ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ
Showing posts with label ವಿಷಯ ಸಂಚಾಲಿತ ಕವನಗಳು[theme based poems]. Show all posts
Showing posts with label ವಿಷಯ ಸಂಚಾಲಿತ ಕವನಗಳು[theme based poems]. Show all posts

Wednesday, May 22, 2013

ಕೇಳೆ ಸಖೀ ಕಮಲಮುಖೀ

ಚಿತ್ರ ಋಣ : ಅಂತರ್ಜಾಲ 
ಕೇಳೆ ಸಖೀ ಕಮಲಮುಖೀ
                                                                                 -(C) ವಿ.ಆರ್.ಭಟ್, ಹಡಿನಬಾಳ

[ಕವಿಕಲ್ಪನೆಯ ಭಾವಸ್ಫುರಣೆಯಲ್ಲಿ ಆದಿ-ಅಂತ್ಯ ಪ್ರಾಸಗಳ ಜುಗಲ್-ಬಂಧಿಯನ್ನು ಕಾವ್ಯರೂಪಕ್ಕಿಳಿಸುವಲ್ಲಿ, ಕಸುವನ್ನು ಒರೆಗೆ ಹಿಡಿದು ಬರೆದ ಇನ್ನೊಂದು ಕವನ ಇದು. ಛಂದಸ್ಸು-ವ್ಯಾಕರಣ-ಅಂಗಶುದ್ಧಿಯನ್ನು ಅನುಸರಿಸುತ್ತಾ, ಸಾಂಪ್ರದಾಯಿಕ-ಪ್ರಾಗೈತಿಹಾಸಿಕ ವಿಷಯವನ್ನೇ ಅದೆಷ್ಟು ಸಲ ವಿಭಿನ್ನ ಪದಪುಂಜಗಳಿಂದ ಬರೆಯಬಹುದು ಎಂಬ ದಿಸೆಯಲ್ಲಿ ಪ್ರಯತ್ನಿಸಿದ, ಪ್ರಯತ್ನಿಸುತ್ತಲೇ ಇರುವ ಹಲವು ಹೆಜ್ಜೆಗಳಲ್ಲಿ ಇದೊಂದು ಹೆಜ್ಜೆ; ಈ ಹೆಜ್ಜೆ ಓದುಗರ ಮನದಲ್ಲಿ ಗೆಜ್ಜೆತಟ್ಟಿದ ಸಪ್ಪಳವನ್ನು ಮೂಡಿಸಿದರೆ ಪ್ರಯತ್ನ ಸಾಫಲ್ಯ ಎಂಬ ಭಾವ ಕವಿಮನೆಯ-ಮನದ ಮೂಸೆಯಲ್ಲಿರುವಂಥದ್ದು.

ಗೋಕುಲದಲ್ಲಿ, ಗೊಲ್ಲನ ಅಗಲಿಕೆ ಗೋಪಿಕೆಯರಲ್ಲಿ ಯಾವ ಭಾವ ಕೆರಳಿಸಿತ್ತು ಎಂಬುದು ವಸ್ತುವಿಷಯ. ಕಮಲಮುಖಿಯೆನಿಪ ಸಖಿಯಲ್ಲಿ ಪ್ರತಿಯೊಬ್ಬ ಗೋಪಿಕೆಯದೂ ಇದೇ ಹೇಳಿಕೆ, ಇದೇ ಮಂಡನೆ: ಗೋಪಾಲ ತನ್ನವನು, ಗೋವಿಂದ ತನ್ನವನು ಎಂಬ ಹಪಹಪಿಕೆ. ಸಂಗದೊರೆತಾನಂತರ, ಅಕ್ಷರಶಃ, ಗೋಪಾಲನಿಲ್ಲದ ದಿನಗಳನ್ನು ಗೋಪಿಕೆಯರು ಬಯಸಲೇರ್ ಇಲ್ಲ! ಚಣಕಾಲ ಮಾಧವನಿಲ್ಲ ಎಂದರೆ ಆತ ಎಲ್ಲಿ ಹೋದ? ಯಾವಾಗ ಬರಬಹುದು?-ಎಂಬ ಚಿಂತೆ, ಆಲೋಚನೆ ಅವರನ್ನು ಕಾಡುತ್ತಿತ್ತು, ’ಗೋವಿಂದಕಲೆ’ಯನ್ನು ಸೃಜಿಸಿ ಚಾಣಾಕ್ಷನಾದ ಆ ಗೋವಳನ ಫ್ಲರ್ಟಿಂಗ್ ಅಷ್ಟರಮಟ್ಟಿಗೆ ವರ್ಕೌಟ್ ಆಗಿತ್ತು ಎಂದರ್ಥ !!

ಮಿತ್ರರೊಬ್ಬರು ನೆನಪಿಸಿದಂತೇ ಯಾರೇ ಬೇಕಾದರೂ ಅನೇಕ ಮದುವೆಗಳನ್ನು [ಕದ್ದು-ಮುಚ್ಚಾದರೂ]ಮಾಡಿಕೊಳ್ಳಬಹುದು, ಆದರೆ ಕೃಷ್ಣನಂತೇ ಕಿರುಬೆರಳಲ್ಲಿ ಗೋವರ್ಧನವನ್ನೆತ್ತಿ ನಿಲ್ಲಲು ಸಾಧ್ಯವಿಲ್ಲವಲ್ಲ. ತನ್ನ ಅನೇಕ ಚಾತುರ್ಯಗಳಿಂದ ಜಗದ ಮನವಗೆದ್ದ ಗುರು ಶ್ರೀಕೃಷ್ಣ, ವ್ಯಾಸ-ಗಣೇಶರ ಮೂಲಕ ಗೀತೆಯನ್ನು ಬೋಧಿಸಿ ಜಗದ್ಗುರುವಾಗಿದ್ದಾನೆ. ಏಕದಿಂದ ಅನೇಕ-ಅನೇಕದಿಂದ ಏಕ ಎಂಬ ತಥ್ಯವನ್ನು, ಸತ್ಯವನ್ನು ಆಡಿತೋರಿಸಿದ, ಮಾಡಿತೋರಿಸಿದ ಗೊಲ್ಲನ ಪ್ರೇಮ ಸಿಗುವುದಾದರೆ ಗೋಪಿಕೆಯರೇ ಏಕೆ ಜಗದ ಜನರೆಲ್ಲಾ ಹಾತೊರೆಯುತ್ತಿರಲಿಲ್ಲವೇ? ಗೋಪಿಕೆಯೋರ್ವಳ ಅಂತರಂಗ ತನ್ನ ಸಖಿಯಲ್ಲಿ ಬಹಿರಂಗಗೊಂಡ ಬಗೆಯನ್ನು ಕವನ ತಮಗೆ ತಿಳಿಸುತ್ತದೆ, ನಮಸ್ಕಾರ]


ಕೇಳೆ ಸಖೀ ಕಮಲಮುಖೀ ಅಂತರಂಗವ |
ಬಾಳಕಾವ್ಯಕೆನಗೆ ಅವನೆ ಕವಿಯು ಪುಂಗವ ||ಪ||

ಗಾಳಿಯಲ್ಲಿ ಕೊಳಲಗಾನ ದೂರದಿಂದ ತೇಲಿಬಿಟ್ಟು 
ಹಾಳೆ ಹಾಳೆಯಲ್ಲು ಪದವ ಗೀಚಿದಂಥವ |
ಗೀಳು ಹಿಡಿಸಿ ಸರಿದುಹೋದ ಗಾವುದಗಳ ದೂರಕಷ್ಟು
ಗೋಳುಹುಯ್ದುಕೊಳುವನೆಲ್ಲಿ? ನಾಚಿದಂಥವ ||೧||

ಪಾಳಿಯೇನೊ ಎಂಬರೀತಿ ಕೊಳದಬುಡದಿ ಮರದೊಳಿದ್ದು
ದಾಳಿಯಿಟ್ಟು ಬಟ್ಟೆಗಳನು ಕದ್ದುಕೊಂಡವ |
ನೀಳಗೂದಲನ್ನು ಎಳೆದು ನೋವುನೋಡಿ ಮಜವಮೆದ್ದು
ಗೂಳಿ ಗುಟುರಿದಂತೆ ನಟಿಸಿ ಮುದ್ದನುಂಡವ ||೨||

ಕಾಳಸರ್ಪನನ್ನು ತುಳಿದು ಯಮುನೆ ಮಡುವಿನೊಳಗೆ ಬಿದ್ದು
ಕೇಳಿಯಾಡಿ ಕಾಳಗದೊಳು ಒದ್ದುನಿಂತವ |
ತಾಳಲಾರದಂಥ ಮಳೆಗೆ ಗೋವರ್ಧನವೆತ್ತಿ ಖುದ್ದು
ಬೀಳು ಹರಿಸಿ-ಇಂದ್ರಮೊಗದಿ ಗೆದ್ದುನಿಂತವ ||೩||   

ತಾಳೆಲಾರೆನಮ್ಮ ವಿರಹ ಬಾಳೆ-ಬೇಕು ಗೊಲ್ಲ ಸನಿಹ 
ಧೂಳು ಕವಿದ ರತುನದಂತದಾಯ್ತು ಜೀವನ |
ನಾಳೆನಾವದೆಲ್ಲೊ ಹುಡುಕಿ ಮಾಧವನನು ಸೇರೆ ಪುನಃ
ತಾಳೆಹಿಡಿದು ಜಾಡುನೋಡು ಜನುಮ ಪಾವನ ||೪||

------೦------

Monday, September 24, 2012

ಬೇಕು ಕೃಷ್ಣಚಂದ್ರಮ

 ಚಿತ್ರಋಣ : ಅಂತರ್ಜಾಲ
ಬೇಕು ಕೃಷ್ಣಚಂದ್ರಮ 

ಬೇಕು ಬೇಕು ಬೇಕು ರಾಧೆ ಬೇಕು ಕೃಷ್ಣಚಂದ್ರಮ
ಸಾಕೆನ್ನಲು ಸಾಧ್ಯವಿಲ್ಲ ಲೋಕಕದುವೆ ಸಂಭ್ರಮ !
ನಾಕದಿಂದ ಭುವಿಗೆ ಬಂದು ಆ ಕರುಣಿಯು ರಥದಿ ನಿಂದು
ಚಾಕರಿಗಳ ಬಿಡಿಸಿ ಪೇಳ್ದ ಸಾಕಾರ ವಿಹಂಗಮ || ಪ ||

ಪೀಕುತಿರುವ ದುಷ್ಟಜನರ ನೂಕಿ ಪಾತಾಳದೆಡೆಗೆ
ದೇಖರೇಖಿ ನೋಡಿಕೊಳಲು ವಾಸುದೇವ ಸತತವೂ
ಬಾಕಿಯಿರುವ ಕಷ್ಟಗಳನು ನಾಕು ನಾಕು ಕೈಗಳಿಂದ
ಸೋಕಿಸುತ್ತ ಹರಿಸಿ ಹರಿಯು ಹರಣ ಹಸನುಗೊಳಿಸಲು  || ೧ ||

ತಾಕಿಸುತ್ತ ಬೆರಳ ತುದಿಯ ತಪ್ಪಿಸಿ ಅರಿ ಶರದ ಗುರಿಯ
ಚಾಕಚಕ್ಯತೆಯನು ಮೆರೆವ ಶ್ರೀ ಮುರಾರಿ ಮುದದೊಳು
ತೇಕಿದಣಿದು ಇಹವ ತೊರೆವ ಪೂತನಿಗಳ ಹಾಲುಕುಡಿಯೆ
ಪಾಖಂಡೀ ದಂಡು ನಡುಗೆ ಆ ಮಾಧವ ಭರದೊಳು || ೨ ||

ಪಾಕದಚ್ಚುಬೆಲ್ಲ ಉಂಡೆ ರಾಶಿರಾಶಿಯರಳ ಕಂಡೆ
ಸಾಕಷ್ಟಿದೆ ತಿನ್ನಗೊಡಲಖಂಡ ಭರತವರ್ಷದಿ
ಮೂಕ ಅರ್ಜಿ ಹಿಡಿದುಬಂದೆ ಯಾಕೆ ಬಾರನೆಂದುಕೊಂಡೆ
ಲೋಕನಾಯಕನಿಗೆ ಕಾದೆ ಬದುಕಿ ಬಹಳ ವರ್ಷದಿ || ೩ ||



Friday, July 1, 2011

ಅಣ್ಣಾ ಕೃಷ್ಣ ಏನು ಕೊಡಲಿ?


ಅಣ್ಣಾ ಕೃಷ್ಣ ಏನು ಕೊಡಲಿ?

ಎಲ್ಲರೂ ಉಂಡು ದ್ರೌಪದಿ ಪಾತ್ರೆ ತೊಳೆದು ಮಲಗಿದ ಮೇಲೆ ಆ ಅಪರಾಹ್ನ ಕೃಷ್ಣ ಬಂದ. ತಂಗೀ ಹಸಿವು ತಂಗೀ ಹಸಿವು ಎಂದ. ಮಾಡಿದ ಅಡುಗೆ ಮುಗಿದಿದ್ದ ಆ ವೇಳೆ ಅಷ್ಟು ಬೇಗ ಏನನ್ನು ಕೊಡಲಾದೀತು? ಅದೂ ಆ ಕಾಲಘಟ್ಟದಲ್ಲಿ ಮಾಡಿದ್ದನ್ನು ಹಾಗೇ ಇಡುವ ಪರಿಪಾಟವಿರಲಿಲ್ಲ. ಗೊಲ್ಲ ಸುಮ್ಮನೇ ಇರಲಿಲ್ಲ. ನೋಡು ಅಲ್ಲೆಲ್ಲೋ ಏನೋ ಇರಲೇ ಬೇಕು. ಏನೂ ಇರದೇ ಹೋಗದು ಎಂದ! ದ್ರೌಪದಿ ಹುಡುಕೇ ಹುಡುಕಿದಳು. ಏನೂ ಇರಲಿಲ್ಲ.

ಸ್ವತಃ ಕೃಷ್ಣ ತಂಗಿಗೆ ಹೇಳಿದ ಮಾತು ನಡೆಸಬೇಕಲ್ಲಾ ಆ ಕಾರಣದಿಂದ ಪ್ರತಿಯೊಂದೂ ಪಾತ್ರೆಯನ್ನು ತೆಗೆದು ನೋಡಿದ. ಅನ್ನದ ಪಾತ್ರೆಗೆ ಒಂದೇ ಅಗುಳು ಅಂಟಿಕೊಂಡಿತ್ತು. ಹಾಗಂತ ದ್ರೌಪದಿ ಗಲೀಜೇ ಎಂಬುದು ಪ್ರಶ್ನಾರ್ಹವಲ್ಲ! ಅದು ಕಪಟನಾಟಕ ಸೂತ್ರಧಾರಿ ಎಂದು ಖ್ಯಾತಿಗೊಳಗಾದ ಘನಶ್ಯಾಮನ ಒಂದು ಸೂತ್ರ. ಆತ ಅದನ್ನೇ ಎತ್ತಿ ತೋರುತ್ತಾ ತಿಂದು ’ಡರ್’ ಎಂದು ದೊಡ್ಡದಾಗಿ ತೇಗಿದ. ತೇಗಿದ ಸದ್ದಿಗೆ ಇಡೀ ಆ ಪ್ರದೇಶವೇ ಎಚ್ಚರಗೊಂಡಿತು! ಅದು ಸಂತೃಪ್ತ ಸ್ಥಿತಿ! ಭಕ್ತಿಯಿಂದ ತನ್ನನ್ನು ಕ್ಷಮಿಸು ಕೊಡಲು ತತ್ಕಾಲದಲ್ಲಿ ಅಡುಗೆ ಸಿದ್ಧವಿಲ್ಲಾ ಎಂಬ ಪಾಂಚಾಲಿಯ ಪ್ರಾರ್ಥನೆಗೆ ಪಾಂಚಜನ್ಯಧಾರಿ ತಲೆದೂಗಿದ. ಆ ಪ್ರಾರ್ಥನೆಯಲ್ಲಿನ ಅಳುಕು, ಭಕ್ತಿ, ಶ್ರದ್ಧೆ, ನೋವು, ತುಡಿತ, ಅಸಹಾಯಕತೆ ಎಲ್ಲವೂ ಆತನ ಗಮನಕ್ಕೆ ಬಂದಿದ್ದವು. ಯಾವುದನ್ನು ಆ ಹೊತ್ತಿಗೆ ಬಯಸಿ ಬಂದಿದ್ದನೋ ಅದು ಸಿಕ್ಕಿತ್ತು! ಅದೇ ಆತನ ಅಷ್ಟು ದೊಡ್ಡ ತೇಗಿಗೆ ಕಾರಣವಾಗಿತ್ತು.

ಅಳುಕು ಮನೋಸ್ಥಿತಿಯಲ್ಲಿ ದ್ರೌಪದಿ ಹೇಗೆ ನಡೆದಿರಬಹುದು ಎಂಬುದೇ ಈ ಹಾಡಿನ ಚಿತ್ರಣ:

ಅಣ್ಣಾ ಕೃಷ್ಣ ಏನು ಕೊಡಲಿ?
ಅಡುಗೆ ತೀರಿತಲ್ಲ
ನಿನ್ನಾಣೆಗೂ ನಿನ್ನ ಬರವು ನಿರೀಕ್ಷಿತವಲ್ಲ

ಎಲ್ಲಿ ಎಲ್ಲಿ ಸುತ್ತುತಾ ಬಂದೆ
ಯಾಕೆ ಇಷ್ಟು ತಡವಾಯ್ತು ?
ಗೊಲ್ಲ ಕೃಷ್ಣಗೇನು ಕೊಡಲಿ ತಗೋ ನೀರು ಬೆಲ್ಲ !

ಎಲ್ಲ ಉಂಡು ತೇಗಿ ತೂಗಿ
ಮಲಗಿ ನಿದ್ದೆ ಜಾರಿದರು
ಅಲ್ಲಿ ನೋಡು ಪಾತ್ರೆಪಗಡೆ ಡಬ್ಬ್ಹಾಕಿಹೆನಲ್ಲ

ಅನ್ನ ಬೇಳೆ ಸಾರು ಪಲ್ಯ
ಇನ್ನೂ ಇದೇ ಅನ್ನೋವಾಗ
ಅಣ್ಣ ಮುದ್ದು ಕೃಷ್ಣ ಇಲ್ಲಿಗೆ ನಿನ್ಯಾಕ್ ಬರಲಿಲ್ಲ?

ಹಸಿದ ಹೊಟ್ಟೆ ಹೊತ್ತುದ ನೋಡಿ
ಕುಸಿದು ಬೀಳುವಂತಾಗುತಿದೆ
ಒಸಗೆ ನಿನ್ನಲಣ್ಣ ನನ್ನ ಕ್ಷಮಿಸ ಬೇಕಲ್ಲಾ ?

Saturday, May 7, 2011

ರಾಧೆಯ ಹಾಡು

ರಾಧೆಯ ಹಾಡು

ಅತಿ ಪ್ರೇಮದಿಂದ ತುಸು ಕೋಪದಿಂದ ರಾಧೆ ತನ್ನ ಕೃಷ್ಣನನ್ನು ಕಾಣುವ ರೀತಿ ಹಲವು. ಕೃಷ್ಣ ಹಲವರ ಸ್ವತ್ತು- ಆತ ಜಗತ್ತಿಗೆ ಗುರು, ಯಾದವ ಕುಲತಿಲಕ, ಹಲವರಿಗೆ ಬೇಕಾದ ವ್ಯಕ್ತಿ, ಆದರೆ ತನ್ನ ಕೃಷ್ಣ ತನಗೂ ಒಂದು ಸ್ವಲ್ಪ ಸಮಯ ಮೀಸಲಿಡಲಿ ಎಂಬುದು ರಾಧೆಯ ಅಪೇಕ್ಷೆ. ರಾಧಾಮಾಧವ ಮಧುರ ವಿಲಾಸ ಎಂದಿಗೂ ಎಲ್ಲರಿಗೂ ಖುಷಿಕೊಡುವ ಸಂಗತಿ. ಮುರಲೀಲೋಳನಾದ ಆತ, ಗೋವಳನಾದ ಆತ, ಗೋಪಿಕಾ ಮನೋಹರನಾದ ಆತ ಎಷ್ಟೆಂದರೂ ರಾಧೇಶ್ಯಾಮ ! 'ಊರಿಗೆ ಅರಸನಾದರೂ ಮನೆಗೆ ಮಗ' ಎನ್ನುವಹಾಗೆ ಯಾರಿಗೆ ಏನೇ ಆದರೂ ರಾಧೆಗೆ ಆತ ಗಂಡ, ಪ್ರಿಯತಮ, ಬಾಳಸಂಗಾತಿ ಎಲ್ಲವೂ. ರಾಧೆ ಒಮ್ಮೆ ತಾನಾಗೆ ಕೃಷ್ಣನನ್ನು ನೆನೆದು ಸ್ವಗತದಲ್ಲಿ ಹಾಡಿಕೊಂಡಿದ್ದು ಹೀಗೆ :
[ಆದಿ-ಅಂತ್ಯ ಎರಡೂ ಪ್ರಾಸಗಳನ್ನು ಏಕಕಾಲಕ್ಕೆ ಬಳಸಿ ರಚಿಸಿದ ಕವಿತೆ 'ಶ್ರೀಕೃಷ್ಣಾರ್ಪಣಮಸ್ತು' ಎಂಬುದರೊಂದಿಗೆ ನಿಮ್ಮ ಆವಗಾಹನೆಗೆ ]

ಕದ್ದು ಹೊರಟೆಯಲ್ಲ ಹೃದಯ ಮುದ್ದು ಮಾಧವ
ಉದ್ದ ಸುಳ್ಳು ಹೇಳಲೇಕೆ ಪೆದ್ದು ಯಾದವ !
ನಿದ್ದೆಯಲ್ಲೂ ನಿನದೆ ನೆನೆಪು ರಾಧಾಧವ
ಇದ್ದು ಸುಖವದೇನು ಮರೆತು ಮುರಳೀಧವ ?

ಕದ್ದು ಬೆಣ್ಣೆ ತಿಂದು ಸರಸವಾಡಿ ನಿಂದವ
ಎದ್ದು ಹಾರಿ ಹಾವ ತುಳಿದು ಗೆದ್ದುಬಂದವ
ಶುದ್ಧ ಶುಂಠ ರಗಳೆಪೋರ ಜಿದ್ದು ಇರದವ
ಒದ್ದೆ ಮನದಿ ನಿನ್ನ ವೇಣು ತುಡಿತ ಮಾರ್ದವ !

ಗುದ್ದಿ ಕಂಸನನ್ನು ವಧಿಸಿ ನ್ಯಾಯ ಪೇಳ್ದವ
ತಿದ್ದುಕೊಳದ ಶಿಶುಪಾಲನ ಶೀಘ್ರ ತರಿದವ
ಸದ್ದಿಲ್ಲದೆ ಪೂತನಿಯ ಹಾಲು ಕುಡಿದವ !
ಬಿದ್ದ ಕೌರವನ ನೋಡಿ ನಕ್ಕು ನುಡಿದವ

ಸುದ್ದಿಯಿಲ್ಲದಂತೆ ನಡೆದದೆಲ್ಲೋ ಸಂದವ
ಉದ್ದ ಸೀರೆಯಿತ್ತು ಕಾಣದಂತೆ ಉಳಿದವ !
ಎದ್ದು ಪಾರ್ಥಗಲ್ಲಿ ಗೀತೆ ಬೋಧಿಸಿದವ
ಖುದ್ದು ಬಾರೋ ಕಾಣಲೊಮ್ಮೆ ಪ್ರೇಮಾಧವ

Thursday, December 9, 2010

ಹನುಮನ ಸ್ವಗತ


ಹನುಮನ ಸ್ವಗತ

[ಈ ಕಾವ್ಯ ರಾಮಾಂಜನೇಯ ಯುದ್ಧದ ಸನ್ನಿವೇಶಕ್ಕೆ ಸಂಬಂಧಿಸಿದ್ದು. ವಿವರಣೆ ಬೇಕಾದರೆ ಬಲಭಾಗದಲ್ಲಿರುವ ಮಾಲಿಕೆಗಳ ಪೈಕಿ ’ಪುರಾಣದಲ್ಲಿಯ ಪೇಚಿನ ಪ್ರಸಂಗಗಳು’ ಮಾಲಿಕೆಯಲ್ಲಿರುವ ’ರಾಮಾಂಜನೇಯ ಯುದ್ಧ’ ಕೃತಿಯನ್ನು ಓದುವುದು]


ರಾಘವನ ನೋಯಿಸಲು ಮನಬಾರದೆಂದೂ ನಿಜ
ಆಗಲೀ ಹನುಮ ರಕ್ಷೆಗೆ ಒಪ್ಪಿ ನಡೆದು !
ಭೋಗಬಯಸದ ನನ್ನ ರಣದೊಳಗೆ ಕೆಡವಿದರೆ
ಯೋಗವದು ರಾಮಪಾದದಲಿ ಸಾಯುವುದು

ಯಾಗಯಜ್ಞವನರಿಯೆ ಪದವೊಂದೇ ತಿಳಿದಿಹುದು
ಕೂಗಿ ಕರೆದರೆ ಓಡಿ ಬರುವ ಶ್ರೀರಾಮ
ಆಘಳಿಗೆಯಲೆ ಕಳೆವ ಇಹದ ನನ್ನೆಲ್ಲ ದುಃಖ
ರಾಗದಲಿ ಭಜಿಸುವೆನು ಜಯರಾಮರಾಮ

ಆಗದದು ಶಕುಂತನನು ಬಿಡಲು ಈ ಕ್ಷಣದಿ
ಆಗಲೇ ಕೊಟ್ಟೆ ವಚನವನು ಅಮ್ಮನಿಗೆ
ಸಾಗಿಬಂದಾತನನು ಕರುಣೆಯಲಿ ಪೊರೆಯದಿರೆ
ಹಾಗೊಮ್ಮೆ ಬದುಕೇನುಫಲವು ಭವದೊಳಗೆ ?

ಬೇಗವೇ ನಡೆದಂಥ ಕಥೆಯೆನಗೆ ತಿಳಿದಿಹರೆ
ಸಾಗಹಾಕುತಲಿದ್ದೆ ಆ ಶಕುಂತನನು
ಮಾಗಿನಿಂತಾಮನದಿ ಕೈಮುಗಿದು ಬೇಡಿದನು
ಮಾಗಿಮಲ್ಲಿಗೆಯಿರಿಸಿ ಜೀವದಾನವನು

ಈಗ ಬರುವನು ರಾಮಚಂದ್ರ ಈ ಜಾಗದಲಿ
ತೂಗಿ ಬಿಡುವನು ಚಾಪವೆಳೆಯುತ್ತ ಬಾಣ
ಹೇಗಾದರೂ ಪ್ರಭುವೆ ನನ್ನೊಡೆಯ ರಕ್ಷಿಪುದು
ಹೋಗದಂತಿರಲಿ ಶಕುಂತನಾ ಪ್ರಾಣ


Friday, October 29, 2010

ಭೀಷ್ಮ


ರಾಜಾರವಿವರ್ಮ ಕೃತ ಚಿತ್ರಗಳ ಕೃಪೆ : ಅಂತರ್ಜಾಲ

ಭೀಷ್ಮ


[ಮಹಾಭಾರತದಲ್ಲಿ ಅನೇಕ ಪಾತ್ರಗಳು ನಮ್ಮ ಮನವನ್ನು ಕಲಕುತ್ತವೆ. ಅಂತಹ ಒಂದು ಪಾತ್ರದ ಅಭಿವ್ಯಕ್ತಿ ನನ್ನ ಲೇಖನಿಯಲ್ಲಿ ನಿಮಗಾಗಿ ]



ಶಂತನು ಮಕ್ಕಳನ್ನು ಏಕೆ ನದಿಗೆ ಎಸೆದು ಸಾಯಿಸುತ್ತೀಯ ಎಂದು ಕೇಳಿದ್ದೇ ತಪ್ಪಾಗಿ ಗಂಗೆ ಮೂಲರೂಪಕ್ಕೆ ನಡೆದುಬಿಟ್ಟಳು. ದೇವವೃತ ಬೆಳೆದು ಆಗತಾನೇ ಹದಿಹರೆಯಕ್ಕೆ ಕಾಲಿಡುತ್ತಿದ್ದ. ಅಪ್ಪನ ನೋವಲ್ಲಿ ಆತನೇ ಅಪ್ಪನ ಆಪ್ತ ಬಂಧು. ಅಪ್ಪನನ್ನು ಬಿಟ್ಟು ಬೇರೆಯ ಜಗತ್ತೇ ಇಲ್ಲದ ಹುಡುಗನಾತ. ತಾಯಿ ಗಂಗೆ ಕೆಲವರುಷ ತನ್ನ ಜತೆಗಿದ್ದರೂ ಇರುವಷ್ಟು ದಿನ ಮಾತಾಪಿತೃಗಳಿಬ್ಬರಿಗೂ ಬಹಳ ಸಂತಸವನ್ನುಂಟುಮಾಡಿದ ಮಗುವಾತ. ತನ್ನ ತಂದೆ ಪರಾಶರ ಮಹರ್ಷಿಯ ಮಗನೆಂದೂ, ಯಮುನೆಯ ನಡುಗಡ್ಡೆಯಲ್ಲಿ ಹುಟ್ಟಿದವನೆಂದೂ ಆತ ಕೇಳಿತಿಳಿದಿದ್ದ. ತಂದೆಯ ರಾಜಸ ಲಕ್ಷಣಗಳು ಅವನನ್ನು ಬಹುವಾಗಿ ಆಕರ್ಷಿಸಿದ್ದವು. [ ಪಚ್ಮಣಿ ಎಂಬ ಈ ನಡುಗಡ್ಡೆ ಇಂದಿಗೂ ಯಮುನೆಯ ಪಶ್ಚಿಮ ಭಾಗದಲ್ಲಿ ನೋಡಸಿಗುತ್ತದೆ]ಇದೊಂದು ಕಥೆಯಾದರೆ ಕಾಲಾನಂತರದಲ್ಲಿ ಪರಾಶರ ಸುತ ಶಂತನು ಹಸ್ತಿನಾಪುರಕ್ಕೆ ಬಂದು ಗಂಗೆಯನ್ನು ವರಿಸಿದ್ದು ಇನ್ನೊಂದು ಕಥೆ.

ಗಂಗೆಯ ಮೋಹಪಾಶದಿಂದ ಹೊರಬರುತ್ತಿದ್ದ ವೇಳೆ ಶಂತನುವಿನ ಮನವ ಕದ್ದವಳು ಸತ್ಯವತಿ. ಬೆಸ್ತರ ಹುಡುಗಿ. ಆಕೆಯೆ ಹದವಾದ ಮೈಕಟ್ಟು ರೂಪಲಾವಣ್ಯಕ್ಕೆ ಮನಸೋತ ಶಂತನು ಹಲವಾರು ದಿನ ಹಾಗೇ ಕಳೆದ. ಆತನದು ಆಡಲಾರದ ಅನುಭವಿಸಲಾರದ ಸ್ಥಿತಿ! ಎಡೆಯಲ್ಲಿ ಬೆಳೆಯುತ್ತಿರುವ ತನ್ನ ಮತ್ತು ಗಂಗೆಯ ಪ್ರೀತಿಯ ಕುಡಿಯಿದೆ, ಆ ಕುಡಿ ಇನ್ನೂ ಹದಿಹರೆಯಕ್ಕೆ ಕಾಲಿಡುತ್ತಿದೆ. ಹೇಳಬೇಕೆಂದರೆ ಆ ಗಾಂಗೇಯನಿಗೆ ಈಗ ಹರೆಯದ ಹುಡುಗಿಯರ ಪ್ರೇಮಪಾಶದಲ್ಲಿ ಸಿಲುಕುವ ವಯಸ್ಸು. ಆದರೆ ತನಗೆ ಯಾಕೆ ಈ ರೀತಿ ಭಾವನೆ ಎಂಬುದನ್ನು ಆತ ಯೋಚಿಸಿಯೂ ತನ್ನ ಮನದ ಬಯಕೆಯನ್ನು ಹತ್ತಿಕ್ಕಲಾರದಾದ. ಶಂತನುವಿನ ಪ್ರೇಮಜ್ವರ ಉಲ್ಬಣಿಸುತ್ತಿರುವಾಗ ತಾಯಿಯಿಲ್ಲದ ತಬ್ಬಲಿ ಗಾಂಗೇಯ ನಡೆದುಬಂದ ಅಪ್ಪನಿದ್ದೆಡೆಗೆ, ಕೇಳಿದ ತಂದೆಯಲ್ಲಿ " ಅಪ್ಪಾ ನಿಮ್ಮ ಚಿಂತೆಗೆ ಕಾರಣವೇನು. ನಾನಿದ್ದೂ ನೀವು ಇಷ್ಟೆಲ್ಲಾ ಯಾರೂ ದಿಕ್ಕಿಲ್ಲದಂತೇ ಪರಿತಪಿಸುತ್ತಿರುವುದೇಕೆ? ನನ್ನಲ್ಲಿಯೂ ಹೇಳಬಾರದೇ ? " . ಮಗನ ಮಾತಿಗೆ ಮನಸೋತ ಶಂತನು ತನ್ನ ಮನದ ಬಯಕೆಯನ್ನು ತೋಡಿಕೊಂಡ. ಅರ್ಥೈಸಿಕೊಂಡ ಯುವಮುತ್ಸದ್ಧಿ ಗಾಂಗೇಯ ಬೆಸ್ತರ ಮುಖಂಡನ ಮನೆಯ ದಾರಿ ಹಿಡಿದು ನಡೆದ. ಅಲ್ಲಿ ಬೆಸ್ತರ ಮುಖಂಡ ದಾಶರಾಜನನ್ನು ಕಂಡು ತನ್ನ ತಂದೆಯ ಬಯಕೆಯನ್ನು ನಿವೇದಿಸಿದ. ಅಪ್ಪನಿಗಾಗಿ ಅಪ್ಪನ ಉಳಿವಿಗಾಗಿ ಮಗಳನ್ನು ಧಾರೆಯೆರೆದು ಕೊಡುವಂತೆ ಗಾಂಗೇಯ ಅಕ್ಷರಶಃ ಅಂಗಲಾಚಿದ! ಆದರೂ ಬೆಸ್ತನ ಮನಸ್ಸು ಏನನ್ನೋ ಎಣಿಸುತ್ತಿತ್ತು. ಕೊನೆಗೂ ಗಂಗೇಯ ಪಟ್ಟುಬಿಡದೇ ಕೇಳಿದ " ಏನಾಗಬೇಕೆಂಬುದನ್ನು ಹೇಳಿದರೆ ಅದನ್ನು ಪೂರೈಸಲೂ ನಾನು ಸಿದ್ಧನಾಗಬಹುದೋ ನೋಡುತ್ತೇನೆ ಹಾಗಾಗಿ ಏನಾಗಬೇಕೆಂದು ತಿಳಿಸಿ" ಎಂದಾಗ, ಬೆಸ್ತ ಕೇಳಿದ "ಶಂತನುವಿಗೆ ಸತ್ಯವತಿಯಲ್ಲಿ ಹುಟ್ಟಿದ ಮಕ್ಕಳಷ್ಟೇ ಮುಂದೆ ಆ ರಾಜ್ಯವನ್ನು ಆಳಲು ಅರ್ಹರಾಗಬೇಕು , ಮಿಕ್ಕುಳಿದ ಯಾರಿಗೂ ಆಡಳಿತದಲ್ಲಿ ಹಕ್ಕಿರಬಾರದು " --ಇಂತಹ ಸಂದಿಗ್ಧದಲ್ಲೂ ತನ್ನೋ ಮನೋಸ್ಥೈರ್ಯವನ್ನು ಕಳೆದುಕೊಳ್ಳದ ಗಾಂಗೇಯ ತಾನು ಆಜನ್ಮ ಬ್ರಹ್ಮಚಾರಿಯಾಗಿರುತ್ತೇನೆಂದೂ, ತನಗೆ ಸಿಂಹಾಸನದ ಉತ್ತಾರಾಧಿಕಾರತ್ವ ಬೇಡವೆಂದೂ ಪ್ರತಿಜ್ಞೆಮಾಡಿದ! ತಂದೆಯ ಪ್ರೇಮಕನ್ನಿಕೆಯನ್ನು ತಂದೆಗೆ ಮಗ ಮುಂದಾಗಿ ನಿಂತು ಸಂಬಂಧ ಕುದುರಿಸಲು, ತನ್ನ ಸ್ವಾರ್ಥ ತ್ಯಜಿಸಿ ಗೈದ ಪ್ರತಿಜ್ಞೆ ದೇವತೆಗಳಿಗೂ ಕೇಳಿಸಿತಂತೇ, " ಭಲೇ ಗಾಂಗೇಯ ಇದು ಭೀಷ್ಮ ಪ್ರತಿಜ್ಞೆಯೇ ಸರಿ ....ನೀನೀಗ ಭೀಷ್ಮ .......ನೀನೀಗ ಭೀಷ್ಮ " ಎಂದು ಅಶರೀರವಾಣಿ ಮೊಳಗಿ ಪುಷ್ಪವೃಷ್ಟಿಯಾಯಿತಂತೆ. ಅಂದಿನಿಂದ ದೇವವೃತ ಭೀಷ್ಮನಾದ.

ಅಂತೂ ತನ್ನ ಜೀವನವನ್ನೇ ಕಡೆಗಣಿಸಿ ತಂದೆಗೆ ಬೆಸ್ತರ ಕನ್ಯೆಯನ್ನು ವಿವಾಹಮಾಡಿಸಿದ ಅಪ್ರತಿಮ ಬಾಲ್ಯಸಾಹಸಿ ಭೀಷ್ಮ! ಮುಂದೆ ಕಾಲಾನಂತರದಲ್ಲಿ ತನ್ನ ಜೀವಿತವನ್ನು ಕೊಟ್ಟ ಮಾತಿಗೆ ತಪ್ಪದಂತೇ ನಡೆದ ಆಜನ್ಮ ಬ್ರಹ್ಮಚಾರಿ ಭೀಷ್ಮ. ತಂದೆಯ ಮರಣಾನಂತರ ತನ್ನ ತಂದೆಗೆ ಸತ್ಯವತಿಯಲ್ಲಿ ಜನಿಸಿದ ಚಿತ್ರವೀರ್ಯ ಮತ್ತು ವಿಚಿತ್ರವೀರ್ಯ ಎಂಬ ಮಕ್ಕಳನ್ನು ಸಿಂಹಾಸನದಲ್ಲಿ ಕೂರಿಸಿಕೊಂಡು ಅವರು ಬೆಳೆದು ದೊಡ್ಡವರಾಗುವವರೆಗೆ ರಾಜ್ಯಭಾರ ನಡೆಸಿಡೆಸಲು ಸತ್ಯವತಿಗೆ ಸಹಕರಿಸಿದ. ಮುಂದುವರಿದ ಭಾಗವೇ ಮಹಾಭಾರತಕ್ಕೆ ನಾಂದಿ ಎಂಬುದನ್ನು ಬೇರೆ ಹೇಳಬೇಕೆ ?

ಕಾಶೀರಾಜನ ಮಕ್ಕಳಾದ ಅಂಬೆ, ಅಂಬಿಕೆ ಮತ್ತು ಅಂಬಾಲಿಕೆಯರನ್ನು ತನ್ನ ಮಲತಮ್ಮ ವಿಚಿತ್ರವೀರ್ಯನಿಗೆ ಮದುವೆಮಾಡಲಾಗಿ ಅವರ ಸ್ವಯಂವರ ನಡೆಯುವ ಜಾಗದಿಂದ ಅಪಹರಿಸಿ ಕರೆತಂದ ಭೀಷ್ಮನಿಗೆ, ಅವರಲ್ಲಿ ಹಿರಿಯಳಾದ ಅಂಬೆ ತಾನು ಸುಬಲದೇಶದ ಸಾಲ್ವ ಮಹಾರಾಜನನ್ನು ಬಹಳ ಇಷ್ಟಪಟ್ಟುದಾಗಿಯೂ ತನ್ನನ್ನು ಕಳುಹಿಸಿಕೊಡಬೇಕೆಂದೂ ಕೇಳಿಕೊಳ್ಳುತ್ತಾಳೆ. ಆಗ ಭೀಷ್ಮ ಮರಳಿ ಆಕೆಯನ್ನು ಸಾಲ್ವನಲ್ಲಿಗೆ ಕಳುಹಿಸಿಕೊಟ್ಟರೂ ಬಹಳಕಾಲ ಇನ್ನೊಬ್ಬ ಗಂಡಸಿನ ಜತೆಗೆ ಉಳಿದ ಹೆಣ್ಣನ್ನು ಮದುಯಾಗುವುದು ತನಗಿಷ್ಟವಿಲ್ಲವೆಂದು ಆತ ತಿರಸ್ಕರಿಸುತ್ತಾನೆ. ಪುನಃ ಆಕೆ ದಾರಿಕಾಣದೇ ಭೀಷ್ಮನಲ್ಲಿಗೆ ಬಂದು ಮಾಡಿದ ತಪ್ಪಿಗೆ ತನ್ನನ್ನು ಮದುವೆಯಾಗ್ಲೇ ಬೇಕೆಂದು ಹಠಹಿಡಿಯುತ್ತಾಳೆ. ಮಾಡಿದ ಪ್ರತಿಜ್ಞೆಯನ್ನು ಭಂಗಗೊಳಿಸಲು ಒಪ್ಪದ ಭೀಷ್ಮನಿಗೆ ತಾನು ಸತ್ತು ಇನ್ನೊಂದು ಜನ್ಮವೆತ್ತಿ ಶಿಖಂಡಿಯಾಗಿ ನಿನ್ನನ್ನು ಸಾಯಿಸುತ್ತೇನೆಂದು ಶಪಿಸುತ್ತಾಳೆ ಮತ್ತು ಆ ಕ್ಷಣವೇ ತುಸುದೂರ ತೆರಳಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.

ಸಾಯುವುದಕ್ಕೂ ಮುನ್ನ ಅಂಬೆ ಗುರು ಪರಶುರಾಮರಲ್ಲಿ ಪ್ರಾರ್ಥಿಸಿ ಭೀಷ್ಮನನ್ನು ಈ ಕುರಿತು ಒಲಿಸುವಂತೇ ಕೇಳಲು ಹೇಳುತ್ತಾಳೆ. ಪರಶುರಾಮರು ಭೀಷ್ಮನನ್ನು ಕೇಳಲಾಗಿ ಆತ ಮತ್ತೆ ನಾಜೂಕು ಮಾತಿನಿಂದ ತಿಳಿಸಿ ನಿರಾಕರಿಸುತ್ತಾನೆ. ಕುಪಿತರಾದ ಪರಶುರಾಮರು ಭೀಷ್ಮನನ್ನು ಯುದ್ಧಕ್ಕೆ ಕರೆಯುತ್ತಾರೆ. ರಥಾರೂಢನಾಗಿ ಕುರುಕ್ಷೇತ್ರಕ್ಕೆ ಬಂದ ಭೀಷ್ಮ ತನ್ನೆದುರು ಪರಶುರಾಮರು ಬರಿಗಾಲಲ್ಲಿ ನಿರಾಯುಧರಾಗಿ ನಿಂತಿರುವುದನ್ನು ನೋಡಿ ರಥಾರೂಢರಾಗಿ, ಶಸ್ತ್ರಧಾರಿಯಾಗಿ ಬರಲು ವಿನಂತಿಸಿದಾಗ ಭೀಷ್ಮನಿಗೆ ತಿಳಿಸಿ ಇನ್ನೊಮ್ಮೆ ಸರಿಯಾಗಿ ನೋಡಲು ಹೇಳುತ್ತಾರೆ. ಆಗ ಎದುರಿಗೆ ರಥದಲ್ಲಿ ಪರಶುರಾಮರಿದ್ದರೆ, ನಾಲ್ಕುವೇದಗಳು ಕುದುರೆಗಳಾಗಿ, ವಾಯು ಸಾರಥಿಯಾಗಿ ಅವರು ಗಾಯತ್ರಿ, ಸಾವಿತ್ರಿ, ಸರಸ್ವತಿ ಮೂರು ದೇವಿಯರನ್ನು ಎದೆಗವಚವಾಗಿ ಧರಿಸಿಬಂದಿದ್ದು ಕಾಣುತ್ತಾನೆ. ಯುದ್ಧ ಘಟಿಸುತ್ತದೆ, ಯಾರೂ ಇನ್ನೂ ಸೋತಿರುವುದಿಲ್ಲ. ಭೀಷ್ಮನಿಗೆ ಹಿರಿಯರು ಕೊಟ್ಟ ವಿಶೇಷವಾದೊಂದು ಅಸ್ತ್ರವಿರುತ್ತದೆ-ಅದು ಪರಶುರಾಮರಿಗೆ ಗೊತ್ತಿರುವುದಿಲ್ಲ. ಅದನ್ನು ಉಪಯೋಗಿಸಿದರೆ ಪರಶುರಾಮರು ರಣರಂಗದಲ್ಲಿ ಮಲಗಬೇಕಾಗುತ್ತದೆ. ರಣರಂಗದಲ್ಲಿ ಮಲಗಿದವನನ್ನು ಸತ್ತವನೇ ಎಂದು ವೇದಹೇಳುತ್ತದೆಂದೂ ಅದನ್ನು ಉಪಯೋಗಿಸೆಂದೂ ಕೆಲವರು ಹೇಳಿದರೂ ಭೀಷ್ಮ ಅದನ್ನು ಉಪಯೋಗಿಸುವುದಿಲ್ಲ. ಅಷ್ಟರಲ್ಲಿ ಪರಶುರಾಮರು ಮನಸ್ಸು ಬದಲಿಸಿ ಯುದ್ಧ ಬಿಟ್ಟು ತೆರಳುತ್ತಾರೆ.

ಆ ವೇಳೆಗೆ ಕುರುಕ್ಷೇತ್ರದಲ್ಲಿ ಮಹಾಯುದ್ಧವೇ ಆರಂಭವಾಗುವುದರಿಂದ ಸಂಪೂರ್ಣ ಕುರುಕ್ಷೇತ್ರಕ್ಕೆ ಸಾಕ್ಷಿಯಾಗಿ ಭೀಷ್ಮ ರಣರಂಗದಲ್ಲಿ ಕುರುವಂಶದ ನಾಯಕನಾಗಿ ಮುನ್ನಡೆದು ಬರುತ್ತಾನೆ.
ಇದಕ್ಕೆ ಕಾರಣವೂ ಇಲ್ಲದಿಲ್ಲ.

ಹಿನ್ನೆಲೆ

ಸ್ನಾನಕ್ಕೆಂದು ಕೊಳವೊಂದಕ್ಕೆ ಇಳಿದ ದುರ್ಯೋಧನನಿಗೆ ಗಂಧರ್ವರು ಅಲ್ಲಿಗೆ ಬಂದಿರುವುದು ಕಾಣಿಸುತ್ತದೆ. ಅದನ್ನು ಸಹಿಸದ ಆತ ಅವರ ಕೂಡ ಯುದ್ಧನಡೆಸಿ ಸೋತು ಸಿಕ್ಕಿಹಾಕಿಕೊಂಡಾಗ ಯುಧಿಷ್ಠಿರ, ಅರ್ಜುನ ಮುಂತಾದ ಪಾಂಡವರ ವಿನಂತಿಯ ಮೇರೆಗೆ ಅವರು ಆತನನ್ನು ಬಿಡುಗಡೆಗೊಳಿಸುತ್ತಾರೆ. ಅವಮಾನಿತನಾದ ದುರ್ಯೋಧನ ತಾನು ಕ್ಷತ್ರಿಯನಾಗಿಯೂ ಹೀಗಾಯ್ತಲ್ಲಾ ಎಂಬ ಕೊರಗಿನಿಂದಿದ್ದರೂ ಋಣ ಕಳೆವ ನೆಪದಲ್ಲಿ ಅರ್ಜುನನಿಗೆ ತನ್ನಿಂದ ಏನಾದರೂ ತೆಗೆದುಕೋ ಎಂದು ವಿನಂತಿಸುತ್ತಾನೆ. ಅದಕ್ಕೆ ಅರ್ಜುನ ಕಾಲಬಂದಾಗ ಕೇಳುತ್ತೇನೆಂದು ಹೇಳಿರುತ್ತಾನೆ. ಕುರುಕ್ಷೇತ್ರ ಯುದ್ಧ ಇನ್ನೇನು ಸನ್ನದ್ಧವಾದಾಗ ಅರ್ಜುನ ದುರ್ಯೋಧನನಲ್ಲಿಗೆ ಹೋಗಿ ಆತನಲ್ಲಿರುವ ಬಂಗಾರದ, ಶಕ್ತಿ ತುಂಬಿದ ೫ ವಿಶೇಷವಾದ ಬಾಣಗಳನ್ನು ಕೊಡುವಂತೆ ಕೇಳುತ್ತಾನೆ. ದುರ್ಯೋಧನ ಆಶ್ಚರ್ಯಚಕಿತನಾಗಿ ತನ್ನಲ್ಲಿ ಆ ಐದು ಬಾಣಗಳಿವೆಯೆಂದು ಯಾರು ಹೇಳಿದರೆನ್ನಲು ಅರ್ಜುನ ಶ್ರೀಕೃಷ್ಣ ಹೇಳಿದನೆನ್ನುತ್ತಾನೆ. ನಿರ್ವಾಹವಿಲ್ಲದೇ ದುರ್ಯೋಧನ ಆ ೫ ಅಸಾಧಾರಣ ಶಕ್ತಿ ಹೊಂದಿದ ಬಾಣಗಳನ್ನು ಅರ್ಜುನನಿಗೆ ಕೊಡುತ್ತಾನೆ. ಆ ಒಂದೊಂದೂ ಬಾಣಗಳು ಭೀಷ್ಮನ ಆಜನ್ಮ ತಪಶ್ಚರ್ಯದ ಶಕ್ತಿಯಿಂದ ಪ್ರೇರಿತವಾಗಿದ್ದು ಒಬ್ಬೊಬ್ಬ ಪಾಂಡವನನ್ನು ಮುಗಿಸಲು ಸಾಕಾಗಿದ್ದವು.

ತಪ್ಪಿಹೋದ ಅವಕಾಶವನ್ನು ನೆನೆಯುತ್ತ ದುರ್ಯೋಧನ ಭೀಷ್ಮರಲ್ಲಿಗೆ ರಾತ್ರಿ ಬಂದಾಗ, ಮತ್ತೆ ತನ್ನಲ್ಲಿ ಅಂತಹ ಬಾಣಗಳನ್ನು ಸೃಜಿಸುವ ಶಕ್ತಿ ಇಲ್ಲವೆಂದೂ, ಪರಮಾತ್ಮನೇ ಬಯಸಿ ಮರಳಿ ಪಡೆದದ್ದರಿಂದ ಅದನ್ನು ಮೀರುವ ಸಾಮರ್ಥ್ಯ ತನ್ನಲ್ಲಿಲ್ಲವೆಂದೂ, ಆದರೆ ನಾಳೆಯ ಯುದ್ಧದಲ್ಲಿ ತಾನು ಸಿಂಹದಂತೆ ಹೋರಾಡುವೆನೆಂದೂ ತಿಳಿಸುತ್ತಾನೆ. ಅದರಂತೇ ಮಾರನೇ ದಿನ ಯುದ್ಧಾರಂಭಗೊಂಡಾಗ ಗರ್ಜಿಸುವ ಹಸಿದ ಸಿಂಹದೋಪಾದಿಯಲ್ಲಿ ಭೀಷ್ಮ ಅರ್ಜುನನೆಡೆಗೆ ಸಾಗಿಬರುತ್ತಾನೆ. ತಾತಯ್ಯನ ಕೋಪದ ಪರಾಕ್ರಮದ ಮುಂದೆ ಅರ್ಜುನನ ಆಟ ನಡೆಯುವುದಿಲ್ಲ. ಭೀಷ್ಮ ಬಿಟ್ಟ ಒಂದು ಬಾಣ ಅರ್ಜುನನ ಎದೆಗವಚವನ್ನು ಸೀಳಿಹಾಕುತ್ತದೆ. ಅಲ್ಲದೇ ರಥದ ಚಕ್ರ ಸ್ವಲ್ಪ ಹೂತು ತೊಂದರೆಯಾಗುತ್ತದೆ. ಕೋಪಗೊಂಡ ಕೃಷ್ಣ ಲಗಾಮು ಚಾವಟಿಗಳನ್ನು ಅಲ್ಲೇ ಬಿಟ್ಟು ರಥವಿಳಿದು ಕೆಳಗೆ ಬಂದು ಚಕ್ರವನ್ನು ಸರಿಪಡಿಸುತ್ತಾನಲ್ಲದೇ ಭಕ್ತನಾದ ಅರ್ಜುನನ ರಕ್ಷಣೆಗಾಗಿ ಕುರುಕ್ಷೇತ್ರ ಯುದ್ಧದಲ್ಲಿ ತಾನು ಶಸ್ತ್ರವನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ಭೀಷ್ಮನಿಗೆ ಕೊಟ್ಟಿದ್ದ ವಚನವನ್ನು ಮುರಿಯಲು ಮನಮಾಡುತ್ತಾನೆ. ಅರ್ಜುನನ ವಿನಂತಿಯ ಮೇರೆಗೆ ಹಾಗೆ ಮಾಡದೇ ಮತ್ತೆ ರಥವೇರಿ ಸಾರಥಿಯಾಗಿ ಮುನ್ನಡೆಸುವಾಗ ಅರ್ಜುನನಿಗೆ ಹೇಳಿ ಶಿಖಂಡಿಯನ್ನು ಕರೆದು ಆತನನ್ನು ಕವಚದ ಬದಲಾಗಿ ಮುಂದೆ ನಿಲ್ಲಿಸಿಕೊಂಡು ಭೀಷ್ಮನೊಟ್ಟಿಗೆ ಸೆಣಸಾಡಲು ಹೇಳುತ್ತಾನೆ.

ಘನಘೋರ ಯುದ್ಧದಲ್ಲಿ ಅರ್ಜುನನ ಅಸಂಖ್ಯಾತ ಬಾಣಗಳು ಭೀಷ್ಮನ ಮೈಸೇರಿ ಮೈಯ್ಯೆಲ್ಲಾ ರಕ್ತಸಿಕ್ತವಾಗುತ್ತದೆ, ಹಲವು ಗಾಯಗಳು ತಂದ ನೋವಿಗೆ ಹತಾಶೆಗೊಂಡು ಭೀಷ್ಮ ನೆಲವನ್ನು ಹಿಡಿಯಬೇಕಾಗಿ ಬರುತ್ತದೆ. ಅರ್ಜುನ ಶರಗಳನ್ನೆಸೆದು ಶಯ್ಯೆಯೊಂದನ್ನು ರಚಿಸಿದಾಗ ಅದರಮೇಲೆ ಭೀಷ್ಮ ಪಿತಾಮಹ ಮಲಗುತ್ತಾನೆ. ಇಚ್ಛಾಮರಣಿಯಾಗಲು ತಂದೆಯಿಂದ ಅನುಗ್ರಹ ಪಡೆದಿದ್ದ ಭೀಷ್ಮ ನೋವನ್ನು ಸಹಿಸಿಕೊಂಡು, ಮಹಾಭಾರತ ಯುದ್ಧವನ್ನು ನೋಡುತ್ತಾ, ದೇಹವನ್ನು ತೊರೆಯಲು ಒಳ್ಳೆಯ ಮುಹೂರ್ತಕ್ಕಾಗಿ ಕಾದು ಮಲಗಿರುತ್ತಾನೆ.

ತನ್ನದಲ್ಲದ ತಪ್ಪಿಗೆ ಭೀಷ್ಮ ಹಲವು ಬಾರಿ ಅಪರಾಧಿ ಎನಿಸಿಕೊಳ್ಳುತ್ತಾನೆ. ಜನ್ಮಪೂರ್ತಿ ತಂದೆ, ಕುಟುಂಬ, ವಂಶ ಇವರೆಲ್ಲರಿಗಾಗಿ ಬದುಕಿದ ಭೀಷ್ಮ ಒಂದರ್ಥದಲ್ಲಿ ಕೊನೆಯವರೆಗೂ ಏಕಾಂಗಿಯೇ. ಅವನ ಆಸೆ-ಆಕಾಂಕ್ಷೆಗಳಿಗೆ ಮನ್ನಣೆಯೇ ಇರಲಿಲ್ಲ. ಯಾರೂ ಆತನನ್ನು ’ನಿನಗೇನು ಬೇಕು ಅಜ್ಜಯ್ಯಾ’ ಎಂದು ಒಂದು ದಿನವೂ ಕೇಳಿದ್ದಿಲ್ಲ. ಬದಲಾಗಿ ಅಜ್ಜಯ್ಯನಿಂದ ಸಿಗಬಹುದಾದ ಪ್ರಯೋಜನವನ್ನು ಎಲ್ಲರೂ ಪಡೆದರು. ಹಾಗೆ ನೋಡಿದರೆ ಭೀಷ್ಮ ಎಲ್ಲರಿಗೂ ಅಜ್ಜನೇ. ಸಂಧಾನಕ್ಕಾಗಿ ಪ್ರಯತ್ನಿಸಿದವರಲ್ಲಿ ಭೀಷ್ಮಕೂಡ ಒಬ್ಬ. ಆದರೆ ಸಂಧಾನವೇ ಬೇಡವೆಂಬ ಕೌರವನ ನಿರ್ಧಾರಕ್ಕೆ ಆತ ಮನದಲ್ಲೇ ಕುಸಿದುಹೋದ. ಮುಖದಲ್ಲಿನ ಎರಡು ಕಣ್ಣುಗಳಂತಿರುವ ಆ ಎರಡು ಕುಟುಂಬಗಳಲ್ಲಿ ಆತನಿಗೆ ಯಾರು ಹೆಚ್ಚು ಅಥವಾ ಯಾರು ಕಮ್ಮಿ ಎಂಬುದಿರಲಿಲ್ಲ. ಕೃಷ್ಣನ ನಿರ್ಧಾರದಂತೇ ಆತ ಕೌರವರನ್ನು ಸೇರಬೇಕಾಯಿತು. ಇನ್ನೇನು ಹರೆಯ ಉಕ್ಕಿ ಹರಿವಾಗ ತನ್ನ ದೈಹಿಕ ಬಯಕೆಗಳನ್ನೆಲ್ಲಾ ಒತ್ತಟ್ಟಿಗೆ ಕಟ್ಟಿ ಸುಟ್ಟುಹಾಕಿದ ಭೀಷ್ಮ ತಾನು ಸುಖಪಡಲೇ ಇಲ್ಲ. ಈ ಕಡೆ ರಾಜನೂ ಆಗದಾಯ್ತು, ಆಕಡೆ ಮದುವೆಯಾಗುವುದನ್ನೂ ತಪ್ಪಿಸಿಕೊಂಡಾಯ್ತು, ತಂದೆಯ ಮರಣಾನಂತರ ಆತ ಬದುಕಿದ್ದದ್ದು ಕೇವಲ ತನ್ನ ಮಾತಿನಂತೇ ತನ್ನ ಮಲತಮ್ಮಂದಿರ ಯೋಗಕ್ಷೇಮ ನೋಡುವುದು ಮತ್ತು ಅವರಿಗೆ ರಾಜ್ಯಾಧಿಕಾರ ಪ್ರಾಪ್ತವಾಗಿ, ಅವರ ಮಂಗಳಕಾರ್ಯಗಳಾಗಿ ವಂಶ ಮುಂದುವರಿಯುವುದು, ಇದು ಬಿಟ್ಟು ಇನ್ನೇನೂ ಬೇಕಿರಲಿಲ್ಲ ಆತನಿಗೆ. ತನ್ನ ಕಣ್ಮುಂದೆ ಹುಟ್ಟಿ ಬೆಳೆದು, ಚಿನ್ನಿದಾಂಡು ಆಟವಾಡಿದ ಹುಡುಗರು ನೆಲಕ್ಕಾಗಿ ಬಡಿದಾಡಿ ಜನಸ್ತೋಮ ಮರೆಯಲಾಗದ ಭಾರತವನ್ನೇ ಸೃಜಿಸುತ್ತಾರೆಂಬುದನ್ನು ಕನಸಲ್ಲೂ ಎಣಿಸಿರಲಿಲ್ಲವಾತ.

ಕಣ್ಣೆದುರೇ ಕೃಷ್ಣನಿದ್ದರೂ ಕೃಷ್ಣ ಮಾತನಾಡಲಾರ, ಸಂತೈಸಲಾರ, ಅಳಲು ಕೇಳಲಾರ, ಬದಲಾಗಿ ತನ್ನಲ್ಲಿರುವ ಅಸಾಧಾರಣ ಶಕ್ತಿ ಉಡುಗಿಹೋಗಲೆಂದು ಶಿಖಂಡಿಯನ್ನು ಎದುರು ನಿಲ್ಲಿಸಿಕೊಂಡ! ಭೀಷ್ಮನಿಗೆ ಅರ್ಥವಾಗಿ ಹೋಗಿತ್ತು--ಕೃಷ್ಣನೊಬ್ಬ ಅತಿಮಾನುಷ ಶಕ್ತಿ, ಆತನ ಸಂಕಲ್ಪದಂತೇ ಆತ ಎಲ್ಲವನ್ನೂ ನಡೆಸುತ್ತಾನೆ ಎಂಬುದು. ಹಾಗಂತ ಕೃಷ್ಣನಲ್ಲಿ ಆತ ಪ್ರಾಣಭಿಕ್ಷೆ ಬೇಡಲಿಲ್ಲ. ಭೀಷ್ಮನಿಗೀಗ ಆತ್ಮಜ್ಞಾನವಾಗಿತ್ತು. ಆತ ತಂದೆಗೆ ಸಲ್ಲಿಸಿದ ಸೇವೆಯಿಂದ " ಮಗನೇ ಇಚ್ಛಾಮರಣಿಯಾಗು " ಎಂದು ತಂದೆಯಿಂದ ವರವನ್ನು ಪಡೆದಿದ್ದ. ತಾನೊಬ್ಬ ಒಳ್ಳೆಯ ವ್ಯಕ್ತಿ ಎಂದೂ, ಅಪ್ರತಿಮ ಸಾಹಸಿಯೆಂದೂ, ಅಸಾಧಾರಣ ಹೋರಾಟಗಾರನೆಂದೂ ಎಂದೂ ಕೊಚ್ಚಿಕೊಂಡವನಲ್ಲ; ಅವನ ಮನದಲ್ಲಿ ಅಹಂಕಾರ ತುಂಬಿರಲೇ ಇಲ್ಲ. ಕೇವಲ ಕೊಟ್ಟಮಾತಿಗಾಗಿ ಬದುಕಿದ್ದು, ತನ್ನ ಮಾತುನಡೆಯುವಂತೇ ನೋಡಿಕೊಂಡ ಸಜ್ಜನ ಭೀಷ್ಮ. ಆತನೊಬ್ಬ ಕರ್ಮಯೋಗಿ. ಕ್ಷತ್ರಿಯನಾಗಿ ತನ್ನ ಧರ್ಮವನ್ನು ಮೆರೆಯುತ್ತಾ ಆ ಧರ್ಮಾಚರಣೆಯಲ್ಲೇ ದೇವರನ್ನು ಕಂಡ ಕ್ಷಾತ್ರತೇಜಸ್ವಿ ಆತ. ತಾನು ಕೈಗೊಂಡ ನಿರ್ಧಾರಗಳು ತಪ್ಪು ಎಂದು ಯಾವಗಲೂ ಅನಿಸಲಿಲ್ಲ ಆತನಿಗೆ.

ಇಂದು ಮಗು ದುರ್ಯೋಧನನಿಗಾಗಿ ಮತ್ತೊಬ್ಬ ಮಗು ಅರ್ಜುನನ ಕೂಡ ಯುದ್ಧ ! ಬಹಳ ಯೋಚಿಸಿದ್ದಾನೆ ಭೀಷ್ಮ. ತನ್ನೊಳಗಿನ ತಳಮಳವನ್ನು ಯಾರಲ್ಲಿಯೂ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ಒದ್ದಡಿದ್ದಾನೆ ಭೀಷ್ಮ. ಕೊನೆಗೂ ಕಾಲಸನ್ನಿಹಿತವಾದಾಗ ಅನಿವಾರ್ಯವಾಗಿ ಕೃಷ್ಣ ಸಾರಥ್ಯದ ರಥದಲ್ಲಿರುವ ಅರ್ಜುನನ ಎದುರು ವೀರಾವೇಶದಿಂದ ಮುನ್ನುಗ್ಗಿದ್ದಾನೆ ಭೀಷ್ಮ. ರಥದಲ್ಲಿ ಕುಳಿತ ದೇವರು ತನ್ನನ್ನು ಬೇಗ ಕರ್ತವ್ಯದೀಮ್ದ ಬಿಡುಗಡೆಗೊಳಿಸಲಿ ಎಂಬುದೇ ಆತನ ಆಶಯವಾಗಿತ್ತು. ಜೀವನದುದ್ದಕ್ಕೂ ನಡೆದ ಹಲವಾರು ಘಟನೆಗಳು ಆತನಿಗೆ ಬೇಸರತರಿಸಿದ್ದವು, ನೋವುಂಟುಮಾಡಿದ್ದವು. ಆದರೂ ಒಪ್ಪಿಕೊಂಡ ಪಾತ್ರಪೋಷಣೆಯನ್ನು ಮಾಡಿಯೇ ಇಹವನ್ನು ತ್ಯಜಿಸುವ ಇಚ್ಛೆಯನ್ನು ಆತ ಹೊಂದಿದ್ದ. ಇದನ್ನರಿತ ಪರಶುರಾಮರು ತಾವೇ ಸ್ವತಃ ಹಿಂದೆ ಭೀಷ್ಮನಲ್ಲಿ ನಡೆಸಿದ ಯುದ್ಧವನ್ನು ನಿಲ್ಲಿಸಿ ಹೊರಟುಹೋದರು. ಅಂತೂ ಯುದ್ಧ ಘಟಿಸಿ ತನಗೆ ಬಾಣಗಳು ನಾಟಿ ಶರಶಯ್ಯೆಯಲ್ಲಿ ಮಲಗಿದ್ದಾಗಿದೆ ಈಗ. ಬಾಯಾರಿಕೆಗೆ ಪರಮಾತ್ಮನ ಅಣತಿಯಂತೇ ಅರ್ಜುನ ಬಾಣ ನೆಟ್ಟು ಗಂಗೆಯನ್ನೇ ಬಾಯಿಗೆ ತಲ್ಪಿಸಿದ್ದಾನೆ. ಎದುರಾಳಿ ಅರ್ಜುನನಲ್ಲ, ಅರ್ಜುನನ ಎದುರು ಲಗಾಮು ಹಿಡಿದು ಕುಳಿತ ಶ್ರೀಕೃಷ್ಣ ಎಂಬುದನ್ನು ನಿರ್ಧರಿಸಿದ್ದ ಭೀಷ್ಮ ಆತನ ಸಮ್ಮುಖದಲ್ಲೇ ಬಾಣಗಳ ಮಂಚದಮೇಲೆ ಮಲಗಿದ್ದಾನೆ. ಬದುಕಿನಲ್ಲಿ ಯಾರ್ಯಾರಿಗೆ ಏನೇನು ಸಿಗಬೇಕೋ ಅದು ಸಿಗಬೇಕು, ಏನೇನು ನಡೆಯಬೇಕೋ ಅದು ನಡೆದೇ ತೀರಬೇಕು. ಸಂಚಿತಕರ್ಮಫಲವನ್ನು ಅನುಭವಿಸಿಯೇ ಕಳೆಯಬೇಕೇ ವಿನಃ ಅದು ಹಾಗೇ ಮಾಯವಾಗಿಹೋಗುವುದಲ್ಲ.

ಹೆತ್ತಾತನರ್ಜುನನು ಮುತ್ತಯ್ಯ ದೇವೇಂದ್ರ
ಮತ್ತೆ ಮಾತುಲನು ಶ್ರೀಹರಿಯಿರಲು ಅಭಿಮನ್ಯು
ಸತ್ತನೇಕಯ್ಯ ? ಸರ್ವಜ್ಞ

ಎಂಬ ಸರ್ವಜ್ಞಕವಿಯ ಉದ್ಘೋಷದಂತೇ ಯಾರೇ ಇದ್ದರೂ ವಿಧಿಯ ಮುಂದೆ ಅವರು ಏನೂ ಮಾಡಲಾರರು. ಜನಬಲ, ಧನಬಲ, ದೇಹಬಲ ಇವೆಲ್ಲಾ ಆಗ ಕೆಲಸಮಾಡಲಾರವು. ಕ್ಷತ್ರಿಯಬಲವನ್ನು ಅಪಾರವಾಗಿ ವಶಿಷ್ಠರ ಮೇಲೆ ಪ್ರಯೋಗಿಸಿದ ಚಂಡ ಕೌಶಿಕ ಪ್ರತೀ ಘಳಿಗೆ ಸೋತು ಹೋದ! ಆಮೇಲೆ ಅವನಿಗೆ ಅರ್ಥವಾಗಿದ್ದು ಅದನ್ನೇ ಅನುಸರಿಸಿ "ಬ್ರಹ್ಮರ್ಷಿ" ಎಂದು ವಶಿಷ್ಠರಿಂದಲೇ ಗೌರವಿಸಲ್ಪಟ್ಟ ! ಅಂದರೆ ತಪಃಶಕ್ತಿಗೆ ಸರಿಸಮವಾದ ಶಕ್ತಿ ಬೇರಾವುದೂ ಅಲ್ಲ.

ದಿಗ್ಬಲಂ ಕ್ಷತ್ರಿಯ ಬಲಂ ಬ್ರಹ್ಮತೇಜಂ ಬಲಂ ಬಲಂ ---ಎಂಬ ಉಕ್ತಿಯಂತೇ ಕೇವಲ ಬ್ರಹ್ಮತೇಜಸ್ಸು ಮಾತ್ರ ಅಸಾಧ್ಯವಾದುದನ್ನೂ ಸಾಧ್ಯವಾಗಿಸುವಂಥದು. ಅಂತಹ ಬ್ರಹ್ಮಚರ್ಯ ವೃತನಿಷ್ಠನಾದ ಭೀಷ್ಮ ಪಿತಾಮಹ ತನ್ನ ಜೀವಿತದಲ್ಲಿ ಗಳಿಸಿದ ಪುಣ್ಯದ ಬಹುಭಾಗವನ್ನು ಆ ಐದು ಬಾಣಗಳಿಗೆ ಧಾರೆಯೆರೆದಿದ್ದ. ನಿರರ್ಥಕವಾದ ಆ ಕೆಲಸದ ಬದಲು ಅದನ್ನು ಹಾಗೇ ಇಟ್ಟುಕೊಳ್ಳಬಹುದಿತ್ತು, ಆದರೆ ಕ್ಷಾತ್ರಧರ್ಮವನ್ನು ಕಾಪಾಡಲು, ತಾನು ಪ್ರತಿನಿಧಿಸುವ ವಂಶದ ಭಾಗವನ್ನು ಕಾಪಾಡಲು ಹಾಗೆ ಮಾಡಿದ್ದ. ಅಂಬೆಯನ್ನು ಕರೆತರದೇ ಹೋದರೆ ತನ್ನ ಮಲತಮ್ಮನಿಗೆ ಮದುವೆಗೆ ಸರಿಯಾದ ಅಷ್ಟು ಚಂದದ ಹೆಣ್ಣು ಸಿಗುವಳೇ ಎಂಬ ಕಾರಣದಿಂದ ಹಾಗೆ ರಥದಲ್ಲಿ ಬಲವಂತವಾಗಿ ಕರೆತಂದಿದ್ದ. ಮೋದಲೇ ಆಕೆಯ ಬಗೆಗೆ ತಿಳಿದಿದ್ದರೆ ಆ ಕೆಲಸಕ್ಕೆ ಕೈಹಾಕುತ್ತಲೇ ಇರಲಿಲ್ಲ ಭೀಷ್ಮ. " ಮಕ್ಕಳೇ ಬೇಡಾ " ಎಂದರೂ ತಾನೇ ಅವರ ನಡುವೆ ನಿಂತು ಹೋರಾಡುವಂತ ಪರಿಸ್ಥಿತಿ ಬರುತ್ತದೆಂಬ ನಿರೀಕ್ಷೆಯಿಟ್ಟುಕೊಂಡವನಲ್ಲ ಭೀಷ್ಮ. ಎಂದು ಮೊಮ್ಮಗು ಅರ್ಜುನನನಿಂದ ಸೋತನೋ ಅಂದೇ ಭೀಷ್ಮ ಸತ್ತುಹೋದ, ಆದರೆ ಕೇವಲ ಶುಭಗಳಿಗೆಗಾಗಿ, ಪರಮಾತ್ಮನ ಅಂತಿಮ ದರ್ಶನಕ್ಕಾಗಿ ಹಾತೊರೆದು ಜೀವವನ್ನು ಕೈಯ್ಯಲ್ಲಿ ಬಿಗಿಹಿಡಿದು ಜೀವಚ್ಛವವಾಗಿ ಶರಶಯ್ಯೆಯಲ್ಲಿ ಮಲಗಿದ್ದಾನೆ ಭೀಷ್ಮ. ಸುತ್ತ ರಣರಂಗದಲ್ಲಿ ಸತ್ತ, ಅರೆಸತ್ತ ಸೈನಿಕರು. ನೋವಿನ ಚೀರಾಟ. ಹಗಲೂ-ರಾತ್ರಿ ನೋವು, ನೋವು ನೋವಿನದೇ ಗೋಳು. ಕೇಳುತ್ತಿರುವ ಆರ್ತನಾದಗಳು. ಹಗಲು ಹಾರಾಡುವ ರಣಹದ್ದುಗಳು, ಕಾಗೆಗಳು. ರಾತ್ರಿಯಲ್ಲಿ ನಿಶಾಚರಿ ಪಶುಪಕ್ಷಿಗಳು. ಎಲ್ಲೆಲ್ಲೂ ರಕ್ತದ ಅಸಹ್ಯ ಹುಟ್ಟಿಸುವ ವಾಸನೆ. ರಾತ್ರಿಗಾಗಿ ಯುದ್ಧವಿರಾಮವಿದ್ದರೂ ಎದ್ದುಹೋಗಲಾರದ ಸ್ಥಿತಿ. ನೆಂಟರಿಷ್ಟರು ಬಂಧು-ಬಳಗ ಯಾರೂ ಸನಿಹದಲ್ಲಿ ಇರಲಾರದ ಗತಿ. ದಾರುಣವಾದ ಈ ವಿಷಮ ಪರಿಸರದಲ್ಲಿ ಜನ್ಮಾವಶೇಷದ ಋಣತೀರಿಕೆಗಾಗಿ ಕುಟುಕು ಜೀವವನ್ನು ಹಿಡಿದು ಕಳೆದಹೋದ ಜೀವಮಾನವನ್ನು ಅವಲೋಕಿಸುತ್ತಿದ್ದ ಭೀಷ್ಮ. ವಶಿಷ್ಠರ ಶಾಪವೇ ಕಾರಣವಾಗಿ ಮನುಷ್ಯನಾಗಿ ಪಡಬಾರದ ಪಾಡುಪಟ್ಟ ಭೀಷ್ಮ ಸಾಯುವ ನೋವಿನ ಘಳಿಗೆಯಲ್ಲೂ ತನ್ನ ಪ್ರೀತಿಪಾತ್ರ ಜನರನ್ನು ಮರೆಯಲಿಲ್ಲ. ಬಹುದೀನನಾದ ಭೀಷ್ಮ ತನ್ನಿಂದ ಇತರರಿಗಾದ ಉಪಕಾರಕ್ಕೆ ಪ್ರತ್ಯುಪಕಾರ ಬಯಸಲಿಲ್ಲ. ಆತನಿಗೆ ಬೇಕಾದುದೊಂದೇ ಶ್ರೀಕೃಷ್ಣನ ಕೊನೆಯ ಒಂದು ನೋಟ. ಆ ನೋಟವನ್ನೊಮ್ಮೆ ಹೃದಯಕವಾಟ ತೆರೆದು ಅದರಲ್ಲಿ ಹುದುಗಿಸಿಕೊಂಡು ಆತನೇ ಕರುಣಿಸುವ ಶುಭಸಮಯದಲ್ಲಿ ಕಣ್ಮುಚ್ಚುವವನಿದ್ದ ಭೀಷ್ಮ. ಆ ಸಮಯ ಸನ್ನಿಹಿತವಾದಗ ಮತ್ತೊಮ್ಮೆ ತನ್ನ ತಂದೆ ಶಂತನುವನ್ನೂ ತಾಯಿ ಗಂಗೆಯನ್ನೂ ಮನದಲ್ಲೇ ವಂದಿಸಿ, ನಿಮಗೆ ತಕ್ಕಮಗನಾಗಲು ಸಾಧ್ಯವಾಗದಿದ್ದರೂ ಕೈಲಾದಮಟ್ಟಿಗೆ ನಾನು ನಾನಾಗಿರಲು ಪ್ರಯತ್ನಿಸಿದ್ದೇನೆ ಎಂದು ಮನದಲ್ಲೇ ವಂದಿಸಿದ. ಆತನ ಮನದಲ್ಲಿ ಯಾವುದೇ ಅಶಾಂತಿಯಾಗಲೀ ಅತೃಪ್ತಿಯಾಗಲೀ ಇರಲಿಲ್ಲ.


ಶಂತನು ಗಂಗೆಯ ವರಿಸಿದ ಕಾರಣ
ನಿಂತೆನು ಈ ದಿನ ಭುವಿಯೊಳಗೆ
ಸಂತತಿ ನಡೆಸುತ ವಂಶವ ಮುಂದಕೆ
ಸಂತಸ ತರಲೀ ಹಿರಿಯರಿಗೆ

ಕ್ಷಾತ್ರದಿ ಕಾದುತ ಬೇಡದ ಭಾಗ್ಯವ
ಪಾತ್ರೆಯೊಳಿರಿಸಲು ಬಯಸಿಲ್ಲ
ಗೋತ್ರವು-ಕುಲವು ಒಂದೇ ಆದರೂ
ಖಾತ್ರಿಯು ಯುದ್ಧವು ಬಿಡದಲ್ಲ

ನಲುನಲುಗುವ ನನ್ನೊಳಮನಸಿನ ಪರಿ
ಅಲುಗಾಡಿಸುತಲಿದೆ ದೇಹವನು
ಬಲುಮಾನವರಿವರೆಲ್ಲರು ಕಮ್ಮಿಯೇ ?
ಹುಲುಮಾನವ ನಾನಾಗಿಹೆನು

ಚೆಂಡು ಬುಗುರಿಯಾಡಿದ ಮರಿಮಕ್ಕಳು
ರುಂಡ ಮುಂಡ ಕತ್ತರಿಸುತಲಿ
ಅಂಡಪಿಂಡ ಬ್ರಹ್ಮಾಂಡವು ಮರೆಯದ
ಚಂಡ ಯುದ್ಧವನು ನಡೆಸುತಲಿ

ಬುದ್ಧಿ ಹೀನ ಜನರೊಂದಿಗೆ ಕಳೆದೆನು
ಇದ್ದೂ ಏನೂ ಸಾಧಿಸದೇ
ಗದ್ದಲದೊಳ ಜೀವನವದು ಅದುರಿತು
ಬಿದ್ದುದಕೇನೂ ವಾದಿಸದೇ

ಪರಮಾತ್ಮನ ಪರಿಶೋಭಿತ ಚರಣದಿ
ಶಿರವಿಡುತಲಿ ನಾ ಬೇಡುವೆನು
ಹರಿನೀನೆಂಬುದು ಅರಿವಾದೊಡೆನೆಯೇ
ಬರೆದೆನು ನಿನಗೀ ಜೀವವನು

ಸಲ್ಲದ ಪಾಪವ ಮಾಡದ ಜನ್ಮದಿ
ಇಲ್ಲದ ನೋವನು ಅನುಭವಿಸಿ
ಎಲ್ಲರೊಡನೆ ಸಹಕರಿಸುತ ಪಾತ್ರವ
ಬಲ್ಲರೀತಿಯಲಿ ನಿರ್ವಹಿಸಿ

ಮುರಳೀಗಾನದಿ ಸುಖಿಸುವ ಕೃಷ್ಣನೆ
ಧರೆಗುರುಳಿಸಿ ನೋಡುವುದೇನು ?
ಭರದಲಿ ಸಮಯವ ಕರುಣಿಸು ಬೇಗದಿ
ಸರಸರ ನಿನ್ನೊಳು ಸೇರುವೆನು !

Friday, June 4, 2010

ಶಬರಿ


ರಾಮನೇ ತನ್ನ ಸರ್ವಸ್ವ ಎಂದು ಬಗೆದು ಆಂಜನೇಯನಂತೆ ರಾಮನನ್ನು ತನ್ನ ಹೃತ್ಕಮಲದಲ್ಲಿ ಹುದುಗಿಸಿಕೊಂಡು ಬದುಕಿದ ಮುದಿ ಜೀವ ಶಬರಿ. ಗಾಳಿಗೆ ತರಗೆಲೆಗಳ ಸದ್ದಾದರೂ ರಾಮ ಬಂದನೇನೋ ಎಂದುಕೊಂಡು ಹುಡುಕುವ ಮನೋವೃತ್ತಿ ಆಕೆಯದ್ದು. ಬಹಳ ಜನರಿಂದ ಕೇಳಿ ತಿಳಿದಿದ್ದಳು ರಾಮನ ಬಗೆಗೆ. ಪ್ರತಿದಿನವೂ ಈಗಬಂದಾನು ಆಗ ಬಂದಾನು ಎಂದುಕೊಳ್ಳುತ್ತ ಹಲವತ್ತುಕೊಳ್ಳುವ ಆಕೆ ಮುಪ್ಪಡರಿದ ಶರೀರದಲ್ಲೇ ಎಳೆಯ ಮನವನ್ನು ಹೊಂದಿದ್ದಾಕೆ. ಕಾಡುಮೇಡುಗಳಲ್ಲಿ ಅಲೆದು ಫಲಪುಷ್ಪಗಳನ್ನು ತಂದು ಅವುಗಳನ್ನೆಲ್ಲ ಕೂಗಲ ಬಳ್ಳಿಯಿಂದ ನೇಯ್ದು ಮಾಡಿದ ಬುಟ್ಟಿಗಳನ್ನು ತೊಳೆದು ಆ ಬುಟ್ಟಿಗಳಲ್ಲಿ ಹಾಕಿಟ್ಟು, ಗುಡಿಸಲ ಮುಂದಿನ ಅಂಗಳದಂಥ ಸ್ವಲ್ಪ ಜಾಗವನ್ನು ಸಾರಿಸಿ ರಂಗವಲ್ಲಿ ಇಟ್ಟು-ಹೂಗಳನ್ನು ಹರಡಿ, ಅಲ್ಲೇ ಇರುವ ಸಪಾಟಾದ ಅಗಲದ ಕಲ್ಲೊಂದನ್ನು ಸ್ವಚ್ಛಗೊಳಿಸಿ ಇಟ್ಟು ಅದರಮೇಲೆ ತನ್ನದೊಂದು ನಾರುಮಡಿ ಹಾಸಿ ರಾಮ ಇನ್ನೇನು ಬಂದೇ ಬಿಟ್ಟನೇನೋ ಎಂಬಂತೆ ದಿನವೂ ಕಾಯ್ದೇ ಕಾಯ್ವಳು.

ಕಾಡುಜನರು ಜೇನಿಗೋ, ಕಟ್ಟಿಗೆಗೋ, ಗೆಡ್ಡೆ-ಗೆಣಸಿಗೋ ಬಂದವರು ತಮ್ಮೊಳಗೆ ಕೂಗಿ ಕರೆದರೆ ಅಲ್ಲೆಲ್ಲೋ ರಾಮನ ಕೂಗು ಕೇಳಿಸಿತೇನೋ ಅನ್ನುವಂತೆ ಗುಡಿಸಲಿನಿಂದ ಆಚೆ ಬಂದು ಹಿಮ್ಮಡ ಎತ್ತರಿಸಿ ಎರಗಿ ಎರಗಿ ನೋಡಿ ರಾಮನ ಇರವನ್ನು ಹುಡುಕುತ್ತಿದ್ದಳು. ದಿನವೂ ರಾಮ ಬರುವುದು ಕೇವಲ ಒಂದು ಮರೀಚಿಕೆಯಾಗುತ್ತಿತ್ತು. ಆದರೂ ಆಕೆಯ ಆಂತರ್ಯ ’ರಾಮ ಬಂದೇ ಬರುತ್ತಾನೆ ಮಗಳೇ ನೀನು ಕಾಯುತ್ತಲೇ ಇರು’ ಎನ್ನುವ ಸಂದೇಶ ಕೊಡುತ್ತಿದ್ದುದರಿಂದ ರಾಮ ಬರುವ ನಿರೀಕ್ಷೆಯಲ್ಲೇ ಪ್ರತಿದಿನವನ್ನೂ ಹೊಸದಿನವೇನೋ ಎಂಬರೀತಿಯಲ್ಲಿ ಜಾವದಲ್ಲೇ ಕಾಡಿಗೆ ಹೋಗಿ ಹಣ್ಣ್-ಹೂವು ಆಯ್ದು ತಂದು ಅವನ್ನೆಲ್ಲ ದಿನವೂ ಮೊದಲು ಹೇಳಿದ ರೀತಿಯಲ್ಲೇ ಅಲಂಕರಿಸುತ್ತಿದ್ದಳು. ರಾಮ ಬರುವನೋ ಬರನೋ ಅವಳಿಗೆ ಅದು ಅರ್ಥವಿಲ್ಲ,ಆದರೆ ರಾಮ ಬಂದೇ ಬರುವನೆಂಬ ಅಚಲ ವಿಶ್ವಾಸವೊಂದಿತ್ತು, ಅದು ಅಂಧಶ್ರದ್ಧೆಯಾಗಿರಲಿಲ್ಲ, ಆಂತರ್ಯದ ಕರೆಯನ್ನು ಅನುಸರಿಸಿದ ಭಕ್ತಿ ಪುರಸ್ಸರ ಕಾರ್ಯವಾಗಿತ್ತು.

ಅಜ್ಜಮ್ಮನ ಸುತ್ತ ನೋಡಿಕೊಳ್ಳಲು ಅವಳಿಗೆ ತನ್ನವರು ಎಂದು ಯಾರೂ ಇರಲಿಲ್ಲ. ಗುಡಿಸಲ ಅಕ್ಕ-ಪಕ್ಕ ಅಥವಾ ಆ ಭೂ ಪ್ರದೇಶದಲ್ಲೇ ಅವಳದೊಂದೇ ಗುಡಿಸಲು. ಮುಪ್ಪಡರಿದ ದೇಹಕ್ಕೆ ದೇವರದೇ ಕಾವಲು! ತನ್ನ ಇರುವಿಕೆ, ಅರೋಗ್ಯ ಇದರ ಬಗ್ಗೆಲ್ಲ ಚಿಂತೆಗೀಡಾದವಳಲ್ಲ ಶಬರಿ. ಅವಳಿಗೆ ರಾಮನ ದರ್ಶನವಷ್ಟೇ ಬೇಕಾಗಿತ್ತು. ಭೂಮಿಯಲ್ಲಿ ಮಿಕ್ಕೆಲ್ಲ ಕಾರ್ಯಗಳು ಆ ಕೆಲಸದ ಮುಂದೆ ಕಳಾಹೀನವಾಗಿದ್ದವು. ಕಾಡುಮರಗಳು ಒಂದಕ್ಕೊಂದು ಹೊಸೆದು ಪೀಂ ಪೀಂ ಅಂತ ಶಬ್ಧ ಹೊರಟರೆ ರಾಮ ಬಂದನೇನೋ ಅಂದುಕೊಳ್ಳುವಳು. ಮಂದ ಮರುತ ಬೀಸಿ ಕಾಡಹೊಗಳ ಪರಿಮಳ ಬಂದರೆ ಅದು ರಾಮ ತೊಟ್ಟ ನಾರುಡುಗೆಗೆ ನೈಸರ್ಗಿಕವಾಗಿ ಪೂಸಿದ ಪರಿಮಳವೇನೋ ಅಂದುಕೊಳ್ಳುವಳು. ಕಣ್ಣು ಮಂಜಾಗಿ ಕತ್ತಲಾವರಿಸುವವರೆಗೂ ರಾಮನಿಗಾಗಿ ಹೊರಗೆ ಕಾಯುವ ಸಂಪ್ರದಾಯ ಅವಳದ್ದು. ಊಟ-ತಿಂಡಿ ಇವುಗಳ ಗೊಡವೆ ಅವಳಿಗಿರಲಿಲ್ಲ, ಆದರೆ ಮಾಡುವಳು ಇಲ್ಲದಿರೆ ರಾಮನನ್ನು ನೆನೆದು ನೀರನ್ನು ಕುಡಿದೇ ಹಾಯಾಗಿರುತ್ತಿದ್ದಳಾಕೆ. ಶರೀರ ಬಿದ್ದುಹೋಗುವ ಮೊದಲು ರಾಮ ಒಮ್ಮೆ ಬರಲಿ ಎಂದು ಸುತ್ತಲ ಎಲ್ಲಾ ದೇವಾನುದೇವತೆಗಳನ್ನು ನೆನೆದು ಪ್ರಾರ್ಥಿಸುವಳು.

ಮಗನ ರೀತಿಯಲ್ಲಿ ರಾಮನನ್ನು ಉಪಚರಿಸಲು ಬಯಸುವ ಆಕೆ ಕಾಡ ಮಿಕಗಳ ಕೂಗನ್ನು ಆಲೈಸುವ ಶಬರಿ, ಮೊದಲ ಬಾಣಂತನದಲ್ಲಿ ಹಸುಗೂಸನ್ನು ಬಹಳಹೊತ್ತು ಬಿಟ್ಟಿದ್ದು ಆಮೆಲೆ ಭೆಟ್ಟಿಯಾದಗ ಮುದ್ದಿಸುವ ಅಮ್ಮನ ಪ್ರೀತಿಯನ್ನು ರಾಮನಿಗಾಗಿ ಹೊಂದಿದ್ದಳಾಕೆ. ಬದುಕಿನಲ್ಲಿ ಪಡೆದ ಮಹತ್ತರ ಭಾಗ್ಯವೇ ರಾಮನನ್ನು ಕಾಣುವುದು ಎಂಬ ಅಭೀಪ್ಸೆಯನ್ನು ಹೊಂದಿದ್ದಳಾಕೆ. ಯಾರೇ ಬರಲಿ ಇರಲಿ ಯಾವುದೂ ಅವಳಿಗೆ ಮುಖ್ಯವಲ್ಲ, ಶ್ರೀರಾಮನ ಮುಖ ಕಮಲವನ್ನು ದರ್ಶಿಸಿ, ರಾಮನ ಪಾದಾರವಿಂದಗಳಲ್ಲಿ ಬಗೆಬಗೆಯ ಹೂವುಗಳನ್ನಿಟ್ಟು ಆತ ಮನಸಾರೆ ತಿನ್ನಲು ಅನುಕೂಲವಾಗುವ ಬೋರೆಹಣ್ಣುಗಳನ್ನು ಕೊಡುವ ಬಯಕೆ ಅವಳದಾಗಿತ್ತಷ್ಟೇ.

ಅಂತೂ ಶ್ರೀರಾಮ ಬಂದ, ಶಬರಿಯ ಭಕ್ತಿಯ ಆದರಾತಿಥ್ಯ ಸ್ವೀಕರಿಸಿದ, ಆಕೆ ಸಿಹಿಯಿದೆಯೋ ಎಂದು ನೋಡಲು ಶುದ್ಧಮನದಿಂದ ಕಚ್ಚಿ ಕೊಟ್ಟ ಹಣ್ಣುಗಳನ್ನು ಅಷ್ಟೇ ಭಕ್ತಿಯಿಂದ,ಪ್ರೀತಿಯಿಂದ ರಾಮ ತಿಂದ. ಅವಳ ಕೋರಿಕೆಗಾಗಿ ಎದುರುನೋಡಿದ. ಅವಳ ಕೋರಿಕೆ ಜಗದ ಹಿತವೇ ತನ್ನ ಹಿತವೆಂಬುದಾಗಿತ್ತು, ತನಗೆ ಸತತವಾಗಿ ಜನ್ಮಾಂತರಗಳಲ್ಲೂ ನಿನ್ನ ಭಕ್ತಿಯಿರಲಿ, ನಿನ್ನ ಕೃಪೆಯಿರಲಿ --ಇವಿಷ್ಟೆ ಆಗಿತ್ತು.

ಶಬರಿ

ಸ್ವಾಮೀ ಬಂದೆಯಾ ನಿನ್ನ ಕಾಣದೇ ಹಗಲಿರುಳು
ಧ್ಯಾನಿಸುತ ಇರುತಿದ್ದೆ ಕಾಲಪರ್ವದಲಿ
ರಾಮನಿನ್ನಯ ಪಾದ ಧೂಳಿಯನು ಸ್ವೀಕರಿಸಿ
ಧನ್ಯನಾದೆನು ಮುದುಕಿ ಜನ್ಮ ಜನ್ಮದಲಿ

ಬಾಷ್ಪವಿಳಿಯಿತು ಮನಕೆ ಬಹಳ ಸಂತಸವಾಗಿ
ಕಾಶ್ಯಪಾದಿಗಳೆಲ್ಲ ಹರಸಿಹರು ರಾಮಾ
ನಿಷ್ಫಲವು ಎಂದು ಹಳಹಳಿಸುತ್ತ ನೊಂದಿದ್ದೆ
ಪುಷ್ಪಗಳ ಹಂದರವು ಈಗ ಜೀವನವು

ಏಸೋ ದಿನಗಳು ನಿನ್ನ ಹಂಬಲಿಸಿ ಹಲವತ್ತು
ವಾಸಿಯಾಗದ ನೋವ ಮರೆತೆ ನಾ ರಾಮಾ
ನಾಸಿಕದಿ ಆಘ್ರಾಣಿಸುತಲೊಮ್ಮೆ ಹೂವುಗಳ
ವಾಸುಕೀಶಯನ ನಿನಗರ್ಪಿಸಲು ತಂದೆ

ಘಟ್ಟ ಘನಘೋರ ದುರ್ಗಮ ಕಾಡು ಕಣಿವೆಗಳ
ದಿಟ್ಟೆಯಾಗುತ ಜಯಿಸಿ ಹಣ್ಣುಗಳ ರಾಮಾ
ಬುಟ್ಟಿಯಲಿ ಕೊಯ್ದಿರಿಸಿ ಕಾದಿದ್ದೆ ನಿನಗಾಗಿ
ಕೊಟ್ಟು ನಮಿಸುವೆ ಕಚ್ಚಿ ಸಿಹಿಯಾದುದಾಯ್ದು

ನನ್ನತನವೆನಗಿಲ್ಲ ಬಂದುಹೋಗುವರಿಲ್ಲ
ಬಿನ್ನಾಣ ಬೆಡಗುಗಳ ಅರಿವಿಲ್ಲ ರಾಮಾ
ನನ್ನ ಹೃದಯದ ತುಂಬ ನಿನ್ನದೇ ಪ್ರತಿಬಿಂಬ
ಇನ್ನಾಯ್ತು ಸಾರ್ಥಕವು ಬದುಕಿದ್ದು ಜೀವ

ಮಗನ ರೂಪದಿ ಶುಭ್ರ ಗೌರವರ್ಣದಿ ಬಂದು
ಖಗವಾಹನನೆ ನಿಜದ ನೆಲೆಮರೆತು ರಾಮಾ
ಬಗೆಬಗೆಯ ಹೂವು ಹಣ್ಣುಗಳಿಹವು ನಿನಗಾಗಿ
ಜಗದ ಜೀವರ ಹರಸೋ ತಿಂದು ಸುಖದಿಂದ

Tuesday, April 13, 2010

ಶ್ರೀರಾಮ ನಿರ್ಯಾಣ

ಮಾತಾ ರಾಮೋ ಮತ್ಪಿತಾ ರಾಮಚಂದ್ರಃ
ಸ್ವಾಮೀ ರಾಮೋ ಮತ್ಸಖಾ ರಾಮಚಂದ್ರಃ |
ಸರ್ವಸ್ವಂ ಮೇ ರಾಮಚಂದ್ರೋ ದಯಾಲುಃ
ನಾನ್ಯಂ ಜಾನೆ ನೈವ ಜಾನೇ ನ ಜಾನೇ ||

ಪುಣ್ಯಪುರುಷರನ್ನು ಕಳೆದುಕೊಳ್ಳಲು ಮನಸ್ಸು ತಯಾರಾಗುವುದಿಲ್ಲ. ಅವರು ನಮ್ಮೊಟ್ಟಿಗೆ ಶಾಶ್ವತವಾಗಿ ಇದ್ದುಬಿಡಲಿ ಎಂಬ ಬಯಕೆ ನಮ್ಮದು. ಆದರೆ ಕಾಲನಿಗೆ ಹಾಗಲ್ಲ. ಕಾಲಚಕ್ರ ತಿರುಗುವ ಗತಿಯಲ್ಲಿ ಅದು ದಿವ್ಯ ಪುರುಷರನ್ನೂ ಇಲ್ಲಿ ಬಹಳ ಸಮಯ ಇರಗೊಡುವುದಿಲ್ಲ. ಮಹಾತ್ಮರ ನಿರ್ಯಾಣಗಳನ್ನು ಅವಲೋಕಿಸುವಾಗ ಹೃದಯವಂತರಿಗೆ ಕಣ್ಣಕೊನೆಯಲ್ಲಿ ಹನಿಗಳೆರಡು ಬಾರದೇ ಇರವು. ಭರತಖಂಡ ಕಂಡ ಅಂತಹ ಮಹಾಮಹಿಮನ ಅವತಾರ ಮುಕ್ತಾಯವನ್ನು ಅನಿವಾರ್ಯವಾದರೂ ನಾವು ಒಪ್ಪಿಕೊಳ್ಳಬೇಕಷ್ಟೇ. ಪರಮಾತ್ಮ ಮಾಹವಿಷ್ಣುವಿನ ಪೂರ್ಣಾವತಾರಗಳಲ್ಲಿ ಕೋಸಲಾಧಿಪ ಸೂರ್ಯ ವಂಶಜ ಶ್ರೀರಾಮಚಂದ್ರನ ರೂಪ ಕೂಡ ಒಂದು. ಅವತಾರಗಳಲ್ಲೇ ಶ್ರೇಷ್ಠ, ಎಂದಿಗೂ ನೆನಪಿಡಬಹುದಾದ ಅವತಾರಗಳಾದ ರಾಮಾವತಾರ ಮತ್ತು ಕೃಷ್ಣಾವತಾರಗಳು ಅತೀ ಪ್ರಾಮುಖ್ಯತೆ ಪಡೆದವುಗಳು. ಇವುಗಳಲ್ಲಿ ರೂಪ ಭೇದಗಳಿದ್ದರೂ ಯಾವುದೂ ಮೇಲೆ ಅಥವಾ ಕೆಳಗೆ ಎಂಬ ಯೋಚನೆ ಸಲ್ಲ. ಮಾನವ ಬದುಕಿಗೆ ಯಥಾ ಯೋಗ್ಯವಾದ ದಾರ್ಶನಿಕರಾಗಿ, ತಮ್ಮ ಜೀವಿತವನ್ನೇ ನಮಗಾಗಿ ಧಾರೆ ಎರೆದುಕೊಟ್ಟು ಹೋದ ಮಹಾನ್ ವ್ಯಕ್ತಿಗಳು ಶ್ರೀರಾಮ ಮತ್ತು ಶ್ರೀಕೃಷ್ಣ. ಈ ವ್ಯಕ್ತಿಗಳ ನೆನಪು ಬಂದಾಗ ಮನಸ್ಸು ಏನನ್ನೋ ಕಳಕೊಂಡಂತೆ ಒಳಗೊಳಗೇ ವಿಲವಿಲನೆ ಒದ್ದಾಡುತ್ತದೆ,ಚಡಪಡಿಸುತ್ತದೆ, ಕಾಣದ ಆ ಇಬ್ಬರನ್ನು ಎಲ್ಲೋ ಹುಡುಕಲು ತೊಡಗುತ್ತದೆ. ಅವರು ದೇವರು ಎನ್ನುವುದಕ್ಕಿಂತ ದಾರ್ಶನಿಕರು ಎಂದು ನೆನೆದು ನಮ್ಮಂತೆ ಮನುಷ್ಯರಾಗಿ ಪರೋಪಕಾರಿಯಾಗಿ ಅವರು ಪಟ್ಟ ಪಾಡನ್ನು ನೆನೆಸಿಕೊಂಡರೆ ನಮಗೆ ಅವರ ಒಂದಂಶವೂ ಸಾಧ್ಯವಿಲ್ಲವಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇಂತಹ ಸನ್ನಿವೇಶಗಳಲ್ಲಿ ಅವರನ್ನು ಕೊನೇಪಕ್ಷ ನೆನೆಸಿ ಕೊಳ್ಳುವುದು ನಮ್ಮ ಕರ್ತವ್ಯವಷ್ಟೇ ?

ಶ್ರೀರಾಮನವಮಿಯ ಸುತ್ತ ಹೆಣೆದ ವಿಷಯ ಸಂಚಾಲಿತ ಈ ಕಂತಿನಲ್ಲಿ ರಾಮ ನಿರ್ಯಾಣವನ್ನು ಬರೆಯುವಾಗ ಮನಸ್ಸು ಅದುರಿತು, ಚದುರಿತು, ಬರೆಯದೇ ಆಚೆ ಓಡಿ ಹೋಗುವ ಸ್ಥಿತಿಗೆ ಬರುತ್ತಿತ್ತು. ಯಾಕೆಂದರೆ ರಾಮ ಎಲ್ಲೂ ಹೋಗಿಲ್ಲ, ರಾಮ ಗುಡಿಗಳಲ್ಲಿಲ್ಲ, ರಾಮ ನಮ್ಮಲ್ಲೇ ನೆಲೆಸಿದ್ದಾನೆ, ಅಂತಹ ರಾಮನ ಅವಸಾನವಾಯ್ತು ಎಂದು ಬರೆಯಲು ಮನಸ್ಸು ತಯಾರಾಗುತ್ತಲೇ ಇರಲಿಲ್ಲ. ಕಣ್ಣ ಹನಿಗಳೊಂದಿಗೆ ಕೊನೆಗೂ ಮನಸ್ಸನ್ನು ಕಟ್ಟಿಹಾಕಿ ಬರೆದ ಕಥನ-ಕಾವ್ಯ ಈ ಶ್ರೀರಾಮ ನಿರ್ಯಾಣ.

ಸತ್ಪ್ರಜೆಗಳಿಂದ ತುಂಬಿ, ರಾಮರಾಜ್ಯವೆಂದೇ ಹೆಸರು ಪಡೆದ ಅಯೋಧ್ಯೆ ಎಂದಿನಂತೆ ರಾಮನ ರಾಜ್ಯಭಾರದಲ್ಲಿ ಕಂಗೊಳಿಸುತ್ತಿತ್ತು. ಶ್ರೀರಾಮ ರಾಜಸಭೆಯಲ್ಲಿ ಸಿಂಹಾಸನದಲ್ಲಿ ಕುಳಿತಿರಲು ಕಾಲನ ಆಗಮನವಾಗಿ ಆತ ನಡೆಸಿದ ಮಾತುಕತೆಯ ಫಲಶ್ರುತಿಗೆ ಮೊದಲನೆಯ ಆಹುತಿಯಾಗಿ ಶ್ರೀ ಲಕ್ಷ್ಮಣನ ದೇಹಾಂತ್ಯವಾಗುತ್ತದೆ. ಸರಯೂ ನದಿಯಲ್ಲಿ ಮುಳುಗಿ ಸರ್ಪದಂತೆ ಹೊರಳಿ ಹೊರಳಿ ತನ್ನ ದೆಹಾರ್ಪಣೆಗೈದ ಲಕ್ಷ್ಮಣ ವೈಕುಂಠದಲ್ಲಿ ಮಹಾವಿಷ್ಣುವಿನ ಹಾಸಿಗೆಯಾಗಿರುವ ವಾಸುಕಿಯೇ ಆತನ ರೂಪದಲ್ಲಿ ಭುವಿಗೆ ಬಂದಿದ್ದ ನೆಂಬ ಸಂದೇಶ ನಮಗೆ ಸಿಗುತ್ತದೆ. ಅಂತೆಯೇ ಸೀತಾಮಾತೆ ಕೂಡ ಶೀ ಮಹಾಲಕ್ಷ್ಮಿಯ ಭುವಿಯ ಅವತಾರ ! ಸಾಕ್ಷಾತ್ ಮಹಾವಿಷ್ಣು ರಾಮನಾಗಿ ಭೂಮಿಗೆ ಬಂದಾಗ ಅವರೆಲ್ಲ ಅವನ ಸಂಗಡಿಗರಾಗಿ ಬಂದರು. ಇದನ್ನೇ ಕಾಲ ಹೇಳಲು ಬಂದಿದ್ದ.
" ಶ್ರೀರಾಮ ಬಂದು ಬಹಳ ಕಾಲ ಸಂದುಹೋಯಿತು, ಇಲ್ಲೇ ಈ ಭೂಮಿಯಲ್ಲಿ ಇದ್ದುಬಿಟ್ಟೆಯಲ್ಲ, ನೀನು ವೈಕುಂಠದ ಶ್ರೀ ಮಹಾವಿಷ್ಣು ಎಂಬುದನ್ನು ನಿನಗೇ ನೆನಪಿಸಲೂ, ನಿನ್ನನ್ನು ಅಲ್ಲಿಗೆ ಪುನಃ ಆಹ್ವಾನಿಸಲೂ ಬಂದಿದ್ದೇನೆ, ಇನ್ನು ಇಲ್ಲಿಯ ರಾಜ್ಯಭಾರ ಸಾಕು, ತಿಳಿದು ಸಮಯನೋಡಿ ಶೀಘ್ರ ನಿನ್ನ ಅವತಾರ ಸಮಾಪ್ತಿಗೊಳಿಸು" --ಕಾಲಪುರುಷ ಆದೇಶಿಸಿದ್ದಾನೆ, ಎಚ್ಚರಿಸಿದ್ದಾನೆ.

ರಾಮ ಎಲ್ಲವನ್ನೂ ಅವಲೋಕಿಸಿದ್ದಾನೆ. ಪ್ರಜೆಗಳ ಹಿತಕ್ಕಾಗಿಯೇ ತನ್ನೆಲ್ಲ ಜೀವಿತವನ್ನು ಕಳೆದಿದ್ದಾನೆ. ರಾಮನಿಗೆ ದಿನವಹಿ ಪ್ರಜೆಗಳಬಗ್ಗೇ ತುಡಿತ ಬಿಟ್ಟರೆ ತನ್ನ ವೈಯಕ್ತಿಕ ಬೇಕು-ಬೇಡಗಳನ್ನು ಎಂದೂ ಆತ ಲಕ್ಷ್ಯಿಸಲಿಲ್ಲ. ಅಗ್ನಿದೇವನ ಅನುಗ್ರಹದಿಂದ ಪಾಯಸದ ಪಾಲನ್ನು ಉಂಡ ತನ್ನ ತಾಯಿ ಕೌಸಲ್ಯೆಯ ಉದರದಲ್ಲಿ ಜನಿಸಿದ ಕೌಸಲ್ಯಾರಾಮ. ಋಷಿಗಳು ನಿರ್ಧರಿಸಿ ತನಗೆ ಈ ಹೆಸರು ಕೊಟ್ಟರು. ಬಾಲ್ಯದಲ್ಲಿ ವಿದ್ಯಾಭ್ಯಾಸದ ಹಂತ ಬಂತು. ಮಹರ್ಷಿ ವಿಶ್ವಾಮಿತ್ರರು ಗುರುವಾಗಿ ಆಸ್ಥಾನಕ್ಕೆ ಬಂದು ತನ್ನನ್ನೂ ತಮ್ಮ ಲಕ್ಷ್ಮಣನನ್ನೂ ಕಾಡಿಗೆ ಕರೆದೊಯ್ದರು. ಅಲ್ಲಿ ನಮಗೆ ಬಿಲ್ಲು ವಿದ್ಯೆ ಹೇಳಿಕೊಟ್ಟರು, ಅದಕ್ಕೆ ಪೂರಕ ಮಂತ್ರೋಪದೇಶ ನೀಡಿದರು. ತಂದೆ ದಶರಥ ಚಿಕ್ಕವರೆಂಬ ಕಾರಣದಿಂದ ಕಾಡಿಗೆ ಕಳಿಸಲು ಹಿಂದೆ ಮುಂದೆ ನೋಡಿದಾಗ ನಮ್ಮ ಸಂಪೂರ್ಣ ಜವಾಬ್ದಾರಿ ಹೊತ್ತು ಕಾಡಿಗೆ ಕರೆದೊಯ್ದು ಬದುಕಿನ ಮಜಲುಗಳನ್ನು ತೋರಿಸುತ್ತ ನಡೆದರು.ಪೂಜ್ಯರಾದ ವಿಶ್ವಾಮಿತ್ರರು ಬರದೇ ಇದ್ದರೆ ಅಂದು ತಮಗೆ ಇಷ್ಟೊಂದು ಮನೋ ದಾರ್ಷ್ಟ್ಯತೆ ಬರುತ್ತಿರಲಿಲ್ಲ. ತಾಟಕೆಯನ್ನು ವಧಿಸಿ,ಸುಭಾಹು-ಮಾರೀಚರನ್ನು ಓಡಿಸಿ ಯಜ್ಞಪೂರ್ತಿಗೆ ಕಾವಲುನಿಂತು ಹಲವನ್ನು ಗುರುಮುಖದಿಂದ ಕಲಿತೆವು. ಪ್ರಾಯ ಪ್ರಭುದ್ಧರಾದಾಗ ಮತ್ತೆ ಋಷಿಗಳು ಹೇಳಿದ ಪ್ರಕಾರ ಶಿವಧನುಸ್ಸನ್ನು ಮುರಿದಿದ್ದಾಯ್ತು, ಸೀತೆಯನ್ನು ಮಡದಿಯಾಗಿ ಪಡೆದಿದ್ದಾಯ್ತು.

ರಾಜ್ಯಭಾರ ನಡೆಸಲು ಯುವರಾಜ ಪಟ್ಟಕ್ಕೆ ಮಂಥರೆಯ ಕುಹಕ ಉಪದೇಶದಿಂದ ಚಿಕ್ಕಮ್ಮ ಕೈಕೇಯಿ ಜಗಳಕ್ಕೆ ನಿಂತಾಗ ತಾಯಿ-ತಂದೆಯ ಮೂಕ ಆಜ್ಞೆಗೆ ಕಟ್ಟುಬಿದ್ದು ಪುನಃ ೧೪ ವರುಷ ವನವಾಸಕ್ಕೆ ತೆರಳಿದ್ದಾಯ್ತು ಆ ದಾಶರಥಿರಾಮ. ಕಾಡಿನಲ್ಲೂ ತಮಗೆ ತಮ್ಮಪಾಡಿಗೆ ಇರಲು ರಾಕ್ಷಸೀ ಪ್ರವೃತ್ತಿಯವರು ಬಿಡಲಿಲ್ಲ. ತಮ್ಮ ಭರತ ತಮ್ಮನ್ನು ಹುಡುಕುತ್ತ ಪಿತೃವಿಯೋಗದ ಸುದ್ದಿ ತಂದ,ಏನು ಮಾಡೋಣ, ವಿಧಿ ಕೊನೆಯ ಕ್ಷಣದಲ್ಲೂ ತಂದೆಯನ್ನು ನೋಡಲು ಅವಕಾಶಕೊಡಲಿಲ್ಲ. ಅತ್ತ ಕಾಡಲ್ಲಿ ಅಲ್ಲೊಬ್ಬಳು ಶೂರ್ಪನಖಿ ಅಡ್ಡ ಬಂದಳು, ಅವಳನ್ನು ಮಟ್ಟಹಾಕಲು ಹೋಗಿ ಗೊತ್ತಿಲ್ಲದ ರಾವಣನನ್ನು ಎದುರುಹಾಕಿಕೊಳ್ಳುವ ಪ್ರಮೇಯ ಬಂತು! ಬಂಗಾರದ ಜಿಂಕೆಯ ಆಮಿಷ ತೋರಿಸಿ ತನ್ನ ಸೆಳೆದು, ತನ್ನ ಅನಿವಾರ್ಯತೆಯಲ್ಲಿ ಸೀತೆಯನ್ನು ರಾವಣ ಕದ್ದೊಯ್ದ. ಸೀತೆಗಾಗಿ ಹುಡುಕಿ ಅಲೆದು ಬಳಲಿದೆ.ಮುಂದೆ ಸಾಗುತ್ತ ಜಟಾಯುವಿನ ಮೂಲಕ ವಿಷಯ ತಿಳಿದು ಹಾಗೇ ಹುಡುಕುವಾಗ ವಾನರ ವೀರರ ಪರಿಚಯವಾಯ್ತು. ವಾಲಿ-ಸುಗ್ರೀವ-ಹನುಮ-ಅಂಗದ ಮೊದಲಾದ ಹಲವರು ಸಿಕ್ಕರು. ನಿಸ್ಪೃಹ ಸೇವಕ ದಾಸಶ್ರೇಷ್ಠ ಹನುಮ ಜೊತೆಗೂಡಿದ, ಆತನ ಸಾಹಚರ್ಯದಿಂದಲೇ ಲಂಕೆಯ ಪತ್ತೆ, ಅಲ್ಲಿಗೆ ಗಮನ ಮತ್ತು ರಾವಣ ವಧೆ ಇವೆಲ್ಲ ನಡೆಯಿತು. ಅಂತೂ ಸೀತೆಯನ್ನು ಮರಳಿ ಪಡೆದು ರಾಜ್ಯಕ್ಕೆ ಮರಳುವಷ್ಟರಲ್ಲಿ ಎಲ್ಲಾ ಸೇರಿ ರಾಜ್ಯದ ಪಟ್ಟ ಕಟ್ಟಿ ಪಟ್ಟಾಭಿರಾಮನನ್ನಾಗಿಸಿದರು. ಮತ್ತೆ ಅಗಸನ ಮಾತಿಗೂ ಬೆಲೆಕೊಟ್ಟು ಸೀತೆಯನ್ನೇ ಕಾಡಿಗೆ ಕಳಿಸಬೇಕಾದ ಪ್ರಸಂಗ ಬಂತು. ಕಾಡಲ್ಲಿ ಬಸುರಿ ಹೆಂಗಸನ್ನು ಬಿಟ್ಟುಬರುವ ಅನಿವಾರ್ಯತೆ ಬಂತು, ನಂತರ ಪುರದ ಪುಣ್ಯವೋ ತನ್ನ ಭಾಗ್ಯವೋ ಮಹರ್ಷಿ ವಾಲ್ಮೀಕಿಯ ಆಶ್ರಯ ತಮ್ಮ ಸೀತೆಗೆ ಸಿಕ್ಕು ಸುಪುತ್ರರಾದ ಲವ-ಕುಶರಿಗೆ ಒಳ್ಳೆಯ ಮುಹೂರ್ತದಲ್ಲಿ ಜನ್ಮನೀಡಿದಳು ಎಂಬುದು ವರ್ಷಗಳ ತರುವಾಯ ತಿಳಿದುಬಂತು. ಮರಳಿ ಕರೆತರಲು ಹೋದಾಗ ದುಃಖಿತ ಸೀತೆ ಜನನಿ ಭೂಮಿಯನ್ನು ಧ್ಯಾನಿಸಿ ಬಾಯ್ದೆರೆದ ಭೂಮಿಯಲ್ಲಿ ಹೊಕ್ಕು ನಮ್ಮನ್ನೆಲ್ಲ ತೊರೆದಳು.ಮಡದಿಯನ್ನು ಕಳೆದುಕೊಂಡ ರಾಮ ಯಾಕಾಗಿ ಬದುಕಬೇಕು, ಯಾವ ಮಡದಿಗಾಗಿ,ಅವಳ ರಕ್ಷಣೆಗಾಗಿ ಘನಘೋರ ಯುದ್ಧ ನಡೆಯಿತೋ ಅಂತಹ ಮಡದಿಯನ್ನೇ ಕಳೆದುಕೊಂಡು ಸೀತಾರಾಮ ಸೀತೆಯಿರದ ರಾಮನಾಗಿ ಬದುಕಿ ಏನು ಪ್ರಯೋಜನ,ಆದರೆ ಕರ್ತವ್ಯದ ಕೆರೆಯಿತ್ತು, ರಾಮ ತನಗಾಗಲ್ಲ, ಆತನೊಬ್ಬ ರಾಜ. ರಾಜಕಾರ್ಯದ ನಿಮಿತ್ತ ಆತ ಜೀವಿಸಬೇಕಾಗಿತ್ತು. ಇಂತಹ ವಿಷಮ ಸ್ಥಿತಿಗಳಲ್ಲೂ ಪರಿಸ್ಥಿಯನ್ನು ನಿಭಾಯಿಸುವ ಪಾಠಕಲಿತ-ಕಲಿಸಿದ ರಾಮ ಇಂದು ಹೊರಟು ನಿಂತಿದ್ದ!
ಕಾಲನ ಅನುಜ್ಞೆಯಂತೆ ಮರಳಿ ವೈಕುಂಠಕ್ಕೆ!

ಪ್ರೀತಿ ಪಾತ್ರರಾದ ಪ್ರಜೆಗಳ ಕಣ್ಣಲ್ಲಿ ನೀರು ಕಂಡವನಲ್ಲ ರಾಮ. ಅದನ್ನು ಕಾಣಬಯಸುವ ವ್ಯಕ್ತಿಯೂ ಅಲ್ಲ. ರಾಮನೇ ಸರ್ವಸ್ವವೆಂದು ತಿಳಿದು ಬದುಕಿದ್ದ ಪ್ರಜೆಗಳಿಗಾಗಿ ಬದುಕಿದ್ದ ರಾಜಾರಾಮ,ಆದರೂ ಇಂದು ಕರೆಯನ್ನು ಹಿಮ್ಮೆಟ್ಟಿಸುವಂತಿರಲಿಲ್ಲ.ತನ್ನ ಸ್ವಾರ್ಥಕ್ಕಾಗಿ ತಾನು ಬದುಕಿಲ್ಲ, ಸಿಂಹಾಸನಕ್ಕೆ ಅಂಟಿಕೊಂಡಿಲ್ಲ, ಬದಲು ಆಪ್ತತೆ ತುಂಬಿದ, ಮುಗ್ಧ ಪ್ರಜೆಗಳ ಪ್ರೀತಿಗಾಗಿ, ಅವರ ರಕ್ಷಣೆಗಾಗಿ, ಅವರ ಪೋಷಣೆಗಾಗಿ, ಅವರ ರಂಜನೆಗಾಗಿ, ಅವರ ಮುಖದ ಮುಗ್ಧ ನಗುವಿಗಾಗಿ, ಅವರ ಇಷ್ಟಾರ್ಥ ಸಿದ್ಧಿಗಾಗಿ, ಅವರ ಸಮಸ್ಯೆಗಳನ್ನು ಆಲೈಸಿ ಪರಿಹರಿಸಲಾಗಿ, ಅವರಿಗೊಂದು ಚಂದದ ಬಾಳ್ವೆ ಕಟ್ಟಿಕೊಡಲಾಗಿ, ಅವರ ನೆಂಟನಾಗಿ-ಭಂಟನಾಗಿ ರಾಮ ಪ್ರಜೆಗಳಿಗೆ ಮನಸೋತಿದ್ದ, ವೈಕುಂಠವನ್ನೇ ಮರೆತುಬಿಟ್ಟಿದ್ದ. ಪ್ರಜೆಗಳೂ ಅಷ್ಟೇ-- ಕಡ್ಡಿ ಅಲ್ಲಾಡಿದರೂ ರಾಮ, ಗಾಳಿಗೆ ಕಸ ತೂರಿಬಂದರೂ ರಾಮ, ನಿಂತರೂ ರಾಮ ಕುಂತರೂ ರಾಮ, ರಾಮಾವಲಂಬಿತ ಜೀವನ ಅವರದಾಗಿತ್ತು. ಏನಾದರೂ ರಾಮ ಮಾತ್ರ ತಮ್ಮನ್ನು ಬಿಟ್ಟುಕೊಡಲಾರ, ಎಂತಹ ಕ್ಷಣದಲ್ಲೂ ರಾಮನಿದ್ದಾನೆ ಎಂದೇ ಅವರು ಧೈರ್ಯದಿಂದ, ಪ್ರೀತಿಯಿಂದ,ಭಕ್ತಿಯಿಂದ ಜೀವಿಸಿದ್ದರು. ಪರಸ್ಪರ ನಿರಾತಂಕವಾಗಿ, ಸುಲಿಗೆ-ದರೋಡೆ-ಕಳ್ಳತನ-ಮೋಸ-ವಂಚನೆ ಇಲ್ಲದೇ ಪ್ರಾಮಾಣಿಕವಾಗಿ ಬದುಕು ನಡೆಸಿದ್ದರು. ಇಂತಹ ಸತ್ಪ್ರಜೆಗಳನ್ನು ಬಿಟ್ಟು ಹೊರಡಲು ರಾಮನ ಮನಸ್ಸು ಇಷ್ಟಪಟ್ಟಿರಲಿಲ್ಲ. ಆದರೂ ಇಂದು ಹೊರಟುನಿಂತಿದ್ದಾನೆ ಶ್ರೀರಾಮ. ಸ್ಥಿತಪ್ರಜ್ಞ ಋಷಿಸದೃಶ ರಾಮ ಅಳಲಾರ, ಅಳಲು ತೋಡಿಕೊಳ್ಳಲಾರ, ಹೇಳಲಾರ, ಹೇಳದೆ ಇರಲಾರ, ಆಡಲಾರ, ಅನುಭವಿಸಲಾರ. ಆತನ ಮನದಲ್ಲಿ ಉದ್ಭವಿಸಿದ ಆ ಮೂಕ ರೋದನ ಅದು ಅಸಾಧ್ಯ ವೇದನೆ. ತಣ್ಣೀರನ್ನೂ ತಣಿಸಿ ಕುಡಿ ಎಂಬ ಗಾದೆಯಂತೆ ನಿಧಾನವಾಗಿ ಪ್ರಜೆಗಳನ್ನು ಕರೆದು ತನ್ನ ನಿರ್ಯಾಣದ ನಿರ್ಧಾರವನ್ನು ಚಿಕ್ಕ ಮಕ್ಕಳಿಗೆ ಅಮ್ಮ " ಮನೆಯಲ್ಲೇ ಇರು ಇಲ್ಲೇ ವೈದ್ಯರಹತ್ತಿರ ಹೋಗಿಬರುತ್ತೇನೆ" ಎಂದು ಹೇಳಿ ಹೋಗುವಂತೆ ಹೇಳಿದ್ದಾನೆ, ನಿಧಾನ ನಿಧಾನ ನಿಧಾನ ಮಾಡುತ್ತಾ ಪುನಃ ಈ ರಾಮ ಬರುವುದಿಲ್ಲವೆಂತಲೂ ಸಾರಿಬಿಟ್ಟಿದ್ದಾನೆ. ಸಹಿಸಲು ಸಾಧ್ಯವೇ ಇಲ್ಲದ ಪ್ರಜೆಗಳು ಭೋರ್ಗರೆದು ಧುಮ್ಮಿಕ್ಕುವ ಜಲಲ ಧಾರೆಯಂತೆ ಕಣ್ಣೀರು ಹರಿಸಿದ್ದಾರೆ. ಇಂದು ಮಾತ್ರ ಆ ಕಣ್ಣೀರು ಒರೆಸುವ ಕೈ ಕೆಲಸಮಾಡುವ ಮಿತಿಯನ್ನು ಮೀರಿತ್ತು. ಆ ಸಂದರ್ಭ ರಾಮ ತನ್ನ ಬದುಕಿನ ಸಿಂಹಾವಲೋಕನ ಮಾಡಿದ್ದಾನೆ ---





ಶ್ರೀರಾಮ ನಿರ್ಯಾಣ


ಬದುಕು ಬಳ್ಳಿಯ ಹರಿವ ಕ್ಷಣವು ಬಂದಿಹುದೆನಗೆ
ಇದಕೆ ಸಂಕಟವಾಯ್ತು ಈ ಜಿಹ್ವೆಯೊಳಗೆ
ತದಕಾಡಿದರು ಸಿಗದ ಸತ್ಪ್ರಜೆಗಳಿಹ ರಾಜ್ಯ
ಅದಕಾಯ್ತು ವೇದನೆಯು ಮನದಗುಡಿಯೊಳಗೆ


ಉಂಡುಟ್ಟು ಸುಖವಾಗಿ ನಲಿವ ಪ್ರಜೆಗಳ ದಂಡು
ಕಂಡಷ್ಟೂ ಖುಷಿಯೆನಗೆ ದಿನವೂ ರಾಜ್ಯದಲಿ
ಒಂದಷ್ಟು ನಗೆಯ ಅಲೆಗಳು ಅವರ ವದನದಲಿ
ಬಂದಷ್ಟು ನಡೆವುದದು ರಾಜ್ಯ ತುಷ್ಟಿಯಲಿ


ಪುಣ್ಯ ನದಿ ಸರಯೂ ಹರಿದಿಹ ನಾಡು ಕೋಸಲೆಯು
ಗಣ್ಯ ಮನಗಳ ಇಹದ ಸ್ವರ್ಗಸಮ ಬೀಡು
ನಾಣ್ಯನಗದಾ ಚಿಂತೆ ಕಾಡದಿಹ ಸಿರಿತನವು
ವನ್ಯಸಂಪದ ತುಳುಕಿ ಹರಿದ ನಲುನಾಡು


ಮುನಿವರೇಣ್ಯರು ಹರಸಿ ನಡೆತಂದ ರಾಜ್ಯವಿದು
ಘನತೆವೆತ್ತಿಹ ದಶರಥನ ಸಂಸ್ಥಾನ
ಧನಕನಕ ಮುತ್ತು ರತ್ನವು ಹವಳ ವಜ್ರಗಳು
ಮನೆಮನೆಯ ತುಂಬಿಸಿದ ಪ್ರಜೆಗಳಾಸ್ಥಾನ


ಸೂರ್ಯವಂಶದ ಸಾಹಸಿಗಳಾಳಿದೀ ಭೂಮಿ
ಕಾರ್ಯಭಾರವು ಬೆಸೆದು ಮನದ ಮೂಸೆಯಲಿ
ಆರ್ಯ ಸಂಸ್ಕೃತಿಯಲ್ಲಿ ಮೇರುತೆರದಲಿ ಮೆರೆವ
ವೀರ್ಯವಂತರು ಬದುಕಿದೀ ದೇಶದಲ್ಲಿ


ಚಿನ್ನದಂತಹ ಮಡದಿ ಸೀತೆಗತಿಸಲು ಕೂಡ
ನನ್ನ ನೋವನು ಮರೆತೆ ರಾಜ್ಯಭಾರದಲಿ
ರನ್ನದಂತಹ ತಮ್ಮ ಲಕ್ಷ್ಮಣನ ಕಳಕೊಂಡೆ
ಇನ್ನಾಯ್ತು ವಿಧಿಯೆನಗೆ ಕಾಲರೂಪದಲಿ

Wednesday, March 24, 2010

ಎಲ್ಲಿ ತೆರಳಲೇಕೆ ನಾನು ?



ಶ್ರೀರಾಮನವಮಿಯ ಸುತ್ತಮುತ್ತ ನಡೆಸುತ್ತಿರುವ ವಿಷಯ ಸಂಚಾಲಿತ ಕಥನ-ಕವನದಲ್ಲಿ ಇಂದಿನ ಪಾತ್ರ ರಾಮಾಯಣದಲ್ಲಿ ಅಂತ್ಯಕಾಲದ ' ಲಕ್ಷ್ಮಣನ ಸ್ವಗತ '.

ಬಹುತೇಕ ರಾಮಾವತಾರ ಮುಕ್ತಾಯಕ್ಕೆ ಬಂದ ಸಮಯ. ಪ್ರಭು ಶ್ರೀರಾಮನ ರಾಮರಾಜ್ಯ ಬಹಳ ಪ್ರಸಿದ್ಧಿ ಪಡೆದಿದೆ. ಪ್ರಜೆಗಳೆಲ್ಲ ಉಂಡುಟ್ಟು ಸುಖದಿಂದಿರುವಾಗ, ರಾಜಕಾರ್ಯದಲ್ಲಿ ರಾಮಾದಿಗಳು ತೊಡಗಿರುವ ವೇಳೆ ಕಾಲ ಪುರುಷ ಶ್ರೀರಾಮನನ್ನು ನೋಡಬೇಕು ಎಂದು ಬರುತ್ತಾನೆ. ಸಿನ್ಹಾಸನಾರೂಢ ರಾಮಚಂದ್ರನಿಗೆ ದೂರದಲ್ಲಿ ಬಂದು ನಿಂತಿರುವ ಕಾಲಪುರುಷ ಕಾಣಿಸುತ್ತಾನೆ, ರಘುವೀರ ಆತನನ್ನು ಆದರದಿಂದ ಬರಮಾಡಿಕೊಳ್ಳುತ್ತಾನೆ. ಆತ ಬಂದಾಗಲೇ ಗೊತ್ತು ರಾಮನಿಗೆ 'ನಮ್ಮ ಕಾಲ ಸನ್ನಿಹಿತವಾಗಿದೆ' ಎಂದು ! ಆದರೂ ಪ್ರತ್ಯಕ್ಷ ಅವನಲ್ಲಿ ಕೇಳಲು ಹೋಗುವುದಿಲ್ಲ. ಬಂದ ಕಾಲ ಆತಿಥ್ಯ ಸ್ವೀಕಾರಮಾಡಿದ ಮೇಲೆ ಮತ್ತೆನಾಗಬೇಕೆಂಬ ಪ್ರಶ್ನೆ ಕೇಳುತ್ತಾನೆ ಶ್ರೀರಾಮ. ' ರಾಮನ ಕೂಡ ಏಕಾಂತದಲ್ಲಿ ಮಾತನಾಡಬೇಕು, ಅಲ್ಲಿಗೆ ಯಾರೂ ಬರಕೂಡದು' ಎಂಬ ಶರತ್ತನ್ನು ವಿಧಿಸಿ ಕಾಲಪುರುಷ ರಾಮನಿಗೆ ಹೇಳುತ್ತಾನೆ. ರಾಮ ತಮ್ಮ ಲಕ್ಷ್ಮಣನನ್ನು ಕರೆದು ಏಕಾಂತದ ಮಾತುಕತೆಗೆ ಏರ್ಪಾಟುಮಾಡುವಂತೆಯೂ, ಏಕಾಂತಕ್ಕೆ ಭಂಗ ಬಂದರೆ ದೇಹಾಂತ ಶಿಕ್ಷೆ ವಿಧಿಸಲಾಗುವುದು ಎಂದು ಕಾಲನ ಇಚ್ಛೆಯಂತೆ ತಮ್ಮನಿಗೆ ಹೇಳುತ್ತಾನೆ. ಅಣ್ಣನ ಮಾತನ್ನು ಎಂದೂ ಎಂದೆಂದೂ ಶಿರಸಾವಹಿಸಿದ ತಮ್ಮ ಲಕ್ಷ್ಮಣ ಅಂದೂ ಕೂಡ ಹಾಗೇಯೇ ನಡೆದುಕೊಳ್ಳುತ್ತಾನೆ. ಏಕಾಂತ ಪ್ರಾರಂಭವಾಗುತ್ತದೆ. ಅಲ್ಲಿ ಕಾಲಪುರುಷ ರಾಮನಿಗೆ ಅವತಾರ ಸಮಾಪ್ತಿಗೊಳಿಸಿ ಭುವಿಯಲ್ಲಿ ಸ್ಥಿರವಾಗಿರದೇ ವೈಕುಂಕ್ಕೆ ಮರಳಲು ನೆನಪಿಸುತ್ತಿರುತ್ತಾನೆ.

ಎಲ್ಲೆಲ್ಲೋ ಅಂಡಲೆಯುತ್ತಿದ್ದ ದೂರ್ವಾಸರು ತಿರುಗುತ್ತಾ ತಿರುಗುತ್ತಾ ಅಯೋಧ್ಯೆಗೆ ಬಂದುಬಿಡುತ್ತಾರೆ. ಬಂದವರನ್ನು ಲಕ್ಷ್ಮಣ ಅಣ್ಣನ ಪರವಾಗಿ ಸ್ವಾಗತಿಸಿ, ಅರ್ಘ್ಯ-ಪಾದ್ಯಗಳನ್ನಿತ್ತು ಸತ್ಕರಿಸುತ್ತಾನೆ. ತಾನು ರಾಮನನ್ನು ನೋಡಲೆಂದೇ ಬಂದಿರುವುದಾಗಿಯೂ ತನಗೆ ತುರ್ತಾಗಿ ರಾಮನನ್ನು ನೋಡಲೇ ಬೇಕೆಂದೂ ದೂರ್ವಾಸರು ಸಾರುತ್ತಾರೆ. ಒಂದು ಕಡೆ ಅಣ್ಣನ ಆಜ್ಞೆ, ಇನ್ನೊಂದು ಕಡೆ ಮುನಿಯ ಅಪೇಕ್ಷೆ. ಮುನಿಯೆಂದರೆ ಆತ ಮುನಿಯುವ ಮುನಿ, ಬಹಳ ಜನ ಅವರಿಂದ ದೂರವೇ ವಾಸವಿದ್ದರೆ ಸಾಕು ಎಂಬಂತೆ ಹೆದರಿಕೆ ಉಂಟುಮಾಡಿರುವ ಕೋಪದ ಪ್ರತಿರೂಪವಾದ ದೂರ್ವಾಸ ! ತಲೆನೋವು ತಂದುಕೊಂಡ ಲಕ್ಷ್ಮಣ ಏನು ಮಾಡಬೇಕೆಂದು ತೋಚದೆ ಕಂಗಾಲಾಗುತ್ತಾನೆ. ದೂರ್ವಾಸರ ಕೋಪ ಪ್ರಾರಂಭವಾಗಿರುತ್ತದೆ. ರಾಮದರ್ಶನ ಬಯಸಿಬಂದ ಯಾರಿಗೇ ಆಗಲಿ ಲಕ್ಷ್ಮಣ ಇಲ್ಲಾ ಎಂದಿರಲಿಲ್ಲ. ಅಣ್ಣನ ಆಜ್ಞೆಯಿದೆ ಯಾರನ್ನೂ ಒಳಗೆ ಬಿಡುವಂತಿಲ್ಲ ಅಂದರೂ ದೂರ್ವಾಸರು ಕೇಳಬೇಕಲ್ಲ ! ಲಕ್ಷ್ಮಣ ಶತಪಥ ತಿರುಗುತ್ತ ಅಣ್ಣ ಎಲ್ಲಾದರೂ ಕಿಟಕಿಯಲ್ಲಾದರೂ ಕಾಣಸಿಗುವನೇ ಎಂದು ನೋಡುತ್ತಾನೆ. ಉಹುಂ ! ಇಲ್ಲ, ಮಾತಿಗೆ ಅಣ್ಣ ಸಿಗುತ್ತಿಲ್ಲ. ಏನುಮಾಡಲಿ ಏನುಮಾಡಲಿ ಎಂದು ಕೈಕೈ ಹೊಸಕಿಕೊಳ್ಳುತ್ತ ಕೊನೆಗೊಮ್ಮೆ ಮುನಿಯ ಆವೇಶ,ಆಕ್ರೋಶ ತಾಳಲಾರದೆ ದೂರ್ವಾಸರನ್ನು ಒಳಗೆ ಪ್ರವೇಶಕ್ಕೆ ಬಿಟ್ಟುಬಿಡುತ್ತಾನೆ. ಏಕಾಂತಕ್ಕೆ ಭಂಗಬಂತೆಂದು ಕಾಲಪುರುಷ ಕೆಲಕ್ಷಣಗಳಲ್ಲೇ ಹೊರಟುಹೋಗುತ್ತಾನೆ,ಹೋಗುವ ಮುನ್ನ ಲಕ್ಷ್ಮಣನಿಗೆ ದೇಹಾಂತ ಶಿಕ್ಷೆ ನೀಡುವಂತೆ ತಾಕೀತು ಮಾಡಿ ಹೋಗುತ್ತಾನೆ. ಆ ಬಳಿಕ ರಾಮ ಬಂದ ದೂರ್ವಾಸರನ್ನು ಉಪಚರಿಸಿದ ನಂತರ ಆಜ್ಞೆಯ ಉಲ್ಲಂಘನೆ ಆಗಿದ್ದಕ್ಕೆ ಪ್ರೀತಿಯ ತಮ್ಮನಲ್ಲಿ ಪ್ರಸ್ತಾವಿಸಿ ಶಿಕ್ಷೆಯನ್ನು ಅಂಗೀಕಾರಮಾಡದೇ ವಿಧಿಯಿಲ್ಲ ಎನ್ನುತ್ತಾನೆ.

ಪ್ರಜಾಪಾಲಕ ಸಾರ್ವಭೌಮ ರಾಮ ಇಂದು ಈ ವಿಷಯದಲ್ಲಿ ನಿರ್ವೀರ್ಯನಾಗಿದ್ದಾನೆ. ಸಾವಿರ ಸಾವಿರ ಜನರ ಆರ್ತನಾದ ಆಲಿಸಿ ಮನ್ನಿಸುವ-ಅವರ ಅಹವಾಲು ಸ್ವೀಕರಿಸಿ ಪರಿಹಾರ ಒದಗಿಸುವ ಕೈ ಇಂದು ಪರಿಹಾರವಿಲ್ಲದ ಬರಿಗೈಯ್ಯಾಗಿ ಬೆವರ ಹನಿಗಳೂ ಬತ್ತಿಹೋದ ಸ್ಥಿತಿಯಲ್ಲಿವೆ.ಕಣ್ಣಾಲಿಗಳು ತುಂಬಿ ಬಂದರೂ ಹನಿಗಳುದುರಿದರೆ ಸಭಿಕರು ನೋಡಿ ಏನೆಂದಾರು ಎಂಬ ಅನಿಸಿಕೆ ಕಾಡುತ್ತಿದೆ. ಕಾಡಿನಲ್ಲೂ ನಾಡಿನಲ್ಲೂ ತನ್ನ ಜೊತೆಗೇ ಇದ್ದು, ತನಗೆ ಬೇಕಾದ ಎಲ್ಲಾ ಕೆಲಸಗಳನ್ನು ಪೂರೈಸುತ್ತಿದ್ದ, ತನ್ನ ಶರೀರದ ಒಂದು ಅವಿಭಾಜ್ಯ ಅಂಗವಾದ ನಲ್ಮೆಯ ತಮ್ಮ ಲಕ್ಷ್ಮಣ ಇಂದು ಭಾಜ್ಯವಾಗಿ ದೂರಹೊಗಬೇಕಾಗಿ ಬಂದಿದೆ. ಲಕ್ಷೋಪಲಕ್ಷ ಜೀವಜಂತುಗಳಿಗೆ ಜೀವಿತವನ್ನು ವಿಸ್ತರಿಸಿದ ರಾಮ, ಕಲ್ಲಾಗಿ ಬಿದ್ದ ಅಹಲ್ಯೆಗೆ ಜೀವ ತುಂಬಿದ ರಾಮ, ಶರಣು ಎಂದ ವಿಭೀಷಣಗೆ ಪಟ್ಟಗಟ್ಟಿದ ರಾಮ, ಅಳಿಲು ಸೇವೆಯನ್ನೂ ಪರಿಗಣಿಸುತ್ತ ಅಳಿಲಿಗೂ ಪ್ರೀತಿಯ ಹಸ್ತರೇಖೆ ಎಳೆದು ಹರಸಿದ ರಾಮ ಅಧೀರನಾಗಿದ್ದಾನೆ! ತನ್ನಷ್ಟಕ್ಕೇ ತಾನು ಎಲ್ಲವನ್ನೂ ನೆನೆನೆನೆದು ಗಡಗಡ ನಡುಗುತ್ತಿದ್ದಾನೆ! ಆದರೆ ಹೊರಗಡೆ ವ್ಯಕ್ತಪಡಿಸಲಾರದ ರಾಜಾರಾಮ ಅವನು! ರಾಜನಾಗಿ ವಿಧಿಸಿದ್ದ ಕರಾರಿನ ಪ್ರಕಾರ ಶಿಕ್ಷೆ ನೀಡಲೇಬೇಕು. ತಮ್ಮನ ಮೇಲೆ ಇರುವ ಪ್ರೀತಿ ಅಂತಹುದು, ಅದು ಹೇಳಬರುವಂತಿಲ್ಲ. ಬಾಲ್ಯದಿಂದ ಇದುತನಕ ಆಡಿ ಅನುಭವಿಸಿದ ಆ ಪ್ರೀತಿಯನ್ನು, ಆ ಪ್ರೀತಿಯ ಬಂಧನವನ್ನು, ಆ ಪ್ರೇಮ ಸಂಕೋಲೆಯನ್ನು ಹರಿಯಲಾರದ, ಹರಿಯದಿರಲಾರದ ಇಬ್ಬಂದಿತನದಲ್ಲಿ ಸಿಕ್ಕಿ ರಾಮ ನಲುಗಿದ್ದಾನೆ. ದೃಷ್ಟಿ ಬೇರೆಕಡೆಗಿಟ್ಟು ಕೊನೆಗೊಮ್ಮೆ ಮತ್ತೊಮ್ಮೆ ಖಡಾಖಂಡಿತವಾಗಿ ಹೇಳಿದ್ದಾನೆ -

" ಲಕ್ಷ್ಮಣಾ, ಮಾಡಿದ ತಪ್ಪಿಗೆ ದೇಹಾಂತ ಶಿಕ್ಷೆ ವಿಧಿಸಿದ್ದೇನೆ, ಹೋಗು ಅನುಭವಿಸು "

ಲಕ್ಸ್ಮಣ ಅಂದು ಸೀತೆಗಾಗಿ ಮರುಗಿದ, ಇಂದು ತನಗಾಗಿ ಅಲ್ಲ, ಅಣ್ಣನ ಸಾಂಗತ್ಯ ತಪ್ಪಿಹೋಗುತ್ತಿರುವುದಕ್ಕೆ ಪರಿತಪಿಸುತ್ತಾ ಕೆಲ ಕ್ಷಣ ಕಳೆಯುತ್ತಾನೆ. ಅವನ ಬಾಲ್ಯದಿಂದ ಇಲ್ಲಿಯವರೆಗಿನ ಎಲ್ಲಾ ಘಟನೆಗಳನ್ನೂ ಮೆಲುಕು ಹಾಕುತ್ತಾನೆ.

ರಾಮನಿಲ್ಲದ ಬದುಕು ಗೊತ್ತೇ ಇಲ್ಲ ಲಕ್ಷ್ಮಣನಿಗೆ, ರಾಮ ಸೀತೆಯನ್ನಾದರೂ ಬಿಟ್ಟಿದ್ದ ದಿನಗಳಿವೆ ಆದರೆ ತಮ್ಮ ಲಕ್ಷ್ಮಣನನ್ನು ಬಿಟ್ಟಿರಲಿಲ್ಲ. ಸದಾ ಅಣ್ಣನ ಅನುವರ್ತಿಯಾಗಿ ಅದರಲ್ಲೇ ಸಂಪೂರ್ಣ ತೃಪ್ತ ಲಕ್ಷ್ಮಣ. ಅಣ್ಣನ ಸಲ್ಲಕ್ಷಣಗಳನ್ನು ಸಂಪೂರ್ಣ ಮೈಗೂಡಿಸಿಕೊಂಡ ಲಕ್ಷ್ಮಣ ಪತ್ನಿ ಊರ್ಮಿಳೆಯನ್ನಾದರೂ ಬಿಟ್ಟು ಬದುಕಿಯಾನು ಆದರೆ ಅಣ್ಣನಿಂದ ಅಗಲುವಿಕೆ ಕನಸಲ್ಲೂ ಸಾಧ್ಯವಾಗದ ಮಾತು. ತನ್ನ ಪಕ್ಕದಲ್ಲೇ ಅಣ್ಣ ಕುಳಿತು ವಿಜ್ರಂಭಿಸಿದ ಸಿಂಹಾಸನಕ್ಕಾಗಿ ಆ ಆಳುವ ಖುರ್ಚಿಗಾಗಿ ಲಕ್ಷ್ಮಣ ಎಂದೂ ಹಂಬಲಿಸಲಿಲ್ಲ,ಹಪಹಪಿಸಲಿಲ್ಲ! ತಂದೆಯ ಪರೋಕ್ಷ ಆಜ್ಞೆಯಂತೆ ಕಾಡಿಗೆ ರಾಮ ತೆರಳುವಾಗ ಹಠದಿಂದ ಹಿಂಬಾಲಿಸಿದ ವ್ಯಕ್ತಿ ಲಕ್ಷ್ಮಣ. ರಾಮನೊಟ್ಟಿಗೆ ಕಾಡಿನಲ್ಲಿ ಹದಿನಾಲ್ಕು ವರುಷಗಳನ್ನು ಕಳೆದುಬಂದಿದ್ದ. ಕಾಡಲ್ಲಿರುವಾಗ ಕ್ರೂರ ರಕ್ಕಸರನ್ನು ಸದೆಬಡಿದಿದ್ದು, ಕಂದಮೂಲಾದಿ ಫಲಗಳನ್ನು ಅಣ್ಣ-ಅತ್ತಿಗೆಯರ ಜೊತೆಗೆ ಹಂಚಿ ತಿಂದು ನಾರುಟ್ಟು ಬದುಕಿದ್ದು, ಮದುವೆಯಾಗುವಂತೆ ಹಿಂಸಿಸಿದ ಶೂರ್ಪನಖಿಯ ಮೂಗನ್ನು ಕತ್ತರಿಸಿದ್ದು, ಸೀತಾಮಾತೆಯ ಆಜ್ಞೆಯಂತೆ ಜಿಂಕೆ ಹುಡುಕಿ ಹೊರಟ ' ರಾಮನ ಕೂಗ ' ನ್ನು ಅನುಸರಿಸಿ ಹೊರಡುತ್ತಾ ಲಕ್ಷ್ಮಣ ತನ್ನ ಹೆಸರಲ್ಲೇ ಸತ್ಯ ಶಪಥದ ರಕ್ಷಣಾ ರೇಖೆ ಬರೆದಿದ್ದು.........ಒಂದೇ ಎರಡೇ ಮರೆಲಸಾಧ್ಯ ದಿನಗಳವು. ತಂದೆ-ತಾಯಿ ಬಂಧು ಬಳಗದ ಎಲ್ಲರ ಪ್ರೀತಿಯನ್ನು ಕೇವಲ ತನ್ನಣ್ಣನಲ್ಲೇ ಕಂಡಿದ್ದ ಲಕ್ಷ್ಮಣ. ಅಣ್ಣನೇ ಆತನಿಗೆ ಜಗತ್ತು ! ಅದರ ಹೊರತು ಮಿಕ್ಕುಳಿದಿದ್ದೆಲ್ಲಾ ಗೌಣ ಆತನಿಗೆ. ಊಟ ಬಿಟ್ಟಾನು-ನಿದ್ದೆ ಬಿಟ್ಟಾನು, ಅಣ್ಣನನ್ನು ಮಾತ್ರ ಬಿಡ. ಅಣ್ಣನ ಸೇವೆ ಮಾಡಿ, ಅಣ್ಣ ಉಂಡು ಪ್ರೀತಿಯಿಂದ ತನ್ನ ತಲೆ ನೇವರಿಸಿ ತನ್ನ ಮೇಲೊಮ್ಮೆ ಬಾಚಿ ಅಪ್ಪುತ್ತ ಏನೇ ಹೇಳಿದರೂ, ಕೇಳಿದರೂ ಅದನ್ನು ಕೊಟ್ಟುಬಿಡುತ್ತಿದ್ದ,ಮಾಡಿಬಿಡುತ್ತಿದ್ದ ಲಕ್ಷ್ಮಣ ಅಣ್ಣ ಮಲಗಿದ ಮೇಲೆ ಅಣ್ಣನ ಪದತಲದಲ್ಲಿ ಕೆಳಗಡೆ ಹಾಸಿಕೊಂಡು ಮಲಗಿ ನಿದ್ರಿಸುತ್ತಿದ್ದ ಲಕ್ಷ್ಮಣ, ಅಣ್ಣನ ಕಣ್ಣ ನೋಟ ಮಾತ್ರದಿಂದಲೇ ಅದರ ಅರ್ಥಗ್ರಾಹಿಯಾಗಿ ಕೆಲಸ ಪೂರೈಸುತ್ತಿದ್ದ ಲಕ್ಷ್ಮಣ ಅಣ್ಣ ಕೊಟ್ಟ ಶಿಕ್ಷೆಗೆ ಹೆದರಿದ್ದಾನೆ! ಅಲ್ಲಲ್ಲ ಅಣ್ಣನನ್ನು ತೊರೆದುಹೋಗುವುದಕ್ಕೆ ಹೆದರಿದ್ದಾನೆ! ಮತ್ತೆಂದೂ ಸಿಗಲಾರದ ಅಣ್ಣನ ಆ ಪ್ರೀತಿಯ ಅಪ್ಪುಗೆಗೆ, ಸಾಂತ್ವನದ ನುಡಿಗಳಿಗೆ, ಕರುಣಾರ್ದ್ರ ಹೃದಯಕ್ಕೆ, ಆ ನೀತಿಗೆ-ಆ ರೀತಿಗೆ, ಆ ಸಮ್ಮೋಹಕ ವ್ಯಕ್ತಿತ್ವಕ್ಕೆ ತನ್ನನ್ನೇ ತಾನು ಅರ್ಪಿಸಿಕೊಂಡ ಲಕ್ಷ್ಮಣ ಅದನ್ನೆಲ್ಲ ಕಳೆದುಕೊಳ್ಳುವ ಭಯದಿಂದ ಮನದಲ್ಲಿ ನರಳಿದ್ದಾನೆ, ಅಣ್ಣನಲ್ಲಿ ಹೇಳಲಾರ, ಅಣ್ಣನ ಮನಸ್ಸಿಗೆ ಎಂದೂ ನೋವು ತರಲಾರ, ಅಣ್ಣನ ಅಣತಿಗೆ ವಿರುದ್ಧವಾಗಿ ನಡೆಯಲಾರ, ಅಣ್ಣನ ಅಪೇಕ್ಷೆಯನ್ನು ಉಪೇಕ್ಷಿಸಲಾರ, ಅಣ್ಣನ ಮುಖಾರವಿಂದದಲ್ಲಿ ಕಂಡಿರುವ ಆ ಮುಗ್ಧ-ಮನಮೋಹಕ ಮುಗುಳು ನಗುವನ್ನು ಕಸಿದುಕೊಳ್ಳಲಾರ, ಅಣ್ಣನ ಸುಮಧುರ ಪಾದಸ್ಪರ್ಶವನ್ನು ತಪ್ಪಿಸಿಕೊಳ್ಳಲಾರ, ಅಣ್ಣನ ಹುಸಿಕೋಪವನ್ನು ನೋಡದೇ ಇರಲಾರ, ಚಂದದಿ ಅಣ್ಣ ಸಿಂಹಾಸನದಲ್ಲಿ ಕುಳಿತು ಧರ್ಮರಾಜ್ಯಭಾರ ಮಾಡುವುದನ್ನು ಕಣ್ತುಂಬಿಸಿಕೊಳ್ಳದೇ ಇರಲಾರ--ಇದೆಲ್ಲ ಪುನಃ ತನಗೆ ಸಿಕ್ಕೀತೆ --ಕಾಡುತ್ತಿದೆ ಮನಸ್ಸು. ಕನಸಲ್ಲೂ ಮನಸಲ್ಲೂ ರಾಮಣ್ಣನನ್ನೇ ತುಂಬಿಸಿಕೊಂಡು ಅವನ ನಗುವಲ್ಲೇ ತನ್ನ ನಗುವನ್ನ ಕಂಡ,ತನ್ನ ನಲಿವನ್ನ ಕಂಡ ನಿಸ್ಪ್ರಹ ಲಕ್ಷ್ಮಣ ಕ್ಷಣ ಕ್ಷಣದಲ್ಲೂ ಮನಸಾ ಪೂಜಿಸುವ, ಆರಾಧಿಸುವ, ಆಸ್ವಾದಿಸುವ, ಆಲಂಗಿಸುವ, ಆಲೈಸುವ ಆ ಪ್ರೇಮಮುದಿತ ರಾಮನಿಗಾಗಿ ಹಂಬಲಿಸುತ್ತಿದೆ ಮನಸ್ಸು. ಇನ್ನೆಲ್ಲಿ ನನ್ನ ರಾಮ ಇನ್ನೆಲ್ಲಿ ನನ್ನ ರಾಮಣ್ಣ, ಇನ್ನೆಲ್ಲಿ ಆ ಪ್ರೇಮ, ಇನ್ನೆಲ್ಲಿ ಆ ಕರುಳಿನ ಪ್ರೀತಿಯ ಹರಹು- ಹೊಕ್ಕುಳ ಬಳ್ಳಿಯ ಸಂಬಂಧ ? ಮನದಲ್ಲೇ ಅತ್ತಿದ್ದಾನೆ ಲಕ್ಷ್ಮಣ,ಪುನಃ ಸಿಗಲಾರದ ಈ ಅಣ್ಣ-ತಮ್ಮರ ಬಾಂಧವ್ಯಕ್ಕೆ ಮರುಗಿದ್ದಾನೆ ತಾನು. ಕಾಲ ಕಳೆದುಹೋಗುತ್ತಿದೆ, ಕಾಲನಪ್ಪಣೆಯಾಗಿದೆ, ಮೇಲಾಗಿ ರಾಜಾರಾಮನ ಆಜ್ಞೆಯಾಗಿದೆ! ಆಗಲೇ ಸತ್ತುಹೋದ ಅನುಭವದಿಂದ ಬತ್ತಿಹೋಗಿ ಹೊಲಿದುಕೊಂಡ ತುಟಿಗಳು, ನಿಂತ ನೀರಿನ ಮಡುಗಳಾದ ಕಣ್ಣಾಲಿಗಳು,ಕಬ್ಬಿಣದ ಕವಾಟದಂತೆ ಕೇಳಿಸದೆ ಕಿವುಡಾದ ಕಿವಿಗಳು,ಕಾಲಿಬಿಟ್ಟ ಬಂದೂಕಿನಂತೆ ನಿಸ್ತೇಜವಾದ ನಾಸಿಕ, ಸ್ವಂತಿಕೆ ಕಳೆದುಕೊಂಡ ಮೈಮನ, ಜಡಗಟ್ಟಿ ಮರಗಟ್ಟಿ ಹೋಗಿದ್ದಾನೆ ಲಕ್ಷ್ಮಣ, ಆ ಹರಹಿನಲ್ಲೇ ಹೀಗೊಮ್ಮೆ ನೆನೆದುಕೊಂಡಿದ್ದಾನೆ ---


ಎಲ್ಲಿ ತೆರಳಲೇಕೆ ನಾನು ?

ಅಣ್ಣಾ ನಿನ್ನ ಬಿಟ್ಟು ಎಲ್ಲಿ ತೆರಳಲೇಕೆ ನಾನು ?
ಕಣ್ಣ ಹನಿಯ ಒರೆಸುವುದಕೆ ಬರುವುದಿಲ್ಲವೇನು ?
ಅಣ್ಣಾ .....ಅಣ್ಣಾ....ಅಣ್ಣಾ.....ಅಣ್ಣಾ ...ಶ್ರೀ.. ರಾಮಚಂದ್ರ

ಹುಟ್ಟಿನಿಂದ ಇಲ್ಲೀವರೆಗೆ ನಿನ್ನ ಜೊತೆಯಲೀ
ಕಷ್ಟಮರೆತು ಸಾಗಿಬಂದೆ ಇಹದ ಬದುಕಲೀ
ಎಷ್ಟು ಕಠಿಣವಾಯ್ತು ವಿಧಿಯು ಎಮ್ಮ ಬಾಳಲೀ
ಮುಷ್ಠಿಯಲ್ಲಿ ಹಿಡಿದು ತಿರುಚಿ ನರಳಿಸುತ್ತಲೀ

ಊಟತಿಂಡಿ ಆಟಪಾಠ ನಿನ್ನ ಜೊತೆಯಲೇ
ನೋಟದಲ್ಲಿ ಅಣ್ಣಾ ಮರೆತೆ ನಿನ್ನ ತನದಲೇ
ಕಾಟ ತೊರೆಯಲೆಂದು ಪಿತಗೆ ಕೈಕೆಯಿಂದಲೇ
ಓಟಕಿತ್ತೆ ನಾಡತ್ಯಜಿಸಿ ಕಾಡ ಕಡೆಯಲೇ

ತಂದೆಯಾಜ್ಞೆಯಂತೆ ನಡೆದೆ ನೀನು ಕಾಡಿಗೆ
ಬಂದೆ ನಿನ್ನೀ ಅನುಜ ಜೊತೆಗೆ ನನ್ನ ಪಾಡಿಗೆ
ಕಂದನಂತೆ ನೋಡ್ದ ನಿನ್ನ ಜೀವನಾಡಿಗೆ
ಇಂದು ಏಕೆ ತೆರೆಯನೆಳೆವೆ ನನ್ನ ಜೋಡಿಗೆ ?

ಪ್ರೀತಿಯಿಂದ ನೀನು ಕೊಟ್ಟ ಹಲವು ತುತ್ತನು
ನೀತಿಯೆಂಬ ಮುತ್ತು ರತ್ನದೊಡವೆ ಹುತ್ತನು
ರೀತಿಯಿಂದ ನಿನ್ನ ಜೊತೆಗೆ ಬಳಸುತಿರ್ದೆನು
ಭೀತಿಯಿರದೆ ಬದುಕು ತುಂಬ ಮೆರೆಯುತಿದ್ದೆನು

ಜಿಂಕೆ ಹಿಡಿಯೆ ಮುಂದೆ ತೆರಳಿ ನೀನು ಹೋಗಲು
ಮಂಕುಕವಿದ ಮನವದಾಯ್ತು 'ನೀನು ಕೂಗಲು'
ಸಂಕಟದಲಿ ಗುಡಿಯ ತೊರೆದು ನಿನ್ನ ಸೇರಲೂ
ಅಂಕಿತವನ್ನು ಇಟ್ಟು ಬರೆದೆ ರೇಖೆ ಭುವಿಯೊಳು

ಕಳೆದ ಮಾತೆ ಸೀತೆ ಯನ್ನು ಮನವು ನೆನೆಯುತಾ
ಒಳಗೆ ಉರಿದ ಬೆಂಕಿಯಲ್ಲೇ ದಿನವ ಕಳೆಯುತಾ
ಉಳಿದ ದಿನವ ನಿನ್ನ ಜೊತೆಗೆ ಹಾಗೇ ಸವೆಸುತಾ
ತೊಳೆದೆ ನನ್ನ ಪಾಪಕರ್ಮ ಪಾದ ಸ್ಮರಿಸುತಾ

ಕಾಲಪುರುಷ ಬಂದ ಸಮಯ ಹಲವು ಬಗೆದೇನೂ
ಲೀಲೆಯನ್ನು ಕೇಳಿ ತಿಳಿದು ಭಯದಲಿದ್ದೆನು
ಬಾಲಿಶತನ ಮುಗ್ದ ರೂಪ ಕಾಲ ಮೆರೆದನೂ
ಅಲಿಸೆಂದು ನಿನ್ನ ಕರೆದು ಗೆಲುವಮೆರೆದನೂ !

ಒಮ್ಮೆ ನನ್ನ ಅಪ್ಪಿ ಮುದ್ದ ನೀಡು ಎನುತಲೀ
ಒಮ್ಮತದಲೇ ಆಜ್ಞೆ ನಡೆಪೆ ಎನುತ ಭರದಲೀ
ಹೆಮ್ಮೆಯೆನಗೆ ಅಣ್ಣ ಕೊಟ್ಟ ಶಿಕ್ಷೆ ಪಡೆವಲೀ
ಅಮ್ಮನಂತೆ ಪೊರೆದ ನಿನ್ನ ಕಣ್ಣ ಎದುರಲೀ

ಮಾಟಮಂತ್ರ ಏನದಾಯ್ತು ನಮ್ಮನಗಲಿಸೆ ?
ಪಾಠ ಹೊಸದು ಕಾಲ ಕೊಟ್ಟ ಬದುಕ ತೀರಿಸೆ
ನೋಟವೊಮ್ಮೆ ಬೀರು ಸಾಕು ಪ್ರೇಮತೋರಿಸೆ
ಸಾಟಿಯಿಲ್ಲ ಅಣ್ಣಾ ನಿನ್ನ ಕರುಣೆಮೀರಿಸೆ !

Friday, March 12, 2010

ಕಳುಸುವಿರೇತಕೆ ನನ್ನ ಸ್ವಾಮೀ ?

ರಾಮಂ ಲಕ್ಷ್ಮಣ ಪೂರ್ವಜಂ ರಘುವರಂ ಸೀತಾಪತಿಂ ಸುಂದರಂ
ಕಾಕುಸ್ಥಂ ಕರುಣಾನಿಧಿಂ ಗುಣನಿಧಿಂ ವಿಪ್ರಪ್ರಿಯಂ ಧಾರ್ಮಿಕಂ |
ರಾಜೇಂದ್ರಂ ಸತ್ಯಸಂದಂ ದಶರಥತನಯಂ ಕೇವಲಮ್ ಶಾಂತಮೂರ್ತಿಂ
ವಂದೇ ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಮ್||

ಕೋಸಲ ದೇಶದ ಪ್ರಜೆಗಳು ಸುಖದಿಂದ ರಾಮರಾಜ್ಯಭಾರವನ್ನು ಅನುಭವಿಸುತ್ತಿರುವ ಶುಭಕಾಲ ಅದು. ಬಹಳ ಕಾಲವಾಗಿರಲಿಲ್ಲ ರಾಮ-ರಾವಣ ಯುದ್ಧ ಮುಗಿದು. ಆಗತಾನೆ ಕೆಲವು ದಿನಗಳು ಶ್ರೀರಾಮ ಪಟ್ಟಾಭಿಷೇಕವಾಗಿ. ವಿಸ್ತರವನ್ನೇರಿದ ರಾಮನ ಮುಖದಲ್ಲಿ ಏನೋ ಹೇಳಲಾಗದ ಅವ್ಯಕ್ತ ದುಃಖ ಮಡುಗಟ್ಟಿತ್ತು. ಮರ್ಯಾದಾಪುರುಷೋತ್ತಮ ನೆಂದು -ಕರೆಯಲ್ಪಟ್ಟು ಪ್ರಜೆಗಳಿಂದ, ದೇವರು ತನ್ನ ಭಕ್ತರನ್ನು ಪೊರೆದಂತೆ ಪ್ರಜೆಗಳನ್ನು ಪರಿಪಾಲಿಸುತ್ತಿದ್ದ ಸೀತಾರಾಮ ಪ್ರಜೆಗಳ ವಾಕ್ಯವನ್ನು ಸ್ವೀಕರಿಸಿ ಅವಲೋಕಿಸುತ್ತಿದ್ದ. ತಪ್ಪನ್ನು ಕನಸಲ್ಲೂ ಮಾಡದ, ಆ ಬಗೆಗೆ ಯೋಚನೆ ಸಹಿತ ಮಾಡದ ಇಂತಹ ರಾಮನ ಮುಖದಲ್ಲಿ ನೋವು, ಆತಂಕ,ಕಳವಳ,ಆವೇಶ,ಉದ್ವೇಗ,ಕೋಪ ಎಲ್ಲಾ ಸೇರಿ ಒಡೆದುಕ್ಕಿದ ಮಿಶ್ರಛಾಪು. ಕರ್ತವ್ಯದ ಕರೆಗೆ ಓಗೊಟ್ಟು ತನ್ನ ಮನಸ್ಸನ್ನು ಹದ್ದುಬಸ್ತಿನಲ್ಲಿಟ್ಟು ರಾಜಕಾರ್ಯವನ್ನು ಮಾಡಹೊರಟ ದಾಶರಥಿಯ ಮುಖ ಕೆಂಪಗಾಗಿದೆ, ಅನುಜ ಲಕ್ಷ್ಮಣನನ್ನು ಕರೆದು ಆಜ್ಞೆವಿಧಿಸಿದ್ದಾನೆ

" ತಮ್ಮಾ ಲಕ್ಷ್ಮಣಾ, ಸೀತೆಯನ್ನು ಏಕಾಂಗಿಯಾಗಿ ಕಾಡಿನಲ್ಲಿ ಬಿಟ್ಟು ಬಾ "

ಅಂದಿನ ರಾಜಸಭೆಯ ವಂದಿಮಾಗಧರೆಲ್ಲ ಆಶ್ಚರ್ಯಚಕಿತರಾಗಿದ್ದಾರೆ ! ಎಲ್ಲರ ಮುಖದಲ್ಲೂ ಏನನ್ನೋ ಕಳೆದುಕೊಳ್ಳುತ್ತಿರುವ ಅನುಭವ ! ಲಕ್ಷ್ಮಣ ಧರೆಗಿಳಿದುಹೋಗಿದ್ದಾನೆ, ಆತನಿಗೆ ಅಣ್ಣನ ಕೂಡ ಮರು ಮಾತನ್ನು ಆಡಿ ಅಭ್ಯಾಸವಿಲ್ಲ.ಅಣ್ಣನ ನೆರಳಾಗಿ ಸದಾ ಅಣ್ಣನನ್ನು ಹಿಂಬಾಲಿಸುವುದೇ ಲಕ್ಷ್ಮಣನ ಕೆಲಸ. ಎಂದಿಗೂ ಅಣ್ಣನಿಗೆ ಎದುರಾಡಿದವನಲ್ಲ. ಲಕ್ಷ್ಮಣನಿಗೆ ಗೊತ್ತು ಎದುರಿಗಿರುವ ಅಣ್ಣ ಸಣ್ಣ ಆಸಾಮಿಯಲ್ಲ; ಆತ ಸಾಕ್ಷಾತ್ ದೈವಾಂಶ ಸಂಭೂತ ನರನಾರಾಯಣ !

ಅಣ್ಣ ಎಂದೂ ಬೇಡದ ದಾರಿ ತುಳಿದವನಲ್ಲ, ಕೆಟ್ಟದ್ದನ್ನು ತಮ್ಮನ ಕೂಡ ಮಾಡಿಸಲು ಆಗ್ರಹಿಸಿದ, ಆಜ್ಞಾಪಿಸಿದ, ಅನುಮೋದಿಸಿದ,ಆದರಿಸಿದ ವ್ಯಕ್ತಿತ್ವ ಅಲ್ಲ ಅದು. ಇಂತಿಪ್ಪ ಶ್ರೀರಾಮಚಂದ್ರ ಯಾಕೆ ಈ ರೀತಿ ಸೀತಾಮಾತೆಯನ್ನು ಕಾಡಿಗೆ ಕಳಿಸಲು ಆಜ್ಞೆವಿಧಿಸಿದ ಎಂಬುದು ಆ ಕ್ಷಣಕ್ಕೆ ಲಕ್ಷ್ಮಣನ ಮುಖದಲ್ಲಿ ಹೊಮ್ಮುತ್ತಿದ ಅಸಮಾಧಾನದ ಜ್ವಾಲೆಗಳಿಂದ [strong negative waves !] ಯಾರಿಗಾದರೂ ಅನ್ನಿಸಿಬಿಡುತ್ತಿತ್ತು . ಆತನೀಗ ನಿರುಂಬಳನಲ್ಲ. ಆತನಲ್ಲಿ ಹಲವು ಪ್ರಶ್ನೆಗಳಿವೆ, ಆದರೆ ಕೇಳಲೂ ಆಗದ ಕೇಳದಿರಲೂ ಆಗದ ದಯನೀಯ ಮನೋಭಾವ ! ಕೇಳಿದರೆ ಜೀವನದ ಅತಿ ಪ್ರೀತಿಪಾತ್ರ-ವಿಶ್ವಾಸಪಾತ್ರ ಅಣ್ಣನನ್ನೇ ಸಂದೇಹದಿಂದ ನೋಡಿದಂತಾಗುವುದಲ್ಲವೇ ? ಕೇಳದಿರೆ ತಾಯಿಯಂತಹ ಅತ್ತಿಗೆ, ಹೂವಿನಂತೆ ಮುಗ್ಧ-ಕೋಮಲ ಸ್ವಭಾವದ ಅಣ್ಣನ ಸಸ್ವರೂಪ ಅರ್ಧಾಂಗಿ ಸೀತಾಮಾತೆಯನ್ನು ಇನ್ನಿಲ್ಲದ ಕಷ್ಟದಲ್ಲಿ,ಗತಿಯಿರದ ಕಾಡಿನ ಜಾಗದಲ್ಲಿ, ಆನ್ನಾಹಾರವಿಲ್ಲದ ಆ ಕಗ್ಗಾಡಿನಲ್ಲಿ, ಕ್ರೂರ ಮೃಗಗಳ ಆವಾಸದಲ್ಲಿ ಬಿಟ್ಟು ಬಂದು ತನ್ಮೂಲಕ ಆ ಪರಿಹರಿಸಲಾರದ ಪಾಪಕ್ಕೆ ಒಳಗಾಗುವುದಿಲ್ಲವೇ ? ಮೇಲಾಗಿ ಸೀತೆ ಬಸುರಿ, ಇನ್ನೇನು ದಿನತುಂಬಿದ ಬಸುರಿಯೇ, ಇಂತಹ ಸ್ಥಿತಿಯಲ್ಲಿ ಯಾರುತಾನೆ ಯಾವ ಹೆಣ್ಣನ್ನು ಅನಾಥಳನ್ನಾಗಿ ಮಾಡಲು ಮನಸ್ಸುಮಾಡುತ್ತಾರೆ? [ ಹಾಗೊಮ್ಮೆ ಅಂತಹ ಮನಸ್ಸುಳ್ಳವರು ನಮ್ಮ ಓದುಗರಿಲ್ಲಿದ್ದರೆ ಅಂಥವರಿಗೆ ನನ್ನ ಧಿಕ್ಕಾರ! ] ಭುಗಿಲೆದ್ದ ಲಕ್ಷ್ಮಣನ ಸ್ವಗತಗಳು ಹಲವು. ಅದಕ್ಕೆಲ್ಲ ಉತ್ತರ ಕೇಳುತ್ತ ಕುಳಿತುಕೊಳ್ಳುವ ಕಾಲವಲ್ಲ ಅದು. ರಾಜಾಜ್ಞೆಯಾಗಿದೆ. ಸೀತೆಯನ್ನು ಕಾಡಿಗೆ ಕಳಿಸಿಬರಲೇ ಬೇಕು. ಇನ್ನೇನು ಲಕ್ಷ್ಮಣ ವಿಧಿಯಿಲ್ಲದ ಗಾಡಿಯ ಎತ್ತಿನಂತೆ ಈ ಭಾರವನ್ನು ಹೊರಲು ಹೆಗಲುಗೊಡಬೇಕು.

ಅಷ್ಟರಲ್ಲಿ ಜಾನಕಿ ಸಭೆಗೆ ಆಗಮಿಸಿದ್ದಾಳೆ, ಪ್ರಭು ಶ್ರೀರಾಮನ ಮನದ ಇಂಗಿತವನ್ನು ಅರಿತು ಚಾಚೂ ತಪ್ಪದೇ ಅವನ ಹೆಜ್ಜೆಯಲ್ಲಿ ಹೆಜ್ಜೆಯಿಟ್ಟು ನಡೆದ ಸ್ನೇಹ ದಾಂಪತ್ಯ ಅವಳದು. ವಿಷಯವನ್ನು ರಾಣೀವಾಸದಲ್ಲಿದ್ದೇ ಸಖಿಯರಮೂಲಕ ತಿಳಿದುಕೊಂಡ ಅವಳ ಮುಖದಲ್ಲೂ ಕೂಡ ಅದೇ ಇಬ್ಬಂದಿತನ. ಎಂದೂ ಯಾರಿಗೂ ಕೇಡನ್ನು ಬಯಸದ ಭೂಮಿತಾಯಿಯ ಮಗಳವಳು! ರಾಮನ ಆದರ್ಶಗಳನ್ನು ಕೃತಿಯಲ್ಲಿ ಪೋಷಿಸಿದ-ಪೋಷಿಸುವ ರಾಮನ ಕಾರ್ಯಾಂಗ ಅವಳು! ಹುಚ್ಚು ಹಂಬಲದಿಂದ ಬಂಗಾರದ ಜಿಂಕೆಯ ಬೆನ್ನೊಂದನ್ನ ಹತ್ತಿದ್ದು ಬಿಟ್ಟರೆ ಇನ್ಯಾವುದನ್ನೂ ಶ್ರೀರಾಮನಕೂಡ ಮಾಡುವಂತೆ ಬಲವಂತಮಾಡದ ವ್ಯಕ್ತಿಯವಳು.ನಿಷ್ಠೆಗೆ ಹೆಸರಾದ ದಾಶರಥಿ ವನವಾಸಕ್ಕೆ ಹೊರಟಾಗ ಆತನ ಕಷ್ಟಗಳನ್ನೆಲ್ಲ ಮನಸ್ಸಲ್ಲಿ ಆಲೋಚಿಸಿ ಪತಿಯ ಸುಖ-ದುಃಖಗಳಲ್ಲಿ, ಆತನ ಸೇವೆಯಲ್ಲಿ ನಿರತಳಾಗಿ ನಿಂತ ಪ್ರೇಮಿಯವಳು,ನಾರುಡುಗೆಯುಟ್ಟು ತನ್ನೆಲ್ಲಾ ಆಭರಣಗಳನ್ನು ಬಿಚ್ಚಿಟ್ಟು ಕಾಡಿಗೈತಂದ ಪತಿಯಪಡಿಯಚ್ಚವಳು. ಕಾಡಿನ ಕಂದಮೂಲ ಫಲಗಳನ್ನೇ ಪಂಚಭಕ್ಷ್ಯ ಪರಮಾನ್ನದಂತೆ ಪ್ರೀತಿಯಿಂದ ರಾಮನೊಟ್ಟಿಗೆ ಕುಳಿತು ತಿಂದ, ಪತಿಯ ನಲಿವಲ್ಲಿ ತನ್ನ ನೋವನ್ನು ಮರೆತ-ಮರೆಯುವ ಸಾಧ್ವೀ ಸತಿಶಿರೋ ಮಣಿಯವಳು; ರಾಮನ ಸಕಲ ಕಾರ್ಯಗಳಲ್ಲಿ ಸದಾ ಸರ್ವದಾ ಸಹಭಾಗಿ ಅವಳು. ಇಂತಹ ಸೀತೆ ರಾಜಾಜ್ಞೆಗೆ ತಲೆಬಾಗುತ್ತ ಕಾಡಿಗೆ ಹೊರಡಲು ಮಾನಸಿಕ ಸಿದ್ಧತೆ ನಡೆಸಿದ್ದಾಳೆ. ಎಂದೂ ರಾಮನನ್ನು ಬಿಟ್ಟಿರದ ಮನಸ್ಸು ಇಂದೂ ಕೂಡ ಅದನ್ನೇ ಹಂಬಲಿಸುತ್ತಿದೆ. ಹಿಂದೆ ತಾನು ಅನುಭವಿಸಿದ ಎಲ್ಲಾ ಕಷ್ಟಗಳನ್ನೂ ರಾಮನಿಗಾಗಿ ಮರೆತಿದ್ದಳಾಕೆ, ಇಲ್ಲದಿದ್ದರೆ ತಾನು ಎಂದೋ ಹೇಗೋ ರಾವಣನ ರಾಜ್ಯದಲ್ಲಿ ಅಸುನೀಗಿಬಿಡುತ್ತಿದ್ದಳು ! ಹೀಗಾಗಿ ರಾಜಧಾನಿಗೆ ಮರಳಿ ಪ್ರಜೆಗಳನ್ನು ಕಂಡು ಪುಳಕಿತರಾಗಿ ಕಳೆದ ದಿನಗಳು ಕೇವಲ ಕೆಲವು. ಇಷ್ಟರಲ್ಲೇ ಶ್ರೀರಾಮ ಯಾಕಾಗಿ ಈ ರೀತಿ ಹೊರಲಾರದ-ಹೊರಬಾರದ ಹೊರೆ ಹೊರಿಸಿದ ಎಂಬುದನ್ನು ಮನದಲ್ಲಿ ಚಿಂತಿಸುತ್ತಾಳೆ. ಅಗಸನೋರ್ವ ರಾಮನ ಕಿವಿಗೆ ತಲಪುವಂತೆ ನೋವಿನ ಮಾತೊಂದನ್ನ ಆಡಿದ್ದ


" ಬಿಟ್ಟ ಹೆಂಡತಿಯನ್ನು ಕಟ್ಟಿಕೊಳ್ಳಲು ನಾನೇನು ರಾಮನೇ ? "

---ಈ ಮಾತಿನ ಚಾಟಿ ಏಟು ರಾಮನ ನರನಾಡಿಗಳನ್ನೆಲ್ಲ ಹರಿದು ಬಿಸಾಕಿದಷ್ಟು ಆತನನ್ನು ದಂಗುಬಡಿಸಿತ್ತು ! ಅಷ್ಟಕ್ಕೂ ರಾಮ ಮಾಡಬಾರದ್ದೇನು ಮಾಡಿದ ? ಹೆಂಡತಿಯೊಂದಿಗಿನ ಅವನ ಜೀವನ ಅವನ ವೈಯಕ್ತಿಕತೆ ತಾನೇ ? [ಇಂದಾದರೆ ಮಾನಹಾನಿ ಕೇಸು ಜಡಿಯುತ್ತಿದ್ದರು -ಅಗಸನ ಮೇಲೆ ] ಆದರೂ ರಾಮ ಪ್ರತೀ ಪ್ರಜೆಯ ಮಾತನ್ನೂ ಬಹಳವಾಗಿ ಅವಲೋಕಿಸುತ್ತಿದ್ದ, ಆ ಮಾತುಗಳ ಬಗ್ಗೆ ಚಿಂತನ-ಮಂಥನ ಮಾಡುತ್ತಿದ್ದ. ಗಂಡನ ನೋವು ಅವಳಿಗೆ ಅರ್ಥವಾಗದೇ ಇದ್ದಿರಲಿಲ್ಲ. ಆದರೂ ಬಿಟ್ಟಿರಲಾರದ ಅವಿನಾಭಾವ ಸಂಬಂಧ, ಆ ಮೋಹ-ವ್ಯಾಮೋಹ, ನರಳುವ ಪ್ರೀತಿಯ ಸಂಕೋಲೆ, ಮತ್ತೆಂದೂ ಅನುಭವಿಸಲಾಗದ ರಾಮನ ಬಾಹುಬಂಧನದ ಸಂಕೋಲೆ, ರಂಜಕರಾಮನ ರಂಜಿಪ ನುಡಿಗಳ nill ಆದ null ಆದ ಸ್ಥಿತಿ, ಪಿಸುಮಾತನು ಕೇಳಿ ನಸುನಗುತ್ತಿದ್ದ ದಿನಗಳನು ನೆನೆದು ಕಿವುಡಾಗುವ ಕಿವಿಗಳ ತುಡಿತ, ಹರಳಾದ-ಹಳಸಿದ್ದ ಹಳೆಯ ದುಃಖಘಟನೆಗಳ ನೆನಕೆಯ ಪುನರಾವರ್ತನೆ, ಇನ್ನೆಂದೂ ಹತ್ತಿರದಿಂದ ಕಾಣಲಾರದ ರಾಮನ ಬಿತ್ತಿ ಚಿತ್ರವನ್ನು ತುಂಬಿಸಿಕೊಂಡು ಆತ್ತು ಚೀರಿ ಭೋರ್ಗರೆದು ಒಳಗೊಳಗೇ ಸೋತ ಮನ, ಅವಡುಗಚ್ಚಿದಾಗಿನ ಹೊತ್ತು ಹೇಳಲೂ ಆರದೆ ಕೇಳಲೂ ಆರದೆ ಅಸಾಧ್ಯ ಭಾರದ ಹೊರೆಹೊತ್ತು ಮಡುಗಟ್ಟಿದ ಕಣ್ಣುಗಳು, ಸಭೆಯ ನೀರವ ಮೌನ ಪ್ರಶ್ನಿಸದೆ ನಿಂತಹೋದ ನಾಲಿಗೆ, ಸೀತೆ ಕಲ್ಲಾಗಿದ್ದಾಳೆ; ರಾಮನಿಗಾಗಿ, ಆದರೆ ಮನದಲ್ಲೊಮ್ಮೆ ಒಡೆಯನಲ್ಲಿ ಪ್ರಶ್ನಿಸಿದ್ದಾಳೆ --ಯಾಕೆ ತನ್ನನ್ನು ಕಾಡಿಗೆ ಕಳುಹಿಸುತ್ತಿದ್ದೀರಿ? ಎಂದು. ಈ ಸನ್ನಿವೇಶದಲ್ಲಿ ಸೀತೆಯ ಮನದಿಂಗಿತದಿಂದ ಬಂದ ಹಾಡು ---




[ ಚಿತ್ರ ಋಣ : ಅಂತರ್ಜಾಲ ]
ಕಳುಸುವಿರೇತಕೆ ನನ್ನ ಸ್ವಾಮೀ ?


ಕಳುಸುವಿರೇತಕೆ ನನ್ನ ಸ್ವಾಮೀ ?
ರಾಮಾ..... ರಾಮಾ.......ರಾಮಚಂದ್ರ ,,,,,,.
ಶ್ರೀರಾಮಚಂದ್ರ....... ಶ್ರೀರಾಮಚಂದ್ರ.......

ಹದಿನಾಲ್ಕು ವರುಷವು ಸಹಿಸುತ ಕಷ್ಟವ

ಕಾಡಲಿ ಕಳೆದೆನು ನಿಮ್ಮ ಜೊತೆ
ಪದನಾಲ್ಕು ಬರಲದು ಅಗಸನ ಬಾಯಿಂದ
ಕಾಡಿತೆ ನಿಮಗದು ಬಹಳವ್ಯಥೇ ?

ಅಂದು ರಾವಣನು ಬಂದಿರೆ ಭಿಕ್ಷಕೆ

ಸಂದೆ ನಾ ತಿಳಿಯದೇ ಮೋಸದಲೀ
ಕುಂದುಗಳೆಣಿಸದೆ ನೀಡಲಾ ಧರ್ಮದ
ಬಂಧುರ ಕಾರಣವೀ ಕಥೆಗೇ

ಶೋಕಸಹಿತ ನಾ ಅಶೋಕವನದಲಿ

ಕಾಕ ಗೂಬೆ ಕೂಗನು ನೆನೆಯೇ
ಯಾಕಾದರೂ ಸೃಜಿಸಿದ ದೇವರು ನನ್ನ
ಸಾಕುಮಾಡೈ ತಂದೆ ಪತಿವೃತೆಗೇ

ಬಂದು ಮಾರುತಿಯು ನೀಡಿದನುಂಗುರ

ಚಂದದಿ ಕುಣಿಯಿತು ನನ್ನಮನ
ಕಂದನ ತೆರದಲಿ ಮಿಡಿದನು ಕಣ್ಣೀರು
ಬಂಧನ ಬಿಡಿಸುವ ರಘುವೆನುತ

ಖೂಳ ರಕ್ಕಸನ ಕಾಟವ ತಾಳದೆ

ಮೂಳೆ ಮೈಮನವು ದಣಿದಿರಲೂ
ಹಾಳುಗೈದು ಲಂಕೆಗೆ ಬೆಂಕಿಯ ಹಚ್ಚಿ
ಬೀಳುತೆದ್ದು ಓಡಿದ ಹನುಮಾ

ಹರುಷವಾಯ್ತೆನಗೆ ಬಣ್ಣಿಸಲಸದಳ

ಪುರುಷ ಬರುವ ಇಂಗಿತ ಕೇಳಿ
ಪರಿಷೆಯ ರಕ್ಕಸ ಪಡೆಯ ಕಣ್ತಪ್ಪಿಸಿ
ಪರಿಶೋಭಿಪ ರಾಮನ ನೆನೆದು

ಅಯೋಧ್ಯಾರಾಮ ತಾ ದಶರಥರಾಮ

ಕೌಸಲ್ಯರಾಮ ಮುನಿಜನ ಪ್ರೇಮ
ಕಾರುಣ್ಯರಾಮ ತಾ ಕೈವಲ್ಯರಾಮ
ಸೂರ್ಯವಂಶದ ಶ್ರೀಚಂದ್ರಮನೇ

ತೊರೆದು ಜೀವಿಸಲೇ ನಿನ್ನ ಪದಾಂಬುಜ

ಪರಿತಪಿಸುತ ಕಾಡಲಿ ಭಯದೀ
ಬರಿದೇ ಬಂದೆನು ಅಯೋಧ್ಯ ನಗರಕೆ
ಹರಿಯೇ ಎನಗಿನ್ನಾರುಗತೀ ?

Wednesday, January 20, 2010

ತೋರಿಸೇ ಮಾಧವನಾ......


ತೋರಿಸೇ ಮಾಧವನಾ.......

ಮುದ್ದು ಕೃಷ್ಣನ ಮುಖಾರವಿಂದದ ನೆನಪು ಯಾರಿಗೆ ಮುದನೀಡುವುದಿಲ್ಲ? ಬಾಲ್ಯದಲ್ಲಿ-ಶೈಶವಾವಸ್ಥೆಯಲ್ಲಿ ಎಲ್ಲಾ ಕಂದಮ್ಮಗಳನ್ನೂ ಹೋಲಿಸುವುದು ಕೃಷ್ಣನಿಗೆ ಮಾತ್ರ! ಅದರಲ್ಲಂತೂ ಕಿಲಾಡಿಗಾಗಿ ಪ್ರಸಿದ್ಧರಾದವರು ಇಬ್ಬರೇ-ಒಬ್ಬಾತ ಕೃಷ್ಣ[ಕಿಲಾಡಿ ಕಿಟ್ಟ] ಮತ್ತೊಬ್ಬಾತ ಹನುಮಂತ [ಕಿಲಾಡಿ ಹನುಮ] ‘ಯೇ ಕಿಲಾಡಿ ಕಾ ಮಾಮ್ಲಾ ಹೈ’

ನೊಂದ ರಾಧೆ ತನ್ನ ತುಂಟ ಕೃಷ್ಣನನ್ನು ಅವನ ತುಂಟಾಟದ ವೈಭವ, ವೈಖರಿಯೊಂದಿಗೆ ತುಸುಕೋಪದಿಂದ, ಅತಿ ಪ್ರೀತಿಯಿಂದ [ಒಂಥರಾ ಪ್ರೀತಿ, ಒಂಥರಾ ಕೋಪ ಅಂತಾರಲ್ಲ ಹಾಗೇ] ಬಣ್ಣಿಸಿ ತನ್ನ ಸಖಿಗೆ ಆತನನ್ನು ಹುಡುಕಿಕೊಂಡು ಬರಲು ಹೇಳುತ್ತಾಳೆ. ಕೃಷ್ಣ ಎಂದರೆ ಅನೇಕದರಲ್ಲಿ ಏಕ-ಏಕದರಲ್ಲಿ ಅನೇಕ ತತ್ವವನ್ನು ತೋರಿಸಿದ ಅತಿಮಾನುಷ ವ್ಯಕ್ತಿ, ಹೀಗೆ ಜೊತೆಗೆ ಕಂಡೂ ಕಾಣಿಸದ-ಕಾಣಿಸದೆಯೂ ಕಾಣುವ ಈ ತುಂಟಾಟ [ಈ ನನ್ನ ಕವನದಲ್ಲಿ] ರಾಧೆಗೆ ಬೇಸರಮೂಡಿಸುತ್ತದೆ.

ಮಹಾಭಾರತದ ಈ ಪಾತ್ರ: ಗೆಳೆಯನಾಗಿ, ನೆಂಟನಾಗಿ, ಹಿತೈಷಿಯಾಗಿ, ಸಂಧಾನಕಾರನಾಗಿ, ಆಪದ್ಬಾಂಧವನಾಗಿ, ದುಷ್ಟ ಶಕ್ತಿನಿರ್ಮೂಲಕನಾಗಿ, ವಿಶ್ವಕ್ಕೆ ಮನುಜ ಮತವನ್ನೂ, ವಿಶ್ವ ಪಥವನ್ನೂ ಬೋಧಿಸಿ ವಿರಾಟ್ ಸ್ವರೂಪನಾಗುತ್ತಾನೆ; ವಿಶ್ವವಂದ್ಯನಾಗುತ್ತಾನೆ, ‘ಜಗದ್ಗುರು’ವಾಗುತ್ತಾನೆ. ಎಲ್ಲಿಯವರೆಗೆ ಜಗದಲ್ಲಿ ಚಿಕ್ಕಮಕ್ಕಳಿರುತ್ತಾರೋ ಅಲ್ಲಿಯವರೆಗೆ ನಮ್ಮ ‘ತುಂಟಗುರು’ವಿನ ನೆನಪು ಹಸಿರಾಗಿರುತ್ತದೆ; ಹಸಿ ಹಸಿಯಾಗಿರುತ್ತದೆ. ಇಂಥ ‘ತುಂಟಗುರು’ವಿನ ತಂಟೆಯನ್ನು, ‘ಅವನು ನಮ್ಮವ’ ಎಂದು ಬಾಚಿ ತಬ್ಬಿಕೊಳುವ ಹಪಹಪಿಕೆಯನ್ನು ನಿಮ್ಮ ಮುಂದೆ ನನ್ನ ಶಬ್ಧಗಳಲ್ಲಿ ಇಡುವ ಪ್ರಯತ್ನಮಾಡಿದ್ದೇನೆ............

ತೋರಿಸೇ ಮಾಧವನಾ.......ಕೇಳೆಲೆ ಸಖೀ
ತೋರಿಸೇ ಮಾಧವನಾ.......

ಗೋಪಕನ್ನಿಕೆಯರು ಗೋಪಾಲನಕಂಡು
ನೂಪುರಕಟ್ಟಿ ತಾವ್ ನೋಂಪಿಹಾಡಿದರು
ಛಾಪು ಒತ್ತುತ ತನ್ನ ಕಾಪೀ ರಾಗದ ಕೊಳಲ
ಆಪರಿ ನುಡಿಸುತ ನೇಪಥ್ಯ ಸೇರಿದ.......||೧||

ಪರಿಜನ ಪುರಜನ ಹರಿಜನರೆಲ್ಲರು
ಸರಸರ ನಡೆವರೆ ತಡೆದಾಲೈಪರು
ಮರಕತ ಮಾಣಿಕ್ಯ ವೈಡೂರ್ಯಬೇಡದೆ
ಬಿರುಕಿನ ಬಿದಿರಲೆ ಮೋಡಿಯ ಮಾಡಿದ....||೨||

ಮೂರುಜಾವದ ವಿರಹ ನೂರು ಜನ್ಮದ ಥರ
ನಾರೀಹೃದಯದ ಗೋಳು ನೀರೆ ಬಲ್ಲೆಯ ಹೇಳು?
ಖಾರವಾಗಿದೆ ಮನ.. ನೆನೆದು ಮೂರ್ಖತನ
ಮಾರನ ಶರದಬ್ಬರ ಸಾರಿಬರುತಿದೆ...........||೩||

ಮೊಸರು-ಬೆಣ್ಣೆಯ ಕದ್ದು ಹೆಸರು ಕೆಡಿಸಿಕೊಂಡ
ಕೆಸರೊಳಗಾಡುತ ಹಾವನು ತುಳಿದಾತ
ಕಸಿವಿಸಿಗೊಂಡಿಹ ತಾಯಿಗೆ ಬಾಯಲಿ
ನಸುನಗುತಾ ಮೂಜಗವನೆ ತೋರಿದಾ...||೪||


ಆಗೊಮ್ಮೆ ಈಗೊಮ್ಮೆ ಮತ್ತೊಮ್ಮೆ ಮಗದೊಮ್ಮೆ
ಬೇಗಬರುವೆನೆಂದು ಸಾಗಿ ಹೋಗುವನೀತ
ಕೂಗಿಕರೆದರಿಲ್ಲ ಹೋಗಿ ಹುಡುಕಿದರಿಲ್ಲ
ನಾಗವೇಣಿಯೆ ತೋರೆ ಜಾಗಕೆಳೆದುತಾರೆ...||೫||

Tuesday, January 19, 2010

ಮಾಘಿಯ ಇಬ್ಬನಿ



ಮಾಘಿಯ ಇಬ್ಬನಿ

ನಸುಕಲೆ ಯಾಕೆ ಕೂಗಿದೆ ಹೇಳೇ
ಮಾಮರದಿ ಕೋಗಿಲೆ?
ಮಾಘಿಯ ಚಳಿಗೆ ಮರದಲಿ ಅವಿತು
ರಾಗವದು ಯಾಕೆಲೆ?

ಮುಂಜಾವದಲೇ ಸೂರ್ಯಬಂದಿರಲು
ಮೇಲೇಳದ ಆಲಸ್ಯ
ಮೈಯ್ಯನು ಮುರಿಯುತ ಹೊದಿಕೆಯ ಎಳೆದರೂ
ಹಾಸಿಗೆ ಬಿಡದು ರಹಸ್ಯ !

ಮಲೆನಾಡಿನ ಮೂಲೆಯೂರಿನ ಮನೆಯಲಿ
ಆಲೆಯ ಗಾಣದ ತಿರುವು
ಗಣಗಣಗುಡಿಸುತ ಗಾಣವ ಎಳೆಯುವ
ಹೋರಿಗಿದೆಯೆ ತುಸು ತೆರವು ?

ಬಿಸಿ ಬಿಸಿ ಕಾಫಿಯ ಲೋಟದೊಳಾಪರಿ
ಏನಡಗಿದೆ ಹೊಸ ಸತ್ವ ?
ಕಸುವು ತುಂಬಿ ಕೆಲಸಕೆ ಅಣಿಗೊಳಿಸುವ
ಬಿಂಕದ ಬಿಸಿರಸ ತತ್ವ !

ಬಚ್ಚಲು ಮನೆಯದು ನೆಚ್ಚಿನ ಆಸರೆ
ದಿನದೀ ಚೊಚ್ಚಲ ಘಳಿಗೆ
ಹುಚ್ಚು ಹರಿಯೆ ಹಂಡೆಯ ಬಿಸಿನೀರಿದೆ
ಬೆಚ್ಚನ ಆ ಒಲೆ ಬಳಿಗೆ


ತೊಟ್ಟಿಲ ಮಗುವಿನ ಕಿಲಕಿಲ ನಗುವಲಿ
ಕಳೆದು ಹೋಗುವ ಬಯಕೆ
ಬೆಟ್ಟವನೇರುತ ಎಳೆ-ಹೂ ಬಿಸಿಲಲಿ
ಮಿಳಿತು ಕುಣಿವ ಮೈ-ಮನಕೆ

ನಸುಗೆಂಪು ನಗೆಯ ಗುಲಾಬಿ ಮೇಲ್ಗಡೆ
ನವಿರಾದ ಮಂಜಹನಿಯು
ತುಸುನಾಚಿ ಮುಂದೆ ಸಾಗುವ ಇರುವೆಗೆ
ತಡಸೀತೆ ನೀರಹನಿಯು ?

ಗಡಬಡಿಸಿ ಓಡ್ವ ಗಡಿಯಾರದ ಮೇಷ್ಟ್ರಿಗೆ
ಯಾಕಿಲ್ಲವೊ ತುಸು ಕರುಣೆ ?
ಎಡಬಿಡದೆ ನಡೆದು ಈ ಜೀವಸಂಕುಲಕೆ
ಕಾಲದ ಒಗ್ಗರಣೆ !