ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, July 19, 2010

ಕಾಮನ್ ಸೆನ್ಸ್ -ದಿ ಸೆನ್ಸ್ ವ್ಹಿಚ್ ಈಸ್ ನಾಟ್ ಸೋ ಕಾಮನ್ ಆಂಡ್ ಏಜಿಂಗ್

ಚಿತ್ರ ಕೃಪೆ -ಅಂತರ್ಜಾಲ

ಕಾಮನ್ ಸೆನ್ಸ್ -ದಿ ಸೆನ್ಸ್ ವ್ಹಿಚ್ ಈಸ್ ನಾಟ್ ಸೋ
ಕಾಮನ್


ಆಂಡ್

ಏಜಿಂಗ್

ಇದರ ಬಗ್ಗೆ ನಮ್ಮ ಹೊಸ ಪೀಳಿಗೆಯವರು ಲಕ್ಷ್ಯವಿಟ್ಟರೆ ಅವರ ಅರ್ಧ ಕರ್ತವ್ಯ ನೆರವೇರಿದ ಹಾಗೇ ಎಂದರೆ ತಪ್ಪಲ್ಲ ಅಲ್ಲವೇ ? ಯಾಕೆಂದರೆ ಯಾವುದು ಜೀವನದಲ್ಲಿ ಅತೀ ಮುಖ್ಯವೋ ಅದನ್ನೇ ಅರಿತಿರದ ಹೊಸ ಪೀಳಿಗೆ ತಯಾರಾಗುತ್ತಿದೆ! ಎಪ್ಟಿಟ್ಯೂಡ್ ಟೆಸ್ಟ್ ಇದೆ ಅಂತ ಆಗಾಗ ಪುಸ್ತಕದ ಬದನೇಕಾಯಿ ಬಳಸುವ ಯುವ ಪೀಳಿಗೆಗೆ ನಿಜ ಅರ್ಥದಲ್ಲಿ ಅದು ಟೆಸ್ಟ್ ಬರೆಯಲು ಬೇಕಾಗಿ ಓದಿಕೊಳ್ಳುವ ಸಾಮಗ್ರಿಯಾಗಿದೆಯೇ ಹೊರತು ಜೀವನಕ್ರಮದಲ್ಲಿ ಅದರ ಅಳವಡಿಕೆ ಇಲ್ಲ. ನಾವೆಲ್ಲಾ ಆಗಾಗ ಅನ್ನುತ್ತಿರುತ್ತೇವೆ-ಜನರೇಶನ್ ಗ್ಯಾಪ್ ಜನರೇಶನ್ ಗ್ಯಾಪ್ ಅಂತ. ಆದರೆ ಕೆಲವು ಜನರಿಗೆ ತಲೆಮಾರುಗಳ ಮಧ್ಯೆ ಯಾವುದೇ ಬದಲಾವಣೆಯ ಅನಿಸಿಕೆ ಇರದ ಬಳಕೆ ಸಾಧ್ಯ. ಕೆಲವರು ಮುದುಕರಾದರೂ ಎಳಬರ ಜೊತೆ ಸ್ನೇಹಿತರ ರೀತಿ ಹೊಂದಿಕೊಳ್ಳುತ್ತಾರೆ. ಕೆಲವರು ಚಿಕ್ಕವರಿದ್ದರೂ ಅವರಿಗೆ ತಾವು ವಯಸ್ಸಾಗಿ ಅನುಭವ ಪಕ್ವವಾದವರಂತೇ ಕಾಣಿಸಿಕೊಳ್ಳಬೇಕೆಂಬ ಅಪೇಕ್ಷೆ. ಅದಿರಲಿ ನಾವೀಗ ಸದ್ಯಕ್ಕೆ ಮರಳಿ ವಿಷಯಕ್ಕೆ ಬರೋಣ-

ಕಾಮನ್ ಸೆನ್ಸ್ ಅಂದರೇನು? ಬದುಕಿನಲ್ಲಿ ನಾಗರಿಕನೋರ್ವ ತನ್ನ ಇರವಿನಿಂದ ಇನ್ನೊಬ್ಬರಿಗೆ ಅನಾನುಕೂಲವೋ ಅಪಚಾರವೋ ಆಗದಂತೆ ನೋಡಿಕೊಳ್ಳುವುದರ ಜೊತೆಗೆ ತಾನು ಮಾಡಬೇಕಾದ ಕೆಲವು ಸಮಾಜಮುಖಿ ಕೆಲಸಗಳನ್ನು ಸಾಮಾನ್ಯ ತಿಳುವಳಿಕೆ ಅಥವಾ ಕಾಮನ್ ಸೆನ್ಸ್ ಎನ್ನುತ್ತಾರೆಯಷ್ಟೇ? ಸೆನ್ಸ್ ಅನ್ನುವ ಶಬ್ಧಕ್ಕೆ ಸ್ಪಂದಿಸು ಎನ್ನುವ ಅರ್ಥವೂ ಸಿಗುತ್ತದೆ. ಸ್ಪಂದನೆಯೇ ಇಲ್ಲದ ಹಲವು ವ್ಯಕ್ತಿಗಳು ಸಿಗುತ್ತಾರೆ, ಅದಲ್ಲದೇ ಇತ್ತೀಚೆಗೆ ನಮ್ಮ ಕನ್ನಡದ ಭಾಷಾಶೈಲಿಯಲ್ಲಿ ’ಜಾಣ ಕುರುಡು’, ’ಜಾಣ ಕಿವುಡು’ ಇತ್ಯಾದಿ ಶಬ್ಢಗಳು ಸೇರಿಕೊಂಡಿವೆ. ಕಂಡೂ ಕಾಣದಂತಿರುವುದಕ್ಕೆ ಜಾಣ ಕುರುಡು ಎಂದರೆ ಕೇಳಿಸಿದರೂ ಕೆಳಿಸದಿರುವುದಕ್ಕೆ ಜಾಣ ಕಿವುಡು ಎನ್ನುತ್ತಾರೆ. ಹಿಂದೆಲ್ಲ ಜೀವನದಲ್ಲಿ ಜಾಣ ಕುರುಡು ಮತ್ತು ಜಾಣ ಕಿವುಡು ಸ್ವಭಾವ ಜಾರಿಯಲ್ಲಿರಲಿಲ್ಲ. ಅಲ್ಲಿ ಏನಿದ್ದರೂ ಆಡಿದ ಮಾತೆಲ್ಲ ಸತ್ಯವೇ ಆಗಿರುತ್ತಿತ್ತು.ಇದೆಲ್ಲ ಇಂದಿನ ನಮ್ಮ ಅಗತ್ಯಕ್ಕೆ, ಅನುಕೂಲಕ್ಕೆ ತಕ್ಕಂತೆ ನಾವು ಸೃಜಿಸಿಕೊಂಡ ಶಬ್ಧಗಳು.

ರಸ್ತೆಯಲ್ಲಿ ನಡೆದು ಹೋಗುತ್ತಿರುತ್ತೇವೆ ಎಂದಿಟ್ಟುಕೊಳ್ಳೋಣ, ನಮ್ಮ ಬೆಂಗಳೂರಿನಂತಹ ಶಹರದಲ್ಲಿ ರಸ್ತೆಯಲ್ಲಿ ನಡೆಯ ಹೊರಟರೆ ಬಟ್ಟೆ ಬದಲಾಯಿಸಿ ಸ್ನಾನಮಾಡಬೇಕಾದುದು ನಮ್ಮಂಥವರಿಗೆ ಅನಿವಾರ್ಯ, ಕಾರಣ ಇಷ್ಟೇ -ಸಿಂಗಾಪೂರ್ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕರೆದ ಬೆಂಗಳೂರಲ್ಲಿ ನಡೆದಾಡುವ ಬಹುತೇಕ ಯುವ ಪೀಳಿಗೆ ಕಂಡ ಕಂಡಲ್ಲಿ ಪಿಚಕ್ ಪಿಚಕ್ ಎಂದು ಉಗುಳಿಕೊಂಡೇ ಓಡಾಡುತ್ತಾರೆ. ತಿಳಿಯ ಹೇಳಿದರೆ ದುರುಗುಟ್ಟಿ ನೋಡಿ ಹೊಡೆಯೋಕೆ ಬರುವ ಸಂಪ್ರದಾಯ ಅವರದ್ದು! "ಇದೇನ್ ನಿಮ್ಮಪ್ಪನ್ ಮನೆ ಜಾಗಾನಾ?" ಎನ್ನುವ ಮಾತಿನಿಂದ ಜಗಳಕ್ಕೆ ಆರಂಭ. ಇದೇ ರೀತಿ ರಸ್ತೆಯಲ್ಲಿ ಅಥವಾ ಕಂಡಲ್ಲಿ ಬೀಡಿ-ಸಿಗರೇಟು ಸೇದುವುದು, ಸೇದಿದ ನಂತರ ಅದರ ಕೊನೆಯ ಆ ಮೋಟನ್ನು ಬೆಂಕಿ ಸಹಿತ ಅಲ್ಲಲ್ಲೇ ಬಿಸಾಡುವುದು,ಕಂಡ ಕಂಡ ಗೋಡೆಯ ಮೇಲೆ, ವಿದ್ಯುತ್ ಕಂಬಗಳಮೇಲೆ, ರಸ್ತೆಗಳ ನಾಮಫಲಕಗಳ ಮೇಲೆ ಬೇಕಾಬಿಟ್ಟಿ ಭಿತ್ತಿಪತ್ರಗಳನ್ನು ಅಂಟಿಸುವುದು, ಬಾಳೇಹಣ್ಣಿನ ಸಿಪ್ಪೆಯನ್ನು ಗೊತ್ತಿದ್ದೂ ರಸ್ತೆಗೆ ಹಾಕಿ ಯಾಓ ಜಾರಿದಾಗ ಮಜಾತೆಗೆದುಕೊಳ್ಳುವುದು, ಹಲ್ಲಲ್ಲಿ ಕತ್ತರಿಸಿ ಬಾಯಿಗೆ ಗುಟ್ಕಾ ಸುರುವಿಕೊಂಡು ಕಾಲಿ ಗುಟ್ಕಾ ಪ್ಯಾಕೆಟ್ ಅನ್ನು ರಸ್ತೆಗೆ ಎಸೆಯುವುದು, ಕಾಲಿಯಾಗಿರುವ ನೀರಿನ/ಕೋಲಾ ಬಾಟಲಿಗಳನ್ನು ಸುಮ್ಮನೇ ಕೈಯ್ಯಲ್ಲಿ ಯಾಕೆ ಅಂತ ಅಲ್ಲಲ್ಲೇ ಬಿಸಾಡುವುದು, ಎಲ್ಲೆಂದರಲ್ಲಿ ನಾಯಿಗಳ ರೀತಿ ಮೂತ್ರ ವಿಸರ್ಜಿಸುವುದು ಇವೆಲ್ಲಾ ಕಣ್ಣಿಗೆ ದಿನವೂ ಢಾಳಾಗಿ ಎದ್ದು ಕಾಣುವ ನಮ್ಮ ಸಿಂಗಾಪೂರಿನ ಲಕ್ಷಣಗಳು!

ಗೋಡೆಯಮೇಲೆ ಗೀಚುವುದು, ಬಸ್ಸಿನ ಕಿಟಕಿಯಿಂದ ತಿಂದುಳಿದ ಹಣ್ಣಿನ ಕೊಳೆತ ಭಾಗ, ಸಿಪ್ಪೆ ಮುಂತಾದುವುಗಳನ್ನು ಎಸೆಯುವುದು, ವಾಹನಗಳ ಕಿಟಕಿಯಿಂದ ಪಿಚಕ್ಕನೆ ಉಗುಳುವುದು-ಕೈ ತೊಳೆಯುವುದು, ವಾಹನ ಚಲಿಸುತ್ತಿರುವಾಗ ತಲೆ ಮತ್ತು ಕೈಗಳನ್ನು ಆಗಾಗ ಕಿಟಕಿಯಿಂದ ಹೊರಚಾಚುವುದು, ಶಹರದ ನಡುವಿನರಸ್ತೆಗಳಲ್ಲಿ ಹಸುಗಳು/ಎಮ್ಮೆಗಳು ಓಡಾಡಿದರೆ ತೊಂದರೆ ಅಂತ ತಿಳಿದೂ ಅವುಗಳನ್ನು ಹಾಗೆ ಮಧ್ಯೆ ಕಳಿಸುವುದು, ನಾಯಿಯನ್ನು ರಸ್ತೆಯ ಕಂಡ ಕಂಡ ಭಾಗಗಳಲ್ಲಿ ನಿಲ್ಲಿಸಿ [ಹೆಚ್ಚಾಗಿ ಪಕ್ಕದ ಮನೆಯ ಮುಂದೆ]ಮಲ-ಮೂತ್ರ ವಿಸರ್ಜಿಸುವುದು,ಪಬ್ಲಿಕ್ ಟಾಂಕಿಯ ನೀರಿನ ಕೊಳಾಯಿಯನ್ನು ತಿರುಗಿಸಿ ತಮ್ಮ ಕೆಲ್ಸವಾದ ಮೇಲೆ ಅದನ್ನು ಸ್ವಸ್ಥಾನಕ್ಕೆ ತಿರುಗಿಸಿ ನೀರು ನಿಲ್ಲಿಸದೇ ಹಾಗೇ ತೆರಳುವುದು, ಉದ್ಯಾನದಲ್ಲಿ ಹುಲ್ಲು ಹಾಸಿನ ಮೇಲೆ ಅಡ್ಡಡ್ಡ ಮಲಗುವುದು, ಹೂವು ಕೀಳುವುದು, ಬೇಡದ ತ್ಯಾಜ್ಯಗಳನ್ನು ಉದ್ಯಾನದಲ್ಲೇ ಕಂಡಲ್ಲಿ ಬಿಸಾಡುವುದು ಇವೆಲ್ಲಾ ಅವಿರತವಾಗಿ ನಡೆಸಿಬಂದ ನಮ್ಮ ಉದ್ಯಾನ ನಗರಿಯ ಯುವ ಪೀಳಿಗೆಯ ಸರ್ವೇಸಾಮಾನ್ಯ ಸ್ವಭಾವಗಳು-ಇವು ಅವರ ಲೆಕ್ಕದಲ್ಲಿ ತಪ್ಪಲ್ಲ ಎಂದು ಪರಿಗಣಿತವಾದ ಅಂಶಗಳು.

ಯಾವುದೋ ಸಂಪಿನಿನಲ್ಲಿ/ಹರತಾಳದಲ್ಲಿ/ಬಂದಿನಲ್ಲಿ ಸರಕಾರೀ ಬಸ್ಸುಗಳಿಗೆ ಬೆಂಕಿ ಹಚ್ಚುವುದು, ಜನರಿಗೆ ಕಲ್ಲಲ್ಲಿ ಹೊಡೆಯುವುದು, ಚಪ್ಪಲಿ ತೂರುವುದು, ವಿದೇಶೀ ಕೆಟ್ಟ ಪ್ರಜೆಯೊಬ್ಬ ಮಾಡಿದ್ದನ್ನು ಮಾಧ್ಯಮಗಳಲ್ಲಿ ತಿಳಿದು ಆ ಅಂಧಾನುಕರಣೆಯನ್ನೇ ಮಾಡಿ ಗಣ್ಯವ್ಯಕ್ತಿಗಳಿಗೆ ಹಾಗೂ ನ್ಯಾಯಾಲಯಗಳಲ್ಲಿ ಚಪ್ಪಲಿ ತೂರುವುದು, ಯವುದೋ ಕಾರ್ಖಾನೆಯ/ಮನೆಯ ಗಾಜಿನ ಕಿಟಕಿಗಳನ್ನು ಒಡೆಯುವುದು, ರೈಲು-ಬಸ್ಸು ತಡೆಯುವುದು ಇವೆಲ್ಲಾ ಉಗ್ರರೂಪೀ ವಿವೇಕಹೀನರ ಕೆಲಸಗಳು. ಖೋಟಾ ನೋಟು ಚಲಾವಣೆ,ಕೊಡಬಾರದ ಮುಖ್ಯಮಾಹಿತಿಗಳನ್ನು ವಿದೇಶೀಯರಿಗೆ ಕೊಡುವ ಬೇಹುಗಾರಿಕೆ, ಹಣದ ಆಸೆಗೆ ಯಾರಿಗೋ ಸಹಾಯಮಾಡಲು ಹೋಗಿ ಕೊಲೆ-ಸುಲಿಗೆ-ದರೋಡೆ ಮಾಡುವುದು, ಸಾರ್ವಜನಿಕ ಆಸ್ತಿಗಳಾದ ಮಂದಿರ,ಮಸೀದಿ,ಇಗರ್ಜಿ, ಬಸದಿ ಇವುಗಳನ್ನೆಲ್ಲ ದ್ವಂಸಮಾಡುವುದು, ದೇಶದ ಬಾವುಟಕ್ಕೆ ಅಪಚಾರವೆಸಗುವುದು, ತಮ್ಮ ಕಂಪನಿಗಳಲ್ಲಿ ವಿದೇಶೀಯರು ಅವರವರ ರಾಷ್ಟ್ರಗೀತೆಗಳನ್ನು ಹಾಡಿಕೊಂಡು ನಮ್ಮ ರಾಷ್ಟ್ರ ಗೀತೆಗೆ ಅವಹೇಳನ ಮಾಡುವಾಗ ಮುಚ್ಚಿಹಾಕುವುದು, ಕನ್ನಡ ಸಂಘಟನೆಗಳ ಹೆಸರಲ್ಲಿ ರೌಡಿಸಂ ಮಾಡುವುದು, ಇನ್ನೊಬ್ಬರ ಆಸ್ತಿಯನ್ನು ಬಲವಂತವಾಗಿ ತನ್ನದಾಗಿಸಿಕೊಳ್ಳುವುದು, ಹುಡುಗಿಯನ್ನು ನಂಬಿಸಿ ಕೈಕೊಡುವುದು, ಹಲವು ಹುಡಿಗಿಯರನ್ನು ಹಾಳುಮಾಡುವ ಚಟವನ್ನು ಬೆಳೆಸಿಕೊಂಡು ಮಜಾ ಪಡೆಯುವುದು-ಇವೆಲ್ಲಾ ಗುನ್ನೆಗಳು-ಅಪರಾಧಗಳು ಎನಿಸಿಕೊಳ್ಳುವ ಮಾಡಬಾರದ ಕೆಲಸಗಳು, ಆದರೆ ನಡೆದೇ ಇರುವ ಸಾಮಾನ್ಯ ಜ್ಞಾನರಹಿತ ಘಟನೆಗಳು.

ಪಠ್ಯಗಳಲ್ಲಿ ಪರರಿಗೆ ಸಹಾಯಮಾಡಬೇಕು, ಬಡವರಿಗೆ ಆದಷ್ಟು ದಾನ ಮಾಡಬೇಕು, ಆರ್ತರನ್ನು ರಕ್ಷಿಸಬೇಕು, ಕೈಲಾಗದವರನ್ನು ಕಣ್ಣೆತ್ತಿ ನೋಡಿ ಅವರಿಗೊಂದು ದಾರಿ ಕಲ್ಪಿಸಬೇಕು--ಹೀಗಿದ್ದೆಲ್ಲಾ ನಾವು ಓದಿರುತ್ತೇವೆ, ಆದರೆ ಯಾವುದೋ ಒಬ್ಬ ಕುರುಡ ಕೋಲು ಹಿಡಿದು ದೊಡ್ಡ ರಸ್ತೆಯನ್ನು ದಾಟುತ್ತಿರುವಾಗ ಇನ್ನೇನು ರಸ್ತೆಯ ಮಧ್ಯದ ವಿಭಾಜಕಕ್ಕೆ ತಾಗಿ ಬೀಳುತ್ತಾನೆ ಅಥವಾ ವಾಹನಕ್ಕೆ ಅಡ್ಡ ಸಿಕ್ಕಿಹಾಕಿಕೊಳ್ಳುತ್ತಾನೆ ಎಂದು ಕಾಣುತ್ತಿದ್ದರೂ ಕಂಡರೂ ಕಾಣಿಸದ ಹಾಗೇ ಸುಮ್ಮನೇ ಹೋಗಿಬಿಡುವುದು, ಯಾರೋ ಮುದುಕಿ/ಮುದುಕ ಸಹಾಯಮಾಡಿ ಎಂದು ಗೋಗರೆಯುತ್ತಿದ್ದರೆ ಅವರನ್ನು ಲೆಕ್ಕಿಸದಿರುವುದು, ಬಸ್ಸಿನಲ್ಲಿ ಮಹಿಳೆಯರ ಮೀಸಲು ಜಾಗದಲ್ಲಿ ಕುಳಿತುಕೊಳುವುದು, ಬಸ್ಸಿನಲ್ಲಿ ನಿಲ್ಲಲಾರದ ಮುದುಕರು ಪಕ್ಕಕ್ಕೆ ಬಂದು ನಿಂತಾಗ ಕುಳಿತಲ್ಲೇ ಕಂಡೂ ಕಾಣದಂತಿರುವುದು, ಬಸ್ಸಿನಲ್ಲಿ ನೂಕು ನುಗ್ಗಲಿನಲ್ಲಿ ಹುಡುಗಿಯ ಕೈಮೈ ತಾಗುವಂತೆ ನಿಂತುಕೊಂಡು ಮಜಾತೆಗೆದುಕೊಳ್ಳುವುದು,ಏಕಮುಖ ಸಂಚಾರದ ರಸ್ತೆಯಲ್ಲಿ ಅದು ನಮಗಲ್ಲ ಎಂದು ಪೋಲೀಸರಿರದಿದ್ದಾಗ ಹಾಗೇ ಗಾಡಿ ಓಡಿಸಿಕೊಂಡು ಹೋಗುವುದು, ರಸ್ತೆ ಅಪಘಾತದಲ್ಲಿ ಯಾರೋ ಬಿದ್ದಿದ್ದರೆ ನೋಡದೇ ರುಯ್ಯನೆ ಮುಂದೆ ಹೋಗಿಬಿಡುವುದು, ಪಕ್ಕದ ಮನೆಗೆ ಕಳ್ಳರು ಬಂದ ಸುದ್ದಿ ಕೇಳಿ ತಮ್ಮನೆಯ ಬಾಗಿಲುಗಳನ್ನು ತೆಗೆದು ಅಲ್ಲಿಗೆ ಸಹಾಯಕ್ಕೆ ಧಾವಿಸದೇ ಬಾಗಿಲು ಮುಚ್ಚಿ ಭದ್ರಪಡಿಸ್ಕೊಳ್ಳುವುದು, ಯಾವುದೋ ವ್ಯಕ್ತಿ ಕೂಗಿಕೊಂಡರೆ ಅದು ನಮಗ್ಯಾಕೆ ಬಿಡಿ ಎಂದುಕೊಂಡು ಅಸಡ್ಡೆ ಮಾಡುವುದು--ಇವೆಲ್ಲಾ ಕುರುಡು,ಕಿವುಡು ಜಾಣತನವೆಂಬ ಸಾಮಾನ್ಯಜ್ಞಾನ ರಹಿತ ಘಟನೆಗಳು.

ಪಟ್ಟಿ ಮಾಡಿದರೆ ಆಂಜನೇಯನ ಬಾಲದಂತೆ ಬೆಳೆಯುವ ಇಂತಹ ಘಟನೆಗಳು ನಮ್ಮೆಲ್ಲರ ಜೀವನದಲ್ಲಿ ಹಾಸುಹೊಕ್ಕಾಗಿವೆ. ಕೆಲವೊಮ್ಮೆ ನಾವೇ ಕೆಲವು ಸಣ್ಣ-ಪುಟ್ಟ ಲೋಪದೋಷಗಳಲ್ಲಿ ಭಾಗಿಯಾಗಿದ್ದರೆ ಅಚ್ಚರಿಪಡಬೇಕಿಲ್ಲ! "ನಾವೂ ಮನುಷ್ಯರು ತಾನೇ ? ಆಗುತ್ತಪ್ಪ ಅದಕ್ಕೇನೀಗ? " ಎಂದುಕೊಳ್ಳುವ ಬದಲು ಸ್ವಲ್ಪ ವಿವೇಚಿಸಿದರೆ ನಾವೆಲ್ಲಿ ಎಡವುತ್ತೇವೆ ಎಂಬುದನ್ನು ತಿಳಿದುಕೊಂಡು ಅಷ್ಟಷ್ಟಾಗಿ ಸರಿಪಡಿಸಿಕೊಳ್ಳಬಹುದಲ್ಲ !

ಇನ್ನು ಕೆಲವರಿಗೆ ತಾವು ಬಹಳ ವಯಸ್ಸಾದ ಅನುಭವೀ ಮುತ್ಸದ್ಧಿ ಎನಿಸಿಕೊಳ್ಳುವ ತವಕ. ಅವರು ಕುರುಚಲು ಗಡ್ಡ ಬೆಳೆಸಿಕೊಳ್ಳುವುದು, ಕಣ್ಣಿಗೆ ಗೋಲ್ಡನ್ ಕಲರ್ ಫ್ರೇಮ್ ಇರುವ ಕನ್ನಡಕ ಹಾಕಿಕೊಳುವುದು, ಕೂದಲನ್ನು ಆದಷ್ಟು ಹಣ್ಣಾಗಿದ್ದು ಕಾಣುವಂತೆ ಬಿಡುವುದು ಇವೆಲ್ಲಾ ಅವರ ಆಕರ್ಷಣೆಗಳು! " ನಾವೆಲ್ಲಾ ಆಗೆಲ್ಲಾ ಹೇಗಿದ್ದೆವು ಅಂದ್ರೆ " ಎಂದು ಶುರುವಿಟ್ಟುಕೊಳ್ಳುವ ಅವರ ಮಾತು ಕೆಂಪೇಗೌಡರ ಕಾಲದವರೆಗೋ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದ ವರೆಗೋ ಹೋಗಿನಿಲ್ಲುತ್ತವೆ. ವಯಸ್ಸಿನ್ನೂ ನಮಗಿಂತ ನಾಲ್ಕೈದು ವರ್ಷ ಜಾಸ್ತಿ ಇದ್ದರೂ ಎಲಾ ಇವನ ಯಾವರೀತಿ ಮಾತಾಡುತ್ತಾನಲ್ಲಾ ಎಂಬ ಪರಿಭಾಸವಾದರೂ ನಾವು ಹೇಳಿದರೆ ನಮಗೇ ಎದುರುಹಾಯುವ ಮೌಢ್ಯ ಅವರದಾಗಿರುತ್ತದೆ. ಈ ಹುಸಿ ವೃದ್ಧತನದಲ್ಲಿ ತಾನು ಮಾಡಬೇಕಾದ ಅನೇಕ ಕೆಲಸಗಳಿಗೆ ಡಿಸ್ಕೌಂಟು ಪಡೆಯುವ ಮನೋಭಿಲಾಷೆ ಅಡಗಿರುತ್ತದೆ ಎಂಬುದನ್ನು ಶೋಧಿಸಿ ತಿಳಿದುಕೊಂಡಿದ್ದೇನೆ. ಅಂಥವರಿಗೆ " ಸ್ವಾಈ ನೀವು ಇದೇ ರೀತಿ ಮಾಡಿದರೆ ಬೇಗ ಬೊಜ್ಜು ಬೆಳೆದು ನಿಜವಾಗಿಯೂ ಮುಪ್ಪು ಬಂದುಬಿಡುತ್ತದೆ " ಎಂದು ಹೇಳಬೇಕೆನಿಸುತ್ತದೆ. ಕೆಲವರು ತಮ್ಮ ಅನುಭವ ತುಂಬಾ ಆಳದ್ದು ಎನ್ನುವುದನ್ನು ಪ್ರಕಟಿಸಲೂ ಹೀಗೆ ಮುದುಕು ವೇಷ ಹಾಕುತ್ತಾರೆ ! ಕೆಲವರದ್ದು ಪ್ರಚಾರಪ್ರಿಯತೆ, ವಯಸ್ಸಾಗಿದ್ದರೂ ಶರೀರ ಮಾಗಿದ್ದರೂ ಏನಾದರೂ ಅಸಡ್ಡೆ ಹೇಳಿಕೆ ಕೊಟ್ಟು ಮಾಧ್ಯಮಗಳಲ್ಲಿ ಪ್ರಚಾರದಲ್ಲಿರುವುದೇ ಇವರ ಚಾಳಿ. ಬುದ್ಧಿಜೀವಿಗಳೆನಿಸಿಕೊಳ್ಳುವ ಇವರು ಜೀವಿತದ ಪೂರ್ತಿ ಆಗಾಗ ಆಗಾಗ ಸುದ್ದಿ ಮಾಡುತ್ತ ಬಂದವರೇ ಆಗಿರುತ್ತಾರೆ, ಈಗ ಮುದುಕಾಗಿ ಸುದ್ದಿ ಮಾಡಲು ಏನೂ ಇಲ್ಲದಾದಾಗ ಏನಾದರೂ ಅಸಂಬದ್ಧ ಹೇಳಿಕೆ ಕೊಟ್ಟುಬಿಟ್ಟರೆ ಅದರಿಂದ ಪ್ರಚಾರ ಸಿಗುತ್ತದಲ್ಲ ಎಂಬ ಅನಿಸಿಕೆ ಅವರದ್ದು. ಅವರ ಹೇಳಿಕೆಗಳು ಸಮಾಜದಮೇಲೆ ಯಾವ ಪರಿಣಾಮ ಉಂಟುಮಾಡುತ್ತವೆ ಎಂಬ ಕನಿಷ್ಠ ತಿಳುವಳಿಕೆಯನ್ನೂ ವಿವೇಚಿಸದೇ ಹೇಳಿಕೆ ಕೊಟ್ಟು ಪ್ರಚಾರ ಪಡೆವ ಹುನ್ನಾರ.

ಇನ್ನು ಕೆಲವು ಜನರಿರುತ್ತಾರೆ. ಅವರಿಗೆ ಮುಪ್ಪೇ ಬರುವುದಿಲ್ಲ. ಅವರು ಬಳಸದ ಬಣ್ಣಗಳೇ ಇಲ್ಲ, ಬಳಸದ ಪರಿಮಳ ದ್ರವ್ಯಗಳಾಗಲೀ, ಲೋಶನ್-ಶಾಂಪೂ, ಕ್ರೀಮು ಮುಂತಾದವುಗಳಾಗಲೀ ಇಲ್ಲವೇ ಇಲ್ಲ. ಚಿರಯೌವ್ವನಿಗರು ಎಂದು ಕರೆಸಿಕೊಳ್ಳಬೇಕೆಂಬುದು ಅವರ ಆಸೆ. ಕೆಲವರಲ್ಲಿ ಎಲ್ಲೋ ಒಳಗೆ ಕಾಮವಾಸನೆ ಕೂಡ ಇದ್ದಿರುತ್ತದೆ! ಯಾರನ್ನೋ ಪ್ರಲೋಭನೆಗೆ ಒಳಪಡಿಸಲು ಅವರು ಬಹಳ ಪ್ರಯತ್ನದಲ್ಲಿರುತ್ತಾರೆ! ಯಾವುದು ವಯಸ್ಸಾದವರಿಗೆ ಸಿಂಧುವಲ್ಲವೋ ಅದನ್ನು ಮಾಡಹೊರಟರೆ ಎಷ್ಟು ಚೆನ್ನ ಹೇಳಿ?

ಸಾಮಾನ್ಯ ಜ್ಞಾನದಲ್ಲಿ ಗಣಿತ, ವಿಜ್ಞಾನ,ಸಮಾಜ ವಿಜ್ಞಾನ, ರಾಜಕೀಯ, ಭಾಷೆ, ಸಂಗೀತ,ಸಾಹಿತ್ಯ, ಕಲೆ ಮುಂತಾದ ಎಲ್ಲರಂಗಗಳಲ್ಲೂ ಸ್ವಲ್ಪ ಸ್ವಲ್ಪ ಜ್ಞಾನ ಬೇಕೇ ಬೇಕು. ಒಂದು ಘಟನೆ ಕೇಳಿ- ವಿಧಾನ ಸೌಧದಿಂದ ಬಹುಮಹಡಿ ಕಟ್ಟಡ[ಅಂದಿನ ದಿನಗಳಲ್ಲಿ]ಕ್ಕೆ ಇರುವುದು ೦.೪ ಕಿಲೋಮೀಟರಿಗಿಂತ ಕಡಿಮೆ ಅಂತರ. ಆದರೆ ಇದನ್ನೇ ಪುಸ್ತಕಗಳಲ್ಲಿ ಲೆಕ್ಕತೋರಿಸುವಾಗ ರಸ್ತೆಕಾಮಗಾರಿಯ ಕಂತ್ರಾಟುದಾರನೊಬ್ಬ ೭೫ ಕಿಲೋಮೀಟರ್ ಎಂದು ನಮೂದಿಸಿ ಹಣಪಡೆದುಕೊಂಡಿದ್ದು ಹಳೆಯ ಜೋಕು! ನಮಗೆ ಗಣಿತ ಗೊತ್ತಿಲ್ಲದಿದ್ದರೆ ಅಳತೆ ಮಾಡುವುದು ಹೇಗೆ? ನಮ್ಮ ಬದುಕಿಗೆ ಯಾವುದನ್ನೇ ಕೊಡು-ಕೊಳ್ಳುವಾಗ ತೂಕ-ಅಳತೆಗಾದರೂ ನಮಗೆ ಗಣಿತ ಬೇಡವೇ? ಲೆಕ್ಕ ಬರದಿದ್ದರೆ ದುಡ್ಡು ಎಣಿಸುವುದು ಹೇಗೆ? ಹೀಗೇ ಉದಾಹರಿಸುತ್ತಾ ನಡೆದರೆ ಅದು ಮುಗಿಯದ ಕಥೆ!

ಹೀಗೇ ಸಾಮಾನ್ಯ ಜ್ಞಾನ ಕೇವಲ ಕುಳಿತಲ್ಲೇ ಬರುವುದಲ್ಲ. ಅದನ್ನು ನಾವು ಬಲ್ಲವರಿಂದ- ಸಮಾಜದಿಂದ ಪಡೆದುಕೊಂಡು ಅನುಸರಿಸಬೇಕು. ಯಾವುದು ಪಥ್ಯವೋ ಯಾವುದು ಸಮಂಜಸವೋ ಅದನ್ನು ಅನುಸರಿಸಬೇಕು. ನಮ್ಮಿಂದ ಸಮಾಜಕ್ಕೆ, ಇತರ ಜನರಿಗೆ ತೊಂದರೆ ಆಗದ ರೀತಿಯಲ್ಲಿ, ನಮ್ಮಿಂದ ಬೇರೆಯವರಿಗೆ ಆಭಾಸ, ಅಪಚಾರ ಆಗದ ರೀತಿಯಲ್ಲಿ, ನಮ್ಮಿಂದ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಬಾರದ ರೀತಿಯಲ್ಲಿ ನಡೆದುಕೊಳ್ಳುವುದು, ಬದುಕಿನಲ್ಲಿ ಶಿಸ್ತು-ಸಂಯಮ,ನಿಯಮ,ನ್ಯಾಯ-ನೀತಿ ಇವುಗಳನ್ನು ಅಳವಡಿಸಿಕೊಳ್ಳುವುದು, ಎಲ್ಲವನ್ನೂ ತಿಳಿದಿದ್ದು ಪ್ರತೀ ಹೆಜ್ಜೆಯನ್ನೂ ತೂಗಿ-ಅಳೆದು ನಂತರವೇ ಮುಂದಿಡುವುದು ಸಾಮಾನ್ಯ ಜ್ಞಾನ. ಬೆಂಕಿ ಸುಡುತ್ತದೆ, ನೀರು ನೆನೆಸುತ್ತದೆ, ಗಾಳಿ ಬೀಸುತ್ತದೆ ಇವೆಲ್ಲಾ ನಮಗೆ ಗೊತ್ತಿರುವ ಸಾಮಾನ್ಯ ಜ್ಞಾನವಾದರೆ ವಿದ್ಯುತ್ತಿನಿಂದ ಶಾಕ್ ಹೊಡೆಯುತ್ತದೆ, ವಾಹನವನ್ನು ಅತಿವೇಗದಿಂದ ಓಡಿಸಿದರೆ ಅಪಘಾತವಾಗುತ್ತದೆ, ಕುಡಿತದಿಂದ ಹಲವರಿಗೆ ಅಪಚಾರವಾಗುತ್ತದೆ ಎಂಬುದೆಲ್ಲ ಹಿರಿಯರ, ಅನುಭವಿಕರ ಮೂಲಕ ಪಡೆದುಕೊಳ್ಳಬೇಕಾದ ಸಾಮಾನ್ಯ ಜ್ಞಾನ. ಪರೀಕ್ಷೆಗೆ ಹೋಗುವಾಗ ಲೆಕ್ಕಣಿಕೆ[ಪೆನ್ನು], ಪೆನ್ಸಿಲ್ ಇರಬೇಕು, ಕಛೇರಿಗಳ ಸಂದರ್ಶನಕ್ಕೆ ಹೋಗುವಾಗ ಜೀನ್ಸ್ ಪ್ಯಾಂಟು-ಟೀ ಶರ್ಟ್ ಹಾಕಬಾರದು, ವಕೀಲರು ಹಿಪ್ಪಿ ಕೂದಲನ್ನು ಬಿಟ್ಟು ಒಂದೇ ಕಿವಿಗೆ ಒಂಟಿ ಹಾಕಿ ಕೈಗೆ ಬಳೆ ಹಾಕಿಕೊಂಡು ಅಲೆಯಬಾರದು, ಹುಡುಗಿಯರು ಅತಿಯಾದ ಮಾಡ್ ಡ್ರೆಸ್ ಹಾಕಿಕೊಂಡು ಕಾಲೇಜಿಗೆ ಹೋಗಬಾರದು -ಎಂಬುದೆಲ್ಲ ಅನುಭವದಿಂದ ಹಿರಿಯರು ಹೇಳುವ ಜ್ಞಾನ. ತಂತಮ್ಮ ರಂಗಕ್ಕೆ ಸಂಬಂಧಿಸಿದಂತೇ ಹೇಗೆ ನಡೆದುಕೊಳ್ಳಬೇಕೆಂದು ಕಲಿಯುವುದು ಗಾಢಾಂಧಕಾರದಿಂದ ಸಿನಿಮಾ ಮಾಧ್ಯಮದವರನ್ನು ಅನುಸರಿಸದಿರುವುದು ಅನುಭವದಿಂದ ಬರಬೇಕಾದದ್ದು. ಇದು ಇಲ್ಲದವರಿಗೆ ಸಿದ್ಧಿಸಲಿ, ಯಾವುದು ಸಾಮಾನ್ಯಜ್ಞಾನವೆಂದು ಗಣಿಸಲ್ಪಟ್ಟು ಗಾಳಿಗೆ ತೂರಲ್ಪಡುತ್ತದೋ ಅದು ಸ್ವಸ್ಥಾನದಲ್ಲಿದ್ದು ಮೆರುಗನ್ನು ಪಡೆದು ಸ್ವಸ್ಥ ಸಮಾಜ ನಿರ್ಮಾಣವಾಗಲಿ ಎಂದು ಹಾರೈಸೋಣ.