ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, June 24, 2010

ಐಷಾರಾಮೀ ಅವತಾರಿಗಳು!!




ಐಷಾರಾಮೀ ಅವತಾರಿಗಳು!!


ನಮ್ಮ ಸುತ್ತಲ ಹತ್ತು ರಾಜ್ಯಗಳಲ್ಲಿ ಹುಡುಕಿದರೆ ಸಿಗುವವರು ಹಲವು ಅವತಾರಿಗಳು. ಇವರೆಲ್ಲ ಅವತಾರಿಗಳಲ್ಲ ಬದಲಾಗಿ ನಿತ್ಯಾನಂದನದ್ದಲ್ಲದ ಇನ್ನೊಂದು ರೀತಿಯ ದಗಾಕೋರರು. ಅಂಥಾ ಬಾಬಾ ಇಂಥಾ ಬಾಬಾ ಅಂತೆಲ್ಲ ಕರೆದುಕೊಳ್ಳುವ ಇವರು ಅಸಲಿಗೆ ಯಾರಿಗೂ ಒಳಿತನ್ನು ಮಾಡುವ ಶಕ್ತಿಯನ್ನಾಗಲೀ, ಮಂತ್ರಶಕ್ತಿಯನ್ನಾಗಲೀ ಹೊಂದಿದವರಲ್ಲ. ಇವರ ಕೆಲಸ ಏನೆಂದರೆ ನಾಳೆ ಯಾವ ಪ್ಲಾನು ಹಾಕಿ ವಸೂಲಿ ಮಾಡುವುದು ಎನ್ನುವುದು. ಇವರಲ್ಲಿ ಕೆವರು ಕಾವಿ ವೇಷ ತೊಟ್ಟರೆ ಇನ್ನು ಕೆಲವರು ಶುಭ್ರವಾದ ರೇಷ್ಮೆ ಬಟ್ಟೆ ತೊಡುವವರು. ದಿನವಿಡೀ ಸ್ಥಳೀಯ ಮಾಧ್ಯಮಗಳಲ್ಲಿ ಶೋಭಿಸುತ್ತ ಜನಸಾಮಾನ್ಯರನ್ನು ಹಾದಿ ತಪ್ಪಿಸುವ ಬಕಗಳು!

ಯಾವ ಮಹಾತ್ಮನೂ ಈ ಜಗದಲ್ಲಿ ತಾನು ಮಹಾತ್ಮ ತಾನು ಅವತಾರಿ ಎಂದು ಘೋಷಿಸುವುದಿಲ್ಲ! ಅದನ್ನು ಸಮಾಜ, ಜನರು ಗುರುತಿಸುತ್ತಾರೆ. ಆದರೆ ಇಂತಹ ಬಾಬಾಗಳಲ್ಲಿ ಹಾಗಲ್ಲ ಇವರ ಆರಂಭಿಕ ಹಂತವೇ ಒಂಥರಾ ಉದ್ಭವ ಮೂರ್ತಿಯಂತೇ ರಾತ್ರೋರಾತ್ರಿ! ಸುತ್ತ ವ್ಯವಸ್ಥಿತ ಗುಂಪುಗಳನ್ನು ’ಸೇವೆಗೆ’ ಅಪಾಯಿಂಟ್ ಮಾಡಿಕೊಳ್ಳುವುದು! ಇಂತಹ ಸಾಲಿನಲ್ಲಿ ಅನೇಕರು ಇದ್ದರೂ ನಮಗೆ ಅತೀ ಹತ್ತಿರದ ಮತ್ತು ಅಬ್ಬರದ ಪ್ರಚಾರ ಪಡೆದ ಬಾಬಾ ಅಂದರೆ ’ಅಮ್ಮ-ಭಗವಾನ್’! ಯಕ್ಕಶ್ಚಿತ್ತ ಸಾಮಾನ್ಯ ಇನ್ಶೂರನ್ಸ್ ಕಾರ್ಯಕರ್ತನೊಬ್ಬ ತನಗೆ ಜ್ಞಾನೋದಯವಾಯಿತು ಎಂದು ಹೆಂಡತಿಯ ಸಮೇತ ಪೀಠಮಾಡಿಸಿ ಕೂತು ಆರ್ಥಿಕವಾಗಿ ದೇಶದುದ್ದಗಲ ಬೆಳೆದು ಹೆಮ್ಮೆರವಾಗಿ ನಿಂತಿರುವುದು! ತಮ್ಮ ಮನೆಯ ಅಪ್ಪ-ಅಮ್ಮನನ್ನೇ ವೃದ್ಧಾಶ್ರಮದಲ್ಲಿಟ್ಟಿರುವ ಅನೇಕ ಭಕ್ತರು ಈ ಅಮ್ಮ-ಭಗವಾನ್ ಎಂದು ಅವರೇ ಹೇಳಿಕೊಟ್ಟು ಕರೆಸಿಕೊಳ್ಳುವವರನ್ನು ಆರಾಧಿಸುವುದು. ಮೂಲತಃ ಆಂಧ್ರದವನಾದ ಈ ಮನುಷ್ಯನ ಪರಿವಾರ ಗಣದಲ್ಲಿ ಗಡಿ ಭಾಗದ ಮತ್ತು ಆಂಧ್ರಮೂಲದ ಜನಗಳೇ ಜಾಸ್ತಿ! ಇದು ’ಕಲ್ಕಿ’ಯ ಆವಾಹನೆ !

’ನೇಮಂ’ ಆಶ್ರಮವೆಂಬ ಪಂಚತಾರಾ ವ್ಯವಸ್ಥೆಯ ಕಟ್ಟಡ ಕಟ್ಟಿಕೊಂಡು ಅಲ್ಲಿ ಬಗೆಬಗೆಯ ಹೊಸ ಹೊಸ ವಿನ್ಯಾಸದ ಪೀಠಗಳನ್ನು, ಆಸನಗಳನ್ನು, ಪಲ್ಲಂಗಗಳನ್ನು ಮಾಡಿಸಿಕೊಂಡು ಗಟ್ಟಿಯಾಗಿ ತಳವೂರಿ ಕೂತಿದ್ದಾನೆ ಈ ಮನುಷ್ಯ. ಪ್ರಾರಂಭದಲ್ಲಿಯ ಛಾಯಚಿತ್ರಗಳನ್ನು ನೀವು ನೋಡಬೇಕು, ಆಗ ಬರೇ ಸಾದಾ ಬಿಳೀ ಗ್ರನೈಟು ಕಲ್ಲು ಹಾಸಿದ ನೆಲದ ಕಟ್ಟಡ ಬಾಗಿಲ ಮುಂತೆ ನಿಂತು ಹಳದಿ ಬಟ್ಟೆ ಧರಿಸಿ, ತಲೆಗೂ ಅದನ್ನೇ ಕಟ್ಟಿಕೊಂಡು, ತನ್ನೆರಡೂ ಕೈಗಳನ್ನು ಮುಂದೆ ಚಾಚಿ ನಿಂತು ಪೋಸು ಕೊಟ್ಟಿದ್ದನ್ನು ಅನೇಕರು ತಪ್ಪಾಗಿ ನಮಗೆ ತಿಳಿಹೇಳಿದ್ದು " ಕಲ್ಕಿ ಬಂದಿದ್ದಾರೆ, ಅಗೋ ನೋಡಿ ನಿಮ್ಮ ಕಷ್ಟಗಳನ್ನೆಲ್ಲ ನನ್ನ ಕೈಗೆ ಹಾಕಿ ಎಂದು ಕರೆಯುತ್ತಾರೆ" ಎಂದು! ಅಲ್ಲಿ ಆತ ಕೈ ಚಾಚಿದ್ದು ಬನ್ನಿ ಭಕ್ತರೇ ಮತ್ತಷ್ಟು ಜನರನ್ನು ಕರೆತನ್ನಿ, ಹಣ-ಕಾಣಿಕೆ ನೀಡಿ, ಪೂಜೆ ಮಾಡಿ, ಆರತಿ ಎತ್ತಿ ಎಂದು! --ಇದು ನಕಲಿ ಕಲ್ಕಿಗೆ ಆಸನ


ಹಲವರು ಜನ ಪ್ರತಿಮೆಗಳನ್ನಿಟ್ಟು ಪೂಜಿಸಿದರು, ಫೋಟೋ ಇಟ್ಟು ಧ್ಯಾನಿಸಿದರು. ಮನೆಗಳಲ್ಲಿ,ಕಛೇರಿಗಳಲ್ಲಿ,ಆಸ್ಪತ್ರೆಗಳಲ್ಲಿ,ಉದ್ದಿಮೆಯ ಜಾಗಗಳಲ್ಲಿ, ಸ್ಕೂಲು-ಕಾಲೇಜುಗಳಲ್ಲಿ ಎಲ್ಲಿಲ್ಲ ಹೇಳಿ? ಪ್ರಾಯಶಃ ಗಣಕ ಯಂತ್ರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಸಾರವಾದ ವಸ್ತುಗಳಲ್ಲಿ ಈ ಗಂಡ-ಹೆಂಡಿರ ಫೋಟೋ ಪ್ರಮುಖ ಸ್ಥಾನ ವಹಿಸಿದೆ! ಫೋಟೋಗಳಿಗೆ ಚಿಕ್ಕ ಪೀಠಗಳು, ಬಣ್ಣದ ಹಾರಗಳು, ಹೂವುಗಳು, ಸುಗಂಧ ದ್ರವ್ಯಗಳು, ಫೋಟೋಗಳಲ್ಲಿ ಅವರು ಕಂಡುಬಿಟ್ಟರೆ ಸಾಕು ಅಡ್ಡಡ್ಡ ಉದ್ದಂಡ ನಮಸ್ಕರಿಸುವವರು, ಪ್ಯಾಂಟಿನಜೇಬಿನಲ್ಲಿಯೇ ಕೈಮುಗಿಯುವ ಪ್ರತಿಷ್ಠೆಯ ಜನರು, ಹಾಲು ಹರಿಯುತ್ತಿದೆ-ಜೇನು ತೊಟ್ಟಿಕ್ಕುತ್ತಿದೆ ಎನ್ನುವವರು, ಅರಿಶಿನ-ಕುಂಕುಮ ಉದುರುತ್ತಿದೆ ಎನ್ನುವವರು ಒಂದೇ ಎರಡೇ -ಜನ ಮಳ್ಳೋ ಜಾತ್ರೆ ಮಳ್ಳೋ ಎಂದಿದ್ದು ಇದಕ್ಕೇ ಇಅರಬೇಕು--ಇದು ಈ ಕಲ್ಕಿಗೆ ಪಾದ್ಯ

ಜನ ತರಹೇವಾರಿಯಲ್ಲಿ ಅನೇಕರನ್ನು ಸೇರಿಸುವುದು, ಅಲ್ಲಲ್ಲಿ ಮೀಟಿಂಗ್ ಸಂಘಟಿಸುವುದು, ಕಲ್ಕಿಯ ಬಗ್ಗೆ ಬಹಳ ವಾಕ್ಚಾತುರ್ಯ ಉಪಯೋಗಿಸಿ ವಟಗುಡುವ ಹದಿಹರೆಯದ ಸುಂದರ ಹೆಣ್ಣು ಆಚಾರ್ಯರುಗಳು-ಪ್ರಾಚಾರ್ಯರುಗಳು, ಈ ಆಚಾರ್ಯರುಗಳನ್ನು ನೋಡಲು ಹಸಿದ ಕಣ್ಣು-ಮೈಮನ ಹೊತ್ತು ಬಂದ ಪಡ್ಡೆ ಹುಡುಗರು-ಹೈಕಳು-ವಿಷಯಲಂಪಟರು ಛೆ ಛೆ ಹೇಳತೀರದು....ಕಲ್ಕೀ ಗುಣಗಾನ ವೈಭವ, ಕಣ್ಣಾರೆ ನೀವು ನೊಡಬೇಕು. ಅಲ್ಲಿ ಬಂದವರಿಗೆಲ್ಲ ಕೆಲವೊಮ್ಮೆ ತಿಂಡಿ-ಊಟ, ತರಾವರಿ ವ್ಯವಸ್ಥೆ!--ಇದು ಡೂಪ್ಲಿಕೇಟ್ ಕಲ್ಕಿಗೆ ಅರ್ಘ್ಯ

ಮನೆಗಳಲ್ಲಿ ಮಹಿಳೆಯರದೇ ಒಡ್ಡೋಲಗ. ಹಾಲಿನ ಅಭಿಷೇಕ, ಪಂಚಾಮೃತದ ಅಭಿಷೇಕ, ಎಳೆನೀರಿನ ಅಭಿಷೇಕ,ದೇವರಿಗೆ ಹೇಳುವ ಮಂತ್ರಗಳನ್ನು ಪುರೋಹಿತರಿಂದ ಹೇಳಿಸಿ ಅಭಿಷೇಕ---ಇತಿ ಸ್ನಾನಂ||

ಸ್ನಾನಾನಂತರೇ ಆಚಮನೀಯಂ [ಸ್ನಾನದ ತರುವಾಯ ಬಾಯಿತೂಳೆಯಲು ನೀರು] ಇದಕ್ಕೆಲ್ಲ ಕಲ್ಕಿಗೆ ಉಪಯೋಗಿಸುವುದು ಪನ್ನೀರು, ರೋಸ್ ವಾಟರ್, ವಿ ಐ ಪಿ ಅವತಾರಿಗೆ ತಕ್ಕುದಾದ ವ್ಯವಸ್ಥೆ ಇಡಬೇಕಷ್ಟೇ ?

ಭೂಷಣಕ್ಕೆ ಅಂದರೆ ತೊಟ್ಟುಕೊಳ್ಳಲು ರೇಷ್ಮೆ ವಸ್ತ್ರಗಳು, ದಿರಿಸುಗಳು, ಅಮ್ಮಗೆ ತುಟ್ಟಿಯ ರೇಷ್ಮೆ ಸೀರೆ,ಝರಿ ಶಾಲು ಇತ್ಯಾದಿಗಳು ಭಕ್ತರಮನೆಗಳಲ್ಲಿ! ಅವುಗಳನ್ನು ’ನೇಮಂ’ ಗೆ ಹೋಗುವಾಗ ಕೊಂಡೊಯ್ದು ತಲ್ಪಿಸುವುದು! ಫಾರಿನ್ ಸೆಂಟ್ ಗಳನ್ನೂ ಕೊಡುತ್ತಾರೆ, ಭುವಿಗೆ ಬಂದ ಕಲ್ಕಿಯನ್ನು ಇಲ್ಲೇ ಉಳಿಸಿಕೊಳ್ಳಬೇಕಲ್ಲ! ಅದಕ್ಕೇ ಆದರೆಕಲ್ಕಿ ಕಾಲ ಕಾಲಕ್ಕೆ ಎಡಮುದುಕು ಚಹರೆ ತೋರುತ್ತಿದ್ದಾರಲ್ಲ! ಕಲ್ಕಿ ಬಹಳಕಾಲ ಇರುವುದಿಲ್ಲವೇ? ಛೆ ಛೆ ಅವತಾರಿಗಳು ತಮ್ಮ ಅವತಾರಗಳನ್ನು ಬಂದಕಾರಣ ಮುಗಿದ ಮೇಲೆ ಮುಗಿಸಿಹೊರಡುತ್ತಾರಲ್ಲವೇ? ಹಾಗಾದರೆ ೨೦೧೨ಕ್ಕೆ ಪ್ರಳಯವಾಗುವುದು ಗ್ಯಾರಂಟಿ ಅಂದಾಯ್ತು ಅಲ್ಲವೇ? ಆದರೆ ಒಂದು ಯುಗಕ್ಕೆ ನಾಲ್ಕು ಪಾದಗಳು ಎನ್ನುತ್ತದೆ ವೇದ. ಕಲಿಯುಗದ ಪ್ರಥಮಪಾದದಲ್ಲಿ ನಾವಿದ್ದೇವೆ, ಅಂದಮೇಲೆ ಪ್ರಳಯವೆಲ್ಲಿ ಬಂತು? ಒಹೋ ೨೦೧೨ಕ್ಕೆ ಪ್ರಳಯ ಎನ್ನುವುದೆಲ್ಲ ಕಟ್ಟು ಕಥೆ! ನಮ್ಮ ಈ ಕಲ್ಕಿ ಹತ್ತಿರ ಸದ್ಯಕ್ಕೆ ಖಡ್ಗ ಮತ್ತು ಬಿಳೇ ಕುದುರೆ ಎಲ್ಲ ಇಲ್ಲವಲ್ಲ? ಅದರ ತಯಾರಿ ಇನ್ನೂ ಆಗಿಲ್ಲವೆಂತಲೋ ಬಿಡಿ.

ಮಾಲೆಗಳೆಂದರಾಯಿತೆ ಬಹುಶಃ ತಿರುಪತಿ ತಿಮ್ಮಪ್ಪನಿಗೂ ಇಂತಹ ಮಾಲೆಗಳು ಸಿಗಲಿಕ್ಕಿಲ್ಲ! ಅಷ್ಟು ಮಾಲೆಗಳು, ಬಣ್ಣ ಬಣ್ಣದ ಹೂವುಗಳಿಂದ ಮಾಡಲ್ಪಟ್ಟವು, ರೇಷ್ಮೆ ಗೂಡುಗಳಿಂದ ಮಾಡಲ್ಪಟ್ಟವು ಎಲ್ಲವನ್ನೂ ಕಲ್ಕ್ಯಾರ್ಪಣಗೈಯ್ಯುವುದು ಕಲ್ಕಿ ಭಕ್ತರ ಬಯಕೆ. ಅದರಲ್ಲೂ ಕಲ್ಕಿ ಮೊದಲು ಹೇಳಿಕೊಟ್ಟ ಶ್ಲೋಕವೇ ಬೇರೆ, ಈಗ ಅನುಗ್ರಹಿಸುವ ’ಮೂಲಮಂತ್ರ’ವೆಂಬ ಶ್ಲೋಕವೇ ಬೇರೆ. ಮೂಲಮಂತ್ರದ ಅರ್ಥವೇ ಗೊತ್ತಿರದ ಇಂಥವ್ರಿಗೆ ಮೂಲಮಂತ್ರ ಎಂಬ ಶಬ್ಧದ ಪ್ರಯೋಗಮಾಡಬೇಕೆಂಬುದು ಗೊತ್ತು! ಇದು ನಿತ್ಯಾನಂತನಿಂದ ಬಳುವಳಿ ಪಡೆದಿದ್ದಿರಬಹುದು!
ಮೊದಲು ಅವರ ಶ್ಲೋಕ ಹೀಗೆನ್ನುತ್ತಿತ್ತು

ಭಗವತಿ ಪದ್ಮಾವತೀ ಸಮೇತ ಕಲ್ಕಿ ಭಗವತೇ ನಮಃ |

ಆದರೆ ಅದು ನಗೆಪಾಟಲಾದಮೇಲೆ ಹೀಗೆ ಪರಿಷ್ಕರಿಸಲಾಗಿದೆ--

ಭಗವತೀ ಸಮೇತ ಕಲ್ಕಿ ಭಗವತೇ ನಮಃ |

ಇದುವರೆಗೆ ಯಾವ ಗುರುವೂ ತನ್ನನ್ನೇ ಹೀಗೆ ಜಪಿಸಿ ಎಂದು ಹೇಳಿಲ್ಲ-ಹೇಳಿದ್ದು ಕೇಳಿಲ್ಲ! ಆದಿ ಶಂಕರರನ್ನೂ ಸೇರಿದಂತೆ ಎಷ್ಟೊಂದು ಜನ ಸಾಧು-ಸಂತರು ಬಂದರೂ ಅವರೆಲ್ಲ ತನ್ನನ್ನೇ ಜಪಿಸಿ ಎನ್ನಲಿಲ್ಲ. -ಹೀಗೇ ಇದು ಈ ಕಲ್ಕಿಗೆ ಮಾಲಾರ್ಪಣೆ

ಧೂಪ ದೀಪ ಹೇಗೂ ನಮ್ಮ ಹಿಂದೂ ಪೂಜೆಗಳಲ್ಲಿ ಅತಿ ಸಹಜ. ಭಕ್ತರೆನಿಸಿಕೊಂಡವರು ಹಾರುತ್ತಾ ಕುಣಿಯುತ್ತಾ ಆರತಿ ಮಾಡುವವರಿದ್ದಾರೆ, ಅಮ್ಮ-ಭಗವಾನರ ಕೃಪೆಯಿಂದಲೇ ತಾವು ಬದುಕಿದೆವು ಅನ್ನುವವರಿದ್ದಾರೆ. ಅವರಿಂದಲೇ ನಮ್ಮ ಕಷ್ಟಗಳೆಲ್ಲ ಪರಿಹಾರವಾದವು ಎಂದು ಗೋಳೋ ಎಂದು ಅಳುವವರಿದ್ದಾರೆ! ನಮ್ಮ ದುಃಖತಪ್ತ ಜನರಿಗೆ, ಕಷ್ಟದಲ್ಲಿರುವ ಜನರಿಗೆ ಸಾಂತ್ವನ ಹೇಳಲು,ಧೈರ್ಯತುಂಬಲು ಕೆಲವು ಜನ ಬೇಕು. ಇದನ್ನೇ ನಾಯ್ಡು ದುರುಪಯೋಗ ಮಾಡಿಕೊಂಡು ಕಲ್ಕಿಯಾದ! ಒನ್ಸ್ ವೀಕನೆಸ್ ಈಸ್ ಅದರ್ಸ್ ಗೇನ್ !


ಇಷ್ಟು ಸಾಕು ಎನಿಸುತ್ತದೆ,

ಅಭ್ಯುತ್ಥಾನಮ್ ಸ್ವಾಸನಂ ಸ್ವಾಗತೋಕ್ತಿಃ
ಪಾದ್ಯಂಚಾರ್ಘ್ಯಂ ಮಧುಪರ್ಕಾಚ ಮೌಚ|
ಸ್ನಾನಂ ವಾಸೋ ಭೂಷಣಾಂಗಧಮಾಲ್ಯೇ
ಧೂಪೋ ದೀಪಃ ಸೋಪಹಾರಃ ಪ್ರಣಾಮ||

ಈ ರೀತಿ ಸುಮಾರಾಗಿ ನಮ್ಮ ಸಂಸ್ಕೃತದಲ್ಲಿ ಹೇಳುವಂತೆ ಷೋಡಷೋಪಚಾರ ಮಾಡಿದ್ದೇನೆ. ನನ್ನ ಪ್ರೀತಿಯ ಮಹಾಜನಗಳೇ ಕಲ್ಕಿ ಭೂಮಿಯ ಮೇಲೆ ಇನ್ನೂ ಹುಟ್ಟಿಲ್ಲ! ಇಷ್ಟು ಬೇಗ ಹುಟ್ಟುವುದೂ ಇಲ್ಲ! ಒಂದೊಮ್ಮೆ ಆತ ಹುಟ್ಟಿದ್ದರೂ ಪ್ರಬುದ್ಧ ಸ್ಥಿತಿಗೆ, ಪ್ರಕಾಶಮಾನ ಸ್ಥಿತಿಗೆ ಬರುವುದು ಕಲಿಯುಗದ ನಾಲ್ಕನೇ ಪಾದದಲ್ಲಿ! ಹೀಗಾಗಿ ಯಾರೋ ದಾರಿ ಹೋಕರು ಟವೆಲ್ ಹಾರಿಸಿ ತಾನೇ ಕಲ್ಕಿ ಬಂದಿದ್ದೇನೆ-ಜನರ ಕಷ್ಟಗಳನ್ನೆಲ್ಲ ನುಂಗಿಹಾಕುತ್ತೇನೆ ಅಂದಾಗ ಹೋಗಿ ದಬಕ್ಕನೆ ಬೋರಲು ಬೀಳುವುದು ಬಹಳ ವಿಷಾದನೀಯ, ಈ ವಿಷಯದಲ್ಲಿ ಈ ಕಲ್ಕಿ ಲಕ್ಕಿ! ದಿನವೂ ಐಷಾರಾಮೀ ಬದುಕನ್ನು ಬದುಕುತ್ತಿರುವ ಪಂಚತಾರಾ ದಂಪತಿ ಅಮ್ಮ-ಭಗವಾನ್ ಎನಿಸಿಕೊಳ್ಳಲು ನಾಚಿಕೆ ಪಡುತ್ತಿಲ್ಲ ನೋಡಿ, ನೀವೂ ಹೋಗಬಹುದು-ಆರತಿ ಮಾಡಬಹುದು! ನೇಮಂ.......ನೇಮಂ ! ಶಿಸ್ತಾಗಿ ಇಸ್ತ್ರಿ ಮಾಡಿದ ಗರಿಗರಿಯಾದ ರೇಷ್ಮೆ ಬಟ್ಟೆಗಳನ್ನು ತೊಟ್ಟು ಗಂಡ-ಹೆಂಡತಿ ತಮ್ಮ ಕಾಲ್ಕೆಳಗೆ ಹಲವರನ್ನು ಅಡ್ಡಬೀಳಿಸುವ ಜಾಗವೇ ನೇಮಂ ! ಪುಣ್ಯಾತಗಿತ್ತಿ ಅಮ್ಮ ಎನಿಸಿಕೊಂಡವಳಿಗೆ ಹುಬ್ಬು ಡ್ರೆಸ್ ಮಾಡಲು ಅದ್ಯಾವ ಹೆಣ್ಣುಮಗಳಿದ್ದಳೊ ಗೊತ್ತಿಲ್ಲ. ಅಂತೂ ಈ ದಂಪತಿ ಪಟ್ಟಾಗಿ ಬಂದು ಆಸೀನರಾದರೆ ಅಲ್ಲಿ ಬಹಳ ಮಂದಿ ತಮ್ಮ ತನವನ್ನೇ ಕಳೆದುಕೊಳ್ಳುತ್ತಾರೆ-ಅದೇ ನೇಮಂ! ಅಶ್ರಮದ ಒಳಗೆ ನಡೆಯುವ ಹದಿಹರೆಯದ ಹೆಣ್ಣು ಆಚಾರ್ಯರುಗಳ ನೇಮಂ ಎಲ್ಲ ಇನ್ನೂ ಹೊರಬರುವುದರಲ್ಲಿದೆ, ಕಾಯುತ್ತಿರಿ ಇದು ಮತ್ತೊಂದು ನಿತ್ಯ ಆನಂದ ಪರಮಹಂಸ ಸ್ಥಿತಿ!

ಉಪಚಾರದ ಕೊನೆಯ ಘಟ್ಟ- ಪ್ರಣಾಮ-ಇದನ್ನು ಮಾತ್ರ ಗೋವಿಂದನಿಗೆ ಇಟ್ಟುಬಿಡೋಣ, ಯಾಕೆಂದರೆ ಎಲ್ಲಿಯವರೆಗೆ ನಾಮ ಹಾಕಿಸಿಕೊಳ್ಳುವವರಿರುತ್ತಾರೋ ಅಲ್ಲೀವರೆಗೆ ನಾಮಹಾಕುವವರೂ ಇರುತ್ತಾರಂತೆ! ನಾಮವನ್ನೇ ಪ್ರಧಾನವಾಗಿ ಹೊಂದಿದ ತಿಮ್ಮಪ್ಪಾ ನಮಗೆ ಮಾತ್ರ ಬೇರೆಯವರು ನಾಮಹಾಕದಂತೆ ಕಾಪಾಡಪ್ಪಾ ಎಂದು ಅವನಿಗೇ ನಮಿಸಿಬಿಡೋಣ ಎಂಬುದು ದೃಢವಾದ ತೀರ್ಮಾನ. ಹೇ ಭಗವಂತ ನೀನು ಕಳೆದ ಒಂಬತ್ತು ಅವತಾರಗಳಲ್ಲೂ ಪಟ್ಟ ಪಾಡು ಅಷ್ಟಿಷ್ಟಲ್ಲ, ನಿನ್ನ ಹತ್ತನೆಯ ಅವತಾರದ ಜಾಗಕ್ಕೆ ನಾವು ಭೂಲೋಕದ ಮಂದಿ ಈಗಾಗಲೇ ಒಬ್ಬನನ್ನು ಕುಳ್ಳಿರಿಸಿಬಿಟ್ಟಿದ್ದೇವೆ. ಇಲ್ಲೀವರೆಗೆ ನೀನು ನಮಗೆ ನಾಮ ಹಾಕಿಸುತ್ತಿದ್ದೆಯಲ್ಲ ಈಗ ನಿನಗೂ ಭೂಸುರರ ಬಿಸಿ ತಟ್ಟಲಿ ಎಂಬ ಸಲುವಾಗಿ ನಾಮ ಹಾಕಿಬಿಟ್ಟಿದ್ದೇವೆ! ಹೇಗೆ ಆಗದೇ? ನೀನು ಕಾವೇರೀ ತೀರದಲ್ಲಿ ಮುಂದೆಂದೋ ಬರುವೆಯೆಂದು ಹೇಳುತ್ತಾರೆ. ಆದರೆ ಸದ್ಯ ನೀನು ಬಂದರಂತೂ ಜನ ಜಾಗದಲ್ಲಿರುವ ಈ ಕಲ್ಕಿಯಿಂದ ’ಪ್ರಸಾದ’ಪಡೆದು ನಿನ್ನನ್ನೇ ಡೂಫ್ಲಿಕೇಟು ಎಂದು ನ್ಯಾಯಾಲಯದ ಮೆಟ್ಟಿಲು ಹತ್ತುತ್ತಾರೆ! ಇಲ್ಲಿ ಜನ ಹಾಗೆ ’ಪ್ರಸಾದ’ ಸ್ವೀಕರಿಸುವಾಗ ನೋಡಲಿರಲಿ ಅಂತ ಹುಡುಕಿದರೆ ನಮ್ಮ ಲೋಕಾಯುಕ್ತರೂ ಬಿಟ್ಟು ಬಿಟ್ಟು ಹೋಗುತ್ತಿದ್ದಾರೆ, ನಾವು ಅಸಹಾಯರು ದೇವಾ... ತಿರುಪತೀ ವೆಂಕಟರಮಣ ಸ್ವಾಮೀ ಪಾದಾರವಿಂದಕ್ಕೆ ಗೋವಿಂದಾ....ಗೋವಿಂದಾ.......ಗೋವಿಂದ!!