ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, November 11, 2013

ದೀಪಕ ರಾಗದ ಬೆನ್ನತ್ತಿ.......

ಚಿತ್ರಋಣ: ಅಂತರ್ಜಾಲ
ದೀಪಕ ರಾಗದ ಬೆನ್ನತ್ತಿ.......

ಮನಸ್ಸು ಉತ್ತರಭಾರತದ ದೇವಭೂಮಿಯೆಡೆಗೆ ತೆರಳಿದ್ದಾಗ, ಒಂದನೆಯ ಶತಮಾನಕ್ಕೂ ಮೊದಲು ಬದುಕಿದ್ದನೆನ್ನಲಾದ ಉಜ್ಜಯಿನಿಯ ವಿಕ್ರಮಾದಿತ್ಯನನ್ನು ನೆನಪಿಸಿಕೊಳ್ಳತೊಡಗಿತ್ತು. ಆತನ ಸಾಧನೆ, ಪರಾಕ್ರಮಗಳು ಕಮ್ಮಿಯೇನಲ್ಲ.

ಭವ್ಯ ಭಾರತದ ಸಂಸ್ಕೃತ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಪೌರಾಣಿಕ-ಚಾರಿತ್ರಿಕ ವ್ಯಕ್ತಿಯಾಗಿ ಹೊರಹೊಮ್ಮಿರುವ ರಾಜಾ ವಿಕ್ರಮಾದಿತ್ಯ ಬಹು ಜನಪ್ರಿಯ ವ್ಯಕ್ತಿ. ವಿಕ್ರಮಾದಿತ್ಯನ ಹೆಸರಿನಲ್ಲಿ ಅನೇಕ ಕಥೆಗಳು ಸೃಷ್ಟಿಯಾಗಿದ್ದರೂ, ಆ ಹೆಸರಿನ ಜೊತೆ ಘಟನೆ ಅಥವಾ ಸ್ಮಾರಕಗಳು ಸಂಯೋಗಗೊಂಡಿದ್ದರೂ, ಅವುಗಳಿಗೆ ಯಾವುದೇ ಐತಿಹಾಸಿಕ ವಿವರಗಳು ಸಿಗುವುದಿಲ್ಲವಾದ್ದರಿಂದ ವಿಕ್ರಮಾದಿತ್ಯನ ಕಾಲ ಇಂಥಾದ್ದೇ ಎಂಬುದನ್ನು ಆಧುನಿಕ ಇತಿಹಾಸಕಾರರು ಹೇಳಲು ಮುಂದಾಗುವುದಿಲ್ಲ. ಸಂಸ್ಕೃತದ ಎರಡು ಪ್ರಸಿದ್ಧ ಕಥಾನಕಗಳಾದ 'ವೇತಾಲ ಪಂಚವಿಂಶತಿ' ಅಥವಾ 'ಬೈತಾಳ್ ಪಚಿಸಿ' ಮತ್ತು 'ಸಿಂಹಾಸನ-ದ್ವಾತ್ರಿಂಶಿಕಾ' ಅಥವಾ 'ಸಿಂಹಾಸನ್ ಬತ್ತೀಸೀ' ಎಂದು ಕರೆಯಲ್ಪಡುವ ಗ್ರಂಥಗಳು ವಿವಿಧ ಬರಹಗಾರರ ನಿರೂಪಣೆಗಳಲ್ಲಿ ಸಂಸ್ಕೃತ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗುತ್ತವೆ.

ವೇತಾಲ ಪಂಚವಿಂಶತಿಯಲ್ಲಿ ಇಪ್ಪತ್ತೈದು ಕಥೆಗಳಿದ್ದು, ಅದರಲ್ಲಿ, ರಾಜ ಪಿಶಾಚಿಯನ್ನು ಹಿಡಿದಿಟ್ಟುಕೊಂಡಾಗ,  ಆ ಪಿಶಾಚಿ ಒಗಟಿನಂಥ ಕಥೆಯನ್ನು ಹೇಳಿ ಅಂತ್ಯದಲ್ಲಿ ರಾಜನಿಗೆ ಪ್ರಶ್ನೆಯೊಂದನ್ನು ಮುಂದಿಡುತ್ತದೆ. ವಾಸ್ತವಾಗಿ ಇದಕ್ಕೂ ಹಿಂದೆ ಸಾಧುವೊಬ್ಬರು ರಾಜನನ್ನು ಉದ್ದೇಶಿಸಿ, ತುಟಿ ಎರಡು ಮಾಡದೆ, ಒಂದು ಮಾತೂ ಆಡದೆ, ಆ ಪಿಶಾಚಿಯನ್ನು ಕರೆತರಲು ಹೇಳಿರುತ್ತಾರೆ; ಮಾತನಾಡಿದಲ್ಲಿ ಆ ಪಿಶಾಚಿ ತನ್ನ ಸ್ಥಳಕ್ಕೆ ಹಾರಿ ಹೋಗಿಬಿಡುತ್ತದೆ ಎಂದೂ ಎಚ್ಚರಿಸಿರುತ್ತಾರೆ. ರಾಜನಿಗೆ ಉತ್ತರ ಗೊತ್ತಿಲ್ಲದಿದ್ದರೆ ಮಾತ್ರ ಸುಮ್ಮನಿರಬೇಕಾಗುತ್ತದೆ ಅಥವಾ ಅವನ ತಲೆ ಸಾವಿರ ಹೋಳಾಗುತ್ತದೆ. ದುರಾದೃಷ್ಟವಶಾತ್ ರಾಜನಿಗೆ ಪ್ರತಿಯೊಂದು ಉತ್ತರವೂ ಗೊತ್ತಿತ್ತು ಆದುದರಿಂದ ಉತ್ತರಿಸುವ ಮುಖಾಂತರ ಪಿಶಾಚಿ ಮರಳಿ ಮರದ ಕೊಂಬೆಗೆ ಸೇರುತ್ತಿತ್ತು!  ಇಪ್ಪತ್ನಾಲ್ಕು ಸಾರಿ ನಡೆದು ಕೊನೆಯ ಕಥೆಯ ಪ್ರಶ್ನೆ ವಿಕ್ರಮಾದಿತ್ಯನಿಗೆ ಒಗಟಾಗಿ ಉಳಿಯಿತು. ಕಥಾ-ಸರಿತ್ಸಾಗರದಲ್ಲಿ ಈ ಕಥೆಗಳ ನಿರೂಪಣೆಯನ್ನು ಕಾಣಬಹುದಾಗಿದೆ.

ಇಪ್ಪತ್ತೈದನೆಯ ಕಥೆಯಾಗಿ ಬೇತಾಳ ರಾಜಾ ವಿಕ್ರಮನಿಗೆ ಹೀಗೆ ಹೇಳುತ್ತದೆ: ಘನಘೋರವಾಗಿ ನಡೆದು ಮುಗಿದ ಯುದ್ಧರಂಗಕ್ಕೆ ಅಪ್ಪ-ಮಗ ಇಬ್ಬರು ವ್ಯಕ್ತಿಗಳು ಹೋಗುತ್ತಾರೆ. ಅಲ್ಲಿ ಆ ರಾಜ್ಯದ ರಾಣಿ ಮತ್ತು ರಾಜಕುಮಾರಿ ಇನ್ನೂ ಜೀವದಿಂದಿರುತ್ತಾರೆ. ತಮ್ಮೊಳಗೇ ಮಾತನಾಡಿಕೊಂಡು ಅಪ್ಪ ರಾಜಕುಮಾರಿಯನ್ನೂ ಮತ್ತು ಮಗ ರಾಣಿಯನ್ನೂ ಕೈಹಿಡಿದು ತಮ್ಮ ಮನೆಗೆ ಕರೆತಂದು, ನಂತರ ಮದುವೆಯಾಗುತ್ತಾರೆ. ಕಾಲಾನಂತರದಲ್ಲಿ ಮಗ-ರಾಣಿಯರ ದಾಂಪತ್ಯದಿಂದ ರಾಣಿ ಗಂಡುಮಗುವೊಂದನ್ನು ಹಡೆಯುತ್ತಾಳೆ. ಅದರಂತೆ ಅಪ್ಪ-ರಾಜಕುಮಾರಿಯರ ದಾಂಪತ್ಯದಿಂದ ರಾಜಕುಮಾರಿಗೊಬ್ಬಳು ಮಗಳು ಜನಿಸುತ್ತಾಳೆ. ನವಜಾತ ಶಿಶುಗಳ ಸಂಬಂಧವೆಂಥದು ಎಂಬುದನ್ನು ವಿವರಿಸುವಂತೇ ಬೇತಾಳ ರಾಜನಿಗೆ ತಾಕೀತು ಮಾಡುತ್ತದೆ. ರಾಜಾ ವಿಕ್ರಮನಿಗೆ ಈ ಸಮಸ್ಯೆಗೆ ಮಾತ್ರ ಉತ್ತರ ನಿಜಕ್ಕೂ ತಿಳಿದಿರಲಿಲ್ಲ. ಆತ ಮೌನಕ್ಕೆ ಶರಣಾದ. ಬೇತಾಳ ಅವನ ಹೆಗಲೇರಿ ಸಾಗಿಬಂತು; ಪ್ರೀತಿಯಿಂದ ತನ್ನ ಜನ್ಮವೃತ್ತಾಂತವನ್ನೆಲ್ಲ ರಾಜ ವಿಕ್ರಮಾದಿತ್ಯನಿಗೆ ಅರುಹಿತು:

ಹಿಂದೆ ಬೇತಾಳನ ಪಾಲಕರಿಗೆ ಮಕ್ಕಳಿರಲಿಲ್ಲ. ಮಾಂತ್ರಿಕನನ್ನು ಭೇಟಿಮಾಡಿ ಆತನ ಆಶೀರ್ವಾದದಿಂದ ತನ್ನಪ್ಪ-ಅಮ್ಮ ಇಬ್ಬರು ಮಕ್ಕಳನ್ನು ಪಡೆದರೆಂದೂ ಒಬ್ಬ ತಾನು, ಇನೊಬ್ಬ ತನ್ನ ಸಹೋದರನೆಂದೂ ಹೇಳಿತು. ಮಕ್ಕಳು ಬೆಳೆಯುತ್ತಿರುವಾಗ ವಿದ್ಯಾಭ್ಯಾಸಕ್ಕಾಗಿ ಆ ತಾಂತ್ರಿಕ ತನ್ನಲ್ಲಿ ಬಿಡುವಂತೇ ಪಾಲಕರಿಗೆ ಹೇಳಿದನಂತೆ. ಅದರಂತೇ ಮಕ್ಕಳಿಬ್ಬರನ್ನೂ ಆ ಪಾಲಕರು ತಾಂತ್ರಿಕನಲ್ಲಿಗೆ ಕಳುಹಿಸಿದರು. ಬೇತಾಳನಿಗೆ ಜಗತ್ತಿನ ಸಕಲ ವಿದ್ಯೆಗಳನ್ನೂ ಹೇಳಿಕೊಟ್ಟ ಮಾಂತ್ರಿಕ, ಬಹಳ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದನಂತೆ. ಬೇತಾಳನ ಸಹೋದರನಿಗೆ ಕಡಿಮೆ ವಿದ್ಯೆಗಳನ್ನು ಕಲಿಸಿಕೊಟ್ಟು ಆತನನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದನಂತೆ. ಸಹೋದರನನ್ನು ಪಾಲಕರಿಗೆ ಮರಳಿಸಿ, ತನ್ನನ್ನು ಮಾಂತ್ರಿಕ ತನ್ನ ದೇವತೆಗೆ ಬಲಿಕೊಡಬೇಕೆಂದು ಬಯಸಿದ್ದ ಎಂಬುದನ್ನು ಬೇತಾಳ ಹೇಳಿತು. "ರಾಜನ್, ಸಮೀಪಿಸುತ್ತಿರುವ ಮಾಂತ್ರಿಕನ ಮನೆಯೊಳಗೆ ಹೋದಾಗ, ಅಲ್ಲಿ ನಿನಗೂ ಸಹಿತ ತಲೆಯನ್ನು ಬಗ್ಗಿಸುವಂತೇ ಆ ಮಾಂತ್ರಿಕ ಹೇಳುತ್ತಾನೆ. ತಲೆ ಬಗ್ಗಿಸಿದೆಯಾದರೆ ನಿನ್ನನ್ನೂ ಬಲಿಹಾಕಿಬಿಡುತ್ತಾನೆ. ನೀನೊಂದು ಉಪಾಯಮಾಡು: ಹೇಗೆ ಬಗ್ಗಬೇಕೆಂದು ಕೇಳುತ್ತಾ ಆತ ತಲೆಯನ್ನು ಬಗ್ಗಿಸಿದಾಗ ನೀನೇ ಆತನನ್ನು ಬಲಿಹಾಕಿಬಿಡು." ಎಂಬ ಸಲಹೆಯನ್ನಿತ್ತು ಸುಮ್ಮನಾಯಿತು. 

ರಾಜಾ ವಿಕ್ರಮಾದಿತ್ಯ ಬೇತಾಳದ ಆದೇಶದಂತೇ ನಡೆದುಕೊಂಡ. ಅದರ ಪರಿಣಾಮವಾಗಿ ಇಂದ್ರ ಮತ್ತು ಕಾಳೀ ದೇವಿ ರಾಜನಿಗೆ ಆಶೀರ್ವದಿಸಿದರು. ಖುಷಿಗೊಂಡ ಬೇತಾಳ "ರಾಜನೇ ನಿನಗೊಂದು ವರವನ್ನು ಕೊಡುತ್ತೇನೆ. ಏನು ಬೇಕು ಕೇಳು" ಎಂದಿತು. "ಮಾಂತ್ರಿಕನನ್ನು ಪಾಪಮುಕ್ತಗೊಳಿಸಿ, ಆತನ ಮನಸ್ಸನ್ನು ಶುದ್ಧೀಕರಿಸಿ ಆತನಿಗೆ ಜೀವದಾನ ನೀಡುವಂತೆ ಮಾಡು" ಎಂದು ರಾಜಾ ವಿಕ್ರಮ ಬೇತಾಳನಲ್ಲಿ ಕೇಳಿದ. ಮಾಂತ್ರಿಕನಿಗೆ ಮರುಜೀವ ನೀಡಿದುದರ ಜೊತೆಗೆ, ರಾಜಾ ವಿಕ್ರಮನ ಅತ್ಯುತ್ತಮ ಸ್ವಭಾವವನ್ನು ಮೆಚ್ಚಿದ ಬೇತಾಳವು, ಮುಂದೆಂದಾದರೂ ತನ್ನ ಅಗತ್ಯ ಬಿದ್ದಲ್ಲಿ, ನೆನೆದಾಗ ಬಂದು ಸಹಾಯಮಾಡುವೆನೆಂದು ರಾಜನಿಗೆ ವಾಗ್ದಾನ ಮಾಡಿತು.           

ಸಿಂಹಾಸನಕ್ಕೆ ಸಂಬಂಧಪಟ್ಟ ಈ ಕಥೆಗಳನ್ನು ವಿಕ್ರಮಾದಿತ್ಯನ ಸಿಂಹಾಸನಕ್ಕೆ ನಂಟು ಹಾಕಲಾಗಿದೆ. ಆದರೆ ಸಿಂಹಾಸನ ಕಳೆದು ಹೋಗಿತ್ತು, ಅನೇಕ ಶತಮಾನಗಳ ತರುವಾಯ ಧಾರ್ ನ ಪರಂಪರಾಗತ ರಾಜ, ರಾಜಾ ಭೋಜನು ಅದನ್ನು ಪತ್ತೆ ಹಚ್ಚಿದ. ಈ ಉತ್ತರೋತ್ತರ ರಾಜನೇ ಪ್ರಸಿದ್ಧನು ಮತ್ತು ಅವನು ಸಿಂಹಾಸನವನೇರುವ ಪ್ರಯತ್ನಗಳೇ ಕಥೆಗಳ ಕಟ್ಟು. ಈ ಸಿಂಹಾಸನವನ್ನು 32 ಹೆಣ್ಣು ಶಿಲೆಗಳೊಡನೆ ಸಿಂಗರಿಸಲಾಗಿದೆ, ಆ ಶಿಲೆಗಳು ಮಾತನಾಡಬಲ್ಲವು, ತಾವು ಹೇಳುವ ಕಥೆಗಳಲ್ಲಿ ಬರುವ ರಾಜ ವಿಕ್ರಮಾದಿತ್ಯನಷ್ಟು ಉದಾತ್ತವಾದವರು ಯಾರಾದರೂ ಇದ್ದರೆ ಮಾತ್ರ ಸಿಂಹಾಸನವೇರಬಹುದೆಂದು ಸವಾಲನ್ನು ಒಡ್ದುತ್ತವೆ. ಇದು ವಿಕ್ರಮಾದಿತ್ಯನ 32 ಪ್ರಯತ್ನಗಳಿಗೆ ಅಂದರೆ 32 ಕಥೆಗಳಿಗೆ ಕಾರಣವಾಗುತ್ತದೆ ಮತ್ತು ಪ್ರತಿ ಬಾರಿಯೂ ಭೋಜ ತನ್ನ ನಿಕೃಷ್ಟತೆಯನ್ನು ಒಪ್ಪಿಕೊತ್ತಾನೆ. ಅಂತಿಮವಾಗಿ, ಆ ಶಿಲೆಗಳು, ರಾಜಾ ಭೋಜನು ವಿನಮ್ರ ಭಾವನೆ ತಾಳುವುದರಿಂದ, ಸಂತಸಗೊಂಡು ಅವನನಿಗೆ ಸಿಂಹಾಸನವನ್ನೇರಲು ಅವಕಾಶ ಕೊಡುತ್ತವೆ. ಈ ಕಥೆಗಳಲ್ಲಿ ಕಂಡುಬರುವ ನೀತಿಸೂತ್ರಗಳನ್ನು ಗಮನಿಸಿದರೆ ಪೂರ್ವಜರ ಕರ್ತೃತ್ವ ಶಕ್ತಿ ಮತ್ತು ಉನ್ನತ ಮೌಲ್ಯಗಳ ಅರಿವು ನಮಗಾಗುತ್ತದೆ.

ರಾಜಾ ವಿಕ್ರಮಾರ್ಕನಿಗೆ ಶನಿಮಹಾತ್ಮ ತಗುಲಿಕೊಂಡು ಕಾಡಿದ ಕಥೆಯನ್ನು ಬಹುಸಂಖ್ಯಾಕರು ಕೇಳಿರುತ್ತೀರಿ. ವಿಕ್ರಮಾದಿತ್ಯನ ನ್ಯಾಯನಿರ್ಣಯ-ಸಿಂಹಾಸನದ ಬಗ್ಗೆ ಕೂಡ ಅನೇಕ ಕಥೆಗಳನ್ನು ತಾವೆಲ್ಲ ಕೇಳಿರುತ್ತೀರಿ. ಅದೇ ವಿಕ್ರಮಾದಿತ್ಯ ಮಹರ್ಷಿ ವ್ಯಾಸರು ಬರೆದ ಭವಿಷ್ಯ ಪುರಾಣದಲ್ಲೂ ಕಾಣಸಿಗುತ್ತಾನೆ. ಬಹುಶಃ ವ್ಯಾಸರು ಭವಿಷ್ಯದಲ್ಲಿ ನಡೆಯುವ ಘಟನೆಗಳಲ್ಲಿ ಹಲವನ್ನು ಪೇರಿಸಿ ’ಭವಿಷ್ಯ ಪುರಾಣ’ವನ್ನು ಬರೆದಿದ್ದಾರೆ ಎನಿಸುತ್ತದೆ. ಬಹುದೊಡ್ಡ ಚಕ್ರವರ್ತಿಯಾಗಿದ್ದ ವಿಕ್ರಮಾದಿತ್ಯನ ಆಸ್ಥಾನದಲ್ಲಿ,

धन्वन्तरिः क्षपणको मरसिंह शंकू वेताळभट्ट घट कर्पर कालिदासाः।
ख्यातो वराह मिहिरो नृपते स्सभायां रत्नानि वै वररुचि र्नव विक्रमस्य॥

ಧನ್ವಂತರೀ ಕ್ಷಪಣಕೋಮರಸಿಂಹ ಶಂಕು ವೇತಾಲಭಟ್ಟ ಘಟಕರ್ಪರ ಕಾಳಿದಾಸಃ |
ಖ್ಯಾತೋ ವರಾಹ ಮಿಹಿರೋ ನೃಪತೇ ಸ್ಸಭಾಯಾಂ ರತ್ನಾನಿ ವೈ ವರರುಚಿ ರ್ನವ ವಿಕ್ರಮಸ್ಯ||

ಮಹಾಕವಿಗಳಾದ ಧನ್ವಂತರಿ, ಕ್ಷಪಣಕ, ಅಮರಸಿಂಹ, ಶಂಕು, ವೇತಾಲಭಟ್ಟ, ಘಟಕರ್ಪರ, ಕಾಳಿದಾಸ, ವರರುಚಿ ಮತ್ತು ವರಾಹಮಿಹಿರ ಎಂಬ "ನವರತ್ನಗಳು" ಆಸ್ಥಾನ ಕವಿಗಳಾಗಿದ್ದರಂತೆ!! ಅಂತಹ ದೊರೆಯನ್ನು ಪಡೆಯಲು ಅವರು ಅದೆಷ್ಟು ಪುಣ್ಯಮಾಡಿರಬೇಡ! ವರಾಹಮಿಹಿರ ಅಂದಿನ ಪ್ರಖ್ಯಾತ ಜ್ಯೋತಿಷಿಯಾಗಿದ್ದ-ಖಗೋಲ ಗಣಿತಜ್ಞನಾಗಿದ್ದ ಎಂದು ತಿಳಿದುಬರುತ್ತದೆ. ಈತ ವಿಕ್ರಮಾದಿತ್ಯನ ಮಗನ ಸಾವಿನ ಬಗ್ಗೆ ಭವಿಷ್ಯ ನುಡಿದಿದ್ದನಂತೆ! ಹದಿನಾರು ಚರಣಗಳಿಂದ ಕೂಡಿದ ’ನೀತಿ ಪ್ರದೀಪ’ವೆಂಬ ಕೃತಿಯನ್ನು ಮಾಘಬ್ರಾಹ್ಮಣನಾದ ವೇತಾಲಭಟ್ಟ ರಚಿಸಿದ್ದನಂತೆ. ಬೇತಾಳನ ಕಥೆಗಳನ್ನೂ ಸಹ ಆತನೇ ರಚಿಸಿದನೋ ತಿಳಿಯದು. ಸಕಾ ಎಂಬಾತನನ್ನು ಜಯಿಸಿದ್ದ ನೆನಪಿಗೆ ಹೊಸ ಶಕೆಯನ್ನೇ ಆರಂಭಿಸಿದವನು ರಾಜಾ ವಿಕ್ರಮ; ಅದನ್ನೇ ನಾವು ಇಂದಿಗೂ ವಿಕ್ರಮಾರ್ಕ ಶಕೆ ಎನ್ನುತ್ತೇವೆ. ಈಗ ನಾವು ಶ್ರೀವಿಕ್ರಮಾರ್ಕ ಶಕ 2069-70ರಲ್ಲಿದ್ದೇವೆ. ಅಂದರೆ ಇಂದಿಗೆ 2070 ವರ್ಷಗಳ ಹಿಂದೆ ರಾಜಾ ವಿಕ್ರಮಾದಿತ್ಯ ಈ ಭರತಖಂಡದಲ್ಲಿ ಬಹುದೊಡ್ಡ ಸಂಸ್ಥಾನಿಕನಾಗಿ ರಾಜ್ಯಭಾರ ಮಾಡುತ್ತಿದ್ದ ಎಂಬುದು ಖಚಿತಗೊಳ್ಳುತ್ತದೆ.

ಕಾಳಿದಾಸ ಭೋಜರಾಜನ ಆಸ್ಥಾನದಲ್ಲೂ ಇದ್ದನಲ್ಲವೇ? ಹಾಗಾದರೆ ಅಂದಿನವರ ಆಯುರ್ಮಾನ ಬಹಳ ಹೆಚ್ಚಿಗೆ ಇದ್ದಿರಬೇಕು. ಇಂದಿಗೂ ೧೧೦-೧೩೦ ವರ್ಷಗಳ ಕಾಲ ಬದುಕಿರುವವರು ಇದ್ದಾರಲ್ಲ. ಉತ್ತರಭಾರತದಲ್ಲಿ ಸಾಧುವೊಬ್ಬನಿಗೆ ಆದಾಗಲೇ ಆರುನೂರು ವರ್ಷಗಳಿಗೂ ಅಧಿಕ ಆಯಸ್ಸು ಆಗಿದೆಯಂತೆ. ಅಂತೆಯೇ ಕಾಳಿದಾಸ ಮೊದಲು ವಿಕ್ರಮಾರ್ಕನಲ್ಲಿ ಅಶ್ರಯಪಡೆದಿದ್ದು, ಅವನ ಕಾಲಾನಂತರದಲ್ಲಿ ಭೋಜರಾಜನ ಆಸ್ಥಾನದಲ್ಲೂ ಇದ್ದಿರಬೇಕು. ಇತಿಹಾಸ ಸಂಶೋಧಕರಿಗೆ ಇವೆಲ್ಲ ಹೊಸ ಹೊಸ ಸರಕುಗಳಾಗುತ್ತವೆ ಮತ್ತು ಸವಾಲನ್ನೊಡ್ಡುತ್ತವೆ.

ಶನಿಪೀಡಿತನಾಗಿ ನಂದಿಶೆಟ್ಟಿಯ ಮನೆಯಲ್ಲಿ ಆಶ್ರಯಪಡೆದಿದ್ದ ರಾಜಾ ವಿಕ್ರಮಾದಿತ್ಯ ತಾನು ಯಾರು ಎಂಬುದನ್ನು ನಂದಿಶೆಟ್ಟಿಗೆ ಹೇಳಿರಲಿಲ್ಲ. ಕೈಕಾಲುಗಳನ್ನು ಕಳೆದುಕೊಂಡ ದುರವಸ್ಥೆಯಲ್ಲಿ ಇನ್ನೊಬ್ಬರ ಸಹಕಾರವಿಲ್ಲದೇ ಓಡಾಡಲಾಗದ ದೈನ್ಯಾವಸ್ಥೆಯಲ್ಲಿ ನಂದಿಶೆಟ್ಟಿಯ ಮನೆಗೆ ಅನಿರೀಕ್ಷಿತವಾಗಿ ಸೇರಿಕೊಳ್ಳುವಂತಾಗಿತ್ತು. ತಿರುಗುವ ಗಾಣದ ನೊಗದಮೇಲೆ ಕುಳಿತ ರಾಜಾವಿಕ್ರಮ ತಾನನುಭವಿಸುತ್ತಿದ್ದ ದುಃಖದ ಸನ್ನಿವೇಶಗಳನ್ನು ಮತ್ತು ತನ್ನ ನೋವನ್ನು ಮರೆಯಲು ದೀಪಕರಾಗವನ್ನು ಹಾಡಿದ್ದನಂತೆ. ಹಾಗೆ ಆತ ದೀಪಕರಾಗವನ್ನು ಹಾಡಿದಾಗ ನಂದಿಶೆಟ್ಟಿಯ ಮಹಲಿನಲ್ಲಿ ದೀಪಗಳೆಲ್ಲ ತಂತಾನೇ ಉರಿದವು ಎಂಬುದು ಐತಿಹ್ಯ. ಇಂದಿಗೂ ದೀಪಕರಾಗವಿದೆ; ಆದರೆ ಆ ರಾಗವನ್ನು ಸಂಗೀತಗಾರರು ಯಾಕೋ ಅಷ್ಟಾಗಿ ಬಳಸುತ್ತಿಲ್ಲ. ದೀಪಕರಾಗಕ್ಕೆ ಹೊಂದುವ ಪದ್ಯಗಳ ರಚನೆಗಳೂ ಸಹ ತೀರಾ ಕಮ್ಮಿ ಪ್ರಮಾಣದಲ್ಲಿ ನಡೆದಿವೆ. ಪ್ರಸಕ್ತ ಸಂಗೀತದಲ್ಲಿ ಹೆಸರುಮಾಡಿರುವ ಭಾರತೀಯ ಕಲಾವಿದರು ವಿಕ್ರಮಾರ್ಕ ಹಾಡಿದ್ದ ದೀಪಕರಾಗವನ್ನು ಅಲ್ಲಲ್ಲಿ ಬಳಸುತ್ತಿರಬೇಕೆಂಬುದು ನನ್ನ ಆಗ್ರಹಪೂರ್ವಕ ವಿನಂತಿ.

ದೀಪಕರಾಗವನ್ನು ಹುಡುಕುತ್ತ ನಡೆದ ನನಗೆ ಸಿಕ್ಕಿದ್ದು ಒಂದೆರಡು ಹಾಡುಗಾರರ ಹಾಡುಗಳು ಮಾತ್ರ. ಒಬ್ಬರು ಪಂಡಿತ್ ರಾಮ್ ಚತುರ್ ಮಲ್ಲಿಕ್ ಮತ್ತು ಇನ್ನೊಬ್ಬರು ಉಸ್ತಾದ್ ಗುಲಾಮ್ ಮುಸ್ತಾಫಾ ಖಾನ್. ಇನ್ನು ಕೆಲವರು ಬೆರಳೆಣಿಕೆಯ ಸಂಗೀತಗಾರರು ಅದನ್ನು ಹಾಡುತ್ತಾರೆ. ಯಾಕೆ ನಮ್ಮ ಸಂಗೀತಗಾರರು ಅದನ್ನು ಹಾಡುತ್ತಿಲ್ಲವೆಂಬುದು ಯಕ್ಷಪ್ರಶ್ನೆ. ಇನ್ನಾದರೂ ದೀಪಕರಾಗವನ್ನು ಊರ್ಜಿತಾವಸ್ಥೆಗೆ ತರಬೇಕು, ತಾವೂ ಬಳಸಿಕೊಂಡು ಮುಂದಿನ ನಮ್ಮ ಪೀಳಿಗೆಗೆ ಅದನ್ನು ಕಲಿಸಿಕೊಡಬೇಕು. ಮೇರುಸದೃಶ ವ್ಯಕ್ತಿತ್ವವನ್ನು ಹೊಂದಿದ್ದ ಚಕ್ರವರ್ತಿ ವಿಕ್ರಮಾದಿತ್ಯನ ನೆನಪು ನಮ್ಮೆಲ್ಲರಲ್ಲಿ ಚಿರಸ್ಥಾಯಿಯಾಗಿರುವುದರ ಜೊತೆಜೊತೆಗೆ ಆತ ಹಾಡಿದ ದೀಪಕರಾಗದ ಮೂಲಕ ಆತನಿಗೊಂದು ಗೌರವ ಸಮರ್ಪಣೆ ನಡೆಯುತ್ತಲೇ ಇರಬೇಕು ಎಂಬುದು ನನ್ನ ಅಪೇಕ್ಷೆಯಾಗಿದೆ, ನಮಸ್ಕಾರ.