ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, August 13, 2010

ನಾಗಣ್ಣಗೆ ನಮನ



ಧ್ಯಾಯೇತ್ ಷಣ್ಮುಖಮಿಂದು ಕೋಟಿ ಸದೃಶಂ ರತ್ನಪ್ರಭಾ ಶೋಭಿತಂ
ಬಾಲಾರ್ಕದ್ಯುತಿ ಷಟ್ಕಿರೀಟ ವಿಲಸತ್ಕೇಯೂರ ಹಾರಾನ್ವಿತಂ |
ಕರ್ಣಾಲಂಬಿತ ಕುಂಡಲ ಪ್ರವಿಲಸದ್ಗಂಡಸ್ಥಲಾ ಶೋಭಿತಂ
ಕಿಂಚಿತ್ಕಂಕಣ ಕಿಂಕಿಣೀರವಯುತಂ ಶೃಂಗಾರ ಸಾರೋದಯಂ ||






ನಾಗಣ್ಣಗೆ ನಮನ

ನಾಗರ ಪಂಚಮಿ ಬಂದೇ ಬಿಟ್ಟಿತು! ಬೆಳಿಗ್ಗೆ ಎದ್ದಾಗಲೇ ಬಹಳ ಊರುಗಳಲ್ಲಿ ಸಡಗರ. ಕೇವಲ ಹೆದರಿಕೆಯಿಂದ ಪೂಜಿಸುವ ಕಾರ್ಯ ಇದಲ್ಲ. ಇದಕ್ಕೊಂದು ನೆಲೆಗಟ್ಟಿದೆ-ಹಿನ್ನೆಲೆಯಿದೆ. ಪೂರ್ವದಲ್ಲಿ ಪ್ರಹ್ಲಾದನ ಮೊಮ್ಮಗನಾದ ರಾಜಾ ಪರೀಕ್ಷಿತನಿಗೆ ಒಂದು ಶಾಪವಿತ್ತು. ಆತ ಕಾಡಿನಲ್ಲಿ ತಪಸ್ಸನ್ನಾಚರಿಸುತ್ತಿದ್ದ ಮುನಿಯೋರ್ವರ ಕೊರಳಿಗೆ ಸತ್ತ ಸರ್ಪವೊಂದನ್ನು ತಂದು ತೊಡಿಸಿ ತನ್ನ ಕೋಪತೀರಿಸಿಕೊಂಡಿದ್ದ, ಸಮಾಧಿ ಸ್ಥಿತಿಯಿಂದ ಎಚ್ಚೆತ್ತ ಮುನಿಗೆ ತನ್ನ ದೇಹದ ಕುತ್ತಿಗೆಗೆ ಸತ್ತ ಸರ್ಪವಿರುವುದು ಕಾಣಿಸಿತು. ದಿವ್ಯದೃಷ್ಟಿಯಿಂದ ನೋಡಲಾಗಿ ಅದು ಪರೀಕ್ಷಿತನ ಕೃತ್ಯವೆಂದು ತಿಳಿದುಬಂತು. ಅದರಿಂದ ಕುಪಿತನಾದ ಮುನಿ ಪರೀಕ್ಷಿತನಿಗೆ ಹಾವಿನಿಂದಲೇ ಸಾವು ಎಂಬುದಾಗಿ ಶಾಪವಿತ್ತಿದ್ದ. ಅವನ ಶಾಪ ಕಾರ್ಯಗತಗೊಳ್ಳುವ ದಿನ ಹತ್ತಿರ ಬಂತು. ಇದನ್ನು ತಿಳಿದ ಪರೀಕ್ಷಿತ ಸಮುದ್ರದ ಮಧ್ಯೆ ದೊಡ್ಡ ಕಂಬವನ್ನೆಬ್ಬಿಸಿ, ಆ ಕಂಬದಮೇಲೆ ಅರಮನೆಯನ್ನು ನಿರ್ಮಿಸಿಕೊಂಡು ಜೀವಿಸಲು ಪ್ರಾರಂಭಿಸುತ್ತಾನೆ. ಆಗ ದೈವೀ ಶಾಪವನ್ನು ನಿಗ್ರಹಿಸಲು, ನಿವಾಳಿಸಿ ಎಸೆಯಲು ಅವನಿಂದ ಸಾಧ್ಯವೇ ? ಸರ್ಪರಾಜ ತಕ್ಷಕನಿಗೆ ಆಜ್ಞೆ ಬಂತು. ತಕ್ಷಕ ಮಂತ್ರಾಲೋಚಿಸಿ ನೋಡಿದ. ಪರೀಕ್ಷಿತನಿರುವಲ್ಲಿ ಹೋಗುವುದಾದರೂ ಹೇಗೆ. ಅಲ್ಲೆಲ್ಲಾ ಹಾವಿನ ರೂಪದಲ್ಲಿ ಹೋದರೆ ಪ್ರವೇಶ ಸಾಧ್ಯವೇ ? ಅದಿರಲಿ ಮನುಷ್ಯರೂಪದಲ್ಲಿಯೇ ಹೋಗೋಣವೆಂದರೂ ಪರಿಚಿತರಿಗಲ್ಲದೇ ಬೇರೆ ಯಾರಿಗೂ ಪ್ರವೇಶವಿರಲಿಲ್ಲ. ಅದಕ್ಕೇ ಚಿಂತಿಸಿ ಹೋಗುವ ದಾರಿ ಹುಡುಕಿದ ತಕ್ಷಕ ಹಣ್ಣೊಂದರೊಳಗೆ ಹುಳವಾಗಿ ಸೇರಿ ಹಣ್ಣಿನ ಬುಟ್ಟಿಯಲ್ಲಿ ತೂರಲ್ಪಟ್ಟು ರಾಜನ ಅರಮನೆಯನ್ನು ಪ್ರವೇಶಿಸುತ್ತಾನೆ. ಪ್ರವೇಶಿಸಿದ ಆತ, ಅದೇ ಹಣ್ಣನ್ನು ಅನಿರೀಕ್ಷಿತವಾಗಿ ಪರೀಕ್ಷಿತ ಕೈಗೆತ್ತಿಕೊಂಡಾಗ ದೊಡ್ಡ ಹಾವಿನ ರೂಪದಲ್ಲಿ ಹೊರಬಂದು ಪರೀಕ್ಷಿತನನ್ನು ಕಚ್ಚಿ ಕೊಂದು ಹೊರಟುಹೋಗುತ್ತಾನೆ.


ತನ್ನ ತಂದೆಗೆ ಸಾವು ಬಂದ ಕಾರಣವನ್ನು ಅರಿತ ಪರೀಕ್ಷಿತನ ಮಗ ಜನಮೇಜಯ ಪ್ರತೀಕಾರಕ್ಕಾಗಿ ಸರ್ಪಯಾಗವನ್ನೇ ಮಾಡಿದ! ಬ್ರಹ್ಮಾಂಡದಲ್ಲಿರುವ ಎಲ್ಲಾ ಹಾವುಗಳನ್ನೂ ಅಗ್ನಿಗೆ ಆಹುತಿ ಕೊಡಹತ್ತಿದ. ಆಗ ಇನ್ನೇನು ಸರ್ಪಕುಲಗಳೆಲ್ಲ ಬಹುತೇಕ ನಾಶವಾಗುತ್ತಿರಲು ಆಸ್ತಿಕನೆಂಬ ಸರ್ಪ ಬ್ರಾಹ್ಮಣ ವೇಷದಲ್ಲಿ ಬಂದು ಕೇವಲ ೭ ಮಹಾ ಸರ್ಪ ಕುಲಗಳನ್ನು ಉಳಿಸಲು ಮಂತ್ರಪ್ರಯೋಗಮಾಡಿದ. ಇದು ಭಗವದಿಚ್ಛೆಯೂ ಆಗಿತ್ತಾದ್ದರಿಂದ ಯಜ್ಞಕ್ಕೆ ಬರುತ್ತಿದ್ದ ಉಳಿದ ಸರ್ಪ ಕುಲಗಳ ಹಾವುಗಳು ತಡೆಯನ್ನು ಪಡೆದು ಮರಳಿ ಜೀವದಾನವನ್ನು ಪಡೆದವು. ಹೀಗಾಗಿ ಅಂದು ಆತ ಮಾಡಿದ ಆ ಯಾಗ ಪರೋಕ್ಷವಾಗಿ ಜನಮೇಜಯನ ವಂಶದ ನಾಶಕ್ಕೆ, ಸಂತತಿ ನಾಶಕ್ಕೆ ಕಾರಣವಾಯಿತು.

ಇವತ್ತಿಗೂ ಗೊತ್ತಿದ್ದೋ ಗೊತ್ತಿಲ್ಲದೇಯೋ, ಹಾವನ್ನು ನೇರವಾಗಿಯೋ ಪರೋಕ್ಷವಾಗಿಯೋ ಸಾಯಿಸಿದ್ದರೆ, ಹುತ್ತ ಅಗೆದಿದ್ದರೆ, ಹಾವುಗಳನ್ನು ಅವುಗಳ ಮೂಲವಾಸಸ್ಥಾನದಿಂದ ಬೇರೆಡೆಗೆ ತಳ್ಳಿದ್ದರೆ ಅದಕ್ಕೆಲ್ಲ ನಾವು ಜನ್ಮಾಂತರಗಳಲ್ಲೂ ಶಿಕ್ಷೆಯನ್ನು ಅನುಭವಿಸಲೇ ಬೇಕು. ಈ ಶಿಕ್ಷೆ ಹೇಗೆ ಎಂದರೆ ಇದು ವಂಶಪರಂಪರೆಗೂ ತಗುಲುವಂತಹುದ್ದಾಗಿರುತ್ತದೆ. ವಂಶ ನಾಶವಾಗಬಹುದು, ಸಂತಾನ ಇಲ್ಲದೇ ಹೋಗಬಹುದು, ಹಲವು ವಿಧದ ಚರ್ಮವ್ಯಾಧಿ ತಗಲಬಹುದು, ಮಾಡುವ ವ್ಯವಹಾರಗಳಲ್ಲಿ ನಷ್ಟ ಸಂಭವಿಸಬಹುದು ಹೀಗೇ ಒಟ್ಟಾರೆಯಾಗಿ ಇದನ್ನು ಅನುಭವಿಸಲೇ ಬೇಕು. ಕೆಲವೊಮ್ಮೆ ನಾವು ಈ ಜನ್ಮದಲ್ಲಿ ಹಾವನ್ನೇ ಸರಿಯಾಗಿ ನೋಡಿರದಿದ್ದರೂ ಇಂತಹ ಶಾಪ ಹಿಂದಿನ ನಮ್ಮ ಪೂರ್ವಜರಿಂದ ಅಥವಾ ನಮ್ಮ ಜನ್ಮಾಂತರದ ಸಂಚಿತ ಕರ್ಮಗಳಿಂದ ಬರಬಹುದು. ಇವುಗಳ ನಿವಾರಣೆಗಾಗಿ ನಾಗಪ್ರತಿಷ್ಠೆ, ನಾಗಪೂಜೆ, ನಾಗಮಂಡಲ ಪೂಜೆ, ಆಶ್ಲೇಷಾ ಬಲಿಯೇ ಮೊದಲಾದ ಆರಾಧನಾ ಕ್ರಮಗಳನ್ನು ಪ್ರಾಜ್ಞರು ತಿಳಿಸಿಕೊಟ್ಟಿದ್ದಾರೆ.

ಕೆಲವು ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಇವುಗಳನ್ನು ನಡೆಸಿದರೆ ಶೀಘ್ರ ಫಲಪ್ರಾಪ್ತಿ ಎಂಬುದು ಹಲವು ಜನರ ಅನುಭವದ ಮಾತು. ಕರ್ನಾಟಕದಲ್ಲಿ ಕುಕ್ಕೇ ಸುಬ್ರಹ್ಮಣ್ಯ[ದಕ್ಷಿಣ ಕನ್ನಡ], ಘಾಟೀ ಸುಬ್ರಹ್ಮಣ್ಯ[ಕೋಲಾರ], ಮುಗ್ವಾ ಸುಬ್ರಹ್ಮಣ್ಯ[ಉತ್ತರ ಕನ್ನಡ] ಹೀಗೆ ಈ ಮೂರು ಕ್ಷೇತ್ರಗಳು ನಾಗಾರಾಧನೆಗೆ ಹೆಸರುವಾಸಿ. ನಾಗ ಅಂದರೆ ಒಂದರ್ಥದಲ್ಲಿ ಸುಬ್ರಹ್ಮಣ್ಯನೇ ಆಗಿರುವುದರಿಂದ ನಾಗಾರಾಧನೆ ಸುಬ್ರಹ್ಮಣ್ಯನ ಆರಾಧನೆಯೇ ಸರಿ. ಇಂತಹ ಕಾರ್ತಿಕೇಯನನ್ನು ನಾಗನ ರೂಪದಲ್ಲಿ ಶ್ರಾವಣ ಶುದ್ಧ ಪಂಚಮಿಯಂದು ಪೂಜಿಸುವುದು, ಫಲಪುಷ್ಪ-ನೈವೇದ್ಯ-ಧೂಪ-ದೀಪಗಳನ್ನು ಅರ್ಪಿಸುವುದು ನಡೆದು ಬಂದ ಸಂಪ್ರದಾಯ. ಯಾವ ವಿಜ್ಞಾನದಲ್ಲಿ ಸಂತಾನ ಹೀನತೆಗೆ ವೈದ್ಯಕೀಯ ಪರೀಕ್ಷೆಗಳಲ್ಲಿ ಯಾವುದೇ ಸಮಸ್ಯೆ ಕಾಣದೇ ಇದ್ದೂ ಮಕ್ಕಳಾಗದೇ ಇರುವ ಸ್ಥಿತಿ ಕಾಣುತ್ತದೋ ಅಂಥವರು ಶ್ರದ್ಧಾ-ಭಕ್ತಿ ಪುರಸ್ಸರವಾಗಿ ಹೆಚ್ಚಿನ ರೀತಿಯಲ್ಲಿ ನಾಗಾರಾಧನೆ ಮಾಡಿದರೆ ಅವರಿಗೆ ಸಂತಾನಪ್ರಾಪ್ತಿ ಶತಸ್ಸಿದ್ಧ. ಹೀಗೇ ಮನುಜ ಕುಲದ ಹಲವು ದುಃಖ ದುಮ್ಮಾನಗಳಿಗೆ ಪರೋಕ್ಷವಾಗಿ ನಮ್ಮ ನಡವಳಿಕೆ ಕಾರಣವೂ ಆಗಿರಬಹುದು! ಪ್ರಕೃತಿದತ್ತ ಬದುಕಿನಲ್ಲಿ ಹಾವುಗಳಿಗೂ ಒಂದು ಸ್ಥಾನವಿರಲಿ ಎಂಬ ಕಾರಣದಿಂದ ಇದು ದೈವಸಂಕಲ್ಪದಿಂದಲೇ ಆದದ್ದಿರಬಹುದು. ಏನೇ ಇದ್ದರೂ ಹಾವುಗಳು ಸಹಜವಾಗಿ ಮನುಷ್ಯರ ತಂಟೆಗೆ ಬರುವುದಿಲ್ಲ, ಹಿಂದಿನ ಕರ್ಮದ ಫಲವನ್ನು ಅನುಭವಿಸಬೇಕೆಂದಿದ್ದರೆ ಕಚ್ಚದೆಯೂ ಬಿಡುವುದಿಲ್ಲ, ಕಚ್ಚಿದರೂ ಬದುಕುಳಿಯಲೆಂದು ವ್ಯಕ್ತಿಯ ಹಣೆಯಲ್ಲಿ ಬರೆದಿದ್ದರೆ ತಕ್ಷಣಕ್ಕೆ ಆ ವ್ಯಕ್ತಿಗೆ ತಕ್ಕ ಚಿಕಿತ್ಸೆ ಸಿಗುತ್ತದೆ, ಅದಿಲ್ಲಾ ವ್ಯಕ್ತಿ ಕೋಟಿತೆತ್ತರೂ ಆಯುಷ್ಯ ಮುಗಿದ ಹಾಗೇ.



[ಕುಕ್ಕೆಯಲ್ಲಿ ಕಾಣಿಸಿತ್ತೆನ್ನಲಾದ, ಇತ್ತೀಚೆಗೆ ಮೇಲ್ ಮೂಲಕ ದೊರೆತ ಐದು ತಲೆ ನಾಗರಹಾವಿನ ಚಿತ್ರಗಳು ]

ನಮ್ಮ ಕೆಲವು ಹಳ್ಳಿಗಳಲ್ಲಿ ನಾಗರಹಾವು ಕಚ್ಚಿದ್ದನ್ನು ಔಷಧವಿಲ್ಲದೇ ಬರೇ ಮಂತ್ರದಿಂದ ಗುಣಪಡಿಸುವ ವ್ಯಕ್ತಿಗಳು ಇಂದಿಗೂ ಇದ್ದಾರೆ! ಕಚ್ಚಿದ ತಕ್ಷಣಕ್ಕೆ ಅವರಿಗೆ ಸುದ್ದಿ ತಲ್ಪಿಸಿ ಬಿಟ್ಟರೆ ಅವರು ಒಂದು ಸಣ್ಣ ಬಟ್ಟೆಯನ್ನು ಸುರುಳಿ ಸುತ್ತಿ ಗಂಟು ಹಾಕಿಡುತ್ತಾರಂತೆ. ಆಮೇಲೆ ಕಚ್ಚಿದ ವ್ಯಕ್ತಿಯನ್ನು ಅವರ ಹತ್ತಿರ ಕರೆತರುವವರೆಗೂ ಆ ವ್ಯಕ್ತಿಗೆ ತೀರಾ ಸ್ಮೃತಿಯೇ ಇರದಿದ್ದರೂ ಅವರಲ್ಲಿಗೆ ಬಂದು ಅವರು ಮಂತ್ರಪಠಿಸುತ್ತ ಕಚ್ಚಿದ ವ್ಯಕ್ತಿಗಳನ್ನು ಮುಟ್ಟಿದರೆ ಅವರು ನಿಧಾನವಾಗಿ ಏನೂ ಅರಿಯದವರಂತೆ ಕಣ್ಣು ತೆರೆಯುತ್ತ ಮೇಲೇಳುತ್ತಾರೆ! ಇದು ಹಲವು ಮಾಧ್ಯಮ ವಾಹಿನಿಗಳಲ್ಲಿ ಕೂಡ ತೋರಿಸಲ್ಪಟ್ಟಿದೆ--ಅಂದಮೇಲೆ ಹಾವು ಎಂದರೆ ಕೇವಲ ಪ್ರಾಣಿಯಲ್ಲ, ಅದರಲ್ಲೂ ನಾಗರಹಾವಿಗೆ ವಿಶೇಷ ಸ್ಥಾನಮಾನವಿದೆ. ನಾಗರಹಾವು ಕಣ್ಣಿಗೆ ನಮಗೆ ಕೇವಲ ಹಾವಾಗಿಕಂಡರೂ ಅದು ನಾಗಲೋಕದ ತಕ್ಷಕನಿಗೆ ನಾವು ಸಲ್ಲಿಸತಕ್ಕ ಗೌರವವನ್ನು ಪಡೆಯಲು ಅರ್ಹವಾಗಿದೆ. ಅದಕ್ಕೆಂದೇ ಹಳ್ಳಿಗಳಲ್ಲಿ ಇತ್ತೀಚಿನ ದಿನಗಳವರೆಗೂ ಅನೇಕ ಹೃದಯವಂತ ಬ್ರಾಹ್ಮಣ ಕುಟುಂಬಗಳು ಅಲ್ಲದೇ ಹಲವು ವರ್ಗದವರು ಸತ್ತ ನಾಗರಹಾವನ್ನು ಕಂಡರೆ, ಒಬ್ಬ ಮನುಷ್ಯನ ಅಂತ್ಯೇಷ್ಟಿಗಳನ್ನು ಹೇಗೆ ಶಾಸ್ತ್ರೋಕ್ತವಾಗಿ ನಡೆಸುತ್ತಾರೋ ಅದೇ ರೀತಿಯಲ್ಲಿ ನಡೆಸುತ್ತಾರೆ, ಸಾವಿರಾರು/ನೂರಾರು ಜನರಿಗೆ ಅನ್ನಸಂತರ್ಪಣೆ ಮಾಡುತ್ತಾರೆ-ಇದು ’ಸರ್ಪಸಂಸ್ಕಾರ’ ಎಂದು ಕರೆಯಲ್ಪಟ್ಟಿದೆ. ನಮ್ಮ ದಕ್ಷಿಣೋತ್ತರ ಕನ್ನಡ,ಮಲೆನಾಡು, ಉಡುಪಿ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಎಲ್ಲಾ ವರ್ಗದವರೂ ಈ ಸರ್ಪಸಂಸ್ಕಾರ ನಡೆಸುವುದನ್ನು ಕಾಣಬಹುದಾಗಿದೆ.

ಇರಲಿ ದೇವತ್ವವನ್ನು ತಮಾಷೆಯಾಗಿಯಾದರೂ ಸ್ಮರಿಸಿದರೆ ಸಾಕಂತೆ, ಹಾಗಾಗಿ ನಾವು ನಮ್ಮ ನಾಗಣ್ಣನನ್ನು ಒಂದು ಸಣ್ಣ ಹಾಡಿನೊಂದಿಗೆ ನೆನೆಯೋಣ ಬನ್ನಿ-


ಬುಸ್ಸು ಬುಸ್ಸೆಂದು ಬಂದೆಯಲ್ಲ ಸುಬ್ಬರಾಯ
ತುಸು ತಡ್ಕೊಳೋ ನೀನು ಮಹರಾಯ || ಪ ||

ಊರಕೇರಿಯ ಜನರು ನಿನ್ನ ಈಗ ಕಂಡರೆ
ಭಾರೀ ಜೋರಾಗಿ ಗದ್ದಲ ನಿನಗೆ ತೊಂದರೆ !
ಹಾರಹಾಕುತ್ತ ನಿನ್ನ ಆ ಶಿಲೆಯ ಮೂರ್ತಿಗೆ
ನಾರೀಮಣಿಗಳು ಎರೆವರು ತನಿಯ ಹೊತ್ತಿಗೆ || ೧ ||

ಹುತ್ತ ಬಗೆವರು ನಿನ್ನನ್ನು ದೂರ ಓಡಿಸಿ
ಬೆತ್ತ ಕಡಿವರು ನಿನ್ನ ಮನೆಯ ಜಾಗ ಕದಲಿಸಿ
ಎತ್ತ ಕಂಡರು ಮಕ್ಕಳೆಲ್ಲ ಹೆದರಿಕೊಂಬರು
ಮತ್ತೆ ಹಾವಾಡಿಗರು ನಿನ್ನ ಹಿಡಿದುಕೊಂಬರು || ೨ ||

ನಾಗದೋಷವೆಂದು ಜ್ಯೋತಿಷರು ಎಣಿಸಿಕೊಂಡರು
ಬಾಗಿಲಾಚೆ ಸತ್ತ ಸರ್ಪ ಕೊಟ್ಟ ಶಾಪವೆಂದರು !
ರಾಗವೆಳೆಯುತ್ತ ಆಶ್ಲೇಷಾ ಬಲಿಯ ಬರೆದರು
ಬೇಗ ಪೂರೈಸಿ ನಿಮಗೆ ಒಳ್ಳೆಯದು ಎಂದರು || ೩ ||

ಹರಿಯು ಮಲಗಿಬಿಟ್ಟ ನಿನ್ನನ್ನೇ ಹಾಸಿಗೆಮಾಡಿ
ಹರನು ಕೊರಳಲ್ಲಿ ಧರಿಸಿದನು ಹಾರವಮಾಡಿ
ಹರನ ಸುತ ನಮ್ಮ ಗಣಪಣ್ಣ ಹೊಟ್ಟೆಗೆ ಹೂಡಿ
ಅರೆರೆ ಸುಬ್ರಹ್ಮಣ್ಯ ಮಾಡಿದೆ ಎಂಥಾ ಮೋಡಿ ! || ೪ ||