ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, June 30, 2022

ಗುಡಿಕಟ್ಟುವ ಕಾರ್ಮಿಕರ ಸಾಲಿನಲ್ಲಿ ನಾನೂ ಒಬ್ಬ!

 ನಮಸ್ಕಾರ.


ಬಹಳ ಸಮಯದ ನಂತರ ಇಮ್ದು ಹೊಸದಾಗಿ ಬ್ಲಾಗ್ ಬರೆಯಲು ಆರಂಭಿಸಬೇಕೆಂಬ ಓದುಗರ ಒತ್ತಾಸೆಯನ್ನು ಮನ್ನಿಸಿ, ಸಾಧ್ಯವಾದಷ್ಟು ಬರಹಗಳನ್ನು ಮಂಡಿಸಲು ಮರಳಿ ಬಂದಿದ್ದೇನೆ. 


ದಶಕಗಳ ಹಿಂದಿನ ಓದಿನ ಅಭಿರುಚಿ, ಆ ತಹತಹ, ಆ ಮಟ್ಟದ ಹವ್ಯಾಸ ಇಂದಿಲ್ಲ. ಕೈಯ್ಯಲ್ಲಿ ಸ್ಮಾರ್ಟ್ ಫೋನ್ ಬಂದು, ವಿಶ್ವದ ಸಮಸ್ತ ಆಗುಹೋಗುಗಳು ಅರೆಕ್ಷಣದಲ್ಲಿ ದೃಶ್ಯ,ಮಾಧ್ಯಮಗಳಲ್ಲಿ ಪ್ರಸಾರಗೊಳ್ಳುವ ಸಾಮಾಜಿಕ ಜಾಲತಾಣಗಳು ಸದಾ ಉಪಲಬ್ಧವಾಗಿರುವುದರಿಂದ ಬಹುಶಃ ಹೆಚ್ಚಿನ ಯಾರಿಗೂ ಓದುತ್ತ ಕೂರುವ ಜಾಯಮಾನ ಉಳಿದಿಲ್ಲ; ಅಪವಾದಗಳಿರಬಹುದು. ಪುಸ್ತಕಗಳು ಎಷ್ಟೇ ಮಹೋನ್ನತವಾಗಿದ್ದರೂ ಅವುಗಳನ್ನು ಕೊಂಡಿ ಓದಿ ಕಾಪಿಡುವ ಸಂಸ್ಕೃತಿಯೇ ಹೊರಟು ಹೋಯ್ತು ಎನ್ನಬಹುದೇನೋ! ಹಾಗಾಗಿಯೇ ಪ್ರಕಾಶಕರು ಪುಸ್ತಕಗಳನ್ನು ಹೊರತರಲು ಮೀನೆಮೇಷ ಎಣಿಸಬೇಕಾದ ಗಂಭೀರ ಪರಿಸ್ಥಿತಿ ಎದುರಾಗಿದೆ ಎಂದರೆ ತಪ್ಪಲ್ಲ. ಆದರೂ ಗಟ್ಟಿ ಸಾಹಿತ್ಯಕ್ಕೊಂದು ರೂಪುರೇಷೆ, ಒಂದು ಆಯಾಮ, ಒಂದು ಘನತೆಯ ಚೌಕಟ್ಟು ಇರಬೇಕೆಂದರೆ ಅದಕ್ಕೆ ಪುಸ್ತಕಗಳ ರೂಪ ಇರಲೇಬೇಕು.


ವಿಕಾಸ ಜಗತ್ತಿನ ಸಹಜ ನಿಯಮ. ಬೆಳೆಯುತ್ತಿರುವ ವಿಶ್ವ ಎನ್ನುತ್ತೇವೆ; ಬೆಳೆಯುವುದು ಎಂದರೇನು? ಬೆಳೆಯುವುದಕ್ಕೊಂದು ಮಿತಿಯಿಲ್ಲವೇ? ಹಿಂದೆ ಕಾಣದ್ದನ್ನು ಮುಂದೆ ಕಾಣುವುದಷ್ಟೇ ಬೆಳವಣಿಗೆಯೇ? ಮುಂದೆ ಕಾಣುವುದೆಲ್ಲ ಸ್ಥಿರವೇ / ಶಾಶ್ವತವೇ? ಅಥವಾ ನಂತರದ ದಿನಗಳಲ್ಲಿ ಇನ್ನಾವುದೋ ಹೊಸತು ಎನ್ನುವುದು ಆವಿಷ್ಕಾರಗೊಂಡಿತು ಎಂದಾದರೆ ಮತ್ತೆ ಮುಂದಿನದು ಹಿಂದೆ ಬಿದ್ದು ಇನ್ನೊಂದು ಬರುತ್ತಾ ಸಾಗುವುದೇ? ಗೊತ್ತಿಲ್ಲ. ಅದನ್ನೇ ನಮ್ಮ ಗುಂಡಪ್ಪಗುರು ಹೇಳಿದರು:


ದಿನದಿನವು ಕುಸಿದು ಕಟ್ಟಿಸಿಕೊಳುವ ಗುಡಿ ವಿಶ್ವ |

ಜನರೆಲ್ಲರಾಗುಡಿಯ ಕೆಲಸದಾಳುಗಳು |

ಮನೆಯೇನು? ನಾಡೇನು? ಕ್ಯ್ಲವೇನು? ಮಠವೇನು?

ಎಣಿಸೆಲ್ಲವದೆಯೆಂದು-ಮಂಕುತಿಮ್ಮ


ಹಾಗಾಗಿ, ವಿಶ್ವವೆಂಬೀ ಗುಡಿಯ ಕಟ್ಟಡ ಕಾಮಗಾರಿ ಮುಗಿಯಿತೆಂಬುದಿಲ್ಲ! ಇದಕ್ಕೆ ಕಂತ್ರಾಟುದಾರರಿಲ್ಲ; ಕೇವಲ ಹಣಕ್ಕಾಗಿ ನಡೆಯುವ ವ್ಯವಹಾರ ಇದಲ್ಲ. ಇರುವ ರಂಗವೈವಿಧ್ಯಗಳಲ್ಲಿ ಅವುಗಳದ್ದೇ ಆದ ವಿಶಾಲ ವ್ಯಾಪ್ತಿಯಲ್ಲಿ, ಅದೆಷ್ಟು ಜನ ಕಾರ್ಮಿಕರು ! ಇರುವವರೆಲ್ಲರೂ ಕಾರ್ಮಿಕರೇ! ಅಂತಹ ಗುಡಿಕಟ್ಟುವ ಕಾರ್ಮಿಕರ ಸಾಲಿನಲ್ಲಿ ನಾನೂ ಒಬ್ಬ ನಿಂತು ಆಗಾಗ ಕಲ್ಲು ಮಣ್ಣು ಹೊತ್ತಿದ್ದೇನೆ; ಹೊರುತ್ತಲೇ ಇದ್ದೇನೆ. ಹಾಗಾಗಿ ಇದು ನನಗೆ ಸಹ್ಯ. ಯಾರೋ ಅತಿಥಿ, ಅಭ್ಯಾಗತ, ಆಗಂತುಕರು ಒಂದಷ್ಟು ಓದಿ ಖುಷಿಗೊಂಡು ಹೇಳಿದರೆ ಅದರಿಂದ ಸಿಗುವ ಆತ್ಮತೃಪ್ತಿಯೆಂಬ ಶೀಲ್ಡ್ ಇದೆಯಲ್ಲ ಅದಕ್ಕಿಂತ ದೊಡ್ಡದು ಇನ್ನೊಂದಿಲ್ಲ. ಹಾಗಾಗಿ, ಇಂದೇ, ಈಗಲೇ ರಂಗಕ್ಕೆ ಧಾವಿಸಿದ್ದೇನೆ. ಆಗಾಗ ಪ್ರವೇಶಿಸಿ ಪಾತ್ರ ನಿರ್ವಹಿಸುವ ನನ್ನ ಕೆಲಸವನ್ನು ರಂಗಕೌತುಕದಿಂದ ನೀವೆಲ್ಲ ಮನ್ನಿಸುತ್ತೀರಿ ಎಂದು ಭಾವಿಸಿ ನಿಮಗಿದೋ ಹೃತ್ಪೂರ್ವಕ ಸ್ವಾಗತ, ಧನ್ಯವಾದಗಳು