![](https://blogger.googleusercontent.com/img/b/R29vZ2xl/AVvXsEixNpKRCAjeQB8YFIS4jBrb5JYkud7Ptckjh803IojQrHtSMGqO0sG1AQ1VxUoXl7iweOxjjGeiRoQy7yFFCWqgelaGFli4jNmuY19BW0bnrHxFThEA4t6oPb9Kf545CPlddg8kbmH9-jM/s320/g-janardhan-reddy.jpg)
ಒದರಿದನು ತಾಂ 'ಕೃಷ್ಣರಾಯುಡು' ವಿಜಯನಗರಧಿಪ !!
[ನಾಕಾರು ದಿನ ಕೆಲವರನ್ನು ಹೀಗೇ ಸ್ತುತಿಸೋಣ ಎಂಬ ತುಂಬುಹೃದಯದ ಹಂಬಲದಿಂದ ಮೊದಲನೆಯದಾಗಿ ಇಂದು ಜನಾರ್ದನ ಭಜನೆ!]
ಗದರಿದನು ಗಣಿರಾಯನುದಯಿಸಿ
ಹೆದರಿಸುತ ಹಲವರನು ಹಣದೊಳು
ಒದರಿದನು ತಾಂ ’ಕೃಷ್ಣರಾಯುಡು’ ವಿಜಯನಗರಧಿಪ !!
ಸದರಿ ಮಾನವ ಹುದುಗಿ ನಿಧಿಗಳ
ಬದರಿನಾರಾಯಣನ ಮೀರಿಸೆ
ಚದುರಿನಿಂತನು ರಾಜಕೀಯದ ಬಿದಿರು ಬೊಂಬೆಗಳ !
ಎದುರು ಜಾವದ ಮೂರುಗಂಟೆಗೆ
’ಖದರು’ ವೇಷವದೈದು ಕೋಟಿದು
ನಿದಿರೆ ತೊರೆದರು ನೆಂಟರಿಷ್ಟರು ಅದನು ನೋಡುವೊಲು !
ಮಧುರ ನುಡಿಗಳ ಕೇಳಿ ವಿನಯದಿ
ಅಧರವಾಡದೆ ಶರಣು ನಿಂದರು
ಪದರಪದರದಿ ಕಾಸನಿರಿಸಿದ ದೊರೆಗೆ ವಂದಿಸುತ !!
ಗೆದರಿ ದಾಖಲೆ ಕಾಗದಂಗಳ
ಮುದುರಿ ಸಿಬಿಐ ಜನಂಗಳು
ಉದಯನುದಿಸುವ ಮೊದಲೆ ಹಾಜರು ಬದಲಿ ಗುರುತಿನಲಿ !
ಮದಿರೆ ಮಾನಿನಿ ಹಣದ ಥೈಲಿಯ
ಉದುರಿಸಿದರದನೊಲ್ಲೆನೆಂದರು
ಅದಿರು ದಂಧೆಯ ಪ್ರಮುಖ ಕುಳವನು ಹದನೆ ಕರೆದೊಯ್ದು !!
ಉದರ ಭರ್ತಿಗೆ ಎದುರು ಖರ್ಚಿಗೆ
ಮೊದಲಿರುವ ಮೂವತ್ತು ಸಾವಿರ
ಅದರಲೇ ಅತಿಕಡಿಮೆ ಬಳಸುತ ಸರಳ ತಾನೆಂದ !
ಕುದುರದಾಯಿತು ಯಾವ ಆಮಿಷ
ಕುದುರೆಗಳು ಮಾರಾಟಗೊಳ್ಳವು
ಬೆದರಿನಿಂದನು ಕಂಬಿಯೆಣಿಸುತ ತಾ ಜನಾರ್ದನನು !!