ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, July 11, 2011

ಆದನೊಬ್ಬನು ಕೌಸಲೆಗೆ ಮಗನಾದನೊಬ್ಬನು ಕೈಕೆಗಿಬ್ಬರು


ಆದನೊಬ್ಬನು ಕೌಸಲೆಗೆ ಮಗನಾದನೊಬ್ಬನು ಕೈಕೆಗಿಬ್ಬರು

[ಭಾಗ-೨]

ಕನ್ನಡದ ಕಲಿಯಾಗಿ ಕನ್ನಡವನ್ನೇ ಉಸಿರಾಡಿ, ಪೌರಾಣಿಕ ಪಾತ್ರಗಳಿಗಷ್ಟೇ ತಮ್ಮನ್ನೂ ತಮ್ಮ ಬಳಗವನ್ನೂ ಮೀಸಲಾಗಿರಿಸಿಕೊಂಡು, ಬದುಕಿನ ಹಲವು ಮಜಲುಗಳಲ್ಲಿ ಸಾಕಷ್ಟು ನೋವನ್ನು ಅನುಭವಿಸಿ ಪ್ರೇಕ್ಷಕ ಪ್ರಭುಗಳಿಗೆ ನಲಿವನ್ನು ಉಣಬಡಿಸಿ ಮಿಂಚಿ ಮರೆಯಾದ, ನೀಲಾಗಸದಲ್ಲಿ ಶಾಶ್ವತ ಮಿನುಗುತಾರೆಯಾದ ದಿ| ಕೆರೆಮನೆ ಶಂಭು ಹೆಗಡೆಯವರ ಸತ್ಯ ಹರಿಶ್ಚಂದ್ರನ ಪಾತ್ರದ ಒಂದು ತುಣುಕನ್ನು ನಿಮ್ಮ ಆವಗಾಹನೆಗಾಗಿ ಇಲ್ಲಿ ನೀಡಿದ್ದೇನೆ. ಭಾಗವಹಿಸಿದ ಹಿಮ್ಮೇಳ-ಮುಮ್ಮೇಳದ ಎಲ್ಲ ಕಲಾವಿದರಿಗೂ ನನ್ನ ನಮನಗಳು --



ಬೇಸರದ ದಿನಗಳನ್ನು ಕಳೆಯಲಿಕ್ಕೆ ಹುಡುಕಿಕೊಂಡ ಒಂದು ಮಾರ್ಗ ನಿಜಕ್ಕೂ ಮನಸ್ಸಿನ ದಾಹವನ್ನು, ಹಸಿವನ್ನು ನಿವಾರಿಸುವ ತಾಕತ್ತನ್ನು ಹೊಂದಿತ್ತು; ಎಷ್ಟರಮಟ್ಟಿಗಪ್ಪಾ ಅಂತಂದರೆ ಕನ್ನಡದ ಇಂದಿನ ಉದ್ದಾಮ ಪಂಡಿತರಾದ ಶತಾವಧಾನಿ ಡಾ| ಆರ್. ಗಣೇಶ್ ಕೂಡ ಆ ಕಲೆಯನ್ನು ಮೆಚ್ಚಿಕೊಂಡರು, ಮಾತ್ರವಲ್ಲ ತಮ್ಮ ಪಾಂಡಿತ್ಯದಿಂದ ಕೆಲವು ಏಕವ್ಯಕ್ತೀ ಅಭಿನಯದ ಪ್ರಸಂಗಗಳನ್ನೂ ಬರೆದರು! ಕನ್ನಡದ ಇನ್ನೊಬ್ಬ ಕಟ್ಟಾಳು ಶತಾಯುಷಿ ಪ್ರೊ| ಜಿ. ವೆಂಕಟಸುಬ್ಬಯ್ಯನವರೂ ಸಹಿತ ಯಕ್ಷಗಾನ ತಾಳಮದ್ದಲೆಯನ್ನು ಕೂತು ಕೇಳಿದರು. ಸಂಸ್ಕೃತದ ಘನವಿದ್ವಾಂಸರೂ ಘನಪಾಠಿಗಳೂ ಮೆಚ್ಚಿ ತಲೆದೂಗುವಂತಹ ಅನ್ಯಭಾಷಿಕರು ಕದಿಯಲಾರದ ಅಪ್ಪಟ ಕನ್ನಡ ಕಲೆ ಯಕ್ಷಗಾನ! ಅಂದಿನ ದಿನಗಳಲ್ಲಿ ವಿದೇಶೀ ಪ್ರಜೆಗಳೂ ಪೂರ್ಣರಾತ್ರಿ ನಮ್ಮೊಟ್ಟಿಗೆ ಆರಾಮ್ ಖುರ್ಚಿಗಳಲ್ಲಿ ಕುಳಿತು ಯಕ್ಷಗಾನ ನೋಡಿದ್ದನ್ನು ನಾನು ಸ್ವತಃ ಕಂಡು ಹರುಷಪಟ್ಟಿದ್ದೇನೆ. ಮಾರ್ಥಾ ಆಸ್ಟಿನ್ ಎಂಬೊಬ್ಬ ಮಹಿಳೆಯಂತೂ ಅದರ ಮೇಲೆ ಸಂಶೋಧನೆಗೇ ತೊಡಗಿದ್ದರು! ಈ ಕಲೆ ಕೇವಲ ಕರಾವಳಿ ಜಿಲ್ಲೆಗಳಿಗೆ ಮೀಸಲಾಗಬಾರದು. ಇದರಲ್ಲಿನ ಸಾಹಿತ್ಯವನ್ನು ರಸಾನುಭೂತಿಯನ್ನು. ಇದರ ಅಂದಚಂದವನ್ನು ಇಡೀ ಕರ್ನಾಟಕದ ಜನತೆ ಅನುಭವಿಸುತ್ತಾ ಜ್ಞಾನದ ಖಜಾನೆಯನ್ನು ತಮ್ಮ ಮನೆಗಳಲ್ಲಿ ಸ್ಥಾಪಿಸಿಕೊಳ್ಳಲಿ ಎಂದು ಈ ಮೂಲಕ ಹಾರೈಸುತ್ತೇನೆ.

ನಾಗರ ಪಂಚಮಿಗೆ ಸುಳಿರೊಟ್ಟಿ ಮಾಡುತ್ತಿದ್ದರು. ಅಕ್ಕಿಹಿಟ್ಟಿನ ತಳಪಾಯದ ಮೇಲೆ ಕಾಯಿ-ಬೆಲ್ಲದ ಪಾಕಮಿಶ್ರಣವನ್ನು ಇಟ್ಟು ಅದನ್ನು ಶುಂಠಿ ಅಥವಾ ಅರಿಶಿನದ ಎಲೆಗಳಲ್ಲಿ ಮಡಚಿ ದೋಸೆ ಕಾವಲಿಯ ಮೇಲೆ ಬೇಯಿಸುತ್ತಿದ್ದರು. ತಿನ್ನಲು ಪೊಗದಸ್ತಾಗಿರುವ ಈ ತಿಂಡಿ ನಾಗನಿಗೂ ಇಷ್ಟವಂತೆ! ಯಾರು ಕಂಡರೋ ತಿಳಿದಿಲ್ಲ ! ಇದೇ ವೇಳೆ ದಾಲ್ಚಿನಿ ಗಿಡದ ಎಲೆಗಳನ್ನು ತಂದು ಅದರಲ್ಲಿ: ಇದೇರೀತಿ ನುಣ್ಣಗೆ ರುಬ್ಬಿದ ಅಕ್ಕಿ ಹಿಟ್ಟಿಗೆ ಬೆಲ್ಲಸೇರಿಸಿ ಕಾಯಿಸಿ ತಟ್ಟುವ ಹದಕ್ಕೆ ತಂದುಕೊಂಡು, ಆರಿದ ಅದನ್ನು ಉಂಡೆಗಳಾಗಿ ಕಟ್ಟಿ, ಆ ಉಂಡೆಗಳನ್ನು ದಾಲ್ಚಿನಿ ಎಲೆಯಾಕಾರಕ್ಕೆ ಎಲೆಗಳಲ್ಲಿ ತಟ್ಟಿ ಅದರೊಳಗೆ ಪಾಕದ ಕಾಯಿತುರಿ-ಬೆಲ್ಲ ಮೆತ್ತಿ, ನಂತರ ಎಲೆಯ ಬುಡಾ-ತುದಿಗಳನ್ನು ಮುಗಿದ ಕೈ ಆಕಾರಕ್ಕೆ ಮಡಚುತ್ತಿದ್ದರು. ಮಡಚಿದ ಅವುಗಳನ್ನು ತಾಮ್ರದ ಅಟ್ಟಿನ ಕೌಳಿಗೆಯಲ್ಲಿ ಒಂದರಮೇಲೊಂದು ಪೇರಿಸಿ ಅದರಲ್ಲೇ ತಯಾರಾಗುವ ಹಬೆಯಲ್ಲಿ ಬೇಯಿಸುತ್ತಿದ್ದರು.[ಓದುಗರು ನೀವ್ಯಾರಾದರೂ ಪ್ರಯತ್ನಿಸುವುದಾದರೆ ರುಚಿಗೆ ತಕ್ಕಷ್ಟು ಉಪ್ಪು ಹಾಕಲು ಮರೆಯಬೇಡಿ] ೩-೪ ದಿನಗಳವರೆಗೆ ಇಟ್ಟು ತಿನ್ನಬಹುದಾದ ಈ ತಿಂಡಿ ’ಕೈಮುಗು [ಮುಗಿದ ಕೈ ಆಕಾರದ ಕೈಮುಗ್ಯೋ ] ಮೊಮ್ಮಿ’ ಎಂತಲೂ, ಗೆಣಸಲೆ ಎಂತಲೂ ಕರೆಸಿಕೊಳ್ಳುತ್ತಿತ್ತು. ನಾವು ಮಕ್ಕಳು ಆಗಾಗ ಹಿರಿಯರ[ಅಜ್ಜಿ-ಅಮ್ಮ] ಕಣ್ತಪ್ಪಿಸಿ ಅಟ್ಟಿನಕೌಳಿಗೆಗೆ ಲಗ್ಗೆ ಇಡುವುದಿತ್ತು. " ೭೦ ರಲ್ಲಿ ೪-೫ ಕಾಣುತ್ತಿಲ್ಲಾ ? " ಎಂದು ಪ್ರಶ್ನಿಸಿದರೆ " ಬೆಕ್ಕು ತಿಂದಿರಬೇಕು " ಎಂದು ಹಾರಿಕೆಯ ಉತ್ತರ ಕೊಡುತ್ತಿದ್ದೆವು; ಆ ’ಕಳ್ಳಬೆಕ್ಕಿ’ನ ಬಗೆಗೆ ಅವರಿಗೂ ಗೊತ್ತು !

ಅಂದಹಾಗೇ ನಮ್ಮ ನೆಂಟರ ಮನೆಯಲ್ಲೊಂದು ಬೆಕ್ಕು ಸಾಕಿದ್ದರು. ಅದರ ವೈಶಿಷ್ಟ್ಯವೇನೆಂದರೆ ನೆಲದಮೇಲೆ ಎಲೆಗಳಲ್ಲಿ ಇಟ್ಟ ಆಹಾರಕ್ಕೆ ತಾನಾಗಿ ಯಾವುದಕ್ಕೂ ಬಾಯಿಹಾಕಿ ತಿನ್ನುತ್ತಿರಲಿಲ್ಲ. ಮನೆಯ ಹಿರಿಯರ ಮುಖ ನೋಡಿ ಕೀರಲು ದನಿಯಲ್ಲಿ " ಮ್ಯಾಂವ್ " ಎನ್ನುತ್ತಿತ್ತು. " ಹೋಗು ನಿಂಗೇ ಅದು ತಿನ್ನು " ಎಂಬ ಫರ್ಮಾನು ಬರುವವರೆಗೂ ಕಾಯುತ್ತಿತ್ತು. ಬೆಕ್ಕಿಗೂ ಅರ್ಥವಾಗುವ ನಮ್ಮ ಕನ್ನಡ ಇನ್ಯಾರಿಗೆ ಅರ್ಥವಾಗದೇ ಇದ್ದರೂ ಹೋಗಲಿ ಬಿಡಿ! ಕೆಲವು ಪ್ರಾಣಿಗಳೇ ಹಾಗೆ-ಅದ್ಭುತ ಬುದ್ಧಿಮತ್ತೆಯನ್ನು ತೋರುತ್ತವೆ. [ಬೆಂಗಳೂರಿನ ಸುಬ್ರಹ್ಮಣ್ಯ ನಗರದ ಕಾಲನಿಯೊಂದರ ರಸ್ತೆಯಲ್ಲಿ ನೀರಿನ ಟಾಕಿಯೊಂದಿತ್ತು. ಬಾಯಾರಿಕೆಯಾದಾಗ ಹಸುವೊಂದು ಅದರ ನಲ್ಲಿಯನ್ನು ಬಾಯಲ್ಲೇ ಒತ್ತಿ ತಿರುಗಿಸಿ ನೀರು ಕುಡಿದು ಮತ್ತೆ ಮರಳಿ ತಿರುಗಿಸಿ ನೀರನ್ನು ನಿಲ್ಲಿಸುವುದನ್ನು ೧೯೯೪ರಲ್ಲಿ ಕಂಡಿದ್ದೆ!] ಊರಲ್ಲಿ ನಮ್ಮಲ್ಲಿ ಇದ್ದ ಮಲೆನಾಡ ಗಿಡ್ಡ ತಳಿಯ ೨೫-೨೬ ಹಸುಗಳ ಪೈಕಿ ಒಂದು ಹಸು ಕೊಂಬಿನಲ್ಲಿ ಸರಗೋಲನ್ನು ತೆರೆದು ಒಳಗೆ ಬರುವುದನ್ನು ಅಭ್ಯಾಸಮಾಡಿಕೊಂಡಿತ್ತು. ಸರಗೋಲು ಅಥವಾ ದಣಕಲು ಅಂದರೆ ಮಧ್ಯದಲ್ಲಿ ನಾಲ್ಕಾರು ಅಡಿ ಜಾಗ ಬಿಟ್ಟು ಆ ಕಡೆ ಈ ಕಡೆ ಎರಡು ಮರದ ದಿಮ್ಮಿಗಳನ್ನು ನಿಲ್ಲಿಸಿ, ಸಮಾನಾಂತರದಲ್ಲಿ ೪ ಇಂಚು ವ್ಯಾಸದ ನಾಕಾರು ತೂತುಗಳಿರುವ ಆ ದಿಮ್ಮಿಗಳಿಗೆ ಬಿದಿರಿನ ದಪ್ಪ ತುಂಡುಗಳನ್ನು ತೂರಿಸುವುದು. ಬೇಕಾದಾಗ ಅದನ್ನು ಜರುಗಿಸಿ ತೆರೆದರೆ ದಾರಿ, ಹಾಗೇ ಬಿಟ್ಟರೆ ಮುಚ್ಚಿದ ದಾರಿ! ಹೀಗೇ ಅಪರೂಪದ ಸ್ವಭಾವಗಳನ್ನು ಪ್ರಾಣಿ/ಪಕ್ಷಿಗಳಲ್ಲಿ ಅಲ್ಲಲ್ಲಿ ಕಾಣಬಹುದಾಗಿದೆ.

ಮಳೆಗಾಲದಲ್ಲಿ ಮನೆಗಳ ಸುತ್ತ ಯಥೇಚ್ಛ ಜಾಗವಿರುವಲ್ಲಿ ಥರಥರದ ಹೂವಿನಗಿಡಗಳು ಬೆಳೆಯುತ್ತಿದ್ದವು. ಶಂಕರಗೌರೀ ಗಿಡ, ಬೋಳಮ್ಮನ ಗಿಡ ...ಹೀಗೇ ಹಲವು ಹತ್ತು ಬಣ್ಣ ವೈವಿಧ್ಯಗಳು, ಆಕಾರ ವೈವಿಧ್ಯಗಳು, ಪರಿಮಳ ವೈವಿಧ್ಯಗಳು, ಅವುಗಳ ಮೇಲೆ ಹಾರಾಡುವ ಕೂರುವ ದುಂಬಿ-ಪತಂಗ-ಪಾತರಗಿತ್ತಿಗಳು, ಮತ್ತವುಗಳಲ್ಲಿ ವೈವಿಧ್ಯಗಳು ಆಹಹಾ ...ಸೃಷ್ಟಿಸಿದ ಆ ಕಲಾವಿದ ಸಿಕ್ಕರೆ ಒಮ್ಮೆ ಅಪ್ಪಿ ಆನಂದಭಾಷ್ಪ ಸುರಿಸಿ ಕೈಲಾಗಬಹುದಾದ ಸನ್ಮಾನವನ್ನು ಮಾಡಿಬಿಡಬಹುದಿತ್ತು ಅನಿಸುತ್ತದೆ! ಜಾಜಿ ಜೂಜಿ ಮಲ್ಲಿಗೆ ಸಂಪಿಗೆ ಕೇದಿಗೆ ಪುನ್ನಾಗ ಕರವೀರ ಪುಷ್ಪಪೂಜೆಯಲ್ಲಿ ಹೆಸರಿಸುವ ಬಹುತೇಕ ಎಲ್ಲಾ ಜಾತಿಯ ಹೂವುಗಳು ಅಲ್ಲಿದ್ದವು. ಅದು ನಮ್ಮ ಪೂರ್ವಜರ, ನಮ್ಮ ಹಿರಿಯರ ಒಲವು-ಒತ್ತಾಸೆ. ತನ್ನ ಹೆಸರಲ್ಲಿ ನಮಗೂ ಒಂದಷ್ಟು ಕರುಣಿಸಿ ಕಣ್ಮನ ತಣಿಸಿದ ಆ ಕಾಣದ ದೇವರಿಗೆ ಯಾವಮಾರ್ಗದ ಮಿಂಚಂಚೆಯಲ್ಲಿ ಕೃತಜ್ಞನಾಗಲಿ ?

ಆಷಾಢದಲ್ಲಿ ಮಳೆ ವಿಪರೀತ ಇರುವುದರಿಂದ ಅದ್ಯಾಕೋ ಜಾಸ್ತಿ ಹೂವುಗಳು ಬಿಡುತ್ತಿರಲಿಲ್ಲ. ಆಗ ಏನಿದ್ದರೂ ತುಳಸೀ ಗಿಡಗಳ ಮೇಲಾಟ. ಹರೆಯದ ಹುಡುಗಿಯರಂತೇ ಅಲ್ಲಿನ ನೆಲದ ಕಸುವನ್ನುಂಡು ದಷ್ಟಪುಷ್ಟವಾಗಿ ಬೆಳೆದ ತುಳಸೀ ಗಿಡಗಳಿಂದ ಬುಟ್ಟಿ ಬುಟ್ಟಿ ತುಳಸಿ ಕೊಂಬೆಗಳನ್ನು ಕೊಯ್ದು ಹಾರಮಾಡಿ ದೇವರಿಗೆ ಹಾಕುವುದಿತ್ತು. ನಾಗರ ಪಂಚಮಿಯ ಆಜುಬಾಜಿನಲ್ಲೇ ಕೃಷ್ಣಾಷ್ಟಮಿ ಇನ್ನೇನು ಬಂದುಬಿಡುತ್ತದಲ್ಲ ! ಅದಾದ ೧೧ ದಿನಗಳಲ್ಲೇ ಗಣೇಶ ಹಬ್ಬ ! ಹಬ್ಬಗಳು ಬಂದವೆಂದರೆ ಮಕ್ಕಳಾದ ನಮಗೆ ಬಲು ಖುಷಿ. ತರಾವರಿ ತಿಂಡಿ-ತಿನಿಸುಗಳು ಸಿಗುತ್ತವಲ್ಲ! ಶ್ರೀಕೃಷ್ಣ ರಾತ್ರಿ ಹುಟ್ಟುವುದು-ಆತನಿಗೆ ಬೆಣ್ಣೆ ಮುದ್ದೆ, ವಿವಿಧ ಉಂಡೆಗಳು, ಸಜ್ಜಿಗೆ, ಕಲಸಿದ ಅರಳುಕಾಳು, ಗೋಡಂಬಿ-ದ್ರಾಕ್ಷಿ...ಹೀಗೇ ದೇವರ ಮುಂದೆ ಜಾಗವೇ ಇರದಷ್ಟು! ನಿಜ ಹೇಳಲೋ ಪುರಾಣಗಳಲ್ಲಿ ದೇವರು ಹಲವು ರೂಪಗಳಲ್ಲಿ ಕಾಣಿಸಿಕೊಂಡಿದ್ದು ತುಂಬಾ ಒಳ್ಳೇದಾಯ್ತು. ಜನ್ಮಾಷ್ಟಮಿಯ ಉಂಡೆಗಳು ಇಟ್ಟಲ್ಲೇ ಮಾಯವಾಗುವ ’ಶ್ರೀಕೃಷ್ಣನ ಮಹಿಮೆ’ಯ ಬಗ್ಗೆ ಹೊಸದಾಗಿ ಹೇಳಬೇಕೇ? ನಮಗೆ ಗಣೇಶ ಅಂದರೂ ತುಂಬಾ ಇಷ್ಟವಪ್ಪ. ಆತನಿಗೆ ನಮ್ಮಹಾಗೇ ಬೇಡದ ತಿಂಡಿಗಳೇ ಇರಲಿಲ್ಲ. ನಮ್ಮಲ್ಲಂತೂ ೨೧ ಬಗೆಯ ಸಿಹಿತಿನಿಸುಗಳನ್ನು ಮಾಡುತ್ತಿದ್ದರು! ಅದರೊಟ್ಟಿಗೆ ಕರಿದ ವ್ಯಂಜನಗಳು ಅಲಾಯ್ದ! ಪಾಯಸ ಪತ್ರೊಡೆ ಚಕ್ಕುಲಿ ಒಡೆ ಮತ್ತೇಕೆ ಪ್ರತ್ಯೇಕ ಹೆಸರಿಸಿ ನಿಮ್ಮ ಹೊಟ್ಟೆ ಉರಿಸಲಿ ?

ಒಮ್ಮೆ ಏನಾಯ್ತು ಗೊತ್ತಾ ನಾನು ಚಿಕ್ಕವನಿದ್ದೆನಲ್ಲಾ ಮೆಟ್ಗನ [ಪುಟಬಾಳೆ, ಯಾಲಕ್ಕೀಬಾಳೆ]ಬಾಳೇಹಣ್ಣು ಎಂದರೆ ನಂಗೆ ಅತಿ ಪ್ರೀತಿಯಿತ್ತು. ಆದರೆ ಒಂದೆರಡು ತಿಂದು ಬಿಟ್ಟರೆ ಜೀರ್ಣವಾಗುವುದು ಕಷ್ಟ ಎಂಬುದು ನಮ್ಮ ಹಿರಿಯರ ಅಂಬೋಣ, ಅದು ಅವರ ಅಂಬೋಣ ಬಿಡಿ-ನಂಗೇ ಬಿಟ್ಟರೆ ಗಣೇಶನಿಗೇ ಪೈಪೋಟಿ ಕೊಡಲು ಸಿದ್ಧನಾಗುತ್ತಿದ್ದೆ ಎಂದುಕೊಳ್ಳೋಣ! ಒಂದು ಗಣೇಶ ಚತುರ್ಥಿಯಂದು ಮಂಗಲಾರತಿಯಾಗುವ ವೇಳೆ ಚಂದದ ಆರತಿಗಳನ್ನೇ ಕಣ್ತುಂಬಾ ಈಕ್ಷಿಸುತ್ತಿದ್ದೆ. ಅವೆಷ್ಟು ಆರಾತಿಗಳಪ್ಪಾ ಏಕದಳ, ದ್ವಿದಳ, ತ್ರಿದಳ. ಚತುರ್ದಳ, ಪಂಚದಳ, ನಾಗಾರತಿ, ಗರುಡಾರತಿ, ಹಲವು ಬತ್ತಿಗಳ ನೀರಾಜನ ಇಲ್ಲೂ ಮತ್ತದೇ ವೈವಿಧ್ಯ! ಆರತಿ ಮುಗಿದು ಮಂತ್ರಪುಷ್ಪದ ಘೋಷ ನಡೆಯುವ ಗಡಿಬಿಡಿಯಲ್ಲಿ ದೇವರ ಮುಂದೆ ಇಟ್ಟಿರುವ ಬಾಳೆಗೊನೆ ನಾಪತ್ತೆ! ನಂಗಂತೂ ಕಣ್ಣೀರೇ ಬಂದ್ಹೋಯ್ತು. ಗಣಪತಿಯ ಹೊಟ್ಟೆ ಬಹಳ ದೊಡ್ಡದು, ಆತ ಕೆಲವೊಮ್ಮೆ ಮುಂದಿರಿಸಿದ ಹಣ್ಣು-ತಿಂಡಿಗಳನ್ನು ತಿಂದುಬಿಡುತ್ತಾನೆ ಎಂದು ಸಮಾಧಾನ ಮಾಡಿದ್ದರು ಹಿರಿಯರು! ನಾವು ಅಂದು ಐಟಿ ಬಿಟಿಯುಗದ ಮಕ್ಕಳಾಗದೇ ಪೆದ್ಮುಂಡೆಯವುಗಳಾಗಿದ್ದದ್ದರಿಂದ ಅವರು ಬಚಾವು!

ಪಾಯಸವೂ ನನ್ನ ಪ್ರೀತಿಯ ಖಾದ್ಯಗಳಲ್ಲೊಂದು. ಅಕ್ಕಿಯ/ ಗೋಧಿ-ಕಡ್ಲೆಯ ಪಾಯಸ ಮಾಡಿದರೆ ಅಜೀರ್ಣವಾಗುವಷ್ಟು ಊಟಮಾಡಿಬಿಡುವುದು ನನ್ನ ಅಭ್ಯಾಸ ಅಂತಿದ್ದರು ನನ್ನ ಹಿರಿಯರು. [ಅಸಲಿಗೆ ನನ್ನ ಜೀರ್ಣಾಂಗ ಮನಸ್ಸಿನಷ್ಟು ದೊಡ್ಡದಾಗಿರಲಿಲ್ಲವಲ್ಲ!] ಹೀಗೇ ಒಮ್ಮೆ ಮನೇಲಿ ಯಾವಾಗಲೋ ಊಟಮಾಡುವಾಗ " ನೋಡು ತಮ್ಮಾ ನಿನ್ ಹೊಟ್ಟೆ ಉಂಡುಂಡು ಮೂಗು ನೋಡ್ತಾ ಇದೆ " ಎಂದು ಚಿಕ್ಕಪ್ಪ ಗೇಲಿಮಾಡಿದ್ದರು. ನಾನು ಹೌದಿರಬೇಕೆಂದು ಊಟ ನಿಲ್ಲಿಸಿ ಕೈತೊಳೆದಿದ್ದೆ. ಹೊಟ್ಟೆ ಭರ್ತಿಯಾದಾಗ ಅದು ಮುಮ್ಮುಖವಾಗಿ ನಿಂತಾಗ ನಮ್ಮ ಮೂಗನ್ನು ದಿಟ್ಟಿಸಿದಂತೇ ಕಾಣುವುದಿಲ್ಲವೇ ? ಬೇಕಾದ್ರೆ ನೀವೇ ನೋಡ್ಕೊಳಿ. ಒಮ್ಮೆ ಪುರೋಹಿತರೊಬ್ಬರು ಸಪ್ತಶತೀ ಪಾರಾಯಣಕ್ಕೆ ನಮ್ಮನೆಗೆ ಬಂದಿದ್ದರು. ಅವರು ಕಾಯಂ ಬರುವವರೇ ಆಗಿರುವುದರಿಂದ ನಂಗೆ ಅವರಲ್ಲಿ ಸಲುಗೆಯೂ ಇತ್ತು. ಅಂದು ಪೂಜೆಯೂ ಮುಗಿದು ಊಟಕ್ಕೆ ಕುಳಿತಾಗ ಪುರೋಹಿತರು ಪಾಯಸವನ್ನು ಉಣ್ಣುತ್ತಿದ್ದರು. ಚಿಕ್ಕಪ್ಪ ಹೇಳಿದ ಆ ಮಾತು ನಂಗೆ ನೆನಪಿಗೆ ಬಂದು " ನೋಡು ಭಟ್ಟರ [ಪುರೋಹಿತರ] ಹೊಟ್ಟೆ ಉಂಡುಂಡು ಮೂಗು ನೋಡ್ತಾ ಇದೆ " ಎಂದುಬಿಟ್ಟೆನಂತೆ! ಚಿಕ್ಕಪ್ಪ ನನ್ನಮೇಲೆ ಪ್ರಯೋಗಿಸಿದ್ದನ್ನು ನಾನು ಪುರೋಹಿತರಮೇಲೆ ಪ್ರಯೋಗಿಸಿಬಿಟ್ಟಿದ್ದೆ ಅಂತ ಕಾಣುತ್ತೆ! ಪಾಪ ಆ ಬಡ ಪುರೋಹಿತರ ಸ್ಥಿತಿ ಏನಾಗಿರಬೇಡ !

ಮಳೆಗಾಲದ ಕೆಲವು ದಿನಗಳಲ್ಲಿ ಭಾನುವಾರ ಬಂದಾಗ ಹೊಸದಾಗಿ ಮೇಯಲು ಸಿದ್ಧವಾಗಿ ನಿಂತ ಆಕಳ ಎಳೆಗರುಗಳನ್ನು ಮೇಯುವ ತರಬೇತಿ ನೀಡಲು ದೇವರಮಕ್ಕಿ ಗದ್ದೆಗೆ ಕೊಂಡೊಯ್ಯುತ್ತಿದ್ದೆವು. ಅಲ್ಲಿ ನಮ್ಮದೇ ರಾಜ್ಯ! ಗೂಟಕ್ಕೆ ಕರುಗಳನ್ನು ಕಟ್ಟಿಬಿಟ್ಟರೆ ಆಮೇಲೆ ಆಡುವುದು ಹೂಡುವುದು ಮರವೇರುವುದು ಮರಕೋತಿಯಾಡುವುದು ಹೀಗೇ ಅಂದಿನ ದಿನಚರಿ. ಊಟ-ತಿಂಡಿ ಬೇಕಾಗಿಯೇ ಇರಲಿಲ್ಲ. ನಮಗೆಲ್ಲಾ ನಮ್ ಮಾಸ್ತರು ಹೇಳಿಕೊಟ್ಟಿದ್ದು

ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ
ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ

-- ಅಂದು ಅದು ಕುವೆಂಪುರವರ ರಚನೆ ಎಂಬುದು ನಮಗೆ ಮಾಸ್ತರು ಹೇಳಿದ್ದೇ ಬಿಟ್ಟರೆ ಕುವೆಂಪು ಯಾರು ಅವರು ಇದ್ದಕ್ಕಿದ್ದಲ್ಲೇ ಅದೆಲ್ಲಾ ಯಾಕೆ ಬರೆದರು-ಆ ಬಗ್ಗೆ ಜಾಸ್ತಿ ಮಂಡೆಬಿಸಿಮಾಡಿಕೊಂಡ ಜನವಲ್ಲ ನಾವು! ಕೆಲವೊಮ್ಮೆ ’ಮೊರೆವ ತೊರೆಯೆಡೆಯಲ್ಲಿ’ ಇರುವುದು ’ಮೆರೆವ ತೊರೆಯೆಡೆಯಲ್ಲಿ’ ಅಂತಾಗಿಬಿಟ್ಟು ಅದನ್ನೇ ಕಂಠಪಾಠಮಾಡುತ್ತಿದ್ದೆವು. ಅರ್ಥವನ್ನಂತೂ ಮಾಸ್ತರು ಬಿಡಿಸಿ ಹೇಳಿದ್ದರು. ಹೀಗಾಗಿ ಹಾಡೇನ್ ಕೇಳ್ತೀರಿ? ನಾವಾಯ್ತು ಮತ್ತೆ ನಮ್ಮ ಮಾಸ್ತರು, ಅಪರೂಪಕ್ಕೆ ಬರುವ ಇನೇಶ್ ಭಟ್ಟರು! ನಮ್ಮೂರಕಡೆ ’ಭಟ್ಟ’ ಎನ್ನುವ ಹೆಸರು ಧಾರಾಳವಾಗಿ ಸಿಗುವುದರಿಂದಲೂ ’ಇನ್ಸ್‍ಪೆಕ್ಟರ್’ ಎಂಬೆಲ್ಲಾ ಶಬ್ದವನ್ನು ಉಚ್ಚರಿಸುವುದು ಸರಿಯಾಗಿ ಗೊತ್ತಿಲ್ಲದ್ದರಿಂದಲೂ ನಾವು ಅಪರೂಪಕ್ಕೆ ಶಾಲೆಗೆ ಆಗಮಿಸುವ ಆ ಅತಿಥಿಯನ್ನು ಭಟ್ಟರುಗಳ ಸಾಲಿಗೇ ಸೇರಿಸಿಕೊಂಡು ’ಇನೇಶ್ ಭಟ್ಟ’ರನ್ನಾಗಿಸಿಬಿಟ್ಟಿದ್ದೆವು !

ಅಷ್ಟೇ ಏಕೆ ದೇವಸ್ಥಾನಗಳಿಗೆ ಹೋದರೆ ಶ್ಲೋಕಗಳನ್ನು ಹೇಳಿ ನಮಸ್ಕರಿಸಬೇಕು ಎಂದು ಹಿರಿಯರು ಆಜ್ಞಾಪಿಸಿದ್ದರು. ನಮ್ಮೊಳಗೊಬ್ಬ ಮಾಬ್ಲೇಶ್ವರ. ದೇವಸ್ಥಾನಕ್ಕೆ ಹೋದಾಗ ಅಕಸ್ಮಾತ್ ಅವನನ್ನು ಕಂಡರೆ ನಗುಬರುತ್ತಿತ್ತು, ಯಾಕೆ ಗೊತ್ತೇ ’ ಶಾಂತಾಕಾರಂ ಭುಜಗ ಶಯನಂ ’ಎಂಬ ಶ್ಲೋಕವನ್ನು ಹೇಳುವಾಗ ಎಲ್ಲಿ ತಪ್ಪಿಹೋಗುತ್ತದೋ ಎಂದು ಅತೀ ಗಡಿಬಿಡಿ ಮಾಡಿಕೊಂಡು ಮನದ ಆ ಗೋಜಲಿನಲ್ಲಿ ’ಶಾಂತಾಕಾರಂ ಗಜಭುಜ ಶಯನಂ ’ ಎಂದು ಆತ ಹೇಳುವುದು ಸರ್ವೇ ಸಾಮಾನ್ಯವಾಗಿತ್ತು. ದೇವಸ್ಥಾನಗಳಲ್ಲಿ ಊರ ಹಿರಿಯರು ಕೆಲವು ಮರಾಠಿ ಭಕ್ತಿಗೀತೆಗಳನ್ನೂ ಮೀರಾ ಭಜನೆಗಳನ್ನೂ ಹಾಡುತ್ತಿದ್ದರು. ಸಮೂಹಗಾನವಾದ ಭಜನೆಗಳಲ್ಲಿ ನಾವೂ ಭಾಗವಹಿಸುತ್ತಿದ್ದೆವು. ಹಾಡಿನ ಚರಣಗಳು ಬರದೇ ಇದ್ದರೆ ಮಿಕ್ಕುಳಿದವರು ಹಾಡುವಾಗ ಬಾಯಾಡಿಸುತ್ತಾ ಇದ್ದು ಕೊನೇ ಶಬ್ದವನ್ನು ನೆನಪಿಟ್ಟು ಅವರಿಗಿಂತಾ ಗಟ್ಟಿ ಧ್ವನಿಯಲ್ಲಿ ಜೋರಾಗಿ ಹಾಡುತ್ತಿದ್ದೆವು! ಹೀಗಾಗಿ ನಮಗೂ ಮರಾಠಿ ಹಾಡುಗಳು ಬರುತ್ತಿದ್ದವು ಅಂತ ಜನ ಅಂದುಕೊಂಡಿರಲೂ ಸಾಕು!

ಮನವೆಂಬ ಕೆದಕೂಪವನ್ನು ಕೆದಕಿದರೆ, ನೆನೆದರೆ ಸಾವಿರ ಸಾವಿರ ಘಟನೆಗಳು ಸಾಲಾಗಿ ಹೊರಬರುತ್ತವೆ. ಯಾವುದು ನಿಮಗೆ ಪಥ್ಯವೋ ಯಾವುದು ಅಪಥ್ಯವೋ ಹಂಸಕ್ಷೀರ ನ್ಯಾಯದಿಂದ ಸ್ವೀಕರಿಸಲು ನಿಮ್ಮಲ್ಲೇ ಕೋರಿ ಪ್ರಥಮೇಕಾದಶಿ ಹಬ್ಬದ ಆಚರಣೆಯ ನೆನಹಿನಲ್ಲಿ ಇಂದು ನಿನ್ನೆ ನಡೆಸಿದ ಈ ನನ್ನ ರಾಮಾಯಣಕ್ಕೆ ಸದ್ಯಕ್ಕೆ ಮಂಗಳ ಹಾಡುತ್ತಿದ್ದೇನೆ, ನಮಸ್ಕಾರ.