ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, February 4, 2011

ಸಾರ್ಥಕ ’ಜೀವಿ’ಯ ಬಗ್ಗೆರಡು ಮಾತು


ಸಾರ್ಥಕ ’ಜೀವಿ’ಯ ಬಗ್ಗೆರಡು ಮಾತು

ಕನ್ನಡ ನುಡಿತೇರನ್ನು ಈ ಸರ್ತಿ ಬೆಂಗಳೂರಿನಲ್ಲಿ ಎಳೆಯುತ್ತಿರುವುದು ತಮಗೆಲ್ಲಾ ಗೊತ್ತಿರುವ ವಿಷಯ. ಕನ್ನಡ ಸಾಹಿತ್ಯ ಪರಿಷತ್ತು ಮಾಡಿದ ಒಂದು ಉತ್ತಮ ಕೆಲಸವೆಂದರೆ ಸಮ್ಮೇಳನದ ಅಧ್ಯಕ್ಷತೆಗೆ ಪ್ರೊ.ಗಂಜಾಂ ವೆಂಕಟಸುಬ್ಬಯ್ಯನವರನ್ನು ಆಯ್ಕೆಮಾಡಿರುವುದು. ಅದು ಪರಿಷತ್ತಿಗೇ ಸಂದ ಗೌರವ. ವಯಸ್ಸಿನಲ್ಲಿ ಅತ್ಯಂತ ಹಿರಿಯರಾಗಿ, ಹಿಂದಿನ ಹಾಗೂ ಇಂದಿನ ಶತಮಾನಗಳ ಕೊಂಡಿಯಾಗಿ, ಕನ್ನಡಕ್ಕಾಗಿ ಹಲವು ಒಳ್ಳೆಯ ಪುಸ್ತಕಗಳನ್ನು ಬರೆದು ಇತ್ತೀಚೆಗೆ ಕನ್ನಡಕ್ಕೆ ನಿಘಂಟನ್ನೂ ಅರ್ಪಿಸಿದ ಮುತ್ಸದ್ಧಿಗೆ ಈ ಸ್ಥಾನ ಯಥಾಯೋಗ್ಯವೇ ಸರಿ.

ಉಳಿದರಂಗಗಳಂತೇ ಸಾಹಿತ್ಯರಂಗ ಕೂಡ ಇಂದು ರಾಜಕೀಯದಿಂದ ತುಂಬಿದೆ. ಪ್ರಶಸ್ತಿ ಪುರಸ್ಕಾರಗಳಿಗೂ ಮಸಲತ್ತುಗಳು ನಡೆಯುತ್ತವೆ ಎಂಬುದು ಪರದೆಯ ಹಿಂದೆ ನಡೆಯುತ್ತಿರುವ ಆದರೆ ಎಲ್ಲರಿಗೂ ತಿಳಿದೇ ಇರುವ ವಿಷಯ. ಸಮ್ಮೇಳನದ ಅಧ್ಯಕ್ಷಸ್ಥಾನಕ್ಕೂ ’ತನಗೆ ಕೊಡಲಿಲ್ಲ ತನಗೆ ಕೊಡಲಿಲ್ಲ’ ಎಂಬ ಹತಾಶ ಮನೋವೃತ್ತಿ ಕೆಲವರಲ್ಲಿ ಕಂಡುಬರುತ್ತಿದೆ. ಇದೇ ಕಾರಣವಾಗಿ ಕೆಲವರು ಸಮ್ಮೇಳನದ ಸಭೆಯಲ್ಲಿ ಭಾಗವಹಿಸಲೂ ಇಲ್ಲ ಎಂಬುದು ಗಮನಿಸಬೇಕಾದ ಅಂಶ. ಅಷ್ಟಾಗಿ ’ಕನ್ನಡ ಕನ್ನಡ’ ಎಂದು ಕುಣಿಯುವವರು ಕೇವಲ ತಮಗೆ ಸಿಗಬಹುದಾದ ಆದ್ಯತೆಯನ್ನು ಗಮನಿಸಿಕೊಂಡೇ ಆ ಕೆಲಸವನ್ನು ಮಾಡುವರೇ ಎಂಬುದು ನಮಗೆ ಗುಮಾನಿ! ಆದರೂ ಸಮ್ಮೇಳನದ ಅಧ್ಯಕ್ಷತೆಗೆ ಆಯ್ಕೆಮಾಡುವಾಗ ಕೊಡುಗೆ, ವಯಸ್ಸು ಈ ಎರಡೂ ಅಂಶಗಳನ್ನು ಆಧರಿಸಿ ಆಯ್ಕೆಮಾಡುವುದು ಸರ್ವೋತ್ತಮ. ಈ ಸಲವಂತೂ ಅದು ಸಮರ್ಪಕವಾಗಿ ನಡೆದಿದೆ ಎಂಬುದು ಯಾವುದೇ ಕನ್ನಡಿಗನಿಗೂ ಅನಿಸದೇ ಇರದು.

ವ್ಯಕ್ತಿಗಳನ್ನು ನೋಡುವಾಗ ನಮಗೆ ಸಹಜವಾಗಿ ಏನೆನ್ನಿಸುತ್ತದೆ ಎಂಬುದು ಮುಖ್ಯ. ಸರಳ ಜೀವನದ ವ್ಯಕ್ತಿಗಳು ನಿಗರ್ವಿಗಳಾಗಿ ಹಿರಿ-ಕಿರಿಯ ಭೇದಭಾವವಿಲ್ಲದೇ ಎಲ್ಲರೊಡನೆಯೂ ಒಡನಾಡುತ್ತಾ ತಾವು ಮಾಡಬೇಕಾದ ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಯಾವುದೇ ಪ್ರಶಸ್ತಿಗಳಿಗಾಗಲೀ ರಾಜಕೀಯಕ್ಕಾಗಲೀ ಅವರು ತಲೆಹಾಕುವುದಿಲ್ಲ. ನಿಜವಾದ ಕವಿ-ಸಾಹಿತಿಗಳು ಮತ್ತು ಭಾಷಾ ಕೋವಿದರು ಪ್ರಶಸ್ತಿಗಳು ಬರಲಿ ಎಂದು ಬರೆಯುವುದಿಲ್ಲ. ಬರವಣಿಗೆ ಅವರ ಸಹಜ ಪ್ರವೃತ್ತಿ. ತಮ್ಮ ವೃತ್ತಿ ಜೀವನದ ಜೊತೆಜೊತೆಗೇ ಬರವಣಿಗೆಯಲ್ಲೂ ತಮ್ಮನ್ನು ತೊಡಗಿಸಿಕೊಂಡು ಅದರಲ್ಲೇ ಸಂತಸವನ್ನು ಪಡೆಯುವ ಇಂತಹ ಸಾರಸ್ವತರು ದೃಷ್ಟಿಸಿ ನೋಡಿದರೆ ಋಷಿಸದೃಶರೇ ಆಗಿರುತ್ತಾರೆ. ದೈನಂದಿನ ತಮ್ಮ ಬದುಕಿನಲ್ಲಿ ಅಚ್ಚುಕಟ್ಟಾಗಿ ವೇಳೆಯನ್ನು ಸದುಪಯೋಗಪಡಿಸಿಕೊಳ್ಳುತ್ತಾ ಮುಂದಿನ ಜನಾಂಗಕ್ಕೆ ತಮ್ಮಿಂದ ನೀಡಬಹುದಾದ ನೀಡಲು ಸಾಧ್ಯವಾದ ಅನೇಕ ಕೃತಿಗಳನ್ನು ಹೊರತರುತ್ತಾರೆ.

ಪುಸ್ತಕ ವ್ಯಾಪಾರವೇ ಕವಿ-ಸಾಹಿತಿಗಳ ಉದ್ದೇಶವಲ್ಲ. ತಾವು ಬರೆದಿದ್ದು ನಾಲ್ಕು ಜನರಿಗೆ ಓದಲು ಸಿಕ್ಕು ಅದರಿಂದ ಓದುಗರ ಜ್ಞಾನವೃದ್ಧಿಯಾದರೆ ಆಗ ಓದುಗರಲ್ಲಿ ಉಂಟಾಗಬಹುದಾದ ಮನಸ್ಸಿನ ಪ್ರಪುಲ್ಲತೆಯೇ ಕೃತಿಕಾರರಿಗೆ ಸಿಗಬಹುದಾದ ನಿಜವಾದ ಪುರಸ್ಕಾರ. ಗಾದೆಯೊಂದು ಹೀಗಿದೆ--ಉಂಡವರು ಹರಸುವುದು ಬೇಡ ನೊಂದವರು ಬೈಯ್ಯುವುದು ಬೇಡ-- ಇದರ ಅರ್ಥ ತಿಳಿಯಿತಲ್ಲ? ಒಬ್ಬಾತನಿಗೆ ಹಸಿವಾಗಿದ್ದರೆ ಆತನ ಹೊಟ್ಟೆಯ ಹಸಿವಿಗೆ ಒಂದಷ್ಟು ಸುಕೃತ ಭೋಜನವನ್ನು ಉಣಬಡಿಸಿದಾಗ ಆತ ಉಂಡು ಹಸಿವು ನೀಗಿಸಿಕೊಂಡು ತೇಗುತ್ತಾನಲ್ಲಾ ಆಗಲೇ ಆತನಲ್ಲಿರುವ ಪರಮಾತ್ಮ ಅನ್ನಹಾಕಿದಾತನನ್ನು ತಂತಾನೇ ಉಂಡವನ ಮೂಲಕ ಹರಸಿಬಿಡುತ್ತಾನೆ. ಅದರಂತೆಯೇ ಯಾವನ ಮನಸ್ಸಿಗಾದರೂ ನಾವು ನೋವುಂಟುಮಾಡಿದಾಗ ಆತ ಹೊಸದಾಗಿ ಬೈಯ್ಯುವ ಅಗತ್ಯ ಬೀಳುವುದಿಲ್ಲ. ಅಲ್ಲಿ ಆತನ ಮನಸ್ಸು ನೋವುಂಟುಮಾಡಿದ ವ್ಯಕ್ತಿಗೆ ಹಿಡಿಶಾಪಹಾಕುತ್ತದೆ. ಹೀಗೇ ಮಾನಸಿಕ ಹಸಿವಿಗೆ ಉಣಬಡಿಸುವ ಕಾಯಕವನ್ನು ತನ್ನಿಂದಾಗಬಹುದಾದ ಎಲ್ಲರೀತಿಯ ಸಾಹಿತ್ಯಕ ಅಡುಗೆಗಳಿಂದ ಕೃತಿಗಳೆಂಬ ಎಡೆಸಿಂಗರಿಸಿ ಉಣಬಡಿಸುವಾತನೇ ಕವಿ-ಸಾಹಿತಿ-ಭಾಷಾ ಕೋವಿದ.

ಅಡುಗೆಯ ರುಚಿಯಲ್ಲಿ ವ್ಯತ್ಯಾಸವಿರುವಂತೇ, ಅಡುಗೆಯ ಉತ್ಫನ್ನಗಳಲ್ಲಿ ವೈವಿಧ್ಯವಿರುವಂತೇ ಬರಹಗಾರನ ಭಾಷಾಶೈಲಿಯಲ್ಲಿಯೂ ಭಿನ್ನತೆ ಇರುತ್ತದೆ. ಅದು ಕೆಲವೊಮ್ಮೆ ಯಾರದೋ ಬರಹವನ್ನು ಹೋಲಬಹುದೇ ವಿನಃ ಪ್ರತೀ ಬರಹಗಾರನ ಬರಹಗಳಲ್ಲೂ ಅವನದೇ/ಅವಳದೇ ಆದ ಸ್ಪಷ್ಟ ಛಾಯೆಯೊಂದು ಅಚ್ಚೊತ್ತಿರುತ್ತದೆ. ಕೆಲವರು ಕೆಟ್ಟರುಚಿಯ ಅಡುಗೆ ಮಾಡುವಂತೇ ಇಲ್ಲೂ ಕೆಲವರು ಕೆಟ್ಟ ಸಾಹಿತ್ಯವನ್ನು ಸೃಜಿಸಬಹುದು. ಆದರೆ ಉತ್ತಮ ಕವಿ-ಸಾಹಿತಿಯಿಂದ ಉತ್ತಮ ಕೃತಿಗಳೇ ಜನಿಸುತ್ತವೆ. ಇನ್ನೊಂದು ಗಾದೆ ತಮಗೆ ನೆನಪಾಗಬಹುದಲ್ಲ ’ ಸಿಂಹದ ಹೊಟ್ಟೆಯಲ್ಲಿ ಸಿಂಹವೇ ಜನಿಸುತ್ತದೆ’ ಎಂಬುದು ಅಲ್ಲವೇ ? ಅದೇ ರೀತಿ ಸಿಂಹವೊಂದೇ ಪ್ರಾಣಿಯಲ್ಲ ನರಿ,ಕರಡಿ,ಹಂದಿಗಳೂ ಜೀವಿಸುವುದು ಸಹಜವಷ್ಟೇ ? ಇದೇ ತೆರನಾಗಿ ಸಾಹಿತ್ಯಕ ರಂಗದಲ್ಲೂ ಎಲ್ಲರೂ ಸಾರ್ಥಕ ಜೀವಿಯಾಗಲು ಸಾಧ್ಯವಾಗುವುದಿಲ್ಲ. ಬರೆದಿದ್ದೆಲ್ಲಾ ಸಾಹಿತ್ಯ ಎನಿಸಿಕೊಳ್ಳುವುದೂ ಇಲ್ಲ.

ಕೃತಿಗಳನ್ನು ರಚಿಸುವಾಗ ಕೃತಿಕಾರರಿಗೆ ಅದರ ಓದಿನ ಪರಿಣಾಮದ ಚಿಂತೆ ಇರಬೇಕು. ಉತ್ತಮ ಕವಿತ್ವವಿರುವ ವ್ಯಕ್ತಿ ಸಮಾಜದ ಉನ್ನತಿಯನ್ನು ಬಯಸಿ ಹಲವರು ಓದಿದಾಗ ಅವರ ಮನಸ್ಸಿನಮೇಲೆ ಉತ್ತಮ ಪರಿಣಾಮ ಬೀರುವ ಕೃತಿಗಳನ್ನೇ ರಚಿಸುತ್ತಾನೆ.[ ಇಲ್ಲಿ ಗದ್ಯ-ಪದ್ಯ ಯಾವುದನ್ನೇ ತೆಗೆದುಕೊಂಡರೂ ಗದ್ಯವೂ ಒಂದರ್ಥದಲ್ಲಿ ಪದ್ಯವೇ ಆಗುತ್ತದೆ.]ಕೇವಲ ತಾನು ಬರೆದಿದ್ದೇ ವೇದ, ಅದನ್ನು ಓದಿದದವರೇ ಪುಣ್ಯವಂತರು ಎಂಬ ಅನಿಸಿಕೆ ಅ ವ್ಯಕ್ತಿಯಲ್ಲಿರುವುದಿಲ್ಲ. ಬದಲಾಗಿ ತನ್ನ ಹುಟ್ಟು, ಶೈಶವ, ಯೌವ್ವನ, ವಾರ್ಧಕ್ಯ, ಮುಪ್ಪು ಗಳನ್ನು ಸಮಾಜದ ಎಲ್ಲಾ ವರ್ಗಗಳ ಜನರ ಬದುಕಿನೊಂದಿಗೆ ಅಳೆದುನೋಡಿ ಸಮಷ್ಟಿಯಿಂದ ಕೃತಿಗಳನ್ನು ರಚಿಸುತ್ತಾನೆ/ಳೆ. ಬರೆದ ಕೃತಿಗಳು ಬಡವರಿಗೂ ಬಲ್ಲಿದರಿಗೂ ಎಲ್ಲರಿಗೂ ಏಕಕಾಲಕ್ಕೆ ಸಮನ್ವಯವಾಗುತ್ತವೆ ಮತ್ತು ಓದುಗರು ಅವುಗಳಲ್ಲಿ ತಮ್ಮನ್ನೇ ಕಾಣತೊಡಗುತ್ತಾರೆ. ಹೇಗೆ ಒಂದು ಚಲಚಿತ್ರವನ್ನು ನೋಡುವಾಗ ಆ ಯಾ ಪಾತ್ರಗಳಲ್ಲಿ ನಾವು ತೊಡಗಿಕೊಳ್ಳುತ್ತೇವೋ ಹಾಗೆಯೇ ಕೃತಿಗಳ ಓದಿನಲ್ಲೂ ಅದೇ ರೀತಿಯ ತಾದಾತ್ಮ್ಯತೆ ಉಂಟಾಗುತ್ತದೆ.

ಸಮಾಜಕ್ಕೆ ಉತ್ತಮ ಕೃತಿಗಳನ್ನು ನೀಡಿದ ಕೃತಿಕಾರ ಮನಸಾ ಉತ್ತಮ ಮಟ್ಟವನ್ನು ಹೊಂದಿರುತ್ತಾನೆ. ಕರ್ತವ್ಯ ಪರಾಯಣನಾಗಿರುತ್ತಾನೆ. ತಾನು ತನದೆಂಬ ಚಿತ್ತ ವೃತ್ತಿಗಳನ್ನು ತೊರೆದು ಸಾಹಿತ್ಯದಲ್ಲೇ ಭಗವಂತನನ್ನು ಕಾಣುವ ಉಚ್ಚ ಮನೋಗತವನ್ನು ಹೊಂದಿರುತ್ತಾನೆ. ಕೃತಿಗಳಿಂದಲೇ ಸಮಾಜದ ದೂಷಿತ ಮುಖಗಳನ್ನು ತಿದ್ದುವ ಕೆಲಸವನ್ನಾತ ಮಾಡುತ್ತಾನೆ. ತನ್ನ ಆದರ್ಶ ಬದುಕಿನಿಂದ ಪರರಿಗೆ ಮಾರ್ಗದರ್ಶನ ಮಾಡುತ್ತಾನೆ. ಅಂತಹ ಕೃತಿಕಾರರನ್ನು ನಾವು ದೂರದಲ್ಲೋ ಹತ್ತಿರದಲ್ಲೋ ನೋಡಿದಾಗ ಅವರನ್ನು ಸಂಪರ್ಕಿಸುವ ತಹತಹ ಓದುಗರಲ್ಲಿ ಬೆಳೆಯುತ್ತದೆ. ಹಾಗಂತ ಕೃತಿಕಾರ ಸಂಪರ್ಕಿಸಿದರೆ ಏನನ್ನೋ ಕೊಡುತ್ತಾನೆ ಎಂಬ ಅನಿಸಿಕೆಯಲ್ಲ. ಉತ್ತಮ ಸಂಗೀತವನ್ನು ಕೇಳಿದಾಗ ನೃತ್ಯವನ್ನು ನೋಡಿದಾಗ ಚಿತ್ರರಚನೆಯನ್ನು ಕಂಡಾಗ ಕರತಾಡನದಿಂದ ಕಲಾವಿದರನ್ನು ಗೌರವಿಸುವಂತೇ ಉತ್ತಮ ಕೃತಿಗಳನ್ನು ಕೊಟ್ಟ ಸಾರ್ಥಕ ಜೀವಿಯನ್ನು ಒಮ್ಮೆ ಕಂಡು ಕೈಮುಗಿದು ನಿಮ್ಮ ಕೃತಿಗಳನ್ನು ಓದಿ ಆನಂದತುಂದಿಲನಾದೆ ಎಂದು ಹೇಳಬೇಕೆನಿಸುತ್ತದೆ. ಅಂತಹ ರಸಋಷಿಗಳಲ್ಲಿ ಇವತ್ತಿನ ನಮ್ಮ ’ಜೀವಿ’ ಕೂಡ ಒಬ್ಬರು.

ನಿನ್ನೆಯ ಅಧ್ಯಕ್ಷೀಯ ಭಾಷಣದಲ್ಲೇ ತಾವು ವೆಂಕಟಸುಬ್ಬಯ್ಯನವರ ಇಡೀ ಜೀವಿತದ ಬಗ್ಗೆ ತಿಳಿಯಬಹುದು. ಅವರ ಅನುಭವ ಅಗಾಧ. ಬೆಳಿಗ್ಗೆಯ ತಿಂಡಿಯ ನಂತರ ನಿನ್ನೆ ನಿರಂತರ ಸಾಯಂಕಾಲ ೪ ಗಂಟೆಯವರೆವಿಗೂ ಅವರಿಗೆ ಊಟಕ್ಕೆ ಸಹ ಬಿಡುವಾಗಲಿಲ್ಲ. ದಣಿವರಿಯದ ಕುದುರೆಯಂತೇ ಈ ವಯಸ್ಸಿನಲ್ಲೂ ನಿಂತು ಭಾಷಣ ಮಂಡಿಸಿರುವುದು ಮತ್ತು ಕನ್ನಡಕವನ್ನೂ ಉಪಯೋಗಿಸದೇ ಮರೆಯಬಾರದೆಂದು ಬರೆದುಕೊಂಡಿದ್ದನ್ನು ಓದಿದ್ದು, ಕನ್ನಡ ಭಾಷೆಯ ಇತಿಹಾಸ, ಇಂದಿನ ಸಾಮಾಜಿಕ, ರಾಜಕೀಯ ಪ್ರಕ್ಷುಬ್ಧ ಸನ್ನಿವೇಶಗಳು ಹೀಗೇ ಎಲ್ಲಾ ದೃಷ್ಟಿಕೋನಗಳಿಂದಲೂ ತಮ್ಮ ವಿದ್ವತ್ಪೂರ್ಣ ವಿಷಯವನ್ನು ಜನರ ಮುಂದಿಟ್ಟರು. ೯೮ ವರ್ಷಗಳಲ್ಲಿ ಪ್ರಾಯಶಃ ಒಂದೇ ಒಂದು ವರ್ಷವನ್ನೂ ನಿರರ್ಥಕವಾಗಿ ಕಳೆಯದ ಸಾಧಕರಾದ ಅವರಲ್ಲಿ ಇನ್ನೂ ಏನನ್ನೋ ಕೊಡಮಾಡುವ ತರುಣ ಮನೋಸ್ಥಿತಿಯಿದೆ. ಸಮಾಜಕ್ಕೆ ಇನ್ನೂ ಒಂದೆರಡು ಕೃತಿಗಳನ್ನು ಕೊಡಬೇಕೆಂಬ ಉತ್ಕಟೇಚ್ಛೆಯಿದೆ. ಈ ವಯಸ್ಸಿನ ಹಲವು ಮಹನೀಯರು ಕಾಲಗರ್ಭದಲ್ಲಿ ಲೀನವಾಗಿ ಅದೆಷ್ಟೋ ಕಾಲವಾಗಿರಬಹುದು, ಇವರಿಗಿಂತಾ ಎಳಬರು ವೃತ್ತಿಯಿಂದ ನಿವೃತ್ತರಾಗಿ ಟಿವಿ ಮುಂದೆ ಪ್ರತಿಷ್ಠಾಪಿತರಾಗಿರಬಹುದು, ಇನ್ನೂ ಕೆಲವರು ಕಾಯಿಲೆ-ಕಸಾಲೆಗಳಿಂದ ಬಳಲುತ್ತಾ ಇಂದೋ ನಾಳೆಯೋ ಎಣಿಸುತ್ತಾ ಅಂತೂ ಜೀವನ ಸಾಗಿಸುತ್ತಿರಬಹುದು. ಈ ಎಲ್ಲಾ ರೀತಿಯ ಜನಗಳ ನಡುವೆ ಕೇವಲ ಶರೀರಕ್ಕೆ ಮುಪ್ಪು ಎನ್ನುವ ಅನಿಸಿಕೆಯಿಂದ ಮನದಲ್ಲಿ ತಾರುಣ್ಯದ ಪ್ರಬುದ್ಧ ಸ್ಥಿತಿಯನ್ನು ಇಟ್ಟುಕೊಂಡು ಹಲವರಿಗೆ ಆದರ್ಶಪ್ರಾಯರಾಗಿ ಬದುಕುತ್ತಿರುವ ’ಜೀವಿ’ಯದು ಸಾರ್ಥಕ ತುಂಬು ಜೀವನ. ಅಜಾತಶತ್ರುವಾದ ಅವರ ಸಾಧನೆಗಳಿಗೆ ನಾವೆಲ್ಲಾ ಶರಣೆನ್ನೋಣ.

ಕೊನೆಯ ಒಂದು ಮಾತು : ಅಂದಹಾಗೇ ಕಳೆದವರ್ಷ ತೊಳೆದ ಹಳೆಯ ಜೀಪಿನಲ್ಲಿ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ನಡೆದಿತ್ತು. ಆ ವಿಷಯವಾಗಿ ವಿಡಂಬನಾ ಕಾವ್ಯವನ್ನೂ ಬರೆದಿದ್ದೆ. ಸುದೈವ ವಶಾತ್ ಇಂದು ಪರಿಷತ್ತು ಆ ರೀತಿ ಮಾಡಿಲ್ಲ. ಮೆರವಣಿಗೆಯೂ ಬಹು ಅಂದವಾಗಿ ನಡೆಯಿತು. ಅದು ಕನ್ನಡತಾಯಿಗೆ ಸಂದ ಗೌರವ. ದಕ್ಷ ಅಧ್ಯಕ್ಷರನ್ನು ಆಯ್ದಿದ್ದಕ್ಕಾಗಿ ಮತ್ತು ತಕ್ಕ ಮೆರವಣಿಗೆ, ವ್ಯವಸ್ಥೆ ಮಾಡಿದ್ದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅದರ ಇಂದಿನ ಸೂತ್ರಧಾರ ಡಾನಲ್ಲೂರು ಪ್ರಸಾದ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸೋಣ. ಮುಂಬರುವ ವರ್ಷಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಮಟ್ಟದ ಸಾಹಿತ್ಯ ಪರಿಷತ್ತುಗಳಿಗೆ, ಸದಸ್ಯರಿಗೆ ಇಂತಹ ಸಮ್ಮೇಳನಗಳ ಆಮಂತ್ರಣಗಳನ್ನು ಮುಂಚಿತವಾಗಿ ತಲ್ಪಿಸುವ ಕೆಲಸದ ಜೊತೆಗೆ ಬಂದ ಸದಸ್ಯರಿಗೆ ಸರಿಯಾದ ವ್ಯವಸ್ಥೆಯಾಗುವಂತೇ ನೋಡಿಕೊಂಡರೆ ಉತ್ತಮ ಎನಿಸುತ್ತದೆ. ಏನಿದ್ದರೂ ಲಕ್ಷಾಂತರ ಜನ ಸೇರುವುದರಿಂದ ಸಾಹಿತ್ಯಾಸಕ್ತರಿಗಿಂತ ಹೆಚ್ಚಾಗಿ ತಿಂಡಿಪೋತಗಳೂ ಬಂದಿರಬಹುದು-- ಈ ಕಾರಣದಿಂದ ಒಂದು ನಿಗದಿತ ವ್ಯವಸ್ಥೆ ಎಲ್ಲದಕ್ಕೂ ಅನುಕೂಲ. ಸಮಾರಂಭಕ್ಕೆ ಸಣ್ಣ ವೆಚ್ಚದ ಟಿಕೆಟ್ ಇಟ್ಟರೂ ಪರವಾಗಿಲ್ಲ, ಆಗ ಬೇಡದ ಜನಗಳು ಬರುವ ಬೇಕಾದವರಿಗೆ ಜಾಗ ಸಿಗದೇ ಇರುವ ಸಮಸ್ಯೆಯ ನಿವಾರಣೆಯಾಗುತ್ತದೆ ಎಂಬುದು ನನ್ನ ಅನಿಸಿಕೆ.

ನುಡಿಹಬ್ಬದ ಈ ಶುಭ ಸಂದರ್ಭದಲ್ಲಿ ಕನ್ನಡತಾಯಿ ಭುವನೇಶ್ವರಿಯ ಕೃಪೆ ಎಲ್ಲರಿಗಿರಲಿ, ಎಲ್ಲರ ಬದುಕೂ ಜ್ಞಾನ-ಸಂಪತ್ತಿನಿಂದ ತುಂಬಲಿ ಎಂದು ಹಾರೈಸುತ್ತಿದ್ದೇನೆ, ನಮಸ್ಕಾರ.