ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, July 27, 2011

ಕಿವಿ ಕತ್ತರ್ಸ್ಬುಡ್ತೀನಿ ನೋಡು ನನ್ಮಗನೆ !


ಕಿವಿ ಕತ್ತರ್ಸ್ಬುಡ್ತೀನಿ ನೋಡು ನನ್ಮಗನೆ !

ತಮಾಷೆಯ ಪ್ರಸಂಗಗಳು ನಮ್ಮನ್ನು ದಿಗಿಲುಗೊಳಿಸುವ ಘಟನೆಗಳು ಆಗಾಗ ನಡೆಯುತ್ತಲೇ ಇರುವುದು ಜೀವನದ ಸ ರಿ ಗ ಮ ಪಗಳಲ್ಲಿ ಒಂದು. ಹಾಗಿಲ್ಲದಿದ್ದರೆ ಜಗನ್ನಿಯಾಮಕನಿಗೆ ಜಗತ್ತಿನ ಸೂತ್ರದ ತಾಳ ತಪ್ಪಿಹೋಗುತ್ತದೋ ಏನೋ. ಯಾರೋ ಯಾರಿಗೋ ಬಯ್ಯುವುದು, ಇನ್ನೆಲ್ಲೋ ಜಗಳ ದೊಂಬಿ, ರಸ್ತೆ ಮಧ್ಯೆ ಗಲಾಟೆ, ಮನೆಯೆದುರು ಮಾರಾಮಾರಿ ! ಯಾರೋ ಪಕ್ಕದಮನೆ ಹುಡುಗಿ ಜತೆ ಪರಾರಿ ! ಅಲ್ಲೆಲ್ಲೋ ಲಾಜಿನಲ್ಲಿ ಸಿನಿಮಾ ನಟಿಯ ಮೈವ್ಯವಹಾರ ! ಹೇಗೆ ಮನೆಗಳಲ್ಲಿ ಊಟ ತಿಂಡಿ ರನ್ನಿಂಗ್ ಅಕೌಂಟೋ ಹಾಗೇ ಸಮಾಜದಲ್ಲಿ ಇವೆಲ್ಲಾ ಆಗಾಗ ಘಟಿಸುತ್ತಲೇ ಇರುತ್ತವೆ. ಆಳುವ ದೊರೆಗಳು-ವಂದಿಮಾಗಧರು ನಡೆಸುವ ಅಹೋರಾತ್ರಿ ದಗಲ್‍ಬಾಜಿ ನಾಟಕ ಹೊಸದೇನಲ್ಲ ಬಿಡಿ-ಯಾಕೇಂದ್ರೆ ಈಗ ರಾಜಕೀಯ ಅಂದ್ರೇ ಹಾಗೆ ಅನ್ನಿಸುವಷ್ಟು ಮೈಗೊಂಡುಹೋದ ವೈಖರಿ ಅದು.

ನಾನೂ ಒಂದು ದಿನ ಮಂತ್ರಿಯಾಗಬೇಕು ಎಂಬ ಕನಸು ಕಂಡಿದ್ದೆ! ನೀವು ಹಾಗೆಲ್ಲಾ ಆಡಿಕೊಳ್ಳೋವಷ್ಟು ಪುಕ್ಕಲು ಅಂದ್ಕೋಬೇಡಿ. ಸಂಕಲ್ಪ ಎಲ್ಲಾ ಸರಿಯಾಗೇ ಮಾಡಿದ್ದೆ, ಎಲ್ಲಿ ಎಡವಟ್ಟಾಯ್ತೋ ಗೊತ್ತಾಗ್ಲೇ ಇಲ್ಲ. ಮಂತ್ರಿ ಖುರ್ಚಿಯ ನೆನಪಿನಲ್ಲೇ ಮಲಗಿಕೊಂಡ ದಿನ ಕನಸೊಂದು ಬಿತ್ತು. ಆ ಕನಸಿನಲ್ಲಿ ಯಾರೋ ಕಂಡರು. ನನಗೆ ರಾಜಕೀಯ ಗುರು ಬೇರೇ ಯಾರೂ ಇರಲಿಲ್ಲ. ಏಕಲವ್ಯನ ರೀತಿ ಒದ್ದಾಡಿಕೊಂಡಿದ್ದ ನನಗೆ ಕಂಬಳಿಹೊದ್ದು ಮುಖ ತೋರಿಸದ ಯಾವುದೋ ಆಕೃತಿ ಕಂಡು ಬಿಟ್ಟಿತು. " ನನ್ಮಗನೇ ರಾಜಕೀಯಕ್ಕೆ ನೀನು ಬರ್ಬೇಕಾದ್ರೆ ಕನಿಷ್ಠ ಒಂದು ಕೊಲೆ ಮೂರು ದರೋಡೆ ಹತ್ತಾರು ಸುಲಿಗೆಗಳಲ್ಲಿ ಪರೋಕ್ಷವಾಗಿಯಾದ್ರೂ ಭಾಗವಹಿಸಿರ್ಬೇಕು, ಕಂಡಲ್ಲೆಲ್ಲಾ ತಿನ್ನುವ ಜಾಯಮಾನ ಇಟ್ಕೊಂಡಿರ್ಬೇಕು. ಬೆಳಿಗ್ಗೆ ಎದ್ದು ಧೋಬಿ ಕೊಟ್ಟ ಗರ್ಗರಿ ಖಾದಿ ಧರಿಸಿ ನಾಮ ಎಳೆದುಕೊಂಡು ಹೊರಟುಬಿಟ್ಟರೆ ಹೊತ್ತುಗೊತ್ತಿನ ಅರಿವಿಲ್ಲದೇ ಎಲ್ಲೆಡೆಯೂ ’ನಾಮ’ದ ಬಲವನ್ನು ಸಾರಬೇಕು. "

ಒಮ್ಮೆಲೇ ಅದೇ ೩೦ ನಿಮಿಷದ ಕನಸಲ್ಲಿ ಮಧ್ಯೆಮಧ್ಯೆ ಹತ್ತತ್ತು ನಿಮಿಷ ಬಂದ ಜಾಹೀರಾತು ದಾಸರ ಪದವೊಂದು ನೆನಪಿಗೆ ಬಂದೂ ಹೋಯ್ತು! ನೀನೇಕೋ ನಿನ್ನ ಹಂಗೇಕೋ ನಿನ್ನ ನಾಮದ ಬಲವೊಂದಿದ್ದರೆ ಸಾಕೋ. ಈಗ ದೇವರ ಹತ್ತಿರ ಅದನ್ನು ಹೇಳಿದರೆ ಜನರ ಹತ್ತಿರ ಹೇಳುವಾಗ ಸ್ವಲ್ಪ ಕಾಲಕ್ಕೆ ತಕ್ಕ ಬದಲಾವಣೆ ಅಗತ್ಯ ಬಿಡಿ. ನೀನೇಕೋ ನಿನ್ನ ಹಂಗೇಕೋ ನಿನಗೆ ನಾಮಹಾಕುವ ಬಲವೊಂದಿದ್ದರೆ ಸಾಕೋ ! ನಾಮಹಾಕುವ ಬಲ ನನ್ನಲ್ಲಿದೆಯೇ ? ನನ್ನನ್ನೇ ಪ್ರಶ್ನಿಸಿಕೊಳ್ಳುವ ಮೊದಲೇ ಆ ಕಡೆ ಈ ಕಡೆ ಮೈಕೈ ವದರಿಕೊಂಡೆ; ಝಂಡೂ ಬಾಮ್ ಝಂಡೂ ಬಾಮ್ ಪೀಡಾಹಾರಿ ಬಾಮ್ ಝಂಡೂ ಬಾಮ್ .....ಇನ್ನೂ ಮುಗಿದಿರಲಿಲ್ಲ ಅಷ್ಟರಲ್ಲೇ ದಮ್ ಫಾರ್ಮ್ಯುಲಾ ಸಹಿತದ ಹತ್ತು ತಲೆಯ ರಾವಣ ಇಮಾಮಿಯ ನಾಮ ಎಳೆಯಲು ಬಂದುಬಿಟ್ಟ ! ದಾಸರು ಹೇಳುವುದಕ್ಕಿಂತಾ ನಾನೇ ಹೇಳುತ್ತೇನೆ ಕೇಳಿ -- ನಾಮದ ಮಹಿಮೆಯೇ ನಿಜಕ್ಕೂ ಅಗಾಧ. ಅದನ್ನು ನಾವು ಬೆಂಗಳೂರಿನಲ್ಲಂತೂ ನೋಡುತ್ತಲೇ ಇರ್ತೀವಿ.

ಯಾವುದೋ ಒಂದು ಜಾಹೀರಾತು ಮುಗಿದಾಗ ಕಾವಿ9 ನವರು ಮೈಕ್ ಹಿಡಿದು ಬಂದರು ! " ಸ್ವಾಮೀ ನಿತ್ಯಾನಂದನ ಬಗ್ಗೆ ನೀವೇನು ಹೇಳ್ತೀರಿ ? " ಎಂದ್ರು. ನನಗೇ ಸ್ವಾಮಿ ಅಂದ್ರೋ ಅವನಿಗೆ ಸ್ವಾಮಿ ಅಂದ್ರೋ ತಿಳೀಲಿಲ್ಲ. ನನಗೆ ಆ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ನಾನು ಧರ್ಮರಾಯನ ರೀತಿಯಲ್ಲೇ " ಯಾವುದಕ್ಕೂ ನೋಡದೆಯೇ ಹೇಳುವುದಿಲ್ಲ " ಎಂದುಬಿಟ್ಟೆ. ಬಂದದಾರಿಗೆ ಸುಂಕವಿಲ್ಲ ಎಂದುಕೊಂಡು ಒಣಮುಖದಲ್ಲಿ ಮೈಕು ಬೇರೇ ಕಡೆ ಹೋಯ್ತು. ಕಾವಿ9 ವಾಹಿನಿಯ ವಾಹನ ಆಕಡೆ ಹೋಯ್ತೋ ಇಲ್ವೋ ೪ನೇ ಮುಖ್ಯರಸ್ತೆಯ ಪದ್ಮಾವತಮ್ಮ ಓಡೋಡಿ ಬಂದ್ರು. ನನ್ನ ಹೆಂಡ್ತಿ ಹತ್ರ ಹೇಳ್ತಾ ಇದ್ದಾಗ ನಾನು ಕೇಳಿಸಿಕೊಂಡಿದ್ದು ಇಷ್ಟು--ಅದ್ಯಾವುದೋ ಹೆಡ್ ಕಾನಸ್ಟೇಬಲ್ ರಾಮಯ್ಯನಂತೆ ಆತನ ಹೆಂಡ್ತಿ ಚೀಟಿ ಮಾಡಿದ್ಲಂತೆ. ಪದ್ಮಾವತಮ್ಮ ಏನಾದ್ರೂ ಆಪತ್ತಿಗಿರ್ಲಿ ಅಂತ ಸಲ್ಸಲ್ಪ ಹಣ ಕೂಡಿಸಿ ಚೀಟಿ ಕಟ್ಟುತ್ತಿದ್ದರಂತೆ. ಆ ಚೀಟಿರಾಣಿ ರಾತ್ರೋರಾತ್ರಿ ಗಂಡಂಗೂ ಹೇಳ್ದೇ ಮನೆಬಿಟ್ಟು ಹೋಗಿದ್ದಾಳಂತೆ!

ಜಾಹೀರಾತುಗಳು ಒಟ್ಟೂ ೨೦ ನಿಮಿಷ ಪ್ರಸಾರವಾಗುವಾಗ ಮುಖ್ಯ ಕಥಾನಕ ೧೦ ನಿಮಿಷ ಮಾತ್ರ ಪ್ರಸಾರವಾಯ್ತು. ಯಾಕೋ ಸಲ್ಪ ಕಾಲು ಹಿಡಿದುಕೊಂಡ ಹಾಗಾಗಿ ಕನಸಿನ ಕತ್ತಲಲ್ಲೇ ಕೈಯ್ಯಾಡಿಸಿ ಮೂವ್ ಎಳೆದುಕೊಂಡೆ, ಥೂ ಯಾವುದನ್ನು ಹಚ್ಚಿಕೊಂಡ್ರೂ ಹೋಗೋದೇ ಇಲ್ಲ ಹಾಳಾದ್ದು. ಇನ್ನೇನು ವಿಷ್ಯ ಮುಗೀಬೇಕು ಅನ್ನೋವಷ್ಟರಲ್ಲೇ ಮತ್ತೆ ಎಂಟ್ರಿಕೊಟ್ಟಿದ್ದು ಅದೇ ಕಂಬಳಿ ಹೊದ್ದ ವ್ಯಕ್ತಿ " ಯಾಕಪ್ಪಾ ಏನಾಯ್ತು? ಸವರ್ಕೋತಾ ಇದ್ದೀಯಾ ನೀನೇ ಸವರ್ಕೋತಾ ಇದ್ರೆ ಬೇರೆಯವರನ್ನು ಸವ್ರೋದು ಯಾವಾಗ ? ರೆಡಿನಾ ಎಲ್ಲಾದಕ್ಕೂ ತಯಾರಿದ್ರೆ ಹೇಳು ನಾಳೇನೇ ....ನಾಳೇನೇ ನಿನ್ನ ಮಂತ್ರಿ ಮಾಡ್ತೀನಿ. " ಅಂದ. ಯಾಕೋ ಆಗದು ಅನಸ್ತು. ಕನಸು ಕರಗೇಹೋಯ್ತು.

ಅದಾಗಿ ಒಂದುವಾರ ಕೂಡ ಆಗಿರ್ಲಿಲ್ಲ. ಹಾಗೇ ಕೂದ್ಲು ಜಾಸ್ತಿ ಬೆಳ್ಕೊಂಡಿದೆ ಅಂತ ಕಟ್ ಮಾಡಿಸಲು ಹಜಾಮನ ಹತ್ರ ಹೋಗಿದ್ದೆ. ಹಜಾಮ ಅನ್ಕೋಬಾರ್ದುರೀ ಈಗೆಲ್ಲಾ ಎಲ್ಲರಿಗೂ ಸುಸಂಸ್ಕೃತವಾಗಿ ಹೇಳಬೇಕಂತೆ ಅದ್ಕೇ ಹಜಾಮ, ನಾಯಿಂದ, ನಾಪಿಕ, ಕೆಲಸಿ ಈ ಕನ್ನಡದ ಹೆಸರುಗಳೆಲ್ಲಾ ಮಾಯವಾಗಿ ಶಿಸ್ತಾಗಿ ಜೆಂಟ್ಸ್ ಬ್ಯೂಟಿಶಿಯನ್ನು ಅನ್ಬೇಕು. ಸುಮ್ನೇ ಮಾತಾಡ್ತಾ ಮಾತಾಡ್ತಾ ರಾಶಿಬಿದ್ದ ತೆಲುಗು ದಿನಪತ್ರಿಕೆಗಳಲ್ಲಿ ಕನ್ನಡದ ಅಕ್ಷರವನ್ನೇ ಹೋಲುತ್ತಿರುವ ಅಕ್ಷರಗಳುಳ್ಳ ಒಂದನ್ನು ಎತ್ತುಕೊಂಡು ಓದಲು ಪ್ರಯತ್ನಿಸಿದೆ. ತೆಲುಗು ಕನ್ನಡದಿಂದಲೇ ಹುಟ್ಟಿದ್ದು ಅಂತ ಗಾಢವಾದ ಅನುಭವ ಸಿಕ್ಕಿತು. ತಮಿಳು ಮತ್ತು ಎಂಗಳ ಮಲಯಾಳಂ ಕೂಡ ಕನ್ನಡಮ್ಮ ಕೊಸರಿಕೊಂಡಾಗ ಹುಟ್ಟಿದ್ದ ಕೂಸುಗಳೇ ಆಗಿದ್ದವು ಅಂತಾರೆ ಕೆಲವ್ರು, ನೋ ಕಾಮೆಂಟ್ಸ್...ಹೇಳುವುದಕ್ಕೂ ಕೇಳುವುದಕ್ಕೂ ಈಗ ಸಮಯವಲ್ಲ.

ಜೆಂಟ್ಸ್ ಬ್ಯೂಟಿಶಿಯನ್ನರ ಪಾರ್ಲರಿನಲ್ಲಿ ಕೂತಿದ್ನಾ ನನ್ನ ಸರದಿಗೆ ಇನ್ನೂ ಸಮಯವಿತ್ತು. ಅಷ್ಟೊತ್ತಿಗೆ ಯಾರೋ ದಂಪತಿ ೫ ವರ್ಷದ ಮಗನನ್ನು ಕರ್ಕೊಂಡು ಬಂದ್ರು. " ಸಾರ್ ಇವ ಬಾಳ ತರ್ಲೆಮಾಡ್ತಾನೆ, ಕಟ್ ಮಾಡಸಕೇ ಬಿಡಲ್ಲ...ಸ್ವಲ್ಪ ಅಡ್ಜಷ್ಟ್ ಮಾಡಿ ಮಾಡ್ಬಿಡಿ ಸಾರ್ " ಎಂದ್ರು. ಎಷ್ಟಂದ್ರೂ ಮಗು ನೋಡಿ.. ನಾವೆಲ್ಲಾ ತಗಾದೆ ತೆಗೀಲಿಲ್ಲ. ಸರದಿ ತಪ್ಪಿಸಿ ಮಧ್ಯೆ ಆ ಹುಡುಗನನ್ನು ಕೂರಿಸಿಕೊಂಡರು. ಆತ ಕಿಲಾಡಿ ಎಂದ್ರೆ ಜಗತ್ ಕಿಲಾಡಿ! ಬಂದಾಗಿನಿಂದ ೪-೫ ನಿಮಿಷಗಳಲ್ಲೇ ಮುಂದೆ ರಾಜಕೀಯಕ್ಕೆ ಸೇರುವ ಎಲ್ಲಾ ಲಕ್ಷಣಗಳನ್ನೂ ತೋರಿಸಿಬಿಟ್ಟಿದ್ದ! ಮಗುವಿನ ಕಿಲಾಡಿ ನೋಡಿ ಬ್ಯೂಟಿಶಿಯನ್ನರಿಗೆ ಸ್ವಲ್ಪ ರೇಗ್ತು. ಅವರು ಯಾವುದೋ ಪ್ಲಾನ್ ಮಾಡಿ ಅಪ್ಪ-ಅಮ್ಮನ ಹತ್ರ ನೀವು ಹೊರಗೆ ನಿಂತ್ಕೊಳಿ, ನಾನು ಸ್ವಲ್ಪ ಹೆದರ್ಸಿ ನೋಡ್ತೀನಿ ಅಂದ್ರು. ಮಗುವಿನ ಅಪ್ಪ-ಅಮ್ಮ ಆಚೆಕಡೆ ನಿಂತಾಗ ಮಗುವಿನ ಹತ್ರ ಬ್ಯೂಟಿಶಿಯನ್ನು ಸ್ವಲ್ಪ ಗೇರ್ ಚೇಂಜ್ ಮಾಡಿ ಮಾತಾಡದ್ರು ನೋಡಿ. " ಸುಮ್ನೇ ಕುತ್ಗೋ ಇಲ್ಲಾಂದ್ರೆ ಕಿವಿ ಕತ್ತರ್ಸ್ಬುಡ್ತೀನಿ ನೋಡು ನನ್ಮಗನೆ ! " ಮಗು ಸ್ತಬ್ಧವಾಗಿ ಕುಳಿತು ಆರಾಮಾಗಿ ಕೆಲಸಕ್ಕೆ ಅನುಕೂಲಮಾಡಿಕೊಟ್ಟಿತು.

ಮಗುವಿನ ಮೂಲ ಭಾಷೆಯೇ ಅದಾಗಿರುವಾಗ ನಿಧಾನಗತಿಯಲ್ಲಿ ಹೇಳಿದ್ರೆ ಅದು ಅದಕ್ಕೆ ಹೇಳಿದ ಹಾಗೇ ಇರ್ತಾ ಇರ್ಲಿಲ್ಲ. ನಮ್ಮ ಉತ್ತರ ಕರ್ನಾಟಕದಲ್ಲಿ " ಬಾರಲೇ ಸೂಳಾಮಗನ ಅಲ್ಲೇನ್ ಮಾಡಾಕತ್ತೀಯೋ ನನ್ಮಗನ ? " ಅಂತಾರೆ. ಅವರಿಗೆ ಅದೇ ಅಭ್ಯಾಸ. ಆ ’ಸಂಸ್ಕೃತ’ ಪದ ಬರಲಿಲ್ಲ ಎಂದರೆ ಉಪ್ಪಿಟ್ಟಿಗೆ ಉಪ್ಪೇ ಹಾಕಿಲ್ಲದ ರೀತಿ ಮಜಾನೇ ಇರೋದಿಲ್ಲ! ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲಾ ಅನ್ನೋ ಗಾದೇನ ಕನ್ನಡದ ಉಪೇಂದ್ರನ ಅಭಿಮಾನಿಗಳು ಅರ್ಥಾಮಾಡ್ಕೊಂಡಿರೋ ರೀತೀನೇ ಬೇರೇ ಇತ್ತು. ಆದ್ರೆ ಈಗ ಮೊನ್ನೆ ಅಡ್ಡಕಸಬಿ ಥರ ಅದ್ಯಾವ್ದೋ ಶ್ರೀಮತಿ ಅನ್ನೋ ಮಸಾಲೆ ಮಾಡೋಕೋಗಿ ಈಗ ಅದೂ ಯಡವಟ್ಟಾಗೋಗಿದೆ.

ನಮ್ಮ ಕಛೇರಿಗೆ ಕೆಲವು ವಿದ್ಯುನ್ಮಾನ ಯಂತ್ರಗಳನ್ನು ದೆಹಲಿಯಿಂದ ತರಿಸಲಾಗಿತ್ತು. ಅವುಗಳಲ್ಲಿ ಮೂರು ಗ್ಯಾರಂಟೀ ಸಮಯದೊಳಗೇ ಕೈಕೊಟ್ಟಿದ್ದವು. ಫೋನಾಯಿಸಿದರೆ ಯಾವುದೇ ಸಮರ್ಪಕ ಉತ್ತರ ಸಿಗಲಿಲ್ಲ. ಮೇಲ್ ಮಾಡಿದ್ರೆ ತಲ್ಪಲೇ ಇಲ್ಲಾ ಅನ್ನೋ ರೀತಿ ಇರ್ತಾ ಇದ್ರು. ನಾನೂ ಸ್ವಲ್ಪ ಗೇರ್ ಚೇಂಜ್ ಮಾಡ್ದೆ.. ಆಂಗ್ಲ ಹಿಂದಿ ಎಲ್ಲಾ ಮಿಕ್ಸ ಹೊಡ್ದು " ನಿಮ್ಹತ್ರ ಆಗ್ದೇ ಹೋದ್ರೆ ಹೇಳಿ ಮುಂದೇನ್ಮಾಡ್ಬೇಕು ನೋಡ್ಕೋತೀವಿ " ಅಂತ ಮೇಲ್ ಕಳಿಸಿದೆ, ಫ್ಯಾಕ್ಸೂ ಮಾಡ್ದೆ. ಗಂಟೆ ಅರ್ಧಕೂಡ ಕಳೀಲಿಲ್ಲ. ದಿಲ್ಲಿಯಿಂದ ಬಾಂಬೆಯಿಂದ ಬೆಂಗಳೂರಿಂದ ಎಲ್ಲೆಲ್ಲೆಲ್ಲಾ ಅವರ ಬ್ರ್ಯಾಂಚುಗಳಿವೆಯೋ ಅಲ್ಲೆಲ್ಲಾ ಕಡೆಗಿಂದ್ಲೂ ಕಾಲೂ ಕಾಲು. " Sir, no issues we will solve your problem " ಮಾರ್ನೇ ದಿವ್ಸ ಬೆಳಿಗ್ಗೆ ಬೆಳಿಗ್ಗೇನೇ ಪ್ರಾಬ್ಲಮ್ಮು ಇದ್ದಿದ್ದು ನೋ ಪ್ರಾಬ್ಲಮ್ಮು !

ನಂಗನ್ಸಿದ್ದೇನು ಗೊತ್ತೇ ? ನಮ್ಮ ವಿದ್ಯುನ್ಮಾನದಲ್ಲಿ ಥ್ರಿಶೋಲ್ಡ್ ವೋಲ್ಟೇಜ್ ಅಂತ ಕರೀತೀವಿ--ಕೆಲವೊಂದು ಇಂಟಿಗ್ರೇಟೆಡ್ ಸರ್ಕಿಟ್ ಕೆಲಸಮಾಡಲು ನಿಗದಿಪಡಿಸಿದ ವೋಲ್ಟೇಜ್ ಸಪ್ಲೈ ಆದರೆ ಮಾತ್ರ ಅದು ಕೆಲಸವನ್ನು ಆರಂಭಿಸ್ತದೆ. ಅದೇ ರೀತಿ ಅನೇಕ ಜನರಿಗೆ ಅವರವರ ಲೆವೆಲ್ಲಿಗೆ ತಕ್ಕನಾಗಿ ಮಾತಿನ ದಾಟಿಯನ್ನು ಬದಲಿಸಿದರೇ ಕೆಲ್ಸ ಆಗೋದು! ಎಲ್ಲಿ ’ಸ್ವಾಮೀ’ ಅನ್ಬೇಕೋ ಅಲ್ಲಿ ಹೇಯ್ ಅಂದ್ರೆ ಕೆಲ್ಸ ಕೆಟ್ಟೋಗುತ್ತೆ! ಎಲ್ಲಿ ’ಹೋಗಲೇ’ ಅನ್ಬೇಕೋ ಅಲ್ಲಿ ’ಸ್ವಾಮೀ’ ಅಂತಾನೇ ಇದ್ರೂ ಆ ’ಸ್ವಾಮಿ’ ಕಮಕ್ ಕಿಮಕ್ ಅನ್ನದೇ ಪ್ರತಿಷ್ಠಾಪಿಸಿದ ವಿಗ್ರಹದ ಥರ ಕುಳಿತ್ಬಿಟ್ಟಿರುತ್ತೆ. ಹೀಗಾಗಿ ಯಾವಾಗ ಎಲ್ಲಿ ಯಾರಮುಂದೆ ಯಾವ ಶಬ್ದ ಪ್ರಯೋಗ ಸರಿ ಎಂಬುದರ ಮೇಲೆ ಥೀಸಿಸ್ ಬರೆದು ಡಾಕ್ಟರೇಟ್ ಪಡೆಯೋಣ ಅಂತಿದೀನಿ. ಅದ್ರಿಂದ ನಿಮ್ಗೂ ಸಹಾಯವಾಗ್ಬೌದು. ಅಂದಹಾಗೇ ನಿಮಗೀಗ ಯಾವ ಶಬ್ದ ಪ್ರಯೋಗಿಸಲಿ ? ಗೊತ್ತಾಯ್ತು ಬಿಡಿ...ನೀವಿಲ್ಲಿಗೆ ಬಂದು ಓದೋಮಟ್ಟಕ್ಕೆ ಇದೀರೀಂದ್ರೆ ಸ್ವಲ್ಪನಾರು ಆಸಕ್ತಿ ಇದ್ದೋರೇ ಇರ್ಬೇಕಲ್ವೇ ? ಅದಕೇ ನಿಮಗೆಲ್ಲಾ ಗೇರ್ ಚೇಂಜ್ ಮಾಡೋಕಾಗುತ್ಯೇ ಸ್ವಾಮೀ ? ಬರಲೇ ? ಬ ಬಾಯ್!