ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, February 3, 2011

ಕನ್ನಡಾಂಬೆಯಲ್ಲಿ ಅಹವಾಲು


ಕನ್ನಡಾಂಬೆಯಲ್ಲಿ ಅಹವಾಲು

[ಆತ್ಮೀಯ ಕನ್ನಡಾಭಿಮಾನಿಗಳೇ, ಕನ್ನಡದ ಸಹೋದರ ಸಹೋದರಿಯರೇ ನಾಳೆಯಿಂದ ಮೂರುದಿನ ಬೆಂಗಳೂರಿನಲ್ಲಿ ನಡೆಯುವ ಕನ್ನಡ ನುಡಿಹಬ್ಬಕ್ಕೆ ತಮಗೆಲ್ಲರಿಗೂ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ. ]

ತೊದಲುಮಾತುಗಳಿಂದ ಪೂಜಿಸುವೆವು ನಿನ್ನ
ಕನ್ನಡ ಭುವನೇಶ್ವರಿಯೆ ಪ್ರೀತಿಯಿಂದ
ಹೃದಯ ದೇಗುಲದಲ್ಲಿ ಸಿಂಹಾಸನವನಿರಿಸಿ
ಅರ್ಚಿಸುವೆವೂ ದಿನವೂ ಅಭಿಮಾನದಿಂದ

ಮುಕ್ಕೋಟಿ ಆರಾಗಿ ಮಿಕ್ಕಿ ಬೆಳೆಯುತ್ತಿಹೆವು
ಅಕ್ಕರೆಯ ನುಡಿಗಳನು ಮರೆಯುವವರಲ್ಲ
ಸಿಕ್ಕಲ್ಲಿ ಅಲ್ಲಿಲ್ಲಿ ಕೆಲತಪ್ಪು ಕಾಣುತಿರೆ
ನಕ್ಕು ಕ್ಷಮಿಸಿಬಿಡಮ್ಮ ನೋವು ತರವಲ್ಲ

ಗಡಿಜಗಳ ಮತಜಗಳ ನದಿಯ ನೀರಿಗೆ ಜಗಳ
ಅಡಿಗಡಿಗೂ ನೂರೆಂಟು ತೀರದಾ ದಾಹ
ಉಡಿಯ ತುಂಬುವೆವಮ್ಮ ಅದನೇ ಪೇರಿಸುತಿಲ್ಲಿ
ಬಿಡಿಸಲಾರದ ಕೆಲವು ಕಗ್ಗಂಟ ಮೋಹ !

ಬರೆಯುವೆವು ಮೆರೆಯುವೆವು ಮರೆಯುವೆವು ನಮ್ಮತನ
ತೊರೆಯುವೆವು ಕನ್ನಡದ ಸೊಗಡ ಮಧ್ಯದಲಿ
ಬಿರಿಯುವವು ರಾತ್ರಿಯಲಿ ತರಹಾವರಿಯ ಕೂಟ
ಹರಿಯುವವು ಪಾನ ಬಹುವಿಧದ ಮದ್ಯದಲಿ !

ಕೆಲವು ಹೊಸ ಜಿಲ್ಲೆಗಳ ತಾಲೂಕುಗಳ ಸೃಜಿಸಿ
ಹಲವು ಜಾಗಗಳನ್ನು ರಸ್ತೆಗಳ ಮಾಡಿ
ನಲಿಯುತಿದ್ದಾ ಕಾಡು-ಪ್ರಾಣಿಗಳ ಲಕ್ಷಿಸದೆ
ಕಲಿವುದೊಂದೇ ಮಂತ್ರ ’ಗಳಿಸು ಗಣಿಮಾಡಿ’ !

ಇಂದು ನಿನ್ನೆಯದಲ್ಲ ಸಂಪತ್ತುಗಳ ಲೂಟಿ
ತಿಂದುಹಾಕಿದೆವೆಲ್ಲ ನಾಳೆಗಳ ಮರೆತು
ನಂದು ಹೋಗದಹಾಗೆ ಜೀವಸಂಕುಲ ಕೋಟಿ
ಬಂದು ವರುಷದಲೊಮ್ಮೆ ಹರಸಮ್ಮ ನಿಂತು