ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, July 10, 2011

ಆದನೊಬ್ಬನು ಕೌಸಲೆಗೆ ಮಗನಾದನೊಬ್ಬನು ಕೈಕೆಗಿಬ್ಬರು...



ಆದನೊಬ್ಬನು ಕೌಸಲೆಗೆ ಮಗನಾದನೊಬ್ಬನು ಕೈಕೆಗಿಬ್ಬರು...

[ಭಾಗ-೧]
ಮಳೆಗಾಲವೆಂದರೆ ಕರಾವಳಿ ಜಿಲ್ಲೆಗಳಲ್ಲಿ ಸೂರ್ಯದರ್ಶನ ಅಪರೂಪ. ಧೋ ಗುಟ್ಟಿ ಸುರಿವ ಮುಸಲಧಾರೆ, ಕೆಲವೊಮ್ಮೆ ವಿಪರೀತ ಗಾಳಿ, ಅತಿಯಾದ ಗುಡುಗು-ಮಿಂಚು, ಸಿಡಿಲಿನ ಅಬ್ಬರ. ತಾವೇನೂ ಕಮ್ಮಿ ಇಲ್ಲಾ ಎನ್ನುವಂತೇ ಕೆರೆಗಳಲ್ಲಿ ಬಂಡೆಯ ಸಂದುಗಳಲ್ಲಿ ಅಡಗಿ ಕುಳಿತ ಬೃಹತ್ ಗಾತ್ರದ ಗೂಕರ ಕಪ್ಪೆಗಳ ಚಿತ್ರ ವಿಚಿತ್ರ ಕೂಗು, ಮರಿಕಪ್ಪೆಗಳ ಗೊಟ್ಗೊಟ್ ಗೊಟರ್ ಎಂಬ ಸದ್ದು, ದಿಬ್ಬಣಕ್ಕೆ ಅವಸರದಿಂದ ಓಡಿ ಸೇರುವಂತೇ ಕೊಂಬೆತ್ತಿ ಓಡುವ ಚಿಕ್ಕ ಚಿಕ್ಕ ಸಾವಿರಾರು ಏಡಿಮರಿಗಳು. ನಾಮುಂದು ತಾಮುಂದು ಎಂದು ಸಾಗುವ ಶತಪದಿ [ಹಣ್ಣಡಕೆ ಪಚ್ಹುಳು], ಸಹಸ್ರಪದಿ[ಚೋರಟೆ], ಪಡಚೆ ಹುಳು ಒಂದೆಡೆಗಾದರೆ ನಿಧಾನವೇ ಪ್ರಧಾನವೆನ್ನುವ ಹಿಸ್ಗ, ಮಣ್ಣಲ್ಲಿ ಉರುಳಾಡುವ ಎರೆಹುಳು ಹೀಗೇ ಈ ಪಟ್ಟಿ ಊದ್ದ ಬೆಳೆಯುತ್ತದೆ.

ಉಳಿದ ಕಾಲದಲ್ಲಿ ಎಂದೆಂದೂ ಕಾಣದಂತಹ ಜೀವಸಂಕುಲಗಳು ಜಾತ್ರೆ ಸೇರಿದಂತೇ ಒಮ್ಮೆಲೇ ಸಂತಾನೋತ್ಫತ್ತಿ ನಡೆಸುವ ಈ ಕಾಲದಲ್ಲಿ ಕಪ್ಪುಗಟ್ಟಿದ ಮೋಡಗಳ ಸಂದಿನಿಂದ ಅಪರೂಪಕ್ಕೊಮ್ಮೆ ಸೂರ್ಯ ಅಂಚೆಯವನ ರೀತಿ ಬಂದುಹೋಗುತ್ತಾನೆ. ಗದ್ದೆ-ತೋಟಗಳಲ್ಲಿ ಕೆಲಸ ಬಹಳವೇ ನಡೆಯುತ್ತಿದ್ದರೂ ಸುರಿವ ಮಳೆ ಕೆಲವೊಮ್ಮೆ ಏನನ್ನೂ ಮಾಡಗೊಡದೆ ರಜಾ ಸಾರಿಬಿಡುತ್ತದೆ! ಇಂತಹ ದಿನಗಳಲ್ಲಿ ಹಿಂದೆ ಉಪಜೀವಿತಕ್ಕೆ ಬೇಕಾದ ಸಾಮಾನುಗಳನ್ನು ಮಧ್ಯೆ ಮಧ್ಯೆ ತಾಲೂಕು ಪ್ರದೇಶಕ್ಕೆ ಹೋಗಿ ತರುವುದಾಗುತ್ತಿರಲಿಲ್ಲ. ಇಂದಿನಂತೇ ದೂರವಾಣಿ ಸೌಲಭ್ಯವಾಗಲೀ ವಾಹನ ಸೌಕರ್ಯವಾಗಲೀ ಇರದ ಆ ಕಾಲದಲ್ಲಿ ಮಳೆಗಾಲದ ೬ ತಿಂಗಳಿಗೆ [ನೆನಪಿಡಿ ಅಲ್ಲಿ ಮಳೆಗಾಲಕ್ಕೆ ತೆರೆ ಬೀಳುವುದು ನವೆಂಬರ್ ಅಥವಾ ಡಿಸೆಂಬರ್ ನಲ್ಲಿ] ಸಾಕಾಗುವಷ್ಟು ಕಿರಾಣಿ ಸಾಮಾನುಗಳನ್ನು ಮನೆಗಳಲ್ಲೇ ದಾಸ್ತಾನುಮಾಡಿಕೊಳ್ಳುತ್ತಿದ್ದರು. ಉಳ್ಳವರು ಹೀಗೆ ಮಾಡಿದರೆ ಇರದಿದ್ದವರು ಉಳ್ಳವರ ಮನೆಗಳಲ್ಲಿ ಕಡಾ ಪಡೆದೋ ಭಕ್ಷೀಸು ಪಡೆದೋ ಅಥವಾ ಸಹಕಾರ ಅಂತ ಪಡೆದೋ ಜೀವನ ನಡೆಸುತ್ತಿದ್ದರು.

ಆ ೬ ತಿಂಗಳ ಸಮಯದಲ್ಲಿ ಯಾವುದೇ ಮನೋರಂಜನೆ ಕಾರ್ಯಕ್ರಮ ಇರುತ್ತಿರಲಿಲ್ಲ. ಇಂದಿನಹಾಗೇ ಚಲನಚಿತ್ರ ಮಂದಿರಗಳಾಗಲೀ ರಂಗಮಂದಿರಗಳಾಗಲೀ ಇದ್ದಿರಲಿಲ್ಲವಾಗಿ ಮನೋರಂಜನೆಗೆ ಅಂದು ಬೇರಾವ ಮಾರ್ಗವೂ ಇರಲಿಲ್ಲ. ಹಗಲೆಲ್ಲಾ ದುಡಿಯುವ ಮನಸ್ಸಿಗೆ ಬೇಸರವಾಗುವುದು ಸಾಯಂಕಾಲದಲ್ಲಿ. ಸಂಜೆ ೬ ಗಂಟೆಗೆಲ್ಲಾ ಕತ್ತಲಾವರಿಸಿ ಬಿಟ್ಟರೆ ಮಾರನೇದಿನ ಬೆಳಿಗ್ಗೆ ೮ಗಂಟೆಗೇ ಸ್ವಲ್ಪ ಬೆಳಕು ಅಂತ ಕಾಣುವುದು! ಆ ರಾತ್ರಿಗಳಲ್ಲಿ ವಿದ್ಯುದ್ದೀಪಗಳಿರಲಿಲ್ಲ. ಹರಳೆಣ್ಣೆಯ ದೀಪಗಳು, ವಿಶೇಷವಿದ್ದರೆ ಅವುಗಳ ದೊಂದಿಗಳು-ದೀವಟಿಗೆಗಳು, ಹಿಲಾಲು-ಜುಂಜಿ, ಓಡಾಡಲು ಒಣಗಿದ ತೆಂಗಿನಗರಿಗಳನ್ನು ಕತ್ತರಿಸಿ ಮಡಿಸಿದ ಸೂಡಿ, ಅಡಕೆದಬ್ಬೆಗಳನ್ನು ಸಣ್ಣಗೆ ಸಿಗಿದು ಕಟ್ಟಿದ ಹಗರಸೂಡಿ ಇತ್ಯಾದಿಗಳೇ ಪರಿಕರಗಳಿದ್ದವು. ಕೆಲವೊಮ್ಮೆ ಒಬ್ಬರ ಮುಖ ಇನ್ನೊಬ್ಬರಿಗೆ ಸರಿಯಾಗಿ ಕಾಣದಂತಹ ಮಂದ ದೀಪಗಳಲ್ಲಿ ಕಾಲಹಾಕಬೇಕಾಗಿ ಬರುತ್ತಿತ್ತು. ಕತ್ತಲೆಯ ನೀರವವನ್ನು ಬಗೆಬಗೆದು ಕಿವಿಗೆ ಎಲ್ಲಿಹೋದರೂ ಅದೇ ಸದ್ದು ಎನ್ನುವಂತೇ ಒಂದೇ ನೇರಕ್ಕೆ ಕೂಗುವ ಜೀರುಂಡೆಗಳು ಮಾತ್ರ ತಮ್ಮತನವನ್ನು ಸಂಪೂರ್ಣ ಮೆರೆಯುತ್ತಿದ್ದವು. ಕಾಯಿಲೆಯೋ ಕಸಾಲೆಯೋ ಆದರಂತೂ ಆಗುವ ಬವಣೆ ಹೇಳತೀರ. ನಡೆಯಲಾರದೇ ನಿತ್ರಾಣನಾದ/ಳಾದ ರೋಗಿಯನ್ನು ಕಂಬಳಿಯೊಂದರಲ್ಲಿ ಮಲಗಿಸಿ ಅದನ್ನು ಒನಕೆಗೆ ಕಟ್ಟಿ ಒನಕೆಯ ಎರಡೂ ತುದಿಗಳಲ್ಲಿ ಒಬ್ಬೊಬ್ಬರೂ ಹೊತ್ತುಕೊಂಡು ವೈದ್ಯರಲ್ಲಿಗೆ ಹೋಗಬೇಕಾಗುತ್ತಿತ್ತು.

ಹಳ್ಳಿಗೊಬ್ಬ ವೈದ್ಯ ಎಂತೆಲ್ಲಾ ಇರಲಿಲ್ಲ. ಪರಂಪರಾಗತ ನಾಟಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಎಲ್ಲಾ ಕಾಯಿಲೆಗೂ ಒಬ್ಬರೇ ವೈದ್ಯರೆಂದೇನೂ ಇರಲಿಲ್ಲ. ಒಂದೊಂದು ಕಾಯಿಲೆಗೆ ಒಬ್ಬೊಬ್ಬ ವೈದ್ಯರ ಹೆಸರು ಕೇಳಿಬರುತ್ತಿತ್ತು. ಯಾವುದೇ ಮಾಧ್ಯಮ ಸರಿಯಾಗಿರದ ಕಾರಣ ಇದು ಕೇವಲ ಬಾಯಿಂದ ಬಾಯಿಗೆ ಹಬ್ಬುವ ಅನುಭವಿಗಳ ಸುದ್ದಿ ಮೂಲವನ್ನು ಅವಲಂಬಿಸಿತ್ತು. ಇರುವ ವೈದ್ಯರು ಬೇರಾವುದೋ ಕಾರ್ಯವಶಾತ್ ಬೇರೆಲ್ಲಿಗೋ ಹೋಗಿದ್ದರೆ ಅವರು ಬರುವ ದಿನದ ವರೆಗೂ ಕಾಯುವ ಅನಿವಾರ್ಯತೆಯೂ ಇರುತ್ತಿತ್ತು. ನಾಡಿ ಪರೀಕ್ಷೆಯಲ್ಲಿ ನಿಪುಣರಾಗಿರುತ್ತಿದ್ದ ವೈದ್ಯರುಗಳು ಸಾಕಷ್ಟು ಮೂಲಿಕೆಗಳನ್ನು ಕಂಡುಕೊಂಡಿದ್ದರು. ಕಾಡು ಮನೆಗಳ ಮಗ್ಗುಲವರೆಗೂ ಇರುತ್ತಿತ್ತಾಗಿ ಗಿಡಮೂಲಿಕೆಗಳಿಗೆ ಬರಗಾಲವಿರಲಿಲ್ಲ. ’ಇದ್ರೆ ಬೇರಿನ ಮದ್ದು ಸತ್ರೆ ಕುಂಟೆ ಮದ್ದು ’ ಎಂಬುದು ಅಲ್ಲಿನ ಒಂದು ಹಳೇ ಗಾದೆ! ಅದರರ್ಥ ಜೀವ ಇದ್ದರೆ ವೈದ್ಯರು ಕೊಡುವ ನಾರು-ಬೇರುಗಳ ಚಿಕಿತ್ಸೆ, ಜೀವ ಹೋದರೆ ಮರದ ಕುಂಟೆಗಳನ್ನು ಜೋಡಿಸಿ ಸುಡುವುದು ಎಂಬುದು.

ಮಳೆ ಜಾಸ್ತಿಯಾಗಲೀ ಕಮ್ಮಿಯಾಗಲೀ ಅದಕ್ಕೆಲ್ಲಾ ಜನ ದೇವರನ್ನೇ ಮೊರೆಹೋಗುತ್ತಿದ್ದರು. ಇಂದಿಗೂ ಈ ವಿಷಯ ಜನರ ನಿಯಂತ್ರಣದಲ್ಲಿಲ್ಲ ಎಂಬುದನ್ನು ಮರೆಯುವ ಹಾಗಿಲ್ಲವಲ್ಲ! ಸ್ಥಾನಿಕವಾಗಿ ಅಲ್ಲಲ್ಲಿ ಆಯಾಯ ದೇವರುಗಳಿಗೆ ಕೆಲವು ರೀತಿರಿವಾಜುಗಳನ್ನು ನಡೆಸಿದರೆ ದೇವರು ಪ್ರಸನ್ನನಾಗುತ್ತಾನೆ ಅಥವಾ ಜನರ ಸಂಕಷ್ಟವನ್ನು ಕಂಡು ಸ್ಪಂದಿಸುತ್ತಾನೆ ಎನ್ನುವ ಭಾವನೆ ಅಂದಿನ ಅಲ್ಲಿನ ಜನಾಂಗಗಳಲ್ಲಿ ಸದಾ ಇತ್ತು. ಉದಾಹರಣೆಗೆ ಮಳೆ ಕಮ್ಮಿಯಾದರೆ ಧಾರೇಶ್ವರ ದೇವಸ್ಥಾನದ ಪುಷ್ಕರಣಿಯಲ್ಲಿ ಮುಳುಗಿರುವ ಗಣಪನ ವಿಗ್ರಹವನ್ನು ಮೇಲಕ್ಕೆ ತೆಗೆದು ಇಡೀ ವಿಗ್ರಹಕ್ಕೂ ಕಾಳು ಮೆಣಸಿನ[ಅರೆದು ತಯಾರಿಸಿದ] ಲೇಪನ ಮಾಡಿ ಹೊರಗಡೆ ಬಿಸಿಲಲ್ಲಿ ಕೂರಿಸುತ್ತಿದ್ದರಂತೆ. ಹೆಚ್ಚಾಗಿ ಎಲ್ಲಿ ನೋಡಿದರೂ ಜನಪ್ರಿಯನಾಗಿ ಜನಪರನಾಗಿ ಇರುವ ದೇವರೆನಿಸಿಕೊಂಡ ಗಣಪ ಜನ ಮುನಿದಿದ್ದಾರೆ ಎಂದು ತಿಳಿದು ಕೇವಲ ದಿನವೊಪ್ಪತ್ತಿನಲ್ಲಿ ಅಸಾಧಾರಣ ಮಳೆಸುರಿಸಿದ ದಾಖಲೆಗಳು ಅಲ್ಲಿ ಸಿಗುತ್ತವೆ! [ಇನ್ನುಳಿದಂತೇ ಈಶ್ವರನಿಗೆ ರುದ್ರಾಭಿಷೇಕ, ಗಣಪನಿಗೆ ಕಡುಬು ನೈವೇದ್ಯವೇ ಮೊದಲಾದ ಹಲವು ಸೇವೆಗಳು ನಡೆಯುತ್ತಿದ್ದವು.] ಮಳೆ ಬಂದಮೇಲೆ ಗಣಪನಲ್ಲಿ ಕ್ಷಮೆಕೋರಿ ಪಶ್ಚಾತ್ತಾಪ ಪಟ್ಟು ಪ್ರಾಯಶ್ಚಿತ್ತ ಪೂಜೆ ನೆರವೇರಿಸಿ ಪುನಃ ಆತನನ್ನು ಸ್ವಸ್ಥಾನಕ್ಕೆ ಮರಳಿ ಕಳುಹಿಸುವ ಪದ್ಧತಿಯಿತ್ತು. ಇದು ಕಾಕತಾಳೀಯವೋ ಮೂಢನಂಬಿಕೆಯೋ ನೀವೇನೇ ಅಂದರೂ ಇವತ್ತಿಗೂ ಇದು ಆಗಾಗ ಮರುಕಳಿಸುವ ಸತ್ಯ!

ಮಳೆ ಸರಿಯಾಗಿ ಬಿದ್ದ ದಿನಗಳಲ್ಲಿ ಎಲ್ಲೆಲ್ಲೂ ಜಾರುವ ಪಾಚಿಗಟ್ಟಿದ ನೆಲದಮೇಲೇ ನಡೆಯಬೇಕಾಗುತ್ತಿತ್ತು. ಮನೆಯ ಅಂಗಳಗಳಲ್ಲಿ ಅಡಕೆ ದಬ್ಬೆಗಳ ಸಂಕಗಳನ್ನು ಹಾಕಿಕೊಳ್ಳುತ್ತಿದ್ದರು. ಆಮೇಲಾಮೇಲೆ ಸುಧಾರಿಸಿದವರು ಕಲ್ಲುಹಾಸನ್ನು ಮಾಡಿದರಾದರೂ ಜಾರುವಿಕೆ ಹಾಗೇ ಇತ್ತು. ಜಾರಿಬಿದ್ದ ವ್ಯಕ್ತಿಯನ್ನು ತಕ್ಷಣ ಕಂಡರೆ " ಅಗೋ ಗಂಟು ಹೆಕ್ಕಿದ " " ಅಲ್ನೋಡು ಗಂಟು ಹೆಕ್ಕಿದ್ಲು " ಎಂದು ತಮಾಷೆಮಾಡುವ ಪರಿಪಾಟವಿತ್ತು. ಆಗೆಲ್ಲಾ ಮದುವೆಗಳು ಎಂದರೆ ಸಾಮಾನ್ಯವಾಗಿ ಕಾರ್ತೀಕದಲ್ಲಿ ತುಳಸೀ ವಿವಾಹ ಆದನಂತರ ಸರಿಸುಮಾರು ಜೂನ್ ವರೆಗೆ ನಡೆಯುತ್ತಿದ್ದವು. ಹೊಸದಾಗಿ ಮದುವೆಯಾದ ಜೋಡಿ ಅಳಿಯನ[ಭೀಮನ] ಅಮಾವಾಸ್ಯೆಗೆ ಮಾವನ ಮನೆಗೆ ಬರುವ ಸಂಪ್ರದಾಯವಿತ್ತು. ಈ ಅಮಾವಾಸ್ಯೆಗೆ ಕೆಲವುಕಡೆ ಕೊಡೆ ಅಮಾಸೆ ಎನ್ನುವುದೂ ಇದೆ. ರಾಯರು ಮಾವನಮನೆಗೆ ಬರುವಾಗ ಕೊಡೆಹಿಡಿದು ಬರುತ್ತಾರಲ್ಲಾ ಅದಕ್ಕೇ ಈ ಅಮಾಸೆ ಕೊಡೆ ಅಮಾಸೆ! ಈಗೆಲ್ಲಾ ರಾಯರೂ ರಾಯರ ಮಾವನೂ ಪಟ್ಟಣ ಸೇರಿಬಿಟ್ಟಿದ್ದಾರೆ, ಹಾಗೂ ಹಳ್ಳಿಯಲ್ಲೇ ಮಾವನಮನೆ ಇದ್ದರೆ ರಾಯರು ಕಾರಲ್ಲೋ ಬೈಕಿನಲ್ಲೋ ಬರುತ್ತಾರೆ ಬಿಡಿ; ಕೊಡೆ ಬೇಕಾಗಿಯೇ ಇಲ್ಲ.

ಎಣ್ಣೆ ಬತ್ತಿ ದೀಪದ ಆ ಕಾಲದಲ್ಲಿ ಜನಮನದಲ್ಲಿ ಭಯಭೀತಿಗಳೂ ಸಾಕಷ್ಟಿದ್ದವು. ಅದರಲ್ಲಂತೂ ಮಳೆಗಾಲದಲ್ಲೆಲ್ಲಾ ಯಾರಾದರೂ ಸತ್ತುಬಿಟ್ಟರೆ ತಿಂಗಳುಗಳ ಕಾಲ ಆ ಪ್ರದೇಶದ ಹೆಂಗಸರು, ಮಕ್ಕಳು, ಕೆಲವು ಪುಕ್ಕಲು ಗಂಡಸರು ತುಂಬಾ ಹೆದರಿಕೊಳ್ಳುತ್ತಿದ್ದರು. ಮನುಷ್ಯ ತನ್ನನ್ನು ಸರಿಯಾಗಿ ತಾನು ಅರಿಯದೇ ಹೊದರೆ ಸಾವಿನ ಭೀತಿ ಅತಿಯಾಗಿ ಆತನನ್ನು ಮುತ್ತಿಕೊಳ್ಳುತ್ತದೆ. ಯಾರೋ ಬಂದು ಏನನ್ನೋ ಮಾಡಿ ತಮ್ಮನ್ನು ಕೊಂದುಬಿಟ್ಟರೆ ಎಂಬ ಅಂಜಿಕೆ ಸದಾ ಬೆನ್ನಟ್ಟಿ ಬರುತ್ತದೆ. ಆ ಕಾಲಘಟ್ಟದಲ್ಲಿ ಹಲವರಿಗೆ ಇದರ ಪರಿವೆಯೇ ಇರಲಿಲ್ಲ. ಸಾವು ಅನಿವಾರ್ಯ ಎಂಬುದನ್ನು ಅವರು ಮರೆತಿದ್ದರೋ ಏನೋ ಅಂತೂ ಸಾವನ್ನು ಆದಷ್ಟೂ ಮುಂದೂಡಲು ಇಷ್ಟಪಡುತ್ತಿದ್ದರು. ಶುದ್ಧ ಗಾಳಿ, ನೀರು, ನೈಸರ್ಗಿಕವಾಗಿ ಬೆಳೆದ ಪೌಷ್ಟಿಕ ಆಹಾರಪದಾರ್ಥಗಳ ಬಳಕೆ ಇದ್ದುದರಿಂದ ರೋಗಗಳು ಇವತ್ತಿನಷ್ಟು ಸಾಮಾನ್ಯವಾಗಿರಲಿಲ್ಲ. ಎಲ್ಲರಿಗೂ ಮಧುಮೇಹವಾಗಲೀ ಅಧಿಕ ರಕ್ತದೊತ್ತಡವಾಗಲೀ ಬರುವುದು ಸಹಜವೆಂಬ ಸ್ಥಿತಿ ಇರಲಿಲ್ಲ. ಶಸ್ತ್ರ ಚಿಕಿತ್ಸೆ ಅನಿವಾರ್ಯವಾಗುವ ಕಾಯಿಲೆ ಬರುವುದು ಅಪರೂಪವಾಗಿರುತ್ತಿತ್ತು. ಒಂದೊಮ್ಮೆ ಅಂತಹ ಸ್ಥಿತಿ ಬಂದರೆ ಆಗ ವ್ಯಕ್ತಿ ಸತ್ತ ಅಂತಲೇ ಲೆಕ್ಕ; ಯಾಕೆಂದರೆ ಶಸ್ತ್ರ ಚಿಕಿತ್ಸೆಯೆಲ್ಲಾ ಅಂದಿಗೆ ಅಲ್ಲಿ ಲಭ್ಯವಿರಲಿಲ್ಲ.

ಭಯ, ಆತಂಕ, ದುಗುಡ, ಏಕತಾನತೆಯಿಂದ ಬೇಸರಗೊಳ್ಳುವ ಮನಸ್ಸುಗಳನ್ನು ಮುದಗೊಳಿಸಲು ಅಂದಿನ ಜನರಲ್ಲಿಯೇ ಪಾರ್ತಿ ಸುಬ್ಬ ಎಂಬೊಬ್ಬಾತ ಹೆಜ್ಜೆ ಮುಂದಿಟ್ಟು ಕಲೆಯೊಂದನ್ನು ಆಲೋಚಿಸಿ, ಸೃಜಿಸಿ, ಕರಗತಮಾಡಿಕೊಂಡ -ಪ್ರಚುರಪಡಿಸಿದ. ಆ ಕಲೆಯೇ ಮುಂದೆ ಯಕ್ಷಗಾನವೆಂದು ಪ್ರಸಿದ್ಧ ಸಮಗ್ರ ಕಲಾಪ್ರಾಕಾರವಾಗಿ ಗೋಚರಿಸಿತು. ಅಲ್ಲಲ್ಲಿ ಕೆಲವು ಕವಿಗಳೂ ಇದ್ದರು-ಅವರು ತಾಡವೋಲೆಗಳಲ್ಲಿ ರಾಮಾಯಣ-ಮಹಾಭಾರತಗಳು ಮತ್ತು ಪುರಾಣಗಳನ್ನು ಅವಲಂಬಿಸಿ ಕೃತಿಗಳನ್ನು ರಚಿಸುತ್ತಿದ್ದರು. ಅಂತಹ ಕವಿಗಳಲ್ಲಿ ಒಬ್ಬನಾದ ಯಾಣದ ಬತ್ತಲೇಶ್ವರ ರಚಿಸಿದ ’ಬತ್ತಲೇಶ್ವರ ರಾಮಾಯಣ’ ನನ್ನ ನೋಡುವಿಕೆಗೆ ಸಿಕ್ಕಿತ್ತು. ತಿಗಳಾರೀ ಲಿಪಿಯಲ್ಲಿ ರಚಯಿತವಾದ ಆ ಹೊತ್ತಗೆಯನ್ನು ಯಾರದೋ ಕೃಪೆಯಿಂದ ಕಣ್ತುಂಬಿಕೊಳ್ಳುವುದು ಸಾಧ್ಯವಾಯಿತು. ನನ್ನ ಪೂರ್ವಜರಲ್ಲೂ ಒಬ್ಬಾತ ಕವಿಯಾಗಿದ್ದ ಎಂಬುದು ನಮ್ಮನೆಯಲ್ಲೇ ಇರುವ ತಾಡವೋಲೆಯ ರಾಮಾಯಣದಿಂದ ತಿಳಿಯುತ್ತದೆ. ನನ್ನ ಅಜ್ಜ ಪ್ರತೀ ನವರಾತ್ರಿಯಲ್ಲಿ ಆ ಪುಸ್ತಕವನ್ನು ಪೂಜಿಸಿ, ಶಾರದೆಯಾಗಿ ಪೂಜೆಗೊಂಡ ಆ ಪುಸ್ತಕವನ್ನು ಶಾರದೆಯನ್ನು ವಿಸರ್ಜಿಸಿದ ವಿಜಯದಶಮಿಯ ದಿನ ಓದುತ್ತಿದ್ದರು. ಶಾರದೆಯನ್ನು ವಿಸರ್ಜಿಸಿದ ದಿನ ಚಿಕ್ಕಮಕ್ಕಳಿದ್ದರೆ ಅಕ್ಷರಾಭ್ಯಾಸ, ದೊಡ್ಡವರಾದರೆ ಪುಸ್ತಕಾಭ್ಯಾಸ ನಮ್ಮಲ್ಲಿನ ಕ್ರಮವಾಗಿತ್ತು. ಅಜ್ಜ ರಾಮಾಯಣವನ್ನು ರಾಗವಾಗಿ ಗಮಕದಲ್ಲಿ ಹಾಡಿಕೊಂಡು ನಮ್ಮನ್ನೆಲ್ಲಾ ಸೆಳೆಯುತಿದ್ದರು. ತಕ್ಕಮಟ್ಟಿಗಿನ ಪಾಂಡಿತ್ಯವನ್ನು ಹೊಂದಿದ್ದ ಅವರು ತಮ್ಮ ವ್ಯಾವಹಾರಿಕ ಅನುಭವಗಳನ್ನೂ ಸೇರಿಸಿ ಅರ್ಥವಿವರಣೆ ನೀಡುತ್ತಿದ್ದರು. ಈ ರೀತಿಯಿಂದಲೂ ಅಜ್ಜ ನಮಗೆಲ್ಲಾ ಗುರುವಾಗಿ ಸದಾ ಪ್ರಾತಃಸ್ಮರಣೀಯರು. ಅದರ ಆರಂಭದ ಒಕ್ಕಣೆ ಈ ರೀತಿ ಇದೆ --

ಮೇದಿನಿಪ ದಶರಥನ ಬಸುರಲಿ ರಾಮಲಕ್ಷ್ಮಣ ಭರತ ಶತ್ರುಹ....

ಹಾಗೇ ಮುಂದುವರಿದು

ಆದನೊಬ್ಬನು ಕೌಸಲೆಗೆ ಮಗನಾದನೊಬ್ಬನು ಕೈಕೆಗಿಬ್ಬರು...

....ಹೀಗೆಲ್ಲಾ ಬರುತ್ತಾ ಸಾಗುತ್ತದೆ. ಅಚ್ಚ ಹಳಗನ್ನಡ. ಅಭ್ಯಾಸಬಲದಿಂದ ಅಜ್ಜ ಇಡೀ ಆ ರಾಮಾಯಣವನ್ನು ಓದುತ್ತಿದ್ದರು.

ತಾಡವೋಲೆಯ ಪುಸ್ತಕಗಳಲ್ಲಿ ಎರಡು ಕ್ರಮ. ಒಂದು ಅಕ್ಷರಗಳನ್ನು ಯಾವುದೋ ಮರದ ರಸದಲ್ಲಿ ಬರೆದಿರುವುದು, ಇನ್ನೊಂದು ಅಕ್ಷರಗಳನ್ನು ಕೊರೆದಿರುವುದು. ನಮ್ಮನೆಯಲ್ಲಿರುವ ಪುಸ್ತಕ ಕೊರೆದು ಮೂಡಿಸಿದ ಅಕ್ಷರಗಳಿಂದಾಗಿದೆ. ಓದುವಾಗ ಅಕ್ಷರಗಳು ಸರಿಯಾಗಿ ಕಾಣಿಸಲಿ ಎಂಬ ಕಾರಣಕ್ಕೆ ಬಾಳೆಯ ಮೂತಿಯಲ್ಲಿ ಸಿಗುವ ಕುಪ್ಪಡ [ಮೂತಿಯ ಎಲೆಯಂತಹ ಒಂದು ಭಾಗ]ದ ರಸವನ್ನು ಹಾಕಿ ಉಜ್ಜುತ್ತಿದ್ದರು. ಹಾಗೆ ಮತ್ತೆ ಮತ್ತೆ ಆ ರಸವನ್ನು ಹಾಕುವುದರಿಂದ ತಾಡವೋಲೆ ಜೀರ್ಣವಾಗಿ ಹೋಗುವ ಸಂಭವನೀಯತೆ ಇರುವುದರಿಂದ ಈಗ ಆ ಪುಸ್ತಕವನ್ನು ನಮ್ಮ ಹಿರಿಯರ ಆಶೀರ್ವಾದದ ಆಸ್ತಿಯಾಗಿ ಪರಿಗಣಿಸಿ ಜೋಪಾನಮಾಡಲಾಗಿದೆ.

ಪ್ರಥಮೇಕಾದಶಿ ಎಂಬ ಹಬ್ಬದಿಂದ ಆರಂಭಗೊಳ್ಳುವ ಹಬ್ಬಗಳ ಸಾಲು ಅಲ್ಲಿನ ಜನರಿಗೆ ಸ್ವಲ್ಪ ಉತ್ತೇಜನ ನೀಡುತ್ತಿದ್ದವು. ಚಿಕ್ಕ ಆಚರಣೆಗಳನ್ನೂ ಜನ ದೊಡ್ಡ ಹಬ್ಬವನ್ನಾಗಿ ಪರಿಗಣಿಸಿ ಪರಸ್ಪರ ಹೋಗಿ-ಬಂದು ಮಾಡುವುದು ಕರೆದು-ಇರಿಸಿ ಮಾಡುವುದು ಹೀಗೇ ಸಂಬಂಧಗಳ ಬಳಕೆ ಬಹಳವಾಗಿತ್ತು. ಅಲ್ಲಲ್ಲಿ ಆ ಯಾ ಹಬ್ಬಗಳಿಗೆ ಸೇರುವ ನೆಂಟರಿಷ್ಟರು ತಮ್ಮ ಉತ್ತಮ ಸಮಯದ ಸದುಪಯೋಗಕ್ಕಾಗಿಯೂ ಮನೋರಂಜಕವಾಗಿಯೂ ಯಕ್ಷಗಾನ ತಾಳಮದ್ದಲೆಯನ್ನು ನಡೆಸುತ್ತಿದ್ದರು. ಯಕ್ಷಗಾನಕ್ಕೆ ಇನ್ನೊಂದು ಹೆಸರು ದಶಾವತಾರ ಆಟ. ಮಹಾವಿಷ್ಣುವಿನ ಹತ್ತು ಅವತಾರಗಳಲ್ಲಿ ಹರವಿಕೊಂಡ ಬಹುತೇಕ ಕಥಾಭಾಗಗಳನ್ನು ಪ್ರಸಂಗಗಳಾಗಿ ವಿಂಗಡಿಸಿ ಅಂದಿನ ಆದಿಕವಿಗಳು ತಮ್ಮ ಉತ್ತಮೋತ್ತಮ ಶೈಲಿಯಲ್ಲಿ ಭಾಮಿನಿಷಟ್ಪದಿಯೇ ಮೊದಲಾದ ಛಂದಸ್ಸುಗಳನ್ನು ಬಳಸಿ ಪ್ರಾಸಬದ್ಧವಾಗಿಯೂ ಸರ್ವಾಂಗ ಶುದ್ಧವಾಗಿಯೂ ಮತ್ತು ವ್ಯಾಕರಣ ಬದ್ಧವಾಗಿಯೂ ಬರೆದು ಲೋಕಾರ್ಪಣೆಗೈದಿದ್ದಾರೆ. ಎಷ್ಟೋ ಕವಿಗಳ ಹೆಸರುಗಳು ಇವತ್ತಿಗೆ ಜನ ಮರೆತಿದ್ದರೂ ಅವರ ಕೃತಿಗಳು ಮಾತ್ರ ಅಲ್ಲಿನ ಜನ ಮರೆಯುವ ಹಾಗೇ ಇಲ್ಲ. ಚಕ್ರವರ್ತಿ ರುಕ್ಮಾಂಗದ ಹಾಗೂ ಆತನ ಮಗ ಧರ್ಮಾಂಗದ ಪ್ರಥಮೇಕಾದಶೀ ವೃತವನ್ನು ನಡೆಸಿದ ಕಥೆಯನ್ನು ’ಧರ್ಮಾಂಗದ ದಿಗ್ವಿಜಯ’ದಲ್ಲಿ ಹೇಳಲಾಗಿದೆ. ಹಿಂದೂಸ್ಥಾನಕ್ಕೆ ಭಾರತವೆಂಬ ಹೆಸರು ತಂದುಕೊಟ್ಟ ಮಹಾನುಭಾವ ದುಶ್ಯಂತ-ಶಕುಂತಲೆಯರ ಪುತ್ರ ಚಕ್ರವರ್ತಿ ಭರತನ ಬೀಗತನವೂ ಕೂಡ ಇದೇ ಪ್ರಸಂಗದಲ್ಲಿ ನಿರೂಪಿತವಾಗಿದೆ! ಇವೆಲ್ಲಾ ಕಥೆಗಳು ನಮಗೆಲ್ಲಾ ತಿಳಿದಿದ್ದರೆ ಅದು ಯಕ್ಷಗಾನದ ಕೃಪೆ! ಆ ಹಿರಿಯ ಕವಿಗಳ ಆಶೀರ್ವಾದ.

ಜನಮನ ಸುಸಂಸ್ಕೃತವಾಗಬೇಕಾದರೆ ಉತ್ತಮ ಸಾಹಿತ್ಯಗಳನ್ನು ಓದಬೇಕು; ಅವುಗಳಲ್ಲಿರುವ ಸಾತ್ವಿಕ ಶಕ್ತಿಯನ್ನು ತಮ್ಮಲ್ಲಿ ಆವಾಹಿಸಿಕೊಳ್ಳಬೇಕು. ತಮ್ಮಲ್ಲಿನ ನ್ಯೂನತೆಗಳನ್ನು ಕಥಾಭಾಗಗಳಲ್ಲಿ ಸಿಗುವ ಸನ್ನಿವೇಶಗಳಿಗೆ ತುಲನೆಮಾಡಿಕೊಂಡು ಸರಿಪಡಿಸಿಕೊಳ್ಳಬೇಕು. ಹಿಂದಿನ ಕವಿಗಳು ಮಹಾಮಹೋಪಾಧ್ಯಾಯರಾಗಿದ್ದರು. ಇಂದಿನಂತೇ ಮೂರಕ್ಷರ ಬರೆದವರೆಲ್ಲಾ ಕವಿಗಳೋ ಸಾಹಿತಿಗಳೋ ಆಗಿಬಿಡುತ್ತಿರಲಿಲ್ಲ. ಹಿನ್ನೆಲೆಗೆ ಭಾಷೆಗಳ ತಾಯಿಯಾದ ಸಂಸ್ಕೃತದ ಪರಿಪೂರ್ಣ ಜ್ಞಾನವನ್ನು ಅವರು ಹೊಂದಿರುತ್ತಿದ್ದರು. ಆ ಭಾಷಾಪ್ರೌಢಿಮೆಯೊಡನೆ ಸನ್ನಿವೇಶಗಳ ರಸಾನುಭೂತಿಯನ್ನು ಮನಸಾ ಧರಿಸಿ ಅದನ್ನು ಕೃತಿರೂಪಕ್ಕೆ ಇಳಿಸುತ್ತಿದ್ದರು. ಹೀಗಾಗಿ ಪ್ರತಿಯೊಂದೂ ಕೃತಿ ’ಮಾಸ್ಟರ್ ಪೀಸ್’ ಆಗಿರುತ್ತಿತ್ತು ಮತ್ತು ಅದನ್ನು ಬಳಸಿದ, ಓದಿದ ವ್ಯಕ್ತಿ ಮತ್ತೆ ಮತ್ತೆ ಓದುವಂತೇ ಪ್ರಲೋಭನೆ ಉಂಟುಮಾಡುತ್ತಿತ್ತು. ಇಂದು ಎಷ್ಟೋ ಸಲ ಬೇರೇ ಬೇರೇ ಮಂತ್ರಗಳ ಜಪವನ್ನು ಮಾಡಲು ಹೇಳುವುದು ವಾಡಿಕೆ: ಅದಕ್ಕೆ ಕಾರಣವಿಷ್ಟೇ-- ಅಷ್ಟು ಹೊತ್ತಾದರೂ ಮನಸ್ಸು ಏಕಾಗ್ರತೆಯನ್ನು ಸಾಧಿಸಲಿ, ಒಳ್ಳೆಯದನ್ನು ಬಯಸಲಿ ಎಂಬುದು. ಅದೇ ರೀತಿ ಯಕ್ಷಗಾನ ಪ್ರಸಂಗಗಳ ಪ್ರದರ್ಶನವನ್ನೂ ದೇವರ ಸೇವೆಯೆಂದೇ ಜನ ಪರಿಗಣಿಸಿದ್ದರು. ಪಾತ್ರಧಾರಿಗಳೂ-ಸೂತ್ರಧಾರಿಗಳೂ ಅದೇ ಭಾವನೆಯಿಂದ ಆಟವನ್ನು ನಡೆಸುತ್ತಿದ್ದರು.

ಉಳಿದ ಭಾಗವನ್ನು ಮುಂದಿನ ಕಂತಿನಲ್ಲಿ ನೋಡೋಣ, ನಮಸ್ಕಾರ