ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, October 8, 2010

ನವರಾತ್ರಿ ಪ್ರಾರ್ಥನೆ


ನವರಾತ್ರಿ ಪ್ರಾರ್ಥನೆ

ನವದುರ್ಗೆಯಯರ ಆರಾಧನೆಯ ಪರ್ವಕಾಲ. ಪ್ರತೀ ಜೀವಿಗೆ ಅಮ್ಮನ ಸ್ಥಾನ ದೊಡ್ಡದಲ್ಲವೇ? ಅಂತಹ ಅಮ್ಮನ ಪ್ರತಿರೂಪಗಳಾದ ಬ್ರಾಹ್ಮೀ, ಕೌಮಾರೀ, ವಾರಾಹೀ ಇವೇ ಮೊದಲಾದ ಒಂಬತ್ತು ರೂಪಗಳಲ್ಲಿ ದೇವಿಯನ್ನು ಆರಾಧಿಸುತ್ತೇವೆ. ಜಗಕ್ಕೆ-ದೇಶಕ್ಕೆ ಅನ್ನದಾತ ದೈವ. ನಾವೆಷ್ಟೇ ಪ್ರಯತ್ನಿಸಿದರೂ ಆತ ಮುನಿಸಿಕೊಂಡರೆ ನಮ್ಮ ಬೇಳೆ ಬೇಯುವುದಿಲ್ಲ. ಇದನ್ನರಿತು ಮಹಾನ್ ತಪಸ್ವಿಗಳಾದ ಶ್ರೀ ಶಂಕರರು ಹೇಳಿದರು :

|| ತೇನವಿನಾ ತೇನವಿನಾ ತೃಣಮಪಿ ನ ಚಲತಿ ತೇನವಿನಾ ||---ಎಂದು.

ಪ್ರಾಯದಲ್ಲಿ ನಮ್ಮ ದೇಹ ಸಶಕ್ತವಾಗಿರುವಾಗ, ಯಾವುದೇ ರೋಗಗಳು ಬಾಧಿಸದಾಗ, ಆರ್ಥಿಕವಾಗಿ ನಾವು ಸಬಲರಾಗಿದ್ದಾಗ, ಅಧಿಕಾರದಲ್ಲಿದ್ದಾಗ, ಹೋದಲ್ಲೆಲ್ಲಾ ನಮ್ಮ ಕುದುರೆ ಗೆದ್ದಾಗ ನಮಗೆ ಅನಿಸುವುದು ’ಲೈಫು ಇಷ್ಟೇನೆ’ ಎಂದು. ಆಗೆಲ್ಲಾ ನಾವು ಏರುವುದು ಐಷಾರಮೀ ಜೀವನದ ಬಂಡಿ. ಜಗತ್ತನ್ನೇ ಗೆಲ್ಲುವ ಹುಮ್ಮಸ್ಸೂ ಕೂಡ ಬಂದರೂ ತಪ್ಪಿಲ್ಲ. ಆದರೆ ಅದೆಲ್ಲಾ ಕೇವಲ ನಮಗೆ ಗೊತ್ತಿರದ ಮಾಯೆ. ಆ ಮಾಯೆಯನ್ನೇ ವಿಜ್ಞಾನದಲ್ಲಿ ಬೇರೆ ಬೇರೆ ರೂಪಗಳಲ್ಲಿ ಕಾಣುವ ಸಂಧಿಸುವ ಕೆಲಸ ನಡೆಯುತ್ತಿದೆ. ಬರೇ ವಿಜ್ಞಾನವಲ್ಲದೇ ಬೇರೆ ಮಾರ್ಗಗಳಿಂದಲೂ ಅದನ್ನು ರೀಚ್ ಆಗಬಹುದು ಎಂಬುದಕ್ಕೆ ಭಾರತೀಯ ತತ್ವಜ್ಞಾನ ಒಂದು ಉದಾಹರಣೆ. ಅದರಲ್ಲಂತೂ ಇಲ್ಲಿನ ಅದ್ವೈತ ತತ್ವವನ್ನು ಪ್ರತೀ ಹಂತದಲ್ಲಿ ನಾವು ಕಾಣುತ್ತೇವೆ, ಅನುಭವಿಸುತ್ತೇವೆ. ಈ ಅದ್ವೈತವನ್ನು ತಾನು ಬಹಳ ಮೊದಲೇ ಅರಿತಿದ್ದರೆ ಬಹಳ ಒಳ್ಳೆಯದಿತ್ತು, ತಡವಾಗಿಯಾದರೂ ಓದಿದೆನಲ್ಲ ಎಂಬುದು ಪರಮಾಣು ವಿಜ್ಞಾನಿಯಾಗಿದ್ದ ಡಾ| ರಾಜಾರಾಮಣ್ಣ ಅವರ ಅನಿಸಿಕೆ. ಶಾಂಕರ ತತ್ವ ಪರಮೋಚ್ಚ ಸ್ಥಿತಿ, ಅದು ಪರಿಪೂರ್ಣ, ಆ ಹಂತಕ್ಕೆ ಎಲ್ಲರೂ ಏರಲಾಗುವುದಿಲ್ಲಾ ಎಂಬುದನ್ನು ರಾಜಾರಾಮಣ್ಣ ಹೇಳಿದ್ದಾರೆ.


೧೯೮೩ ರಲ್ಲಿ ’ಜಾಗತಿಕ ಪರಮಾಣು ಸಮನ್ವಯ ಸಮಿತಿ’ಯ ಸಭೆ ಮುಗಿಸಿ ಕೌಲಲಾಂಪುರದಿಂದ ಭಾರತಕ್ಕೆ ಮರಳುವಾಗ ಅವರಿದ್ದ ವಿಮಾನ ಮುಂಬಯಿಯಲ್ಲಿ ಬೆಳಗಿನಜಾವ ೪ ಗಂಟೆಗೆ ತುರ್ತು ಭೂಸ್ಪರ್ಶಮಾಡಿತು. ಚಾಲಕ ಅದೇಕೆ ಹಾಗೆ ಮಾಡಿದ ಎನ್ನುವಷ್ಟರಲ್ಲಿ ಮುಂದೆ ಮತ್ತೇನೋ ಸಪ್ಪಳ! ವಿಮಾನ ಹೊಯ್ದಾಡಿದ ಅನುಭವ! ಮುಂದಿದ್ದ ಹಲವರು ಭಯದಿಂದ ಕೂಗಿಕೊಂಡರು. ಯಾರೋ ಎಮರ್ಜೆನ್ಸಿ ಬಾಗಿಲನ್ನು ತೆರೆದರು. ನೋಡುತ್ತಾರೆ ವಿಮಾನದ ಗಾಲಿಗಳು ತುಂಡಾಗಿವೆ, ವಿಮಾನ ಮೂರು ಭಾಗವಾಗಿ, ಹಿಂಭಾಗದಲ್ಲಿದ್ದ ೨೦ ಮಂದಿ ಮಡಿದಿದ್ದಾರೆ! ಆದರೆ ಮುಂದಿರುವ ಕೆಲವರಿಗೆ ಏಟುಗಳು ಬಿದ್ದಿದ್ದವು. ಆದರೆ ರಾಜಾರಾಮಣ್ಣ ಏನೂ ಆಗದ ರೀತಿಯಲ್ಲಿದ್ದರು. ಆಗಲೇ ಅವರು ಜಗತ್ತಿನಲ್ಲಿ ಕಾಣದ ಶಕ್ತಿಯ ಕೈವಾಡವಿದೆ, ನಮಗೂ ಮೀರಿದ ಹಿರಿದಾದ ಶಕ್ತಿಯೊಂದಿದೆ ಎಂದು ಪ್ರತಿಪಾದಿಸುತ್ತಾರೆ!

ವಿಜ್ಞಾನದಲ್ಲಿ ಪರಮಾಣು ವಿಭಜಿಸಿ ಶಕ್ತಿ ಪಡೆವಾಗ ಅದರ ಮೂಲರೂಪಕ್ಕೆ ಇಳಿಯುವಾಗ ಆಗುವ ರಿಯಾಕ್ಷನ್ ಬಗ್ಗೆ ಹೇಳುತ್ತ ಅಲ್ಲೇ ತನಗೆ ಅದ್ವೈತದ ಅನನ್ಯ ಅನುಭವ ಆಯ್ತು ಎಂದು ಹೇಳುತ್ತಾರೆ. ಪರಿಕರಗಳೇ ಇಲ್ಲದ ಅಂದಿನ ಭಾರತದಲ್ಲಿ ಮುಂಬಯಿಯ ಚೋರ್ ಬಜಾರ್ ಮತ್ತಿತರ ಜಾಗಗಳಿಂದಬ್ರಿಟಿಷರು ಬೇಡದೇ ಅಲ್ಲಿದ್ದವರಿಗೆ ಮಾರಿದ್ದ ವಿದ್ಯುನ್ಮಾನದ ಬಿಡಿಭಾಗಗಳನ್ನು ಖರೀದಿಸಿ, ಅವುಗಳನ್ನೇ ಹಲವು ವಿಧದಲ್ಲಿ ಜೋಡಿಸಿ ಕೆಲವು ಬೇಕಾದ ಮಾರ್ಪಾಡುಗಳನ್ನು ತಾವೇ ಮಾಡಿಕೊಂಡು ಸೃಜಿಸಿದ ಉಪಕರಣಗಳಿಂದ ನಿರೀಕ್ಷಿಸಿದ ಪ್ರತಿಫಲವನ್ನು ಕಾಣುವಾಗೆಲ್ಲಾ ಅವರಿಗೆ ಕಂಡಿದ್ದು ಅನ್ಯಾದೃಶ ಅದ್ವೈತ. ಹುಟ್ಟಾ ಶ್ರೀವೈಷ್ಣವರಾದ ಒಬ್ಬ ವ್ಯಕ್ತಿ ಜ್ಞಾನಿಯಾಗಿ ವಿಜ್ಞಾನಿಯಾಗಿ ಬೆಳೆದು ಅಣುವನ್ನೇ ನಿಯಂತ್ರಿಸ ಹೊರಟಾಗ ಕಂಡ ಸತ್ಯವನ್ನು ಅವರ ಆತ್ಮ ಚರಿತ್ರೆ ’ಈಯರ್ಸ ಆಫ್ ಪ್ರಿಲ್ಗ್ರಿಮೇಜ್’ ನಲ್ಲಿ ನಿವೇದಿಸುತ್ತಾರೆ.

ದೇವರು ಒಬ್ಬನೇ, ನಾಮ ಮಾತ್ರ ಹಲವು ಎಂದು ತಿಳಿದಿದ್ದೇವಲ್ಲ. ಅಲ್ಪರಾದ ನಮಗೆ ದೇವರ ಹಲವು ರೂಪಗಳ ಮೂರ್ತಿಗಳು ಕಾಣಲಿ ಎಂಬ ದೃಷ್ಟಿಯಿಂದ ಪೂರ್ವಜರು ಅನೇಕ ಅವತಾರಗಳನ್ನೂ, ಮೂರ್ತಿಗಳನ್ನೂ ತೋರಿಸಿಕೊಟ್ಟರು. ಅವುಗಳೆಲ್ಲದರ ಹಿಂದಿನ ಶಕ್ತಿ ಒಂದೇ. ಆ ಶಕ್ತಿಗೆ ನಮಿಸೋಣ.

ಇದನ್ನೆಲ್ಲಾ ಅರಿತಿದ್ದ ನಮ್ಮ ರಾಜಮಹಾರಾಜರು ಶಕ್ತಿಯ ಆರಾಧನೆಯನ್ನು ಹಲವು ರೂಪಗಳಲ್ಲಿ ನಡೆಸಿಕೊಂಡು ಬಂದರು. ಇತಿಹಾಸದಲ್ಲಿ ವಿಜಯನಗರದ ಅರಸರು ನವರಾತ್ರಿಯನ್ನು ರಾಜ್ಯದ ಶ್ರೇಯೋಭಿವೃದ್ದಿಗಾಗಿ ಆಚರಿಸಿದರು. ಪ್ರಾಯಶಃ ಶೃಂಗೇರಿಯ ಅಂದಿನ ಜಗದ್ಗುರು ಮಹರ್ಷಿ ವಿದ್ಯಾರಣ್ಯರು ವಿಜಯನಗರದ ಸ್ಥಾಪನೆಗೆ ಮೂಲಕಾರಣೀಕರ್ತರಾಗಿದ್ದರಿಂದ ಇರಬಹುದು, ರಾಜರುಗಳು ದೇವಿಯ ಉಪಾಸಕರಾದರು. ಅವರ ಅಂದಿನ ಪರಂಪರೆಯನ್ನು ಅನುಕರಿಸಿದವರು, ಅನುಸರಿಸಿದವರು ಮೈಸೂರಿನ ಅರಸರು. ಅಂತೂ ನಮ್ಮ ಕನ್ನಡನಾಡಿನ ಸೌಭಾಗ್ಯವೆಂಬಂತೇ ಈ ಹಬ್ಬ ನಿಲ್ಲದೇ ನಡೆಯಿತು. ಕಾಲಾನಂತರದಲ್ಲಿ ಪ್ರಜಾಪ್ರಭುತ್ವ ಬಂದಮೇಲೂ ಶಕ್ತಿದೇವತೆಯ ಈ ಆರಾಧನೆಯನ್ನು ನಿಲ್ಲಿಸಬಾರದೆಂಬ ಉದ್ದೇಶದಿಂದಲೂ ನಾಡದೇವತೆಯಾಗಿ ಶಕ್ತಿಯನ್ನೇ ಅಧಿಕಾರದಲ್ಲಿದ್ದವರು ಆರಾಧಿಸುತ್ತ ಬಂದಿದ್ದರಿಂದಲೂ ಈ ಹಬ್ಬವನ್ನು ನಾಡಹಬ್ಬವಾಗಿ ಆಚರಿಸುವುದು ಸಂಪ್ರದಾಯವಾಯಿತು.

ಇವತ್ತಿನ ಅತಂತ್ರ ರಾಜಕೀಯ ಸ್ಥಿತಿ ಈ ಹಬ್ಬದ ವೇಳೆ ಬಯಸದೇ ಬಂದ ಅನಿವಾರ್ಯತೆ! ವಿಧಿಯಿಚ್ಛೆಯಂತೇ ನಡೆಯಬೇಕಲ್ಲವೇ ? ರಾಜಕೀಯದಲ್ಲಿ ಖೊಳ್ಳೆ ಹೊಡೆಯುವ ಕುದುರೆ ವ್ಯಾಪಾರದ ಖೂಳರು ಈ ಸಮಯದಲ್ಲಾದರೂ ಸುಮ್ಮನಿದ್ದು ತಮ್ಮ ಬೇಕು-ಬೇಡಗಳನ್ನು ನವರಾತ್ರಿ ಕಳೆದಮೇಲೆ ಕೈಗೆತ್ತಿಕೊಳ್ಳಬಹುದಿತ್ತು, ಆದರೇನುಮಾಡೋಣ ಇಂದಿಗೆ ನಾವು ರಿಸಾರ್ಟ್ ರಾಜಕೀಯದಲ್ಲಿ ತೊಳಲಾಡುತ್ತಿದ್ದೇವೆ. ನೀಚರ ನೀಚ ಪ್ರವೃತ್ತಿ ತೊಲಗಲು ಶಕ್ತಿರೂಪಿಣಿಯ ಆವಾಸವೇ ಸರಿಯಾದ ಮಾರ್ಗ. ನವಶಕ್ತಿ ರೂಪಿಣಿಯಾದ ಅಮ್ಮ ನೀಚರಿಗೆ ಒಳ್ಳೆಯ ಬುದ್ಧಿಕೊಡಲಿ ತನ್ಮೂಲಕ ನಾಡು-ದೇಶ-ಜಗತ್ತು ಸುಭಿಕ್ಷವಾಗಲಿ ಎಂದು ಪ್ರಾರ್ಥಿಸುತ್ತಿದ್ದೇನೆ:

ನವರಾತ್ರಿಯ ನವದಿನದಲಿ
ನವಲಾಸ್ಯ ಭರಿಸಲಿ
ನವಜೀವನ ನವಯೌವ್ವನ
ನವಭಾವಮಿಳಿಸಲಿ
ನವದುರ್ಗೆಯರಿಗೆ ನಮಿಪೆ
ನವಕಾಂತಿ ಬೆಳಗಲಿ ನವಕಹಳೆ ಮೊಳಗಲಿ

ನವದೇವಿಯರಾ ದಂಡು
ನವವಾಹನದಲಿ ಕುಳಿತು
ನವವೈಭವದಲಿ ಮೆರೆದು
ನವಕಳೆಯ ಬಿಂಬಿಸಿ
ನವರಾಜಯೋಗ ಹರಸಿ
ನವ ಭೋಗಭಾಗ್ಯ ಬೆರೆಸಿ ನವೋಲ್ಲಾಸ ನೀಡಲಿ

ನವಕಾಳಿ ಲಕ್ಷ್ಮಿ ವಿದ್ಯಾ
ನವಚೇತನಗಳ ತುಂಬಿ
ನವನಾಟ್ಯ ಕಲೆ ಸಂಗೀತ
ನವನೀತ ಪಂಚಭಕ್ಷ್ಯ
ನವಧಾನ್ಯ ಬೆಳೆಯುವಂತ
ನವಜಾಯಮಾನದೊಡನೆ ನವಶಕ್ತಿ ತುಂಬಲಿ

ಅಮ್ಮಾ ಭಗವತೀ, ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನ, ವಂದನ, ದಾಸ್ಯ, ಸಖ್ಯ, ಆತ್ಮನಿವೇದನ ಇಂತಹ ನವವಿಧ ಭಕ್ತಿಗಳಿಂದ ನಿನ್ನನ್ನು ಆರಾಧಿಸಲು ನಾವು ಶಕ್ತರಲ್ಲ, ನೀನೇ ಅನುಗ್ರಹಿಸಿದ ಕಾಲ, ಮಾನ, ದೇಶ, ಕೋಶ, ಶರೀರ, ಬುದ್ಧಿ ಇವುಗಳನ್ನೆಲ್ಲಾ ಸದುಪಯೋಗ ಪಡಿಸುಕೊಳ್ಳುವಂತೇ ಆದಷ್ಟೂ ಜ್ಞಾನದೆಡೆಗೆ ನಿನ್ನನ್ನು ಕಾಣುವ ಮಾರ್ಗದೆಡೆಗೆ ನಾವು ತೆರಳುವಂತೆ ನಮ್ಮನ್ನು ಅನುಗ್ರಹಿಸು. ಅಲ್ಪರಾದ ನಮ್ಮಿಂದ ನೀನೇನೇ ಕೇಳಿದರೂ ಪಡೆಯಲು ಸಾಧ್ಯವೇ ? ಅಮ್ಮಕೊಡುವ ಪ್ರೀತಿಗೆ ಮಕ್ಕಳು ಭಾಜನರೇ ವಿನಃ ಅಮ್ಮನ ಋಣವನ್ನು ಮಕ್ಕಳು ತೀರಿಸಲಾದೀತೇ ? ಹೀಗಾಗಿ ಅಮ್ಮಾ, ನೀನೇ ಕೊಟ್ಟಿರುವ ಈ ತ್ರಿಕರಣವನ್ನು ಒಮ್ಮೆ ಒಂದು ನಿಮಿಷ ನಿನ್ನ ಮುಂದೆ ಹಿಡಿದರ್ಪಿಸುತ್ತಿದ್ದೇವೆ, ನಮ್ಮ ಸಕಲ ಅಪರಾಧಗಳನ್ನೂ ಕ್ಷಮಿಸಿ ನಮ್ಮನ್ನು ಸನ್ಮಾರ್ಗದಲ್ಲಿ ನಡೆಸಬೇಕೆಂಬುದು ಪ್ರಾರ್ಥನೆ. ಅಮ್ಮಾ ನೀನು ಇಡೀ ವಿಶ್ವಕ್ಕೇ ಮಂಗಳವುಂಟುಮಾಡಲಾರೆಯೇ ?

ಕಲ್ಯಾಣಾಯುತ-ಪೂರ್ಣಚಂದ್ರವದನಾಂ ಪ್ರಾಣೇಶ್ವರಾನಂದಿನೀಮ್
ಪೂರ್ಣಾಪೂರ್ಣತರಾಂ ಪರೇಶಮಹಿಷೀಂ ಪೂರ್ಣಾಮೃತಾಸ್ವಾದಿನೀಮ್ |
ಸಂಪೂರ್ಣಾಂ ಪರಮೋತ್ತಮಾಮೃತಕಲಾಂ ವಿದ್ಯಾವತೀಂ ಭಾರತೀಮ್
ಶ್ರೀಚಕ್ರಪ್ರಿಯ-ಬಿಂದು-ತರ್ಪಣಪರಾಂ ಶ್ರೀ ರಾಜರಾಜೇಶ್ವರೀಮ್ ||

|| ಲೋಕಾಸಮಸ್ತಾಃ ಸುಖಿನೋ ಭವಂತು ||