ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, January 31, 2010

ಶನಿಗೂ ಬಂತು ಗ್ರಹಚಾರ !!




ಶನಿಗೂ ಬಂತು ಗ್ರಹಚಾರ !!

ಶನಿಮಹಾತ್ಮನ ಬಗ್ಗೆ ಅನೇಕ ಕಥೆಗಳಿವೆ. ಹುಟ್ಟಿನಿಂದ ಶನಿ ತಂದೆ ಸೂರ್ಯನನ್ನೇ ಬಿಡಲಿಲ್ಲ -ಕಾಡಿದ ಎಂಬುದಾಗಿ. ಶನಿ ಎಂದರೆ ನಮ್ಮ ರಾಜ್ಯಸರಕಾರದಲ್ಲಿ ಲೋಕಾಯುಕ್ತರಿರ್ವ ಹಾಗೇ, ಅಂಥದ್ದೇ ಪೋಸ್ಟು. ಇಲ್ಲಿ ಶನಿ ಪರ್ಮಮನೆಂಟ್ ಜಾಬ್ ಹೋಲ್ಡರ್, ಇದೇ ಒಂದು ಸ್ವಲ್ಪ ಬದಲು. ಬ್ರಹ್ಮಾಂಡದ ನಿರ್ವಹಣೆಗೆ ಪರಬ್ರಹ್ಮ ಶಕ್ತಿ ತನ್ನನ್ನೇ ತಾನು ಬೇರೆ ಬೇರೆ ಅಂಶಾಂಶ ರೂಪದಲ್ಲಿ ಸೃಜಿಸಿಕೊಂಡು ಕಾರ್ಯ ನಿರ್ವಹಿಸುತ್ತದೆ ಎಂಬುದು ಜಿಜ್ಞಾಸುಗಳ ಪ್ರತಿಪಾದನೆ. ಇದ್ದರೂ ಇರಬಹುದು ಎಂದಿಟ್ಟುಕೊಳ್ಳೋಣ.

ಅತಲ, ವಿತಲ, ಸುತಲ, ತಲಾತಲ, ರಸಾತಲ, ಪಾತಾಳ, ಭೂಲೋಕ, ಭುವರ್ಲೋಕ, ಸುವರ್ಲೋಕ, ಮಹರ್ಲೋಕ, ಜನರ್ಲೋಕ,ತಪೋಲೋಕ, ಸತ್ಯಲೋಕ...ಎಂಬಿತ್ಯಾದಿ ಹದಿನಾಲ್ಕು ಲೋಕಗಳಲ್ಲಿ ಯಾರು ಸರಿಯಾದ ಧರ್ಮ-ಕರ್ಮ ನಿರತರಲ್ಲವೋ ಅಂಥವರನ್ನು ಹುಡುಕಿ, ಕೇಸು ಜಡಿದು, ಕಾಲಾಕಾಲದಲ್ಲಿ ಅವರನ್ನು ಶಿಕ್ಷಿಸುವುದು,ದಂಡಿಸುವುದು, ಮತ್ತು ಅವರು ತಪ್ಪು ತಿದ್ದಿ ಕೊಳ್ಳುವವರೆಗೆ, ತನಗಿಂತ ಹೆಚ್ಚಿನದಾದ ಶಕ್ತಿಯೊಂದಿದೆ ಎಂಬ ಅರಿವು ಅವರಿಗೆ ಮೂಡುವವರೆಗೆ ಅವರನ್ನು ಬಿಡದೇ ಕಾಡುವುದು ಲೋಕಾಯುಕ್ತ ಶನಿಮಹಾತ್ಮರ ಕರ್ತವ್ಯ. ಕೊನೆಗೊಮ್ಮೆ ಸೋತು ಸುಣ್ಣವಾದ ಜನರಿಗೆ ತನ್ನ ಪೀಡನೆಯಿಂದ ಬಿಡುಗಡೆಮಾಡಿ ಅವರು ಕಳೆದುಕೊಂಡಿದ್ದನ್ನೆಲ್ಲ ಮರಳಿಸುವುದು ಶ್ರೀಮಾನ್ ಲೋಕಾಯುಕ್ತ ಶನಿಮಹಾತ್ಮರ ಕಾರ್ಯವೈಖರಿ. ಇಂತಿಪ್ಪ ಶನಿ ಯಾರು ಎಂಬ ನಿಮ್ಮ ಪ್ರಶ್ನೆಗೆ ಉತ್ತರ-- ದಿನಂಪ್ರತಿ ನಮಗೆ ಹಾಜರಿತೋರಿಸುವ, ತನ್ನ ಪ್ರಸ್ತುತಿಯಿಂದ ಜಗದ ಜೀವರಾಶಿಗೆ ಚೈತನ್ಯ ತುಂಬುವ ಸೂರ್ಯದೇವ ನಮ್ಮ ಶನಿಮಹಾತ್ಮರ ತಂದೆ. ಸೂರ್ಯದೇವನ ಹೆಂಡತಿ ಛಾಯಾ[ಬಾಯಿ]ದೇವಿ ಶನೈಶ್ಚರನ ತಾಯಿ. ಮಗ ಹುಟ್ಟಿದ ಅಂತ ಪ್ರೀತಿಯಿಂದ ಮಗನನ್ನು ನೋಡಲಿಕ್ಕೆ ತನ್ನ ಕೆಲಸವನ್ನು ಸ್ವಲ್ಪ ನಿಲ್ಲಿಸಿ ಬಂದ ಅಂತ ತಂದೆಯನ್ನೇ ದುರುಗುಟ್ಟಿ [ಗುರಾಯಿಸಿ]ನೋಡಿದರಂತೆ ನಮ್ಮ ಶನಿಮಹಾತ್ಮ! ಇದರಿಂದ ಕೆಲವು ಕಾಲ ಸೂರ್ಯದೇವರಿಗೆ ಕಣ್ಣೇ ಕಾಣಿಸಲಿಲ್ಲವಂತೆ,ಕುಷ್ಟರೋಗ ಬಂತಂತೆ. ಯಾರನ್ನೂ ಬಿಡದೇ, ಲಂಚ ತೆಗೆದುಕೊಳ್ಳದೇ ಕೆಲಸಮಾಡುವ ಒಂದೇ ಪೋಸ್ಟು ನಮ್ಮ ಶನಿಮಹಾರಾಜರದ್ದು! [ಇಲ್ಲಾಂದರೆ ನಮ್ಮ ಜನ ಬಿಡುತ್ತಿದ್ದರೇ?] ಅವರು ಕಾಡಿದ ಕೆಲವೊಂದು ವಿಶೇಷ ವ್ಯಕ್ತಿಗಳನ್ನು ಕಾಲಕ್ರಮದಲ್ಲಿ ನೋಡೋಣ.


ಹೀಗೇ ಇಷ್ಟೆಲ್ಲ ಪರಾಕ್ರಮಿಯಾದ ನಮ್ಮ ಶನಿಮಹಾರಾಜರೂ ಕೂಡ ಪೇಚಿಗೆ ಸಿಲುಕಿದ ಅಪರೂಪದ ಪ್ರಸಂಗಗಳೆರಡು ನಮಗೆ ಪುರಾಣದಲ್ಲಿ ಕಾಣಸಿಗುತ್ತವೆ. ಶನಿಮಹಾರಾಜರನ್ನು ಪೇಚಿಗೆ ಸಿಲುಕಿಸಿದವರಲ್ಲಿ ಒಬ್ಬ ನಮ್ಮ ನಿಮ್ಮೆಲ್ಲರ ಪ್ರೀತಿಯ ಬೊಬ್ಬೆ ಗಣಪ ಅಲಿಯಾಸ್ ಮಹಾಗಣಪತಿ [ದೇವರನ್ನು ಗೇಲಿಮಾಡುವುದು ಕೂಡ ಒಂದು ಸೇವೆಯಂತೆ ನೆನಪಿರಲಿ, ಕೊನೆಪಕ್ಷ ಯಾರಿಗೆ ದೇವರ ಸ್ಮರಣೆ ಇಷ್ಟವಿಲ್ಲವೋ ಅಂಥವರು ದೇವರನ್ನು ಗೇಲಿಯಾಡಿಕೊಳ್ಳಿ-ಅದರಿಂದಲಾದರೂ ಒಳಿತಾದೀತು!],ಇನ್ನೊಬ್ಬ ನಮ್ಮ ಹನ್ಮಣ್ಣ ಅಲಿಯಾಸ್ ಆಂಜನೇಯ. ಇದನ್ನು ಒಂದೊಂದಾಗಿ ಹೇಳುತ್ತೇನೆ ಕೇಳಿ.

ಪ್ರಸಂಗ-೧ [ಶನಿಮಹಾರಾಜ
V/s ಮಹಾಗಣಪತಿ]

ಹೀಗೆ ತಿರುಗುತ್ತ ನಮ್ಮ ಶನಿಮಹಾರಾಜರು ಒಂದುದಿನ ಗಣಪತಿಯ ಮನೆಗೆ ಏಕಾಏಕಿ ರೈಡ್ ಮಾಡಿದ್ರು. ದೇವತೆಗಳಲ್ಲೇ ಬಲು ಕುಶಾಗ್ರಮತಿ ಎಂಬ ಹೆಗ್ಗಳಿಕೆ ಪಡೆದುಕೊಂಡ ನಮ್ಮ ಶ್ರೀಮನ್ ಮಹಾಗಣಪತಿಯವರು ಸ್ವಲ್ಪ ಹೊತ್ತು ಯೋಚಿಸಿ ತನಗೆ ಕಾರ್ಯಬಾಹುಳ್ಯದ ನಿಮಿತ್ತ ಇವತ್ತು ನಿನ್ನೊಂದಿಗೆ ಕಾಲಕಳೆಯಲು ಸಾಧ್ಯವಿಲ್ಲವೆಂದೂ, ಶನಿಮಹಾರಾಜರು ಈ ದಿನವನ್ನು ಬಿಟ್ಟು ನಾಳೆಯ ಮೇಲೆ ಯಾವಾಗಲಾದರೂ ಬರಬಹುದು ಎಂದು ಅಪಾಯಿಂಟ್ ಮೆಂಟ್ ಕೊಟ್ಟೂ ’ಇಂದಲ್ಲ ನಾಳೆ ಬಾ’ ಎಂಬ ಬೋರ್ಡನ್ನು ತನ್ನ ಮನೆ ಮುಂದೆ ತಗುಲಿಹಾಕಿಸಿದರು. ಅದಾದ ಪಶ್ಚಾತ್, ದಿನವೂ ಬಿಡದೇ ನಮ್ಮ ಶನಿಮಹಾರಾಜರು ಮಹಾಗಣಪತಿಯವರ ಮನೆಗೆ ಬರಹತ್ತಿದರು. ಯಾವಾಗ ಬಂದರೂ ನಮ್ಮ ಗಣಪಣ್ಣ ಹೇಳಿದ್ದು ಒಂದೇ ’ಇಂದಲ್ಲ ನಾಳೆ ಬಾ’ - ಈ ಬೋರ್ಡು ಶಾಶ್ವತವಾಗಿ ಬಿಟ್ಟಿತು! [ಅದಕ್ಕೇ ಇಂದಿಗೂ ನಮ್ಮ ಸರಕಾರೀ ನೌಕರರಲ್ಲಿ ಅನೇಕರು ಅದೇ ಬೋರ್ಡನ್ನು ಕಾಯಮ್ಮಾಗಿ ಗೌಪ್ಯವಾಗಿ ಇಟ್ಟುಕೊಂಡುಬಿಟ್ಟಿದ್ದಾರೆ.] ಹೀಗೇ ತಿರುಗೀ ತಿರುಗೀ ತಿರುಗೀ ಬೇಸತ್ತು ಹೋದ ನಮ್ಮ ಶನಿಮಹಾರಾಜರಿಗೆ ಅದ್ಯಾವುದೋಘಳಿಗೆಯಲ್ಲಿ ಒಳ್ಳೆಯ ಮೂಡ್ ಬಂತು. ಬಲಾಬಲದಲ್ಲಿ ವಿಚಾರಿಸಿದರೆ ಈ ಗಣಪತಿ ತಂಟೆಗೆ ಹೋದರೆ ತನ್ನ ಪೋಸ್ಟ್ ಕಳೆದುಕೊಳ್ಳುವ ಹೆದರಿಕೆ ಶುರುವಾಯ್ತು. ಆ ಮೂಡ್ ನಲ್ಲಿ ಅವರು ಮಹಾಗಣಪತಿಯವರಿಗೆ ’ಬುದ್ಧಿವಂತ’ ಎಂಬ ಪದಾಭಿದಾನವನ್ನಿತ್ತರು ! [ಕಾಣುವ 'ಕೈ'ಯವರು ತಮ್ಮ 'ಕೈ'ವಾಡ ವಿಲ್ಲ ಎಂದಮೇಲೆ ಮೊನ್ನೆ ಮೊನ್ನೆ ನಮ್ಮ ಯಡ್ಡ್ಯೂರಪ್ಪಾಜಿಯವರು ಕಾಣದ ಕೈಗೆ [ಗಣಿಧಣಿಗಳಿಗೆ! ] ಸಲಾಮುಹಾಕಲಿಲ್ವೇ ಹಾಗೆ] ಮತ್ತು ಅವರಲ್ಲಿಗೆ ಎಡತಾಕುವುದನ್ನೂ ನಿಲ್ಲಿಸಿಬಿಟ್ಟರು.


ಪ್ರಸಂಗ-೨ [ಶನಿಮಹಾರಾಜರು
V/s ಆಂಜನೇಯ]

ರಾಮಾಯಣದಲ್ಲಿ ನಮಗೆ ಅತ್ಯಂತ ನಿಷ್ಠೆಯ ಪಾತ್ರವೊಂದು ಕಾಣಸಿಗುತ್ತದೆ. ಅದುವೇ ಶ್ರೀ ಆಂಜನೇಯ. ರುದ್ರಾಂಶ ಸಂಭೂತನಾಗಿ, ವಾಯು ಮತ್ತು ಅಂಜನಾದೇವಿಯರ ಪುತ್ರನಾಗಿ ಜನಿಸಿ, ಶ್ರೀರಾಮನ ಸೇವೆಗೆ ತನ್ನನ್ನೇ ಅರ್ಪಿಸಿಕೊಂಡಂತ ಪಾತ್ರ ಇನ್ನೆಲ್ಲೂ ಇಂತಹ ಪಾತ್ರ ನೋಡಸಿಗುವುದಿಲ್ಲ. ತನ್ನ ನಿರಂತರ ಸೇವಾ ಕೈಂಕರ್ಯದಿಂದ ಚಿರಂಜೀವಿಯಾಗಿರುವಂತೆಯೂ ಕಲ್ಪಾಂತರದಲ್ಲಿ ಬ್ರಹ್ಮಪದವಿಯನ್ನು ಪಡೆಯೆಂದೂ ವರವನ್ನು ಪಡೆದ ಅತಿ ವಿಶಿಷ್ಟ ಜೀವ ಇದು-ಸಂಜೀವ. ಸಂಜೀವಿನಿಯನ್ನು ತಂದಿದ್ದರಿಂದ ಸಂಜೀವರಾಯನೆಂದೂ, ಸೀತಾಮಾತೆಯಿಂದ ನದಿಯಲ್ಲಿ ಕಳೆಯಲ್ಪಟ್ಟ ಮುತ್ತನ್ನು ಹುಡುಕಿ ತಂದು ಕೊಟ್ಟಿದ್ದರಿಂದ ಮುತ್ತೆತ್ತಿರಾಯ-ಅಥವಾ ಮುತ್ತೂರಾಯ ಎಂಬೆಲ್ಲ ಬಿರುದು-ಬಾವಲಿ ಗಳನ್ನು ಪಡೆದು ತನ್ನ ನಿರಂತರ ಜಪ-ಧ್ಯಾನವನ್ನು ನಡೆಸುತ್ತಿರುವವರು ಶ್ರೀ ಹನುಮಣ್ಣನವರು.

ತಿರುಗುತ್ತ ತಿರುಗುತ್ತ ನಮ್ಮ ಲೋಕಾಯುಕ್ತ ಶನಿಮಹಾರಾಜರ ಸವಾರಿ ಬಂತು -ಆನ್ಜನೆಯನ ಸನ್ನಿಧಿಗೆ.[ದೇವಸ್ಥಾನವಲ್ಲ!]ಬಂದಾಗ ನಮ್ಮ ಆಂಜನೇಯನವರು ಧ್ಯಾನನಿರತರಾಗಿದ್ದರು. ’ಉದ್ಯೊಗವಿಲ್ಲದ ಆಚಾರಿ[ಬಡಗಿ]ಮಗುವಿನ ಕುಂಡೆಯನ್ನು [ಪೃಷ್ಟವನ್ನು]ಕೆತ್ತಿದ್ದನಂತೆ’-ಎಂಬ ಗಾದೆ ಇದೆ. ಅದೇ ರೀತಿ ಕೆಲವೊಮ್ಮೆ ನಮ್ಮ ಶನಿಮಹಾರಾಜರು ಫ್ರೀ ಇರುತ್ತಾರೆ ಅನಿಸುತ್ತದೆ, ಹೀಗಾಗಿ ಕಣ್ಣಿಗೆ ಬಿದ್ದರೆ ವಕ್ಕರಿಸಿಬಿಡುತ್ತಾರೆ, ಅದಕ್ಕೇ ಕೆಲವರು ’ಶನಿ’ ಎಂಬ ಶಬ್ಧಪ್ರಯೋಗವನ್ನೂ ಮಾಡಲೂ ಹೆದರುತ್ತಾರೆ! ನಮ್ಮ ಶನಿಮಹಾರಾಜರು ಸುಮ್ಮನಿರಬೇಕೋ ಬೇಡವೋ ? ಹೀಗೇ ಇಲ್ಲದ ಬಾಲವನ್ನು ಅಲ್ಲಾಡಿಸಿಕೊಂಡು ಬಂದ ನಮ್ಮ ಶನಿಮಹಾರಾಜರು ಬಾಲ ಇರುವ ಕಪಿಯನ್ನು ಕೆಣಕಿಬಿಟ್ಟರು!

" ಮಾತಾ ರಾಮೋ ಮತ್ ಪಿತಾ ರಾಮಚಂದ್ರಃ
ಸ್ವಾಮೀ ರಾಮೋ ಮತ್ ಸಖಾ ರಾಮಚಂದ್ರಃ |
ಸರ್ವಸ್ವಮ್ ಮೇ ರಾಮಚಂದ್ರೋ ದಯಾಲುಃ
ನಾನ್ಯಮ್ ಜಾನೇ ನೈವ ಜಾನೇ ನ ಜಾನೇ || "

ಧ್ಯಾನದಿಂದ ಎಚ್ಚೆತ್ತ ಹನುಮನಿಗೆ ಕಂಡಿದ್ದು ಕಪ್ಪನೆಯ ವಿಕೃಷ್ಟ ಆಕೃತಿ. ಛೆ ! ಭುವಿಯೆಂಬ ಭುವಿಯಲ್ಲಿ ಎಲ್ಲೆಲ್ಲೂ ನೋಡಿರದ, ಕೇಳರಿಯದ ಎಂತಹ ಕಲಾಕೃತಿ ! ತೊಳೆದಿಟ್ಟ ಕೆಂಡದ ಬಣ್ಣ, ಕೆನ್ನಾಲಿಗೆ , ಹೆಗಲಮೇಲೊಂದು ಚಂದಗಾವಿಯ ಶಾಲು, ಕೊರಳಲ್ಲಿ ಚಂದ್ರಹಾರ, ಪಕ್ಕದಲ್ಲಿ ಕಾಗೆ ! [ವಾಹನ] ಅರೆಕ್ಷಣ ಹನುಮ ವಿಚಾರಿಸಿದ.

"ತ್ರಿಕರಣ ಪೂರ್ವಕವಾಗಿ [ಅಂದರೆ ಕಾಯಾ ವಾಚಾ ಮನಸಾ-ದೇಹದಿಂದಲೂ, ವಚನದಿಂದಲೂ, ಮನಸ್ಸಿನಿಂದಲೂ] ಅನನ್ಯ ಶರಣನಾಗಿ ಸ್ವಾಮಿ ಶ್ರೀರಾಮಚಂದ್ರನನ್ನೇ ಸರ್ವಸ್ವ ಎಂದು ತಿಳಿದು ಕರ್ತವ್ಯನಿರತನಾಗಿ-ಧ್ಯಾನಾಸಕ್ತನಾಗಿದ್ದ ನನ್ನನ್ನು ಯಾರಾತ ಎಬ್ಬಿಸಿದ್ದು ?" [ನಿಮ್ಮಲ್ಲೇ ಇರಲಿ --ನಿಜವಾಗಿ ಬೊಬ್ಬೆಹೊಡೆದಿದ್ದು ಹನುಮ, ಗಣಪನಲ್ಲ, ಫಲಾನುಭವಿಯಷ್ಟೇ ಗಣಪ, ನಮ್ಮ ಸರಕಾರೀ ಕೆಲಸದಲ್ಲಿ ಪುಸ್ತಕದಲ್ಲಿ ಫಲಾನುಭವಿ ಹೆಸರು ರೈತರದ್ದು ಫಲಾನುಭವಿ ಮಧ್ಯೆಕುಳಿತ ಕುತ್ಸಿತ ವ್ಯಕ್ತಿ [ಆದರೆ ಇದು ಹಣದ ಫಲಾನುಭವಿಯ ಕೇಸಲ್ಲವಾದ್ದರಿಂದ ಹನುಮ ಕುತ್ಸಿತ ವ್ಯಕ್ತಿಯೆಂದು ತಿಳಿಯಬೇಡಿ .] ಆಗಿರುವುದಿಲ್ಲವೋ ಹಾಗೇ!

ಹನುಮ ಬೊಬ್ಬಿರಿದ, ಕೂಗು ಹಾಕಿದ. ಕೋಪಗೊಂಡ. ಎದುರಿಗೆ ಶ್ರೀಮಾನ್ ಶನಿಮಹಾರಾಜರು ನಿಂತಿದ್ದಾರೆ. ಅವರನ್ನು ನಖ-ಶಿಖಾಂತ ಕೆಂಗಣ್ಣಿನಿಂದ ನುಂಗುವಂತೆ ನೋಡುತ್ತಿದ್ದಾನೆ ಹನುಮ. ಶನಿಮಹಾರಾಜರಿಗೆ ನಡುಕ ! ಹನುಮ ರುದ್ರಾಂಶ ಸಂಭೂತ ಅಂತ ಮೊದಲೇ ಹೇಳಿದ್ದೇನೆ, ಯಾರಿಗೂ ಹೆದರುವ ಗಿರಾಕಿ ಅಲ್ಲ ! ಕೇಳಿಯೇ ಬಿಟ್ಟ ಹನುಮ--

" ಎನಯ್ಯಾ, ನನ್ನ ತಪವನ್ನು ಕೆಡಿಸಿ ಹೀಗೆ ನಿಂತಿರುವೆಯಲ್ಲ, ನಿನ್ನನ್ನು ಅರೆಕ್ಷಣವೂ ಬಿಡದೇ ನಜ್ಜುಗುಜ್ಜಾಗಿಸುತ್ತೇನೆ" ಎಂದು ತಿರುಗಿ ಉತ್ತರಕ್ಕೂ ಕಾಯದೆ ಶನಿಮಹಾರಾಜರನ್ನು ತನ್ನ ಬಾಲದಿಂದ ಅನೇಕಸುತ್ತು ಸುತ್ತಿಕಟ್ಟಿಕೊಂಡು ನದಿಗೆ ಧುಮುಕಿ ಬಿಟ್ಟ!

" ರಾಮ್ ರಾಮ್ ರಾಮ್, ಜಯ ರಾಮ್ ರಾಮ್ ರಾಮ್" ಎಂದಷ್ಟೇ ಕೂಗುತ್ತ ನಾಲ್ಕಾರಾವರ್ತಿ ಮುಳುಗಿಸಿ ತೆಗೆದು ಇನ್ನೇನು ಬಂಡೆಗೆ ಅಪ್ಪಳಿಸಬೇಕು ಅಷ್ಟರಲ್ಲಿ ನಮ್ಮ ಶನಿಮಹಾರಾಜರು ಆರ್ತಸ್ವರದಿಂದ ಪ್ರಾರ್ಥಿಸಿದರು

ಯತ್ರ ಯತ್ರ ರಘುನಾಥ ಕೀರ್ತನಮ್
ತತ್ರ ತತ್ರ ಕೃತ ಮಸ್ತಕಾಂಜಲಿಮ್|
ಭಾಷ್ಪವಾರಿ ಪರಿಪೂರ್ಣಲೋಚನಂ
ಮಾರುತಿಂ ನಮತ ರಾಕ್ಷಸಾಂತಕಮ್||

ಪರಿ ಪರಿಯಾಗಿ
ಪ್ರಾರ್ಥಿಸಿದ ಮೇರೆಗೆ ಶನಿಮಹಾರಾಜರ ದಯನೀಯ ಸ್ಥಿತಿಯನ್ನು ಕಂಡು ಮಾರುತಿ ಮರುಗಿದ,ಕರಗಿದ,ಆವೇಶ ಇಳಿಯಿತು. ತನ್ನನ್ನು ಮರಳಿ ತಾನು ನಿಂತಿರುವಲ್ಲಿಗೆ ಬಿಟ್ಟ ಹನುಮನನ್ನು ನೋಡುತ್ತ ಶನಿಮಹಾರಾಜರು ಹೇಳಿದರು
" ತಪ್ಪಾಯ್ತು ಹನುಮಾ, ನಿನ್ನನ್ನು ತಪ್ಪಾಗಿ ಭಾವಿಸಿಬಿಟ್ಟಿದ್ದೆ [ನಿರಪರಾಧಿಗಳಿಗೆ ಶಿಕ್ಷೆಯಾಗಬಾರದು!], ನಿನ್ನ ಸ್ವಾಮಿನಿಷ್ಠೆಗೆ, ನಿನ್ನ ಕರ್ತವ್ಯಪರತೆಗೆ ಮನಸೋತಿದ್ದೇನಪ್ಪಾ, ಇನ್ನು ಮುಂದೆ ಯಾರು ನನ್ನಿಂದ ಪೀಡನೆಗೆ ಒಳಗಾಗುತ್ತಾರೋ ಅಂಥವರು ನಿನ್ನನ್ನು ಪೂಜಿಸಿದರೆ, ನಿನಗೆ ಎಳ್ಳೆಣ್ಣೆಯಿಂದ [ತಿಲತೈಲ]ಅಭಿಷೇಕಮಾಡಿಸಿದರೆ/ಮಾಡಿದರೆ, ನಿನಗೆ ಸಲ್ಲುವ ಪೂಜೆಯಿಂದ ನಾನು ಸಂತುಷ್ಟಿಗೊಳ್ಳುತ್ತೇನೆ" ಎಂದು ವಚನ ಕೊಟ್ಟರು.

[ಏನುವಚನವೋ ಏನೋ, ಹೀಗೆ ಅನವಶ್ಯಕವಾಗಿ ಇನ್ನೊಬ್ಬರಿಗೆ ತೊಂದರೆ ಕೊಡುವವರು ಜೀವನದಲ್ಲಿ ಹಲವರಿರುತ್ತಾರೆ. ಅಂಥವರು ಹಿಂದೆಬಿದ್ದಾಗ ಜನ ಇಂದಿಗೂ ಶನಿಯ ಹಾಗೆ ಕಾಡುತ್ತಿದ್ದಾನಪ್ಪ ಅಂತಾರೆ!]
ಹನುಮ ಸಂತಸಗೊಂಡ, ಶನಿಮಹಾರಾಜರನ್ನು ಅಂತೂ ಹೋಗಗೊಟ್ಟ!!


ಏನಿದ್ದರೂ ನಮ್ಮ-ನಿಮ್ಮಂತವರಿಗೆ ಹೇಳಿಸಿದ್ದಲ್ಲ ಬಿಡಿ, ತೀರ ದೊಡ್ಡವರ ವಿಚಾರ-ದೇವರುಗಳ ವಿಚಾರ, ಜನಸಾಮಾನ್ಯವಿಧಾನಸೌಧಕ್ಕೆ ನಡೆದು ಸುಧಾರಿಸಲು ಸಾಧ್ಯವೇ ? ಹಾಗಾಗಿ ಮರೆತು ಬಿಡೋಣ! ನಮ್ಮನ್ನು ಶನಿಮಹರಾಜರು ಪೀಡಿಸಿದರೆ ತಪ್ಪಿಸಿಕೊಳ್ಳಲು ಬೇರೇ ದಾರಿ ಇಲ್ಲ, ಬರೇ ಪ್ರಾರ್ಥನೆ ಅಷ್ಟೇ . ಪ್ರಾರ್ಥನೆಯಿಂದ ಪರಿವರ್ತನೆ ಸಾಧ್ಯ ಎಂಬುದು ಅನುಭವಿಸಿನೋಡಿದ ಮಹಾತ್ಮರು ಹೇಳಿದ್ದಾರೆ , ಇದಕ್ಕೆ ವಿವರಣೆ ಬೇಕಿದ್ದರೆ ಅನುಭವದ ಅನುಭಾವ ಆಗಿಬೇಕಿದ್ದರೆ ಸ್ವಾಮೀ ವಿವೇಕಾನಂದರು-ಸಿಸ್ಟರ್ ನಿವೇದಿತಾ ಇವರ ಸಂವಾದವನ್ನು ನೋಡಿದರೆ ಸಿಗುತ್ತದೆ! ಹಾಗಾದ್ರೆ ಮುಚ್ಚುಮರೆಯಿಲ್ಲದೆ ಶನಿಮಹಾರಾಜರನ್ನು ಒಮ್ಮೆಪ್ರಾರ್ಥಿಸೋಣ ಬನ್ನಿ --

ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ |
ಛಾಯಾ ಮಾರ್ತಾಂಡ ಸಂಭೂತಂ ತಮ್ ನಮಾಮಿ ಶನೈಶ್ಚರಂ ||

Saturday, January 30, 2010

ಈ ಟಚ್ಚಲಿ ಏನೋ ಇದೆ

ಈ ಟಚ್ಚಲಿ ಏನೋ ಇದೆ

ಜೀವನದಲ್ಲಿ ನಾವು ಅನೇಕ ವ್ಯಕ್ತಿಗಳನ್ನು ನೋಡುತ್ತೇವೆ. ||ಲೋಕೋ ಭಿನ್ನ ರುಚಿಃ ||ಎಂಬಂತೆ ಅವರವರ ಕಾರ್ಯಕ್ಷೇತ್ರ ಮತ್ತುವ್ಯಾಪ್ತಿ ವಿಭಿನ್ನವಾಗಿರುತ್ತದೆ. ಎಲ್ಲರೂ ಎಲ್ಲಾ ಕೆಲಸಗಳಲ್ಲೂ ಅಥವಾ ಹಿಡಿದ ಒಂದೇ ಕೆಲಸದಲ್ಲೂ ಪರಿಪಕ್ವವಾಗಿರುವುದಿಲ್ಲ. ಕೆಲವರಂತೂ ಮಾಡುವ ಕೆಲಸವನ್ನು ಯಾಕಾದರೂ ಮಾಡಬೇಕೋ ಎಂದುಕೊಂಡು ಮಾಡುತ್ತಾರೆ. ಆದರೆ ಪರಿಪಕ್ವ ಸ್ಥಾನವನ್ನುಪಡೆದವರು ಅದನ್ನು ವೃತ್ತಿ ಅಥವಾ ಕೆಲಸ ಎನ್ನದೆ ಪೂಜೆ ಎಂದು ಅದನ್ನೇ ಎಂಜಾಯ್ ಮಾಡುತ್ತಾರೆ. ಹೀಗೇ ಬಾಯಲ್ಲಿ ಹೆಳಿದರೂ ಬಹುತೇಕರಿಗೆ ಇದು ಸಾಧ್ಯವಿಲ್ಲ-ಕಾರಣ ಗೊತ್ತಿಲ್ಲ.

ಕೆಲವರ ಸಾಧನೆಯನ್ನು, ಆ ಒಲವನ್ನು, ಆ ತಾದಾತ್ಮ್ಯತೆಯನ್ನು ಒಮ್ಮೆ ಮೆಲುಕು ಹಾಕೋಣ.


ಮೊದಲನೆಯದಾಗಿ ಅಚ್ಚಕನ್ನಡಿಗ ಶ್ರೀಯುತ ಆರ್.ಗಣೆಶ್. ಒಬ್ಬ ಮೆಕಾನಿಕಲ್ ಎಂಜಿನೀಯರ್, ಅದರೆ ಅವರು ಬಹುಭಾಷಾ ಪ್ರವೀಣರು. ಸುಮಾರು ೮ಕ್ಕಿಂತಲೂ ಜಾಸ್ತಿ ಭಾಷೆಯಲ್ಲಿ ವ್ಯಾಕರಣ-ಸಾಹಿತ್ಯ ಸಹಿತ ಪ್ರೌಢಿಮೆಯಿದೆ. ಶತಾವಧಾನಿ ಎಂದೇ ಖ್ಯಾತರು. ಅವರಿಗೆ ಯವುದೇ ವಿಷಯವಸ್ತು ಕೊಡಿ, ಅವರು ವ್ಯಾಖ್ಯಾನಿಸಿದರೆ ಅದರ ಮುಂದೆ ಬೇರೆ ಯಾರ ಅನಾಲಿಸಿಸ್ ಕೂಡ ಶೂನ್ಯವಾಗಿರುತ್ತದೆ. ಏಕಕಾಲಕ್ಕೆ ಎರಡು ಮಂದಿಗೆ ಉತ್ತರಿಸುವಾಗ ನಾವು ಬೆ ಬೆ ಬೆ ಅಂದುಬಿಡುತ್ತೇವೆ. ಆದರೆ ಅವರು ಅನುಕ್ರಮವಾಗಿ ನೂರುಜನರಿಗೆ, ಅಷ್ಟೇ ಏಕೆ ಸಾವಿರ ಜನರಿಗೆ ಅವರವರ ಪ್ರಶ್ನೆಗಳಿಗೆ, ಕೊಟ್ಟ ಅವಧಿಯಲ್ಲಿ, ಅಪ್ರಸ್ತುತ-ಪ್ರಸ್ತುತಿ ಎಂಬ ’ಅಧಿಕ ಪ್ರಸಂಗಿ’ಯನ್ನು ನಿಭಾಯಿಸುತ್ತ ಉತ್ತರಿಸುವ ಪರಿ ನೀವು ನೋಡಬೇಕು! ಏನಿದೆ ಅವರ ಮೆದುಳಿನಲ್ಲಿ ?

ರಡನೆಯವರು ಅಪ್ರತಿಮ ಕುಂಚಕಲಾವಿದ ಶ್ರೀಯುತ ಬಿ.ಕೆ.ಶ್ರೀನಿವಾಸ ವರ್ಮಾ. ಹಲವಾರು ವೇದಿಕೆಗಳಲ್ಲಿ ತಾವು ಅವರ ಚಿತ್ರ ಬಿಡುಸುವಿಕೆಯನ್ನು ನೋಡಿರುತ್ತೀರಿ. ಮಸಿಯಲ್ಲಿ ಅದ್ದಿದ ದಾರದಿಂದ, ಕಡ್ಡಿಯಿಂದ ಅಥವಾ ಏನೂ ಬೇಡ ಬರ‍ೇ ಮಸಿ ಮತ್ತು ಕೈ ಬಳಸಿ ಬಹು ಸುಂದರ ಕಲಾಕೃತಿಗಳನ್ನು ೩-೪ ನಿಮಿಷಗಳಲ್ಲಿ ಬಿಡಿಸುತ್ತಾರೆ.ಇನ್ನು ಅವರ ಬಣ್ಣದ ಕಲಾಕೃತಿಗಳು ಅತೀ ಸುಂದರ. ಲಕ್ಷಗಟ್ಟಲೆ ಕಲಾವಿದರಿದ್ದರೂ ಅವರು ಭಿನ್ನವಾಗಿ ತೋರುತ್ತಾರೆ.


ಹಾ
ಡುಗಾರ್ತಿಯರು ಅನೇಕ, ಅತ್ಯಂತ ಹೈ ಪಿಚ್ ನಲ್ಲಿ ಅತೀ ಸಂತೋಷದಿಂದ ಹಾಡುವ ಶ್ರೀಮತಿ ಎಮ್.ಡಿ.ಪಲ್ಲವಿ ಇದ್ದಾರೆ. ಅವರನ್ನು ನೋಡುತ್ತಿದ್ದರೆ ಪ್ರಾಯಶಃ ಅವರು ಸಂಗೀತ ಸರಸ್ವತಿಯ ಮಗಳೇ ಎಂದರೆ ತಪ್ಪಾಗಲಾರದಲ್ಲ?


ಪಿಟೀಲು ನುಡಿಸುವವರು ಅನೇಕಮಂದಿ. ಆದರೆ ವಾಯೊಲಿನ್ [ಪಿಟೀಲು]ವಾದ್ಯಕ್ಕೆ ಚೌಡಯ್ಯನವರನ್ನು ಬಿಟ್ಟಮೇಲೆ ಗೌರವ ತಂದುಕೊಟ್ಟ ಮಹೋನ್ನತ ವ್ಯಕ್ತಿ ಕಲೈ ಮಾಮಣಿ ವಿದ್ವಾನ್ ದಿ||ಕುನ್ನುಕುಡಿ ವೈದ್ಯನಾಥನ್.




ಸಂಸ್ಕೃತ ಶ್ಲೋಕಗಳನ್ನು, ಸ್ತೋತ್ರಗಳನ್ನು ಎಲ್ಲರಿಗಿಂತ ಚೆನ್ನಗಿ ನಮಗೆ ಶ್ರುತಪಡಿಸುವುದು ದಿ||ಶ್ರೀಮತಿ ಎಮ್.ಎಸ್.ಸುಬ್ಬಲಕ್ಷ್ಮಿ. ಜಗದ್ಗುರು ಆದಿಶಂಕರರು ಮಹಾ ಮಹೋಪಾಧ್ಯಾಯರಾಗಿಯೂ, ಮಹಾಕವಿಯಾಗಿಯೂ ಸಂಸ್ಕೃತದಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕ್ಲಿಷ್ಟ ಶಬ್ಧಗಳಿರುವ ಅವರ ಕೃತಿಗಳನ್ನು ಬಹು ಲೀಲಾಜಾಲವಾಗಿ, ಸಲೀಸಾಗಿ,ಸುಶ್ರಾವ್ಯವಾಗಿ ನಮ್ಮ ಕಿವಿಗೆ ಕ್ಯಾಸೆಟ್ ಗಳಮೂಲಕ ಇಂದಿಗೂ ತಲ್ಪಿಸುತ್ತಿರುವ ಸುಬ್ಬಲಕ್ಷ್ಮಿಗೆ ಶರಣು ಎನ್ನೋಣವೇ ?


ಕದ್ರಿ ಗೊಪಾಲನಾಥ್ ಅಂದರೆ ಸಾಕು ಅನೇಕ ಮಕ್ಕಳೂ ಕೂಡ ಅವರ ಬಗೆಗೆ ಹೇಳಲು ಪ್ರಾರಂಭಿಸುತ್ತಾರೆ. ವಿದೇಶೀ ವಾದ್ಯವಾದ ಸ್ಯಾಕ್ಸೋಫೋನ್ ಅನ್ನು ನಮ್ಮ ಕವಿಗಳ ಕೃತಿಗಳಿಗೆ ಸಮರ್ಪಕವಾಗಿ ಅಳವಡಿಸಿದ ಗೌರವ ಇವರಿಗೆ ಸಲ್ಲಲೇಬೇಕು ತಾನೆ ? ಅಂತೆಯೇ ಈ ವಾದ್ಯವನ್ನು ಉಸಿರು ಬಿಗಿ ಹಿಡಿದು ತಾರಕ ಸ್ವರದಲ್ಲಿ ನುಡಿಸುವದು ಸುಲಭದ ಮಾತೇನಲ್ಲವಲ್ಲ?




ಅದೇರೀತಿಯಲ್ಲಿ ಸಮಯೋಚಿತ ಹಾಗೂ ತುಲನಾತ್ಮಕ, ಅಚ್ಚುಕಟ್ಟಾದ ಲೇಖನಗಳನ್ನೊಳಗೊಂಡ, ಸುದ್ದಿ-ಸಾರವನ್ನು,ಕಾವ್ಯ ಪದ ಪಾಯಸವನ್ನು ಒಳಗೊಂಡ ದಿನಪತ್ರಿಕೆಯನ್ನು ದಿನಾಲೂ ನಮ್ಮ ಕೈಗಿಡುವುದು ಸುಲಭದ ಮಾತೇ? ಅತೀ ವಿಶಿಷ್ಟವಾಗಿ, ನಿಖರವಾಗಿ, ನಿರ್ಭಿಡೆಯ ನಡೆಯಿಂದ, ಸಲ್ಲಕ್ಷಣ ಭರಿತವಾಗಿ, ಕೊಟ್ಟ ಕಾಸಿಗೆ ಎಲ್ಲೂ ಮೋಸವಾಗದಂತೆ, ಅತೀ ಹೆಚ್ಚಿನ ಹಾಗೂ ತೀರಾ ತಡರಾತ್ರಿಯಲ್ಲಿ ಸಿಗುವ ವರದಿಗಳನ್ನು ಕ್ರೋಢೀಕರಿಸಿ ನಮ್ಮ ಕೈಗಿಡುವ ವಿಜಯಕರ್ನಾಟಕ ದಿನಪತ್ರಿಕೆಯ ಸಂಪಾದಕ ಶ್ರೀಯುತ ವಿಶ್ವೇಶ್ವರ ಭಟ್ ಒಬ್ಬ ’ಔಟ್ ಸ್ಟ್ಯಾಂಡಿಂಗ್ ಪರ್ಸ್ನಾಲಿಟಿ’ ಅಥವಾ ’ಇಂಡಸ್ಟ್ರಿಯಸ್ ’ ಎಂತ ಅನ್ನೋಣವೇ? [ಇದೀಗ ಅವರಿಗೆ ಕರ್ನಾಟಕ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಘೋಷಿಸಲಾಗಿದೆ, ಇದಕ್ಕಾಗಿ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ]


ಒಬ್ಬ ಸಾಮಾನ್ಯ, ಅತೀ ಬಡ ಕುಟುಂಬದಿಂದ ಬಂದ ವ್ಯಕ್ತಿ , ಕೇವಲ ತನ್ನ ಜ್ಞಾನ ಮತ್ತು ಕ್ರಿಯಾ ಶಕ್ತಿಯಿಂದ ವಿಜ್ನಾನಿಯಾಗಿ, ರಾಷ್ಟ್ರಪತಿಯಾಗಿ ಬೆಳಗಿದ ಹೆಮ್ಮೆಯ .ಪಿ.ಜೆ. ಅಬ್ದುಲ್ ಕಲಾಮ್ ಅವರಲ್ಲಿ ಯಾವಶಕ್ತಿಕೆಲಸಮಾಡುತ್ತಿದೆ ? ಅವರ ಚಿಂತನಶೀಲ ಮೆದುಳಿಗೆ ಎಲ್ಲಿಂದ ಪ್ರೋತ್ಸಾಹ ಬರುತ್ತದೆ?



ವಿದೇಶದಲ್ಲಿದ್ದೂ ನಮ್ಮ ಭಾಷೆಯಲ್ಲಿ ತನ್ನದೇ ಛಾಪು ಮೂಡಿಸಿದ ಅಮೆರಿಕನ್ನಡಿಗ ಶ್ರೀಯುತ ಶ್ರೀವತ್ಸ ಜೋಶಿಯವರ ಬಗ್ಗೆ ಹಾಗೂ ಅವರ ಕಣ್ಣಿಗೆ ಕಟ್ಟುವಂತೆ ವಿವರಿಸುವ ಆ ವಿವರಣಾ ಚಾತುರ್ಯ, ಭಾಷೆಯ ಛಂದಸ್ಸು, ವ್ಯಾಕರಣ ಆದಿಯಾಗಿ ಅತ್ಯಂತ ಕಾಳಜಿಯಿಂದ, ಸೃಜನಾತ್ಮಕತೆಯಿಂದ, ವಾರ ವಾರಕ್ಕೂ ನವನಾವೀನ್ಯತೆಯಿಂದ ಕೂಡಿದ ಅವರ ಲೇಖನಗಳಲ್ಲಿ ತೋರ್ಪಡುವ ನಿಷ್ಕಲ್ಮಶ ಕನ್ನಡ ಪ್ರೀತಿಯನ್ನ ಏನನ್ನೋಣ? ಒಬ್ಬ ಟೆಕ್ನಾಕ್ರಾಟ್ ಭಾಷಾರಂಗದಲ್ಲಿ ಅಷ್ಟು ರುಚಿಕರವಾಗಿ ಇಷ್ಟೆಲ್ಲ ಬರೆಯಲು ಸಾಧ್ಯವೇ ? ಅವರ ’ಪರಾಗ ಸ್ಪರ್ಶ’ಹೆಸರಿಗೆ ಅನ್ವರ್ಥಕವಾಗಿದೆಯಲ್ಲವೇ ?


ಸದಾನಂದಮಯ್ಯ ಅವರ ಬಗ್ಗೆ ಇತ್ತೀಚೆಗೆ ಕೇಳಿದ್ದೀರಿ, ಆದ್ರೆ ಎಮ್.ಟಿ.ಆರ್. ಬಗ್ಗೆ ೫೦ ವರ್ಷಗಳಿಂದ ಕೇಳುತ್ತಿದ್ದೀರಿ. ಶುಚಿ ಹಾಗೂ ರುಚಿ ಎಂಬ ಶಬ್ಧಕ್ಕೆ ಅರ್ಥವನ್ನು ಸೃಸ್ಟಿಸಿಕೊಟ್ಟವರು, ಹೊಸ ಕಾಯ್ದೆ ಬರೆದವರು ಇವರಲ್ಲವೇ? ಒಂದು ಹೋಟೆಲ್ ಉದ್ಯಮ ದಿಢೀರ್ ತಯಾರಿಸುವ ತಿಂಡಿಯ ಪರಿಕಲ್ಪನೆಗಿಳಿದು ಅದಕ್ಕೆ ವಿಶ್ವವ್ಯಾಪಕತ್ವವನ್ನು ತಂದುಕೊಟ್ಟು ಜನಮಾನಸದಲ್ಲಿ ಸ್ಥಾನ ಪಡೆದ ಮಯ್ಯ ಅವರು ಕೂಡ ವಿದ್ಯೆಯಿಂದ ಒಬ್ಬ ಮೆಕಾನಿಕಲ್ ಎಂಜಿನೀಯರ್ ಎಂದರೆ ಆಶ್ಚರ್ಯವಾಗುವುದೇ?


ಅಕ್ಷರವನ್ನೇ ಕಲಿಯದ ಒಬ್ಬ ವ್ಯಕ್ತಿ, ನವರಸ ಭರಿತವಾಗಿ ಸಂಪೂರ್ಣ ಶುದ್ಧಕಲೆಯಾದ ಯಕ್ಷಗಾನಕ್ಕೆ ತನ್ನ ಅದ್ಬುತ ಕುಣಿತ,ಹಾವ-ಭಾವ, ಆಂಗಿಕಾಭಿನಯ, ವಿಶಿಷ್ಟ ’ಎಕ್ಸ್ ಪ್ರೆಶನ್’ ನಿಂದ ಜನಶಕ್ತಿ ಬೆರಳಿಟ್ಟು ಗೌರವಿಸುವ ರಾಜ್ಯ-ರಾಷ್ಟ್ರ ಪ್ರಶಸ್ತಿಗಳಿಸಿದ ಶ್ರೀಯುತ ಚಿಟ್ಟಾಣಿ ರಾಮಚಂದ್ರ ಹೆಗಡೆಯವರನ್ನು ತಿಳಿದಿರುವಿರಲ್ಲ.ಅಧ್ಯಯನದ ಅಭಾವದಿಂದ ಅಸ್ಖಲಿತ ಮಾತುಗಳನ್ನಾಡಲು ಬಾರದಿದ್ದರೂ ಕೇವಲ ತನ್ನ ಹಿತ-ಮಿತ ಸಂಭಾಷಣೆಯಿಂದ, ನವಿಲಿಗೆ ಸರಿಗಟ್ಟುವ ಮನಮೋಹಕ ನೃತ್ಯದಿಂದ ಖ್ಯಾತನಾಮರಾಗಿರುವರಲ್ಲ! ಎಪ್ಪತ್ತೈದರ ಇಳಿವಯಸ್ಸಿನಲ್ಲೂ[ ಒಬ್ಬ ಮುದುಕನಾಗಿದ್ದೂ] ಕುಣಿದು ಜನರನ್ನು ರಂಜಿಸುವ ತನ್ಮೂಲಕ ತಾನೂ ಅದನ್ನೇ ಎಂಜಾಯ್ ಮಾಡುವ ಯಾವ ಶಕ್ತಿ ಅವರಲ್ಲಿ ಅಡಗಿದೆಯಪ್ಪಾ? ಇದೇರೀತಿಯಲ್ಲಿ ಆದರೆ ತನ್ನ ಭಾಷಾ ಲಾಲಿತ್ಯದಿಂದ ಹಾಗೂ ಪಾತ್ರದಲ್ಲಿನ ತನ್ಮಯತೆಯಿಂದ ಜನಮಾನಸದಲ್ಲಿ ನೆಲೆನಿಂತ ದಿ||ಶ್ರೀಯುತ ಶಂಭು ಹೆಗಡೆ, ಹಾಗೂ ದಿ||ಶ್ರೀಯುತ ಮಹಾಬಲ ಹೆಗಡೆ ಇವರೆಲ್ಲರಲ್ಲಿ ಅಂತಹ ಯಾವಶಕ್ತಿ ಮನೆಮಾಡಿತ್ತು?


ತನ್ನ ಸುಶ್ರಾವ್ಯ ಗಾಯನದಿಂದ ಯಕ್ಷಗಾನದ ನವರಸಗಳನ್ನು ಆಸ್ವಾದಿಸಲು ಹಿಮ್ಮೇಳದಲ್ಲಿದ್ದು ಹೀರ‍ೋ ಆದ ಭಾಗವತ ಶ್ರೀಯುತ ಸುಬ್ರಹ್ಮಣ್ಯ ಧಾರೇಶ್ವರರನ್ನು ಪ್ರತ್ಯೇಕ ವಿವರಿಸಬೇಕೆ?



ಹೆಚ್ಚೇಕೆ ನಮ್ಮ ನೆಚ್ಚಿನ ಸರ್ ಎಂ.ವಿಶ್ವೇಶ್ವರಯ್ಯ ನವರಿದ್ದರಲ್ಲ, ತನ್ನದೆಲ್ಲವನ್ನೂ ರಾಜ್ಯಕ್ಕೆ-ದೇಶಕ್ಕೆ ಅರ್ಪಿಸಿದ ಈ ಕರ್ಮಯೋಗಿ ಎಲ್ಲಿ ನೀರಿಲ್ಲವೋ ಅಲ್ಲಿ ನೀರನ್ನು ಒದಗಿಸುವ, ಎಲ್ಲಿ ಬೆಳಕಿಲ್ಲವೋ ಅಲ್ಲಿ ಬೆಳಕನ್ನು 'ಉತ್ಪಾದಿಸುವ', ಎಲ್ಲಿ ನಿರುದ್ಯೋಗವೋ ಅಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಮಹಾನ್ ಮೇಧಾವಿಯಾಗಿ ವಿಶ್ವವಂದ್ಯರಾಗಿ, ಸತ್ತಮೇಲೂ ತಮ್ಮ ಮೆದುಳಿನ ಬಗೆಗೆ ಬೇಡಿಕೆ ಪಡೆದ ಇಂತಹ ವ್ಯಕ್ತಿಯಲ್ಲಿ ಪ್ರಚುರಗೊಂಡಿದ್ದ ಯಾವ ಇಚ್ಛೆ ಅವರಿಂದ ಅನೇಕ, ಆ ಕಾಲಕ್ಕೆ ಅಸಾಧ್ಯವೆಂದು ಪರಿಗಣಿಸಲ್ಪಟ್ಟ ಕೆಲಸವನ್ನು ಮಾಡಿಸಿತು ?


ಸಂಗೀತದ ಮೇರು ಎನಿಸಿಕೊಂಡ ಶ್ರೀಯುತ ಭೀಮಸೇನ ಜೋಷಿಯವರ ಹಾಡುಗಳನ್ನು ಕೇಳಿಯೇ ಇರುತ್ತೀರಿ. ಆ ಗಂಧರ್ವ ಗಾನ ಹೊರ ಹೊಮ್ಮಲು ಅಂಥಾ ಕಂಠ ಅವರಲ್ಲಿ ಆಶ್ರಯಿಸಲು, ಅವರು ಅಸ್ಟು ಆಸ್ತೆವಹಿಸಿ ಹಾಡಲು ಏನಿರಬಹುದು ಕಾರಣ ?



ಶ್ರೀಯುತ ಎನ್.ಆರ್.ನಾರಾಯಣಮೂರ್ತಿಯವರು ಇನ್ಫೋಸಿಸ್ ಎಂಬ 'ಕೂಸನ್ನು' ೧೦,೦೦೦ ರೂಪಾಯಿಗಳಿಂದ ಆರಂಭಿಸಿ ಇಂದಿನ ೧೦,೦೦೦ ಕೋಟಿ ರೂಪಾಯಿಗಳವರೆಗೆ ಬೆಳೆಸಿದ ಆ ದೂರದರ್ಶಿತ್ವ ಎಲ್ಲಿಂದ ಬಂದಿರಬಹುದು? ಅವರಲ್ಲಿಯ ಅತುತ್ತಮ ಕೆಲಸಗಾರನಿಗೆ ತರಬೇತಿ ನೀಡಿದಾತ ಯಾರು? ದಣಿವಿಲ್ಲದೆ ಬೇಸರವಿಲ್ಲದೆ ಅವರು ಪ್ರಾರಂಭದ ತಮ್ಮ ದಿನಗಳನ್ನು ಹೇಗೆ ಕಷ್ಟಸಹಿಸಿ ಕಳೆದರು?

ಇದನ್ನೆಲ್ಲ ವಿವರಿಸಲು ಯಾವ ತರ್ಕಕ್ಕೆ ಸಾಧ್ಯ? ಕನ್ನಡದ ಅತ್ಯಂತ ಶ್ರೇಷ್ಟ ಕವಿಗಳಲ್ಲಿ ಒಬ್ಬರಾದ ಶ್ರೀಯುತ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಅನೇಕ ’ಕವಿತೆ’ ಎಂಬ ರತ್ನಗರ್ಭಗಳನ್ನೇ ಬರೆದಿದ್ದಾರೆ. ಇಂತಹ ಕಾವ್ಯಕನ್ನಿಕೆಗಳು ಕವಿಯಿಂದ ಹೇಗೆ ಸೃಜಿಸಲ್ಪಟ್ಟವು? ಯಾವ ಕವಿತೆಯ ಚರಣದಿಂದ ಮೊನ್ನೆ ತಮಗೆ ಮಹಾತ್ಮರ ಕಥನವನ್ನು ವಿವರಿಸಿದ್ದೆನೋ ಅದೇ ಕವಿತೆಯನ್ನು ಕವಿ ಇದೇ ಅರ್ಥದಲ್ಲಿ ಬರೆದರೇ ?? ಬಹುಶಃ ನಮ್ಮೆಲ್ಲ ಇಷ್ಟಾನಿಷ್ಟಗಳು ನಮ್ಮದೇ ಕೈಯ್ಯಲ್ಲಿದ್ದರೂ ಅದರ ಸೂತ್ರ ಬೇರೆ ಕಡೆಗೆ ಇದೆ ಎಂಬ ಈ ಪುನರ್ಜನ್ಮದ ಸೆಳಕು ಈ ಕವಿತೆಯಲ್ಲಿದೆಯೆ ? ಆಗಬಾರದೇಕೆ? ಹೇಗೆ ಮೊಬೈಲ್ ನಲ್ಲಿ ಸಿಮ್ಮನ್ನು ಇಟ್ಟು ಆ ಸಿಮ್ಮಿನ್ನು ಹೊರಗಿನಿಂದಲೇ ನಿಯಂತ್ರಿಸುತ್ತಾರೋ ಹಾಗೇ ನಮ್ಮ ದೇಹವೆಂಬ ಮೊಬೈಲ್ ನಲ್ಲಿ ಆತ್ಮವೆಂಬ ಸಿಮ್ ಇಟ್ಟು ಕಾಣದ ಟಾವರ್ ಮತ್ತು ಬೋರ್ಡ್ ಗಳಿಂದ ಸಿಗ್ನಾಲ್ ಕಳಿಸಿ ಎಲ್ಲವನ್ನೂ ಯಾರೋಪ್ರೋಗ್ರಾಮಿಂಗ್ ಮಾಡಿರಬೇಕಲ್ಲವೇ? ಈ ಜನ್ಮಾಂತರದ ಟಚ್ಚಲ್ಲಿ ನಮ್ಮ 'ಪಡೆದ ಪುಣ್ಯದಿಂದ' ನಾವು ಯಾವ ಗಮ್ಯ ಸ್ಥಾನವನ್ನು ಸೇರಬೇಕೋ ಅದು ನಿರ್ಧರಿಸಲ್ಪಡುತ್ತದೆ ಎಂದರೆ ತಪ್ಪೆ?

'ಯಾವುದೀ ಹೊಸಸಂಚು ಎದೆಯಂಚಿನಲಿ ಮಿಂಚಿ........'
ಇಂತಹ ಅರ್ಥಗರ್ಭಿತ ಸುಶ್ರಾವ್ಯವಾಗಿ ಹಾಡಬಲ್ಲ ಕವನವನ್ನು ಕೊಟ್ಟಿದ್ದಕ್ಕೆ ಲಕ್ಷ್ಮೀನಾರಾಯಣ ಭಟ್ಟರಿಗೆ ನಮ್ಮ ನೆನಕೆಗಳನ್ನು ಅರ್ಪಿಸುತ್ತ ಅವರಿಂದ ಇನ್ನೂ ಅನೇಕ ಭಾವಗೀತೆಗಳು ಬರಲೆಂದು ಅಪೇಕ್ಷಿಸೋಣವೇ?

ನಿಮ್ಮೊಡನೆ ವಿ.ಆರ್.ಭಟ್: ಸಮಗ್ರ ಫೋನಾಯಣಂ

ನಿಮ್ಮೊಡನೆ ವಿ.ಆರ್.ಭಟ್: ಸಮಗ್ರ ಫೋನಾಯಣಂ

Friday, January 29, 2010

ಸಮಗ್ರ ಫೋನಾಯಣಂ


ಸಮಗ್ರ ಫೋನಾಯಣಂ


ರಾಮಾಯಣವನ್ನು ಕೇಳಿದ್ದೀರಿ, ಆದರೆ ಅದರ ಸನಿಹಕ್ಕೂ ಬಾರದ ಒಂದು ಪ್ರಸಂಗವೇ ಸಮಗ್ರ ಫೋನಾಯಣ.

ಹೀಗೆ ನನ್ನ ಬಾಲ್ಯಕಾಲ, ಕರಾವಳಿಯಲ್ಲಿಯ ನಮ್ಮೂರು ಆಗೊಂದು ಕುಗ್ರಾಮ.[ಸಣ್ಣ ಹಳ್ಳಿ]ಎಲ್ಲೆಲ್ಲೂ ಸರಿಯಾದ ಸಂಪರ್ಕವೇ ಇಲ್ಲದಿದ್ದ ಕಾಲ. ಓಡಾಟಕ್ಕೆ ಸರಿಯಾದ ರಸ್ತೆ ಇಲ್ಲ, ಇದ್ದರೆ ವಾಹನ ಸೌಲಭ್ಯ ಇಲ್ಲ. ಒಟ್ಟು ಹೇಗೋ ಓಡಾಟ, ಕೆಲಸ ಈ ರೀತಿ. ನಮ್ಮ ಮನೆ ಒಂದು ಅವಿಭಕ್ತ ಕುಟುಂಬ. ಹೆಚ್ಚು ಕಮ್ಮಿ ಒಂದು ೧೨-೧೩ ಜನರು ಇದ್ದ ಮನೆ. ಇದ್ರಲ್ಲಿ ಕೆಲವರು ಮುದುಕರು, ಕೆಲವರು ಎಡಮುದುಕರು[ಮಧ್ಯವಯಸ್ಸು ಅಂತ]ಹೀಗೆಲ್ಲ, ಕೆಲವರಿಗೆ ಎಲ್ಲಾದರೂ ಅನಾರೋಗ್ಯವಾದರೆ ಆಸ್ಪತ್ರೆಗೆ ಅಂತ ೧೨-೧೩ ಕಿಲೊ ಮೀಟರ್ ಹೋಗಬೇಕು. ಅದು ರಾತ್ರಿಯಲ್ಲಾದರೆ ಶಿವನೇ ಗತಿ. ಹೀಗಾಗಿ ತುರ್ತು ಚಿಕಿತ್ಸೆಗೆ ಬಾಡಿಗೆ ವಾಹನ ತರಿಸಲಾದರೂ ಇರಲಿ ಅಂತ ನನ್ನ ಚಿಕ್ಕಪ್ಪ ಯಾರ್ಯಾರನ್ನೋ ಹಿಡಿದು ಒಂದು ದೂರವಾಣಿ ಸಂಪರ್ಕವನ್ನು ಪಡೆದರು. ಮೊನ್ನೆ ನಿಮಗೆ ಲಾಟೀನಿನ ಬಗ್ಗೆ ಹೇಳಿದಹಾಗೆ ಇದು ಅಂತಸ್ತಿನ ಪ್ರಶ್ನೆಯಾಗಿರದೆ ಅನಿವಾರ್ಯದ ಪ್ರಶ್ನೆ ಆಗಿತ್ತು.


ಟರರ್ ಟರರ್ ರೊಟ ರೊಟ ರೊಟ ರೊಟ ........ಇದು ಆಕಾಲದ ಉರುಟು ಡಯಲ್ ಪ್ಯಾಡ್ ಉಳ್ಳ ಫೋನ್.

ಕಿರನ್ ಕಿರನ್ ಕಿರನ್ ಕಿರನ್ ಕಿರನ್ ಕಿರನ್ ಕಿರನ್ ಕಿರನ್ ...ಬಂತು ರಿಂಗು.ಕಟ್ಟಾಯ್ತು, ಬಿಡಿ, ರಿಂಗಾಯಿತೆಂದರೆ ಎಲ್ಲಿದ್ದರೂ ಓಡಿಬರಬೇಕು. ಯಾಕೆಂದ್ರೆ ಅದು ಎಷ್ಟು ದೂರದ ಕಾಲೋ....ಆಗ ಎಸ್.ಟಿ.ಡಿ. ಇರಲಿಲ್ಲ. ಟ್ರಂಕ್ ಬುಕ್ಕಿಂಗ್ ಎಂಬ ಮಾದರಿ. ನಾವು ತಾಲೂಕಿನ ಕೇಂದ್ರದಲ್ಲಿರುವ ದೂರವಾಣಿ ’ಎಕ್ಸ್ ಚೇಂಜ್ ’ ಗೆ ಫೋನಾಯಿಸಿ ಫೋನಣ್ಣ ಅಥವಾ ಫೋನಕ್ಕನ್ನ [operators]ಮಾತಾಡಿಸಿ, ನಾವು ಇಂಥವರು ಮೆಂತೆಕದ್ದವರು ಅಂತೆಲ್ಲ ಪುರಾಣ ಹೇಳಿ, ನಮಗೆ ಬೇಕಾದ ಊರು, ಅವರ ನಂಬರು ಕುಲ ಗೋತ್ರ ಎಲ್ಲಾ ಕೊಟ್ಟು ಕಾಯಬೇಕು. ಇಸ್ಪೀಟಾಟದಲ್ಲಿ ಮಗ್ನರಾಗಿರುವ ಫೋನಣ್ಣ ಅಥವಾ ಫೋನಕ್ಕ ಅವರ ಬಿಡುವಿನಲ್ಲಿ ಅದೇನೋ ಕಡ್ಡಿ ಹಚ್ಚಿ ಅದು ಅಲ್ಲಿಗೆ ತಲ್ಪಿದಾಗ ನಮಗೆ ವಾಪಸ್ ಕಾಲ್ ಮಾಡಿ ಹೇಳೋರು. "ಇಂತವ್ರೇನ್ರೀ ಇಂತಾಕಡೆ ಫೋನಿದೆ ತಗೊಳಿ" -ಇದು ಅವರ ಉತ್ತರ ಆಕಡೆಯಿಂದ. ಲೈನು ಸಿಗುವ ಚಾನ್ಸೇ ಕಮ್ಮಿ. ಸಿಕ್ಕಿದರೆ ಬಹಳ ಸಲ ನಾ ನಾ ಥರದ ಕೇಳಲಾರದ ವಾದ್ಯಗೋಷ್ಠಿ [ಆರ್ಕೆಸ್ಟ್ರಾ] !

ಕಿರನ್ ಕಿರನ್ ಕಿರನ್ ಕಿರನ್ ಕಿರನ್ ಕಿರನ್ ಕಿರನ್ ಕಿರನ್ ...ಬಂತು ರಿಂಗು,
" ಹಲೋ ನಾನು ಹೊಸ್ಮನೆ ಸುಬ್ರಾಯ, ಭಾರತಿ ಕರೀರಿ"


" ಎಲ್ಲೀ ಭಾರತಿ? ಇಲ್ಲಿ ಅಂತಾ ಹೆಸ್ರನವ್ರು ಯಾರೂ ಇಲ್ಲ "

"ಗುಣವಂತೆ ಅಲ್ವಾ?"

" ಅಲ್ಲ"
ಹೀಗೆ ಆಗಾಗ ರಾಂಗ್ ಕಾಲ್ ಗಳು, ಯಾರನ್ನೋ ಪಕ್ಕದಮನೆಯವರನ್ನ ಕರೀರಿ ಎಂತೆಲ್ಲ. ಅದು ಹೋಗ್ಲಿ, ಹಳ್ಳಿ ಅಲ್ವ, ಮೈಲು ದೂರದ ಯಾವುದೋ ಮನೆಯವರನ್ನು ಕರೆದು ಬರುವಂತೆ ಕಾಲು, ಅದೇರೀತಿ ಏನನ್ನೋ ಎಷ್ಟೋದೂರದ ಮನೆಗೆ ಹೇಳಿಬರಲು ಅರ್ಜೆಂಟ್ ಆಗಿ ತಾಕೀತು ಮಾಡುವಂತೆ ಹೇಳುತ್ತಿದ್ದರು.

ಹಲವೊಮ್ಮೆ ನಮ್ಮ ಫೋನ್ ಸರಿಯಿರುತ್ತಿರಲಿಲ್ಲ. ಎತ್ತಿದರೆ ಒಂಥರಾ ಹಂದಿ ಕೂಗಿದ ಹಾಗೆ....ಅಥವಾ ಕೆಲವೊಮ್ಮೆ

"ಎಣ್ಣೆ ಡಬ್ಬ ಬಂದದೆ, ಚಲೋ ಅದೆ, ೪೫೦ ರೂಪಾಯ್ ಮಣ್ ಸಾಂಗ್, ಕಳನಾತುಕ....ಮಕ್ ಕಬರ್ನಾ ಅಶಿಲೆ ಮಾರಾಯಾ" ಎಂಬೆಲ್ಲ ಯಾರ್ಯಾರದೋ ಕೊಂಕಣಿ ವ್ಯಾಪಾರಸ್ತರ ಮಾತು, ಅಥವಾ ಇನ್ನೇನೋ ಕೇಳುತ್ತಿತ್ತು. ಒಂದರ್ಥದಲ್ಲಿ ಮಜಾ ತಗೊಳ್ಳುವವರಿಗೆ ಈಗಿನ ಮಲ್ಟಿಮೀಡಿಯಾಕ್ಕಿಂತ ಖುಷಿಕೊಡುತ್ತಿತ್ತು! ಎಷ್ಟೋ ಸಲ ಡೆಡ್ ಆಗಿರುತ್ತಿತ್ತು. ಹೊರಗಡೆ ದಾರಿಯಲ್ಲಿ ಎರಡು ಲೈನುಗಳು ಥಳಕು ಹಾಕಿಕೊಂಡುಬಿಡುತ್ತಿದ್ದುದುಂಟು. ಇದಕ್ಕೆ ಲೈನ್ಮನ್ ಅಂದು ನಮ್ಮನ್ನು ಕೂಗಿ ಕರೆದು ಏಣಿ, ದೋಟಿ [ಉದ್ದನೆಯ ಬಿದಿರು ಕೋಲು] ಇತ್ಯಾದಿ ತರಲು ಹೇಳುತ್ತಿದ್ದುದನ್ನೆಲ್ಲ ನೆನೆಸಿಕೊಂಡರೆ ಈಗಲೂ ಅಬ್ಬಾ !ಮತ್ತೆಂದೂ ಈ ಸಹವಾಸ ಬೇಡ.


ಟರರ್ ಟರರ್ ರೊಟ ರೊಟ ರೊಟ ರೊಟ

ಇದು ನೆನಪಾದಾಗ ಒಂದು ಹಾಡುಕೂಡ ನೆನಪಾಗುತ್ತದೆ ----


ನಮ್ಮ ಮನೆಯಲೊಂದು ಸಣ್ಣ ಫೋನು ಇರುವದು
ಎತ್ತಿಕೊಳಲು ಹೋದರದಕೆ ರೊಚ್ಚೆ ಹಿಡಿವುದು.
ರೊಚ್ಚೆಹಿಡಿದು ಎತ್ತಿದಾಗ ಕಿರುಚಿಕೊಳುವುದು
ಕಿರುಚಿಕೊಂಡು ನಮ್ಮ ಕಿವಿಯಲರಚಿಬಿಡುವುದು

ಇನ್ನೂ ಸ್ವಾರಸ್ಯ ಅಂದರೆ ನಮ್ಮ ಮನೆಯೆ ಒಂಥರ ಪಬ್ಲಿಕ್ ಸರ್ವಿಸ್ ಬೂತ್ ಥರಾ ಆಗಿಬಿಟ್ಟಿತ್ತು! ಸುತ್ತಲ ಅನೇಕ ಜನ ಫೋನ್ ಮಾಡಲೋ ಅಥವಾ ಯಾರದೋ ಕಾಲ್ ರಿಸೀವ್ ಮಾಡಲೋ ಬರುತ್ತಿದ್ದರು. ಬಂದವರಿಗೆ ಊಟ-ತಿಂಡಿ ಎಲ್ಲ ಉಪಚಾರವೂ ನಡೆಯುತ್ತಿತ್ತು. ಅವರು ಎಸ್.ಟಿ.ಡಿ. ಗೆ ಕಾಯುತ್ತಿದ್ದರೆ ಇಡೀದಿನವಾದರೂ ಆಗುತ್ತಿತ್ತು. ಮನೆಯಲ್ಲಿ ದಿನಾಲೂ ಸಮಾರಾಧನೆ. ಅಡಿಗೆ ಮಾಡೀ ಮಾಡೀ ಹೆಂಗಸರ ಕೈಕಾಲು ಬಿದ್ದುಹೋಗ್ಬೆಕು ಆ ರೀತಿ.

ಇನ್ನೊಂದು ತಕರಾರೆಂದರೆ, "ಯಾರಾದರೂ ಫೋನ್ ಮಾಡಲು ಹೋದರೆ ಅವರಮನೆಯಲ್ಲಿ ದುಡ್ಡು ತಗೋತಾರೆ, ಎಷ್ಟು ಗಂಟು ಮಾಡಿದ್ದಾರೋ !"

ಸ್ವಾಮೀ ನಿಮ್ಮ ಗಂಟಿನಕಥೆ ಹಾಳುಬೀಳಲಿ, ತಿಂಗಳ ಬಿಲ್ಲನ್ನು ತುಂಬುವಾಗ ಮನೆಯವರು ಎರಡೆರಡು ಶ್ವಾಸನಾಳದಲ್ಲಿ ಏದುಸಿರುಬಿಡುವ ಪ್ರಸಂಗ ಬರುತ್ತದೆ ಎಂದು ಹೇಳಬೇಕೆನಿಸಿದರೂ ಹೇಳಿಹಾಳಾಗಬೇಕಲ್ಲ ಎಂಬುದು ಬಹಳ ಹಿಮ್ಮೆಟ್ಟಿಸುತ್ತಿತ್ತು-ಇದು ದೊಡ್ಡವರಾಡಿಕೊಳ್ಳುತ್ತಿದ್ದ ಮಾತು. ನಾವೆಲ್ಲ ಚಿಕ್ಕವರು,. ನಮಗೇನು ತಿಳಿದೀತು.

ಫೋನ್ ನಲ್ಲಿ ಮಾತಾಡುವ ಕುತೂಹಲದಿಂದ ಕೆಲವರು ಅನಾವಶ್ಯಕವಾಗಿ ಮಾತನಾಡುತ್ತಿದ್ದರು. "ಹಲೋ, ಊಟ ಆಯ್ತಾ? ತಿಂಡಿಆಯ್ತಾ? ಮಲ್ಕೊಂಡ್ಬಿಟ್ರಾ ? ."......ಹೀಗೇ ಏನೇನೋ ....

ಕೆಲವರು ತಮ್ಮ ದೈನಂದಿನ ಚಿಕ್ಕ ಚಿಕ್ಕ ವ್ಯವಹಾರವನ್ನೂ ಫೋನ್ ಮೂಲಕ ಮಾಡಲು ಶುರುವಿಟ್ಟುಕೊಂಡಿದ್ದರು. ಒಂದು ದಿನ ಮೂಗಿಮನೆ ಮಂಜುನಾಥ ಬಂದು ೬ಕಿಲೊ ಮೀಟರ್ ದೂರದ ಯಾವುದೊ ಮನೆಗೆ ಫೋನ ಮಾಡಿದ
" ಹಲೋ ನಾನು ಮಂಜನಾಥ, ಎಮ್ಮೆ ರಾತ್ರಿ ಮೇಯಕ್ಕೆ ಬಿಟ್ಟದ್ದು ಬರ್ಲಿಲ್ಲ ಹೀಗಾಗಿ ಇವತ್ತು ಬರೋದಿಲ್ಲ ಅಲ್ಲಿಗೆ "

ಯಾರದೋ ಫೋನು ಎಲ್ಲಮ್ಮನ ಜಾತ್ರೆ !!



ಕಿರನ್ ಕಿರನ್ ಕಿರನ್ ಕಿರನ್ ಕಿರನ್ ಕಿರನ್ ಕಿರನ್ ಕಿರನ್ ...ಬಂತು ರಿಂಗು..." ಹಲೋ ಹಲೋ ಹಲೋ ...........
ಕೇಳಿಸ್ತಾನೇ ಇಲ್ಲ..... ಇದು ಬೊಂಬೈ ಕಾಲು ಗ್ಯಾರಂಟಿ !......ಹಲೋ ......ಹಲೋ........
ಟರರ್ ಟರರ್ ರೊಟ ರೊಟ ರೊಟ ರೊಟ ಟೊಂಯ್ ಟಕ್ ಟರರ್ ಟರರ್ ರೊಟ ರೊಟ ರೊಟ ರೊಟ "

"ಹಲೋ ನಾನು ಸುಧೀರಪ್ರಭು ಮಾತಾಡುದು ಬೊಂಬೈಯಿಂದ, ನಮ್ಮ ಮಾವನಮನೆ ವಾಸುದೇವ್ ಕಾಮತ್ ಇದಾರಲ್ಲ ಅವರಹತ್ರ ಸ್ವಲ್ಪ ಬಂದು ಫೋನ್ ಮಾಡ್ಲಿಕ್ಕೆ ಹೇಳ್ತೀರಾ...ಸ್ವಲ್ಪ ಅರ್ಜೆಂಟದೆ ಹಾ..."

ಬಂತು ಕೆಲ್ಸ, ಬಿಟ್ಟಿ ತಿರುಗಾಟ, ೫ಕಿಲೊಮೀಟರು, ಹೋಗಿ-ಬಂದ್ರೆ ೧೦, ಏನಪ್ಪಾ ಮಾಡೋದು, ಛೆ! ಅಂತೂ ಹೇಳಿಬಂದಿದ್ದಾಯ್ತು.
ವಾಸುದೇವ್ ಕಾಮತ್ ಬಂದರು. ಅಗೇನ್ ಸೇಮ್ ಪ್ರಾಸೆಸ್.......

" ಟರರ್ ಟರರ್ ರೊಟ ರೊಟ ರೊಟ ರೊಟ ಟೊಂಯ್ ಟಕ್ ಟರರ್ ಟರರ್ ರೊಟ ರೊಟ ರೊಟ ರೊಟ ".......ಫೋನಕ್ಕ ಮಾತಾಡಿದ್ಲು, ಮಾಮೂಲಿ ಟ್ರಂಕ್ ಕಾಲ್, ೩ ತಾಸು ಹೋಗಿದ್ದು ತಿಳಿಯಲೇ ಇಲ್ಲ.

ಇಂತಹ ಸಾವಿರಾರು ಸಮಾಜಸೇವೆ ಕೆಲಸಗಳನ್ನು ಅವಾರ್ಡ್ ತೆಗೆದುಕೊಳ್ಳದೇ ಮಾಡಿದ್ದೇವೆ!


ನಾನು ಎಲ್ಲೋ ’ಗೋಪಾಲ್ ಭಟ್ಟರ ಹುಲಿ’ ಎಂಬ ಯಾವುದೋ ಹಾಸ್ಯ ಲೇಖನ ಓದಿದ್ದೆ, ಆಥರ ನಮ್ಮ ಮನೆಯಲ್ಲಿ ಅನುಕೂಲಕ್ಕಾಗಿ ತಂದ ಫೋನ್ ಅವಾಂತರಕಾರಿಯಾಗಿತ್ತು. ಅದನ್ನು ಹಾಕಿಸಿಕೊಂಡಿದ್ದಕ್ಕೆ ಚಿಕ್ಕಪ್ಪಂದಿರಿಗೆ ಹೆಂಗಸರು ಸಹಸ್ರನಾಮಾವಳಿ ನಡೆಸಿದ್ದಾರೆ. ಒಂದು ದಿನ ಮನೆಯ ಎಲ್ಲರೂ ’ಮೀಟಿಂಗ್’ ಮಾಡಿ ಫೋನ್ ಇದ್ದರೇ ತೊಂದರೆ ಇನ್ನು ಮೇಲೆ ಫೋನ್ ಬೇಡ ಎಂಬ ತೀರ್ಮಾನಕ್ಕೆ ಬಂದೆವು. ಇನ್ನೇನು ಅಪ್ಲಿಕೇಶನ್ ಕೊಡಬೇಕು ಅಷ್ಟರಲ್ಲಿ ನಮ್ಮ ಊರಿಗೆ ೨ಕಿಲೋಮೀಟರ್ ದೂರದಲ್ಲಿ ಹೊಸ ಏಕ್ಸ್ ಚೇಂಜ್ ಬರುತ್ತದೆಂದೂ ಫೋನ್ ಬೇಕಾದವರೆಲ್ಲ ಸೇರಿ ಅರ್ಜಿ ಕೊಡಿರೆಂದೂ ಮಾಹಿತಿ ಬಂತು. ಆಗ ಕೆಲವರು ತಮ್ಮ ತಮ್ಮ ಮನೆಗೆ ಫೋನ್ ಹಾಕಿಸಿಕೊಳ್ಳಲು ಅರ್ಜಿಕೊಡುವಂತೆ ನಾವೇ ಸ್ವಲ್ಪ ಫೋನ್ ನ ಅನುಕೂಲಗಳಬಗ್ಗೆ ಭಾರೀ ಹೇಳಿದೆವು. ಹೀಗಾಗಿ ಅವರಲ್ಲಿ ಕೆಲವರು ನಾವು ಹೇಳಿದಂತೆ ಫೋನ್ ತೆಗೆದುಕೊಂಡರು. ಹೀಗಾಗಿ ನಮ್ಮಮನೆಯ ಫೋನ್ ತನ್ನ ’ಖುರ್ಚಿ’ಕಳೆದುಕೊಳ್ಳಲಿಲ್ಲ ಎಂಬಲ್ಲಿಗೆ ಫೋನಾಯಣಮ್ ಸಂಪೂರ್ಣಂ.

ಫಲಶ್ರುತಿ

ಇದನ್ನು ಹೇಳಿದವರಿಗೆ, ಹೇಳಿಸಿದವರಿಗೆ, ಕೇಳಿದವರಿಗೆ, ಕಾಪಿಮಾಡಿದವರಿಗೆ, ತರ್ಜುಮೆಮಾಡಿದವರಿಗೆ,ಅವರಿಂದ ಇವರಿಗೆ-ಇವರಿಂದ ಅವರಿಗೆ ಹೇಳಿದವರಿಗೆ, ಮನೆಯಲ್ಲಿ ದಿನಾಲೂ ಅನೇಕಸಲ ಪಠಿಸುವವರಿಗೆ ಶ್ರೀದೂರವಾಣಿತಾಯಿ ರೊಟ ರೊಟ ಎನ್ನದೇ ಸಕಲ ಸೌಲಭ್ಯವನ್ನೂ ಇತ್ತು ದೂರಸಂಪರ್ಕ ಸರಿಯಾಗಿ ಕಲ್ಪಿಸಲಿ

ದಿನದಲ್ಲಿ ಒಂದುಸಲ ಪಠಿಸಿದರೆ ಕಂಠಪಾಟವಾಗುವಂತೆಯೂ, ಎರಡುಸಲ ಪಠಿಸಿದರೆ ಪಕ್ಕದಮನೆಯವರು ಜೊತೆಗೆ ಸೇರಿ ಸಂಘ ಶುರುವಾಗಲೆಂದೂ, ಮೂರುಸಲ ಜಪಿಸಿದರೆ ಅಕ್ಕ-ಪಕ್ಕದ ಮನೆಗಳವರೂ ಸಂಘಕ್ಕೆ ಸೇರಲೆಂದೂ, ಮೂರಕ್ಕಿಂತ ಹೆಚ್ಚಿನಸಲ ಜಪಿಸಿದವರಿಗೆ ಮೊಬೈಲ್ ತೆಗೆದುಕೊಳ್ಳಬೇಕಾಗುತ್ತದೆಂದೂ ತಿಳಿಸಲು ವಿಷಾದಿಸುತ್ತೇವೆ!

ರುಖಾವಟ್ ಕೇಲಿಯೇ ಖೇದ್ ಹೈ..............ಟರರ್ ಟರರ್ ರೊಟ ರೊಟ ರೊಟ ರೊಟ



Thursday, January 28, 2010

ಯಾವುದೀ ಹೊಸಸಂಚು ಎದೆಯಂಚಿನಲಿ ಮಿಂಚಿ...


ಯಾವುದೀ ಹೊಸಸಂಚು ಎದೆಯಂಚಿನಲಿ ಮಿಂಚಿ...

ಜಯದೇವಾ ಜಯದೇವಾ
ಜಯಶ್ರೀ ಗುರುವರಗೆ ಜಯ ಸದ್ಗುರುವರಗೆ
ಜಯಜಯ ನಿತ್ಯ ನಿರಂಜನ ನಿರುತಾನಂದನಿಗೆ ”

ಯಾವ ಮಿಲಿಟರಿ ಪಡೆಯೂ ಕೂಡ ಅಷ್ಟು ಅಚ್ಚುಕಟ್ಟಾಗಿ ದೇಶ ಭಕ್ತಿಗೀತೆ ಹಾಡಲಿಕ್ಕಿಲ್ಲ, ಅಂತಹ ರೀತಿಯಲ್ಲಿ ಸುಲಭ-ಸರಳಸಾಹಿತ್ಯಹೊಂದಿರುವ ಅಜ್ಞಾತ ಕವಿಯಿಂದ ರಚಿಸಲ್ಪಟ್ಟ ಸ್ತುತಿಗೀತೆಯನ್ನು ನೀವೊಮ್ಮೆ ಕೇಳಬೇಕು. ಅಲ್ಲಿ pindrop silence. ಅದರ ಭಾವತರಂಗಗಳು ನಮ್ಮ ಮನಕ್ಕೆ ತಲ್ಪುತ್ತಿದ್ದಂತೆ ಏನೋ ಒಂದು ಅವಿಸ್ಮರಣೀಯ ಆನಂದ.



ಬಹುಶಃ ಇದರಬಗ್ಗೆ ತಮಗೆ ತಿಳಿದಿರದಿದ್ದರೂ ಮುರುಡೇಶ್ವರದ ಬಗ್ಗೆ ತಮಗೆ ಹೊಸದಾಗಿ ಹೇಳುವುದು ಬೇಡ. ಇವತ್ತು ಜಗತ್ಪ್ರಸಿದ್ಧಿ
ಪಡೆದ ಮುರುಡೇಶ್ವರ ದೇವಸ್ಥಾನ ಸುಮಾರು ೪೦ ವರ್ಷಗಳ ಹಿಂದೆ ಕುಸಿದು ಬೀಳುವಷ್ಟು ಶಿಥಿಲವಾಗಿತ್ತು. ಅದು ಮುಂದೆ ಸರಿಯಾದ ವ್ಯಕ್ತಿಯೊಬ್ಬರಿಂದ ಜೀರ್ಣೋದ್ಧಾರಗೊಂಡು ಬಹಳ ಉತ್ತಮ ಮಟ್ಟಕ್ಕೆ ತಲ್ಪುತ್ತದೆ ಎಂದು ತಮ್ಮ ಯೋಗಬಲದಿಂದ ಆಗಲೇ ಸಾರಿದ್ದ, ಮಕ್ಕಳಿರದಿದ್ದ ಮೈಸೂರು ಜಯಚಾಮರಾಜೇಂದ್ರರಿಗೆ ಮಗು ಶ್ರೀಕಂಠದತ್ತನರಸಿಂಹರಾಜರು ಜನಿಸುವಂತೆ ಆಶೀರ್ವದಿಸಿದ್ದ, ಮೈಸೂರಿನಲ್ಲಿ ಏಕಕಾಲದಲ್ಲಿ ಸ್ಥಳಗಳ ವೇದಿಕೆಯಲ್ಲಿ ಆಶೀರ್ವಚನ ನೀಡಿದ್ದ, ನಮ್ಮ ವಿಧಾನಸೌಧದ ಕಟ್ಟಡ ಅದ್ಬುತವಾಗಿ ರೂಪುಗೊಳ್ಳಲೆಂದು ಹರಸಿದ್ದ ಅದಮ್ಯ ದಿವ್ಯ ಚೇತನ ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳು.

ಉತ್ತರ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯ ಲಾಡ್
ಚಿಂಚೋಳಿಯಲ್ಲಿ ಬಡ ಬ್ರಾಹ್ಮಣ ಕುಟುಂಬದಲ್ಲಿ ದತ್ತಾತ್ತ್ರೇಯನ ಅವತಾರವಾಗಿ ಜನಿಸಿದ್ದರು. ದೇಶದುದ್ದಗಲ ಸಂಚರಿಸಿ ಜನರ ಕಷ್ಟಕಾರ್ಪಣ್ಯಗಳನ್ನು ದೂರಮಾಡಿದ ಮಹಾನ್ ಚೇತನಗಳಲ್ಲಿ ಶ್ರೀಗಳೂ ಒಬ್ಬರು. ಬಹುಶಃ ಶ್ರೀ ಆದಿಶಂಕರರ ನಂತರ ದೇಶದುದ್ದಗಲ ಸಂಚರಿಸಿ ಜನರಿಗೆ ನೆರವಾದ ಸನ್ಯಾಸಿ ಇವರೊಬ್ಬರೇ ಅಂದರೆ ತಪ್ಪಾಗಲಾರದು.

ನಾವು ಅನೇಕ ಮಹಾತ್ಮರ ಬಾಲ್ಯದ ಬಗ್ಗೆ ಕೇಳಿದ್ದೇವೆ. ಆದರೆ ಅತೀವ ಕಷ್ಟದ, ಬಡತನದ ಬಾಲ್ಯ ಮಿಕ್ಕುಳಿದವರ ಚರಿತ್ರೆಗಳಲ್ಲಿ
ಕಂಡುಬರುವುದಿಲ್ಲ. ಪ್ರಾಯಶಃ ಅವರ ಬಾಲ್ಯದ ಬಗೆಗೆ ಓದುವಾಗ ನಮಗೆ ಕಣ್ಣೀರೊರೆಸಿ ಹಿಂಡಲು ಪ್ರತ್ಯೇಕ ಬಟ್ಟೆಯೇ ಬೇಕು. ಇಂತಹ ಅತಿ ಕಠಿಣ ಬಾಲ್ಯವನ್ನು ಸಹಿಸಿ, ಕುಟುಂಬದ ಎಲ್ಲರನ್ನೂ ಕಳೆದುಕೊಂಡು, ವಾಸಿಸಲು ಸರಿಯಾದ,ಸ್ಥಿರವಾದ ಮನೆಯಿಲ್ಲದೇ ಮುನ್ನಡೆದ ಬಾಲಕ ಮುಂದೊಂದು ದಿನ ಆರ್ತರ ಕಣ್ಣೀರೊರೆಸುವ ಮಹಾನ್ ಯೋಗಿಯಾಗಬಹುದೆಂದು ಯಾರೂ ಊಹಿಸಿರಲಿಲ್ಲ. ಅವರು ಹುಟ್ಟಿದ್ದೇ ಬೇರೆಯವರ ಸೇವೆಗಾಗಿ ಎಂಬುದು ಸ್ಥೂಲವಾಗಿ ನೋಡಿದಾಗ ಗೊತ್ತಾಗುತ್ತದೆ.

|| ಮೋಕ್ಷಶ್ರಿಯಂ ಧರತೀ ಇತಿ ಶ್ರೀಧರಃ ||

ಶ್ರೀಧರಎನ್ನುವ ಹೆಸರು ಬಹಳ ಅರ್ಥಗರ್ಭಿತ. ಮೋಕ್ಷಶ್ರೀಯನ್ನು ಧರಿಸಿದಾತನೇ ಶ್ರೀಧರ. ಸಂಸ್ಕೃತದಲ್ಲಿ || ವರ್ಣಮಾತ್ರಂ
ಗುರುಃ || ಎನ್ನುತ್ತಾರೆ. ಅಂದರೆ ಒಂದೇ ಒಂದು ಅಕ್ಷರವನ್ನು ಕಲಿಸಿ/ತಿಳಿಸಿಕೊಟ್ಟರೂ ಆತಗುರುಎಂದು ಗೌರವಿಸುತ್ತಾರೆ. ಜನನಿ ಮೊದಲಗುರು ಎಂದೂ ನಂತರ ಮಿಕ್ಕುಳಿದ ಹಲವಾರು ರೀತ್ಯಾ ಗುರುಗಳು ಜೀವನದಲ್ಲಿ ಬರುತ್ತಾರೆ. ಆದರೆ ನಮ್ಮ ಆತ್ಮಕ್ಕೆ ಸರಿಯಾದ ಪಾರಮಾರ್ಥಿಕ ದಾರಿಯನ್ನು ತೋರಿ ನಮ್ಮನ್ನು ಜನ್ಮಾಂತರಗಳ ಬಂಧನದಿಂದ, ಕುಣಿಕೆಯಿಂದ ತಪ್ಪಿಸುವಾತನೇ ನಿಜವಾದ ಗುರು ಎಂದು ಪರಿಗಣಿಸಲ್ಪಡುತ್ತಾನೆ. ಇಲ್ಲಿ ನಾಸ್ತಿಕರು ವಾದಿಸಿದರೆ ಅವರಲ್ಲಿ ನನ್ನ ಪ್ರಶ್ನೆಗಳೊಂದೆರಡು-

ಆತ್ಮ ಎಂಬ ಚೇತನ ಯಾವರೂಪದಲ್ಲಿದೆ? ಅದು ದೇಹದಲ್ಲಿ ಎಲ್ಲಿರುತ್ತದೆ? ಅದು ಬರುವಾಗ ಎಲ್ಲಿಂದ ಬಂತು? ಸತ್ತಮೇಲೆ ಎಲ್ಲಿಗೆ
ಹೋಗುತ್ತದೆ ?

. ಸೂರ್ಯ ಚಂದ್ರಾದಿ ಆಕಾಶ ಕಾಯಗಳನ್ನು ಯಾ ಸ್ಥಾನಗಳಲ್ಲಿ ಸರಿಯಾಗಿ ಇರುವಂತೆ ಆಡಳಿತ ನಡೆಸುವ ಗುರುತ್ವ
ಶಕ್ತಿ ಯಾಕೆ, ಹೇಗೆ ಸೃಜಿಸಲ್ಪಟ್ಟಿತು?

. ವಿಜ್ಞಾನಿಗಳು ಕುಳಿತು ನಮಗೆ ಬೇಕಾದ ನೀರಿಗಾಗಿ H2O Formula ಮಾಡಿ ನೀರು ತಯಾರಿಸುತ್ತಾರೆಯೇ? ಅಥವಾ
ಗಾಳಿಯಲ್ಲಿ ಆಮ್ಲಜನಕವನ್ನು ತುಂಬಿದವರು ಅವರೇನಾ?

ಇಂತಹ ಅನೇಕ ಪ್ರಶ್ನೆಗಳು ಇಂದಿಗೂ ಉತ್ತರ ರಹಿತ ! ಹೀಗಾಗಿ ಮಾರ್ಮಿಕವಾಗಿ ಚಿಂತನ ನಡೆಸುವಾಗ ನಮ್ಮ ಹೃದಯದಲ್ಲಿ
ಇರುವ ಸಂಚಿನ ಅರ್ಥ ನಮಗೇ ಅರಿವಿಲ್ಲವಲ್ಲ ಎಂಬುದು ಸ್ಪಷ್ಟ !

ಜೀವನದಲ್ಲಿ ಸದ್ಗುರುವನ್ನು ಪಡೆಯಲೂ ಯೋಗಬೇಕು, ಅವರ ಅಪ್ಪಣೆ ಸಿಗಬೇಕು. ಗುರುವನ್ನು ಕಾದು ದರ್ಶನ ಮಾಡಬೇಕು.ಜನರ
ಅಹವಾಲುಗಳನ್ನು ಸ್ವೀಕರಿಸಿ ಅವರ ಕಷ್ಟಗಳನ್ನೆಲ್ಲ ತಾನು ಅನುಭವಿಸವಂತೆ ಪಡೆದು, ತಪೋಬಲದಿಂದ ಅವರೆಲ್ಲರ ಕಣ್ಣೀರೊರೆಸಿದ, ಅವರಿಗೆ ಹೊಸ ಜೀವನ, ಮಾರ್ಗ ಕಲ್ಪಿಸಿದ ಶ್ರೀಧರರು ಮಹಾರಾಷ್ಟ್ರದ ಸನ್ಯಾಸಿ ಸಮರ್ಥ ರಾಮದಾಸರ ಶಿಷ್ಯರಾಗಿ, ದೇಶಾಂತರ ತಿರುಗುತ್ತ ಶಿವಮೊಗ್ಗೆಯ ಸಾಗರ ಪ್ರಾಂತದಲ್ಲಿ ವರದಪುರ ಎಂಬ ಗುಡ್ಡದಮೇಲೆ ಲೋಕೋದ್ಧಾರಕ್ಕಾಗಿ ಅಖಂಡ ತಪಸ್ಸನ್ನು ನಡೆಸಿದರು.ಹಾಗೆ ಮಾಡಲು ಕಾರಣಗಳಿವೆ.ವರದಪುರ ಬಹಳ ರಮ್ಯ-ಮನಮೋಹಕ ತಾಣ. ಸಹಜವಾಗಿ ಋಷಿಗಳಿಗೆ ಹೇಳಿಮಾಡಿಸಿದ ಹಾಗಿರುವ , ಹಿಂದೆ ಅಗಸ್ತ್ಯರಾದಿಯಾಗಿ ಅನೇಕರು ತಪಸ್ಸುನಡೆಸಿದ ತಪೋಭೂಮಿ. ಇಂತಹ ಕ್ಷೇತ್ರವನ್ನು ಆಯ್ದುಕೊಂಡು ಅಲ್ಲಿ ಪವಿತ್ರ ತೀರ್ಥವನ್ನು ಸೃಜಿಸಿ ಗಂಗಾದಿ ಸರ್ವ ತೀರ್ಥಗಳನ್ನೂ ಅಲ್ಲಿಗೆ ಆಕರ್ಶಿಸಿ ತಮ್ಮ ತಪದ ಧಾರೆಯನ್ನೇ ಆ ಜಲಧಾರೆಗೆ ತುಂಬಿ ಅದನ್ನೇ ದಿವ್ಯೌಷಧವೆಂದು ಘೋಷಿಸಿದರು.




೧೯೦೮ ರಲ್ಲಿ ಜನಿಸಿದ ಶ್ರೀಗಳು ೧೯೭೩ ತನಕ ದೇಹದಿಂದಿದ್ದರು. ಅವರ ಬಗೆಗಿನ ಅವರ ಚರಿತ್ರೆಯಲ್ಲಿ ಸಾ
ವಿರ ಸಾವಿರದೋಪಾದಿಯಲ್ಲಿ ವಿಚಿತ್ರ ಘಟನೆಗಳು ನೋಡಸಿಗುತ್ತವೆ. ಅವೆಲ್ಲವನ್ನೂ ಕಾಲದ ಹಾಗೂ ಸ್ಥಳದ ಪರಿಮಿತಿಯಿಂದ ಇಲ್ಲಿ ಹೇಳಲಾಗುತ್ತಿಲ್ಲ. ಆಸಕ್ತರು ನೇರವಾಗಿ ಶ್ರೀಧರರ ಅಶ್ರಮಕ್ಕೆ ಹೋಗಿ ಪಡೆಯಬಹುದು. ಬೆಂಗಳೂರಿಗೆ ಬಂದ ಗುರುಗಳನ್ನು ಗೌಡರೊಬ್ಬರು ತಮ್ಮ ಮನೆಯವರ ವಾಸಿಮಾಡಲಾಗದ ಕಾಯಿಲೆಯನ್ನು ನಿವಾರಿಸುವಂತೆ ಪ್ರಾರ್ಥಿಸಿದಾಗ ಅವರ ಕಾಯಿಲೆ ವಾಸಿಯಾಗಿ, ಗುರುಗಳಿಗೆ ಪ್ರತಿಯಾಗಿ ಏನಾದರೂ ಸ್ವೀಕರಿಸಬೇಕೆಂದು ಹಠ ಹಿಡಿದರಂತೆ. ಯಾವತ್ತೂ ಯಾರಿಂದಲೂ ಏನನ್ನೂ ಬಯಸದ-ಸ್ವೀಕರಿಸದ ಶ್ರೀಗಳು ವಸಂತಪುರದಲ್ಲಿ ಗೌಡರ ಮನೆಯ ಪಕ್ಕದಲ್ಲಿ ಸ್ವಲ್ಪ ಜಾಗವನ್ನು ದಾನವಾಗಿ ಪಡೆದರು. ಅದು ನಮ್ಮ ಬೆಂಗಳೂರಿಗರಿಗೆ ಇಂದು ಶ್ರೀಧರ ಪಾದುಕಾಶ್ರಮವಾಗಿ ಹರಸುತ್ತಿದೆ.

ಅವರ ಉಪಸ್ಥಿತಿಯಲ್ಲಿ ಪಶು-ಪಕ್ಷಿಗಳೂ ಕೂಡ ಆನಂದವನ್ನು ಅನುಭವಿಸುತ್ತಿದ್ದವು ಎಂಬುದಕ್ಕೆ ಸಾಕ್ಷಿಯಾಗಿ ವರದಪುರದಲ್ಲಿ ಅವರ ಸಮಾಧಿಗೆ
ಮಧ್ಯಾಹ್ನದ ಮಂಗಲಾರತಿ ವೇಳೆ ಎಲ್ಲಾ ನಾಯಿಗಳೂ ಮುಖ ಮೇಲೆತ್ತಿ ಅಳುವರೀತಿಯಲ್ಲಿ ಕೂಗುವುದು ಬಲು ಸೋಜಿಗವೇಸರಿ!ತಾಯಿಗೂ ಮಿಗಿಲಾಗಿ ಎಲ್ಲರ ತಾಯ್ತಂದೆಯಂತಿದ್ದ ಶ್ರೀಗಳ ಜನ್ಮ ಶತಮಾನೋತ್ಸವ ಕಳೆದವರ್ಷ ನಡೆಯಿತು. ಇಂತಹ ಮಹಾತ್ಮರು ಮತ್ತೆ ಜನಿಸಲಿ, ನಿಜವಾಗಿ ಜನತೆಯ ಕಣ್ಣೀರೊರೆಸಲಿ ಎಂದು ಪ್ರಾರ್ಥಿಸೋಣ.

Wednesday, January 27, 2010

ಲಾಟೀನು ಎಂಬ ಅದ್ಬುತ ದೀಪ !!

ಲಾಟೀನು ಎಂಬ ಅದ್ಬುತ ದೀಪ!!


ನಾವು ತುಂಬಾ ಚಿಕ್ಕವರಿದ್ದೆವು. ನಮ್ಮ ಅಜ್ಜನ ಹತ್ತಿರ ಕತೆಗಾಗಿ ಬಹಳ ಪೀಡಿಸುತ್ತಿದ್ದೆವು. ದಿನವಿಡೀ ಕೆಲಸದಲ್ಲಿ ದಣಿದಿರುವ ಅವರು ಸಾಯಂಕಾಲ ಸುಸ್ತಾಗಿ ಮಲಗುತ್ತಿದ್ದರು. ಆದರೂ ನಮ್ಮಕೋರಿಕೆಯನ್ನು ಎಂದೂ ತಿರಸ್ಕರಿಸಿದವರಲ್ಲ. ಮಳೆಗಾಲದಲ್ಲಿ ಅವರು ಮಲಗಿರುವಾಗ ಅವರಕಾಲುಗಳ ಮಧ್ಯೆ ಮಲಗಿಕೊಂಡು ಆಟವಾಡುವುದು ನನ್ನ ಪರಮ ಖುಷಿಯ ವಿಷಯವಾಗಿತ್ತು. ಹೀಗೇಒಂದುದಿನ ನನ್ನ ಒತ್ತಾಯಕ್ಕೆ ಕುತೂಹಲಕ್ಕೆಲಾಟೀನು ಮಹಾತ್ಮೆಯನ್ನು ಹೇಳತೊಡಗಿದರು....


ಆಗ ಬ್ರಿಟಿಷರ ಆಳ್ವಿಕೆಯಿತ್ತು. ಎಲ್ಲರಮನೆಯಲ್ಲೂ ರಾತ್ರಿ ಹರಳೆಣ್ಣೆ ದೀಪ. ಇಡೀ ಊರಿನಲ್ಲಿ ಎಲ್ಲೆಲ್ಲೂ ಸೀಮೆ ಎಣ್ಣೆ ದೀಪ ಕೂಡಇರಲಿಲ್ಲ. ಸ್ವಲ್ಪ ವರುಷ ಕಳೆದಮೇಲೆ ಪಟೇಲರ ಮನೆಯಲ್ಲಿ ಬುಡ್ಡಿ ದೀಪ ಬಂತು. ಆಗ ಅದು ಅಷ್ಟೇನೂ ಸುದ್ದಿಯಾಗಲಿಲ್ಲ. ಊರಲ್ಲಿಎಲ್ಲದರಲ್ಲೂ ಪ್ರಥಮ ಪಟೇಲರ ಮನೆಯಾಗಿತ್ತು.ಏನಾದರೂ ಹೊಸ ಬದಲಾವಣೆ ಬಂದರೆ ಅದು ಪಟೆಲರಮನೆಯಿಂದಲೇಎಂಬುದು ಎಲ್ಲರಿಗೂ ಗೊತ್ತು. ಇಂತಹ ಒಂದುದಿನಲಾಟೀನುಎಂಬ ಹೊಸ ದೀಪ ಬಂದಿರುವುದಾಗಿಯೂ, ಅದನ್ನುನೋಡಬಯಸುವವರು ಒಟ್ಟಾಗಿ ಬಂದರೆ ಆಗ ತೋರಿಸಲಾಗುವುದು ಎಂಬ ಸುದ್ದಿ ಬಂತು. ನಾವೆಲ್ಲ -೧೦ವಯಸ್ಸಿನ ಮಕ್ಕಳು, ನಮಗೆ ಮೈಯೆಲ್ಲ ಪುಳಕ ! ಸುದ್ದಿ ಬಂದ ಸ್ವಲ್ಪ ಹೊತ್ತಿನಲ್ಲೇ ಅನೇಕರು ಒಟ್ಟಾದೆವು. ಎಲ್ಲರೂ ಪಟೇಲರ ಮನೆಗೆ ಹೋದೆವು. ಅಲ್ಲಿಮೊದಲು ಆಥರದ ಹೊಸವಸ್ತು ಯವುದೂ ಕಣ್ಣಿಗೆ ಕಾಣಿಸಲಿಲ್ಲ. ಹಾಗೇ ಕಾಯುತ್ತ ಕುಳಿತೆವು. ಮಾತನಾಡುವಹಾಗಿಲ್ಲ-ಪಟೇಲರಮನೆ! ಹಾಗೂ ಹೀಗೂ ಹೊತ್ತಿಗೆ ಊರು-ಪರವೂರು ಎಂದು ಸುಮಾರು ೫೦೦ ಜನ ಸೇರಿದ್ದರು ! ಪಟೇಲರ ಮಗಹೊರಗೆ ಬಂದರು.ಬಂದವರೇ ವಿಷಯ ತಿಳಿದು ಎಲ್ಲ ಸಾಲಾಗಿ ಕುಳಿತುಕೊಳ್ಳಬೇಕೆಂದೂ, ’ಲಾಟೀನುಬಹಳ ನಾಜೂಕಿನ ಮತ್ತುದುಬಾರಿಯ ವಸ್ತುವಾಗಿರುವುದರಿಂದ ಅದು ಬಿದ್ದುಹೋದರೆ ಅದರಲ್ಲಿರುವ ಗಾಜು ಒಡೆದುಹೋಗುತ್ತದೆಂದೂ ತಿಳಿಸಿ ತಾಕೀತುಮಾಡಿದರು. ಎಲ್ಲರೂ ಗಪ್ ಚುಪ್! ಬಾಯ್ ಮುಚ್ಚಿ ಸಾಲಾಗಿ ಕುಳಿತುಕೊಂಡೆವು. ಮೊದಲನೋಟಕ್ಕೆ ತೇರಿನಾಕಾರದಲ್ಲಿರುವಒಂದು ಸ್ಪುರದ್ರೂಪಿ ವಸ್ತು ಕಂಡಿತು. ಅದು ಮೈತುಂಬಾ ಗಾಜನ್ನು ಹೊದ್ದಿತ್ತು. ಅದನ್ನು ಹಗಲುಹೊತ್ತು ಬಿದ್ದುಹೋಗದಿರಲೆಂದುಒಂದು ಮರದ ಪೆಟ್ಟಿಗೆಯಲ್ಲಿ ಹಾಕಿಡುತ್ತಿದ್ದರು.

ದೂರ ಕೂತ್ಗೊಳಿ, ಇಲ್ಲಾಂದ್ರೆ ಒಳ್ಗಡೆ ಇಟ್ಟುಬಿಡ್ತೇನೆ’--ಪಟೇಲರ ಮಗ ಗುಡುಗಿದರು. ತುಂಬಾ ದೂರ ಕುಳಿತರೆ ನಮಗೆ ಅದುಸರಿಇಯಾಗಿ ಕಾಣುತ್ತಿರಲಿಲ್ಲ. ಆದರೂ ಪಾಪ ಪಟೇಲರ ಮಗ ನಮಗೆ ಅದನ್ನು ಬಳಸುವ ಬಗೆ ಹೇಗೆ ಎಂದೆಲ್ಲತೋರಿಸತೊದಗಿದರು. ’ಇಲ್ಲಿ ದೀಪ ಹಚ್ಚಿದರೆ ಬಗ್ಗನೆ ಉರೀತದೆ, ಗಾಜನ್ನು ಮೇಲಿಂದ ಇಳಿಬಿಡುವುದರಿಂದ ಗಾಳಿಬಂದರೂ ದೀಪಆರುವುದಿಲ್ಲ.’ ದೀಪ ಸಣ್ಣ ದೊಡ್ಡ ಮಾಡಲು ಇರುವ ಕಡ್ಡಿಯಥರದ್ದನ್ನು ತೋರಿಸಿದರು. ದೀಪ ಹಚ್ಚಿ ತೋರಿಸುವಂತೆ ಪಟೇಲರಅಪ್ಪಣೆ ಬಂತು. ಅತ್ಯಂತ ಶ್ರೀಮಂತರ ವಸ್ತುವಾದಲಾಟೀನುತಮ್ಮ ಮನೆಯಲ್ಲೂ ಇದೆ ಎಂಬುದೇ ಪಟೇಲರ ಹೆಗ್ಗಳಿಕೆಯಾಗಿತ್ತು. ಹೀಗಾಗಿ ತಮ್ಮ ಗತ್ತಿಗೆ ತಕ್ಕದಾಗಿ ಅದನ್ನು ಬೆಳಗಿಸಿ ತೋರಿಸಿ ಎಂದು ಆಜ್ಞೆಬಂತು.

ಆಗ ನಮಗೆ ಅದಕ್ಕೆ ಸೀಮೆ ಎಣ್ಣೆ ತುಂಬುವ ದ್ವಾರ ಹಾಗೂ ಪದ್ದತಿಯನ್ನು ತೋರಿಸಿದರು. ಇನ್ನೇನು ಬೆಂಕಿ ಹಚ್ಚಬೇಕು. ಅಷ್ಟರಲ್ಲಿಮಕ್ಕಳೆಲ್ಲ ದೂರ ಸರಿದೆವು. ಬೆಂಕಿ ಹಚ್ಚಿದಾಗ ಶುರುವಿನಲ್ಲಿ ಯಾವುದೋರೀತಿ ಟುಸ್ ಪುಸ್ ಎಂಬ ಶಬ್ಢ ಬರಬಹುದೆಂಬ ಹೆದರಿಕೆನಮ್ಮನ್ನಾವರಿಸಿತ್ತು. ಅಂತೂ ಹರಳೆಣ್ಣೆ ದೀಪದಿಂದ ಹಚ್ಚಿಸಿಕೊಂಡ ಇನ್ನೊಂದು ಬತ್ತಿಯ ಸಹಾಯಪಡೆದು ಲಾಟೀನನ್ನು ಹಚ್ಚಿದರು. ನಮಗೆ ಸಖತ್ ಆಶ್ಚರ್ಯ ! ಎಂತ ಅದ್ಬುತ ದೀಪ ಅದು ! ಅಲ್ಲಿಯವರೆಗೆ ಎಲ್ಲೂ ನೋಡಿರದ ವಿಚಿತ್ರ. ಅದಾದ ಕಾಲುಘಂಟೆಲಾಟೀನನ್ನು ನೋಡುತ್ತಲೇ ಇದ್ದೆವು. ನಮಗೂ ನಮ್ಮ ಮನೆಗಳಿಗೆ ಒಂದೊಂದು ಇದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂಬ ಆಸೆ. ಪಟೇಲರಮನೆಯಲ್ಲಿ ಮಾತ್ರ ಇದೆಯಲ್ಲ ಎಂಬ ಹೊಟ್ಟೆ ಕಿಚ್ಚು! ನಂತರವೂ ಅನೇಕದಿನ ಪಟೇಲರ ಮನೆಯ ಮಾರ್ಗವಾಗಿಹೋಗುತ್ತ ಬರುತ್ತ ಇದ್ದೆವು. ಕಣ್ಣಿಗೆ ಹಬ್ಬ ಉಂಟು ಮಾಡಿದ ಅದ್ಬುತ ದೀಪವನ್ನು ನೋಡಲು ಎಲ್ಲಾದರೂ ಅವಕಾಶ ಸಿಕ್ಕೀತೆಎಂಬುದೇ ಅದಕ್ಕೆ ಕಾರಣ.

ಹಲವು ದಿನಗಳ ಕಾಲ ಪಟೇಲರ ಮನೆಯಲ್ಲಿ ಜನವೋ ಜನ, ಪಟೇಲರಿಗೆ ತೋರಿಸಲು ಕೂತರೆ ಬೇರೆ ಕೆಲಸವೆಲ್ಲ ಹಾಳು, ತೋರಿಸದಿದ್ದರೆ ಪಟೇಲ ಅಂತಸ್ತಿಗೆ/ಘನತೆಗೆ ಏನಾಗಬೇಡ ! ಅಂತೂ ಜನರ ದಂಡು ದಂಡೇ ಸಾಲಾಗಿ ಈಗ ಚುನಾವಣೆಯಲ್ಲಿ ಮತಚಲಾಯಿಸಲು ಬರುವಂತೆ ಬರುತ್ತಿದ್ದರು. ಪಟೇಲರ ಮನೆಯವರು ಒಳಗೊಳಗೇ ಬೈದುಕೊಳ್ಳುತ್ತಿದ್ದರೂ ಪಟೇಲರು ಮಾತ್ರ ತಮ್ಮ ಪೊದೆಮೀಸೆ ತಿರುಗಿಸುತ್ತಲಾಟೀನಿನ ಮಹತ್ವವನ್ನು ಕೊಂಡಾಡುತ್ತಿದ್ದರು.


Tuesday, January 26, 2010

ಎನಿತು ಧನ್ಯ ಅಮ್ಮಾ...


ಎನಿತು ಧನ್ಯ ಅಮ್ಮಾ...

ಭುವಿಯಲ್ಲಿ ಅತೀ ಮೌಲ್ಯವುಳ್ಳದ್ದೆಂದರೆ ಅದು ‘ಅಮ್ಮ’. ಈ ‘ಅಮ್ಮ’ ಎಂಬ ಶಬ್ಧವೇ ಕರ್ಣಾನಂದಕರ. ಋಣತೀರಿಸಲಾಗದ ಒಂದೇ ಸ್ಥಾನ ಅಮ್ಮ. ತನ್ನ ಕಷ್ಟಗಳೆಲ್ಲವನ್ನೂ ಕಂದನ ಮುಖಾರವಿಂದದಲ್ಲಿ ಅರಳುವ ನಗೆಯಲ್ಲಿ ಕಳೆದು ಬಿಸುಟುವ ಅಮ್ಮ ನಮಗಾಗಿ ಪಟ್ಟ ಪಾದು ಸಣ್ಣದೇನಲ್ಲ.
||ಸರ್ವವಂದ್ಯೇಣ ಯತಿನಾ ಪ್ರಸೂರ್ಮಾತಾ ಹಿ ವಂದ್ಯತೆ||
- ಸರ್ವರಿಂದಲೂ ವಂದಿಸಲ್ಪಡುವ ಯತಿ[ಸನ್ಯಾಸಿ]ಯೂ
ಕೂಡ ತನ್ನ ತಾಯಿಗೆ ಮಾತ್ರ ನಮಸ್ಕರಿಸುತ್ತಾನೆ ಇದು ಸಂಸ್ಕೃತದ ಉಲ್ಲೆಖ. ಇದಕ್ಕೆಂತಲೇ ನಮ್ಮ ಆದಿಶಂಕರರು ಹೇಳಿದರು-

“ಕುಪುತ್ರೋ ಜಾಯೇತ ಕ್ವಚಿತಪಿ ಕುಮಾತಾ ನ ಭವತಿ”

--ಲೋಕದಲ್ಲಿ ಕೆಟ್ಟ ಮಕ್ಕಳು ಹುಟ್ಟಬಹುದು, ಆದರೆ ಕೆಟ್ಟ ತಾಯಿ ಇರುವುದಿಲ್ಲ. ಪಶು-ಪಕ್ಷಿಗಳಲ್ಲಿ ಕೂಡ ಈ ಮಾತೃತ್ವವನ್ನು ನಾವು ಕಾಣಬಹುದು. ತಾನು ಉಪವಾಸ ಇದ್ದರೂ ತನ್ನ ಕಂದಮ್ಮ ಚೆನ್ನಾಗಿರಲಿ ಎಂಬುದು ಅಮ್ಮನ ಅಪೇಕ್ಷೆ.

ಗರ್ಭದಲ್ಲಿರುವಾಗಲೇ ಬಂದ ಈ ಸಂಬಂಧ ಹೊಕ್ಕುಳಬಳ್ಳಿ ಕತ್ತರಿಸಿದ ಮಾತ್ರಕ್ಕೆ ಕಡಿಯಲಾರದ ಋಣಾನುಬಂಧ. ಹುಟ್ಟು, ಶೈಶವ,ಬಾಲ್ಯ,ಯೌವ್ವನ,ವಾರ್ಧಕ್ಯ ಹೀಗೇ ಪ್ರತೀ ಹಂತದಲ್ಲಿ ಪ್ರಜ್ಞಾಪೂರ್ವಕವಾಗಿ ನಮ್ಮ ಏಳ್ಗೆ ಬಯಸಿ,ತನ್ನ ಬೇಕು-ಬೇಡಗಳನ್ನು ಬದಿಗೊತ್ತಿ,ನಮಗಾಗಿ ಹಲವು ಮಹೋನ್ನತ ಕನಸುಗಳನ್ನು ಹೊಸೆಯುತ್ತ ನಮ್ಮ ನೆನಪಲ್ಲೇ ಜೀವನ ಸವೆಸುವ ಆ ಜೀವ ಭಗವಂತನ ವಿಶಿಷ್ಟ ಸೃಷ್ಟಿ. ಇಂತಹ ಅಮ್ಮನಿಗೊಂದು ನಮನ ಸಲ್ಲಿಸುವ ಪ್ರಯತ್ನ ನನ್ನೀ ಕಾವ್ಯರೂಪದಲ್ಲಿ ಕಟ್ಟಿಕೊಡುತ್ತಿದ್ದೇನೆ.


ಎನಿತು ಧನ್ಯ ಅಮ್ಮಾ...

ಎನಿತು ಧನ್ಯ ಅಮ್ಮಾ ನಿನ್ನ
ಮಡಿಲೊಳ್ ಜನಿಸುತ
ಘನತೆವೆತ್ತ ಮೂರ್ತಿನಿನ್ನ ಋಣವ ಸ್ಮರಿಸುತ

ನವಮಾಸದ ಅನುದಿನದೊಳು ಹಲವು ಹಂಬಲ
ಪವಡಿಸೆ ನಿನ್ನುದರದೊಳಗೆ ಇಟ್ಟೆ ಬೆಂಬಲ.

ಶಿಶುವು ನಾನು ಹಸಿವು ನನಗೆ ಕೊಸರಿ ಕೂಗಿದೆ
ನಿಶೆಯು ಹಗಲು ನಿದ್ದೆ ತೊರೆದು ಅಶನ ನೀಡಿದೆ

ಅಂಬೆಗಾಲನಿಕ್ಕುವಾಗ ಇಂಬುನೀಡುತ
ಕಂಬ ದಿಣ್ಣೆ ಏರು ಇಳಿತ ತುಂಬ ಹೆದರುತ

‘ಊಟಬೇಡ ಆಟಬೇಕು’ ಕಾಟ ನೀಗುತ
ಕೋಟಿಮೈಲ ತಂಗದಿರನ ಕೋಟೆ ತೋರುತ

ಬಾಲ್ಯದಾಟ ರೊಚ್ಚೆ ರಂಪ ತಿದ್ದಿ ತೀಡುತ
ವ್ಯಾಳ್ಯ ಮರೆತು ಚಂಡು ಬುಗುರಿ ಆಟ ನೋಡುತ

ಸುಖವ ಕಂಡೆ ನನ್ನ ನಗೆಯೊಳ್ ದುಃಖವ ಮರೆಯುತ
ಮುಖದ ತುಂಬ ಮುತ್ತನಿಟ್ಟು ಲಲ್ಲೆಗರೆಯುತ

ಬೆಳೆದೆನಮ್ಮ ಸ್ವಾರ್ಥಿಜನುಮ ನಿನ್ನ ತೊರೆಯುತ
ಕಳೆದು ಹೋಗುತಿರಲು ಬದುಕು ಯಾರು ಶಾಶ್ವತ?

ಹರಸಿ ನನ್ನ ಏಳ್ಗೆ ಬಯಸಿ ಕನಸು ಕಾಣುತ
ಭರಿಸಲಾರೆ ಋಣವ ಬದುಕು ಪೂರ್ವನಿಗದಿತ

Monday, January 25, 2010

ವಿಜಯೋತ್ಸವ


ವಿಜಯೋತ್ಸವ

ವಿಜಯೋತ್ಸವ ಇದುವೆ ವಿಜಯೋತ್ಸವ
ಜಗದ ಜನತೆ ನೆನೆದು ನೋಡೆ ಗಣರಾಜ್ಯೋತ್ಸವ

ವಿವಿಧ ಧರ್ಮ ಮತಗಳು ಸವಿಧ ನೀತಿ ಪಥಗಳು
ತ್ರಿವಿಧ ದಾಸೋಹ ನಡೆಪ ಸಂತ ಮಹಂತರುಗಳು
ಭವದ ದೇಶ ಮೆರೆಸಲು ಬರದ ಬವಣೆ ತಣಿಸಲು
ಕವಿದ ಮೋಡ ಸರಿಸಲು ಭಾರತವನು ಬೆಳಗಲು

ವಿಜ್ಞಾನದ ನಡೆಗಳು ತಂತ್ರಜ್ಞಾನ ಪಡೆಗಳು
ಸುಜ್ಞಾನದ ದೀಪವಾಗಿ ಹಲವು ಮಾಧ್ಯಮಗಳು
ಅಜ್ಞಾನವ ಕಳೆಯಲು ಅನ್ಯಾಯವ ತಡೆಯಲು
ಪ್ರಜ್ಞಾನವ ವಿಸ್ತರಿಸಿ ಭಾರತವನು ಬೆಳಗಲು

ಹಲವು ರಾಜ್ಯಂಗಳು ಕೆಲವು ಪ್ರಾಂತಂಗಳು
ಹಲವು ವೇಷಭೂಷಣ ಕೆಲವು ನೀತಿದರ್ಪಣ
ಒಲವಿನಿಂದ ಕೂಡಿದ ಹಲವು ಭಾಷೆನಮ್ಮದು
ಗೆಲುವನೆಮಗೆ ನೀಡಲು ಭಾರತವನು ಬೆಳಗಲು

ಅರಸು ವಂದಿ-ಮಾಗಧರು ಹರಸುತಾಳಿ ಅಳಿದರು
ಬೆರೆಸಿ ಹಾಲು-ಜೇನು ನಮ್ಮ ಸಾಹಿತಿಗಳು ಸುರಿದರು
ಒರೆಸೆ ಕಣ್ಣನೀರ ಹನಿಯ ಸೋದರಿಯರು ಬರುವರು
ಹರಿಸಲೆಮ್ಮನೆಲ್ಲರು ಭಾರತವನು ಬೆಳಗಲು

ಕಲೆಯನಾಡು ಭಾರತ ಕರುಣೆ ನಮಗೆ ಕರಗತ
ಮಲೆಯನಾಡು ಭಾರತ ದಯೆಯು ನಮ್ಮ ರಕುತ
ಬಲಿದನಾಡು ಭಾರತ ಅನುಕಂಪವ ಬೀರುತ
ಒಲಿದನಾಡು ಭಾರತ ವಿಶ್ವಪ್ರೇಮ ಮೆರೆಯುತ

ಜೈ ಹಿಂದ್ ಜೈ ಹಿಂದ್

ಜೈ ಹಿಂದ್
ಜೈ ಹಿಂದ್ ಜೈ ಹಿಂದ್



Sunday, January 24, 2010

ರೇಣುಕಾಚಾರ್ಯರ ಅಖಂಡ ಕೃಷಿ‌ಅಧ್ಯಯನ !!


‘ಸೀಡಿ’ ಎಂಬ ಬಟ್ಟೆ ಹಾವು
ರೇಣುಕಾಚಾರ್ಯರ ಅಖಂಡ ಕೃಷಿ‌ಅಧ್ಯಯನ
[ಸಂಪೂರ್ಣ ರಾಮಾಯಣ ಎಂಬಂತೆ]


ನಾವು ಬಂದೇವ ನಾವು ಬಂದೇವ
ನಾವು ಬಂದೇವ ಭಿನ್ನಮತ ತೋರುದಕ್ಕ
ಮತ್ತೆ ತಿಂದು-ಕುಡ್ದು ನುಂಗಿ ತೇಗೋದಕ್ಕ
ಗೀಯ ಗೀಯ ಗಾಗೀಯ ಗೀಯ ಹಾ ಹಾ ಹಾ ಹಾ ಹಾ......

ಹೈದ್ರಾಬಾದಿನಾಗ ರಿಸಾರ್ಟು ಯಾಕಂತ ?
ಹೂಂ... ಹೇಳಪಾ....... ಕೃಷಿ‌ಅಧ್ಯಯನಕ್ಕಂತ
ಸಿವಾ ಕೃಷಿ‌ಅಧ್ಯಯನಕ್ಕಂತಾ ತಾ ತಾತಾತಾ..ಗೀಯ ಗೀಯ..

ನರ್ಸ ಜಯಲಕ್ಷ್ಮಿಗೆ ಏನಪಾ ಆತಂತ....?
ಪ್ರೇಮಾಮಾಡ್ಯಾರಂತ..ಏನೆಲ್ಲಾ ಮಾಡ್ಯಾರಂತ...
ಯಾರಂತಾ.....? ರೇಣುಕಾಚಾರ್ಯರಂತ ನಮ್ಮ
ರೇಣುಕಾಚಾರ್ಯರಂತಾ ತಾ ತಾತಾತಾ..ಗೀಯ ಗೀಯ..

ಹೊನ್ನಾಳಿಯಾಗೆಲ್ಲ ‘ಉದ್ಧಾರ’ಮಾಡ್ತಾರಂತ....
ಯಾರಂತ....?.ನಮ್ಮ ರೇಣುಕಾಚಾರ್ಯರಂತ...
ಯಾಕಪ್ಪಾ ಸಿವಾ.?.ಮುಂದೆ ಮುಖ್ಮಂತ್ರಿ ಅಗ್ಬೇಕಂತ..
ಮುಖ್ಮಂತ್ರಿ ಅಗ್ಬೇಕಂತ..ತಾ ತಾತಾತಾ..ಗೀಯ ಗೀಯ..

ಯಡ್ಯೂರಪ್ಪರ ಸರ್ಕಾರ್ದಾಗೆ ಬಡ್ಯೂರಪ್ಪರೆ
ಜಾಸ್ತಿ‌ಆಗ್ಯಾರಂತ..ಯಾಕಂತ..... ?
ಆ ದಾರಿ ಕಂಡಾರಂತ.. ಎಲ್ಲಾರ್ಗೆ ಮಂತ್ರಿಗಿರಿ ಬೇಕಂತ..
ಮಂತ್ರಿಗಿರಿ ಬೇಕಂತ.. ತಾ ತಾತಾತಾ..ಗೀಯ ಗೀಯ..

ಸರ್ಕಾರ್ದಾಗಾಗಾಗ ಬಟ್ಟೆ ಹಾವು ಬಿಟ್ಟಾರಂತ..
‘ಸೀಡಿ ಮಡ್ಗ್ಯಾರಂತ’... ಯಾಕಪ್ಪಾ..ಹಾಂಗಂದ್ರೆ ಏನಾತು.?.
ಏ.. ಎಂತೆಂಥಾ ಮನುಷ್ಯರೆಲ್ಲಾ ಗಡಗಡಾ ಅಂತಾರಂತ
‘ಕೆಲ್ಸಾ’ ಆಗುತಂತ..!. ‘ಹಾವುಬಿಟ್ರೆ’…..
‘ಕೆಲ್ಸಾ’ ಆಗುತಂತ ತಾ ತಾತಾತಾ..ಗೀಯ ಗೀಯ..

ನಮ್ ಮುಖ್ಮಂತ್ರಿ ಸಾಹೇಬ್ರು ಬಡವಾಗಿ ಹೋಗ್ಯಾರಂತ..
ಯಾಕಂತಪ್ಪಾ.....?. ಸುಸ್ತಾಗಿ ಬುಟ್ಟಾರಂತ....
ಕುಣ್ದೂ ಕುಣ್ದೂ ಸುಸ್ತಾಗಿ ಬುಟ್ಟಾರಂತ....ಯಾಕಂತ...?
ಸೋಬಕ್ಕನ್ನ ಇಳ್ಸೂಂದ್ರಂತ ಇಳ್ಸದ್ರಂತ...ಬಳ್ಗಾರ್ ಬ್ಯಾಡಾಂದ್ರಂತ
ಕಳ್ಸದ್ರಂತ.. ಅವ್ರನ್ನೂ ಕಳ್ಸದ್ರಂತಾ ತಾತಾತಾ..ಗೀಯ ಗೀಯ..

ಅಂಗೈಕೊಟ್ನಲ್ಲಪ್ಪ ಸಿವಾ..ಮುಂಗೈನೂ ಕೇಳ್ತಾಕುಂತ್ರಲ್ಲ
ಯಾಕಪಾ... ಏನಾತು..?.ಹಿತ್ಲಬಾಗ್ಲಿಂದ ಬಂದಾರಂತ..
‘ಮಂತ್ರಿಪಟ್ಟಾ ಕೊಡು’ಅಂತ..ಮುಂದೇನಾತು...?
ಕೊಟ್ರಂತಲ್ಲಪ್ಪಾ ನಮ್ ಸಿವಾ...ಹೊಟ್ಟೇ‌ಉರಿದುಹೋತ
ಹೊಟ್ಟೇ‌ಉರಿದುಹೋತ ತಾತಾತಾ..ಗೀಯ ಗೀಯ..

ಮೀಡಿಯಾದಾಗ್ ಕೂತ್ಗಂಡು ನಾನಾಥರ ಹೇಳ್ಯಾರಂತ
“ಕೃಷಿ‌ಅಧ್ಯಯನ”ಕ್ಕೋಗಿದ್ರಂತ...ಮತ್ತೆ ಬೇರೇನು ಇಲ್ವಂತ..
‘ಎಲ್ಲಾ ಒಟ್ಟಾಗೇ’ ಇದಾರಂತ.. ‘ಬಿಕ್ಕಟ್ಟೆಲ್ಲ ಸುಳ್ಳಂತ'
ಸಲ್ಪ ‘ಯಾಯಾಮ’ಮಾಡದ್ರಂತ..ಸುಮ್ಕೇ ಇದ್ಬುಟ್ಟು ಬಂದ್ರಂತ...
ಉದ್ಧಾರ ಮಾಡ್ತಾರಂತ ರಾಜ್ಯ ಉದ್ಧಾರ
ಮಾಡ್ತಾರಂತಾ ತಾ ಗೀಯ ಗೀಯ !
---------

Saturday, January 23, 2010

ಅತಿ ಸಣ್ಣ ಕಥೆಗಳು


ಅತಿ ಸಣ್ಣ ಕಥೆಗಳು

ಅವಳು ಅಪ್ರತಿಮ ಸುಂದರಿ. ಆಗಾಗ ದಿನಸಿ ಕೊಳ್ಳಲು ಬರುವಳು. ಬೇಕಾದ ಸಾಮಾನಿನ ಚೀಟಿ ತರುತ್ತಿದ್ದಳು. ದುಡ್ಡುಕೊಟ್ಟು ತೆಗೆದುಕೊಂಡು ಹೋಗುತ್ತಿದ್ದಳು,ಮಾತೇ ಅಡುತ್ತಿರಲಿಲ್ಲ. ಶೆಟ್ಟರ ಮಗನಿಗೆ ಒಳಗೊಳಗೇ ಅಂಥಾ ಪ್ರೀತಿ, ಬಿಟ್ಟಿರಲಾರದ ಬಯಕೆ.ಅಂಗಡಿಯನ್ನಾದರೂ ಬಿಟ್ಟೇನು ಅವಳನ್ನು ಬಿಡೆ-ಮದುವೆಯಾದರೆ ಅವಳನ್ನೇ ಎಂಬ ತುಡಿತ.ಅಂದು ಬಂದಿದ್ದಳು-ಚಿಕ್ಕಮ್ಮನೊಡನೆ, ಅವಳೊಡನೆಯೂ ಮಾತಾಡುತ್ತಿರಲಿಲ್ಲ, ಎರ್ಡು ನಿಮಿಷಗಳ ಬಳಿಕ ಸನ್ನೆ ಮಾಡಿದಳು. ಶೆಟ್ಟರ ಮಗನಿಗೆ ಅರ್ಥವಾದಾಕ್ಷಣ ಕುಸಿದು ಹೋದ.

-----------

ಅವನೂ ಅವಳೂ ಅಲ್ಲೇ ಕೆಲಸಮಾಡುತ್ತಿದ್ದರು. ಎಂದೂ ಪರಸ್ಪರ ಮಾತಾಡಿರಲಿಲ್ಲ. ಕಣ್ಣಲ್ಲೇ ಮಾತನಾಡುತ್ತಿದ್ದರು. ದಿನಗಳು ಸರಿದುಹೋದವು. ನಾಲ್ಕಾರುದಿನ ಆಕೆ ಬಂದಿರಲಿಲ್ಲ. ಅವನಿಗೆ ಆತಂಕ. ಆದರೆ ಯಾರಲ್ಲಿಯೂ ಹೇಳಿಕೊಳ್ಳಲಾರ. ಮತ್ತೆ ಬಂದಳು- ಆಮಂತ್ರಣ ತಂದಿದ್ದಳು, " ಬನ್ನಿ,ನನ್ನ ಮದುವೆಗೆ ಫೆಬ್ರುವರಿ ೧೪ ರಂದು " .

-----------

ಡಾಕ್ಟರು ಮೊದಲು ಏನೂ ಹೇಳಿರಲಿಲ್ಲ, ಮಾಮೂಲಿ ಸಿಸೇರಿಯನ್ ಆಗಿರೋದ್ರಿಂದ ಆತ ಜಾಸ್ತಿ ಕೇಳಿರಲೂ ಇಲ್ಲ. ಗಡಿಬಿಡಿಯಲ್ಲಿ ಆತನ ಹೆಂಡ್ತಿಗೆ ಆಪರೇಶನ್ ನಡೆದೇ ಹೋಯಿತು.ಇನ್ನೇನು ಬಿಡುಗಡೆಮಾಡಿ ಕಳಿಸಬೇಕು.ಬಿಲ್ಲು ಕೊಟ್ಟರು, ಆತ ಹೇಳಿದ "ಬಿಡಿ ಡಾಕ್ಟ್ರೇ ನಂಗೊಂಥರಾ ಎದೆಯಲ್ಲಿ ಏನೋ ಆಗ್ತಾ ಇದೆ, ನಾನೂ ಇಲ್ಲೇ ಎಡ್ಮಿಟ್ ಆಗ್ತೀನಿ"

-----------

ಮುಂದಿನವಾರ ಸಂಕ್ರಾಂತಿ. ಅವರದ್ದು ಕೂಲಿ ಬದುಕು. ಚಿಕ್ಕ ಮಕ್ಕಳು, ಬೇಡುತ್ತವೆ: ಎಳ್ಳು-ಬೆಲ್ಲದ ಜೊತೆ ಸಿಹಿ ತಿಂಡಿ ಮಾಡಲು ಲೆಕ್ಕಹಾಕಿಕೊಂಡರು. ಅದಕ್ಕೆ ತಕ್ಕದಾಗಿ ಹಣಹೊಂದಿಸಿದರು.ಹಬ್ಬ ಬಂದೇಬಿಟ್ಟಿತು, ಅಂಗಡಿಗೆ ಹೋದಾಗ ಶೆಟ್ಟರು ಹೇಳಿದರು "ಸಕ್ರೆ ನಿಮ್ಕೈಗೆ ಸಿಗಲ್ಲ ಬಿಡಿ"

------------

ಆತ ವ್ಯಕ್ತಿಶಃ ತುಂಬಾ ಒಳ್ಳೆಯವನು. ಕಾರು,ಮನೆಯನ್ನೆಲ್ಲ ಸಾಲದಲ್ಲಿ ಕೊಂಡುಕೊಂಡಾಗಿತ್ತು. ಆಗಷ್ಟೇ ಮದುವೆಯಾಗಿತ್ತು ಬೇರೆ. ’ಸಾಫ್ಟ್ ವೇರ್ ಎಂಜಿನೀಯರ್’ ಎಂದು ಹುಡುಗಿ ಕೊಟ್ಟಿದ್ದರು. ಹಲವರನ್ನು ಕೆಲಸದಿಂದ ತೆಗೆದಿದ್ದರು;ಕೆಲಸದಲ್ಲಿ ತಪ್ಪಿರದಿದ್ದರೂ. ಒಂದಾವರ್ತಿ ಎಲ್ಲ ಮುಗಿಯಿತು. ತನಗೆ "ಗುಡ್ ಪರ್ಫಾರ್ಮರ್" ಎಂಬ ಸರ್ಟಿಫಿಕೇಟ್ ಕೊಟ್ಟಿದ್ದರು. ತನಗಂತೂ ತೊಂದರೆಯಿಲ್ಲ ಎಂದುಕೊಂಡಿದ್ದರೂ ಆ ದಿನ ಬಂದೇ ಬಿಟ್ಟಿತು. ಕೆಲವುದಿನಗಳ ನಂತರ ಪೇಪರ್ನಲ್ಲಿ ಬಂದಿತ್ತು "ಕಾಣೆಯಾಗಿದ್ದಾರೆ".

-------------

ಝಣಝಣ ಕಾಂಚಾಣ



ಝಣಝಣ ಕಾಂಚಾಣ




ಝಣ ಝಣ ಝಣಝಣ ಕಾಂಚಾಣ
ಕಿಂಕಿಣಿ ವಡ್ಯಾಣ |
ಝಣ ಝಣ ಝಣಝಣ ಕಾಂಚಾಣ

ಹದಿನಾಲ್ಕು ಲೋಕದೊಳು ನಿನ್ನ
ಹೊಗಳುವರೋ ರನ್ನ |
ನಿಧಿಯಿರಲು ನೀನೇ ಬಲುಚೆನ್ನ

ಹಲವರಿಗೆ ನೆಂಟನು ನೀನಣ್ಣ
ಹಣವಿರೆ ತಿಮ್ಮಣ್ಣ !
ಹಣವಿರದಿರೆ ನೀನೇ ತಿಪ್ಪಣ್ಣ !

ಘನಕಾರ್ಯಕೆ ಅತಿಥಿಗಳು ತಾವು
ಬೆಂಬಿಡರೀ ಜನವು |
ಧನಶಂಕರಿ ಹರಿಸಿರಲು ಒಲವು

ತಿರುಪತಿಯಲಿ ದರುಶನವು ತಮಗೆ
ಬೇಕಷ್ಟು ಘಳಿಗೆ !
ಗರಿನೋಟು ನಗಣಿತವೆನಿಸಿದಗೆ

ವೈದ್ಯರಾಜ ಬರುವರು ತಮ್ಮನೆಗೆ
ತಾವಿರುವ ಎಡೆಗೆ |
ವೇದ್ಯವಿಪ್ಪ ಸಂಪತ್ತಿರುವರೆಗೆ


ರಾಜಕೀಯ ಸ್ಥಾನಕೆಶುಭಮಸ್ತು
ಪಕ್ಷದಲೀ ಒತ್ತು |
ಚಲಿಸಿ ತಾವು ಹೇಳಿರೆಶ್ರೀರಸ್ತು

ಮಾಧ್ಯಮದಲಿ ತಮದೇ ಆರ್ಭಟವು
ಸಾಕಷ್ಟು ದಿನವು |
ಆದ್ಯತೆಯಲಿ ಕಳಿಸಿರೆಸಂಪದವು

ಜನಮನ್ನಣೆ ಮಾನ ಸನ್ಮಾನ
ಕಾಸಿರುವಾವರೆಗೆ |
ಮನದನ್ನೆಗೆ ದಕ್ಕೀತು ಬಹುಮಾನ

ಜನಸಾಗರ ಹರಿಸಿರೆ ಮೆರವಣಿಗೆ
ನೀಹೋದಾ ಹೊತ್ತು |
ನುಡಿಸಾವಿರ’-ಪತ್ರಿಕೆ ಬರವಣಿಗೆ
-----

Wednesday, January 20, 2010

ತೋರಿಸೇ ಮಾಧವನಾ......


ತೋರಿಸೇ ಮಾಧವನಾ.......

ಮುದ್ದು ಕೃಷ್ಣನ ಮುಖಾರವಿಂದದ ನೆನಪು ಯಾರಿಗೆ ಮುದನೀಡುವುದಿಲ್ಲ? ಬಾಲ್ಯದಲ್ಲಿ-ಶೈಶವಾವಸ್ಥೆಯಲ್ಲಿ ಎಲ್ಲಾ ಕಂದಮ್ಮಗಳನ್ನೂ ಹೋಲಿಸುವುದು ಕೃಷ್ಣನಿಗೆ ಮಾತ್ರ! ಅದರಲ್ಲಂತೂ ಕಿಲಾಡಿಗಾಗಿ ಪ್ರಸಿದ್ಧರಾದವರು ಇಬ್ಬರೇ-ಒಬ್ಬಾತ ಕೃಷ್ಣ[ಕಿಲಾಡಿ ಕಿಟ್ಟ] ಮತ್ತೊಬ್ಬಾತ ಹನುಮಂತ [ಕಿಲಾಡಿ ಹನುಮ] ‘ಯೇ ಕಿಲಾಡಿ ಕಾ ಮಾಮ್ಲಾ ಹೈ’

ನೊಂದ ರಾಧೆ ತನ್ನ ತುಂಟ ಕೃಷ್ಣನನ್ನು ಅವನ ತುಂಟಾಟದ ವೈಭವ, ವೈಖರಿಯೊಂದಿಗೆ ತುಸುಕೋಪದಿಂದ, ಅತಿ ಪ್ರೀತಿಯಿಂದ [ಒಂಥರಾ ಪ್ರೀತಿ, ಒಂಥರಾ ಕೋಪ ಅಂತಾರಲ್ಲ ಹಾಗೇ] ಬಣ್ಣಿಸಿ ತನ್ನ ಸಖಿಗೆ ಆತನನ್ನು ಹುಡುಕಿಕೊಂಡು ಬರಲು ಹೇಳುತ್ತಾಳೆ. ಕೃಷ್ಣ ಎಂದರೆ ಅನೇಕದರಲ್ಲಿ ಏಕ-ಏಕದರಲ್ಲಿ ಅನೇಕ ತತ್ವವನ್ನು ತೋರಿಸಿದ ಅತಿಮಾನುಷ ವ್ಯಕ್ತಿ, ಹೀಗೆ ಜೊತೆಗೆ ಕಂಡೂ ಕಾಣಿಸದ-ಕಾಣಿಸದೆಯೂ ಕಾಣುವ ಈ ತುಂಟಾಟ [ಈ ನನ್ನ ಕವನದಲ್ಲಿ] ರಾಧೆಗೆ ಬೇಸರಮೂಡಿಸುತ್ತದೆ.

ಮಹಾಭಾರತದ ಈ ಪಾತ್ರ: ಗೆಳೆಯನಾಗಿ, ನೆಂಟನಾಗಿ, ಹಿತೈಷಿಯಾಗಿ, ಸಂಧಾನಕಾರನಾಗಿ, ಆಪದ್ಬಾಂಧವನಾಗಿ, ದುಷ್ಟ ಶಕ್ತಿನಿರ್ಮೂಲಕನಾಗಿ, ವಿಶ್ವಕ್ಕೆ ಮನುಜ ಮತವನ್ನೂ, ವಿಶ್ವ ಪಥವನ್ನೂ ಬೋಧಿಸಿ ವಿರಾಟ್ ಸ್ವರೂಪನಾಗುತ್ತಾನೆ; ವಿಶ್ವವಂದ್ಯನಾಗುತ್ತಾನೆ, ‘ಜಗದ್ಗುರು’ವಾಗುತ್ತಾನೆ. ಎಲ್ಲಿಯವರೆಗೆ ಜಗದಲ್ಲಿ ಚಿಕ್ಕಮಕ್ಕಳಿರುತ್ತಾರೋ ಅಲ್ಲಿಯವರೆಗೆ ನಮ್ಮ ‘ತುಂಟಗುರು’ವಿನ ನೆನಪು ಹಸಿರಾಗಿರುತ್ತದೆ; ಹಸಿ ಹಸಿಯಾಗಿರುತ್ತದೆ. ಇಂಥ ‘ತುಂಟಗುರು’ವಿನ ತಂಟೆಯನ್ನು, ‘ಅವನು ನಮ್ಮವ’ ಎಂದು ಬಾಚಿ ತಬ್ಬಿಕೊಳುವ ಹಪಹಪಿಕೆಯನ್ನು ನಿಮ್ಮ ಮುಂದೆ ನನ್ನ ಶಬ್ಧಗಳಲ್ಲಿ ಇಡುವ ಪ್ರಯತ್ನಮಾಡಿದ್ದೇನೆ............

ತೋರಿಸೇ ಮಾಧವನಾ.......ಕೇಳೆಲೆ ಸಖೀ
ತೋರಿಸೇ ಮಾಧವನಾ.......

ಗೋಪಕನ್ನಿಕೆಯರು ಗೋಪಾಲನಕಂಡು
ನೂಪುರಕಟ್ಟಿ ತಾವ್ ನೋಂಪಿಹಾಡಿದರು
ಛಾಪು ಒತ್ತುತ ತನ್ನ ಕಾಪೀ ರಾಗದ ಕೊಳಲ
ಆಪರಿ ನುಡಿಸುತ ನೇಪಥ್ಯ ಸೇರಿದ.......||೧||

ಪರಿಜನ ಪುರಜನ ಹರಿಜನರೆಲ್ಲರು
ಸರಸರ ನಡೆವರೆ ತಡೆದಾಲೈಪರು
ಮರಕತ ಮಾಣಿಕ್ಯ ವೈಡೂರ್ಯಬೇಡದೆ
ಬಿರುಕಿನ ಬಿದಿರಲೆ ಮೋಡಿಯ ಮಾಡಿದ....||೨||

ಮೂರುಜಾವದ ವಿರಹ ನೂರು ಜನ್ಮದ ಥರ
ನಾರೀಹೃದಯದ ಗೋಳು ನೀರೆ ಬಲ್ಲೆಯ ಹೇಳು?
ಖಾರವಾಗಿದೆ ಮನ.. ನೆನೆದು ಮೂರ್ಖತನ
ಮಾರನ ಶರದಬ್ಬರ ಸಾರಿಬರುತಿದೆ...........||೩||

ಮೊಸರು-ಬೆಣ್ಣೆಯ ಕದ್ದು ಹೆಸರು ಕೆಡಿಸಿಕೊಂಡ
ಕೆಸರೊಳಗಾಡುತ ಹಾವನು ತುಳಿದಾತ
ಕಸಿವಿಸಿಗೊಂಡಿಹ ತಾಯಿಗೆ ಬಾಯಲಿ
ನಸುನಗುತಾ ಮೂಜಗವನೆ ತೋರಿದಾ...||೪||


ಆಗೊಮ್ಮೆ ಈಗೊಮ್ಮೆ ಮತ್ತೊಮ್ಮೆ ಮಗದೊಮ್ಮೆ
ಬೇಗಬರುವೆನೆಂದು ಸಾಗಿ ಹೋಗುವನೀತ
ಕೂಗಿಕರೆದರಿಲ್ಲ ಹೋಗಿ ಹುಡುಕಿದರಿಲ್ಲ
ನಾಗವೇಣಿಯೆ ತೋರೆ ಜಾಗಕೆಳೆದುತಾರೆ...||೫||

Tuesday, January 19, 2010

ಮಾಘಿಯ ಇಬ್ಬನಿ



ಮಾಘಿಯ ಇಬ್ಬನಿ

ನಸುಕಲೆ ಯಾಕೆ ಕೂಗಿದೆ ಹೇಳೇ
ಮಾಮರದಿ ಕೋಗಿಲೆ?
ಮಾಘಿಯ ಚಳಿಗೆ ಮರದಲಿ ಅವಿತು
ರಾಗವದು ಯಾಕೆಲೆ?

ಮುಂಜಾವದಲೇ ಸೂರ್ಯಬಂದಿರಲು
ಮೇಲೇಳದ ಆಲಸ್ಯ
ಮೈಯ್ಯನು ಮುರಿಯುತ ಹೊದಿಕೆಯ ಎಳೆದರೂ
ಹಾಸಿಗೆ ಬಿಡದು ರಹಸ್ಯ !

ಮಲೆನಾಡಿನ ಮೂಲೆಯೂರಿನ ಮನೆಯಲಿ
ಆಲೆಯ ಗಾಣದ ತಿರುವು
ಗಣಗಣಗುಡಿಸುತ ಗಾಣವ ಎಳೆಯುವ
ಹೋರಿಗಿದೆಯೆ ತುಸು ತೆರವು ?

ಬಿಸಿ ಬಿಸಿ ಕಾಫಿಯ ಲೋಟದೊಳಾಪರಿ
ಏನಡಗಿದೆ ಹೊಸ ಸತ್ವ ?
ಕಸುವು ತುಂಬಿ ಕೆಲಸಕೆ ಅಣಿಗೊಳಿಸುವ
ಬಿಂಕದ ಬಿಸಿರಸ ತತ್ವ !

ಬಚ್ಚಲು ಮನೆಯದು ನೆಚ್ಚಿನ ಆಸರೆ
ದಿನದೀ ಚೊಚ್ಚಲ ಘಳಿಗೆ
ಹುಚ್ಚು ಹರಿಯೆ ಹಂಡೆಯ ಬಿಸಿನೀರಿದೆ
ಬೆಚ್ಚನ ಆ ಒಲೆ ಬಳಿಗೆ


ತೊಟ್ಟಿಲ ಮಗುವಿನ ಕಿಲಕಿಲ ನಗುವಲಿ
ಕಳೆದು ಹೋಗುವ ಬಯಕೆ
ಬೆಟ್ಟವನೇರುತ ಎಳೆ-ಹೂ ಬಿಸಿಲಲಿ
ಮಿಳಿತು ಕುಣಿವ ಮೈ-ಮನಕೆ

ನಸುಗೆಂಪು ನಗೆಯ ಗುಲಾಬಿ ಮೇಲ್ಗಡೆ
ನವಿರಾದ ಮಂಜಹನಿಯು
ತುಸುನಾಚಿ ಮುಂದೆ ಸಾಗುವ ಇರುವೆಗೆ
ತಡಸೀತೆ ನೀರಹನಿಯು ?

ಗಡಬಡಿಸಿ ಓಡ್ವ ಗಡಿಯಾರದ ಮೇಷ್ಟ್ರಿಗೆ
ಯಾಕಿಲ್ಲವೊ ತುಸು ಕರುಣೆ ?
ಎಡಬಿಡದೆ ನಡೆದು ಈ ಜೀವಸಂಕುಲಕೆ
ಕಾಲದ ಒಗ್ಗರಣೆ !


Monday, January 18, 2010

ದಾಮೋದರ ಗುರೂಜಿ


ದಾಮೋದರ ಗುರೂಜಿ

ಹಿಂದೆ ಬೇಲೂರು-ಹಳೇಬೀಡು ದೇವಸ್ಥಾನಗಳನ್ನೆಲ್ಲ ಕೆತ್ತಿ ಕಟ್ಟಿದ್ದು ಜಕಣಾಚಾರಿ ಎಂಬುದು ಹಲವರಿಗೆ ವಿದಿತವಷ್ಟೆ ? ಈ ಸಾಲಿನಲ್ಲಿಮಾನಸಿಕವಾಗಿ’ ನಿಲ್ಲುವವರು ನಮ್ಮ ದಾಮೋದರ ಗುರೂಜಿ!

“ದಾಮೇನ ಉದರಂ ಬದ್ಧಃ ಇತಿ ದಾಮೋದರಃ” ಎಂದುಕೊಳ್ಳುತ್ತ ತಮ್ಮ ಲಂಬೋದರವನ್ನು ನೀಟಾಗಿ ನೀವಿಕೊಳ್ಳುತ್ತನಗೆಯಾಡುವುದು ಬಲು ಆಕರ್ಷಕ. ಹದವಾದ ಹುರಿಮೀಸೆ, ಹಿಂದಕ್ಕೆ ಬಾಚಿ ಹರಡಿದ ತಲೆಗೂದಲು, ಗರಿಗರಿ ಜುಬ್ಬ-ಪೈಜಾಮು, ಹೆಗಲಮೇಲೊಂದು ಶಾಲು, ಕೊರಳಲ್ಲಿ ಒಂದು ನವರತ್ನ ಹಾರ, ಕೈಯ್ಯಲ್ಲೊಂದು ಬ್ಲಾಕ್ ಬೆರ್ರಿ ಮೊಬೈಲು -ಇದು ನಮ್ಮಗುರೂಜಿಯ ಭೌತಿಕ ಸ್ವರೂಪ.

ಹಿನ್ನೆಲೆ [ಯಾರಿಗೂ ಹೇಳತಕ್ಕದ್ದಲ್ಲ; ನಿಮ್ಮಲ್ಲೇ ಇರಲಿ]-ಪೂರ್ವಾಶ್ರಮ
________________________________________
ರಿಪ್ಪನ್ಪೇಟೆಯಲ್ಲಿ ಸಣ್ಣದೊಂದು ಬೀಡಿ ಅಂಗಡಿ ಇಟ್ಟು ಗಿರಾಕಿ ಇಲ್ಲದೇ ಲಾಸು ಹೊಡೆದಿದ್ದ ದಾಮು ಟರ್ನಿಂಗ್ ಪಾಯಿಂಟ್ಗಾಗಿಕಾದಿದ್ದ. ಕಂಡ ಕಂಡ ದೇವರಿಗೆ ಹರಕೆ ಹೊತ್ತಿದ್ದೇ ಹೊತ್ತಿದ್ದು;ಹೇಗೋ ಏನೋ ದೇವರು ಕೃಪೆ ತೋರೇ ಬಿಟ್ಟ. ಕ್ಲಾಸ್ ಮೇಟ್ ಆಗಿದ್ದಸುರೇಶ O2 tv channel ನಲ್ಲಿ ಹೊಸ ಕಾರ್ಯಕ್ರಮ ನೀಡಲು ತಡಕಾಡುತ್ತಿದ್ದ. ಅನಿರೀಕ್ಷಿತವಾಗಿ ದೀಪಾವಳಿಗೆ ಊರಿಗೆ ಬಂದವಶಿವಮೊಗ್ಗದ ಅದ್ಯಾವುದೋ ಬೀದಿಯಲ್ಲಿ ದಾಮು ಎದುರಿಗೆ ಪ್ರತ್ಯಕ್ಷನಾದ. ಪರಸ್ಪರ ಲೋಕಾಭಿರಾಮ ಆದಮೇಲೆಒಳಒಪ್ಪಂದವಾಯ್ತು. ದಾಮು ‘ದಾಮೋದರ ಗುರೂಜಿ’ಎಂಬ ನಾಮಾಭಿದೇಯವನ್ನು ಪಡೆದು ಬೆಂಗಳೂರಿನಚೋಳೂರ್ಪಾಳ್ಯದಲ್ಲಿ ಸಣ್ಣರೂಮ್ನಲ್ಲಿ ಸೆಟ್ಲ್ ಆದರು!
“ ಬನ್ನಿ ವೀಕ್ಷಕರೇ, ನೀವು ಈ ದಿನ ಆಧ್ಯಾತ್ಮಿಕವಾಗಿ ಹಲವು ವರ್ಷಗಳಕಾಲ ಸಾಧನೆಮಾಡಿ ಸಿದ್ಧಿಪಡೆದ, ಆಸ್ಟ್ರಾಲಜಿ ಹಾಗೂವಾಸ್ತುಶಾಸ್ತ್ರಗಳಲ್ಲಿ ಪ್ರಾವೀಣ್ಯತೆಗಳಿಸಿರುವ ಬಹಳ ಅಪರೂಪದ ವ್ಯಕ್ತಿಯನ್ನು ಭೇಟಿಮಾಡಲಿದ್ದೀರಿ. ” --O2 ಬಿತ್ತರಿಸಿತು.

“ ನಮಸ್ಕಾರ ಗುರೂಜಿ, ತಮ್ಮ ಬಗ್ಗೆ ಬಹಳ ಕೇಳಿದ್ದೇನೆ, ನಾನು ಸರೋಜಮ್ಮಾ ಅಂತ ಹಾಸನದಿಂದ ”

“ ನಮಸ್ಕಾರ,ಹೇಳಿ ಯಾವ ವಿಷಯದ ಸಲುವಾಗಿ ಕಾಲ್ ಮಾಡಿದ್ದೀರಿ ?”
“ ನನ್ನ ಮಗನ ಬಗ್ಗೆ ಗುರೂಜಿ, ಆತನಿಗೆ ಎಕ್ಸಿಡೆಂಟ್ ಆಗಿತ್ತು,ಆಸ್ಪತ್ರೆಯ
ಲ್ಲಿ ...............................”
“ಏನೂ ಹೆದರುವ ಅವಶ್ಯಕತೆ ಇಲ್ಲಮ್ಮಾ, ಆತ ಬೇಗ ಗುಣಮುಖನಾಗುತ್ತಾನೆ.”
“ ಗುರೂಜಿ, ಅವನು ತೀರಿಕೊಂಡು 22 ದಿನಗಳಾದವು,ಅವನ ಆತ್ಮಕ್ಕೆ ಸದ್ಗತಿ ಸಿಗುತ್ತಾ ಅಂತ? ”
“ ವೀಕ್ಷಕರೆ ಕ್ಷಮಿಸಿ, ಈ ಕರೆ ಕಟ್ಟಾಗಿದೆ,ನಮ್ಮ ಮುಂದಿನ ಕಾಲರ್ ಯಾರು ಅಂತ ನೋಡೋಣ”-[ಸಂದರ್ಶಕ]
“ನಮಸ್ಕಾರ,ನಾನು ಸುಬ್ಬರಾವ್ ಅಂತ, ಇತ್ತೀಚೆಗೆ recession ಬಂದಾಗಿನಿಂದ ನಮ್ಮ factory ಲಾಸ್ನಲ್ಲಿ ನಡೀತಾ ಇದೆ ”
“ ನಿಮ್ಮ factory building ಯಾವ ದಿಕ್ಕಿಗೆ ಮುಖವಾಗಿದೆ?”
“ ಪೂರ್ವಕ್ಕೆ, ಎದುರಿಗೆ ರಸ್ತೆ ಇದೆ ”

“ ನೀವು ನಿಮ್ಮ factory ಗಿಲನ್ನು ಪಶ್ಚಿಮಕ್ಕೆ ಮಾಡಿ, ಈಶಾನ್ಯ ದಿಕ್ಕಿನಲ್ಲಿ ಒಂದು ವಾಟರ್ ಟ್ಯಾಂಕ್ ಕಟ್ಟಿಸಿ ಎಲ್ಲಾಸರಿಹೋಗುತ್ತೆ,ನಮಸ್ಕಾರ”
ಸಂದರ್ಶಕ-“ ಗುರೂಜಿ ತಮ್ಮ ಬಗ್ಗೆ ತಾವು ಹೇಳುತ್ತಾ ಇದ್ದೀರಿ, ಹೋದಜನ್ಮದಲ್ಲಿ ತಾವು ಜಕಣಾಚಾರಿಯಾಗಿದ್ದೂ, ಕೈಗಳನ್ನುಕಳೆದುಕೊಂಡಿದ್ದೂ ಎಲ್ಲ ಬಹಳ ಆಶ್ಚರ್ಯವಾಗ್ತಾಇದೆ. ಬಹುಶಃ ತಾವು ಜಕಣಾಚಾರಿ ಅಗಿದ್ದುದರಿಂದಲೇ ಈಗ ವಾಸ್ತು ಬಗ್ಗೆಕರಾರುವಾಕ್ಕಾಗಿ ಹೇಳುತ್ತಿದೀರಿ ಅನಿಸುತ್ತದೆ. ”
“ ಹೌದು ಹೌದು, ಅದ್ರಿಂದ್ಲೇ ಇದೆಲ್ಲಾ ಸಾಧ್ಯಾನೇ ಹೊರ್ತು ಇಲ್ಲಾಂದ್ರೆ ಹೇಗೆ? ”
[ಗುರೂಜಿ -ಸ್ವಗತ: TV ಯಲ್ಲಿ ಯಾರ್ಯಾರೋ ಎನೇನೋ ಪ್ರಶ್ನೆ ಕೇಳುತ್ತಾರಲ್ಲಪ್ಪಾ, ಏನು ಮಾಡ್ಲಿ? ಮೆಜೆಸ್ಟಿಕ್ಫ಼ೂಟ್ಪಾತ್ನಲ್ಲಿ ೫೦% ಡಿಸ್ಕೌಂಟ್ನಲ್ಲಿ 5 ಪುಸ್ತಕ ತಂದೆ-ಜ್ಯೋತಿಷ್ಯದ ಮೇಲೆ 3 , ವಾಸ್ತು ಶಾಸ್ತ್ರದಮೇಲೆ 2. ಓದಕ್ಕೂ ಬಿಡಲ್ಲಈ ಜನ. ಅಕಸ್ಮಾತ್ ನಾನು ಹೇಳಿದ್ದು ತಪ್ಪಾಗಿ ನಾಳೆದಿನ ಕಲ್ಲುಹೊಡೆದರೆ ಏನಪ್ಪ ದೇವ್ರೆ ಗತಿ? ಕೆಲವರಿಗೆ ತಪ್ಪಿಸಿಕೊಳ್ಳುವಸಲುವಾಗಿ 6 ತಿಂಗಳು ಅಪಾಯಿಂಟ್ಮೆಂಟ್ ಕೊಡ್ಲೇ ಇಲ್ಲ,ಹಲವರಿಗೆ 1 ವರ್ಷ. ‘ಗುರೂಜಿ ತುಂಬಾ ಬೀಜಿ’ ಅಂದುಕೊಂಡಿರುತ್ತಾರೆ. ಇಲ್ಲಿ ನೋಡಿದ್ರೆ ಕೆಲವೊಮ್ಮೆ ಖರ್ಚಿಗೇ ಸಾಲದು.]
ಅಷ್ಟರಲ್ಲಿ ರಾಜಕಾರಣಿಯೊಬ್ಬರಿಗೆ ಭವಿಷ್ಯಹೇಳಿದ್ದು ಸುಳ್ಳಾಗಿದ್ದು ಅವರು ಚುನಾವಣೆಯಲ್ಲಿ ಸೋತಿದ್ದಾರಾಗಿಯೂ, ಅವರ ಕಡೆಶಿಳ್ಳೇರಾಮ’ಎಂಬ ರೌಡಿಯು ಗುರೂಜಿಗೆ ‘ಗೂಸಾ’ತಿನ್ನಿಸಲು ಬಂದಿದ್ದಾಗಿಯೂ sms ಬಂತು. ಕೂತಲ್ಲೇ ಗುರೂಜಿಗೆ ಬಟ್ಟೆ ಎಲ್ಲಾಒದ್ದೆಯಾಗಿಹೋಯ್ತು. ಹಾಗೂ ಹೀಗೂ 30 ನಿಮಿಷ ಕಳೆದು ಗುರೂಜಿ ತಮ್ಮ ಸ್ವಕ್ಷೆತ್ರ ರಿಪ್ಪನ್ ಪೇಟೆಗೆ ಸೀದಾ ಓಡಿಹೋಗಿತಲೆಮರೆಸಿಕೊಂಡರು. ಅಪಾಯಿಂಟ್ಮೆಂಟ್ಮೇಲೆ ಅವರನ್ನು ಭೇಟಿಮಾಡಲು ಬಂದವರು “ ಗುರೂಜಿಗೆ ಆರೋಗ್ಯ ಸರಿಯಿ,15 ದಿವಸದ ಮೇಲೆ ಬನ್ನಿ “ ಎಂಬ ಉತ್ತರ ತೆಗೆದುಕೊಂಡು ವಾಪಾಸ್ಸಾದರು.


ಗುರೂಜಿ ವಾರತಡೆದು ಗೆಳೆಯ ಸುರೆಶ್ಗೆ ಫೋನ್ ಮಾಡಿದರು-“ಸುರೆಶ, ಏನೋ ತುಂಬಾ ಅಧೈರ್ಯವಾಗ್ಬುಟ್ಟಿದೆ ಕಣಪ್ಪಾ, ಬೆಂಗ್ಳೂರಿಗೆ ಬರಕ್ಕೇ ಬೇಜಾರು”

“ ಯಾಕೆ ಏನಾಯ್ತು ದಾಮು? ಮತ್ತೆ ಬ್ಯುಸಿನೆಸ್ ಡೌನಾ?”
“ಇಲ್ಲ ಕಣೋ, ಆ EX-MLA ಕಡೆ ಶಿಳ್ಳೇರಾಮ ಬಹಳ ತೊಂದ್ರೆ ಕೊಡ್ತಾ ಇದಾನೆ. ಬಹುಶಃ ಆತ ಹಿಂದೆ ಮಹಾಭಾರತದಲ್ಲಿಘಟೋದ್ಗಜ ಆಗಿದ್ದಿರಬೇಕು”

“ನಿನ್ನಂಥಾ ಗೆಳೆಯರನ್ನ ಹಾಗೇ ಬಿಡೋಕಾಗುತ್ತಾ? ನೋದ್ತೀನಿ ಬಿಡು, ಬೇರೆ ಏನಾದ್ರೂ ದಾರಿ ಮಾಡೋಣ”

ಸುರೆಶನ ಮುಖಾಂತರ, ಮರುಚುನಾವಣೆಗೆ ನಿಂತಿದ್ದ EX-MLA ಮುನಿವೆಂಕಟಪ್ಪನ ಸಂಬಂಧ ಕುದುರಿತು.ಯಾವ ಅದೃಷ್ಟವೋ, ಕಾಕತಾಳೀಯವೋ ಮುನಿವೆಂಕಟಪ್ಪಗೆ ಹೇಳಿದ ಭವಿಷ್ಯ ನಿಜವಾಗಿ ಆತ್ ಗೆದ್ದು ಮಂತ್ರಿಯಾದರು. ಎಲ್ಲಾ ರಾಜಕಾರಣಿಗಳಿಗೆ ಇದುಸುದ್ದಿಯಾಯ್ತು. ಮತ್ತೆ ಗುರೂಜಿ ಆಫೀಸ್ ನಲ್ಲಿ ನೂಕುನುಗ್ಗಲು !
ಅಲ್ಲಿಂದಾಚೆ ದಾಮೋದರ ಗುರೂಜಿ ದುಡ್ಡನ್ನು ಗೋಣಿಚೀಲದಲ್ಲೇ ತುಂಬಬೇಕಾಯ್ತು. new aiport ರಸ್ತೆಯಲ್ಲಿ ಆಫ಼ೀಸು, ಓಡಾಡಲು BMW ಕಾರು, ಕೆಲಸಕ್ಕೆ ಇರುವ ಎಲ್ಲಾ ಹಾಂಡ್ಸ್ ಗೆ ಸೇರಿ ಹತ್ತಾರು ಕಾರುಗಳು. ಗುರೂಜಿ ಆಶ್ರಮ ಕಟ್ಟಿದ್ದಾರೆ- 32 ಎಕರೆಗಳಷ್ಟು ವಿಶಾಲವಾದ ಜಾಗದಲ್ಲಿ-ಬಿಡದಿಯ ಹತ್ತಿರದಲ್ಲಿ.ಸದ್ಯದಲ್ಲೇ ಮುನಿವೆಂಕಟಪ್ಪರ ಕೃಪೆಯಿಂದ BMTC ಬಸ್ಸುಆಶ್ರಮಕ್ಕೆ ಹೋಗಿಬರುತ್ತದೆ. ಆಶ್ರಮದ ಆನೆಯನ್ನು ಅದು ಸೊಂಡಿಲಲ್ಲಾಡಿಸುತ್ತ ನಾಣ್ಯ ಸ್ವೀಕರಿಸಿಯೇ ಆಶೀರ್ವದಿಸುವುದುನೋಡಲು ಮನೋಹರ. ಅಶ್ರಮದಲ್ಲಿ ವಿದೇಶೀ ಭಕ್ತರು ಬಂದರೆ ಇರಲಿ ಎಂದು ಸ್ವಿಮ್ಮಿಂಗ್ ಪೂಲ್ ಮತ್ತು ಎಲ್ಲಾ 5 ಸ್ಟಾರ್ವ್ಯವಸ್ಥೆಯುಳ್ಳ ರೂಮ್ ಗಳನ್ನು ಕಟ್ಟಿಸಿದ್ದಾರೆ. ಗುರೂಜಿಗೆ ಯಾರೋ ಭಕ್ತರು ಇತ್ತೀಚೆಗೆ ಬಂಗಾರದ ಪೀಠವನ್ನು ಕೊಡುಗೆ ಯಾಗಿಕೊಟ್ಟಿದ್ದಾರೆ. ಇಷ್ಟೆಲ್ಲಾ ಇದ್ದೂ ನಮ್ಮ ದಾಮೋದರ ಗುರೂಜಿ ವೆರೀ ಸಿಂಪಲ್ಲು.

ಇತ್ತೀಚೆಗೆ ಗುರೂಜಿ ಪುನರ್ಜನ್ಮದ ಕುರಿತು ತಿಳಿಸಿಕೊಡಲು ತಯಾರಿ ನಡೆಸುತ್ತಿದ್ದಾರೆ. ನಿಮ್ಮ ಅನುಕೂಲಕ್ಕಾಗಿ ಮತ್ತು ನೀವು ಅಗತ್ಯಸಂಪರ್ಕಿಸಬೇಕಾದಾಗ ಇರಲಿ ಎಂದು ಇಲ್ಲಿ ಕೊಡುತ್ತಿದ್ದೇನೆ- ಗುರೂಜಿ ಯವರನ್ನು ಸಂಪರ್ಕಿಸಬಹುದಾದ ಮೊಬೈಲ್ : 98450__
_89 ‌‌ ‌‌‌‌ ‌‍‌‌ ‌‌