ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, August 31, 2010

ಶ್ರಾವಣ ಭಾನುವಾರ!!


ಶ್ರಾವಣ ಭಾನುವಾರ!!

[ನವ್ಯ-ಕಾವ್ಯ ೫೦ : ೫೦ ]
ಬಹುತೇಕರು ಅಂದಿಕೊಂಡಿರುವುದು ಇಂದಿನ ನವ್ಯಕಾವ್ಯವನ್ನು ಕವನ ರೂಪದಲ್ಲಿ ಬರೆಯಲು ಸಾಧ್ಯವಿಲ್ಲ ಎಂದು. ಆದರೆ ಸಮಯೋಕ್ತ ಶಬ್ದ ಲಾಲಿತ್ಯದಿಂದ ಹದಹಿಡಿದು ಬರೆದಾಗ ನವ್ಯವೂ ಕೂಡ ಮಜಕೊಡುವ ಕಾವ್ಯವಾಗುತ್ತದೆ ಎಂಬುದನ್ನು ತೋರಿಸಲು, ತಮ್ಮೆಲ್ಲರ ಮುಂದೆ ಇಡಲು ಉದ್ಯುಕ್ತನಾಗಿದ್ದೇನೆ. ನಿಮ್ಮ ಯಾವುದೇ ಭಾವಗಳಿರಲಿ ಅವುಗಳನ್ನು ಕವನವಾಗಿಸಬಹುದು! ಅಂತಹ ಕವನಗಳು ಕೆಲವೊಮ್ಮೆ ಪ್ರಾಕಾರಗಳಲ್ಲಿ ಬದಲೆನಿಸಿದರೂ ರಾಗದೊಂದಿಗೆ ಎಲ್ಲರನ್ನೂ ರಂಜಿಸಲು ಅಣಿಯಾಗುತ್ತವೆ. ಹಾಡಲಾಗದ ಕವಿತೆಗಿಂತ ಹಾಡಿಕೊಂಡು ಗುನುಗುನಿಸಬಹುದಾದ ಕವನ ಬರೆದರೆ ಬಹಳ ಜನರನ್ನು ಇಂದಿಗೂ ಅದು ತಲ್ಪುತ್ತದೆ ಎಂಬುದು ನನ್ನ ಅನಿಸಿಕೆ. ಅನೇಕ ಸಿನಿಮಾ ಹಾಡುಗಳಲ್ಲಿ ಸತ್ವರಹಿತವಾಗಿದ್ದನ್ನೂ ಹಲವೊಮ್ಮೆ ಕೇವಲ ರಾಗದಿಂದ ಮತ್ತು ಜೊತೆ ಸಂಗೀತದಿಂದ ನಾವು ಇಷ್ಟಪಟ್ಟು ಆಗಾಗ ಗುನುಗುನಿಸುತ್ತೇವಲ್ಲ ? ಅದೇ ರೀತಿಯಲ್ಲಿ ಸತ್ವಯುತವಾದ ಹೂರಣವನ್ನು ಶಬ್ದಗಳ ಕಣಕದಲ್ಲಿ ತುಂಬಿದಾಗ ಹದನಾದ ಹಾಗೂ ರುಚಿಯಾದ ಹೋಳಿಗೆ ಹೊರಬರಬಹುದಲ್ಲ! ಈ ದಿಸೆಯಲ್ಲಿ ಒಂದಡಿ ಮುಂದಿಟ್ಟು ನಿಮಗೆ ಕೊಡುತ್ತಿರುವ ಡಯಾ-ಹೋಳಿಗೆ [ಸ್ವೀಟು ಕಮ್ಮಿ]ಇದು ಎಂದುಕೊಂಡರೆ ತಪ್ಪೇ ? ತಿಂದು ನೋಡಿ, ಜೀರ್ಣವೋ-ಅಜೀರ್ಣವೋ, ವಾಂತಿಯೋ-ಭೇದಿಯೋ, ಕೆಮ್ಮೋ-ದಮ್ಮೋ ಅಂತೂ ನಿಮ್ಮ ಅಭಿಪ್ರಾಯವನ್ನು ಕೀಬೋರ್ಡ್ ಜಜ್ಜಿ ಗುಜರಾಯಿಸಲು ನೇರ ದಾರಿಯಿದೆ, ನಿಮಗಿದೋ ರತ್ನಗಂಬಳಿ ಮನಸಾ ಹಾಸಿದ್ದೇನೆ--ಹೀಗೆ ದಯಮಾಡಿಸಿ >>


ನವ್ಯ

ಮೂರುಮುಕ್ಕಾಲು ಗಂಟೆ ತಿಣುಕಿ ತಿಣುಕಿ
ಬರೆದಿದ್ದು ಮೂರೇಸಾಲು
ಸಾಕು ನಮ್ಮಂಥವರ ಹಣೆಬರಹವೇ
ಹೀಗೆಂದು ಬಗೆವಾಗ
ನೆರೆಮನೆಯ ನಾಯಿ ಬಾಯಿಗೆಬೀಗವೇ ಇರಲಿಲ್ಲ
ಬೇಕಾದ ಹಾಗೆ ಬೊಗಳುತ್ತಿತ್ತು
ರೇಡಿಯೋದಲ್ಲಿ ಅಶ್ವಥ್ ಹಾಡು ಶ್ರಾವಣ ಬಂತು ನಾಡಿಗೆ
ಕೆಳಗಿನ ಮನೆಯಲ್ಲಿ ಹುರಿದ ಮೀನಿನ ಕಮಟು ವಾಸ್ನೆ
ಅಷ್ಟರಲ್ಲೇ ಮೊಬೈಲಿಗೆ ಕಾಲು
ಬಾಗಿಲ ಬೆಲ್ಲು ರಿಂಗಣಿಸಿದ ಸದ್ದು
ಅಮ್ಮಾ ಹೂವು ಎಂಬಾಕೆಯ ಕೂಗನ್ನಾಲಿಸುತ್ತ ಹೊರನಡೆದರೆ
ಮೇಲಿನ ಮನೆಯ ಕಪ್ಪು ಬೆಕ್ಕು ದುರುಗುಟ್ಟಿ ಕಂಗಾಲಾಗಿ ನೋಡಿ
ಮಿಯಾಂವ್ ಎನ್ನುತ್ತ ಹೊರಟೇ ಹೋಯಿತು

೯ ಮೊಳದ ಧೋತಿ ಉಟ್ಟ ಸುಬ್ಬಾ ಭಟ್ಟರು
ಧಾರೆಪೂಜೆಗೆ ಬನ್ನಿ ಅಂದಿದ್ದಕ್ಕೆ ಮಡಿಯಾಗಿ ಬಂದಿದ್ದರು
ರಾತ್ರಿಯಿಂದ ಯಾಕೋ ತಲೆನೋವು ಪೂಜೆಬೇಡವೆಂದು
ಅಟ್ಟಿಬಿಡಲೇ ಎಂದುಕೊಳ್ಳುವಾಗ
ನೀರು ಬಿಸಿ ಇದೆ ನೀವು ಹೋಗಿ ಎಂದ ಮಡದಿಯ ಮಾತಿಗೆ
ಎದುರಾಡದ ಪ್ರಾಮಾಣಿಕ ನಾನು!
ರಸ್ತೆಯಲ್ಲಿ ಯಾವುದೋ ಕಾರು ಬುರ್ರನೆ ಬಂದು ನಿಂತ ಶಬ್ದ
ಬಹಳದಿನವಾಯಿತು ಇಲ್ಲೇ ಬಂದಿದ್ದೆವು
ನಿಮ್ಮನ್ನೊಮ್ಮೆ ನೋಡಿಹೋಗೋಣ ಎಂದು ಬಂದೆವು ಎಂದವರ
ಮುಖನೋಡುತ್ತ ನಾವು ಕಕ್ಕಾವಿಕ್ಕಿ
ಕೂರಿಸಿ ಹೊರ ಬಾಗಿಲು ಹಾಕಿಬರಲು ಹೋದರೆ
ಸಾಬ್ ಎನ್ನುತ್ತ ದೀನಸ್ವರ ಹೊರಡಿಸುವ ಗೂರ್ಖ ನಿಂತಿದ್ದ
ಅದೇ ಕ್ಷಣ ಪೇಪರಿನವ ಹಾಲಿನವ ಎಲ್ಲಾ ಬಂದರು
ಎಲ್ಲರಿಗೂ ಬೇಕು ಕಾಸು ಯಾರಿಗೆ ಬೇಡ ಎಂದುಕೊಳ್ಳುವಷ್ಟರಲ್ಲೇ
ಬಕ್ಷೀಸು ಕೇಳಲು ಕಾರ್ಪೋರೇಷನ್ ಕಸಗುಡಿಸುವವ ಬಂದಿದ್ದ
ಎಲ್ಲರಿಗೂ ದುಡ್ಡುಕೊಟ್ಟು ಕಳುಹಿಸಿದ ಮೇಲೆ ಪೂಜೆಗೆ ಮನಸ್ಸಿರಲಿಲ್ಲ!
ಶ್ರಾವಣದ ಪೂಜೆಗೆ ಅಂತೂ ಮುಹೂರ್ತ ಮಾತ್ರ ಕೂಡಿ ಬಂದಿತ್ತು.

ಅರ್ಧಘಂಟೆಯೂ ಆಗಿರಲಿಲ್ಲ
ಭಟ್ಟರ ಮೊಬೈಲಿಗೆ ಕಾಲು
ಮಂತ್ರದ ಮಧ್ಯೆಯೇ ಅಲ್ಲೇಲ್ಲೋ ಯಾರಿಗೋ
ಅರ್ಜೆಂಟು ಸತ್ಯನಾರಯಣ ಪೂಜೆ ಮಾಡಿಸುವ ತಲುಬು
ಮಂಗಳಾರತಿಗೂ ಮುನ್ನ ಮತ್ತೆ ಬಾಗಿಲ ಬೆಲ್ಲು
ಅಮ್ಮಾ ನಾವು ಯುರೇಕಾ ಫೋರ್ಬ್ಸ್ ನಿಂದ ಬಂದಿರೋದು
ಥೂ ಇವನ ಪೂಜೆಗೂ ಬಿಡುವುದಿಲ್ಲ ಎಂದೆನಿಸುವಷ್ಟರಲ್ಲೇ
ಎಲ್.ಐ.ಸಿ ಏಜೆಂಟ್ ಗೋವಿಂದ ಬಂದಿದ್ದ
ಇವತ್ತು ಬಹಳ ಬ್ಯೂಸಿ ಮತ್ತೆ ನೋಡೋಣವೆಂದು
ಪ್ರಸಾದಕ್ಕೆ ಕೂತುಕೊಳ್ಳಲು ಹೇಳಿದೆ
ಸ್ವಾಮೀ ಶನಿಮಹಾತ್ಮನ ದೇವಸ್ಥಾನದಲ್ಲಿ
ಅನ್ನದಾನ ಇಟ್ಟ್ಕೊಂಡಿದೀವಿ ತಮ್ಮಿಂದಾದ ದೇಣಿಗೆ ಕೊಡಿ
ಎನ್ನುತ್ತ ಎರಡೂ ಕಿವಿಗಳ ಮೇಲೆ ತುಳಸಿ ಸಿಂಬೆಗಳನ್ನು
ಇಟ್ಟುಕೊಂಡಿದ್ದ ಕಪ್ಪು ಜನ ಬಂದಿದ್ದರು
ಇನ್ನೇನು ಅವರನ್ನೂ ಹತ್ತು ರೂಪಾಯಿ ಕೊಟ್ಟು ಸಾಗಹಾಕಿದಾಗ
ಅನಾಥಾಶ್ರಮದ ಗಾಡಿ ಬಂತು
ಹಳೆಯ ಬಟ್ಟೆ ದೇಣಿಗೆ ವಗೈರೆ ಏನೆಲ್ಲಾ ಕೊಡಲು ಸಾಧ್ಯ ಕೊಡಿ
ಎಲ್ಲರನ್ನೂ ಸಂಭಾಳಿಸಿ ಕಳಿಸುವಾಗ ಸುಸ್ತೋ ಸುಸ್ತು
ಮತ್ತೆ ಎಫ್
. ಎಮ್ ರೈನ್ಬೋದಲ್ಲಿ ಹಾಡು ಬರುತ್ತಿತ್ತು
ಶ್ರಾವಣ ಬಂತು ನಾಡಿಗೆ ಬಂತು ಬೀಡಿಗೇ....ಓ ಬಂತು ಶ್ರಾವಣ!

-------------

ಕಾವ್ಯ

ಶ್ರಾವಣದಿ ಒಂದು ಭಾನುವಾರದಲಿ ಪೂಜೆಯನು
ನಾವೆಣಿಸಿದಂತೆ ನಡೆಸಲು ಇಷ್ಟಪಟ್ಟು
ಆವರಣ ಗುಡಿಸಿ ಮನೆಯೆಲ್ಲವನು ಶುಚಿಗೊಳಿಸಿ
ಕಾರಣವ ಹೇಳಿ ಬಾಕಿ ಕೆಲಸಗಳ ನಿಲಿಸಿ

ಹೊತ್ತಾರೆ ಎದ್ದು ಕಾವ್ಯವ ಬರೆಯೆ ತಿಣುತಿಣುಕಿ
ಮತ್ತೆ ಮೂರೇ ಸಾಲು ಬರೆದು ಮುಗಿಸಿ
ನೆತ್ತಿಯಲಿ ಬರೆದಿರುವುದೇ ಇಷ್ಟು ಇರುವಾಗ
ಒತ್ತಿ ಮನವನು ಬರೆಯಲೇನದುಪಯೋಗ ?

ನೆರೆಮನೆಯ ನಾಯಿ ಬಾಯಿಗೆ ಬೀಗವೇ ಇಲ್ಲ
ಹೊರಮನೆಯ ರೇಡಿಯೋದಲಿ ಅಶ್ವತ್ಥ್ ಹಾಡು
ಇರುವ ಹಲವನು ಮರೆಸಿ ಬಂತು ಶ್ರಾವಣವೆಂಬ
ವರಕವಿಯ ಕಾವ್ಯವದು ಸಡಿಲಿಸಿತು ಮೂಡು!

ಕೆಳಮನೆಯ ಕಡೆಯಿಂದ ಕರಿದ ಮೀನಿನ ಕಮಟು
ಕಳವಳಿಸಿ ಕೇಳುವಿರೆ ನಮ್ಮ ಗೋಳುಗಳ ?
ಒಳಗೆ ಜಂಗಮವಾಣಿ ಮೊಳಗಿರಲು ಅಬ್ಬರದಿ
ಬೆಳಗಿನಲೇ ಹೊರ ಗಂಟೆಯುಲಿತ ಕೇಳಿದೆವು !

ಹೂವಮಾರುವ ಹುಡುಗಿ " ಆಮ್ಮಾ ಹೂವು" ಎನಲು
ಭಾವ ಭಯದಲಿ ಕಪ್ಪನೆ ಬೆಕ್ಕು ಹೆದರಿ
ಆವ ಗಂಡಾಂತರವೋ ಎಂದು ಮಿಯಾಂವ್ ಎನುತ
ಕಾವೇರಿ ತಲೆಗೆ ಓಡಿತ್ತು ಮೇಲ್ಮನೆಗೆ !

ಒಂಬತ್ತು ಮೊಳದ ಧೋತಿಯನುಟ್ಟ ಸುಬ್ಭಟ್ಟರ್
ಒಂಬತ್ತಕೂ ಮುನ್ನ ಮಡಿಯಾಗಿ ಬಂದ್ರು
ತುಂಬಿತ್ತು ಗೊಂದಲವು ತಲೆನೋವು ಮೈಭಾರ
ಎಂಬಕಾರಣ ಹೇಳಿ ಅಟ್ಟಿಬಿಡಲೇನು ?

ನೀರುಬಿಸಿ ಇದೆಯೆಂದಾಗ ಮಡದಿಯೆಡೆಗೋಗೊಟ್ಟೆ
ನಾರಿಮಣಿಯವಳಿಗೆದುರಾಡುವವನಲ್ಲ
ದಾರಿಯಲಿ ಕಾರೊಂದು ಬುರ್ರೆನಿಸಿ ನಿಂತಿತ್ತು
ಆರು ಬಂದಿರಬಹುದು ಈ ನಮ್ಮ ಮನೆಗೆ ?

ಬಹಳದಿನವಾಯಿತೆನ್ನುತ ನೋಡಬಂದವರ
ಗಹನವಾದರ್ಥದಲಿ ನೋಡಿ ಕುಳ್ಳಿರಿಸಿ
ಬಹರಿಲ್ಲ ಇನ್ಯಾರು ಎನುತ ಬಾಗಿಲ ಹಾಕೆ
ಬಹು ದೀನ ಸ್ವರದಲ್ಲಿ " ಸಾಬ್ " ಎಂದ ಗೂರ್ಖ !

ಹಾಲಿನವ ಬಂದ ದಿನಪತ್ರಿಕೆವಯನೂ ಬಂದ
ಕಾಲವಿದು ಕಾಸು ಯಾರಿಗೆ ಬೇಡ ಹೇಳಿ ?
ಬಾಲವಾಡಿಪ ನಾಯಿಯತೆರದಿ ಆ ಕಸದವನು
ಕಾಲೂರೆ ಬಕ್ಷೀಸು ಕೊಟ್ಟುಮುಗಿಸಿದೆನು

ಮನಕೆ ನೆಮ್ಮದಿಯಿಲ್ಲ ಪೂಜೆಗೆ ಮನಸಿಲ್ಲ
ಘನ ಶ್ರಾವಣದ ಕಾಲ ಮೂರ್ತ ಬಂದಿಹುದು
ಗುನುಗುನಿಸಿ ಮಂತ್ರಪಠಿಸುತಲಿದ್ದ ಭಟ್ಟರಿಗೆ
ಪುನರಪೀ ಜಂಗಮದ ವಾಣಿಗಳು ಮೊಳಗೆ !

"ಬನ್ನಿ ಭಟ್ಟರೆ ತಾವು ಸತ್ಯನಾರಾಯಣನ
ತನ್ನಿ ಮನೆಗೈತಂದು ಪೂಜೆ ತ್ವರಿತದಲಿ " !
ಮನ್ನಿಸುನೀ ಹೇ ಪ್ರಭುವೆ ಮಂಗಳಾರತಿಗೈವೆ
ಮುನ್ನ ಬಾಗಿಲ ಗಂಟೆ ಮತ್ತೆ ರಿಂಗಣಿಸೆ !

" ಅಮ್ಮಾ " ಎನುತಲಿದ್ದ ಯುರೇಕಾ ಫೋರ್ಬ್ಸಿನವ
"ಸುಮ್ಮನೇ ಹೋಗಯ್ಯ" ಎನುತಿರುವ ವೇಳೆ
ಚಿಮ್ಮಿ ಬಂದಾ ನಮ್ಮ ಎಲ್.ಐ.ಸಿ.ಗೋವಿಂದ
ಒಮ್ಮೆ ಕೂತಿರು ಪ್ರಸಾದಕೆ ಬ್ಯೂಸಿಯೆಂದೆ

ಎರಡೂ ಕಿವಿಗಳ ಮೇಲೆ ತುಳಸಿ ಸಿಂಬೆಯನಿಟ್ಟ
ಕರಡು ಪುಸ್ತಕ ಹಿಡಿದ ಕಪ್ಪು ಜನ ಬರಲು
ದೊರೆಸಾನಿ ಕೇಳಿರಲು ಬಂದವರ ಅಹವಾಲು
" ವರಶನೈಶ್ಚರನ ಸನ್ನಿಧಿಗೆ ದೇಣಿಗೆಯ " !

ಕೊಟ್ಟು ಹತ್ತು ರೂಪಾಯಿ ಭಕ್ತಿಯಲಿ ಕೈಮುಗಿದು
ಒಟ್ಟಿನಲಿ ಸಾಗಹಾಕಲು ಬೇಗನವರ
ಬಟ್ಟೆ-ಹಳೆಯದು ಮತ್ತು ದೇಣಿಗೆಯ ಪ್ರಾರ್ಥಿಸುತ
ಕಟ್ಟಕಡೆಯಲಿ ಕಂಡರನಾಥಾಶ್ರಮದವರು

ಎಲ್ಲರನೂ ತಕ್ಕಂತೆ ಉಪಚರಿಸಿ ಕಳಿಸುತ್ತ
ಒಲ್ಲೆನೆನ್ನುವ ಮನದಿ ಹರಿಯ ಧ್ಯಾನಿಸುತ
ಘಲ್ಲೆನುವ ಹಾಡಿನಾ ಹರಹು ಎಫ್.ಎಮ್. ರೈನ್ಬೋದಲಿ
ಅಲ್ಲಿ ಬಂದಿತು ಮತ್ತೆ "ಶ್ರಾವಣ..ಬಂತು " !

Monday, August 30, 2010

ಹಸಿರ ಅರಮನೆ


ಹಸಿರ ಅರಮನೆ

ಹಸಿರು ಕಾನನದ ನಡುವಿರುವ ಹಳೆ ಮನೆಯಲ್ಲಿ
ನಸುಬೆಳಕಿನಲಿ ಕುಳಿತು ಚಹ ಕುಡಿವ ಮನಕೆ
ಪಿಸುಮಾತನರಗಿಣಿಯು ಪಂಜರದಿ ಕೂಗಿರಲು
ಹೊಸ ಆಸೆ ಗರಿಗೆದರಿ ಹಾರತೊಡಗಿದೆನು

ಅಲ್ಲಿ ಜಂಜಡವಿಲ್ಲ ಜಡಹಿಡಿದ ಬದುಕಲ್ಲ
ನಲ್ಲಿ ನೀರಿಗೆ ಕಾಯ್ವ ನ್ಯೂನತೆಯು ಇಲ್ಲ
ಬಲ್ಲವರು ಬಹಳಿಹರು ಬದುಕ ತೋರಿಸುವುದಕೆ
ಸಲ್ಲದಾಮಿಷಗಳಾ ಗೊಡವೆ ಬಹದಲ್ಲ

ನೀರವದ ಇಳೆಯಲ್ಲಿ ಜುಳುಜುಳು ನಿನಾದಿಸುತ
ಆರೂರ ಸುತ್ತರಿವ ಬೆಳ್ನೊರೆಯ ತೊರೆಗಳ್
ಮೇರೆ ಮೀರಿದ ಸುಖದ ನೋಂಪಿಯದ ಭುಂಜಿಸಲು
ನೂರೆಂಟು ಸಂಗ್ತಿಗಳು ಕಣ್ಣ ತುಂಬುವವು

ಒತ್ತಡದ ದಿನವಿಲ್ಲ ಹತ್ತಿರದ ಒಡನಾಟ
ನೆತ್ತಿಯಲೆ ತುಂಬಿ ತೊನೆಯುವ ಹಣ್ಣು ಗಿಡಗಳ್
ಮತ್ತೆ ನೇಸರನ ಕಿರು ಕಿರು ನೋಟ ಕೆಲದಿನದಿ
ಒತ್ತಟ್ಟಿಗಿರುವರಲಿ ಹಬ್ಬದಾಚರಣೆ

ವಿದ್ಯುತ್ತು ಬೇಡೆಮಗೆ ನಾವೇ ತಯಾರಿಪೆವು
ಗದ್ಯ-ಪದ್ಯವನೋದೆ ಸಮಯ ಬಹಳಿಹುದು
ವಿದ್ಯೆಗಳ ಆಗರವು ಬದುಕನಾಲಂಗಿಸುತ
ಸಾದ್ಯಂತ ಸಂಸ್ಕೃತಿಯ ತವರು ನಮದಿಹುದು

ಬೆಳಗು ಬೈಗಿನ ವೇಳೆ ನಿತ್ಯವೂ ನಮಿಸುತ್ತ
ಉಳುಮೆಮಾಡುತ ಭೂಮಿ ಫಲವ ಪಡೆಯುವೆವು
ನಳನಳಿಸಿ ಬೆಳೆದಿರುವ ಹೂ ಗಿಡಗಳಂದದಲಿ
ಒಳಗೊಳಗೆ ಸಂತಸವು ತುಂಬಿ ಹರಿದಿಹುದು

Sunday, August 29, 2010

ಬೆಳೆಯದ ಪೈರು !!



ಬೆಳೆಯದ ಪೈರು
!!

[ ಹಳೆಯಬೇರು-ಹೊಸಚಿಗುರು ತತ್ವದ ಆಧಾರದಲ್ಲಿ, ಇಂಡಿಪಾಪ್ ವಿಧದಲ್ಲಿ ಗಿಟಾರ್ ಹಿಡಿದು ಹಾಡಿಕೊಳ್ಳಲು ಬರುವ ಹಾಡು, ಯಾವುದೇ ಗುರಿಯಿಲ್ಲದೇ ಎಲ್ಲವನ್ನೂ ಪ್ರಯತ್ನಿಸಿ ಮಾಡಲು ಹೊರಟು ವಿಫಲನಾದಾಗ ಏನಾಗುತ್ತದೆ ಎಂದು ತಿಳಿಸುತ್ತದೆ, ಸ್ವಲ್ಪಮಜಾ-ಸ್ವಲ್ಪ ಸಂದೇಶ, ೫೦-೫೦: ಕುಚ್ ಖಟ್ಟಾ- ಕುಚ್ ಮೀಠಾ, ಓದಿ ಎಂಜಾಯ್ ಮಾಡಿ !]


ಹತ್ತಾರು ಪೇಜು ಗೀಚಿ ಗೀಚಿ
ಹರಿದು ಬಿಟ್ಟೆನಾ
ಕುವೆಂಪುವಾಗೆ ಕವಿ ಬೇಂದ್ರೆಯಾಗೆ !
ಮತ್ತಾರು ಸೂತ್ರ ಹೆಣೆದು ಹೆಣೆದು
ಕೂತು ಬಿಟ್ಟೆನಾ
ವಿಜ್ಞಾನಿಯಾಗೆ ನಾಸಾಕ್ಕೆ ಹೋಗೆ !||ಪ||

ಬರಿ ಪಾತ್ರೆ ಏನದಿಲ್ಲ
ಬತ್ತಳಿಕೆ ಖಾಲಿ ಇದ್ಯಲ್ಲ
ಮತ್ತೇನುಮಾಡೆ ತೋಚದಾಗಿ
ಮಂಚಹಿಡಿದು ಮಲಗಿ ಬಿಟ್ಟೆನಾ ಟರಂಟ...ರಂಟ.. ಟರಂಟ ...ರಂಟ || ಅನು ಪ||

ಅತ್ತಿತ್ತ ನೋಡಿ ಕುಣಿದು ಕುಣಿದು
ಕುಸಿದು ಬಿಟ್ಟೆನಾ
ಜಾಕ್ಸನ್ನನಾಗೆ ಪ್ರಭುದೇವನಾಗೆ!
ಸುತ್ತುತ್ತ ಕೊಳಲ ಊದಿ ಊದಿ
ಕಾದು ಬಿಟ್ಟೆನಾ
ಗೋಡ್ಕಿಂಡಿ ಯಾಗೆ ಹರಿಪ್ರಸಾದರಾಗೆ !

ನಡುರಾತ್ರಿ ತಾಲೀಮಿನಲಿ
ನಡುಗಿತ್ತು ಭೂಮಿಯೆಲ್ಲ !
ಪಡಪೋಶಿ ನೀನು ಎಂದಘಳಿಗೆ
ಬೇಸರಾಗಿ ಕಂಡದಾರಿ ಹಿಡಿದುಬಿಟ್ಟೆನಾ ಟರಂಟ...ರಂಟ..
ಟರಂಟ...ರಂಟ ||೧||

ಕತ್ತೆತ್ತಿ ಬಿಡದೆ ಆಡಿ ಆಡಿ
ದಣಿದು ಬಿಟ್ಟೆನಾ
ರೆಹಮಾನನಾಗೆ ಮನೋಮೂರ್ತಿಯಾಗೆ !
ಒತ್ತಟ್ಟಿಗಿಷ್ಟು ಪ್ಯಾಂಟು ಶರ್ಟು
ತಂದು ಇಟ್ಟೆನಾ
ಅಮಿತಾಭನಾಗೆ ಅಮೀರ್ಖಾನನಾಗೆ !

ಸಂಗೀತ ನಟನೆಗಳಲಿ
ಒಟ್ಟಾಯ್ಸಿ ತಿಳಿಯಲಿಲ್ಲ
ಮಂಗಣ್ಣ ನೀನು ಮನೆಗೆ ಹೋಗು
ಎಂದವೇಳೆ ಚಪ್ಲಿಬಿಟ್ಟು ಓಡಿಹೋದೆನಾ ಟರಂಟ..ರಂಟ ಟರಂಟ.. ರಂಟ ||೨||

ಹೊತ್ತಗೆಯ ತೆರೆದು ಓದಿ ಓದಿ
ಕೂಚು ಬಟ್ಟನಾ
ವೈದ್ಯನಾಗೆ ತಂತ್ರಜ್ಞಾನಿಯಾಗೆ !
ಇಪ್ಪತ್ತು ಸರ್ತಿ ನಿಂತು ನಿಂತು
ಬಿದ್ದುಬಿಟ್ಟೆನಾ
ಮಂತ್ರಿಯಾಗೆ ಪ್ರಧಾನಿಯಾಗೆ !

ಓದಿದ್ದು ಹತ್ತಲಿಲ್ಲ
ಇಪ್ಪತ್ತು ಕೋಟಿಯಿಲ್ಲ
ನೀ ವೇಸ್ಟು ಎನಲು ಸೋತಮುಖವ
ಸಣ್ಣಗಾಗಿ ಹೊತ್ತುಬಿಟ್ಟೆನಾ ಟರಂಟ... ರಂಟ ಟರಂಟ... ರಂಟ || ೩ ||

ಉತ್ತುತ್ತ ಹೊಲವ ಬಿತ್ತು ಬಿತ್ತು
ಬೆಳೆಯದಾದೆ ನಾ
ರೈತನಾಗೆ ಅನ್ನಬೇಗೆ ನೀಗೆ !
ಹತ್ತೇರಿ ಮೇಲೆ ಹೋಗಿ ಹೋಗಿ
ತಪವಗೈಯ್ಯದಾದೆ ನಾ
ಸ್ವಾಮಿರಾಮನಾಗೆ ವಿಶ್ವಾಮಿತ್ರನಾಗೆ !

ಹುತ್ತದೊಳಗೆ ಇರುವ ಹಾವು
ಮತ್ತೇರಿ ಮರೆತು ಮೆರೆದು
ನೆತ್ತಿ ಹಿಡಿದು ಕತ್ತಲಾಗೆ
ಅತ್ತುಕರೆದು ಸತ್ತುಹೋದೆನಾ ಟರಂಟ.. ರಂಟ ಟರಂಟ... ರಂಟ || ೪ ||

Saturday, August 28, 2010

ಬಸವನ ಪಾಲು !!


ಬಸವನ ಪಾಲು !!

ಸುಬ್ರಹ್ಮಣ್ಯನನ್ನು ಕಂಡ್ರೆ ನನಗೆ ಅಷ್ಟಕ್ಕಷ್ಟೇ ಆಗಿಬಿಟ್ಟಿತ್ತು. ಆಗೆಲ್ಲ ಮತ್ತೆಮತ್ತೆ ನಾವು ಶಾಲೆಗಳಲ್ಲಿ ಟೂ ಬಿಡುತ್ತಿದ್ದೆವು. ಟೂ ಬಿಡುವಾಗ ತೋರುಬೆರಳು ಮತ್ತು ಮಧ್ಯಬೆರಳುಗಳ ತುದಿಯನ್ನು ಪರಸ್ಪರ ಸೇರಿಸಿ ಒಬ್ಬ ಹಿಡುಕೊಳ್ಳುವುದು ಇನ್ನೊಬ್ಬ ಆತನ ತೋರುಬೆರಳನ್ನು ಹಾಗೆ ಸೇರಿಸಿ ಉಂಟಾದ ಸಂದಿನಲ್ಲಿ ಹಾಕಿ ಎಳೆಯುವುದು. ಒಂದೊಮ್ಮೆ ಹಾಗೆ ತೋರುಬೆರಳನ್ನು ತೂರಿಸಿ ಎಳೆಯುವ ಬದಲು ಎರಡೂ ಬೆರಳನ್ನು ಒತ್ತಿ ಹಿಡಿದರೆ ಅದು ಮತ್ತೆ ದೋಸ್ತಿ ಅಂತರ್ಥವಾಗಿತ್ತು. ಮಕ್ಕಳಾದ ನಮ್ಮ ಮನಸ್ಸಿಗೆ ಏನಾದರೂ ಚಿಕ್ಕಪುಟ್ಟ ಅಡತಡೆಬಂದರೂ ಅದನ್ನು ಬಗೆಹರಿಸಿಕೊಳ್ಳಲು ಸುಲಭದ ಉಪಾಯ ಟೂ ಬಿಟ್ಟು ಚಡಪಡಿಸುವಂತೇ ಮಾಡುವುದು ಇಲ್ಲಾ ರಾಜಿಸೂತ್ರದಿಂದ ಏನಾದರೂ ಸುಖವಿದ್ದರೆ ದೋಸ್ತಿ ಪುನರುಜ್ಜೀವನಗೊಳಿಸುವುದು ನಮ್ಮ ನಿತ್ಯ ಕೈಂಕರ್ಯ!

ಟೂ ಬಿಟ್ಟಾಗ ನಾವು ಪಾಂಡವ ಕೌರವರಂತೇ ಆಗುತ್ತಿದ್ದೆವು! ನಮ್ಮ ಮಧ್ಯೆ ಕೃಷ್ಣ ಮತ್ತು ಶಕುನಿಯಂತಹ ಹಲವಾರು ಪಾತ್ರಗಳು ಕೆಲಸಮಾಡುತ್ತಿದ್ದವು. ಕಾಲಾನುಸಾರ ನಮ್ಮ ಚೆಡ್ಡಿಯ ಕಿಸೆ[ಜೇಬು]ಯಲ್ಲಿ ಇದ್ದ ಸುಟ್ಟ ಹುಳಿಸೇ ಬೀಜ, ಮಾವಿನ ಮಿಡಿ, ಚಕ್ಕುಲಿತುಂಡು, ಬಿಂಬಲಕಾಯಿ, ನೆಲ್ಲಿಕಾಯಿ, ಸುಟ್ಟ ಗೇರುಬೀಜ ಮುಂತಾದುವುಗಳನ್ನು ಆಗಾಗ ನಮ್ಮಿಂದ ಸಲ್ಸಲ್ಪ ಪಡೆದು ತಿಂದ ಒಬ್ಬಿಬ್ಬರು ಆಶ್ರಯವಿತ್ತ ಕೌರವನನ್ನು ಕರ್ಣ ಗೌರವಿಸಿದಂತೇ ಬಹಳ ಗೌರವದಿಂದ ಕಾಣುತ್ತಿದ್ದರು. ಅವರು ಹೇಗಿದ್ದರೂ ನಮ್ಮ ಪಕ್ಷಎಂಬುದು ನಮಗೆ ತಿಳಿದೇ ಇರುತ್ತಿತ್ತು. ಅದೂ ಕಾಲದಲ್ಲಿ ನಮ್ಮೂರಲ್ಲಿ ಯಕ್ಷಗಾನಗಳಲ್ಲಿ ರಾಮಾಯಣ-ಮಹಾಭಾರತದಕಥೆಗಳನ್ನು ನಾವು ನೋಡುತ್ತಿದ್ದುದರಿಂದ ನಮಗೆ ಬಹುತೇಕ ಕಥೆಗಳು ಮನದಲ್ಲಿ ಚಿತ್ರಿತವಾಗುತ್ತಿದ್ದವು. ಇಂತಹ ಮಹತ್ಕಾರ್ಯಮಾಡುವ ಯಕ್ಷಗಾನಕ್ಕೆ ಒಮ್ಮೆ ನಮ್ಮ ಜೈ ಹೋ ಸಲ್ಲಿಸೋಣ. ನಮ್ಮಲ್ಲಿ ನಾವು ಆಗದವರಿಗೆ ಕೆಲವು ಹೆಸರುಗಳನ್ನು ಇಟ್ಟುಕೊಳ್ಳುವ ಅಭ್ಯಾಸವಿತ್ತು. ಕೆಪ್ಪಸೀನ, ಶಾಸ್ತ್ರಿ, ಅವಲಕ್ಕಿ-ಮೊಸರು, ಮಾಯ್ನಗೊರಟೆ, ಗೆರಟೆ[ಕರಟ], ಆಟ್ಮಾಣಿ, ಕನಕಾಂಗಿ.....ಹೀಗೇ ತರಾವರಿ ಹೆಸರುಗಳು ಅವರವರ ಅಂದಿನ ವ್ಯಕ್ತಿತ್ವಾನುಸಾರ ಕೊಡಲ್ಪಡುತ್ತಿದ್ದವು. ನಿಷೇಧಾಜ್ಞೆಯನ್ನು ಮರಳಿ ಪಡೆದಂತೆ ರಾಜಿಯಾದಮೇಲೆ ಹೆಸರುಗಳನ್ನು ಅಳಿಸಿಹಾಕಲಾಗುತ್ತಿತ್ತು ಮತ್ತು ಇನ್ನು ಮುಂದೆ ಯಾರೂ ಅಂತಹ ಹೆಸರನ್ನು ಆತನಿಗೆ ಇಟ್ಟುಕರೆಯಬಾರದು ಎಂಬುದಾಗಿ ಸಭೆಕರೆದು ಹೇಳುತ್ತಿದ್ದೆವು.

ಸಭೆ ಎಂದುಬಿಟ್ಟರೆ ಸುಮ್ಮನೇ ಏನೋ ಅಂತ ತಿಳಿಯಬೇಡಿ! ಇಂದಿನ ವಿಧಾನಸೌಧದಲ್ಲಿ ನಡೆಯುವ ಶಾಸಕಾಂಗ ಸಭೆಗಾದ್ರೂಶಿಸ್ತಿಲ್ಲದೇ ಇರಬಹುದು ನಮ್ಮಲ್ಲಿನ ಸಭೆಗೆ ಮಾತ್ರ ಬಹಳ ಶಿಸ್ತು,ಬಹಳ ನಿಯಮ. ಬಹುಶಃ ಸಮಯಪಾಲನೆ ಭಾರತದಲ್ಲಿ ಸರಿಯಾಗಿ ನಡೆಯುತ್ತಿದ್ದಿದ್ದರೆ ಅದು ನಮ್ಮ ಅಂದಿನ ಸಭೆಗಳಲ್ಲೂ ಬಹಳ ಅಚ್ಚುಕಟ್ಟಾಗಿ ಇತ್ತು. ಗುಣ ಸ್ವಭಾವಗಳಲ್ಲಿ ಸ್ವಲ್ಪ ವರ್ಚಸ್ಸನ್ನು ಬೀರುವವ್ಯಕ್ತಿ[ಹುಡುಗ] ಸಭೆಗಳಿಗೆ ಅಘೋಷಿತ ಅಧ್ಯಕ್ಷನಾಗುತ್ತಿದ್ದ. ಅಧ್ಯಕ್ಷರಿಗೆ ಮರದ ಕೆಳಗಿನ ಅಗಲ ಕಲ್ಲಿನ ಬೆಂಚು ಅಥವಾ ದೇವಸ್ಥಾನದ ಪೌಳಿಯ ಒಂದು ಎತ್ತರದ ಭಾಗ ಕುಳಿತುಕೊಳ್ಳುವ ಆಸನವಾಗಿ ಪರಿಣಮಿಸುತ್ತಿತ್ತು. ನಂತರ ಮಕ್ಕಳ ಗುಂಪಿನಲ್ಲೇಒಬ್ಬ ಬಂದು ಅಲ್ಲಿಯವರೆಗಿನ ಆಗುಹೋಗುಗಳನ್ನು ಅಧ್ಯಕ್ಷರ ಸಮಕ್ಷಮ ಮಿಕ್ಕುಳಿದ ಎಲ್ಲಾ ಮಕ್ಕಳಿಗೆ ತಿಳಿಯುವಂತೆ ಹೇಳುತ್ತಿದ್ದ. ಕೆಲವೊಂದು ವಿಚಾರಗಳಲ್ಲಿ ಅಧ್ಯಕ್ಷರು ತಾನೇ ನಿರ್ಧಾರ ತೆಗೆದುಕೊಂಡರೂ ಇನ್ನು ಕೆಲವು ಸನ್ನಿವೇಶಗಳಲ್ಲಿ ಎಲ್ಲಾ ಮಕ್ಕಳನ್ನೂಕೇಳಿ ಆಮೇಲೆ ಬಹುಮತ ಬಂದದ್ದನ್ನು ತೀರ್ಮಾನವೆಂದು ಪ್ರಕಟಿಸುವ ಪ್ರಜಾಪ್ರಭುತ್ವವಿತ್ತು! ಅಕಸ್ಮಾತ್ ಯಾರಾದರೊಬ್ಬ ತಪ್ಪುಮಾಡಿ, ಹೇಳಿದರೂ ಸುಧಾರಿಸಿಕೊಳ್ಳಲಿಲ್ಲ ಎಂದಾದಲ್ಲಿ ಅಂದು ಮಕ್ಕಳ ಗುಂಪಿನಿಂದ ಆತನನ್ನು ಹೊರಹಾಕಲಾಗುತ್ತಿತ್ತು. ಮುಖಗರಿದ ಬೆಕ್ಕಿನ ಥರ ಸಣ್ಣಗೆ ಮನಸ್ಸಲ್ಲೇ ಕುರುಗುಡುತ್ತ ಆತ ನಿಧಾನವಾಗಿ ಭಾರವಾದ ಹೆಜ್ಜೆಗಳೊಂದಿಗೆ ಮನೆಗೆ ಮರಳುತ್ತಿದ್ದ. ಪ್ರಾಯಶಃ ಅಂದು ಮನೆಯಲ್ಲಿ ಆತ ಊಟವನ್ನೂ ಸೇವಿಸದೇ ಹಾಗೇ ಮಲಗುತ್ತಿದ್ದನೋ ಏನೋ ಅರಿವಿಲ್ಲ. ಆಮೇಲೆ ದಿನವೊಪ್ಪತ್ತು ತಡೆದು ತಾನಿನ್ನು ತಪ್ಪುಮಾಡುವುದಿಲ್ಲ ಎಂದುಕೃಷ್ಣ ಮುಖಾಂತರ ಹೇಳಿಕಳಿಸಿದ್ದು ಅಧ್ಯಕ್ಷರ ಕಿವಿಗೆ ಬಿದ್ದಮೇಲೆ ಮರುಪಂಚಾಯತಿ ಕರೆದು ಪುನಃ ನಮ್ಮ ಪಕ್ಷದ ನೀತಿ-ನಿಯಮಗಳನ್ನೂ, ರೀತಿ-ರಿವಾಜುಗಳನ್ನೂ ಒಪ್ಪಿಕೊಂಡರೆ ಮಾತ್ರ ಪ್ರಾಥಮಿಕ ಸದಸ್ಯತ್ವ ಲಭಿಸುತ್ತಿತ್ತು!

ನಾವು ಆಡದ ಆಟಗಳೇ ಇಲ್ಲ ಸ್ವಾಮೀ! ಕಬಡ್ಡಿ[ಸುರಗುದ್ದು], ಖೋ ಖೋ, ಸಂಗೀತಖುರ್ಚಿ, ಹಾಣೆಗೆಂಡೆ[ಚಿನ್ನಿ-ದಾಂಡು]ಕುಂಟ್ಲಿಪಿ[ಚೌಕಾಬಾರ್], ಚನ್ನೆಮಣೆ, ಮರಕೋತಿ, ಕಳ್ಳ-ಪೋಲೀಸ್, ಕಣ್ಣಾಮುಚ್ಚಾಲೆ, ಕಿವ್ರ್ ಬಿಟ್ ಕಿವ್ರ್ಯಾರು ?, ಕೇರಮ್ಮು, ಲಗೋರಿ .....ಒಂದೇ ಎರಡೇ ನೀವೆಣಿಸಿರಬಹುದು ಹಳ್ಳಿಗಳಲ್ಲಿ ಆಟವೇ ಇಲ್ಲ ಅಂತ, ಆದ್ರೆ ಗ್ರಾಮೀಣ ಕ್ರೀಡೆಗಳಷ್ಟು ಖುಷಿತರುವ ಕ್ರೀಡೆಗಳು ಪಟ್ಟಣಗಳಲ್ಲಿಲ್ಲ! ಆಡಿ ಬೇಜಾರಾದಾಗ ನಾಟಕ, ಯಕ್ಷಗಾನದ ತಾಲೀಮು ಮಾಡಿಕೊಂಡು ಕೆಲವಾರುದಿನಗಳ ಅಂತರದಲ್ಲಿ ಬಹಳ ದೊಡ್ಡಪ್ರಮಾಣದಲ್ಲಿ ಅದನ್ನು ಪ್ರಯೋಗಿಸುತ್ತಿದ್ದೆವು;ನಾವೇ ವೀಕ್ಷಕರು, ನಾವೇ ಪ್ರೇಕ್ಷಕರು, ನಾವೇಪ್ರಾಯೋಜಕರು ಆಯೋಜಕರು ಎಲ್ಲಾ! ಇವತ್ತು ಬೆಂಗಳೂರಿಂತಹ ನಗರಗಳಲ್ಲಿ ಸಾವಿರ ಸಾವಿರ ಖರ್ಚುಮಾಡಿ ಮಾಡಿದರೂ ನಿಜವಾದ ರಂಗೇರಿಸದ ಅಸಾಧ್ಯನಭೂತೋ ನಭವಿಷ್ಯತಿಎನಿಸುವ ಪಾತ್ರಗಳಲ್ಲಿ ಮಿಂಚಿದ ನಾನೇ ಬರೆಯುತ್ತಿದ್ದೇನೆಏನಂದುಕೊಂಡಿದ್ದೀರಿ ನೀವು?! ವಲಲ, ವಿಕ್ರಮಾದಿತ್ಯ, ಬಲಿಚಕ್ರವರ್ತಿ, ಎಂತೆಂತಹ ರಸವತ್ತಾದ ಪಾತ್ರಗಳವು, ನಾನುಏನನ್ನಾದರೂ ಮರೆತೇನು ಅವನ್ನು ಮರೆಯಲು ಸಾಧ್ಯವೇ ಇಲ್ಲ! ಸೈರಂಧ್ರಿಯನ್ನು ಸಮಾಧಾನಿಸುವ ವಲಲನ ಕೋಪ ಉಕ್ಕೇರಿದಾಗ ಅಕಟಕಟಾ ಎಲವೋ ಕೀಚಕಾ ನಿಲ್ಲು ಮಾಡಿಸುತ್ತೇನೆ........ಸ್ವಲ್ಪ ಇರಿ, ಇಲ್ಲಿ ಕೀಬೋರ್ಡೇ ಒಡೆದು ಹೋಯಿತೋ ಏನೋ ಪರೀಕ್ಷಿಸುತ್ತೇನೆ! ಪಾತ್ರಮುಗಿಸಿದ ಬಹುದಿನಗಳ ಕಾಲ ಪಾತ್ರದ ಪ್ರಭಾವ ಅಥವಾ ಭಾವಾವೇಶ ನಮ್ಮಲ್ಲೇ ಹುದುಗಿರುತ್ತಿತ್ತು. ಸುತ್ತಲು ಸೇರುವ ನಮ್ಮ ಮಿತ್ರರಲ್ಲಿ ಎಲ್ಲರೂ ಅಂತಹ ಪಾತ್ರವನ್ನು ಮಾಡಲು ಇಷ್ಟಪಡುತ್ತಿದ್ದರು ಆದರೆ ಹೇಗೆ ಪಾತ್ರಪೋಷಣೆಮಾಡಬೇಕೆಂದು ತಿಳಿಯದೇ ಅಂತಹ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಹೀಗಾಗಿ ನನಗೇ ಅಂತ ಮೀಸಲಿಡುವಪಾತ್ರಗಳೇ ಇದ್ದವು. ಪಾತ್ರಮಾಡಿದ್ದನ್ನು ನೋಡಿದವರು ಕೆಲವರೇ ಆದರೂ " ಅಬ್ಬಾ ವಿ.ಆರ್.ಭಟ್ ಹ್ಯಾಂಗ್ ಮಾಡ್ತಾಮಾರಾಯ " ಎಂದು ನನಗೆ ಕೇಳಿಸುವಂತೇ ಇತರಮಕ್ಕಳಿಗೆ ಹೇಳಿ ಪರೋಕ್ಷ ನನ್ನಿಂದ ಸಿಗಬಹುದಾದ ಯಾವುದೋ ಸಹಾಯಕ್ಕೆ ಪೀಠಿಕೆಹಾಕಿಕೊಳ್ಳುತ್ತಿದ್ದರು. ಹೀಗೇ ಮೊದಲಿನಿಂದಲೂ ನಾವು ಕಲಾವಿದರೆನ್ನಿಸಿ ಪಾತ್ರಮಾಡಿ ಮುಗಿಸಿಬಿಟ್ಟಿದ್ದೇವೆ, ಈಗ ಅದನ್ನುಬರೆಯುವುದು ಮಾತ್ರ ಉಳಿದಿದೆ!

ನಮಗೆ ಶ್ರೀಕೃಷ್ಣ, ಗಣೆಶ ಎಲ್ಲಾ ದೇವರುಗಳು ಬಹಳ ಪ್ರೀತಿ. ಅವರ ಇರುವಿಕೆಯಿಂದ, ಬರುವಿಕೆಯಿಂದ ನಮಗೊಂದಷ್ಟು ಅವರ 'ಪ್ರಸಾದಕೆಲವು ದಿನ ಸಿಗುತ್ತಿತ್ತು. ತರತರದ ಉಂಡೆಗಳು, ಚಕ್ಕುಲಿ, ಮೋದಕ ಇವೇ ಮೊದಲಾದವು ನಮ್ಮ ಕಿಸೆಯಲ್ಲಿ ತಿಂಗಳೊಪ್ಪತ್ತು ಸದಾ ಸಿಗುವಂತಹ ತಿನಿಸುಗಳು. ಕಿಸೆಯೆಲ್ಲ ಎಣ್ಣೆಮಯವಾಗಿ ಬಿಸಿನೀರಲ್ಲಿ ಅದ್ದಿ ತೊಳೆದು ಹಾಕಿದ ಮೇಲೂ ಜಿಡ್ಡುಹೋಗದೇ ಬಿಳಿಯ ಗಡ್ಡಬರುವಷ್ಟರ ಮಟ್ಟಿಗೆ ನಮ್ಮ ಚಡ್ಡಿ ಕಿಸೆಗಳು ಎಣ್ಣೆಪ್ರಿಯವಾಗಿದ್ದವು! ಕೆಲವೊಮ್ಮೆ ಅಲ್ಲಲ್ಲೇ ತೂತುಬಿದ್ದು ನಮಗೆ ನಷ್ಟವಾಗುವ ಸಂಭವನೀಯತೆ ಕೂಡ ಇತ್ತು. ಹಾಗೊಮ್ಮೆ ನಷ್ಟವಾದ ಸಮಯದಲ್ಲಿ ಬೇರೆ ಮಕ್ಕಳಿಂದ ಮಮೂಲಿ ಪಡೆದು ನಷ್ಟಭರ್ತಿಯಾಗುತ್ತಿತ್ತು! ಇಲ್ಲಿ ಅನೇಕಬಾರಿ ನೀನನಗಾದರೆ ನಾನಿನಗೆ ಎಂಬ ಪ್ರಿನ್ಸಿಪಲ್ಲು ವರ್ಕ್ ಆಗುತ್ತಿತ್ತು. ಉಂಡೆಗಳ ಸಂಖ್ಯೆಕಡಿಮೆಯಿದ್ದಾಗ ಯಥಾವತ್ ಕಾಗೆ ಎಂಜಲು[ಗುಬ್ಬಿ ಎಂಜಲು]ಇತ್ಯಾದಿ ಸಮೀಕರಣ ಬಳಸುತ್ತಿದ್ದೆವು. ಹೀಗಾಗಿ ಚಕ್ಕುಲಿ ಕೋಡುಬಳೆ ನೀಡುವ ಗಣಪ ಮತ್ತು ಕೃಷ್ಣ ನಮ್ಮಂತೆಯೇ ಮೊದಲು ತಿಂದುನೀವು ಇಂಥಾದ್ದನ್ನೇ ಮಾಡಿ ಮಕ್ಕಳಿಗೆ ಕೊಡಿಎಂದು ಹರಸಿಹೋಗಿದ್ದು ಪ್ರತೀವರ್ಷಮರಳಿ ಮರಳಿ ಬಂದು ನಮಗೆ ಹರುಷ ತರುತ್ತಿದ್ದರು. ನಮಗೆ ಪೂಜೆಗಳ ಜೊತೆಜೊತೆಗೇ ಎದುರಿಗಿಡುವ ನೈವೇದ್ಯದ ಕಾಯಸ್ಸುಜಾಸ್ತಿ! ಇಂಥಿಂಥಾ ಒಳ್ಳೆಯ ನೈವೇದ್ಯ ಕೊಡುವ ಇಬ್ಬರು ದೇವರು ಸದಾ ಸುಖವಾಗಿರಲಿ, || ತಿಂಡಿದಾತಾ ಸುಖೀಭವ ||

ಕಾರ್ತೀಕಮಾಸದಲ್ಲಿ ದೇವಸ್ಥಾನಗಳಲ್ಲಿ ದೀಪೋತ್ಸವ ಅಥವಾ ದೀಪಾರಾಧನೆ ಯಾನೇ ಕಾರ್ತೀಕ ನಡೆಯುತ್ತಿತ್ತಲ್ಲ ಆಗೆಲ್ಲಈಗಲೂ] ದೇವರ ಮುಂದೆ ಅಷ್ಟು ದೂರದಲ್ಲಿ ಇರುವ ದೇವರ ವಾಹನಗಳ ಮುಂದೆ ಪನವಾರಕ್ಕೆ ಮಾಡಿದ ಪದಾರ್ಥಗಳನ್ನು ಒಂದಷ್ಟು ಬಾಳೆಲೆಯಲ್ಲಿ ಹಾಕಿಡುತ್ತಿದ್ದರು. ವಿಷ್ಣುವಿನ ದೇವಸ್ಥಾನವಾದರೆ ಗರುಡನ ಮುಂದೆ ಈಶ್ವರನ ದೇವಾಲಯವಾದರೆ ನಂದಿಯ[ಬಸವ]ಮುಂದೆ ಹಾಗೆ ನೈವೇದ್ಯ ಇರಿಸುತ್ತಿದ್ದರು. ಕಾರ್ತೀಕಮಾಸದಲ್ಲಿ 'ಅಧ್ಯಕ್ಷರೂ' ಸೇರಿದಂತೆ ಇಡೀ ಮಕ್ಕಳ ಸಮಿತಿಅಲ್ಲಿಯೇ ಇರುತ್ತಿತ್ತು. ಯಾರಾದರೂ ಬರಲಿಲ್ಲ ಅಂದರೆ ಒಂದೋ ಹುಷಾರಿಲ್ಲ ಇಲ್ಲಾ ಅಜ್ಜನಮನೆಗೋ ಎಲ್ಲೋ ಹೋಗಿದ್ದಾರೆಎಂದರ್ಥ. ಹಾಗೆ ಹೋದ ಮಕ್ಕಳು ದೀಪೋತ್ಸವ ತಪ್ಪಿಹೋಗಿದ್ದಕ್ಕೆ ಮರುಗುತ್ತಿದ್ದರು. ದೀಪೋತ್ಸವದಲ್ಲಿ ಹಣತೆ ಹಚ್ಚುವುದೊಂದು ಖುಷಿಯಾದರೆ ಕೆಲವರು [ದೀಪೋತ್ಸವ ನಡೆಸುವ ಯಜಮಾನರು] ಪಟಾಕಿಗಳನ್ನೂ ತರುತ್ತಿದ್ದರು. ನಮಗೆ ಅದರಲ್ಲೂ ಚೂರುಪಾರು ಪಾಲಿಗೆ ಬರುತ್ತಿತ್ತು. ಅದನ್ನು ಸಿಡಿಸಿದಾಗ ಮನದಲ್ಲಿ ಬ್ರಹ್ಮಾನಂದ! ಅಂತೂ ಎಲ್ಲೂ ನಾವು ಸುಮ್ಮನೇ ಕುಳಿತವರಲ್ಲ! ದೇವಸ್ಥಾನಗಳಲ್ಲಿ ದೇವರು ಯಾಕೆ ವಾಹನವನ್ನು ಮುಂದೆ ನಿಲ್ಲಿಸಿದ್ದಾನೆ ಗೊತ್ತೇ ? ಪಾಪ ನಮ್ಮಂತಹ ಮಕ್ಕಳು ಗರ್ಭಗುಡಿಗೇ ನುಗ್ಗಿ ಅವನ ತಿಂಡಿಯನ್ನೇ ಕದ್ದರೆ ಕಷ್ಟ ಹೀಗಾಗಿ ವಾಹನದವರು ಏನಾದ್ರೂ ಮಾಡಿಕೊಳ್ಳಲಿ ಅಂತ ಇರಬೇಕು ಎಂಬುದು ಇಂದು ನಮಗೆ ಹೊಳೆದ ವಿಷಯ! ಏನೂ ಇರಲಿ ದೇವರು ವಿಷಯದಲ್ಲೂ ದೊಡ್ಡವನೇ: ನಮ್ಮಂತಹ ಮಕ್ಕಳಿಗೆ ಏನಾದ್ರೂ ಸ್ವಲ್ಪ ಸಿಗಲಿ ಎನ್ನುವ ಉದ್ದೇಶವನ್ನು ಇಟ್ಟುಕೊಂಡೇ ಮಾತಾಡದ ತನ್ನ ವಾಹನವನ್ನು ಎದುರಿಗೆ ಬಿಟ್ಟಿದ್ದಾನೆ.

ಇಂತಹ ವಾಹನಗಳ ಎದುರಿಗೆ ಇಡುವ ನೈವೇದ್ಯ ಅದು ನಮ್ಮ ಪಾಲಿಗೆ ಸಿಗುವ ಬೋನಸ್ಸು ! ನಮ್ಮಲ್ಲೇ ಕೆಲವೊಮ್ಮೆ ಮೊದಲುಹೇಳಿದ ಟೂ ಬಿಡುವ ವ್ಯಾಪಾರ ಎರಡು ಪಂಗಡಗಳಾಗಿಬಿಟ್ಟರೆ ಅಲ್ಲಿ ಸ್ವಲ್ಪ ಸಮಸ್ಯೆ ಕಾಡುತ್ತದೆ. ಸಿಗುವ ಬೋನಸ್ಸನ್ನು ಯಾರುಪಡೆಯಬೇಕು ಎಂಬುದಾಗಿ. ಹೀಗೇ ನಮ್ಮ ಈಶ್ವರ ದೇವಸ್ಥಾನದಲ್ಲಿ ಅರ್ಚಕರ ಮಗನೊಬ್ಬನಿದ್ದ. ನಮ್ಮ ಓರಗೆಯವನೇ ಅನ್ನಿ. ಆತಬೆಕ್ಕುಗಳಿಗೆ ಮಂಗ ಬೆಣ್ಣೆ ತೂಕ ಮಾಡಿಕೊಟ್ಟಂತೇ ತಾನು ಪಾಲು ಹಂಚಲು ಬರುತ್ತಿದ್ದ. ಬಂದಾತ ಪಾಲಿನಲ್ಲಿ ಅರ್ಧಕ್ಕಿಂತ ಹೆಚ್ಚುತಾನೇ ಎತ್ತಿಟ್ಟುಕೊಂಡು ಮಿಕ್ಕುಳಿದದ್ದನ್ನು ಕೊಡುತ್ತಿದ್ದ. ಇದು ಯಾವ ನ್ಯಾಯ ಹೇಳಿ. ಅದಕ್ಕೇ ನಾವು ಬಹಳ ಉಪಾಯ ಮಾಡಿ ಬಸವನ ಪಾಲನ್ನು ಆತನಿಗೆ ತಿಳಿಯದ ಹಾಗೇ 'ಹೊಡೆಯಲು' ಪ್ರಯತ್ನಿಸಿದೆವು. ಮೊದಲು ಎಲ್ಲರೂ ಟೂ ಬಿಡುವುದನ್ನು ಕಮ್ಮಿಮಾಡಿಕೊಂಡು ನಮ್ಮಲ್ಲೇ ಒಗ್ಗಟ್ಟು ಸಾಧಿಸಿಕೊಂಡೆವು. ನಂತರ ದೀಪೋತ್ಸವದ ಮಂಗಳಾರತಿ ಮುಗಿದು ಅರ್ಚಕರು ಪ್ರಸಾದವನ್ನು ಹೊರ ತರುವಷ್ಟರಲ್ಲಿ ಬಸವನ ಪಾಲು ನಾಪತ್ತೆಮಾಡಲು ಪ್ರಯತ್ನಿಸಿದೆವು. ವರ್ಕ್ ಔಟ್ ಆಯಿತು. ಅರ್ಚಕರಿಗೆ ಹೇರಳವಾಗಿ ಪ್ರಸಾದ ಕೊಡುತ್ತಿದ್ದುದರಿಂದ ಮಗನಿಗೆ ಅಲ್ಲಿ ಸಿಕ್ಕೇ ಸಿಗುತ್ತಿತ್ತು. ಆದರೂ ಬಡಪಾಯಿಗಳಾದ ನಮ್ಮ ಪಾಲನ್ನು ಆತ ಪಾಲುಹಂಚಲು ಪಡೆವ ಕಮಿಶನ್ ಜಾಸ್ತಿಯಾಗಿತ್ತು. ಅದಕ್ಕೇ ಅನ್ನುವುದು ಒಗ್ಗಟ್ಟಿನಲ್ಲಿ ಬಲವಿದೆ, ಇದನ್ನು ನಾವು ಬಸವನ ಪಾಲಿನ ಮುಖಾಂತರ ಸಾಕ್ಷೀಕರಿಸಿದ್ದೇವೆ! ಕೋಪಬಂದರೆ " ಬಸವನ ಪಾಲು ತಿಂದವ್ರೇ " ಅಂತ ಬೈಬೇಡಿ-ನಾವು ಬಹಳ ಜನ ಇದ್ದೇವೆ ಹುಷಾರು ಹಾಂ, ನಿಮ್ಮಲ್ಲಿ ಒಗ್ಗಟ್ಟಿಲ್ಲದಿದ್ದರೆ ಹೇಳಿಬಸವನ ಪಾಲಿಗೆ ವ್ಯವಸ್ಥೆಮಾಡೋಣ,ಹೋಗಿ ಬರಲೇ ? ನಮಸ್ಕಾರ.

Friday, August 27, 2010

ಪರಿಹಾರ


ಪರಿಹಾರ

ಪರಿಹಾರ ಬಯಸುವನೇ ನಿನ್ನ ಸಮಸ್ಯೆಗಳ
ಸರಿಯಾಗಿ ತೆರೆದು ಬೇರ್ಪಡಿಸು ಮನದಿ
ಹರವಾದ ಎದೆಯಲ್ಲೇ ಪರತತ್ವ ಅಡಗಿಹುದು
ಗುರುತು ಹಿಡಿ ಅನುಗಾಲ ನೆನೆಸುತ ವಿಧಿ

ಇಡಿಯ ವಿಶ್ವದ ತುಂಬಾ ಕೋಟಿಕೋಟಿಯ ಜನರು
ಒಡಲಾಳ ಹೊತ್ತುರಿಯೆ ಯಾರು ಬಹರಿಲ್ಲಿ !
ಅಡಿಗಡಿಗೆ ಸಂತಸದ ಪಕ್ವಾನ್ನ ನೀ ಬಡಿಸೆ
ಸಡಗರವು ದಿನವೆಲ್ಲ ಗೆಳೆಯರುಂಟಿಲ್ಲಿ !

ಒಮ್ಮೆ ಜೀವನದಲ್ಲಿ ಕಮ್ಮಿ ಸಂಪಾದಿಸಿರೆ
ನಮ್ಮದೆನ್ನುವ ಬದುಕಿಗದೆ ಮೌಲ್ಯವಿಲ್ಲ
ಜುಮ್ಮೆನುವ ಸಿರಿಯೊಡೆದು ಕಣ್ಣ ಕೋರೈಸುತಿರೆ
ತಮ್ಮವರು ನೀವೆಂಬ ಮೌಲ್ಯವಿಹುದಲ್ಲ !

ಯಾಕೆ ನೀನೀರೀತಿ ದೇಖರಿಕೆ ಇಲ್ಲದಲೆ
ಸಾಕಷ್ಟು ದುಡಿದಿಲ್ಲವೆಂಬ ಬಿರುದುಗಳು !
ಬೇಕಾದ ಫಲವನ್ನು ಕೊಡದೆ ಆಡಿಸುತಿರುವ
ನೀ ಕಾಣದಾ ಶಕ್ತಿ ಹುದುಗಿಕುಳಿತಿಹುದು

ನಮ್ಮ ಪೂರ್ವದ ಕರ್ಮ ನಾವು ಪಡೆದಿಹ ಸಾಲ
ಸುಮ್ಮನಿರಗೊಡದೆಮ್ಮ ಹರಿದು ತಿನ್ನುವುದು !
ಒಮ್ಮತಕೆ ಒಗ್ಗದಾ ಮನವು ಹತ್ತೆಣಿಸುತ್ತ
ನಮ್ಮಾತ್ಮ ಶಕ್ತಿಯನೆ ಕಳೆಗುಂದಿಸಿಹುದು

ಬಾರೋ ಆಚೆಗೆ ಇಲ್ಲಿ ಬಾ ಹೊರಗೆ ಧ್ಯಾನಿಸುತ
ದೂರದಲಿ ನಿಂತೊಮ್ಮೆ ನೋಡು ನಿನ್ನತನ !
ಆರಂಭಶೂರತನ ಇಲ್ಲದಲೆ ಅನುಭವಿಸು
ಪ್ರಾರಬ್ಧಕರ್ಮಗಳ ತೊಳೆಯೇ ಪ್ರತಿದಿನ

Thursday, August 26, 2010

ಈ ಭೂಮಿ ಬಣ್ಣದ ಬುಗುರಿ......

ನಮ್ಮ ಡ್ಡೆ : ಟೀ ಹೋಟ್ಲು [ತಿರುಪತಿ ರೆಸ್ಟಾರೆಂಟ್ !]

ಈ ಭೂಮಿ ಬಣ್ಣದ ಬುಗುರಿ......


" ಏನ್ ಸರ್ ಏನ್ ಕೊಡ್ಲಿ ? "

" ಏನೈತೆ ತಿನ್ನಾಕೆ ? "

" ಇಡ್ಲಿ, ಸಾಂಬಾರ್ ಬಿಸಿಇದೆ[ಸ್ವಗತ:ಇಡ್ಲಿ ನಿನ್ನೇದು ಸಾಂಬಾರ್ ಮಾತ್ರ ಬಿಸಿ ಐತೆ], ಪರೋಟ, ಪೂರಿ, ಚಪಾತಿ, ಕೇಸ್ರಿಬಾತು, ಖಾರಾಬಾತು, ರೈಸ್ ಬಾತು ದೋಸೆ-ಪ್ಲೇನ್ ಸೆಟ್ ಮಸಾಲೇ "

"ಒಂದು ರೈಸ್ ಬಾತ್ ಕೊಡಪ್ಪಾ "

" ಆಯ್ತು ಸರ್ ಕೊಟ್ಟೆ "

" ಏನಪ್ಪಾ ಇದು ಈ ಥರ ಸ್ಮೆಲ್ಲು ಹಳ್ಸೋಗಿರೋ ಅನ್ನಕ್ಕೆ ಒಗ್ಗರಣೆ ಹಾಕ್ಬುಟ್ರಾ ? "

" ಇರಿ ಸರ್ ನಮ್ ಅಣ್ಣವ್ನೆ ಕೇಳ್ಕಂಬತ್ತೀನಿ "

--------------

" ಲೇ ಒಂದ್ ಕಾಪಿ ಕೊಡಪ್ಪಾ "

" ಅಣಾ ಒಂದ್ ಕಾಪಿ "

" ತಗಂಡೋಗ್ಲಾ ಸಿವಾ ರೆಡಿ ಅದೆ ಕೊಟ್ಬುಟ್ ಅಂಗೇ ಬಿಲ್ಲಿಸ್ಕ "

" ಸಾರ್ ಕಾಪಿ ತಗೊಳಿ "

" ಏನಯ್ಯಾ ಇದು ಕಾಪಿನೋ ಟೀನೋ ಒಂದ್ಸಲ ಕುಡ್ದ್ರೆ ಕಾಪಿ ಸ್ಮೆಲ್ಲು ಇನ್ನೊಂದ್ಸಲ ಕುಡ್ದ್ರೆ ಟೀ ಸ್ಮೆಲ್ಲು "

"ಅದೇ ನಮ್ಮೋಟ್ಲು ಸ್ಪೆಸಲ್ಲು "

------------

" ಅಣಾ ನಿಮ್ ಕೋಳಿ ಯಾಕೆ ಕೂಗ್ಲೇ ಇಲ್ಲ "

" ಇದ್ರಲ್ವೇನೋ ಕೊಗಕೆ "

" ಎಲ್ ’ಪಾದ’ಯಾತ್ರೆಗೆ ಹೋಗೈತಾ "

" ಹಾಂಗಂದ್ರೇನ್ಲಾ ಸಿವಾ ? ಮನಸ್ರು ಮಾತ್ರ ಪಾದಯಾತ್ರೆ ಮಾಡ್ತರೆ ಅಂತ ಕೇಳೀನಿ "

" ಅಣಾ ನೀ ಕೋಳಿ ಮುಗ್ಸುತ್ಲೂ ಅದ್ರ ಕಾಲೈತಲ್ಲಾ ಅದುನ್ನಾ ಚೀನಾಕ್ಕಳಸ್ತವ್ರೆ, ಸಾನೆ ಡಿಮ್ಯಾಂಡೈತೆ "

" ಮೊದ್ಲೇ ಹೇಳೋದಲವೇನ್ಲಾ ಮೂದೇವೀ "

"ಯಾಕೆ ಏನಾಯ್ತಣಾ ? "

" ಕಸದ್ ಬುಟ್ಟೀನಾಗಿಟ್ಟಿದ್ನಾ ಈಗ್ತಾನೇ ಕಾರ್ಪುರೇಸ್ನವ ಬಂದು ತನ್ ಗಾಡೀಲಾಕಂಬುಟ್ ಹೋದ, ಥೂ ಹೊಟ್ಟೆ ಉರ್ದೋಯ್ತು "

" ಯಾಕಣೋ ಪಾಪ ಕಸಕ್ಬಿಸಾಕಿದ್ನೆಲ್ಲಾ ತಿನ್ನಾಕ್ ಕೊಡೊದಾ ? "

" ಇನ್ನೇನ್ಲಾ ಜಗತ್ತು ? ನಾವ್ ಮದ್ಲ್ ಬದೀಕ್ಕಾ ಬೇಕು, ಬದೀಕ್ಕಬೇಕೂಂದ್ರೆ ಕಾಸ್ ಮಾಡ್ಕಬೇಕು, ಕಾಸ್ ಮಡ್ಕಬೇಕೂಂದ್ರೆ ಇಂತಿಂಥಾ ವೈನಾದ್ ಕೆಲ್ಸಾನೆಲ್ಲ ಮಾಡ್ತಾ ಇರ್ಬೇಕಾಯ್ತದೆ "

------------

" ಅಣಾ ಕಾರ್ಪೋರೇಸ್ನವ ಬಂದಿದ್ದ, ಅಲ್ಲೈತಲ್ಲ ಆ ಪ್ಲಾಸ್ಟಿಕ್ ಡ್ರಮ್ನಾಗೆ ಏನೈತೆ ಅಂದ "

" ಹೌದೇನ್ಲಾ ನೀ ಏನಂದೆ ? "

" ಏನಿಲ್ಲಾ ಸೋಮಿ ಅದೆಲ್ಲಾ ನಮ್ ಹೋಟಲ್ನಾಗೆ ತಿಪ್ಪೆಗ್ ಬಿಸಾಕೋದ್ನ ಹಾಕಿದ್ದು, ಕಳ್ಸಾಕಾಗಿರ್ಲಿಲ್ಲ ಅದ್ಕೇ ಹಂಗೈತೆ ಅಂದೆ "

" ಅಲ್ಲಯ್ಯಾ ನಿಂಗಿದೆಲ್ಲಾ ಬ್ಯಾಡ ನಿನ್ ಅಣ್ಣವ್ನಲ್ಲಾ ಅವನ್ತಾವ ನಾವ್ ಬಂದಿದ್ ಯೋಳ್ಬುಡು, ಬಂದ್ ನಮ್ನ ನೋಡ್ಕಂಡ್ರೆ ಸರಿ ಇಲ್ಲಾಂದ್ರೆ ಗುಲ್ಲೆಬ್ಬ್ಸಿ ಗಲಾಟ್ಯಾಗೋತದೆ ಅಂತ ಗದರ್ಬುಟ್ಟು ಹೊಂಟೋದ, ಅಣ ಯಾಕಣ ? "

" ಅದ್ರಿಂದ ಬಟ್ಟಿ ಇಳಸ್ತಾರಲೇ ಬುದ್ದು, ಚೆನ್ನಾಗ್ ಹುಳಿ ಬಂದಿರ್ತದೆ ನೋಡು, ಅದ್ನೆಲ್ಲಾ ಸಲ್ಪ ಮಿಕ್ಸ್ ಮಾಡ್ಕೆಂಡು ಅದ್ಕಿನ್ಸಲ್ಪಾ ಅದೇನೇನೋ ಆಕಿ ಕುದ್ಸಿ ಭಾಳಾ ರುಚಿ ಇರೋ ಭಟ್ಟಿ ಮಾಡ್ತರೆ, ಅದ್ನ ತುಂಬಾ ಜನ ಕೂಲ್ಯೋರೆಲ್ಲ ಕುಡೀತವೆ, ಒಂದ್ಕಿತಾ ರುಚಿ ಕಂಡ್ರೆ ಮತ್ ಬಿಡಾಕಿಲ್ಲ, ಅದೆಲ್ಲಾ ನಿಂಗ್ ಬ್ಯಾಡ ನಾ ಇಲ್ಲೇ ಸಲ್ಪ ಕಾರ್ಪುರೇಸ್ನ ತಾವ ಹೋಗ್ ಬತ್ತೀನಿ ಅವನೇನಾನಾ ಜರ್ ಇಲ್ಲಗ್ ಬಂದ್ರೆ ನಂಗೊಂದ್ ಪೋನಾಕು "

------------

" ತಿನ್ಲಾ ಸಿವಾ ಯಾಕಂಗ್ ನೋಡ್ತಾಯ್ಕಂಡೆ "

" ಏನಿಲ್ಲಾ ಇದ್ನ ಹೆಂಗೆ ತಿಂಬೋದು ಅಂತ ತಿಳ್ಯಾಕಿಲ್ಲ ಅದಕ್ಕೇ "

" ಯಾಕೋ ಪಸ್ಟ್ ಟೈಮಾ ನೀ ಬೆಂಗ್ಳೂರ್ಗ್ ಬತ್ತಾ ಇರೋದು ? "

" ಒದಣಾ ನಾ ಮೊದಲ್ನೇ ಸರ್ತಿ ಬಂದಿವ್ನಿ ಇದ್ಯೇನಣಾ ಇದು ? "

" ಸಣ್ಣಕ್ಕೇಳೋ ಪೆದ್ದೆ, ನೀ ಆತರ ದೊಡ್ಕೆ ಬೊಗಳ್ದ್ರೆ ನಮ್ ಗೌರವ್ಕೇ ಕಮ್ಮಿ, ಇದುಕ್ಕೆ ಪಿಡ್ಜಾ ಪಿಡ್ಜಾ ಅಂತರೆ ಬೋ ಚೆನ್ನಾಗಿರ್ತೈತೆ ತಿನ್ನಕೆ "

" ಬಿಚ್ಚಕೋದ್ರೆ ದಾರ್ ದಾರ್ದ್ ಥರ ಎಳ್ಕೊಂಡೇ ಬರ್ತೈತಣೋ ನಂಗ್ಯಾಕೋ ಬ್ಯಾಡಾಗ್ಬುಟ್ಟದೆ "

" ಏನಾಯಾಕಿಲ್ಲ ತಿನ್ನೋ ಎಂಥಾ ರುಚಿ ಗೊತ್ತೇನ್ಲಾ ಮುಂಡೇದೆ ಒಂದ್ ಪಿಡ್ಜಾ ತಿಂದ್ ನೈಂಟಿ ಹಾಕ್ಕೊಂಬುಟ್ರೆ ಜಗತ್ತೇ ಸುಂದರ, ನಾವೆಲ್ಲಾ ಆಗ ಇಲ್ಲೇ ಇದ್ರೂ ಫಾರಿನ್ನಾಗಿದ್ದಂಗೇ "

--------------

" ಏಲ್ಲೋಗಿದ್ಯಯ್ಯ ಇಷ್ಟೊತ್ತು "

" ಹಲ್ಲಿ ನಯ್ನ ಸಭಾಂಗಣ್ದಾಗೆ ಜಲನಯ್ನ ಮೇಡಂ ಬತ್ತರೆ ಅಂತ ಸುದ್ದಿ ಇತ್ಕಣಣ್ಣೋ ಅದ್ಕೇ ನೋಡವಾ ಅಂತ ಹೋದೆ "

" ಬಂದವ್ರಾ ? ನೀ ಹೇಳಿದ್ರೆ ನಾನೂ ಬತ್ತಿದ್ನಲ್ಲೋ ಅದೆಂಗಿದ್ರು ನೋಡಾಕಾಯ್ತಿತ್ತು "

" ಇಲ್ಕಣಣೋ ಅದು ಮೇಡಂ ಅಲ್ಲಾ ಯಾರೋ ಸಾರು ಬಂದಿರೋದು, ನಂಗ್ಯಾರೋ ತಪ್ಪೇಳ್ಬುಟ್ಯವ್ರೆ "

" ಹೋಗ್ಲಿ ಒಂದೇ ಚಾಕ್ಲೇಟೈತೆ ಒಸಿ ಕಾಗೆ ಎಂಜ್ಲಮಾಡೀನಿ ತಕಾ ತಿನ್ನು ಒಂಚೂರ "

" ಅಲ್ಲಣೋ ಗುಬ್ಬಿ ಎಂಜ್ಲು ಅಂದ್ರೇನು ? ಅಲ್ಲಿ ಆ ಪಟೆ ಬೋಲ್ಡಾಕಿದ್ರು "

" ಗುಬ್ಬಿ ಎಂಜ್ಲು ಅಂದ್ರೆ ನಂಗೊತ್ತಿಲ್ಲಪ್ಪ ನೀ ಹಲ್ಲೇ ಯಾರ್ನಾರ ಕೇಳಿರೋದು "

" ಇಲ್ಲಣೋ ಕೇಳ್ದೆ ಅದೇನೋ ಪುಸ್ತಕುಕ್ಕೇ ಆ ಹೆಸ್ರಂತೆ, ಸಿರ್ಸಿ ಕಡೀಗೆಲ್ಲ ಹಂಗೇ ಅಂತಾರಂತೆ ಕಾಗೆ ಎಂಜ್ಲಗೆ"

" ಹಂಗ್ ಬೇರೆ ಐತಾ, ವೈನಾತು ಬಿಡು ಕಾಗೆ ಎಸ್ರು ಚಂದಾಯಾಕಿಲ್ಲ ಅದ್ಕೇ ಗುಬ್ಬಿ ಅಂದ್ರೇನೆ ಸರಿ"

" ಅದ್ಯಾರೋ ಬೇನಾಮಿ ಬೆರ್ಚಪ್ಪ ಅಂತಾ ಬಂದವ್ನಂತೆ ಬಾಳ ಕಿಲಾಡಿ ಅಂತಂದ್ರು "

" ಹೋಗ್ಲಿ ಅವ್ನಿಸ್ಯ ಇಲ್ಲ್ಯಾಕ್ಲ ನಮ್ಗೆ? "

" ಅಲ್ಲ ಕಣಣೋ ಪಾಪ ಹವ್ರು ಹಷ್ಟ್ ಕಷ್ಟಾಪಟ್ಟು ಪಂಕ್ಸನ್ ಮಾಡ್ಯವ್ರೆ ಆ ಮನ್ಸ ಅದೇನೇನೋ ಇರುದ್ದ ಬರ್ದವ್ನಂತೆ "

" ಬೇನಾಮಿ ತಾನೇ ಹೋತಾನೆ ಸುಮ್ಕಿರಲೋ ಎಂತೆಂಥಾ ದಾಕ್ಲೆ ಇರೋ ಹತ್ತತ್ ಹೆಸ್ರಿಟ್ಗಂಡವ್ರೆ ಇದಾನ್ ಸೌದ್ದಗೆ ಎಣಗಾಡ್ತವ್ರೆ ಇನ್ ಈ ಬೇನಾಮಿ ಜನ ಎಲ್ಲಾ ಬಾಳ್ ದಿವ್ಸ ಇರಾಕಿಲ್ಲ ಬಿಡು "


---------------

"ಯಾಕೋ ಎರಡ್ದಿನದಿಂದ ಮಳೆ ಬರೋ ಅಂಗೈತೆ ಅಲ್ವೇನಣಾ ? "

" ಹಾಂ ನಮ್ ಯಡ್ಯೂರಣ್ಣ ಸಾನೆ ಕಣ್ಣೀರ್ ಹಾಕ್ತರೆ ಅದ್ಕೇಯ ದೇವರ್ಗೆ ಬೇಜಾರಾಗಿ ಹೋಕ್ಕಳ್ಳಿಬುಡು ಒಂದಷ್ಟ್ ದಿನ ಅಂತಾ ಮಳೆ ಬೀಳುಸ್ತನೆ "

" ಮೋಡ ಬಿತ್ನೆ ಅಂತೆಲ್ಲಾ ಅಂತಿದ್ರಲ್ಲ ಅದೆಲ್ಲಾ ಇಲ್ವೇನಣಾ ಈಗ ? "

" ಈಗ ಬಿತ್ನೆ ಗಿತ್ನೆ ಮಾಡಕೆ ಸರಕಾರದ್ ತಾವ ತಾಕತ್ತಿಲ್ಲ ಕಣ್ಲಾ, ಮತ್ತೇನಾರ ಮಾಡಾಕೊಂಟು ಯಡವಟ್ಟಾಗೋದ್ರೆ ಇರೋದ್ ಪಕ್ಸ್ದೋರು ಹುಡ್ಕ್ತಾ ಕುಂತವ್ರೆ ಅದ್ಕೇ ಮಾಡಾಕಿಲ್ಲ"

" ಗೋ ಅತ್ಯೆ ನಿಸೇಧಕ್ಕೆ ಬೈಬಲ್ನಾಗೇ ನಿಸೇಧ ಅದ್ಯಂತೆ, ಮನ್ಸಾಗುಟ್ಟದ್ ಮ್ಯಾಗೆ ನೀ ಏನ್ ಬೇಕಾರೂ ಮಾಡ್ಕ, ಈ ಗಾಳಿ, ನೀರು, ಗಿಡ-ಮರ, ಪ್ರಾಣಿ, ಪಕ್ಸಿ ಎಲ್ಲಾ ನಿಂಗೇಯ ಅಂದವ್ರಂತೆ, ಅದ್ನ ಸದ್ಬಳಕೆ ಮಾಡ್ಕೋ ಅಂದವ್ರಂತೆ "

" ಹೋದ್ಕಣೋ ನಿಂಗರ್ಥಾಯಾಕಿಲ್ಲ ಆಲ್ ಕುಡೀವಷ್ಟು ಕುಡ್ಕಂಡು, ಮತ್ತಷ್ಟ್ ಆಲ್ ಇಂಡ್ಬುಟ್ ಮಡೀಕಂಡು ಗೋ ನ ಚೆನ್ನಾಗಿ ಕತ್ತರ್ಸಿ ಒಂಚೂರು ಬಿಡ್ದಲೇ ತಿಂದ್ಬುಡು ಎಲ್ಲಾ ನಿಂಗೇಯ ಅಂತ ಬರದವ್ರಂತೆ ಅದ್ಕೇಯ ತಮ್ ಅಮ್ದೀರ್ನ ತಿನ್ನಾಕಾಯಾಕಿಲ್ಲ ನೋಡು ಇಂಗಾಗಿ ಹಸಾನಾದ್ರು ಹೊಡ್ಕಂಡು ತಿನ್ನಾವ ಅಂತ ಹೇಳ್ಯವ್ರೆ "

" ಬೈಬಲ್ ನಾಗೆ ಇರೋ ರೂಲು ಗಣಿಧಣಿಗಳ್ಗೂ ಬತ್ತದೆ, ಯಾಕೆಂದ್ರೆ ಈ ಭೂಮಿ,ಗಾಳಿ,ನೀರು ಇದೆಲ್ಲಾ ನಿಂದೇಯಾ ಅಂದವ್ರಲ್ಲ, ಇರೋದ ಮಾಡ್ಬಾರ್ದು, ಇರೋದ ಮಾಡುದ್ರೆ ಪ್ರಜಾಪ್ರಬುತ್ವ ಒಂಟೋಯ್ತದೆ ಅಲ್ವೇನಣಾ ? "

" ಅದ್ಕೇ ಅಲ್ವೇನ್ಲಾ ನಮ್ಮಲ್ಲಿ ಹಿಂತಾದ್ನೆಲ್ಲಾ ಮಡೀಕಂಡಿರಾದು. ಮಗಾ ಮಗಾ ಹಂತ ಅಪ್ಪ-ಅಮ್ಮ ಬೆಳುಸ್ತರೆ, ದೊಡ್ಡಾಗುತ್ಲೆ ಮಗ ಅಪ್ಪ-ಅಮ್ಮುನ್ನ ನಾಯಿಮರಿ ಬಿಟ್ಟಂಗೆ ರುದ್ಧಾಸ್ರಮಕ್ಕೆ ಬಿಟ್ಟು ಬತ್ತನೆ. ಮಗಂಗೆ ಒಂದೇ ಜೀವ್ನ ಇರಾದು, ಅದ್ನ ಹೆಂಜಾಯ್ ಮಾಡೋದ್ಬೇಡ್ವೇನ್ಲಾ ಸಿವಾ, ಇದೇ ತತ್ವಾನೇ ಬೈಬಲ್ನಾಗೆ ಹೇಳವ್ರೆ ಹಂತ ಅವರ್ಯಾರೋ ಹೇಳವ್ರೆ "

----------------

" ರಾಘುವೇಂದ್ರ ಸ್ವಾಮ್ಗೋಳ್ ಆರಾಧ್ನ್ಯಂತೆ ಹಂಗಂದ್ರೇನಣಾ ? "

" ಛೆ ನೀ ಇದ್ದೂ ವೇಷ್ಟು ಕಣೋ, ನಿಂಗೇನೂ ತಿಳ್ಯಾಕಿಲ್ಲ ಬಿಡು, ಕೆಲ್ಸಿಲ್ಲಾದ್ ಪುರೋಯ್ತ್ರು ಪೂಜೆ ಮಾಡ್ಸಕೆ ಒಂದ್ ಸೋಮಿ ಮಡ್ಗವರೆ, ಜನ್ರಿಗೂ ಬುದ್ದಿಲ್ಲ, ಅಲ್ಯಾರೋ ಸ್ವಾಮ್ಗೋಳು ಇದ್ರಂತೆ ಮುಂಚೆ "

" ಈಗೆಲ್ಲೋದ್ರೂ ಹವ್ರೂ"

" ಹವ್ರು ಜೀವಂತ ಸಮಾಧಿ ಕಟ್ಟಸಕ್ಯಬುಟ್ಟವ್ರಂತೆ ಅಂತ ಹಿವ್ರೆಲ್ಲಾ ಬಡ್ಕತರೆ ಆದ್ರೆ ಅವ್ರಿಲ್ಲೇ ಬಂದ್ಬುಟ್ಟರೆ "

" ಕಲಿಗಾಲ ಅಲ್ವೇನ್ಲ ಜಾಸ್ತಿದಿನ ಸಮಾಧಿ ಅಂತ ಕೂತ್ರೆ ಜನ ಬರಾಕಿಲ್ಲ-ಜಾಸ್ತಿ ದುಡ್ ಸಿಗಾಕಿಲ್ಲ ಹಂತ ತಿಳ್ದಿದ್ದೇ ಇವೇಕಾನಂದ ಹಂತ ಹೊಳ್ಳೇ ಎಸ್ರ ಮಡೀಕಂಡು ಮಾನವ ಅಕ್ಕು ಪರಿಷತ್ತು ಹಂತಾವ ಒಂದ್ ಆಪೀಸ್ ಮಾಡ್ಕಂಡವ್ರೆ "

" ನೀ ಸುಳ್ಳಾದ್ರು ಏಳ್ತೀಯಣೋ "

" ಏ ಇಲ್ಲ ಕಣ್ಲಾ ಟಿವಿನಾಗೆ ತೋರ್ಸಿಲ್ವೆ, ನಾನೇ ಖುದ್ದಾಗ್ ನೋಡಿದ್ದು "

" ಹದ್ರಿಂದ ಇವೇಕಾನಂದ್ಗೆ ಹೇನ್ ಪ್ರಯೋಜ್ನ ? "

" ಮಾನವ ಅಕ್ಕು ಅಂತ ಸರ್ಕಾರೀ ಸಬ್ ರಜಿಸ್ತ್ರಿ ತಿರುಗ್ದಾಂಗೆ ತಿರೀಕಂಡು ಜನರಿಗೆಲ್ಲ ಹಲ್ಲಲ್ಲಿ ಬೆದ್ರಕೆ ಆಕಿ ದುಡ್ ವಸೂಲಿ ಮಾಡ್ಕಳಾದು, ಮಳೆ ಬೀಳೂತ್ಲೂವೆ ಆಪೀಸ್ನಾಗ್ ಕುತ್ಗಂಡು ಆದುಡ್ನ ಮೇಯದು "

" ಓ ಇದ್ಬೇರೆ ನಿತ್ಯಾನಂದ ಹಂತೀಯೇನು ? "

" ಹಾಂ ಹೊಂಥರಾ ಅಂಗೇ ಹನ್ಕ "

Wednesday, August 25, 2010

ಬಂದೆಯಾ ಗುರುರಾಯಾ .....ದಯಮಾಡಿಸು ಮಹನೀಯ


ಬಂದೆಯಾ ಗುರುರಾಯಾ .....ದಯಮಾಡಿಸು ಮಹನೀಯ

ಶ್ರಾವಣ ಮಾಸವೇ ಹೀಗೆ! ಒಂದಿಲ್ಲೊಂದು ಹಬ್ಬ, ಸಡಗರ, ಪೂಜೆ ನಡೆದೇ ಇರುತ್ತದೆ. ಅದರಲ್ಲೂ ಹಳ್ಳಿಗಳಲ್ಲಿ ನಿಸರ್ಗದ ಮಡಿಲಲ್ಲಿ ಬೆಳ್ಳಂಬೆಳಿಗ್ಗೆ ಚುಮುಚುಮು ಚಳಿಯಲ್ಲಿ ಬಹುಬೇಗ ಎದ್ದು, ಸುರಿವ ಸೋನೆಮಳೆಯಲ್ಲಿ ಕೊಡೆಹಿಡಿದು ಸಲ್ಸಲ್ಪ ಮೈಗೆ ಹಾರುವ ಮಳೆಯ ಹನಿಗಳನ್ನು ಸಹಿಸಿಕೊಂಡು ದೇವಸ್ಥಾನ, ಮಠ ಇಂತಹ ಜಾಗಗಳಲ್ಲಿ ನಡೆಯುವ ಪೂಜೆ-ಪುನಸ್ಕಾರಗಳಿಗೆ ಹೋಗುವುದು ಬಲು ಹಿತಕರ ಸಂಗತಿ. ಅಲ್ಲಿನ ಹೋಮದ ಧೂಮ, ಕರ್ಪೂರದ ಆರತಿಯ ಪರಿಮಳ, ಬಳಸಿದ ಮಂಗಳ ದ್ರವ್ಯಗಳ ಸುಗಂಧ, ತುಪ್ಪದ ಜ್ಯೋತಿಯಿಂದ ಹೊರಸೂಸುವ ಅಪ್ಪಟ ದೀಪದ ಅಗರು, ಹಲವು ವಿಧದ ಬಣ್ಣ ಬಣ್ಣದ ಹೂಗಳ ಅಲಂಕಾರ, ಥರಥರದ ರಂಗೋಲಿ ಇವನ್ನೆಲ್ಲಾ ನೆನೆಸಿಕೊಂಡರೆ ಒಂದೊಮ್ಮೆ ನಾವೌ ಇಂತಹ ದೃಶ್ಯಗಳನ್ನು ಪ್ರತ್ಯಕ್ಷ ನೋಡಲು ಸಾಧ್ಯವಾಗದಿದ್ದ ಪಕ್ಷದಲ್ಲಿ ಮನಸ್ಸು ಬೇಸರಗೊಳ್ಳುತ್ತದೆ ಎಂದರೆ ತಪ್ಪಲ್ಲ.

ಪ್ರಾಯಶಃ ಇದು ಆಸ್ತಿಕರಿಗೆ ಮಾತ್ರ. ನಾಸ್ತಿಕರಿಗೆ ದೇವರು-ದಿಂಡರ ರಗಳೆಯೇ ಇಲ್ಲ ಅಥವಾ ಅವರ ಲೆಕ್ಕದಲ್ಲಿ ಇದೆಲ್ಲಾ ಒಂದು ರಗಳೆ. ಜೀವನದಲ್ಲಿ ಪೂರ್ವಜ್ನ್ಮದ ಸುಕೃತದಿಂದ ಅಂತಹ ದೊಡ್ಡ ತೊಂದರೆ ಅನುಭವಿಸಿರುವುದಿಲ್ಲ, ಯಾವುದೇ ಕಾಯಿಲೆ-ಕಸಾಲೆಗಳಿಗೆ ಈಡಾಗಿರುವುದಿಲ್ಲ ಮತ್ತು ಅವರು ಮುಟ್ಟಿದ್ದೆಲ್ಲಾ ಹೊನ್ನಾಗುವಂತ ಯೋಗವನ್ನು ಪಡೆದಿರುತ್ತಾರೆ--ಹೀಗಾಗಿ ಅವರಿಗೆ ಈ ಜನ್ಮದಲ್ಲಿ ದೇವರ ಅಸ್ಥಿತ್ವವಾಗಲೀ ಅವಶ್ಯಕತೆಯಾಗಲೀ ಬಂದಿರುವುದಿಲ್ಲ-ಬೇಕಾಗಿರುವುದಿಲ್ಲ. ಯಾವಾಗ ತಿರುಗುವ ಯಂತ್ರ ನಿಂತುಕೊಂಡಿತೋ, ಚಲಿಸುವ ಗಾಲಿ ಹೂತು ಹೋಯಿತೋ, ಮನೆಯಲ್ಲಿ ಅನಾರೋಗ್ಯ, ವಿರಸ, ಆರ್ಥಿಕ ನಷ್ಟ ಉಂಟಾಯಿತೋ ಆ ಘಳಿಗೆಯಿಂದ ನಮ್ಮ ಸರಕಾರೀ ಬಸ್ಸುಗಳ ಬೋರ್ಡು ಬದಲಾದ ಹಾಗೇ ತಾವೂ ಆಸ್ತಿಕರೇ ಎಂಬ ಪೋಸುಕೊಡುತ್ತ ಬರುತ್ತಾರೆ. ದೇವರೆಂಬ ದೇವರಿಗೆ ಇವರ ಬೇರು-ಬಿತ್ತು ಎಲ್ಲಾ ಗೊತ್ತಿರುವುದಿಲ್ಲವೇ ! ಯಾವಾಗ ಆ ಘಳಿಗೆಯಲ್ಲಿ ಮಾತ್ರ ನೆನೆಯ ಬರುತ್ತಾರೋ ಅಂಥವರನ್ನು ಇನ್ನೂ ಪರೀಕ್ಷೆಗೊಳಪಡಿಸುವ ಅದ್ಬುತ ಚೈತನ್ಯವೇ ದೇವರು. ಇಂತಹ ಅರ್ಜೆಂಟಿಗೆ ದೇವರ ದಾಸರಾಗುವವರನ್ನು ನೆನೆದು ನಮ್ಮ ಪೂರ್ವಜರು ’ ಸಂಕಟ ಬಂದಾಗ ವೆಂಕಟರಮಣ’ ಎಂಬ ಗಾದೆ ಮಾಡಿದರು! ನಾಸ್ತಿಕರಲ್ಲಿ ನಾನು ಯಾವಾಗಲೂ ಕೇಳುತ್ತಿದ್ದುದು ಎರಡೇ ಪ್ರಶ್ನೆ- ಮೊದಲನೆಯದು: ಆಕಾಶ ಕಾಯಗಳನ್ನು ಗುರುತ್ವಾಕರ್ಷಣ ಶಕ್ತಿಯಿಂದ ಸರಿಯಾದ ಹಿಡಿತದಲ್ಲಿ ನಿಯಂತ್ರಿಸಿಡುವ ಶಕ್ತಿ ಯಾವುದು ? [ ಹಾಗೆ ಕರೆಯುವ ಆ ಗುರುತ್ವಾಕರ್ಷಣ ಶಕ್ತಿ ಹೇಗೆ ಹುಟ್ಟಿಕೊಳ್ಳುತ್ತದೆ ? ] ಎರಡನೇದು: ಆತ್ಮವೆಂಬ ಚೈತನ್ಯ ದೇಹಕ್ಕೆ ಬರುವ ಮೊದಲು ಎಲ್ಲಿರುತ್ತದೆ? ಯಾವ ರೂಪದಲ್ಲಿರುತ್ತದೆ ? ಸತ್ತಮೇಲೆ ಎಲ್ಲಿಗೆ ಹೋಗುತ್ತದೆ ?

ಜನಸಾಮಾನ್ಯರಲ್ಲಿ ನಾವು ಹುಟ್ಟಿದ ದಿನವನ್ನು ಸಂಭ್ರಮದಿಂದ ಆಚರಿಸಿಕೊಂಡರೆ ಸತ್ತದಿನವನ್ನು ದುಃಖದಿಂದ ಶ್ರಾದ್ಧವಾಗಿ ಆಚರಿಸುತ್ತೇವೆ. ಸಾಧು-ಸಂತ, ಸನ್ಯಾಸಿಗಳೂ ಯತಿಗಳೂ ಹುಟ್ಟಿದ ಮತ್ತು ಕಾಲವಾದ ಎರಡೂ ದಿನಗಳು ನಮಗೆ ಸಂಭ್ರಮಾಚರಣೆಯ ದಿನಗಳೇ ಆಗಿರುತ್ತವೆ. ಯಾಕೆಂದರೆ ಮಹಾತ್ಮರ ಹುಟ್ಟು ಮತ್ತು ಸಾವುಗಳೇ ಹಾಗೆ. ಅವರೆಲ್ಲ ಕಾರಣವಿಲ್ಲದೇ ಹುಟ್ಟುವುದೂ ಇಲ್ಲ, ಕಾಲವಾಗುವುದೂ ಇಲ್ಲ! ಹಾಗಾದರೆ ಅವರ ಹುಟ್ಟು-ಸಾವಿಗೆ ಏನುಕಾರಣ ಎಂದು ಅಂದಾಜಿಸಹೊರಟರೆ ನಮಗೆ ಸಿಗುವ ಸಾಮಾನ್ಯ ಉತ್ತರ ’ಜಗದೋದ್ಧಾರ’ ಅರ್ಥಾತ್ ಜಗತ್ತಿನ ಕೆಲವು ಭೂ ಪ್ರದೇಶಗಳಲ್ಲಿ ತಮ್ಮ ಕಾರ್ಯವನ್ನು ಹಮ್ಮಿಕೊಂಡು ಜನರಿಗೆ ಒಳಿತನ್ನು ಮಾಡಲೋಸುಗ ಅವರು ಅಂಶಾಂಶಾವತಾರಿಗಳಾಗಿ ಭೂಮಿಯ ಮೇಲೆ ಅವತರಿಸುತ್ತಾರೆ. ಹೀಗೆ ಅವತರಿಸಿದ ಆ ಮಹನೀಯರು ಒಂದಷ್ಟು ಕಾಲ ಭುವಿಯಲ್ಲಿದ್ದು ಅಲ್ಲಿ ತಮ್ಮ ಸೇವೆಗೈದು ಪೂರ್ವನಿಗದಿತ ಸಮಯಕ್ಕೆ ಸರಿಯಾಗಿ ದೇಹಾಂತ್ಯವನ್ನು ಕಾಣುತ್ತಾರೆ. ಅವರ ಆ ಭೌತಿಕ ಕಾಯದಿಂದ ಅವರ ಆತ್ಮ ಹೊರಟು ನಡೆದರೂ ಅವರ ಪಾರ್ಥಿವ ಶರೀರವನ್ನು ಸಮಾಧಿಮಾಡಿದ ಸ್ಥಳದಲ್ಲಿ ಅವರ ತಪದ ಪ್ರಭೆ ಅಡಗಿರುತ್ತದೆ. ಸಮಾಧಿಯಲ್ಲಿರುವ ಅವರ ಭೌತಿಕ ಶರೀರದ ಅವಶೇಷಗಳು ನಾವಿವತ್ತು ಹೇಳುವ ಕಾಸ್ಮಿಕ್ ರೇಡಿಯೇಶನ್ ಉಂಟುಮಾಡುತ್ತಿರುತ್ತವೆ. ಹೀಗೇ ಕಾಲವಾದ ಸನ್ಯಾಸಿ ಜನರ ನೆನಪಿನಲ್ಲಿ ಅವರು ಸಮಾಧಿಸ್ಥರಾದ ಆ ಮಿತಿಯಂದು ಪ್ರತೀ ವರ್ಷ ಅವರ ಯತಿಶ್ರಾದ್ಧವನ್ನು ವಿದ್ವಜ್ಜನರು ಸೇರಿ ವಿಧಿವತ್ತಾಗಿ ವೇದಮಂತ್ರಗಳೊಂದಿಗೆ ಆಚರಿಸುತ್ತಾರೆ-ಇದೇ ’ಆರಾಧನೆ’ ಎಂದು ಕರೆಸಿಕೊಳ್ಳುತ್ತದೆ.



ನಮ್ಮ ಇಂದಿನ ಈ ಯುಗದಲ್ಲಿ ಒಂದೆರಡು ಸನ್ಯಾಸಿಗಳ ಸಜೀವ ಸಮಾಧಿಗಳು ನಮಗೆ ನೋಡ ಸಿಗುತ್ತವೆ. ಒಂದು ಶೃಂಗೇರಿಯ ಶ್ರೀ ವಿದ್ಯಾಶಂಕರ ದೇಗುಲ.ಸರಿಸುಮಾರು ಹನ್ನೆರಡನೇ ಶತಮಾನದ ಅಂತ್ಯಭಾಗದಲ್ಲಿ ನೂರಾ ಐದು ವರ್ಷಗಳ ವರೆಗೆ ದೇಹದಿಂದಿದ್ದ ಶ್ರೀ ವಿದ್ಯಾಶಂಕರ ಮಹಾಸ್ವಾಮಿಗಳು ತಪಸ್ಸಿನಲ್ಲಿ ಬಹಳ ಉತ್ತುಂಗಕ್ಕೆ ಏರಿದವರು. ಅವರ ನಂತರದಲ್ಲಿ ಬಂದ ಶ್ರೀ ವಿದ್ಯಾರಣ್ಯ ಮಹಾಮುನಿಗಳು [ಹಂಪೆ ಮತ್ತು ವಿಜಯನಗರಕ್ಕೆ ಕಾರಣೀಭೂತರಾದವರು] ವಿದ್ಯಾಶಂಕರ ದೇಗುಲವನ್ನು ಕಟ್ಟಿಸಿದರು ಎನ್ನುತ್ತವೆ ಶೃಂಗೇರಿ ಮಠದ ದಾಖಲೆಗಳು. ಇಲ್ಲಿನ ವಿಶೇಷವೆಂದರೆ ಸೂರ್ಯರಶ್ಮಿ ಒಂದೊಂದು ಋತುವಿನಲ್ಲೂ ಅಲ್ಲಿರುವ ವಿವಿಧ ಮಧ್ಯಭಾಗದ ಬಾಗಿಲು ಮತ್ತು ಕಿಟಕಿಗಳ ಮೂಲಕ ಹಾದು ದೇವಸ್ಥಾನದ ಒಳಗೆ ಹೋಗಿ ಲಿಂಗವನ್ನು ದರ್ಶಿಸುತ್ತವೆ, ಇಲ್ಲಿನ ಹನ್ನೆರಡು ಕಂಬಗಳು ಹನ್ನೆರಡು ರಾಶಿಗಳನ್ನು ಬಿಂಬಿಸುತ್ತವೆ. ವಿದ್ಯಾ ಶಂಕರರಿಗೆ ನಮಸ್ಕರಿಸಿ ಇನ್ನೊಬ್ಬ ಮುನಿಯ ಬಗ್ಗೆ ತಿಳಿಯೋಣ.

ಮತ್ತೊಂದು, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಂದಿರ. ತಮ್ಮ ಸಾಧನೆ ಮುಗಿದ ಮೇಲೆ ಅರೆಘಳಿಗೆಯೂ ನಿಲ್ಲದ ಈ ಮುನಿಜನ ತಮ್ಮ ಸ್ವ ಇಚ್ಛೆಯಿಂದ ಸಮಾಧಿಯ ಆಳದಲ್ಲಿ ಪದ್ಮಾಸೀನರಾಗಿ ಕುಳಿತು ಮೇಲೆ ತಮ್ಮನ್ನು ಮುಚ್ಚಿಬಿಡುವಂತೆ ತಮ್ಮ ಶಿಷ್ಯಂದಿರಿಗೆ ಆಜ್ಞಾಪಿಸುತ್ತಾರೆ. ಇದು ಶಿಷ್ಯಂದಿರನ್ನು ಚಣಕಾಲ ದುಃಖಕ್ಕೆ ಈಡುಮಾಡಿದರೂ ಗುರುವಾಜ್ಞೆಯನ್ನು ಮೀರಲಾಗದ ಶಿಷ್ಯರು ಹಾಗೆ ಮಾಡುತ್ತಾರೆ. ಅಂತಹ ಕೊನೇಘಳಿಗೆಯಲ್ಲಿ ಗುರು-ಶಿಷ್ಯರ ಮಾತುಕತೆ ನಡೆದು ಶಿಷ್ಯರ ಅನುವು-ಆಪತ್ತಿನಲ್ಲಿ ಗುರುವು ಸಹಕರಿಸುವುದಾಗಿ ಭರವಸೆ ನೀಡುತ್ತಾರೆ. ಇಂತಹ ಹೃದಯವಿದ್ರಾವಕ ಸನ್ನಿವೇಶದಲ್ಲಿ ಸಮಾಧಿಸ್ಥರಾಗುವ ಮುನಿಜನರು ತಮ್ಮ ದಿವ್ಯಚೈತನ್ಯದಿಂದ ಬಹುಕಾಲ ಅಲ್ಲಿ ಸುಪ್ತಸ್ಥಿತಿಯಲ್ಲಿ ನೆಲೆಸಿ ಭಕ್ತರನ್ನು ಹರಸುತ್ತಿರುತ್ತಾರೆ. ಈ ದಿವ್ಯ ಚೈತನ್ಯ ಸ್ವರೂಪೀ ಮುನಿಜನರು ಕಾಲವಾದ ದಿನವನ್ನು ಹಬ್ಬದ ರೀತಿ ಆಚರಿಸುವುದೇ ಪುಣ್ಯ.


ಬಹುತೇಕರಿಗೆ ಗುರುವಾಗಿ, ಬಹಳ ಜನಪ್ರಿಯರಾಗಿ, ಜನರ ಭಾವನೆಗಳಿಗೆ ತ್ವರಿತ ಸ್ಪಂದಿಸಿದ್ದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ೩೩೯ನೇ ಆರಾಧನೆ ಇಂದು ನಡೆಯುತ್ತಿದೆ. ಅಂದರೆ ಇಂದಿಗೆ ೩೩೯ ವರ್ಷಗಳ ಹಿಂದೆ ಗುರುರಾಯರು ಬದುಕಿದ್ದರು, ನಮ್ಮಂತಹ ಜನರೊಟ್ಟಿಗೆ ಮನುಷ್ಯದೇಹದಿಂದ ತಿರುಗಾಡುತ್ತ ಜಪತಪಾದಿ ಹಲವು ಅನುಷ್ಠಾನದಲ್ಲಿದ್ದರು. ಆದರೆ ನಾವೇ ಹತಭಾಗ್ಯರು-ಅವರನ್ನು ನೇರವಾಗಿ ನೋಡಲಿಲ್ಲ, ಒಂದೊಮ್ಮೆ ನೋಡಿದ್ದರೂ ನಮಗದರ ಅರಿವಿಲ್ಲ! ಬದುಕಿದ್ದಾಗಲೇ ಸಮಾಧಿಮಾಡಿಸಿಕೊಂಡರೂ ತದನಂತರವೂ ಜನರಿಗೆ ಅಲ್ಲಿಂದಲೇ ಸಹಾಯ ಹಸ್ತನೀಡಿದ ಗುರುವು ತನ್ನ ವೈಯಕ್ತಿಕ ಬದುಕನ್ನ ಕಡೆಗಣಿಸಿ ಸಮಾಜಕ್ಕಾಗಿ ತನ್ನ ಬದುಕನ್ನು ಧಾರೆ ಎರೆದಿದ್ದಾರೆ. ತನ್ನ ಅನುಪಸ್ಥಿತಿಯಲ್ಲಿ ಬೇಸರಗೊಂಡು ಬಾವಿಗೆ ಹಾರಿ ಪ್ರಾಣತೆತ್ತ ಪೂರ್ವಾಶ್ರಮದ ಸಹಧರ್ಮಿಣಿಗೆ ಮೋಕ್ಷವನ್ನು ಕರುಣಿಸಿದ್ದಾರೆ. ಲೌಕಿಕದ ಹಲವು ಜನರಿಗೆ ಇದೆಲ್ಲಾ ಅರ್ಥವಿಹೀನವೆನಿಸಿದಂತೆ ಕಂಡರೂ ಸನ್ಯಾಸಿಗಳಿಗೆ ಅವರ ಆತ್ಮಜ್ಞಾನ ಎಲ್ಲವನ್ನೂ ಹೇಳುತ್ತದೆ. ಯಾವುದನ್ನು ತೊರೆಯಲಾಗದೋ ಅಂತಹ ವ್ಯಾಮೋಹವನ್ನೇ ಹಿಂದಕ್ಕೆ ಹಾಕಿ ತಾನು ಮುನ್ನಡೆದರು ಶ್ರೀ ರಾಘವೇಂದ್ರರು.

ಹಲವಾರು ಜನರು ವಿವಿಧ ರೀತಿಯಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತ ಅವರನ್ನು ನೆನೆದು ಫಲವನ್ನು ಪಡೆದಿದ್ದಾರೆ. ಇಂತಹ ಸದ್ಗುರುವಿನ ಸ್ಮರಣೆ ಇವತ್ತಿನ ಭಕ್ತಿಸಿಂಚನದಲ್ಲಿ-

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ಋತಾಯಚ |
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||


ತುಂಗೆಯ ದಡದಲಿ ಮನೆಮಾಡಿಹ
ಮಹನೀಯ ಮುನಿಯೆ ನಿನ್ನನು ನೆನೆವೆ
ಅಂಗಳದಲಿ ಚಿತ್ರವು ಎದುರಾಗಲು
ಒಮ್ಮೆ ನಿನಗೆ ನಾ ಕೈಮುಗಿವೆ

ಮಂಚಾಲೆಯ ಆ ಊರಲಿ ನೆಲೆಸುತ
ಸಂಚಿತ ವ್ಯಾಧಿಗಳನು ಕಳೆದೆ
ಅಂಚೆಯ ತೆರದಲಿ ಭಕುತರ ದೂರನು
ಕೊಂಚವೂ ಬಿಡದೆ ಆಲಿಸುವೆ

ವೀಣಾಗಾನ ವಿನೋದನೆ ನುತಿಸಲು
ತ್ರಾಣವು ಯುಕ್ತಿಯು ನಮಗಿಲ್ಲ
ಪ್ರಾಣದೇವನೆಂದೆನಿಸಿದ ಗುರುವರ
ಗಾಣದ ಎತ್ತುಗಳ್ ನಾವೆಲ್ಲ !

ಜನನೊಂದರು ಸ್ವೀಕರಿಸೆ ಸಮಾಧಿಯ
ಮನಬೇಗುದಿ ತಾಳದೆ ಅಂದು
ಅನುದಿನ ಜನಸಮುದಾಯವ ಹರಸುವ
ಘನಮಹಿಮನೆ ಜಯನಮೋ ಎಂದು

ಆರಾಧಿಸುವೆವು ಭಾವ ತರಂಗದಿ
ನಾರಯಣ ರೂಪನೆ ನಮನ
ಕಾರಣಗಳ ನೀ ಹೇಳದೆ ಮನ್ನಿಸು
ಘೋರದುರಿತಗಳ ಕಳೆದು ದಿನಾ

ಬ್ರಹ್ಮಾನಂದಂ ಪರಮ ಸುಖದಂ ಕೇವಲಂ ಜ್ಞಾನಮೂರ್ತಿಂ
ದ್ವಂದ್ವಾತೀತಂ ಗಗನಸದೃಶಂ ತತ್ವಮಸ್ಯಾದಿ ಲಕ್ಷ್ಯಮ್ |
ಏಕಂ
ನಿತ್ಯಂ ವಿಮಲಮಚಲಂ ಸರ್ವಧೀಸಾಕ್ಷಿಭೂತಂ
ಭಾವಾತೀತಂ
ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ ||

Tuesday, August 24, 2010

ಮನದ ರಶ್ಮಿ

ಕಲ್ಪನಾ ಚಿತ್ರ : ರಾಜಾ ರವಿವರ್ಮ ವಿರಚಿತ , ಚಿತ್ರ ಕೃಪೆ : ಅಂತರ್ಜಾಲ

ಜೀವನದಲ್ಲಿ ಹಲವಾರು ಪಾತ್ರಗಳು ಬಂದು ಹೋಗುತ್ತವೆ. ಆದರೆ ನಮ್ಮ ಜೊತೆ ತಮ್ಮನ್ನು ಅರ್ಧಭಾಗವಾಗಿ ಹಂಚಿಕೊಳ್ಳುವ ಅರ್ಧಾಂಗಿಯನ್ನು ನಾವು ಕೃತಜ್ಞತೆಯಿಂದ ಕಂಡರಷ್ಟೇ ನಮ್ಮ ಪಾತ್ರ ತುಂಬಿಬರುತ್ತದೆ. ನಮಗಾಗಿ ಹುಟ್ಟಿದ ಮನೆಯನ್ನು ಬಿಟ್ಟು, ನಮ್ಮ ಬದುಕಿನ ಕಷ್ಟಕೋಟಲೆಗಳಲ್ಲಿ ನಮ್ಮನುವರ್ತಿಯಾಗಿ, ನಮ್ಮ ನೋವು-ನಲಿವನ್ನು ಹಂಚಿಕೊಂಡು, ನಮ್ಮ ಕೆಲಸಗಳನೇಕವನ್ನು ಮಾಡಿಕೊಟ್ಟು, ನಮಗೆ ಬೇಕುಬೇಕಾದ ತಿಂಡಿತಿನಿಸು ಮಾಡಿಬಡಿಸಿ, ನಮ್ಮ ಮುಂದಿನ ಕುಡಿಗಳಿಗೆ ಅಮ್ಮನಾಗಿ-ಹೊತ್ತು, ಹೆತ್ತು, ಸಲಹಿ, ಬೆಳೆಸಿ, ಅವರ ಬೇಕು-ಬೇಡಗಳನ್ನೂ ಗಣನೆಗೆ ತೆಗೆದುಕೊಂಡು ಹೀಗೇ ಹಲವು ಹತ್ತು ಕಾರ್ಯಗಳಲ್ಲಿ ಜೋಡಿ ಎತ್ತಿನಂತೇ ನಮಗೆ ಹೆಗಲುಗೊಡುವ ಹೆಂಡತಿಯ ಪಾತ್ರ ನಿಜಕ್ಕೂ ಬಹಳ ದೊಡ್ಡದು.


ಇಚ್ಛೆಯನರಿತು ನಡೆವ ಸತಿಯಾಗೆ
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ | ಸರ್ವಜ್ಞ

----ಇದು ಸರ್ವಜ್ಞ ಹೇಳಿದ್ದು. ಅದರಂತೇ ಈ ವಿಷಯದಲ್ಲಿ ನನಗೆ ನನ್ನ ಇಚ್ಛೆಯನ್ನರಿತು ನಡೆಯುವ ಸತಿ ಸಿಕ್ಕಿದ್ದಾಳೆ ಎಂದು ಹೆಮ್ಮೆಯಿಂದ ನಿಮ್ಮೆದುರಲ್ಲಿ ಬೀಗಲು ನಾಚಿಕೆಯೇನಿಲ್ಲ! ದಿನಾಲೂ ಓದುಗ ಮಿತ್ರರಿಗೆ ನಾನು ಉಣಬಡಿಸುವ ಬರಹಗಳ ಹಿಂದೆ ಅವಳ ತ್ಯಾಗ ಬಹಳವಿದೆ. ಅವಳಜೊತೆಗೆ ಕಳೆಯಬಹುದಾದ ಸಮಯವನ್ನು ಮೊಟಕುಗೊಳಿಸಿ ಸರಿರಾತ್ರಿ ೧ ಘಂಟೆಯವರೆಗೆ ಬರೆಯುತ್ತ ಕೂರುವ ನನಗೆ ಏನೊಂದೂ ಕಮಕ್ ಕಿಮಕ್ ಎನ್ನದೇ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾಳೆ ನನ್ನ ರಶ್ಮಿ. ಅವಳು ನನ್ನ ಬಾಳಿಗೆ, ನನ್ನ ಪಾಲಿಗೆ ’ರಶ್ಮಿ’ಯೇ ಸರಿ.

ಕರ್ನಾಟಕ ಸಂಗೀತವನ್ನು ಅಭ್ಯಸಿಸಿ ತನ್ನ ಇಂಪಾದ ಕಂಠದಿಂದ ಹಿರಿಯ ಕವಿಗಳಾದ ಬೇಂದ್ರೆ, ಪು.ತಿ.ನ.,ಲಕ್ಷ್ಮೀನಾರಾಯಣ ಭಟ್ಟ, ಎಚ್.ಎಸ್.ವಿ., ಕುವೆಂಪು, ನಿಸಾರ್ ಅಹಮ್ಮದ್ ಮೊದಲಾದವರ ಕವನಗಳ ಜೊತೆ ನನ್ನ ಹಲವು ಹಾಡುಗಳನ್ನೂ ನನಗಾಗಿ ನಾನು ಕೇಳಿದಾಗ ಹಾಡಿ ರಂಜಿಸುವ ಆಕೆಗೆ ಈ ದಿನ ಹುಟ್ಟಿದ ಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಎಂಟುವರ್ಷಗಳಿಂದ ನನ್ನ ಬಿಡಿಸಲಾರದ ಭಾಗವಾದ ಆಕೆಯ ಹಾಗೂ ನನ್ನ ಮದುವೆಯ ಕಾಲದ ಕೆಲವು ನೆನಪಿನ ತುಣುಕುಗಳನ್ನು ಮತ್ತು ಮಗ ’ಶುಭಾಂಗ’ನ ಬಗೆಗೂ ಸೇರಿದಂತೆ ಇದೊಂದು ದಾಂಪತ್ಯ ಗೀತೆಯನ್ನು ಬರೆದಿದ್ದೇನೆ. ಇದನ್ನು ನನ್ನ ವಿಶಾಲ ಕುಟುಂಬದವರಾದ ನಿಮ್ಮೆಲ್ಲರೊಡನೆ ಹಂಚಿಕೊಳ್ಳಲು ಬಹಳ ಸಂತೋಷವಾಗುತ್ತದೆ. ಬನ್ನಿ ಅನುಭವಿಸಿ, ನಮ್ಮ ಜೀವನದ ಸವಿನೆನಪುಗಳನ್ನು--

ಮನದ ರಶ್ಮಿ

ನೆನಪಿನಂಗಳದಲ್ಲಿ ಮನವನ್ನು ಆಡಬಿಡೆ
ಬನಸಿರಿಯ ಸೊಬಗಂತೆ ಮೆರೆವ ಪುಟಗಳನು
ಅನಿತರೋಳ್ ಎನ್ನೊಡತಿ ಸೂರ್ಯ’ರಶ್ಮಿ’ಯ ತೆರದಿ
ಘನತರಂಗಗಳೆಬ್ಬಿ ನಗುವ ಚಿಮ್ಮಿದಳು

ಎಂಟುವರ್ಷಕು ಮುನ್ನ ನಾನ್ಯಾರೋ ಅವಳ್ಯಾರೋ
ಗಂಟುಬೀಳುವ ಕನಸು ನಮ್ಮಲಿರಲಿಲ್ಲ!
ನಂಟಾಯ್ತು ಆ ಜೀವ ನನ್ನೊಡನೆ ತಾ ನಡೆದು
ಕುಂಟು ನೆಪವದು ಸಾಕು ಒಮ್ಮೆ ಮುದ್ದಿಸಲು

" ಹೋಗಿ, ನಾ ಬರಲಾರೆ ಇದೇ ಮೊದಲು ಇದೇ ಕೊನೆಯು "
ಆಗ ನಾ ಗದರಿಸಿದೆ ನನ್ನ ಪಾಲಕರ
" ಬೇಗ ನೀ ಬಂದೊಮ್ಮೆ ನೋಡಿ ಹೋಗಿಬಿಡೆನುತ "
ರಾಗದಲಿ ಮೆದುಗೊಳಿಸಿ ನಡೆತಂದರೆನ್ನ !

ಸಾಗರದ ಈ ಹುಡುಗಿ ವೇಗದಲಿ ಮನಕದ್ದು
ಜಾಗರಣೆ ಕೂರಿಸಿದಳೆನ್ನ ಹಲವುದಿನ !
’ಜಾಗ’ ತುಂಬುವ ಮುಗುದೆ ಇವಳೇ ಸರಿಯೆಂದೆನಿಸಿ
ಬೀಗ ರವಾನಿಸಿದೆ ಹೃದಯದಿಂ ಸುದಿನ

ಬೀಗರೊಪ್ಪುತ ಹೊತ್ತಗೆಯ ತೆಗೆದು ದಿನಗುಣಿಸಿ
’ಮೇ’ಗಾಯ್ತು ತಿಥಿಮಿತಿಯ ತಾರಾನುಕೂಲ
ಸಾಗಾಟ ನಡೆದಿತ್ತು ನಡುವಲ್ಲಿ ನಮ್ಮೊಳಗೆ:
’ಮೇಘ ಸಂದೇಶ’ವಿಹ ಪ್ರೇಮ ಪತ್ರಗಳ !

ಪೆಪೆಪೆಪೆ ಮಂಗಳದ ವಾದ್ಯಗಳು ಮೊಳಗಿರಲು
ತಪಪಪಪ ಸಾವಿರದ ಚಪ್ಪಾಳೆ ತಟ್ಟಿ
ಹಿಪಿಪಿಪಿಪಿ ನಗೆಗಡಲ ಗದ್ದಲದ ಮಂಟಪದಿ
ಟಪಪಪಪ ಅಕ್ಷತೆಗಳುದುರಿ ಹರಸಿದವು

ಗಣಪ ಈಶ್ವರ ’ವಿಷ್ಣು’ ಎಲ್ಲ ದೈವಗಳನ್ನು
ಗಣನೆಯಲಿ ತಂದು ಶೋಧಿಸುತಿಟ್ಟ ಹೆಸರು
ಕೆಣಕುವನು ಆಗಾಗ ಕೈಕಾಲು ಮೈ ಹತ್ತಿ
ಅಣಕಿಸುತ ನಾಲ್ಕುವರೆ ವಯದ ’ಶುಭಾಂಗ’

Monday, August 23, 2010

ರಕ್ಷಾಬಂಧನ ಮತ್ತು ಉಪಾಕರ್ಮ



ಶ್ರೀ ಗಾಯತ್ರೀ ದೇವಿ

[ಚಿತ್ರಗಳ ಋಣ : ಅಂತರ್ಜಾಲ ]
ರಕ್ಷಾಬಂಧನ ಮತ್ತು ಉಪಾಕರ್ಮ

ಶ್ರಾವಣ ಶುದ್ಧ ಹುಣ್ಣಿಮೆ ನೂಲು ಹುಣ್ಣಿಮೆ ಎಂದೇ ಜನಜನಿತ. ಸಾಮಾನ್ಯವಾಗಿ ಇಲ್ಲಿಯವರೆಗೆ ಸುರಿವ ಮುಂಗಾರಿನ ಮುಸಲಾಧಾರೆಗೆ ಸಾಥ್ ಕೊಟ್ಟು ಹೆದರಿಸುವ ಸಮುದ್ರರಾಜ ವರುಣನಿಗೆ ಉಳ್ಳವರು ಬಂಗಾರದ ಜನಿವಾರ ಅರ್ಪಿಸಿ ತಮಗೆ ಇನ್ನು ಮುಂದೆ ಒಂದು ಹಂತಕ್ಕೆ ಕೆಲಸಮಾಡಿಕೊಳ್ಳಲು ಅನುಕೂಲವಾಗುವ ರೀತಿಯಲ್ಲಿ ಸಹಕರಿಸು ಎಂದು ಪ್ರಾರ್ಥಿಸುವ ದಿನ. ನಮ್ಮ ಪಂಚಭೂತಗಳಲ್ಲಿ ಒಂದಾದ ನೀರಿಗೂ ನಮ್ಮ ವರುಣಮಹಾರಾಜರಿಗೂ ಮತ್ತು ಇಂದ್ರಾದಿ ದೇವತೆಗಳಿಗೂ ಒಳಗೊಳಗೆ ಇಂಟರ್ನೆಟ್ ಇದೆ! ಈ ಅತೀ ಬ್ರಾಡ್ಬ್ಯಾಂಡ ನೆಟ್ ಮೂಲಕ ಅವರು ಸದಾಕಾಲ ಸಂಪರ್ಕದಲ್ಲಿರುತ್ತಾರೆ!

ರಕ್ಷಾಬಂಧನ 'ತನ್ನ ಶೀಲವನ್ನು ರಕ್ಷಣೆ ಮಾಡುವ ಅಣ್ಣ ನೀನು' ಎಂದು ತಂಗಿಯಾದವಳು ಅಣ್ಣನಿಗೆ ರಕ್ಷಾದಾರವನ್ನು ಕಟ್ಟುವ ಒಂದುಕ್ರಮವಾದರೆ ಇನ್ನೊಂದೆಡೆ ಹೊಲದಲ್ಲಿ ಬೆಳೆಯುತ್ತಿರುವ ಪೈರಿಗೆ ಕಾಡಿನಿಂದ ಮೊಲ, ನರಿ, ಜಿಂಕೆ, ಕಡವೆ, ಹಂದಿ ಹೀಗೇ ಹಲವು ಹತ್ತು ಪ್ರಾಣಿಗಳು ನಾಡಿಗೆ ಅಥವಾ ಕೃಷಿಕರ ಹೊಲಗದ್ದೆಗಳಿಗೆ ನುಗ್ಗಿ ತಿಂದು ಹಾಳ್ಗೆಡವದಂತೆ ರಕ್ಷೆಗಾಗಿ ಬೆಚ್ಚು ಅಥವಾ ಬೆದರುಬೊಂಬೆಯನ್ನು ಹೊಲಗದ್ದೆಗಳಲ್ಲಿ ನಿಲ್ಲಿಸುವ ಕಾರ್ಯಕ್ರಮಕೂಡ ಈಗ ನಡೆಯುತ್ತದೆ. ಹಾಗೆ ನೆಟ್ಟ ಬೆದರು ಬೊಂಬೆಗೆ ರಾತ್ರಿ ಹೊತ್ತಿನಲ್ಲಿ ಹೆದರಿಕೊಂಡು ಆ ಪ್ರಾಣಿಗಳು ಬರುತ್ತಿರಲಿಲ್ಲವಂತೆ ಎಂಬುದು ಈಗ ಕಥೆ! ಈಗ ಪ್ರಾಣಿಗಳೂ ಇಲ್ಲ, ಇದ್ದ ಪ್ರಾಣಿಗಳಿಗೆ ಕಾಡಿಲ್ಲ ಹಾಗಾಗಿ ಹಗಲಿಡೀ ಸತ್ಯೋ ಇದ್ಯೋ ಎಂದು ಅಲ್ಲಿಲ್ಲಿ ಅಡಗಿ ಬದುಕುವ ಆ ಜೀವಿಗಳು ರಾತ್ರಿ ರೈತರ ಜಮೀನುಗಳಿಗೆ ನುಗ್ಗುತ್ತವೆ, ನುಗ್ಗಿ ನಿಲ್ಲಿಸಿದ ಬೆದರುಬೊಂಬೆಯನ್ನೇ ಕೆಡವುಹಾಕಿ ತಮ್ಮ ಮೇವನ್ನು ಹುಡುಕುತ್ತವೆ! ಇದು ಡಾರ್ವಿನ್ ವಿಕಾಸ ವಾದ.

ಬರುಬರುತ್ತ ಶಾಲೆ-ಕಾಲೇಜುಗಳಲ್ಲಿ ಕ್ಲಾಸ್ ಮೇಟ್ ಹುಡುಗ ಹುಡುಗಿಯರು ಈ ಹಬ್ಬವನ್ನು ಬಹಳ ಉತ್ಸುಕತೆಯಿಂದ ಆಚರಿಸುತ್ತಾರೆ, ಇದಕ್ಕೆ ಕಾರಣ ರಕ್ಷಾಬಂಧನದ ನೆಪದಲ್ಲಾದರೂ ಕೈಕೈ ಸೋಕಿಸಿಕೊಂಡು ಪುಲಕಿತರಾಗುವ ಬಯಕೆ ಎಂಬುದು ನನ್ನ ಅಭಿಪ್ರಾಯ; ಇದಕ್ಕೆ ಪುರಾವೆಯಾಗಿ ನನ್ನೆದುರೇ ಕೆಲವು ಜೋಡಿಗಳು ಹಾಗೆ ರಾಖಿ ಕಟ್ಟಿಕೊಂಡವರು ಈಗ ನಿಜಜೀವನದ ಜೋಡಿಗಳಾಗಿದ್ದಾರೆ, ಇನ್ನು ಕೆಲವರು ಉಪೇಂದ್ರನ ಕೆಟ್ಟ ಉಪದೇಶವನ್ನು ಸಿನಿಮಾದಿಂದ ಪಡೆದು ಪರಸ್ಪರ ದ್ವೇಷಿಕರಾಗಿ ಬದುಕುತ್ತಿದ್ದಾರೆ. ಇರಲಿ. ಇಲ್ಲಿ ರಾಖಿ ಕಟ್ಟುವುದು ಮುಖ್ಯವಲ್ಲ, ಅದರ ಹಿಂದಿನ ಮನೋಭೂಮಿಕೆ ಬಹಳ ಮುಖ್ಯ. ರಾಖಿ ಕಟ್ಟಿದ ತಕ್ಷಣ ಅವರು ಅಣ್ಣ-ತಂಗಿ ಆಗುತ್ತಾರೆಂಬ ಭಾವನೆ ಸುಳ್ಳು, ರಾಖಿ ಕಟ್ಟದಿದ್ದರೆ ಅವರು ಹಾಗೆ ನಡೆಯಲಾಗುವುದಿಲ್ಲ ಎಂಬ ಅನಿಸಿಕೆಯೂ ಅಷ್ಟೇ ಸುಳ್ಳು.


ಕಟ್ಟುವ ರಾಖಿ ಬಹಳ ಆಡಂಬರದ, ಬಹಳ ಅಲಂಕಾರವನ್ನು ಹೊಂದಿದ ಮತ್ತು ಬಹಳ ದುಬಾರಿಯ ದಾರವೇ ಆಗಬೇಕೆಂದೇನಿಲ್ಲ. ಕೇವಲ ಸಾದಾ ರೇಷ್ಮೆ ದಾರ ಕೂಡ ರಾಖಿಯಾಗಿ ಉಪಯೋಗಿಸಲು ಯೋಗ್ಯ. ಮಾರುಕಟ್ಟೆಯಲ್ಲಿ ಈಗ ಬಹಳ ವಿಧದ ರಾಖಿಗಳು ಸಿಗುತ್ತಿವೆ. ಸಂಗೀತ ಹಾಡುವ, ಪರಿಮಳ ಬೀರುವ, ಗಡಿಯಾರ ಹೊಂದಿರುವ, ಛಾಯಾಚಿತ್ರ ಹಚ್ಚಿರುವ ರಾಖಿಗಳೂ ನೋಡಸಿಗುತ್ತವೆ. ಇಲ್ಲಿ ಉದ್ದಿಮೆದಾರರು ತಮ್ಮ ಸೃಜನಶೀಲತೆ ಮೆರೆದು ಒಂದಷ್ಟು ಕಾಸು ಮಾಡಿಕೊಳ್ಳಲು ನೋಡುತ್ತಾರೆ. ಇವೆಲ್ಲದರ ಹಿಂದೆ ನಾವು ಭಾವಿಸಬೇಕಾದ್ದು ಒಂದೇ -ರಾಖಿ ಎಂಬುದು ರಕ್ಷಣೆಯ ದ್ಯೋತಕ.

ಉಪಾಕರ್ಮ ನಡೆಸುತ್ತಿರುವುದು

ಉಪಾಕರ್ಮಕ್ಕೆ ಬರೋಣ. ಇಂದಿನ ಜನಸಾಮಾನ್ಯರಲ್ಲಿ ಬಹಳ ಜನ ತಮಗೆಲ್ಲಾ ಜನಿವಾರ ಇರಲಿ ಎಂದು ಹಾಕಿಕೊಳ್ಳತೊಡಗಿದ್ದಾರೆ. ಇಲ್ಲೂ ಕೂಡ ಅದರ ಆಚರಣೆಗಿಂತ ಅದರ ತತ್ವಾನುಸರಣೆ ಮುಖ್ಯ. ಜನಿವಾರಕ್ಕೆ ಉಪವೀತ, ಯಜ್ಞೋಪವೀತ ಎಂದೂ ಕರೆಯುತ್ತೇವೆ. ಆಂಗ್ಲ ಭಾಷೆಯಲ್ಲಿ ಇದನ್ನು ಬೇರೆ ಹೆಸರು ಕಾಣದೆ ’ಸೇಕ್ರೆಡ್ ಥ್ರೆಡ್ ’ಎಂದು ಕರೆದುಕೊಂಡಿದ್ದೇವೆ --ನಾವೇ, ಯಾಕೆಂದರೆ ಆಂಗ್ಲರಲ್ಲಿ ಇದರ ಬಳಕೆಯಿಲ್ಲ ಅಲ್ಲವೇ ? ಶುದ್ಧ ಹತ್ತಿಯಿಂದ ಕೈಯ್ಯಲ್ಲಿ ತಕಲಿ ಎನ್ನುವ ವಸ್ತುವಿನಿಂದ ತಿರುಗಿಸಿ ದಾರಮಾಡಿ ಮೂರು ಮುಖ್ಯ ದಾರಗಳಲ್ಲಿ ಒಂದೊಂದರಲ್ಲೂ ಇನ್ನೂ ಮೂರು ಮೂರು ಸೇರಿಸಿ ಒಟ್ಟಿಗೆ ೨೭ ದೇವತೆಗಳನ್ನು ಆಹ್ವಾನಿಸಿ ಅದರಲ್ಲಿ ಅರ್ಘ್ಯಪಾದ್ಯಾದಿಗಳಿಂದ ಪೂಜಿಸಿ ಆಮೇಲೆ ಅದನ್ನು ಸೂರ್ಯನ ಅಪ್ಪಣೆ ಪಡೆದು, ಭೂಮಿತಾಯಿಮೇಲೆ ಇರಿಸಿ ನಮಸ್ಕರಿಸಿ, ತಾನು ತತ್ವಾವಲಂಬಿ ಎಂಬುದನ್ನು ಅಗ್ನಿ ಕಾರ್ಯದ ಮೂಲಕ ಅಗ್ನಿಗೆ ತಿಳಿಹೇಳಿ ಆಮೇಲೆ ಧರಿಸಬೇಕಾಗುತ್ತದೆ. ಹೀಗೆ ಧರಿಸಿದ ಮೇಲೆ ಅದಕ್ಕೆ ಪೂರಕವಾದ ಕೆಲವು ಆಚರಣೆಗಳು ಸದಾ ಇರುತ್ತವೆ. ನಾವು ಎಲ್ಲೇ ಇದ್ದರೂ ಅವುಗಳನ್ನು ಬಿಡುವಂತಿಲ್ಲ. ನಮ್ಮ ಮೈಮೇಲೆ ದೇವರನ್ನು ಧರಿಸಿದ್ದೇವೆ ಎಂದೇ ತಿಳಿದು ವರ್ತಿಸಬೇಕಾಗುತ್ತದೆ. ಅದರಲ್ಲಿರುವ ದೇವತೆಗಳು ನಮ್ಮ ಪ್ರತೀ ಕೆಲಸಕ್ಕೆ ಸಾಕ್ಷಿಯಾಗಿ ನಿಲ್ಲುತ್ತಾರೆ! ಹೀಗಾಗಿ ಯಾರು ಯಾವಾಗ ಹೇಗೆ ಬೇಕೆಂದರೂ ಧರಿಸಿದ ದಾರ ಜನಿವಾರವಾಗುವುದಿಲ್ಲ. ಅದರಂತೇ ಧರಿಸಿದ ದಾರದ ಮಹತ್ವ ತಿಳಿಯದೇ ಬರೇ ಸುಮ್ಮನೆ ಎಲ್ಲರೂ ಧರಿಸುತ್ತಾರೆ ತನಗೂ ಇರಲಿ ಎಂದು ಧರಿಸಿದರೆ ಅದು ನ್ಯಾಷನಲ್ ವೇಸ್ಟು!

ಅರಿತರದು ಬಲು ಹಗುರ ಈ ದಾರ ಜನಿವಾರ
ಅರಿವಿರದೆ ಧರಿಸಿದರೆ ಅದು ಬಹಳ ಭಾರ
ಪರಹಿತದ ನೆಲೆಯಲ್ಲಿ ಸರಿಯಾಚರಣೆ ನಡೆಸಿ
ಪರಿಪಕ್ವತೆಯ ಪಡೆಯೋ | ಜಗದಮಿತ್ರ

ಜಗದಮಿತ್ರ ಸಾರಿದ- ನೀವು ನೋಡಿದಿರಿ, ಆಸ್ತಿಕನೊಬ್ಬ ದೇವರಲ್ಲಿ ಯಾವ ಭಕ್ತಿ ಶ್ರದ್ಧೆ ಹೊಂದಿರುತ್ತಾನೋ ಅಷ್ಟೇ ಆಸ್ಥೆಯನ್ನು ಈ ಯಜ್ಞೋಪವೀತದ ಮೇಲೂ ಇಡಬೇಕಾಗುತ್ತದೆ. ಯಜ್ಞದಲ್ಲಿ ಅಗ್ನಿಗೆ ನಾವು ವಚನವಿತ್ತು ಧರಿಸುವ ಅತಿ ವಿಶಿಷ್ಟ ದಾರ ಇದಾಗಿರುವುದರಿಂದ ನಾವು ಮಲ-ಮೂತ್ರಾದಿ ವಿಸರ್ಜನಾ ಕಾರ್ಯಗಳಿಗೆ ಹೋದಾಗ ಅದನ್ನು ’ ಸಸ್ಪೆಂಡ್ ಮೋಡ್ ’ ನಲ್ಲಿ ಇಟ್ಟುಕೊಳ್ಳುವ ಗೌರವದ ಕ್ರಮವೂ ಇದೆ! ಇಂತಹ ದಾರವನ್ನು ಧರಿಸಿದ ಮೇಲೆ ಎಂತೆಂತಹ ಆಹಾರವನ್ನು ತಿನ್ನಬೇಕು-ಯಾವ ಆಹಾರ ವರ್ಜ್ಯ ಎಂಬುದೂ ಕೂಡ ವೇದಮಂತ್ರಗಳಲ್ಲೇ ಹೇಳಲ್ಪಟ್ಟಿದೆ. ಇದೂ ಒಂದು ಹಂತದ ಸಾಧನೆಯಾದ್ದರಿಂದ ಎಲ್ಲರಿಗೂ ಇದು ರುಚಿಸುವುದಿಲ್ಲ. ಪ್ರಾಯಶಃ ’ ನೋ ಸ್ಟ್ರಿಂಗ್ಸ್ ಅಟ್ಯಾಚ್ಡ್ ’ ಎಂಬ ಮನೋವೃತ್ತಿಯ ಜನರಿಗೆ ಆ ಆಂಗ್ಲ ಗಾದೆ ಹಿಡಿಸುತ್ತದೆ ಮತ್ತು ಅಂಥವರಿಗೆ ಈ ಜನಿವಾರ ಯೋಗ್ಯವಲ್ಲ.

ಉಪನಯದ ಆದಿಭಾಗ -ಕಲಶ ಸ್ನಾನ

ಜನಿವಾರ ಧರಿಸಿದ ವ್ಯಕ್ತಿ ನಿತ್ಯವೂ ಸ್ನಾನ ಮಾಡಲೇ ಬೇಕು. ಮುಡಿಯಿಂದ-ಅಡಿಯವರೆಗೂ ಸ್ನಾನವಾದರೆ ಒಳ್ಳೆಯದು, ಅದಿಲ್ಲಾ ತಲೆಯೊಂದನ್ನುಳಿದು ಮಿಕ್ಕುಳಿದ ದೇಹವನ್ನು ನೀರಿನಿಂದ ತೊಳೆದುಕೊಳ್ಳಬೇಕು. ನಾವು ಸ್ನಾನಮಾಡುವಾಗ ೨೭ ದೇವತೆಗಳೂ ಸ್ನಾನಮಾಡುತ್ತಾರೆ ಎಂಬ ಕಲ್ಪನೆಯಿರಬೇಕು. ನಮ್ಮ ಪೂರ್ವಜರು ಇದನ್ನೆಲ್ಲಾ ಎಷ್ಟು ಚೆನ್ನಾಗಿ ನಮಗೆ ಹೇಳಿದರು ನೋಡಿ. ಹಲವು ಪವಿತ್ರನದಿಗಳ ನೀರನ್ನು ನಾವು ಸ್ನಾನಮಾಡಿದರೆ ಪುಣ್ಯ ಎಂದರು, ಆದರೆ ದಿನವೂ ಎಲ್ಲಾನದಿಗಳಿಗೂ ಭೇಟಿನೀಡಲು ಸಾಧ್ಯವೇ? ಇಲ್ಲವಲ್ಲ! ಹೀಗಾಗಿ ಅದಕ್ಕೆ ಪರ್ಯಾಯವಾಗಿ ಆ ಪುಣ್ಯನದಿಗಳನ್ನು ನಾವು ಸ್ನಾನಮಾಡುವ ನೀರಿಗೇ ಆಹ್ವಾನಿಸಿ ಅದರಿಂದ ಸ್ನಾತರಾಗಿ ಎಂದರು.

ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರೀ ಜಲೇಸ್ಮಿನ್ ಸನ್ನಿಧಿಂ ಕುರು ||

-- ಇದು ಆ ಪುಣ್ಯನದಿಗಳಲ್ಲಿ ಪ್ರಾರ್ಥನೆ. ತಾಯಂದಿರಾದ ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದಾ, ಕಾವೇರಿ ಇನ್ನೂ ಹಲವು ನದಿಗಳೇ ನೀವೆಲ್ಲ ಬಂದು ಈ ನೀರಿನಲ್ಲಿ ಸೇರಿರೆಂದು ನಿಮ್ಮಲ್ಲಿ ವಿಜ್ಞಾಪನೆ. ಎಂತಹ ಸುಮಧುರ ಅನುಭವ. ಬೆಳಗಿನ ಜಾವ ಎದ್ದು, ದೇವರನ್ನು ನೆನೆಸಿ, ಒಳ್ಳೆಯ ಮನಸ್ಸಿನಿಂದ ಈ ಪ್ರಾರ್ಥನೆಯೊಂದಿಗೆ ಶುದ್ಧನೀರಿನಲ್ಲಿ ಸ್ನಾನಮಾಡಿ ಮುಂದಿನ ನಮ್ಮ ನಿತ್ಯನೈಮಿತ್ತಿಕ ದೇವಪೂಜಾದಿ ಕಾರ್ಯಗಳಿಗೆ ಅನುವುಮಾಡಿಕೊಳ್ಳಬೇಕು. ಹೀಗೆ ನಾವು ದೇವ ಪೂಜೆ ಮಾಡಿದ ನಂತರ ಹತ್ತಿರದಲ್ಲಿ ನಮಗೆ ಲಭ್ಯವಿರುವ ಗೋವನ್ನು ಪೂಜಿಸಿ ಅದಕ್ಕೆ ತಿನ್ನಲು ಸ್ವಲ್ಪ ಅಕ್ಕಿಯನ್ನು ನೀಡಬೇಕು. ಇವತ್ತಿಗೆ ಹಲವರಿಗೆ ಅಗ್ನಿಕಾರ್ಯ ಸಾಧ್ಯವಿಲ್ಲವಾಗಿದೆ, ಆದರೆ ಪ್ರತೀ ವ್ಯಕ್ತಿಗೂ ಮಾನಸಪೊಜೆ ಎಂಬುದೊಂದಿದೆಯಲ್ಲ, ಅ ಕ್ರಮದಂತೇ ಅಗ್ನಿಗೆ ಮಾನಸ ಪೂಜೆ ನೇರವೇರಿಸಿ ನಾವು ಮಾಡಲೊಪ್ಪಿದ ಕಾರ್ಯದಲ್ಲಿ ಚ್ಯುತಿಯಾಗಿಲ್ಲದ ಭಾವವನ್ನು ಪಡೆಯಬೇಕಾಗುತ್ತದೆ. ಇಷ್ಟೆಲ್ಲಾ ಹಕ್ಕು-ಬಾಧ್ಯತೆಯಿರುವ ಈ ದಾರದ ನಿಜಸ್ವರೂಪವನ್ನು ಅರಿತ ನೀವೇ ಹೇಳಿ ನಮ್ಮಲ್ಲಿ ಈಗ ಎಷ್ಟು ಜನಸಾಮಾನ್ಯರು ಇದನ್ನು ಧರಿಸಲು ಯೋಗ್ಯರು?


ಉಪನಯನದಲ್ಲಿ ಮೊದಲ ಬಾರಿಗೆ ಜನಿವಾರ ಧಾರಣೆ

ಜನಿವಾರವನ್ನು ಬಹುತೇಕ ೭ ವರ್ಷ ವಯಸ್ಸಿನ ಒಳಗೆ ಹಾಕುವುದಿಲ್ಲ. [ಧರಿಸುವ ಮಗುವಿಗೆ ಮಾತಿನಲ್ಲಿ ಸ್ಪಷ್ಟತೆ ಬರಬೇಕು, ಮಂತ್ರದ ಉಚ್ಚಾರಗಳಲ್ಲಿ ಲೋಪ/ದೋಷ ಉಂಟಾಗಬಾರದು ಎಂಬ ಕಾರಣಕ್ಕಾಗಿ.ವೇದ ಮಂತ್ರಗಳನ್ನು ಮತ್ತು ಯೋಗಾಸನಗಳನ್ನೂ ತಪ್ಪಾಗಿ ಬಳಸಿದರೆ ವ್ಯತಿರಿಕ್ತ ಪರಿಣಾಮ ಕಟ್ಟಿಟ್ಟ ಬುತ್ತಿ ! ] ಮೊದಲಾಗಿ ಅದನ್ನು ಹಾಕುವಾಗ ತಂದೆಯಿಂದ ಮಗನಿಗೆ ಅದು ಬ್ರಹ್ಮೋಪದೇಶ ಸಂಸ್ಕಾರದ ಮೂಲಕ ಲಭ್ಯವಾಗಬೇಕಾಗುತ್ತದೆ. ಆಗ ತಂದೆಯೇ ಮಗನಿಗೆ ಗುರುವಾಗುತ್ತಾನೆ. ಬ್ರಹ್ಮೋಪದೇಶ ಬೋಧಿಸುತ್ತಾನೆ. ಬ್ರಹ್ಮೋಪದೇಶದಲ್ಲಿ ಗಾಯತ್ರೀ ಮಂತ್ರ ಸೇರಿದಂತೆ ಅಷ್ಟಾಕ್ಷರೀ ಮತ್ತು ಪಂಚಾಕ್ಷರೀ ಮಹಾಮಂತ್ರಗಳೂ ಸೇರಿರುತ್ತವೆ. ಇಲ್ಲಿ ಒಂದನ್ನು ನೆನೆಪಿಡಿ- ಈ ಉಪದೇಷ ತಂದೆಯ ಹೊರತು ಬೇರಾರಿಂದಲೂ ಪಡೆಯಲು ಅರ್ಹವಾಗಿರುವುದಿಲ್ಲ. ಈ ಗೌರವವೇನಿದ್ದರೂ ತಂದೆಗೇ ಸಲ್ಲಬೇಕಾಗುತ್ತದೆ. ಒಳ್ಳೆಯ ತಂದೆಯಿಂದ, ಒಳ್ಳೆಯ ಮುಹೂರ್ತದಲ್ಲಿ, ಒಳ್ಳೆಯ ಮಗನಿಗೆ ಉಪದೇಶ-ಯಜ್ಞ ಸಹಿತ ಧರಿಸಲು ಅನುಮೋದಿಸುವ ದಾರವೇ ಜನಿವಾರ. ಮೊದಲಾಗಿ ಒಮ್ಮೆ ಇದರ ಧಾರಣೆಯಾದ ಮೇಲೆ ಜೀವನ ಪೂರ್ತಿ ಅದನ್ನೇ ಹಾಗೇ ಇಟ್ಟುಕೊಳ್ಳಲು ಸಾಧ್ಯವೇ ? ಅದು ಹತ್ತಿಯದಾದ್ದರಿಂದ ಹಳೆಯದಾಗುತ್ತದೆ, ಬಣ್ಣಗೆಡುತ್ತದೆ, ಅದರಲ್ಲಿ ಕೊಳೆಸೇರುತ್ತದೆ ಈ ಎಲ್ಲ ಅನಿವಾರ್ಯ ಸಹಜ ಪ್ರಕ್ರಿಯೆಗಳಿಂದ ಕಳೆಗುಂದುವ ಜನಿವಾರವನ್ನು ಬದಲಾಯಿಸಿ ಮತ್ತೆ ಅಗ್ನಿಕಾರ್ಯದ ಮುಖೇನ ಹೊಸದನ್ನು ಪಡೆಯುವ ಕ್ರಮವೇ ಉಪಾಕರ್ಮ! ಇದನ್ನು ಬಿಟ್ಟು ನಮ್ಮಲ್ಲಿ ನಮ್ಮ ಕುಟುಂಬವರ್ಗದಲ್ಲಿ ಯಾರಾದ್ರೂ ಹಡೆದರೆ ಅಥವಾ ಸತ್ತರೆ ಆಗ ತಗಲಬಹುದಾದ ಆಶೌಚವನ್ನು, ಸೂತಕವನ್ನು ಕಳೆದುಕೊಳ್ಳುವ ದಿನ ಜನಿವಾರವನ್ನು ಬದಲಿಸಬೇಕಾಗುತ್ತದೆ. ಹೀಗೇ ಜನಿವಾರಕ್ಕೆ ಇವೆಲ್ಲಾ ಕಟ್ಟು-ನಿಟ್ಟಿನ ನಿಬಂಧನೆಗಳು ಇರುತ್ತವೆ. ಇದ್ಯಾವುದೂ ಇರದ ದಾರವನ್ನು ಅಲಂಕಾರಕ್ಕಾಗಿ ಧರಿಸಿದರೆ ಆಗ ’ಆ ದಾರ ಜೀವನದಿ ಬಲು ಭಾರ’ ಎಂಬ ಸ್ಥಿತಿ ಉಂಟಾಗುತ್ತದೆ.

ಇವತ್ತಿನ ದಿನಮಾನ ಬದಲಿರುವುದರಿಂದ ಕೆಲವರು ಕೇಳಬಹುದು " ನಮಗೆ ಜನಿವಾರ ಧರಿಸುವ ಯೋಗ್ಯತೆಯಿಲ್ಲವೇ ? " ಇದೆಯಪ್ಪಾ ಎಲ್ಲರಿಗೂ ಇದೆ, ಆದರೆ ಮೇಲೆ ನಾನು ಸ್ವಲ್ಪದರಲ್ಲೇ ಹೇಳಿದೆನಲ್ಲ ಅದನ್ನು ಅನುಸರಿಸುತ್ತೀರಾದರೆ ನೀವು ಜನಿವಾರ ಧರಿಸಲು ಬಹಳಯೋಗ್ಯರಾಗಿರುತ್ತೀರಿ. ಅದಿಲ್ಲಾ ನೀವದನ್ನು ಧರಿಸಿದರೆ ಯಾವ ಪ್ರಯೋಜನಕ್ಕೂ ಬಾರದು. ಸರಿಯಾದ ಆಚರಣೆಯಲ್ಲಿದ್ದು ಉಪನೀತನಾದವನಿಗೆ ಅದು ಅಗೋಚರವಾದ ಶಕ್ತಿಯನ್ನು ಸ್ಪುರಿಸುತ್ತದೆ! ಶರೀರದಲ್ಲಿ ಕಾಸ್ಮಿಕ್ ರೇಡಿಯೇಶನ್ ಆಗುತ್ತದೆ!

ಹಿಂದಕ್ಕೆ ಗುರುಗೋವಿಂದ ಭಟ್ಟರು ಸಂತ ಶಿಶುನಾಳ ರೀಫ ಸಾಹೇಬರಿಗೆ ಉಪನಯನ ಮಾಡಿದ್ದರಂತೆ! ಆ ಕಾಲಕ್ಕೆ ರೀಫರ ಬಾಯಿಂದ ಬಂದ ಭಕ್ತಿಪೂರ್ವಕ ಹಾಡು --

ಹಾಕಿದ ಜನಿವಾರವಾ ಸದ್ಗುರುನಾಥ
ಹಾಕಿದ ಜನಿವಾರವಾ

ಹಾಕಿದ ಜನಿವಾರ ನೂಕಿದ ಭವಭಾರ
ಲೋಕದಿ ಬ್ರಹ್ಮಜ್ಞಾನ ನೀ ಪಡೆಯೆಂದೂ

ಹಾಕಿದ ಜನಿವಾರವಾ.......

---ರೀಫರಾದರೇನಾಯ್ತು ಅವರಿಗೆ ಆತ್ಮಾವಲೋಕನದ ಅನುಭವವಾಗಿತ್ತು. ಅವರಿಗೆ ಸಿಕ್ಕ ಗುರುವಿನ ಮಹತ್ತು ಹಾಗಿತ್ತು. ಸಮಾಜವನ್ನೇ ಎದುರುಹಾಕಿಕೊಂಡರೂ ತನ್ನನ್ನು ನಂಬಿದ ಶಿಷ್ಯನನ್ನು ಕೈಬಿಡಲಿಲ್ಲ ಆ ಸದ್ಗುರು! ರೀಫರ ಆತ್ಮಾನುಭೂತಿ ನೋಡಿದ ಗೋವಿಂದ ಭಟ್ಟರು ಅವರಿಗೆ ಉಪನಯನ ಸಂಸ್ಕಾರವನ್ನು ಕೊಡುತ್ತಾರೆ. ರೀಫರ ಬಗ್ಗೆ ತಮಗೆಲ್ಲಾ ಹೊಸದಾಗಿ ಹೇಳಬೇಕೇನು ? ಗೊತ್ತಿರುವ ವಿಷಯ ಅಲ್ಲವೇ? ಅದೇ ರೀತಿ ಇಂದಿಗೂ ಸಹಿತ ಇಂತಹ ಮಂಗಳ ಕಾರ್ಯಕ್ಕೆ ನಮ್ಮಲ್ಲಿ ಗುರುಮುಖಗಳಿವೆ.

ಜನಿವಾರ ಹಾಕಿಸಿಕೊಳ್ಳುವ ವರೆಗೆ ಒಳ್ಳೆಯ ಆಚರಣೆಯಲ್ಲಿದ್ದು ಆಮೇಲೆ ಅದನ್ನು ತೊರೆದರೆ ಜನಿವಾರ ಹಾಕಿದವರಿಗೆ ಅದರ ಲೋಪದೋಷ ತಟ್ಟುತ್ತದೆ. ಇದು ಜಾಮೀನು ವ್ಯವಹಾರದಂತಿರುತ್ತದೆ--ತಿಳಿದಿರಲಿ. ಯಾವ ಮಂತ್ರ-ತಂತ್ರ ಏನೇ ಇದ್ದರೂ ಉಪದೇಶಪಡೆದಾತ ಸರಿಯಾಗಿ ನಡೆಸದಿದ್ದಲ್ಲಿ ಉಪದೇಶ ಕೊಟ್ಟಾತನಿಗೆ ಗ್ರಹಚಾರ ಪ್ರಾರಂಭವಾಗುತ್ತದೆ! ಇದಕ್ಕಾಗಿ ಯಾರಿಗಾದರೂ ಜನ್ಮಪೂರ್ತಿ ತಾನು ಪೂರಕ ಆಚರಣೆಯಲ್ಲಿರುತ್ತೇನೆಂಬ ನಂಬಿಕೆ ’ಒಳಗಿನಿಂದ’ ಬರುತ್ತಿದ್ದರೆ, ಅದು ಅಷ್ಟು ಬಲವಾಗಿದ್ದರೆ ಅಂಥವರು ಜನಿವಾರ ಧರಿಸಿಬಹುದು. ಅದಕ್ಕಾಗಿ ನಮ್ಮ ’ವೇದಸುಧೆ’ ಬಳಗ ಕಾರ್ಯತತ್ಪರವಾಗಿದೆ. [ಇಲ್ಲಿ ಯಾವುದೇ ಜಾತಿ, ಜನಾಂಗ ಇವುಗಳ ವೈಷಮ್ಯ ಇರುವುದಿಲ್ಲ, ಆದರೆ ಮೇಲಿನ ಕೆಲವು ಕಟ್ಟುಪಾಡುಗಳು ನಮ್ಮ ಸಂವಿಧಾನದಂತೇ ನಡೆಸಲೇ ಬೇಕಾದವು!]

ಬ್ರಹ್ಮೋಪದೇಶಕ್ಕೆ ಇನ್ನೊಂದು ಹೆಸರು ಉಪನಯನ. ನಮಗೆ ಹುಟ್ಟುವಾಗ ದೇವರು ನಯನಗಳೆರಡನ್ನು ಕೊಟ್ಟಿಯೇ ಇರುತ್ತಾನೆ. ಜನಿವಾರ ಹಾಕಿದ ಮೇಲೆ ನಮಗೆ ನಮ್ಮ ಅರ್ಹತೆಯ ವ್ಯಾಪ್ತಿ ವೃದ್ಧಿಸುತ್ತದೆ, ಜ್ಞಾನಮಾರ್ಗದಲ್ಲಿ ನಮಗೆ ಕಣ್ಣು ದೊರೆತಂತೇ ಮುಂದಿನ ನಮ್ಮ ಅಧ್ಯಯನ ಅಧ್ಯಾಪನ ಮೊದಲಾದ ಕಾರ್ಯಗಳಿಗೆ, ನಮ್ಮ ಜ್ಞಾನಾರ್ಜನೆಗೆ ಇದು ಇನ್ನೊಂದು ನಯನ [ಚಕ್ಷು, ಕಣ್ಣು] ಎಂಬ ಅರ್ಥದಲ್ಲಿ ಹೊಸದಾಗಿ,ಮೊದಲಾಗಿ ಜನಿವಾರ ಧರಿಸುವ ಈ ಸಮಾರಂಭಕ್ಕೇ ಉಪನಯನ ಎಂದರು!

ಎಲ್ಲರೂ ಮಾಡುತ್ತಾರೆಂದು ತಾವೂ ಮಾಡ ಹೊರಟಿದ್ದಕ್ಕೆ ಒಂದು ಉತ್ತಮ ಉದಾಹರಣೆಯನ್ನು ’ಬಿಸಿಲು ಬೆಳದಿಂಗಳು’ ಅಂಕಣದಲ್ಲಿ ನಮ್ಮ ಆದ್ಯರೂ ಆರಾಧ್ಯರೂ ಆದ ಶ್ರೀ ಶ್ರೀ ತರಳಬಾಳು ಸ್ವಾಮಿಗಳವರು ದಯಪಾಲಿಸಿದ್ದನ್ನು ನಿಮ್ಮ ಮುಂದೆ ನೆನಪಿಸಿಕೊಳ್ಳಲು ಇಷ್ಟಪಡುತ್ತೇನೆ-

ಒಮ್ಮೆ ನಮ್ಮ ಸರಕಾರೀ ಸರ್ವೇ ಮತ್ತು ರೆವಿನ್ಯೂ ಡಿಪಾರ್ಟ್ಮೆಂಟಿನ ಜನ ಒಟ್ಟಾಗಿ ಸತ್ಯನಾರಾಯಣ ಪೂಜೆ ಮಾಡಿಸಿದರಂತೆ. ಪೂಜೆಯೆಲ್ಲಾ ಸಾಂಗವಾಗಿ ಇನ್ನೇನು ಮುಗಿಸುವಾಗ ಪುರೋಹಿತರು ಸಹಜವಾಗಿ ಮಂತ್ರ ಹೇಳಿದರು

" ಸರ್ವೇ ಜನಾಃ ಸುಖಿನೋ ಭವಂತು "

ತಕಳಿ ಸಮಸ್ಯೆ ಬಂದಿದ್ದೇ ಅಲ್ಲಿ! ಸಂಸ್ಕೃತದ ಗಂಧಗಾಳಿಯೂ ಇಲ್ಲದ ಅಲ್ಲಿರುವವರಿಗೆ ಅವರು ಏನು ಹೇಳುತ್ತಿದ್ದಾರೆಂಬುದರ ಅರ್ಥವಂತೂ ಆಗುತ್ತಿರಲಿಲ್ಲ, ಆದರೆ ’ ಸರ್ವೇ ಜನಾ ’ ಎಂದಿದ್ದರಲ್ಲ ಹೀಗಾಗಿ ರೆವಿನ್ಯೂ ಜನರ ತಕರಾರು ಪ್ರಾರಂಭವಾಯಿತು. ಅವರು ಪುರೋಹಿತರನ್ನು ಗದರಿಕೊಂಡರು.

" ಇಲ್ಲಿ ಸರ್ವೇ ಮತ್ತು ರೆವಿನ್ಯೂ ಎರಡೂ ಕಡೆಯ ಜನರಿದ್ದೇವೆ, ಆದರೆ ನೀವು ಸರ್ವೇ ಜನರಿಗೆ ಮಾತ್ರ ಅದು ಹೇಗೆ ಸುಖವಾಗಲಿ ಅಂದ್ರಿ "

ಪುರೋಹಿತರಿಗೆ ಒಂದು ಕಡೆ ನಗು ಮತ್ತು ಇನ್ನೊಂದು ಕಡೆ ಬೆವರು ಎರಡೂ ಬಂದವು. ಅಂತೂ ಕೊನೆಗೆ ಇಲ್ಲದ ಮಂತ್ರವನ್ನು ಕಟ್ಟಿ ಹೇಳಬೇಕಾದುದು ಅನಿವಾರ್ಯವಾಗಿ ಅವರು

" ರೆವಿನ್ಯೂ ಜನಾಃ ಸುಖಿನೋ ಭವಂತು " ಅಂತ ಹೇಳಿದರಂತೆ.

ಹೀಗೇ ನೋಡಿ ಎಲ್ಲರೂ ಮಾಡುತ್ತಾರೆಂದು ಅದರ ಮೌಲ್ಯ ತಿಳಿಯದೇ ನಾವೂ ಮಾಡಹೊರಟರೆ ಇಂತಹ ಹಲವಾರು ಹಾಸ್ಯಾಸ್ಪದ ಘಟನೆಗಳು ನಡೆಯುತ್ತಿರುತ್ತವೆ. ಗೊತ್ತಿಲ್ಲದ್ದನ್ನು ತಿಳಿಸಿಕೊಡಲು ಜ್ಞಾನ ದೀವಿಗೆಗಳಾದ ಹಲವು ಪುಸ್ತಕಗಳಿವೆ, ಪ್ರಾಜ್ಞರು ಅನೇಕರು ನಮ್ಮ ನಡುವೆಯೇ ಬದುಕುತ್ತಿರುತ್ತಾರೆ, ಅವರನ್ನು ಕೇಳಿ ತಿಳಿದರೆ ತಪ್ಪೇನಿಲ್ಲವಲ್ಲ ! ಋಜುಮಾರ್ಗದವರಾದ ನಾವು ಎಲ್ಲವನ್ನೂ ಆಚರಿಸುವ ಮೊದಲು ಸರಿಯಾಗಿ ಅರಿಯೋಣ, ಅರ್ಥೈಸೋಣ, ಆಮೇಲೆ ಆಚರಿಸೋಣ -ಸರಿಯಾಗಿ, ಸಮರ್ಪಕವಾಗಿ ಅಲ್ಲವೇ ?


ಎಲ್ಲರಿಗೂ ರಕ್ಷಾಬಂಧನದ ಶುಭಾಶಯಗಳು ಮತ್ತು ಈ ರಕ್ಷಾಬಂಧನ ಎಲ್ಲರಿಗೂ ಪರಸ್ಪರ ರಕ್ಷೆಯನ್ನೀಯಲಿ, ದಿವ್ಯ ಚಕ್ಷುವಿನಂತಹ ’ಉಪನಯನ’ ವನ್ನೀಯಲಿ ಎಂದು ಆಶಿಸುತ್ತೇನೆ. ಜ್ಞಾನಕ್ಕಾಗಿ ಎಲ್ಲರೂ ಓದೋಣ, ಬೆಳೆಯೋಣ- ಬೆಳಗೋಣ ನಮ್ಮ ಮುಂದಿನ ಸಮಾಜವನ್ನು,

ಸರ್ವೇ ಭವಂತು ಸುಖಿನಃ
ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿತ್ ದುಃಖವಾಗ್ಭವೇತ್ ||

|| ಸರ್ವೇ ಜನಾಃ ಸುಖಿನೋ ಭವಂತು | ಸಮಸ್ತ ಸನ್ ಮಂಗಲಾನಿ ಭವಂತು ||

Sunday, August 22, 2010

ಕಾವ್ಯನಯನ
[ಕಾವ್ಯದಲ್ಲಿ ಜಲನಯನ-ಗುಬ್ಬಿ ಎಂಜಲು ಕೃತಿಗಳ ಬಿಡುಗಡೆ ಸಮಾರಂಭದ ನೆನೆಪು ; ಇಲ್ಲಿ ಶ್ರೀ ಡುಂಢಿರಾಜ್ ಮತ್ತು ಹಾಲ್ದೊಡ್ಡೇರಿ ಸುಧೀಂಧ್ರರು ಪರಸ್ಪರ ಎರಡೂ ಕೃತಿಗಳ ಬಗ್ಗೆ ಹೇಳಿದ್ದನ್ನ ಬಿಂಬಿಸಿದ್ದೇನೆ !]

ದೀಪಿಕಾ ಹಾಡುತ ದೇವರ ನೆನೆದಿರೆ
ವ್ಯಾಪಿಸಿ ಕೊಂಡರು ಆಸನದಿ
ರೂಪವ ತೋರುವ ಮೊದಲಿಗೆ ಗಣ್ಯರು
ದೀಪವ ಬೆಳಗುತ ಸ್ಟೇಜಿನಲಿ

ಸುಗುಣ ಮಹೇಶರು ಮುಗುದಮನದಿಂದ
ನಗುನಗುತಲಿ ಮುನ್ನಡೆಸಿದರು
ಬಗೆಬಗೆ ಜನಗಳ ಪರಿಚಯ ಹೇಳುತ
ಲಗುಬಗೆಯಲಿ ಓಡಾಡಿದರು !

’ಗುಬ್ಬಿ ಎಂಜಲು’ ಬಿಡಿಸುತ ರಂಜಿಸಿ
ಅಬ್ಬರದುಕ್ಕಿಸಿ ಜೋಕುಗಳ
ತಬ್ಬಿಬ್ಬಾಗುವ ಹನಿಗವನಂಗಳ
ಹಬ್ಬಿಸಿ ನಲಿದರು ಡುಂಢಿಗಳು

ಹಾಲ್ದೊಡ್ಡೇರಿಯ ಸುಧೀಂಧ್ರ ನುಡಿದರು
ಜಾಲತಾಣಗಳು ಬಲು ವಿಹಿತ
ಸಾಲಂಕೃತ ವೇದಿಕೆಯಲಿ ಅರಳಿಸಿ
ಓಲೆಯತಿರುವುತ ’ಜಲನಯನ’

ಭೀಷಣವಲ್ಲದ ಮುಖ್ಯ ಭಾಷಣಗಳ್
ಆಶಯಗಳ ತಾವ್ ತೆರೆದಿಡುತ
ರಾಶಿ ಅನುಭವದ ಪಾಕವ ಇಳಿಸುತ
ಶೈಶವ ನೆನೆದರು ಶಾಸ್ತ್ರಿಗಳು

ಪಾಕುಮಾಮ ಸಹ ಮಿತ್ರರ ಸೇರಿಸಿ
ಚಾಕಚಕ್ಯತೆಯ ಮೆರೆದಿಹರು
ಬೇಕಾಗಿಲ್ಲದ ವಸ್ತುವ ನೀಡುತ
ಪೀಕಲಾಟದಲಿ ನಗಿಸಿಹರು !

ಜೋಗದ ಸಿರಿಯನು ತಂದು ಬಡಿಸಿದರು
ರಾಗದಿ ಹಾಡುತ ’ಕೊಳಲ’ಜನ !
ವೇಗದಿ ಈ ಕಥೆ ಬ್ಲಾಗಲಿ ಹಾಕುತ
ಭೋಗಿಸಲಿಟ್ಟರು ಪರಾಂಜಪೆ !

ಇಂತೀಪರಿಯಲಿ ನಡೆಯಿತು ಸಂಭ್ರಮ
’ತುಂತುರು’ ಹನಿಗಳ ಸೇಚಿಸುತ
ಕುಂತರು ನಿಂತರು ಮರೆಯಲಸಾಧ್ಯವು
ಎಂತಹ ಸ್ವರ್ಗವು ಬ್ಲಾಗಿನದು !

Saturday, August 21, 2010

ಮೋಡದ ದಿಬ್ಬಣ !




ಮೋಡದ ದಿಬ್ಬಣ
!

ಶುದ್ಧ ಶುಭ್ರ ತಿಳಿ ನೀಲಾಗಸದಲಿ
ಎದ್ದಿದೆ ಮೋಡದ ದಿಬ್ಬಣವು
ಮುದ್ದಿನ ಮದುಮಗನಂತಿಹ ಮೋಡವು
ಗೆದ್ದ ಸಾಹಸದಿ ಮುಂದಿಹುದು !

ತುಂಬಾ ಸಡಗರ ಆಹಾ ಅಬ್ಬರ
ಅಂಬರ ಮೋಡದ ಬಂಧುಗಳು
ರಂಭೆ ಊರ್ವಶಿ ತಿಲೋತ್ತಮೆಯ ಮುಖ
ಹಂಬಲಿಸುವ ಹೆಣ್ ತುಣುಕುಗಳು !

ನಡುನಡು ಮಕ್ಕಳು ನಡೆನಡೆದೋಡುತ
ಹುಡುಗಾಟವ ತಾವ್ ಬಿಂಬಿಸಿವೆ
ಗುಡುಗಿನ ಶಾಸ್ತ್ರವೇ ಮಂಗಳ ವಾದ್ಯವು
ಎಡಬಿಡದೆತ್ತಲೋ ಸಾಗುತಿವೆ !

ಬಣ್ಣದ ಸೀರೆಯ ಗರತಿಯರಿರುವರು
ನುಣ್ಣನೆ ಜಾರುತ ಮಧ್ಯದಲಿ
ಕಣ್ಣು ಹೊಡೆದು ಕೋಲ್ಮಿಂಚು ಹರಿಸುತಿಹ
ಸಣ್ಣ ಹೊಟ್ಟೆ ಹುಡುಗಿಯರಿಹರು !

ಸಾವಿರ ಸಂಖ್ಯೆಯ ಮೋಡಜನಂಗಳು
ಆವರಿಸುತ ಬಾನಂಗಳದಿ
ನಾವೆಲ್ಲರೂ ನೆಂಟರು ಈ ಮದುವೆಗೆ
ಜಾವದಲೇ ಬಂದಿಹೆವೆನುತ !

ತುಂತುರು ಹನಿಗಳ ಮಂಗಳ ಸೇಚನ
ನಿಂತಿಹ ಭೂಮಿಯ ಜನಗಳಿಗೆ
ಸಂತೆಯು ಸೇರಿದ ಸಂಭ್ರಮವಲ್ಲಿದೆ
ಅಂತರದಲಿ ತಾವ್ ನೋಡಿದಿರೇ ?

ಹದವೇರಿದ ತಂಗಾಳಿಯು ಬೀಸುತ
ಮುದಗೊಳಿಸುತ ದಿಬ್ಬಣಜನರ
ಚದುರಿದ ಹಲವನು ಒಂದೆಡೆ ಸೆಳೆಯುತ
ಒದಗುತ ಬಡಗಿನ ದಿಕ್ಕಿನಲಿ

ಬೀಗರ ಮುಖದಲಿ ಬೆಳ್ಳಿಯಹೂ ನಗೆ
ಆಗಾಗ ಅಲ್ಲಿ ಅನುರಳಿಸಿ
ಭೋಗಸುವುದಕಿದ ಮನವಿದ್ದರೆ ಸಾಕ್
ಬೇಗ ಬನ್ನಿ ನೀವ್ ಪರಿಜನರೆ

Friday, August 20, 2010

ಚಮ್ ಚಮ್!

ಚಿತ್ರ ಋಣ :ಅಂತರ್ಜಾಲ

ಚಮ್ ಚಮ್!

[ ಸುಖಕರ್ತಾ ದುಃಖ ಹರ್ತಾ ವಾರ್ತಾ ವಿಘ್ನಾಚಿ ಅನ್ನೋ
ಮರಾಠಿ ಹಾಡಿನ ದಾಟಿಯಲ್ಲಿ ಹಾಡ್ಕೊಳಿ !]

ಪದ್ಯಕ್ಕೂ ಗದ್ಯಕ್ಕೂ ಸಂಬಂಧವಿಲ್ಲ
ಗದ್ಯ ಮಿಕ್ಸಿಗೆ ಹಾಕಿ ಪದ್ಯವಾಯ್ತಲ್ಲ !
ಸದ್ಯಕ್ಕಂತೂ ನೀವು ಮೂಸ್ನೋಡುದಿಲ್ಲ
ವಾದ್ಯ ಊದಿ ಕರೆದ್ರು ನೀವ್ ಬರಲೇ ಇಲ್ಲ ! ಬರೆಯಯ್ಯ ಬರೆಯೋ

ಇಡ್ಲಿ-ಸಾಂಬಾರ್ ದೋಸೆ ಚೌಚೌ ಚೌ ಬಾತು
ಸಡ್ಲಿಸಿ ಹೊಟ್ಟೆಯ ತಿನ್ನಿರಿ ಕೂತು
ಮಡ್ಲೊಳಗೆ ಮಗುವನ್ನು ಹೊತ್ತ ತಾಯಂದ್ರೆ
ಕಡ್ಲೆ ಉಸ್ಲಿ ಸಾಕೆ ಖಾರಾನೇ ಬೇಕೇ ? ಬರೆಯಯ್ಯ ಬರೆಯೋ

ಆಚೆಮನೆ ಗೋವಿಂದ ಸಣ್ಣಕ್ ಕಣ್ಣೊಡ್ದ
ಪಾಚೋ ಪಾಪಾಪಂಡು ಬಂದಿದ್ದು ತೋರ್ದ
ಮಾಚಕ್ಕ್ನ ಮಗನಿಗೆ ಆ ಹೆಸ್ರು ಕಾಯಂ
ಸಾಚಾ ಆಗ್ಬುಟ್ರೆಲ್ಲ ಜನರ್ಬಾಯ್ಗೆ ಚಮ್ ಚಮ್! ಬರೆಯಯ್ಯ ಬರೆಯೋ

ನಿಮ್ಮಲ್ಲೇ ಇರ್ಲೆಂದು ಮಂಜಜ್ಜ ಹೇಳ್ದ
ಮೊಮ್ಮಗ್ಳು ಬಸುರೆಂದು ಕಣ್ಣೀರು ಮಿಡ್ದ
ಒಮ್ಮೆ ಮದ್ವೆಯಾದ್ರೆ ಚಿಂತಿರ್ಲಾ ಎನುತ
ಎಮ್ಮನೆ ಕೂಸಿಗೇ ಲವ್ವಾಗ್ ಸಾಯ್ಬೇಕಾ ? ಬರೆಯಯ್ಯ ಬರೆಯೋ

ಬಚ್ಚಣ್ಣ ಹಾಸ್ನದಲ್ಲಿ ಬಾವ್ಟ ಹಾರ್ಸ್ಬುಟ್ಟು
ಕೊಚ್ಚೆ ಇರದಾ ರಸ್ತೆ ಹಿಡಿದು ಹೊರಟಿದ್ದ
ಅಚ್ಚ ಸಂಸ್ಕೃತದಲ್ಲಿ ಮಂತ್ರವ ಹೇಳಿ
ಬಿಚ್ಚಿ ಕೈ ಎರಡಿಟ್ಟ ಭರತನೆಂಬವಗೇ ! ಬರೆಯಯ್ಯ ಬರೆಯೋ

ಸಿನೆಮಾದವರ ಕೇಳಿ ಹೇಳುವರಿದು ಬೇರೆ
ಎನಿಮಾ ಹಚ್ಚಿದ ಹಾಗೇ ಹಳೆ ಅನ್ನಸಾರೇ !
ಅನುಮಾನ ಬಂದರೆ ಖಂಡಿತ ಗೋತಾ
ಜನುಮಕ್ಕೂ ಗುಟ್ಟು ಬಿಡಲಾರರೋ ತಾತಾ! ಬರೆಯಯ್ಯ ಬರೆಯೋ

ಹುಡುಗೀರು ಲೋ ಜೀನ್ಸು ಮಿನಿ ಟಾಪು ಹಾಕಿ
ಬಡಪಾಯಿ ಪಡ್ಡೆಗಳ ಬುಡಮೇಲೆತ್ತಾಕಿ
ತಡಕಾಡಿ ಅಪ್ಪನ ಜೇಬಿಗೆ ಕೈಹಾಕಿ
ಕಡತಂದ ಹಣವನ್ನು ಕೊಟ್ಟ ಗಿರಾಕಿ ! ಬರೆಯಯ್ಯ ಬರೆಯೋ

ಎಡಬಿಡದೆ ಮಳಿಗೆಯ ಸುತ್ತುತ ಜನರು
ಗಡಬಡಿಸಿ ಅದುಇದು ತುಂಬಿ ತರುತಿಹರು
ಕಡೆಗಳಿಗೆಲಿ ಖಾಲಿ ಆದ್ರೆಂಬಾತಂಕ
ಬಿಡದಂತೆ ಊದಿದರು ಸ್ಕೀಮಿನ ಶಂಖ ! ಬರೆಯಯ್ಯ ಬರೆಯೋ


Thursday, August 19, 2010

ಬಾರಮ್ಮಾ ಸಿರಿ ಲಕುಮೀ

ಅಂಗಂ ಹರೇಃ ಪುಲಕಭೂಷಣಮಾಶ್ರಯಂತೀಭೃಂಗಾಂಗನೇವ ಮುಕುಲಾಭರಣಂ ತಮಾಲಮ್ |ಅಂಗೀಕೃತಾಖಿಲವಿಭೂತಿರಪಾಂಗಲೀಲಾಮಾಂಗಲ್ಯದಾಸ್ತು ಮಮ ಮಂಗಲದೇವತಾಯಾಃ ||

-- ಶ್ರೀ ಆದಿಶಂಕರ ವಿರಚಿತ ' ಕನಕಧಾರಾ' ಸ್ತೋತ್ರದ ಮೊದಲನೇ ಶ್ಲೋಕ

ಬಾರಮ್ಮಾ ಸಿರಿ ಲಕುಮೀ

ಪುರಾಣಗಳಲ್ಲಿ ಸಿಗುವ ಉಲ್ಲೆಖದಂತೇ ಸಮುದ್ರ ಮಥನ ಕಾಲದಲ್ಲಿ ವಿಷ, ಅಮೃತ, ಬಹಳಷ್ಟು ವಿಶೇಷ ವಸ್ತುಗಳು ಒಡಮೂಡಿದವು. ಮೊದಲು ಬಂದ ಹಾಲಾಹಲವನ್ನು ಯಾರೂ ತಡೆಯಲು ಸಾಧ್ಯವಾಗಲಿಲ್ಲ; ಆಗ ಎಲ್ಲರೂ ಶಂಕರನ ಮೊರೆಹೊಕ್ಕರು. ಈಶ್ವರ ಎಲ್ಲರ ಒಳಿತಿಗಾಗಿ ಬಂದು ಬೊಗಸೆಯಲ್ಲಿ ಆ ಹಾಲಾಹಲವನ್ನು ಎತ್ತಿ ಕುಡಿದುಬಿಟ್ಟನಂತೆ! ಆಗ ಅದು ಪೂರ್ತಿ ಅವನ ಹೊಟ್ಟೆಯೊಳಕ್ಕೆ ಇಳಿದಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ, ಹಾಗಾಗದಂತೆ ಆತನ ಕಂಠವನ್ನು ಪಾರ್ವತೀದೇವಿ ಒತ್ತಿ ಹಿಡಿದು ಕೊರಳಿಗೆ ಒಂದು ನಾಗರ ಹಾವನ್ನು ಬಂಧಿಯಾಗಿ ಬಂಧಿಸಿದಳು. ವಿಷವನ್ನು ಕುಡಿದು ಜಗತ್ತನ್ನೇ ಕಾಪಾಡ ಹೊರಟ ಶಂಕರ ನಂಜುಂಡನಾದ, ವಿಷಕಂಠನಾದ, ಕಂಠ[ಕುತ್ತಿಗೆ] ನೀಲಿಗಟ್ಟಿದ್ದರಿಂದ ನೀಲಕಂಠನಾದ, ಕೊರಳಲ್ಲಿ ನಾಗರಹಾವನ್ನು ಧರಿಸಿ ನಾಗಭೂಷಣನಾದ.

ಅದೇ ಕಾಲಕ್ಕೆ ಅಮೃತಕಲಶವನ್ನು ಹೊತ್ತು ಮಹಾವಿಷ್ಣು ಧನ್ವಂತರಿಯಾಗಿ ಬಂದ. ಆ ಅಮೃತವನ್ನು ಕುಡಿಯಲು ದೇವ-ದಾನವರಲ್ಲಿ ಸಮಸ್ಯೆ ಉದ್ಭವವಾಯಿತು. ಮಹಾವಿಷ್ಣು ಮತ್ತೆ ಮೋಹಿನೀ ರೂಪದಿಂದ ಬಂದು ಅಮೃತವನ್ನು ಪಾಲು ಹಂಚುವುದರಲ್ಲಿ ಯಶಸ್ಸು ಪಡೆದ. ಅದಾದ ಬಳಿಕ ಚಂದ್ರ ಜನಿಸಿದ, ಜೊತೆಗೆ ಲಕ್ಷ್ಮಿಯ ಜನನವಾಯಿತು! ಲಕ್ಷ್ಮಿಯನ್ನು ಯಾರಿಗೆ ಮಡದಿಯಾಗಿ ಧಾರೆ ಎರೆಯಲಿ ಎಂದು ಚಿಂತಿಸಿದ ಸಮುದ್ರರಾಜನಿಗೆ ಬ್ರಹ್ಮ ಇಷ್ಟವಾಗಲಿಲ್ಲ, ಶಿವ ಬೂದಿಬಡಕ ಮತ್ತು ಸ್ಮಶಾನವಾಸಿ ಎಂಬ ಕಾರಣಕ್ಕೆ ಆತನೂ ಬೇಡವಾದ, ನಂತರ ಕಂಡಿದ್ದು ಮಹಾವಿಷ್ಣು, ದಿವ್ಯ ಪೀತಾಂಬರ ಧಾರಿಯಾದ ಮಹಾವಿಷ್ಣುವಿಗೆ ಶ್ರೀಲಕ್ಷ್ಮಿಯನ್ನು ಧಾರೆಯೆರೆದ ಸಮುದ್ರರಾಜ. ಹೀಗೇ ಮಹಾವಿಷ್ಣುವಿನ ಮಡದಿಯಾಗಿ ವೈಕುಂಠ ಸೇರಿದ ಲಕ್ಷ್ಮಿ ಆದಿಶೇಷನ ಮೇಲೆ ಮಲಗಿರುವ ನಾರಾಯಣನ ಪಾದದ ಕಡೆ ಕುಳಿತು ಕಾಲನ್ನು ಒತ್ತುತ್ತಾ ಇದ್ದಾಳೆ.

ಲಕ್ಷ್ಮಿ ತನ್ನ ಸಹಜರೂಪದಲ್ಲಿ ಸುಂದರವಾದ ತಿಳಿಗೊಳದಲ್ಲಿ ಅರಳಿದ ಕಮಲದ ಹೂವಿನ ಮೇಲೆ ಕುಳಿತುಕೊಳ್ಳುತ್ತಾಳೆ. ಕಮಲ ಸಾಮಾನ್ಯವಾಗಿ ಬುಡದಲ್ಲಿ ಕೆಸರನ್ನೇ ಹೊಂದಿರುತ್ತದೆ. ಕೆಸರನಲ್ಲಿ ಹುಟ್ಟಿ ಬೆಳೆದಿದ್ದರೂ ಮೈಗೆ ಕೆಸರನ್ನು ಅಂಟಿಸಿಕೊಳ್ಳದೇ ಶುಭ್ರವಾಗಿರುವ ಕಮಲ ಸಮಾಜಕ್ಕೆ ನೀಡುವ ಸಂದೇಶ --ಸಮಾಜದಲ್ಲಿ ಎಷ್ಟೇ ಹೊಲಸು ತುಂಬಿದ್ದರೂ ನಾವು ಸಮಾಜದ ಕೊಳೆ ನಮಗೆ ತಾಗದಂತೆ ಬದುಕಬೇಕೆಂಬುದು! ಈ ತತ್ವವನ್ನು ಸಾರುವ ಕಮಲದ ಮೇಲೆ ಕುಳಿತು ಕೈಗಳೆರಡರಲ್ಲಿ ಕಮಲವನ್ನೇ ಹಿಡಿದು, ಇನ್ನೋಂದು ಕೈಯ್ಯಲ್ಲಿ ಕನಕಕಲಶದಿಂದ ಕನಕವೃಷ್ಟಿ ಗರೆಯುತ್ತಾ ಮತ್ತೊಂದು ಹಸ್ತದಲ್ಲಿ ವರದಮುದ್ರೆ ತೋರಿಸುತ್ತಾ ಕುಳಿತ ಸಂಪತ್ತಿನ ಅಧಿದೇವತೆ ಮಹಾಲಕ್ಷ್ಮಿ.[ಸಂಪತ್ತನ್ನು ಕರುಣಿಸುವಲ್ಲಿ ಮಾತ್ರ ಲಕ್ಷ್ಮಿ ಒಂದೇ ತೆರನಾಗಿ ಮಾಡುತ್ತಿಲ್ಲ. ಅದಕ್ಕಾಗಿ ಶ್ರೀ ಶಂಕರರು ಕನಕಧಾರಾ ಸ್ತೋತ್ರದಲ್ಲಿ ಹೇಳಿದ್ದನ್ನು ಕೇವಲ ಆಧಾರವಾಗಿ ಬಳಸಿ ಒಂದು ಕವನ ರಚಿಸಲ್ಪಟ್ಟಿದೆ.] ಯಾವುದೇ ತಿಥಿಮಿತಿಯ ಗಣನೆ ಇಲ್ಲದೇ ಶ್ರಾವಣ ಮಾಸದ ಎರಡನೇ ಶುಕ್ರವಾರ ಅವಳನ್ನು ಸಂಪದ್ಭರಿತವಾಗುವಂತೇ ವರ ನೀಡು ಎಂದು ಪೂಜಿಸುವ ರೂಪವೇ ಶ್ರೀವರಮಹಾಲಕ್ಷ್ಮೀ ವೃತ. ಶ್ರೀ ವರಮಾಹಾಲಕ್ಷ್ಮಿ ತಮ್ಮೆಲ್ಲರ ಮನೆಗಳಲ್ಲಿ ಕನಕವೃಷ್ಟಿ ಹರಿಸಲಿ, ಎಲ್ಲರಿಗೂ ಶುಭವಾಗಲಿ ಎಂಬುದು ಇಂದಿನ ನಮ್ಮೆಲ್ಲರ ಪ್ರಾರ್ಥನೆ.

ಲಕ್ಷ್ಮೀಂ ಕ್ಷೀರಸಮುದ್ರರಾಜ ತನಯಾಂ ಶ್ರೀರಂಗಧಾಮೇಶ್ವರೀಂ
ದಾಸೀಭೂತಸಮಸ್ತ ದೇವ ವನಿತಾಂ ಲೋಕೈಕ ದೀಪಾಂಕುರಾಮ್ |
ಶ್ರೀಮನ್ಮಂದಕಟಾಕ್ಷಲಬ್ಧ ವಿಭವ ಬ್ರಹ್ಮೇಂದ್ರ ಗಂಗಾಧರಾಂ
ತ್ವಾಂ ತ್ರೈಲೋಕ್ಯಕುಟುಂಬಿನೀಂ ಸರಸಿಜಾಂ ವಂದೇ ಮುಕುಂದಪ್ರಿಯಾಂ ||
----ಶ್ರೀ ಸೂಕ್ತದ ಒಂದು ಶ್ಲೋಕ

ಅಮ್ಮಾ ನಿನಗಿದು ತರವೇ ತಾಯೀ ?
ನಮ್ಮೆಲ್ಲರ ಪೊರೆಯುವ ಹೇ ಲಕುಮೀ
ಹೆಮ್ಮೆಯ ಸಾವಿರ ಥರ ಮಕ್ಕಳ ಜೊತೆ
ಒಮ್ಮೆ ಇಳಿದು ಬಾ ಸುತ್ತುತ ಜನತೆ

ಸಿರಿಯು ನಿನ್ನಲ್ಲಿ ಬೇಕಷ್ಟಿರಲು
ಬರವು ಕೆಲವರಿಗೆ ಸಿಗದು ಕೈಯೊಳು !
ಹರಸುವೆ ಕೆಲವರ ಹಲವನು ಇತ್ತು
ಮರೆಯುವೆ ಹಲವರ ಕೊಡೆ ತಾಕತ್ತು

ಘನ ಕಾರ್ಯವು ನೀನಿಲ್ಲದೆ ನಡೆಯದು
ಮನಕಾನಂದ ನೀನಿರದಿರೆ ಸಿಗದು
ಸನಕಸನಂದನ ಮುನಿಜನ ನೆನೆದರು
ಮನುಜರು ಬದುಕುವೆವ್ ನಿನ್ನನು ಕರೆದು

ಪಡೆದಿರಬೇಕು ನಿನ್ನನು ಪಡೆಯಲು
ಬಿಡೆಯಕೆ ನೀ ಬರಲಾರೆ ಹಡೆಯಲು
ಒಡನಾಡುತ ಭಕ್ತಿಯಲೀ ನುಡಿಯಲು
ಒಡಮೂಡಲು ನೀ ಮನಮಾಡೆಮ್ಮೊಳು

ಬೇಕಾದವರಿಗೆ ಕೈ ತಿರುಗಿಸುವೆ
ಸಾಕೆಂದವರಿಗೆ ಮೊಗೆದು ಬಡಿಸುವೆ
ನಾಕು ಎಂಟು ಹತ್ತಲವ ಎಣಿಸುವೆ
ಯಾಕಾದರು ನೀ ನಿಲ್ಲದೇ ಇರುವೆ ?

ಶಂಕರರು ಕನಕಧಾರಾ ಸ್ತೋತ್ರವನ್ನು ಬರೆದು ಪಠಿಸಿ ಭಕ್ತನನ್ನು ಉದ್ಧರಿಸಿದರು, ಅದೇ ಸ್ತೋತ್ರವನ್ನು ಭಕ್ತಿ ಶ್ರದ್ಧೆಯಿಂದ ತಾವೆಲ್ಲ ಆಸ್ತಿಕರು ಆದಷ್ಟೂ ಪಠಿಸಿ ಎಂಬ ವಿನಂತಿಯೊಂದಿಗೆ ಇವತ್ತಿನ ಕೃತಿ ಪೂರ್ಣಗೊಳ್ಳುತ್ತದೆ ಅದೇ ಸ್ತೋತ್ರದ ಇನ್ನೊಂದು ಶ್ಲೋಕದೊಂದಿಗೆ :

ಇಷ್ಟಾ ವಿಶಿಷ್ಟಮತಯೋಪಿ ಯಯಾ ದಯಾರ್ದ್ರ -
ದೃಷ್ಟ್ಯಾ ತ್ರಿವಿಷ್ಟಪ ಪದಂ ಸುಲಭಂ ಭಜಂತೇ |
ದೃಷ್ಟಿಃ ಪ್ರಹೃಷ್ಟಕಮಲೋದರದೀಪ್ತಿರಿಷ್ಟಾಂ
ಪುಷ್ಟಿಂ ಕೃಷೀಷ್ಟ ಮಮ ಪುಷ್ಕರ-ವಿಷ್ಟರಾಯಾಃ ||


[ಸ್ವರಯುಕ್ತ ಮಂತ್ರಗಳನ್ನು ಇಲ್ಲಿ ಬರೆಯುವುದು ಸಾಧ್ಯವಾಗುವ ಮಾತಲ್ಲ, ಅದನ್ನೇ ಸ್ವರರಹಿತವಾಗಿ ನಮೂದಿಸಿದ್ದಕ್ಕೆ ವಿದ್ವಾಂಸರ ಕ್ಷಮೆಯಿರಲಿ, ದೇವಿ ಮಹಾಲಕ್ಷ್ಮಿ ಎಲ್ಲರಿಗೂ ಎಲ್ಲವನ್ನೂ ಕೊಟ್ಟು ಸಲಹಲೀ ಎಂಬುದು ಹೃತ್ಪೂರ್ವಕ ಪ್ರಾರ್ಥನೆ ]

ಶ್ರೀವರ್ಚಸ್ವಮಾಯುಷ್ಯಮಾರೋಗ್ಯ ಮಾವಿಧಾತ್ಪವಮಾನಂ ಮಹೀಯತೇ |
ಧನಂ ಧಾನ್ಯಂ ಪಶುಂ ಬಹುಪುತ್ರಲಾಭಂ ಶತಸಂವಥ್ಸರಂ ದೀರ್ಘಮಾಯುಃ ||


Wednesday, August 18, 2010

ಮೊದಲ ದಿನ ಮೌನ...ಅಳುವೇ ತುಟಿಗೆ ಬಂದಂತೆ


[minister or goon ?]

ಮೊದಲ ದಿನ ಮೌನ...ಅಳುವೇ ತುಟಿಗೆ ಬಂದಂತೆ


ಕೆಲವು ಘಟನೆಗಳು ಮನುಷ್ಯನಿಗೆ ಪಾಠಕಲಿಸುತ್ತವೆ. ಪ್ರತೀ ವ್ಯಕ್ತಿಗೂ ಅವರವರ ಅನುಭವಗಳು ಬದಲು. ಹುಟ್ಟಿನಿಂದ ಮುಪ್ಪಿನವರೆಗೆ ಅವರೆಲ್ಲರ ಕಥೆಗಳನ್ನು ಕೇಳಿದರೆ ಒಂದೊಂದೂ ರೋಚಕ. ನನಗೊಬ್ಬರು ಮುದಿವಯಸ್ಸಿನ ನಿವೃತ್ತ ಪೋಲೀಸ್ ಎಸ್. ಐ. ಸಿಕ್ಕಿದ್ದರು. ಅವರಿಗೂ ಈಗೀಗ ಪುಸ್ತಕಗಳ ಗೀಳು! ಪರಸ್ಪರ ಪರಿಚಯವಿನಿಮಯ ವಾಗಿ ಕೆಲದಿನಗಳ ಮೇಲೆ

" ಮಿಸ್ಟರ್ ಭಟ್ ನಿಮ್ಮಲ್ಲಿ ಏನೆಲ್ಲಾ ತುಂಬಿದೆಯಲ್ರೀ, ನನಗೆ ನೀವು ಪರಿಚಯವಾದ್ದು ಬಾಳಾ ಸಂತೋಷವಾಯ್ತು. ಅದ್ರೂ ಒಂದು ಅನುಮಾನ ನಮ್ಮಂತಾ ಮುದುಕರ ಜೊತೆ ನೀವು ಬೆರೆಯಲು ಮನಸ್ಸು ಮಾಡಬೇಕಲ್ಲ. ನಾವೆಲ್ಲಾ ಹಳೆಯ ಕಥೆಗಳನ್ನೇ ಹೇಳಿಕೊಳ್ಳುತ್ತಿರುವವರು " ಎಂದರು.

ನಾನು ಹೇಳಿದೆ " ನೋಡಿ ಸ್ವಾಮೀ, ಮುದುಕರು, ಹುಡುಗರು, ಮಕ್ಕಳು ಎಂಬ ಭೇದಭಾವವಿಲ್ಲ, ಅವರವರ ವಯಸ್ಸಿಗೆ ಅನುಗುಣವಾಗಿ ಸ್ಪ್ರಿಂಗ್ ಥರ ಅಡ್ಜಸ್ಟ್ ಮಾಡಿಕೊಳ್ಳಲು ನಾನು ತಯಾರಾಗಿಬಿಟ್ಟಿದ್ದೇನೆ. ಹೀಗಾಗಿ ಯಾರೊಂದಿಗಾದ್ರೂ ಹೊಂದಿಕೊಳ್ಳಬಲ್ಲೆ "

" ನಿಮಗೆ ಕಾರಂತ್ರ ಬಗ್ಗೆ ಗೊತ್ತಾ ? " --ನನಗೆ ಪ್ರಶ್ನೆ ಹಾಕಿದರು.

" ಏನೋ ಅಲ್ಪಸ್ವಲ್ಪ, ಅವರ ಕೆಲವು ಕೃತಿಗಳನ್ನು ಓದಿದ್ದೇನೆ "

" ಅಲ್ಲಾರೀ ಆ ಪುಣ್ಯಾತ್ಮ ಬರ್ದಿರೋ ’ಅಪೂರ್ವ ಪಶ್ಚಿಮ’ ಓದ್ತಾ ಇದೀನಿ ಏನ್ ಬರೀತಾರ್ರೀ ಅಬ್ಬಬ್ಬ ನಮ್ಗೆ ಮೊದ್ಲೆಲ್ಲ ಇದು ಗೊತ್ತೇ ಇರ್ಲಿಲ್ಲ "--ಕಾರಂತರ ಪ್ರವಾಸ ಕಥನವೊಂದರ ಬಗ್ಗೆ ಹೇಳಿದರು.

ಹೀಗೇ ಮಾತು ಬೆಳೆಯುತ್ತ ಹೋದಂತೇ ಒಮ್ಮೆ ಜೀವನದ ಘಟನೆಗಳನ್ನು ಮೆಲುಕು ಹಾಕುತ್ತಾ ದುಃಖ ಉಮ್ಮಳಿಸಿ ಬಂದು ಕಣ್ಣಿಂದ ಎರಡು ಹನಿ ಉದುರಿದ್ದು ಕಾಣಿಸಿತು.

" ಏನ್ ಸರ್ ಇಷ್ಟೆಲ್ಲಾ ಇಮೋಶನಲ್ ಆಗಿಬಿಟ್ಟರೆ ಹೇಗೆ ? "

" ಇಲ್ಲಾ ಭಟ್ರೇ ನಮ್ಗೆ ಪ್ರಾಯ್ದಲ್ಲಿ ಅಧಿಕಾರ ಇರೋವಾಗ ನಾವು ಮಾಡೋ ತಪ್ಪುಗಳು ತಿಳೀತಾ ಇರ್ಲಿಲ್ಲ, ಆ ತಪುಗಳನ್ನೇ ಸರಿ ಎಂದು ವಾದಿಸೋ ಬಿಸಿ ರಕ್ತ ನಮ್ದಾಗಿತ್ತು. ಇವತ್ತು ಆ ದಿನಗಳೆಲ್ಲ ಕಳೆದುಹೋದವು. ಕಳೆದ ದಿನಗಳಲ್ಲಿ ಮಾಡಿದ ಪಾಪ-ಪುಣ್ಯಗಳ ಲೆಕ್ಕಾಚಾರವನ್ನು ನಡೆಸಿದರೆ ನಮ್ಮ ವೃತ್ತಿಯಲ್ಲಿ ಹಲವೊಮ್ಮೆ ನಾವು ಅನ್ಯಾಯವಾಗಿ ಏನೇನೋ ಮಾಡಿಬಿಡುತ್ತೇವೆ. ಎಷ್ಟೋ ಜನರ ಶಾಪಗಳನ್ನು ನಾವು ಪರೋಕ್ಷ ಪಡೀಬೇಕಾಗತ್ತೆ. ಇಂತಹ ಮೌಲ್ಯಯುತ ಪುಸ್ತಕಗಳು ಮೊದಲೇ ಸಿಕ್ಕಿದ್ದರೆ ನಾವು ಬೇರೇ ರೀತಿಯಲ್ಲೇ ಬದುಕುತ್ತಿದ್ದೆವು. ಈಗ ಅನ್ನಿಸ್ತಿದೆ ನಾವೆಲ್ಲಾ ತಿನ್ನಲಿಕ್ಕಾಗಿ ಬದುಕಿದೆವು ಬದುಕಲಿಕ್ಕಾಗಿ ತಿನ್ನಲಿಲ್ಲ "

ಭಗವದ್ಗೀತೆಯನ್ನು ಶ್ರೀಕೃಷ್ಣ ಅರ್ಜುನನಿಗೆ ಬೋಧಿಸುವಂತೇ ನನಗೆ ಅವರು ಹೇಳುತ್ತಲೇ ಇದ್ದರು. ಅವರು ಯಾರಲ್ಲೂ ಹೇಳಿಕೊಳ್ಳಲಾರದ ಮನದ ಎಲ್ಲಾ ತುಮುಲಗಳನ್ನೂ ಹೇಳಿಕೊಂಡು ಮನ ಬಹಳ ಹಗುರವಾಯಿತು ಎಂದು ಸಂತಸ ಪಟ್ಟರು! ನಾನು ಅವರಿಗೆ ಕೆಲವೊಂದು ಸಲಹೆಗಳನ್ನು ನೀಡಿದೆ. ಅದನ್ನು ಚಿಕ್ಕಮಕ್ಕಳಂತೇ ಮರುಕ್ಷಣವೇ ಇಂದಿನಿಂದಲೇ ಮಾಡುವುದಾಗಿ ಒಪ್ಪಿಕೊಂಡರು.

ಹೀಗೇ ಬದುಕಿನಲ್ಲಿ ಅಧಿಕಾರ, ಯೌವ್ವನ, ಹಣ ಇವೆಲ್ಲಾ ಇರುವಾಗ ಆಗಸದಲ್ಲಿ ಮೋಡಗಳು ಮುಸುಕಿದಂತೇ ನಮ್ಮ ಮನಸ್ಸಿಗೆ ದರ್ಪ, ಗತ್ತು, ಲೋಭ, ಕೋಪ ಇಷ್ಟೇ ಏಕೆ ಅರಿ ಷಡ್ವರ್ಗಗಳು ಮುಕುರಿಕೊಂಡುಬಿಡುತ್ತವೆ. ಈ ಮೋಡಗಳ ಮಬ್ಬಿನಲ್ಲಿ ನಮಗೆ ನಾವ್ಯಾರು ಎಂಬುದೇ ಮರೆತುಹೋಗುತ್ತದೆ. ನಾವು ನಡೆದದ್ದೇ ದಾರಿ, ನಾವು ಹೇಳಿದ್ದೇ ನೀತಿ, ನಾವು ಚಲಾಯಿಸಿದ್ದೇ ಹಕ್ಕು ಎಂಬ ಸರ್ವಾಧಿಕಾರೀ ಧೋರಣೆ ನಮ್ಮಲ್ಲಿ ಮನೆಮಾಡಿ ಕುಳಿತುಬಿಟ್ಟಿರುತ್ತದೆ. ಯಾರೇ ಹೇಳಿದರೂ ಅವರ ಮಾತನ್ನು ಚೂರೂ ಲಕ್ಷ್ಯಕ್ಕೆ ತೆಗೆದುಕೊಳ್ಳದವರು ನಾವಾಗಿರುತ್ತೇವೆ. " ಏ ಹೋಗೋ ಅವನ್ಯಾರೋ ವೇದಾಂತಿ ಅವನ್ಮಾತೆಲ್ಲಾ ಯಾರು ಕೇಳ್ತಾರೆ ? " ಎನ್ನುವ ಮಟ್ಟದಲ್ಲಿನಾವಿರುತ್ತೇವೆ. ಸರಿಯಾಗಿರುವ ಕೆಲವರ ನಡತೆಯಲ್ಲೂ ಸರಿಯಿಲ್ಲ ಎಂದು ಖಂಡಿಸುವ ಜನ ನಾವಾಗಿರುತ್ತೇವೆ. ಇದರಲ್ಲಿ ಗೆದ್ದಾಗ ನಮಗೊಂದು ರಕ್ಕಸನಗೆ ಬರುತ್ತದೆ. ಬೃಹದಾಕಾರಕ್ಕೆ ಬಾಯಗಲಿಸಿ ಗಹಗಹಿಸಿ ನಗುತ್ತೇವೆ. ಆ ನಗುವಿನ ಹಿಂದೇ ನಮ್ಮ ಅಧಃಪತನವೂ ನೆಲೆಸಿರುತ್ತದೆ! ಆದರೆ ನಮಗದರ ಅರಿವಿರುವುದಿಲ್ಲ ! ಯಾವ ಕಾರಣಕ್ಕೆ ನಾವು ಜೋರಾಗಿ ನಕ್ಕಿದ್ದೆವೋ ಅದೇ ಕಾರಣಕ್ಕೆ ನಾವು ಇನ್ನೂ ಜೋರಾಗಿ ಅಳುವ ಸಮಯ ಸನ್ನಿಹಿತವಾಗುತ್ತದೆ.

|| ಸುಖಸ್ಯಾ ನಂತರಂ ದುಃಖಂ || ಈ ಜೀವನದ ಪ್ರತೀ ಹಂತದಲ್ಲೂ ಏಳು ಬೀಳುಗಳು ಏರಿಳಿತದ ರಸ್ತೆಗಳಂತೆ ಸದಾ ಇರುತ್ತವೆ! ಆದರೆ ನಮಗೆ ಇದರ ಪರಿವೆಯೇ ಇಲ್ಲದೇ ನಾವು ಬರೇ ಸುಖವನ್ನೂ ಬರೇ ಆನಂದವನ್ನೂ ಬಯಸುತ್ತಿರುತ್ತೇವೆ. ಬರೇ ಸುಖವಿದ್ದರೆ ಕಷ್ಟವೇನೆಂದೂ ತಿಳಿಯುವುದಿಲ್ಲ, ಹಾಗಿರುವಾಗ ಅಲ್ಲಿ ಅನುಭವಿಸುವ ಸುಖ ವಿಶೇಷವಾಗೇನೂ ಕಾಣಿಸುವುದಿಲ್ಲ. ಕಾರು ಇಟ್ಟುಕೊಂಡವನು ಆರ್ಥಿಕವಾಗಿ ಸೋತು ಬೈಕ್ ನಲ್ಲಿ ಓಡಾಡುವಾಗ ಅವನಿಗೆ ಕಾರಲ್ಲಿ ತಿರುಗಿದ ನೆನಪಾಗಿ ಅಳುಬರುತ್ತದೆ. ರೇಮಂಡ್ಸ್ ಸೂಟ್ ನಲ್ಲಿ ಮೆರೆದವನು ಸಾದಾ ಪ್ಯಾಂಟು ಧರಿಸಬೇಕಾಗಿ ಬಂದಾಗ ಅವನಿಗೆ ವ್ಯಥೆಯಾಗುತ್ತದೆ. ಮಂತ್ರಿಯಾಗಿದ್ದು ಮೆರೆದು ನಂತರದ ಚುನಾವಣೆಯಲ್ಲಿ ಬಿದ್ದು ಮನೆಸೇರಿದಾಗ ಹಾವಿಗೆ ಹಲ್ಲುಕಿತ್ತ ಅನುಭವವಾಗುತ್ತದೆ! ಅತೀ ಬಡವನಿಗೆ ಪ್ಲೇವಿನ್ ಥರದ ಲಾಟರಿ ಹೊಡೆದಾದ ಆತ ತಿಂಗಳಬೆಳಕೂ ಮೈಗೆ ಶಾಖತರುತ್ತದೆ ಎಂದು ಕೊಡೆಹಿಡಿದು ಓಡಾಡುತ್ತಾನೆ! ತೀರಾ ನಿಕೃಷ್ಟ ಸ್ಥಿತಿಯಲ್ಲಿದ್ದವರ ಮಗನೋ ಮಗಳೋ ಎಲ್ಲೋ ಒಂದು ಸಾಫ್ಟ್ ವೇರ್ ನೌಕರಿಗೆ ಸೇರಿಬಿಟ್ಟರೆ ತಮ್ಮ ಮುಂದೆ ಯಾರೂ ಇಲ್ಲ ಅನ್ನುವ ರೀತಿಯಲ್ಲಿ ಬದುಕತೊಡಗುತ್ತಾರೆ! ಇವೆಲ್ಲಾ ನಾವು ನೋಡುವ ಹಲವು ಜೀವನಕ್ರಮಗಳು.

ಏನಿರಲಿ ಬಿಡಲಿ ಜೀವನ ತನಗೆ ದೈವೀದತ್ತವೆಂದು ತಿಳಿದು ಪ್ರಾಮಾಣಿಕವಾಗಿ ದುಡಿದು ಇದ್ದುದರಲ್ಲಿ ತೃಪ್ತಿ ಪಟ್ಟು ಜೀವಿಸಿದರೆ ಅಲ್ಲಿ ಏರಿಳಿತಗಳು ಕಮ್ಮಿ ಇರುತ್ತವೆ. ಹೀಗೆ ಮಾಡಲು ಮನಸ್ಸಿಗೆ ಸಂಸ್ಕಾರ ಬೇಕು. ಮನಸ್ಸಿಗೆ ಸದುದ್ದೇಶ ಬೇಕು. ಒಳ್ಳೆಯ ಸಂಸ್ಕಾರವಿಲ್ಲದ ಮನಸ್ಸು ಹುಳುಬಿದ್ದ ಹಣ್ಣಿನಂತಿರುತ್ತದೆ. ಸಂಸ್ಕಾರಗೊಂಡ ಮನಸ್ಸು ಪುಟಕೊಟ್ಟ ಬಂಗಾರದಂತೆ ಹೊಳೆಯುತ್ತಿರುತ್ತದೆ!

ಮೊನ್ನೆಯ ಉದಾಹರಣೆಯನ್ನೇ ತೆಗೆದುಕೊಳ್ಳಿ---
ಕಾರ್ಮಿಕ ಸಚಿವ ಬಚ್ಚೇ ಗೌಡರು ಅದ್ಯಾವುದೋ ಉದ್ಯಮಿ ಭರತ್ ಗೆ ಕಪಾಳಮೋಕ್ಷ ಕರುಣಿಸಿದ್ದಾರೆ! ಆತ ಮಾಡಿದ ತಪ್ಪೇನು ಎಂದು ಕೇಳಿದರೆ ಆತ ಮಂತ್ರಿಯಾದ ತನ್ನ ವಾಹನವನ್ನು ಹಿಂದಕ್ಕೆ ಹಾಕಿದ ಅದಕ್ಕೇ ಹಾಗೆಮಾಡಿದೆ ಅಂದಿದ್ದಾರೆ. ಅವಾಚ್ಯ ಶಬ್ಧಗಳಿಂದ ಬೈದಿದ್ದಾರೆ ಎಂದೆಲ್ಲಾ ಪ್ರತ್ಯಕ್ಷದರ್ಶಿಗಳು ಹೇಳಿದ್ದನ್ನು ಮಾಧ್ಯಮಗಳು ವರದಿಮಾಡಿವೆ. ಅವರು ಎಲ್ಲಿಗೆ ಹೋಗಿದ್ದರು ? ಹಾಸನಜಿಲ್ಲೆಗೆ ಸ್ವಾತಂತ್ರ್ಯೋತ್ಸವಕ್ಕಾಗಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಭಾಗವಹಿಸಿದ್ದರು. ಅಲ್ಲಿ ಅಂದಿನ ಸಭೆಗಳಲ್ಲಿ ಹುತಾತ್ಮರ ಬಗ್ಗೆ, ಮಹಾತ್ಮ ಗಾಂಧೀಜಿ ಬಗ್ಗೆ ಬರೆದುಕೊಟ್ಟ ಭಾಷಣವನ್ನು ತಪ್ಪುತಪ್ಪಾಗಿ ಅಂತೂ ಮಾಡಿಮುಗಿಸುತ್ತಾರೆ! ಗಾಂಧೀಜಿ ಹೇಳಿದರು -ತನ್ನ ಒಂದು ಕೆನ್ನೆಗೆ ಹೊಡೆದೆಯಲ್ಲಪ್ಪಾ ಇನ್ನೊಂದು ಕೆನ್ನೆಗೂ ಹೊಡಿ ಎಂದು. ಸಚಿವರಿಗೆ ಅದು ಅರ್ಥವಾಗಿದ್ದು " ಒಂದೇ ಕೆನ್ನೆಗೆ ಹೊಡೆಯಬೇಡಪ್ಪಾ ಇನ್ನೊಂದು ಕೆನ್ನೆಗೂ ಹೊಡಿ" ಎಂದು! ಪಾಪ ಅವರೇನು ಮಾಡುತ್ತಾರೆ? ಬರುವಾಗ ಪ್ರಾಯೋಗಿಕವಾಗಿ ಅದನ್ನು ಅಳವಡಿಸಿಕೊಂಡಿದ್ದಾರೆ;ಮಹಾತ್ಮರನ್ನು ಅನುಸರಿಸುವ ದಿನವಲ್ಲವೇ ಅದಕ್ಕೆ!

ಈ ಕಥೆ ನಿಮಗೆ ಸಂಸ್ಕಾರವನ್ನು ತೋರಿಸುತ್ತದೆ. ನಮ್ಮ ಆಸ್ಥಾನದಲ್ಲಿ ಈಗ ನರ್ಸಕ್ಕನ ಪ್ರೀತಿಯ ರೇಣುಕಾಚಾರ್ಯರಿದ್ದಾರೆ, "ಇರ್ಲಿಬಿಡಿ" ಎಂದು ಲಂಚಪಡೆದು ಗೆದ್ದ ಸಂಪಂಗಿಯಿದ್ದಾರೆ, ಸ್ನೇಹಿತನ ಹೆಂಡತಿಯನ್ನು ಕಾಮಿಸಲು ಹೋದ ಹಾಲಪ್ಪ ಇದ್ದಾರೆ, ಇನ್ನೂ ಕೆಲವು ಕಾಳಪ್ಪ ಗೂಳಪ್ಪ ಎಲ್ಲಾ ಇದ್ದಾರೆ. ಎಲ್ಲೋ ಕಕ್ಕಸು -ಬಚ್ಚಲುಮನೆ ತೊಳ್ಕೊಂಡು ಇದ್ದ ಇವರನ್ನೆಲ್ಲಾ ಆರಿಸಿ ಕಳುಹಿಸಿದ ನಮಗೆ ಇರುವ ಸಂಸ್ಕಾರ ಎಂಥದು ? --ಇದನ್ನು ನಾವು ಆಲೋಚಿಸಬೇಕು! ಕಲ್ಚರ್ ಬಿಗಿನ್ಸ್ ಎಟ್ ದಿ ರೂಟ್ !

ಇನ್ನೊಂದು ಕಥೆ ನೋಡಿ---
ಇಪ್ಪತ್ತು ಕೋಟಿ ಹಣವನ್ನು ಮಾಯಾಜಾಲದಿಂದ ಕೊಟ್ಟು ರಾಜ್ ಕುಮಾರ್ ರನ್ನು ಬಿಡಿಸಿದ ನಮ್ಮ ಹಿಂದಿನ ಎಸ್.ಎಮ್.ಕೃಷ್ಣ ನಡೆಸಿದ ಸರಕಾರ ಪ್ರಾಮಾಣಿಕರೂ, ನಿಗರ್ವಿಯೂ, ಸಾತ್ವಿಕರೂ, ಸದಭಿರುಚಿಯ ಮಾಜಿಮಂತ್ರಿಯೂ, ನಿಷ್ಠಾವಂತ ರಾಜಕಾರಣಿಯೂ ಆದ ಎಚ್.ನಾಗಪ್ಪನವರನ್ನು ವೀರಪ್ಪನ್ ನಿಂದ ಬಿಡಿಸಲಿಲ್ಲ! ಇಲ್ಲಿ ಪಾರ್ವತಮ್ಮ ಗಲಾಟೆಮಾಡಿದರು, ಮುಖ್ಯಮಂತ್ರಿಯ ಮನೆಗೇ ನುಗ್ಗಿಬಿಟ್ಟರು, ಅಭಿಮಾನಿಗಳು ಎನಿಸಿದ ಜನ ದೊಂಬಿ ಶುರುಮಾಡಿದರು, ರಾಜಕುಮಾರ್ ಅದೃಷ್ಟವೂ ಚೆನ್ನಾಗಿತ್ತು-ಈ ಎಲ್ಲಾ ಫ್ಯಾಕ್ಟ್ಸ್ ಸೇರಿ ಅವರ ಬಿಡುಗಡೆಯಾಯಿತು. ಅಧಿಕಾರದಲ್ಲಿಲ್ಲದ ಮಾಜಿಮಂತ್ರಿಯೊಬ್ಬರ ಹೆಂಡತಿಯಾಗಿ, ಅಸಹಾಯಳಾಗಿ ಕಂಡ ಕಂಡ ಮಠಮಾನ್ಯಗಳ ಮೊರೆ ಹೊಕ್ಕು ಪ್ರಾರ್ಥಿಸಿ ತನ್ನ ಗಂಡನ ಬಿಡಿಸುವಿಕೆಗಾಗಿ ಹಂಬಲಿಸಿದವರು ಶ್ರೀಮತಿ ಪರಿಮಳಾ ನಾಗಪ್ಪ. ಆದರೆ ಇವರಿಗೆ ಸಪ್ಪೋರ್ಟ್ ಸಿಗಲಿಲ್ಲ!--ಮಂತ್ರಿಯಾಗಿದ್ದಾಗ ಮನೆಯಲ್ಲಿ ಗಂಟು ಕಟ್ಟಿರದಿದ್ದಕಾರಣ ಹಣವೇ ಇಲ್ಲದೇ ವೀರಪ್ಪನ್ ಗೆ ಎಲ್ಲಿಂದ ಕೊಡುವುದು? ಅಲ್ಲವೇ ? ಹತರಾದ ದಿ| ನಾಗಪ್ಪ ಪ್ರತೀ ದಿನ ಬಹಳ ಹೊತ್ತು ಶಿವಪಂಚಾಕ್ಷರೀ ಮಂತ್ರವನ್ನು ಬರೆಯುತ್ತಿದ್ದರಂತೆ! ಅನ್ಯಾಹಾರಿಗಳಲ್ಲದ ಅವರಿಗೆ ವೀರಪ್ಪನ್ ಬೇಯಿಸುವ ಮಾಂಸದಡುಗೆಗಳು ಬೇಡವಾಗಿದ್ದವು ಅದೂ ಅಲ್ಲದೇ ಬಹಳ ಸಂಸ್ಕಾರಯುತರಾಗಿದ್ದ ಅವರ ದಿನಚರಿಗೆ ತುಂಬಾ ಹೊಡೆತ ಬಿದ್ದಿತ್ತು. ಸಂಚಿತಕರ್ಮ ನೆಗೆಟಿವ್ ಜಾಸ್ತಿ ಆಗಿರುವಾಗ ಯಾರೂ ಏನೂ ಮಾಡಲೂ ಆಗಲಿಲ್ಲ, ಕಾಳಸಂತೆಯ ಹಣ ಒದಗಿ ಬರಲಿಲ್ಲ ಪರಿಣಾಮ ಕಾಣುತ್ತಾ ಕಾಣುತ್ತಾ ಮುತ್ಸದ್ಧಿಯೊಬ್ಬನನ್ನು ಈ ರಾಜ್ಯ ಕಳೆದುಕೊಂಡಿತು.
ಇದು ಕಲಿಯುಗ!

ಇಷ್ಟೆಲ್ಲಾ ಬರೆದದ್ದು ಕೇವಲ ನಮ್ಮ ಸಂಸ್ಕೃತಿ ಸರಿಯಿರಬೇಕೆಂಬ ಕಾರಣಕ್ಕೆ! ನಿನ್ನೆ ರಾತ್ರಿ ಕುಡುಕನೊಬ್ಬ ಸಿಕ್ಕ. ಆತ ಹಗಲಲ್ಲಿ ಯಾವುದೋ ಬಟ್ಟೆ ಕಾರ್ಖಾನೆಯಲ್ಲಿ ಕಾರ್ಮಿಕ. ಸಂಬಳ ಬಂದಿದ್ದರಲ್ಲಿ ಎಷ್ಟು ಕುಡಿತಕ್ಕೆ ಎಂದು ಗೊತ್ತಿಲ್ಲ. ನಾನು ಕುಡಿಯಲು ನೀರಿನ ಕ್ಯಾನ್ ಒಂದನ್ನು ತರಲು ಹೋಗಿದ್ದೆ. ಆತ ಬಹಳ ಮಾತಾಡಿಸಿದ, ಅನುಮಾನ ಬಂತು ನನಗೆ! ಆದ್ರೂ ಅನಿವಾರ್ಯವಾಗಿ ಮಾತನಾಡಿದೆ. ಪ್ರತೀ ಮಾತಿಗೆ "ಸರ್ ಒಂದೇಳ್ತೀನಿ ಬೇಜಾರ್ಮಾಡ್ಕೋಬೇಡಿ " ಎನ್ನುತ್ತಿದ್ದ. ನಾನು ಆದಷ್ಟೂ ಅಲ್ಲಿಂದ ತಪ್ಪಿಸಿಕೊಳ್ಳಲು ನೋಡುತ್ತಿದ್ದೆ. " ಈ ರೀತಿ ಜಗತ್ತೆಲ್ಲಾ ಮಳೆ ಬೀಳ್ತೈತೆ ಇಲ್ಲಿ ಕರೆಂಟಿಲ್ಲಾ ಅಂದ್ರೆ ನನ್ಮಕ್ಳು ರಾಜ್ಕಾರ್ಣಿಗ್ಳು ಏನ್ಮಾಡ್ತವ್ರೆ ? " ಅಂತಿದ್ದ, ಬಾಯಿತಪ್ಪಿ "ಈ ಸಲ ಮಳೆ ಸರಿಯಾಗಿ ಆಗ್ತಾ ಇಲ್ಲಪ್ಪ " ಅಂದ್ಬಿಟ್ಟೆ ! ತಕಳಿ ಜೋರಾಗ್ಬಿಡ್ತು ! "ರೀ ನೀವೇನ್ರಿ ನೀವು ನಿಮಗ್ ಮಾತ್ರ ಮಳೆ ಇಲ್ವಾ ನೀವೇ ಫಸ್ಟು ಹಿಂಗೇಳ್ತಾಯಿರೋದು ಜಗತ್ತೆಲ್ಲಾ ಮಳೆ ಬೀಳ್ತೈತೆ " ಅಬ್ಬರಿಸುತ್ತಿದ್ದ! ನನಗೆ ಅಲ್ಲಿಗೆ ಸಾಕಾಯಿತು- ಇದು ಪಲಾಯನವಾದವಲ್ಲ. ಆತನ ಮನಸ್ಸಿಗೆ ಎಣ್ಣೆ ಮುಸುಕಿದೆ! ಆ ಘಳಿಗೆಯಲ್ಲಿ ಮೊದಲೇ ಸಂಸ್ಕಾರರಹಿತನಾದ ಆತ ಏನುಮಾಡಲೂ ಹೇಸುವವನಲ್ಲ! ಬರಿದೇ ನನ್ನ ಪೌರುಷವನ್ನು ತೋರಿಸುತ್ತೇನೆ ಎನ್ನುವ ಬದಲು ಅಂಥವರಿಂದ ದೂರವಿದ್ದರೇ ಒಳ್ಳೆಯದು. ಅಂಥವರನ್ನು ಸರಿಯಿದ್ದಾಗ [ಎಣ್ಣೆಹಾಕಿರದಿದ್ದಾಗ] ನಾನು ತಿದ್ದಬಲ್ಲೆ ಆದರೆ ಈ ಸನ್ನಿವೇಶದಲ್ಲಿ ಅಲ್ಲ. ಅದಕ್ಕೇ ಅಲ್ಲಿಂದ ತಕ್ಷಣಕ್ಕೆ ನಾನು ಹೊರಟೆ.

ಸಂಸ್ಕಾರ ರಹಿತ ಮನುಷ್ಯರು ಬದುಕಿದ್ದರೂ ಸತ್ತಂತೆಯೇ ! ರವಿಗೌಡನೆಂಬ ಸುಮಾರು ೨೬ ರ ವಯಸ್ಸಿನ ವ್ಯಕ್ತಿಯೊಬ್ಬ ಆಟೋ ಓಡಿಸುತ್ತಿದ್ದ. ಆತ ಆಗಾಗ ಮಿತ್ರರೊಬ್ಬರ ಕಾಂಡಿಮೆಂಟ್ಸ್ ಅಂಗಡಿಗೆ ಬರುತ್ತಿದ್ದ. ಒಂದಿನ ಸಿಗರೇಟು ಸಾಲವಾಗಿ ಕೊಡದಿದ್ದುದಕ್ಕೆ ಹೊಯ್ದ ಎಣ್ಣೆಯ ಅಮಲಿನಲ್ಲಿ ಅವರ ಶೋ ಕೇಸ್ ಎಲ್ಲಾ ಒಡೆದು ಪುಡಿಮಾಡಿದ. ಬಡವರಾಗಿದ್ದ ಅವರು ಬದುಕಿಗಾಗಿ ಸಾಲಮಾಡಿ ನಡೆಸುತ್ತಿದ್ದ ಆ ಅಂಗಡಿ ಮುಂಗಟ್ಟು ವಿನಾಕಾರಣ ಹಾಳಾಗಿದ್ದಕ್ಕೆ ಬಹಳೇ ಬೇಸತ್ತರು. ನಾನೊಂದು ಸಲಹೆ ನೀಡಿದೆ--ನೀವು ಇನ್ನುಮೇಲೆ ಅಂಗಡಿಯಲ್ಲಿ ಬೀಡಿ-ಸಿಗರೇಟು ಇಡಲೇಬೇಡಿ, ಅದಕ್ಕೆ ಬರುವುದೇ ಬೇರೆ ತರಗತಿಯ ಜನ! ಮತ್ತು ರವಿಗೌಡ ಬಹಳ ದಿನ ಬದುಕುವುದಿಲ್ಲ ಎಂತಲೂ ನನ್ನ ಬಾಯಲ್ಲಿ ಸಹಜವಾಗಿ ಉದ್ಗಾರವಾಗಿಬಿಟ್ಟಿತ್ತು. ಮುಂದೆ ಅವರು ಅದುಹೇಗೋ ಸರಿಪಡಿಸಿಕೊಂಡರು, ನನ್ನ ಸಲಹೆ ಅಳವಡಿಸಿಕೊಂಡರು. ವರ್ಷಪೂರ್ತಿಯಾಗಿತ್ತೋ ಇಲ್ಲವೋ ರವಿಗೌಡ ತಾನೂ ಪುಡಿರೌಡಿಯಾಗಿದ್ದು ರೌಡಿಗಳಿಂದ ಕೊಲ್ಲಲ್ಪಟ್ಟ. ಆತನ ಹೆಂಡತಿ-ಮಗುವಿನ ಸ್ಥಿತಿ ಗೋಳಾಗಿದೆ.

ಈಗ ಇನ್ನೊಂದು ಸಣ್ಣ ಮಾತು: ನಾವು ತಿನ್ನುವ ಆಹಾರಕ್ಕೂ ನಮ್ಮ ಮನಸ್ಸಿಗೂ ನೇರ ಹೊಂದಾಣಿಕೆಯಿದೆ. ಆಹಾರದಲ್ಲಿ ಸಾತ್ವಿಕ, ರಾಜಸ ಮತ್ತು ತಾಮಸ ಈ ಮೂರು ಥರದ ಆಹಾರಗಳು ನಮಗೆ ಸಿಗುತ್ತವೆ. ಸಾತ್ವಿಕ ಆಹಾರ ತಿನ್ನುವವರು ಸಾತ್ವಿಕರಾಗಿಯೂ, ರಾಜಸ ಆಹಾರ ತಿನ್ನುವವರು ರಾಜಸಮನೋವೃತ್ತಿಯವರಾಗಿಯೂ ಮತ್ತು ತಾಮಸ ಆಹಾರ ತಿನ್ನುವವರು ತಾಮಸ ಅಥವಾ ನೀಚ ಮನೋವೃತ್ತಿಯವರಾಗಿಯೂ ಬೆಳೆಯುತ್ತಾರೆ! ಹಣ್ಣು-ಹಂಪಲು-ತರಕಾರಿಗಳನ್ನು ತೀರಾ ಅತಿಯಾದ ಉಪ್ಪು-ಖಾರ-ಸಿಹಿ-ಹುಳಿ ಬಳಸದೇ ತಿಂದರೆ ಅದು ಸಾತ್ವಿಕ, ಕೆಲವು ತರಕಾರಿಗಳಾದ ಈರುಳ್ಳಿ, ಬೆಳ್ಳುಳ್ಳಿ ಇವೆಲ್ಲಾ ಸೇರಿದಂತೆ ಶಾಖಾಹಾರ, ಮಾಂಸಾಹಾರ ಅಧಿಕ ಉಪ್ಪು-ಖಾರ-ಸಿಹಿ-ಹುಳಿ ಇವನ್ನು ಆಹಾರಕ್ರಮದಲ್ಲಿ ಅಳವಡಿಸಿಕೊಂಡವರು ರಾಜಸರಾಗುತ್ತಾರೆ. ಎರಡನೆಯ ಎಲ್ಲವನ್ನೂ ಅತೀ ತಂಪು, ಅತೀ ಬಿಸಿ ಅಥವಾ ಹಳಸಿದ್ದು, ಘಾಟು ಹೊಂದಿರುವಂಥದ್ದು, ತಯಾರಿಸಿ ದಿವಸಗಳೇ ಆಗಿರುವಂಥದ್ದು ಇವನ್ನೆಲ್ಲಾ ತಿನ್ನುವವರು ತಾಮಸಾಹಾರಿಗಳು. ಆಯಾಯ ಆಹಾರಗಳಂತೇ ನಮ್ಮ ಮನಸ್ಸೂ ಕೂಡ, ಉತ್ತಮ, ಮಧ್ಯಮ ಮತ್ತು ಅಧಮ ಗುಣ-ಸ್ವಭಾವ ಸಂಸ್ಕಾರಗಳನ್ನು ಪಡೆಯುತ್ತದೆ. ಈಗ ನೀವೇ ನಿರ್ಧರಿಸಿ ನೀವು ಯಾವ ಆಹಾರದವರೆಂದು.

ಒಮ್ಮೆ ಬೆಂಗಳೂರಲ್ಲಿ ನನಗಿನ್ನೂ ಸ್ಟಾರ್ ಹೋಟೆಲ್ ಗಳಲ್ಲಿ ಊಟಮಾಡಿ ಅಭ್ಯಾಸವಿರದ ಸಮಯ, ಆಗ ಒಂದು ಕಂಪನಿಯ ಸೆಮಿನಾರ್ ಇತ್ತು. ಸೆಮಿನಾರ್ ಮುಗಿದು ಎಲ್ಲರೂ ಡಿನ್ನರ್ ಗೆ ತೆರಳಿದೆವು. ಅಲ್ಲಿ ಅಂದಿಗೆ ಅವರು ರೆಡಿಮಾಡಿಸಿದ್ದು ಬರೇ ವೆಜಿಟೇರಿಯನ್ ಫುಡ್ ಮಾತ್ರ. ಎಲ್ಲರೂ ಬಫೆಗೆ ತೆರಳಿದೆವು. ನನ್ನ ಜೊತೆ ಕೆಲವು ವೃತ್ತಿನಿರತ ಗೆಳೆಯರಿದ್ದರು. ಅವರು ಅದೂ ಇದೂ ನನಗೆ ಬಡಿಸುತ್ತಾ ಪನ್ನೀರ್ ಮಸಾಲ ಬಡಿಸಿಬಿಟ್ಟರು! ನನಗೆ ಪನ್ನೀರ್ ಬಗ್ಗೆ ಅಷ್ಟಾಗಿ ತಿಳಿದಿರಲಿಲ್ಲ. ಅದನ್ನು ಸ್ಪೂನ್ ನಿಂದ ಪ್ರೆಸ್ ಮಾಡಿದಾಗ ಮಾಂಸದ ಉಂಡೆಯ ಥರ ಮೆತ್ತಮೆತ್ತಗೆ ಮೆತ್ತಮೆತ್ತಗೆ! ನನಗೆ ಅಸಹ್ಯವಾದರೂ ಇನ್ನೊಮ್ಮೆ ಅದನ್ನು ಪರೀಕ್ಷಿಸಿ ನೋಡೋಣ ಅಂತ ಪ್ರೆಸ್ ಮಾಡಿದರೆ ಪಕ್ಕದಲ್ಲಿ ಮಜಾ ತೆಗೆದುಕೊಳ್ಳುತ್ತಿದ್ದ ನನ್ನ ಸ್ನೆಹಿತರು ನಕ್ಕೂ ನಕ್ಕೂ ನನ್ನನ್ನು ಮಾನಸಿಕವಾಗಿ ಎಲ್ಲರ ಎದುರಿಗೆ ಹೈರಾಣಾಗುವಂತೆ ಮಾಡಿದ್ದರು. ಮೊದಲೇ ಸಂಕೋಚ ಪ್ರವೃತ್ತಿಯವನಾದ ನನಗೆ ಎಲ್ಲವನ್ನೂ ಬಿಸಾಕಿ ಅಲ್ಲಿಂದ ಕಾಲ್ಕಿತ್ತರೆ ಸಾಕಾಗಿತ್ತು! ಒಂಚೂರೂ ಮಾತನಾಡಲು ಆಗದ ಮನೋಸ್ಥಿತಿ ನನ್ನದಾಗಿತ್ತು. ಅದು ಯಾವುದೋ ನಾನ್ ವೆಜ್ ಅಂತ ಮನಸ್ಸು ತಿಳಿದುಬಿಟ್ಟಿತ್ತು. ಪನ್ನೀರಿನ ಬಿಳಿಯ ಬಣ್ಣ ಮಧ್ಯೆ ಕಾಣಿಸಿಕೊಂಡಾಗಲಂತೂ ಚರ್ಮ ಕಿತ್ತಾಗ ನಮಗೆ ಎಲುಬು ಕಾಣಿಸಿದ ಹಾಗಾಗಿ " ಥೂ ಇದೇನೋ ಇಸ್ಸೀ ಬೇಡಪ್ಪಾ ಶಿವಾ " ಎಂದು ಸ್ವಗತ ಸಾರಿತ್ತು. ಅದು ಪನ್ನೀರ್ ಮಸಾಲ ಎಂಬುದು ಆಮೇಲೆ ತಿಳಿದಿದ್ದು. ಅಂದಿನ ನನ್ನ ಸ್ಥಿತಿ ಹೊಸದಾಗಿ ಗಂಡನ ಮನೆ ಸೇರಿದ ಹಳೆಯ ಕಾಲದ ಹೆಣ್ಣಿನ ಥರ ಇತ್ತು ಎಂದರೆ ತಪ್ಪಲ್ಲ! ಈ ಘಟನೆ ನೆನಪಾದಾಗ ನನಗೆ ನರಸಿಂಹ ಸ್ವಾಮಿಯವರ ’ ಮೊದಲ ದಿನ ಮೌನ ...ಅಳುವೇ ತುಟಿಗೆ ಬಂದಂತೆ ’ ಹಾಡು ಈ ಅರ್ಥದಲ್ಲಿ ಕಾಣಿಸುತ್ತದೆ!


ನೀವು ಯಾರೇ ಆಗಿರಿ, ನಿಮ್ಮಲ್ಲಿ ನನ್ನ ಪ್ರಾರ್ಥನೆ ಇಷ್ಟೆ-- ಸಹನೆ, ಸಹಿಷ್ಣುತೆ, ಸೌಜನ್ಯ, ಸೌಶೀಲ್ಯ ಇವನ್ನೆಲ್ಲಾ ಬೆಳೆಸಿಕೊಂಡು, ಕೆಟ್ಟಚಟಗಳಿಂದ ದೂರವಿದ್ದು, ಆದಷ್ಟೂ ಸಜ್ಜನರ ಸಹವಾಸದಲ್ಲಿರಿ. ಸತ್ ಸಂಸ್ಕಾರದಿಂದ ಸಿಗುವ ಫಲ ಬಹಳ ಉತ್ತಮವಾಗಿರುತ್ತದೆ.