ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, September 13, 2011

ಒದರಿದನು ತಾಂ 'ಕೃಷ್ಣರಾಯುಡು' ವಿಜಯನಗರಧಿಪ !!


ಒದರಿದನು ತಾಂ 'ಕೃಷ್ಣರಾಯುಡು' ವಿಜಯನಗರಧಿಪ !!

[ನಾಕಾರು ದಿನ ಕೆಲವರನ್ನು ಹೀಗೇ ಸ್ತುತಿಸೋಣ ಎಂಬ ತುಂಬುಹೃದಯದ ಹಂಬಲದಿಂದ ಮೊದಲನೆಯದಾಗಿ ಇಂದು ಜನಾರ್ದನ ಭಜನೆ!]

ಗದರಿದನು ಗಣಿರಾಯನುದಯಿಸಿ
ಹೆದರಿಸುತ ಹಲವರನು ಹಣದೊಳು
ಒದರಿದನು ತಾಂಕೃಷ್ಣರಾಯುಡುವಿಜಯನಗರಧಿಪ !!
ಸದರಿ ಮಾನವ ಹುದುಗಿ ನಿಧಿಗಳ
ಬದರಿನಾರಾಯಣನ ಮೀರಿಸೆ
ಚದುರಿನಿಂತನು ರಾಜಕೀಯದ ಬಿದಿರು ಬೊಂಬೆಗಳ !

ಎದುರು ಜಾವದ ಮೂರುಗಂಟೆಗೆ
ಖದರುವೇಷವದೈದು ಕೋಟಿದು
ನಿದಿರೆ ತೊರೆದರು ನೆಂಟರಿಷ್ಟರು ಅದನು ನೋಡುವೊಲು !
ಮಧುರ ನುಡಿಗಳ ಕೇಳಿ ವಿನಯದಿ
ಅಧರವಾಡದೆ ಶರಣು ನಿಂದರು
ಪದರಪದರದಿ ಕಾಸನಿರಿಸಿದ ದೊರೆಗೆ ವಂದಿಸುತ !!

ಗೆದರಿ ದಾಖಲೆ ಕಾಗದಂಗಳ
ಮುದುರಿ ಸಿಬಿಐ ಜನಂಗಳು

ಉದಯನುದಿಸುವ ಮೊದಲೆ ಹಾಜರು ಬದಲಿ ಗುರುತಿನಲಿ !
ಮದಿರೆ ಮಾನಿನಿ ಹಣದ ಥೈಲಿಯ
ಉದುರಿಸಿದರದನೊಲ್ಲೆನೆಂದರು
ಅದಿರು ದಂಧೆಯ ಪ್ರಮುಖ ಕುಳವನು ಹದನೆ ಕರೆದೊಯ್ದು !!

ಉದರ ಭರ್ತಿಗೆ ಎದುರು ಖರ್ಚಿಗೆ
ಮೊದಲಿರುವ ಮೂವತ್ತು ಸಾವಿರ
ಅದರಲೇ ಅತಿಕಡಿಮೆ ಬಳಸುತ ಸರಳ ತಾನೆಂದ !
ಕುದುರದಾಯಿತು ಯಾವ ಆಮಿಷ
ಕುದುರೆಗಳು ಮಾರಾಟಗೊಳ್ಳವು
ಬೆದರಿನಿಂದನು ಕಂಬಿಯೆಣಿಸುತ ತಾ ಜನಾರ್ದನನು !!