ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, October 23, 2010

ಭಾವನೆಯ ಕೊಳದಲ್ಲಿ


ಭಾವನೆಯ ಕೊಳದಲ್ಲಿ

ಕಾಡ ಮಧ್ಯದಲಿರುವ ತಣ್ಣೀರ ತಿಳಿಗೊಳದಿ
ಹಾಡಿನಾ ಸೊಗಡು ಕಲ್ಲುದುರಿ ಅಲೆಯೇಳೆ !
ನೋಡುವಾ ಕೇಳುವಾ ಆಸೆಗಳ ಪುದುವೊಟ್ಟು
ಮಾಡಿ ಮನೋರಥದಿ ಮೆರೆಸುವಾ ವೇಳೆ

ಒಡನಾಡಿಗಳ ಮರೆತು ನೀರವದಿ ಅರೆಘಳಿಗೆ
ಗಡಿದಾಟಿ ಜನರ ಜಂಜಡಗಳನು ಕಳೆದು
ಅಡಿಗಡಿಗೆ ಗುಡಿಯು ಮಂದಿರ ಮಸೀದಿಗಳೆಂಬ
ಬಡಬಡಿಕೆಯಿರದಂಥ ಭಾವವದು ಬೆಳೆದು

ಭಾವಗಳು ನೂರ್ಮಡಿಸಿ ಮಗುಚಿರಲು ಮನದೊಳಗೆ
ಜೀವಕಳೆ ಚೇತನವ ಪಡೆದು ಪುಟಿಯುತಲಿ
ದೇವಸೃಷ್ಟಿಯ ಲೋಕ ಸೆಳೆಯುತ್ತ ತನ್ನೆಡೆಗೆ
ಯಾವಲೆಕ್ಕಕು ಸಿಗದ ಹರುಷವನು ನೀಡುತಲಿ

ಯಾವುದೋ ರಾಜನೊಂದಾನೊಂದು ಕಾಲದಲಿ
ಕಾವೇರಿ ಬೇಟೆಯನು ಬೆನ್ನಟ್ಟಿ ಬಂದು
ದಾವಾರಿಸಿಕೊಳಲು ಇಳಿದೊಮ್ಮೆ ನೀರ್ಕುಡಿದು
ಸಾವಿರದ ಬದುಕ ನೆನೆಯುತ್ತೊಮ್ಮೆ ನಿಂದು

ಆನೆ ಹುಲಿ ಸಿಂಹ ಮಿಕ ಮುಂತಾದ ಮೃಗಗಳವು
ಜೇನು ತಿಂದಾ ಕರಡಿಯೂ ಜತೆಗೆ ಸೇರಿ
ಬಾನಾಡಿಗಳು ಹಾರಿ ಬಸವಳಿದು ಕೆಳಗಿಳಿದು
ಗಾನಮಾಡುತ ಅಮೃತಬಿಂದುವನು ಹೀರಿ

ಕೆಂದಾವರೆಗಳವು ಅರಳಿ ದೂರದಲಿ ಒಂದೆಡೆಗೆ
ಅಂದವನು ಬಿಚ್ಚಿಡುತ ಸೂರ್ಯನರಸಿರಲು
ಬಂದವರ ಮನಸೂರೆಗೊಳ್ಳುತ್ತ ಕೊಳವಲ್ಲಿ
ಸಂದಕಾಲದ ಪರಿವೆಯಿಲ್ಲದಂತಿರಲು