ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, April 4, 2010

ಕನ್ನಡಮ್ಮನ ಕೈತುತ್ತು ನೆನೆದು

ಆಗಾಗ ನಾವು ಮಾಡಬೇಕಾದ ಕರ್ತವ್ಯಗಳಲ್ಲಿ ಕನ್ನಡಮ್ಮನ ನೆನಪೂ ಒಂದು. ನಮ್ಮಿಂದ ಏನನ್ನೂ ಕೇಳದ ತಾಯಿ ನಮಗೆಲ್ಲವನ್ನೂ ಕೊಡುತ್ತಲೇ ಇರುತ್ತಾಳೆ. ತಾಯಿಗೆ ತನ್ನ ಮಗಿವಿನ ಮೇಲೆ ಅದಮ್ಯ ಆಸೆ, ಬಿಟ್ಟಿರಲಾರದ ಪ್ರೀತಿ, ನಿರ್ವ್ಯಾಜ-ನಿಷ್ಕಳಂಕ ಹೊಕ್ಕುಳ ಬಳ್ಳಿಯ ಮೋಹದ ಹರಹು. ತಾಯಿ ಎಂದಿಗೂ ಮಗುವನ್ನು ಮರೆಯುವುದಿಲ್ಲ, ಒಮ್ಮೆ ಹೆತ್ತಮೇಲೆ ಅದು 100 % RECORDED IN MIND ! ಮಗು ಕುಂಟೋ-ಕುರುಡೋ-ಮೂಕವೋ-ಬುದ್ಧಿಮಾಂದ್ಯವೋ ಅದಕ್ಕಾಗಿ ಮಗುವನ್ನು ತೊರೆಯುವುದಿಲ್ಲ. ಎಷ್ಟೋ ಮಕ್ಕಳು ಪೋಲಿಯೋ ಆಗಿ ಬಳಲುತ್ತಿದ್ದರೂ ತಾಯಿ ತಾನು ಮುದುಕಾಗಿ ದೇಹ ಬಿಡುವವರೆಗೂ ಪ್ರೀತಿಯಿಂದ ಪೊರೆದಿದ್ದನ್ನು, ಹೊತ್ತು ಹೊತ್ತಿಗೆ ಅವರ ಬೇಕುಬೇಡಗಳನ್ನು ಕೇಳಿ ತಿಳಿದು ಪೂರೈಸಿದ್ದನ್ನು ನೋಡಿದ್ದೇನೆ, ನೋಡುತ್ತಿದ್ದೇನೆ. ಇಂತಹ ಅಮ್ಮ ತನಗೇ ಹಸಿವಿದ್ದರೂ, ಆರೋಗ್ಯ ಕೆಟ್ಟಿದ್ದರೂ ತನ್ನ ಮಗು ಮಾತ್ರ ಉಂಡುಟ್ಟು ಸುಖವಾಗಿರಲಿ ಎಂದು ಬಯಸುತ್ತಾಳೆ,ಹಾರೈಸುತ್ತಾಳೆ, ಹರಸುತ್ತಾಳೆ , ತನ್ನಿಂದ ಆಗುವ ಸರ್ವ ಪ್ರಯತ್ನ ಮಾಡುತ್ತಾಳೆ. ಮಗು ದೊಡ್ಡದಾಗಿ ೫೦ ವರ್ಷವಾದರೂ ತಾಯಿಗೆ ಇನ್ನೂ ಅದು ಮಗುವೇ ! ಆ ಹಸಿ ಹಸಿ ಪ್ರೀತಿಯನ್ನು ಅವಳು ತೊಡೆದುಹಾಕುವುದೇ ಇಲ್ಲ. ಇಂತಹದೇ ಪ್ರೀತಿ ನಮ್ಮ ಕನ್ನಡಮ್ಮನದು, ಅಲ್ಲಿ ಹೇಳಲು ಬಾಯಿಲ್ಲ, ಹರಸಲು ಕಾಣುವ ಕೈಯಿಲ್ಲ, ಆದರೆ ಎಲ್ಲವೂ ಅವ್ಯಕ್ತ, ಆ ಅವ್ಯಕ್ತದಲ್ಲೇ ಆನಂದ ಕೊಡುವ ಪರಿ ಅದ್ಭುತ, ಶಾಶ್ವತ, ಚಿರಂತನ, ಚಿರನೂತನ. ಅಂತಹ ಹೆತ್ತ ಕನ್ನಡಮ್ಮ ಕೊಡುತ್ತಿರುವ ಕೈತುತ್ತನ್ನು ನೆನೆಸಿ ಬರೆದೆ, ನಿಮಗರ್ಪಿಸಿದೆ ಇಗೋ ಸ್ವೀಕರಿಸಿ ಈ ಹಾಡು--




ಕನ್ನಡಮ್ಮನ ಕೈತುತ್ತು ನೆನೆದು


ಕನ್ನಡ ಜನತೆಯ ಮನವನು ತಣಿಸಲು
ನನ್ನಾಸೆಯ ಕೃತಿ ಬರೆದಿಹೆನು
ಮುನ್ನಡೆಸಿರಿ ನೀವ್ ಬಂಧುಗಳೆಲ್ಲರು
ಉನ್ನತ ದಿನವನು ಬಯಸಿಹೆನು

ರನ್ನ ಷಡಕ್ಷರಿ ಪಂಪ ಹರಿಹರರು
ಕಣ್ಣತೆರೆಸಿದರು ಅಂದಿನಲಿ
ಜನ್ನ ಲಕುಮಿಪತಿ ಪೊನ್ನ ಮುದ್ದಣರು
ಮುನ್ನ ಬರೆದರದೋ ಪ್ರೀತಿಯಲಿ

ಅನುಕೂಲದಿ ಅರೆಗಳಿಗೆಯ ಎತ್ತಿಡಿ
ಮನೆವಾರ್ತೆಯ ಜೊತೆ ಅನುದಿನವು
ಇನಕುಲೇಂದ್ರನೋಲೈಸುತ ಬೆಳಗಿರಿ
ಮನುಕುಲಕಾಗುವ ಸುಪಥವನು

ಅನ್ನವೀಯುತಲಿ ಪೊರೆದೀ ಕನ್ನಡ
ಅನ್ಯ ಭಾಷೆಗಿಂತಲು ಮಿಗಿಲು
ಮಾನ್ಯಮಾಡಿ ನಿಮ್ಮೆದೆಗೂಡಲಿ ತುಸು
ನನ್ನೀ ಅಮ್ಮನ ಸುಖಮಡಿಲು

ವನರಾಶಿಯ ಸಹ್ಯಾದ್ರಿಯ ಶ್ರೇಣಿಯ
ಘನ ಖನಿಜದ ನಿಕ್ಷೇಪಗಳ
ಅನವರತವು ಕಾಪಿಡಿ ಕೊಲೆಗೈಯ್ಯದೆ
ಜನಕೀಯಲಿ ಸುಖ ಭೋಗಗಳ

ಕನವರಿಸಿದೆ ನಾ ಮುಂದಿನ ದಿನಗಳ
ಧನ-ಕನಕೇತರ ಕಣಜಗಳ
ಕೆನೆ ಹಾಲ್ಮೊಸರು ತುಪ್ಪ ಜೇನುಗಳ
ಕೊನೆಯಿರದಿರಲೀ ಊಟಗಳ

ಜನಸಂಪದವದು ಹರುಷದಿ ನಲಿಯಲಿ
ಮನದುಂಬುತ ಈ ಕೃತಿಗಳನು
ವನಸಿರಿಯದ ಶಾಶ್ವತವಿಡೆ ಜಗದಲಿ
ಕನಸದು ನನಸೆಂದೆನ್ನುವೆನು