ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, May 20, 2010

ಗ್ರಾಮಾನಂದ ಲಹರೀ


ಇಂದಿನ ನವ ಪೀಳಿಗೆಗೆ ಹಿಂದಿನ ಗ್ರಾಮೀಣ ಬದುಕು-ಪರಿಸರ ಕೇವಲ ನೆನಪು ಮಾತ್ರ. ಅಂದಿನ ಜೀವನದ ಮಜಾ ಇಂದಿಲ್ಲ. ಇಂದು ಕೇವಲ ನಮ್ಮದು ಆತುರದ ಬದುಕು. ಅಂದು ಅದು ವಿಭಿನ್ನವಾಗಿ ಪ್ರತೀ ಕ್ಷಣವನ್ನು ರುಚಿರುಚಿಯಾಗಿ ಅನುಭವಿಸುವ, ಹಂಚಿಕೊಳ್ಳುವ ಬದುಕಾಗಿತ್ತು. ಇವತ್ತು ನೀವು ಊರಿಗೆ ಹೋದರೆ ನೆರೆಯಾತ ಎಲ್ಲೋ ಹೊರಟುನಿಂತಾಗ ನೀವು ನಿಮ್ಮ ಬಾಲ್ಯದ ಪ್ರವೃತ್ತಿಯಂತೆ " ಎಲ್ಲಿಗಪ್ಪ ಹೊರಟುಬಿಟ್ಟೆ ? " ಅಂತ ಕೇಳಿದರೆ ಆತ " ಇಲ್ಲೇ ಪೇಟೆಗೆ, ಸ್ವಲ್ಪ ಕೆಲ್ಸ ಇತ್ತು ಅದಕ್ಕೇ..." ಎನ್ನುತ್ತಾನೆ. ಯಾವ ಕೆಲ್ಸ, ಎಲ್ಲಿ ಅದೆಲ್ಲ ಹಂಚಿಕೊಳ್ಳಲಾರದ ವಿಷಯವಸ್ತು ಈಗ. ಅದೇ ಹದಿನೈದಿಪ್ಪತ್ತು ವರ್ಷಗಳ ಹಿಂದೆ ನಮ್ಮ ಹಳ್ಳಿಗಳಲ್ಲಿ ಹೀಗಿರಲಿಲ್ಲ. ಹಳ್ಳಿಯಲ್ಲಿ ಅಕ್ಕಪಕ್ಕ ಯಾರಾದರೂ ಪೇಟೆಗೆ ಹೊರಟರೆ ನೆರೆ-ಕೆರೆಯ ಮನೆಗಳಿಗೆ ಏನಾದರೂ ತರುವುದಿದೆಯೇ ಎಂದು ಕೇಳಿಕೊಂಡು ಅದನ್ನು ಹೋಗಿ ಬರುವಾಗ ತಂದುಕೊಡುತ್ತಿದ್ದರು. ಈಗ ಕೇವಲ ಒಂದು ದಿನಪತ್ರಿಕೆ ತರಲು ಪ್ರತೀ ಮನೆಯಾತನೂ ತಾನೇ ಪೇಟೆಗೆ ಹೋಗಿಬರುತ್ತಾನೆ. ಕೇಳಿದರೆ ಅದೇ ಮೇಲಿನ ರೀತಿ ಉತ್ತರ. ["ಒಂದು ಸ್ವಲ್ಪ ಕೆಲ್ಸ ಇತ್ತು"]. ಈಗಂತೂ ರಾಜಕೀಯದವರ ಪಂಚಾಯತ ಚುನಾವಣೆ ಗಾಳಕ್ಕೆ ಸಿಲುಕಿ ಗ್ರಾಮೀಣ ಜನರಲ್ಲೂ ಹಿಂದಿದ್ದ ಪ್ರೀತಿ-ವಿಶ್ವಾಸ-ಆತ್ಮೀಯತೆಗಳು ಕೇವಲ ಪುಸ್ತಕದ ಶಬ್ಢವಾಗುತ್ತಿವೆ;ಕೋಶಸೇರುತ್ತಿವೆ! ಮಾಧ್ಯಮದಲ್ಲಿ ಯಾರೋ ಪರಿಚಯದವರ ಮುಖ ಕಂಡರೆ " ಓ ಅವ್ನಾ ಅದು ಹ್ಯಾಗೆ ಟಿ.ವಿಯಲ್ಲಿ ಬಂದ ಮಾರಾಯ " ಎಂದುಕೊಳ್ಳುತ್ತ ಕೈ ಕೈ ಹೊಸಕಿಕೊಂಡು ಹೊಟ್ಟೆಕಿಚ್ಚುಪಟ್ಟು ತಾನೂ ಹೇಗಾದರೂ ಸತ್ತ ಹೆಗ್ಗಣವನ್ನಾದರೂ ಪೂಜಿಸಿ ಮಾಧ್ಯಮದಲ್ಲಿ ಕಾಣಿಸಿಕೊಳ್ಳಲು ಬಯಸುವ ಕೆಟ್ಟಚಾಳಿಗೆ ಇಳಿಯುತ್ತಿದ್ದಾರೆ!ಇರಲಿ.

ಹಿಂದೆ ನಮ್ಮ ಗ್ರಾಮೀಣ ಬದುಕು ಸಾಂಪ್ರದಾಯಕ ಕಲೆಗಳಿಂದ,ಗ್ರಾಮೀಣ ಕ್ರೀಡೆಗಳಿಂದ, ಗ್ರಾಮೀಣ ಜಾತ್ರೆ-ಹಬ್ಬ-ಹರಿದಿನಗಳಗಳ ಸಹಬಾಳ್ವೆಯಿಂದ, ಗ್ರಾಮೀಣ ತಿಂಡಿ-ತೀರ್ಥ-ಹಣ್ಣು-ಹಂಪಲುಗಳಿಂದ ತುಂಬಿ ಬಹಳ ಹುಲುಸಾಗಿತ್ತು. ತರಾವರಿ ಹಣ್ಣುಗಳು, ಸ್ಪರ್ಧೆಗಳು, ಪೂಜೆಗಳು, ನಾಟಕ-ಜಾತ್ರೆಗಳು, ಪೇಟೆಯಿಂದ ಬಂದ ನಾನಾತರದ ಅಪರೂಪದ ದಿನಬಳಕೆ ವಸ್ತುಗಳು, ಮಣ್ಣಿನಲ್ಲಿ ಅರಳಿದ ಮಡಿಕೆ-ಕುಡಿಕೆ-ಹಣತೆ-ತಾಟು-ಬೋಗುಣಿ ಮುಂತಾದ ಸಾಮಾನುಗಳು ಇರುತ್ತಿದ್ದವು. ಮಂಗಳವನ್ನು ಮನೆಗೆ ಕರೆಯಲು ಬಳೆಗಾರ,ಚಿನಿವಾರ,ದರ್ಜಿ,ಪಡಸಾಲಿ ಮುಂತಾದ ಹಲವಾರು ಹಳ್ಳಿಮಾರಾಟಗಾರರು ಬರುತ್ತಿದ್ದರು. ಇಂದಿಗೆ ಅದು ಕಥೆ. ಮಕ್ಕಳು ರಜದಲ್ಲಿ ಊರೆಲ್ಲ ಅಲೆಯುತ್ತ, ಮರಕೋತಿ, ಕುಂಟೆಬಿಲ್ಲೆ, ಕಣ್ಣಾಮುಚ್ಚಾಲೆ, ಚಿನ್ನಿದಾಂಡು, ಚೆನ್ನೆಮಣೆ, ಕಬಡ್ಡಿ[ಸುರಗುದ್ದು] ಮುಂತಾದ ಅನೇಕ ಆಟಗಳನ್ನು ಆಡುತ್ತ, ಹಣ್ಣಿನ ಮರಗಳಿಗೆ ಕಲ್ಲು ಎಸೆಯುತ್ತ ಕುಣಿದು,ನಲಿದು ಕುಪ್ಪಳಿಸುತ್ತಿದ್ದರು. ಮುದುಕರು ಪರಸ್ಪರರ ಮನೆಗಳಲ್ಲೋ ಅಥವಾ ದೇವಸ್ಥಾನಗಳ ಹತ್ತಿರದ ಕಟ್ಟೆಗಳಮೇಲೋ ಕುಳಿತು ತಮ್ಮ ಬಾಲ್ಯವನ್ನು ನೆನೆಸಿ ನಗುತ್ತಿದ್ದರು. ಹೆಂಗಳೆಯರು ಜಾತ್ರೆ,ನೆಂಟರಮನೆ ಇತ್ಯಾದಿ ತಿರುಗುತ್ತ ತಮಗೆ ಅಪರೂಪವೆನಿಸುವ ಬಳಕೆಯ ವಸ್ತುಗಳನ್ನು ಖರೀದಿಸುತ್ತಿದ್ದರು. ಇಂದಿಗೆ ಅದು ಕೇವಲ ಕಥೆ ಅಂದರೆ ತಪ್ಪಾಗಲಾರದಲ್ಲ? ಅಲ್ಲಿ ಬಡವ-ಶ್ರೀಮಂತ ಎಂಬ ಭೇದ ಬಹಳವಾಗಿ ಇರಲಿಲ್ಲ. ಯರೋ ಒಂದಿಬ್ಬರು ಮುಖಂಡರನ್ನು ಬಿಟ್ಟರೆ ಮಿಕ್ಕವರೆಲ್ಲ ಒಂದೇ ಸ್ತರದಲ್ಲಿ ಇರುತ್ತಿದ್ದರು. ಬದುಕು ಯಾಂತ್ರಿಕವಾಗಿರಲಿಲ್ಲ;ನಿಸ್ತೇಜವಾಗಿರಲಿಲ್ಲ. ಅಲ್ಲಿ ಕೊಳ್ಳುಬಾಕ ಸಂಕೃತಿಯಿರಲಿಲ್ಲ. ನಾಮುಂದು ತಾಮುಂದು ಎಂಬ ಪೈಪೋಟಿ, ನಾಮೇಲೆ ತಾಮೇಲೆ ಎಂಬ ಅಹಂ ಯಾವುದೂ ಇರಲಿಲ್ಲ. ನಿತ್ಯ ಬೆಳಗಾದರೆ ಕಾಣುವ ಹಿತ್ತಗಿಡಗಳೇ ಮದ್ದಾಗಿ ಇರುವ ಅಲ್ಪರೋಗಗಳನ್ನು ವಾಸಿಮಾಡುತ್ತಿದ್ದವು! ಜನಸಾಮಾನ್ಯರಿಗೆಲ್ಲ ಮಧುಮೇಹ,ಹೃದ್ರೋಗ ಇತ್ಯಾದಿ ಶ್ರೀಮಂತರ ಕಾಯಿಲೆಗಳು ಬರುತ್ತಿರಲಿಲ್ಲ. ಇಂದಿಗೆ ಅದೊಂದು ಮುಗಿದುಹೋದ ಅಪ್ಪಟ ಗ್ರಾಮೀಣ ಸೊಗಡಿನ ಅಧ್ಯಾಯ! ಆ ಅಧ್ಯಾಯದ ನೆನೆಕೆಯಲ್ಲಿ ಹುಟ್ಟಿದ ಕೂಸುಮರಿ ಈ ಹಾಡು --


ಗ್ರಾಮಾನಂದ ಲಹರೀ

ಬಲು ಸೊಗಸು ಆ ಹಲಸು ಹಸಿರು-ಕೆಂಪಿನ ಮಾವು
ಒಲವನಿಕ್ಕುವ ಜನರ ನಡುವೆ ಕೂಗುವ ಗೋವು
ಬಲವನರಿಯಲು ಕ್ರೀಡೆ ಗಂಭೀರ ತುಸು ನೋವು
ಮುಲುಗುತಿದೆ ಮನ ನೆನೆದು ಗ್ರಾಮೀಣದೊಳಹರಿವು

ಬೀಸುತಿಹ ತಂಗಾಳಿ ತಂಪಡರಿ ಮೈಮನದಿ
ರಾಶಿ ವ್ಯಸನಂಗಳನು ಬೆದಕಿ ತೆಗೆದೂ
ನಾಸಿಕಕೆ ಹಬ್ಬಿ ಮುದವಾವರಿಸಿ ಪರಿಮಳದಿ
ಈ ಸೊಬಗ ಬಣ್ಣಿಸಲು ಮುಸುಕು ಕವಿದೂ

ಅತ್ತಿತ್ತ ಸುಳಿಯುತಿಹ ಜನರ ಗುಂಪುಗಳೆಲ್ಲ
ಇತ್ತತ್ತ ಬಂದು ಭೂರಮೆಯೊಸಗೆ ಪಡೆದೂ
ಕತ್ತೆತ್ತಿ ಎಲ್ಲಿ ನೋಡಿದರಲ್ಲಿ ಫಲಪುಷ್ಪ
ಹತ್ತುತ್ತ ಮರಗಿಡಗಳಾ ಜಾಡು ಹಿಡಿದೂ

ಶಾಲೆಮಕ್ಕಳು ರಜದಿ ಆಟವಾಡುತಲಲ್ಲಿ
ಕಾಲವರಿಯದೇ ದಿನಗಳವು ಭರದಿ ಕಳೆದೂ
ಕೋಲು ಬಡಿಗೆಯ ಹಿಡಿದು ಹಾರಿ ಕಲ್ಲನು ತೂರಿ
ಬೇಲ ಹಲಸೂ ಮಾವು ಕೆಡಗುತಲಿ ಕುಣಿದೂ

ಮುಪ್ಪಿನಾ ಜನರೆಲ್ಲ ಕಲೆಯುತ್ತ ಬಯಲಲ್ಲಿ
ನೆಪ್ಪು ಕರೆಯುತ ಮನದಿ ಅವರ ಹರೆಯ
ಒಪ್ಪಿನಲಿ ನಕ್ಕರದೋ ತುಂಟಾಟ ಹಂಬಲಿಸಿ
ತಪ್ಪಿಹೋಯಿತು ಇನ್ನು ಬಹದೇ ಪ್ರಾಯ ?

ಸಡಗರದ ನಾರಿಯರು ಹಡಗಿನೋಪಾದಿಯಲಿ
ಹುಡುಗುಮಕ್ಕಳ ನಡೆಸಿ ಜಾತ್ರೆಯಲಿ ನಡೆದೂ
ನಡುರಾತ್ರಿ ಜಾವದಾವರೆಗಿರ್ಪ ಜಾತ್ರೆಯಲಿ
ಕಡೆದು ಕೊರಸುತ ದರಕೆ ವಸ್ತುಗಳ ಪಡೆದೂ