ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, March 13, 2014

ಗಮಯನ ಕಥೆಯುಣಿಸಿದ ಡಾ. ಎಲ್. ಆರ್. ಹೆಗಡೆ


ಚಿತ್ರಋಣ: ಅಂತರ್ಜಾಲ

ಗಮಯನ ಕಥೆಯುಣಿಸಿದ ಡಾ. ಎಲ್. ಆರ್. ಹೆಗಡೆ

ತೊಟ್ಟಿಲ ಹೊತ್ಕೊಂಡು ತೌರ್ಬಣ್ಣ ಉಟ್ಕೊಂಡು
ಅಪ್ಪ ಕೊಟ್ಟೆಮ್ಮೆ ಹೊಡಕೊಂಡು  | ತೌರೂರ
ತಿಟ್ಟತ್ತಿ ತಿರುಗಿ ನೋಡ್ಯಾಳ

ಗರತಿಯೋರ್ವಳು ತೌರುಮನೆಯಿಂದ ಗಂಡನ ಮನೆಗೆ ತೊಟ್ಟಿಲಕಂದನನ್ನು ಕರೆದೊಯ್ಯುವ ಭಾವನಾತ್ಮಕ ಸನ್ನಿವೇಶ ಮೇಲಿನ ಜನಪದ ಪದ್ಯದಲ್ಲಿದೆ. ತವರು ಮನೆಯಲ್ಲಿ ಕೊಟ್ಟ ಸೀರೆಯನ್ನು ಉಟ್ಟುಕೊಂಡ ಗರತಿ, ಅಪ್ಪ ತನ್ನ ಕಂದಮ್ಮನಿಗೆ ಉಣಿಸಲು ಕರಾವಿವಾಗಿ ನೀಡಿದ ಎಮ್ಮೆಯನ್ನು ಜೊತೆಮಾಡಿಕೊಂಡು, ಸಂಗಡಿಗರೊಂದಿಗೆ ತೊಟ್ಟಿಲನ್ನು ಹೊರಿಸಿಕೊಂಡು, ಮೆಟ್ಟಿಲುಗಳನ್ನು ಹತ್ತಿ ಮರಳಿ ಮರಳಿ ತವರನ್ನು ನೆನಯುತ್ತಲೇ ತೆರಳುವ ಪರಿ ಭಾವ ಸಂಕೋಲೆಗಳಿಂದ ನಮ್ಮನ್ನು ಬಂಧಿಸುತ್ತದೆ. ಇಂತಹ ಹಾಡುಗಳನ್ನು ಡಾ|ಎಲ್.ಆರ್.ಹೆಗಡೆಯವರು ಬೋಧಿಸುವ ರೀತಿ ಎಲ್ಲರಿಗಿಂತ ವಿಭಿನ್ನವಾಗಿತ್ತು. ಸನ್ನಿವೇಶಗಳನ್ನು ಅನುಭವಿಸಿ ವಿವರಿಸುತ್ತಿದ್ದ ಶೈಲಿ ಅನನ್ಯ ಮತ್ತು unparalleled.

ನಾವೆಲ್ಲಾ  ಓದುತ್ತಿದ್ದಾಗ ಜನಪದ ಕಥೆಗಳೂ ಅಲ್ಲಲ್ಲಿ ಪಠ್ಯದಲ್ಲಿ ಇರುತ್ತಿದ್ದವು. ಡಾ| ಎಲ್.ಆರ್. ಹೆಗಡೆಯವರ ’ಗಮಯನ ಕಥೆ’  ಅಂಥದ್ದರಲ್ಲಿ ಒಂದು.  2005ರಲ್ಲಿ ಉತ್ತರಕನ್ನಡದ ಕುಮಟಾಕ್ಕೆ ನಾನು ಹೋಗಿ, ಹೊರಟು ನಿಂತಿದ್ದೆ, ಆಗ ಕೇಳಿಬಂದಿದ್ದ ಸುದ್ದಿ ಜನಪದ ಸಾಹಿತಿ ಎಲ್.ಆರ್.ಹೆಗಡೆಯವರ ನಿಧನದ್ದು. ಅವರ ಸಂಗ್ರಹದ  ’ಗಮಯನ ಕಥೆ’ ಎಷ್ಟು  ಹೃದಯಂಗಮವಾಗಿತ್ತೆಂದರೆ, ಅದು ಮಕ್ಕಳ ಕಥೆಯೆನಿಸಿದರೂ, ಅದರಲ್ಲಿರುವ ಭಾವ-ಬಂಧಗಳು ಮಾತ್ರ ಎಳೆಯ ಮನಸ್ಸಿನ ಮೇಲೆ ಗಾಢ ಪರಿಣಾಮವನ್ನು ಬೀರುತ್ತಿದ್ದವು. ಗಮಯನ ಕಥೆಯಲ್ಲಿ ಕಾಡುಪಾಲಾಗುವ ಹುಡುಗನೊಬ್ಬ ಬೃಹತ್ ಮರವೊಂದರ ಕೆಳಗೆ ಕಾಡು ಗಮಯಗಳ ಹಿಂಡನ್ನು ಕಾಣುವುದು, ಅವುಗಳ ಜೊತೆ ಆನ ಸಖ್ಯ ಬೆಳೆಯುವುದು, ನಿತ್ಯವೂ ಅವು ಹಗಲುಹೊತ್ತಿನಲ್ಲಿ ಮೇಯಲು ಹೋದಾಗ, ಅವುಗಳ ಸೆಗಣಿಗುಡ್ಡೆಗಳನ್ನೆಲ್ಲ ಎತ್ತಿ ಜಾಗವನ್ನು ಸ್ವಚ್ಛಗೊಳಿಸಿಡುವುದು, ಗಮಯಗಳು ಅವನಿಗೆ ಉಪಕರಿಸುವುದು, ಚಿನ್ನ-ಬೆಳ್ಳಿ-ಕಬ್ಬಿಣದ ಕೊಳಲುಗಳು...ಇತ್ಯಾದಿ ಇತ್ಯಾದಿ ಇನ್ನೇನೇನೋ ಮಸುಕು ಮಸುಕಾಗಿ ನೆನಪಿದೆಯಷ್ಟೆ. ಎಲ್.ಆರ್. ಹೆಗಡೆಯವರ ಸಮಗ್ರ ಸಂಕಲನಗಳು ಸಂಗ್ರಾಹ್ಯವಾಗಿವೆ; ವಿಶಾಲ ಓದಿನ ಅಭಿರುಚಿಯುಳ್ಳವರಿಗೆ ಲೋಕಜ್ಞಾನದ ಜೊತೆಗೆ ಮುದನೀಡುವ, ರೋಮಾಂಚನಗೊಳಿಸುವ ಕಥೆಗಳೂ ಅವುಗಳಲ್ಲಿವೆ.  ಜನಪದ  ಸಾಹಿತಿ ದಿ| ಎಚ್.ಎಲ್.ನಾಗೇಗೌಡರಿಗಿಂತ ಮೊದಲೇ ಜನಪದ ಕಹಳಯೆನ್ನೂದಿದ್ದವರು ಹೆಗಡೆಯವರು. ಆದರೆ ಆ ಕಾಲಘಟ್ಟದಲ್ಲಿ ಅವರ ಕೆಲಸಗಳಿಗೆ ಅಷ್ಟೊಂದು ಆದ್ಯತೆ ದೊರಕಲಿಲ್ಲ! ಸರಕಾರ ಅವರಿಗಾಗಿ ಯಾವ ಜಾಗವನ್ನೂ ಕೊಡಲಿಲ್ಲ-ಅವರು ಕೇಳಲೂ ಇಲ್ಲವೆಂದಿಟ್ಟುಕೊಳ್ಳೋಣ.   

ನಾಡವರು, ಸಿದ್ಧಿಗಳು, ಹಸಲರು, ಹಾಲಕ್ಕಿ ಒಕ್ಕಲಿಗರು, ಹರಿಜನರೇ ಮೊದಲಾದ ಜನಾಂಗಗಳಲ್ಲಿನ ಜನಪದ ಕಥೆ, ಗಾದೆ, ಜಾಣ್ನುಡಿ, ಗಿಡಮೂಲಿಕೆ-ಮಾಹಿತಿ ಇಂಥವುಗಳನ್ನೆಲ್ಲ ನಲವತ್ತು ದಶಕಗಳ ಹಿಂದೆಯೇ ಸಂಗ್ರಹಿಸಿ,   ಹೊಸ ಪ್ರಪಂಚಕ್ಕೆ ತೆರೆದಿಟ್ಟವರಲ್ಲಿ ಪ್ರಮುಖರಾದವರೆಂದರೆ ಡಾ| ಲಕ್ಷ್ಮೀನಾರಾಯಣ ಹೆಗಡೆ (ಡಾ. ಎಲ್. ಆರ್. ಹೆಗಡೆ, 1923-2005).  ಉತ್ತರ ಕನ್ನಡ ಜಿಲ್ಲೆಯು ಜಾನಪದ ಹಾಗೂ ಯಕ್ಷಗಾನ ಪ್ರಕಾರಗಳಿಗೆ ತೌರುಮನೆಯಿದ್ದಂತೆ. ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹೊಲನಗದ್ದೆ ಎಂಬಲ್ಲಿ. ತಂದೆ ರಾಮಕೃಷ್ಣ ಹೆಗಡೆಯವರು. ಕುಮಟಾದ ಗಿಬ್ಸ್ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದರು. ತಾಯಿ ಮಹಾಲಕ್ಷ್ಮಿ.

ಇಲ್ಲೊಂದು ಆ ತರಗತಿಯ ಜನಪದ ಕಥೆಯಿದೆ:

ಒಂದಲ್ಲಾ ಒಂದೂರಿತ್ತು. ಅಲ್ಲಿ ಗುಣಶೇಖರನೆಂಬ ಯುವಕನಿದ್ದ. ಅವನು ತಂದೆಯ ಬಳಿ ನೂರು ಬೆಳ್ಳಿಯ ನಾಣ್ಯ ತೆಗೆದುಕೊಂಡು ಪ್ರಪಂಚ ಸುತ್ತಲು ಹೊರಟ. ದಾರಿಯಲ್ಲಿ  ನಾಲ್ಕು ಜನ  ಒಂದು ಬೆಕ್ಕನ್ನು ಹಿಡಿದು ಕೊಂಡು ಕುಳಿತಿದ್ದರು. ಅದು ಅವರ ಕೋಳಿಯನ್ನು ತಿಂದಿತ್ತಂತೆ, ಅದಕ್ಕೇ ಬೆಕ್ಕಿಗೆ ಶಿಕ್ಷೆ ವಿಧಿಸಲು ಅವರು ಯೋಚಿಸುತ್ತಿದ್ದರು. ಗುಣಶೇಖರನಿಗೆ ಬೆಕ್ಕನ್ನು ಕಂಡು ಬಹಳ ಕನಿಕರವೆನಿಸಿತು.

"ಅಯ್ಯೋ ಪಾಪ ಅದನ್ನು ಬಿಟ್ಟು ಬಿಡಿ. ನಿಮಗೆ ಐವತ್ತು ಬೆಳ್ಳಿಯ ನಾಣ್ಯ ಕೊಡುತ್ತೇನೆ" ಎಂದ. ಆ ನಾಲ್ವರು ಸಂತೋಷದಿಂದ ಹಣ ತೆಗೆದುಕೊಂಡು ಬೆಕ್ಕನ್ನು ಬಿಟ್ಟು ಹೋದರು. ಗುಣಶೇಖರ ಬೆಕ್ಕನ್ನೆತ್ತಿಕೊಂಡು ಮುನ್ನಡೆದ.

ಇನ್ನೂ ಕೆಲವು ಮೈಲು ನಡೆದ ಬಳಿಕ ಒಂದು ಹಳ್ಳಿಯವರು ಹಾವೊಂದನ್ನು ಕೊಲ್ಲಲು ಯತ್ನಿಸುತ್ತಿರುವುದನ್ನು ಕಂಡ. "ಆ ಬಡ ಪ್ರಾಣಿಗೆ ಯಾಕೆ ಕಷ್ಟ ಕೊಡ್ತೀರಿ?" ಈ ಐವತ್ತು ಬೆಳ್ಳಿ ನಾಣ್ಯ ತೆಗೆದುಕೊಂಡು ಅದನ್ನು ಬಿಟ್ಟಿಡಿ" ಎಂದ.  ಹೀಗೆ ಅವನಿಗೆ ಎರಡು ಪ್ರಾಣಿಗಳು ಗಂಟುಬಿದ್ದವು. ಕೈಯಲ್ಲಿದ್ದ ದುಡ್ಡೆಲ್ಲ ಖರ್ಚಾಗಿಹೋಯ್ತು. ಮುಂದುವರಿಯುವುದು ಹೇಗೆ? ಎಂದುಕೊಳ್ಳುತ್ತಾ ಮರಳಿ ತಂದೆಯ ಮನೆಗೆ ಬಂದ.  ಆದರೆ ತಂದೆ ಅವನನ್ನು ಸಿಟ್ಟಿನಿಂದ ಹೊರದೂಡಿದ. ಆಗ ರಾತ್ರಿಯ ಸಮಯವಾಗಿತ್ತು. ಹೆದರುತ್ತಲೇ ಗುಣಶೇಖರ ಕಾಡಿನ ಮರದ ಕೆಳಗೆ ಮಲಗಿದ. ಹಾವು ಅವನ ತಲೆಯಮೇಲೆ ಹೆಡೆ ಬಿಚ್ಚಿ ನಿಂತಿತು. ಬೆಕ್ಕು ಅವನನ್ನು ಕಚ್ಚಲು ಬಂದ ಇಲಿಗಳನ್ನು ಓಡಿಸಿತು. ಅಂತೂ ಬೆಳಗಾಯಿತು. ಆಗ ಹಾವು ಹೇಳಿತು: "ಒಡೆಯಾ, ಇಲ್ಲೇ ನದಿ ಕೆಳಗಿನ ಗುಹೆಯಲ್ಲಿ ನಮ್ಮ ತಂದೆ ಇದ್ದಾನೆ. ನೀನು ನನ್ನ ಜೀವ ಉಳಿಸಿರುವುದರಿಂದ  ಏನು ಕೇಳಿದ್ರೂ ತಂದೆ ಕೊಡ್ತಾನೆ. ಮಾಯದ ಉಂಗುರ ಬೇಕು ಅಂತ ಅವನಲ್ಲು ಕೇಳು."

ಗುಣಶೇಖರ ಹಾವಿನ ಜೊತೆ ನದಿಯಲ್ಲಿ ಮುಳುಗಿ ಅದರ ತಂದೆಯಿಂದ ಮಾಯದ ಉಂಗುರವನ್ನು ಪಡೆದುಕೊಂಡ. ನದಿಯಿಂದ ಹೊರಬಂದು ಉಂಗುರವನ್ನು ಸೂರ್ಯನ ಕಿರಣಗಳಿಗೆ ಒಡ್ಡಿದ. ಅರೆಕ್ಷಣದಲ್ಲಿ ಅಲ್ಲೊಂದು ಚಂದದ ಅರಮನೆ ಪ್ರತ್ಯಕ್ಷವಾಯ್ತು. ಅದರೊಳಗೆ ಬೇಕುಬೇಕಾದ ಸಾಮಾನುಗಳು, ಸೇವಕರು, ಬಂಗಾರದ ಕೂದಲಿನ ರಾಜಕುಮಾರಿಯೊಬ್ಬಳು ಅವನನ್ನು ಇದಿರುಗೊಂಡು ಹಾರ ಹಾಕಿದಳು! ಗುಣಶೇಖರನೂ ರಾಜಕುಮಾರಿಯೂ ಆ ಅರಮನೆಯಲ್ಲಿ ಸುಖವಾಗಿದ್ದರು.

ಕಥೆ ಇಷ್ಟಕ್ಕೇ ಮುಗಿಯಲಿಲ್ಲ!!

ಒಂದಾನೊಂದು ದಿನ ನದೀತೀರದಲ್ಲಿ ಕುಳಿತು ರಾಜಕುಮಾರಿ ತನ್ನ ಕೂದಲನ್ನು ಬಾಚಿಕೊಳ್ಳುತ್ತಿದ್ದಳು. ಆಗ ಅವಳ ಒಂದು ಬಂಗಾರದ ಕೂದಲೆಳೆ ನೀರಿನಲ್ಲಿ ಬಿದ್ದು ತೇಲುತ್ತಾ ಹೋಯಿತು. ಕೆಳಗೆ ನದಿಯಲ್ಲಿ ಈಜುತ್ತಿದ್ದ ನೆರೆದೇಶದ ರಾಜಕುಮಾರನ ಕೈಗೆ ಆ ಕೂದಲೆಳೆ ಸಿಕ್ಕಿಬಿಟ್ಟಿತು! " ಮದುವೆಯಾದ್ರೆ ಈ ಬಂಗಾರದ ಕೂದಲಿನ ಸುಂದರಿಯನ್ನು ಮಾತ್ರ" ಎಂದು ಅವನು ಶಪಥ ಮಾಡಿದ. ಬಂಗಾರದ ಕೂದಲಿನ ಹುಡುಗಿಗಾಗಿ ಬಹಳಷ್ಟು ಹುಡುಕಿಸಿದ; ಆದರೆ, ಎಷ್ಟು ಹುಡುಕಿಸಿದರೂ ಆ ಸುಂದರಿ ಸಿಗದೆ, ಚಿಂತೆಯಲ್ಲಿ ಊಟ-ತಿಂಡಿ ರುಚಿಸದೆ, ರಾಜಕುಮಾರ ವ್ಯಥೆಯಿಂದ ಬಡಕಲು ಶರೀರದವನಾಗತೊಡಗಿದ. ಕಡೆಗೆ ಮಾಟಗಾತಿಯಾದ ಅವನ ಮುದಿ ಚಿಕ್ಕಮ್ಮ ಹತ್ತಿರ ಬಂದು, "ಮಗು, ಈ ಸುಂದರಿಯನ್ನು ನಾನು ಹುಡುಕಿಕೊಂಡು ಬರ್ತೇನೆ" ಎಂದು ಒಂದು ಹದ್ದಿನ ರೂಪ ಧರಿಸಿ ಆಕಾಶದಲ್ಲಿ ಹಾರಿಹೋದಳು.

ಹಾರುತ್ತಿರುವ ಹದ್ದಿನ ಕಣ್ಣಿಗೆ ಬಂಗಾರಕೂದಲಿನ ಸುಂದರಿ ಕಣ್ಣಿಗೆ ಬಿದ್ದೊಡನೆ, ಹದ್ದಿನ ರೂಪದ ಮಾಟಗಾತಿ ಕೆಳಗಿಳಿದು, ಮುದುಕಿಯ ರೂಪ ಧರಿಸಿ ಅವಳ ಬಳಿಗೆ ಹೋದಳು.‘ ಮಗಳೇ ಹೇಗಿದ್ದೀಯಾ? ನನ್ನ ಗುರುತು ಸಿಗಲಿಲ್ಲವೇನೆ? ನಾನು ನಿನ್ನ ದೊಡ್ಡಮ್ಮನಲ್ಲವೇನೆ?" ಎಂದು ಕೇಳಿ ಆತ್ಮೀಯವಾಗಿ ಮಾತನಾಡುತ್ತಾ ಅಲ್ಲಿಯೇ ಉಳಿದುಬಿಟ್ಟಳು! ಒಂದೆರಡು ದಿನಗಳ ಬಳಿಕ ಉಂಗುರವನ್ನೆತ್ತಿಕೊಂಡು ಓಡಿಹೋದಳು!!

ಮರಳಿದ ಹದ್ದು ಮತ್ತೆ ಮಾಟಗಾತಿಯ ರೂಪ ಧರಿಸಿ-ಅರಮನೆಗೆ ಬಂದು, ಉಂಗುರವನ್ನು ರಾಜಕುಮಾರನ ಕೈಗೆ ಕೊಟ್ಟು, ಆತ ಅದನ್ನು ಬಿಸಿಲಿಗೆ ಹಿಡಿದಾಗ, ಅರಮನೆಯೂ ರಾಜಕುಮಾರಿಯೂ ಅವನ ರಾಜ್ಯಕ್ಕೆ ಬಂದರು! "ನಿನಗಾಗಿ ಅದೆಷ್ಟು ದಿನ ಕಾದಿದ್ದೆ ಗೊತ್ತೇ? ನನ್ನನ್ನು ಮದುವೆಯಾಗು" ಎಂದು ಅವನು ರಾಜಕುಮಾರಿಯನ್ನು ಒತ್ತಾಯಪಡಿಸಿದ. ರಾಜಕುಮಾರಿಗೆ ಗಾಬರಿಯಾಯಿತು. ಅವಳು ಹೊರಗೆ ಏನನ್ನೂ  ತೋರಿಸಿಕೊಳ್ಳದೆ, "ಆಗ್ಲಿ, ನಂಗೆ ಒಂದು ತಿಂಗಳು ಸಮಯ ಕೊಡು" ಎಂದುಬಿಟ್ಟಳು.

ಇತ್ತ ಬೇಟೆಗೆ ಹೋಗಿದ್ದ ಗುಣಶೇಖರ ವಾಪಸು ಬರುವ ಹೊತ್ತಿಗೆ ಅರಮನೆ ಮತ್ತು ರಾಜಕುಮಾರಿ ಇಬ್ಬರೂ ಮಾಯವಾಗಿದ್ದರು! ಏನೂಮಾಡಲು ದಾರಿ ಕಾಣದೇ ಅವನು ದುಃಖದಿಂದ ಆಳುತ್ತಾ ಕುಳಿತುಬಿಟ್ಟ. ಆಗ ಬೆಕ್ಕು ಅವನ ಹತ್ತಿರ ಬಂದು "ಅಳಬೇಡ ಒಡೆಯನೇ, ಹೇಗಾದ್ರೂ ಮಾಡಿ ಆ ಉಂಗುರ ತರ್ತೇನೆ" ಎಂದು ಹೇಳಿ ಹೊರಟೇಬಿಟ್ಟಿತು!

ನೆರೆರಾಜ್ಯಕ್ಕೆ ಅದು ತಲುಪಿದಾಗ ರಾತ್ರಿಯಾಗಿದ್ದರಿಂದ, ರಾಜಕುಮಾರ  ಹಂಸತೂಲಿಕಾತಲ್ಪದಮೇಲೆ ಮಲಗಿದ್ದ. ಇಲಿಯೊಂದರ ಸಹಾಯದಿಂದ ಬೆಕ್ಕು ಉಂಗುರವನ್ನು ಲಪಟಾಯಿಸಿ ವಾಯುವೇಗದಲ್ಲಿ ಹಿಂತಿರುಗಿ ಬಂತು. ಮರುದಿನ ಬೆಳ್ಳ್ಂಬೆಳಿಗ್ಗೆ ಗುಣಶೇಖರ ಉಂಗುರವನ್ನು ಸೂರ್ಯನ ಬಿಸಿಲಿಗೆ ಹಿಡಿದಾಗ ಅರಮನೆ ಮತ್ತು ರಾಜಕುಮಾರಿ ಅಲ್ಲಿ ಪ್ರತ್ಯಕ್ಷವಾದರು! ಅಂದಿನಿಂದ ಗುಣಶೇಖರ ಉಂಗುರವನ್ನು ಬಹು ಜೋಪಾನವಾಗಿರಿಸಿಕೊಂಡ.

ಇಂತಹ ಕಥೆಗಳಲ್ಲಿ ಬರುವ ಕುತೂಹಲಕಾರಿ ತಿರುವುಗಳು, ಕಲ್ಪನಾ ಜಗತ್ತು ಮಕ್ಕಳ ಮನಸ್ಸಿಗೊಂದೇ ಅಲ್ಲದೇ ಎಲ್ಲಾ ವಯಸ್ಸಿನವರಿಗೂ ಮುದನೀಡುವುದರಲ್ಲಿ ಸಂಶಯವಿಲ್ಲ.

ಜನಪದ ತಜ್ಞ ಎಲ್.ಆರ್. ಹೆಗಡೆಯವರ ಪ್ರಾರಂಭಿಕ ಶಿಕ್ಷಣ ಹೊಲನಗದ್ದೆ ಹಾಗೂ ಗುಡೆ ಅಂಗಡಿಗಳಲ್ಲಿ. ಪ್ರೌಢಶಾಲೆಗೆ ಸೇರಿದ್ದು-ಅವರ ತಂದೆಯೇ ಅಧ್ಯಾಪಕರಾಗಿದ್ದ ಕುಮಟಾದ ಗಿಬ್ಸ್ ಹೈಸ್ಕೂಲಿಗೆ. ಬಿ.ಎ. ಪದವಿ ಪಡೆದದ್ದು ಬೆಳಗಾವಿಯ ಲಿಂಗರಾಜು ಕಾಲೇಜು ಹಾಗೂ ಸಾಂಗ್ಲಿಯ ವಿಲಿಂಗ್ಡನ್ ಕಾಲೇಜಿನಿಂದ ಬಿ.ಟಿ. ಪದವಿ. ಪೂನಾ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ಪ್ರಥಮ ವರ್ಗದಲ್ಲಿ ತೇರ್ಗಡೆಯಾಗಿ ಪಡೆದರು. ‘ಕುಮಾರವ್ಯಾಸನ ಪಾತ್ರ ಸೃಷ್ಟಿ’ ಎಂಬ ಪ್ರೌಢ ಪ್ರಬಂಧವನ್ನು ಡಾ.ಆರ್.ಸಿ. ಹಿರೇಮಠರವರ ಮಾರ್ಗದರ್ಶನದಲ್ಲಿ ಕರ್ನಾಟಕ ವಿಶ್ವವದ್ಯಾಲಯಕ್ಕೆ ಸಲ್ಲಿಸಿ ಪಡೆದ ಡಾಕ್ಟರೇಟ್ ಪದವಿ.

ಬೋಧಕರಾಗಿ ಕಾರವಾರದ ಸರಕಾರಿ ಹೈಸ್ಕೂಲಿನಲ್ಲಿ ಉದ್ಯೋಗ ಪ್ರಾರಂಭಿಸಿ ಹೊನ್ನಾವರದ ನ್ಯೂ ಇಂಗ್ಲಿಷ್ ಹೈಸ್ಕೂಲಿನಲ್ಲಿಯೂ ಕೆಲಕಾಲ ಸೇವೆ ಸಲ್ಲಿಸಿದ ನಂತರ ಕುಮಟಾದ ಕೆನರಾ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿ, ರೀಡರ್ ಆಗಿ, ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ೧೯೭೮ರಲ್ಲಿ ನಿವೃತ್ತಿ ಹೊಂದಿದರು. ಸಾಹಿತ್ಯ ಕ್ಷೇತ್ರದಲ್ಲಿ ಅವರ ಕೃಷಿ ಬಲುಸೊಗಸು ಮತ್ತು ಬಹಳ ವೈವಿಧ್ಯಮಯ. ವಿಶೇಷತಃ ಉತ್ತರಕನ್ನಡದ ಮಣ್ಣಿನವಾಸನೆ, ಆ ನೆಲದ ಗಂಧಗಾಳಿ ಸರಳ ಶೈಲಿಯ ಅವರ ಬರಹಗಳಲ್ಲಿ ಢಾಳಾಗಿ ಛಾಪೊತ್ತಿ ನಿಂತಿದೆ. ಅಲ್ಲಿನ  ವಿವಿಧ ಜನಾಂಗಗಳ ಉಪಸಂಸ್ಕೃತಿಯನ್ನು ಆಳವಾಗಿ ಅಧ್ಯಯನ ನಡೆಸಿ ಪ್ರಕಟಿಸಿರುವ ಪ್ರಮುಖ ಕೃತಿಗಳೆಂದರೆ ’ಮುಕ್ರಿ ಹೊಲೆಯರ ಪದಗಳು’, ’ಕುವರಿ ಮರಾಠಿ ಕಥೆಗಳು’, ’ಗುಮಟೆಯ ಪದಗಳು’, ’ಕರಾವಳಿಯ ಜನಪದ ಕಥೆಗಳು’ ಮೊದಲಾದವು. ಇದಲ್ಲದೆ, ಇವರ ಜಾನಪದ ಕೃತಿಗಳೆಂದರೆ: ’ತಿಮ್ಮಕ್ಕನ ಪದಗಳು’, ’ಪರಮೇಶ್ವರಿಯ ಪದಗಳು’, ’ಉತ್ತರ ಕನ್ನಡ ಜಿಲ್ಲೆಯ ಜಾನಪದ ಕಥೆಗಳು’, ’ಮೂಢನಂಬಿಕೆಗಳು’, ’ಹಾಲಿನ ತೆನೆ’, ’ಹಾಡಲುಂಟೇ ನಿನ್ನ ಮಡಿಲಲ್ಲಿ’, ’ಜನಪದ ಸಾಹಿತ್ಯದಲ್ಲಿ ಮದುವೆ’ ಮುಂತಾದವುಗಳು.

ಹೆಗಡೆಯವರು ಜನಪದ ಗೀತೆಗಳು, ಹಾಡುಗಳು, ಸ್ಥಳೀಯ ಸುಗ್ಗಿಕುಣಿತ ಮೊದಲಾದ ನರ್ತನಗಳು, ಕಥನ ಗೀತೆಗಳು ಮತ್ತು ವಿಮರ್ಶೆಯ ಕ್ಷೇತ್ರಗಳಲ್ಲಿಯೂ ಅಪಾರ ಸಾಧನೆ ಗೈದಿದ್ದಾರೆ. ಸೃಜನಶೀಲ ಸಾಹಿತ್ಯಕ್ಕೂ ಇವರು ನೀಡಿರುವ ಕೊಡುಗೆಯು ಬಹಳ ದೊಡ್ಡದೇ ಎನ್ನಬಹುದು. ಕಥೆ, ಕಾವ್ಯ, ನಾಟಕ, ಲಘು-ಬರಹ, ವ್ಯಕ್ತಿ ಚಿತ್ರ, ಹೀಗೆ ನಾನಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದು, ಒಟ್ಟು  ಕೃತಿಗಳ ಸಂಖ್ಯೆಯು ಮೂವತ್ತಕ್ಕೂ ಹೆಚ್ಚು. ಇವರ ಮತ್ತೊಂದು ಆಸಕ್ತಿ ಕ್ಷೇತ್ರವೆಂದರೆ ಆಯುರ್ವೇದ, ಹೋಮಿಯೋಪತಿ ಹಾಗೂ ಜಾನಪದ ವೈದ್ಯ ಕ್ಷೇತ್ರ. ’ಅನುಭವ ಚಿಕಿತ್ಸೆ’, ’ಆರೋಗ್ಯವೇ ಭಾಗ್ಯ’, ’ಗಾಂವಟಿ ಚಿಕೆತ್ಸೆ’, ’ಜನಪದ ವೈದ್ಯ’, ’ನಾಡಮದ್ದು’, ’ಹೋಮಿಯೋಪತಿ ಚಿಕಿತ್ಸೆ’ ಮುಂತಾದ ಹಲವಾರು ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಕರ್ನಾಟಕದ ವಿವಿಧ ಪತ್ರಿಕೆಗಳಿಗೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅವರು ಬರೆದ ಲೇಖನಗಳೇ ನೂರಾರು.

ಜನಪದ ಕ್ಷೇತ್ರಕ್ಕಾಗಿ ಇವರು ನೀಡಿದ ಕೊಡುಗೆಗಾಗಿ ಸಂದ ಪ್ರಶಸ್ತಿ ಗೌರವಗಳು ಹಲವಾರು. ೧೯೮೧ರಲ್ಲಿ ಕರ್ನಾಟಕದ ವಿಶ್ವವಿದ್ಯಾಲಯದ ವತಿಯಿಂದ ಅಂಕೋಲದಲ್ಲಿ ಜರುಗಿದ ಎಂಟನೆಯ ಜನಪದ ಸಾಹಿತ್ಯ ಸಮ್ಮೇಳನ ಮತ್ತು ರಾಯಚೂರಿನಲ್ಲಿ ನಡೆದ ಕರ್ನಾಟಕ ಜನಪದ ವಿದ್ವಾಂಸರ ಮಹಾಧಿವೇಶನದಲ್ಲಿ ಗೋಷ್ಠಿಯೊಂದರ ಅಧ್ಯಕ್ಷತೆಯ ಗೌರವಕ್ಕೂ ಪಾತ್ರರಾಗಿದ್ದಾರೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಸದಸ್ಯರಾಗಿ ಸೇವೆ ಸಲ್ಲಸಿದ್ದಲ್ಲದೆ ಮೈಸೂರು ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳು ನಡೆಸಿದ ಜಾನಪದ ಗೋಷ್ಠಿ, ಚರ್ಮವಾದ್ಯ ಗೋಷ್ಠಿ, ಜಾನಪದ ಮೌಲ್ಯ ಮಾಪನ ಗೋಷ್ಠಿ ಮತ್ತು ಮಲೆನಾಡು ಜಾನಪದ ಗೋಷ್ಠಿ ಮುಂತಾದವುಗಳ ಅಧ್ಯಕ್ಷತೆಯ ಗೌರವವನ್ನು ಪಡೆದಿದ್ದಾರೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯು 1986ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ.

ಹೀಗೆ, ಜನಪದ ಲೋಕಕ್ಕೆ ವಿಶಿಷ್ಟ ಕೊಡುಗೆ ನೀಡಿದ ಎಲ್.ಆರ್. ಹೆಗಡೆಯವರು, ಜನಪದ ಲೋಕದಿಂದ ನಿರ್ಗಮಿಸಿದ್ದು, ಕಾಣದಲೋಕದಲ್ಲಿ ವಿರಮಿಸಿದ್ದು 2005ರಲ್ಲಿ. ಅವರು ಆಡೆದ್ದು ಹೋದ ಜನಪದ ಸಾಹಿತ್ಯರಂಗವನ್ನು ಅವಲೋಕಿಸುವಾಗ ಸರ್ವಜ್ಞ ವಚನವೊಂದು ನೆನಪಿಗೆ ಬಂತು:

ಸಿರಿಯು ಸಂಪದವು ಸ್ಥಿರವೆಂದು ನಂಬದಿರು
ಹಿರಿದೊಂದು ಸಂತೆ ನೆರೆದೊಂದು ಜಾವಕ್ಕೆ
ಹರಿದು ಹೋದಂತೆ -ಸರ್ವಜ್ಞ

ಕನ್ನಡಕ್ಕಾಗಿ ಶ್ರಮಿಸಿದ ಕೈಗಳದೆಷ್ಟೋ. ಅವುಗಳಲ್ಲಿ ಹೆಗಡೆಯವರ ಕೈ ಕೂಡ ಒಂದು. ಇಂಥವರೆಲ್ಲ ವಿದೇಶೀ ತತ್ವಜ್ಞಾನಿಗಳಂತೆ ಸಿರಿ-ಸಂಪತ್ತನ್ನು ಅನುಭವಿಸಿದವರಲ್ಲ. ಊರೂರು ಸುತ್ತಿ, ಹಲವರಲ್ಲಿ ಕಾಡಿ-ಬೇಡಿ ಮಾಹಿತಿಗಳನ್ನು ಸಂಗ್ರಹಿಸಿದರು. ಕಳೆದುಹೋಗಬಹುದಾದ ಬಹುಮೂಲ್ಯ ಮಾಹಿತಿಗಳನ್ನು ಪುಸ್ತಕಗಳ ರೂಪದಲ್ಲಿ ತಯಾರಿಸಿದರು. ಎಲ್ಲವನ್ನೂ ನಮ್ಮೆಲ್ಲರಿಗಾಗಿ ತಯಾರಿಸಿಕೊಟ್ಟ ಜನ, ಬಹುದೊಡ್ಡ ಸಂತೆ ನಡೆದ ಸಂತೇಮಾಳದಿಂದ ತಮ್ಮ ಸ್ವಸ್ಥಾನಗಳಿಗೆ ಮರಳುವಂತೆ ತೆರಳಿಬಿಟ್ಟರು! ಸಂತೆನೆರೆದ ಜಾಗದಲ್ಲಿ ಸಂತೆ ಸೇರಿದ್ದ ಬಗ್ಗೆ ಕುರುಹುಗಳು ಮಾತ್ರ ಉಳಿದುಕೊಂಡವು; ಜನಮಾನಸದ ಜ್ಞಾನದ ಹರವಿಗೆ ತಮ್ಮನ್ನು ತೆರೆದುಕೊಂಡವು, ನಮಸ್ಕಾರ.