ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, December 24, 2010

ಕಾಮ-ರಾಜ-ರಾಣಿ ಮಾರ್ಗಕ್ಕೆ ಮಿತಿಯಿಲ್ಲವೇ ?

ಚಿತ್ರ ಋಣ : ಅಂತರ್ಜಾಲ

ಕಾಮ-ರಾಜ-ರಾಣಿ ಮಾರ್ಗಕ್ಕೆ ಮಿತಿಯಿಲ್ಲವೇ ?
[ಅನ್ ಫೋಲ್ಡೆಡ್ ಲೈಫ್ ಸ್ಟೈಲ್ ಆಫ್ ನ್ಯೂ ಎರಾ]

ಮೊದಲಾಗಿ ಕ್ರೈಸ್ತ ಬಾಂಧವರಿಗೆ ಕ್ರಿಸ್ ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು.

ಹಲವು ಮಾಧ್ಯಮಗಳಲ್ಲಿ ನಾವು ಇಂದು ಸಂವಹಿಸುತ್ತೇವೆ. ಸಂವಹಿಸಲು ನಮಗೆ ತ್ವರಿತಗತಿಯ ಮಾಧ್ಯಮಗಳಾದ ಜಂಗಮ ದೂರವಾಣಿ ಹಾಗೂ ಅಂತರ್ಜಾಲಗಳು ಉಪಯುಕ್ತವಾಗಿವೆ. ಆದರೆ ಇದೇ ತಂತ್ರಜ್ಞಾನ ನಮ್ಮ ಬುದ್ಧಿಗೆ ಹಲವೊಮ್ಮೆ ಮಂಕನ್ನೂ ಕವಿಸುತ್ತದೆ. ಅದರಲ್ಲಂತೂ ಹದಿಹರೆಯದವರಿಗೆ ಮತ್ತು ಪಾತರಗಿತ್ತಿಯ ಸ್ವಭಾವದವರಿಗೆ ಈ ಮಾಧ್ಯಮಗಳು ಬಹಳ ಉತ್ತೇಜಕವಾಗಿವೆ. ಬೇಕೋ ಬೇಡವೋ ಕಾರಣಗಳೂ ಇಲ್ಲದೇ ’ಸೋಶಿಯಲ್ ನೆಟ್‍ವರ್ಕ್ ನೆಪದಲ್ಲಿ ಹಲವರು ಸ್ನೇಹಿತರಾಗುತ್ತಾರೆ. ಕೆಲವರಂತೂ ಸ್ನೇಹಬಯಸುವುದೇ ಒಳ ಉದ್ದೇಶಕ್ಕಾಗಿ ! ಮನುಷ್ಯನ ಸಹಜ ಸ್ವಭಾವ ರೂಪಕ್ಕೆ ಮರುಳಾಗುವುದು. ಇದಕ್ಕೆ ಅಪವಾದಗಳು ಇರಬಹುದು ಆದರೆ ಇದಕ್ಕೆ ಬಲಿ ಬೀಳುವವರೇ ಜಾಸ್ತಿ. ಹೀಗೇ ಹುಡುಗ-ಹುಡುಗಿ ಪರಸ್ಪರ ಅಂತರ್ಜಾಲದ ಮೂಲಕ ಪರಿಚಿತರಾಗುತ್ತಾರೆ. ವಾಸ್ತವದಲ್ಲಿ ಅವರಿಗೆ ಪರಸ್ಪರರ ಬಗ್ಗೆ ಜಾಸ್ತಿ ತಿಳಿದಿರುವುದಿಲ್ಲ. ದೂರದಲ್ಲೆಲ್ಲೋ ಇದ್ದೂ ಅತೀ ಹತ್ತಿರವೇನೋ ಎಂಬ ಭ್ರಮೆ ಹುಟ್ಟಿಸುವ ಈ ತಾಣಗಳ ಮೂಲಕ ಬಾಂಧವ್ಯ ಬೆಸೆಯುತ್ತದೆ. ಸ್ನೇಹ ಹಲವೊಮ್ಮೆ ಕ್ರಮೇಣ ಪ್ರೇಮಕ್ಕೆ ತಿರುಗುತ್ತದೆ. ಜಂಗಮದೂರವಾಣಿಗಳ ಸಂಖ್ಯೆ ವಿನಿಮಯವಾಗುತ್ತದೆ. ಶುರುವಾಯ್ತು ತಕಳಿ ಮಾರನೇ ಆ ಕ್ಷಣದಿಂದಲೇ ಎಸ್.ಎಮ್.ಎಸ್ ಮತ್ತು ಕಾಲ್ ಮಾಡಲು !

ಎಷ್ಟೋ ಸರ್ತಿ ಹುಡುಗ-ಹುಡುಗಿಯರು ತಮ್ಮ ಸಂಪರ್ಕದ ಈ ಕೊಂಡಿಗಳನ್ನು ಮನೆಯವರಿಗಾಗಲೀ ಆಪ್ತ ಸ್ನೇಹಿತರಿಗಾಗಲೀ ತಿಳಿಸುವುದೇ ಇಲ್ಲ. ಇದಕ್ಕೆ ಪೂರಕವಾಗಿ ’ಮೊಬೈಲ್ ಡೇಟಿಂಗ್’ ಎಂಬ ವ್ಯವಸ್ಥೆ, ಅಂತರ್ಜಾಲದ ಹಲವು ತಾಣಗಳ ಮೂಲಕ, ವೈವಾಹಿಕ ಸಂಪರ್ಕತಾಣಗಳ ಮೂಲಕ ಡೇಟಿಂಗ್ ವ್ಯವಸ್ಥೆಗೆ ಬೆಂಬಲ ದೊರೆಯುತ್ತದೆ. ಟೈಮ್ಸ್ ಆಫ್ ಇಂಡಿಯಾ ಥರದ ಪತ್ರಿಕೆಕೂಡ ಕೆಲವುಸಮಯ ಡೇಟಿಂಗ್ ವ್ಯವಸ್ಥೆ ನಡೆಸುತ್ತಿತ್ತು. ಅದರ ಅಂಗಸಂಸ್ಥೆಗಳಲ್ಲಿ ಇಂದಿಗೂ ಈ ಸೌಲಭ್ಯಗಳು ಲಭ್ಯವಿವೆ. ಹಾಗಾದರೆ ನಮಗೆಲ್ಲಾ ಈ ಸೌಲಭ್ಯ ಬೇಕೇ ? ಭಾರತೀಯ ಉಚ್ಚ ಸಂಸ್ಕೃತಿಯ ತಳಹದಿಯಾದ ಕೌಟುಂಬಿಕ ವ್ಯವಸ್ಥೆಯನ್ನೇ ಬುಡಮೇಲುಮಾಡುವ ಇಂತಹ ವ್ಯವಸ್ಥೆಗಳು ನಮಗೆ ಅನಿವಾರ್ಯವೇ ? ಕೇಳುವವರಾರು? ಅಮೇರಿಕಾದಂಥ ಮುಂದುವರಿದ ರಾಷ್ಟ್ರ ಮಾಡುತ್ತಿದೆ ಅಂತ ನಾವೂ ಮಾಡುತ್ತೇವೆಯೇ ಹೊರತು ಅದರಲ್ಲಿ ಹುರುಳಿದೆಯೇ ಅಥವಾ ಅದರ ಸಾಧಕಬಾಧಕಗಳೇನು ಎಂಬುದರ ಬಗ್ಗೆ ನಮಗೆ ಅರಿವಾಗದಲ್ಲ.

ತೀರಾ ಫ್ಯಾಶನ್ ಪ್ರಿಯರಾದ ನಮ್ಮ ಯುವಪೀಳಿಗೆಯಲ್ಲಿ ಪರಸ್ಪರರ ದಿರಿಸುಗಳು ಬಹಳ ಕಾಮೋದ್ದೀಪಕವಾಗಿ ಪಾರದರ್ಶಕವೆಲ್ಲಾ ’ಅಪಾರ’ದರ್ಶಕವಾಗಿ ಕಣ್ಣುಕೋರಿಸುತ್ತಿರುವ ಈ ದಿನಗಳಲ್ಲಿ ಹುಡುಗಿಯರಿಗೆ ವಿದ್ಯಾಲಯಗಳಲ್ಲಿ ’ಇಂಥದ್ದನ್ನು ಧರಿಸಬೇಡಿ’ ಎನ್ನುವಹಾಗಿಲ್ಲ !ಅವರು ಆಡಿದ್ದೇ ಆಟವಾಗಿ, ಪಾಲಕರಿಗೂ ಅದು ನುಂಗಲಾರದ ತುತ್ತಾಗಿ ಹಲವೊಮ್ಮೆ ಹುಡುಗರ ವಿಕೃತ ಮನೋಸ್ಥಿತಿಗೆ ಪರ್ಯಾಯ ಕಾರಣ ಇದೇ ಎಂದರೆ ತಪ್ಪಾಗಲಾರದೇನೋ. ಕಾಲ ಹೇಗಿದೆಯೆಂದರೆ ಅಸಲಿಗೆ ಯಾರು ಹುಡುಗಿಯರು ಮತ್ತು ಯಾರು ಮದುವೆಯಾದ ಹೆಂಗಸರು ಎಂದು ಹುಡುಕಬೇಕಾದ ಕಾಲ ಒದಗಿಬಂದಿದೆ. ಹಿಂದೆ ಹೆಣ್ಣು ದುಡಿಯದಿದ್ದಾಗ, ಜಾಸ್ತಿ ತಿರುಗದಿದ್ದಾಗ ಕೌಟುಂಬಿಕ ವ್ಯವಹಾರಗಳಲ್ಲಿ ಇಷ್ಟೊಂದು ವೈಷಮ್ಯ ಕಂಡುಬರುತ್ತಿರಲಿಲ್ಲ. ಆದರೆ ಇಂದು ಹೆಣ್ಣು ತಿರುಗುತ್ತಾಳೆ, ಅಲ್ಲಿ ಇಲ್ಲಿ ಕಛೇರಿಗಳಲ್ಲಿ ಕೆಲಸಮಾಡುತ್ತಾಳೆ, ಅಲ್ಲೆಲ್ಲೋ ಆಕೆ ಯಾರದೋ ಕೃಪೆಗೋ ಅವಕೃಪೆಗೋ ಪಾತ್ರಳಾಗುತ್ತಾಳೆ. ಬೇಕಾಗಿಯೋ ಬೇಡದೆಯೋ ಇಲ್ಲದ ಸಂಬಂಧಗಳು ಹುಟ್ಟುಕೊಳ್ಳುತ್ತವೆ!

ಮನುಷ್ಯ ಸಂಬಂಧಗಳು ಕೂದಲೆಳೆಗಿಂತಾ ಸೂಕ್ಷ್ಮವಲ್ಲವೇ? ಕೇಳಿಪಡೆದರೆ ಅದು ಪ್ರೀತಿಯಿಂದ ನೀಡಿದ್ದೆನಿಸಿದರೆ ಕಸಿದು ಪಡೆದರೆ ಅದು ಬಲಾತ್ಕಾರವಾಗುತ್ತದೆಯಷ್ಟೇ? ಯಾವುದನ್ನು ಕೇಳಿಪಡೆಯಲು ಸಾಧ್ಯವಿಲ್ಲವೋ ಅದು ಬಲಾತ್ಕಾರಕ್ಕೆ ಕುಮ್ಮಕ್ಕು ಕೊಡಲು ಮುಂದಾಗುತ್ತದೆ. ಕೆಲವೊಮ್ಮೆ ಕಾರಣಾಂತರಗಳಿಂದ ಬಲಾತ್ಕಾರ ನಡೆಯುವುದು ಬಹಿರಂಗಗೊಳ್ಳದಿದ್ದರೆ ಇನ್ನು ಕೆಲವೊಮ್ಮೆ ಒಮ್ಮೆ ನಡೆದ ಘಟನೆಗೇ ಅಂಟಿಕೊಂಡ ಮನಸ್ಸು ಮತ್ತದನ್ನೇ ಅನಿವಾರ್ಯವೆನ್ನುವಂತೇ ಒಪ್ಪಿಕೊಳ್ಳುವ ಸ್ಥಿತಿಯೂ ಇರುತ್ತದೆ! ಈ ವಿಷಯದಲ್ಲಿ ಚಲನಚಿತ್ರ ರಂಗದವರಂತೂ ಬಹಳವಾಗಿ ನಾರುತ್ತಾರೆ! ತಾವು ಮಾಡುವ ತಪ್ಪನ್ನು ಮುಚ್ಚಲಿಕ್ಕೆ ಹಲವು ದಾರಿಗಳನ್ನು ಅನುಸರಿಸುತ್ತಾರೆ. ಕೊನೆಗೂ ಹೆಜ್ಜೆ ತಪ್ಪಿದ ಬದುಕಿನ ಛಾಯೆ ಅವರ ಮನಗಳಲ್ಲಿ ಅಚ್ಚಳಿಯದೇ ನಿಲ್ಲುತ್ತದೆ.

ಇನ್ನು ಎಷ್ಟೋ ಹುಡುಗ-ಹುಡುಗಿಯರಿಗೆ ಪ್ರೀತಿಸುವುದೇ ಒಂದು ಮಜಾತೆಗೆದುಕೊಳ್ಳುವ ಆಟವಾಗಿ ಪರಿಣಮಿಸಿದೆ. ಒಬ್ಬೊಬ್ಬರೂ ನಾಲ್ಕೈದು ಅಥವಾ ಹೆಚ್ಚು ಸಂಬಂಧಗಳನ್ನು ಇಟ್ಟುಕೊಳ್ಳುತ್ತಿರುವುದು, ಒಬ್ಬರಾದಮೇಲೆ ಒಬ್ಬರೆಂಬಂತೇ ಅವರನ್ನು ಕಣಕ್ಕೆ ಬಿಟ್ಟುಕೊಳ್ಳುವುದು, ಬೇಸರವಾದಾಗ ಅವರನ್ನು ಕಿತ್ತೆಸೆಯುವುದು ಕಂಡುಬರುತ್ತಿರುವ ಅಂಶವಾಗಿದೆ. ಈ ಮಧ್ಯೆ ಕೆಲವರು ನಿಜವಾಗಿಯೂ ಹುಚ್ಚು ಪ್ರೀತಿಯ ಆಳಕ್ಕೆ ಇಳಿದು ತಮ್ಮನ್ನೇ ಕೊಟ್ಟುಕೊಂಡು ತಮ್ಮ ಸಂಗಾತಿ ಇಲ್ಲದಿದ್ದರೆ ತಮಗೆ ಬದುಕಲೇ ಸಾಧ್ಯವಿಲ್ಲ ಎಂಬಂತಿರುತ್ತಾರೆ. ಹುಡುಗನೊಬ್ಬನನ್ನು ಪ್ರೀತಿಸಿ ಮಂಗಳೂರಿನತನಕ ವಿಮಾನದಲ್ಲಿ ಹೋಗಿ, ಅಲ್ಲೇ ಆರ್ಯಸಮಾಜದಲ್ಲಿ ಮದುವೆಯಾದ ಹುಡುಗಿ ಕೆಲವೇ ದಿನಗಳಲ್ಲಿ ಮರಳಿಬಂದು ಪಾಲಕರನ್ನು ಸೇರಿಕೊಂಡು " ಸ್ನೇಹಿತನಾಗಿದ್ದ ನೀನು ನನ್ನನ್ನು ಗನ್ ಪಾಯಿಂಟ್‍ನಲ್ಲಿ ಹೆದರಿಸಿ ಮದುವೆಯಾಗು ಅಂತ ಹೇಳಿದೆ, ನನಗಿಷ್ಟವಿರದಿದ್ದರೂ ನಿನ್ನನ್ನು ಮದುವೆಯಾದೆ " ಎನ್ನುತ್ತಾಳೆ. ಹುಡುಗ "ಕೂಡಲೇ ಮದುವೆಯಾಗದಿದ್ದರೆ ನನಗೆ ಜೀವಸಹಿತ ಇರಲಿಕ್ಕೇ ಬೇಜಾರು " ಅಂತಿದ್ಲು ಅಂತಾನೆ. ಅಂದರೆ ಈ ಮಧ್ಯೆ ಯಾರದು ತಪ್ಪು ಯಾರದು ಒಪ್ಪು? ಸರ್ಕಾರದ ಉಚ್ಚ ನ್ಯಾಯಲಯದಲ್ಲೇ ಪ್ರೀತಿಸಿ ಮದುವೆಯಾಗಲಿಲ್ಲ ಎಂಬ ಕಾರಣಕ್ಕಾಗಿ ವಕೀಲನೊಬ್ಬ ವಕೀಲೆಯನ್ನು ಕೊಂದುಹಾಕಿದ್ದಾನೆ! ಎಲ್ಲಾ ಬರೀ ಡಂಭಾಚಾರದ ಪ್ರೀತಿ ಮತ್ತು ದೈಹಿಕ ಆಕರ್ಷಣೆಯೇ ಹೊರತು ಇದರಲ್ಲಿ ಲವಲೇಶವೂ ಪ್ರೀತಿ ಇರಲಿಲ್ಲ ಎನಿಸುವುದಿಲ್ಲವೇ ? ಇವತ್ತಿನ ದಿನ ಕಾಲೇಜು ಓದುವ ಹುಡುಗ-ಹುಡುಗಿಯರು ಪಾಲಕರ ಕಣ್ತಪ್ಪಿಸಿ ಎಲ್ಲೆಲ್ಲೋ ಸುತ್ತಾಡುವುದುದಂತೂ ನಮಗೆ ತಿಳಿದೇ ಇದೆ, ಆದರೆ ಅಂತರ್ಜಾಲದ ಪ್ರೀತಿಯ ಬಲೆಯಲ್ಲಿ ಸಿಲುಕಿ ಕಾಣದ ಪ್ರದೇಶದ ಹುಡುಗ-ಹುಡುಗಿ ಪರಸ್ಪರ ಹತ್ತಿರವಾಗುವುದು, ’ಅಗಲಿರಲಾರೆ’ ಎನ್ನುವುದು ಯಾವ ವ್ಯಾಮೋಹ ಹೇಳಿ ?

ಈ ವಿಷಯದಲ್ಲಿ ಮದುವೆಯಾದ ಗಂಡಸರಾಗಲೀ ಹೆಂಗಸರಾಗಲೀ ಹೊರತಾಗಿಲ್ಲ. ನಿಜಕ್ಕೂ ಹೇಳಬೇಕೆಂದರೆ ಕೆಲವರಿಗೆ ಇಂತಹ ವ್ಯವಸ್ಥೆಯ ಅವಶ್ಯಕತೆಯಿತ್ತು ಅನಿಸುತ್ತದೆ. ಎರಡು ಮೂರು ಮಕ್ಕಳಿರುವ ಹೆಂಗಸರು ಮತ್ತು ಗಂಡಸರು ಪರಸ್ಪರ ಪ್ರೇಮಪಾಶದಲ್ಲಿ ಬೀಳುವುದು ಬಾಹ್ಯ ಸೌಂದರ್ಯಕ್ಕಲ್ಲದೇ ಮತ್ತಿನ್ನೇನು? ಎಷ್ಟೋ ಹೆಂಗಸರಿಗೆ ಗಂಡನ ಒಳ್ಳೆಯತನದ ಬಗ್ಗೆ ಗೊತ್ತಿದ್ದರೂ ಅವನನ್ನು ಬಿಡಲಾಗದಿದ್ದರೂ ಕಾಮದ ತೆವಲು, ಹತ್ತಿಕ್ಕಲಾಗದ ಕಾಮದ ತುಡಿತಕ್ಕೆ ಇನ್ನೊಬ್ಬ ಗಂಡಸು ಬೇಕು ಎಂದರೆ ನಂಬುತ್ತೀರಾ? ಮೈಮಾಟವನ್ನೇ ನೋಡಿ ಮನಸೋಲುವ ಗಂಡಸರಿಗೆ ತಮ್ಮತ್ತ ವಾಲಿ ತಮ್ಮ ತೆವಲಿಗೆ ಸಿಗುವ ಎಲ್ಲಾ ಹುಡುಗಿಯರೂ ಬೇಕಾಗಬಹುದಾದ ಮನೋಸ್ಥಿತಿ! ಎಲ್ಲರೂ ಹಾಗೇ ಅಂತಲ್ಲ, ಆದರೆ ಅನೇಕರು ಹೀಗೇ ಇದ್ದಾರೆ, ಇರುತ್ತಾರೆ. ಈ ಅಸಡ್ಡೆಯ ಕಾಮತೃಷೆಯ ಉರಿಯನ್ನು ಹೆಚ್ಚಿಸುವುದು ಅರ್ಧಂಬರ್ಧ ತೋರಿಸುವ ದೃಶ್ಯಗಳು, ಆಲ್ಕೋಹಾಲು, ಲೈವ್ ಬ್ಯಾಂಡು, ಹಲವು ಚಲನಚಿತ್ರಗಳು ಮತ್ತು ಇಂದಿನ ಕನಿಷ್ಠ ಉಡುಪಿನ ಬಳಕೆಯ ಆಂದೋಲನ! ಕನಿಷ್ಠ ಉಡುಪು ಬಳಸುವ ಆಂದೋಲನಕ್ಕೆ ಯಾರು ಗುರುವೋ ಗೊತ್ತಿಲ್ಲ. ಹಾಗೊಮ್ಮೆ ನೋಡಿದರೆ ಇಂತಹದಕ್ಕೆ ಗುರುವಿನ ಅವಶ್ಯಕತೆಯೇ ಇಲ್ಲ.

ಅಂತರ್ಜಾಲದಲ್ಲಿ ಸಿಗುವ ಕಾಮಾದಾಟದ ತಾಣಗಳಿಗೆ ಎಳೆಯ ಹುಡುಗರು ಲಗ್ಗೆಇಡುತ್ತಾರೆ. ಗಂಡಸರು ಹೆಂಗಸರು ಕದ್ದು ನೋಡುತ್ತಾರೆ! ಜಾಹೀರಾತುಗಳು ಅನೇಕಬಾರಿ ಎಲ್ಲವನ್ನೂ ತೆರೆದುತೋರುವ ಮಟ್ಟಕ್ಕೆ ಬೆಳೆದಿವೆ. ’ಜಸ್ಟ್ ಜಾಕೀಯಿಂಗ್’ ಎಂದು ಬರುವ ಜಾಕಿ ಕಂಪನಿಯ ಜಾಹೀರಾತು ನೋಡಬೇಕು, ಖೋಡೇ ಮತ್ತು ಕಿಂಗ್ ಫಿಷರ್ ಕಂಪನಿಗಳ ಕ್ಯಾಲೆಂಡರ್ ಗಳು ಬಿಕನಿ ತೊಟ್ಟ ಯುವತಿಯರನ್ನು ತೋರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತವೆ. ಪೇಜ್ ತ್ರೀ ಎಂಬ ಹೆಸರಿನಲ್ಲಿ ಆಂಗ್ಲ ಮಾಧ್ಯಮದ ಪತ್ರಿಕೆಯೊಂದು ಹೆಂಡದ ಪಾರ್ಟಿ ಸಂಸ್ಕೃತಿಯ ಚಿತ್ರಗಳನ್ನು ದಿನವೂ ಪ್ರಕಟಿಸುತ್ತದೆ. ಐಟೆಂ ಸಾಂಗ್ ಎಂಬ ಸೋಗಿನಲ್ಲಿ ಯುವತಿಯ ಅಂಗಾಂಗಕ್ಕೆ ಒತ್ತುಕೊಡುವ ನರ್ತನವನ್ನು ಮಾಡಿಸುವ ಚಲನಚಿತ್ರಗಳಿವೆ. ಇದಲ್ಲದೇ ಹಳ್ಳಿ ಹಳ್ಳಿಗಳಲ್ಲೂ ಅಲ್ಲಲ್ಲಿ ಅಲ್ಲಲ್ಲಿ ನಂಗಾನಾಚ್ ನಂಥ ಕೆಟ್ಟ ನರ್ತನಗಳು ಪ್ರದರ್ಶಿತವಾಗುತ್ತಿವೆ. ರಾಜಕಾರಣಿಗಳು ಬಹಿರಂಗವಾಗಿ ತಮ್ಮ ’ರಾಣಿ’ಯರನ್ನು ತೋರಿಸುವ ಕಾಲ ಇದಾಗಿದೆ: ಬೇಕಾದರೆ ಮಾಮು ಕುಮಾರಸ್ವಾಮಿಯನ್ನೇ ಕೇಳಿ. ಬೆಳಗೆರೆಯಂಥವರು ಬಾಯಿ ಚಪ್ಪರಿಸುವ ಶೈಲಿಯಲ್ಲಿ ’ಕಾಮರಾಜಮಾರ್ಗ’ ಬರೆದರೆ ೧೬,೦೦೦ಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿ ದಶಮಾನಕ್ಕೂ ಹಿಂದೆ ಲೋಕಾರ್ಪಣೆಗೊಂಡ ಒಳ್ಳೆಯ ಪುಸ್ತಕಗಳ ಮಾರಾಟವನ್ನೇ ಮೀರಿಸಿ ದುಪ್ಪಟ್ಟು ದಿಪ್ಪಟ್ಟು ಮಾರಲ್ಪಟ್ಟು ಮರುಮರುಮರು ಮುದ್ರಣ ಕಂಡರೆ ಇದು ಇವತ್ತಿನ ನಮ್ಮ ಜನಾಂಗದ ಅಭಿರುಚಿಯನ್ನು ತೋರಿಸುತ್ತದೆ!

ತಿಂಗಳ ಶಿಶುವೊಂದು ತುಮಕೂರಿನ ರಸ್ತೆಯಲ್ಲಿ ಬಿದ್ದಿರುತ್ತದೆ ಅಥವಾ ಬೆಂಗಳೂರಿನ ಇನ್ನೆಲ್ಲೋ ಕಸದತೊಟ್ಟಿಗಳಲ್ಲಿ ಆಗಾಗ ಶಿಶುಗಳು ಕಾಣಿಸಿಕೊಳ್ಳುತ್ತವೆ. ಎಷ್ಟೋ ಗರ್ಭಸ್ಥ ಶಿಶುಗಳು ಲೋಕವನ್ನು ಕಣ್ತೆರೆದು ನೋಡುವುದಕ್ಕೂ ಮುನ್ನವೇ ಇಹಲೋಕಯಾತ್ರೆ ಪೂರೈಸಿಬಿಡುತ್ತವೆ!----ಇವೆಲ್ಲಾ ಪಾಪದ ಕೂಸುಗಳಲ್ಲವೇ? ಇವುಗಳಿಗೆ ಕಾರಣಯಾರು? ಒಂಬತ್ತನೇ ತರಗತಿಯಲ್ಲಿರುವ ಹುಡುಗಿಗೆ ಮಾಸಿಕ ಸ್ರಾವ ಸಂಭವಿಸದೇ ಇದ್ದು ಕುಂತಲ್ಲೇ ನಿದ್ದೆ ಮಾಡುವಾಗ ಆಕೆಯ ತಾಯಿ ಆಕೆಯನ್ನು ವೈದ್ಯರಲ್ಲಿಗೆ ಒಯ್ದು ಪರೀಕ್ಷಿಸಲಾಗಿ ಆಕೆ ಗರ್ಭಿಣಿ ಎಂದು ತಿಳಿದುಬರುತ್ತದೆ! ಹುಡುಗಿಯನ್ನು ಬಲವಂತವಾಗಿ ಕೇಳಿದಾಗ ತನ್ನ ತರಗತಿಯ ಹುಡುಗನೊಬ್ಬನನ್ನು ತೋರಿಸುತ್ತಾಳೆ--ಎಂತಹ ವಿಪರ್ಯಾಸವಲ್ಲವೇ? ಇಂತಹದ್ದನ್ನೆಲ್ಲಾ ಹತ್ತಿಕ್ಕಲು ಹಿಂದಕ್ಕೆ ಕೆಲವು ರೀತಿರಿವಾಜುಗಳಿದ್ದವು, ಆದರೆ ಇಂದಿಗೆ ಅವು ಅರ್ಥಹೀನ ಸೂತ್ರಗಳಾಗಿ ಶಸ್ತ್ರಹೀನ ಯೋಧನೊಬ್ಬ ಪ್ರಚಂಡ ರಣರಂಗದಲ್ಲಿ ಕುಸಿದು ಕುಳಿತಂತೇ ಎಂದರೆ ತಪ್ಪೂಂತೀರಾ? || ಯದ್ಭಾವೋ ತದ್ಭವತಿ || ಎಂಬ ಸಂಸ್ಕೃತದ ವ್ಯಾಖ್ಯೆಯಂತೇ ನಮ್ಮ ನಮ್ಮ ಭಾವನೆಗಳು ಎಲ್ಲದಕ್ಕೂ ಕಾರಣವಷ್ಟೇ ? ಆ ಭಾವನಗಳು ಹುಟ್ಟಿಕೊಳ್ಳಲು ಪೂರಕ ಪರಿಸರವೇ ಕಾರಣವಲ್ಲವೇ? ಜನಸಾಮಾನ್ಯರಾದ ನಮಗೆ ಎಲ್ಲರಿಂದಲೂ ಮನೋನಿಗ್ರಹ ಸಾಧ್ಯವೇ? ಇಲ್ಲಾ ಎಂತಾದಮೇಲೆ ಭಾವನೆ ಕೆಣಕುವ, ಕಾಮೋತ್ತೇಜಕ ಪರಿಸರವನ್ನು ನಾವು ಅನುಮೋದಿಸಬೇಕೇ?

ಎಷ್ಟೋ ಕುಟುಂಬವೇ ಒಡೆದು ಹಾಳಾಗುವುದು ಈ ಥರದ ಅಸಭ್ಯ, ಅನೈತಿಕ ಸಂಬಂಧಗಳಿಂದಲ್ಲವೇ? ಇದೇ ಕಾರಣವಾಗಿ ಬದಲಾಗಿಹೋಗುವ ಪಾಲಕರ ಮಧ್ಯೆ ಹುಟ್ಟಿ ಬೆಳೆಯುವ ಕಂದಮ್ಮಗಳಿಗೆ ಒಂದೋ ಅಪ್ಪನೋ ಇಲ್ಲಾ ಅಮ್ಮನೋ ಸಿಗದಾಗುವ ಕಾಲಬಂದಾಗ, ಬೇರೆಯಾಗುವ ಕಾಲ ಬಂದಾಗ ಮಗುವಿನ ಮುಗ್ಧ ಮನದಲ್ಲಿ ಏಳಬಹುದಾದ ನೋವಿನ ಅಲೆ ಎಂಥದ್ದಿರಬಹುದು ನಮಗೆ ಅರ್ಥವಾಗುತ್ತದೆಯೇ? ’ನೋ ಸ್ಟ್ರಿಂಗ್ಸ್ ಅಟ್ಯಾಚ್ಡ್’ ಎಂದು ಮೊದಲೇ ಸಾರುವ ತನ್ನ ಪರಾಗ ಬೀರುವ ಗಂಡುದುಂಬಿಗೆ ಬಿರಿಯುವ ಸ್ವೀಕರಿಸುವ ಗುಣಧರ್ಮದವುಳ್ಳ ಹೆಣ್ಣುದುಂಬಿ ಸೇರಲು ಹಾತೊರೆಯುತ್ತದೆ. ಸೇರುವ ಕಾಲದಲ್ಲಿ ಇರುವ ಮಧುರಕ್ಷಣಗಳು ತದನಂತರ ಇಲ್ಲದಾದಾಗ ಬೆಂಕಿಗೆ ಬಿದ್ದ ಪತಂಗದ ರೀತಿ ತನ್ನನ್ನೇ ತನ್ನ ಜೀವನವನ್ನೇ ಅರ್ಪಿಸಿಕೊಂಡು ಒದ್ದಾಡುತ್ತದೆ. ಇರುಳು ಕಂಡ ಹಾಳು ಬಾವಿಗೆ ಹಗಲು ತಾನಾಗೇ ನಡೆದುಬಂದು ಬೀಳುತ್ತದೆ. ಗುರುತು ಪರಿಚಯವಿಲ್ಲದ ಹುಡುಗನೊಬ್ಬ ಕಾರಲ್ಲಿ ಬಂದು ಕರೆದಾಗ ಕೇವಲ ಜಾಲತಾಣದ ಪರಿಚಯವಷ್ಟನ್ನೇ ಆಧಾರವಾಗಿ ಹಿಡಿದು ಹುಡುಗಿ ಆತನ ಕಾರಿನ ಹಿಂಬದಿಯ ಆಸನದಲ್ಲಿ ಕುಳಿತು ಸಾಗುತ್ತಾಳೆ; ಸಾಗುತ್ತಾ ತನ್ನತನವನ್ನು ಆತನಿಗೆ ಅರ್ಪಿಸುತ್ತಾಳೆ. ಯಾವುದೋ ಮಾಲ್ ಬಳಿ, ಚಿತ್ರಮಂದಿರದಬಳಿ, ಹೋಟೆಲ್ ಬಳಿ ಕಾದು ನಿಂತ ಹಸಿದ ಹುಲಿಯ ಬಾಯಿಗೆ ಸುಂದರ ಹೆಣ್ಣು ಮೃಗ ತಾನಾಗೇ ಬಂದು ಬೀಳುವ ಈ ಕ್ರಿಯೆ ’ಡೇಟಿಂಗ್’! ಒಬ್ಬರನ್ನೊಬ್ಬರು ಅರಿಯಲು, ನಮಗೆ ಬ್ಲೈಂಡ್ ಡೇಟ್ ಅನುಕೂಲ ಎನ್ನುವ ಜನ ಪಾಲಕರ ಇತಿಮಿತಿಗಳನ್ನೂ ಮೀರಿ ಅವರ ಹಕ್ಕು-ಬಾಧ್ಯತೆಗಳನ್ನು ಲೆಕ್ಕಿಸದೇ ಕೇವಲ ತಾವೇತಾವಾಗಿ ಅಲ್ಲಿಲ್ಲಿ ಕೂತು, ನಿಂತು ಆಮೇಲೆ ನಿಧಾನಕ್ಕೆ ಮೈಗೊರಗಿ ಹೀಗೆಲ್ಲಾ ಚೇಷ್ಟೆಗಳಲ್ಲಿ ತೊಡಗಿ ಮತ್ತದೇ ಕಾಮದಾಟ ಮುಗಿದು ಅದರಲ್ಲೇ ಪರ್ಯವಸಾನವಾಗುವ ಕ್ರಿಯೆಯೇ ಡೇಟಿಂಗ್.

ಕೆಲವು ರಿಯಾಲಿಟಿ ಶೋ ಗಳಲ್ಲಿ ನಡೆಸುವ ವೈವಾಹಿಕ ಸಂದರ್ಶನಗಳೂ ಕೂಡ ಪರೋಕ್ಷ ನಮ್ಮದಲ್ಲದ ಒಂದು ರಾಜಸ ಪ್ರವೃತ್ತಿಗೆ ಕಾರಣವಾಗುತ್ತವೆ. ಹಳ್ಳಿಯ ಹುಡುಗರನ್ನು ಪೇಟೆಗೂ ಪೇಟೆಯ ಹುಡುಗಿಯರನ್ನು ಹಳ್ಳಿಗೂ ಕರೆದೊಯ್ದು ವಾಹಿನಿಗಳು ನಡೆಸುತ್ತಿರುವ ಅಧ್ವಾನದ ಶೋಗಳನ್ನು ನೋಡಿದರೆ ಇದೂ ಕೂಡ ಒಂಥರಾ ಹಿಂಸೆಯಲ್ಲವೇ ಅನಿಸುತ್ತದೆ. ಸಿನಿಮಾ ಸೇರಲೆಂದು ಬಂದ ಅನೇಕ ಹುಡುಗಿಯರು ಕಾಲಕ್ರಮದಲ್ಲಿ ಕಾಲ್ ಗರ್ಲ್ ಗಳಾದರೆ ಧನಿಕರ ಮನೆಯ ಹೆಣ್ಮಕ್ಕಳು ಮಜಾಕ್ಕಾಗಿ ಕಾಲ್ ಗರ್ಲ್ ಗಳಾಗುತ್ತಿದ್ದಾರೆ. ’ಲಿವ್-ಇನ್ ರಿಲೇಶನ್ಶಿಪ್’, ’ಒನ್ ನೈಟ್ ಸ್ಟೇ’ ಇವೆಲ್ಲಾ ಅತಿಯಾಗಿ ವಿಜೃಂಭಿಸುತ್ತಿವೆ. ಬೇಡದ ಗರ್ಭವನ್ನು ಆರಂಭದಲ್ಲೇ ನಿವಾಳಿಸಿ ಎಸೆಯುವ ಸಲುವಾಗಿ ಭೋಗನಡೆದು ೭೨ ಗಂಟೆಗಳ ನಂತರವೂ ನಿಭಾಯಿಸಬಲ್ಲ ಮಾತ್ರೆಗಳು ದೊರೆಯುತ್ತವೆ. ಯಾರಹಂಗೂ ಇಲ್ಲದೇ ಸ್ವೇಚ್ಛೆಯಿಂದ ಕಾಮದಾಟ ಪೂರೈಸಿಕೊಳ್ಳುವ ಹರೆಯದ ಹಕ್ಕಿಗಳಿಗೆ ರಂಗ ಸದಾ ಅನುಕೂಲವನ್ನೇನೋ ಕಲ್ಪಿಸಿದೆ; ಆದರೆ ಅದರಿಂದ ಆವರಿಸುವ ಮಾನಸಿಕ ಸಮಸ್ಯೆಗಳಿಗೆ, ಬಯಕೆಗಳಿಗೆ, ಖಿನ್ನತೆಗಳಿಗೆ, ಪಾಪಪ್ರಜ್ಞೆಗೆ ಯಾವ ಮಾತ್ರೆಯೂ ಇಲ್ಲ, ಅದು ಬರಲು ಸಾಧ್ಯವೂ ಇಲ್ಲ! ಹುಚ್ಚು ಹುಡುಗಾಟಕ್ಕೆ ಹಿಂದೂ ಸಂಪ್ರದಾಯದಂತೇ ಮಧ್ಯವಯಸ್ಕರಾದ ಅರುಣ್ ನಾಯರ್ ಮತ್ತು ಲಿಜ್ ಹರ್ಲೀ ಮದುವೆಯಾಗುತ್ತಾರೆ. ಗೋಸುಂಬೆಯ ಚಾಳಿಯ ಲಿಜ್ ತಿಂಗಳಲ್ಲೇ ಮತ್ತೆ ಬೇರೇ ಗಂಡಸರಲ್ಲಿ ಆಸಕ್ತಳಾಗುತ್ತಾಳೆ. ಇಂತಹ ಕಾಮಪುರಾಣಗಳನ್ನು ನಮ್ಮ ಮಾಧ್ಯಮಗಳು ಪುಂಖಾನುಪುಂಖವಾಗಿ ವಿಜೃಂಭಿಸಿ ತಿಳಿಸುತ್ತವೆ-ಇದಕ್ಕೆಲ್ಲಾ ಅರ್ಥವಿದೆಯೇ ?

ಇದನ್ನೆಲ್ಲಾ ನೋಡಿದಾಗ ನಮ್ಮ ಪೂರ್ವಜರು ರಾಮಾಯಣ ಮಹಾಭಾರತ ಮೊದಲಾದ ಮೌಲಿಕ ಮಹಾಕಾವ್ಯಗಳನ್ನು ಯಾಕೆ ಬರೆದರು ಎಂಬುದು ಅರ್ಥವಾಗುತ್ತದೆ. ಕೇವಲ ದೈಹಿಕ ಸುಖವೇ ಮಹತ್ವವೆಂದು ತಿಳಿದು ಹಾಳಾಗಬೇಡಿ ಎಂಬ ಉದಾತ್ತ ಧ್ಯೇಯಗಳನ್ನು ಉಣಬಡಿಸುವ ದಾಸರ ಹಲವು ಪದಗಳನ್ನು ನಾವು ಕೇಳಿಯೇ ಕೇಳುತ್ತೇವೆ ಆದರೂ ಹಲವೊಮ್ಮೆ ಅವನ್ನೆಲ್ಲಾ ಮರೆತುಬಿಡುತ್ತೇವೆ. ಇದು ಒಳ್ಳೆಯ ಲಕ್ಷಣವಲ್ಲ, ವಿದೇಶೀಯರು ಧನಿಕರಾಗಿರಬಹುದೇ ಹೊರತು ಅವರಿಗೆ ಮನಃಶ್ಶಾಂತಿಯಿಲ್ಲ. ಅದನ್ನರಸಿ ಅವರು ಭಾರತಕ್ಕೇ ಬರುತ್ತಾರೆ. ಯಾವುದೋ ಸನ್ಯಾಸಿಯೋ ಬಾಬಾನೋ ಸಿಕ್ಕರೆ ಅಲ್ಲಿ ಶಾಂತಿಗಾಗಿ ಬೇಡುತ್ತಾರೆ. ಹಾಗೆನೋಡಿದರೆ ಅಲ್ಲಿ ಸೂತ್ರ ಗೋತ್ರ ಗೊತ್ತಿರದ ಪಶುಗಳ ಸಂತತಿಯ ರೀತಿಯಲ್ಲೇ ಬದುಕುವ ಬದುಕದು. ಪ್ರಾಮಾಣಿಕವಾಗಿ ನೋಡಿ--ನಿಜವಾಗಿಯೂ ಜನಿಸುವ ಪ್ರೀತಿ ಸಂಗಾತಿಯನ್ನು ಅವಿರತವಾಗಿ ಕಾಳಜಿಯಿಂದ ನೋಡಿಕೊಳ್ಳುತ್ತದೆ. ಅಲ್ಲಿ ಕಾಮಕ್ಕೆ ಪ್ರಾಮುಖ್ಯತೆ ಇರುವುದಿಲ್ಲ. ಕಷ್ಟ-ಸುಖಗಳೆಂಬ ಜೀವನದ ಉಯ್ಯಾಲೆಯ ಎರಡೂ ಕಡೆಯ ಓಲಾಟಗಳಲ್ಲಿ ಅವರು ಪರಸ್ಪರರನ್ನು ಅರಿತು ಊರುಗೋಲಾಗಿ ಬದುಕುತ್ತಾರೆ. ಹರೆಯ ಕಳೆದರೂ ಮನದಲ್ಲಿ ಅದು ಹಸಿರಾಗೇ ಇರುತ್ತದೆ. ಗಂಡ-ಹೆಂಡತಿ ಎಂಬ ಅನ್ಯೋನ್ಯತೆ ಮತ್ತು ಅನುರಾಗ ಸದಾ ಅರಳಿರುತ್ತದೆ. ಬೆಳೆಯುವ ಮಕ್ಕಳಿಗೂ ಕೂಡ ಅಪ್ಪ-ಅಮ್ಮನ ಪ್ರೀತಿಯ ಆರೈಕೆ ದೊರೆಯುತ್ತದೆ. ನಮಗೆ ಜನ್ಮವಿತ್ತ ನಮ್ಮಪ್ಪ ಅಮ್ಮ ಎಷ್ಟು ಚೆನ್ನಾಗಿದ್ದಾರೆ/ದ್ದರು ನೋಡಿ ಅದೇರೀತಿ ನಾವೂ ಮುನ್ನಡೆದರೆ ಆಗ ಸ್ವಸ್ಥ ಸಮಾಜ ಮುನ್ನಡೆಯುತ್ತದೆ. ಪರಸ್ಪರರನ್ನು ಅರಿಯಲು ಡೇಟಿಂಗ್ ಪರಿಹಾರವಲ್ಲ, ಬದಲಾಗಿ ಪಾಲಕರಿರುವ ಪರಿಸರದಲ್ಲೇ ಮದುವೆಗೂ ಮುನ್ನ ಮುಕ್ತವಾಗಿ ಮಾತನಾಡಿ ಅರಿಯುವ ನಡವಳಿಕೆ ಒಳ್ಳೆಯದು. ಆ ಕಾಲ ನಮ್ಮದಾಗಿರಲಿ; ಮದುವೆಗೂ ಮುನ್ನ ನಡೆಯುವ, ಮದುವೆಯ ಹೊರತಾಗಿ ನಡೆಯುವ ದೈಹಿಕ ಸಂಬಂಧ ದೂರವಾಗಲಿ ಎಂಬ ನನ್ನಸಿಕೆಯೊಡನೆ ಮತ್ತೊಮ್ಮೆ ಸಿಗಲು ಈಗ ವಿದಾಯಕೋರುತ್ತೇನೆ.