ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, October 29, 2010

ಭೀಷ್ಮ


ರಾಜಾರವಿವರ್ಮ ಕೃತ ಚಿತ್ರಗಳ ಕೃಪೆ : ಅಂತರ್ಜಾಲ

ಭೀಷ್ಮ


[ಮಹಾಭಾರತದಲ್ಲಿ ಅನೇಕ ಪಾತ್ರಗಳು ನಮ್ಮ ಮನವನ್ನು ಕಲಕುತ್ತವೆ. ಅಂತಹ ಒಂದು ಪಾತ್ರದ ಅಭಿವ್ಯಕ್ತಿ ನನ್ನ ಲೇಖನಿಯಲ್ಲಿ ನಿಮಗಾಗಿ ]



ಶಂತನು ಮಕ್ಕಳನ್ನು ಏಕೆ ನದಿಗೆ ಎಸೆದು ಸಾಯಿಸುತ್ತೀಯ ಎಂದು ಕೇಳಿದ್ದೇ ತಪ್ಪಾಗಿ ಗಂಗೆ ಮೂಲರೂಪಕ್ಕೆ ನಡೆದುಬಿಟ್ಟಳು. ದೇವವೃತ ಬೆಳೆದು ಆಗತಾನೇ ಹದಿಹರೆಯಕ್ಕೆ ಕಾಲಿಡುತ್ತಿದ್ದ. ಅಪ್ಪನ ನೋವಲ್ಲಿ ಆತನೇ ಅಪ್ಪನ ಆಪ್ತ ಬಂಧು. ಅಪ್ಪನನ್ನು ಬಿಟ್ಟು ಬೇರೆಯ ಜಗತ್ತೇ ಇಲ್ಲದ ಹುಡುಗನಾತ. ತಾಯಿ ಗಂಗೆ ಕೆಲವರುಷ ತನ್ನ ಜತೆಗಿದ್ದರೂ ಇರುವಷ್ಟು ದಿನ ಮಾತಾಪಿತೃಗಳಿಬ್ಬರಿಗೂ ಬಹಳ ಸಂತಸವನ್ನುಂಟುಮಾಡಿದ ಮಗುವಾತ. ತನ್ನ ತಂದೆ ಪರಾಶರ ಮಹರ್ಷಿಯ ಮಗನೆಂದೂ, ಯಮುನೆಯ ನಡುಗಡ್ಡೆಯಲ್ಲಿ ಹುಟ್ಟಿದವನೆಂದೂ ಆತ ಕೇಳಿತಿಳಿದಿದ್ದ. ತಂದೆಯ ರಾಜಸ ಲಕ್ಷಣಗಳು ಅವನನ್ನು ಬಹುವಾಗಿ ಆಕರ್ಷಿಸಿದ್ದವು. [ ಪಚ್ಮಣಿ ಎಂಬ ಈ ನಡುಗಡ್ಡೆ ಇಂದಿಗೂ ಯಮುನೆಯ ಪಶ್ಚಿಮ ಭಾಗದಲ್ಲಿ ನೋಡಸಿಗುತ್ತದೆ]ಇದೊಂದು ಕಥೆಯಾದರೆ ಕಾಲಾನಂತರದಲ್ಲಿ ಪರಾಶರ ಸುತ ಶಂತನು ಹಸ್ತಿನಾಪುರಕ್ಕೆ ಬಂದು ಗಂಗೆಯನ್ನು ವರಿಸಿದ್ದು ಇನ್ನೊಂದು ಕಥೆ.

ಗಂಗೆಯ ಮೋಹಪಾಶದಿಂದ ಹೊರಬರುತ್ತಿದ್ದ ವೇಳೆ ಶಂತನುವಿನ ಮನವ ಕದ್ದವಳು ಸತ್ಯವತಿ. ಬೆಸ್ತರ ಹುಡುಗಿ. ಆಕೆಯೆ ಹದವಾದ ಮೈಕಟ್ಟು ರೂಪಲಾವಣ್ಯಕ್ಕೆ ಮನಸೋತ ಶಂತನು ಹಲವಾರು ದಿನ ಹಾಗೇ ಕಳೆದ. ಆತನದು ಆಡಲಾರದ ಅನುಭವಿಸಲಾರದ ಸ್ಥಿತಿ! ಎಡೆಯಲ್ಲಿ ಬೆಳೆಯುತ್ತಿರುವ ತನ್ನ ಮತ್ತು ಗಂಗೆಯ ಪ್ರೀತಿಯ ಕುಡಿಯಿದೆ, ಆ ಕುಡಿ ಇನ್ನೂ ಹದಿಹರೆಯಕ್ಕೆ ಕಾಲಿಡುತ್ತಿದೆ. ಹೇಳಬೇಕೆಂದರೆ ಆ ಗಾಂಗೇಯನಿಗೆ ಈಗ ಹರೆಯದ ಹುಡುಗಿಯರ ಪ್ರೇಮಪಾಶದಲ್ಲಿ ಸಿಲುಕುವ ವಯಸ್ಸು. ಆದರೆ ತನಗೆ ಯಾಕೆ ಈ ರೀತಿ ಭಾವನೆ ಎಂಬುದನ್ನು ಆತ ಯೋಚಿಸಿಯೂ ತನ್ನ ಮನದ ಬಯಕೆಯನ್ನು ಹತ್ತಿಕ್ಕಲಾರದಾದ. ಶಂತನುವಿನ ಪ್ರೇಮಜ್ವರ ಉಲ್ಬಣಿಸುತ್ತಿರುವಾಗ ತಾಯಿಯಿಲ್ಲದ ತಬ್ಬಲಿ ಗಾಂಗೇಯ ನಡೆದುಬಂದ ಅಪ್ಪನಿದ್ದೆಡೆಗೆ, ಕೇಳಿದ ತಂದೆಯಲ್ಲಿ " ಅಪ್ಪಾ ನಿಮ್ಮ ಚಿಂತೆಗೆ ಕಾರಣವೇನು. ನಾನಿದ್ದೂ ನೀವು ಇಷ್ಟೆಲ್ಲಾ ಯಾರೂ ದಿಕ್ಕಿಲ್ಲದಂತೇ ಪರಿತಪಿಸುತ್ತಿರುವುದೇಕೆ? ನನ್ನಲ್ಲಿಯೂ ಹೇಳಬಾರದೇ ? " . ಮಗನ ಮಾತಿಗೆ ಮನಸೋತ ಶಂತನು ತನ್ನ ಮನದ ಬಯಕೆಯನ್ನು ತೋಡಿಕೊಂಡ. ಅರ್ಥೈಸಿಕೊಂಡ ಯುವಮುತ್ಸದ್ಧಿ ಗಾಂಗೇಯ ಬೆಸ್ತರ ಮುಖಂಡನ ಮನೆಯ ದಾರಿ ಹಿಡಿದು ನಡೆದ. ಅಲ್ಲಿ ಬೆಸ್ತರ ಮುಖಂಡ ದಾಶರಾಜನನ್ನು ಕಂಡು ತನ್ನ ತಂದೆಯ ಬಯಕೆಯನ್ನು ನಿವೇದಿಸಿದ. ಅಪ್ಪನಿಗಾಗಿ ಅಪ್ಪನ ಉಳಿವಿಗಾಗಿ ಮಗಳನ್ನು ಧಾರೆಯೆರೆದು ಕೊಡುವಂತೆ ಗಾಂಗೇಯ ಅಕ್ಷರಶಃ ಅಂಗಲಾಚಿದ! ಆದರೂ ಬೆಸ್ತನ ಮನಸ್ಸು ಏನನ್ನೋ ಎಣಿಸುತ್ತಿತ್ತು. ಕೊನೆಗೂ ಗಂಗೇಯ ಪಟ್ಟುಬಿಡದೇ ಕೇಳಿದ " ಏನಾಗಬೇಕೆಂಬುದನ್ನು ಹೇಳಿದರೆ ಅದನ್ನು ಪೂರೈಸಲೂ ನಾನು ಸಿದ್ಧನಾಗಬಹುದೋ ನೋಡುತ್ತೇನೆ ಹಾಗಾಗಿ ಏನಾಗಬೇಕೆಂದು ತಿಳಿಸಿ" ಎಂದಾಗ, ಬೆಸ್ತ ಕೇಳಿದ "ಶಂತನುವಿಗೆ ಸತ್ಯವತಿಯಲ್ಲಿ ಹುಟ್ಟಿದ ಮಕ್ಕಳಷ್ಟೇ ಮುಂದೆ ಆ ರಾಜ್ಯವನ್ನು ಆಳಲು ಅರ್ಹರಾಗಬೇಕು , ಮಿಕ್ಕುಳಿದ ಯಾರಿಗೂ ಆಡಳಿತದಲ್ಲಿ ಹಕ್ಕಿರಬಾರದು " --ಇಂತಹ ಸಂದಿಗ್ಧದಲ್ಲೂ ತನ್ನೋ ಮನೋಸ್ಥೈರ್ಯವನ್ನು ಕಳೆದುಕೊಳ್ಳದ ಗಾಂಗೇಯ ತಾನು ಆಜನ್ಮ ಬ್ರಹ್ಮಚಾರಿಯಾಗಿರುತ್ತೇನೆಂದೂ, ತನಗೆ ಸಿಂಹಾಸನದ ಉತ್ತಾರಾಧಿಕಾರತ್ವ ಬೇಡವೆಂದೂ ಪ್ರತಿಜ್ಞೆಮಾಡಿದ! ತಂದೆಯ ಪ್ರೇಮಕನ್ನಿಕೆಯನ್ನು ತಂದೆಗೆ ಮಗ ಮುಂದಾಗಿ ನಿಂತು ಸಂಬಂಧ ಕುದುರಿಸಲು, ತನ್ನ ಸ್ವಾರ್ಥ ತ್ಯಜಿಸಿ ಗೈದ ಪ್ರತಿಜ್ಞೆ ದೇವತೆಗಳಿಗೂ ಕೇಳಿಸಿತಂತೇ, " ಭಲೇ ಗಾಂಗೇಯ ಇದು ಭೀಷ್ಮ ಪ್ರತಿಜ್ಞೆಯೇ ಸರಿ ....ನೀನೀಗ ಭೀಷ್ಮ .......ನೀನೀಗ ಭೀಷ್ಮ " ಎಂದು ಅಶರೀರವಾಣಿ ಮೊಳಗಿ ಪುಷ್ಪವೃಷ್ಟಿಯಾಯಿತಂತೆ. ಅಂದಿನಿಂದ ದೇವವೃತ ಭೀಷ್ಮನಾದ.

ಅಂತೂ ತನ್ನ ಜೀವನವನ್ನೇ ಕಡೆಗಣಿಸಿ ತಂದೆಗೆ ಬೆಸ್ತರ ಕನ್ಯೆಯನ್ನು ವಿವಾಹಮಾಡಿಸಿದ ಅಪ್ರತಿಮ ಬಾಲ್ಯಸಾಹಸಿ ಭೀಷ್ಮ! ಮುಂದೆ ಕಾಲಾನಂತರದಲ್ಲಿ ತನ್ನ ಜೀವಿತವನ್ನು ಕೊಟ್ಟ ಮಾತಿಗೆ ತಪ್ಪದಂತೇ ನಡೆದ ಆಜನ್ಮ ಬ್ರಹ್ಮಚಾರಿ ಭೀಷ್ಮ. ತಂದೆಯ ಮರಣಾನಂತರ ತನ್ನ ತಂದೆಗೆ ಸತ್ಯವತಿಯಲ್ಲಿ ಜನಿಸಿದ ಚಿತ್ರವೀರ್ಯ ಮತ್ತು ವಿಚಿತ್ರವೀರ್ಯ ಎಂಬ ಮಕ್ಕಳನ್ನು ಸಿಂಹಾಸನದಲ್ಲಿ ಕೂರಿಸಿಕೊಂಡು ಅವರು ಬೆಳೆದು ದೊಡ್ಡವರಾಗುವವರೆಗೆ ರಾಜ್ಯಭಾರ ನಡೆಸಿಡೆಸಲು ಸತ್ಯವತಿಗೆ ಸಹಕರಿಸಿದ. ಮುಂದುವರಿದ ಭಾಗವೇ ಮಹಾಭಾರತಕ್ಕೆ ನಾಂದಿ ಎಂಬುದನ್ನು ಬೇರೆ ಹೇಳಬೇಕೆ ?

ಕಾಶೀರಾಜನ ಮಕ್ಕಳಾದ ಅಂಬೆ, ಅಂಬಿಕೆ ಮತ್ತು ಅಂಬಾಲಿಕೆಯರನ್ನು ತನ್ನ ಮಲತಮ್ಮ ವಿಚಿತ್ರವೀರ್ಯನಿಗೆ ಮದುವೆಮಾಡಲಾಗಿ ಅವರ ಸ್ವಯಂವರ ನಡೆಯುವ ಜಾಗದಿಂದ ಅಪಹರಿಸಿ ಕರೆತಂದ ಭೀಷ್ಮನಿಗೆ, ಅವರಲ್ಲಿ ಹಿರಿಯಳಾದ ಅಂಬೆ ತಾನು ಸುಬಲದೇಶದ ಸಾಲ್ವ ಮಹಾರಾಜನನ್ನು ಬಹಳ ಇಷ್ಟಪಟ್ಟುದಾಗಿಯೂ ತನ್ನನ್ನು ಕಳುಹಿಸಿಕೊಡಬೇಕೆಂದೂ ಕೇಳಿಕೊಳ್ಳುತ್ತಾಳೆ. ಆಗ ಭೀಷ್ಮ ಮರಳಿ ಆಕೆಯನ್ನು ಸಾಲ್ವನಲ್ಲಿಗೆ ಕಳುಹಿಸಿಕೊಟ್ಟರೂ ಬಹಳಕಾಲ ಇನ್ನೊಬ್ಬ ಗಂಡಸಿನ ಜತೆಗೆ ಉಳಿದ ಹೆಣ್ಣನ್ನು ಮದುಯಾಗುವುದು ತನಗಿಷ್ಟವಿಲ್ಲವೆಂದು ಆತ ತಿರಸ್ಕರಿಸುತ್ತಾನೆ. ಪುನಃ ಆಕೆ ದಾರಿಕಾಣದೇ ಭೀಷ್ಮನಲ್ಲಿಗೆ ಬಂದು ಮಾಡಿದ ತಪ್ಪಿಗೆ ತನ್ನನ್ನು ಮದುವೆಯಾಗ್ಲೇ ಬೇಕೆಂದು ಹಠಹಿಡಿಯುತ್ತಾಳೆ. ಮಾಡಿದ ಪ್ರತಿಜ್ಞೆಯನ್ನು ಭಂಗಗೊಳಿಸಲು ಒಪ್ಪದ ಭೀಷ್ಮನಿಗೆ ತಾನು ಸತ್ತು ಇನ್ನೊಂದು ಜನ್ಮವೆತ್ತಿ ಶಿಖಂಡಿಯಾಗಿ ನಿನ್ನನ್ನು ಸಾಯಿಸುತ್ತೇನೆಂದು ಶಪಿಸುತ್ತಾಳೆ ಮತ್ತು ಆ ಕ್ಷಣವೇ ತುಸುದೂರ ತೆರಳಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.

ಸಾಯುವುದಕ್ಕೂ ಮುನ್ನ ಅಂಬೆ ಗುರು ಪರಶುರಾಮರಲ್ಲಿ ಪ್ರಾರ್ಥಿಸಿ ಭೀಷ್ಮನನ್ನು ಈ ಕುರಿತು ಒಲಿಸುವಂತೇ ಕೇಳಲು ಹೇಳುತ್ತಾಳೆ. ಪರಶುರಾಮರು ಭೀಷ್ಮನನ್ನು ಕೇಳಲಾಗಿ ಆತ ಮತ್ತೆ ನಾಜೂಕು ಮಾತಿನಿಂದ ತಿಳಿಸಿ ನಿರಾಕರಿಸುತ್ತಾನೆ. ಕುಪಿತರಾದ ಪರಶುರಾಮರು ಭೀಷ್ಮನನ್ನು ಯುದ್ಧಕ್ಕೆ ಕರೆಯುತ್ತಾರೆ. ರಥಾರೂಢನಾಗಿ ಕುರುಕ್ಷೇತ್ರಕ್ಕೆ ಬಂದ ಭೀಷ್ಮ ತನ್ನೆದುರು ಪರಶುರಾಮರು ಬರಿಗಾಲಲ್ಲಿ ನಿರಾಯುಧರಾಗಿ ನಿಂತಿರುವುದನ್ನು ನೋಡಿ ರಥಾರೂಢರಾಗಿ, ಶಸ್ತ್ರಧಾರಿಯಾಗಿ ಬರಲು ವಿನಂತಿಸಿದಾಗ ಭೀಷ್ಮನಿಗೆ ತಿಳಿಸಿ ಇನ್ನೊಮ್ಮೆ ಸರಿಯಾಗಿ ನೋಡಲು ಹೇಳುತ್ತಾರೆ. ಆಗ ಎದುರಿಗೆ ರಥದಲ್ಲಿ ಪರಶುರಾಮರಿದ್ದರೆ, ನಾಲ್ಕುವೇದಗಳು ಕುದುರೆಗಳಾಗಿ, ವಾಯು ಸಾರಥಿಯಾಗಿ ಅವರು ಗಾಯತ್ರಿ, ಸಾವಿತ್ರಿ, ಸರಸ್ವತಿ ಮೂರು ದೇವಿಯರನ್ನು ಎದೆಗವಚವಾಗಿ ಧರಿಸಿಬಂದಿದ್ದು ಕಾಣುತ್ತಾನೆ. ಯುದ್ಧ ಘಟಿಸುತ್ತದೆ, ಯಾರೂ ಇನ್ನೂ ಸೋತಿರುವುದಿಲ್ಲ. ಭೀಷ್ಮನಿಗೆ ಹಿರಿಯರು ಕೊಟ್ಟ ವಿಶೇಷವಾದೊಂದು ಅಸ್ತ್ರವಿರುತ್ತದೆ-ಅದು ಪರಶುರಾಮರಿಗೆ ಗೊತ್ತಿರುವುದಿಲ್ಲ. ಅದನ್ನು ಉಪಯೋಗಿಸಿದರೆ ಪರಶುರಾಮರು ರಣರಂಗದಲ್ಲಿ ಮಲಗಬೇಕಾಗುತ್ತದೆ. ರಣರಂಗದಲ್ಲಿ ಮಲಗಿದವನನ್ನು ಸತ್ತವನೇ ಎಂದು ವೇದಹೇಳುತ್ತದೆಂದೂ ಅದನ್ನು ಉಪಯೋಗಿಸೆಂದೂ ಕೆಲವರು ಹೇಳಿದರೂ ಭೀಷ್ಮ ಅದನ್ನು ಉಪಯೋಗಿಸುವುದಿಲ್ಲ. ಅಷ್ಟರಲ್ಲಿ ಪರಶುರಾಮರು ಮನಸ್ಸು ಬದಲಿಸಿ ಯುದ್ಧ ಬಿಟ್ಟು ತೆರಳುತ್ತಾರೆ.

ಆ ವೇಳೆಗೆ ಕುರುಕ್ಷೇತ್ರದಲ್ಲಿ ಮಹಾಯುದ್ಧವೇ ಆರಂಭವಾಗುವುದರಿಂದ ಸಂಪೂರ್ಣ ಕುರುಕ್ಷೇತ್ರಕ್ಕೆ ಸಾಕ್ಷಿಯಾಗಿ ಭೀಷ್ಮ ರಣರಂಗದಲ್ಲಿ ಕುರುವಂಶದ ನಾಯಕನಾಗಿ ಮುನ್ನಡೆದು ಬರುತ್ತಾನೆ.
ಇದಕ್ಕೆ ಕಾರಣವೂ ಇಲ್ಲದಿಲ್ಲ.

ಹಿನ್ನೆಲೆ

ಸ್ನಾನಕ್ಕೆಂದು ಕೊಳವೊಂದಕ್ಕೆ ಇಳಿದ ದುರ್ಯೋಧನನಿಗೆ ಗಂಧರ್ವರು ಅಲ್ಲಿಗೆ ಬಂದಿರುವುದು ಕಾಣಿಸುತ್ತದೆ. ಅದನ್ನು ಸಹಿಸದ ಆತ ಅವರ ಕೂಡ ಯುದ್ಧನಡೆಸಿ ಸೋತು ಸಿಕ್ಕಿಹಾಕಿಕೊಂಡಾಗ ಯುಧಿಷ್ಠಿರ, ಅರ್ಜುನ ಮುಂತಾದ ಪಾಂಡವರ ವಿನಂತಿಯ ಮೇರೆಗೆ ಅವರು ಆತನನ್ನು ಬಿಡುಗಡೆಗೊಳಿಸುತ್ತಾರೆ. ಅವಮಾನಿತನಾದ ದುರ್ಯೋಧನ ತಾನು ಕ್ಷತ್ರಿಯನಾಗಿಯೂ ಹೀಗಾಯ್ತಲ್ಲಾ ಎಂಬ ಕೊರಗಿನಿಂದಿದ್ದರೂ ಋಣ ಕಳೆವ ನೆಪದಲ್ಲಿ ಅರ್ಜುನನಿಗೆ ತನ್ನಿಂದ ಏನಾದರೂ ತೆಗೆದುಕೋ ಎಂದು ವಿನಂತಿಸುತ್ತಾನೆ. ಅದಕ್ಕೆ ಅರ್ಜುನ ಕಾಲಬಂದಾಗ ಕೇಳುತ್ತೇನೆಂದು ಹೇಳಿರುತ್ತಾನೆ. ಕುರುಕ್ಷೇತ್ರ ಯುದ್ಧ ಇನ್ನೇನು ಸನ್ನದ್ಧವಾದಾಗ ಅರ್ಜುನ ದುರ್ಯೋಧನನಲ್ಲಿಗೆ ಹೋಗಿ ಆತನಲ್ಲಿರುವ ಬಂಗಾರದ, ಶಕ್ತಿ ತುಂಬಿದ ೫ ವಿಶೇಷವಾದ ಬಾಣಗಳನ್ನು ಕೊಡುವಂತೆ ಕೇಳುತ್ತಾನೆ. ದುರ್ಯೋಧನ ಆಶ್ಚರ್ಯಚಕಿತನಾಗಿ ತನ್ನಲ್ಲಿ ಆ ಐದು ಬಾಣಗಳಿವೆಯೆಂದು ಯಾರು ಹೇಳಿದರೆನ್ನಲು ಅರ್ಜುನ ಶ್ರೀಕೃಷ್ಣ ಹೇಳಿದನೆನ್ನುತ್ತಾನೆ. ನಿರ್ವಾಹವಿಲ್ಲದೇ ದುರ್ಯೋಧನ ಆ ೫ ಅಸಾಧಾರಣ ಶಕ್ತಿ ಹೊಂದಿದ ಬಾಣಗಳನ್ನು ಅರ್ಜುನನಿಗೆ ಕೊಡುತ್ತಾನೆ. ಆ ಒಂದೊಂದೂ ಬಾಣಗಳು ಭೀಷ್ಮನ ಆಜನ್ಮ ತಪಶ್ಚರ್ಯದ ಶಕ್ತಿಯಿಂದ ಪ್ರೇರಿತವಾಗಿದ್ದು ಒಬ್ಬೊಬ್ಬ ಪಾಂಡವನನ್ನು ಮುಗಿಸಲು ಸಾಕಾಗಿದ್ದವು.

ತಪ್ಪಿಹೋದ ಅವಕಾಶವನ್ನು ನೆನೆಯುತ್ತ ದುರ್ಯೋಧನ ಭೀಷ್ಮರಲ್ಲಿಗೆ ರಾತ್ರಿ ಬಂದಾಗ, ಮತ್ತೆ ತನ್ನಲ್ಲಿ ಅಂತಹ ಬಾಣಗಳನ್ನು ಸೃಜಿಸುವ ಶಕ್ತಿ ಇಲ್ಲವೆಂದೂ, ಪರಮಾತ್ಮನೇ ಬಯಸಿ ಮರಳಿ ಪಡೆದದ್ದರಿಂದ ಅದನ್ನು ಮೀರುವ ಸಾಮರ್ಥ್ಯ ತನ್ನಲ್ಲಿಲ್ಲವೆಂದೂ, ಆದರೆ ನಾಳೆಯ ಯುದ್ಧದಲ್ಲಿ ತಾನು ಸಿಂಹದಂತೆ ಹೋರಾಡುವೆನೆಂದೂ ತಿಳಿಸುತ್ತಾನೆ. ಅದರಂತೇ ಮಾರನೇ ದಿನ ಯುದ್ಧಾರಂಭಗೊಂಡಾಗ ಗರ್ಜಿಸುವ ಹಸಿದ ಸಿಂಹದೋಪಾದಿಯಲ್ಲಿ ಭೀಷ್ಮ ಅರ್ಜುನನೆಡೆಗೆ ಸಾಗಿಬರುತ್ತಾನೆ. ತಾತಯ್ಯನ ಕೋಪದ ಪರಾಕ್ರಮದ ಮುಂದೆ ಅರ್ಜುನನ ಆಟ ನಡೆಯುವುದಿಲ್ಲ. ಭೀಷ್ಮ ಬಿಟ್ಟ ಒಂದು ಬಾಣ ಅರ್ಜುನನ ಎದೆಗವಚವನ್ನು ಸೀಳಿಹಾಕುತ್ತದೆ. ಅಲ್ಲದೇ ರಥದ ಚಕ್ರ ಸ್ವಲ್ಪ ಹೂತು ತೊಂದರೆಯಾಗುತ್ತದೆ. ಕೋಪಗೊಂಡ ಕೃಷ್ಣ ಲಗಾಮು ಚಾವಟಿಗಳನ್ನು ಅಲ್ಲೇ ಬಿಟ್ಟು ರಥವಿಳಿದು ಕೆಳಗೆ ಬಂದು ಚಕ್ರವನ್ನು ಸರಿಪಡಿಸುತ್ತಾನಲ್ಲದೇ ಭಕ್ತನಾದ ಅರ್ಜುನನ ರಕ್ಷಣೆಗಾಗಿ ಕುರುಕ್ಷೇತ್ರ ಯುದ್ಧದಲ್ಲಿ ತಾನು ಶಸ್ತ್ರವನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ಭೀಷ್ಮನಿಗೆ ಕೊಟ್ಟಿದ್ದ ವಚನವನ್ನು ಮುರಿಯಲು ಮನಮಾಡುತ್ತಾನೆ. ಅರ್ಜುನನ ವಿನಂತಿಯ ಮೇರೆಗೆ ಹಾಗೆ ಮಾಡದೇ ಮತ್ತೆ ರಥವೇರಿ ಸಾರಥಿಯಾಗಿ ಮುನ್ನಡೆಸುವಾಗ ಅರ್ಜುನನಿಗೆ ಹೇಳಿ ಶಿಖಂಡಿಯನ್ನು ಕರೆದು ಆತನನ್ನು ಕವಚದ ಬದಲಾಗಿ ಮುಂದೆ ನಿಲ್ಲಿಸಿಕೊಂಡು ಭೀಷ್ಮನೊಟ್ಟಿಗೆ ಸೆಣಸಾಡಲು ಹೇಳುತ್ತಾನೆ.

ಘನಘೋರ ಯುದ್ಧದಲ್ಲಿ ಅರ್ಜುನನ ಅಸಂಖ್ಯಾತ ಬಾಣಗಳು ಭೀಷ್ಮನ ಮೈಸೇರಿ ಮೈಯ್ಯೆಲ್ಲಾ ರಕ್ತಸಿಕ್ತವಾಗುತ್ತದೆ, ಹಲವು ಗಾಯಗಳು ತಂದ ನೋವಿಗೆ ಹತಾಶೆಗೊಂಡು ಭೀಷ್ಮ ನೆಲವನ್ನು ಹಿಡಿಯಬೇಕಾಗಿ ಬರುತ್ತದೆ. ಅರ್ಜುನ ಶರಗಳನ್ನೆಸೆದು ಶಯ್ಯೆಯೊಂದನ್ನು ರಚಿಸಿದಾಗ ಅದರಮೇಲೆ ಭೀಷ್ಮ ಪಿತಾಮಹ ಮಲಗುತ್ತಾನೆ. ಇಚ್ಛಾಮರಣಿಯಾಗಲು ತಂದೆಯಿಂದ ಅನುಗ್ರಹ ಪಡೆದಿದ್ದ ಭೀಷ್ಮ ನೋವನ್ನು ಸಹಿಸಿಕೊಂಡು, ಮಹಾಭಾರತ ಯುದ್ಧವನ್ನು ನೋಡುತ್ತಾ, ದೇಹವನ್ನು ತೊರೆಯಲು ಒಳ್ಳೆಯ ಮುಹೂರ್ತಕ್ಕಾಗಿ ಕಾದು ಮಲಗಿರುತ್ತಾನೆ.

ತನ್ನದಲ್ಲದ ತಪ್ಪಿಗೆ ಭೀಷ್ಮ ಹಲವು ಬಾರಿ ಅಪರಾಧಿ ಎನಿಸಿಕೊಳ್ಳುತ್ತಾನೆ. ಜನ್ಮಪೂರ್ತಿ ತಂದೆ, ಕುಟುಂಬ, ವಂಶ ಇವರೆಲ್ಲರಿಗಾಗಿ ಬದುಕಿದ ಭೀಷ್ಮ ಒಂದರ್ಥದಲ್ಲಿ ಕೊನೆಯವರೆಗೂ ಏಕಾಂಗಿಯೇ. ಅವನ ಆಸೆ-ಆಕಾಂಕ್ಷೆಗಳಿಗೆ ಮನ್ನಣೆಯೇ ಇರಲಿಲ್ಲ. ಯಾರೂ ಆತನನ್ನು ’ನಿನಗೇನು ಬೇಕು ಅಜ್ಜಯ್ಯಾ’ ಎಂದು ಒಂದು ದಿನವೂ ಕೇಳಿದ್ದಿಲ್ಲ. ಬದಲಾಗಿ ಅಜ್ಜಯ್ಯನಿಂದ ಸಿಗಬಹುದಾದ ಪ್ರಯೋಜನವನ್ನು ಎಲ್ಲರೂ ಪಡೆದರು. ಹಾಗೆ ನೋಡಿದರೆ ಭೀಷ್ಮ ಎಲ್ಲರಿಗೂ ಅಜ್ಜನೇ. ಸಂಧಾನಕ್ಕಾಗಿ ಪ್ರಯತ್ನಿಸಿದವರಲ್ಲಿ ಭೀಷ್ಮಕೂಡ ಒಬ್ಬ. ಆದರೆ ಸಂಧಾನವೇ ಬೇಡವೆಂಬ ಕೌರವನ ನಿರ್ಧಾರಕ್ಕೆ ಆತ ಮನದಲ್ಲೇ ಕುಸಿದುಹೋದ. ಮುಖದಲ್ಲಿನ ಎರಡು ಕಣ್ಣುಗಳಂತಿರುವ ಆ ಎರಡು ಕುಟುಂಬಗಳಲ್ಲಿ ಆತನಿಗೆ ಯಾರು ಹೆಚ್ಚು ಅಥವಾ ಯಾರು ಕಮ್ಮಿ ಎಂಬುದಿರಲಿಲ್ಲ. ಕೃಷ್ಣನ ನಿರ್ಧಾರದಂತೇ ಆತ ಕೌರವರನ್ನು ಸೇರಬೇಕಾಯಿತು. ಇನ್ನೇನು ಹರೆಯ ಉಕ್ಕಿ ಹರಿವಾಗ ತನ್ನ ದೈಹಿಕ ಬಯಕೆಗಳನ್ನೆಲ್ಲಾ ಒತ್ತಟ್ಟಿಗೆ ಕಟ್ಟಿ ಸುಟ್ಟುಹಾಕಿದ ಭೀಷ್ಮ ತಾನು ಸುಖಪಡಲೇ ಇಲ್ಲ. ಈ ಕಡೆ ರಾಜನೂ ಆಗದಾಯ್ತು, ಆಕಡೆ ಮದುವೆಯಾಗುವುದನ್ನೂ ತಪ್ಪಿಸಿಕೊಂಡಾಯ್ತು, ತಂದೆಯ ಮರಣಾನಂತರ ಆತ ಬದುಕಿದ್ದದ್ದು ಕೇವಲ ತನ್ನ ಮಾತಿನಂತೇ ತನ್ನ ಮಲತಮ್ಮಂದಿರ ಯೋಗಕ್ಷೇಮ ನೋಡುವುದು ಮತ್ತು ಅವರಿಗೆ ರಾಜ್ಯಾಧಿಕಾರ ಪ್ರಾಪ್ತವಾಗಿ, ಅವರ ಮಂಗಳಕಾರ್ಯಗಳಾಗಿ ವಂಶ ಮುಂದುವರಿಯುವುದು, ಇದು ಬಿಟ್ಟು ಇನ್ನೇನೂ ಬೇಕಿರಲಿಲ್ಲ ಆತನಿಗೆ. ತನ್ನ ಕಣ್ಮುಂದೆ ಹುಟ್ಟಿ ಬೆಳೆದು, ಚಿನ್ನಿದಾಂಡು ಆಟವಾಡಿದ ಹುಡುಗರು ನೆಲಕ್ಕಾಗಿ ಬಡಿದಾಡಿ ಜನಸ್ತೋಮ ಮರೆಯಲಾಗದ ಭಾರತವನ್ನೇ ಸೃಜಿಸುತ್ತಾರೆಂಬುದನ್ನು ಕನಸಲ್ಲೂ ಎಣಿಸಿರಲಿಲ್ಲವಾತ.

ಕಣ್ಣೆದುರೇ ಕೃಷ್ಣನಿದ್ದರೂ ಕೃಷ್ಣ ಮಾತನಾಡಲಾರ, ಸಂತೈಸಲಾರ, ಅಳಲು ಕೇಳಲಾರ, ಬದಲಾಗಿ ತನ್ನಲ್ಲಿರುವ ಅಸಾಧಾರಣ ಶಕ್ತಿ ಉಡುಗಿಹೋಗಲೆಂದು ಶಿಖಂಡಿಯನ್ನು ಎದುರು ನಿಲ್ಲಿಸಿಕೊಂಡ! ಭೀಷ್ಮನಿಗೆ ಅರ್ಥವಾಗಿ ಹೋಗಿತ್ತು--ಕೃಷ್ಣನೊಬ್ಬ ಅತಿಮಾನುಷ ಶಕ್ತಿ, ಆತನ ಸಂಕಲ್ಪದಂತೇ ಆತ ಎಲ್ಲವನ್ನೂ ನಡೆಸುತ್ತಾನೆ ಎಂಬುದು. ಹಾಗಂತ ಕೃಷ್ಣನಲ್ಲಿ ಆತ ಪ್ರಾಣಭಿಕ್ಷೆ ಬೇಡಲಿಲ್ಲ. ಭೀಷ್ಮನಿಗೀಗ ಆತ್ಮಜ್ಞಾನವಾಗಿತ್ತು. ಆತ ತಂದೆಗೆ ಸಲ್ಲಿಸಿದ ಸೇವೆಯಿಂದ " ಮಗನೇ ಇಚ್ಛಾಮರಣಿಯಾಗು " ಎಂದು ತಂದೆಯಿಂದ ವರವನ್ನು ಪಡೆದಿದ್ದ. ತಾನೊಬ್ಬ ಒಳ್ಳೆಯ ವ್ಯಕ್ತಿ ಎಂದೂ, ಅಪ್ರತಿಮ ಸಾಹಸಿಯೆಂದೂ, ಅಸಾಧಾರಣ ಹೋರಾಟಗಾರನೆಂದೂ ಎಂದೂ ಕೊಚ್ಚಿಕೊಂಡವನಲ್ಲ; ಅವನ ಮನದಲ್ಲಿ ಅಹಂಕಾರ ತುಂಬಿರಲೇ ಇಲ್ಲ. ಕೇವಲ ಕೊಟ್ಟಮಾತಿಗಾಗಿ ಬದುಕಿದ್ದು, ತನ್ನ ಮಾತುನಡೆಯುವಂತೇ ನೋಡಿಕೊಂಡ ಸಜ್ಜನ ಭೀಷ್ಮ. ಆತನೊಬ್ಬ ಕರ್ಮಯೋಗಿ. ಕ್ಷತ್ರಿಯನಾಗಿ ತನ್ನ ಧರ್ಮವನ್ನು ಮೆರೆಯುತ್ತಾ ಆ ಧರ್ಮಾಚರಣೆಯಲ್ಲೇ ದೇವರನ್ನು ಕಂಡ ಕ್ಷಾತ್ರತೇಜಸ್ವಿ ಆತ. ತಾನು ಕೈಗೊಂಡ ನಿರ್ಧಾರಗಳು ತಪ್ಪು ಎಂದು ಯಾವಗಲೂ ಅನಿಸಲಿಲ್ಲ ಆತನಿಗೆ.

ಇಂದು ಮಗು ದುರ್ಯೋಧನನಿಗಾಗಿ ಮತ್ತೊಬ್ಬ ಮಗು ಅರ್ಜುನನ ಕೂಡ ಯುದ್ಧ ! ಬಹಳ ಯೋಚಿಸಿದ್ದಾನೆ ಭೀಷ್ಮ. ತನ್ನೊಳಗಿನ ತಳಮಳವನ್ನು ಯಾರಲ್ಲಿಯೂ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ಒದ್ದಡಿದ್ದಾನೆ ಭೀಷ್ಮ. ಕೊನೆಗೂ ಕಾಲಸನ್ನಿಹಿತವಾದಾಗ ಅನಿವಾರ್ಯವಾಗಿ ಕೃಷ್ಣ ಸಾರಥ್ಯದ ರಥದಲ್ಲಿರುವ ಅರ್ಜುನನ ಎದುರು ವೀರಾವೇಶದಿಂದ ಮುನ್ನುಗ್ಗಿದ್ದಾನೆ ಭೀಷ್ಮ. ರಥದಲ್ಲಿ ಕುಳಿತ ದೇವರು ತನ್ನನ್ನು ಬೇಗ ಕರ್ತವ್ಯದೀಮ್ದ ಬಿಡುಗಡೆಗೊಳಿಸಲಿ ಎಂಬುದೇ ಆತನ ಆಶಯವಾಗಿತ್ತು. ಜೀವನದುದ್ದಕ್ಕೂ ನಡೆದ ಹಲವಾರು ಘಟನೆಗಳು ಆತನಿಗೆ ಬೇಸರತರಿಸಿದ್ದವು, ನೋವುಂಟುಮಾಡಿದ್ದವು. ಆದರೂ ಒಪ್ಪಿಕೊಂಡ ಪಾತ್ರಪೋಷಣೆಯನ್ನು ಮಾಡಿಯೇ ಇಹವನ್ನು ತ್ಯಜಿಸುವ ಇಚ್ಛೆಯನ್ನು ಆತ ಹೊಂದಿದ್ದ. ಇದನ್ನರಿತ ಪರಶುರಾಮರು ತಾವೇ ಸ್ವತಃ ಹಿಂದೆ ಭೀಷ್ಮನಲ್ಲಿ ನಡೆಸಿದ ಯುದ್ಧವನ್ನು ನಿಲ್ಲಿಸಿ ಹೊರಟುಹೋದರು. ಅಂತೂ ಯುದ್ಧ ಘಟಿಸಿ ತನಗೆ ಬಾಣಗಳು ನಾಟಿ ಶರಶಯ್ಯೆಯಲ್ಲಿ ಮಲಗಿದ್ದಾಗಿದೆ ಈಗ. ಬಾಯಾರಿಕೆಗೆ ಪರಮಾತ್ಮನ ಅಣತಿಯಂತೇ ಅರ್ಜುನ ಬಾಣ ನೆಟ್ಟು ಗಂಗೆಯನ್ನೇ ಬಾಯಿಗೆ ತಲ್ಪಿಸಿದ್ದಾನೆ. ಎದುರಾಳಿ ಅರ್ಜುನನಲ್ಲ, ಅರ್ಜುನನ ಎದುರು ಲಗಾಮು ಹಿಡಿದು ಕುಳಿತ ಶ್ರೀಕೃಷ್ಣ ಎಂಬುದನ್ನು ನಿರ್ಧರಿಸಿದ್ದ ಭೀಷ್ಮ ಆತನ ಸಮ್ಮುಖದಲ್ಲೇ ಬಾಣಗಳ ಮಂಚದಮೇಲೆ ಮಲಗಿದ್ದಾನೆ. ಬದುಕಿನಲ್ಲಿ ಯಾರ್ಯಾರಿಗೆ ಏನೇನು ಸಿಗಬೇಕೋ ಅದು ಸಿಗಬೇಕು, ಏನೇನು ನಡೆಯಬೇಕೋ ಅದು ನಡೆದೇ ತೀರಬೇಕು. ಸಂಚಿತಕರ್ಮಫಲವನ್ನು ಅನುಭವಿಸಿಯೇ ಕಳೆಯಬೇಕೇ ವಿನಃ ಅದು ಹಾಗೇ ಮಾಯವಾಗಿಹೋಗುವುದಲ್ಲ.

ಹೆತ್ತಾತನರ್ಜುನನು ಮುತ್ತಯ್ಯ ದೇವೇಂದ್ರ
ಮತ್ತೆ ಮಾತುಲನು ಶ್ರೀಹರಿಯಿರಲು ಅಭಿಮನ್ಯು
ಸತ್ತನೇಕಯ್ಯ ? ಸರ್ವಜ್ಞ

ಎಂಬ ಸರ್ವಜ್ಞಕವಿಯ ಉದ್ಘೋಷದಂತೇ ಯಾರೇ ಇದ್ದರೂ ವಿಧಿಯ ಮುಂದೆ ಅವರು ಏನೂ ಮಾಡಲಾರರು. ಜನಬಲ, ಧನಬಲ, ದೇಹಬಲ ಇವೆಲ್ಲಾ ಆಗ ಕೆಲಸಮಾಡಲಾರವು. ಕ್ಷತ್ರಿಯಬಲವನ್ನು ಅಪಾರವಾಗಿ ವಶಿಷ್ಠರ ಮೇಲೆ ಪ್ರಯೋಗಿಸಿದ ಚಂಡ ಕೌಶಿಕ ಪ್ರತೀ ಘಳಿಗೆ ಸೋತು ಹೋದ! ಆಮೇಲೆ ಅವನಿಗೆ ಅರ್ಥವಾಗಿದ್ದು ಅದನ್ನೇ ಅನುಸರಿಸಿ "ಬ್ರಹ್ಮರ್ಷಿ" ಎಂದು ವಶಿಷ್ಠರಿಂದಲೇ ಗೌರವಿಸಲ್ಪಟ್ಟ ! ಅಂದರೆ ತಪಃಶಕ್ತಿಗೆ ಸರಿಸಮವಾದ ಶಕ್ತಿ ಬೇರಾವುದೂ ಅಲ್ಲ.

ದಿಗ್ಬಲಂ ಕ್ಷತ್ರಿಯ ಬಲಂ ಬ್ರಹ್ಮತೇಜಂ ಬಲಂ ಬಲಂ ---ಎಂಬ ಉಕ್ತಿಯಂತೇ ಕೇವಲ ಬ್ರಹ್ಮತೇಜಸ್ಸು ಮಾತ್ರ ಅಸಾಧ್ಯವಾದುದನ್ನೂ ಸಾಧ್ಯವಾಗಿಸುವಂಥದು. ಅಂತಹ ಬ್ರಹ್ಮಚರ್ಯ ವೃತನಿಷ್ಠನಾದ ಭೀಷ್ಮ ಪಿತಾಮಹ ತನ್ನ ಜೀವಿತದಲ್ಲಿ ಗಳಿಸಿದ ಪುಣ್ಯದ ಬಹುಭಾಗವನ್ನು ಆ ಐದು ಬಾಣಗಳಿಗೆ ಧಾರೆಯೆರೆದಿದ್ದ. ನಿರರ್ಥಕವಾದ ಆ ಕೆಲಸದ ಬದಲು ಅದನ್ನು ಹಾಗೇ ಇಟ್ಟುಕೊಳ್ಳಬಹುದಿತ್ತು, ಆದರೆ ಕ್ಷಾತ್ರಧರ್ಮವನ್ನು ಕಾಪಾಡಲು, ತಾನು ಪ್ರತಿನಿಧಿಸುವ ವಂಶದ ಭಾಗವನ್ನು ಕಾಪಾಡಲು ಹಾಗೆ ಮಾಡಿದ್ದ. ಅಂಬೆಯನ್ನು ಕರೆತರದೇ ಹೋದರೆ ತನ್ನ ಮಲತಮ್ಮನಿಗೆ ಮದುವೆಗೆ ಸರಿಯಾದ ಅಷ್ಟು ಚಂದದ ಹೆಣ್ಣು ಸಿಗುವಳೇ ಎಂಬ ಕಾರಣದಿಂದ ಹಾಗೆ ರಥದಲ್ಲಿ ಬಲವಂತವಾಗಿ ಕರೆತಂದಿದ್ದ. ಮೋದಲೇ ಆಕೆಯ ಬಗೆಗೆ ತಿಳಿದಿದ್ದರೆ ಆ ಕೆಲಸಕ್ಕೆ ಕೈಹಾಕುತ್ತಲೇ ಇರಲಿಲ್ಲ ಭೀಷ್ಮ. " ಮಕ್ಕಳೇ ಬೇಡಾ " ಎಂದರೂ ತಾನೇ ಅವರ ನಡುವೆ ನಿಂತು ಹೋರಾಡುವಂತ ಪರಿಸ್ಥಿತಿ ಬರುತ್ತದೆಂಬ ನಿರೀಕ್ಷೆಯಿಟ್ಟುಕೊಂಡವನಲ್ಲ ಭೀಷ್ಮ. ಎಂದು ಮೊಮ್ಮಗು ಅರ್ಜುನನನಿಂದ ಸೋತನೋ ಅಂದೇ ಭೀಷ್ಮ ಸತ್ತುಹೋದ, ಆದರೆ ಕೇವಲ ಶುಭಗಳಿಗೆಗಾಗಿ, ಪರಮಾತ್ಮನ ಅಂತಿಮ ದರ್ಶನಕ್ಕಾಗಿ ಹಾತೊರೆದು ಜೀವವನ್ನು ಕೈಯ್ಯಲ್ಲಿ ಬಿಗಿಹಿಡಿದು ಜೀವಚ್ಛವವಾಗಿ ಶರಶಯ್ಯೆಯಲ್ಲಿ ಮಲಗಿದ್ದಾನೆ ಭೀಷ್ಮ. ಸುತ್ತ ರಣರಂಗದಲ್ಲಿ ಸತ್ತ, ಅರೆಸತ್ತ ಸೈನಿಕರು. ನೋವಿನ ಚೀರಾಟ. ಹಗಲೂ-ರಾತ್ರಿ ನೋವು, ನೋವು ನೋವಿನದೇ ಗೋಳು. ಕೇಳುತ್ತಿರುವ ಆರ್ತನಾದಗಳು. ಹಗಲು ಹಾರಾಡುವ ರಣಹದ್ದುಗಳು, ಕಾಗೆಗಳು. ರಾತ್ರಿಯಲ್ಲಿ ನಿಶಾಚರಿ ಪಶುಪಕ್ಷಿಗಳು. ಎಲ್ಲೆಲ್ಲೂ ರಕ್ತದ ಅಸಹ್ಯ ಹುಟ್ಟಿಸುವ ವಾಸನೆ. ರಾತ್ರಿಗಾಗಿ ಯುದ್ಧವಿರಾಮವಿದ್ದರೂ ಎದ್ದುಹೋಗಲಾರದ ಸ್ಥಿತಿ. ನೆಂಟರಿಷ್ಟರು ಬಂಧು-ಬಳಗ ಯಾರೂ ಸನಿಹದಲ್ಲಿ ಇರಲಾರದ ಗತಿ. ದಾರುಣವಾದ ಈ ವಿಷಮ ಪರಿಸರದಲ್ಲಿ ಜನ್ಮಾವಶೇಷದ ಋಣತೀರಿಕೆಗಾಗಿ ಕುಟುಕು ಜೀವವನ್ನು ಹಿಡಿದು ಕಳೆದಹೋದ ಜೀವಮಾನವನ್ನು ಅವಲೋಕಿಸುತ್ತಿದ್ದ ಭೀಷ್ಮ. ವಶಿಷ್ಠರ ಶಾಪವೇ ಕಾರಣವಾಗಿ ಮನುಷ್ಯನಾಗಿ ಪಡಬಾರದ ಪಾಡುಪಟ್ಟ ಭೀಷ್ಮ ಸಾಯುವ ನೋವಿನ ಘಳಿಗೆಯಲ್ಲೂ ತನ್ನ ಪ್ರೀತಿಪಾತ್ರ ಜನರನ್ನು ಮರೆಯಲಿಲ್ಲ. ಬಹುದೀನನಾದ ಭೀಷ್ಮ ತನ್ನಿಂದ ಇತರರಿಗಾದ ಉಪಕಾರಕ್ಕೆ ಪ್ರತ್ಯುಪಕಾರ ಬಯಸಲಿಲ್ಲ. ಆತನಿಗೆ ಬೇಕಾದುದೊಂದೇ ಶ್ರೀಕೃಷ್ಣನ ಕೊನೆಯ ಒಂದು ನೋಟ. ಆ ನೋಟವನ್ನೊಮ್ಮೆ ಹೃದಯಕವಾಟ ತೆರೆದು ಅದರಲ್ಲಿ ಹುದುಗಿಸಿಕೊಂಡು ಆತನೇ ಕರುಣಿಸುವ ಶುಭಸಮಯದಲ್ಲಿ ಕಣ್ಮುಚ್ಚುವವನಿದ್ದ ಭೀಷ್ಮ. ಆ ಸಮಯ ಸನ್ನಿಹಿತವಾದಗ ಮತ್ತೊಮ್ಮೆ ತನ್ನ ತಂದೆ ಶಂತನುವನ್ನೂ ತಾಯಿ ಗಂಗೆಯನ್ನೂ ಮನದಲ್ಲೇ ವಂದಿಸಿ, ನಿಮಗೆ ತಕ್ಕಮಗನಾಗಲು ಸಾಧ್ಯವಾಗದಿದ್ದರೂ ಕೈಲಾದಮಟ್ಟಿಗೆ ನಾನು ನಾನಾಗಿರಲು ಪ್ರಯತ್ನಿಸಿದ್ದೇನೆ ಎಂದು ಮನದಲ್ಲೇ ವಂದಿಸಿದ. ಆತನ ಮನದಲ್ಲಿ ಯಾವುದೇ ಅಶಾಂತಿಯಾಗಲೀ ಅತೃಪ್ತಿಯಾಗಲೀ ಇರಲಿಲ್ಲ.


ಶಂತನು ಗಂಗೆಯ ವರಿಸಿದ ಕಾರಣ
ನಿಂತೆನು ಈ ದಿನ ಭುವಿಯೊಳಗೆ
ಸಂತತಿ ನಡೆಸುತ ವಂಶವ ಮುಂದಕೆ
ಸಂತಸ ತರಲೀ ಹಿರಿಯರಿಗೆ

ಕ್ಷಾತ್ರದಿ ಕಾದುತ ಬೇಡದ ಭಾಗ್ಯವ
ಪಾತ್ರೆಯೊಳಿರಿಸಲು ಬಯಸಿಲ್ಲ
ಗೋತ್ರವು-ಕುಲವು ಒಂದೇ ಆದರೂ
ಖಾತ್ರಿಯು ಯುದ್ಧವು ಬಿಡದಲ್ಲ

ನಲುನಲುಗುವ ನನ್ನೊಳಮನಸಿನ ಪರಿ
ಅಲುಗಾಡಿಸುತಲಿದೆ ದೇಹವನು
ಬಲುಮಾನವರಿವರೆಲ್ಲರು ಕಮ್ಮಿಯೇ ?
ಹುಲುಮಾನವ ನಾನಾಗಿಹೆನು

ಚೆಂಡು ಬುಗುರಿಯಾಡಿದ ಮರಿಮಕ್ಕಳು
ರುಂಡ ಮುಂಡ ಕತ್ತರಿಸುತಲಿ
ಅಂಡಪಿಂಡ ಬ್ರಹ್ಮಾಂಡವು ಮರೆಯದ
ಚಂಡ ಯುದ್ಧವನು ನಡೆಸುತಲಿ

ಬುದ್ಧಿ ಹೀನ ಜನರೊಂದಿಗೆ ಕಳೆದೆನು
ಇದ್ದೂ ಏನೂ ಸಾಧಿಸದೇ
ಗದ್ದಲದೊಳ ಜೀವನವದು ಅದುರಿತು
ಬಿದ್ದುದಕೇನೂ ವಾದಿಸದೇ

ಪರಮಾತ್ಮನ ಪರಿಶೋಭಿತ ಚರಣದಿ
ಶಿರವಿಡುತಲಿ ನಾ ಬೇಡುವೆನು
ಹರಿನೀನೆಂಬುದು ಅರಿವಾದೊಡೆನೆಯೇ
ಬರೆದೆನು ನಿನಗೀ ಜೀವವನು

ಸಲ್ಲದ ಪಾಪವ ಮಾಡದ ಜನ್ಮದಿ
ಇಲ್ಲದ ನೋವನು ಅನುಭವಿಸಿ
ಎಲ್ಲರೊಡನೆ ಸಹಕರಿಸುತ ಪಾತ್ರವ
ಬಲ್ಲರೀತಿಯಲಿ ನಿರ್ವಹಿಸಿ

ಮುರಳೀಗಾನದಿ ಸುಖಿಸುವ ಕೃಷ್ಣನೆ
ಧರೆಗುರುಳಿಸಿ ನೋಡುವುದೇನು ?
ಭರದಲಿ ಸಮಯವ ಕರುಣಿಸು ಬೇಗದಿ
ಸರಸರ ನಿನ್ನೊಳು ಸೇರುವೆನು !