ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, March 1, 2012

’ಬೆಟ್ಟದ ಜೀವ’ ದ ಹುಟ್ಟಿಬೆಳೆದ ಮನೆಯ ಕಥೆ ಕಥೆಯಾದಾಗ !

ಚಿತ್ರಗಳ ಋಣ : ಗೂಗಲ್ ಅಂತರ್ಜಾಲ

’ಬೆಟ್ಟದ ಜೀವ’ ದ ಹುಟ್ಟಿಬೆಳೆದ ಮನೆಯ ಕಥೆ ಕಥೆಯಾದಾಗ !

ಗುಜರಿ ಆಯುವ ಹುಡುಗನೊಬ್ಬ ಬರೆಯುತ್ತಾನೆ- ’ಗೋರಿ ಕಾಯುವವರು’ ಎಂಬ ತನ್ನ ಕೆಟ್ಟ ಪದಗಳ ಬರಹದಲ್ಲಿ! ಆತನಿಗೆ ಗೋರಿಯಾವುದು ದೇವಳಯಾವುದು ಬೇರ್ಪಡಿಸಲಾಗದ ಹುಟ್ಟುಕುರುಡು! ಇಂಥವರೆಲ್ಲಾ ಇವತ್ತು ಪತ್ರಕರ್ತರಾಗಿ ಬರಹಗಾರರಾಗಿ ತಯರಾಗಿದ್ದಾರೆ ಎಂದಾಗ ಕಾಲದ ಸ್ಥಿತಿಯ ಅವಲೋಕನ ಮಾಡಿಕೊಳ್ಳಬೇಕಾಗುತ್ತದೆ. ಮೊನ್ನೆಯಷ್ಟೇ ಒಬ್ಬ ಮಹಾತ್ಮರು ಹೇಳಿದ್ದಾರೆ " ಧರ್ಮ ಕಾಲಕ್ಕೆ ತಕ್ಕಂತೇ ಬದಲಾಗುವುದಿಲ್ಲ, ಧರ್ಮವೆಂಬುದು ಮಾನವ ಜೀವನದ ಒಳಿತಿಗಾಗಿ ಇರುವ ನೀತಿಯುಕ್ತ ಜೀವನಮಾರ್ಗ. ಧರ್ಮವನ್ನು ಬದಲಿಸಹೊರಡುವುದೇ ಅಧರ್ಮ, ಅದಕ್ಕೆ ಬದಲಾಗಿ ಧರ್ಮಕ್ಕೆ ನಾವು ನಮ್ಮನ್ನು ಅಳವಡಿಸಿಕೊಳ್ಳಬೇಕಾಗುತ್ತದೆ." ಅವರ ಮಾತು ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ. ಇಲ್ಲಿ ಧರ್ಮ ಎಂದರೆ ಯಾವುದು ಎಂಬ ಪ್ರಶ್ನೆ ಮೂಡಬಹುದು: ಅದು ಮಾನವ ಜೀವನಧರ್ಮ. ಮಹಾಕವಿ ಡೀವೀಜಿಯವರು ’ಜೀವನಧರ್ಮ ಯೋಗ’ ಎಂಬ ಗ್ರಂಥವನ್ನು ಬರೆದರು. ’ಮಂಕುತಿಮ್ಮನ ಕಗ್ಗ’ ಅರ್ಥವಾಗದವರಿಗೆ/ಕಗ್ಗಂಟು ಎನಿಸುವವರಿಗೆ ಇದು ಬಳಕೆಯಾಗಲಿ ಎಂಬುದು ಅವರ ಆಶಯವಾಗಿತ್ತು. ಅಂತಹ ಡೀವೀಜಿಯವರು ಬಾಳಿ ಬದುಕಿದ್ದ ಅವರ ಮನೆ ಇಂದು ಇಲ್ಲವೇ ಇಲ್ಲ. ಅ.ನ.ಕೃಷ್ಣರಾಯರು ಒಂದುಕಾಲಕ್ಕೆ ಉಪವಾಸವಿದ್ದ ಕನ್ನಡದ ಕೆಲಸಗಾರರಿಗೆ ಊಟವೊದಗಿಸಿದವರು! ಅವರ ಮನೆ ಇರುವ ಜಾಗ ಚಪ್ಪಲಿಗಳ ಗೋದಾಮು ಎಂಬುದು ತಿಳಿದರೆ ಬೇಸರವಾಗುವುದಿಲ್ಲವೇ? ಅದರಂತೇ ಮಲ್ಲಿಗೆಕವಿ ನರಸಿಂಹಸ್ವಾಮಿಯವರ ಮನೆಗೆ ಖುದ್ದಾಗಿ ನಾನು ಹೋಗಿ ನೋಡಿಬಂದಿದ್ದಿದೆ. ಇವತ್ತು ಹುಡುಕಿದರೆ ಆ ಮನೆ ಇಲ್ಲವೇ ಇಲ್ಲ!

ಕಾರಂತರು ಹುಟ್ಟಿಬೆಳೆದ ಮನೆ

ಕುಪ್ಪಳ್ಳಿಯ ವಿಸ್ತಾರವಾದ ಪ್ರದೇಶದಲ್ಲಿ ರಾಷ್ಟ್ರೀಯ ರಸ್ತೆಗಳಿಂದ ದೂರ ಉಳಿದ ಕುವೆಂಪು ಅವರ ಮನೆ ಮಾತ್ರ ಉಳಿದುಕೊಂಡಿತು. ಅದನ್ನು ರಕ್ಷಿಸಿಕೊಳ್ಳಲು, ನೋಡಿಕೊಳ್ಳಲು ಹಲವರು ಇದ್ದಾರೆ ಬಿಡಿ, ಕಾರಂತರ ಮನೆ ಹಾಗಲ್ಲ! ’ಬೆಟ್ಟದ ಜೀವ’, ’ಚೋಮನ ದುಡಿ’, ’ಮೂಕಜ್ಜಿಯ ಕನಸುಗಳು’, ’ಹುಚ್ಚುಮನಸ್ಸಿನ ಹತ್ತುಮುಖಗಳು’ ಮುಂತಾದ ಮನನೀಯ ಕಾದಂಬರಿಗಳನ್ನು ಕೊಟ್ಟ ಕಾರಂತರು ಕೈಯಾಡಿಸಿದ ಕಾರ್ಯಕ್ಷೇತ್ರ ಒಂದೇ ಎರಡೇ? ಕನ್ನಡಕ್ಕಾಗಿ ಅವರು ಕೊಟ್ಟ ಕೊಡುಗೆ ಲೆಕ್ಕಹಾಕಿದರೆ ಕುವೆಂಪುವಿಗಿಂತ ಮೇಲೆ ಕೂರಬೇಕಾದ ವ್ಯಕ್ತಿತ್ವ ಅವರದ್ದು! ಅಪಾರ ಪಾಂಡಿತ್ಯದ ಕಾರಂತರು ಸಾಹಿತ್ಯಾಸಕ್ತಿಯುಳ್ಳ ಹೊರದೇಶದಲ್ಲಿನ ಜನ ಕರೆದಾಗ ತನ್ನ ಸ್ವಂತ ಜಮೀನಿನ ಭಾಗವನ್ನೇ ಮಾರಿ ಅದರಿಂದ ಖರ್ಚನ್ನು ನಿಭಾಯಿಸಿದರೂ ಮತ್ತೂ ಸಾಲ ಬಾಕಿ ಉಳಿದಿತ್ತು ಎಂಬುದು ಅನೇಕರಿಗೆ ತಿಳಿದಿರಲಿಕ್ಕಿಲ್ಲ! ಕಾರಂತರು ವೇತನ ಪಡೆಯುವ ಯಾವುದೇ ಹುದ್ದೆಗೆ ಅಂಟಿಕೊಳ್ಳಲಿಲ್ಲ. ಕನ್ನಡಕ್ಕಾಗಿ ತನ್ನಲ್ಲಿದ್ದುದನ್ನೇ ಖರ್ಚುಮಾಡಿದರು!’ಈ ಜಗತ್ತು’ ಎಂಬ ಐದು ಸಂಪುಟಗಳ ಅವರ ಖಗೋಳಗ್ರಂಥವನ್ನು ಇಂದಿನ ಖಗೋಳಶಾಸ್ತ್ರಿಗಳು ಓದಿ ತಿಳಿದುಕೊಳ್ಳುವಂಥದ್ದಿದೆ! ಯಕ್ಷಗಾನ, ಬ್ಯಾಲೆ ನರ್ತನ, ಹಾಡು-ಹಸೆ, ಸಾಹಿತ್ಯ, ರಾಜಕೀಯ, ಶರಾವತೀ ಟೇಲರೇಸ್ ಎಂಬ ನಿಸರ್ಗಾಂದೋಲನ, ಮಕ್ಕಳಿಗೆ ಶಿಕ್ಷಣ ಹೀಗೇ ಕಾರಂತರದು ಆನೆಗಾತ್ರದ ಹೆಜ್ಜೆಗಳು! ಎಲ್ಲೇ ಹೋಗಲಿ ಕಾರಂತರು ತನ್ನದೇ ಆದ ಛಾಪು ಮೂಡಿಸಿದ್ದಾರೆ.

ಈ ಉಯ್ಯಾಲೆ ಮಂಚದಲ್ಲಿ ಕಾರಂತರು ಕುಳಿತು ಅದೆಷ್ಟು ಚಿಂತಿಸಿದರೋ ! [ಹಳೆಯ ಪರಿಕರಗಳನ್ನು ಗಮನಿಸಿ]

ಇವತ್ತು ಸರಕಾರದ ಸವಲತ್ತುಗಳಿಗೆ ಬುದ್ಧ್ಯಾಪೂರ್ವಕ ನಿಷೇಧಕ್ಕೊಳಗಾಗಿರುವ ಮೇಲ್ವರ್ಗದಲ್ಲಿ ಜನಿಸಿದ್ದರೂ ’ಚೋಮನ ದುಡಿ’ಯಲ್ಲಿ ಅವರ ಮನಮಿಡಿದ ರೀತಿಯನ್ನು ಕಾದಂಬರಿ ಓದದ ಅನೇಕರು ಅದೇ ಹೆಸರಿನ ಸಿನಿಮಾ ನೋಡಿ ಅರಿತಿದ್ದಾರೆ. ನಿಮ್ನವರ್ಗದವರ ಬಗ್ಗೆ ಕಾಳಜಿ ಇರದಿದ್ದರೆ ಅವರು ಅದನ್ನು ಬರೆಯಲು ಸಾಧ್ಯವಿತ್ತೇ ? ಒಂದು ಕಾಲಕ್ಕೆ ಕಾರಂತರು ಇದ್ದಾರೆಂದರೆ ಅವರೆದುರು ಕೆಲವರು ನಿಲ್ಲಲು ಹೆದರಿಕೊಳ್ಳುತ್ತಿದ್ದರು ಯಾಕೆಂದರೆ ತನಗನ್ನಿಸಿದ್ದನ್ನು ಯಾವ ಮುಲಾಜಿಗೂ ಒಳಗಾಗದೇ ನೇರಾನೇರ ಮುಖದಮೇಲೆ ಬಡಿದಹಾಗೇ ಹೇಳುವ ನಿಷ್ಠುರವಾದಿಯಾಗಿದ್ದರು ಕಾರಂತರು. ಮೀಸಾಕಾಯ್ದೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ತನಗೆ ಕೇಂದ್ರ ಕೊಡಮಾಡಿದ ಪ್ರಶಸ್ತಿಯನ್ನು ಧಿಕ್ಕರಿಸಿ ಜನರ ನೋವಿರುವವರೆಗೂ ತನಗೆ ಪ್ರಶಸ್ತಿ ಬೇಡವೆಂದ ಮಹಾಜನ ಕಾರಂತರು!

ಬರೆದು ಮುಗಿಯದಷ್ಟು ಬರೆಯಲ್ಲಿಕ್ಕಿರುವ ಅಗಾಧ ವ್ಯಕ್ತಿತ್ವ ಕಾರಂತರದ್ದು. ಅವರ ಬಗ್ಗೆ ಹೆಚ್ಚಿನದಾಗಿ ಇಲ್ಲಿ ಓದಿ :

ಥೈ ಥೈ ತದ್ದಿನ ಧೇಂ ಧೇಂ......[ http://nimmodanevrbhat.blogspot.in/2010/07/blog-post_14.html ]

ಕಾರಂತರೇ ಬದುಕಿದ್ದರೆ ಚತುಷ್ಪಥಕ್ಕೆ ಏನೆನ್ನುತ್ತಿದ್ದರೋ ತಿಳಿಯದು! ಯಾಕೆಂದರೆ ಇರುವ ಭೂಪ್ರದೇಶವನ್ನೆಲ್ಲಾ ಗಣಿಗೊಂದಿಷ್ಟು, ರಸ್ತೆಗಳಿಗೊಂದಿಷ್ಟು ಕೊಟ್ಟುಬಿಟ್ಟರೆ ಜನಜೀವನ ಸುಧಾರಿಸುತ್ತದೇನು ? ಅಷ್ಟಕ್ಕೂ ಅಲ್ಲಿ ಚತುಷ್ಪಥ ಯಾರಿಗೆ ಬೇಕಾಗಿದೆ? ನಾವು ವಿದೇಶೀಯರಲ್ಲ, ನಾವು ಅಮೇರಿಕನ್ನರಲ್ಲ,ನಾವು ಭಾರತೀಯರು! ನಮ್ಮದು ಕೃಷಿಪ್ರಧಾನ ದೇಶ; ಹಳ್ಳಿಗಳೇ ನಮ್ಮ ಪ್ರಮುಖ ಜೀವಜೀವಾಳ! ಅನೇಕ ಹಳ್ಳಿಗಳ ಜನಜೀವನವನ್ನೂ ಹಳ್ಳಿಗಳ ಜನರ ಜೀವನಕ್ರಮವನ್ನೂ ತಿರುಚಿಹಾಕುವ ಇಂತಹ ಹೆದ್ದಾರಿಗಳು ಯಾವ ಉದ್ಧಾರಕ್ಕಾಗಿ? ಕೇಂದ್ರ ರಸ್ತೆಕಾಮಗಾರಿಯಲ್ಲಿ ಯಾರ್ಯಾರಿಗೆ ಎಷ್ಟುಪಾಲು ? ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ ರಾಜ್ಯಗಳ ಸಂಪರ್ಕವನ್ನು ಕಲ್ಪಿಸುವುದಕ್ಕೆ ಚತುಷ್ಪಥ ಅನಿವಾರ್ಯವಿತ್ತೇ ಹೊರತು ಇಲ್ಲೆಲ್ಲಾ ಅದರ ಅನಿವಾರ್ಯತೆ ಕಾಣಲಿಲ್ಲ. ಕರ್ನಾಟಕ ರಾಜ್ಯದಲ್ಲೂ ಅನವಶ್ಯಕವಾಗಿ ನಿರ್ಮಾಣಗೊಂಡ ರಾಜ್ಯಹೆದ್ದಾರಿಗಳೆಷ್ಟೋ! ಇಲ್ಲೆಲ್ಲಾ ಅಭಿವೃದ್ಧಿಯ ನೆಪದಲ್ಲಿ ಕಳ್ಳ ರಾಜಕಾರಣಿಗಳ ಬೊಕ್ಕಸಕ್ಕೆ ಎಷ್ಟೆಷ್ಟು ಹರಿದುಬಂತು ಎಂಬುದು ತಿಳಿಯುತ್ತಿಲ್ಲ!

ಕಾರಂತರ ಮನೆಯ ಹಿಂಪಾರ್ಶ್ವದಲ್ಲಿ ಔಟ್ ಹೌಸ್

ಎಡಪಂಥೀಯ ಎನಿಸಿಕೊಂಡ ಜನ ಬುದ್ಧಿಜೀವಿಗಳು ಎಂದು ಅವರಷ್ಟಕ್ಕೇ ಅವರು ಘೋಷಿಸಿಕೊಂಡಿದ್ದಾರೆ. ನೇರವಾಗಿರುವ ಮಾರ್ಗಕ್ಕೆ ಅಡ್ಡಹಾಕಿ ತಮ್ಮತ್ತ ಜನರನ್ನು ಆಕರ್ಷಿಸುವ ಅಡ್ಡಕಸುಬಿಗಳು ಅವರು! ಕಾರಂತರಿದ್ದರೆ ಇವತ್ತು ಕನ್ನಡನಾಡಿನಲ್ಲಿ ಮೆರೆಯುತ್ತಿದ್ದ ಅನೇಕ ಬುದ್ಧಿಜೀವಿಗಳು ಅಡಗಿ ಹೋಗುತ್ತಿದ್ದರು! ಗುಜರಿ ಆಯುವ ಹುಡುಗ ಬರೆಯುವ ರೀತಿ ನೋಡಿದರೆ ಆತನ ಗುಜರಿ ಸಾಮಗ್ರಿಗಳ ಬಗ್ಗೆ ನಿಜಕ್ಕೂ ಅಸಹ್ಯ ಹುಟ್ಟುತ್ತದೆ. ಕವಿ-ಸಾಹಿತಿಗಳು ಗತಿಸಿದಮೇಲೆ ಅವರ ಮನೆಗಳು, ಅವರು ಬಳಸಿದ್ದ ವಸ್ತುಗಳು ಇಂಥವೆಲ್ಲಾ ಮುಖ್ಯವಲ್ಲಾ ಕೇವಲ ಅವರ ಬರಹಗಳು-ತತ್ವಗಳು ಮಾತ್ರ ಮುಖ್ಯವೆಂಬ ಆತನ ಅನಿಸಿಕೆಯೊಂದಿಗೆ ಕಾರಂತರ ಮನೆ ಕೆಡವಿದಂತೇ ಅನೇಕ ಜನಸಾಮಾನ್ಯರ ಮನೆ ಕೆಡವಿದ್ದಾರೆ, ಸಾವಿರಾರು ಜನ ಬೀದಿ ಪಾಲಾಗಿದ್ದಾರೆ ಎನ್ನುವ ಆತನ ’ಸಾಮಾಜಿಕ ಕಳಕಳಿ’ಯಲ್ಲಿ ಕಾರಂತರೇ ಇದಕ್ಕೆಲ್ಲಾ ಪರೋಕ್ಷ ಕಾರಣವೋ ಎಂಬಂತೇ ಪ್ರತಿಧ್ವನಿತವಾಗಿದೆ. ಜನಸಾಮಾನ್ಯರು ಎಲ್ಲೆಡೆಯೂ ಇರುತ್ತಾರೆ ಆದರೆ ಎಲ್ಲರೂ ಕಾರಂತರಾಗಲು ಸಾಧ್ಯವೇ? ಕಾರಂತರ ಸಾಹಿತ್ಯ ದಾರ್ಷ್ಟ್ಯತೆ ಆ ವೈವಿಧ್ಯತೆ ಯಾರಲ್ಲಿದೆ ಕನ್ನಡದಲ್ಲಿ ? ಕಾರಂತರ ಮನೆ ಹೋಗಿದ್ದು ತನಗಂತೂ ಬೇಸರವಿಲ್ಲಾ ಎನ್ನುವ ಗುಜರಿ ಹುಡುಗನನ್ನು ಅನುಮೋದಿಸುವ ಮಂದಿಯೂ ಇದ್ದಾರೆ ಎಂಬುದು ಗೊತ್ತಾಗಿ ಬಹಳಖೇದವೂ ಆಯ್ತು. ಅಕಸ್ಮಾತ್ ಕುವೆಂಪು ಮನೆಯ ಒಂದು ಹಂಚನ್ನು ಕೆಡವಲಿ : ಅದರ ಪರಿಣಾಮ ಅನುಭವಕ್ಕೆ ಬರುತ್ತದೆ!

ಕುವೆಂಪು ಅವರಿಗೆ ಕೊಡಮಾಡಿದ ಘನತೆ ಗೌರವವನ್ನು ಕಾರಂತ, ಮಾಸ್ತಿ, ಡೀವೀಜಿ, ಅನಕೃ ಮುಂತಾದವರಿಗೆ ಸರಕಾರ ಕೊಡಲಿಲ್ಲ. [ಕುವೆಂಪು ಹುಟ್ಟಾ ಶ್ರೀಮಂತರಾಗಿದ್ದರು! ದಕ್ಷಿಣಕನ್ನಡದ ಉಪಾಧ್ಯಾಯರೊಬ್ಬರು ಅವರ ಮನೆಗೇ ಹೋಗಿ ಪಾಠಹೇಳಿಕೊಡುತ್ತಿದ್ದರು! ಈ ಸವಲತ್ತು ನಾನು ಇಲ್ಲಿ ಪಟ್ಟಿಮಾಡಿದ ಎಷ್ಟು ಜನರಿಗಿತ್ತು? ] ಡೀವೀಜಿ ಬದುಕಿನಲ್ಲಿ ಬಡತನದಿಂದ ಬಳಲಿದರೂ ಸಾರ್ವಜನಿಕರಿಗಾಗಿ ಗೋಖಲೆ ಸಂಸ್ಥೆಯನ್ನು ಕಟ್ಟಿಕೊಟ್ಟರು-ತನಗೆ ಬಂದ ಸನ್ಮಾನಧನದಲ್ಲಿ! ಸನ್ಮಾನ ಪಡೆದ ಮಾರನೇ ದಿನವೂ ಸೆಟ್ಟಿ ಅಂಗಡಿಯಿಂದ ತರಿಸುವ ಕಾಫಿ ಪುಡಿಗೆ ಕಾಸಿರಲಿಲ್ಲ ಡೀವೀಜಿಯಲ್ಲಿ! ಮನೆಗೆ ಬಂದ ಅಭಿಮಾನಿಗಳಿಗೆ ಕಾಫಿ ಕೊಡಲು ಅನುಕೂಲವಿಲ್ಲದಾಗ " ಶೆಟ್ಟರೇ, ದಯಮಾಡಿ ಕಾಫಿಪುಡಿ, ಸಕ್ಕರೆ ಕೊಟ್ಟು ಕಳಿಸಿ, ಲೆಕ್ಕ ಬರೆದಿಟ್ಟುಕೊಳ್ಳಿ ಆಮೇಲೆ ತೀರಿಸುತ್ತೇನೆ" ಎಂದು ಗುಪ್ತವಾಗಿ ಹುಡುಗನೊಬ್ಬನ ಮೂಲಕ ಚೀಟಿ ಕಳಿಸಿದ್ದಾರೆ ಅಂಗಡಿಗೆ! ಎಂತೆಂತೆಹ ಮಹಾನುಭಾವರು ಕನ್ನಡದಲ್ಲಿ ಆಗಿಹೋದರೂ ಅವರಿಗಿಲ್ಲದ ವಿಶೇಷ ರಾಜಮರ್ಯಾದೆ ಕುವೆಂಪು ಅವರಿಗೆ ಮಾತ್ರ ದೊರೆತಿದೆ; ದೊರೆಯುತ್ತಿದೆ; ದೊರೆಯುತ್ತದೆ!!ಕವಿ-ಸಾಹಿತಿಗಳ ಬಗ್ಗೆಯೂ ಜಾತೀ ರಾಜಕಾರಣ ಎನಿಸುವುದಿಲ್ಲವೇ?

ಕಾರಂತರ ಮನೆಯನ್ನು ಕೆಡವಿದ್ದು ಕನ್ನಡದ ಮನೆಯ ಒಂದು ಕಂಬ ಕೆಡವಿದಂತೆಯೇ ಸರಿ. ಮುಕ್ತಮನದಿಂದ ಕಾರಂತರನ್ನು ಆಮೂಲಾಗ್ರವಾಗಿ ತಿಳಿದುಕೊಂಡ ಜನ ಕಾರಂತರು ಕೇವಲ ಮೇಲ್ವರ್ಗಕ್ಕಾಗಿ ಅಥವಾ ಮೇಲ್ವರ್ಗವನ್ನು ಹೊಗಳಿ ಏನನ್ನೋ ಬರೆದರು ಎನ್ನುವುದಿಲ್ಲ. ’ಚೋಮನ ದುಡ”ಯ ಕೆಲವು ಸನ್ನಿವೇಶಗಳು ಅಸಹಾಯ ದಲಿತನ ಕಣ್ಣೀರಕಥೆ ಹೃದಯದೊಳಗೆ ಮಡುಗಟ್ಟಿ-ಹಾಡಾಗಿ, ಆತ ದುಡಿಬಡಿದು ಕುಣಿಯುವುದನ್ನು ನೆನಪಿಸಿಕೊಳ್ಳುವಾಗ ಓದುಗನ ಕಣ್ಣಲ್ಲಿ ಆರ್ದ್ರತೆ ಒಸರದಿದ್ದರೆ ನನ್ನ ಮಾತನ್ನು ತೆಗೆದುಹಾಕಿ! ಇವತ್ತಿಗೂ ಕಾರಂತರು ಕಟ್ಟಿದ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಮುಖ್ಯಸ್ಥರಾಗಿರುವ ಸಂಜೀವ ಸುವರ್ಣರನ್ನು ಕೇಳಿದರೆ ಕಾರಂತರ ಬಗ್ಗೆ ತುಸು ಆತ್ಮೀಯವಾಗಿ ಹೇಳಿಯಾರು. ನನಗೆ ಆಶ್ಚರ್ಯವಾಗಿದ್ದು, ದಕ್ಷಿಣ ಕನ್ನಡ ಜನತೆ ಯಾಕೆ ಹಾಗೆ ಸುಮ್ಮನೇ ಕುಳಿತಿದ್ದಾರೆ, ಕಾರಂತರ ಮನೆ ಹೋಗುತ್ತದೆ ಎಂದಾಗಲೂ ಅವರಿಗೆ ಏನೂ ಅನಿಸಲಿಲ್ಲವೇ? ಅಥವಾ ಹತ್ತಿರವಿರುವ ದೇವರು ಸಸಾರವಾದಂತೇ ಆಯ್ತೇ?

ಧರ್ಮಸ್ಥಳ/ತಿರುಪತಿ ದೇವಳದ ಪಕ್ಕದಲ್ಲೇ ಇರುವವರಿಗೆ ಆ ದೇವರು ಸಸಾರ! ನೋಡೀ ನೋಡೀ ಚಡ್ಡೆ! ಅದೇ ದೂರದಿಂದ ಹೋಗುವ ಯಾತ್ರಿಗೆ ಅವು ಕಣ್ತುಂಬಿಸಿಕೊಳ್ಳುವ ಭಕ್ತಿಯ ಸ್ವರ್ಗ! ಅದೇ ರೀತೀ ಕವಿ-ಸಾಹಿತಿಗಳನ್ನು ಖುದ್ದಾಗಿ ಕಾಣುವುದು ಸಾಧ್ಯವಾಗದಾಗ ಕೊನೇಪಕ್ಷ ಅವರು ಈ ಜಾಗದಲ್ಲಿ ಬದುಕಿದ್ದರು ಎನ್ನಲಿಕ್ಕೆ, ಅವರು ಬಳಸಿದ ವಸ್ತುಗಳನ್ನು ನೋಡಿ ಖುಷಿಪಡಲಿಕ್ಕೆ ಒಂದು ಸ್ಮಾರಕವಿದ್ದರೆ ಅದರಿಂದ ಸಿಗುವ ಆತ್ಮತೃಪ್ತಿ ಹೇಳಿಕೊಳ್ಳಲು ಆಗುವಂಥದ್ದಲ್ಲ. ’ಗೋರಿ’ ಎಂಬ ಗುಜರಿ ಹುಡುಗ ಬಳಸಿದ ಪದ ಇದೆಯಲ್ಲ ಅದು ನನಗೆ ಕೊಟ್ಟ ನೋವು ಅಷ್ಟಿಷ್ಟಲ್ಲ.
ಏನೇ ಇರಲಿ ಕಾರಂತರ ಮನೆ ಕೆಡವಿದ್ದು ಖಂಡನೀಯ, ವಿಷಾದನೀಯ, ಅದನ್ನು ಸಮರ್ಥಿಸಿ ಬರೆಯುವ ಎಲ್ಲರ ಲೇಖನಗಳೂ ಖಂಡನೀಯ ಎಂಬುದನ್ನು ಘಂಟಾಘೋಷವಾಗಿ ಹೇಳುತ್ತಿದ್ದೇನೆ.