ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, October 13, 2010

ಮನದ ತಂತಿಯಲ್ಲಿ ಹರಿದು

ಚಿತ್ರಋಣ : ಶೃಂಗೇರಿ. ನೆಟ್ [ಶೃಂಗೇರಿ ಮಠದ ಕೃಪೆಯಿಂದ ]

ಮನದ ತಂತಿಯಲ್ಲಿ ಹರಿದು

[ಪೀಠಸ್ಥ ಶ್ರೀ ಶಾರದಾಮಾತೆಯನ್ನು ನೆನೆದಾಗ ಕಣ್ತುಂಬಿ-ಮನದುಂಬಿ ತಂತಾನೇ ಹರಿದ ಗೇಯಗೀತೆ. ನಮ್ಮ ಮನದ ಭಾವಕ್ಕೆ ಮೂಲ ಪ್ರೇರಣೆ ದೈವದ ಈ ರೂಪದಲ್ಲಿ ಅಲ್ಲವೇ ? ತಪ್ಪೋ ಒಪ್ಪೋ ನಮ್ಮನ್ನು ಭುವಿಗೆ ವಿಧಿಬರೆಹ ಬರೆದು ಕಳಿಸಿರುವ ಅಮ್ಮಾ ಶಾರದೆ ನಮ್ಮನ್ನು ಅನುಗ್ರಹಿಸು - ಎಂಬುದು ಪ್ರಾರ್ಥನೆ. ಇದರಲ್ಲಿ ನನ್ನ ಜೊತೆ ನೀವೆಲ್ಲಾ ಸೇರಿರುವಿರೆಂದು ನಂಬಿರುತ್ತೇನೆ, ಎಲ್ಲರಿಗೂ ಶರನ್ನವರಾತ್ರಿಯ, ಶುಭದಸರೆಯ ಹಾರ್ದಿಕ ಶುಭಾಶಯಗಳು. ]

ಮನದ ತಂತಿಯಲ್ಲಿ ಹರಿದು
ಬೆಳಗಲೆಮ್ಮ ಶಾರದೆ
ಬಂದಳೊಮ್ಮೆ ದಸರೆಯಲ್ಲಿ
ಇರುವಳೇನು ಬಾರದೆ ? || ಪ ||

ಅಮ್ಮನಿನ್ನ ಪ್ರೇರಣೆಯು
ನಮ್ಮ ಬುದ್ಧಿ ತಿಳಿಯಲೊಮ್ಮೆ
ಸುಮ್ಮನಿರುವೆವಿಲ್ಲಿ ಭವದಿ
ಎಮ್ಮಮೂಲ ತಿಳಿಸು ಒಮ್ಮೆ
ಕಮ್ಮಗೋಲನೆಸೆವ ಬಾಣಗಳನು ತಡೆದು ಬದುಕಲು
ಹೆಮ್ಮೆಯಿಂದ ಜೀವಿಸುವೆವು ಅಮ್ಮ ನೀನು ಹರಸಲು || ೧ ||

ಕಾರುಣ್ಯದಿ ಕಾಣಲೊಮ್ಮೆ
ಧಾರೆಯಾಗಿ ಸ್ಫುರಿಸಲೊಮ್ಮೆ
ಭಾರಗಳನು ನೀಗಲೊಮ್ಮೆ
ಚೋರಮನವ ಶಿಕ್ಷಿಸೊಮ್ಮೆ
ದಾರಿಯುದ್ದ ಸಿಗುವ ಭಾರೀ ಕಷ್ಟಗಳನು ಹರಿಸಲು
ಭೇರಿ ಬಾರಿಸುತ್ತ ನಿನ್ನ ನೆನೆದು ಒಮ್ಮೆ ಕುಣಿಯಲು || ೨ ||

ವಿಧಿಯರೂಪ ವಿದ್ಯೆಯಲ್ಲಿ
ಕದಿಯಲಾಗದಂಥಾ ಶ್ರೇಷ್ಠ
ನಿಧಿಯತಂದು ನಮ್ಮೊಳಿರಿಸಿ
ಬದಿಗೆ ಸರಿದು ನೇಪಥ್ಯದಿ
ಸದಭಿರುಚಿಯ ಸಾಹಿತ್ಯಗಳ ಸೃಜಿಸುವಂತೆಮಾಡಿದೆ
ಅದಕೆ ತಕ್ಕ ಶಬ್ದವಾಗಿ ಲೇಖನಿಯಲಿ ಮೂಡಿದೆ || ೩ ||

ಜಗವುಗೌಣ ನೀನಿಲ್ಲದೆ
ನಗುವದಿಲ್ಲ ನಲಿವಿಲ್ಲದೆ
ಬಗೆಯ ಬರೆದು ಹಣೆಯಮೇಲೆ
ನಗುವ ನಿನ್ನ ತೋರಲೊಮ್ಮೆ
ಅಗರು ಮಂಗಳಾರತಿಯನು ಜಗದಲಿ ಸ್ವೀಕರಿಸಲೊಮ್ಮೆ
ಮುಗುದರನ್ನು ಕಂಡು ಹರಸಿ ಪೀಠದಲ್ಲಿ ಕೂರಲೊಮ್ಮೆ || ೪ ||