ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, July 14, 2010

ಥೈ ಥೈ ತದ್ದಿನ ಧೇಂ ಧೇಂ........




ಥೈ ಥೈ ತದ್ದಿನ ಧೇಂ ಧೇಂ........


ಪ್ರತಿಭೆಗಳಲ್ಲಿ ದೈತ್ಯ ಪ್ರತಿಭೆಗಳದ್ದೇ ಒಂದು ವಿಭಾಗ. ಅವುಗಳನ್ನು ಪರಿಚಯಿಸಲು ಪ್ರಾರಂಭಿಸಿದರೆ [ವಾಸ್ತವವಾಗಿ ಅವರುಗಳ ಪರಿಚಯ ಎಲ್ಲರಿಗೂ ಇದೆ, ಆದರೆ ಅವ್ರನ್ನು ನನ್ನ ಶಬ್ಧಗಳಲ್ಲಿ ತಿಳಿಸಿಕೊಡುವುದಾದರೆ]ಎಲ್ಲಿ ಆದಿ ಮತ್ತು ಎಲ್ಲಿ ಅಂತ್ಯ ಎಂದು ಗೊತ್ತುಮಾಡಿಕೊಳ್ಳುವುದು ಕಷ್ಟ. ಒಂದೊಮ್ಮೆ ಕಮ್ಮಿ ಹೇಳಿಬಿಟ್ಟರೆ ಎನ್ನುವ ಆಭಾಸ ಬೇರೆ. ಆದರೂ ನನಗೆ ಗೊತ್ತಿರುವ ಮಟ್ಟಿಗೆ ಗೊತ್ತಿರುವುದನ್ನು ಇತರರಿಗೆ ಹಂಚಲು ಅಭ್ಯಂತರವೇನಿಲ್ಲವಲ್ಲ! ಹೀಗಾಗಿ ಬರೆಯಲು ಮುಂದಾಗುತ್ತಿದ್ದೇನೆ. ಇವತ್ತಿನ ನಮ್ಮ ಕಥಾನಕದ ನಾಯಕ ದಿ|ಶ್ರೀ ಕೋಟ ಶಿವರಾಮ ಕಾರಂತರು, ಪ್ರಾಯಶಃ ಕಾರಂತರೆಂದರೆ ಅದು ಇವರು ಎಂದೇ ಅರ್ಥ! ಅಷ್ಟರ ಮಟ್ಟಿಗೆ ಜನಪ್ರಿಯರಾದ ವ್ಯಕ್ತಿ ಈ ಕಾರಂತಜ್ಜ. ಮಕ್ಕಳಿಗಾಗಿ ’ತರಂಗ’ ವಾರಪತ್ರಿಕೆಯಲ್ಲಿ ’ಬಾಲವನ’ದ ಕಾರಂತಜ್ಜನಾದ ಶ್ರೀಯುತರು ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕೈಹಾಕದ ಕಣಗಳೇ ಇಲ್ಲ!

ಯಾರಿಗಾದರೂ ಏನಾದರೂ ಸಂದೇಹವಿದ್ದರೆ ಅದೊಂದು ಕಾಲವಿತ್ತು-ಸೀದಾ ಕಾರಂತರಲ್ಲಿ ಕೇಳುವುದು-ಆ ಮೂಲಕ ಸಂದೇಹ ಬಗೆಹರಿಸಿಕೊಳ್ಳುವುದು. ಸಾಹಿತ್ಯ, ಜರ್ನಲಿಸಂ, ಯಕ್ಷಗಾನ, ಸಿನಿಮಾ ನಿರ್ದೇಶನ, ಕೃಷಿ ಹೀಗೇ ಯಾವ ರಂಗದಲ್ಲೂ ಸಿಗಬಹುದಾದ ಕವಿ-ಸಾಹಿತಿಗಳ ಸಾಲಿನಲ್ಲಿ ಶ್ರೀಯುತರು ಅಗ್ರಗಣ್ಯರು. ಬದುಕಿನ ಕೊನೆಯ ಘಟ್ಟದ ವರೆಗೂ ಅತ್ಯಂತ ಕ್ರಿಯಾತ್ಮಕವಾಗಿ, ಕ್ರಿಯಾಶೀಲರಾಗಿ ದೀಪದಿಂದ ಹಲವು ದೀಪ ಬೆಳಗಿದಂತೆ ತನ್ನ ಇಚ್ಛಾಶಕ್ತಿಯಿಂದ ಅನೇಕ ಪ್ರತಿಭೆಗಳನ್ನು ಬೆಳಕಿಗೆ ತಂದ ’ಕಡಲ ತೀರದ ಭಾರ್ಗವ’ನ ಬಗ್ಗೆ ಸ್ವಲ್ಪ ಹೆಳುತ್ತೇನೆ ಕೇಳಿ--

೧೯೦೨ ರ ಅಕ್ಟೋಬರ್ ೧೦ನೇ ದಿನಾಂಕದಂದು ಉಡುಪಿಗೆ ಹತ್ತಿರದ ’ಕೋಟ’ ಎಂಬ ಗ್ರಾಮದಲ್ಲಿ ಶೇಷ ಕಾರಂತ ಮತ್ತು ಲಕ್ಷ್ಮಮ್ಮ ದಂಪತಿಗೆ ಐದನೆಯ ಮಗುವಾಗಿ ಜನಿಸಿದ ಕಾರಂತರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಕುಂದಾಪುರದಲ್ಲಿ ಪೂರೈಸಿ ನಂತರ ಮಂಗಳೂರಿನಲ್ಲಿ ಕಾಲೇಜು ವ್ಯಾಸಂಗವನ್ನು ಸ್ವಲ್ಪಕಾಲ ಮಾಡಿದರು. ಆಗೆಲ್ಲ ನಮ್ಮ ಗಾಂಧೀ ತಾತನ ಚಳುವಳಿಗಳು ಜೋರಾಗಿ ನಡೆಯುತ್ತಿದ್ದವು. ಗಾಂಧೀಜಿಯಿಂದ ಪ್ರಭಾವಿತರಾದ ಕಾರಂತರೌ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು. ಇದೇ ಕಾರಣದಿಂದ ಅಸಹಕಾರ ಚಳುವಳಿಗಾಗಿ ಕಾಲೇಜು ಓದನ್ನು ಅರ್ಧಕ್ಕೇ ನಿಲ್ಲಿಸಿದರು. ಖಾದಿ ಮತ್ತು ಸ್ವದೇಶೀ ಚಳುವಳಿಗಳಲ್ಲಿ ಐದುವರ್ಷಗಳ ಕಾಲ ತೊಡಗಿಕೊಂಡ ಶ್ರೀಯುತರು ಪತ್ತೇದಾರಿ ಕಾದಂಬರಿಗಳನ್ನು ಬರೆಯಲು ಆರಂಭಿಸಿ ಮುನ್ನಡೆದರು. ಅಜಮಾಸು ಮೂವತ್ತು ವಯಸ್ಸಿನಲ್ಲಿ ಲೀಲಾ ರನ್ನು ಮದುವೆಯಾದರು.

ನನಗೆ ಸುಮಾರು ೮ವರ್ಷ ವಿರಬಹುದು. ಆಗ ನನ್ನ ಚಿಕ್ಕಪ್ಪನ ಮನೆಯಲ್ಲಿ [ರಜದಲ್ಲಿ] ಕಂಡ, ಕಾರಂತರು ಖಗೋಳದ ಬಗ್ಗೆ ’ಈ ಜಗತ್ತು’ ಎಂಬ ಪುಸ್ತಕಮಾಲೆಯನ್ನು ಓದಲು ಮನಸ್ಸುಮಾಡಿದೆ. ಅಲ್ಲಿನಿಂದ ನನಗೆ ಕಾರಂತರ ಮೇಲಿನ ಪ್ರೇಮ ಜಾಸ್ತಿಯಾಗುತ್ತಾ ಹೋಯಿತು. ಸಾಮಾನ್ಯವಾಗಿ ಯಾರೂ ಅಷ್ಟು ಸವಿಸ್ತಾರವಾಗಿ ಹೇಳದ ಖಗೋಳ ಶಾಸ್ತ್ರವನ್ನು ಬಹಳ ಪರಿಪೂರ್ಣವಾಗಿ ಹೇಳಿದ್ದಾರೆ. ಕನ್ನಡ ಮತ್ತು ಸಂಸ್ಕೃತಿಗೆ ಅಪ್ರತಿಮ ಕೊಡುಗೆಗಳನ್ನು ಕೊಟ್ಟ ಕಾರಂತರ ಕಾದಂಬರಿಗಳಂತೂ ಒಂದಕ್ಕಿಂತಾ ಒಂದು ಅದ್ಬುತ! ಓದಿದ ಯಾವನೂ ಮರೆಯಲಾಗದ ಅನನ್ಯ ಅನುಭವ ಆ ಕಾದಂಬರಿಗಳಲ್ಲಿ. ಮರಳಿ ಮಣ್ಣಿಗೆ, ಅಳಿದಮೇಲೆ, ಬೆಟ್ಟದ ಜೀವ, ಮೂಕಜ್ಜಿಯ ಕನಸುಗಳು, ಚೋಮನ ದುಡಿ ಇವೆಲ್ಲಾ ದಿನವೂ ಕೆಣಕುವ ಪಾತ್ರಗಳನ್ನೊಳಗೊಂಡ ಕಾದಂಬರಿಗಳು. ಅವುಗಳಿಂದ ಸಿಗುವ ಬದುಕಿನ ಅನುಭವ ಸಾರ ಅನುಭಾವಿಯಾಗಲು ಯಾರಿಗೆ ಇಷ್ಟವಾಗುವುದಿಲ್ಲ! ಮೈ ಮನಗಳ ಸುಳಿಯಲ್ಲಿ, ಅದೇ ಊರು ಅದೇ ಮರ, ಶನೀಶ್ವರನ ನೆರಳಿನಲ್ಲಿ, ಕುಡಿಯರ ಕೂಸು, ಸ್ವಪ್ನದ ಹೊಳೆ, ಸರ್ಸಮ್ಮನ ಸಮಾಧಿ--ಇವೂ ಕೂಡ ಅತ್ಯುತ್ತಮ ಕೃತಿಗಳೇ ಆಗಿವೆ. ’ಮರಳಿ ಮಣ್ಣಿಗೆ’ ಕಾದಂಬರಿ ಅವರ ಕೃತಿಗಳಲ್ಲೇ ಶ್ರೇಷ್ಠ ಎಂದರೆ ತಪ್ಪಾಗಲಾರದು. ವರುಷಕ್ಕೊಂದರಂತೆ ಸುಮಾರು ೪೭ ಕಾದಂಬರಿಗಳನ್ನು ಬರೆದ ಕಾರಂತರು ೧೯೫೭ ರಲ್ಲಿ ಸ್ವಲ್ಪ ಯಕ್ಷಗಾನ ಬಯಲಾಟದ ಕಡೆಗೆ ವಾಲಿದರು.

ಯಕ್ಷಗಾನದ ಗಂಡುಮೆಟ್ಟಿನ ಸ್ಥಳಗಳಲ್ಲಿ ಕುಂದಾಪುರವೂ ಒಂದು. ಇಲ್ಲಿಗೆ ಹತ್ತಿರದ ಸಾಲಿಗ್ರಾಮದಲ್ಲಿ ಬಹುಕಾಲ ವಾಸಿಸಿದ್ದ ಕಾರಂತರು ಯಕ್ಷಗಾನವನ್ನು ಬಹುವಾಗಿ ಪ್ರೀತಿಸಿದವರು. ಸಮಗ್ರ ಕಲೆಯಾದ ಅದನ್ನು ಸಮಾಜದ ಮುಂಚೂಣಿಗೆ ತರಲು ಬಹಳ ಶ್ರಮಿಸಿದವರಲ್ಲಿ ಶ್ರೀಯುತರೂ ಒಬ್ಬರು. ಯಕ್ಷಗಾನ ಬಯಲಾಟ ಮತ್ತು ಯಕ್ಷಗಾನ ಎಂಬುದಾಗಿ ಎರಡು ಹೊತ್ತಗೆಗಳನ್ನು ಯಕ್ಷಗಾನದ ಮೇಲೆ ಬರೆದರು. ಯಕ್ಷಗಾನದ ಕುರಿತು ಸಂಶೋಧನೆ ನಡೆಸಿದವರಲ್ಲಿ ಮೊಟ್ಟ ಮೊದಲನೆಯ ಮತ್ತು ಅತೀ ಪ್ರಮುಖರು ಎಂದರೆ ಅವರೇ ಶಿವರಾಮ ಕಾರಂತರು!ಯಕ್ಷಗಾನದ ಹಳೆಯ ಪ್ರಸಂಗಗಳನ್ನು ಹುಡುಕಿ,ಅವುಗಳ ಸಂಗೀತದ ತಾಯಿಬೇರನ್ನು ಹೊರತೆಗೆದು, ಯಕ್ಷಗಾನದ ಹುಟ್ಟು-ಬೆಳವಣಿಗೆ ಮುಂತಾದ ವಿಷಯಗಳನ್ನು ಬಹಳಕಾಲ ಅಭ್ಯಸಿಸಿದ ಕಾರಂತರು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತ ಬ್ಯಾಲೆ ಮುಂತಾದ ಜಾನಪದ ಕುಣಿತಗಳನ್ನು ಯಕ್ಷಗಾನದಲ್ಲಿ ಪ್ರಯೋಗಿಸಿ ನೋಡಿದರು.ತನ್ನದೇ ಆದ ತಂಡವೊಂದನ್ನು ಕಟ್ಟಿಕೊಂಡು ಅದನ್ನು ಆ ಕಾಲದಲ್ಲೇ ಐರೋಪ್ಯ ದೇಶಗಳಿಗೆ ಕೊಂಡೊಯ್ದಿದ್ದರು.

೧೯೩೦-೪೦ ರಲ್ಲಿ ಪ್ರಿಂಟಿಂಗ್ ಪ್ರೆಸ್ ಆರಂಭಿಸಿ ತನ್ನ ಮೊದಲ ಕೆಲವು ಕಾದಂಬರಿಗಳನ್ನು ಅವರೇ ಪ್ರಕಟಿಸಿದರು ಮಾತ್ರವಲ್ಲ ಅದಕ್ಕೆ ಆವರಣ ಪುಟ[ಕವರ್ ಪೇಜ್] ಅವರೇ ರಚಿಸಿದ ಚಿತ್ರ ಮತ್ತು ವಿನ್ಯಾಸಗಳಿಂದ ಕೂಡಿತ್ತು. ಬಹುಶಃ ಕೃತಿಕಾರರು ತಮ್ಮ ಪುಸ್ತಕಗಳಿಗೆ ಆವರಣ ಪುಟದ ವಿನ್ಯಾಸವನ್ನೆಲ್ಲ ಮಾಡುವುದು ದುರ್ಲಭ. ಆದರೆ ಕಾರಂತರು ಅದನ್ನು ಮಾಡಿದ್ದರು. ನಂತರ ಪ್ರೆಸ್ ತುಂಬಾ ನಷ್ಟದಲ್ಲಿ ನಡೆದುದರಿಂದ ಅದನ್ನು ನಿಲ್ಲಿಸಿಬಿಟ್ಟರು.

ಕಾರಂತರು ಒಟ್ಟೂ ೪೧೭ ಪುಸ್ತಕಗಳನ್ನು ಹೊರತಂದು ಭಾರತದಲ್ಲೇ ಬರಹಗಾರನೊಬ್ಬನಿಗೆ ಸಾರಾಸಗಾಟಾಗಿ ಸಾಧ್ಯವಾಗದ ಸಾಧನೆ ಮೆರೆದಿದ್ದರೂ ಇದು ಮೊದಲು ಪರಿಗಣಿತವಾಗಲಿಲ್ಲ. ಬರೇ ೪೭ ಕಾದಂಬರಿಗಳಷ್ಟೇ ಅಲ್ಲದೇ ಅವರು ೩೧ ಗೀತ ರೂಪಕಗಳು,೪ ಸಣ್ಣ ಕಥೆಗಳು, ವಿವಿಧ ಪ್ರಬಂಧಗಳ ೬ ಪುಸ್ತಕಗಳು ಮತ್ತು ರೇಖಾಚಿತ್ರಗಳು, ಜಾಗತಿಕ ಕಲೆಯ ಕನ್ನಡಾವತರಣಿಕೆಯೂ ಸೇರಿದಂತೇ ಕಲೆಯ ಮೇಲೆ ೧೩ ಪುಸ್ತಕಗಳು,ಚಾಳುಕ್ಯ ಶಿಲ್ಪಕಲೆ ಮತ್ತು ವಿನ್ಯಾಸದ ಬಗ್ಗೆ ಪುಸ್ತಕ, ಯಕ್ಷಗಾನದ ಮೇಲೆ ಎರಡು, ಮಕ್ಕಳಿಗಾಗಿ ಜ್ಞಾನಭಂಡಾರ ತುಂಬಿದ ಮೂರು ಸಂಚಿಕೆಗಳುಳ್ಳ ಪುಸ್ತಕ, ಬೆಳೆದ ಮಕ್ಕಳಿಗಾಗಿ ೪ ಸಂಚಿಕೆಗಳ ವಿಜ್ಞಾನದ ಎನ್ಸೈಕ್ಲೋಪೀಡಿಯಾ, ೨೪೦ ಮಕ್ಕಳ ಪುಸ್ತಕ, ಪ್ರವಾಸದ ಬಗ್ಗೆ ೬ ಪುಸ್ತಕಗಳು, ಪಕ್ಷಿಗಳ ಬಗ್ಗೆ ಎರಡು, ಮೂರು ಪ್ರವಾಸ ಕಥನಗಳು, ಒಂದು ಸ್ವಂತ ಜೀವನ ಚರಿತ್ರೆ ಹೀಗೇ ಈ ಯಾದಿ ಪೂರ್ಣಗೊಳ್ಳುವುದಿಲ್ಲ! ಮಕ್ಕಳಿಗಂತೂ ಅಮರಚಿತ್ರಕಥೆಯನ್ನುಅನುವಾದಿಸಿ ಕೊಟ್ಟ ಕಾರಂತಜ್ಜ ಪ್ರಾತಃಸ್ಮರಣೀಯರು.

ಅವರ 'ಮೂಕಜ್ಜಿಯ ಕನಸುಗಳು' ಕಾದಂಬರಿಗೆ ಶ್ರೀಯುತರಿಗೆ ಜ್ಞಾನಪೀಠಪ್ರಶಸ್ತಿ ಲಭಿಸಿತು. ಇಲ್ಲಿ ಮೂಕಿಯಾಗಿರುವ ಅಜ್ಜಿಯೊಬ್ಬಳು ತನ್ನ ಹತ್ತಿರದ ಬಂಧು ಸುಬ್ಬಣ್ಣನಿಗೆ ಹಲವು ಅರ್ಥವಗದ ಘಟನೆಗಳನ್ನು ಅರ್ಥವಾಗುವಂತೆ ತಿಳಿಸಿಕೊಡುವುದು, ಹಿಂದಿನ ಕುರುಡು ನಂಬಿಕೆಗಳು ಅವುಗಳ ಅಡ್ಡ ಪರಿಣಾಮಗಳು ಇವುಗಳ ಬಗ್ಗೆ ವಿಸ್ತ್ರತವಾಗಿ ವಿವರಿಸುವ ಈ ಕಾದಂಬರಿಯಲ್ಲಿ ಹಳೆಯ ಕಾಲದ ಕುರುಡು ಕಟ್ಟುಪಾಡುಗಳು, ಬದುಕಿನ ಹಲವು ಮಜಲುಗಳು, ಧಾರ್ಮಿಕ ಮತ್ತು ಸಾಮಾಜಿಕ ಸಂಬಂಧಗಳು, ಪರಿಕಲ್ಪನೆಗಳು ಇವುಗಳನ್ನೆಲ್ಲ ಮೂಕಜ್ಜಿಯ ಸನ್ನೆಗಳಲ್ಲಿ ಪ್ರಸ್ತುತ ಪಡಿಸುವ ಕಾರಂತರು ಅವಳಿಗೆ ಅತಿಮಾನುಷ ಶಕ್ತಿಯನ್ನು ಕೊಟ್ಟು ಭೂತ ಮತ್ತು ಭವಿಷ್ಯತ್ ಕಾಲದ ಆಗು ಹೋಗುಗಳು ಅವಳಿಗೆ ಗೋಚರಿಸುತ್ತಿರುವಂತೆ ಚಿತ್ರಿಸಿದ್ದಾರೆ. ಸುಬ್ಬಣ್ಣ ಅನೇಕ ಘಟನೆಗಳಿಗೆ ಹತ್ತಿರದ ಕಾಡಲ್ಲಿ ಕುರುಹು ಹುಡುಕುವುದು, ಅಲ್ಲಿನ ಗುಹೆಗಳಲ್ಲಿ ಆತನಿಗೆ ಕೂದಲು-ಮೂಳೆ ಮೊದಲಾದವು ಸಿಗುವುದು, ಆತ ಅವನ್ನು ತಂದು ಮೂಕಜ್ಜಿ ತೋರಿಸಿದಾಗ ಅವಳು ಅವುಗಳು ಹೇಗೆ ಅಲ್ಲಿ ಬಿದ್ದಿವೆ ಎಂಬುದರ ಬಗ್ಗೆ ಹಲವು ಆಶ್ಚರ್ಯಕರ ಸಂಗತಿಗಳನ್ನು ಹೊಅರಗೆಡಹುವುದು--ಹೀಗೇ ಕಾದಂಬರಿ ಅಂದಿನ ಕಾಲದ ಹಲವು ಮಜಲುಗಳನ್ನು ಮೆಲುಕುತ್ತದೆ ಮತ್ತು ರಸವತ್ತಾಗಿದೆ. ಒಬ್ಬನ ಜೀವನದ ಮೌಲ್ಯವನ್ನು ವಿಸ್ತರಿಸಿ ಹೇಳುವ ಈ ಕಾದಂಬರಿ ಕುರುಡು-ಮೂಢ ನಂಬಿಕೆಗಳು ಮಾಡುವ ದುಷ್ಪರಿಣಾಮಗಳನ್ನು ವಿಷದೀಕರಿಸು ಪರಿ ನಿಜಕ್ಕೂ ಪರಿಣಾಮಕಾರಿ! ಹೀಗೇ ಇದೂ ಅಲ್ಲದೇ ಸ್ವತಃ ವಿಜ್ಞಾನವನ್ನು ಓದದ ಕಾರಂತರು ಅತ್ಯಂತ ಮಹತ್ತರ ಮತ್ತು ಸ್ವಾರಸ್ಯಕರ ವಿಜ್ಞಾನದ ಪರಿಚಯವನ್ನು ಅಂದಿನ ಮಕ್ಕಳಿಗೆ ಮಾಡಿಕೊಟ್ಟಿರುವುದು ಪ್ರಶಂಸನೀಯ ಮತ್ತು ಆಶ್ಚರ್ಯಕರ!

ತನ್ನವರನ್ನು ಕಳೆದುಕೊಂಡು ಮರುಗುವ ಮನಸ್ಸಿನ್ನು ತಹಬಂದಿಯಲ್ಲಿಟ್ಟು ’ಹುಚ್ಚು ಮನಸ್ಸಿನ ಹತ್ತು ಮುಖಗಳು’ ಎಂಬ ಜೀವನಚರಿತ್ರೆಯ ಮೊದಲ ಭಾಗವನ್ನು ಬರೆದು ನಂತರ ಎರಡನೆಯ ಭಾಗವಾಗಿ"ಸ್ಮೃತಿ ಪಟಲದಿಂದ’ ಎನ್ನುವ ಕೃತಿಯನ್ನು ಹೊರತಂದಿದ್ದಾರೆ. ತನ್ನ ನಾಡು-ನುಡಿಯ ಉಳಿವಿಗಾಗಿ ಪರಿಸರ ಹೋರಾಟಕ್ಕೆ ಧುಮುಕಿ ಶರಾವತಿ ಟೇಲರೇಸ್ ಮತ್ತು ಕೈಗಾ ಅಣುಸ್ಥಾವರದ ಪ್ರತಿಷ್ಠಾಪನೆಯ ವಿರುದ್ಧ ಪರಿಸರ ಆಂದೋಲನವನ್ನು ನಡೆಸಿದರು. ಅಂದಿನ ಅನಿವಾರ್ಯತೆಯಲ್ಲಿ ರಾಜಕೀಯವನ್ನು ಸೇರಿ ಸಮಾಜಕ್ಕೆ ಸೇವೆ ಮಾಡಲು ಮುನ್ನುಗ್ಗಿದ ಅವರಿಗೆ ಚುನಾವಣೆಯಲ್ಲಿ ನಮ್ಮ ಜನ ಗೆಲುವು ನೀಡಲಿಲ್ಲ, ಬಹುಶಃ ಅವರಿಗೆ ಅದು ಯೋಗ್ಯವಲ್ಲದ ರಂಗ ಎಂತಲೇ ಹಾಗೆ ಮಾಡಿದ್ದಿರಬಹುದು! ತನ್ನ ಮೊನಚಾದ ಮಾತುಗಳಿಂದ ಚಾಟಿ ಏಟು ಕೊಡುತ್ತಿದ್ದ ಕಾರಂತರು, ಅವಿಭಜಿತ ದಕ್ಷಿಣ ಕನ್ನಡ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಅಪಾರ ಜನಮನ್ನಣೆ ಗಳಿಸಿದ ನಡೆದ್ದಾಡುವ ವಿಶ್ವಕೋಶವೆಂದೇ ಖ್ಯಾತರದ ಕಾರಂತರು ಸಮಾಜದಿಂದ " ಕಡಲ ತೀರದ ಭಾರ್ಗವ" ಎಂದೇ ಗುರುತಿಸಲ್ಪಟ್ಟರು. ಹಂಪಿ ಉಳಿಸುವ ಬಗ್ಗೆ ಸೇರಿದಂತೆ ಹತ್ತು-ಹಲವು ವಿಷಯಗಳಲ್ಲಿ ಅವರು ಆಂದೋಲನಗೈದರು.

ಕೊಡಗಿನ ಕಾಫೀ ಎಸ್ಟೇಟ್ ಹಾಗೂ ಅಡಿಕೆತೋಟದ ಮಾಲೀಕರಾದ ದಿ|ಗುಂಡುಕುಟ್ಟಿ ಮಂಜುನಾಥಯ್ಯನವರ ಮನೆಯಲ್ಲಿ ಅವರ ಒತ್ತಾಯದ ಮೇರೆಗೆ ಸುಮಾರು ತಿಂಗಳುಗಳ ಕಾಲ ವಾಸವಿದ್ದ ಕಾರಂತರು " ಬೆಟ್ಟದ ಜೀವ " ಕಾದಂಬರಿ ಬರೆದರು. ಇದರಲ್ಲಿ ಅಡಿಕೆ ತೋಟದ ಕೃಷಿಕರಾದ ವೃದ್ಧ ದಂಪತಿಯನ್ನು ಚಿತ್ರಿಸಿದರು. ಶಹರದಿಂದ ಮಗನ ಹಿಂದಿರುಗುವಿಕೆಯ ನಿರೀಕ್ಷೆಯಲ್ಲಿರುವ ಈ ದಂಪತಿಯ ಕಥೆ ಅತ್ಯಂತ ಹೃದಯಂಗಮವಾಗಿದೆ. "ಸರಸಮ್ಮನ ಸಮಾಧಿ" ಸತಿ ಪದ್ಧತಿಯ ಬಗ್ಗೆ ವಿವೇಚಿಸಿದರೆ ’ಮರಳಿ ಮಣ್ಣಿಗೆ’ ಮೂರು ತಲೆಮಾರಿನ ಬಗ್ಗೆ ತಿಳಿಸಿಕೊಡುವಂತಾದ್ದು, ’ಮೈಮನಗಳ ಸುಳಿಯಲ್ಲಿ’ ಕಾದಂಬರಿ ಬಸ್ರೂರಿನ ನರ್ತಕಿಯೊಬ್ಬಳ ಸುತ್ತ ಹೆಣೆದದ್ದಾಗಿದ್ದು ಕೆಲವು ನಾಜೂಕು ವಿಷಯಗಳಿಂದ ಕೂಡಿತ್ತಾದ್ದರಿಂದ ಚೆನ್ನಾಗೇ ಇದ್ದರೂ ಜನ ಅದನ್ನು ಬಹಳವಾಗಿ ಪ್ರಚುರಪಡಿಸಲಿಲ್ಲ. 'ಅಪೂರ್ವಪಶ್ಚಿಮ' -ಪ್ರವಾಸ ಕಥನ ಓದುವುದೇ ಒಂದು ರೋಮಾಂಚನ. ಇದನ್ನು ಓದಿದವರು ಹಲವಾರು ಬಾರಿ ಮತ್ತೆ ಓದುವುದಿದೆ!

ಆನೆ ಹೋದದ್ದೇ ದಾರಿ ಎಂಬ ಗಾದೆಯಂತೆ ಕಾರಂತರು ನಡೆದದ್ದೇ ಮಾರ್ಗ! ಮಕ್ಕಳಿಗಾಗಿ ಅತೀ ಮುತುವರ್ಜಿಯಿಂದ ಅವರು ನಿರ್ಮಿಸಿದ ಚಿಕ್ಕ ರೈಲು ಏಷಿಯಾದಲ್ಲಿಯೇ ಪ್ರಪ್ರಥಮವಾಗಿತ್ತು ಮಾತ್ರವಲ್ಲ ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ಅದೇ ತೆರನಾದ ಮಕ್ಕಳ ರೈಲು ನಿರ್ಮಾಣಕ್ಕೆ ಪ್ರೇರಕವಾಯಿತು. ಕಾಡುಗಳ್ಳರಿಂದ ಎರಡು ಎಳೆಯ ಹುಲಿಮರಿಗಳನ್ನು ರಕ್ಷಿಸಿದ ಶ್ರೀಯುತರು ಮಗನನ್ನು ಆ ದಿಸೆಯಲ್ಲಿ-ಪರಿಸರ ಸಂರಕ್ಷಣೆಯಲ್ಲಿ ತೊಡಗುವಂತೆ ಪ್ರೇರೇಪಿಸಿದರು. ಮಗ ಉಲ್ಲಾಸ್ ಕಾರಂತ ಇನ್ನೂ ಆ ಹಾದಿಯಲ್ಲೇ ಮುನ್ನಡೆದಿದ್ದಾರೆ.

ಸನ್ಮಾನ ಮತ್ತು ಪುರಸ್ಕಾರಗಳು

ಜ್ಞಾನಪೀಠ ಪ್ರಶಸ್ತಿ-೧೯೭೮
ಪದ್ಮ ಭೂಷಣ - ಇಂದಿರಾಗಾಂಧಿಯಿಂದ ತರಲ್ಪಟ್ಟ ಎಮರ್ಜೆನ್ಸಿ[ಮೀಸಾ] ಕಾಯಿದೆಯ ವಿರುದ್ಧ ನಡೆದ ಶ್ರೀಯುತರು ಇದನ್ನು ಆ ನೆನಪಿನಲ್ಲಿ ತಿರಸ್ಕರಿಸಿದರು,
ಸಾಹಿತ್ಯ ಅಕಾಡೆಮೀ ಪ್ರಶಸ್ತಿ - ೧೯೫೮
ಪಂಪ ಪ್ರಶಸ್ತಿ
ತುಲ್ಸಿ ಸಮ್ಮಾನ್
ಸ್ವೆಡಿಶ್ ಅಕಾಡೆಮಿ ಪ್ರಶಸ್ತಿ
ಮಂಗಳೂರು ವಿಶ್ವವಿದ್ಯಾಲಯ ೧೯೯೦ ರಲ್ಲಿ ’ಸೆಂಟರ್ ಫಾರ್ ಅಡ್ವಾನ್ಸ್ಡ್ ಸ್ಟಡೀಸ್’ ಎಂಬ ಸಂಸ್ಥೆಯನ್ನು ಕಾರಂತರ ಗೌರವಾರ್ಥ ಸ್ಥಾಪಿಸಿತು.
ಭಾರತದ ಹಲವು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ


ಕೆಲವು ಪ್ರಮುಖ ಕೃತಿಗಳು

ಮೂಕಜ್ಜಿಯ ಕನಸುಗಳು
ಮರಳಿ ಮಣ್ಣಿಗೆ
ಚೋಮನ ದುಡಿ
ಅಪೂರ್ವ ಪಸ್ಚಿಮ-ಪ್ರವಾಸ ಕಥನ
ಅಬುವಿಂದ ಬರ್ಮಾಕ್ಕೆ - ಪ್ರವಾಸ ಕಥನ
ಅರಸಿಕರಲ್ಲ - ಪ್ರವಾಸ ಕಥನ
ಮೈ ಮನಗಳ ಸುಳಿಯಲ್ಲಿ
ಬೆಟ್ಟದ ಜೀವ
ಸರಸಮ್ಮನ ಸಮಾಧಿ
ಅಳಿದ ಮೇಲೆ
ಕುಡಿಯರ ಕೂಸು
ಜ್ಞಾನ
ಮೈಲಿಕಲ್ಲಿನೊಡನೆ ಮತುಕತೆ-ಸಣ್ಣ ಕಥೆ
ಅದ್ಭುತ ಜಗತ್ತು - ( ಸೈನ್ಸ್)
ವಿಜ್ಞಾನ ಪ್ರಪಂಚ -( ಸೈನ್ಸ್)
ಕಲದರ್ಶನ - ಕಲೆಯ ಬಗೆಗೆ ಸಚಿತ್ರ ಪುಸ್ತಕ.
ಯಕ್ಷಗಾನ
ಯಕ್ಷಗನ ಬಯಲಾಟ
ಭಾರತೀಯ ಚಿತ್ರಕಲೆ
ಹುಚ್ಚು ಮನಸ್ಸಿನ ಹತ್ತು ಮುಖಗಳು--ಜೀವನ ಚರಿತ್ರೆ
ಚಿಗುರಿಧ ಕನಸು
ಮುಗಿದ ಯುದ್ಧ
ಮೂಜನ್ಮ
ಧರ್ಮರಾಯನ ಸಂಸಾರ
ಕೇವಲ ಮನುಷ್ಯರು
ಇಲ್ಲೆಯಂಬ
ಇದ್ದರೂ ಚಿಂತೆ
ನಾವು ಕಟ್ಟಿದ ಸ್ವರ್ಗ
ಅಷ್ಟ ದಿಗ್ಗಜಗಳು
ಕಣ್ಣಿದ್ದೂ ಕುರುಡರು
ಗೆದ್ದ ದೊಡ್ಡಸ್ತಿಕೆ
ಕನ್ನಡಿಯಲ್ಲಿ ಕಂಡಾತ
ಅಂಟಿದ ಅಪರಂಜಿ
ಹಳ್ಳಿಯ ಹತ್ತು ಸಮಸ್ತರು
ಸಮೀಕ್ಷೆ
ಮೊಗ ಪಡೆದ ಮನ
ಶನೀಶ್ವರನ ನೆರಳಿನಲ್ಲಿ
ನಂಬಿದವರ ನಾಕ ನರಕ
ಕಂಬನಿಯ ಕುಯಿಲು
ಈ ಜಗತ್ತು (ಸೈನ್ಸ್)


ಸಿನಿಮಾ-ದೃಶ್ಯಮಾಧ್ಯಮ


ಚೋಮನ ದುಡಿ
ಚಿಗುರಿದ ಕನಸು
ಮಲೆಯ ಮಕ್ಕಳು

ತಮ್ಮ ೯೫ ನೆಯ ವಯಸ್ಸಿನಲ್ಲೂ ಪಕ್ಷಿಗಳ ಬಗ್ಗೆ ಕೃತಿಯೊಂದನ್ನು ಬರೆದರು, ಹೆಚ್ಚಿನ ಪಕ್ಷ ಇದು ಜಾಗತಿಕ ದಾಖಲೆ ಎನ್ನಬಹುದು!

ರಸಿಕತೆಯನ್ನೂ ಮೈಗೂಡಿಸಿಕೊಂಡಿದ್ದ ಕಾರಂತರು ತುಂಬಾ ಹಾಸ್ಯಪ್ರಜ್ಞೆಯುಳ್ಳವರೂ ಆಗಿದ್ದರು.ಮುಖದಲ್ಲಿ ಗಂಭೀರ ಕಳೆ ಎದ್ದು ಕಾಣುತ್ತಿದ್ದರೂ ಮಗುವಿನ ಮನಸ್ಸಿನ ಮುಗ್ಧತೆಯನ್ನೂ ಹೊಂದಿದ್ದರು. ಪ್ರಯಾಣಿಸುವಾಗ ವಾಹನದಲ್ಲಿ ಎಂದೂ ಪ್ರಯಾಣಿಸುವ ದಿಕ್ಕಿಗೆ ವಿರುದ್ಧವಾಗಿ ಕೂರುತ್ತಿರಲಿಲ್ಲ! ಹಾಗೆ ಕೂತರೆ ಅದು ನಮ್ಮ ದೇಹ ಚಕ್ರಕ್ಕೆ ವಿರುದ್ಧವಾಗುತ್ತದೆಂಬ ವೈಜ್ಞಾನಿಕ ಸತ್ಯವನ್ನು ಅವರ ಮನಸ್ಸು ಅರಿತಿತ್ತು! ರಾತ್ರಿ ಹೊತ್ತಿನಲ್ಲಿ ದೇಹಾಯಾಸದಿಂದಲೂ ಸರಿಯಾಗಿ ಕಾಣಿಸದಿರುವುದರಿಂದಲೂ ಅಪಘಾತಗಳು ನಡೆಯುತ್ತವೆ ಎಂಬ ಕಾರಣಕ್ಕಾಗಿಯೂ ಮತ್ತು ಹಗಲಿಡೀ ಸುತ್ತಿದ ದೇಹಕ್ಕೆ ವಿಶ್ರಾಂತಿಯನ್ನು ಕೊಡಬೇಕೆಂಬ ಅನಿಸಿಕೆಯಿಂದಲೂ ಆದಷ್ಟು ಹಗಲು ಹೊತ್ತಿನಲ್ಲಿ ಮಾತ್ರ ಪ್ರಯಾಣಿಸುತ್ತಿದ್ದರು. ವೈಯಕ್ತಿಕ ಬದುಕಿನಲ್ಲಿ ಅವರೊಬ್ಬ ಶಿಸ್ತಿನ ಸಿಪಾಯಿಯಾಗಿದ್ದರು. ಯಕ್ಷಗಾನ ಪ್ರಿಯರಾಗಿದ್ದ ಅವರ ನೆನಪಿನಲ್ಲಿ ಯಕ್ಷಗಾನದ ಹಾಡೊಂದನ್ನು ಕೇಳಿ ಡಾ| ಕಾರಂತರಿಗೆ ನಮಿಸೋಣ.

ಬಡಗು ತಿಟ್ಟಿನ ಪ್ರಸಿದ್ಧ ನಟ ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಪಿಟ್ಸ್ ಬರ್ಗ್ ನಲ್ಲಿ ಅಭಿನಯಿಸಿದ ಹಾಡನ್ನು ಈ ಕೆಳಗಿನ ಲಿಂಕ್ ಕಾಪಿ-ಪೇಸ್ಟ್ ಮಾಡುವ ಮೂಲಕ ನೋಡಿ-ಅನುಭವಿಸಿ.
http://video.google.com/googleplayer.swf?docid=-3506364937259877306&hl=en&fs=true style=width:400px;height:326pxallowFullScreen=trueallowScriptAccess=alwaystype=application/x-shockwave-flash>

ಕಲಾವಿದ ಹೆಗಡೆಯವರಿಗೂ ಮತ್ತು ಹಿಮ್ಮೇಳದ ಎಲ್ಲಾ ಕಲಾವಿದರಿಗೂ ನಮನಗಳು.

ಇಷ್ಟೆಲ್ಲಾ ಬರೆದ ಕಾರಂತರು ಬದುಕಿನ ಕೊನೆಯ ಹಂತದವರೆಗೂ ಅತ್ಯಂತ ಸಕ್ರಿಯರಾಗಿ ಓಡಾಡಿಕೊಂಡಿದ್ದರು. ಬಹಳ ಲವಲವಿಕೆಯಿಂದಿದ್ದರು. ಬಹಳ ಸರಳ ಜೀವಿಯಾಗಿದ್ದ ಶ್ರೀಯುತರು ನಿಗರ್ವಿಯಾಗಿ ಬದುಕಿದ ಮಹಾಮೇರುವಾಗಿದ್ದರು. ಕನ್ನಡದ ಅಭೂತಪೂರ್ವ ಆಸ್ತಿ ಕಾರಂತರು ೯ ಡಿಸೆಂಬರ್ ೧೯೯೭ ರಂದು ತಮ್ಮ ಬದುಕಿಗೂ ಬರವಣಿಗೆಗೂ ವಿದಾಯಹೇಳಿದರು.