ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, December 7, 2011

ಧರ್ಮಸ್ಥಳ ಕೂಡ ನಂಬುಗೆಯ ಮೇಲೇ ನಿಂತಿದೆ ಹೆಗ್ಗಡೆಯವರೇ !


ಧರ್ಮಸ್ಥಳ ಕೂಡ ನಂಬುಗೆಯ ಮೇಲೇ ನಿಂತಿದೆ ಹೆಗ್ಗಡೆಯವರೇ !

ನಮ್ಮೂರ ಹತ್ತಿರದಲ್ಲಿ ಮುಗ್ವಾ ಸುಬ್ರಹ್ಮಣ್ಯ ದೇವಸ್ಥಾನ. ಬಹಳ ಪುರಾತನ ಕಾಲದಿಂದ ನಂಬಿ ನಡೆತಂದ ಆಚರಣೆ, ಸಂಪ್ರದಾಯಗಳು. ಅದೇ ನಿಂಬಿಕೆಗೆ ಇಂಬುಕೊಡುವ ಶ್ರೀಕುಮಾರ ಮಕ್ಕಳಾಗದಿದ್ದವರಿಗೂ ಸಂತಾನಫಲ ಕೊಡುವಲ್ಲಿ ಸಫಲ ! ಚಿಕ್ಕ ಚಿಕ್ಕ ಬೆಳ್ಳಿಯ ತೊಟ್ಟಿಲ ಹರಕೆ, ನಾಗರ ಹೆಡೆ ಹರಕೆ ಹೀಗೇ ಹರಕೆ ಹಲವು ವಿಧ.

|| ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ ||

ಎನ್ನುವ ಗೀತೆಯೆ ಉಕ್ತಿಯಂತೇ ಯಾವರೂಪದಿಂದ ಹರಕೆ ಸಲ್ಲಿಸಿದರು ಎಂಬುದಕ್ಕಿಂತ ಭಕ್ತಿ, ಶ್ರದ್ಧೆ ಮತ್ತು ಅಚಲ ನಂಬಿಕೆಯೇ ಅಲ್ಲಿ ಪ್ರಮುಖವಾಗುತ್ತದೆ. ಸಾವಿರಾರು ನಾಗರ ಕಲ್ಲುಗಳು ಪ್ರತಿಷ್ಠಾಪಿತಗೊಂಡಿವೆ, ಎಷ್ಟೋ ಹಳೆಯ ಮುಕ್ಕಾದ ಮುರುಡಾದ ಭಿನ್ನವಾದ ನಾಗರಕಲ್ಲುಗಳು ಮುಂದಿರುವ ಪುಷ್ಕರಣಿಯಲ್ಲಿ ಜಲಾಧಿವಾಸವಾಗಿವೆ. ಮೊನ್ನೆ ಚಂಪಾ ಷಷ್ಠಿಯಂದು ಸುಮಾರು ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ಇತ್ತಿದ್ದಾರೆ; ಹುಂಡಿಗೆ ಕಾಣಿಕೆ ಹಾಕಿದ್ದಾರೆ, ಅನೇಕ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅಲ್ಲಿ ರಥೋತ್ಸವ ನಡೆಯುವುದಿಲ್ಲ, ಯಾಕೆಂದರೆ ದೇವಸ್ಥಾನ ಇರುವಲ್ಲಿ ಬಹಳ ಅಗಲವಾದ ವಿಸ್ತಾರವಾದ ಜಾಗವಿಲ್ಲ. ಅಡಕೆ ತೋಟದ ಒಂದು ಪಾರ್ಶ್ವದಲ್ಲಿ ಇರುವ ದೇವಸ್ಥಾನಕ್ಕೆ ಮೊದಲು ಕಾಲು ದಾರಿಯಲ್ಲೇ ಹೋಗಬೇಕಿತ್ತು-ಈಗ ವಾಹನ ಹೋಗುವಂತೇ ರಸ್ತೆ ಮಾಡಿದ್ದಾರೆ. ಅಲ್ಲಿ ಮಡೆಸ್ನಾನದಂತಹ ಆಚರಣೆ ನಡೆಯುವುದಿಲ್ಲ. ಆದರೆ ವಿಜೃಂಭಣೆಯ ಪಲ್ಲಕ್ಕಿ ಉತ್ಸವ, ಅಷ್ಟಾಂಗಸೇವೆ, ಪಂಚವಾದ್ಯ, ಫಳ, ನಗಾರಿ, ಮೋರಿ [ಕಹಳೆ], ಛತ್ರ-ಚಾಮರ, ಶಂಖ-ಜಾಗಟೆ ಇವೆಲ್ಲವುಗಳ ಸೇವೆ ಆಗಾಗ ಇದ್ದೇ ಇದೆ. ತ್ರಿಕಾಲ ಆಗಮೋಕ್ತ ಪೂಜೆ ನಡೆಸಲ್ಪಡುತ್ತಡುವ ಈ ಜಾಗ ಹಿಂದೆ ನಾರದರಿಂದ ಪ್ರತಿಷ್ಠಿತವಾಗಿದ್ದ ಮೂರ್ತಿಯನ್ನು ಹೊಂದಿತ್ತು ಎಂಬುದು ಐತಿಹ್ಯ; ಮೂರ್ತಿ ಹಳೆಯದಾಗಿ ಸ್ವಲ್ಪ ಭಿನ್ನವಾಗಿದ್ದರಿಂದ ಆಡಳ್ತೆಯ ಹತ್ತುಸಮಸ್ತರ ವಿನಂತಿಯ ಮೇರೆಗೆ ಐದು ವರ್ಷಗಳ ಹಿಂದೆ ಹೊಸ ವಿಗ್ರಹವನ್ನು ಶ್ರೀರಾಮಚಂದ್ರಾಪುರ ಮಠದ ಸ್ವಾಮಿಗಳು ತಮ್ಮ ಅಮೃತ ಹಸ್ತದಿಂದ ಪ್ರತಿಷ್ಠಾಪಿಸಿದ್ದಾರೆ.

ಇಲ್ಲಿ ಮಡಿ ಎಂದರೆ ಮಡಿ. ಸ್ವಚ್ಛತೆಯಲ್ಲಿ ಕೊರತೆಕಂಡರೂ ಅಥವಾ ಮಡಿಯಲ್ಲಿ ತುಸು ವ್ಯತ್ಯಾಸವಾದರೂ ಹಾವು ಕಾಣುವುದನ್ನು ನೋಡಬಹುದಾಗಿದೆ. ಇದಕ್ಕಿಂತಾ ವಿಶೇಷ ಎಂದರೆ ಈ ಸುಬ್ಬಪ್ಪನ ಅಭಿಷೇಕಕ್ಕೆ ಒಂದು ಬಾವಿ ಇದೆ. ಅದರ ಕತ್ತದ ಹಗ್ಗ ಸುಮಾರು ಉದ್ದದ್ದು. ಆ ಹಗ್ಗವನ್ನು ಆ ಗ್ರಾಮದ ಕ್ರೈಸ್ತ ಕುಟುಂಬವೊಂದು ಹೊಸೆದುಕೊಡುತ್ತದೆ. ಹಗ್ಗ ಲಡ್ಡಾಗುತ್ತಿರುವ ಹಾಗೇ ಆ ಕ್ರೈಸ್ತರ ಮನೆಯ ವಠಾರದಲ್ಲಿ ಬುಸ್ಸಪ್ಪ ಕಾಣಿಸಿಕೊಳ್ಳುತ್ತದೆ! " ಹೋಗಪ್ಪಾ ಅರ್ಥವಾಯ್ತು ತಂದುಕೊಡ್ತೇವೆ " ಅಂದರೆ ಸಾಕು ಹಾವು ಮಾಯ! ಅದಾದ ದಿನವೊಪ್ಪತ್ತಿನಲ್ಲಿ ಹಗ್ಗವನ್ನು ಅವರು ತಂದು ಸೇವೆ ಸಲ್ಲಿಸಿ ಹೋಗುತ್ತಾರೆ. ಇದು ಇವತ್ತಿಗೂ ನಡೆಯುತ್ತಿರುವ ಚಮತ್ಕಾರ. ಹಾಗಂತ ಇದುವರೆಗೂ ಆಲ್ಲಿನ ಸುತ್ತಮುತ್ತಲ ಜಾಗಗಳಲ್ಲಿ ಹಾವು ಕಚ್ಚಿ ಸತ್ತರು ಎಂಬ ದಾಖಲೆ ಇಲ್ಲ. ಹಾಗೆಲ್ಲಾ ಕಚ್ಚುವುದೂ ಇಲ್ಲ, ಹಾವುಗಳ ಇರುವಿಕೆಯೇ ಕಾಣಿಸುವುದಿಲ್ಲ, ಆದರೂ ಮೈಲಿಗೆಯಾದರೆ, ಅಶುಚಿಯಾದರೆ ಹಾವುಗಳ ಒಡ್ಡೋಲಗವೇ ಎದ್ದು ಬರುತ್ತದೆ! ಇದು ಯಾವ ನಂಬುಗೆ ? ಇದು ಯಾವ ಜೀವ ಅಥವಾ ರಸಾಯನ ವಿಜ್ಞಾನ ?

ಮಡೆಸ್ನಾನದ ಬಗ್ಗೆ ಒಂದೆರಡು ಮಾತು :

ಕರ್ನಾಟಕದಲ್ಲಿ ಬ್ರಾಹ್ಮಣರ ಮೇಲೆ ’ಮಡೆಸ್ನಾನ’ದ ಆರೋಪ ಹೊರಿಸುತ್ತಾ ಹಲವು ಲೇಖನಗಳು ಪ್ರಕಟಗೊಳ್ಳುತ್ತಿವೆ. ಕರ್ನಾಟಕದಲ್ಲಿ ಕೇವಲ ೯ % ಬ್ರಾಹ್ಮಣರಿದ್ದಾರೆ, ಅದೂ ದಿನಗಳೆದಂತೇ ಸಂಖ್ಯೆ ಕಮ್ಮಿಯಾಗುತ್ತಿದೆ! ನಶಿಸಿ ಹೋಗಬಹುದಾದ ಸಂತತಿಗಳಲ್ಲಿ ಬ್ರಾಹ್ಮಣರೂ ಸೇರಿದರೆ ಆಶ್ಚರ್ಯವಲ್ಲ. ಈಗೀಗ ಜಾತೀ ರಾಜಕಾರಣ ಹೆಚ್ಚಿ ಬಲಗೈಯ್ಯಲ್ಲಿ ಕೋಳೀ ತಿನ್ನುತ್ತಾ ಎಡಗೈಯ್ಯಲ್ಲಿ ಪೂಜೆ ಮಾಡುವ ಹೊಸ ಪೀಳಿಗೆಗೆ ನಾಂದಿ ಹಾಡಿ ಎಂದು ಇತರೆ ವರ್ಗದವರು ಅಧಿಕಾರವಾಣಿಯಲ್ಲಿ ಅಪ್ಪಣೆ ಕೊಡಿಸುತ್ತಿದ್ದಾರೆ; ಯಾಕೆಂದರೆ ಅಧಿಕಾರ ಅವರ ಕೈಲಿದೆ! ಮಡೆ ಸ್ನಾನ ಯಾರೋ ಬ್ರಾಹ್ಮಣರು ಹೇಳಿ ಮಾಡಿದ್ದಲ್ಲ, ಬದಲಿಗೆ ಬ್ರಾಹ್ಮಣ್ಯದ ಮೇಲಿನ ಭಕ್ತಿಯಿಂದ, ಕಳಕಳಿಯಿಂದ ಎಲ್ಲಾ ವರ್ಗದ ಭಕ್ತರು ತಾವೇ ಕಂಡುಕೊಂಡ ಮಾರ್ಗ ಅದು. ಅದು ಅಲ್ಲಿ ಬಿಟ್ಟು ಇನ್ನೆಲ್ಲೂ ಇಲ್ಲ! ಬೇಕೆಂದರೆ ನಡೆಸಲಿ ಬೇಡವೆಂದರೆ ನಿಲ್ಲಿಸಲಿ, ಅಲ್ಲಿ ಬ್ರಾಹ್ಮಣರ ಪಾತ್ರವೇನೂ ಇರುವುದಿಲ್ಲ. ಮಡೆಸ್ನಾನ ಮಾಡುವ ಕೆಲವು ಪಂಗಡಗಳಲ್ಲೇ ಕೆಲವರು ಈ ರೀತಿ ಕಿಡಿ ಹೊತ್ತಿಸುತ್ತಿದ್ದಾರೆ.

ಬ್ರಾಹ್ಮಣರು ಮೊದಲಿನಿಂದಲೂ ಬಡವರೇ, ರಾಜಾಶ್ರಯ ಪಡೆದವರು, ಅವರಿಂದ ಅನ್ಯಾಯವಾಗಿದೆ ಎಂಬುದು ಕಪೋಲ ಕಲ್ಪಿತ ಕಥೆ! ಹಳೇಕಾಲದ ಯಾವುದೇ ಮಕ್ಕಳ ಕಥೆಯನ್ನು ತೆಗೆದುಕೊಳ್ಳಿ ’ಒಂದಲ್ಲಾ ಒಂದೂರಿನಲ್ಲಿ ಒಬ್ಬ ಬಡಬ್ರಾಹ್ಮಣನಿದ್ದನಂತೆ’ ಎಂದೇ ಆರಂಭಗೊಳ್ಳುತ್ತದೆ, ಅದಕ್ಕೆ ಅದೇ ಸಾಕ್ಷಿ! ಇದಕ್ಕೆ ಮಹಾಭಾರತದ ಕೃಷ್ಣ-ಕುಚೇಲರ ಕಥೆ ಕೂಡ ಆಧಾರವಾಗುತ್ತದೆ. ಬ್ರಾಹ್ಮಣರಲ್ಲಿ ಅಂಥಾ ಅನ್ಯಾಯದ ಬುದ್ಧಿ ಇದ್ದಿದ್ದರೆ ಕ್ಷತ್ರಿಯನಾದ ಶ್ರೀರಾಮನನ್ನೂ ಯಾದವನಾದ ಶ್ರೀಕೃಷ್ಣನನ್ನೂ ದೇವರೆಂದು ಪೂಜಿಸುತ್ತಿರಲಿಲ್ಲ. ರಾಜಕೀಯದ ಹಲವು ಸುಳಿಗಳು ಮಧ್ಯೆ ಹೆಡೆಯಾಡಿ ಕಾಲಗತಿಯಲ್ಲಿ ಕೇವಲ ವೇದ ಬೋಧಿಸಲಿಲ್ಲ ಎಂಬ ಸಿಟ್ಟಿನಿಂದ ಹುಟ್ಟಿದ ಕಥೆ ಅದು. ಇಂದಿಗೂ ಬಹುತೇಕರು ಸಂಸ್ಕೃತವನ್ನು ಹೀಗಳೆಯುತ್ತಾರೆ, " ಓದಿ ಬನ್ನಿ..." ಎಂದು ನಾವು ವೇದಸುಧೆ ಆರಂಭಿಸಿದ್ದೇವೆ, ಮುಂಜಿಮಾಡುತ್ತೇವೆ, ಆದರೆ ಪ್ರಥಮವಾಗಿ ಅವರು ನಮ್ಮ ನಿಯಮಗಳಲ್ಲಿ ಒಂದಾದ ಮಾಂಸಾಹಾರವನ್ನು ತ್ಯಜಿಸಬೇಕಾಗುತ್ತದೆ! ಇದು ಎಲ್ಲರಿಂದಲೂ ಸಾಧ್ಯವೇ ? ನಾನೇ ನನ್ನ ಎಷ್ಟೋ ಪ್ರಬಂಧಗಳಲ್ಲಿ ನಮ್ಮನೆಯಲ್ಲಿ ಆಳುಕಳುಗಳಾಗಿದ್ದ ಎಷ್ಟೋ ಜನಾಂಗಗಳ ಜನರುಗಳ ಬಗ್ಗೆ ನಮಗಿದ್ದ ಗೌರವ, ಪ್ರೀತಿಯನ್ನು ಹಂಚಿಕೊಂಡಿದ್ದೇನೆ, ಅದು ಭಗವಂತನ ಸಾಕ್ಷಿಯಾಗಿ ಸತ್ಯವಾದದ್ದೇ ಹೊರತು ನಾನು ಕಟ್ಟಿಬರೆದಿದ್ದಲ್ಲ. ನಮ್ಮಂತಹ ಅದೆಷ್ಟೋ ಜನ ಹಾಗೇ ನಡೆದರು. ಯಾರೋ ಎಲ್ಲೋ ಒಂದಿಬ್ಬರು ವಿಚಿತ್ರವಾಗಿ ನಡೆದುಕೊಂಡರೆ ಇಡೀ ಬ್ರಾಹ್ಮಣಕುಲವನ್ನೇ ವಾಚಾಮಗೋಚರವಾಗಿ ಹಿಗ್ಗಾಮುಗ್ಗಾ ಜಗ್ಗಾಡುವುದು ಖೇದಕರ. ಇದರ ಬಗ್ಗೆ ಇತರೆ ಜನಾಂಗಗಳು ತಿಳಿದು ಮಾತಾಡಬೇಕಾದ ಅಗತ್ಯ ಇದೆ.

ಮಹಾರಾಷ್ಟ್ರದ ಪಂಢರಾಪುರದಲ್ಲಿ ಮಠವೊಂದರ ಎದುರುಗಡೆ ಬಿದ್ದ ಎಂಜಲು ಎಲೆಗಳ ಮೇಲೆ ಅಳಿದುಳಿದ ಕೂಳಿನ ಕಾಳುಗಳನ್ನು ಯುವಕನೊಬ್ಬ ತಿನ್ನುತ್ತಿದ್ದ, ಬಹಳಜನ ಉತ್ಸುಕರಾಗಿ ನೋಡುತ್ತಿರುವಂತೆಯೇ ಆತ ಹಸುಗಳಿಗಾಗಿ ರಸ್ತೆಬದಿಯಲ್ಲಿಟ್ಟ ನೀರನ್ನೇ ಕುಡಿದ! ಜನ ಜಮಾಯಿಸಿದರು. ಆತ ಜಾಸ್ತಿ ಮಾತಾಡಲೊಲ್ಲ. ಹೆಸರು ಕೇಳಿದರು, ಆತ ಸ್ಪಷ್ಟವಾಗಿ ಏನನ್ನೂ ಹೇಳದೇ ಯಾರದೋ ಕೈಲಿದ್ದ ತಾಮ್ರದ ವಸ್ತುವಿನೆಡೆಗೆ ಕೈ ತೋರಿಸಿದ. ಯಾರಿಗೂ ಅರ್ಥವಾಗದಿದ್ದಾಗ ಮರಾಠಿಯಲ್ಲಿ " ನರ್ಮದಾ ನದಿಯ ಮಧ್ಯದಲ್ಲಿರುವ ಗಜಾನನ ಗುಡಿಯೊಂದರ ಹೆಸರೆಂ"ದ. ಜನ ಆತನನ್ನು ಅಲ್ಲಿಂದ ಗಜಾನನ ಮಹಾರಾಜ್ ಎಂತಲೇ ಕರೆದರು. ಆತ ಬ್ರಾಹ್ಮಣ ಕುಲದಿಂದಲೇ ಬಂದವನೆಂಬುದು ಆಮೇಲೆ ತಿಳಿದದ್ದು! ಅಂತಹ ಗಜಾನನ ಮಹಾರಾಜ್ ಬಹುದೊಡ್ಡ ಸಂತರಾಗಿ, ಅವಧೂತರಾಗಿ ಅನೇಕರ ಕಷ್ಟಗಳನ್ನು ನೀಗಿದರು. ಇದು ಇತಿಹಾಸ. ಅಂದು ಎಲ್ಲೋ ಬಿದ್ದ ಎಂಜಲೆಲೆಯ ಕೂಳನ್ನು ತಿಂದ ಅಂತಹ ಗಜಾನನ ಮಹಾರಾಜರಿಗೆ ಯಾವ ಕಾಯಿಲೆಯೂ ಅಂಟಲಿಲ್ಲ, ಇಂದು ಮಡೆಸ್ನಾನದಲ್ಲಿ ಎಂಜಲೆಲೆಯಲ್ಲಿರಬಹುದಾದ ಬ್ಯಾಕ್ಟೀರಿಯಾಗಳು ಹಾಗೆ ಮಡೆಸ್ನಾನ ಮಾಡುವವರಿಗೆ ಬಾಧಿಸಬಹುದು ಎಂಬುದು ಹಲವರ ಇರಾದೆ! ಹೊಟ್ಟೆ ಕೆಟ್ಟು ಆಪರೇಷನ್‍ಗೆ ತೆರಳಿದ್ದ ಬಾಲಕನೊಬ್ಬನಿಗೆ ವೈದ್ಯರು ಕೋಡಬೇಡವೆಂದರೂ ಆತನ ತಂದೆ ತಿರುಪತಿ ಲಾಡು ಕೊಟ್ಟಿದ್ದು ಆ ಪ್ರಸಾದದಿಂದ ಆತನಿಗೆ ಏನೂ ತೊಂದರೆಯಾಗದೇ ಸಲೀಸಾಗಿ ಆಪರೇಷನ್ ಮುಗಿಸಿ ಮನೆಗೆ ಮರಳಿದ್ದನ್ನು ನಾನೆಲ್ಲೋ ಓದಿದ್ದೇನೆ. ಹಲವಾರು ಜನ ಸ್ನಾನಮಮಾಡುವ ಪುಷ್ಕರಣಿಗಳಲ್ಲಿ ಸ್ನಾತರಾದ ಅದೆಷ್ಟೋ ಮಂದಿ ಇದ್ದಾರೆ-ಎಲ್ಲರಿಗೂ ಒಳಿತಾಗಿದೆ ವಿನಃ ಚರ್ಮರೋಗ ಬಾಧಿಸಲಿಲ್ಲ. ಅದು ಅಲ್ಲಲ್ಲಿನ ಕ್ಷೇತ್ರಾಧಿಪನ ಮಹಿಮೆ!! ಎಲ್ಲಿ ಭಕ್ತಿಯ ಪಾರಮ್ಯ ಇರುತ್ತದೋ ಅಲ್ಲಿ ದೇವರು ಭಕ್ತಾಧೀನನಾಗುತ್ತಾನೆ ಎಂಬುದಕ್ಕೆ ಇವೇ ಸಾಕ್ಷಿಗಳು.

ಕುಕ್ಕೆಯ ಸ್ಥಾನಿಕರಾದ ಮಲೆಕುಡಿ ಜನಾಂಗದವರು ಯಾವುದೋ ಕಾಲದಲ್ಲಿ ಅದನ್ನು ಆರಂಭಿಸಿದ್ದಿರಬೇಕು. ಅವರ ಭಕ್ತಿಗೆ ಅವರು ಹಾಗೆ ಮಾಡಿದ್ದನ್ನು ಕಂಡ ಮತ್ತಿನ್ಯಾರೋ ಬೇರೇ ಜನಾಂಗದ ಭಕ್ತರು ತಾವೂ ಹಾಗೇ ಆರಂಭಿಸಿದರು. ಶತಮಾನಗಳಿಂದ ನಡೆಯುತ್ತಿರುವ ಅದಕ್ಕೆ ಯಾರೋ ಒಂದಷ್ಟು ವಿರೋಧ ವ್ಯಕ್ತಪಡಿಸಿದರು. ನಾನು ಮಡೆಸ್ನಾನವನ್ನು ಯಾವ ರೀತಿಯಲ್ಲೂ ಯಾರ ಮೇಲೂ ಹೇರುವುದೂ ಇಲ್ಲ,ಸಮರ್ಥಿಸುವುದೂ ಇಲ್ಲ, ಅಲ್ಲಿನವರ ಹಕ್ಕಿಗೆ ಚ್ಯುತಿಯನ್ನೂ ತರಬಯಸುವುದೂ ಇಲ್ಲ. ಬದಲಾಗಿ ಇದು ಬ್ರಾಹ್ಮಣರ ಅವಹೇಳನದ ಕುರಿತು ಮಾಡಿದ ಒಂದು ಜಿಜ್ಞಾಸೆ. ಮಡೆಸ್ನಾನ ಮಾಡುವುದರಿಂದ ಬ್ಯಾಕ್ಟೀರಿಯಾ ಹಬ್ಬುತ್ತದಂತೆ ಎಂದು ಪತ್ರಿಕೆಗಳಲ್ಲಿ ಓದಿದ್ದಕ್ಕೆ ಕೆಲವು ನಂಬಿಕೆಯ ಉದಾರಹಣೆ ಮಂಡಿಸಿದೆ ಅಷ್ಟೇ. ನಿಶ್ಚಿತವಾಗಿ ಹೇಳುತ್ತೇನೆ ಕೇಳಿ -- ಮಡೆಸ್ನಾನ ಬ್ರಾಹ್ಮಣರು ಒತ್ತಾಯಿಸಿ ಆರಂಭಿಸಿದ್ದಲ್ಲ, ಅಲ್ಲೂ ಅಲ್ಲಿನ ಮಲೆಕುಡಿ ಎಂಬ ಜನಾಂಗದವರಿಂದ ಮೊದಲು ಆಚರಿಸಲ್ಪಟ್ಟು ಆ ನಂತರ ಬ್ರಾಹ್ಮಣಭಕ್ತರೂ ಸೇರಿದಂತೇ ಬಹಳ ಜನ ನಡೆಸಿಬಂದಿದ್ದಾರೆ.

ಧರ್ಮಸ್ಥಳದ ಹೆಗ್ಗಡೆಯವರು ಸಾರಾಸಗಾಟಾಗಿ ಕುಕ್ಕೆಯಲ್ಲಿ ನಡೆಯುತ್ತಿರುವುದೆಲ್ಲಾ ಬರೇ ಮೂಢನಂಬಿಕೆಯಮೇಲೇ ಎಂದು ಅಪ್ಪಣೆಕೊಡಿಸಿಬಿಟ್ಟರು ! ಸ್ವಾಮೀ ಹೆಗ್ಗಡೆಯವರೇ, ಧರ್ಮಸ್ಥಳದಲ್ಲಿ ಧರ್ಮದೇವತೆಗಳು ಎನಿಸಿಕೊಂಡು ನೀವು ತೋರುವ ನಾಕು ಭೂತಗಳು ಇದ್ದಾವೆ ಅವು ನಿಮಗೆ ನುಡಿಗಟ್ಟು ಕೊಡ್ತಾವೆ ಮತ್ತು ನೀವದನ್ನು ಪಾಲಿಸಬೇಕು ಎಂಬುದಾಗಿ ಹೇಳುತ್ತೀರಿ, ’ಮಹಾನಡಾವಳಿ’ ಎಂದು ನಡೆಸುತ್ತೀರಿ. ಇದೆಕ್ಕೆಲ್ಲಾ ವೈಜ್ಞಾನಿಕ ತಳಹದಿ ಇದೆಯೇ ? ಅಥವಾ ನಿಮ್ಮ ಹಾಗೂ ಭಕ್ತರ ನಂಬಿಕೆಯೇ ಇದಕ್ಕೆ ತಳಹದಿಯೆ? ಒಪ್ಪಿಕೊಳ್ಳೋಣ ಜನತೆಗೆ ನೀವು ಬಹಳಷ್ಟು ಮಾರ್ಗದರ್ಶನ ಮಾಡಿದ್ದೀರಿ, ಹಲವಾರು ರೀತಿಯ ಯೋಜನೆ-ಆಯೋಜನೆಗಳನ್ನು ಕಾರ್ಯಗತ ಗೊಳಿಸಿ ಅನೇಕರು ಅನ್ನಕಂಡುಕೊಳ್ಳುವಲ್ಲಿ ಅನುವಾಗಿದ್ದೀರಿ ಇದೆಲ್ಲಾ ಸರಿಯೇ ಇದೆ. ಆದರೆ ನಿಮ್ಮ ಬಗೆಗೂ ಅಮೃತ ಸೋಮೇಶ್ವರರು ಒಮ್ಮೆ ಅಪಸ್ವರದಲ್ಲಿ ರಾಗ ಹಾಡಿದ್ದರು ಎಂಬುದನ್ನು ನಾನು ಕೇಳಿಬಲ್ಲೆ. ಅಲ್ಲೆಲ್ಲೋ ಯಾರೋ ಹೈಸ್ಕೂಲು ಶಿಕ್ಷಕಿಯ ವಿರುದ್ಧ ನೀವು ನಡೆದುಕೊಂಡಿದ್ದು ಅದು ಮತ್ತಿನ್ನೇನೋ ಆಗಿದ್ದು ಹೀಗೇ.

ಹಿಂದಿನ ಧರ್ಮದರ್ಶಿಗಳಾಗಿದ್ದ ನಿಮ್ಮ ತಂದೆ ರತ್ನವರ್ಮರ ಬಗ್ಗೆ ಬಣ್ಣಬಣ್ಣದ ಕಥೆಗಳೇ ಇವೆ. ಊರಕಡೆ ಜನ ಈಗಲೂ ಹಲವುಮಾತನಾಡುತ್ತಾರೆ, ಅದು ಬಿಡಿ. ಆದರೂ ಪ್ರಸಕ್ತ ನೀವು ಸುಧಾರಿತ ಜನಾಂಗಕ್ಕೆ ಜನರಿಂದ ಬಂದ ಹಣವನ್ನೇ ಸದುಪಯೋಗ ಪಡಿಸುತ್ತಿರುವುದರಿಂದ ಜನ ನಿಮ್ಮನ್ನು ಮೆಚ್ಚಿದ್ದಾರೆ; ಕೆಲವರು ಪೂಜಿಸಿಯೂ ಇದ್ದಾರೆ! ಅದೂ ನಿಮ್ಮ ಮೇಲಿನ ನಂಬಿಕೆಯಿಂದಲೇ. ಇವತ್ತು ಧರ್ಮಕ್ಷೇತ್ರಗಳಲ್ಲಿ ಧರ್ಮದರ್ಶಿಗಳ ಕುಟುಂಬಿಕರು ಯಾವ ಯಾವ ರೀತಿ ಅನೈತಿಕ ಚಟುವಟಿಕೆಗಳಲ್ಲಿ ಧರ್ಮದ ಮುಸುಕಿನಲ್ಲಿ ತೊಡಗಿರುತ್ತಾರೆ ಎಂಬುದನ್ನೂ ಕೆಲವು ಜನ ನನ್ನಂಥವರು ಇಣುಕಿ ನೋಡುತ್ತಾರೆ; ಬಾವಿಯ ತಳದಲ್ಲಿ ಕೆಸರಿರುವುದು ಸಹಜ ಆದರೆ ಕುಡಿಯಲು ನಮಗದು ಶುದ್ಧಜಲ ಪೂರೈಸುತ್ತಿದೆಯಲ್ಲಾ ಎಂಬುದು ನಮಗೆ ಬೇಕಾದದ್ದು.

ಜಗತ್ತು ನಡೆಯುತ್ತಿರುವುದೇ ನಂಬಿಕೆಯಮೇಲೆ. ಗಂಡ-ಹೆಂಡತಿಯನ್ನೂ ಹೆಂಡತಿ-ಗಂಡನನ್ನೂ, ಪ್ರಜೆಗಳು ಸರ್ಕಾರವನ್ನೂ, ಸರ್ಕಾರ ಪ್ರಜೆಗಳನ್ನೂ ಹೀಗೇ ಎಲ್ಲವೂ ಒಂದನ್ನೊಂದು ನಂಬಿಯೇ ನಡೆಯುವುದಾಗಿದೆ. ಯಾರಿಗೆ ಎಷ್ಟು ಆಯುಸ್ಸು, ಯಾವದಿನ ಎಷ್ಟು ಹೊತ್ತಿನವರೆಗೆ ಬದುಕುತ್ತಾರೆ ಎಂಬುದು ಗೊತ್ತಿಲ್ಲಾ ಆದರೂ ಹುಟ್ಟುತ್ತಾರೆ, ಬೆಳೆಯುತ್ತಾರೆ, ಮದುವೆ-ಮನಕಾಲ ನಡೆಯುತ್ತದೆ ಇದೆಲ್ಲಾ ಆಗುವುದು ನಂಬಿಕೆಯೆಮೇಲೆಯೇ. ನಾಳೆ ಎಲ್ಲಿ ಭೂಕಂಪವಾಗುತ್ತದೆ, ಎಲ್ಲಿ ಸುನಾಮಿ ಬರುತ್ತದೆ, ಎಲ್ಲಿ ಚಂಡಮಾರುತೆ ಬೀಸುತ್ತದೆ, ಎಲ್ಲಿ ಅಪಘಾತವಾಗುತ್ತದೆ ಎಂಬುದು ಯಾರಿಗೂ ಗೋಚರವಲ್ಲ! ಯಾವ ಹೊತ್ತಿಗೆ ಜಗತ್ತಿನ ಯಾವುದೇ ಭಾಗದಲ್ಲೊ ಏನಾದರೂ ಘಟಿಸಬಹುದು ಅಲ್ಲವೇ?

ಈ ದೃಷ್ಟಿಯಿಂದ ಹೇಳುವುದಾದರೆ ಕುಕ್ಕೆಯಲ್ಲಿ ನಡೆಯುವುದೆಲ್ಲಾ ಬರೇ ಮೂಢನಂಬುಗೆ ಎಂಬ ಮಾತು ಹಾಸ್ಯಾಸ್ಪದವಾಗುವುದಿಲ್ಲವೇ? ಮಡೆಸ್ನಾನ ಬಿಡಿ ಅದು ಮೂರುದಿನದ್ದು-ಆಗುತ್ತದೋ ಹೋಗುತ್ತದೋ ಅದು ಶಾಸ್ತ್ರೋಕ್ತವೇನಲ್ಲ, ಯಾರೋ ಬ್ರಾಹ್ಮಣರು ಹೇಳಿ ಮಾಡಿದ್ದೂ ಅಲ್ಲ. ಆದರೆ ಅಸಂಖ್ಯ ಭಕ್ತರಿಗೆ ಅತಿಕಡಿಮೆ ವೆಚ್ಚದಲ್ಲಿ ನಾಗದೋಷ ಪರಿಹಾರಕ್ಕೆ ಅಲ್ಲಿ ಆಶ್ಲೇಷಾ ಬಲಿ ನಡೆಸುತ್ತಾರೆ. ಹಲವುವಿಧದ ಸೇವೆ ನಡೆಸುತ್ತಾರೆ. ವಾಸ್ತವವಾಗಿ ನಿಮ್ಮ ಧರ್ಮಸ್ಥಳವೂ ಸೇರಿದಂತೇ ಈ ಭೂಮಿಯನ್ನು ಹೊತ್ತಿರುವುದೇ ಆದಿಶೇಷ ಎಂಬ ಕಲ್ಪನೆ ಇದೆಯಲ್ಲವೇ? ಆಗಾಗ ಭೂಮಿ ಅಲ್ಲಲ್ಲಿ ಅಲ್ಲಲ್ಲಿ ಬಿರಿಯುವುದು, ಜ್ವಾಲಾಮುಖಿ ಭೋರ್ಗರೆಯುವುದು, ಭೂಮಿಯಲ್ಲಿ ವೈಜ್ಞಾನಿಕವಾಗಿ ಗುರ್ತಿಸಲ್ಪಟ್ಟ ೭ ಪ್ಲೇಟುಗಳುಗಳಲ್ಲಿ ಸ್ಥಾನದ ಹೊಂದಾಣಿಕೆಯಲ್ಲಿ ತೊಂದರೆಯಾಗಿ ಭೂಕಂಪವಾಗುವುದು ಇವೆಲ್ಲಕ್ಕೂ ಹಿಂದೆ ಯಾವ ರಹಸ್ಯವಿದೆ ಎಂಬುದನ್ನು ನಾವು ಬಲ್ಲೆವೇನು ? ಅದಕ್ಕೆ ಸಂಪೂರ್ಣ ಪರಿಹಾರ ಕೊಡಲು ನಮ್ಮಿಂದ ಸಾಧ್ಯವೇ ? ಒಂದುಕಾಲದಲ್ಲಿ ಇಡೀ ಭೂಮಂಡಲ ನಾಗಾಧಿಪತ್ಯವನ್ನೇ ಹೊಂದಿತ್ತು, ಆಮೇಲೆ ನಾಗಗಳು ಅದನ್ನು ಮಾನವರಿಗೆ ಬಿಟ್ಟುಕೊಟ್ಟವು ಎಂದಾದಾಗ ಆ ಪೂಜ್ಯ ಭಾವನೆಯಿಂದಲಾದರೂ ಅವುಗಳನ್ನು ಆರಾಧಿಸುವುದೇ ಸರಿಯೇ ಅಲ್ಲವೇ?

ಇನ್ನೊಂದು ಮಾತು ನಂಬಿಗೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ: ನೀವು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಧರ್ಮಸ್ಥಳ ಸಂಘಗಳನ್ನು ಮಾಡಿದ್ದೀರಲ್ಲ. ಅಲ್ಲಿ ನೀವು ಕೊಡುವ ಸಾಲಕ್ಕೆ ಯಾವ ಕಾಗದಪತ್ರ ಇರಲಿ ಇಲ್ಲದಿರಲಿ -ತೆಗೆದುಕೊಂಡವ ಅದನ್ನು ನಿಮಗೆ ಪೈಸಾ ಪೈಸಾ ಚುಕ್ತಾ ಕೊಡುತ್ತಾನೆ! ಯಾಕೆ ಗೊತ್ತೇ ? ಅದು ಧರ್ಮಸ್ಥಳದ ದುಡ್ಡು, ಹಾಗೇ ಇಟ್ಟುಕೊಂಡರೆ ಅಣ್ಣಪ್ಪ ಭೂತ ಹಿಡಿದುಕೊಂಡರೆ ಕಷ್ಟ! ಧರ್ಮದೇವತೆಗಳು ಕೈಬಿಟ್ಟರೆ ಕುಟುಂಬವೇ ಸರ್ವನಾಶವಾದೀತು ಎಂಬ ಭಯದಿಂದ ! ಅದೇ ನಂಬುಗೆ ನಿಮ್ಮಲ್ಲೂ ಇರುವುದಕ್ಕೇ ಜನರಿಗೆ ಹಾಗೆ ಸಾಲದ ರೂಪದಲ್ಲಿ ಹಣವನ್ನು ಒದಗಿಸುತ್ತೀರಿ. ಇಂಥದ್ದೇ ಸಾಲಕೊಡುವ ಕೆಲಸವನ್ನು ಬೇರೇಯಾರೋ ಇನ್ಯಾವುದೋ ಸಂಘದಿಂದ ಮಾಡಿದರೆ ವಸೂಲಾಗದೇ ಒದ್ದಾಡಬೇಕಾಗುತ್ತದೆ ಮಾತ್ರವಲ್ಲ ಸಾಲಕೊಟ್ಟವ ಜೀವ ಉಳಿಸಿಕೊಳ್ಳಲೂ ಪರದಾಡಬೇಕಾಗಬಹುದು!

ಜನರೂ ಕೂಡ ಬಹಳ ವಿಚಿತ್ರವಾಗಿದ್ದಾರೆ. ಜನರಿಗೆ ಮೋಜುಮಜಾ ಮಸ್ತಿಯೂ ಬೇಕು. ಮೊದಲಿನ ಹಾಗೇ ಜನರೆಲ್ಲಾ ನೈತಿಕನಿಷ್ಠೆಯವರೇ ಎಂದು ಹೇಳಲಾಗುವುದಿಲ್ಲ. ಇದಕ್ಕೆ ಉದಾಹರಣೆ: ಶ್ರೀರಾಮುಲುವಿನ ಗೆಲುವು. ಒಂದುಕಾಲಕ್ಕೆ ಏನೂ ಇರದಿದ್ದ ಹುಡುಗರಿಬ್ಬರು ರಾಜ್ಯವನ್ನೇ ಅಥವಾ ಅರ್ಧದೇಶವನ್ನೇ ಕೊಂಡುಕೊಳ್ಳುವ ಮಟ್ಟದ ಆದಾಯವನ್ನು ಪಡೆಯುತ್ತಾರೆ ಎಂದರೆ ಅದು ಎಲ್ಲಿಂದ ಹೇಗೆ ಬಂತು? ಜನರಿಗೆ ರಕ್ತ ಪರಿಚಲನೆ ಸರಿಯಾಗಿದ್ದರೆ ಮತ್ತೆ ಆ ಜಾಗಕ್ಕೆ ಗಣಿಗಳನ್ನು ನಡೆಸುವ ಯಾರನ್ನೂ ಚುನಾಯಿಸುತ್ತಿರಲಿಲ್ಲ. ಕೆಲವರಿಗೆ ತಿಳುವಳಿಕೆ ಇಲ್ಲ, ಇನ್ನು ಕೆಲವರು ಜಾತೀ ರಾಜಕಾರಣ ಮಾಡುತ್ತಾರೆ. ಶಾಸಕನೊಬ್ಬ ತಮನ್ನು ಉತ್ತಮವಾಗಿ ನೋಡಿಕೊಳ್ಳುತ್ತಾನೆ ಎಂಬುದೂ ಕೂಡ ಒಂದು ನಂಬಿಗೆ! ಶಾಸಕನಾದವನು ರಾಜ್ಯದ/ಕ್ಷೇತ್ರದ ಜನರ ಹಕ್ಕು-ಬಾಧ್ಯತೆಗಳನ್ನು ಕಾಪಾಡುವುದರ ಜೊತೆಗೆ ಆ ಕ್ಷೇತ್ರದ ಸಂಪತ್ತಿನಲ್ಲಿ ಯಾವುದೇ ಅವ್ಯವಹಾರ ಆಗದ ಹಾಗೇ ನೋಡಿಕೊಳ್ಳುವುದು ಅವನ ಕೆಲಸವಾಗಿರುತ್ತದೆ. ಆದರೆ ಇಂದಾಗುತ್ತಿರುವುದೇನು: ಕೋಟಿ ಇದ್ದವರೇ ಚುನಾವಣೆಗೆ ನಿಲ್ಲಬೇಕು, ಅವರೇ ಗೆಲ್ಲುತ್ತಾರೆ ಮತ್ತೆ ಅವರೇ ಅಕ್ರಮವಾಗಿ ಸಂಪಾದಿಸುತ್ತಾರೆ. ನೈಸರ್ಗಿಕ ಸಂಪತ್ತನ್ನು ಲೂಟಿಹೊಡೆಯುತ್ತಾರೆ.

ಈಗ ಪುನಃ ವಿಜ್ಞಾನಕ್ಕೆ ಬರೋಣ. ವೈಜ್ಞಾನಿಕವೆನಿಸಿಕೊಂಡ ಮಾರ್ಗದಲ್ಲಿ ಹೆಣ್ಣುಮಕ್ಕಳ ಸ್ತನ ಅರ್ಬುದ ಕಾಯಿಲೆಗೆ ಆಪರೇಶನ್ನೇ ಮದ್ದು. ಅಥವಾ ಇನ್ಯಾವುದೋ ಅದೇ ತೆರನಾದ ಶಾಕ್ ಚಿಕಿತ್ಸೆ. ಸಂತಾನ ನಿರೋಧಕ ಅಲೋಪಥಿಯ ಮಾತ್ರೆಗಳ ಸತತ ಸೇವನೆಯಿಂದ ಇವತ್ತಿನ ಜನಾಂಗದ ಹೆಣ್ಣುಮಕ್ಕಳಲ್ಲಿ ಸ್ತನ ಅರ್ಬುದ ರೋಗ ಕಾಣಿಸಿಕೊಳ್ಳುತ್ತದೆ. ಈ ರೋಗಕ್ಕೆ ನನಗೆ ಗೊತ್ತಿರುವ ಆಯುರ್ವೇದ ವೈದ್ಯರೊಬ್ಬರು ಅದ್ಭುತ ಪರಿಹಾರ ನೀಡುತ್ತಾರೆ. ಕಾಯಿಲೆ ಆಪರೇಶನ್ ಇಲ್ಲದೇ ವಾಸಿಯಾಗುತ್ತದೆ. ೩೦೦೦ ವರ್ಷಗಳ ಇತಿಹಾಸವಿರುವ ಆಯುರ್ವೇದ ನಮ್ಮ ಆಧುನಿಕ ವಿಜ್ಞಾನಿಗಳು ಹುಟ್ಟುವ ಮೊದಲೇ ಇತ್ತಲ್ಲಾ ? ಅದು ಅವೈಜ್ಞಾನಿಕ ಎನ್ನುತ್ತೀರೋ ?

ನಿಜವಾಗಿಯೂ ಈಗ ಹೇಳಿ ಯಾವುದು ನಂಬಿಗೆಯೆ ಮೇಲೆ ನಡೆಯುತ್ತಿಲ್ಲ? ನಡೆಯುವ ಎಲ್ಲಾ ಕೆಲಸಕ್ಕೂ ವೈಜ್ಞಾನಿಕ ತಳಹದಿ ಇದೆಯೇ ? ಜವಾಬ್ದಾರಿಯ ಜಾಗದಲ್ಲಿದ್ದು ಬರಿದೇ ಹಾಗ್ಯಾಕೆ ಇಲ್ಲದ್ದನ್ನು ಹೇಳುತ್ತೀರಿ ? ಮಡೆಸ್ನಾನವನ್ನು ಬಿಡಿ, ಕುಕ್ಕೆಯ ಮಿಕ್ಕಿದ ಕೆಲಸಕ್ಕೂ ಸೇರಿದಂತೇ ನೀವು ಹೇಳಿದ ಮಾತು ಸ್ವೀಕಾರಾರ್ಹವಲ್ಲ. ಅದು ನನ್ನಂತಹ ಕೆಲವರ ಅನಿಸಿಕೆಯಾದರೂ ಪರವಾಗಿಲ್ಲ.