ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, August 5, 2012

’ವೈದಿಕ ವೈರಸ್’ ಬರೆದು ವೈಷ್ಯಮ್ಯದ ವಿಷಕಾರಿದ ಅಗ್ನಿ ಶ್ರೀಧರ್ ಗೆ ಪ್ರತ್ಯುತ್ತರ

 ಚಿತ್ರಗಳ ಋಣ: ಅಂತರ್ಜಾಲ 
’ವೈದಿಕ ವೈರಸ್’ ಬರೆದು ವೈಷ್ಯಮ್ಯದ ವಿಷಕಾರಿದ ಅಗ್ನಿ ಶ್ರೀಧರ್ ಗೆ ಪ್ರತ್ಯುತ್ತರ 

ತಮ್ಮೊಳಗೇ ತಾವು ತತ್ವಜ್ಞಾನಿ ಎಂದುಕೊಂಡಿರುವ ’ಅಗ್ನಿ’ ಪತ್ರಿಕೆಯ ಶ್ರೀಧರರೇ,

ಬ್ರಹ್ಮಾಂಡದ ರಹಸ್ಯವನ್ನೇ ಅರೆದು ಕುಡಿದಿದ್ದೇನೆ ಎಂಬ ಆತುರದ ಅನಿಸಿಕೆಯಲ್ಲಿ ಜುಲೈ ೧೨ರ ನಿಮ್ಮ ಸಂಚಿಕೆಯಲ್ಲಿ ’ವೈದಿಕ ವೈರಸ್’ ಎಂಬ ಶಿರೋನಾಮೆಯನ್ನು ಇಟ್ಟು ಇಡೀ ಸಂಚಿಕೆಯಲ್ಲಿ ತಮ್ಮ ಹಾಗೂ ತಮ್ಮ ಸಮಾನ ಮನಸ್ಕರ ಒಳತೋಟಿಯನ್ನು ಬಹಿರಂಗಗೊಳಿಸಿದ್ದೀರಿ. ಅಷ್ಟಾಗಿ ಬ್ರಾಹ್ಮಣ್ಯ ಎಂಬ ಪದದ ಅರ್ಥವೇ ಗೊತ್ತಿಲ್ಲದ ನಿಮಗೆ, ಬೆಂಗಳೂರಿನ ಕನಕಪುರ ರಸ್ತೆಯ ’ಆರ್ಟ್ ಆಫ್ ಲಿವಿಂಗ್’ ನ ಶ್ರೀ ರವಿಶಂಕರ್ ಗುರೂಜಿಯವರನ್ನು ಕಂಡರೆ ಎಂತಹ ದ್ವೇಷ ಎಂಬುದು ನಮೆಗೆಲ್ಲಾ ಗೊತ್ತೇ ಇದೆ. ಅದರ ಹಿಂದಿನ ಸ್ವಾರಸ್ಯವೇನು ಎಂಬುದನ್ನೂ ಎಲ್ಲರೂ ಮನಗಂಡಿದ್ದಾರೆ. ಇತ್ತೀಚೆಗೆ ಆಧುನಿಕತೆಯ ಅನುಸರಣೆ ಎಂಬ ಸೋಗಿನಲ್ಲಿ ಎಡಪಂಥೀಯರು ಎನಿಸಿಕೊಳ್ಳುವವರ ಸಂಖ್ಯೆ ತೀವ್ರವಾಗಿ ಜಾತಿಯಾಗತೊಡಗಿದೆ. ಹೀಗೆ ಜಾಸ್ತಿಯಾಗುವುದಕ್ಕೆ ಹಲವರಿಗೆ ತಮ್ಮೊಳಗಿನ ಬ್ರಾಹ್ಮಣದ್ವೇಷವೇ ಕಾರಣ ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲವಷ್ಟೇ? ತಮ್ಮ ತತ್ವಜ್ಞಾನಕ್ಕೆ ಇನ್ನೂ ಸೇರ್ಪಡೆಗೊಂಡಿರದ ಅಥವಾ ಉದ್ದೇಶ ಪೂರ್ವಕವಾಗಿ ಬಿಟ್ಟುಹೋದ : ಬ್ರಾಹ್ಮಣರು ಯಾರು? ಯಾಕಾಗಿ ಕೆಲವುಜನ ಬ್ರಾಹ್ಮಣರು ಎನಿಸಿಕೊಂಡರು?  ಮತ್ತು ಬ್ರಾಹ್ಮಣ್ಯ ಎಂದರೇನು?-- ಈ ಕೆಲವು ಅಂಶಗಳ ಬಗ್ಗೆ ಇಲ್ಲಿ ನಮೂದಿಸುವ ಸಲುವಾಗಿ ಹೀಗೆ ಬರೆಯುತ್ತಿದ್ದೇನೆ.

ಪೂರ್ವೈತಿಹಾಸಕಾರರು ಹೇಳಿದ್ದಕ್ಕೆಲ್ಲಾ ಆಧಾರಗಳು ಸಿಗುವುದಿಲ್ಲ. ಅದೊಂದು ಅಂದಾಜಿನ ಲೆಕ್ಕಾಚಾರವಾಗಿದೆ. ಹೀಗಾಗಿ ಪುಣ್ಯಭೂಮಿ ಭಾರತದ ಮೂಲ ನಿವಾಸಿಗಳು ಬರೇ ದ್ರಾವಿಡರು ಎಂಬುದನ್ನು ನಂಬಲು ಯಾವುದೇ ದಾಖಲುಪತ್ರಗಳು ದೊರೆಯುವುದಿಲ್ಲ. ಇಡೀ ಈ ಭೂಮಂಡಲವನ್ನೇ ಒಂದು ಕಾಲಕ್ಕೆ ನಾಗಕುಲದವರು ಆಳುತ್ತಿದ್ದರು ಎಂಬುದು ಪುರಾಣೋಕ್ತವಾಗಿದೆ-ಅದನ್ನು ನೀವು ಅಲ್ಲಗಳೆಯುತ್ತೀರಿ ಯಾಕೆಂದರೆ ವೇದ-ಶಾಸ್ತ್ರ-ಪುರಾಣಗಳು ಬ್ರಾಹ್ಮಣರ ಸೃಷ್ಟಿ ಎಂದು ಭಾವನೆಯುಳ್ಳ ಜನ ನೀವಾಗಿದ್ದೀರಿ. ನಾವೆಲ್ಲಾ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಓದುವಾಗ ’ಆರ್ಯರು ಭಾರತಕ್ಕೆ ಬಂದುದು’ ಎಂಬ ಅಧ್ಯಾಯವನ್ನು ಇತಿಹಾಸದ ವಿಷಯಕವಾಗಿ ಓದಿದ್ದೆವು. ಆರ್ಯಾವರ್ತ ಎಂಬ ಸಿಂಧೂನದಿಯ ಕಣಿವೆಯ ಜನಾಂಗ ಈ ಭವ್ಯ ಭಾರತಕ್ಕೆ ಅಲ್ಲಿಂದ ವಲಸೆ ಬಂತು ಎಂದುಕೊಂಡರೂ ಸಿಂಧೂ ನದಿ ಒಂದು ಕಾಲಕ್ಕೆ ಭಾರತದ ಅಂಗವೇ ಆಗಿತ್ತಲ್ಲಾ? ಇಡೀ ಈ ಜಗತ್ತಿನಲ್ಲಿ ಇವತ್ತು ಭಾರತ ಪುಣ್ಯಭೂಮಿ, ಶಾಂತ-ಪ್ರಶಾಂತ ಪ್ರದೇಶ ಎನಿಸಿಕೊಳ್ಳಲಿಕ್ಕೆ ಮೂಲಭೂತ ಕಾರಣವೇ ಇಲ್ಲಿನ ಸಂಸ್ಕೃತಿಯಾಗಿದೆ ಎಂಬುದನ್ನಾದರೂ ಒಪ್ಪುತ್ತೀರೇ?  

ಭಾರತೀಯ ಸಂಸ್ಕೃತಿಗೆ ಇಲ್ಲಿನ ಸುಲಲಿತ ಸಂಸ್ಕೃತವೇ ಕಾರಣ ಎಂಬುದು ಸ್ವಲ್ಪ ತಿಳುವಳಿಕೆಯುಳ್ಳ ಯಾವ ಮಗುವಿಗಾದರೂ ಗೊತ್ತು! ಮನುಷ್ಯರು ಎನಿಸಿಕೊಂಡವರಿಗೆ ಮೆದುಳು ಎಂಬ ತಲೆಯೊಳಗಿನ ಅಂಗ ಜಾಸ್ತಿ ವಿಕಸಿತವಾಗಿರುತ್ತದೆ ಎಂಬುದು ಇಂದಿನ ವಿಜ್ಞಾನವೂ ಒಪ್ಪಿಕೊಂಡ ವಿಷಯವಷ್ಟೇ? ಅಂತಹ ಮೆದುಳನ್ನು ಪಡೆದ ಮನುಷ್ಯ ಅದನ್ನು ಉನ್ನತಿಗೂ ಅವನತಿಗೂ ಯಾವರೀತಿಯಲ್ಲೇ ಬೇಕಾದರೂ ಬಳಸಿಕೊಳ್ಳಬಹುದು ಎಂಬುದೂ ಸತ್ಯ ಅಲ್ಲವೇ? ವಿಕಸಿತ ಮೆದುಳಿನ ವಿಕೃತ ನಿರ್ಧಾರಗಳಿಗೆ ಕಡಿವಾಣ ಹಾಕುವ ಸಲುವಾಗಿ, ಜಗತ್ತಿಗೇ ಆದರ್ಶಪ್ರಾಯವಾದ ’ವೇದಗಳು’ಎಂಬ ಜೀವನಸೂತ್ರಗಳನ್ನು ಅಪೌರುಷೇಯವಾಗಿ ಅನುಗ್ರಹರೂಪದಲ್ಲಿ ಪಡೆದು, ಅವುಗಳನ್ನು ಅನುಷ್ಠಾನದಲ್ಲಿ[ಅನುಷ್ಠಾನ ಎಂದರೆ ಜಪ ಎಂದುಕೊಳ್ಳಬೇಡಿ, ಅನುಷ್ಠಾನ ಎಂದರೆ ಕಾರ್ಯಗತ ಎಂದರ್ಥ]ಇಟ್ಟುಕೊಂಡಿರುವುದರಿಂದ  ಜಗತ್ತಿನಾದ್ಯಂತ ಭಾರತಕ್ಕೆ ಮಾನ್ಯತೆ ಇದೆ. ನಮ್ಮಲ್ಲಿನ ಇಂದಿನ ಬ್ರಾಹ್ಮಣ ಯುವಕರಲ್ಲಿ ಕೆಲವರೂ ಸೇರಿದಂತೇ ಎಡಪಂಥೀಯರು ಅಸಡ್ಡೆಯಿಂದ ಕಾಣುವ ವೇದಗಳನ್ನು ವಿದೇಶೀಯರು ಓದಿಕೊಳ್ಳತೊಡಗಿದ್ದಾರೆ; ಅನುಸರಿಸಲು ಮುಂದಾಗಿದ್ದಾರೆ!

ಚಂದ್ರಮಾ ಮನಸೋ ಜಾತಃ 
ಚಕ್ಷೋಸ್ಸೂರ್ಯೋ ಅಜಾಯತ

ದೇವರ ಮನಸ್ಸಿನಿಂದ ಚಂದ್ರನೂ ದೇವರ ಕಣ್ಣುಗಳಿಂದ ಸೂರ್ಯನೂ ಜನಿಸಿದರಂತೆ.

ಋಗ್ವೇದದ ಪವಮಾನ ಪಂಚಸೂಕ್ತಗಳಲ್ಲಿ ಒಂದಾದ ಪುರುಷಸೂಕ್ತದ

ಬಾಹ್ಮಣೋಸ್ಯ ಮುಖಮಾಸೀತ್
ಬಾಹೂರಾಜನ್ಯಃ ಕೃತಃ|
ಊರೂ ತದಸ್ಯ ಯದ್ವೈಶ್ಯಃ
ಪದ್ಭ್ಯಾಂ ಶೂದ್ರೋ ಅಜಾಯತ ||    

--ಈ ಭಾಗವನ್ನು ತಾವು ತಪ್ಪುತಪ್ಪಾಗಿ ’ಗರ್ದಭ ಗಾಥೆ’ಯಂತೇ ಒದರಿಕೊಂಡಿದ್ದೀರಿ; ಮತ್ತು ಯಾವ ಬ್ರಾಹ್ಮಣನೂ ಈ ಒಂದು ಮಂತ್ರಕ್ಕೆ ಅರ್ಥ ಹೇಳುವ ಸಮಯ ಬಂದಾಗ ಸೋಲುತ್ತಾನೆಂದೂ ಇದೊಂದೇ ಮಂತ್ರ ಇಡೀ ಬ್ರಾಹ್ಮಣ ಕುಲದ ಭಾವನೆಯನ್ನು ತಿಳಿಸಿಕೊಡುವುದರಿಂದ ವೇದದಲ್ಲಿ ಇದು ಅಡಕವಾಗಿರುವುದು ಇಂದಿನ ಬ್ರಾಹ್ಮಣರಿಗೆ ಅರಗಿಸಿಕೊಳ್ಳಲಾಗದ ಕಬ್ಬಿಣದ ಕಡಲೆ ಎಂದೂ ಅಪ್ಪಣೆ ಕೊಡಿಸಿದ್ದೀರಿ!! ಶ್ರೀಧರರೇ ಹೇಳುತ್ತೇನೆ ಕೇಳಿ: ಈ ಮಂತ್ರ ಭಾಗದ ಅರ್ಥವಿಷ್ಟೇ:

ಅಮೂರ್ತರೂಪದ ಜಗನ್ನಿಯಾಮಕ ಶಕ್ತಿಯನ್ನು ಪುರುಷರೂಪದಲ್ಲಿ ಇಲ್ಲಿ ವರ್ಣಿಸಲಾಗಿದೆ. ದೇವರ ಮುಖದ ಭಾಗ ಬ್ರಾಹ್ಮಣ ಎಂತಲೂ ತೋಳುಗಳ ಭಾಗ ಕ್ಷತ್ರಿಯ ಎಂತಲೂ, ತೊಡೆಗಳ ಭಾಗ ವೈಶ್ಯ ಎಂತಲೂ ಪಾದಗಳ ಭಾಗ ಶೂದ್ರ ಎಂತಲೂ ತಿಳಿಸಲಾಗಿದೆ. ದೈವ ಸಂಕಲ್ಪದಿಂದ ಆ ಯಾ ಭಾಗಗಳಿಂದ ಜನಿಸಿದ ಜನಾಂಗವೇ ಮುಂದೆ ಹೀಗೆ ವರ್ಣಾಶ್ರಮವಾಗಿ ಬೆಳೆಯಿತೇ ಹೊರತು ಇದು ಯಾರೋ ಬ್ರಾಹ್ಮಣರು ಮಾಡಿದ  ಗುಂಪುಗಾರಿಕೆಯಲ್ಲ. ನಿಮ್ಮ ಹಿಂದಿನ ಸಂಚಿಕೆಯೊಂದರಲ್ಲಿ, ಯಾರೋ ನಿಮ್ಮ ಬ್ರಾಹ್ಮಣ ಮಿತ್ರ, "ಸಾವಿರಾರು ವರ್ಷಗಳಿಂದ ನಮ್ಮನ್ನು ನಮ್ಮ ಹಿರಿಯರು ಇಂಥಾ ಆಹಾರಗಳಿಂದ ವಂಚಿತರಾಗುವಂತೇ ಮಾಡಿಬಿಟ್ಟಿದ್ದಾರೆ" ಎಂದು ಹೇಳಿ ಮಾಂಸಾಹಾರದ ಹೋಟೆಲ್ಲಿಗೆ ಕರೆದೊಯ್ದ ಎಂದೂ ಬರೆದಿದ್ದೀರಿ. ಬ್ರಾಹ್ಮಣ್ಯ ಎಂಬುದೊಂದು ಜೀವನಪರ್ಯಂತದ ವ್ರತ. ಹುಟ್ಟಿನಿಂದ ಸಾವಿನವರೆಗೆ ಅನುದಿನ ಜರುಗಬೇಕಾದ ಕಠಿಣ ನಿಯಮಗಳನ್ನು ಅನುಸರಿಸಿ ನಡೆಸುವ ಈ ವ್ರತಕ್ಕೆ ಎಲ್ಲರೂ ಒಗ್ಗುವುದಿಲ್ಲ. ಬ್ರಾಹ್ಮಣ ಎಂದರೆ ನೀವಂದುಕೊಂಡಂತೇ ಕುಳಿತು ಉಂಬವನಲ್ಲ; ನಿಜವಾದ ಬ್ರಾಹ್ಮಣ ಎಷ್ಟೋ ದಿನ ಊಟವನ್ನೇ ಮಾಡುವುದಿಲ್ಲ ಎಂಬುದೂ ತಮ್ಮ ಗಮನಕ್ಕಿರಲಿ! ಸಮಾಜದ ಇತರೇ ವರ್ಗಗಳನ್ನು ದುಡಿಸಿ ಅವರಮೂಲಕ ದಾನವಾಗಿಯೋ ಕಾಣಿಕೆಯಾಗಿಯೋ ಧನಕನಕ ಸುವಸ್ತು,ಧಾನ್ಯಾದಿಗಳನ್ನು ಸ್ವೀಕರಿಸುವ ಹುನ್ನಾರ ಬ್ರಾಹ್ಮಣರದ್ದು ಎಂಬುದು ತಮ್ಮ ಹೇಳಿಕೆಯಾಗಿದೆ; ದಾನವನ್ನು ಸ್ವೀಕರಿಸುವುದು ಇನ್ನೊಬ್ಬರ ಇಹಜೀವಿತದ ಪಾಪಕರ್ಮಗಳನ್ನು ಸ್ವೀಕರಿಸಿದಂತೇ ಎಂದು ವೇದ ಹೇಳುತ್ತದೆ, ಸ್ವೀಕರಿಸಿದ ದಾನದಿಂದ ಆರ್ಜಿತವಾದ ಪಾಪವನ್ನು ಕಳೆದುಕೊಳ್ಳುವುದಕ್ಕೆ ಕೆಲವು ಕಠಿಣ ನಿಯಮಗಳೂ ಹೇಳಲ್ಪಟ್ಟಿವೆ, ಅಂತಹ ನಿಯಮಗಳನ್ನು ಎಲ್ಲರೂ ಪಾಲಿಸಲು ಸಾಧ್ಯವಿಲ್ಲವಾದ್ದರಿಂದ ಬ್ರಾಹ್ಮಣರು ಗುರುವಿನ ಸ್ಥಾನದಲ್ಲಿ ನಿಂತು ಸನ್ಮಾರ್ಗವನ್ನು ಬೋಧಿಸುತ್ತಾ ದಾನಾದಿಗಳನ್ನು ಸ್ವೀಕರಿಸುತ್ತಾರೆಯೇ ವಿನಃ ಅದು ಇಷ್ಟಪಟ್ಟು ನಡೆಸುವ ಕೆಲಸವಲ್ಲ.

ಸಮಾಜದಲ್ಲಿ ಹಾಗೆ ಕುಳಿತಲ್ಲೇ ಗಂಟುಕಟ್ಟುವ ಕೆಲಸಮಾಡಿದ್ದರೆ, ಕಟ್ಟಿದ ಗಂಟುಗಳಿಂದ ಹಲವು ಮನೆಗಳನ್ನೋ ಆಸ್ತಿಪಾಸ್ತಿಗಳನ್ನೋ ಸಂಪಾದಿಸಿಕೊಂಡು ಎಲ್ಲರಿಗಿಂತಾ ಆರ್ಥಿಕವಾಗಿ ಸುಭದ್ರ ಸ್ಥಿತಿಯಲ್ಲಿ ಇರಬೇಕಾಗಿತ್ತು. ಬ್ರಾಹ್ಮಣರನ್ನು ಪರಿಗಣಿಸಿದರೆ ಇವತ್ತಿನ ಸ್ಥಿತಿ ತಮಗೆ ತಿಳಿಯುತ್ತದೆ: ಸಮಾಜದಲ್ಲಿ ಹಿಂದಕ್ಕೆ ರಾಜಾಶ್ರಯದ ಉಂಬಳಿ ವಗೈರೆಯಿಂದ ಸಹಜಪ್ರಾಪ್ತವಾದ ಜಮೀನುಗಳು ಇಂದು ಉಳಿದಿಲ್ಲ.  ಸರ್ಕಾರ ಸೇರಿದಂತೇ ಯಾರ ಕೃಪಾಪೋಷಣೆಯೂ ಬ್ರಾಹ್ಮಣರಿಗೆ ಈಗ ಲಭ್ಯವಿಲ್ಲ. ಬ್ರಾಹ್ಮಣ ಹೊರಗೆ ಬಂದು ಸಮಾಜದ ಎಲ್ಲರೊಡನೆ ಬೆರೆಯುವುದರಿಂದ ಬ್ರಾಹ್ಮಣ್ಯಕ್ಕೆ ತೊಂದರೆಯಾಗುತ್ತದೆ-ಮಲಿನ ಮನಸ್ಕ ಬ್ರಾಹ್ಮಣ ಬ್ರಾಹ್ಮಣ್ಯವನ್ನು ಕಾಪಿಡಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಬ್ರಾಹ್ಮಣರು ತಮ್ಮ ವ್ರತಭಂಗವಾಗದಂತೇ ನೋಡಿಕೊಳ್ಳಲು ಕೇವಲ ಆಧ್ಯಯನ, ಅಧ್ಯಾಪನ, ಪೂಜೆ-ಪುನಸ್ಕಾರ, ಪ್ರವಚನ, ಪಾರಾಯಣ ಇತ್ಯಾದಿಗಳಲ್ಲಷ್ಟೇ ತೊಡಗಿಸಿಕೊಂಡಿದ್ದರು. ವೇದಗಳ ಆಧಾರದಲ್ಲಿ ರಾಜರುಗಳಿಗೆ ಧರ್ಮಮಾರ್ಗವನ್ನು ಬೋಧಿಸುತ್ತಿದ್ದರು. ಅಂತಹ ಮಹಾನುಭಾವರುಗಳಿಂದ ಹಲವು ರಾಜ್ಯಗಳು ಅಭಿವೃದ್ಧಿಯಲ್ಲಿ ನಡೆದಿದ್ದವು.     

ಕರ್ನಾಟಕದ ಮೊದಲ ರಾಜ್ಯವಾದ ಕದಂಬರ ಸ್ಥಾಪಕ ಮಯೂರ ವರ್ಮ ಎಂಬುದು ತಮಗೆ ತಿಳಿದಿರಲೂ ಬಹುದು. ಆತ ಮೂಲದಲ್ಲಿ ವೇದಪಾರಂಗತರಾದ ವೈದಿಕರೊಬ್ಬರ ಮಗನಾಗಿ ಮಯೂರಶರ್ಮನಾಗಿದ್ದ. ಚೋಳರ ದುರಾಡಳಿತಕ್ಕೆ ಬೇಸತ್ತ ಮಯೂರಶರ್ಮ ಕಾಲಾನಂತರದಲ್ಲಿ ಮಯೂರವರ್ಮನಾಗಿ ಕ್ಷತ್ರಿಯನಾಗಿ ಬದಲಾಗಿದ್ದು ಈಗ ಇತಿಹಾಸ. ಯಾವುದೋ ಕಾಲಘಟ್ಟದಲ್ಲಿ ಕದಂಬರು ಜೈನಧರ್ಮಕ್ಕೆ ಮತಾಂತರಗೊಂಡಿದ್ದೂ ಕೂಡ ಈಗ ಕಥೆ! ’ಕರ್ನಾಟಕ ಸಿಂಹಾಸನ’ವನ್ನು ಸ್ಥಾಪಿಸುವುದಕ್ಕೆ ಶೃಂಗೇರೀ ಪೀಠದ ಮಹರ್ಷಿ ವಿದ್ಯಾರಣ್ಯರು ಕಾರಣೀಭೂತರಾದರು; ಈ ಭೂಪ್ರದೇಶದ ಒಳಿತನ್ನು ಸಂಕಲ್ಪಿಸಿದ ಅವರ ಮನದಲ್ಲಿ ಹಕ್ಕ-ಬುಕ್ಕರು ಯೋಗ್ಯರು ಎನಿಸಿದಾಗ, ಅವರೀರ್ವರನ್ನೂ ಕರೆದು, ಹೇಗೆ ನಡೆಸಬೇಕೆಂದು ಮಾರ್ಗದರ್ಶಿಸಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ್ದರು. ಮೌರ್ಯರ ಕಾಲಕ್ಕೆ ಚಾಣಕ್ಯನೆಂಬ ಮೇಧಾವಿ ಅವರ ಉನ್ನತಿಗೆ ಕಾರಣನಾದ. ಇಂತಹ ಅಪ್ರತಿಮ ಮೇಧಾವಿಗಳೆಲ್ಲಾ ವೇದಗಳನ್ನೇ ಅಧಾರವಾಗಿಟ್ಟುಕೊಂಡು ನಡೆದರು; ಲೋಕೋಪಕಾರಕವಾದ ಗ್ರಂಥಗಳನ್ನೂ ನೀತಿಪಾಠಗಳನ್ನೂ ಬರೆದರು. ಇಂತಹ ಮಹನೀಯರನ್ನೆಲ್ಲಾ ನೀವು ಸ್ವಾರ್ಥಿಗಳು, ಪ್ರಧಾನ ಮಂತ್ರಿಸ್ಥಾನಗಳಲ್ಲಿ ನಿಂತು ತಮಗೆ ಬೇಕಾದ ರೀತಿ ರಾಜ್ಯಭಾರ ಮಾಡಿಸಿದರು ಎಂದು ತುಚ್ಛವಾಗಿ ಬರೆದಿದ್ದೀರಿ. ಸ್ವಾರ್ಥವಿದ್ದರೆ ಅವರುಗಳೇ ಬೇಕಾದ್ದು ಮಾಡಬಲ್ಲ ಬ್ರಹ್ಮತೇಜವನ್ನು ಪಡೆದಿದ್ದರು ಎಂಬುದನ್ನು ಮರೆಯಬೇಡಿ.

ಸರ್ ಎಂ ವಿಶ್ವೇಶ್ವರಯ್ಯ ಇರದಿದ್ದರೆ ಅರ್ಧ ಕರ್ನಾಟಕಕ್ಕೆ ಇವತ್ತು ನೀರಿನ ಸೌಲಭ್ಯವಾಗಲೀ, ರಾಜ್ಯಕ್ಕೂ ದೇಶಕ್ಕೂ ಜಲವಿದ್ಯುತ್ ಸೌಲಭ್ಯವಾಗಲೀ ಇರುತ್ತಿರಲಿಲ್ಲ. ಅಂದಿನ ಬೆಂಗಳೂರಿಗೆ ಅಭೂತಪೂರ್ವ ಒಳಚರಂಡಿ ವ್ಯವಸ್ಥೆಯನ್ನು ರೂಪಿಸಿದ ಆ ಮಹಾತ್ಮ ತನ್ನ ಕಾರ್ಯವೈಖರಿಗೆ ಮನಸೋತು ಮೈಸೂರು ಮಹಾರಾಜರು ಕೊಟ್ಟ ಬಹುಮಾನಧನದಲ್ಲಿ ಎಸ್.ಜೆ.ಪಾಲಿಟೆಕ್ನಿಕ್ ಕಟ್ಟಿಸಿದರು. ಬದುಕಿನಲ್ಲಿ ಕೌಟುಂಬಿಕ ಸುಖವನ್ನೂ ಸ್ವಾರ್ಥವನ್ನೂ ಬದಿಗೊತ್ತಿದವರು ಸರ್.ಎಂ.ವಿ. ಇನ್ನು ಎಸ್.ಎಲ್ ಭೈರಪ್ಪನಂತಹ ಕಾದಂಬರಿಕಾರರು ಸರಕಾರ ಕೊಟ್ಟ ಸನ್ಮಾನಧನ ೫ ಲಕ್ಷವನ್ನು ಇಡಿಯಾಗಿ ಅದೇ ಸಭೆಯಲ್ಲಿ ಬಡಮಕ್ಕಳ ಉದ್ಧಾರಕ್ಕೆ ಸರಕಾರ ಕೈಗೊಂಡ ಯೋಜನೆಗೆ ನೀಡಿಬಿಟ್ಟರು. ಮೀಸಾ ಕಾಯ್ದೆಯಿಂದ ಸಮಾಜ ತತ್ತರಿಸಿರುವಾಗ ಬೇಸತ್ತಿದ್ದ ಶಿವರಾಮ ಕಾರಂತರು ತಮಗೆ ಘೋಷಿಸಿದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸದೇ ಮರಳಿಸಿ ಅಂದಿನ ಕೇಂದ್ರ ಸರಕಾರಕ್ಕೆ ಛೀಮಾರಿ ಹಾಕಿದರು. ಇದಲ್ಲದೇ ಸರಕಾರದಿಂದ ಖರ್ಚುಹಾಕಿಸದೇ,  ಪಿತ್ರಾರ್ಜಿತವಾಗಿ ತಮಗೆ ಬಂದಿದ್ದ ಜಮೀನಿನಲ್ಲಿ ಅರ್ಧವನ್ನು ಮಾರಿ-ಬಂದ ಹಣದಿಂದ ಹೆಚ್ಚಿನ ತಿಳುವಳಿಕೆಗಾಗಿ ವಿದೇಶಕ್ಕೆ ಹೋಗಿ ಬಂದರು. ಬದುಕಿನ ಕಡೆತನಕ ಬಡತನದಲ್ಲೇ ಬದುಕಿದ್ದ ಧೀಮಂತ ಡೀವಿಜಿ, ೧೯೭೫ನೇ ಇಸವಿಯಲ್ಲಿ ತನಗೆ ಸಮಾಜದಿಂದ ಸನ್ಮಾನಧನವಾಗಿ ಬಂದ ಹಣವನ್ನು[ ಇಂದಿಗೆ ಆ ಹಣ ಅಜಮಾಸು ಒಂದುಕೋಟಿ ೨೦ ಲಕ್ಷಗಳಷ್ಟು!] ಸಮಾಜದ ಒಳಿತಿಗಾಗಿ ಗೋಖಲೆ ಸಾರ್ವಜನಿಕ ಸಂಸ್ಥೆಯನ್ನು ನಿರ್ಮಿಸಲು ನೀಡಿಬಿಟ್ಟರು; ಸನ್ಮಾನ ಪಡೆದ ಮಾರನೇ ದಿನವೇ ಕಾಣಲು ಮನೆಗೆ ಬಂದ ಅತಿಥಿಗಳಿಗೆ ಕಾಫಿ ಕೊಡಲೂ ಸಾಮಗ್ರಿ ಇಲ್ಲದಾಗ ಹತ್ತಿರದ ಶೆಟ್ಟರ ಅಂಗಡಿಗೆ ಹುಡುಗನೊಬ್ಬನ ಮೂಲಕ ಚೀಟಿ ಕಳಿಸುತ್ತಾರೆ: "ಅತಿಥಿಗಳು ಬಂದಿದ್ದಾರೆ, ದಯವಿಟ್ಟು ಕಾಫಿಪುಡಿ ಸಕ್ಕರೆ ಕೊಟ್ಟು ಕಳಿಸಿ, ಒಂದೆರಡು ದಿನಗಳಲ್ಲಿ ಹಣ ತಲ್ಪಿಸುತ್ತೇನೆ." ಡೀವಿಜಿಯವರ ಬಗ್ಗೆ ತುಂಬಾ ಕಳಕಳಿಯಿದ್ದು ಆಡಿದ ಮಾತನ್ನು ತಪ್ಪದವರು ಎಂಬ ವಿಶ್ವಾಸವನ್ನು ಹೊಂದಿದ್ದ ಶೆಟ್ಟರು ಸಾಮಾನು ಕಳಿಸಿದರು, ಮಾರನೇ ದಿನ ತನ್ನ ಗಳಿಕೆಯ ಹಣದಿಂದಲೇ ಡೀವೀಜಿ ಸಾಲವನ್ನು ತೀರಿಸಿದರು.  ಇವರೆಲ್ಲಾ ಬ್ರಾಹ್ಮಣರಲ್ಲವೇ?

ಬ್ರಹ್ಮರ್ಷಿ ವಿಶ್ವಾಮಿತ್ರ ಒಂದಾನೊಂದು ಕಾಲಕ್ಕೆ ಕ್ಷತ್ರಿಯ ರಾಜನಾಗಿದ್ದನೆಂಬುದನ್ನು ನೀವು ಓದಿರಬಹುದೇ? ತನ್ನ ಸಮಸ್ತ ಕ್ಷತ್ರಿಯಬಲವನ್ನೇ ಉಪಯೋಗಿಸಿ ಮುನಿ ವಶಿಷ್ಠರ ಮೇಲೆ ದಾಳಿ ನಡೆಸಿದಾಗ ಪರಿಣಾಮ ಏನಾಯ್ತು ಎಂಬುದರ ಬಗ್ಗೆ ನೀವು ಕೇಳಿರಬಹುದೇ? "ದಿಗ್ಬಲಂ ಕ್ಷತ್ರಿಯ ಬಲಂ ಬ್ರಹ್ಮತೇಜಂ ಬಲಂ ಬಲಂ" ಎಂಬ ಅನುಭವವನ್ನು ಪಡೆದ ಚಂಡ ಕೌಶಿಕ ವಶಿಷ್ಠರಿಂದಲೇ "ಬ್ರಹ್ಮರ್ಷಿಯಾದೆ" ಎನಿಸಿಕೊಳ್ಳುವಷ್ಟು ಎತ್ತರಕ್ಕೆ ಬೆಳೆದಿದ್ದು ಬ್ರಾಹ್ಮಣ್ಯವನ್ನು ಅನುಸರಿಸಿ ಘೋರವೂ ಕಠಿಣಾತಿಕಠಿಣವೂ ಆದ ಜಪತಪಾದಿಗಳನ್ನು ನಡೆಸಿದ್ದರಿಂದ ಅಲ್ಲವೇ? ಈ ಲೋಕದಲ್ಲಿ ದೇವರ ಅವತಾರಿಯಾಗಿ ಬ್ರಾಹ್ಮಣನಾಗಿ ಜನಿಸಿದ ಪರಶುರಾಮ, ತಂದೆಯ ಸಾವಿನ ದ್ವೇಷವನ್ನು ತೀರಿಸಿಕೊಳ್ಳುವ ಸಲುವಾಗಿ ಕ್ಷತ್ರಿಯ ಕುಲವನ್ನೇ ಬಹುಪಾಲು ಮುಗಿಸಿ ಬ್ರಹ್ಮಕ್ಷತ್ರಿಯನಾಗಿಬಿಟ್ಟ; ಕ್ಷತ್ರಿಯಕುಲದಲ್ಲಿ ಜನಿಸಿದ ಶ್ರೀರಾಮನನ್ನೂ ಯಾದವ ಕುಲದಲ್ಲಿ ಜನಿಸಿದ ಶ್ರೀಕೃಷ್ಣನನ್ನೂ ನಿತ್ಯ ಪೂಜಿಸುವ ಬ್ರಾಹ್ಮಣರು ಪರಶುರಾಮನನ್ನು ಪೂಜಿಸುವಗೊಡವೆಗೆ ಹೋಗಲಿಲ್ಲ!--ಇಲ್ಲಿ ಜಾತ್ಯಾತೀತ ಮನೋಸ್ಥಿತಿಯನ್ನು ತಾವು ಕಾಣಬಲ್ಲಿರೇ? ರಾಮಾಯಣವನ್ನು ಬರೆದ ವಾಲ್ಮೀಕಿ ಬೇಡನಾಗಿದ್ದ ಎಂದು ಎಂದೂ ಹಳಿಯಲಿಲ್ಲ, ವೇದಗಳನ್ನೇ ವಿಂಗಡಿಸಿದ ವೇದವ್ಯಾಸರ ಮೂಲವನ್ನು ದೂಷಿಸಲಿಲ್ಲ ಎಂಬುದನ್ನೂ ಗಮನಿಸಿದರೆ ಒಳಿತು. ಮೇಲಾಗಿ ತೀರಾ ಇತ್ತೀಚಿನವರೆಗೂ ಬದುಕಿದ್ದ ಮಹರ್ಷಿ ಮಹೇಶ್ ಯೋಗಿ ಎಂಬವರು ಈ ದೇಶಕ್ಕೆ ’ಭಾವಾತೀತ ಧ್ಯಾನ’ವನ್ನು ಸುಲಭರೀತಿಯಲ್ಲಿ ತೋರಿಸಿಕೊಟ್ಟರು; ಮಹೇಶ್ ಯೋಗಿ ಹುಟ್ಟಿನಿಂದ ಅಬ್ರಾಹ್ಮಣರಾಗಿದ್ದರೂ ಬ್ರಾಹ್ಮಣರನೇಕರು ಅವರನ್ನು ಗುರುವೆಂದೇ ಗೌರವಿಸಿದರು; ಉತ್ತಮ ಗುರುವಿನ ಸಲ್ಲಕ್ಷಣಗಳನ್ನು ಹೊಂದಿದ್ದ ಅವರು ವಿದೇಶಗಳಲ್ಲೂ ತಮ್ಮ ಧ್ಯಾನಕ್ರಮವನ್ನೂ ಆ ಮೂಲಕ ಲೋಕಹಿತವನ್ನು ಪ್ರಚುರಪಡಿಸಿದರು-ಇದನ್ನೂ ಸ್ವಾರ್ಥಕ್ಕಾಗಿ ಅಥವಾ ಹಣ-ಆಸ್ತಿ ಗಳಿಕೆಗಾಗಿ ಎನ್ನುತ್ತೀರೇನೋ ಅಲ್ಲವೇ? 


ಮಹರ್ಷಿ ಮಹೇಶ್ ಯೋಗಿ

ಭಾವಾತೀತ ಧ್ಯಾನ[Transcendental Meditation]

’ಭಾವಾತೀತ ಧ್ಯಾನ’ವೆನ್ನಿ, ’ಸುದರ್ಶನ ಕ್ರಿಯೆ’ ಅನ್ನಿ ಎಲ್ಲವೂ ನಮ್ಮಲ್ಲಿನ ಧ್ಯಾನಕ್ರಮದ ವಿಭಿನ್ನ ರೂಪಗಳಷ್ಟೇ. ಹಿಂದೂ ಯೋಗವಿಧಿಯ ಅಷ್ಟಾಂಗಯೋಗದಲ್ಲಿ ’ಧಾರಣ’ ಹಂತಕ್ಕೂ ಮೊದಲಿನ ಸ್ಥಿತಿ ಧ್ಯಾನ. ಧ್ಯಾನಸ್ಥ ಸ್ಥಿತಿಯಲ್ಲಿ ಮನುಷ್ಯ ದೈವತ್ವಕ್ಕೆ ಹತ್ತಿರವಾಗುತ್ತಾನೆ ಎಂಬುದಕ್ಕೆ ಸಾಕ್ಷಿಯಾಗಿ ಪದ್ಮಾಸನಹಾಕಿ ಧ್ಯಾನಕ್ಕೆ ಕುಳಿತ ಹಲವು ಯೋಗಿಗಳು ಗಾಳಿಯಲ್ಲಿ ಬಲೂನು ತೇಲಿದಂತೇ ತೇಲುವುದು ಅಲ್ಲಲ್ಲಿ ಕೇಳಿಬರುತ್ತದೆ; ವಿಜ್ಞಾನಿಗಳೂ ಸೇರಿದಂತೇ ಇದನ್ನು ಹಲವು ಜನ ನೋಡಿಯೂ ಇದ್ದಾರೆ! ಸದ್ಯಕ್ಕೆ ವಿಜ್ಞಾನದಲ್ಲಿ ಇದಕ್ಕೆ ಕಾರಣಗಳಿಲ್ಲ-ಜಾದೂ ಇಲ್ಲದೇ ಮಾನವ ಶರೀರ ಗಾಳಿಯಲ್ಲಿ ತೇಲುವಂತೇ ಮಾಡುವ ಯಾವುದೇ ಸೂತ್ರವೂ ಇಲ್ಲ; ಆದರೆ ಪರಿಪೂರ್ಣ ಧ್ಯಾನಕ್ಕೆ ಅಂತಹ ತೇಲಿಸುವ ತಾಕತ್ತು ಇದೆ ಎಂಬುದು ದಾಖಲೆಗಳ ಸಹಿತ ತಿಳಿದುಬರುತ್ತದೆ. ’ಭಾವಾತೀತ ಧ್ಯಾನ’ವನ್ನು ಕೈಗೊಂಡ ಮಹೇಶ್ ಯೋಗಿಗಳೂ ಮತ್ತು ಅವರ ಶಿಷ್ಯಂದಿರನೇಕರು ಹಾಗೆ ತೇಲುತ್ತಿದ್ದರು ಎಂಬುದನ್ನು ಚಿತ್ರಗಳಲ್ಲಿ, ದೃಶ್ಯಮಾಧ್ಯಮಗಳಲ್ಲಿ ಸೆರೆಹಿಡಿಯಲಾಗಿದೆ. ಮೇಲಾಗಿ ಯಾವುದೇ ವೈಜ್ಞಾನಿಕ ಉಪಕರಣಗಳಿಲ್ಲದ ಕಾಲಘಟ್ಟದಲ್ಲಿ ಧ್ಯಾನದಿಂದ ತಪಸ್ಸಿದ್ಧಿಯಿಂದ ತನಗೆ ದೊರೆತ ಖಗೋಳದ ಬಗೆಗಿನ ಮಾಹಿತಿಯನ್ನು ಆರ್ಯಭಟ ಬರೆದಿಟ್ಟಿದ್ದಾನೆ! ವಿಜ್ಞಾನ ಹುಟ್ಟುವುದಕ್ಕಿಂತ ಮೊದಲೇ ನಮ್ಮ ಗಣಿತಜ್ಞರು ಪಂಚಾಂಗಶ್ರವಣ ಮಾಡಿಸುತ್ತಿದ್ದರು. ಅಶ್ವಘೋಷ, ಬಾಣ, ಭಾರವಿ, ಭಾಸ, ಕಾಳಿದಾಸ, ಪಾಣಿನಿ ಮೊದಲಾದ ಮಹಾನ್ ಕವಿಗಳು ದಾರ್ಶನಿಕರಂತೆನಿಸಿದ್ದು ಬ್ರಾಹ್ಮಣ್ಯವನ್ನು ಆಚರಿಸಿ ಬರೆದ ತಮ್ಮ ಮಹಾಕಾವ್ಯಗಳಿಂದ.    

ಬ್ರಾಹ್ಮಣರು ರಾತ್ರಿ ಊಟಮಾಡಬಾರದು ಎಂಬ ನಿಯಮವಿದೆ. ಯಾಕೆಂದರೆ ದೈಹಿಕವಾಗಿ ತೀರಾ ಕಠಿಣಕೆಲಸಗಳನ್ನು ನಿರ್ವಹಿಸಲಾಗದ, ನಿರ್ವಹಿಸದ ಅವರಿಗೆ ರಾತ್ರಿಯ ಊಟ ಜೀರ್ಣವಾಗುತ್ತಿರಲಿಲ್ಲ. ವೇದವನ್ನೇ ಆಚರಿಸುವ ಅವರು ಹೊರಗೆಲಸಗಳಲ್ಲಿ ತೊಡಗಿಕೊಳ್ಳುವುದರಿಂದ ವೇದಗಳ ಅಧ್ಯಯನ, ಅಧ್ಯಾಪನ ಮತ್ತು ಆಚರಣೆ ಕುಂಠಿತಗೊಳ್ಳುತ್ತದೆ. ವೇದ ಮಂತ್ರಗಳ ಸಂತುಲಿತ ಉಚ್ಚಾರಕ್ಕೆ ನಾಲಿಗೆ ತೆಳುವಾಗಿರಬೇಕಾಗುತ್ತದೆ, ನಿದ್ರೆಯನ್ನೂ ಅಪಾನವಾಯುವನ್ನೂ ನಿಯಂತ್ರಿಸಿಕೊಳ್ಳುವ ಶಕ್ತಿಯಿರಬೇಕಾಗುತ್ತದೆ, ಚಳಿ-ಮಳೆ-ಬಿಸಿಲಿನಲ್ಲೂ ಶಾಸ್ತ್ರೋಕ್ತ ಬಟ್ಟೆಗಳನ್ನಷ್ಟೇ ಧರಿಸಿ ಮಿಕ್ಕಿದ್ದನ್ನು ವರ್ಜಿಸಬೇಕಾಗುತ್ತದೆ. ಅಂತಹ ಕರ್ಮಠ ಬ್ರಾಹ್ಮಣರು ಇಂದಿಗೂ ಇದ್ದಾರೆ, ಅವರು ದಾನಪಡೆಯಲೂ ಪಡೆದ ದಾನವನ್ನು ಜೀರ್ಣಿಸಿಕೊಳ್ಳಲೂ ಅರ್ಹರು. ಇದಕ್ಕೆ ತಾಕತ್ತು ಬೇಕಾಗುತ್ತದೆ. ಅಯ್ಯಪ್ಪ ಭಕ್ತರ ಆಚರಣೆಗಳ ವಿರುದ್ಧ ಚಕಾರವೆತ್ತದ ಇತರೇ ಸಮಾಜ ಜಾತಿಯಿಂದ ಬ್ರಾಹ್ಮಣರು ಎಂಬ ಒಂದೇ ಕಾರಣಕ್ಕೆ ಯಾಕೆ ಬ್ರಾಹ್ಮಣರನ್ನು ವಿರೋಧಿಸುತ್ತಿದೆ ಎಂಬುದೇ ವಿಚಿತ್ರವೆನಿಸುತ್ತದೆ!

ಅನಾದಿ ಕಾಲದಿಂದ ಬ್ರಾಹ್ಮಣರು ಅಧ್ಯಾಪನ-ವಿದ್ಯೆ ಕಲಿಸುವಿಕೆ ನಡೆಸಿಯೇ ಬಂದಿದ್ದಾರೆ. ಬಹಳಷ್ಟು ವಿದ್ಯೆಗಳನ್ನು ಬಹಳಜನರಿಗೆ ಕಲಿಸಿಕೊಟ್ಟಿದ್ದಾರೆ. ಗುರು ದ್ರೋಣರು, ಪರಶುರಾಮರು ಇತ್ಯಾದಿಯಾಗಿ ಹಲವು ಮಹನೀಯರು ಋಷಿಮುನಿಗಳು ಬ್ರಾಹ್ಮಣರೇ ಆಗಿದ್ದರು; ಅವರ ತಪೋಬಲದಿಂದ ಬ್ರಾಹ್ಮಣರನ್ನು ಮೀರಿಸಿ ಇನ್ನೂ ಎತ್ತರಕ್ಕೆ ಬೆಳೆದಿದ್ದರು; ಇಹಪರಗಳೆರಡನ್ನೂ ಅರಿತವರಾಗಿದ್ದರು. ಕೇವಲ ತಮ್ಮ ಸ್ವಾರ್ಥಕ್ಕಾಗಿ ಯಾವುದನ್ನೂ ಮಾಡದೇ ಲೋಕದ ಹಿತಾರ್ಥ ಎಲ್ಲವನ್ನೂ ನಡೆಸಿದರು. ಅಲ್ಲಿ ತಮ್ಮ ತ್ಯಾಗವನ್ನೂ ತೋರಿದರು. ಕಾವಿಯನ್ನು ಧರಿಸಿದ್ದರು. ತ್ಯಾಗದ ಸಂಕೇತ ಕಾವಿಯನ್ನು ಇಂದು ಅದಕ್ಕೇ ನಮ್ಮ ಬಾವುಟದಲ್ಲಿ ಅಳವಡಿಸಿಕೊಳ್ಳಲಾಗಿದೆ. ಮಿಕ್ಕೆಲ್ಲರೂ ಬಳಸಬಹುದಾದ ಸೌಲಭ್ಯಗಳನ್ನೂ ಆಹಾರಗಳನ್ನೂ ಬ್ರಾಹ್ಮಣರು ಬಳಸುವಂತಿಲ್ಲ! ಬಳಸಿದರೆ ದೇವರನ್ನು ಆಗಮೋಕ್ತ ರೀತ್ಯಾ ಪೂಜಿಸುವಂತಿಲ್ಲ! ಹಾಗೂ ಎಲ್ಲವನ್ನೂ ಮೀರಿ ಬೇಕುಬೇಕಾದ್ದು ಮಾಡುತ್ತಾ ಪೂಜಿಸಿದರೆ ಪರಿಣಾಮ ನೆಟ್ಟಗಿರಲಿಕ್ಕಿಲ್ಲ!

ಅಂಜನಶಾಸ್ತ್ರವೆಂಬುದು ಜ್ಯೋತಿಷವಿಜ್ಞಾನದ ಒಂದು ಭಾಗ. ಅದರಲ್ಲೂ ದರ್ಪಣಾಂಜನ ಎಂಬ ವಿಭಾಗವೊಂದಿದೆ. ಆಂಜನೇಯನನ್ನು ಉಪಾಸನೆಗೈದು, ಭಗವತಿಯನ್ನು ಸಂಪ್ರಾರ್ಥಿಸಿ ಅದನ್ನು ಬಳಸುವ ಪದ್ಧತಿ ಇಂದಿಗೂ ಇದೆ. ಇತ್ತೀಚಿನ ಮಾಧ್ಯಮ ವಾಹಿನಿಯೊಂದರಲ್ಲಿ ನಡೆಸಿದ " ಸ್ವಯಂವರ" ಧಾರಾವಾಹಿಗಳಲ್ಲಿ ವಧೂವರರ ಬಗ್ಗೆ ಅವರ ಇವತ್ತಿನ ಸ್ಥಿತಿಗತಿ,ಚಹರೆ, ಕುರುಹುಗಳ ಬಗ್ಗೆ ತಿಳಿಸಿಕೊಡಲು ಬಂದ ಒಬ್ಬ ಪಂಡಿತರು ಹುಡುಗಿಯೊಬ್ಬಳಿಗೆ ತೊಡೆಯಮೇಲ್ಭಾಗದಲ್ಲಿ ಮಚ್ಚೆ ಇರುವುದನ್ನು ತಿಳಿಸಿದಾಗ ಆಕೆಯೂ ಸೇರಿದಂತೇ ನೋಡುಗರೆಲ್ಲಾ ದಂಗಾಗಿದ್ದಾರೆ! ಇದು ದರ್ಪಣಾಂಜನ ಶಾಸ್ತ್ರ!! ಇಂತಹ ಅಲೌಕಿಕ ವಿದ್ಯೆಗಳ ಆಕರವಾದ ವೇದಗಳನ್ನು ಅನುಷ್ಠಾನವಾಗಿ ಆಚರಿಸುವ, ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಾರ್ಥಿಸುವ, ಪೂಜಿಸುವ, ಆರಾಧಿಸುವ, ಹೋಮ-ಹವನಗಳ ಮೂಲಕ ದೇವರನ್ನು ಸಂಪ್ರಾರ್ಥಿಸುವ ಬಳಗವನ್ನು ಬ್ರಾಹ್ಮಣರೆಂದರು. ಬ್ರಾಹ್ಮಣ್ಯವೇ ಅವರಿಗೆ ಆಧಾರ, ಪೌರೋಹಿತ್ಯ ಮತ್ತು ಅಧ್ಯಾಪನ, ವೈದ್ಯಕೀಯ[ಆಯುರ್ವೇದ]ಚಿಕಿತ್ಸೆಗಳೇ ಅವರಿಗೆ ಮೂಲ ವೃತ್ತಿ. ದೇಶಕ್ಕೆ ಕ್ಷೇಮವಾಗಲೆಂದು ಇತಿಹಾಸಗಳಲ್ಲಿ ರಾಜರುಗಳು ಬ್ರಾಹ್ಮಣರನ್ನು ಹುಡುಕಿ ಎಲ್ಲೆಲ್ಲಿಂದಲೋ ಕರೆತಂದರು; ಉಂಬಳಿಯಾದಿಯಾಗಿ ಉಪಜೀವನಕ್ಕೆ ಅನುಕೂಲ ಕಲ್ಪಿಸಿದರು. ಇಂದು ರಾಜರುಗಳಿಲ್ಲ. ರಾಜಾಶ್ರಯವೂ ಇಲ್ಲ. ರಾಜಾಶ್ರಯವನ್ನೂ ಉಂಬಳಿಯಾಗಿ ದೊರೆತಿದ್ದ ಭೂಮಿಯನ್ನೂ ಕಳೆದುಕೊಂಡ ಬ್ರಾಹ್ಮಣರು ಉಪಜೀವನಕ್ಕಾಗಿ ಹಲವು ವೃತ್ತಿಗಳನ್ನು ಆಯ್ದುಕೊಂಡರು. ಸಾಮೂಹಿಕವಾಗಿ ಯಾರನ್ನೂ ಹೀಗಳೆಯಲಿಲ್ಲ, ಯಾರಿಗೂ ತಮ್ಮ ಕ್ಷೋಭೆ ತಟ್ಟಲಿ ಎಂದು ಬಯಸಲಿಲ್ಲ. || ವಸುಧೈವ ಕುಟುಂಬಕಮ್ || --ಎಂದು ವೇದಗಳ ಕಾಲದಲ್ಲೇ ಬ್ರಾಹ್ಮಣರು ತಿಳಿದರು. ಇಡೀ ವಸುಧೆಯೇ ಒಂದು ಕುಟುಂಬ, ಎಲ್ಲರೂ ಒಂದೇ ಕುಟುಂಬದ ಸದಸ್ಯರು! ಎಂತಹ ಆದರ್ಶವಲ್ಲವೇ? ಅದೇ ಬ್ರಾಹ್ಮಣರು.

 ಒಪಿಕೊಳ್ಳುತ್ತೇನೆ: ಕೆಲವು ಕಾಲಘಟ್ಟದಲ್ಲಿ ಅತಿರೇಕದ ಮಡಿಯೆಂಬ ಭೂತವೂ, ಬಾಲ್ಯವಿವಾಹ-ವಿಧವಾ ಘಟಶ್ರಾದ್ಧ ಇತ್ಯಾದಿ ದುರ್ವಿಧಿಗಳು ನಡೆದಿವೆ. ಅವು ಹಾಗೆ ನಡೆಯಲಿಕ್ಕೆ ಕಾರಣಗಳು ಹಲವು. ಬ್ರಾಹ್ಮಣರಲ್ಲೇ ಹಲವು ಕೂಪಮಂಡೂಕಗಳು ಇದ್ದವು-ಈಗಲೂ ಇವೆ! ಅಂತಹ ಮಂಡೂಕಗಳಿಂದ ರಚಿಸಲ್ಪಟ್ಟು ಮಧ್ಯೆ ತೂರಿಕೊಂಡ ಆಧಾರರಹಿತ ಚಾಳಿಗಳು ಮೂಢನಂಬಿಕೆಗಳಾಗಿವೆ. ಸಂವಹ ಮಾರ್ಗ ಇಷ್ಟೊಂದು ಸುರಳೀತ ನಡೆಯಲು ಆಸ್ಪದವಿಲ್ಲದ ಆ ಕಾಲಗಳಲ್ಲಿ ವಿಪರ್ಯಾಸಗಳೇ ಮಗ್ಗಲು ಬದಲಾಯಿಸಿ ಶಾಸ್ತ್ರಗಳ ಜೊತೆ ಸೇರಿಕೊಂಡು ಶಾಸ್ತ್ರವೇ ಮೂಢನಂಬಿಕೆಯೇನೋ ಎಂಬಂತಾಗಿಬಿಟ್ಟಿದೆ. ಇದಕ್ಕೆ ಚಿಕ್ಕದೊಂದು ಉದಾಹರಣೆ ಕೊಟ್ಟುಬಿಡುತ್ತೇನೆ: ದನದ ಸಗಣಿಯನ್ನು ನಾವು ಗೋಮಯ ಎನ್ನುತ್ತೇವೆ. ಗೋಮಯ ಹೇಗಿರಬೇಕು: ಕರುವನ್ನು ಹಡೆದ ದೇಶೀ ತಳಿಯ ಗೋವು ಬೆಳಗಿನಜಾವ ಎದ್ದಾಗ ಹೊರಹಾಕಿದ ತಾಜಾ ಸಗಣಿ ಮಾತ್ರ ಗೋಮಯವೆನಿಸುತ್ತದೆಯೇ ಹೊರತು ಇಡೀ ದಿನ ಎಲ್ಲೆಲ್ಲೋ ರಸ್ತೆಗಳಲ್ಲೋ ಇನ್ನೆಲ್ಲೋ ಹೆಕ್ಕಿತಂದ ಸಗಣಿ ಗೋಮಯ ಎನಿಸುವುದಿಲ್ಲ. ’ಗೋಮಯ’ ತಾಜಾ ಇದ್ದಾಗ ಅದು ಕ್ರಿಮಿನಾಶಕವಾಗಿರುತ್ತದೆ ಎಂಬುದು ವೈಜ್ಞಾನಿಕವಾಗಿ ಸಿದ್ಧಗೊಂಡ ವಿಷಯ. ಶುದ್ಧಾಚರಣೆಯಲ್ಲಿ ಗೋಮಯವನ್ನು ಬಳಸುವುದು ಪದ್ಧತಿ. ಆದರೆ ಅದನ್ನು ಹೇಗೆ ಬಳಸಬೇಕೆಂಬುದೇ ಗೊತ್ತಿಲ್ಲದೇ ಮನಸ್ಸಿಗೆ ಬಂದಹಾಗೇ ಬಳಸಿದರೆ ವಾತಾವರಣದಲ್ಲಿ ಕ್ರಿಮಿಗಳು ದೂರವಾಗುವ ಬದಲು ಹತ್ತಿರವಾಗುತ್ತವೆ; ಯಾಕೆಂದರೆ ಅದೇ ಸಗಣಿಯಲ್ಲಿ ಕಾಲಾನಂತರದಲ್ಲಿ ಸಗಣಿ ಹುಳಗಳು ಹುಟ್ಟಿ  ಸಗಣಿ ಭೂಮಿಯಲ್ಲಿ ಮಣ್ಣಾಗಿ ಸೇರಿಹೋಗುವುದು ಪ್ರಕೃತಿ ನಿಯಮ. ಇದೇ ರೀತಿ ನಮ್ಮೆಲ್ಲಾ ಆಚರಣೆಗಳ ಹಿಂದೆಯೂ ಸಮರ್ಪಕ ಕಾರಣಗಳಿವೆ ಎಂಬುದನ್ನು ನಿಮ್ಮ ಮುಂದೆ ಇಡಲು ಸಂತಸವಾಗುತ್ತದೆ.

ಸರ್ವೇ ಭವಂತು ಸುಖಿನಃ
ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿದ್ ದುಃಖಭಾಗ್ ಭವೇತ್ ||

ಎಂದರಲ್ಲವೇ? ಶ್ರೀಧರರೇ, ಎಲ್ಲರೂ ಸುಖವಾಗಿರಲಿ, ಸರ್ವರ ಜೀವನವೂ ನಿರಾಮಯವಾಗಿರಲಿ-ನಿರುಂಬಳವಾಗಿರಲಿ, ಸಕಲರಿಗೂ ಭದ್ರತೆ ಸಿಗಲಿ, ಯಾರೂ ದುಃಖ ಪಡದೇ ಇರುವಂತಾಗಲೀ ಎಂದು ಹರಸಿದ, ಹಾರೈಸಿದ ಬ್ರಾಹ್ಮಣ್ಯಕ್ಕೆ-ಆ ಗುರುಸ್ಥಾನಕ್ಕೆ ನೀವು ’ವೈದಿಕ ವೈರಸ್’ ಎಂದು ಪರೋಕ್ಷವಾಗಿ ಹೀಯಾಳಿಸಿದ್ದೀರಿ, ಹೀಗಳೆದಿದ್ದೀರಿ. ಬದಲಾವಣೆ ಪ್ರಕೃತಿ ನಿಯಮ ಎಂದು ಗೀತೆಯಲ್ಲಿ ಭಗವಂತನೇ ಹೇಳಿದ್ದಾನೆ. [ತಮಾಷೆಗೆ ಹೀಗೊಂದು ಉದಾಹರಣೆ : ನಾಯಿಯ ಬಾಲಕ್ಕೆ ಮಾತ್ರ ಇಲ್ಲಿ ಡಿಸ್ಕೌಂಟು! ನಳಿಕೆಯಲ್ಲಿರುವವರೆಗೂ ಅದು ನೆಟ್ಟಗೇ ಆದಂತೆನಿಸುತ್ತದೆ, ನಳಿಕೆಯಿಂದ ಹೊರಗೆಳೆದಾಗ ಯಥಾಸ್ಥಿತಿ!! ಇದರರ್ಥ ಭಗವಂತನ ಹೇಳಿಕೆಯಲ್ಲಿ ನಮಗೆ ನಂಬಿಕೆಯಿಲ್ಲದೇ ಉಡಾಫೆ ಎಂದು ಗ್ರಹಿಸಬೇಡಿ, ಇಲ್ಲಿ ನಾಯಿ ಮತ್ತೊಂದು ಜನ್ಮವೆತ್ತುವುದೇ ಪರಿವರ್ತನೆಯೆನಿಸುತ್ತದೆ.] ಬೇಡನೊಬ್ಬ ತಪಸ್ಸಿಗೆ ಕುಳಿತು ಪರಿವರ್ತಿತವಾಗಿ, ಔನ್ನತ್ಯಕ್ಕೆ ನಡೆದ ಮನದಲ್ಲಿ ರಾಮಾಯಣವನ್ನೇ ಬರೆದು ಪೂಜ್ಯನಾದ, ಸರ್ವವಂದ್ಯನಾದ. ರೌಡಿಯೊಬ್ಬ ಮಾಜಿಯಾಗಿ ಪತ್ರಿಕೆಯನ್ನು ನಡೆಸುವಾಗ ಸಮಾಜದ ಎಲ್ಲಾ ಸ್ತರಗಳಲ್ಲೂ ಎಲ್ಲಾ ಜನಾಂಗಗಳಲ್ಲೂ ವೈಷ್ಯಮ್ಯಕ್ಕೆ ನಾಂದಿಹಾಡದೇ, ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಉತ್ತಮ ಸಂದೇಶಗಳನ್ನು ಹೊತ್ತುಬರುವ ಲೇಖನಗಳನ್ನು ಪ್ರಕಟಿಸಲಿ ಎಂಬುದು ಬ್ರಾಹ್ಮಣರಾದ ನಮ್ಮ ಆಸೆ; ಯಾಕೆಂದರೆ ಹಾಲಿಗೂ ಹಾಲಾಹಲಕ್ಕೂ ಭೇದವೆಣಿಸದ ಮುಗ್ಧಮನೋಸ್ಥಿತಿಯಿಂದ ನಾವು ಹಾಗೆ ಶತಶತಮಾನಗಳಿಂದ ಹಾರೈಸುತ್ತಲೇ ಬಂದಿದ್ದೇವೆ; ನೆಲೆನಿಂತ ಪುರದ ಹಿತವನ್ನು ಕಾಪಾಡುವವರಾಗಿ ’ಪುರೋಹಿತ’ರೆನಿಸಿದ್ದೇವೆ. ’ಅಗ್ನಿ’ ಎಂಬ ಜ್ವಲಿಸುವ ಹೆಸರನ್ನು ಬಳಸುವ [ಅಗ್ನಿ ಎಂಬುದು ಸಂಸ್ಕೃತ ಪದ. ಎಡಪಂಥೀಯರೂ ಸೇರಿದಂತೇ ಬ್ರಾಹ್ಮಣಕುಲದ ಯುವಪೀಳಿಗೆಯ ’ಸುಧಾರಿಸಿದ ಜನ’ ಎನಿಸಿಕೊಂಡವರು ಸಂಸ್ಕೃತವನ್ನು ಸತ್ತಭಾಷೆ ಎಂದಿದ್ದಾರೆ]  ಶ್ರೀಧರರೇ, ತಮ್ಮಿಂದ ನಾವು ಬಯಸಿದ ಬದಲಾವಣೆಯನ್ನು ಮುಂಬರುವ ದಿನಗಳಲ್ಲಿ ನಿರೀಕ್ಷಿಸಬಹುದೇ?