ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, June 21, 2011

ಒಂದೇ ಮಾಸ್ತರಂ !


ಒಂದೇ ಮಾಸ್ತರಂ !

ಹಿಂದಕ್ಕೆಲ್ಲಾ ಹಳ್ಳಿಗಳಲ್ಲಿ ಸರಕಾರೀ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಕೆಲವುಕಡೆ ಏಕೋಪಾಧ್ಯಾಯ ಶಾಲೆಗಳಿದ್ದವು; ಈಗಲೂ ಅಲ್ಲಲ್ಲಿ ಇವೆ ಎಂಬುದನ್ನು ಕೇಳಿದ್ದೇನೆ! ಸ್ನೇಹಿತ ಶಿಕ್ಷಕರೊಬ್ಬರು ಇಂಥಲ್ಲಿಯ ಇಂಥಾ ಏಕೋಪಾಧ್ಯಾಯ ಶಾಲೆಗೆ ತಾನೇ ಮುಖ್ಯೋಪಾಧ್ಯಾಯ ಎನ್ನುತ್ತಿದ್ದರು! ನನಗೆ ಕೆಲವು ಸಮಯ ಗೊತ್ತೇ ಆಗಲಿಲ್ಲ, ಯೋಚಿಸಿನೋಡುತ್ತೇನೆ ಅದು ಏಕೋಪಾಧ್ಯಾಯಶಾಲೆ ಅಲ್ಲಿ ಮುಖ್ಯೋಪಾಧ್ಯಾಯ ಅಂದರೆ.....! ಪಾಪ ಅಂದಿನ ಮಾಸ್ತರುಗಳಿಗೆ ಇಂದಿನ ದರ್ಜೆಯಾಗಲೀ ಈ ಹೆಚ್ಚಿನ ಸಂಬಳವಾಗಲೀ ಇರುತ್ತಿರಲಿಲ್ಲ. ಶಿಕ್ಷಣ ಒಂದು ಸೇವೆ ಎಂದು ಕೆಲವರು ಆ ವೃತ್ತಿ ಮಾಡಿದರೆ ಇನ್ನು ಕೆಲವರು ಹೆಚ್ಚಿನವಿದ್ಯೆಕಲಿಯಲಾಗದುದ್ದಕ್ಕೆ ಜಾಸ್ತಿ ರಿಸ್ಕ್ ತಗೊಳ್ಳೋದು ಬೇಡಾಂತ ಸುಮ್ನೇ ಹೀಗೆ ’ಶಿಕ್ಷಕ’ರಾಗುತ್ತಿದ್ದರು.

ಕುಗ್ರಾಮಗಳ ಮೂಲೆಯಲ್ಲೆಲ್ಲೋ ಹದ್ದೂ ಹಾರಾಡದ ಜಾಗದಲ್ಲಿ ಇವರ ವಾಸ್ತವ್ಯ ಮತ್ತು ವೃತ್ತಿ. ರವಿಕಾಣದ ಜಾಗವನ್ನು ಕವಿ ಕಂಡ ಅಂತಾರಲ್ಲಾ ಕವಿ ಕಾಣದ ಜಾಗವೂ ಕೆಲವು ಇವೆ-ಅವುಗಳನ್ನು ನಮ್ಮ ಇಂತಹ ಮಾಸ್ತರು ಕಂಡಿದ್ದಾರೆ! ನಡೆಯಲು ಸರಿಯಾಗಿ ರಸ್ತೆಯೂ ಇಲ್ಲದ, ವಾಹನವನ್ನು ಚಿತ್ರಗಳಲ್ಲಷ್ಟೇ ಕಂಡ, ಯಾವ ಆಧುನಿಕ ವೈದ್ಯಕೀಯ ತುರ್ತು ಚಿಕಿತ್ಸಾಲಯಗಳೂ ಇಲ್ಲದ ಗ್ರಾಮಗಳಲ್ಲಿ ಇಂತಹ ಏಕೋಪಾಧ್ಯಾಯ ಶಾಲೆಗಳಿರುವುದರಿಂದ ಕಾಡದಾರಿಗಳಲ್ಲಿ ಹಳ್ಳಕೊಳ್ಳಗಳಲ್ಲಿ ನಡೆಯುತ್ತಾ, ಹಾಯುತ್ತಾ, ಕೆಲವೊಮ್ಮೆ ಹಾರುತ್ತಾ ಸಾಗುವ ಇವರಲ್ಲಿ ಅಪರೂಪಕ್ಕೆ ಕೆಲವೊಬ್ಬರಿಗೆ ಸ್ವಂತದ ಸೈಕಲ್ ಇರುತ್ತಿತ್ತು. ಮಿಕ್ಕುಳಿದವರಿಗೆ ’ವಿನೋಬಾಸರ್ವಿಸ್ಸೇ’ [ವಿನೋಬಾ ಭಾವೆಯವರನ್ನು ಸ್ಮರಿಸಿಕೊಳ್ಳಿ] ಗತಿ !

ಇಂತಹ ಶಾಲೆಗಳಲ್ಲಿ ಒಂದೇ ಕೊಠಡಿ ಇರುತ್ತಿದ್ದು ಕೆಲವೊಮ್ಮೆ ತಟ್ಟಿ ಬಿಡಾರಗಳೇ ಶಾಲೆಗಳಾಗಿ ವರ್ತಿಸಬೇಕಾದ ರೀಯಲ್ ಲೈಫು ಅದು. ಬೇಸಿಗೆ, ಮಳೆ,ಚಳಿ ಮೂರೂ ಕಾಲಗಳನ್ನು ಕೊಠಡಿಯ ಒಳಗೇ ದೃಶ್ಯಮಾಧ್ಯಮದ ರೀತಿ ನೈಜವಾಗಿ ತೋರಿಸುವ ಮಲ್ಟಿಮೀಡಿಯಾ ಸ್ಕೂಲು! ಗ್ರಾಮಗಳಲ್ಲಿ ಹದಿನೈದೋ ಇಪ್ಪತ್ತೋ ಮನೆ-ಮನೆಗಳಲ್ಲೇ ಅಂದಿನ ಕಾಲದ ಪಾಲಕರಿಗೆ ಒಬ್ಬೊಬ್ಬರಿಗೆ ಬಡತನಕ್ಕೆ ಇರಲಿ ಅಂತ ಹತ್ತಾರು ಮಕ್ಕಳು! ಹೀಗಾಗಿ ಮನೆ ಇಪ್ಪತ್ತೇ ಇದ್ದರೂ ಶಾಲೆ ನಡೆಸುವಷ್ಟು ವಿದ್ಯಾರ್ಥಿಗಳಿರುತ್ತಿದ್ದರು. ಆಗೆಲ್ಲಾ ಅಂಗನವಾಡಿ, ಬಾಲವಾಡಿ, ಶಿಶುವಿಹಾರ ಇವೆಲ್ಲಾ ಇರಲಿಲ್ಲ. ಹಲವು ಮಕ್ಕಳಿರುವ ಒಂದೊಂದೂ ಮನೆಗಳೇ ಶಿಶುವಿಹಾರಗಳಂಥಿದ್ದವು!

ಆಗಾಗ ಗ್ರಾಮಗಳಿಗೆ ಬರುತ್ತಿದ್ದ ಯಾವುದೋ ಸರಕಾರೀ ಮಂದಿ ನಿರೋಧದ ಉಪಯೋಗವನ್ನೂ ಜಾಹೀರಾತುಗಳನ್ನೂ ಅಲ್ಲಲ್ಲಿ ಕೆಲವು ಮನೆಗಳ ಮಣ್ಣಿನ ಗೋಡೆಗಳಿಗೆ ಅಂಟಿಸಿ ಹೋಗುತ್ತಿದ್ದರು. ವಿದ್ಯೆ ’ಇಲ್ಲದವ ಹದ್ದಿಗಿಂತ ಕಡೆ’ , ’ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ’, ’ಏರಡು ಬೇಕು ಮೂರು ಸಾಕು’ ಇಂತಹ ’ವೇದ ವಾಕ್ಯ’ಗಳು ಕೆಲವು ಆಧುನಿಕ ಅಧಿಕಾರಿಗಳಿಂದ ಗೋಡೆಬರೆಹಗಳಾಗಿ ಅಲ್ಲಲ್ಲಿ ಮನೆಗಳಲ್ಲೇ ಬರೆಯಲ್ಪಟ್ಟಿದ್ದವು! ಯಾಕೆಂದರೆ ಅಲ್ಲಿ ಪಂಚಾಯ್ತಿ ಕಟ್ಟಡವಾಗಲೀ ವ್ಯವಸ್ಥಿತ ಯಾವುದೇ ಸಮೂಹದ ಸಭಾಭವನವಾಗಲೀ ಇರಲಿಲ್ಲ. ಸಭೆಗಳು ನಡೆಯುತ್ತಿದ್ದುದು ಮರಗಳ ಕೆಳಗೆ; ಅದೊಂಥರಾ ಶಾಂತಿನಿಕೇತನ!

ಇಂತಹ ಶಾಲೆಗಳಲ್ಲಿ ಕೆಲಸಮಾಡುವ ಶಿಕ್ಷಕರಲ್ಲಿ ಹಲವರು ನಿಜವಾಗಿಯೂ ಶಿಕ್ಷಕರೇ ಆಗಿರುತ್ತಿದ್ದರು ಎಂದರೆ ಅಲ್ಲಿನ ಪರಿಸ್ಥಿತಿಅವರನ್ನು ಹಾಗೆ ಮಾಡಿಸುತ್ತಿತ್ತು ಎನ್ನಬಹುದೇನೋ. ಬರುವ ಸಂಬಳ ಸಮಯಕ್ಕೆ ಸರಿಯಾಗಿ ಬರುತ್ತಿರಲಿಲ್ಲ; ಆ ಸಂಬಳ ಖರ್ಚಿಗೆಸಾಲುತ್ತಿರಲಿಲ್ಲ. ಹೀಗಾಗಿ ಮಾಸ್ತರು ವ್ಯಾಪಾರ ಸಾಪಾರ ಮಾಡಿ ಜೀವನ ಸಾಗಿಸುವುದು ಅನಿವಾರ್ಯವಾಗಿತ್ತು. ಇಲ್ಲಿ ಕೆಲವೊಮ್ಮೆಶಾಲೆಗಳ ಬಾಗಿಲುಗಳೇ ತೆರೆಯದೇ ತಿಂಗಳುಗಟ್ಟಲೇ ಶಾಲೆಗಳು ಪುಸ್ತಕದಲ್ಲಿ ಮಾತ್ರ ’ಸಮರ್ಪಕವಾಗಿ ನಡೆಸಲ್ಪಡುತ್ತಿದೆ’ ಎಂದುಬರೆಯಲಾಗುತ್ತಿತ್ತು. ದಾರಿಗಳೇ ಸರಿಯಿರದ ಕಾರಣ ಯಾವುದೇ ಮೇಲಧಿಕಾರಿ ಅಷ್ಟಾಗಿ ಬರುವ ಪ್ರಮೇಯ ಇರುತ್ತಿರಲಿಲ್ಲ! ಹಾಗೊಮ್ಮೆ ಎಲ್ಲೋ ಹತ್ತಾರು ವರ್ಷಕ್ಕೊಮ್ಮೆ ಯಾರೋ ಒಬ್ಬ ಕೋಲಂಬಸ್ ಬಂದಹಾಗೇ ಬಂದರೆ ಅವನನ್ನು ಪ್ರೀತಿಯಿಂದ ಮರುಳುಮಾಡಿ ಮನಗೆಲ್ಲುವ ಕುಶಲಮತಿಗಳಾಗಿರುತ್ತಿದ್ದರು ಈ ನಮ್ಮ ಮಾಸ್ತರರು!

ಇಂತಹ ಮಾಸ್ತರುಗಳಲ್ಲಿ ಕೆಲವರಿಗೆ ಚಟಗಳೂ ಅಂಟಿಕೊಳ್ಳುತ್ತಿದ್ದವು. ಬ್ರಹ್ಮಚಾರಿಯಾಗಿ ಬಂದ ಬಹುತೇಕ ಮಾಸ್ತರು ಗೃಹಸ್ಥಾಶ್ರಮದ ದೀಕ್ಷೆಯನ್ನು ಪಡೆದೇ ಇಲ್ಲಿಂದ ತೆರಳುತ್ತಿದ್ದರು! ಕೆಲವರು ಹಲವು ’ಗೃಹಸ್ಥಾಶ್ರಮಗಳನ್ನೂ’ ಆರಂಭಿಸಿಕೊಂಡುಬಿಡುತ್ತಿದ್ದರು ! ಹಳ್ಳಿಗರ ಜೊತೆಗೆ ಇಸ್ಪೀಟಾಟ, ಹುತುತು-ಕಬಡ್ಡಿ, ಹಾಣೆಕೋಲು[ಚಿನ್ನಿದಾಂಡು] ಇವುಗಳನ್ನೆಲ್ಲಾ ಅಭ್ಯಾಸಮಾಡಿಕೊಂಡು ಅವುಗಳಲ್ಲಿ ಗೆದ್ದು ತಮಗೆ ಬೇಕಾದ ಕೆಲವು ಹೆಂಗಸರ/ಹುಡುಗಿಯರ ಎದುರು ಮೀಸೆ ತಿರುವಿಕೊಳ್ಳುವ ಅಪ್ಪಟ ದೇಸೀ ಗೋವಿಂದಕಲೆಯವರೂ ಇರುತ್ತಿದ್ದರು. ಬೀಡಿ ಸೇದುವುದು ಸರ್ವೇಸಾಮಾನ್ಯವಾದರೆ ಕೆಲವರು ಮೂಗನ್ನೇ ನಸ್ಯದ ಡಬ್ಬವನ್ನಾಗಿ ಮಾಡಿಕೊಳ್ಳುತ್ತಿದ್ದರು! ಅಪರೂಪಕ್ಕೊಮ್ಮೆ ಊರ ಹಬ್ಬದಲ್ಲಿ ಭಂಗೀ ಪಾನಕದ ಸಮಾರಧನೆಯಲ್ಲೂ ಇವರು ಪಾತ್ರವಹಿಸುತ್ತಿದ್ದರು.[ಹಾಗಂತ ಎಲ್ಲಾ ಶಿಕ್ಷಕರೂ ಹೀಗೇ ಎಂದು ತಪ್ಪು ತಿಳಿಯಬೇಡಿ]

ಹಳ್ಳಿಗರೂ ಅಷ್ಟೇ! ತಮ್ಮಲ್ಲಿನ ’ಕಲೆ’ಗಳನ್ನು ಕಲಿತುಕೊಂಡು ತಮ್ಮಲ್ಲಿ ಒಂದಾಗದ ಮಾಸ್ತರ ಅದೆಷ್ಟೇ ದೊಡ್ಡ ಮನುಷ್ಯನಾದರೂ ಅಲ್ಲಿಮಾತ್ರ ಮೂರು ತಿಂಗಳ ನಂತರ ಕಾಲಹಾಕಲಾಗಲೀ ಕಾಲುಹಾಕಲಾಗಲೀ ಕೊಡುತ್ತಿರಲಿಲ್ಲ! ಹೇಗೆ ತಮಿಳುನಾಡಿನ ಜನ ಅಲ್ಲಿಗೆಹೋದರೆ ತಮಿಳನ್ನು ಕಲಿತೇ ಬನ್ನಿ ಎನ್ನುತ್ತಾರೋ ಹಾಗೇ ನಮ್ಮ ಈ ಹಳ್ಳಿಗಳ ಜನ ಅವರದೇ ಆದ ಜೀವನ ಶೈಲಿಯನ್ನು ಎಲ್ಲರಿಗೂ ಹಚ್ಚುತ್ತಿದ್ದರು. ಆದರೂ ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಉದಾರ ಮನೋಭಾವವನ್ನು ಹೊಂದಿದ್ದರು ಎಂಬುದು ಮಾತ್ರಇಲ್ಲಿ ಎದ್ದು ಕಾಣುವ ಅಂಶ. ಮೇಲಾಗಿ ಮುಂದುವರಿದ ನಾಗರಿಕ ಸಮಾಜ ತಮ್ಮ ಸಮಾಜದ ಅವಿಭಾಜ್ಯ ಅಂಗವಾದ ಅ ಹಳ್ಳಿಗರನ್ನು ಹಾಗೇ ’ಸತ್ತ ಗಂಟಿಯ ಮೈಮೇಲಿನ ಉಣ್ಣಿ ತೆಗೆಯದೇ ಬಿಟ್ಟಹಾಗೇ’ ಬಿಡಲು ತಯಾರಿರಲಿಲ್ಲ. ಅದಕ್ಕಾಗಿ ಆರಿಸಿ ಬಂದ ಮುಂದಾಳುಗಳು ಸರಕಾರ ನಡೆಸುವಾಗ ಶಿಕ್ಷಣ ಇಲಾಖೆ ಹಳ್ಳಿಗಳಿಗೂ ಅಷ್ಟಿಷ್ಟು ಪ್ರಾಮುಖ್ಯತೆ ಕೊಡಲೇಬೇಕಾಗಿತ್ತು. ಆಗಹುಟ್ಟಿಕೊಂಡವೇ ಈ ಏಕೋಪಾಧ್ಯಾಯ ಶಾಲೆಗಳು.

ಒಬ್ಬನೇ ಶಿಕ್ಷಕ ಬೆಳಗಿನಿಂದ ಸಂಜೆಯವರೆಗೆ ಹಲವು ತರಗತಿಗಳನ್ನು ನಡೆಸುವುದು ಇಲ್ಲಿನ ವಿಶೇಷ. ಒಂದನೇ ತರಗತಿಯಿಂದ ಕನಿಷ್ಠ ನಾಲ್ಕನೇ ತರಗತಿಯವರೆಗೆ ಬೋಧಿಸಬೇಕಾಗುತ್ತಿತ್ತು. ಗಣಿತ, ಕನ್ನಡ, ಸಮಾಜ ಪರಿಚಯ, ವಿಜ್ಞಾನ ಇತ್ಯಾದಿ ಆರುವಿಷಯಗಳಾದರೆ ದೈಹಿಕ ಶಿಕ್ಷಣ-ವ್ಯಾಯಾಮ, ನೀತಿಪಾಠ ಹೀಗೇ ಹಲವು ಸಂಗತಿಗಳನ್ನು ಬೋಧಿಸುವ ’ಸಕಲಕಲಾವಲ್ಲಭ’ ರಾಗಿರಬೇಕಾಗಿತ್ತು ಅಲ್ಲಿನ ಮಾಸ್ತರು. ಆಂಗ್ಲ ಭಾಷೆಯ ಪದಗಳು ಬಂದರೆ ಅರ್ಥಕ್ಕಾಗಿ ’ಗೈಡು’ ಹಿಡಿದು ಒದ್ದಾಡುವುದು ಸದಾಕಾಲ ಕಾಣುತ್ತಿತ್ತು. ಗಣಿತದಲ್ಲಿ ತಪ್ಪುಗಳನ್ನು ಮಾಡುತ್ತಿದ್ದರೂ ಮಕ್ಕಳಿಗೆ ಅದೇ ಸತ್ಯವೆಂಬಂತೇ ಭಾಸವಾಗುತ್ತಿತ್ತು! ಇವತ್ತಿಗೂ ನೀವು ನಿಮ್ಮ ಮಕ್ಕಳನ್ನು ಕೇಳಿ-ಮಿಸ್ ಹೇಳಿದ್ದೇ ಪಾಠ; ಅದೇ ಸತ್ಯ! ಮಕ್ಕಳ ಮನಸ್ಸು ಅಂತಹ ಮುಗ್ಧ.

ಇಂತಹ ಶಾಲೆಗಳಲ್ಲಿ ಕಸಗುಡಿಸುವುದು, ನೆಲದಮೇಲೆ ಕೂರಲು ಮರದ ಹಲಗೆಗಳಿದ್ದರೆ ಅವುಗಳನ್ನು ಜೋಡಿಸುವುದು ಎಲ್ಲಾ ಮಕ್ಕಳೇ. ಕರಿಹಲಗೆಯನ್ನು ಅದು ಹೇಗೋ ಇಲಾಖೆಯ ಜನ ಕಳುಹಿಸುತ್ತಿದ್ದರು. ಸುಣ್ಣದ ಕಡ್ಡಿ[ಚಾಕ್ ಪೀಸ್]ಯನ್ನು ಮಾಸ್ತರು ದೂರದ ಪಟ್ಟಣದಿಂದ ತರಬೇಕಾಗುತ್ತಿತ್ತು. ’ಜಾಕ್ ಅಫ್ ಆಲ್ ಮಾಸ್ಟರ್ ಆಫ್ ನನ್’ ಆದ ಆ ಮಾಸ್ತರು ತಮಗೆ ತೆರಪುಳ್ಳ ಸಮಯದಲ್ಲಿ ಶಾಲೆಗೆ ಬರುತ್ತಿದ್ದರು. ಅವರಿಗೆ ಪುರುಸೊತ್ತಿಲ್ಲದಿದ್ದರೆ " ಮಕ್ಕಳೇ ನಿಮಗೆ ನಾಳೆಯಿಂದ ರಜಾ ಇರುತ್ತದೆ, ಶಾಲೆ ಆರಂಭಿಸಿದಾಗ ಗಂಟೆ ಬಾರಿಸುತ್ತೇನೆ ಬಂದುಬಿಡಿ" ಎಂದು ಕಳಿಸುತ್ತಿದ್ದರು. ತಮ್ಮ ಊರಿಗೆ ಹಬ್ಬಕ್ಕೋ ಹುಣ್ಣಿಮೆಗೋ ತೆರಳುವ ಶಿಕ್ಷಕರು ವಾರಗಟ್ಟಲೆ ಬರುತ್ತಿರಲಿಲ್ಲ. ಬಂದಮೇಲೆ ಲೋಹದ ತುಂಡೊಂದನ್ನು ಬಡಿದಾಗ ಊರ ಜನ ಮಕ್ಕಳಿಗೆ ಮಾಸ್ತರು ಬಂದಿರುವುದಾಗಿ ತಿಳಿಸುತ್ತಿದ್ದರು. ಊರಲ್ಲೂ ಇದಕ್ಕೆ ಯಾರದೇ ಅಕ್ಷೇಪಣೆ ಇರುತ್ತಿರಲಿಲ್ಲ!

ಇಂತಹ ಶಾಲೆಗಳಲ್ಲಿ ಕಲಿತರೂ ಮುಂದೆ ಹಲವೆಡೆ ವಾರಾನ್ನದಲ್ಲಿ ಕಲಿತ ಹಲವು ವಿದ್ಯಾರ್ಥಿಗಳು ಇಂದು ಒಳ್ಳೊಳ್ಳೆಯ ನಾಗರಿಕರಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿದ್ದಾರೆ ಎಂಬುದು ಗುರುತಿಸಬೇಕಾದ ವಿಷಯ. ಆದರೆ ಅಂದಿನ ಆ ದಿನಗಳಲ್ಲಿ ತಮಗೇ ಬಾರದ ವಿಷಯಗಳನ್ನೂ ಕಲಿಸುತ್ತಿದ್ದ ಆ ಮಾಸ್ತರುಗಳು ಯಾವುದೋ ಸಣ್ಣ-ಪುಟ್ಟ ತಪ್ಪಿಗೆ ವಿದ್ಯಾರ್ಥಿಗಳನ್ನು ಮನಬಂದಂತೇ ಥಳಿಸುತ್ತಿದ್ದರು, ಶಿಕ್ಷಿಸುತ್ತಿದ್ದರು. ಶಿಕ್ಷಕ ನಾಕು ಬಾರಿಸಿದ ಎಂದರೆ ಮಗನಿಗೆ ವಿದ್ಯೆ ಚೆನ್ನಾಗಿ ಬರುತ್ತದೆ ಎಂಬ ಭಾವನೆಯಿಂದ ಪಾಲಕರು ಯಾರೂ ಏನನ್ನೂ ಹೇಳುತ್ತಿರಲಿಲ್ಲ. ಬದಲಾಗಿ ಆಗಾಗ ಶಿಕ್ಷೆ ನೀಡದಿದ್ದರೆ " ಈ ಮಾಸ್ತರ ಏನೂ ಪ್ರಯೋಜನ ಇದ್ದಾಂಗಿಲ್ಲ" ಎಂಬ ನಿರ್ಧಾರಕ್ಕೆ ಬಂದು ಬಿಡುತಿದ್ದರು.

ಯಾರದೋ ಮೇಲಿನ ಸಿಟ್ಟಿಗೆ ತಮಗೆ ಮಾಸ್ತರು ಕೊಡುವ ಶಿಕ್ಷೆಗಳನ್ನೂ ಅವರ ಸರ್ವಾಭರಣ ಸೇವೆಯನ್ನೂ ವರ್ಣಿಸಿ ನೊಂದ ಕೆಲವುಮಕ್ಕಳು ಹಾಡೊಂದನ್ನು ಗುನುಗುತ್ತಿದ್ದರು. ’ವಂದೇ ಮಾತರಂ’ ರಾಗದಲ್ಲಿ ಹುಡುಗರು ಹಾಡುತ್ತಿದ್ದ ಈ ಹಾಡಿನೊಂದಿಗೆ ಅಂತಹ ಮಾಸ್ತರುಗಳನ್ನು ನೆನೆಸಿಕೊಳ್ಳೋಣ ಬನ್ನಿ --

ಒಂದೇ ಮಾಸ್ತರಂ ಒಂದೇ ಮಾಸ್ತರಂ
ಹೊಡಿತಾಂ ಬಡಿತಾಂ ಮಕ್ಳ ಜೀವ ಹಿಡ್ಕ ತಿಂತಾಂ
ನಿತ್ಯ ಅದೇ ಕಥೆಂ ಮಾಸ್ತರಂ ಒಂದೇ ಮಾಸ್ತರಂ

ಮೂವತ್ತು ಮಾರ್ಕಿನ ಬೀಡಿ ಕೈಯ್ಯಲೀಂ
ಮಕ್ಕಳನಾಚೆಗೆ ಅಟ್ಟುತ ಸೇದುವಂ !
’ಸುವಾಸನೇಂ’! ಹೊಗೆಬಿಡುತಿದ್ದನಂ !
ಕುಳ್ಳಗೆ ಇದ್ದರೂ ಮಹಾ ಪರಾಕ್ರಮಿಂ
ಮಾಸ್ತರಂ ! ಒಂದೇ ಮಾಸ್ತರಂ

ಇಸ್ಪೀಟಾಟಕೆ ತಕ್ಷಣ ಹಾಜರುಂ
ಕಾಯ್‍ಯಾಪಾರದಿ ನಿಪುಣಾಗ್ರೇಸರಂ
ಹೋದಲ್ಲೆಲ್ಲಾಂ-ಒಂಥರ ವಾಸನೇಂ !
ಆ ಜಮದಗ್ನಿಯ ಎಡವಟ್ಟಲಿ ಜನಿಸಿದಂ
ಮಾಸ್ತರಂ ! ಒಂದೇ ಮಾಸ್ತರಂ

ಮೂಲಂಗಿ ಪ್ಯಾಂಟಿಗೆ ನೀರು ತಾಗಿಲ್ಲವಂ
ಅಂಗಿಗೆ ಅದು ಬೇಕಾಗಿಲ್ಲವಂ !
ತಿಂಗಳಿಗೊಮ್ಮೆ-ತೊಳೆದರೆ ಜಾಸ್ತಿಯುಂ !
ಕೊಳಕರಲ್ಲಿಯೇ ಕೊಳಕ ಶಿಖಾಮಣೀಂ
ಮಾಸ್ತರಂ ! ಒಂದೇ ಮಾಸ್ತರಂ

ಇದು ಕೇವಲ ತಮಾಷೆಗಾಗಿ, ಉತ್ತಮ ಶಿಕ್ಷಕರು ಅಧಿಕ ಸಂಖ್ಯೆಯಲ್ಲಿದ್ದಾರೆ, ಆದರೆ ಆಗಾಗ ಕಾಮುಕರು, ಬ್ರಷ್ಟಾಚಾರಿಗಳು ವಿಶ್ವವಿದ್ಯಾನಿಲಯಗಳವರೆಗೂ ಹಬ್ಬಿದ್ದಾರೆ ಎಂಬ ಸುದ್ದಿ ಬರುತ್ತಿರುತ್ತದೆ. ದಯವಿಟ್ಟು ಆದರ್ಶ ಶಿಕ್ಷಕರು ಇದನ್ನು ಓದಿ ಮನನೋಯುವುದು ಬೇಡ, ಉತ್ತಮ ಶಿಕ್ಷಕರಿಗೆ ಸದಾ ನಮ್ಮ ವಂದನೆಗಳು ಸಲ್ಲುತ್ತವೆ, ಸ್ವಸ್ಥ ಸಮಾಜದ ನಿರ್ಮಾಣ-ನಿರ್ವಹಣೆಯಲ್ಲಿ ಅವರ ಪಾತ್ರ ಹಿರಿದು, ಅಂತಹ ಗುರುಸದೃಶರಿಗೆ ಇನ್ನೊಮ್ಮೆ ಅಭಿನಂದನೆಗಳು, ನಮಸ್ಕಾರ.