ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, March 19, 2012

ಸ್ಥಾನ-ಮಾನ-ಸನ್ಮಾನದ ಅಂಗಡಿಮಾಡಿಬಿಟ್ಟರೆ ಹೇಗೆ ?


ಸ್ಥಾನ-ಮಾನ-ಸನ್ಮಾನದ ಅಂಗಡಿಮಾಡಿಬಿಟ್ಟರೆ ಹೇಗೆ?

ಮೊನ್ನೆ ಕೇಂದ್ರ ಬಜೆಟ್ ಕುರಿತು ಬರೆಯಬೇಕೆಂದಿದ್ದೆ, ಯಾವ ಪತ್ರಿಕೆಯಲ್ಲಿ ಯಾವ ಪುಟ ತಿರುವಿದರೂ ಅದೇ ಕತೆ, ಮತ್ತೆ ಅದೇ ಕತೆ ಸುಮ್ನೇ ಯಾಕೆ ಅಂತ ಸುಮನಾಗಿದ್ದೆ. ಬಜೆಟ್ ಎಂಬುದಕ್ಕೆ ಕನ್ನಡಲ್ಲಿ ಇನ್ನೊಂದು ಹೊಸ ಅರ್ಥದ ಪದ ಸೇರಿಸಬೇಕಾಗಿದೆ. ಬಜೆಟ್=ಹುಲಿಹುಣ್ಣಿನ ದುರಸ್ತಿ! ಪ್ರತೀವರ್ಷವೂ ಇದೇ ಕಥೆ-ವ್ಯಥೆ-ಮಾತು ಎಲ್ಲಾ. ಬಜೆಟ್ ಸಮಾಧಾನಕರ ಎಂದು ಎಲ್ಲರಬಾಯಲ್ಲೂ ಹೇಳಿಸುವುದು ತುಂಬಾ ಕಷ್ಟದ ಕೆಲಸ. ಅದರಲ್ಲೂ ಕುರ್ಚಿಉಳಿಸಿಕೊಳ್ಳುವ ಬಜೆಟ್‍ನಲ್ಲಿ ಮಿಕ್ಕೆಲ್ಲಾ ಬಜೆಟ್ ಯಾವ ಲೆಕ್ಕ ? ಚುನಾವಣೆ ಬಂತೆಂದರೆ ಆಗ ಒಂಥರಾ ಬಜೆಟ್, ಚುನಾವಣೆ ಆದಮೇಲೆ ಇನ್ನೊಂಥರಾ ಬಜೆಟ್, ಇದು ಕಿತ್ತು-ಕೂಡಿ-ಕಟ್ಟುತ್ತೇವೆ ಎನ್ನುವ ರಾಜಕೀಯದಾಟ. ಹುಲಿಗೆ ಹುಣ್ಣಾದಾಗ "ಛೆ, ನೊಣ ಕೂತು ಜೀವ ಹಿಂಡುತ್ತದೆ ಮಾಡ್ತೇನೆ ಗಾಯಕ್ಕೆ ಮದ್ದು" ಎನ್ನುತ್ತಾ ತನ್ನದೇ ಮೈಯ್ಯ ಇನ್ನೊಂದು ಭಾಗವನ್ನು ಪರಚಿ ಚರ್ಮತೆಗೆದು ಹಳೆಯಗಾಯಕ್ಕೆ ತುಂಬುತ್ತದಂತೆ. ಪರಚಿ ತೆಗೆದ ಜಾಗದಲ್ಲಿ ಮತ್ತೆ ಹೊಸಗಾಯ! ಇದು ನೆವರ್ ಎಂಡಿಂಗ್ ಪ್ರಾಸೆಸ್. ಹೀಗಾಗಿ ಬಜೆಟ್ ಎಂಬುದು ಸದ್ಯದ ಭಾರತೀಯ ಆರ್ಥಿಕ ಸ್ಥಿತಿಯಲ್ಲಿ ಹುಲಿಹುಣ್ಣಿನದ್ದೇ ಕಥೆ! ಅಂದಹಾಗೇ ಸ್ವಿಸ್ ಬ್ಯಾಂಕಿನ ಹಣದ ಬಗ್ಗೆ ಸುದ್ದಿಯೇ ಇಲ್ಲ; ನಮ್ಮ ಕರ್ನಾಟಕದ ಯುವದೊರೆಗಳೂ ಕೆಲವರು ಅಲ್ಲಿ ಹಣ ಇಟ್ಟುಬಂದಿದ್ದಾರಂತೆ-ಇರಲಿ ಬಿಡಿ ಪಾಪ ಇಲ್ಲೇ ಇದ್ದರೆ ಅವರು ಮಣ್ಣಿನಮಗನ ಮಗನಾಗುವುದಾದರೂ ಹೇಗೆ ? ಬಿಟ್ಬಿಡಿ ಹೋಗ್ಲತ್ಲಗೆ ಈಗ ಹುಣ್ಣಿನಮಕ್ಕಳ ಗೋಲೀ ಆಟದ ಕಥೆ ತಿಳಿಯೋಣ.
_________

ನಾನಂತೂ ಸ್ಥಾನ-ಮಾನ-ಸನ್ಮಾನದ ಅಂಗಡಿ ತೆರೆದುಬಿಟ್ಟರೆ ಹೇಗೆ ಎಂದು ಚಿಂತಿಸುತ್ತಿದ್ದೇನೆ.ಗೌಡಾ ಸೇರಿದಂತೇ ಪ್ರಶಸ್ತಿಗಳ/ಪದವಿಗಳ ಅಂಗಡಿಯನ್ನು ಅದಾಗಲೇ ಹಲವರು ಆರಂಭಿಸಿದ್ದಾರೆ! ಅಲಲ್ಲಿ ಅಲ್ಲಲ್ಲಿ ಕೂತು ಮಾರುವ ಅವರದ್ದು ಒಂಥರಾ ಎಲ್ಲೂ ನೆಟ್ಟಗೆ ಹಿಡಿತಕ್ಕೆ ಸಿಗದ ತಳ್ಳುಗಾಡಿಯ ಬ್ಯುಸಿನೆಸ್ಸು! ಸ್ಥಿರ ಅಂಗಡಿಯಾದರೆ ಮಾಲು ಸರಿಯಿಲ್ಲಾ ಎಂತಲೋ ಹೋಯ್ ನಿಮ್ಮ ಅಂಗಡೀಲಿ ಕದ್ದಮಾಲು ವ್ಯಾಪಾರ ಆಗ್ತಿದೆ ಅಂತಲೋ ಯಾರೋ ಹುಡುಕಿಕೊಂಡು ಬರಬಹುದು, ಚರ ಅಂಗಡಿಯಾಗಿಬಿಟ್ಟರೆ ಇವತ್ತು ಈ ಬೀದಿ ನಾಳೆ ಮತ್ಯಾವ್ದೋ ಬೀದಿ! "ಅರೇ ಸ್ಥಾನ-ಮಾನ-ಸನ್ಮಾನ ರೀ!" ಅಂತ ದೊಡ್ಡದಾಗಿ ಕೂಗುತ್ತಾ ಹೊರಟುಬಿಟ್ಟರೆ ಆಗಲೂ ಕಷ್ಟವಾಗಿಬಿಡಬಹುದು, ಅದಕೇ ಬೋರ್ಡಿಲ್ಲದ ತಳ್ಳುಗಾಡೀಲಿ ಸುಮ್ನೇ ತಳ್ಕೋತಾ ಬ್ರೌನ್ ಶುಗರು, ಅಫೀಮು, ಗಾಂಜಾ ಮಾರುಕಟ್ಟೆಗಳಂತೇ ತೀರಾ ಯಾರಿಗೂ ಏನೂ ತಿಳಿಸದಂತೇ ಬೇಕಾದವರಿಗೆ ಮಾತ್ರ ಗುಟ್ಟಾಗಿ ತಿಳಿಸಿ ಮಾರಾಟ ಮಾಡಬೇಕಾಗುವುದು ಈ ಅಂಗಡಿಯ ಅನಿವಾರ್ಯತೆ! ಮೇಲ್ನೋಟಕ್ಕೆ ಕತ್ತರಿಸಿದ್ದೋ ಕೆಲಸಕ್ಕೆ ಬರದ್ದೋ ಒಂದೆರಡು ಒಣಗಿದ/ಕೊಳೆತ ಹಣ್ಣು-ಕಾಯಿ ಇಟ್ಕೊಂಡು ತಳ್ಕೋತಾ ಹೋದ್ರೆ ಕಂಡವರೆಲ್ರೂ ಹಾಗೆಲ್ಲಾ ಬರೊಲ್ಲಾ; ನಮಗೆ ಬೇಕಾದವರು ಮಾತ್ರ ಬರ್ತಾರೆ ಅನ್ನೋದು ನನ್ನ ಅನಿಸಿಕೆ!

ಯಾರೋ ಏನೋ ಹೇಳ್ತಾ ಅವ್ರಲ್ಲಾ ಅಂತ ಕಿವಿಕೊಟ್ಟೆ ನೋಡಿ: ಸ್ವಲ್ಪ ನೀವೂ ಕೇಳಿಸ್ಕೊಂಬುಡಿ ದೇವ್ರೂ :
ಅದ್ಯಾವ್ದೋ ಕಾಲ ಇತ್ತಂತೆ, ರಾಮ-ಸೀತೆ-ಕೃಷ್ಣ-ಹರಿಶ್ಚಂದ್ರ ಅವೆಲ್ಲಾ ಕಥೆಗಳಾಗಿರಲಿಕ್ಕೇ ಲಾಯಕ್ಕು ಬಿಡಿ. ಸ್ಥಾನ ಇಲ್ದೇ ಮಾನವಾದ್ರೂ ಸಿಗೋದು ಹೇಗೆ ? ಸ್ಥಾನ ಮೊದ್ಲು ಪಡೀಬೇಕು. ಅದಕೇ ನಮ್ಮಂಥಾ ಅಂಗಡೀ ಜನರನ್ನು ಹುಡುಕಿಕೊಂಡು ಬೇಕಾದವ್ರು ಬರ್ತಾರೆ. ಇನ್ನು ದೇಶೋದ್ಧಾರ, ರಾಜ್ಯೋದ್ಧಾರ ಇವೆಲ್ಲಾ ಕನ್ನಡ ನಿಘಂಟಿನಲ್ಲಿ ಸದಾ ಇರಬೇಕಾದ ಪದಗಳು-ಅದಕ್ಕೇನೋ ಡೌಟಿಲ್ಲ, ಹಾಗಂತ ಅಲ್ಲೆಲ್ಲೋ ಬರಗಾಲವಂತೆ-ಬೆಳೆನಾಶವಂತೆ, ಬೆಳೆದ ಬೆಳೆಗೆ ಬೆಲೆಯಿಲ್ವಂತೆ, ನದಿಗೆ ಕಟ್ಟಿದ ಸೇತುವೆ ಮುರಿದು ಬೀಳ್ತಾ ಇದ್ಯಂತೆ, ನದೀ ಮೇಲ್ದಂಡೆಯ ಕಾಲುವೆಗಳ ಕೆಲಸ ಕಳಪೆಯಾಗಿದ್ಯಂತೆ, ರಸ್ತೆ ಹಾಳುಬಿದ್ದು ೫೦ ವರ್ಷ ಆಗೋಯ್ತಂತೆ ಇವೆಲ್ಲಾ ನಿತ್ಯಕೇಳೋ ಹಾಡುಗಳು ಸ್ವಾಮೀ. ಅದೆಲ್ಲಾ ನಮ್ಮಂಥೋರಿಗೆ ಮೈಗೊಂಡೋಗಿರೋ ಹಾಡುಗಳು. ಯಾವಾಗ ನೋಡ್ದ್ರೂ ಅದೇ ರಾಗ ಅದೇ ತಾಳ ನಮಗೂ ಸ್ವಲ್ಪ ಬೇರೇ ರಾಗ ಕೇಳ್ಬೇಕೂ ಅನ್ಸೊಲ್ವೇ ? ಅದಕೇ ಸ್ವಲ್ಪ ನಾವೂ ಸ್ಟಾರ್ ಗಿರಿ ಅನುಭವಿಸಿ ನೋಡೋಣ ಅಂತ ಈಗ ರಿಸಾರ್ಟ್‍ಗಳ ಕಡೆಗೆ ಮುಖ ಮಾಡಿದೀವಿ.

ಯಾರೋ ಸ್ಥಾನ-ಮಾನ ಕೊಡ್ತಾರೆ ಅಂತ ಕಾಯೋ ಕೆಲ್ಸ ಮಾಡ್ಕಂಡಿದ್ರೆ ಅದು ಆಗೋ ಬಾಬಲ್ಲ. ಅದ್ಕೇ ರುಬಾಬು ಮಾಡಿಯಾದ್ರೂ ಸ್ಥಾನ-ಮಾನ ಪಡೀಬೇಕು ಎಂಬೋದು ಹೊಸಾ ಗಾದೆ. "ನೀವು ಕುರ್ಚಿ ಕೊಡ್ದಿದ್ರೆ ಏನಂತೆ ನಮಗೆ ತಗೊಳೋಕೆ ಗೊತ್ತಿಲ್ವೇ?" ನಮ್ ಥರಾನೇ ಸ್ಥಾನ-ಮಾನ ಬೇಕಾದೋರ್ನ ಬನ್ನಿ ನನ್ಹಿಂದೆ ಎಂದು ಎತ್ತಾಕೊಂಡ್ಹೋದ್ರೆ ಕೆಲಸ ಸಲೀಸು. ಹ್ಯಾಂಗೂ ಅವರಿಗೂ ಸ್ಥಾನ-ಮಾನ-ಸನ್ಮಾನ ಬೇಕು! ಡಾಕ್ಟರ್ ಹೇಳಿದ್ದೂ ಹಾಲು ರೋಗಿ ಬಯಸಿದ್ದೂ ಹಾಲು!

....ಯಾರೋ ತನ್ನೊಳಗೇ ಸಣ್ಕೆ ಹೇಳ್ಕೋತಾ ಇದ್ರು! ಹೋಗ್ಲಿ ಬಿಡಿ, ಇಂಥವರಿದ್ರೇ ಇನ್ಮುಂದೆ ನಮಗೂ ಅನಕೂಲವೇನೋ! ಅಂದಹಾಗೇ ಒಂದ್ ದೇಶ ಇತ್ತಂತೆ. ಅಲ್ಲಿ ಪ್ರಜಾಪ್ರಭುತ್ವ. ಜನ ಇಷ್ಟಪಟ್ಟೋರಿಗೆ ಸ್ಥಾನ ಸಿಗ್ತಾ ಇತ್ತು ಅಂತಾಯ್ತು. ಸ್ಥಾನ ಪಡದೋರು ಮರ್ಯಾದೆ-ಮಾನಕ್ಕೆ ಅಂಜಿ ಬಾಳ ಕಾಳಜಿಯಿಂದ ಜನಸೇವೆ ನಡಸೋರು. ಜನರಿಗಾಗಿ ಬಹಳ ಉತ್ತಮ ಕೆಲಸ ಮಾಡ್ದೋರಿಗೆ ಜನ ಸ್ವಯಂಪ್ರೇರಿತರಾಗಿ "ನಮ್ ಕೆಲಸ ಮಾಡ್ಕೊಟ್ಟ ಆ ಮಹನೀಯರಿಗೆ ಸನ್ಮಾನ" ಅಂದ್ಕಂಡು ಮಾಡೋರು. ಇವತ್ತು ಪ್ರಜಾಪ್ರಭುತ್ವ ಅಂಬೋದು ಬರೇ ಪುಸ್ತಕದಲ್ಲಿರೋ ವಿಷ್ಯ. ಹಣ-ಹೆಂಡ ಕೊಟ್ರೆ ಹುಚ್ ನನ್ಮಗ ಮತದಾರ ಪ್ರಜೆ ಮತ ಹಾಕ್ತಾನೆ. ಸ್ಥಾನ ಬಂದ್ಬುಡ್ತದೆ, ಅದು ಬಂದ್ಮೇಲೆ ಮೂರೂ ಬಂದಹಾಗೇ! ಅದು ಬರ್ಬೇಕೂ ಅಂತ ಮೂರೂ ಬಿಟ್ಟು ವ್ಯಾಪಾರ ಕಲೀಬೇಕು!

ಕ.ಸಾ.ಪ ದಂತಹ ಚಿಕ್ಕ ಜಾಗದಲ್ಲೇ ಸ್ಥಾನ-ಮಾನ-ಸನ್ಮಾನಕ್ಕೆ ವ್ಯಾಪಾರ ಮಾಡೋವರೂ ಇದ್ದಾರಂತೆ! "ಚುನಾವಣೆಗೆ ನಿಲ್ತೀವಿ ಹಣವಿಲ್ಲ, ಏನಾದ್ರೂ ಧರ್ಮಾ ಮಾಡ್ರೀ" ಅನ್ನುವ ಮಟ್ಟಕ್ಕೆ ಇಳಿದಿದಾರಂತೆ. ಅಲ್ಲಾ ಸ್ವಾಮೀ ಕ.ಸಾ.ಪ. ಅಂಬೋದನ್ನ ಕಟ್ದೋರು ಸಮಾಜಮುಖಿ ಜನ. ಸಮಾಜಕ್ಕೆ ಒಳ್ಳೇದಾಗಲಿ, ನಮ್ ಸಂಸ್ಕೃತಿ ಉಳೀಲಿ ಅಂತ ಅದನ್ನು ಕಟ್ಟಿದ್ರು-ತಮ್ದೇ ಹಣ ಹಾಕಿ ಅಲ್ಲೀ ಕೆಲಸಗಳನ್ನೂ ನಡೆಸಿದ್ರು. ಇಂದು ಅಲ್ಲಿ ಕೆಲಸ ನಿಭಾಯಿಸೋಕೆ ಸ್ಥಾನ ಪಡೆಯೋದಕ್ಕೆ ಹಣ ಕರ್ಚುಮಾಡ್ಬೇಕಂತೆ ಕೆಲವ್ರಿಗೆ! ಮೆಜೆಸ್ಟಿಕ್ ಕಡೆ ಹಾಸಿ ಕೂತು ’ಚುನಾವಣೆಗೆ ನಿಲ್ತೀನಿ ಧರ್ಮಾಮಾಡಿ’ ಅನ್ನೋ ಅದೇ ಬೋರ್ಡ್ನ ಪ್ರದರ್ಶಿಸಿದ್ರೆ ಆದ್ರೂ ಒಂದ್ ಲೆಕ್ಕ. ಅದು ಬಿಟ್ಟು ಇಲ್ಲೆಲ್ಲಾ ಅಲ್ಲೆಲ್ಲೋ ಅದನ ಹೇಳ್ಕೋತಾ ತಿರುಗಿದ್ರೆ ಇದ್ಯಾವ ಲೆಕ್ಕ ಅಲ್ವೇ? ಮತ್ತೇನಿಲ್ಲ ಕ.ಸಾ.ಪ ದೊಳಗೆ ಸೇರ್ಕಂಡ್ರೆ ಮತ್ತೊಂದಷ್ಟು ಸ್ಥಾನ-ಮಾನ-ಸನ್ಮಾನ ಬರ್ತದೆ ಎಂಬೋದು ಅವರ ಇರಾದ್ಯಂತೆ. ಹಾಂ.... ಹೇಳಲಿಕ್ಕೆ ಮರ್ತಿದ್ದೆ: ಅವರಿಗೆ ಅನೇಕ ’ಪ್ರಶಸ್ತಿ’ಗಳು ’ಬಂದಿವೆ.’ ಹಾಂ...ಹಾಂ... ’ಬಂದಿವೆ!’ ’ಗೌಡಾ’ ಕೂಡ ಹಾದೀಲಿದೆ, ನನ್ನಂಥಾ ತಳ್ಳುಗಾಡ್ಯೋರು ಇಟ್ಕಂಡು ಕೂತವ್ರೆ... ಆ ಯಪ್ಪ ಜಾಸ್ತಿ ಕೊಡಾಕ್ ತಯಾರಿಲ್ಲ, ಇನ್ನೊಂದ್ ಸಲ್ಪದಿನ ಹೋಗ್ಲಿ ಸರಕಾರ್ದಲ್ಲಿರೋರ್ನ ಹಿಡ್ಕಂಡು ಅಂಗಂಗೇ ಎಗರಸ್ಕಳವ ಎಂಬ ದೂ[ದು]ರಾಲೋಚನೆ ಇದೆ! ಮುಂದಿನ ಸರ್ತಿ ತಳ್ಳೂ ಗಾಡೀಲಿ ನಾನು ವೆರೈಟಿ ಮಡಗ್ಬೇಕೂ ಅಂತ ಆಸೆ ಇದೆ. ಕೆಲವು ಕವಿ-ಸಾಹಿತಿಗಳ ಹೆಸ್ರಲ್ಲಿ ಕೊಡೋ ಪ್ರಶಸ್ತಿಗಳ್ನೂ ಮಡೀಕಂಡ್ರೆ ಜಾಸ್ತಿ ಜನ ಬರ್ತಾರೆ.

ಸದಾ ಆನಂದವಾಗಿರಬೇಕು ಹೇಗೆ ಎಂಬೋದರ ಬಗ್ಗೆ ಕೆಲವು ಪುಸ್ತಕ ಬರ್ದು ಅದನ್ನೂ ಮಡೀಕತೀನಿ. ಎಡೆ ಇಟ್ಟು ಊರೂರ್ನೇ ಅಳೆಯೋ ಕೆಲಸಮಾಡೋದರ ಬಗ್ಗೂ ಒಬ್ರು ಬರೀತೀನಿ ಪುಸ್ತಕ ಅಂದವ್ರೆ. ಮಾಲು ಜಾಸ್ತಿ ಜಾಸ್ತಿ ಇದ್ದಾಂಗೂ ನಾನಾ ಥರ ಜನ ಬರ್ತಾರೆ. ಖರೀದ್ಯೂ ಜೋರು! ಒಳ್ಳೇ ವ್ಯಾಪಾರ. ನೋಡೋಕೆ ತಳ್ಳೋಗಾಡಿ, ಬಾಡಿಗೆ ಕಟ್ಟಂಗಿಲ್ಲ, ಕರ-ಸುಂಕ ತೆರವಾಂಗಿಲ್ಲ. ಬೇಕಾದ್ರೆ ಅಂಗ್ಡಿ ಹಾಕ್ದ, ಇಲ್ಲಾಂದ್ರೆ ಸುಮ್ನೇ ಕೂತು ಆರಾಮ್ ತಗಂಡ! ಯಾರೋ ಗಲಾಟೆ ಮಾಡದ್ರೆ ಒಂದ್ ಕೆಲು ದಿನ ಭೂಗತವಾಗ್ಬುಟ್ರೆ ಆಯ್ತಪ್ಪ! ಯಾರೋ ಬರ್ತವರಲ್ಲಾ .....ಬಿಳೀ ಜುಬ್ಬಾ ಪೈಜಾಮು ...ಓ ನಮ್ ಗಿರಾಕಿನೇ ಇರ್ಬೇಕು ಬಿಡಿ.

" ಯೇನ್ರೀ ಯೇನೈತೆ ಗಾಡೀಲಿ ? "

" ತಮ್ ಪರಿಚಯ ? "

" ನಾನು ಎಡೆಯಿಡೋರ್ಕಡೆಯವ್ನು "

" ಯಾವಾಗ್ನಿಂದ ? "

" ಕಳೆದ ಸರ್ತಿ ಹೈದ್ರಾಬಾದಿಗೆ ಹೋಗಿದ್ವಲ್ಲಾ ಅಲ್ಲಿಂದ ಬಂದ್ ಮ್ಯಾಲಿಂದ ಒಂಥರಾ ಹಂಗೇಯ"

" ಏನ್ ಕೊಡ್ಲಿ ಸ್ಥಾನ-ಮಾನ-ಸನ್ಮಾನ ?"

" ಹೂಂ ಕಣಪ್ಪಾ ಎಲ್ಲಾನೂ ಬೇಕು...ಎಲ್ಲಾ ಒಟ್ಟೂ ಎಷ್ಟಾಗ್ಬೋದು ? "

" ಛೆ ಛೆ ಜಾಸ್ತಿಯೇನಿಲ್ಲ, ಮಾಮೂಲೀ ಸೂಟ್ ಕೇಸು ತಮಗೆ ಗೊತ್ತಿರ್ಬೋದು ತಾವು ಎಡೆಯಿಕ್ಕೋರಕಡ್ಯೋರು "

" ಪರವಾಗಿಲ್ಲ ಕಣಯ್ಯಾ ಅಂಗ್ಡಿ ಚೆನ್ನಾಗದೆ "

" ಎನಾರಾ ಮಾಡ್ಬೇಕಲ್ಲಾ ಸಾಮಿ...ನಾನಂತೂ ಚುನಾವಣೆ ಅಂತೆಲ್ಲಾ ನಿಲ್ಲಾಕಿಲ್ಲ .... ಆದ್ರೆ ಒಂದ್ಮಾತು ಇವತ್ತು ಎಡೆಯಿಕ್ಕೋರು ಸಲ್ಪ ಬ್ಯೂಸಿ ಅವ್ರೆ ನಾಳೆ ಇಟ್ಕೊಂಬುಡನ, ಸದ್ಯಕ್ಕೆ ನೀವೂ ಅವರೇಳೋದಕ್ಕೆಲ್ಲಾ ಊಂ ... ಅಂತಾ ಇರಿ, ಅವರು ಸಲ್ಪ ಫ್ರೀ ಆಗುತ್ಲೇ ವಿಷ್ಯ ಮಾತಾಡವ ಎಲ್ಲಾ ಸಲೀಸಾಗೋತದೆ "

" ಆಯ್ತು ಬಿಡು ನೀನು ಸುಮಾರ್ ವರ್ಸದಿಂದ ಇದೇ ವ್ಯಾಪಾರ ಮಾಡ್ತಾ ಇದ್ದೀಯಾಂತ ಕೇಳೀನಿ"

" ವ್ಯಾಪಾರ ಏನ್ ಸ್ವಾಮಿ? ದೇಶ ಸೇವೆ ಕೈಲಾದ್ನ ಮಾಡೋದು. ನೋಡಿ ಇದೇ ತಳ್ಳೋಗಾಡಿ..ಇದೇ ಹಾದಿಬೀದಿ"

" ಚೆನ್ನಾಗ್ಹೇಳ್ತೀಯ ಕಣಯ್ಯಾ ಹಹ್ಹಹ್ಹ"