲಾ ನಾಯಿಗಳೂ ಮುಖ ಮೇಲೆತ್ತಿ ಅಳುವರೀತಿಯಲ್ಲಿ ಕೂಗುವುದು ಬಲು ಸೋಜಿಗವೇಸರಿ!ತಾಯಿಗೂ ಮಿಗಿಲಾಗಿ ಎಲ್ಲರ ತಾಯ್ತಂದೆಯಂತಿದ್ದ ಶ್ರೀಗಳ ಜನ್ಮ ಶತಮಾನೋತ್ಸವ ಕಳೆದವರ್ಷ ನಡೆಯಿತು. ಇಂತಹ ಮಹಾತ್ಮರು ಮತ್ತೆ ಜನಿಸಲಿ, ನಿಜವಾಗಿ ಜನತೆಯ ಕಣ್ಣೀರೊರೆಸಲಿ ಎಂದು ಪ್ರಾರ್ಥಿಸೋಣ.