ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, October 11, 2010

ಅಯೋಮಯ!


ಅಯೋಮಯ!

ಉಂಡಮನೆಗೆ ಎರಡು ಬಗೆವ
ಭಂಡ ರಾಜಕೀಯದವರ
ಕಂಡುಸೋತು ಮನವು ದಿನವು ಬರೆಯದಾಯಿತು !
ಕಂಡಕಂಡಲೆಲ್ಲ ಅಲೆದು
ಮೊಂಡು ಬುದ್ಧಿಬಹಳ ಮೆರೆದು
ಕೊಂಡು-ಕೊಡುವ ಕುದುರೆ ವ್ಯಾಪಾರನೋಡಿತು !

ಮಂಡೆಬಿಸಿ ಮಾಡಲೊಮ್ಮೆ
ಅಂಡಿಗೆ ಬಿಸಿಮುಟ್ಟಿಸುತ್ತ
ಚಂಡು ತೂರಿ ಮಜವಪಡೆವ ಶಾಸಕರನೋಡಿತು!
ಭಂಡಧೈರ್ಯದಿಂದ ಕೋಟಿ
’ಬಂಡವಾಳ’ದಂತೆ ಸುರಿವ
ಪುಂಡು ಹುಡುಗುರಾಜಕೀಯವನ್ನು ಕಂಡಿತು !

ಹೆಂಡ-ಹೆಣ್ಣು-ಹಣವ ಪಡೆದು
ಮಂಡಿಯೂರಿ ನಮಿಸುವಂತ
ಉಂಡೆನಾಮವಿಟ್ಟ ಶಾಸಕರ ಹುಡುಕಿತು !
ಹಿಂಡುಕಟ್ಟಿಕೊಂಡು ತಾವು
ಗೂಂಡಾಗಳು ಎಂದು ತೋರಿ
ಥಂಡುಹೊಡೆದು ದಾಸರಾದುದನ್ನು ಅರಿಯಿತು!

ಸಂಡಿಗೆ ಕಜ್ಜಾಯ ಮೆದ್ದು
ಗುಂಡಿಗೆಯಲಿ ತಂತ್ರಹೂಡಿ
ಮುಂಡೆಮದುವೆಯಲುಂಬ ಕೆಲವು ’ಕೈ’ಯನಂಬಿತು!
ಅಂಡುಸುಟ್ಟ ಬೆಕ್ಕಿನಂತೆ
ಅಂಡೆಚೆಡ್ಡಿ ಚಿವುಟಿಗೊಳುತ
ಕೊಂಡು-ಕಳೆದು ಹಪಹಪಿಸಿದ ’ದಳ’ವ ಕಂಡಿತು!

ಬೆಂಡೆಕಾಯಿ ಹುರಿದರೀತಿ
ಗುಂಡಿಯದುಮಿ ಬರೆದುಹರಿದು
ಬಂಡಿತುಂಬ ಮತವೆಣಿಸಿದ ರೀತಿ ನೆನೆಸಿತು!
ಕಂಡೂ ಕಂಡೂ ಕೊಡುವೆವಲ್ಲ
ಕುಂಡೆ-ಹೊಟ್ಟೆ ಬೆಳೆದ ಜನಕೆ
ಮಂಡೆಸರಿಯಿಲ್ಲ ನಮಗೆ ಎಂದು ಮರುಗಿತು !