ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, September 25, 2011

ಜಾಹೀರಾತು


---------------ಜಾಹೀರಾತು--------------

ಆತ್ಮೀಯ ಓದುಗ ಮಿತ್ರರೇ, ನವೆಂಬರ್ ಮೊದಲವಾರದಿಂದ ನೇಚರ್ ಕೌನ್ಸೆಲಿಂಗ್ ಮತ್ತು ಪರ್ಸೊನಾಲಿಟಿ ಡೆವಲಪ್‍ಮೆಂಟ್ ತರಬೇತಿ ಕಾರ್ಯಕ್ರಮ ವಿಭಿನ್ನ ರೀತಿಯಲ್ಲಿ ಆರಂಭವಾಗುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಹೊಸ ಬ್ಲಾಗ್ ಯಾ ಜಾಲತಾಣದ ಮುಖಾಂತರ ಮಾಹಿತಿ ನೀಡಲಾಗುವುದು. ಪರಿಣತರು ಸೂಚಿಸುವ ಮಾರ್ಗಗಳು/ ಸಮಸ್ಯೆಗಳ ಪರಿಹಾರಕ್ಕೆ ಸುಲಭ ಸೂತ್ರಗಳು ಇಲ್ಲಿ ಲಭ್ಯ. ಜೀವನದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಲು ಆಶಿಸುವ, ಸಮಸ್ಯೆಗಳಲ್ಲಿ ತೊಳಲಾಡಿ ಸರಿಯಾದ ಪರಿಹಾರ ಕಾಣದ ಪ್ರತೀವ್ಯಕ್ತಿಯನ್ನೂ ಪ್ರತ್ಯೇಕ ಸಮಯಾಧಾರಿತ ಸೆಶನ್‍ಗಳಲ್ಲಿ ಸಂದರ್ಶಿಸಿ ತರಬೇತಿ ನೀಡಲಾಗುತ್ತದೆ / ಪರಿಹಾರ ಮಾರ್ಗ ಸೂಚಿಸಲಾಗುತ್ತದೆ. ವ್ಯಕ್ತಿಗಳ ವೈಯ್ಯಕ್ತಿಕ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುತ್ತದೆ ಮತ್ತು ವಿದ್ಯಾರ್ಹತೆ ಮತ್ತು ಅನುಭವಗಳ ಆದ್ಯತೆ ಮೇಲೆ ವೃತ್ತಿಯ ಉತ್ಕರ್ಷದಬಗ್ಗೆ/ಹೆಚ್ಚಿನ ಆದಾಯವನ್ನು ಪಡೆಯುವ ಬಗ್ಗೆ ಸೂತ್ರಗಳನ್ನು ತಿಳಿಸಲಾಗುತ್ತದೆ. ದ್ವಂದದಲ್ಲಿ ಸಿಲುಕಿರುವ, ಓದಿಗೆ ಗಮನವೀಯದ ವಿದ್ಯಾರ್ಥಿಗಳಿಗೆ, ಪದವಿ ಪಡೆದು ಯಾವುದೇ ಉದ್ಯೋಗ ಮಾಡಲು ಸಿಗದೇ ಇರುವವರಿಗೂ ಕೂಡ ಮಾರ್ಗದರ್ಶನವಿದೆ.

ಪಬ್ಲಿಕ್ ರಿಲೇಶನ್ಸ್ ಮ್ಯಾನೇಜ್‍ಮೆಂಟ್ ಮತ್ತು ಇನ್ನಿತರ ಸೇವೆಗಳು:

ಇದಲ್ಲದೇ ಯಾರಾದರೂ ಅದಾಗಲೇ ಸ್ವಯಂ ಉದ್ಯೋಗಮಾಡುತ್ತಿದ್ದವರು, ಕಲಾವಿದರು, ನೃತ್ಯಪಟುಗಳು, ಸಂಗೀತಗಾರರು, ವಸ್ತುಗಳ ಉತ್ಫಾದಕರು, ಉದ್ದಿಮೆದಾರರು, ಬೇರೇ ಬೇರೇ ರಂಗಗಳಲ್ಲಿ ಸರ್ವಿಸ್ ಕೊಡುವವರು ಸಾರ್ವಜನಿಕ ಪರಿಚಯ, ಪ್ರಚಾರ ಇವುಗಳ ಬಗ್ಗೆ ಆಸಕ್ತರಗಿದ್ದಲ್ಲಿ ಅಂಥವರಿಗೆ ಆ ಯಾ ಸರ್ವಿಸ್‍ಗಳನ್ನು ಒದಗಿಸಲಾಗುತ್ತದೆ. ಕಳೆಗುಂದಿರುವ ಹಳೆಯ ದಂಧೆಯಲ್ಲಿ ಬೇಸತ್ತಿರುವವರಿಗೆ ಹೊಸ ಮಾರುಕಟ್ಟೆಯ ವೈಖರಿಗಳನ್ನು ಅಳವಡಿಸಿಕೊಳ್ಳಲು ತಿಳಿಸಿಕೊಡಲಾಗುತ್ತದೆ. ಹೊಸಹೊಸ ಆಯೋಜನೆಗಳನ್ನು ಮತ್ತು ಉದ್ದಿಮೆಗಳನ್ನು ಮಾಡುವವರಿಗೆ ಅದರ ಲಾಭಾಲಾಭದ ಬಗ್ಗೆ ವಿವರಣೆ ಒದಗಿಸಲಾಗುತ್ತದೆ. ಹೊಸ ಉತ್ಫನ್ನಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆಮಾಡಿ ತ್ವರಿತಗತಿಯಲ್ಲಿ ಅದಕ್ಕೆ ಮಾರುಕಟ್ಟೆ ಒದಗುವಂತೇ ಯೋಜನೆಗಳನ್ನು ರೂಪಿಸಕೊಡಲಾಗುತ್ತದೆ.

ವ್ಯಕ್ತಿತ್ವ ವಿಕಸನದ ಸಾಮೂಹಿಕ ತರಬೇತಿ ಶಿಬಿರಗಳು ಮತ್ತು ಕಾರ್ಪೋರೇಟ್ ಐಟಿ ಟ್ರೇನಿಂಗ್‍ಗಳು ಲಭ್ಯವಿರುತ್ತವೆ. ಇವುಗಳನ್ನು ಸಂಘಸಂಸ್ಥೆಗಳವರು, ಕಂಪನಿಗಳವರು ಪಡೆದುಕೊಳ್ಳಬಹುದಾಗಿದೆ. ಇನ್ನೂ ಹಲವಾರು ತೆರನಾದ ಸರ್ವಿಸ್‍ಗಳು ಲಭ್ಯವಾಗುವಂತೇ ನಮ್ಮ ಕಾರ್ಯವೈಖರಿ ವಿಸ್ತಾರಗೊಂಡಿದೆ. ಅಂತೂ ಒಂದು ಉತ್ತಮ ವೇದಿಕೆಯನ್ನು ರೂಪಿಸುತ್ತಿದ್ದೇವೆ ಎಂಬ ಹೆಮ್ಮೆ ನಮ್ಮದಾಗಿದೆ. ಇದು ವೃತ್ತಿ ಸಂಬಂಧಿತ ವಿಷಯವಾದ್ದರಿಂದ ಇದಕ್ಕೆ ಶುಲ್ಕ ತೆಗೆದುಕೊಳ್ಳಲಾಗುತ್ತದೆ. ಶುಲ್ಕ ವ್ಯಕ್ತಿಗಳು ಮತ್ತು ಅವರು ಕೇಳುವ ವಿಷಯಗಳನ್ನಾಧರಿಸಿರುತ್ತದೆ. ನವೆಂಬರ್ ಮೊದಲವಾರದಲ್ಲಿ ಆರಂಭಗೊಳ್ಳಲಿರುವ ಈ ಸೇವೆಗಳಲ್ಲಿ ಆಸಕ್ತಿ ತಳೆದಿರುವವರು ಈ ಕೆಳಗಿನ ಮಿಂಚಂಚೆ ವಿಳಾಸಕ್ಕೆ ಮಿಂಚಂಚೆ ಕಳಿಸಿ, ತಮ್ಮ ವಿವರಗಳನ್ನು ತಿಳಿಸಿ ನಮ್ಮಿಂದ ಹೆಚ್ಚಿನ ವಿವರಗಳನ್ನು ಪಡೆಯಬಹುದಾಗಿದೆ, ಮತ್ತು ಹೆಸರು ನೋಂದಾಯಿಸುವ ಮಾರ್ಗವನ್ನು ತಿಳಿಯಬಹುದಾಗಿದೆ. ಟರ್ನಿಂಗ್ ಪಾಯಿಂಟ್‍ಗಾಗಿ ನಿರೀಕ್ಷಿಸುತ್ತಿರುವ ಜನ ಉಪಯೋಗಿಸಿಕೊಳ್ಳಬಹುದಾದ ಸೇವೆಗಳು ಲಭ್ಯ ಎಂಬುದನ್ನು ಈ ಮೂಲಕ ತಿಳಿಸುತ್ತಿದ್ದೇನೆ. ನಮ್ಮ ಸಂಸ್ಥೆಯ ಮಿಂಚಂಚೆ ಹೀಗಿದೆ :

uddime@gmail.com

ಧನ್ಯವಾದಗಳು.

Thursday, September 22, 2011

ವಾದ್ಯದಮೇಲೆ ಓಡಾಡುವ ’ನಡೆ’ ಇದೆ !


ವಾದ್ಯದಮೇಲೆ ಓಡಾಡುವ ’ನಡೆ’ ಇದೆ !

ಕವಳದ ಸಂಚಿ[ಎಲೆಯಡಿಕೆ ಚೀಲ] ಬಗಲಲ್ಲಿ ಇಟ್ಟುಕೊಂಡು ಹೊರಟುಬಿಟ್ಟರೆ ಕೆಲವರ ಕೆಲಸವೇ ಮನೆ ಮನೆ ಸುತ್ತುವುದು. ಹಕ್ಕೆಚಡಿ ಪುರಾಣ ಹೇಳುತ್ತಾ ಇದ್ದಿದ್ದಕ್ಕೆ ಕೈಕಾಲು ಸೇರಿಸಿಯೋ ಅಥವಾ ಇಲ್ಲದಿದ್ದುದನ್ನೋ ಊದ್ದುದ್ದ ನಾಲಿಗೆ ಎಳೆಯುತ್ತಾ ಹೇಳುವುದರಲ್ಲಿ ಇಂಥಾ ಜನ ನಿಸ್ಸೀಮರಿರುತ್ತಾರೆ. ಹೆರೋಲೆ ಅಪ್ಪಚ್ಚಿ ಸತ್ತಮೇಲೆ ಚೌಡೀ ಮತ್ತು ಜಟ್ಗ, ಕೀಳು ವಗೈರೆ ದೇವತೆಗಳನ್ನು ಪೂಜೆಮಾಡಿ ಆದರಿಸುವವರು ಕಮ್ಮಿ ಆಗಿದ್ದಾರೆ ಎಂಬುದು ಕೆಲವರ ಹೇಳಿಕೆಯಾದರೂ ಪೂಜೆಗಳಂತೂ ನನಗೆ ತಿಳಿದ ಮಟ್ಟಿಗೆ ಇನ್ನೂ ನಡೆದೇ ಇವೆ.

ನಾನೇನಾದರೂ ಬಿದ್ದು ಕಲ್ಲಿಗೆ ತಲೆಬಡಿದು ತಲೆಯೊಡೆದು ಸತ್ತುಹೋಗದೇ ಬದುಕಿ ನಿಮ್ಮೆದುರು ಬರೆಯುತ್ತಿದ್ದರೆ ಅದಕ್ಕೆ ಕಾರಣ " ನಿನಗೆ ಹೆದರಿಕೆಯಾಗದಂತೇ ಜೊತೆಗೇ ಶ್ರೀಧರಸ್ವಾಮಿಗಳಿದ್ದಾರೆ " ಎಂದ ಮನೆಯ ಹಿರಿಯರ ಮಾತು. ಇಲ್ಲದಿದ್ದರೆ ಈಲೋಕಕ್ಕೆ ಬಂದಷ್ಟೇ ವೇಗದಲ್ಲಿ ನಾನು ಮರಳಿಯೂ ಬಿಡುತ್ತಿದ್ದೆ! ಚಿಕ್ಕವರಿರುವಾಗ ನಮಗೇನು ಪೇಟೇ ಮಕ್ಕಳ ಥರ ಯೂನಿಫಾರ್ಮು, ಸಾಕ್ಸು ಶೂ ಹಾಕಿ ಶಾಲೆಗೆ ಕಳಿಸುವುದು ಕರಕೊಂಡುಬರುವುದು ಇದೆಲ್ಲಾ ಇರಲಿಲ್ಲ. ಸಿಕ್ಕಿದ ಚಡ್ಡಿಯನ್ನು ಸಿಗಿಸಿಕೊಂಡು ಸವೆದ ಹವಾಯಿಯಿದ್ದರೆ ಅದನ್ನೆ ಮೆಟ್ಟಿಕೊಂಡು ಹತ್ತು ಹರದಾರಿ ನಡೆದೇ ಹೋಗಬೇಕಾಗಿತ್ತು ಶಾಲೆಗೆ. ಅದುಬಿಡಿ ಶಾಲೆಗೆ ಹೋಗುವುದಕ್ಕಿಂತಾ ಹೆಚ್ಚಾಗಿ ನೆನೆಸಿದ ಭತ್ತ ತೆಗೆದುಕೊಂಡು ಮಿಲ್ಲುಮಾಡಿಸಿ ಅವಲಕ್ಕಿತಯಾರಿಸಿಕೊಂಡು ಬರುವುದು, ಅಂಗಡಿಯಿಂದ ರವೆ, ಹಿಟ್ಟು, ತರಕಾರಿ ಇತ್ಯಾದಿಗಳನ್ನು ಅರ್ಜೆಂಟಿಗೆ ತಂದುಕೊಡುವುದು, ಕೊಟ್ಟಿಗೆಯಲ್ಲಿರುವ ನಮ್ಮ ಹಸುಗಳು ಹಾಲು ಬತ್ತಿಸಿಕೊಂಡಾಗ ನಿತ್ಯ ನಿಗದಿತವೇಳೆಗೆ ಹಾಲು ಸಿಗುವ ಬೇರೇ ಮನೆಯಿಂದ ಹಾಲು ತರುವುದು, ಬೇಸಿಗೆಯಾದರೆ ಅಡಕೆ ತೋಟಕ್ಕೆ ನೀರುಬಾರಿ ಮಾಡುವುದು, ಭಟ್ಟರ[ಪುರೋಹಿತರ] ಮನೆಗೆ ಹೋಗಿ ಅವರು ನಮ್ಮಲ್ಲೇ ಬಿಟ್ಟುಹೋಗಿದ್ದ ಸಿದ್ದಕ್ಕಿ-ಕಾಯಿಗಳನ್ನು ತಲ್ಪಿಸಿಬರುವುದು ಇತ್ಯಾದಿ ’ಕುನ್ನಿಗೆ ಕೆಲಸವಿಲ್ಲ ಕೂರಲು ಪುರುಸೊತ್ತಿಲ್ಲ’ ಎಂಬ ರೀತಿ ಕೆಲಸಗಳು ಅಡರಿಕೊಂಡೇ ಇರುತ್ತಿದ್ದವು.

ಕೊಟ್ಟ ಯಾವುದೇ ಕೆಲಸಗಳನ್ನು ಸ್ವಲ್ಪ ಆಟವಾಡುತ್ತ ತಡವಾಗಿ ಮಾಡುವುದಿತ್ತು ಬಿಟ್ಟರೆ ಕೆಲಸ ಮಾಡುವುದಿಲ್ಲ ಎನ್ನುವುದು ನಮ್ಮ ಜಾಯಮಾನವೇ ಅಲ್ಲ. ಕೆಲಸದ ಜೊತೆಜೊತೆಗೆ ಆಗಾಗ ಹಕ್ಕೆಚಡಿ ಪುರಾಣಿಕರ ಕಥೆಗಳನ್ನು ಕೇಳುವುದೂ ಅಭ್ಯಾಸವಾಗಿಬಿಟ್ಟಿತ್ತು! ತಂಬೂರಿಯಂಥಾ ಬಾಯಿತುಂಬಾ ಕವಳದ ಕೆಂಪುಎಂಜಲನ್ನು ತುಂಬಿಕೊಂಡು ಮಧ್ಯೆ ಮಧ್ಯೆ " ಗಾಗಾಕ್ ಗಾಗಾಕ್ " ಎಂದು ಗಂಟಲಿಗೆ ಹೋಗುವ ಆ ಮಿಶ್ರಣವನ್ನು ವಾಪಾಸು ಬಾಯಿಗೆ ಎಳೆಯುತ್ತಾ ತಮ್ಮದೇ ಲೋಕದಲ್ಲಿ ಆನಂದತುಂದಿಲರಾಗಿ ವಿಹರಿಸುತ್ತಾ ಕಥಾಕಾಲಕ್ಷೇಪಮಾಡುವ ಜನ ಬಂದುಬಿಟ್ಟರೆ, ಹಾಗೆ ಬಂದ ಅವರನ್ನು ಜಾಸ್ತಿಹೊತ್ತು ಕೂರಿಸಿಕೊಳ್ಳಲೂ ಆಗದೇ ಎದ್ದುಹೋಗು ಎಂದು ಹೇಳಲೂ ಆರದೇ ತಮ್ಮೊಳಗೇ ಒದ್ದಾಡುವ ನಮ್ಮ ಹಿರಿಯರು ಬರಿದೇ ಹೂಂ ಗುಟ್ಟಿದರೂ ಸಾಕು ಅವರು ಕಥೆಹೇಳುತ್ತಲೇ ಇರುತ್ತಿದ್ದರು! ಕೆಲವು ಕಥೆಗಳು ನಮ್ಮನೆಯ ಹಿರಿಯರಿಗೆ ಬೇಡವಾದರೂ ನಮಗೆ ಬೇಕಾಗಿಬಿಡುತ್ತಿದ್ದವು !!

ಗುಂಡಬಾಳೆಯಲ್ಲಿ ವರ್ಷದ ೫ ತಿಂಗಳು ಒಂದೇ ವೇದಿಕೆಯಲ್ಲಿ ಹರಕೆಬಯಲಾಟ[ಯಕ್ಷಗಾನ]ನಡೆಯುತ್ತದೆ-ಅದು ಕರ್ನಾಟಕದ ಮಂದಿ ಸೇರಿದಂತೇ ಬೇರೇ ರಾಜ್ಯಗಳವರಿಗೂ ಗೊತ್ತು. ಯಾಕೆಂದರೆ ಜಿ.ಎಸ್.ಬಿ ಸಮುದಾಯದ ಸಂಪರ್ಕ ಎಲ್ಲೆಲ್ಲಾ ಇದೆಯೋ ಅಲ್ಲೆಲ್ಲಾ ಆ ಸುದ್ದಿ ಹಬ್ಬಿರುತ್ತದೆ. ಮೊದಲು ಎಲ್ಲಿನೋಡಿದರೂ ಗದ್ದೆಯೋಗದ್ದೆ ಎನ್ನುವ ಸುಮಾರು ೪೦-೫೦ ಎಕರೆಗಿಂತಾ ಹೆಚ್ಚಿನ ಬಹುದೊಡ್ಡ ಬಟಾಬಯಲಿನ ನಡುವೆ ಒಂದುಜಾಗದಲ್ಲಿ ಸಣ್ಣಗೆ ಚಪ್ಪರಕಟ್ಟಿ ಅದನ್ನೇ ವೇದಿಕೆ ಎಂದು ತಿಳಿದು ಆಟ ನಡೆಸುತ್ತಿದ್ದರು. ನಾವೆಲ್ಲಾ ಹುಟ್ಟುವುದಕ್ಕೂ ಮುಂಚೆ ರಾತ್ರಿ ಬೆಳಕಿನ ಸಲುವಾಗಿ ದೊಡ್ಡ ದೊಂದಿಗಳನ್ನೂ ಸೀಮೇಎಣ್ಣೆ ಗ್ಯಾಸ್ ಲೈಟ್‍ಗಳನ್ನೂ ಬಳಸಲಾಗುತ್ತಿತ್ತಂತೆ. ವೇದಿಕೆಯ ಇಕ್ಕೆಲಗಳಲ್ಲಿ ಅವುಗಳನ್ನು ಜೋಡಿಸಿ ಬೆಳಕು ಕಾಣುವಂತೇ ಮಾಡಲಾಗುತ್ತಿತ್ತಂತೆ. ಆದರೆ ನಾವೆಲ್ಲಾ ಚಿಕ್ಕವರಿರುವಾಗ ವಿದ್ಯುತ್ತು ಅದಾಗಲೇ ಬಂದಿತ್ತಾದ್ದರಿಂದ ಕಗ್ಗಾಡಿನ ಕುಗ್ರಾಮಗಳಲ್ಲೂ ಕೆಲವುಮಟ್ಟಿಗೆ ವಿದ್ಯುದ್ದೀಪಗಳು ಬಳಕೆಗೆ ಬಂದುಬಿಟ್ಟಿದ್ದವು.

ಗುಂಡಬಾಳೆಯ ಮುಖ್ಯಪ್ರಾಣ ಎಂದೇ ಹೆಸರಾದ ಹನುಮ ಒಂದಾನೊಂದು ಕಾಲಕ್ಕೆ ಪಕ್ಕದಲ್ಲೇ ಹರಿವ ನದಿಯಲ್ಲಿ ಯಾರೋ ಹವ್ಯಕ ಬ್ರಾಹ್ಮಣನೋರ್ವನಿಗೆ ಸ್ನಾನಮಾಡುವಾಗ ಸಿಕ್ಕನಂತೆ. ಸಿಕ್ಕ ಚಿಕ್ಕ ವಿಗ್ರಹವನ್ನು ನದೀ ಮುಖಜ ಭೂಮಿಯಿಂದ ಅನತಿದೂರದಲ್ಲಿ ಪ್ರತಿಷ್ಠಾಪಿಸಿ ಪೂಜೆಮಾಡುತ್ತಿದ್ದ ಆ ಬ್ರಾಹ್ಮಣ ಯಾವಕಾಲದಲ್ಲೋ ವಿಧಿವಶನಾದ. ಆತನ ವಂಶಸ್ಥರೂ ಯಾರೂ ಸರಿಯಾಗಿ ಇರಲಿಲ್ಲವಾಗಿ ಸಹಜವಾಗಿ ಆ ಪ್ರದೇಶದಕ್ಕೆ ಒಲಸೆಬಂದ ಜಿ.ಎಸ್.ಬಿ ಸಮುದಾಯದ ಒಂದೆರಡು ಕುಟುಂಬಗಳು ಹನುಮನ ಪೂಜೆ-ಪುನಸ್ಕಾರಗಳನ್ನು ನೋಡಿಕೊಂಡವು. ಕಾಲಕ್ರಮೇಣ ಹನುಮ ಕುಂತಲ್ಲಿಂದಲೇ ತನ್ನ ಪರಾಕ್ರಮವನ್ನು ತೋರಿಸಿದ. ಯಾವಮಾಯೆಯಲ್ಲಿ ಆಟಬೇಕೆಂದು ಕೇಳಿದನೋ ಗೊತ್ತಿಲ್ಲ ಅಂತೂ ಆಟ ಹರಕೆಯ ರೂಪದಲ್ಲಿ ಕಾಯಂ ಆಗಿಬಿಡ್ತು.

ಯಾರೋ ತಮ್ಮ ಜೀವನದ ಸಮಸ್ಯೆಗಳನ್ನು ಮುಂದಿಟ್ಟು " ಅಪ್ಪಾ ಹನುಮಾ ನಿನಗೆ ಹರಕೆಯಾಟವಾಡಿಸಿ ದಶಾವತಾರದ ದೃಶ್ಯಗಳನ್ನು ತೋರಿಸುವೆನಪ್ಪಾ ದಯಮಾಡಿ ನಮ್ಮ ಕೋರಿಕೆ ನೆರವೇರಿಸಿಕೊಡುತ್ತೀಯಾ ಸ್ವಾಮೀ ? " ಎಂದು ಹರಕೆಮಾಡಿಕೊಂಡು ಹೋದವರಿಗೆ ಅವರ ವಾಂಛೆಗಳು ನೆರವೇರಿದವು,ಕೆಲಸಗಳು ಕೈಗೂಡಿದವು. ಅಂಥಾ ಜನ ಹರಕೆಯಾಟವನ್ನು ನಡೆಸಿಕೊಟ್ಟರು. ಅವರನ್ನು ನೋಡಿ ಮತ್ತಷ್ಟು ಮಂದಿ ಹರಕೆ ಹೊತ್ತುಕೊಂಡರು---ಪಟ್ಟಿ ಬೆಳೆಯುತ್ತಲೇ ಹೋಯಿತು. ಈಗ ನೀವು ಆಟ ಆಡಿಸಲು ಬುಕ್ ಮಾಡಿದರೆ ಪ್ರಾಯಶಃ ಎಳಬರಾದರೆ ನಿಮ್ಮ ಮುಪ್ಪಿನ ವಯಸ್ಸಿಗೆ ಅವಕಾಶ ಸಿಗಬಹುದು, ಹಳಬರಾದರೆ ಹನುಮನ ಹುಟ್ಟೂರುಸೇರಿದಮೇಲೆ ಮುಂದಿನ ತಮ್ಮ ಪೀಳಿಗೆಯವರು ಆ ಅವಕಾಶ ಪಡೆಯಬಹುದು!! ಯಾವುದಕ್ಕೂ ಹನುಮ ಕೃಪೆದೋರಬೇಕು.

ಅಲ್ಲಿನ ಆಟದ ೫ ತಿಂಗಳದ ಅವಧಿಯಲ್ಲಿ ಹುಬ್ಬಾಸಿ ಮತು ವೀರಭದ್ರ ಈ ಎರಡು ಎಕ್ಸ್ಟ್ರಾ ವೇಷಗಳು ನಿಗದಿತ ಕಾಲದಲ್ಲಿ ಬಂದುಗೋಗುತ್ತವೆ-ಅದು ಎಲ್ಲಾ ದಿನಗಳಲ್ಲೂ ಅಲ್ಲ, ಬದಲಾಗಿ ಆ ಸಂಪೂರ್ಣ ಅವಧಿಯಲ್ಲಿ ಆಟದ ಪ್ರಸಂಗಗಳು ಜೋರುಜೋರಾಗಿ ನಡೆಯುತ್ತವೆ ಎನ್ನುವ ದಿನಗಳಲ್ಲಿ ಹುಬ್ಬಾಸಿ ಬರುತ್ತಾನೆ, ಆಟಗಳ ಸೀಸನ್ ಮುಗಿಯುತ್ತಾ ಬರುವಾಗ ವೀರಭದ್ರ ಬರುತ್ತಾನೆ. ಈ ಎರಡೂ ವೇಷಗಳು ವೇದಿಕೆಯಿಂದ ಬಹುದೂರದಲ್ಲಿ ಗುರುತಿಸಿದ ಜಾಗದಿಂದ ವಿಜೃಂಭಣೆಯ ಮೆರವಣಿಗೆಯಲ್ಲಿ ಬರುತ್ತವೆ. ಈ ವೇಷಗಳನ್ನು ಕಟ್ಟಿದವರಿಗೆ ಮೈಮೇಲೆ ಆವೇಶಬರುತ್ತದೆ ಎಂಬುದೊಂದು ಕಲ್ಪನೆ ಇದೆ. ಅದು ಬರಲಿ ಬಿಡಲಿ ಇದೆಲ್ಲಾ ಒಂದು ಭಗವಂತನ ಸೇವೆ. ಹುಬ್ಬಾಸಿ ಎಂಬ ರಕ್ಕಸ ಕರಾವಳಿ-ಮಲೆನಾಡು ಪ್ರಾಂತಗಳಲ್ಲಿ ಹಿಂದೆ ಬಹಳ ಮೆರೆದಿದ್ದಬಗ್ಗೆ ದಾಖಲೆ ಇದೆ. ಬನವಾಸಿಯ ರಾಜಾ ಮಯೂರವರ್ಮ ತನ್ನ ಮಾಂಡಲಿಕರೊಡಗೂಡಿ ಆತನನ್ನು ಸದೆಬಡಿದ ಎಂಬುದು ಇವತ್ತಿಗೆ ಇತಿಹಾಸ. ಅಂತಹ ಹುಬ್ಬಾಸಿಯ ನೆನಪಿನಲ್ಲಿ ಒಮ್ಮೆ ಆ ವೇಷ ಆವೇಶಭರಿತವಾಗಿ ಹನುಮನ ಮುಂದೆ ಗದ್ದೇಬಯಲಿನಲ್ಲಿ ನಿರ್ಮಿತವಾಗಿರುವ ವೇದಿಕೆಯನ್ನೇರಿ ನಡೆದುಹೋಗುತ್ತದೆ. ಈ ಎರಡೂ ವೇಷಗಳಿದ್ದ ದಿನ ಜನ ೫-೬ ಸಾವಿರಕ್ಕೂ ಹೆಚ್ಚುಸಂಖ್ಯೆಯಲ್ಲಿ ಸೇರುತ್ತಾರೆ! ಆವೇಶ ಭರಿತವಾಗಿ ಆ ವೇಷಗಳು ಹೆಜ್ಜೆಹಾಕಿ ಖಡ್ಗ ಝಳಪಿಸಿ ಅಬ್ಬರಿಸಿ ಕೂಗಿ ಗೆಜ್ಜೆಕಾಲನ್ನು ಘಲಿರುಘಲಿರೆಂದು ಬಡಿದು ಹುಬ್ಬು ಹಾರಿಸಿ ಕೇಕೇ ಹಾಕಿಹಾಕಿ ಕೆಂಪುಕಣ್ಣನ್ನು ತಿರುವಿದಾಗ ಜನ ನಿಬ್ಬೆರಗಾಗಿ ನೋಡುತ್ತಾರೆ! ಮಕ್ಕಳ ಚಡ್ಡಿ ಒದ್ದೆಯಾಗುವುದರಲ್ಲಿ ಅನುಮಾನವಿಲ್ಲ!! ವೇಷಗಳು ಇಳಿದುಹೋದ ಬಳಿಕ ನಿಟ್ಟುಸಿರುಬಿಡುವ ಜನರೂ ಇದ್ದಾರೆ. ಇಲ್ಲೊಂಥರಾ ಭಯ-ಭಕ್ತಿಗಳ ಮಿಶ್ರಛಾಪು ! ಎದುರು ದೂರದಲ್ಲಿ ತನ್ನ ದೇವಾಲಯದಲ್ಲೇ ಕುಳಿತ ಹನುಮ ಎಲ್ಲವನ್ನೂ ದಿಟ್ಟಿಸಿ ನೋಡುತ್ತಾನೆ ಎಂಬುದು ಅನಿಸಿಕೆ. ಅದು ಹೌದೂ ಹೌದು. [ಗುಂಡಬಾಳೆಯ ಬಗ್ಗೆ ಮತ್ತೊಮ್ಮೆ ನೋಡೋಣ ಬಿಡಿ, ಇಲ್ಲದಿದ್ರೆ ನಮ್ಮ ಕಥೆ ಕಾದಂಬರಿಯಾದೀತು ! ]

ಇಂಥಾ ಗುಂಡಬಾಳೆಯಲ್ಲಿ ಆಟಗಳ ಸೀಸನ್ ಮುಗಿದು ಓಕುಳಿಯಾಡಿದಮೇಲೆ ಪ್ರತೀ ಅಮವಾಸ್ಯೆಯ ರಾತ್ರಿ ಅದೇ ರಂಗಸ್ಥಳದಲ್ಲಿ ದೆವ್ವಗಳು-ಭೂತಪ್ರೇತಗಳು ತಮ್ಮ ಸೇವೆಯ ಆಟಗಳನ್ನು ನಡೆಸುತ್ತವೆ ಎಂಬುದು ನಮ್ಮ ತಾಂಬೂಲಾನಂದರುಗಳು ಹೇಳುವ ಪುರಾಣ. ಕತ್ತಲಲ್ಲಿ ಅಕಸ್ಮಾತ್ ಎಚ್ಚೆತ್ತು ನೋಡಿದರೆ ಭೂತಗಳು ಗೆಜ್ಜೆಕಟ್ಟಿ ಕುಣಿಯುವುದು ಕಾಣಿಸುವುದಂತೆ. ಥೇಟ್ ಮನುಷ್ಯರ ರೀತಿಯಲ್ಲೇ ಪ್ರಸಂಗಗಳನ್ನು ನಡೆಸುವ ಅವುಗಳು ಏನೋ ಸಂಭಾಶಿಸುವುದು ಕುಣಿಯುವುದು ಎಲ್ಲಾ ಕಂಡರೂ ಯಾವುದೂ ಅರ್ಥವಾಗುವುದಿಲ್ಲವಂತೆ. ಒಂದೊಮ್ಮೆ ಆಗ ಯಾರದರೂ ಅಲ್ಲಿಗೇನಾದರೂ ಹೋದರೆ ಅಪಾಯ ಕಟ್ಟಿಟ್ಟದ್ದು ಎಂಬುದು ನಮ್ಮ ಹಕ್ಕೆಚಡಿ ಪುರಾಣಿಕರ ಅಂಬೋಣ.

ಹೀಗೇ ಕೆಲವು ಆಯಕಟ್ಟಿನ ಜಾಗಗಳನ್ನು ಹೆಸರಿಸುತ್ತಾ ಅವುಗಳ ಸುತ್ತಾ ಬಣ್ಣಬಣ್ಣದ ಕಥೆಗಳನ್ನು ರೋಚಕವಾಗಿ ಹೇಳುತ್ತಾ ಕೂತಿರುವಾಗ ಮಕ್ಕಳಾದ ನಮಗೆ ಒಳಗೊಳಗೇ ಅವ್ಯಕ್ತ ಭಯ, ಆತಂಕ! ಒಬ್ಬರೇ ಓಡಾಡುವಾಗಿನ ಸಂಭವನೀಯತೆಗಳ ಬಗ್ಗೆ ನೆನೆದು ಮೈನಡುಕ. ಇಂಥಾ ಪುಕ್ಕಲು ಶರೀರಿಗಳಾಗಿದ್ದ ನಾವು ಎಲ್ಲಾದರೂ ಒಂಟಿಯಾಗಿ ಬಿಡುವ ಸಾಧ್ಯತೆಗಳನ್ನು ಆದಷ್ಟೂ ತಪ್ಪಿಸಿಕೊಳ್ಳುತ್ತಿದ್ದೆವು. ಆದರೂ ಹಳ್ಳಿಯ ಜೀವನದಲ್ಲಿ ಕೊನೇಪಕ್ಷ ಓಡಾಡುವಾಗಲಾದರೂ ಒಂಟಿಯಾಗಿ ಇರಬೇಕಾಗಿ ಬರಬಹುದಾದ ಪ್ರಮೇಯಗಳು ಹೆಚ್ಚು. ಮೂರು ರಸ್ತೆ ಕೂಡುವ ಜಾಗದಲ್ಲಿ ಎಳನೀರು ಅರಿಷಿನ ಕುಂಕುಮ ಇತ್ಯಾದಿ ಏನಾದರೂ ಕಂಡರೆ ನಮ್ಮ ಪ್ರಸಾದ ಒಣಗಿ ಮೂರು ಮೂರು ದಿನ ನಮಗೆ ಕಕ್ಕಸಿಗೆ ಹೋಗುವ ಗೊಡವೆಯೇ ಇರುತ್ತಿರಲಿಲ್ಲ! ಮೇಲಾಗಿ ಚಿಕ್ಕವರಿರುವಾಗ ಕಟ್ಟಡ ರೂಪದ ಕಕ್ಕಸುಮನೆ ಇರಲಿಲ್ಲ, ನಾವೆಲ್ಲಾ ಯಾರೋ ಹೇಳಿದ್ದನ್ನು ಕೇಳಿಕೊಂಡು ’ಲಂಡನ್ನಿ’ಗೆ ಹೋಗಿಬರ್ತೇವೆ ಎನ್ನುತ್ತಾ ಹೋಗುವುದಾಗಿತ್ತು. ಲಂಡನ್ನಿಗೆ ಹೋಗುವಾಗ ಕೂಡ ಓರಗೆಯ ನಾಕಾರು ಜನ ಮಕ್ಕಳು ಸೇರಿದರೇ ಧೈರ್ಯ. ಯಾಕೆಂದರೆ ನಮ್ಮ ’ಲಂಡನ್ನು’ ಇರುವುದು ಹತ್ತಿರದ ಬೆಟ್ಟದಲ್ಲಿ ! ಬೆಟ್ಟದ ಮರಗಳ ಸಂದಿಯಲ್ಲಿ ಅವಿತು ಕೂತು ನಿರಾಳವಾಗಿ ಹೊರದೂಡಿಬಿಟ್ಟರೆ ಜಗವೇ ಸುಖಮಯ !

’ಲಂಡನ್ನಿಗೆ’ ಕೂತಾಗ ಇಲ್ಲದ ಆಲೋಚನೆಗಳು ಬರುವುದೇ ಜಾಸ್ತಿ! ಕೆಲವು ಕವಿಗಳಿಗೆ, ಕಥೆಗಾರರಿಗೆ ಎಲ್ಲಾ ಸ್ಫೂರ್ತಿ ನೀಡುವ ಸಮಯ ಅದೇ ಅಂತೆ. ನಮಗೆ ಅದು ಹಾಗಾಗಿರದೇ ದೆವ್ವಗಳ ವಿರಾಟ್ ರೂಪಗಳ ಬಗ್ಗೆ ಆಲೋಚಿಸುವ ಕಾಲವಾಗಿರುತ್ತಿತ್ತು. ದೆವ್ವಗಳು ಹೇಗೆಲ್ಲಾ ಇರಬಹುದು, ವಿಕಾರ ಮುಖ, ಹಿಂದೆಮುಂದಾದ ಕಾಲುಪಾದಗಳು, ಊದ್ದುದ್ದ ಉಗುರು ಬೆಳೆದಿರುವ ಕೈಗಳು, ಪೀಚಲು ಶರೀರದ ತುಂಬಾ ಬಿಳೀಬಟ್ಟೆ .....ಇನ್ನೂ ಏನೇನೋ ! ನೆನೆದಾಗ ಒಳಗೆ ಸ್ಟಾಕ್ ಇರುವ ಅಷ್ಟೂ ಚಾಚಿ ಹೊರಬಿದ್ದು ಹೋಗುತ್ತಿತ್ತು-ಮಲಬದ್ಧತೆಯೂ ಇಲ್ಲ ಏನೂ ಇಲ್ಲ; ಎಂಥಾ ಒಳ್ಳೇ ಔಷಧ ನೋಡಿ ! ಲಂಡನ್ನಿಗೆ ಹೋಗುವ ಕೆಲಸ ಮಳೆಗಾಲದಲ್ಲಿ ಸ್ವಲ್ಪ ಪರಿಶ್ರಮದಾಯಕವಾಗಿತ್ತು. ಶಾಲೆಯ ಸಮಯ, ಮಳೆಯಿರದ ಸಮಯ, ಕತ್ತಲೆಯಾಗದ ಸಮಯ, ಜೊತೆಗಾರರು ಸಿಗುವ ಸಮಯ ---ಈ ಎಲ್ಲಾ ಸಮಯಗಳ ಅವಲಂಬನೆ ಅವಲೋಕನ ನಡೆದೇ ಲಂಡನ್ ಕೆಲಸ ಆಗಬೇಕಾಗುತ್ತಿತ್ತು. ಆಮೇಲೆ ನಾವೆಲ್ಲಾ ಸುಮಾರು ಹೈಸ್ಕೂಲಿಗೆ ಹೋಗುವ ಹೊತ್ತಿಗೆ ನಿಧಾನವಾಗಿ ಕಕ್ಕಸುಮನೆಗಳು ತಲೆ ಎತ್ತಿದವು. ಆದರೂ ಹಳೆತಲೆಯಾಗಿದ್ದ ಈಗ ಶಿವನಪಾದ ಸೇರಿರುವ ತಲಗೆರೆ ವೆಂಕಟ್ರಮಣ ಭಟ್ಟರು ಹೇಳಿದ್ದಿಷ್ಟು :

" ನೋಡೋ ಯಾರಾದ್ರೂ ಹೋದ ಜಾಗದಲೆಲ್ಲಾ ಮತ್ತೊಬ್ರು ಹೋಪ್ಲಾಗ ಮಾರಾಯಾ, ಒಂದು ಬಾಣ ಹೊಡದ್ರೆ ಎಷ್ಟು ದೂರ ಹೋಗ್ತೋ ಅಷ್ಟು ದೂರ ಹೋಗಿ ಮಣ್ಣಿನಲ್ಲಿ ಸಣ್ಣ ಕುಳಿ ತೆಗೆದು ಅಲ್ಲಿ ಕಕ್ಕಸುಮಾಡಿ ಮೇಲಿಂದ ಮಣ್ಣುಮುಚ್ಚಿ ತೊಳೆದುಕೊಳ್ಳವು. ಕೈಗೆ ಕಾಲಿಗೆ ಹುತ್ತದ ಮಣ್ಣಿನ್ನು ಹಚ್ಚಿ ತೊಳೆದುಕೊಂಡು ೧೦-೧೨ಸಲ ಬಾಯಿ ಮುಕ್ಕಳಿಸಿ ತೂಪವು. ಆಗಮಾತ್ರ ಅದು ಸರಿಯಾದ ಕೆಲ್ಸ, ಅಲ್ದಿದ್ರೆ ದೋಷ ತಟ್ತು " ಕೊನೇವರೆಗೂ ಕಟ್ಟಿದ ಕಕ್ಕಸುಮನೆಯನ್ನು ಬಳಸುವ ಗೋಜಿಗೆ ಅವರು ಹೋಗಲಿಲ್ಲ; ಬೇಕಾಗಿಯೂ ಬರಲಿಲ್ಲ. ಧೋ ಎಂದು ಸುರಿವ ಮಳೆಗಾಲದಲ್ಲಿ ಸೂರ್ಯ ಕಾಣುವುದೇ ಅಪರೂಪವಾಗಿರುವಾಗ ಒಂದು ಬಾಣ ಹೊಡೆದರೆ ಅದು ತಲ್ಪುವಷ್ಟು ದೂರ ಇರಲಿ, ಪರ್ಯಾಯ ವ್ಯವಸ್ಥೆ ಇದ್ದರೆ ಲಂಡನ್ನಿಗೆ ಹೋಗುವ ಬವಣೆಯೇ ಇರದಿದ್ದರೆ ಎಂಬ ಅಲೋಚನೆಯೂ ಬರುತ್ತಿತ್ತು.

ಮಸುಕಲ್ಮಕ್ಕಿ ಜಟ್ಗ, ಹರ್ನಮೂಲೆ ಜಟ್ಗ ಇಂಥಾ ಜಟ್ಗಗಳೇನೂ ಕಮ್ಮಿ ಅಲ್ಲ ಎಂಬ ಮಾತು ’ತಂಬೂರಿದಾಸರ’ ಬಾಯಿಂದ ಅದಾಗಲೇ ಬಂದಿದ್ದಾಗಿತ್ತು. ರಾತ್ರಿ ಜಟ್ಗನ ಬಲೆಯಲ್ಲಿ ಸದ್ದಾಗುವುದನ್ನು ಕೇಳಬೇಕಂತೆ ! ಚಿತ್ರ-ವಿಚಿತ್ರ ಸದ್ದುಗಳು ಬರುತ್ತವಂತೆ. " ಕುಪ್ಪಯ್ಯ ಶೆಟ್ಟರ ಮಗ ಎಲ್ಲಿಗೋ ಹೋದೋನು ಸರಿರಾತ್ರಿ ಹನ್ನೆರಡು ಗಂಟೆಗೆ ಆ ದಾರಿಯಾಗಿ ಬರುವಾಗ ವಾಹನ ನಿಲ್ಲಿಸಿ ಇಳಿದು ನೋಡಿದನಂತೆ, ನೋಡಿದ್ದೊಂದು ಗೊತ್ತಿ ಬಿಟ್ಟರೆ ಎಚ್ಚರತಪ್ಪಿ ಬಿದ್ದುಬಿಟ್ಟಿದ್ದನಂತೆ. ಅದೆಷ್ಟೋ ಹೊತ್ತಿನ ನಂತರ ಎಚ್ಚರವಾದಾಗ ಯಾರೋ ತಂದು ವಾಹನದಲ್ಲಿ ಹಾಕಿದ್ದರಂತೆ. ಮಾರನೇ ದಿನದಿಂದ ವಾರದದಿನ ಮೇಲೇಳಲೇ ಇಲ್ವಂತೆ.....ಜ್ವರಾ ಅಂದ್ರೆ ಜ್ವರ...ಕತ್ತುರ್ಯೋಜ್ವರ...ಆಮೇಲೆ ಪೂಜೆಕೊಡ್ತೇನೆ ಅಂತ ಹೇಳ್ಕೊಂಡ್ ಮೇಲೆ ಆರಾಮಾಯ್ತಂತೆ " ಇದನ್ನೆಲ್ಲಾ ಕೇಳುವಾಗ ಯಾವ ಮಕ್ಕಳಿಗೆ ಮನಸ್ಸಲ್ಲಿ ಅಲೋಚನೆ ಬರದೇ ಹೋಗುತ್ತದೆ ಹೇಳಿ?

ಹೀಗೇ ಒಮ್ಮೆ ಹಾಲು ತರಲು ಕಬ್ಬಿನಗದ್ದೆಗೆ ಹೋಗಿದ್ದೆ. ಕಬ್ಬಿನಗದ್ದೆ ಎಂದರೆ ಅದು ಈಗ ಕಬ್ಬು ಬೆಳೆಯುವ ಗದ್ದೆಯಲ್ಲ ಬದಲಿಗೆ ಈಗಿರುವುದು ಅಡಕೆ ತೋಟ ಮತ್ತು ಅದರ ಪಕ್ಕ ಎತ್ತರದಲ್ಲಿ ಒಂದು ಮನೆ. ಹಿಂದ್ಯಾವಗ್ಲೋ ಕಬ್ಬು ಬೆಳೆದ ಪ್ರದೇಶ ಅದಾಗಿತ್ತಂತೆ ಅದ್ಕೇ ಆಗಿಂದ ಚಾಲ್ತಿಯಲ್ಲಿರುವ ಹೆಸರು ಕಬ್ಬಿನಗದ್ದೆ. ಕಬ್ಬಿನಗದ್ದೆಯ ಆ ಮನೆಗೆ ನಮ್ಮನೆಯಿಂದ ಒಂದೂವರೆ ಫರ್ಲಾಂಗು ದೂರ. ಸಾಗುವ ಹಾದಿಯ ಒಂದೆ ಅಡಕೆ ತೋಟದ ಸಾಲು, ಇನ್ನೊಂದೆಡೆ ಬೆಟ್ಟ. ನಡುವೆ ಇರುವ ಕಾಲುದಾರಿಯಲ್ಲಿ ನಡೆದುಹೋದರೆ ಕಬ್ಬಿನಗದ್ದೆ ಸೇರಬಹುದು. ಹಾದಿಯ ಮಧ್ಯೆ ಒಂದಷ್ಟು ದೂರ ಯಾವುದೇ ಜನವಸತಿ ಸಿಗುತ್ತಿರಲಿಲ್ಲ. ಅದೂ ಮಳೆಗಾಲದ ದಿನಗಳಲ್ಲಿ ಅಲ್ಲಲ್ಲಿ ಹರಿಯುವ ನೀರಿನ ಝರಿಗಳ ಸದ್ದುಬಿಟ್ಟರೆ ಬೆಟ್ಟದ ಹಕ್ಕಿಗಳ ಕಲರವವೋ ಎಂಥದೋ ನಮಗದೆಲ್ಲಾ ಅಂದು ಬೇಡವಗಿತ್ತು;ಬಚಾವದರೆ ಸಾಕಿತ್ತು ಅಷ್ಟೇ ! " ಹಾಲು ತಂದ್ಯನೋ ? " ಎಂದು ಕೇಳುವ ಹಿರಿಯರಿಗೆ ಹೇಗಾದರೂ ಮಾಡಿ ತಂದುಕೊಡಬೇಕಾಗಿತ್ತು; ಉಪಾಯ ಇರಲಿಲ್ಲ. ನಿರ್ವಾಹವಿಲ್ಲದೇ ಓಡುತ್ತಾ ದಾರಿಗುಂಟ ಕಲ್ಲಿಗೆ ಜಪ್ಪಿ ಗಾಯಗೊಂಡ ಕಾಲುಬೆರಳನ್ನು ಉಜ್ಜುತ್ತಾ ಮತ್ತೆ ತಿರುತಿರುಗಿ ಬೆನ್ನತ್ತಿ ಏನಾದರೂ ಬಂತೋ ಎಂದು ನೋಡಿಕೊಳ್ಳುತ್ತಾ ಸಾಗುವ ನಮ್ಮ ಪಾಡು ನಮಗೆ!

ಅದೂ ಅಮಾವಾಸ್ಯೆಯ ರಾತ್ರಿಯಲ್ಲಿ ಜಟ್ಗ, ಕೀಳು ಎಲ್ಲಾ ಸೇರಿ ಭಜನೆ ಹಾಡುತ್ತಾ ಶಂಖ ಊದುತ್ತಾ ಜಾಗಟೆ ಪಂಚವಾದ್ಯಗಳ ಸಮೇತ ತಮ್ಮ ಜಾಗದಿಂದ ಅದೇ ದಾರಿಯಲ್ಲಿ ಸಾಗಿ ಮತ್ತೊಂದು ಜಾಗಕ್ಕೆ ತೆರಳುತ್ತಿದ್ದವಂತೆ. " ಸುಳ್ಳು ಹೇಳಡ ನೀನು ಕಂಡವರಿದ್ದೊ " ಎಂದು ಹೇಳಿದ್ದ ’ಪುರಾಣಿಕರ’ ಮಾತು ಆಗಾಗ ಜ್ಞಾಪಕಕ್ಕೆ ಬರುತ್ತಿರುತ್ತಿತ್ತು. ಅಕರಾಳ ವಿಕರಾಳ ಮುಖ, ರುಂಡವಿಲ್ಲದ ಶರೀರ ಕುದುರೆಮೇಲೆ ಕುಳಿತು ಓಡುವುದು ಇತ್ಯಾದಿ ವಿಚಿತ್ರ ಕಲ್ಪನೆಗಳನ್ನು ನಮ್ಮಲ್ಲಿ ಸೃಜಿಸಿ ನಮ್ಮ ಜಂಘಾಬಲವೇ ಉಡುಗಿಹೋಗುವಂತೇ ಮಾಡಿದ್ದ ಪುರಾಣಿಕ ಜನ ರಾತ್ರಿಯವೇಳೆ ಮನೆಯಿಂದ ಆಚೆಬಂದು ಮೂತ್ರವಿಸರ್ಜಿಸಲೂ ಆಗದ ಇಕ್ಕಟ್ಟಿನಲ್ಲಿ ನಮ್ಮನ್ನು ಸಿಗಿಸಿಹಾಕಿದ್ದರು! ಆಗೆಲ್ಲಾ ಮನೆಯೊಳಗೇ ಶೌಚಾಲಯ ಬಚ್ಚಲುಮನೆ ಇರಲಿಲ್ಲವಾಗಿ ಒಂದಕ್ಕೋ ಎರಡಕ್ಕೋ ಅಂತೂ ಮನೆಯ ಹೊರಗಡೆ ತೆರಳಲೇ ಬೇಕಾಗಿತ್ತು. " ನಡೆ ಇಪ್ಪ ಜಾಗಕ್ಕೆ ರಾತ್ರಿ ಹೋಪ್ದು ಒಳ್ಳೇದಲ್ಲ, ಅವ್ಕೆ ತೊಂದ್ರೆಕೊಟ್ಟಂಗಾಗಿ ಅವು ತಿರುಗಿ ಬೀಳ್ತೊ " ಎಂದಿದ್ದ ಆ ಜನರ ಮಾತು ಮನದಲ್ಲಿ ಹಗಲಿಗೂ ಪ್ರತಿಧ್ವನಿಸುತ್ತಿತ್ತು.

ಒಂದು ದಿನ ಹಾಲು ತರುವಾಗ ಹಿಂದಿನಿಂದ ಬಸಕ್ಕನೆ ಕಲ್ಲೊಂದು ಬಂದು ಬಿತ್ತು. ಶಿವನೇ ಶ್ರೀರಾಮಚಂದ್ರ, ಇಡಗುಂಜಿ ಮಾಗಣಪತಿ, ಗುಂಡಬಾಳೆ ಹನ್ಮಂತ,ಮುಗ್ವಾ ಸುಬ್ರಹ್ಮಣ್ಯ.....ಕ್ಷಣಮಾತ್ರದಲ್ಲಿ ಅಷ್ಟೂ ದೇವರುಗಳು ನೆನಪಾಗಿದ್ದರು. " ನನ್ನ ರಕ್ಷಣೆ ನಿನ್ನ ಹೊಣೆಯಪ್ಪಾ " ಎಂದು ಪ್ರಾರ್ಥಿಸಿದ್ದೇ ಪ್ರಾರ್ಥಿಸಿದ್ದು ಹೊರತಾಗಿ ತಿರುಗಿ ನೋಡುವ ಯಾವುದೇ ಧೈರ್ಯ ಇರಲಿಲ್ಲ. ಇನ್ನೇನು ಓಡಿ ಹೇಗಾದರೂ ತಪ್ಪಿಸಿಕೊಳ್ಳಲು ಸಾಧ್ಯವೋ ನೋಡಬೇಕು ಎನ್ನುವಷ್ಟರಲ್ಲಿ ಜೋರಾಗಿ ನಗು ಕೇಳಿಸಿತು! ಮತ್ತೂ ಕಂಗಾಲು ಇನ್ನೂ ಕಂಗಾಲು ! ಮುಂದೆ ಇರುವುದು ಮೆಟ್ಟಿಲುಗಳ ದಾರಿ, ಮೆಟ್ಟಿಲು ತಪ್ಪಿ ಕೆಳಗೆ ಬಿದ್ದರೆ ಕೆಳಗಡೆ ಇರುವ ಶಿಲೆಕಲ್ಲುಗಳ ರಾಶಿಗೆ ತಲೆಬಡಿದರೆ ಪರಿಣಾಮ ಏನು ಎಂದು ಹೇಳುವುದು ಕಷ್ಟ. ಹೇಗೂ ಸಾಯುವುದೇ ಎಂದುಕೊಂಡು ಶ್ರೀಧರಸ್ವಾಮಿಗಳನ್ನು ನೆನೆಯುತ್ತಾ ತಿರುಗಿ ನೋಡಿದರೆ ಆಚೆಮನೆ ಮಾಚಣ್ಣ ನಗುತ್ತಾ ನಿಂತಿದ್ದ ! ಆತನಿಗೆ ಮಕ್ಕಳನ್ನು ಹೆದರಿಸಿ ಗೋಳುಹುಯ್ದುಕೊಳ್ಳೋದು ಹವ್ಯಾಸ. ಅದ್ರಲ್ಲೂ ನನ್ನಂಥಾ ಪರದೇಶಿ ಸಿಕ್ಕಿದ್ದಕ್ಕೆ ಬಾಳ ಮಜವಾಗಿತ್ತು ಆತನಿಗೆ. ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ!

ಇಂದಿಗೂ ಊರಿಗೆ ಹೋದಾಗ ದಿನವೆರಡು ತಂಗಲು ಅವಕಾಶ ಸಿಕ್ಕರೆ ಆ ಜಾಗಗಳಿಗೆ ಹೋಗುತ್ತೇನೆ. ಜಾಗದ ರೂಪಗಳು ಬದಲಾದರೂ ನನ್ನ ನೆನಪಲ್ಲಿ ಹಾಗೇ ಉಳಿದಿವೆ. ಅಂದಿನ ದಿನಗಳ ಪೇಚಾಟಗಳನ್ನು ನೆನೆದು ನಗುಬರುತ್ತದೆ. ನನ್ನಂಥಾ ಮಕ್ಕಳು ಈಗ ಯಾರಾದರೂ ಹಾಗೇ ಅದೇ ಸ್ಥಿತಿಯಲ್ಲಿ ಇರಬಹುದೇ ಎಂದುಕೊಳ್ಳುತ್ತೇನೆ. ಜಟ್ಗಗಳು ಸ್ವಲ್ಪ ಕಾಯಿದೆ ಬದಲಿಸಿದ ಹಾಗಿದೆ! ಅವುಗಳ ಬಗ್ಗೆ ಪುರಾಣಕೊರೆಯಲು ಜನರಿಗೆ ಸಮಯ ಇರುವುದಿಲ್ಲವೋ ಏನೋ ! ಅಂತೂ ಪೂಜೆ-ಪುನಸ್ಕಾರಗಳಲ್ಲಿ ಬದಲಾವಣೆ ಇಲ್ಲ. ವಾದ್ಯದ ಮೇಲೆ ಓಡಾಡುವ ’ನಡೆ’ ಬಗ್ಗೆ ಜಾಸ್ತಿ ಮಾತು ಕೇಳಿಬರುವುದಿಲ್ಲ.

Friday, September 16, 2011

" ತಮ್ಮಾ ವಿಶೂ, ಜನರಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಮಾಡುತ್ತೀಯಾ ? "


" ತಮ್ಮಾ ವಿಶೂ, ಜನರಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಮಾಡುತ್ತೀಯಾ ? "

ಕಾರಿರುಳ ಕತ್ತಲಲ್ಲಿ ಜೀರುಂಡೆಗಳ ಕೂಗು, ಬಾವಲಿಗಳ ಹಾರಾಟ, ಕಾಡುಪ್ರಾಣಿಗಳ ಸರಸರ ಸಂಚಲನ, ಅಲ್ಲಲ್ಲಿ ನರಿಗಳ ಊಳು, ಕರಡಿಗಳೂ ಇದ್ದಿರಬಹುದಾದ ಪರಿಸರ-ಗೊತ್ತಿಲ್ಲದ ಸಂಗತಿ ! --ಇಂಥಾ ಮಣ್ಣರಸ್ತೆಯಲ್ಲಿ ಯಾವ ಬೆಳಕಿನ ಸಹಾಯವೂ ಇಲ್ಲದ ಆ ಕತ್ತಲಲ್ಲಿ ಬಾಳದೀವಿಗೆಯಾದ ಜ್ಞಾನನದೀವಿಗೆಯನ್ನು ಬೆಳಗುವ ಸಲುವಾಗಿ, ವ್ಯಾಸಂಗಮಾಡುತ್ತಿರುವ ವಿದ್ಯಾಲಯಕ್ಕೆ ತನ್ನ ಓದಿನಲೆಕ್ಕದ ಹಣಪಾವತಿಸುವ ಸಲುವಾಗಿ ಆ ಹಣವನ್ನು ಪಡೆಯಲು ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ನಡೆದಿದ್ದ ವಿದ್ಯಾರ್ಥಿಯ ಮನದಲ್ಲಿ ಕಠಿಣ ನಿರ್ಧಾರವೊಂದಿತ್ತು---ತಾನು ಪ್ರಯತ್ನಿಸಿ ಹಲವರ ಬಾಳಿಗೆ ಬೆಳಕಾಗುವುದು ! ಅದೇ ದೃಢವಿಶ್ವಾಸ ಅದೇ ಅಚಲ ನಂಬಿಕೆ ಅದೇ ಸಾಧಿಸುವ ಛಲ ಹುಡುಗನನ್ನು ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೂ ಅಲ್ಲಿಂದ ಮರಳಿ ಬೆಂಗಳೂರಿಗೂ ನಡೆದೇ ಸಾಗುವಂತೇ ಮಾಡಿತ್ತು. ವಿದ್ಯಾರ್ಜನೆಗೆ ಮನೆಯಲ್ಲಿ ಪಡೆದ ಶುಲ್ಕದ ಹೊರತಾಗಿ ಬಿಡಿಗಾಸೂ ಇಲ್ಲದ ಬಡತನಕ್ಕೆ ಆತ ಮರುಗಲಿಲ್ಲ, ಬದಲಾಗಿ ಅದರಿಂದ ನೇರಮಾರ್ಗದಲ್ಲಿ ಬಿಡುಗಡೆ ಬಯಸಿದರು, ಯೋಚಿಸಿದರು, ಯೋಜಿಸಿದರು, ಬೆಳೆದರು, ಹಲವರನ್ನು ಬೆಳೆಸಿದರು ಮತ್ತು ಸ್ವತಃ ತನ್ನ ಜೀವನವನ್ನೇ ದೇಶಕ್ಕಾಗಿ ರಾಜ್ಯಕ್ಕಾಗಿ ದುಡಿಸಿದರು ! ಅಂತಹ ಭಾರತದ ಸುಪುತ್ರ ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯನವರು ಹುಟ್ಟಿ ನೂರೈವತ್ತು ವರ್ಷಗಳು ಕಳೆದುಹೋದವು !!

ಜನಸಾಮಾನ್ಯರಾದ ನಾವು ಜಲಪಾತವನ್ನು ಕಂಡರೆ " ಆಹಾಹಾ ಎಂತಹ ಸೌಂದರ್ಯ " ಎನ್ನುತ್ತಾ ಯಾರೋ ತಯಾರಿಸಿದ ಡಿಜಿಟಲ್ ಕ್ಯಾಮರಾ ಹಿಡಿದು ಕ್ಲಿಕ್ಕಿಸುತ್ತಿರುತ್ತೇವೆ ಬಿಟ್ಟರೆ ಅಂತಹದ್ದೇ ಆದ ಜೋಗ ಜಲಪಾತವನ್ನು ಕಂಡಾಗ ಈ ಮಹಾತ್ಮ ಹೇಳಿದ್ದು " ವ್ಹಾಟ್ ಎ ವೇಸ್ಟ್ " ! ಹರಿದು ಪೋಲಾಗುವ ನೀರಿನ ಶಕ್ತಿಯನ್ನೇ ಬಳಸಿ ವಿದ್ಯುತ್ತನ್ನು ತಯಾರಿಸುವ ಅತಿ ದೊಡ್ಡ ಮಟ್ಟದ ಯಂತ್ರಾಗಾರವನ್ನು ರೂಪಿಸಿದ ಸ್ಥಾಪಿಸಿದ ಆ ಮನುಷ್ಯ ಸ್ವತಃ ಅತ್ಯಂತ ಸಣಕಲು ಶರೀರಿ ಎಂಬುದನ್ನು ನೋಡಿದಾಗ ನಾವೆಷ್ಟು ದಂಗಾಗುತ್ತೇವೆ ಅಲ್ವೇ ? ಈ ರಾಜ್ಯದ ಯಾ ದೇಶದ ಯಾರನ್ನೇ ಮರೆತರೂ ವಿಶ್ವೇಶ್ವರಯ್ಯನವರನ್ನು ಮರೆಯಲು ಮತ್ತು ಅವರ ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಯಾಕೆಂದರೆ ದೀಪಕ್ಕೆ ’ಇದು ದೀಪ ಇರುತ್ತದೆ ’ ಎಂದು ಯಾರೂ ಹೊಸದಾಗಿ ಬೋರ್ಡುಹಾಕುವುದು ಬೇಕಾಗುವುದಿಲ್ಲ!

ಬಡತನದಲ್ಲಿ ಕಷ್ಟಪಟ್ಟು ಎಲ್ಲೆಲ್ಲೋ ಹೋಗಿ, ರಾಜರ ಕಾಲದ ಬೀದಿ ದೀಪದಲ್ಲಿ[ಹರಳೆಣ್ಣೆ ದೀಪ] ಓದಿ ಸಿವಿಲ್ ವಿಭಾಗದಲ್ಲಿ ತಾಂತ್ರಿಕ ಪದವಿಯನ್ನು ಪೂರೈಸಿದ ಶ್ರೀಯುತರು ಮೈಸೂರು ರಾಜ್ಯದಲ್ಲಿ ಅಂದಿಗೆ ಇರುವ ಕೊರತೆಗಳನ್ನು ನೀಗಿಸಲು ಯೋಜನೆಗಳನ್ನು ತನ್ನೊಳಗೇ ನಿಯೋಜಿಸಿಕೊಂಡರು. ಆ ಸಮಯದಲ್ಲಿ ಹಿ ಈಸ್ ಒನ್ ಮ್ಯಾನ್ ಆರ್ಮಿ ! ಕರ್ನಾಟಕಕ್ಕೆ ಕುಡಿಯುವ ನೀರಿನ, ವಿದ್ಯುತ್ತಿನ್ನ ಅವಶ್ಯಕತೆಯಿತ್ತು. ಹಡೆದ ಅಮ್ಮ ಮನೆಯಲ್ಲಿ " ತಮ್ಮಾ ವಿಶೂ ಜನರಿಗೆ ಕುಡಿಯಲು ನೀರನ್ನು ಪೂರೈಸುವ ಯಾವುದಾದರೂ ಕೆಲಸವನ್ನು ಮಾಡಪ್ಪಾ " ಎಂದು ಹರಸಿದ್ದರು, ಹಡೆದಮ್ಮನ ಹರಕೆಯ ಫಲ ಕಾವೇರಿ ನದಿಗೆ ಸೇತುವೆಯ ನಿರ್ಮಾಣ! ಕನ್ನಂಬಾಡಿಕಟ್ಟೆ ನಿರ್ಮಾಣಕ್ಕೂ ಮುನ್ನ ಮೈಸೂರಿಗೆ ತೆರಳಿದ್ದ ಅವರನ್ನು ಕಂಡ ರಾಜರಿಗೆ ಅನಿಸಿದ್ದು ’ಯಾವನೋ ಪೋರ ನದಿಗೆ ಗೋಡೆ ಕಟ್ಟಿ ನೀರು ಶೇಖರಿಸುತ್ತಾನಂತೆ ಎಲ್ಲಾದರೂ ಉಂಟೇ ? ’ ಎಂಬಂಥದು. ಆದರೂ ತಮ್ಮ ಸಹಜ ರಾಜಸ ಮನೋವೃತ್ತಿಯಿಂದ ರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು " ಆಗಲಿ ತಮ್ಮಾ ಇದೋ ಹಣ ನೀಡುತ್ತೇನೆ ಆದರೆ ಮತ್ತೆ ಕೇಳಬೇಡ-ಇಷ್ಟರಲ್ಲೇ ಮುಗಿಸಬೇಕು ಅಥವಾ ನಿಲ್ಲಿಸಿಬಿಡಬೇಕು ಅಲ್ಲದೇ ಇದು ಮೇಲಾಗಿ ಮೈಸೂರು ರಾಜ್ಯದ ಪ್ರಜೆಗಳ ಮಾನಾಪಮಾನದ ಪ್ರಶ್ನೆ ಅದನ್ನೇ ಪಣವಾಗಿಸಿದ್ದೇನೆ ಕಟ್ಟು ಹೋಗು " ಎಂದು ಹೇಳಿಬಿಟ್ಟರಂತೆ ! ಕಟ್ಟೆ ಪೂರ್ತಿಯಾಗುವುದಕ್ಕೂ ಮುನ್ನ ಹಣ ಖಾಲಿಯಾಯಿತು. ಮತ್ತೆ ರಾಜರನ್ನು ಕಂಡಿದ್ದಾಯ್ತು. ರಾಜರು ನೋಡುತ್ತಿದ್ದಂತೆಯೇ

" ಇನ್ನು ಹಣಕೊಡಲು ಸಾಧ್ಯವಿಲ್ಲ " ಎಂದುಬಿಟ್ಟರು.

" ಹಣವಲ್ಲ ಸ್ವಾಮೀ, ಸದ್ಯಕ್ಕೆ ಕನ್ನಡನಾಡಲ್ಲಿ ಮದ್ಯದ ಅಂಗಡಿಗಳಿಗೆ ಅನುಮತಿಯಿಲ್ಲ, ನಮ್ಮ ಕಟ್ಟೆ ಕಟ್ಟುವ ಆ ಪ್ರದೇಶದಲ್ಲಿ ೫-೬ ಮದ್ಯದ ಅಂಗಡಿಗಳನ್ನು ಇಡಲು ಅನುಮತಿ ಬೇಕು "

" ಅಲ್ಲಯ್ಯಾ ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಯಾವ ಸಂಬಂಧವಯ್ಯಾ ? "

" ಮಹಸ್ವಾಮೀ, ಕಟ್ಟೆ ಕಟ್ಟುವ ಕೂಲಿ ಕೆಲಸದವರು ಶನಿವಾರದ ಸಂಬಳ ಪಡೆದು ನೆರೆರಾಜ್ಯವಾದ ತಮಿಳು ಪ್ರಾಂತದಲ್ಲಿರುವ ಸೆರೆ ಅಂಗಡಿಗಳಿಗೆ ಹೋಗಿ ಅಲ್ಲಿ ಕುಡಿದು ಕಾಲಹರಣಮಾಡುತ್ತಾರೆ ಮತ್ತು ಸೋಮವಾರದ ತನಕ ನಮಗೆ ಅವರು ಮರಳಿ ಸಿಗುವುದಿಲ್ಲ. ಅವರು ದುಡಿದ ಹಣ ಇಲ್ಲೇ ಈ ರಾಜ್ಯದ ಅಂಗಡಿಯನ್ನೇ ಸೇರಿದರೆ ಅದೇ ಹಣವನ್ನು ಮರುವಿನಿಯೋಗಿಸುವುದರ ಜೊತೆಗೆ ಅವರನ್ನೂ ಇಲ್ಲೇ ಇರಿಸಿಕೊಂಡು ಜಾಸ್ತಿ ಕಾಲಹರಣವಾಗದಂತೇ ಬೇಗ ಮುಗಿಸಲು ಅನುಕೂಲವಾಗುತ್ತದೆ "

ರಾಜರು ತಲೆದೂಗಿದರು ! ಕನ್ನಂಬಾಡಿ ಎದ್ದು ನಿಂತಿತು, ಹಲವರಿಗೆ ಅನುಕೂಲವಯಿತು.

ಅವರು ಬದುಕಿದ್ದ ಕಾಲಘಟ್ಟದಲ್ಲೇ ಒಮ್ಮೆ ಕೃಷ್ಣರಾಜಸಾಗರ ಬತ್ತಿಹೋಯಿತು! ಜನರೆಲ್ಲಾ ಬೊಬ್ಬಿಟ್ಟರು, ಹಲವು ಮೇಧಾವಿಗಳು " ಏನು ಮಾಡೋದು ವಿಶ್ವೇಶ್ವರಯ್ಯನೋರೇ ? " ಎನ್ನುತ್ತಾ ಬಂದರು. ಆಗ ನಿಧಾನವಾಗಿ ಸರ್ ನೀಡಿ ಉತ್ತರ ಒಂದೇ " ಇದು ಸಕಾಲ, ದೇವರೇ ನೀಡಿದ್ದು-ಹಾಗೆಲ್ಲಾ ಮತ್ತೆ ಮತ್ತೆ ಲಭಿಸುವುದಿಲ್ಲ, ಹೋಗಿ ಜಲಾಶಯದ ಹೂಳನ್ನು ತೆಗೆಸಿಬಿಡಿ " !

೨೦೦೪ರ ಬೇಸಿಗೆಯಲ್ಲೂ ಜಲಾಶಯ ಖಾಲೀ ಆಗಿತ್ತು, ಆದರೆ ಹೂಳೆತ್ತುವ ಯಾವುದೇ ಸಾಹಸಕ್ಕೆ ಯೋಜನೆಗಳಿರಲಿ ಜಾಸ್ತಿ ನೀರು ನಿಂತರೆ ಒತ್ತಡದಿಂದ ಶತಮಾನದಷ್ಟು ಹಳತದ ಕಟ್ಟೆ ಒಡೆದರೆ ಎಂಬ ಹೆದರಿಕೆಗೆ ಯಾವ ರಾಜಕಾರಣಿಯೂ ಯಾವ ಎಂಜಿನೀಯರೂ ಮನಸ್ಸುಮಾಡಲಿಲ್ಲ! ಸರಕಾರಕ್ಕೇ ಸವಾಲು ಎಸೆಯುವ ಛಾತಿ ಇದ್ದುದು ಒಬ್ಬರಲ್ಲೇ ಅದು ಆಗಿಹೋಗಿರುವ ನಮ್ಮ ವಿಶ್ವೇಶ್ವರಯ್ಯನವರಲ್ಲಿ ಮಾತ್ರ!

ಮೈಸೂರಿನ ದಿವಾನರಾಗಿ ನೇಮಕಗೊಳ್ಳುವ ಮುನ್ನಾದಿನ ಹತ್ತಿರದ ಬಂಧು-ಮಿತ್ರ-ಆಪ್ತೇಷ್ಟರನ್ನು ಕರೆದು ಅವರು ಹೇಳಿದ್ದೇನು ಬಲ್ಲಿರೋ ? " ನಾಳೆಯಿಂದ ಮಹಾರಾಜರು ನನಗೆ ಅತ್ಯಂತ ದೊಡ್ಡ ಜವಾಬ್ದಾರಿಯೊಂದನ್ನು ಕೊಡಲಿದ್ದಾರೆ. ನನ್ನ ಹೆಸರನ್ನು ಬಳಸಿಕೊಂಡು ಅದನ್ನು ಎಲ್ಲೂ ದುರುಪಯೋಗಮಾಡದಂತೇ ಇರಿ ಎನ್ನಲು ನಿಮ್ಮನ್ನೆಲ್ಲಾ ಕರೆದಿದ್ದೇನೆ " ಹೇಳಿದ್ದು ಮಾತ್ರವಲ್ಲ ದಿವಾನಖಾನೆಯಿಂದ ಹಿಡಿದು ರಾಜರ ಸರಕಾರದ ಯಾವುದೇ ಅಂಗಗಳಲ್ಲೂ ತಮ್ಮ ಕುಟುಂಬ-ಬಳಗದ ಯಾರಿಗೂ ತನ್ನ ಪ್ರಭಾವದಿಂದ ನೌಕರಿ ಕೊಡಿಸುವ ಸರ್ಕಸ್ಸು ಮಾಡಲಿಲ್ಲ. ಪ್ರತಿಭಾನ್ವಿತರಿಗೆ ಎಲ್ಲಿದ್ದರೂ ಆದ್ಯತೆಯಿದೆ ಎಂಬುದು ಅವರ ಅನಿಸಿಕೆಯಾಅಗಿತ್ತು, ಅಭಿಪ್ರಾಯವಾಗಿತ್ತು.

ಸರಕಾರದ ಬೇರೇ ವಿಭಾಗದಲ್ಲಿ ಕೆಲಸಮಡುತ್ತಿರುವಾಗ ಒಮ್ಮೆ ಮಹಾರಾಜರು ಅವರನ್ನು ಕರೆದು
" ವಿಶ್ವೇಶ್ವರಯನೋರೇ, ನೀವು ಸ್ಥಾಪಿಸಿದ ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಈಗ ನಷ್ಟದಲ್ಲಿ ನಡೆಯುತ್ತಿದೆಯಂತೆ ಅದಕ್ಕೇನಾದರೂ ಮಾಡಲು ಸಾಧ್ಯವೇ ? " ಎಂದರು. ಅಲ್ಲಿಗೆ ತೆರಳಿ ಅಲ್ಲಿನ ನ್ಯೂನತೆಗಳನ್ನು ಅವಲೋಕಿಸಿದ ಸರ್ ಎಂ.ವಿ ನಷ್ಟ ಭರಿಸುವ ಹಲವು ಮಾರ್ಗಗಳನ್ನು ತೋರಿಸಿಕೊಟ್ಟರಲ್ಲದೇ ಸ್ವತಃ ತಾನೇ ನಿಂತು ಅಮೇರಿಕಾದಂತಹ ರಾಷ್ಟ್ರಕ್ಕೆ ಕಬ್ಬಿಣ-ಉಕ್ಕು ಪೂರೈಸುವ ದೊಡ್ಡ ಆರ್ಡರ್ ಪಡೆದು ನಷ್ಟವನ್ನು ನಿವಾರಿಸಿಯೂ ಬಿಟ್ಟರು!

ವಿದೇಶವೊಂದರಲ್ಲಿ ಕನ್ಸಲ್ಟಂಟ್ ಆಗಿ ಮುದಿಪ್ರಾಯದ ಎಂಬತ್ತರಲ್ಲಿ ಭೇಟಿ ನೀಡಿದ್ದಾಗ, ಅಲ್ಲಿಯೂ ಯಾವುದೋ ಕಟ್ಟೆ[ಡ್ಯಾಮ್] ಕಟ್ಟುವ ಬಗ್ಗೆ ಮಾಹಿತಿ ನೀಡಬೇಕಾಗಿತ್ತಂತೆ. ಅಲ್ಲಿನ ತಜ್ಞರು ತಂದುಹಾಕಿರುವ ದೇಶವಿದೇಶಗಳ ಶಿಲೆಯ ಕಲ್ಲುಗಳ ಪೈಕಿ ಅತ್ಯಂತ ಉತ್ಕೃಷ್ಟವೆಂದು ಪರಿಗಣಿಸಿ ಹೆಚ್ಚಿನ ಹಣಕೊಟ್ಟು ತರಿಸಿದ್ದ ಒಂದು ರಾಶಿಯ ಕೆಲವು ಕಲ್ಲುಗಳನ್ನು ತಮ್ಮ ಊರುಗೋಲಿನಿಂದ ಬಡಿದು ನೋಡಿದ ಸರ್ ಎಂ.ವಿ " ಈ ರಾಶಿ ಸುತರಾಂ ಬಳಕೆಗೆ ಸಲ್ಲ " ಎಂದುಬಿಟ್ಟರಂತೆ! ಕೆಲವರು ಸರ್ ಎಂ.ವಿ.ಗೆ ವಯಸ್ಸಾಯ್ತು ಅರಳು-ಮರುಳು ಎಂದುಕೊಂಡು ನಕ್ಕರೆ ಅವರಲ್ಲಿಯೇ ಕೆಲವರು ’ದೆರ್ ಮಸ್ಟ್ ಬಿ ಎ ಬ್ರೇನ್ ಬಿಹೈಂಡ್ ದಿಸ್ ರಾಂಡಮ್ ಚೆಕಿಂಗ್’ ಎಂದುಕೊಂಡು ಆ ಕಲ್ಲುಗಳಮೇಲೆ ಪ್ರಮಾಣಿಸಲು ಒತ್ತಡಹಾಕಿದಾಗ ಇನ್ನೂ ಸಾಕಷ್ಟು ಒತ್ತಡ ಬೀಳುವ ಮೊದಲೇ ಕಲ್ಲುಗಳು ಪುಡಿಪುಡಿಯಾದವಂತೆ ! ಇಂತಹ ವಿಶ್ವೇಶ್ವರಯ್ಯ ಕೇವಲ ಕರ್ನಾಟಕ ಎಂದು ಪಕ್ಷಪಾತ ಮಾಡದೇ ಇಡೀ ದೇಶಕ್ಕಾಗಿ ದುಡಿದರು. ವಿದೇಶಗಳಿಗೂ ಸಹಕರಿಸಿದ ಏಕೈಕ ತಜ್ಞ ಅವರಾಗಿದ್ದಾರೆ. ಒರಿಸ್ಸಾ, ಹೈದರಾಬಾದ್, ಬಿಹಾರ್ ಮುಂತಾದ ಹಲವು ಪ್ರದೇಶಗಳಲ್ಲಿ ನೀರಿನ ಸಮಸ್ಯೆಗಳಿದ್ದವು; ಉತ್ತರವಾದುವೊಂದೇ ಸರ್. ಎಂ.ವಿಯವರ ಸಲಹೆ!

ಕೇವಲ ಸಿವಿಲ್ ಎಂಬ ವಿಭಾಗದಲ್ಲಿ ಗುರುತಿಸಿಕೊಳ್ಳದೇ ಎಲ್ಲಾರಂಗಗಳಲ್ಲೂ ತಮ್ಮ ಪ್ರತಿಭೆಯನ್ನು ತೋರಿಸಿದವರು ಸರ್. ಎಂ.ವಿ. ಜನತೆಗೆ ಅಂದಿನಕಾಲದಲ್ಲೇ ಮೈಸೂರು ಬ್ಯಾಂಕ್ ಸ್ಥಾಪಿಸಿಕೊಟ್ಟರು, ಮೈಸೂರು ಸಾಬೂನು ಮತ್ತು ಮಾರ್ಜಕ ನಿಯಮಿತ ಕಂಪನಿಯನ್ನು ಆರಂಭಿಸಿದರು, ತನಗೆ ರಾಜರು ಬಹುಮಾನವಾಗಿ ನೀಡಿದ ಹಣದಲ್ಲಿ ಮೈಸೂರಿನಲ್ಲಿ ಜಯಚಾಮರಜೇಂದ್ರ ಪಾಲಿಟೆಕ್ನಿಕ್ ಮತ್ತು ಬೆಂಗಳೂರಿನಲ್ಲಿ ಸಿಲ್ವರ್ ಜ್ಯೂಬಿಲಿ ಪಾಲಿಟೆಕ್ನಿಕ್ ಹೀಗೇ ಎರಡು ಪಾಲಿಟೆಕ್ನಿಕ್‍ಗಳನ್ನು ನಿರ್ಮಿಸಿ ತಾಂತ್ರಿಕ ವಿದ್ಯೆ ಹಲವರಿಗೆ ಸುಲಭದಲ್ಲಿ ದೊರೆಯುವಂತೇ ಮಾಡಿದರು ಮಾತ್ರವಲ್ಲ ಎಲ್ಲಿಯೂ ತಮ್ಮ ಹೆಸರನ್ನು ಇಡಗೊಡಲಿಲ್ಲ ! ಎಂಜಿನೀಯರಿಂಗ ಕಾಲೇಜು ಆರಂಭಿಸಿದರು, ಭದ್ರಾವತಿ ಕಬ್ಬಿಣ-ಉಕ್ಕು ಕಾರ್ಖಾನೆ ಆರಂಭಿಸಿದರು ಹೀಗೇ ಒಂದೇ ಎರಡೇ ಆನೆ ನಡೆದದ್ದೇ ದಾರಿ ಎನ್ನುವ ಹಾಗೇ ಸರ್. ಎಂ.ವಿ. ನಡೆಸಿದ್ದೆಲ್ಲವೂ ಫಲಪ್ರದವಾಗಿವೆ; ಲಕ್ಷೋಪಲಕ್ಷ ಜನರಿಗೆ ಅನುಕೂಲ ತಂದಿವೆ.

ಇಂತಹ ಮಹಾನ ವ್ಯಕ್ತಿ ಜಪಾನಿಗೆ ಒಮೆ ಭೇಟಿ ನೀಡಿದ್ದಾಗ ಅಲ್ಲಿನ ಮುತ್ಸದ್ಧಿಯೊಬ್ಬರು ಇವರನ್ನು ಕಂಡು ಮಾತನಡಿದರಂತೆ " ನೀವು ಭಾರತೀಯರಿ ಅತಿ ಬುದ್ಧಿವಂತರು, ಆದರೆ ನೀವು ತೋರಿಸಿದ ಗುಣಮಟ್ಟದ ವಸ್ತುಗಳನ್ನು ಕಳಿಸುವಾಗ ಗುಣಮಟ್ಟವನ್ನು ಬದಲಿಸುವುದರಲ್ಲೂ ನಿಷ್ಣಾತರು ಹಾಗಾಗಿ ನಾವು ನಿಮ್ಮನ್ನು ನಂಬುವಹಾಗಿಲ್ಲ " ---ಈ ವಿಷಯ ಸರ್. ಎಂ.ವಿ.ಗೆ ಮನದಲ್ಲಿ ಕೊನೇವರೆಗೂ ಕೊರೆಯುತ್ತಿತ್ತಂತೆ. ಇನ್ನೊಮ್ಮೆ ಅಮೇರಿಕಾಕ್ಕೆ ಹೋದಾಗ ನ್ಯೂಯಾರ್ಕ ನಗರದಲ್ಲಿ ಅವರಿಗೆ ಹಲ್ಲಿನ ತೊಂದರೆ ಕಾಡಿತಂತೆ. ಅಲ್ಲಿನ ಹಲ್ಲಿನ ವೈದ್ಯರೊಬ್ಬರಲ್ಲಿಗೆ ತೆರಳಿದ ಸರ್.ಎಂ.ವಿ ಚಿಕಿತ್ಸೆ ಪಡೆದು ವೈದ್ಯರ ಶುಲ್ಕವನ್ನು ಒಂದು ಲಕೋಟೆಯಲ್ಲಿಟ್ಟು ಪಾವತಿಸಿ ಬಂದರಂತೆ. ಅದಾದ ವಾರದಲ್ಲೇ ಸರ್. ಎಂ.ವಿ ಭಾರತಕ್ಕೆ ಮರಳುತ್ತಿರುವಾಗ ವಿಮಾನ ನಿಲ್ದಾಣದಲ್ಲಿ ಯಾರೋ ತಮ್ಮನ್ನು ಹುಡುಕಿಬಂದ ಸಂದೇಶವನ್ನು ಪಡೆದು ನೋಡಲಾಗಿ ಆ ಹಲ್ಲಿನ ವೈದ್ಯರು ನಿಂತಿದ್ದರಂತೆ. ವಿಚಾರಿಸಲಾಗಿ ತಮಗೆ ಶುಲ್ಕಕ್ಕಿಂತ ತುಸು ಜಾಸ್ತಿ ಹಣ ಪಾವತಿಸಿರುವುದರಿಂದ ಅದನ್ನು ಮರಳಿ ಕೊಡುವ ಸಲುವಾಗಿ ಸರ್.ಎಂ.ವಿಯವರನ್ನು ಹುಡುಕಿಕೊಂಡು ಆ ವೈದ್ಯ ಅಲ್ಲಿಗೆ ಹಾಗೆ ಬಂದಿದ್ದರು! " ಇರಲಿ ಬಿಡಿ, ತಮ್ಮ ಉತ್ತಮ ಚಿಕಿತ್ಸೆಗೆ ಅದು ಹೆಚ್ಚೇ ? " ಎಂದು ಸರ್ ಕೇಳಿದರೂ ಆ ವೈದ್ಯರು ಅದನ್ನು ಇಟ್ಟುಕೊಳ್ಳದೇ ಮರಳಿಸಿರುವುದು ಅಲ್ಲಿನ ಜನರ ನಿಯತ್ತನ್ನು ತೋರಿಸುತ್ತದೆ ಎಂಬುದನ್ನು ಸರ್. ಎಂ.ವಿ ಆಗಾಗ ಹೇಳುತ್ತಿದ್ದರಂತೆ. ನಾವು ಬಿಡಿ ಭಾರತೀಯರು ಯಾರನ್ನು ಬಿಟ್ಟಿದ್ದೇವೆ ನಾವು? ಸಾರ್ವಜನಿಕ ಬೀದಿಯಲ್ಲಿ ನಿಂತು ಅಣ್ಣಾಹಜಾರೆಗೆ ಜೈ ಎನ್ನುವ ನಮ್ಮೆಲ್ಲರೊಳಗೇ ನಿಯತ್ತಿಲ್ಲದ ಸ್ವಾರ್ಥದ ರಕ್ಕಸ ಆಗಾಗ ಎದ್ದು ನಿಂತು ಮೈಕೊಡವಿ ತನ್ನ ಇರುವನ್ನು ಬೇರೆಯವರಿಗೆ ತೋರಿಸುತ್ತಾನೆ. ಪ್ರಾಮಾಣಿಕತೆ ಇಲ್ಲದ ಜೀವನ ಎಲ್ಲಕ್ಕಿಂತ ಹೀನ ಎಂಬುದು ಸರ್. ಎಂ.ವಿ.ಯವರ ಅಂಬೋಣವಾಗಿತ್ತು.

ಇಡೀ ಬೆಂಗಳೂರು ಕೊಳೆಗೇರಿ ಆಗದಿರಲು ಕಾರಣ ಹಳೆಯ ಬೆಂಗಳೂರು ನಗರದ ರೂಪುರೇಷೆಗಳನ್ನು ಸರ್. ಎಂ.ವಿ. ತಿದ್ದಿದರು, ನಗರಕ್ಕೆ ಒಳಚರಂಡಿ ಹಾಗೂ ಕುಡಿಯುವ ನೀರು ಪೂರೈಕೆಯ ಸೂತ್ರಗಳನ್ನು ನಿರ್ಮಿಸಿದರು. ಇದೂ ಅಲ್ಲದೇ ಇಂದಿನ ಬೃಹತ್ತಾಗಿ ಬೆಳೆದ/ಬೆಳೆಯುತ್ತಲೇ ಇರುವ ಬೆಂಗಳೂರಿನ ಇನ್ನರ್ ಮತ್ತು ಔಟರ್ ರಿಂಗ್ ರೋಡ್‍ಗಳನ್ನು ಸರ್.ಎಂ.ವಿ ಮೊದಲೇ ಗುರುತಿಸಿ ತಿಳಿಸಿದ್ದರಂತೆ ಎಂದರೆ ಅವರೆಷ್ಟು ಪಂಡಿತರಬಹುದು. ನಾವು ಚಿಕ್ಕವರಿದ್ದಾಗ ಕೆಲವು ಕಥೆಗಳನ್ನು ಕೇಳಿದ್ದೆವು. ಅವುಗಳಲ್ಲಿ ಒಂದು ಬ್ರಿಟಿಷರು ವಿಶ್ವೇಶ್ವರಯ್ಯನವರ ಮೆದುಳಿಗೆ ಹಣಕೊಟ್ಟು ಕೊಂಡುಕೊಳ್ಳಲು ಮುಂದಾಗಿದ್ದರಂತೆ ಎಂಬುದು ! ಅದು ನಿಜವೋ ಸುಳ್ಳೋ ಅರಿವಿಲ್ಲ ಆದರೆ ಸಮಗ್ರ ಜಗತ್ತಿನ ಸಕಲದೇಶಗಳ ತಜ್ಞ-ವಿಜ್ಞಾನಿಗಳ, ಅಭಿಯಂತರರುಗಳ ದೃಷ್ಟಿ ಆ ಕಾಲಕ್ಕೆ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಕೃಶಕಾಯದ ವಿಶ್ವೇಶ್ವರಯ್ಯನವರಮೇಲೆ ನೆಟ್ಟಿದ್ದುದಂತೂ ನಿಜ.

ಇಂತಹ ಮಹಾನ್ ವ್ಯಕ್ತಿಗಳನ್ನು ನೋಡಿದರೆ ನಮಗನ್ನಿಸುವುದು " ಸಂಭವಾಮಿ ಯುಗೇ ಯುಗೇ " ಎಂಬ ಭಗವಂತನ ಗೀತಯ ವಚನ! ಎಲ್ಲಿ ಪ್ರಜೆಗಳಿಗೆ ಆಪತ್ತು-ವಿಪತ್ತು ಅತಿರೇಕಕ್ಕೆ ಹೋಗುತ್ತದೋ ಆಗ ತನ್ನ ಆವಿರ್ಭಾವ ಮಾನವ ಶರೀರದಲ್ಲಿ ಆಗುತ್ತದೆ ಎಂಬುದು. ಸರ್.ಎಂ.ವಿ ಯವರ ಮನೆತನದಲ್ಲಿ ಹಿಂದಕ್ಕೆ ನೋಡಿದರೆ ಅಂತಹ ಪ್ರಕಾಂಡ ಪಂಡಿತರಾಗಲೀ ಮೇಧಾವಿಗಳಾಗಲೀ ಜಾಸ್ತಿ ಆಂಗ್ಲವಿದ್ಯೆ/ಪದವಿ ಪಡೆದವರಾಗಲೀ ಇರಲಿಲ್ಲ. ಅವರ ನಂತರದಲ್ಲೂ ಮುಂದೆ ಇಲ್ಲೀವರೆಗೆ ಅವರ ವಂಶದಲ್ಲಿ ಯಾರೂ ಅಂತಹ ಮೇಧಾವಿ ಹುಟ್ಟಿ ಬರಲಿಲ್ಲ. ಒಂದೊಮ್ಮೆ ಸರ್.ಎಂ.ವಿ ಹುಟ್ಟಿಬರದಿದ್ದರೆ ಇಂದು ನಾವೆಲ್ಲಾ ಯಾವ ಸ್ಥಿತಿಯಲ್ಲಿ ಇರುತ್ತಿದ್ದೆವು ? --ಅದು ಊಹಿಸಲಸಾಧ್ಯ. ಕರ್ನಾಟಕದ ಬಹುಭಾಗಕ್ಕೆ ವಿದ್ಯುತ್ತು ಪೂರೈಸುವ ಶರಾವತಿ ಜಲವಿದ್ಯುತ್ ಯೋಜನೆಯನ್ನು ರೂಪಿಸಿದ ಆ ಪುಣ್ಯಾತ್ಮನ ಅನುಗ್ರಹದಿಂದ ಮನೆಮನೆಯಲ್ಲೂ ಇಂದು ಟಿವಿ,ಫ್ರಿಜ್ಜು, ವಾಶಿಂಗ್ ಮಶಿನ್, ಮಿಕ್ಸರ್, ಗ್ರೈಂಡರ್, ಓವನ್, ಗೀಸರ್, ಕಂಪ್ಯೂಟರ್ .....ಈ ಎಲ್ಲಾ ಯಂತ್ರಗಳನ್ನು ನಡೆಸುವ ಅನುಕೂಲ ಲಭ್ಯವಾಗಿದೆ, ಕತ್ತಲೆಯ ಮನೆಗಳು ಬೆಳಕು ಕಂಡಿವೆ!

ಸರ್.ಎಂ.ವಿಯನ್ನು ಉತ್ತಮ ಆಡಳಿತಗಾರನೆನ್ನಬಹುದೇ? ಉತ್ತಮ ತಂತ್ರಜ್ಞಾನಿ ಎನ್ನಬಹುದೇ ? ನಿಜವಾದ ದೇಶಭಕ್ತ ಎನ್ನಬಹುದೇ? ನಿಸ್ವಾರ್ಥ ಕರ್ಮಯೋಗಿ ಅನ್ನಬಹುದೇ? ಉತ್ತಮ ವಾಗ್ಮಿ ಎನ್ನಬಹುದೇ? ಉತ್ತಮ ನಿರ್ದೇಶಕ ಎನ್ನಬಹುದೇ? ಉತ್ತಮ ಮಾರ್ಗದರ್ಶಕ ಎನ್ನಬಹುದೇ? ಉತ್ತಮ ಮಾರ್ಕೆಟರ್ ಎನ್ನಬಹುದೇ ? ಭಗವದ್ಗೀತೆಯ ಹಲವು ಅಂಶಗಳನ್ನು ತನ್ನ ಕೃತಿಗಳಲ್ಲಿ ತೋರಿಸಿದ ಅವರಿಗೆ ಯಾವ ಹೆಸರಿನಿಂದ ಕರೆದರೂ ಅದು ಸಮಂಜಸವೆನಿಸುತ್ತದೆ. ಕೆಲವು ವಿಗ್ರಹಗಳ ದೃಷ್ಟಿ ಎಲ್ಲಿನಿಂತರೂ ನಮ್ಮನ್ನೇ ನೋಡುವ ಭಾಸವಾಗುವಂತೇ ಇನ್ನೂ ಕೆಲವು ಗುಡ್ಡಗಳು ಪರ್ವತಗಳು ಒಂದೊಂದು ಕಡೆಯಿಂದ ಒಂದೊಂದು ಆಕಾರದಿಂದ ಕಂಗೊಳಿಸುವಂತೇ ಸರ್ ಎಂ.ವಿ ಕೂಡ ಸರ್ವತ್ರ ಕಾಣಿಸಿಕೊಳ್ಳುತ್ತಾರೆ. ಬಡಕಲು ಶರೀರದ ಸಣ್ಣತಲೆಯೊಳಗಿನ ’ದೊಡ್ಡ ತಲೆ’ಯಲ್ಲಿ ಅದೇನಿತ್ತೋ ಜಗನ್ನಿಯಾಮಕನೇ ಬಲ್ಲ ! ಇವತ್ತಿನ ಬೆಂಗಳೂರಿನ ’ವಿಶ್ವೇಶ್ವರಯ್ಯ ಟಾವರ್’ ಎಂಬ ಜಾಗದಲ್ಲಿ ಮನೆಮಾಡಿಕೊಂಡು ವಾಸವಿದ್ದ ಸರ್.ಎಂ.ವಿ ತಮ್ಮ ಇಳಿಜೀವನವನ್ನು ಕೊನೆಯವರೆಗೂ ಅಲ್ಲೇ ಕಳೆದರಂತೆ. ದೇಹವಿಸರ್ಜಿಸಿದಾಗ ಅವರ ಖಾತೆಯಲ್ಲಿದ್ದ ೩೨೦೦೦ ರೂಪಾಯಿಗಳನ್ನು ಅವರ ಮುಪ್ಪಿನಲ್ಲಿ ಜೊತೆಯಲ್ಲಿ ಸಹಕರಿಸಿಕೊಂಡಿದ್ದ ಒಂದಿಬ್ಬರು ಹುಡುಗರಿಗೆ ಸೇರಬೇಕು ಎಂದು ಬರೆದಿದ್ದರಂತೆ! ಅದು ಬಿಟ್ಟರೆ ಇನ್ನೇನೂ ಅವರದಾದ ಆಸ್ತಿ ಇಲ್ಲ ! ಇಂದಿನ ಅಭಿಯಂತರರುಗಳು ಹೊಡೆಯುವ ಕೋಟಿಗಟ್ಟಲೆ ಹಣ ಆಸ್ತಿ-ಪಾಸ್ತಿ ನೋಡಿದರೆ ನಿಜಕ್ಕೂ ಸರ್.ಎಂ.ವಿ ದೇವಮಾನವರಾಗಿ ಕಾಣುತ್ತಾರೆ! ನಮ್ಮಪುಣ್ಯ ನಾವು ಅವರನ್ನು ಕನ್ನಡನಾಡಿನಲ್ಲಿ ಪಡೆದಿದ್ದೆವು; ನಮ್ಮ ಭಾಗ್ಯ ಅವರು ನಮಗಾಗಿ ಬಹಳಷ್ಟು ಕಟ್ಟಿಕೊಟ್ಟರು.

ಸರ್ ಎಂ.ವಿ ಒಮ್ಮೆ ಎಲ್ಲಿಗೋ ಹೋಗಿದ್ದಾಗ ಮಾರ್ಗಮಧ್ಯೆ ತಮ್ಮ ಮುದ್ದೇನಹಳ್ಳಿ ಶಾಲೆಗೆ ಹೋಗಿ ಅಲ್ಲಿನ ವಿದ್ಯಾರ್ಥಿಗಳನ್ನು ಭೇಟಿ ಆಗಬೇಕಾಯಿತು. ಮಕ್ಕಳಮೇಲಿನ ಪ್ರೀತಿಯಿಂದ ಅಂದಿನ ಕಾಲಕ್ಕೆ ಹತ್ತುಸಾವಿರದಲ್ಲಿ ಸಿಹಿತಿನಿಸು/ಚಿಕ್ಕ ಕೊಡುಗೆ ತರಿಸಿ ಎಲ್ಲಾ ಮಕ್ಕಳಿಗೂ ವಿತರಿಸಿದ ಸರ್ ಎಂ.ವಿ ಅಲ್ಲಿನ ಜನರ ಒತ್ತಾಯದ ಮೇಲೆ ಹತ್ತು ನಿಮಿಷ ಭಾಷಣಮಾಡಬೇಕಾಗಿ ಬಂತಂತೆ. ಯಾವಾಗಲೂ ಪೂರ್ವತಯಾರಿಯಿಲ್ಲದೇ ಭಾಷಣಮಾಡಲು ನಿರಾಕರಿಸುತ್ತಿದ್ದ ಅವರು ಅಂದು ಹಾಗೆ ಮಾಡದಾದರು. ಸಭೆ ಮುಗಿಯಿತು. ಅವರು ಮರಳಿ ಬೆಂಗಳೂರಿಗೆ ಬಂದಮೇಲೆ ತಮ್ಮ ಮಾತು ಮಕ್ಕಳಿಗೆ ರುಚಿಸಿತೋ ಇಲ್ಲವೋ ಎಂಬ ಅನಿಸಿಕೆಯಿಂದ ಇನ್ನೊಮ್ಮೆ ತಾವು ಅಲ್ಲಿಗೆ ಬರುವುದಾಗಿ ಘೋಷಿಸಿ ಮತ್ತೆ ತೆರಳಿ ಮತ್ತೆ ಸಿಹಿತಿನಿಸುಗಳನ್ನು ವಿತರಿಸಿ ತಯಾರಿಸಿಕೊಂಡ ಭಾಷಣವನ್ನು ಮಂಡಿಸಿದರಂತೆ ! ಮಕ್ಕಳನ್ನೂ ಅವಗಣನೆ ಮಾಡದ ಅವರ ಮನಸ್ಸು ಯಾವುದೇ ಕೆಲಸವನ್ನು ಮಾಡುವಾಗಲೂ ಪರಿಪೂರ್ಣತೆಯನ್ನು ಬಯಸುತ್ತಿತ್ತು ಎಂಬುದಕ್ಕೆ ಇದು ಉದಾಹರಣೆ. ಹೇಳುತ್ತಾ ಹೋದರೆ ಮುಗಿಯದ ಚರಿತ್ರೆ, ಸರ್.ಎಂ.ವಿ ವ್ಯಕ್ತಿ ಎನ್ನುವುದಕ್ಕಿಂತ ದಂತಕಥೆಯಾದ ಶಕ್ತಿ ಎನ್ನುವುದು ಉತ್ತಮ. ಜೀವನದಲ್ಲಿ ಪ್ರಾಮಾಣಿಕತೆಯಿಂದ ನಡೆದುಕೊಳ್ಳುವುದು ಮತ್ತು ಉದ್ಯೋಗಶೀಲರಾಗಿ ಪರಿಪೂರ್ಣವಾಗಿ ತೊಡಗಿಕೊಂಡು ನಮ್ಮನ್ನೇ ನಾವು ಆಗಾಗ ಅವಲೋಕಿಸಿಕೊಳ್ಳುತ್ತಾ ಮಾಡುವ ಕೆಲಸಗಳಲ್ಲಿ ಪರಿಪಕ್ವತೆ ಪಡೆದರೆ ಅದೇ ನಾವು ಅವರಿಗೆ ಸಲ್ಲಿಸಬಹುದಾದ ನಿಜವಾದ ಗೌರವವಾಗಿದೆ. ಹಾಗೆ ಬದುಕೋಣ ಅಲ್ಲವೇ ? ನಮಸ್ಕಾರ.

Tuesday, September 13, 2011

ಒದರಿದನು ತಾಂ 'ಕೃಷ್ಣರಾಯುಡು' ವಿಜಯನಗರಧಿಪ !!


ಒದರಿದನು ತಾಂ 'ಕೃಷ್ಣರಾಯುಡು' ವಿಜಯನಗರಧಿಪ !!

[ನಾಕಾರು ದಿನ ಕೆಲವರನ್ನು ಹೀಗೇ ಸ್ತುತಿಸೋಣ ಎಂಬ ತುಂಬುಹೃದಯದ ಹಂಬಲದಿಂದ ಮೊದಲನೆಯದಾಗಿ ಇಂದು ಜನಾರ್ದನ ಭಜನೆ!]

ಗದರಿದನು ಗಣಿರಾಯನುದಯಿಸಿ
ಹೆದರಿಸುತ ಹಲವರನು ಹಣದೊಳು
ಒದರಿದನು ತಾಂಕೃಷ್ಣರಾಯುಡುವಿಜಯನಗರಧಿಪ !!
ಸದರಿ ಮಾನವ ಹುದುಗಿ ನಿಧಿಗಳ
ಬದರಿನಾರಾಯಣನ ಮೀರಿಸೆ
ಚದುರಿನಿಂತನು ರಾಜಕೀಯದ ಬಿದಿರು ಬೊಂಬೆಗಳ !

ಎದುರು ಜಾವದ ಮೂರುಗಂಟೆಗೆ
ಖದರುವೇಷವದೈದು ಕೋಟಿದು
ನಿದಿರೆ ತೊರೆದರು ನೆಂಟರಿಷ್ಟರು ಅದನು ನೋಡುವೊಲು !
ಮಧುರ ನುಡಿಗಳ ಕೇಳಿ ವಿನಯದಿ
ಅಧರವಾಡದೆ ಶರಣು ನಿಂದರು
ಪದರಪದರದಿ ಕಾಸನಿರಿಸಿದ ದೊರೆಗೆ ವಂದಿಸುತ !!

ಗೆದರಿ ದಾಖಲೆ ಕಾಗದಂಗಳ
ಮುದುರಿ ಸಿಬಿಐ ಜನಂಗಳು

ಉದಯನುದಿಸುವ ಮೊದಲೆ ಹಾಜರು ಬದಲಿ ಗುರುತಿನಲಿ !
ಮದಿರೆ ಮಾನಿನಿ ಹಣದ ಥೈಲಿಯ
ಉದುರಿಸಿದರದನೊಲ್ಲೆನೆಂದರು
ಅದಿರು ದಂಧೆಯ ಪ್ರಮುಖ ಕುಳವನು ಹದನೆ ಕರೆದೊಯ್ದು !!

ಉದರ ಭರ್ತಿಗೆ ಎದುರು ಖರ್ಚಿಗೆ
ಮೊದಲಿರುವ ಮೂವತ್ತು ಸಾವಿರ
ಅದರಲೇ ಅತಿಕಡಿಮೆ ಬಳಸುತ ಸರಳ ತಾನೆಂದ !
ಕುದುರದಾಯಿತು ಯಾವ ಆಮಿಷ
ಕುದುರೆಗಳು ಮಾರಾಟಗೊಳ್ಳವು
ಬೆದರಿನಿಂದನು ಕಂಬಿಯೆಣಿಸುತ ತಾ ಜನಾರ್ದನನು !!

Sunday, September 11, 2011

'ಹಯಗ್ರೀವ' ಪುರಾಣ !


'ಹಯಗ್ರೀವ' ಪುರಾಣ !

ಪುರಾಣ ಹೇಳುವುದರಲ್ಲಿ ನನ್ನದು ಎತ್ತಿದಕೈ ಎಂಬುದು ನೀವೇ ಹೇಳಿದ ಹಾಗಿತ್ತಪ್ಪ, ಅದನ್ನು ವಾಪಸ್ಸು ಪಡೆದುಕೊಂಡಿರೋ ಅಲ್ಲಾ ಇನ್ನೂ ಭಿನ್ನಮತವಿಲ್ಲದ ಸಹಮತ ಇದೇಯೋ ಅದರ ಅರಿವು ಬರಬೇಕಾದರೆ ನಿಮ್ಮ ವೋಟ್ ಆಫ್ ಕಾನ್ಫಿಡೆನ್ಸ್ ಕರೆಯಬೇಕಾಗುತ್ತದೇನೋ. ಒಂದು ಮಾತು ನೆನಪಿರಲಿ ಮಹನೀಯರೇ, ನಾನು ಬರೆಯಲು ಕುಳಿತ ಖುರ್ಚಿ ನನ್ನ ಸ್ವಂತದ್ದು, ಈ ಖುರ್ಚಿಗಂತೂ ಚುನಾವಣೆ ಇಲ್ಲ-ನಾನಿರುವರೆಗೆ ನನ್ದೇ ಆಗಿರುತ್ತದೆ ಎಂಬುದನ್ನು ನಿಮ್ಮೆಲ್ಲರಿಗೆ ತಿಳಿಸಲು ವಿಚಿತ್ರವಾಗಿ ನಕ್ಕು ಹೇಳುತ್ತಿದ್ದೇನೆ. ಡೀನೋಟಿಫಿಕೇಶನ್ನು ಗಣಿವ್ಯವಹಾರ ಯಾವುದರಲ್ಲೂ ನಾನು ಸೇರಿಕೊಂಡಿಲ್ಲ ಎಂಬುದು ಅಣ್ಣಾ ಹಜಾರೆಯಾಣೆ ಸತ್ಯ-ಅದು ತಮಗೂ ಗೊತ್ತಿರುವ ವಿಷಯವಾಗಿರಬಹುದು ಎಂಬ ಮನೋಭಾವನೆ ನನ್ನದು. ಕಾಸುಕೊಟ್ಟು ಯಾವುದೇ ಪ್ರಶಸ್ತಿಯನ್ನು ಪಡೆದುಕೊಳ್ಳಲಾಗದ ನಿರ್ಜೀವಿ ನಾನು ಎಂಬುದೂ ಕೂಡ ಈಗಾಗಲೇ ನಿಮಗೆ ಮನದಟ್ಟಾಗಿರುವುದರಿಂದ ಆ ಬಗ್ಗೆ ಜಾಸ್ತಿ ಸ್ಕ್ರೂ ಹಾಕುವುದು ಬೇಡ.

ಅಷ್ಟಾದಶ ಪುರಾಣಗಳನ್ನು ಓದೀ ಓದೀ ಕೂಚುಭಟ್ಟರಾದ ನಮ್ಮ ಸೊಂಡೆ ತಿಪ್ಪಾಭಟ್ಟರ ಖಾಸಾ ದೋಸ್ತರಾದ ಕುಳ್ ತಿಪ್ಪಾಭಟ್ಟರ ಸುದ್ದಿ ಹೇಳುವರೇ ತಮ್ಮಲ್ಲಿಗೈತಂದೆ. ಈ ಸಲ ಮತ್ತೆ ಆರಂಭದ ಶ್ಲೋಕಗಳನ್ನೆಲ್ಲಾ ಹೇಳುತ್ತಾ ಕೂರುವುದಿಲ್ಲ-ಹೇಳೀ ಕೇಳೀ ಮೊದಲೇ ಪುರಾಣ...ಇನ್ನೂ ಉದ್ದವಾದರೆ ಎದ್ದು ಓಡಿಹೋದರೆ ಏನುಗತಿ ? ಹಾಗೂ ಕಟ್ಟಾ ಸಂಪ್ರದಾಯವಾದಿಗಳು ಈಗ ಮಾತನಾಡುವ ಹಾಗಿಲ್ಲ ಯಾಕೆಂದ್ರೆ ’ಕಟ್ಟಾ’ ಎಂಬುದಕ್ಕೆ ದಿನಕ್ಕೊಂದು ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಆರಂಭದ ಪುಣ್ಯಕಾಲದಲ್ಲಿ ನಿಮಗೊಂದು ಹಿತವಚನ ಹೇಳಿಕೊಡುತ್ತೇನೆ ಕೇಳುವಂಥವರಾಗಿ--ಒಂದೊಮ್ಮೆ ಯಾವುದೇ ಕಾರಣಕ್ಕೆ ಯಾರೇ ಶ್ರೀಕೃಷ್ಣ ಜನ್ಮಸ್ಥಾನ ಸೇರಿದರೂ ಒಳಸೇರಿತ್ತಿದ್ದಂತೇಯೇ ವಿಚಿತ್ರವಾದ ಕಾಯಿಲೆಗಳಿವೆ ಎಂದು ಮಾಧ್ಯಮಗಳಿಗೆ ಹೇಳಿಕೆ ಬರುವಹಾಗೇ ಮಾಡಿ, ನಿಧಾನವಾಗಿ ಯಾವುದಾದರೂ ವೈದ್ಯರನ್ನು ಗುತ್ತಿಗೆ ಹಿಡಿದು ಆಸ್ಪತ್ರೆ[ದಡ]ಸೇರಿ ಬಿಡಿ. ಅಲ್ಲಿಗೆ ನೀವು ಆಲ್ಮೋಸ್ಟು ಆಚೆ ಬಂದಹಾಗೇ ಎಂದು ತಿಳಿಯಿರಿ!

ಮೈಮೇಲೆ ದರ್ಶನ ಬರುತ್ತದೆ ಎಂಬುದು ನಮ್ಮ ಕರಾವಳಿ ಜಿಲ್ಲೆ ಕಡೆ ಮಾತು. ತೂಗುದೀಪದ ಬೆಳಕಲ್ಲಿ ದೇವರನ್ನು ಕಂಡ ಜನ ಹೊರಗಿನ ಸೂರ್ಯನ ಪ್ರಭೆಯಲ್ಲಿ ದರ್ಶನವನ್ನು ಸರಿಯಾಗಿ ಪಡೆದುಕೊಂಡು ಭ್ರಾಂತಿಕಳೆದವರಗಿದ್ದಾರೆ! ಈ ಕನ್ನಡ ದೇಶದಲ್ಲಿ ಇನ್ನೆಷ್ಟು ಜನರಿಗೆ ’ದರ್ಶನ’ ಬಂದು ಇಳಿಯಬೇಕೋ ಗೊತ್ತಾಗುತ್ತಿಲ್ಲ, ಆದರೆ ಹಲವಾರು ಜನರಿಗೆ ’ದರ್ಶನ’ ಬರುವುದು ಇನ್ನೂ ಲೋಕಕ್ಕೆ ತಿಳಿದಿಲ್ಲ, ಒಂದೊಂದಾಗಿ ಹೊರಬರುತ್ತದೆ: ಕಥೆಯಲ್ಲ-ಜೀವನ!

ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಮ್ |
ಯತ್ಕೃಪಾ ತಮಹಂ ವಂದೇ ಮರಮಾನಂದಮಾಧವಮ್ ||

ಅಪರೂಪಕ್ಕೆ ಈ ಸತ್ಯ ವಾಕ್ಯದ ಅರ್ಥ ಜನರಿಗೆ ಆಗುತ್ತಿದೆ ಎಂಬುದು ಜನಜನಿತವಾದ ಸಂಗತಿಯಾಗಿದೆ. ಉಪ್ಪು ತಿಂದವ ನೀರು ಕುಡೀಲೇಬೇಕು ಎಂಬ ಅಪ್ಪಟ ಕನ್ನಡದ ಸ್ಲೋಗನ್ನು ಬಳಸಿ ರೋಷ ತೋರ್ಪಡಿಸಿದ ನಮ್ಮ ಬಾಂಧವರ ಕ್ಲೇಶ ನಿವಾರಣೆಗಾಗಿ ತಿಪ್ಪಾ ಭಟ್ಟರು ’ ಹಯಗ್ರೀವ’ ಮಾಡಿದ್ದಾರೆ !

ಸ್ವಸನಸ್ಪರ್ಶನೋ ವಾಯುಃ ಮಾತುರಿಷ್ವಾ ಸದಾಗತಿಃ |
ಪ್ರಷದಷ್ವೋ ಗಂಧವಹೋ ಗಂಧವಾಹಾ ನಿಲಾಶುಗಾಃ ||

ತಪ್ಪೆಷ್ಟು ಸರಿಯೆಷ್ಟು ಎಂಬ ಅರಿವಿಲ್ಲದೇ ಈ ಮೇಲಿನಂತೇ ವಾಯುವರ್ಣನೆಯನ್ನು ಈಗಲೇ ಮಾಡಿಬಿಟ್ಟಿದ್ದೇನೆ, ಸಂಸ್ಕೃತ ವಿದ್ವಾಂಸರೇ ದಯಮಾಡಿ ತಪ್ಪಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ. ಯಾಕೆ ವಾಯುಸ್ತುತಿಮಾಡಿದೆ ಎಂಬುದನ್ನು ನಿಮಗೆ ಮುಂದೆ ಹೇಳುತ್ತಾ ಹೋಗುತ್ತೇನೆ.

ವಾಲಿ ಸುಗ್ರೀವ ಇಂಥವರ ಬಗ್ಗೆ ಕೇಳಿದ ನಮ್ಮಲ್ಲಿ ಕೆಲವರಿಗೆ ಹಯಗ್ರೀವನೆಂಬ ರಕ್ಕಸನ ಬಗೆಗೂ ತಿಳಿದಿರಲು ಸಾಕು. ಕೆಲವರಲ್ಲಿ ಹಯಗ್ರೀವ ದೇವರು ಎಂಬ ನಂಬಿಕೆಯೂ ಇದೆ. ಆದರೆ ನಮ್ಮ ತಿಪ್ಪಾ ಭಟ್ಟರಿಗೆ ಹಯಗ್ರೀವ ಎಂದರೆ ಒಂದು ಸಿಹಿ ತಿನಿಸು. ತಿಪ್ಪಸಂದ್ರದ ಮೊದಲನೇ ಹಂತದ ಮೂರನೇ ರಸ್ತೆಯ ನಾಕನೇ ಮನೆಗೆ ಆಗಾಗ ಬಂದು ಹೋಗುತ್ತಿದ್ದ ಗುಡಾಣ ಹೊಟ್ಟೆಯ ಕುಳ್ಳಗಿನ ಆಸಾಮಿಯನ್ನು ನೀವು ನೋಡಿರಲಿಕ್ಕೂ ಸಾಕು! ನೋಡಿಲ್ಲ ಎಂದರೆ ಬಿಡಿ ಪರವಾ ಇಲ್ಲ ನಾನೇ ಹೇಳುತ್ತಿದ್ದೇನೆಲ್ಲ ಅವರ ಬಗ್ಗೆ ನೋಡುವುದಕ್ಕಿಂತಾ ಕೇಳುವುದು ಭಾರೀ ಇದೆ.

ಸ..ರಿ...ಗ..ಮ..ಪ ಅಂತಲೇ ಇರ್ತಿದ್ದ ಭಟ್ಟರದ್ದು ಅಡುಗೆ ವೈವಾಟು. ಅಲ್ಲೀ ಇಲ್ಲಿ ಪ್ರೀತಿಯಿಂದ ಕರೆದೋರ ಮನೆಗೆ ಅಡಿಗೆ ಮಾಡಲಿಕ್ಕೆ ಹೋಗಿ ಕೊಟ್ಟ ಅಷ್ಟಿಷ್ಟು ಹಣವನ್ನು ಎತ್ತಿಕೊಂಡು ಕಮಕ್ ಕಿಮಕ್ ಎನ್ನದೇ ಮನೆಕಡೆ ಹೆಜ್ಜೆಹಾಕುವ ಬಡಪಾಯಿ ಬ್ರಾಹ್ಮಣ ಶ್ರೀಮಾನ್ ತಿಪ್ಪಾ ಭಟ್ಟರು. ತಿಪ್ಪಸಂದ್ರಕ್ಕೆ ಅವರು ಬರುತ್ತಿದ್ದುದನ್ನು ಬೆಂಗಳೂರು ಮಹಾನಗರ ಪಾಲಿಕೆಯವರು ಗಮನಿಸಿರಬೇಕು ಅದಕ್ಕೇ ಇರಬೇಕು ಅದು ತಿಪ್ಪ ಸಂದ್ರ ! ಸಾವಿರ ತೂತುಗಳಿರುವ ಹಳೇ ಕೊಡೆ ಸಲ್ಪ ಕೊಳೆ ಮಸಿ ತಗುಲಿದ ಒಂದುಕಾಲಕ್ಕೆ ಬಿಳಿಯದೇ ಆಗಿದ್ದ ಪಂಚೆ, ಸರ್ವಕೆಲಸಕ್ಕೂ ಆಸ್ಕರ ನೀಡುವ ಹೆಗಲು ಅಂಗವಸ್ತ್ರ, ತಾರೆಗಳ ತೋಟದಂತೇ ಕಾಣುವ ತೂತುಬಿದ್ದ ಗಂಜೀಪರಾಕು [ಬನೀನು], ಬಸ್ಸಲ್ಲಿ ಓಡಾಡುವಾಗ ಮೇಲಿಂದ ಹಾಕಿಕೊಳ್ಳಲು ಒಂದು ಬುಶ್ ಕೋಟು [ತೆಳು ನೀಲಿ ಬಣ್ಣದ ಅರ್ಧ ತೋಳಿನ ಅಂಗಿ], ಕಾಲಿಗೆ ಸವೆದು ಇನ್ನೇನು ತೂತು ಬೀಳಲಿರುವ ಹವಾಯಿ. ಭಟ್ಟರ ಅಂಗಿ ಆ ಕಡೆ ತುಂಬುತೋಳಿನದ್ದೂ ಅಲ್ಲ ಈಕಡೆ ಅರ್ಧ ತೋಳಿನದ್ದೂ ಅಲ್ಲ--ಇವೆರಡರ ನಡುವೆ ತೋಳಿನ ಗಂಟು ಕಳಿದು ಮೊಳಕೈಯನ್ನು ಒಂದಂಗುಲ ಆವರಿಸುವ ಅಂಗಿ ---ಇದಕ್ಕೆ ಏನಂತೀರೋ ನೀವೇ ಹೆಸರಿಟ್ಟುಕೊಳ್ಳಿ.

ಭಟ್ರೀ ಅಂದುಬಿಟ್ರೆ ಸಾಕು ಪಾಪ ಮೂವತ್ತೆರಡರಲ್ಲಿ ಉಳಿದಿರುವ ಮೂರ್ನಾಲ್ಕು ಹಲ್ಲನ್ನು ರಾಷ್ಟ್ರೀಯ ಹೆದ್ದಾರಿಯ ಮೈಲಿಗಲ್ಲಿನಂತೇ ತೋರಿಸುತ್ತಾ ಓಡಿ ಬಂದು " ನನ್ ಕರದ್ರಾ " ಅನ್ನೋರು. ಸಲ್ಪ ಸಲುಗೆ ಇದ್ದವರಿಗೆಲ್ಲಾ ಬೇಸಿಗೆಯಾದರೆ " ತಂಪಾಗಿ ಮಜ್ಜಿಗೆ ಕುಡೀರಿ " ಎಂದು ನಾಕಾರು ಪಾತ್ರೆ ತಡಕಾಡಿ ಮಜ್ಜಿಗೆ ಮಾಡಿಕೊಂಡು ತಂದುಬಿಡುತ್ತಾರೆ. ಯಾರಲ್ಲೇ ಏನೇ ಕಾರ್ಯಕ್ರಮ ಜರುಗಿದರೂ ಭಟ್ಟರನ್ನು ಕರೆದರೆ ಅವರ ಮೊದಲೆ ಆದ್ಯತೆಯ ತಿನಿಸು ’ಹಯಗ್ರೀವ’ !

ಹಯಗ್ರೀವ ಬಗ್ಗೆ ನಿಮಗೆ ಈ ಮೊದಲ್ರ್‍ಏ ಒಮ್ಮೆ ವಿವರಿಸಿದ ನೆನಪು, ಇರಲಿ, ಮತ್ತೊಮ್ಮೆ ಹೇಳೋದ್ರಿಂದ ನನ್ನ ಗಂಟೇನೂ ಹೋಗೋದಿಲ್ಲ, ಅಸಲಿಗೆ ಗಂಟುಕಟ್ಟಿದ ಆಸಾಮಿಯೇ ನಾನಲ್ಲ! ಕಡ್ಲೆ ಬೇಳೆಯನ್ನು ಚೆನ್ನಾಗಿ ತೊಳೆದು ಹದವಾಗಿ ಬೇಯಿಸಿ ಅದಕ್ಕೆ ಗೊತ್ತಾದ ಪ್ರಮಾಣದಲ್ಲಿ ಸಕ್ಕರೆ ಹಾಕಿ ಕಲಸಿ, ಸ್ವಲ್ಪ ಕಾಯಿತುರಿ ಪರಿಮಳಕ್ಕೆ ಯಾಲಕ್ಕಿ ಇವಿಷ್ಟು ಹಾಕಿ ಒಂದುಹದಕ್ಕೆ ಕಾಸಿ ಇಳಿಸಿದಾಗ ಅದು ಹಯಗ್ರೀವ ಎನಿಸಿಕೊಳ್ಳುತ್ತದೆ. ಹಯಗ್ರೀವ ತಿಂದ ತಾಸೆರಡು ತಾಸಿನಲ್ಲೇ ಬುರ್ ಬುರ್ ಬುರಕ್ ಎಂಬ ವಾಯುಭಾರ ಸಮತೋಲನ ಕ್ರಿಯೆ ಆರಂಭವಾಗಿಬಿಡುತ್ತದೆ! ಯಾಕೆಂದರೆ ಅದು ಕಡ್ಲೆ. ಬೇಳೆಗಳಲ್ಲೇ ವಾಯುವಿನ ಪರಮೋತ್ಫತ್ತಿಗೆ ಮೊದಲನೇ ಸ್ಥಾನ ಅಲಂಕರಿಸಿರುವುದು ಅವರೇ ಬೇಳೆ. ಮೊದಲನೇ ರನ್ನರ್ ಅಪ್ -- ಕಡ್ಲೆಬೇಳೆ, ಎರಡನೇ ರನ್ನರ್ ಅಪ್ ಅಲಸಂದೆ. ಸ್ಪರ್ಧೆಯಲ್ಲಿ ಎಲ್ಲಾ ಬೇಳೆಗಳೂ ಭಾಗವಹಿಸುತ್ತವೆ!

ನೀವು ಕಮ್ಮಿ ಬಜೆಟ್‍ನಲ್ಲಿ ಸಿಹಿತಿನಿಸು ಸಹಿತ ಔತಣವನ್ನು ಏರ್ಪಡಿಸಬೇಕು ಎಂದುಕೊಂಡರೆ ಸೀದಾ ತಿಪ್ಪಾಭಟ್ಟರನ್ನು ಕಂಡುಬಿಡಿ ಆಯ್ತಾ ? ಅವರಿಗೆ ಮೊಬೈಲ್ ಇಲ್ಲ, ಅವರ ಮಗಳ ಮೊಬೈಲ್ ನಂಬ್ರ ಈ ರೀತಿ ಇದೆ--೧೨೩೪೫೬೭೮೯೦. ಮೊದಲೇ ಹೇಳುತ್ತೇನೆ ಕೇಳಿ ಮಗಳು ಶರೀರದಲ್ಲಿ ಅಪ್ಪನನ್ನೂ ಮೀರಿಸಿದ್ದಾಳೆ, ಇನ್ನೂ ಬೆಳೆಯುತ್ತಲೇ ಇದ್ದಾಳೆ. ನಾಕಾರು ವರ್ಷಗಳ ಹಿಂದೆ ಅವಳ ಮೂವತ್ತೆರಡನೇ ವಯಸ್ಸಿಗೆ ಮದುವೆ ಎಂಬುದೊಂದನ್ನು ಮಾಡಿದ್ದರು. ಅದೇನಾಯ್ತೋ ತಿಳೀಲಿಲ್ಲ ಮದುವೆಯ ರಾತ್ರಿ ಓಡಿಹೋದ ಗಂಡ ಮತ್ತೆ ಮನೆಕಡೆ ಸುಳೀಲಿಲ್ಲ, ಮಗಳ ನಿಜರೂಪ ದರ್ಶನವಾಗಿ ಬೆಚ್ಚಿಬಿದ್ದಿರಬಹುದೆ ಎಂದುಕೊಂಡವರು ನಮ್ಮಂಥಾ ಪಡ್ಡೆಗಳು. ಹೀಗಾಗಿ ನೀವು ಇನ್ಯಾವುದೋ ಕಾರಣಕ್ಕೆ ಫೋನುಮಾಡುವುದರಲ್ಲಿ ಅರ್ಥವಿಲ್ಲಾ ಅಂದೆ! ಅಲ್ಲ ಪಾಪ ನೀವು ಹಾಗಲ್ಲ ಅಂತ ನನಗೆ ಗೊತ್ತು, ಆದರೂ ನಮ್ಮಲ್ಲಿ ಕೆಲವರಿಗೆ ಹೆಂಗಸರನ್ನು ಕಂಡರೆ ಏನೋ ಒಂಥರಾ ಅನುಕಂಪ, ಯಾರೋ ಭಟ್ಟರ ಮಗಳಂತೆ ಒಮ್ಮೆ ನೋಡಿಬಿಡುವಾ ಎಂದು ಕಾಲು ಹೊಡೆದರೂ ತಪ್ಪಲ್ಲ. ಆ ಕಡೆ ’ ಹಲೋ ’ ಎಂದ ಗೊಗ್ಗರು ದನಿಗೆ ಕೆಲವ್ರು ಕಾಲೇ ಕಟ್ ಮಾಡಿಬಿಡ್ತಾರಂತೆ. ಕಾಲು ಅಂದ್ರೆ ಗೊತ್ತಾಯ್ತಲ್ಲ ಮಾರಯ್ರೆ ? ಅದು ಶರೀರದ ಕಾಲಲ್ಲ ಮೊಬೈಲ್ ಕರೆ, ಮೊಬೈಲ್ ಕಾಲು!

ಭಟ್ಟರು ಯಾವುದಕ್ಕೂ ಬೇಸರಮಾಡಿಕೊಂಡ ಜನ ಅಲ್ಲ. ಅವರಾಯ್ತು ಅವರ ಕೆಲ್ಸವಾಯ್ತು. ಮಗಳ ಗಂಡ ಬಿಟ್ಟು ಮಗಳು ತಮ್ಮನೆಯಲ್ಲೇ ಉಳಿಯುವ ಪ್ರಮೇಯ ಬಂತಲ್ಲ ಅಂತಲೂ ಚಿಂತಿಸಲಿಲ್ಲ. ಹೇಗೋ ದೇವರು ನಡೆಸುತ್ತಾನೆ ಎಂಬ ತುಂಬಿದ ಹಂಬಲ ಅವರದ್ದು. ನಿತ್ಯ ಎಲ್ಲಾದರೂ ಅಡಿಗೆ ಕೆಲಸಮಾಡಿ ಒಂದಷ್ಟು ಹಯಗ್ರೀವ ಕಲಸಿ, ತಾವೂ ಸಲ್ಪ ತಿಂದು ಮಜ್ಜಿಗೆ ಕುಡಿದು ಡರ್ ಎಂದು ತೇಗಿಬಿಟ್ಟರೆ ಮುಂದಿನ ಡರ್ ಎಲ್ಲಾ ಹಿಂಬಾಗಿಲಿನಿಂದಲೇ ನಡೆಯುತ್ತಿರುತ್ತದೆ ! ಪ್ರತೀ ಸರ್ತಿ ಅಪಾನವಾಯು ಸ್ಫೋಟಗೊಂಡಾಗಲೂ ಭಟ್ಟರಿಗೆ ಏನೋ ಸಮಾಧಾನ, ಹರೇರಾಮ ಹರೇರಾಮ ಎನ್ನುವ ಅವರ ಹತ್ತಿರದಲ್ಲಿ ಯಾರದರೂ ’ಆಪ್ತರು’ [ಅರ್ಥವಾಯಿತಲ್ಲ? ] ಇದ್ದರೆ " ಹೈಂಕ್ಕ ...ಸಲ್ಪ ಸಡ್ಲಾಯ್ತು " ಎಂಬುದನ್ನು ನಾವು ಕೆಲವೊಮ್ಮೆ ಕದ್ದುಕೇಳಿ ಖುಷಿಪಟ್ಟಿದ್ದಿದ್ದೆ. ಆಪಸ್ನಾತಿಯಲ್ಲಿ ನಾವು ಕಿಲಾಡಿಗಳು ಭಟ್ಟರು ’ ವಾಯುಸ್ತುತಿ ’ ಮಾಡುತ್ತಿದ್ದಾರೆ ಎಂದುಕೊಂಡು ನಮ್ಮಷ್ಟಕ್ಕೇ ನಾವು ನಗುವುದಿದೆ. ಜಗತ್ತಿನಲ್ಲಿ ಏನೇ ಏನಾಗಿ ಹೋದರೂ ಭಟ್ಟರು ಹಯಗ್ರೀವ ಮಾಡುವುದನ್ನಂತೂ ಸದ್ಯ ನಿಲ್ಲಿಸುವುದಿಲ್ಲ.

ಕೆಲವೊಮ್ಮೆ ಸಮಾಜದಲ್ಲಿ ಹೀಗೂ ಇರುತ್ತದೆ. ಹೇಗೆ ಎಂದರೆ ಅಕ್ಕಿಮೇಲೂ ಆಸೆ ನೆಂಟರಮೇಲೂ ಪ್ರೀತಿ ! ಅಕ್ಕಿ ಖರ್ಚಾಗಲೂ ಬಾರದು ನೆಂಟರು ಉಂಡಹಾಗೂ ಇರಬೇಕು ! ಎಂಥಾ ಕಸರತ್ತು ಅಲ್ವೇ? ಅಂಥಾ ಕೆಲವು ಜನರಿಗೆ ಏನಾದರೂ ಕಾರ್ಯಕ್ರಮ ನಡೆಸಿದರೆ ಕಮ್ಮಿ ಅಂದ್ರೆ ಅಂಥಾ ಕಮ್ಮಿ ಖರ್ಚಿನಲ್ಲಿ ಸಾಗಬೇಕಾಗುತ್ತದೆ. ಹೇಳಿಕೊಳ್ಳಲು ಔತಣದಂತಿರಬೇಕು, ಆದರೆ ಜಾಸ್ತಿ ಖರ್ಚು ಮಾಡುವಂತಿಲ್ಲ ! ೫೦೦ ಜನರಿಗೆ ಅಡಿಗೆ ಮಾಡಿದ್ದರಲ್ಲಿ ಸಾವಿರ ಮಂದಿ ಊಟಮಾಡಿ ಏಳಬೇಕು. ಅವರು ಹೊಟ್ಟೆ ತುಂಬಾ ಉಂಡರೋ ಬಿಟ್ಟರೋ ಶಿವನೇ ಬಲ್ಲ-ಅದು ಅಂಥವರಿಗೆ ಬೇಕಾಗೂ ಇಲ್ಲ. ಹೊರಡುವಾಗ ಒಳಗೆ ಕೊಳೆಯಲು ಶುರುವಾದ ನುಸಿರೋಗದ ಮುಷ್ಠಿಯಲ್ಲಿ ಮೂರು ಹಿಡಿಸುವ ಹೊಸ ತೆಂಗಿನಕಾಯಿ ಒಂದೆರಡು ಎಲೆ, ತಿನ್ನಲು ಸಹ್ಯವಲ್ಲದ ಅಡಿಕೆ ಚೀಟು ಇಟ್ಟು ತಾಂಬೂಲ ಕೊಟ್ಟು ಬೃಹದಾಕಾರವಾಗಿ ಹಲ್ಲುಗಿಂಜಿ ಬೀಳ್ಕೊಟ್ಟುಬಿಟ್ಟರೆ ಅಲ್ಲಿಗೆ ಕಾರ್ಯಕ್ರಮ ಅದ್ಧೂರಿಯಲ್ಲಿ ಮುಗಿದಹಾಗೇ ಆಯ್ತು! ಅಂಥವರಿಗೆ ಅತಿ ಕಡಿಮೆ ವೆಚ್ಚದಲ್ಲಿ ಮಾಡಿಕೊಡಬಹುದಾದದ್ದು ಹಯಗ್ರೀವ.

ಇನ್ನು ಹಯಗ್ರೀವದ ಬಗ್ಗೆ ಏನು ಹೇಳಲಿ ? ಅಪ್ಪಟ ದೇಸೀ ಸಿಹಿತಿನಿಸು. ನಕಲು ಮಾಡಿದರೂ ಒಂದೇ ಮಾಡದಿದ್ದರೂ ಒಂದೇ. ಸ್ವಲ್ಪ ಹೆಚ್ಚೋ ಕಮ್ಮಿಯೋ ಬೇಯಿಸಿದ ಯಾವ ಬೇಳೆಗೇ ಆಗಲಿ ಹದವಾಗಿ ಸಕ್ಕರೆ ಯಾಲಕ್ಕಿ ಹಾಕಿ ತಿಂದರೆ ರುಚಿ ಸಹಜವೇ. ಅದರಲ್ಲೂ ಹಲವು ತಿನಿಸುಗಳಿಗೆ ಮೂಲವಸ್ತುವಾದ ಕಡ್ಲೆಯಿಂದ ಮಾಡಿದ ಕಡ್ಲೆಬೇಳೆ ಅವುಗಳಲ್ಲೇ ಉತ್ಕೃಷ್ಟವಾದುದು. ಅಡ್ಡಡ್ಡ ಬೆಳೆಯುವುದು ಬಿಟ್ಟರೆ ಇನ್ಯಾವುದೇ ಅಡ್ಡಪರಿಣಾಮವಿಲ್ಲ!! ಉದ್ದ ಪರಿಣಾಮವಿರುವುದು ವಾಯುಸ್ತುತಿಮಾಡಿದರೆ ಹೊರಟುಹೋಗಿ ವಾಯುಮಂಡಲದಲ್ಲಿ ವಿಲೀನವಾಗಿಬಿಡುತ್ತದೆ ! ಹೀಗಾಗಿ ದುಷ್ಪರಿಣಾಮ ರಹಿತ ಘನವಸ್ತುವಿನಾಕಾರವೂ ಇಲ್ಲದ ದ್ರವವೆಂದು ಕರೆಯಲೂ ಅಸಾಧ್ಯವಾಗಿರುವ ಮಧ್ಯಂತರ ರೂಪದ ಈ ತಿನಿಸಿನ ವಸ್ತುವಿಗೆ ವೈಜ್ಞಾನಿಕವಾಗಿ ಯಾವ ರೂಪದ್ದು ಎಂಬುದನ್ನೂ ನೀವೇ ಹೆಸರಿಸಿಕೊಳ್ಳಬೇಕಾದ ಪ್ರಸಂಗ ಇದೆ ! ದ್ರವವಸ್ತುವನ್ನು ಕಾಯಿಸಿದಾಗ ಅದು ಆವಿಯಾಗಿ ಅನಿಲವಾಗಿ ಮಾರ್ಪಡುತ್ತದೆ ಎಂಬುದನ್ನು ತಿಳಿದಿದ್ದರೂ ಅದೂ ಅಲ್ಲದ ಇದೂ ಅಲ್ಲದ ಈ ಇದನ್ನು ತಿಂದಾಗ ಅದು ಅನಿಲರೂಪದಿಂದ ಹೊರಬರುತ್ತದೆ ಎಂಬುದನ್ನು ಯಾವುದೇ ಕೋರ್ಟಿನ ಕಟಕಟೆಯಲ್ಲಿ ನಿಂತು ಸಾಕ್ಷೀಸಹಿತ ಸಾಬೀತುಪಡಿಸಲು ಮರ್ಯಾದೆಗಂಜಿ ಹಿಂಜರಿವ ’ವಿಷಯವಸ್ತು’ ಇದಾಗಿದೆ!

ಮುದುಕರು ಅಕಸ್ಮಾತ್ ತಿಂದುಬಿಟ್ಟರೆ ಜೊತೆಗೆ ಹಿಮಾಲಯ ಡ್ರಗ್ ಕಂಪನಿಯ ಗ್ಯಾಸೆಕ್ಸ್ ಮಾತ್ರೆಯನ್ನೂ ಸೇವಿಸುವುದು ಒಳಿತು! ಆಯುರ್ವೇದ ಭಂಡಾರಗಳಲ್ಲಿ ವಾಯುವಿಳಂಗ ಎಂಬ ಚಿಕ್ಕ ಚಿಕ್ಕ ಬೀಜದ ರೂಪದ ಗಿಡಮೂಲಿಕೆ ದೊರೆಯುತ್ತದೆ,ಅದನ್ನು ಅರೆದು ಹುಡಿಮಾಡಿ ನೀರಿಗೆ ಹಾಕಿ ಕುಡಿದರೂ ಅನುಕೂಲ. ಕೆಲವು ಮುದುಕರಿಗೆ ಸುಧಾರಿಸಿಕೊಳ್ಳಲು ದಿನವೆರಡು ಹಿಡಿದೀತು, ಗಾಭರಿಯಾಗಬೇಡಿ ಸಾಯುವ ಕೇಸಂತೂ ಅಲ್ಲ!! ಹೆಂಗಸರು ತಿಂದರೆ ಮುಖ ಮುಖ ನೋಡ್ಕೊಂಡು ನಗ್ತಾರೆ. ಆ ನಗುವಿನ ಆಸುಪಾಸಿನಲ್ಲೆಲ್ಲೋ ಆ ವಾಯುವನ್ನು ವಾಯುಮಂಡಲಕ್ಕೆ ಉಡ್ಡಯನ ಮಾಡಿಬಿಡುತ್ತಾರೆ--ಗೊತ್ತೇ ಆಗುವುದಿಲ್ಲ ಮಾರಯ್ರೆ !

ತಿಪ್ಪಾ ಭಟ್ಟರು ಯಾಕೆ ಹಯಗ್ರೀವವನ್ನೇ ಮಾಡುತ್ತಾರೆಂದರೆ ಅವರಿಗೆ ತಯಾರಿಸಲು ಬರುವ ಸಿಹಿತಿನಿಸುಗಳಲ್ಲಿ ಅತೀ ಸುಲಭದ ತಿನಿಸು ಇದಾಗಿದೆ. ಪಾಕ-ಗೀಕ ಎಂತ ಜಾಸ್ತಿ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಅವರು ಮೂರು ಸಲ ಹರೇರಾಮ ಎನ್ನುವುದರೊಳಗೆ ಬೇಳೆ ಬೆಂದಿರುತ್ತದೆ, ಬಾಣಲೆಗೆ ಹಾಕಿ ಸಕ್ಕರೆಹಾಕಿ ಯಾಲಕ್ಕಿ ಪುಡಿ ಹಾಕಿ ತಿರುಗಿಸುತ್ತಾ ಇನ್ನೊಮ್ಮೆ ಹರೇರಾಮ ಎಂದುಬಿಡುವಷ್ಟರಲ್ಲಿ ಹಯಗ್ರೀವ ರೆಡಿ ! ಸಾಕು ಜಾಸ್ತಿ ಬರೆಯಲಾರೆ, ತೀರಾ ಜಾಸ್ತಿಯಾಗಿಬಿಟ್ಟರೆ ನೀವು ಭಟ್ಟರನ್ನು ಹುಡುಕಿಕೊಡಿ ಅಂದ್ರೆ ಕಷ್ಟ. ಅವರು ನಿಂತಲ್ಲೇ ನಿಲ್ಲೋ ಪ್ರಾಣಿ ಅಲ್ಲ! ಭಟ್ಟರದ್ದು ರಾಹುಪಾದ [ಪಾದದ ಕೆಳಮೈಯ್ಯಲ್ಲಿ ಮಧ್ಯದಲ್ಲಿ ಸ್ವಲ್ಪ ತಗ್ಗಿನ ಜಾಗವಿರುತ್ತದೆ, ಅದಿಲ್ಲದೇ ಸಪಾಟಾಗಿ ಹಲಗೆಯಂತೇ ನೇರವಾಗಿರುವ ಪಾದ ಉಳ್ಳವರನ್ನು ರಾಹುಪಾದಿಗರು ಎನ್ನುತ್ತಾರೆ ಎಂಬುದಾಗಿ ಯಾರೋ ಹೇಳಿದ್ದನ್ನು ನಾನು ಕೇಳಿಕೊಂಡು ನಿಮಗೆ ಇಲ್ಲಿ ಹೇಳಿದ್ದೇನೆ.] ಅಂತ ತಿಳಿಯಿತು. ರಾಹುಪಾದದ ಬಗ್ಗೆ ಮಾಧ್ಯಮದವರಿಗೆ ಗೊತ್ತಾದರೆ ಹಳ್ಳಿಯಲ್ಲಿ ಕೆಲಸವಿಲ್ಲದ ಹಕ್ಕಿಶಕುನದವರಿಗೆ ಬಣ್ಣ ಹಚ್ಚಿ ಡ್ರೆಸ್ಸುಮಾಡಿಸಿ ಅವರನ್ನು ರಾತ್ರೋರಾತ್ರಿ ’ಗುರೂಜಿ’ಮಾಡಿ ಕೂರಿಸಿಕೊಂಡು ದಿನಗಟ್ಟಲೆ ಅದರಬಗ್ಗೇ ಕೊರೆಯಲು ಆರಂಭಿಸಿಬಿಡುತ್ತಾರೆ. ಅದ್ಕೇ ಅಂದೆ ನೀವೂ ಕೇಳ್ಕೊಂಡು ಸುಮ್ನಾಗಿ, ಹಲುಬ್ತಾ ತಿರುಗ್ಬೇಡಿ, ನಿಮ್ದು ರಾಹುಪಾದವದರಂತೂ ನೀವು ನಿಂತಲ್ಲಿ ನಿಲ್ಲುವುದಿಲ್ಲ, ಇನ್ನು ಯಾವ ಯಾವ ಮಾಧ್ಯಮದ ಕಚೇರಿಗೆ ಲಗ್ಗೆ ಇಡಬೇಕೋ ದೇವರೇ ಬಲ್ಲ !

|| ಇತಿ ಶ್ರೀ ಹಯಗ್ರೀವ ಪುರಾಣೇ ಪೂರ್ವೋತ್ತರ ಅಭಯಖಂಡೇ ಏಕೋಧ್ಯಾಯಃ ||

|| ಸರ್ವತ್ರ ಹವಯಗ್ರೀವ ಪ್ರಾಪ್ತಿರಸ್ತು || ||ಸಮಸ್ತ ಸನ್ಮಂಗಳಾನೀ ಭವಂತು ||

ಇನ್ನೇನೇನ್ ಬೇಕೋ ನೀವೇ ಹೇಳ್ಕೊಳಿ ನಾನು ಎದ್ದು ಹೊರಟೆ ........

Thursday, September 8, 2011

ಸಾರ್ಸಂಬಾಳೆ ಹೂವು ಸೀತಾರಾಂಭಟ್ಟರ ಪ್ರೀತಿಗೆ ಪಾತ್ರವಾದ ಕಥೆ !

[ಅಂತರ್ಜಾಲ ದಯೆಯಿಂದ ದೊರೆತ ಚಿತ್ರ ಕೇವಲ ಕಲ್ಪನೆಗೆ, ಸಾರ್ಸಂಬಾಳೆ ಹೂವಿನ ಹೋಲಿಕೆ ಇರುವ ಹೂವು ]

ಸಾರ್ಸಂಬಾಳೆ ಹೂವು ಸೀತಾರಾಂಭಟ್ಟರ ಪ್ರೀತಿಗೆ ಪಾತ್ರವಾದ ಕಥೆ !

ಮೇಲಿನಗಂಟ್ಗೆಯ ಮೂಲೆಮನೆಯ ಹಿತ್ತಲ ಏರಿಯಲ್ಲಿ ಕೊರೆಜಾಗದಲ್ಲಿ ಕುಟುಕು ಜೀವ ಹಿಡಿದಿದ್ದ ಆ ಗಿಡ ಅಲ್ಲೇ ಚಿಗಿತು ಹೂವು ಬಿಡುತ್ತದೆ ಎಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ಇಳಿಮಳೆಗಾಲ ಸರಿದು ಚಳಿಬೀಳುವ ಸಮಯಕ್ಕೆ ಬೆಳ್ಳಂಬೆಳಿಗ್ಗೆ ಚಿಕ್ಕ ಚಿಕ್ಕ ಹಳದಿ ಹೂವುಗಳಿಂದ ಮೈದುಂಬಿಕೊಂಡು ಮೈಮೇಲೆ ಬಿದ್ದ ಇಬ್ಬನಿಗಳ ಮುತ್ತಿನ ಮಣಿಗಳನ್ನು ಹೊತ್ತು ನಳನಳಿಸುವ ಚಿಕ್ಕ ಶರೀರದ ಗಿಡವದು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೇ ಮಲೆನಾಡು-ಕರಾವಳಿಯ ಬಹುತೇಕರಿಗೆ ಸಾರ್ಸಂಬಾಳೆಯನ್ನು [ಪ್ರಾಂತೀಯ ಹೆಸರು ವಿಭಿನ್ನವಾಗಿರಬಹುದು] ಬಿಟ್ಟಿರಲಾಗಲೀ ಮರೆಯಲಾಗಲೀ ಆಗುವುದಿಲ್ಲ. ಪಕ್ಕದ ಮನೆಯ ಹುಡುಗಿ ಹೇಗೆ ಆಪ್ತವಾಗಿ ಕಾಣುತ್ತಾಳೋ ಅಷ್ಟೇ ಆಪ್ತವಾಗಿಬಿಡುವ ಸಹಜತೆಯುಳ್ಳ ಮುದ್ದು ಗಿಡ. ಅಲ್ಲಲ್ಲಿ ಚಿಕ್ಕ ಚಿಕ್ಕ ಚುಚ್ಚುವ ಮುಳ್ಳಿನಂತಹ ಗುಚ್ಛಗಳಲ್ಲಿ ಹಳದಿ ಹೂವುಗಳಿರುವುದು ಈ ಗಿಡದ ವಿಶೇಷ. ಹಾಗಂತ ಇದು ಪೂರ್ತಿ ಗೆಂಟ್ಗೆ ಹೂವಿನ ಜಾತಿಗೆ ಸೇರುವುದೂ ಇಲ್ಲ.

ಶ್ಯಾಮ ಭಟ್ಟರು ೧೮ರ ಹರೆಯದಲ್ಲಿದ್ದಾಗ ಅವರ ಮನೆಯ ಹಿತ್ತಿಲತುಂಬಾ ಆ ಗಿಡಗಳಿದ್ದವಂತೆ. ಆಮೇಲೆ ಅದೂ ಇದೂ ಕೆಲಸಮಾಡುತ್ತಾ ಹೋಗಲಿಬಿಡು ಎಲ್ಲಾ ಕಡೆ ಇರುತ್ತದೆ ಎಂದುಕೊಂಡ ಅವರು ಎಲ್ಲವನ್ನೂ ಕಿತ್ತೆಸೆದು ಕೇವಲ ಒಂದೇ ಬುಡವನ್ನು ಬಿಟ್ಟಿದ್ದರು. ಹೋಗೇಬಿಡ್ತು ಎನ್ನುವ ಹೊತ್ತಿಗೆ ಇನ್ನೂ ಇದ್ದೇನೆ ಅನಿಸೋ ಹಾಗೇ ಇನ್ನೂ ಜೀವದಿಂದಲೇ ಇದ್ದ ಗಿಡಕ್ಕೆ ಯಾರೂ ಗೊಬ್ಬರ ನೀರು ಹಾಕಿದವರಿಲ್ಲ. ಏರು ಜವ್ವನದ ಸೀತಾರಾಂಭಟ್ಟರಿಗೆ ಅದೆಲ್ಲದರ ಬಗ್ಗೆ ಆಸ್ಥೆಯಾಗಲೀ ಆಸಕ್ತಿಯಾಗಲೀ ಇರಲೇ ಇಲ್ಲ. ಯೌವ್ವನದಲ್ಲಿ ಕತ್ತೆಯೂ ಚೆನ್ನಾಗಿ ಕಾಣಿಸುತ್ತದೆ ಎಂಬಂತೇ ಎಳೆಯ ಭಟ್ಟರ ಕಳಿಯದ ಹೃದಯಕ್ಕೆ ಹೊಳೆವ ಕಣ್ಣಿನ ಹುಡುಗಿಯರು ಕನ್ನಹಾಕಿಬಿಡುತ್ತಿದ್ದರು! ಹಾಗಂತ ಅದು ಅವರ ತಪ್ಪೂ ಅಲ್ಲ ! ಭಟ್ಟರು ನೋಡಿದಾಗ ಅಲ್ಲೇಲ್ಲೋ ಹಾದಿಯಲ್ಲಿ ಅಲೆದಾಡುವ ಹುಡುಗಿಯರು ತಾವೂ ನೋಡಿದರು, ಏನಾಗುತ್ತಿದೆ ಎನ್ನುವ ಮೊದಲೇ ಕಣ್ಣುಗಳು ಒಂಥರಾ ಚಾಟಿಂಗ್ ಶುರುಮಾಡಿಬಿಡುತ್ತಿದ್ದವು!

ಅಪ್ಪಯ್ಯ ಮನೆಯಲ್ಲೇ ಇರುವಾಗ ಭಟ್ಟರು ಹೊರಗೆ ಹಾಗೆಲ್ಲಾ ಬಂದು ನಿಲ್ಲುತ್ತಿರಲಿಲ್ಲ. ಹಜಾರದಲ್ಲಿ ನಿಲ್ಲಲೂ ಹೆದರುವ ಸಂಪ್ರದಾಯಸ್ಥ ಮನೆತನ ! ೯ ಮೊಳದ ಕಂದುಪಟ್ಟೆ ಅಂಚಿನ ಬಿಳೇ ಧೋತಿ ಉಟ್ಟ ಅಪ್ಪಯ್ಯ ಶಾಲಿಬಟ್ಟೆಯ ಬನೀನು ತೊಟ್ಟು ಹೆಗಲಿಗೆ ಬಿಳೇ ಶಾಲನ್ನು ಹೊದ್ದು ಕೈಲಿ ಬೆಳ್ಳಿಕಟ್ಟಿನ ಬೆತ್ತದ ದೊಣ್ಣೆ ಹಿಡಿದು ಕೂತರೆ ಸರ್ದಾರ್ ಪಟೇಲರ ಥರಾ ಕಾಣ್ತಿದ್ರು. ಪೊದೆ ಮೀಸೆಯಲ್ಲಿ ಬಾಯಗಲಿಸಿ ಅದೂ ಇದೂ ಮಾತನಾಡುತ್ತಾ ಸಣ್ಣಗೆ ನಕ್ಕರೂ ಎಳೆಮಕ್ಕಳಲ್ಲಿ ಅದರಿಂದಲೇ ನಡುಕ ಹುಟ್ಟಿಸುವಂಥಾ ಘನಗಾಂಭೀರ್ಯ ಅವರದ್ದು.

" ಸೀತಾರಾಮ " ಎಂದು ಕರೆದರೆ ಸಾಕು ಹರೆಯದ ಭಟ್ಟರು ಹಸುಗೂಸಿನ ರೀತಿ ಹೆದರುತ್ತಲೇ ಓಡಿಬಂದು
" ಏನಪ್ಪಯ್ಯಾ ? " ಎಂದು ತಲೆಬಾಗಿ ನಿಲ್ಲುತ್ತಿದ್ದರು.

ಸಂಪ್ರದಾಯವನ್ನು ಬಿಡಲೂ ಮನಸ್ಸಿಲ್ಲದ ಆದ್ರೆ ಅಷ್ಟೇ ಸಹಜವಾಗಿ ಹೃದಯದ ಭಾವನೆಗಳನ್ನೂ ಅದುಮಿಡಲಾರದ ದ್ವಂದ್ವದಲ್ಲಿ ಸೀತಾರಾಮರು ತೊಳಲಾಡುತ್ತಿದ್ದರು. ಇದಕ್ಕೆಲ್ಲಾ ಕಾರಣವೂ ಇರದೇ ಇರಲಿಲ್ಲ. ಅಂಚಿಮನೆಯ ಸುಧಾ, ಮೇಗಣಮನೆಯ ರಾಧೆ, ಆರ್ಕೋಡ್ಲು ಸೀತಕ್ಕನ ಮಗಳು ಸೌಮ್ಯ ಈ ಮೂರರಲ್ಲಿ ’ ಯಾರು ಹಿತವರು ನಿನಗೆ ಈ ಮೂವರೊಳಗೆ ? ’ ಎಂಬ ಪ್ರಶ್ನೆ ಭಟ್ಟರ ಮನದಲ್ಲಿ ಕೊರೆಯುತ್ತಿದ್ದರೆ ಯಾರನ್ನೂ ಬಿಡಲೂ ಆಗುತ್ತಿರಲಿಲ್ಲ. ಹದವಾಗಿ ಬೆಳೆದ ಸುಧಾಳ ಕಪ್ಪು ನೀಳ ಜಡೆ ತನ್ನನ್ನು ಸೆಳೆದಿದ್ದರೆ ರಾಧೆಯ ಚಾಲಾಕಿತನದ ಚಿಗರೆ ಕಣ್ಣುಗಳು ಯಾವಗಲೂ ಕಣ್ಣಿಗೆ ಕಟ್ಟಿದ ಹಾಗಿದ್ದವು! ಗುಣದಲ್ಲಿ ಶ್ರೀಮಂತೆಯಾದ ಸೌಮ್ಯ ರೂಪದಲ್ಲೂ ಈ ಇಬ್ಬರಿಗೆ ಕಮ್ಮಿಯೇನೂ ಇರಲಿಲ್ಲ !

ಸೀತಾರಾಂಭಟ್ಟರು ಕಮ್ಮಿ ಎಂದುಕೊಳ್ಳಬೇಡಿ, ಥೇಟ್ ಶ್ರೀರಾಮಚಂದ್ರ. ಬಸ್ಸಿನಲ್ಲಿ ಒಮ್ಮೆ ಕುಮಟಾಕ್ಕೆ ಹೊರಟಾಗ ಗೇರುಸೊಪ್ಪೆ ಬಾಷಾ ಸಾಬರ ಮಗಳು ಸಬೀಹಬಾನು ಬುರ್ಖಾದೊಳಗಿಂದ ದಿಟ್ಟಿಸಿದ್ದೇ ದಿಟ್ಟಿಸಿದ್ದು ! ಆಕೆಗೆ ಭಟ್ಟರಂತಹ ಚೆಲುವ ಅದುವರೆಗೆ ಕಂಡಿರಲೇ ಇಲ್ಲವೇನೋ ಅನ್ನುವಹಾಗೇ ಎವೆಯಿಕ್ಕದೆ ನೋಡುತ್ತಿದ್ದಳು. ಅವಳಿನ್ನೂ ಹುಡುಗಿ ಭಾಷಾರ ಮಗಳು ಎಂಬುದು ಅವಳ ಪಕ್ಕ ಕುಳಿತ ವ್ಯಕ್ತಿ ಯಾರಿಗೋ ಪರಿಚಯಿಸುವಾಗ ತಿಳಿಯಿತು. ಸಹಜವಾಗಿ ಆಕೆ ಹೇಗಿದ್ದಾಳೆಂದು ಭಟ್ಟರಿಗೂ ಕುತೂಹಲ ಹುಟ್ಟಿತ್ತು. ಆದರೆ " ಬುರ್ಖಾ ತೆಗಿ ನಾನು ನೋಡಬೇಕು " ಎನ್ನಲಿಕ್ಕೆ ಸಾಧ್ಯವೇ ? ಹಾಗಂತ ಅವಳನ್ನೇ ಆಗಲೀ ಮತ್ಯಾರನ್ನೇ ಆಗಲಿ ಕಂಡ ತಕ್ಷಣ ಲವ್ವಿ ಡವ್ವಿ ಹಾಡುವ ಇರಾದೆ ಭಟ್ಟರದಲ್ಲ, ಆದರೂ ಎದೆಯಾಳದಲ್ಲಿ ಹುದುಗಿರುವ ಹೇಳಲಾಗದ ಭಾವಗಳಿಗೆ ಬಣ್ಣ ಹಚ್ಚಲು ಮನ ಬಯಸುತ್ತಿತ್ತು! ಹಾಗೊಮ್ಮೆ ನೋಡಿದರೆ ಅದು ಪ್ರೀತಿಯೋ ಪ್ರೇಮವೋ ಕಾಮವೋ ಒಂದೂ ಭಟ್ಟರಿಗರ್ಥವಿಲ್ಲ.

ಕ್ರಿಸ್ತಿಯನ್ ಕೇರಿಯ ಇನಾಸ ಆಗಾಗ ಹಳೆಯ ತೆಂಗಿನಕಾಯಿಗಳನ್ನು ನೆಲಕ್ಕೆ ಉಕ್ಕಿನ ಸೂಲಿಗೆ ಹೂತು ಸಿಪ್ಪೆ ಸುಲಿದುಕೊಡಲು ಬರುತ್ತಿದ್ದ. ಸುಲಿದ ಕಾಯಿಗಳನ್ನು ರಾಶಿಹಾಕಿ ವ್ಯಾಪಾರಿಗಳಿಗೆ ಹೇಳಿಕಳಿಸಿ ಮಾರುವುದು ಅಪ್ಪಯ್ಯನ ವ್ಯವಹಾರ. ಒಬ್ಬಿಬ್ಬರು ವ್ಯಾಪಾರಿಗಳು ಬಂದುನೋಡಿ ಅವರಲ್ಲಿ ಯಾರು ಜಾಸ್ತಿ ಹಣಕ್ಕೆ ಖರೀದಿಸಲು ಒಪ್ಪುತ್ತಾರೋ ಅವರಿಗೆ ಮಾರುವುದು ವಾಡಿಕೆಯಾಗಿತ್ತು. ಒಮ್ಮೆ ಕಾಯಿ ಸುಲಿಯದೇ ಬಹಳದಿನ ಕಳೆದಿತ್ತು. ಕಾಯಿಗಳು ಹಾಳಾಗಿ ಹೋಗುವ ಪ್ರಮೇಯ ಇರುವುದರಿಂದ ಇನಾಸನಿಗೆ ಬರಹೇಳುವಂತೇ ಅಪ್ಪಯ್ಯ ಸೀತಾರಾಂಭಟ್ಟರನ್ನು ಕಳಿಸಿದ್ದರು. ಇನಾಸನ ಮನೆಗೆ ಹೋದಾಗ ಆತ ಊರಲ್ಲಿ ಇಲ್ಲಾ ಎನ್ನುತ್ತಾ ಬಂದಾಕೆ ಇನಾಸನ ಮಗಳು ಮೇರಿ ; ಏನು ಚಂದ ಅಂತೀರಿ -ಚಂದ್ರನನ್ನೂ ನಾಚಿಸುವ ದುಂಡು ಮುಖ, ಗೋಧಿ ಬಣ್ಣ, ಕಾಮನ ಬಿಲ್ಲಿನ ಹುಬ್ಬು, ಹೊಳೆವ ತುಟಿ. ಭಟ್ಟರು ಎಲ್ಲಿ ಯಾವುದನ್ನು ನೋಡಿ ಸೋತರು ಎಂಬುದು ಅವರಿಗೂ ಅರಿವಿಲ್ಲ; ಅಷ್ಟೇ ಚೆನ್ನಾಗಿ ಬಂದು ಅಪ್ಪಿಕೊಳ್ಳುತ್ತೇನೆ ಎಂಬ ರೀತಿ ನೋಡುತ್ತಿದ್ದ ಮೇರಿಗೂ ತಿಳಿದಿರಲಿಲ್ಲ!

ಭಟ್ಟರು ಮನೆಯಲ್ಲಿ ಕುಳಿತಾಗ ಲೆಕ್ಕಾಹಾಕೀ ಹಾಕೀ ಸೋತು ಬಿಟ್ಟರು. ಸುಂದರ ಹುಡುಗಿಯರ ಯಾವುದಕ್ಕೆ ತಾನು ಸೋತೆ ಎನ್ನುವುದು ಸ್ಪಷ್ಟವಾಗದ ವಿಷಯವಾಗಿತ್ತು. ಒಮ್ಮೆ ಸುಧಾ ಇಷ್ಟವಾದರೆ ಇನ್ನೊಮ್ಮೆ ರಾಧೆ ಮನವನ್ನು ಕದ್ದೊಯ್ಯುತ್ತಾಳೆ, ಮಗುದೊಮ್ಮೆ ಸೌಮ್ಯ ಮತ್ತೊಮ್ಮೆ ಮೇರಿ !! ಯಾರಲ್ಲೂ ಹೇಳಿಕೊಳ್ಳಲೂ ಆಗದ ತನ್ನೊಳಗೇ ಬಚ್ಚಿಟ್ಟುಕೊಳ್ಳಲೂ ಆಗದ ಆ ಭಾವಗಳಿಗೆ ಏನೆಂದು ಕರೆಯೋಣ? ಕೆಲವೊಮ್ಮೆ ಹೀಗೂ ಯೋಚಿಸಿದರು : ರಾಜರ ಹಾಗೇ ಎಲ್ಲರನ್ನೂ ಮದುವೆಯಾಗುವುದು. ಮರುಕ್ಷಣ ಪಾಪ ಪ್ರಜ್ಞೆ ಭಟ್ಟರನ್ನು ಕಾಡಿ ಛೆ ಛೆ ಹಾಗೆಲ್ಲಾ ಮಾಡಲು ಸಾಧ್ಯವೇ ? ಪ್ರೀತಿಯನ್ನೂ ಶರೀರವನ್ನೂ ಒಬ್ಬಳಿಗೇ ಕೊಡಬೇಕಲ್ಲವೇ ? ಎಂದುಕೊಳ್ಳುತ್ತಾರೆ. ಆದರೂ ಒಬ್ಬರನ್ನೂ ಕಳೆದುಕೊಳ್ಳಲು ಮನಸ್ಸು ಸಿದ್ಧವಾಗುವುದೇ ಇಲ್ಲ.

ಹೆಗಡೆ ಮಾಸ್ತರು ವರ್ಗವಾಗಿ ಹೊಸಾಕುಳಿ ಶಾಲೆಗೆ ಬಂದವರು ಮೇಲಿನಗಂಟ್ಗೇಲೇ ಅಂಚಿಮನೆ ಪಕ್ಕದಮನೇಲಿ ಬಾಡಿಗೆಮನೆ ಮಾಡಿಕೊಂಡರು. ಹೀಗೇ ಅಡ್ಡಾಡ್ತಾ ಅಡ್ಡಾಡ್ತಾ ಇರೋ ಭಟ್ಟರು ಒಂದಿನ ಮಾಸ್ತರ ಮನೆ ಎದುರಿನಿಂದ ಹಾದು ಹೋಗ್ತಾ ಇರೋವಾಗ ಇಂಪಾದ ಗಾನವನ್ನು ಕೇಳಿ ಕ್ಷಣ ನಿಂತುಬಿಟ್ಟರು. ಅಬ್ಬಬ್ಬಾ ಎಂಥಾ ಕಂಠ, ಏನು ಸುಖ !! ಹಾಡುಕೇಳುತ್ತಾ ನಿಂತಿದ್ದ ಅವರಿಗೆ ಎಚ್ಚರವಾಗಿದ್ದು " ಅಮ್ಮಾ ನಾನು ಕಾಲೇಜಿಗೆ ಹೋಗಿ ಬತ್ತೆ " ಎಂಬ ದನಿ ಕೇಳಿ. ನೋಡುತ್ತಾರೆ ಸುರಲೋಕ ಸುಂದರಿ; ರಂಭೆ, ಮೇನಕೆ, ತಿಲೋತ್ತಮೆ ಎಲ್ಲರನ್ನೂ ಸೇರಿಸಿ ಎರಕಹೊಯ್ದ ಬೊಂಬೆ ಹೊರಟು ನಿಂತಿದ್ದಾಳೆ. ಕೈಲಿ ಒಂದೆರಡು ಪುಸ್ತಕಗಳು, ಬಣ್ಣದ ಛತ್ರಿ, ಚೂಡೀ ದಾರದಲ್ಲಿದ್ದ ಆಕೆಯ ತಲೆಯಲ್ಲಿ ಸಾರ್ಸಂಬಾಳೆ ಹೂವಿನ ಚಿಕ್ಕ ಮಾಲೆ!!

ಯಸ್, ಭಟ್ಟರು ನಿರ್ಧಾರಕ್ಕೆ ಬಂದುಬಿಟ್ಟರು! ಇದೇ ತನ್ನ ಹೂವು ! ತಿಳಿಸುವುದು ಹೇಗೆ? ಗೋತ್ರ,ಜಾತಕ-ಪಾತಕ ಇವನ್ನೆಲ್ಲಾ ನೋಡಬೇಡವೇ? ಮಾಸ್ತರು ತನಗೆ ಜಾತಕ ಕೊಟ್ಟಾರೆ ? ಯಾವುದನ್ನೂ ಯೋಚಿಸಲು ಸಮಯವಾಗಲೀ ಅದಕ್ಕೆಲ್ಲಾ ಮನಸ್ಸಾಗಲೀ ಇರಲಿಲ್ಲ. ಮುಂದೆ ನಡೆದವಳ ಹಿಂದೆ ನಡೆದು ಕೇಳಿದರು

" ಹಲೋ "

ಮುಖ ತಿರುಗಿಸಿ ನೋಡಿದಳು ಮಂದಗಮನೆ.

" ನಾನು ಶ್ಯಾಮ ಭಟ್ಟರ ಮಗ ಸೀತಾರಾಮ ಅಂತ, ನೀವು ತುಂಬಾ ಚೆನ್ನಾಗಿ ಹಾಡ್ತೀರಿ "

" ಇಲ್ಲಪ್ಪಾ ಏನೋ ಸುಮ್ನೇ ಹಾಡ್ದೆ ಅಷ್ಟೇ "

" ನೀವು ಹೆಗಡೆ ಮಾಸ್ತರ ಮಗಳಲ್ವೇ ? "

" ಹೌದು "

" ನಿಮ್ಮ ಹೆಸರು ಕೇಳ್ಬೋದೇ ? "

" ಸೌದಾಮಿನಿ "

ಇಬ್ಬರೂ ಕೆಲಹೊತ್ತು ಪರಸ್ಪರ ನೋಡುತ್ತಿದ್ದರೇ ಹೊರತು ಮಾತಿರಲಿಲ್ಲ. ಪಕ್ಕದಲ್ಲಿ ಯಾರೋ ಸರಿದುಹೋದಾಗ ಎಚ್ಚೆತ್ತು ಮುಂದೆ ಸಾಗಿದರು. ಮತ್ತೆ ಮಾತಿಲ್ಲ ಕತೆಯಿಲ್ಲ.

ಕಾಲೇಜು ಬರುವವರೆಗೂ ತನಗರಿವಿಲ್ಲದೇ ಹಿಂದೆ ಕೋಲೇ ಬಸವನ ರೀತಿ ಅಲೆದ ಸೀತಾರಾಂಭಟ್ಟರು ಸೌದಾಮಿನಿ ಕಾಲೇಜಿನೊಳಗೆ ಹೆಜ್ಜೆ ಹಾಕಿದಾಗ ಈ ಲೋಕಕ್ಕೆ ಮರಳಿ ಬಂದರು ! ಕೈಗಡಿಯಾರ ನೋಡಿಕೊಂಡು ನಿತ್ಯವೂ ಆ ಸಮಯಕ್ಕೆ ಕಾಲೇಜಿನ ವರೆಗೂ ಬರುವ ಸಾಹಸಕ್ಕೆ ಇಳಿದುಬಿಟ್ಟರು !

ಭಟ್ಟರ ಹಿತ್ತಿಲಲ್ಲಿರುವ ಸಾರ್ಸಂಬಾಳೆ ಕುಲದ ಏಕಮಾತ್ರ ಗಿಡ ನೀರು-ಗೊಬ್ಬರ ಕಾಣಹತ್ತಿತ್ತು. ಅಪ್ಪಯ್ಯ ಅದೆಲ್ಲಾ ಯಾಕೆ ಎಂದರೂ ಯಾಕೋ ತನಗಿಷ್ಟ ಎಂದ ಮಗನ ಧೋರಣೆಗೆ ವಿರುದ್ಧವಾಡಲಿಲ್ಲ. ಗಿರಿಮನೆ ನಾಗಪ್ಪ ಶೆಟ್ಟರು ಪೇಟೆಗೆ ಸಾಮಾನು ತರಲು ಹೋದವರು ಹಾದಿಯಲ್ಲಿ ನಿಂತು ಮಾತಾಡುತ್ತಿದ್ದ ಹೆಗಡೆ ಮಾಸ್ತರ ಮಗಳು ಮತ್ತು ಸೀತಾರಾಮನನ್ನು ಕಂಡುಬಿಟ್ಟರು. ಹಲ್ಲು ಕೀಳಿಸಲು ಹೊನ್ನಾವರಕ್ಕೆ ಬಂದ ಭಾಗೀರಥಕ್ಕ ಬಗ್ಗಿ ಬಗ್ಗಿ ನೋಡಿಯೂ ನೋಡದಂತೇ ನೋಡಿಕೊಂಡು ಬಂದಿದ್ದು ಮಾರನೇ ಮಧ್ಯಾಹ್ನದಿಂದ ಹಕ್ಕೆಚಡಿಯಲ್ಲಿ [ಹೊರಜಗುಲಿ ಹರಟೆಕಟ್ಟೆ] ಪುರಾಣ ಆರಂಭವಾಗಿಬಿಟ್ಟಿತು!

" ಆಯ್ಯಯ್ಯೋ ಕಾಲ್ಮಾನ ಕೆಟ್ಟೋಯ್ದು ಗಂಗಕ್ಕಾ.....ಆ ಮಾಸ್ತರ ಮಗ್ಳು ಮತ್ತೆ ಮೂಲೆಮನೆ ಶ್ಯಾಮನ ಮಾಣಿ ಪ್ಯಾಟೆಲಿ ನಿಂತ್ಗಂಡು ಮಾತಾಡಿದ್ದೇ ಮಾತಾಡಿದ್ದು ....ನೋಡ್ತ್ನಾ ಇರು ಇನ್ನೊಂದ್ ತಿಂಗ್ಳ ಕಳೀಲಿ ....ಇಬ್ರೂ ನಾಪತ್ತೆ ಆಯ್ದ್ವಿಲ್ಲೆ ಅಂದ್ರೆ ನನ್ ಹೆಸರ್ ತಗಿ. ಸಮಾ ಆತು ಆ ಶ್ಯಾಮಂಗೇನ್ ಕಮ್ಮಿ ಸೊಕ್ಕನೇ .....ಅಲ್ದಾ ? ಅಲ್ಲಾ ವಿಷ್ಯ ನಿನ್ ಕೈಲೇ ಇರ್ಲಿ ನಾ ಹೇಳಿದ್ದೇಳಿ ಹೇಳಡ ಮತೆ ......"

ಇಂಥಾ ಸುದ್ದಿಗೆ ಪತ್ರಿಕೆಯ ಯಾ ಮಾಧ್ಯಮದ ಅವಶ್ಯಕತೆ ಇರೋದಿಲ್ಲ. ಕಾಲಿಲ್ಲದ ಹಾವು ನುಣುಪು ಮೈಯ್ಯಿಂದ ಜಾರಿ ಓಡುವಂತೇ ಹಲ್ಲಿಲ್ಲದ ನಾಲಿಗೆಯಿಂದ ಕಿವಿಗೆ ಮತ್ತೆ ಕಿವಿಯಿಂದ ನಾಲಿಗೆಗೆ ಆವು ಹರೆದಾಡುತ್ತವೆ ! ಕೆಲವೊಮ್ಮೆ ಮಾಧ್ಯಮಗಳು ತಲುಪಲಾರದ ಜಾಗವನ್ನೂ ತಲ್ಪಿಬಿಡುತ್ತವೆ !

ಬೆಂಕಿಯನ್ನು ಬಹಳಕಾಲ ಮುಚ್ಚಿಡಲೂ ಬಚ್ಚಿಡಲೂ ಸಾಧ್ಯವಾಗುವುದಿಲ್ಲ ಹೇರ್‍ಗೋ ಹಾಗೇ ಇಂಥಾ ವಿಷಯಗಳೂ ಕೂಡ. ವಿಷಯವೇ ಇರದಿದ್ದರೂ ಸೃಷ್ಟಿಸುವ ’ವಿರಂಚಿ’ಗಳು ಸಮಾಜದಲ್ಲಿರುತ್ತಾರೆ ಅಂದಮೇಲೆ ಇದ್ದ ವಿಷಯಕ್ಕೆ ಮತ್ತಷ್ಟು ಸೇರಿಸಿ ಕಥೆ ಹೊಸೆಯಲು ಅವರಿಂದ ಆಗುವುದಿಲ್ಲ ಎನ್ನಲು ಆದೀತೇ ? ಹಾಗೆ ನೋಡಿದರೆ ಲೋಕದ ಅಷ್ಟೂ ಮಾನವ ಮುಖಗಳ ಹಿಂದೆ ಅಷ್ಟೇ ಕಥೆಗಳು ಅಡಗಿವೆ! ಆದರೆ ಕೆಲವೊಮ್ಮೆ ಕೆಲವು ಇಷ್ಟವಾಗುತ್ತವೆ ; ಇನ್ನು ಕೆಲವು ಸಹಿಸಲು ಕಷ್ಟವೆನಿಸುತ್ತವೆ! ಇಂತಹ ಕಷ್ಟವೆನಿಸುವ ಸರದಿ ಶ್ಯಾಮ ಭಟ್ಟರಿಗೆ ಬಂದಿದ್ದು ಇದೇ ಮೊದಲು. ಯಾರಿಗೂ ತಲೆಬಾಗಿದ ಜನವಲ್ಲ ಅದು! ಅಜಾನುಬಾಹು ಶರೀರದಂತೇ ವ್ಯಕ್ತಿತ್ವವನ್ನೂ ಆ ಮಟ್ಟಕ್ಕೆ ಬೆಳೆಸಿನಿಂತ ಜನ ಅವರು. ಹಾಗಂತೇಳಿ ಅನುಕಂಪ, ದಯೆ, ದಾನ-ಧರ್ಮ, ಕಟ್ಲ-ಕಂದಾಚಾರ ಇವೆಕ್ಕಲ್ಲಾ ಕೊರತೆಮಾಡಿದವರಲ್ಲ. ಆದರೂ ಸಮಾಜದಲ್ಲಿ ’ ದೇಹಿ ’ ಎಂದು ಸಹಾಯ ಕೇಳುವ ದಿನ ಅವರ ಪಾಲಿಗೆ ಬಂದಿರಲಿಲ್ಲ. ನಾಕು ಜನರ ಮಧ್ಯೆ ಎದ್ದುಕಾಣುವ ಮನುಷ್ಯನಾಗಿ ಕಾಲಹಾಕಿದ್ದರು. ಮಗ ಹೀಗೆ ಮಾಡಬಹುದೆಂಬ ಅನಿಸಿಕೆ ಇರಲಿಲ್ಲ.

ಇಲ್ಕೇಳಿ ನಿಮ್ಗೊಂದ್ ಸಣ್ ವಿಷಯ ಹೇಳಲೇಬೇಕು. ಶ್ಯಾಮ ಭಟ್ಟರು ಸಾರ್ಸಂಬಾಳೆ ಗಿಡಗಳನ್ನು ಯಾಕೆ ಕಿತ್ತುಹಾಕಿಸಿದ್ದರು ಬಲ್ಲಿರೋ ? ಇಲ್ಲತಾನೇ ? ಹಾಗಾದ್ರೆ ಕೇಳಿ-- ಶ್ಯಾಮಭಟ್ಟರಿಗೆ ಅವರ ಹರೆಯದಲ್ಲಿ ಒಬ್ಬಳು ಇಷ್ಟವಾಗಿದ್ದಳು. ಅತೀವ ಅಂಧಶ್ರದ್ಧೆ ಮತ್ತು ಕುರುಡು ಸಂಪ್ರದಾಯಗಳೇ ಮೆರೆದಿದ್ದ ಆ ಕಾಲದಲ್ಲಿ ಅತ್ಯಂತ ರೂಪಸಿಯಾಗಿ ಶ್ಯಾಮ ಭಟ್ಟರ ಮನಗೆದ್ದಿದ್ದ ಆ ಹುಡುಗಿಯನ್ನು ಮನೆಯವರನ್ನೆಲ್ಲಾ ವಿರೋಧಿಸಿ ಕಟ್ಟಿಕೊಳ್ಳುವುದು ಸಾಧ್ಯವಿರಲಿಲ್ಲ. ಸಾರ್ಸಂಬಾಳೆ ಹೂವಿನ ದಂಡೆಯನ್ನು ಚಳಿಗಾಲದ ಆದಿಯಲ್ಲಿ ಸದಾ ಮುಡಿದಿರುತ್ತಿದ್ದ ಆಕೆಯನ್ನು ಹೇಗಾದರೂ ಮದುವೆ ಆಗುವ ಮನಸ್ಸಿನಿಂದಿದ್ದ ಶ್ಯಾಮ ಭಟ್ಟರಿಗೆ ಅಂದು ನಿರಾಸೆಯೇ ಕಾದಿತ್ತು. ಹೇಗಾದರೂ ಮಾಡಿ ಹೇಳುವುದಕ್ಕೂ ಕೇಳುವುದಕ್ಕೂ ಮುನ್ನ ತುಮುಲಗಳೇ ಅಮರಿಕೊಂಡಿದ್ದ ಆ ದಿನಗಳಲ್ಲಿ ಒಂದಿನ ಆ ಹುಡುಗಿಯ ಮದುವೆ ನಿಶ್ಚಿತಾರ್ಥ ಬೇರೇ ಗಂಡಿನೊಟ್ಟಿಗೆ ನಡೆದಿದ್ದು ತಿಳಿದುಬಂದಿತ್ತು. ಶ್ಯಾಮ ಭಟ್ಟರಿಗೆ ಊಟ ಬೇಡಾ ...ನಿದ್ದೆ ಬೇಡಾ. ಹಿಂದಿನ ಕಾಲದಲ್ಲಿ ಗಂಡಸತ್ತಾಗ ಅಳುತ್ತಾ ಕೊರುವ ಹೆಂಡತಿಯಂತಾಗಿಬಿಟ್ಟಿದ್ದರು ಶ್ಯಾಮಭಟ್ಟರು. ಅಂತೂ ಗಟ್ಟಿ ಮನಸ್ಸು ಮಾಡಿಕೊಂಡು ಎಲ್ಲಾದರೂ ಇರಲಿ ಸುಖವಾಗಿರಲಿ ಎಂದು ಮನದಲ್ಲೇ ಬೀಳ್ಕೊಟ್ಟರು. ಅಂದಿನಿಂದ ಸಾರ್ಸಂಬಾಳೆ ಹೂವನ್ನು ಕಂಡಾಗೆಲ್ಲಾ ಅವರಿಗೆ ಆ ನೆನಪು ಕಾಡುತ್ತಿತ್ತು ! ಅದಕ್ಕಾಗಿಯೇ ಸಾತ್ವಿಕ ಮನದಲ್ಲೂ ಆ ಗಿಡಗಳೇ ಬೇಡ ಎಂಬ ಕಠೋರ ನಿರ್ಧಾರವನ್ನು ಕೈಗೊಂಡು ಕೀಳಿಸಿಹಾಕಿಬಿಟ್ಟಿದ್ದರು. ಆದರೂ ಒಂದನ್ನು ಕೀಳದೇ ಹಾಗೇ ಬಿಟ್ಟಿದ್ದು ಅವರ ಕಮರಿದ ಪ್ರೀತಿಗೆ ದ್ಯೋತಕವಾಗಿಯೋ ಎಂಬಂತಿತ್ತು.

ತನಗಾದಂತೇ ಮಗನಿಗೂ ನೋವಾಗುವುದು ಶ್ಯಾಮ ಭಟ್ಟರಿಗೆ ಇಷ್ಟವಿರಲಿಲ್ಲ. ವಿಷಯ ತಿಳಿದ ಅವರು ಹೊರಗೆ ಮಗನಿಗೆ ಅದನ್ನು ತೋರಗೊಡಲೂ ಇಲ್ಲ. ಸುಮ್ನೇ ಎದ್ದು ಶಾಲು ಹೆಗಲಿಗೇರಿಸಿಕೊಂಡು ಬೆಳ್ಳಿಕಟ್ಟಿನ ಬೆತ್ತದ ದೊಣ್ಣೆ ಹಿಡಿದು ಹೆಗಡೆ ಮಾಸ್ತರ ಹೊಸಿಲು ತುಳಿದರು. ವಾರದಲ್ಲೇ ಎರಡೂ ಮನೆಗಳಲ್ಲಿ ಮಾವಿನ ತೋರಣಗಳು ಕಂಡವು. ನೋಡನೋಡುತ್ತಿದ್ದಂತೇ ಮಾಸ್ತರ ಮಗಳನ್ನು ಪಾಲಕರು-ಹೆಣ್ಣಿನ ಕಡೆಯವರೊಟ್ಟಿಗೆ ಶ್ಯಾಮ ಭಟ್ಟರು ತಮ್ಮನೆಗೇ ಕರೆಸಿಕೊಂಡರು. ಹಾಕಿದ್ದ ದೊಡ್ಡ ಚಪ್ಪರದಲ್ಲಿ ತಯಾರಿಸಿದ್ದ ಸುಂದರ ಮಂಟಪದಲ್ಲಿ ವಿಧಿವತ್ತಾಗಿ ಸೀತಾರಾಂಭಟ್ಟರು ಮತ್ತು ಸೌದಾಮಿನಿ-ಯರ ಮದುವೆ ಆ ಊರಿಗೇ ಅತ್ಯಂತ ವಿಜೃಂಭಣೆ ಎನ್ನುವ ರೀತಿಯಲ್ಲಿ ನಡೆದುಹೋಯಿತು. ಹಾಡುಹಕ್ಕಿಯೊಂದು ಸುಂದರ ಮಾಮರದ ಆಶ್ರಯ ಪಡೆಯಿತು. ಪ್ರಸ್ತದ ರಾತ್ರಿಯಲ್ಲಿ ಸೀತಾರಾಂಭಟ್ಟರು ತಾವೇ ಪ್ರೀತಿಯಿಂದ ಬೆಳೆತೆಗೆದ ಸಾರ್ಸಂಬಾಳೆ ಹೂವಿನ ಮಾಲೆಯನ್ನು ಮನದನ್ನೆಗೆ ಮುಡಿಸಿದರು.

Tuesday, September 6, 2011

ಹಾಲು ಕುಡಿದು ಹೊರಟ ಗಣಪನ ಕಾಲು ಬೆರಳು ಹುಡುಕುತ್ತಿದ್ದ ಆ ದಿನ!


ಹಾಲು ಕುಡಿದು ಹೊರಟ ಗಣಪನ ಕಾಲು ಬೆರಳು ಹುಡುಕುತ್ತಿದ್ದ ಆ ದಿನ !

ಬಾಲ್ಯದ ದಿನಗಳು ಎಲ್ಲರಿಗೂ ಅಚ್ಚುಮೆಚ್ಚು ಎಂಬುದು ನನ್ನ ಕಲ್ಪನೆ. ಅದು ಸಿಹಿಯೋ ಕಹಿಯೋ ಒಟ್ಟಾರೆ ಬದುಕನ್ನು ರೂಪಿಸುವಲ್ಲಿ ಆ ಹಂತ ಹಲವು ಪರಿಣಾಮಗಳನ್ನು ಬೀರಿರುತ್ತದೆ. ಅಂತಹ ನೆನಪುಗಳ ಮಧ್ಯೆ ಮಹಾಚೌತಿ ಎನಿಸಿದ ಗಣೇಶ ಹಬ್ಬದ ನೆನಪೂ ಒಂದು. ಶ್ರಾವಣದ ವೇಳೆ ರುದ್ರಪಠಣ ಶ್ರೀಸೂಕ್ತ ಪುರುಷಸೂಕ್ತಾದಿ ಅಭಿಷೇಕ ಪೂಜೆಗಳೇ ಜಾಸ್ತಿ ನಡೆಯುತ್ತದೆಯಷ್ಟೇ, ನಾಗರ ಪಂಚಮಿ ಮತ್ತು ಕೃಷ್ಣ ಜನ್ಮಾಷ್ಟಮಿ ಮಧ್ಯೆ ಬಂದು ಹೋಗುವ ಹಬ್ಬಗಳಾದವು. ಶ್ರಾವಣದಲ್ಲಿ ನಮ್ಮಲ್ಲಿ ಹೂವುಗಳು ಕಮ್ಮಿ. ಹೂವು ಬೇಕೆಂದರೆ ಪರಸ್ಥಳಗಳಿಂದ ತರಿಸಿಕೊಳ್ಳಬೇಕು. ನಮ್ಮಲ್ಲಿನ ಕುಂಭದ್ರೋಣ ಮಳೆಗೆ ತುಳಸಿ ಮತ್ತು ಬಿಲ್ವಪತ್ರೆಗಳು ಚೆನ್ನಾಗಿ ಚಿಗುರುತ್ತಿದ್ದವೇ ಹೊರತು ಹೂ ಗಿಡಗಳು ನೀರು ಕುಡಿದು ಗೊಬ್ಬರ ತಿಂದು ಹೊಟ್ಟೆಯುಬ್ಬರಿಸಿ ಹೂವರಳಿಸದೇ ನಿಂತುಬಿಡುತ್ತಿದ್ದವು! ನಿತ್ಯ ಪುಷ್ಪ, ದಾಸವಾಳ, ರಂಜಬಟ್ಲು ಯಾನೇ ನಂಜಟ್ಲೆ ಇಂತಹ ಹೂವುಗಳನ್ನು ಬಿಟ್ಟರೆ ಅಲ್ಲಲ್ಲಿ ಡೇರೆಯ ಮೊಗ್ಗುಗಳು ಕಾಣಿಸುತ್ತಿದ್ದವು.

ಯಾವಾಗ ಶ್ರಾವಣ ಮುಗಿಯಿತು ಎಂಬುದು ಗಿಡಗಳಿಗೆ ಹೇಗೆ ಗೊತ್ತು ಎನ್ನುವ ಕುತೂಹಲ ಕೆರಳುವಂತೇ ಭಾದ್ರಪದಾದಿಯಲ್ಲೇ ಅಷ್ಟೂ ಗಿಡಗಳು ನಿಧಾನಕ್ಕೆ ಮೊಗ್ಗುಬಿಟ್ಟು ಇನ್ನೇನು ಗಣೇಶ ಬಂದ ಎನ್ನುವ ಹೊತ್ತಿಗೆ ಬಣ್ಣಬಣ್ಣದ ಹೂವುಗಳನ್ನು ಅರಳಿಸಿಕೊಂಡು ನಾ ಮುಂದು ತಾ ಮುಂದು ಎಂದು ಗಾಳಿಗೆ ತೊನೆದಾಡುತ್ತಾ ನೋಡುಗರನ್ನು ಸೆಳೆಯುತ್ತಿದ್ದವು. ನಮ್ಮಲ್ಲಿ ಗಣಪತಿಗೆ ಬಹಳ ಮಹತ್ವ; ಬಹುತೇಕ ಇದು ತಿಲಕರ ಕಾಲಕ್ಕೆ ಅವರ ಶಕೆಯಿಂದ ಆಗಿರುವ ಮಾರ್ಪಾಡೂ ಆಗಿದ್ದಿರಬಹುದು, ಮೇಲಾಗಿ ಭೂಕೈಲಾಸದ ಸೃಷ್ಟಿಗೆ ಕಾರಣನಾದ ಗೋಕರ್ಣದ ಗಣಪ ಮತ್ತು ವಾಲಖಿಲ್ಯ ಮುನಿಗೆ ಒಲಿದು ಬಂದ ಇಡಗುಂಜಿಯ ವಿನಾಯಕ ಇಬ್ಬರೂ ಇರುವುದರಿಂದಲೂ ಇರಬಹುದು ಗಣಪತಿ ಮೇಲೆ ತೂಕ ಪ್ರೀತಿ ಜಾಸ್ತಿ. ನನ್ನಂಥವರಿಗೆ ಆತ ಬೇಕೇ ಬೇಕು ಯಾಕೆಂದರೆ ಆತನ ನೈವೇದ್ಯವೆಲ್ಲಾ ನಮಗೂ ನೈವೇದ್ಯವೇ !

ಹಸಿರುಟ್ಟ ಭೂಮಿಯ ನಡುವೆ ಬಣ್ಣದ ಗಣಪ ಕುಳಿತರೆ ಹೇಗಿರಬಹುದು ? ನೋಡಲು ಅದು ಕಣ್ಣಿಗೆ ಹಬ್ಬವಾಗಿರುತ್ತದಷ್ಟೇ ? ಎಲ್ಲಾ ವಿಧದ ಹಿತ್ಲಕಾಯಿ [ತರಕಾರಿ]ಗಳು, ಹಣ್ಣು-ಹಂಪಲುಗಳು, ಗಂಗಮ್ಮನ ಕಾಳು, ಕೋಡನ ಗೆಜ್ಜೆ, ಮಡಾಗಲಕಾಯಿ, ಮಾದಲಕಾಯಿ, ಗಜನಿಂಬೆ, ಕೆಸವಿನ ಸೊಪ್ಪು, ಬಾಳೇಕಾಯಿ, ಬೇರು ಹಲಸು, ನೀರುಹಲಸು, ದಾಸ್‍ಕಬ್ಬು, ಜಾಯಿಕಾಯಿ, ಅಡಕೆ, ವೀಳ್ಯದೆಲೆ, ಶಿಂಗಾರ, ತೆಂಗಿನಕಾಯಿ, ಎಳನೀರು........ಹೆಸರು ಬರೆದು ಮುಗಿಯುವುದಿಲ್ಲ - ಗಣಪ ಅಷ್ಟು ಶ್ರೀಮಂತ!! ಆತನ ಬರುವಿಕೆಗೆ ಥರಥರದ ತಯಾರಿ. ಅಂಗೋಡಂಗ ಫಲಗಳ ಫಲಾವಳಿ ! ಮಕ್ಕಳೆಲ್ಲಾ ಸೇರಿ ಒತ್ತಟ್ಟಿಗೆ --

ಬಾರೋ ಬಾರೋ ಗಣಪ
ನಮ್ಮನೀಗೆ ಬಾರೋ ಗಣಪ
ನಮ್ಮನೀಗೆ ಬಾರೋ ಗಣಪ ....

ತಾಯಿ ಗೌರಮ್ಮನ ಕರಕೊಂಡು ಸರಸರ.......

..... ಎನ್ನುವಾಗ ಮುದ್ದು ಬಾಲಕ ಗಣಪ ಅಮ್ಮ ಗೌರಮ್ಮನ ಕೈಹಿಡಿದು ನಮ್ಮಗಳ ಮನೆಗೆಲ್ಲಾ ಬರುತ್ತಿರುವ ಕನಸು ಎಲ್ಲರ ಕಂಗಳಲ್ಲೂ ನುಸುಳುತ್ತಿತ್ತು. ಜಗತ್ತಿನಲ್ಲಿ ಬಹುಸಂಖ್ಯಾಕರು ಪ್ರೀತಿಸುವ ಏಕಮಾತ್ರ ದೈವ ಗಣೇಶ ಎಂದರೆ ತಪ್ಪಾಗಲಾರದೇನೋ. ಅಂತಹ ಗಣಪತಿ ಅಮ್ಮನ ಪುಟ್ಟ ಕಂದನಾಗಿ ಭಾದ್ರಪದ ಶುಕ್ಲ ಚೌತಿಯ ದಿನ ನಮ್ಮೆಲ್ಲರ ಪ್ರೀತಿಯ ಕೊಡುಕೊಳ್ಳುವಿಕೆಗಾಗಿ ಬರುತ್ತಾನಲ್ಲಾ ಹಾಗಾಗಿ ಭಾರೀ ತಯಾರಿ, ಭೂರೀ ತಯಾರಿ !

ಬೆನಕ ಬರುವ ಮುನ್ನಾದಿನ ಹಲವು ಮನೆಗಳಲ್ಲಿ ಆತನ ಕೂರುವಿಕೆಗಾಗಿ ಮಂಟಪವನ್ನು ಸಿದ್ಧಪಡಿಸುತ್ತಾರೆ. ಮರದಲ್ಲಿ ಮಾಡಿದ ಪೀಠಕ್ಕೆ ಚಿನ್ನದ ಬಣ್ಣದ ಕಾಗದ ಅಂಟಿಸಿ ಅದು ಬಂಗಾರದ್ದೇನೋ ಅನ್ನೋ ಹಾಗೇ ಮಾಡುತ್ತಾರೆ. ಬಾಳೇಕಂಬ, ಕಬ್ಬು, ಮಾವಿನ ತುಂಕೆಗಳನ್ನು ಕಟ್ಟುವುದು ಒಂದು ರೀತಿಯಲ್ಲಾದರೆ ಇನ್ನೂ ಕೆಲವರದು ಬಾಳೇ ಹೆಂಬೆಯಿಂದ ಮಾಡುವ ದಂಡಾವಳಿ ಮಂಟಪ. ಮತ್ತೆ ಕೆಲವರ ಮನೆಗಳಲ್ಲಿ ಅಡಕೆ ದಬ್ಬೆ, ಗಾತ್ರದ ಬಿದಿರು ಬೊಂಬು ಇವನ್ನೆಲ್ಲಾ ಬಳಸಿ ಐಮೂಲೆ ತೆಗೆದು ನಾಲ್ಕು ಕಂಬ ನೆಟ್ಟು, ಕಂಬಗಳಿಗೆ ಬಣ್ಣದ ಬೇಡಗೆ ಹಚ್ಚಿ ಬಣ್ಣದ ಕಾಗದದ ಹೂಮಾಲೆಗಳನ್ನು ಇಳಿಬಿಟ್ಟು, ಮಿರಿಮಿರಿಗುಡುವ ವರ್ತಿತಗಡು ಇತ್ಯಾದಿ ಅಲಂಕಾರ ಪರಿಕರಗಳಿಂದ ಸಕತ್ತಾಗಿ ಮಾಡುವ ಮಂಟಪ. ಮಂಟಪ ತಯಾರಿಕೆಯಲ್ಲೇ ಪೈಪೋಟಿ, ಅದರಲ್ಲೇ ತಂದು ಚೆನ್ನಾಗಿದೆ ತಂದು ಚೆನ್ನಾಗಿದೆ ಎನ್ನುವ ಹೇಳಿಕೊಳ್ಳುವಿಕೆ. ನಾವು ಚಿಕ್ಕ ಮಕ್ಕಳಿಗೆ ಮಾತ್ರ ಅವುಗಳನ್ನೆಲ್ಲಾ ಮುಟ್ಟಲು ಹಕ್ಕಿರಲಿಲ್ಲ! ಏನಿದ್ರೂ ಆ ಮನೆಗೆ ಈ ಮನೆಗೆ ಓಡಾಡುತ್ತ ಯಾರ್ಯಾರದು ಎಲ್ಲೆಲ್ಲೀವರೆಗೆ ಬಂತು ಎಂಬುದನ್ನು ಪರಸ್ಪರರಿಗೆ ತಿಳಿಸುವ ಕೆಲಸವಷ್ಟೇ ನಮ್ಮದು.

ಚೌತೀ ದಿವಸ ಉಂಡು ಹೊರಟ ಬೆನಕರಾಯ ಬಿದ್ದಿದ್ದ ಎಂಬ ಕಥೆ ಕೇಳಿದ್ದು ಬಿಟ್ಟರೆ ನಮ್ಮೂರಿಗೆ ಬರುವ ಆತ ಕಮ್ಮೀ ಕಮ್ಮೀ ಅಂದ್ರೆ ಎರಡು ದಿನ ಇದ್ದು ಹೋಗುತ್ತಿದ್ದ. ಕೆಲವರ ಮನೆಗಳಲ್ಲಿ ಐದು ಇನ್ನೂ ಕೆಲವರಲ್ಲಿ ೭ ಇನ್ನೂ ಕೆಲವರಲ್ಲಿ ೯ ಹೀಗೆಲ್ಲಾ ಉಳಿದುಕೊಳ್ಳುತ್ತಿದ್ದನಪ್ಪ! ಆದ್ರೆ ನಮ್ಮಗಳ ಕೆಲವು ಮನೇಲಿ ಎರಡೇ ದಿನ ಇರ್ತಿದ್ದ ಲಂಬೋದರ ಬರುವಾಗಿಂದ ಹೋಗುವವರೆಗೂ ಮಕ್ಕಳಾದಿಯಾಗಿ ಮುದುಕರವರೆಗೆ ಎಲ್ಲರಿಗೂ ಒಂಥರಾ ಖುಷಿ. ನಮಗೆಲ್ಲಾ ೬-೭ ವಯಸ್ಸಿದಾಗ ನಮ್ಮ ಕೇರಿಯ ಅಮ್ಮಣ್ಣ, ರಾಮ, ಗಪ್ಪತಿ, ಶ್ರೀಧರ, ಶ್ರೀಪಾದ, ಶಣಮಾಣಿ, ಯಂಟ್ರೊಣ[ ವೆಂಕಟರಮಣ], ಸುಬ್ಬು, ಕೃಷ್ಣ, ಸತ್ನಾರಣ [ಸತ್ಯನಾರಾಯಣ] ಹೀಗೇ ಇಂಥವರಿಗೆಲ್ಲಾ ಸರಾಸರಿ ೧೪-೧೫ ವರ್ಷ. ನಮ್ಮ ಕೇರಿಯ ಹೊರಗೆ ಒಂದು ಹರಿಯುವ ಹಳ್ಳವಿದೆ. ಅದರಲ್ಲಿ ಆಗ ಮಳೆಗಾಲ-ಬೇಸಿಗೆ ನೀರಿರುತ್ತಿತ್ತು. ಹರಿಯುವ ಹಳ್ಳಕ್ಕೆ ಅಡ್ಡಲಾಗಿ ಕಟ್ಟು ಕಟ್ಟಿದರೆ ಅಲ್ಲಿ ಒಂದು ಚಿಕ್ಕ ಜಲಾನಯನ ಪ್ರದೇಶ ಸಿದ್ಧವಾಗುತ್ತಿತ್ತು. ಮಹಾಚೌತಿಯ ದಿನ ಪೂಜೆ, ಹಲವು ವಿಧದ ಆರತಿಗಳಲ್ಲಿ ಮಗ್ನರಾಗಿತ್ತಿದ್ದ ಇವರೆಲ್ಲಾ ಚೌತಿಯ ಮರುದಿನ ಋಷಿಪಂಚಮಿ ಯಾನೇ ಇಲಿಪಂಚಮಿಯ ದಿನ ಹಳ್ಳಕ್ಕೆ ಕಟ್ಟು ಹಾಕಲು ತೆರಳುತ್ತಿದ್ದರು.

ಕಟ್ಟಿಗೆ ಬೇಕಾಗುವ ಸಾಮಗ್ರಿಗಳು ಅಲ್ಲಲ್ಲೇ ಸಿಗುತ್ತಿದ್ದವು. ನಮ್ಮಲ್ಲಿ ಅಡಕೆ ತೋಟಗಳಿರುವುದರಿಂದ ಹಗರದಬ್ಬೆ, ಅಡಕೆಮರದ ಮೋಟು, ಬಾಳೆಮರ, ಅಡಕೆ ಸೋಗೆ, ಅಡಕೆ ಹಾಳೆ, ತೆಂಗಿನಗರಿ ಹೀಗೇ ಕಟ್ಟುಹಾಕಲು ಬೇಕಾದ ಎಲ್ಲವನ್ನೂ ಮೇಲೆ ಹೇಳಿದ ಜನ ಸುತ್ತಲಿನ ತೋಟಗಳಲ್ಲಿ ಗುರುತಿಸುತ್ತಿದ್ದರು. ಹೇಳುವುದು ಕೇಳುವುದು ಏನಿಲ್ಲ, ಅವರು ತೋರಿಸಿದ್ದನ್ನು ಎಳೆದು ತರುವುದು ನಮ್ಮಲ್ಲಿ ಕೆಲವರ ಕರ್ತವ್ಯವಾಗಿತ್ತು, ಯಾಕೆಂದರೆ ಹಾಕಿದ ಕಟ್ಟಿನ ಜಲಾಶಯದಲ್ಲಿ ಈಜು ಕಲಿಯಲು ಅಪ್ಪಣೆ ಸಿಗಬೇಕಲ್ಲಾ? ರಾಮ ಅದೂ ಇದೂ ಅಂತ ಕೂಗುತ್ತಿದ್ದರೆ, ತಂದ ಅಡಕೆಮರದ ಮೋಟನ್ನು ಹಳ್ಳದ ಆಚೀಚೆಯಲ್ಲಿರುವ ಪಾಗಾರಕಟ್ಟೆಗೆ ಸಿಕ್ಕಿಸಿ ಗಟ್ಟಿ ನಿಲ್ಲುವಂತೇ ಮಾಡುತ್ತಿದ್ದವ ಶ್ರೀಪಾದ. ಗಪ್ಪತಿ ಹಗರದಬ್ಬೆಗಳನ್ನು ಹೂತು ಮೇಲ್ಭಾಗವನ್ನು ಆ ಅಡಕೆ ಎಳೆಗೆ ಕಟ್ಟುತ್ತಿದ್ದ. ಮಿಕ್ಕುಳಿದವರು ಅಡಕೆ ಸೋಗೆ ತೆಂಗಿನಗರಿ, ಅಡಕೆ ಹಾಳೆ ಇವುಗಳನ್ನೆಲ್ಲಾ ಆ ದಬ್ಬೆಗಳಿಗೆ ಆನಿಸಿ ಬಳ್ಳಿ ಕಟ್ಟುತ್ತಿದ್ದರು. ನಾವೆಲ್ಲಾ ರಾಮಸೇತುವಿಗೆ ಕಪಿ ಸೈನ್ಯ ಕೆಲಸಮಾಡಿದಂತೇ ಕಷ್ಟಪಟ್ಟು ಸಾಮಗ್ರಿಗಳನ್ನು ಎಳೆದೆಳೆದು ತಂದು ಹಾಕುತ್ತಿದ್ದೆವು. ಕಟ್ಟು ಸಂಪೂರ್ಣ ತಯಾರಾಗಿ ನಿಂತು ಅದರಲ್ಲಿ ನೀರುತುಂಬುವಷ್ಟರಲ್ಲಿ ಮಧ್ಯಾಹ್ನ ಹನ್ನೆರಡು ಹೊಡೀತಿತ್ತು.

" ಹೋಯ್ ಮಂಗನಾರತಿಗಾತಡ ಬರ್ರೋ " ಎಂದು ಹವ್ಯಕಪದಗಳಲ್ಲಿ ಇನ್ನೂ ಸರಿಯಾಗಿ ಮಾತುಕಲಿಯುತ್ತಿರುವ ಪುಟಾಣಿಯೊಂದು ಕೂಗುತ್ತಾ ಬಂದಾಗ ಎಲ್ಲರಿಗೂ ಘೊಳ್ಳೆನ್ನುವ ನಗು; ಸ್ವಲ್ಪ ಹೆದರಿಕೆ ಕೂಡ! ಯಾಕೆಂದರೆ ಕಟ್ಟುಕಟ್ಟಲು ಹಿರಿಯರ ಪರ್ಮಿಶನ್ ಇರುತ್ತಿರಲಿಲ್ಲ. ಹಾಗಂತ ಗಣಪತಿ ವಿಗ್ರಹಗಳನ್ನು ಅಂದು ಸಂಜೆ ವಿಸರ್ಜಿಸಲು ಬರುವುದು ಕಟ್ಟಿನಲ್ಲೇ! ಆದರೂ ಎಲ್ಲಿ ಮಕ್ಕಳು ಅಪಾಯ ಎದುರಿಸಿಯಾರು ಎಂಬ ಭಯಕ್ಕೆ ಅವರು ಹಾಗಿರುತ್ತಿದ್ದರು. ಎಲ್ಲರೂ ಗಡಬಡಿಸಿ ನೀರಲ್ಲಿ ಅಷ್ಟಿಷ್ಟು ಮುಳುಗೆದ್ದು

" ಹೇ ಈ ಸಲ ಕಟ್ಟು ಬಾಳ ಮಸ್ತಾಯ್ದು " ಎಂದುಕೊಳ್ಳುತ್ತಾ ಮನೆಕಡೆ ತೆರಳಿದರೆ ಅಲ್ಲಿ ವೈದಿಕರು ಮನೆಯವರು ಸೇರಿ ಮಂಗಲಾರತಿ ಮುಗಿಸಿ ನಮಗೆಲ್ಲಾ ’ಮಂಗಲಾರತಿ’ ಮಾಡಲು ಕಾಯುತ್ತಿರುತ್ತಿದ್ದರು. ಒಂದಷ್ಟು ಬೈಸಿಕೊಂಡು ತೀರ್ಥ-ಪ್ರಸಾದ ಪಡೆದು ಊಟ ಮುಗಿಸಿಬಿಟ್ಟರೆ ನಂತರ ನಾವು ಕೇರಿಯ-ಊರ ಹಲವಾರು ಮನೆಗಳಿಗೆ ಗಣಪತಿ ನೋಡಲು ಹೋಗುತ್ತಿದ್ದೆವು. ಜಾರಿಕೆಯ ಅಂಗಳದಲ್ಲಿ ಅಲ್ಲಲ್ಲಿ ಅಡಕೆ ದಬ್ಬೆಗಳನ್ನು ಕವುಚಿ ಸಂಕ [ಅದರಮೇಲೆ ನಡೆಯುವಂತೇ] ಹಾಕುತ್ತಿದ್ದರು. ಸತತ ಸುರಿಯುತ್ತಿದ್ದ ಶ್ರಾವಣದ ಮಳೆಯಿಂದ ಹಾವಸೆಗಟ್ಟಿದ್ದ ಸಂಕದ ಮೇಲೆ ನಡೆಯಹೋಗಿ ಹಗಲಲ್ಲೇ ನಕ್ಷತ್ರ ಎಣಿಸಿಹೊರಟ ಭೂಪಂದಿರೂ ಇದ್ದರು. ಅಂಗಳದ ಗಜನಿ ಮಣ್ಣಿನಲ್ಲಿ ಜಾರಿ ಚಡ್ಡಿಗೆ ರಾಡಿಬಡಿದುಕೊಂಡು ಆಚೆಮನೆ ಅಕ್ಕನಕೈಲಿ ಹಿತ್ಲಕಡೆಗೆ ನೀರ ತರಿಸ್ಕೊಂಡು ಅಲ್ಲೇ ಸಲ್ಪ ಒದ್ದೆಮಾಡಿ ಕೆಸರು ತೊಳಕೊಂಡು ಮುಂದಕ್ಕೆ ನಡೆಯುವ ಹುಡುಗರೂ ಇದ್ದರು.

ಮೊದಲೇ ಹೇಳಿದೆನಲ್ಲಾ ಒಬ್ಬಬ್ಬರ ಮನೆಯಲ್ಲೂ ಗಣಪತಿಯದ್ದು ವಿಭಿನ್ನ ಸ್ಟೈಲು ! ಕೆಲವು ಮನೆ ಗಣಪ ಬೆಳ್ಳಗಿದ್ದರೆ ಇನ್ನು ಕೆಲವು ಮನೆಗಳಲ್ಲಿ ಗುಲಾಬಿ ಬಣ್ಣ, ನಮ್ಮನೆಗಳಲ್ಲಿ ಕೆಂಪುಬಣ್ಣ! [ರಕ್ತವರ್ಣ] ಕೆಲವರ ಮನೆಯಲ್ಲಿ ಗೋವ ಕಾಯುವ ಗೊಲ್ಲನಂತೇ ನಿಂತರೆ ಇನ್ನು ಕೆಲವೆಡೆ ಶೇಷಶಾಯಿ, ಮತ್ತೆ ಕೆಲವೆಡೆ ಅಂಬೆಗಾಲಿನ ಬಾಲಗಣಪ, ನಮ್ಮಲ್ಲೆಲ್ಲಾ ಕುಕ್ಕರಗಾಲಿನಲ್ಲಿ ಕುಳಿತ ಸಾಂಪ್ರದಾಯಿಕ ಪಾಶಾಂಕುಶಧಾರಿ ! ಹೋದಲ್ಲೆಲ್ಲಾ ಯಾರು ವಿಗ್ರಹ ತಯಾರಿಸಿದ್ದು, ಅದು ಚೆನ್ನಾಗಿದೆ, ಗಣಪನ ಕಣ್ಣು ಚೆನ್ನಾಗಿದೆ, ಕೈಲಿರುವ ಕೊಳಲು ಚೆನ್ನಾಗಿದೆ, ಮೈಬಣ್ಣ ಚೆನ್ನಾಗಿದೆ, ಕಿರೀಟ ಚಲೋ ಇದೆ, ಹೊಟ್ಟೆ ಭಾಗ ಬಾಳ ಸಕತ್ತಾಗಿದೆ ಹೀಗೇ ತಲೆಗೊಂದು ಹೇಳಿಕೆಗಳು. ಜೊತೆಗೆ ಹಳ್ಳದ ಕಟ್ಟಿನ ಸುದ್ದಿ. ಈಗ ಎರಡಾಳು[ಹನ್ನೆರಡು ಅಡಿ] ಎತ್ತರಕ್ಕೆ ನೀರು ತುಂಬಿರುತ್ತದೆ ಎಂಬ ಹೇಳಿಕೆ.

ಅಸಲಿಗೆ ಕಟ್ಟಿನ ಎತ್ತರ ಇರುವುದೇ ೫ ಅಡಿ. ಹಳ್ಳದ ಮಧ್ಯೆ ಕೆಲವುಕಡೆ ಮಳೆಯಿಂದ ತುಂಬಿ ಹರಿದ ರಭಸಕ್ಕೆ ಅಲ್ಲಲ್ಲಿ ಸಲ್ಪ ಆಳದ ಗುಂಡಿಗಳಿರುತ್ತಿದ್ದವು. ಕಟ್ಟಿನ ಒಳಗೂ ಕೆಲವೆಡೆ ಹಾಗೆ ಆಳದ ಗುಂಡಿಗಳು ಇರುತ್ತಿದ್ದುದ್ದು ಸ್ವಾಭಾವಿಕ. ಆಳದ ಗುಂಡಿಯ ತಳದಿಂದ ಅಬ್ಬಬ್ಬಾ ಅಂದ್ರೆ ೭-೮ ಅಡಿ ಎತ್ತರಕ್ಕೆ ನೀರಿನ ಮಟ್ಟ ಇರುತ್ತಿತ್ತು. ಆದ್ರೂ ನಮ್ಮಂಥಾ ಚಿಕ್ಕವರಿಗೆಲ್ಲ ಅದು ಸಮುದ್ರ ! ಸಂಜೆಯಾಗುತ್ತಿದ್ದರೆ ಅಲ್ಲಿಗೆ ಹೋಗಲೂ ಹೆದರಿಕೆ. ಕಟ್ಟನ್ನು ಮೀರಿ ಹರಿಯುವ ನೀರು ಯಾವುದೋ ಫಾಲ್ಸ್ ಥರ ಕಾಣಿಸುತ್ತಿತ್ತು. ಆದರೂ ಯಾರೂ ಕಟ್ಟಿನ ಮಹಿಮೆಯನ್ನು ಬಿಟ್ಟುಕೊಟ್ಟವರಲ್ಲ!

ಕೇರಿಯಲ್ಲಿ ೧೦ ಮನೆಗಳು; ಹತ್ತು ಗಣಪತಿ ವಿಗ್ರಹಗಳು. ಇಲಿಪಂಚಮಿಯ ದಿನ ಸಾಯಂಕಾಲ ೭ರ ನಂತರ ಪೂಜೆ ಆರಂಭ. ಒಬ್ಬೊಬ್ಬರ ಮನೆಯ ಹಾಗೆ ಪೂಜೆ. ಒಂದುಕಡೆ ಪೂಜೆ ಮುಗಿಸಿ ಜನ ಮತ್ತೊಂದು ಮನೆಗೆ ಬರುತ್ತಿದ್ದರು. ಎಲ್ಲರ ಮನೆಗಳ ಪೂಜೆಗಳೂ ಮುಗಿದ ತರುವಾಯ ಗಣೇಶ ವಿಸರ್ಜನೆ. ಜಾಗಟೆ, ಶಂಖ, ತಾಳ, ಡೋಲು ಇತ್ಯಾದಿ ವಾದ್ಯಗಳು. ಹೆಂಗಳೆಯರ ಇಂಪಾದ ಹಾಡುಗಳು.

" ಏಳಯ್ಯಾ ವಿಘ್ನೇಶ ಹೋಗಿಬಾ ..
ಏಳೂ ಏಳೆಲೆ ಗೌರಿಯ ತನಯ ಶ್ರೀಶಂಕರನಾ ಪ್ರೇಮದ ಕುವರನೇ ....... "

" ನಾದಬ್ರಹ್ಮ ಪರಾತ್ಪರ ಕರುಣ....
ಸಾರಸಗುಣ ಪರಿಶೋಭಿತ ಚರಣ....."

ಹೀಗೇ ನಾನಾವಿಧ ಸಂಗೀತಗಳನ್ನು ಆಲೈಸುತ್ತಾ ಹೊರಟುನಿಂತ ಗಣಪನನ್ನು ಬೀಳ್ಕೊಡುವುದು ನಮಗೆಲ್ಲಾ ಯಾರೋ ಮನೆಮಂದಿಯನ್ನು ಎಲ್ಲಿಗೋ ಕಾಣದ ದೂರದೇಶಕ್ಕೆ ಕಳಿಸಿದ ಹಾಗೇ ಭಾಸವಾಗುತ್ತಿತ್ತು; ಬೇಸರವಾಗುತ್ತಿತ್ತು. ಮಂಗಳ ನಿರಾಜನವನ್ನೂ ಮಂತ್ರಪುಷ್ಪವನ್ನೂ ಅರ್ಪಿಸಿದ ಹಿರಿಯರು ಶ್ರದ್ಧಾ-ಭಕ್ತಿ ಪೂರ್ವಕ ಗಣೇಶನಲ್ಲಿ ಪ್ರಾರ್ಥನೆ ಸಲ್ಲಿಸಿ ವಾರ್ಷಿಕವಾಗಿ ತಾವು ನಡೆಸಿಬಂದ ಪೂಜಾಕೈಂಕರ್ಯದಿಂದ ಸಂಪ್ರೀತನಾಗಿ, ಸಂತುಷ್ಟನಾಗಿ ಆಗಿರಬಹುದಾದ ಯಾವುದೇ ದೋಷಗಳಿದ್ದರೂ ಕ್ಷಮಿಸಿ ಹರಸುವಂತೇ ಸಾಷ್ಟಾಂಗವೆರಗುತ್ತಿದ್ದರು. ಗೋತ್ರಪ್ರವರಗಳನ್ನು ಉದ್ದರಿಸಿ ಪ್ರಸಾದ ಬೇಡಿ ತೆಗೆದ ನಂತರ ಮನೆಮಂದಿಗೂ ನೆರೆದ ಎಲ್ಲರಿಗೂ ಪ್ರಸಾದ ವಿತರಣೆ ನಡೆಯುತ್ತಿತ್ತು. ಋಷಿಪಂಚಮಿಯ ಕೊನೆಯ ಪೂಜೆಯಲ್ಲಿ ಗಣಪತಿಗೆ ಕಾಯಿ-ಜೋನಿಬೆಲ್ಲ ಹಾಕಿ ಕಲಸಿದ ಅರಳು, ವಿಧದ ಹಣ್ಣುಗಳು, ಕಡಲೆ, ಖರ್ಜೂರ, ಕಲ್ಲುಸಕ್ಕರೆ ಇತ್ಯಾದಿಯಾಗಿ ಇರುತ್ತಿದ್ದು ಅದನ್ನು ಎಲ್ಲರಿಗೂ ಹಂಚಿದ ಬಳಿಕ ವಿಗ್ರಹದಲ್ಲಿ ನಿಂತ ಗಣೇಶನಲ್ಲಿ ಮತ್ತೊಮ್ಮೆ ಕಾಯಾ-ವಾಚಾ-ಮನಸಾ ಪ್ರಾರ್ಥಿಸಿ ವ್ರತೋದ್ವಾಸನೆಗೈದು ಮಂಗಲಾಕ್ಷತೆ ಎರಚಿ ಸಿದ್ಧಿವಿನಾಯಕನನ್ನು ವಿಧಿವತ್ತಾಗಿ ಆ ಸ್ಥಾನದಿಂದ ಬೀಳ್ಕೊಳ್ಳುತ್ತಿದ್ದರು.

ಮಂತ್ರದಿಂದ ಬೀಳ್ಕೊಂಡ ಗಣೇಶನ ಭೌತಿಕ ವಿಗ್ರಹ ಮಾತ್ರ ಅಲ್ಲಿದ್ದು ಅದನ್ನು ನಿಧಾನವಾಗಿ ಮಂಟಪದಿಂದ ಇಳಿಸಿ ಹೊರಜಗುಲಿಗೆ ತರಲಾಗುತ್ತಿತ್ತು. ಅಲ್ಲಿ ಹೊರಟುನಿಂತ ಗಣಪನಿಗೆ ಹೆಂಗಸರು ಲೋಟದಲ್ಲಿ ಹಾಲು ಇರಿಸಿ ನಮಸ್ಕರಿಸುತ್ತಿದ್ದರು. ಇದೆಲ್ಲಾ ನಮ್ಮಲ್ಲಿನ ಭಾವನೆ ! ಅಲ್ಲಿ ಮನೆಯ ಎಲ್ಲರೂ ಇನ್ನೊಮ್ಮೆ ನಮಸ್ಕರಿಸಿದ ಮೇಲೆ ಅಭಯಮುದ್ರೆಯ ಗಣೇಶ ದೊಂದಿ [ದೀವಟಿಗೆ], ಒಣಗಿದ ತೆಂಗಿನಗರಿಯ ಸೂಡಿ, ಸೀಮೆ ಎಣ್ಣೆ ಗ್ಯಾಸ್ ಲೈಟ್ ಇತ್ಯಾದಿಗಳ ಬೆಳಕಿನಲ್ಲಿ ಹೊರಗೆ ಮೆರವಣಿಗೆ ಹೊರಡುತ್ತಿದ್ದ. ಅದೇ ವೇಳೆಗೆ ಕೇರಿಯ ಎಲ್ಲರ ಮನೆಗಳ ಗಣಪತೀ ವಿಗ್ರಹಗಳು ಸಾಲಾಗಿ ಬಂದು ಅಲ್ಲಿಗೆ ಸೇರಿಕೊಂಡು ಮುಂದಿರುವ ಅರ್ಧ ಫರ್ಲಾಂಗು ದಾರಿಯನ್ನು ಅತ್ಯಂತ ವಿಜೃಂಭಣೆಯಿಂದ ಕ್ರಮಿಸುತ್ತಿದ್ದವು. ಮೆರವಣಿಗೆ ಹಾದು ಹೋದ ದಾರಿಯಲ್ಲಿ ಜಾಜಿ, ಮಲ್ಲಿಗೆ, ಕರವೀರ, ಮೊಟ್ಟೆ ಸಂಪಿಗೆ, ಕೇದಿಗೆ ಹೀಗೇ ತರಾವರಿ ಹೂಗಳ ಪರಿಮಳಗಳು ಹಿಂದೆ ಬರುವ ಜನಸ್ತೋಮಕ್ಕೆ ಮುದವನ್ನು ನೀಡುತ್ತಿದ್ದವು. ಯಾಕೋ ಎಲ್ಲರಿಗೂ ಬೇಸರ; ಗಣೇಶ ಬಂದಿದ್ದೂ ಗೊತ್ತಾಗಲಿಲ್ಲ-ಹೊರಟಿದ್ದೂ ಗೊತ್ತಾಗಲಿಲ್ಲ ಎನ್ನುವ ಭಾವನೆ, ಇನ್ನೂ ನಾಕುದಿನ ಇದ್ದು ಹೋಗಬಹುದಿತ್ತು ಎಂಬ ಅದಮ್ಯ ಅನಿಸಿಕೆ. ಆದರೂ ಹಿಂದಿನವರು ನಡೆಸಿಬಂದ ನಿರ್ಧರಿತ ಕಾಲಮಾನ, ಹೀಗಾಗಿ ಅದನ್ನು ವಿಸ್ತರಿಸಲಾಗಲೀ ಮೊಟಕುಗೊಳಿಸಲಾಗಲೀ ಯಾರಿಗೂ ಇಷ್ಟವಿರಲಿಲ್ಲ; ಯಾವುದೋ ಅವ್ಯಕ್ತ ಭಯವೂ ಇದ್ದಿರಬಹುದೇನೋ.

" ಗಣಪತಿ ಬಪ್ಪಾ ಮೋರ್ಯಾ ಉಡಚಾ ವರ್ಷಾ ಲವಕರ್ಯಾ " ಎಂಬ ಮರಾಠಿ ಜೈಕಾರವನ್ನೂ ಸೇರಿಸಿದಂತೇ ಹಲವು ತೆರನಾದ ಜೈಕಾರಗಳು ಘೋಷಗಳು ತಾರಕ ಸ್ವರದಲ್ಲಿ ಕೇಳಿಸಿ ಮೆರವಣಿಗೆಗೆ ಮೆರುಗು ತರುತ್ತಿದ್ದವು. ಅಲ್ಲಿಲ್ಲಿ ಇರುವ ವೈದಿಕರು ಇರುವಲ್ಲಿಂದಲೇ ವೇದಘೋಷವನ್ನೂ ನಡೆಸಿಕೊಡುತ್ತಿದ್ದರು. ನಮ್ಮಲ್ಲಿನ ಗಣಪತಿ ವಿಸರ್ಜನೆ ಅತ್ಯಂತ ಸಾಂಪ್ರದಾಯಿಕವಾಗಿಯೂ ಮನೋರಂಜಕವಾಗಿಯೂ ಇರುವುದರಿಂದ ಇರುವ ಹತ್ತೂ ಮನೆಗಳಿಗೆ ಅವರವರ ನೆಂಟರೂ ಇದನ್ನು ನೋಡಬಯಸಿ ಬರುತ್ತಿದ್ದರು. ಮೈಸೂರು ದಸರಾ ಜಂಬೂ ಸವಾರಿಗಿಂತಲೂ ನಮ್ಮ ಜಂಬೋ ಜನಾರ್ದನನ ವಿಸರ್ಜನಾ ಮೆರವಣಿಗೆಯೇ ದೊಡ್ಡದೇನೋ ಎಂಬ ರೀತಿಯಲ್ಲಿ ಉತ್ಸುಕರಾಗಿ ನೋಡುವ ಕೌತುಕದ ಕಣ್ಣುಗಳು ಹಲವಿದ್ದವು.

ಹಳ್ಳದ ಕಟ್ಟಿಗೆ ತೆರಳಿದ ಮೆರವಣಿಗೆ ಕರ್ಪೂರವನ್ನು ವೀಳ್ಯದೆಲೆಯಲ್ಲಿ ಹಚ್ಚಿ ನೀರಲ್ಲಿ ತೇಲಿಬಿಡುವುದರ ಮೂಲಕ ವಿಸರ್ಜನೆಗೆ ತೊಡಗುತ್ತಿತ್ತು. ಬಣ್ಣಬಣ್ಣದ ಗಣಪನ ವಿಗ್ರಹಗಳನ್ನು ಒಂದೊಂದಾಗಿ ಕಟ್ಟಿನ ಜಲಾನಯನ ಪ್ರದೇಶದಲ್ಲಿ ಮುಳುಗಿಸುತ್ತಿದ್ದರು. ಮುಳುಗಿಸುವ ಕೊನೆಯ ಹಂತದಲ್ಲಿ ಗಣೇಶನಿಗೆ ಹಾಕಿದ್ದ ಜನಿವಾರವನ್ನು ವಿಗ್ರಹದ ಶಿರೋಭಾಗದಿಂದ ತೆಗೆಯುವ ಮೊದಲೇ ಮನೆಯ ಹಿರಿಯರು ಯಾರಾದರೂ ಧರಿಸಿ ಅದರ ಪ್ರಭೆಯನ್ನು ಹಾಗೇ ಉಳಿಸಿಕೊಳ್ಳುತ್ತಿದ್ದರು. ಗಣಪಣ್ಣನ ಹೊಕ್ಕಳ ಜಾಗದಲ್ಲಿ ಇರಿಸಿದ್ದ ನಾಣ್ಯವನ್ನು ಎತ್ತಿ ಚಂದ್ರಲೋಕಕ್ಕೆ ಎಸೆಯಲಾಗುತ್ತಿತ್ತು ! ತದನಂತರ ಎರಡು ಸರ್ತಿ ಮೋರ್ಯಾ ಮೋರ್ಯಾ ಎಂದು ನೀರಲ್ಲಿ ವಿಗ್ರಹ ಅದ್ದಿ ಮೂರನೇ ಸಲ ನೀರಲ್ಲಿ ಅದನ್ನು ಬಿಡುವುದಕ್ಕೆ ಯಂಟ್ರೊಣ[ವೆಂಕಟರಮಣ]ನ ಕೈಗೆ ಕೊಡುತ್ತಿದ್ದರು. ಯಂಟ್ರೊಣ ಹೊಳಬೆಳಕಿನ ಕತ್ತಲಲ್ಲೇ ಸಾಗಿ ಗುಂಡಿ ಇರುವ ಜಾಗದಲ್ಲಿ ವಿಗ್ರಹವನ್ನು ವಿಸರ್ಜಿಸುತಿದ್ದ. ಅದಾದ ಸಲ್ಪ ಹೊತ್ತಿಗೆ ನಮ್ಮಂಥ ಬಹುತೇಕ ಮಕ್ಕಳ ದುಂಬಾಲು ಆಲಿಸಿ ಮುಳುಗಿಸಿದವರ ಹೊರತಾಗಿ ಬೇರೇ ಯಾರಾದರೂ ನೀರಲ್ಲಿ ಧುಮುಕಿ ವಿಸರ್ಜಿಸಿದ ಗಣಪನ ವಿಗ್ರಹಗಳನ್ನು ಎತ್ತಿಕೊಂಡು ಬೇರೇ ಮಾರ್ಗವಾಗಿ ಬಂದು ಕೊಡುತ್ತಿದ್ದರು. ಹಾಗೆ ತಂದ ವಿಗ್ರಹವನ್ನು ಬ್ಯಾಟರಿ ಬೆಳಕಿನಲ್ಲಿ ಕೊಟ್ಟಿಗೆಗೆ ಸಾಗಿಸಲಾಗುತ್ತಿತ್ತು.

ಪೂಜಿಸಿದ ಮಣ್ಣಿನ ಅಥವಾ ಪಾರ್ಥಿವ ವಿಗ್ರಹಗಳನ್ನು ಪೂಜಾನಂತರ ಹರಿಯುವ ನೀರಿನಲ್ಲೋ ಇರುವ ಕೆರೆಯಲ್ಲೋ ವಿಸರ್ಜಿಸಿ ಬಿಡಬೇಕು, ಅದಕ್ಕೆ ಯಾವುದೇ ಅಪಚಾರ ಆಗಬಾರದು ಎಂಬುದು ಶಾಸ್ತ್ರಾಧಾರಿತವಾಗಿದೆ. ಆದರೆ ಗಣಪಣ್ಣನ ವಿಷಯದಲ್ಲಿ ಅದೂ ನಮ್ಮಕಡೆ ಸಲ್ಪ ಡಿಸ್ಕೌಂಟು! ವಿಸರ್ಜಿಸಿದ ಗಣಪನ ವಿಗ್ರಹವನ್ನು ಎತ್ತಿ ಕೊಟ್ಟಿಗೆಯಲ್ಲಿ ಇಡುವುದರಿಂದ ದನಗಳಿಗೆ ಉಣ್ಣಿಗಳ ಬಾಧೆ ಕಮ್ಮಿ ಆಗುತ್ತದೆ ಎಂಬ ಹೇಳಿಕೆಯನ್ನು ಯಾರೋ ಹುಟ್ಟಿಸಿ ಹಬ್ಬಿಸಿದ್ದರು. ಅದು ನಮಗೂ ಅನುಕೂಲವೇ ಆಗಿತ್ತು; ಯಾಕೆಂದರೆ ಆಡಲು ಬಣ್ಣದ ಗಣಪತಿಯ ವಿಗ್ರಹ ಸಿಗುವುದಲ್ಲ ? ಎತ್ತಿ ತಂದ ವಿಗ್ರಹದಲ್ಲಿ ಯಾವುದಾದರೂ ಅಂಗವೋ ಆಭರಣವೋ ಮುರಿದುಹೋಗಿರುತ್ತಿತ್ತು ! ನೀರಿನಲ್ಲಿ ಅಷ್ಟೊಂದು ರಭಸದಿಂದ ಎತ್ತಿ ಬಿಟ್ಟಾಗ ಹಾಗೆ ಆಗುವುದು ಸಹಜವಷ್ಟೇ ? ಆದರೂ ನಮ್ಮಲ್ಲಿನ ಗಣಪ ವಿಗ್ರಹಗಳು ಅಚ್ಚಿನಿಂದ ತಯಾರಿಸಿದವಲ್ಲ; ಬದಲಿಗೆ ಹದಗೊಳಿಸಿದ ಮಣ್ಣನ್ನು ಕೈಯ್ಯಿಂದಲೇ ಮೆತ್ತಿ ಆಕಾರ ಕೊಟ್ಟು ಒಣಗಿಸಿ, ತಿದ್ದಿ ತೀಡಿ ನುಣುಪುಗೊಳಿಸಿ ಬಣ್ಣಹಚ್ಚಿ ತಯಾರಿಸಿದವಾಗಿರುತ್ತವೆ. ಬಂಗಾರದ ಬಣ್ಣದ ಆಭರಣಗಳು ಹೊಟ್ಟೆಯಲ್ಲಿ ಹೆಡೆಬಿಚ್ಚಿ ಕುಳಿತ ಸರ್ಪ, ಕಾಲ ಪಕ್ಕದಲ್ಲಿ ಕೈಮುಗಿದೋ ಹಣ್ಣುತಿನ್ನುತ್ತಲೋ ಕುಳಿತ ಪಿಳಿಪಿಳಿ ಕಣ್ಣಿನ ಮೂಷಿಕ ಹೀಗೇ ಇವೆಲ್ಲಾ ನಮ್ಮ ಮನಸ್ಸನ್ನು ಕದ್ದುಬಿಡುತ್ತಿದ್ದವು.

ರಾತ್ರಿ ಬ್ಯಾಟರಿ ಬೆಳಕಿನಲ್ಲಿ ಕೊಟ್ಟಿಗೆಯ ಅಂಗಳದಲ್ಲಿ ಇರಿಸಿದ ಗಣಪನ ವಿಗ್ರಹವನ್ನು ನೋಡಿ ಏನೇನು ಊನವಾಗಿದೆ ಎಂದು ಸುಮಾರಾಗಿ ಅಂದಾಜು ಕಟ್ಟಿದ ನಾವು ಆ ರಾತ್ರಿ ಹಿರಿಯರೆದುರು ಚಕಾರವೆತ್ತುವ ಹಾಗಿರಲಿಲ್ಲ. ಎಲ್ಲಾದರೂ ಆ ವಿಷಯ ಮಾತನಾಡಿದರೆ ಹಿರಿಯರು ಬಂದಿರುವ ನೆಂಟರ ಎದುರಿಗೆ ಬೈದರೆ ನಮ್ಮ ಮರ್ಯಾದೆಯ ಗತಿ ಏನಾಗಬೇಡ ! ಹೀಗಾಗಿ ಆಡಲೂ ಆಗದೇ ಅನುಭವಿಸಲೂ ಆಗದೇ ಆ ರಾತ್ರಿ ನಿದ್ದೆಯೇ ಇಲ್ಲದೇ ಕಳೆದುಹೋಗುತ್ತಿತ್ತು. ಹಾಗಂತ ಗಣಪನ ವಿಸರ್ಜನೆ ಮುಗಿದು ಊಟವಾದ ನಂತರ ಬೇಸರ ಕಳೆಯುವಿಕೆಗಾಗಿ ಕೇರಿಯ ಯಾವುದಾದರೊಂದು ಮನೆಯಲ್ಲಿ ಯಕ್ಷಗಾನದ ಪ್ರಸಂಗವೋ ಅಥವಾ ಚಿಕ್ಕ ಹೆಣ್ಣುಮಕ್ಕಳಿಂದ ನೃತ್ಯವೋ ನಡೆಯುತ್ತಿತ್ತು. ಕೆಲವೊಂದು ಸರ್ತಿ ಹಿಂದೂಸ್ಥಾನೀ ಸಂಗೀತ ಅಥವಾ ದಾಸರ ಪದಗಳನ್ನೂ ಹಾಡಲಾಗುತಿತ್ತು. ಇವೆಲ್ಲಾ ನಮ್ಮಂಥಾ ಮಕ್ಕಳಿಗೆ ಬೇಕೇ ? ನಮದೇನಿದ್ದರೂ ಒಂದೇ ಚಿಂತೆ : ಎಷ್ಟು ಹೊತ್ತಿಗೆ ಬೆಳಕು ಹರಿದೀತು, ಎಷ್ಟು ಬೇಗ ಮುರಿದ ವಿಗ್ರಹದ ತುಣುಕುಗಳು ನಮಗೆ ಸಿಕ್ಕಾವು ---ಇದೇ ಯೋಚನೆಯಲ್ಲೇ ಚಿಕ್ಕ ಜೀವಗಳು ಹೈರಾಣಾಗುತ್ತಿದ್ದವು!

ಬೆಣಚು ಬಿಡುತ್ತಿರುವಹಾಗೇ ಹಾಸಿಗೆಯಿಂದೆದ್ದು ಕೆಂಪಾದ ಕಣ್ಣುಜ್ಜುತ್ತಾ ಹಾಗೇ ಸಲ್ಪ ಮುಖ ತೊಳೆದ ಶಾಸ್ತ್ರಮಾಡಿ ಹಳ್ಳದ ಕಟ್ಟಿನ ಜಲಾನಯನಕ್ಕೆ ಓಡುತ್ತಿದ್ದೆವು. ನಮ್ಮಲ್ಲಿಯೇ ಸಲ್ಪ ದೊಡ್ಡಗಿನ ಈಜುಬಲ್ಲ ಹುಡುಗನನ್ನು ಕರೆದಿರುತ್ತಿದ್ದೆವು. ಅಲ್ಲಿ ನೀರು ಶಾಂತವಾಗಿ ಸ್ಫಟಿಕ ಸದೃಶವಾಗಿದ್ದಾಗ ಮುರಿದ ವಿಗ್ರಹದ ಬಣ್ಣದ ತುಣುಕುಗಳನ್ನು ಹುಡುಕುತ್ತಿದ್ದೆವು. ಒಬ್ಬ ತನಗೆ ತನ್ನ ಗಣಪತಿಯ ಕೈ ಸಿಕ್ಕಿತು ಎಂದರೆ ಇನ್ನೊಬ್ಬ ಕಿರೀಟದ ಭಾಗ ಸಿಕ್ಕಿದ್ದಕ್ಕೆ ಸಂತಸಪಡುತ್ತಿದ್ದ. ಮತ್ತೊಬ್ಬ ಚಿನ್ನದ ಬಣ್ಣದ ಪಾಶಾಂಕುಶ ದೊರೆಯಿತು ಎಂದು ಕೇಕೇ ಹಾಕಿದರೆ ಉಳಿದವನೊಬ್ಬ ಮುರಿದ ಕಾಲುಬೆರಳನ್ನು ಹುಡುಕಿ ಅದೋ ಅಲ್ಲಿದೆ ನೋಡು ಎಂದು ಉದ್ಗಾರ ತೆಗೆಯುತ್ತಿದ್ದ. ಅಂತೂ ವಿಗ್ರಹಗಳ ಭಾಗಗಳು ಹಾಗೆ ಸಿಕ್ಕಾಗ ಆಗುವ ಆನಂದಕ್ಕೆ ಪಾರವೇ ಇರಲಿಲ್ಲ. ಈಜುಬಲ್ಲ ಗೆಳೆಯ ನೀರಿಗೆ ಜಿಗಿದು ಅವನ್ನೆಲ್ಲಾ ಎತ್ತಿಕೊಡುತ್ತಿದ್ದ. ಪಡೆದ ಆ ಭಾಗಗಳ ಮರುಜೋಡಣೆ ಮುಂದಿನ ಕೆಲಸ. ಅದಾದ ನಂತರ ನಾವು ನಮ್ಮಷ್ಟಕ್ಕೇ ಶಾಲೆಗೆ ರಜಾ ಘೋಷಿಸಿಕೊಂಡು ಮನೆಯಲ್ಲಿ ಬಳಸಿಬಿಟ್ಟ ಹೂವು ಪತ್ರೆ ಒಟ್ಟುಗೂಡಿಸಿಕೊಂಡು ಮತ್ತೆ ಕೊಟ್ಟಿಗೆಯ ಅಂಗಳದಲ್ಲಿ ಗಣಪನ ಪೂಜೆ ನಡೆಸುತ್ತಿದ್ದೆವು. ಮನೆಗಳಲ್ಲಿ ನಡೆಸಿದ ಎಲ್ಲಾ ಸೇವೆಗಳಿಗಿಂತಾ ನಮ್ಮ ಪೂಜೆಯೇ ಬಹಳ ಜೋರಾಗಿರುತ್ತಿತ್ತು!

ಇಂದಿಗೆ ಇದೆಲ್ಲಾ ಅಂದಿನ ಜೀವನದ ಕಥೆ ! ಇಂದು ಹಳ್ಳವೇನೋ ಇದೆ. ಆದರೆ ಹಳ್ಳದ ಹರವನ್ನು ಊರಲ್ಲಿ ರಾಜಕೀಯ ಮಾಡುವ ಒಬ್ಬಾತ ಒತ್ತುವರಿಮಾಡಿ ಕಬಳಿಸಿದ್ದಾನೆ. ಆತನಿಗೆ ಮಂತ್ರಿಮಹೋದಯರ ತನಕ ಎಲ್ಲರ ಕೈಯ್ಯೂ ಇರುವುದರಿಂದಲೂ ಕಾಸಿಗಾಗಿ ಆತ ಏನನ್ನೂ ನಡೆಸಲು ಹೇಸದ ವ್ಯಕ್ತಿ ಎಂಬ ಬಿರುದನ್ನು ಅದಾಗಲೇ ಪಡೆದಿರುವುದರಿಂದಲೂ ಕೇರಿಯ ಮಿಕ್ಕುಳಿದ ಜನ ಮಾತಾಡಲು ಹೆದರುತ್ತಾರೆ ! ಇರುವ ಜಾಗವೆಲ್ಲಾ ತನ್ನದೇ ಎನ್ನುತ್ತಾ ಆಕ್ಟೋಪಸ್ ಶೈಲಿಯಲ್ಲಿ ಕಬಳಿಕೆ ನಡೆಸುವ ಆತನನ್ನು ಕಂಡರೆ ಏನನ್ನಬೇಕೋ ತಿಳಿಯುತ್ತಿಲ್ಲ. ಅಮ್ಮಣ್ಣ ಕುಡುಕನಾಗಿದ್ದಾನೆ, ರಾಮ ಊರು ತೊರೆದಿದ್ದಾನೆ, ಶ್ರೀಪಾದ ಸಮರ್ಪಕ ಆದಾಯವಿಲ್ಲದೇ ಹೆಂಡತಿಯ ಸರಕಾರೀ ಆಕ್ಕೊರ್ಕೆಯ ಸಂಬಳವನ್ನೇ ನಂಬಿಕೊಂಡಿದ್ದಾನೆ, ಗಪ್ಪತಿ ಯಾವುದೋ ರಿಸರ್ಚು ಮಾಡಲು ಹೋಗಿ ಯಾವುದೂ ಆಗದೇ ಕೂದಲೆಲ್ಲಾ ಉದುರಿ ವಾನಪ್ರಸ್ಥಾಶ್ರಮ ಸ್ವೀಕರಿಸಿದವರಂತೇ ಕಾಣುತ್ತಿದ್ದಾನೆ, ತಮ್ಮನ ಜೊತೆ ಜಗಳವಾಡಿಕೊಂಡ ಸುಬ್ಬು ಯಾವುದೋ ಊರಿಗೆ ವಿಳಾಸ ನೀಡದೇ ತೆರಳಿದ್ದಾನೆ. ಶಣಮಾಣಿಗೆ ಗುಟ್ಕಾ ಸ್ಯಾಚೆಟ್ಟುಗಳ ಹಾರ ನಿತ್ಯವೂ ಬೇಕಾಗುತ್ತದೆ. ಸತ್ನಾರಣ ಜಮೀನು ನೋಡಿಕೊಂಡಿದ್ದು ಹೆಂಡತಿಗೆ ಸೌಖ್ಯವಿಲ್ಲದ್ದರಿಂದ ನೆಮ್ಮದಿಯಿಂದಿಲ್ಲ ........ಹೀಗೇ ಯಾರ್ಯಾರೋ ಏನೇನೋ ಆಗಿದ್ದಾರೆ!

ನನ್ನ ಓರಗೆಯ ಹುಡುಗರು ಬೆಳೆದು ಓದಿ, ಅದೂ ಇದೂ ಉದ್ಯೋಗ ನಡೆಸಿ ನಗರಗಳಿಗೆ ತೆರಳಿದ್ದಾರೆ, ಹಳ್ಳಿಯಲ್ಲಿ ಈಗಿರುವ ಚಿಕ್ಕಮಕ್ಕಳಿಗೆ ಆ ದೃಶ್ಯಗಳು ಲಭ್ಯವಿಲ್ಲ, ಹಿಂದಿನ ಕಾಲದ ನಡಪತ್ತೂ ಇಲ್ಲ. ಹಾಗೆಯೇ ಈ ಕಥೆಯೂ ಕೂಡ. ಬಹುತೇಕರ ಮನೆಗಳಲ್ಲಿ ಗಣಪತಿಯೇನೋ ಬರುತ್ತಾನೆ ಆದರೆ ಮೊದಲಿನ ಉತ್ಸುಕತೆಯಿಲ್ಲ, ಆ ಶ್ರದ್ಧೆ-ಭಕ್ತಿ ಉಳಿದಿಲ್ಲ, ವಿಸರ್ಜನೆ ತುಳಸಿ ಮುಂದೆ ಇಟ್ಟು ಚೊಂಬು ನೀರನ್ನು ಎರಚುವುದರ ಮೂಲಕ ಮುಗಿದು ಹೋಗುತ್ತದೆ! ಇಂದಿನ ಮಕ್ಕಳಿಗೆ ದೊಂದಿ-ದೀವಟಿಗೆ ಇವೆಲ್ಲಾ ಪುಸ್ತಕದ ಶಬ್ದಗಳಾಗಿಬಿಟ್ಟಿವೆ. ಹಳ್ಳದಲ್ಲಿ ಕಲ್ಮಶ ತುಂಬಿಬಿಟ್ಟಿದೆ. ಯಾರೂ ಕಟ್ಟುಹಾಕುವುದಿಲ್ಲ, ಎಲ್ಲೂ ಮೆರವಣಿಗೆಯ ಸಡಗರ ಕಾಣುವುದಿಲ್ಲ. ಚೌತಿ ಬಂದಿದ್ದಷ್ಟೇ ಪಂಚಾಂಗದಲ್ಲಿ ಗೊತ್ತು, ಹೋಗಿದ್ದನ್ನು ತಿಳಿಯಲು ಮತ್ತೆ ಪಂಚಾಂಗವನ್ನೇ ತೆರೆಯಬೇಕು, ಅಂದಹಾಗೇ ಹೇಳುವುದನ್ನೇ ಮರೆತೆ-ಹತ್ತಾರು ವರ್ಷಗಳಲ್ಲಿ ಪಂಚಾಂಗವನ್ನು ತಯಾರಿಸುವವರಿಗೂ ಅದನ್ನು ಬಳಸಲು ಕಲಿಯುವವರಿಗೂ ಹುಡುಕಾಟ ನಡೆಸಬೇಕಾದೀತು ! ಹಕೀಕತ್ತು ಹೀಗಿರುವಾಗ ಉದರಂಭರಣೆಗೆ ದೇಶ-ವಿದೇಶಗಳಿಗೆ ವಲಸೆ ತೆರಳಿದ ಮುಂದಿನ ಪೀಳಿಗೆ ಶುದ್ಧ ಅಮೇರಿಕನ್ನರ ಸ್ಟೈಲಿನಲ್ಲಿ " ಹಾಯ್ ಹೌ ದೂ ಯು ದೂ ಗಣೇಶ್ ? " ಎಂದರೆ ಅದು ಆಶ್ಚರ್ಯದ ಸಂಗತಿಯಾಗುವುದಿಲ್ಲ ! ಹಬ್ಬಕ್ಕೆ ಬರುವ ಗಣಪ [ಒಂದೊಮ್ಮೆ ಬಂದರೆ!]ಉಂಡೆ-ಚಕ್ಕುಲಿಗಳನ್ನು ಚಿತ್ರಗಳಲ್ಲಿ ನೋಡುತ್ತಾ ಕೂರಬೇಕೇ ಶಿವಾಯಿ ೨೧ ಅಥವಾ ೩೨ ಬಗೆಯ ಖಾದ್ಯ ವೈವಿಧ್ಯಗಳು ಆತನಿಗೆ ಲಭ್ಯವಾಗುವುದು ಡೌಟು !