ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, June 3, 2011

೨೦೧೨ರ ಪ್ರಳಯಕಾಲದ ಒಳಗೆ ಎಲ್ಲವೂದಕ್ಕೂ ಇ-ಮೇಲ್ ಐಡಿ ಕಡ್ಡಾಯ !


೨೦೧೨ರ ಪ್ರಳಯಕಾಲದ ಒಳಗೆ ಎಲ್ಲವೂದಕ್ಕೂ ಇ-ಮೇಲ್ ಐಡಿ ಕಡ್ಡಾಯ !

ವೀಕ್ಷಕರೇ ತಮಗೆಲ್ಲಾ ಮತ್ತೊಮ್ಮೆ ಕಳಪೆ ಟಿವಿ ೨೪ ಬಾರ್ ೭ ’ನ್ಯೂಸ್ ರೈಲ್’ಗೆ ಸ್ವಾಗತ. ನಾನು ಅಸಹ್ಯಾ.

ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ಅಪ್ಪಟ ನ್ಯಾಯವನ್ನು ಅನುಸರಿಸುತ್ತಿರುವ ಘನಸರಕಾರ ೨೦೧೨ರೊಳಗೆ ಅಣುರೇಣುತೃಣಕಾಷ್ಠ ಸಹಿತ ಸಕಲಕ್ಕೂ ಇ-ಮೇಲ್ ಐಡಿಯನ್ನು ಕಡ್ಡಾಯಮಾಡುತ್ತದೆ! ನಾವೆಲ್ಲರೂ ಇದರ ಫಲಾಭನುವಿಗಳಾಗುತ್ತಿದ್ದೇವೆ ಎಂದು ಮಾಧ್ಯಮದೊಂದಿಗೆ ಮಾತನಾಡಿದ್ದು ಸೊಳ್ಳೆ ಸಕಲಾಪುರ. ಯಾವಾಗಲೂ ಗುಂಯ್ ಗುಡುತ್ತಾ ತಮಗೆ ಅವಕಾಶ ಸಿಗಲಿಲ್ಲಾ ಎಂದು ಗೊಣಗುತ್ತಿದ್ದ ಅವರು ಇಂದು ಯಾಕೋ ತುಂಬಾ ಉತ್ತಮ ಮೂಡ್‍ನಲ್ಲಿದ್ದರು. ತಡರಾತ್ರಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರ ಮುಖದಲ್ಲಿ ಹರೆಯದ ಕಳೆ ಉಕ್ಕಿ ಹರಿಯುತ್ತಿತ್ತು! ಸೂಕ್ಷ್ಮ ಸಂವೇದನಾಶೀಲರಾದ ಸೊಳ್ಳೆ ಸಮೂಹದವರಿಗೆ ಸಿಗಬೇಕಾದ ಮಾನ್ಯತೆ ಇಂದು ಸಿಕ್ಕಿರುವ ಖುಷಿ ಅವರ ಸಂತಸಕ್ಕೆ ಕಾರಣವಿದ್ದಿರಬೇಕು.

ಏತನ್ಮಧ್ಯೆ ಆಗಾಗ ನಡೆಯುತ್ತಿರುವ ವಿರೋಧಿಗಳ ಮತ್ತು ಭಿನ್ನಮತೀಯ ಬಣಗಳವರ ಬಾಯಿ ಮುಚ್ಚಿಸಲು ಈ ಲೋಕದ ಅಣುರೇಣುತೃಣಕಾಷ್ಠ ಸಹಿತ ಎಲ್ಲರಿಗೂ/ಎಲ್ಲವುದಕ್ಕೂ ಇ-ಮೇಲ್ ಐಡಿಯನ್ನು ಕೊಡಮಾಡುವುದಾಗಿ ಘೋಷಿಸಿದೆ. ಯಾವುದೇ ಕ್ಷಣದಲ್ಲೂ ಇದನ್ನು ಜಾರಿಗೆತರುವ ನಿರೀಕ್ಷೆ ಇದ್ದು ಎಲ್ಲರೂ/ಎಲ್ಲವೂ ಬಹಳ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ವಿರೋಧ ಪಕ್ಷಗಳು ಇದನ್ನು ಅಧಿಕಾರದ ದುರ್ಬಳಕೆ ಎಂದು ಬಣ್ಣಿಸಿ ಅಧಿವೇಶನದಲ್ಲಿ ಸಭಾತ್ಯಾಗಮಾಡಿದ್ದಾರೆ. ಯಾರು ಏನೇ ಹೇಳಿದರೂ ತಮಗೆ ಅದೇನೂ ನಾಟುವುದಿಲ್ಲ ಎಂದು ಮುಖ್ಯಮಂತ್ರಿಗಳು ಸಾರಿದ್ದಾರೆ.

ಅದಾಗಲೇ ತೀವ್ರಗೊಂಡ ಬೆಳವಣಿಗೆಯಲ್ಲಿ ಪರಂಪರಾಗತ ಮೂಲಸ್ಥಾನಗಳನ್ನು ಗಣನೆಗೆ ತೆಗೆದುಕೊಂಡು ಎಲ್ಲರಿಗೂ/ಎಲ್ಲವುದಕ್ಕೂ ಇ-ಮೇಲ್ ಐಡಿಯನ್ನು ಕೊಡಬೇಕೆಂಬ ಸರಕಾರದ ಆದೇಶದಂತೇ ಈ ಕೆಳಗಿನ ಇ-ಮೇಲ್ ಐಡಿಗಳ ಯಾದಿಯನ್ನು ತಯಾರುಮಾಡಲಾಗಿದೆ:

1. cute_solle@charandigabbu.com
2. dum_beddy@bedsidegroups
3. smelly_jirale@sandigondi.co.in
4. sondili_heggana@bila.org
5. kaala_sarpa@hutta.net.in
6. naayanna@boubouchamber.com
.
.
.
.
.
.
99999. vandragappe@kesaruhonda.com
.
.
.
.
.

ಇದನ್ನೆಲ್ಲಾ ಗಮನಿಸಿದ ಸಚಿವರ ಪರಮಾಪ್ತ ಸಲಹೆಯಂತೇ [ಇತ್ತೀಚೆಗೆ ಸರಕಾರ ನೀಡುವ ಪ್ರಶಸ್ತಿಗಳನ್ನು ’ಪಡೆಯುವವರ’ ಪಟ್ಟಿ ಆಂಜನೇಯ ಬಾಲ ಬೆಳೆದಂತೇ ಬೆಳೆಯುತ್ತದಾದ್ದರಿಂದ] ಸಜೀವಿಗಳನ್ನೂ ಮೀರಿ ನಿರ್ಜೀವಿಗಳಿಗೂ ಗುರ್ತಿಸುವ ಸಲುವಾಗಿ ಇ-ಮೇಲ್ ಐಡಿಗಳನ್ನು ಕೊಡಮಾಡುವ ಪ್ರಕ್ರಿಯೆಯಲ್ಲಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಕಾರ್ಯತಪ್ತರಾಗಿದ್ದಾರೆ. ಈ ಯಾದಿಯಲ್ಲಿ :


1. benne@mosarukudike.com
2. tuppa@boguni.net
3. uppu@baaTali.com
4. gani@dhani.org
5. kappuhana@swissbank.hid
.
.
.
.

ಈ ಯಾದಿಗಳನ್ನು ಆಮೂಲಾಗ್ರ ಪರಿಶೀಲಿಸಿದ ಇಂಧನ ಹಾಗೂ ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಸದ್ಯ ಈ ಯಾದಿಗಳಲ್ಲಿ ಯಾವುದೂ ಸುಳ್ಳು ಹೆಸರುಗಳು ಕಂಡುಬರುತ್ತಿಲ್ಲ, ಯಾವುದೇ ಬೇನಾಮೀ ಅಡಿಗೆ ಅನಿಲ ವಗೈರೆ ದುರ್ಬಳಕೆಯಾಗುವುದೂ ಕಾಣುತ್ತಿಲ್ಲ ಎಂಬ ಸ್ಪಷ್ಟನೆ ನೀಡಿದ್ದಾರೆ. ಪ್ರಳಯಕಾಲದಲ್ಲಿ ಮನೆಯಲ್ಲಿ ಬದುಕಿರುವಷ್ಟು ಹೊತ್ತೂ ಟಿವಿ ಮುಂದೆ ಕುಳಿತು ಬ್ರೇಕಿಂಗ್ ನ್ಯೂಸ್ ನೋಡುತ್ತಾ ಲ್ಯಾಪ್ ಟಾಪ್ ಮೂಲಕ ಮೇಲ್ ಸಂಪರ್ಕಹೊಂದಿ " ಕಾಪಾಡೀ...ಕಾಪಾಡೀ " ಎಂದು ಕೂಗಿಕೊಳ್ಳಲಾದರೂ ಇರಲಿ ಎಂಬ ಮಾನವೀಯ ಮೌಲ್ಯಕ್ಕೆ ಮಹತ್ವಕೊಟ್ಟು ಜಾರಿಗೊಳಿಸಿದ ಈ ಯೋಜನೆಯ ಅನುಷ್ಠಾನಕ್ಕೆ ಸರಕಾರ ೧೨೦೦ ಕೋಟಿಗಳನ್ನು ತೆಗೆದಿರಿಸಿದೆ! ಪ್ರಳಯದಂತಹ ಆಪತ್ಕಾಲದಲ್ಲಿ ಎಲ್ಲಿಂದ ಎಲ್ಲಿಗಾದರೂ ತಪ್ಪಿಸಿಕೊಂಡು ಓಡಿಹೋಗಲು ಬೇಡದ ಪ್ರದೇಶಗಳಲ್ಲೂ ಶತಮಾನಗಳ ಹಿಂದಿನ ಮರಗಳನ್ನು ಕಡಿದು ಚತುಷ್ಪಥ ರಸ್ತೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಇದಕ್ಕೆ ಪ್ರತ್ಯೇಕ ಹಣವನ್ನು ತೆಗೆದಿರಿಸಲಾಗಿದೆ!

ಕನ್ನಡ ನೆಲ-ಜಲ ಸಂರಕ್ಷಣೆಗೆ ಸದಾ ಕಟಿಬದ್ಧವಾಗಿರುವ ಸರಕಾರ ಒಪ್ಪೊತ್ತು ಊಟವನ್ನಾದರೂ ಘೋಷಿಸಿ ೨೫ ಕೋಟಿ ರೂ.ವೆಚ್ಚದಲ್ಲಿ ಭುವನೇಶ್ವರಿ ವಿಗ್ರಹದ ಸ್ಥಾಪನೆ ನಡೆಸುತ್ತದೆ ಎಂದು ಮತ್ತೊಮ್ಮೆ ಪುನರುಚ್ಚರಿಸಿದೆಯಲ್ಲದೇ ಕಮ್ಮಿ ಬಿದ್ದಲ್ಲಿ ಇನ್ನೂ ೨೫ ಕೋಟಿ ವ್ಯಯಿಸಿ ಕೆಲಸ ಪೂರ್ತಿ ಮಾಡಲಾಗುವುದು ಎಂದು ತಿಳಿಸಿದೆ. ಯಾರೇ ರಾಜಕಾರಣಿ ಸತ್ತರೂ ಪಕ್ಷಾತೀತವಾಗಿ ಅವರ ಜೀವಿತ ಕಾಲದಲ್ಲಿ ನಡೆಸಿದ ಕಾನೂನು ಬಾಹಿರ ಅಕ್ರಮ ದಂಧೆಗಳು,’ಘನಕಾರ್ಯ’ಗಳು ಮತ್ತು ಬ್ರಷ್ಟಾಚಾರವನ್ನು ನೆನೆದು ಸಕಲ ಸರಕಾರೀ ಗೌರವಗಳೊಂದಿಗೆ ನೇರವಾಗಿ ಸ್ವರ್ಗಕ್ಕೆ ಕಳಿಸುವ ಏರ್ಪಾಟುಮಾಡಲಾಗುವುದು ಎಂದು ಅಧಿವೇಶನದಲ್ಲಿ ಒಮ್ಮತದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ನಿರ್ಣಯವನ್ನು ಎಲ್ಲಾ ಪಕ್ಷಗಳವರೂ ಸ್ವಾಗತಿಸಿದ್ದಾರೆ! ಮಳೆಗಾಲದ ಆರಂಭದಲ್ಲಿ ನಾಡಿನ ಬೆನ್ನೆಲುಬಾದ ರೈತರಿಗೆ ಬೀಜದ ಕೊರತೆ ಬಾಧಿಸದಂತೇ ನೋಡಿಕೊಳ್ಳುವಂತೇ ಆ ಯಾ ತಾಲೂಕುಗಳ ತಹಶೀಲ್ದಾರರಿಗೆ ಹಾಗೂ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ; ಆದಾಗ್ಯೂ ಒಂದೊಮ್ಮೆ ಬೀಜದ ಕೊರತೆ ಅತಿಯಾಗಿ ಕಂಡುಬಂದಲ್ಲಿ ಬಂದೂಕು, ಕಾಡತೂಸು, ರೈಫಲ್ ಮತ್ತು ಗುಂಡಿನ ಕಾರ್ಟ್ರಿಜ್‍ಗಳನ್ನು ತಯಾರಿ ಇಟ್ಟುಕೊಳ್ಳಲು ಆದೇಶಿಸಲಾಗಿದೆ.

ಇಷ್ಟೆಲ್ಲಾ ಔದಾರ್ಯವನ್ನು ಮೆರೆದಿದ್ದರೂ ತಾವೇ ಬೇರೆ ತಮ್ಮ ಖದರ್ರೇ ಬೇರೆ ಎಂಬ ಪ್ರತಿಪಕ್ಷಗಳವರು ಗುಡುಗಿದ್ದರೆ ಪಕ್ಷಗಳ ಪ್ರಚಾರ, ಸದಸ್ಯರ ನೇಮಕಾತಿ, ಮುಳುಗುತ್ತಿರುವ ಮಣ್ಣಿನ ಮಕ್ಕಳ ಪಕ್ಷದ ಸಭೆಗಳಿಗೆ ಜನರನ್ನು ಕರೆತರುವ ಸಗಟು ವ್ಯವಹಾರ-ವೈಖರಿಗಳಿಗೆ ಯಾವುದೇ ಇ-ಮೇಲ್ ಐಡಿಗಳನ್ನು ಸರಕಾರೀ ಖರ್ಚಿನಲ್ಲಿ ಪಡೆಯಲಾಗದಿದ್ದುದಕ್ಕೆ ಮುದ್ದೆಗಳೆಲ್ಲಾ ಎದ್ದು ತಂತಮ್ಮಲ್ಲೇ ಗುದ್ದಾಡಿದ್ದು ಕಂಡುಬಂತು! ಜನರಿಂದ ಟಾ ಟಾ ಬೈ ಬೈ ಮಾಡಿಸಿಕೊಳ್ಳುತ್ತಿರುವ ’ಕೈ’ಗಳೂ ಹೆಗಲುಮೇಲೆ ಟವೆಲ್ ಹಾಕಿಕೊಂಡು ’ಸಿದ್ಧ’ರಾಗಿ ಅಲ್ಲೆಲ್ಲೋ ಅಡ್ಡ ನಿಂತು ಉದ್ದುದ್ದ ಕೂಗುತ್ತಾ ಮಣ್ಣಿನಮಕ್ಕಳ ಪಂಚೆ ಹಿಡಿದು ಜೈಕಾರ ಹಾಕುತ್ತಿದ್ದು ತಮಗೂ ’ಸಮಪಾಲು’, ’ಸಮಬಾಳು’ ಬರಲಿ ಎಂದು ಪರೋಕ್ಷ ಘಂಟಾಘೋಷವಾಗಿ ಕೂಗಿ ಜನರೆಲ್ಲರ ಲಕ್ಷ್ಯ ಸೆಳೆಯುವಲ್ಲಿ ನಿರತರಾಗಿದ್ದಾರೆ. ಏನಾದರೇನಾಯ್ತು ನಾವು ಸದ್ಯ ಹಾಯಾಗಿದ್ದೇವೆ ಎಂಬ ಕುರುಡು ನಂಬಿಕೆಯಲ್ಲಿ ಮತದಾರ ಕುರಿಗಳು ನಾಳೆ ಎರಗಬಹುದಾದ ಕತ್ತಿಯನ್ನು ಕನಸಲ್ಲೂ ಕಂಡಿಲ್ಲ; ಕಾಣುತ್ತಿಲ್ಲ. ಅಂದಹಾಗೇ ಈ ಎಲ್ಲದರ ನಡುವೆ ಮಾಂತ್ರಿಕರ ಮತ್ತು ಜ್ಯೋತಿಷಿಗಳ ಐಡಿಗಳನ್ನು ಯಾವುದೇ ಕಾರಣಕ್ಕೂ ಬಹಿರಂಗಗೊಳಿಸಬಾರದು ಹಾಗೆ ಮಾಡಿದಲ್ಲಿ ಅದು ಪ್ರಜಾಪ್ರಭುತ್ವಕ್ಕೆ ಎಸಗುವ ದ್ರೋಹ ಎಂದು ’ರೇವೂಸ್’ ಮಂಗಳೂರಿನಲ್ಲಿ ಮಾತನಾಡುತ್ತಾ ಹೇಳಿದರು. ’ನಂದಿನಿ ಹಾಲ’ನ್ನು ಕುಡಿಯಲಿ ಬಿಡಲಿ ಲಿಂಬೆ ಹಣ್ಣಿನ ಸತತ ಸ್ನೇಹ ತಮಗೆ ಅತ್ಯಂತ ಮುದನೀಡುವ ವಿಚಾರವೆಂತಲೂ ೧೦ನೇ ತರಗತಿ ಪಾಸಗದಿದ್ದರೂ ಏನಾಯ್ತು ರಾಜ್ಯವನ್ನಾಳಲು ಅದು ಬೇಕಾಗಿಲ್ಲ ಎಂಬುದನ್ನು ಅವರು ಮೇಜುಗುದ್ದುವುದರ ಮೂಲಕ ಒತ್ತಿಹೇಳಿ ತಮ್ಮ ಕೈಗೆ ಮೂವ್ ಸವರಿಕೊಂಡಿದ್ದಾರೆ!

ಆಗ್ನಿ ಪರೀಕ್ಷೆಯಲ್ಲಿ ಹಲವರು ಬಾರಿ ಗೆದ್ದುಬಂದಿರುವ ಆಳುವ ಪಕ್ಷದವರಿಗೆ ವಾಯು ಪರೀಕ್ಷೆ ಮತ್ತು ಮಲಪರೀಕ್ಷೆ ಜಲಪರೀಕ್ಷೆಗಳಾದಿಯಾಗಿ ಇನ್ನೇನೆಲ್ಲಾ ಪರೀಕ್ಷೆಗಳನ್ನು ಸಮಯೋಚಿತವಾಗಿ ಯಾವ್ಯಾವಾಗ ನೀಡಬಹುದು ಎಂದು ಮುದ್ದೆಗಳ ಪಡೆಯಲ್ಲಿ ಚಿಂತನ-ಮಂಥನ ನಡೆದಿದೆ. ಅಹರ್ನಿಶಿ ತಲೆ-ಮೈ ಪರಚಿಕೊಂಡಿದ್ದೇ ಬಿಟ್ಟರೆ ಬೇರೆ ಯಾವುದೇ ಕಾರಣಗಳಿಂದಲೂ ಹಾಲೀ ಸರಕಾರವನ್ನು ಪತನಗೊಳಿಸಲು ಸಾಧ್ಯವಾಗದ್ದಕ್ಕೆ ಹುಲಿಯ ಹುಣ್ಣಿನ ಥರ ಹುಣ್ಣುಗಳಾಗಿವೆ ಎಂಬುದು ಅನೇಕರ ಅನಿಸಿಕೆಯಾಗಿದೆ. ಹುಳಿಸೇ ಮುಪ್ಪಾದರೂ ಹುಳಿಗೆ ಮುಪ್ಪಿಲ್ಲ ಎನ್ನುವ ಮಣ್ಣಿನ ಮಕ್ಕಳು ’ಶಾಕಿಂಗ್ ನ್ಯೂಸ್’ ಕೊಡಲು ಏರ್ಪಾಟುಮಾಡಿಕೊಂಡು ಮೊನ್ನೆ ದೆಹಲಿಗೆ ದೌಢಾಯಿಸಿ ’ಮರಳಿ ಯತ್ನವಂ’ ಮಾಡಿ " ಬಂದ ದಾರಿಗೆ ಸುಂಕವಿಲ್ಲ " ಎನ್ನಿಸಿಕೊಂಡು ತಾನೇ ಶಾಕ್ ಪಡೆದು ಬೆಂಗಳೂರಿಗೆ ವಾಪಸ್ಸಾದಮೇಲೆ ತನಗೆ ಮುತ್ತಿಕೊಂಡ ಮಾಧ್ಯಮದವರನ್ನು ಗರ್ಜಿಸಿ ಹಿಮ್ಮೆಟ್ಟಿಸಿದ್ದಾರೆ ಎನ್ನಲಾಗಿದೆ.

ಮುದ್ದೆಗಳ ಹಳಸಲು ವಾಸನೆಯನ್ನು ಅದಾಗಲೇ ರುಚಿನೋಡಿದ ಹಲವಾರು ಜನ ಮುದ್ದೆಗಳ ಗೋಜೇ ಬೇಡಾ ಎನ್ನುವ ಮನದಿಂಗಿತವನ್ನು ಆಗಾಗ ಅಲ್ಲಲ್ಲಿ ಮಾಧ್ಯಮಗಳವರೆದುರು ಗೌಪ್ಯವಾಗಿ ಬಹಿರಂಗಗೊಳಿಸಿದ್ದಾರೆ! ಆದರೂ ಹಳೆಯ ಪ್ರೀತಿಯ ’ಮನಿಪ್ಲಾಂಟ್’ ಬಳ್ಳಿ ಒಮ್ಮೊಮ್ಮೆ ಕಾಲಿಗೆ ಅಡರಿಕೊಂಡು ಮತ್ತೆ ಹಳಸಿದ್ದನ್ನೂ ಒಪ್ಪುವ ಮನಸ್ಸು ಕೆಲವರದ್ದಾಗಿದೆ! ಒಂದುಕಾಲದಲ್ಲಿ ಎಲ್ಲರನ್ನೂ ಹೊರಟ್ಟಿದವರು ಈಗ " ಒಳೀಕ್ ಬನ್ನಿ ಒಳೀಕ್ ಬನ್ನಿ" ಅಂತಾ ರತ್ನಗಂಬಳಿ ಹಾಸುತ್ತಿರುವುದು ಪಕ್ಷದ ಅಧೋಗತಿಯನ್ನು ಎತ್ತಿತೋರಿಸುತ್ತದೆ. ಅನಂತಮೂರ್ತಿಯಾದರೂ ಬರಲಿ ರಾಧಾಕೃಷ್ಣರಾದರೂ ಬರಲಿ ’ಬರುವವರಿಗೆಲ್ಲಾ ಸ್ವಾಗತ’ ಎಂದು ತಾತ್ಕಾಲಿಕ ಬೋರ್ಡನ್ನು ಹಾಕಿ ರಾಷ್ಟ್ರಾಧ್ಯಕ್ಸರೂ ರಾಜ್ಯಾಧ್ಯಕ್ಸರೂ ಒಂದೇ ಆಫೀಸಿನಲ್ಲಿ ಕೂತು ತಲೆಮೇಲೆ ಬಹಳಹೊತ್ತು ’ಕೈ’ಹೊತ್ತು ಈಗ ಗಡ್ಡಕ್ಕೆ ಕೈಕೊಟ್ಟು ಕೂತಿದ್ದಾರೆ! ಯಡ್ಯೂರಣ್ಣನಿಗೆ ಉಂಡೆನಾಮ ಎಳೆಯಲು ಹೊರಟಿದ್ದ ಸರ್ಕಸ್ ಕಂಪನಿಯಲ್ಲಿ ಅಧಿಕಾರವಿಲ್ಲದೇ 'ಶೋ' ನಡೆಸಲು ಸಾಧ್ಯವಾಗದೇ ಇರುವಾಗ ’ಬಂಡೆ’,’ಉಂಡೆ’, ’ಬಸ್ಸು’ ಮುಂತಾದ ಬಿಳಿಯ ಆನೆಗಳನ್ನು ಸಾಕುವುದು ’ಕುದುರೆ ವ್ಯಾಪಾರ’ಕ್ಕಿಂತಾ ದುಬಾರಿ ಎಂಬುದು ಮುದ್ದೆಗಳ ಲೆಕ್ಕಾಚಾರ; ಅದೊಂದೇ ಮುದ್ದೆಗಳು ಕಂಡ ಹದಿನಾರಾಣೆ ಸತ್ಯ-ಬಿಡಿ. ಯಾವುದೇ ಕಠಿಣ ಪರೀಕ್ಷೆಗಳನ್ನು ತಂದೊಡ್ಡಿದ್ದರೂ ತಾವು ಪಾಸು ಮಾಡುವುದಾಗಿ ತಿರುಗಾಟದಲ್ಲಿರುವ ಈಸ್ವರಣ್ಣ ಶಿವಮೊಗ್ಗದಲ್ಲಿ ಸಾರಿದ್ದಾರೆ. ಸರಿಯಾಗಿ ಉಡಲು ಬಾರದ ಉದ್ದ ಪಂಚೆಯನ್ನು ಹೇಗಾದರೂ ಸುತ್ತಿಕೊಂಡು ಅವರು ಬಹಳ ಉದ್ವೇಗದಿಂದ ಮಾತನಾಡುತ್ತಿದ್ದರು.

ಖಡುಗಂದುಬಣ್ಣದ ಮುದ್ದೆಗಳೂ ಅವುಗಳ ಎಣ್ಣೆಯಂತಹ ಹೊಳಪುಳ್ಳ ಮೈಕಾಂತಿಯ ನಡುವೆ ಕರಿಮುದ್ದೆಯ ಬೀಜವೊಂದು ಬಿದ್ದು ಬಿಳಿ ಮುದ್ದೆಯೊಂದು ಹೊರಬಂದಿರುವುದನ್ನು ಸಹಿಸದ ದೊಡ್ಡಮುದ್ದೆ ನಿಜಕ್ಕೂ ಹೈರಾಣಾಗಿದೆ. ಏಕಾದಶಿಯಮನೆಗೆ ಶಿವರಾತ್ರಿಯೂ ಬಂದರೆ ಹೇಗಾಗಬಹುದೋ ಹಾಗೇ ಪತ್ರಿಕೆಗಳಲ್ಲಿ ಇದನ್ನು ಚಿತ್ರಸಮೇತ ಕಂಡಾಗಲೆಲ್ಲಾ ಆನೆ ಸಿಂಹದ ಕನಸುಕಂಡಂತೇ ಹೆದರಿ ಬೀಳುವ ಸ್ಥಿತಿ ಉಂಟಾಗಿದೆ. ಗಾಂಧೀನಗರದಲ್ಲಿ ಹಲವು ಗಂಡುಗಳ ’ಪೌರುಷ’ವನ್ನು ಉಂಡ ಬಿಳಿಯ ಗೋಧೀನಾಗವೊಂದು ’ಲಾಡಿ’ನ ಸ್ನೇಹದಿಂದಾಗಿ ದೊರೆಯಿತು ಎನ್ನುವ ಕೆಲವರು ರಾಜ್ಯಾಧ್ಯಕ್ಸರ ರಸಿಕತೆಯನ್ನು ನಿಬ್ಬೆರಗಾಗಿ ನೋಡುತ್ತಿದ್ದಾರೆ! ಹೆಣ್ಣು ಸಂತಾನವಿಲ್ಲದೇ ಪಟ್ಟದಕ್ಕುವುದಿಲ್ಲವೆಂತಲೂ ಹಾಗೆ ಪಡೆಯಲು ಧರ್ಮಪತ್ನಿ ವಯೋವೃದ್ಧೆಯೆಂತಲೂ ಸಬೂಬು ಹೇಳಿದ ಕುಮಾರ ತೆವಲನ್ನು ತೀರಿಸಲು ಬಳಸಿಕೊಂಡ ಬಿಳಿನಾಗಕ್ಕೆ ಪೂರಕ ಆಸ್ತಿಯನ್ನೂ ಕೊಡಬೇಕಾಗಿ ಬಂದಿದೆ, ಅದನ್ನು ಗಟ್ಟಿಮಾಡಿಕೊಳ್ಳುವ ಸಲುವಾಗಿಯೇ ಇತ್ತೀಚೆಗೆ ದಿನಪತ್ರಿಕೆಯೊಂದರಲ್ಲಿ ಈ ಸಂಬಂಧದ ಕುರಿತು ಸಾಕ್ಷ್ಯಾಧಾರವಾಗಿ ಕೆಲವು ಛಾಯಾಚಿತ್ರಗಳನ್ನು ಪ್ರಕಟಿಸಲಾಗಿತ್ತು.

ಮಳೆಗಾಲ ಆರಂಭವಾಗುತ್ತಿದ್ದ ಹಾಗೇ ಅರಣ್ಯ ಇಲಾಖೆಯವರು ತಾವು ಗಿಡಗಳನ್ನು ನೆಡಲು ತೊಡಗಿದ್ದರೆ ವಿದ್ಯುಚ್ಛಕ್ತಿ ನಿಗಮದವರು ತಾವು ಬೇಕುಬೇಕಾದಹಾಗೇ ಕಡಿದು ಕರ್ತವ್ಯ ಪಾಲಿಸುವುದಾಗಿ ಹೇಳಿದ್ದಾರೆ. ಪಿ.ಡಬ್ಲ್ಯೂ.ಡಿ ಯವರು ಕಂತ್ರಾಟುದಾರರ ಮೂಲಕ ರಸ್ತೆಗಳನ್ನು ನಿರ್ಮಿಸುತ್ತಿದ್ದರೆ ನೀರು ಸರಬರಾಜು ಮತ್ತು ಒಳಚರಂಡಿಯವರು ತಮಗೆ ಬೇಕಾದ ರೀತಿಯಲ್ಲಿ ರಸ್ತೆಗಳಲ್ಲಿ ಗುಂಡಿತೆಗೆದು ಕರ್ತವ್ಯ ಪಾಲಿಸುವುದು ಕಂಡುಬಂದಿದೆ! ಸದಾ ಕರ್ತವ್ಯ ನಿರತ ಅಭಿಯಂತರರುಗಳು ತಂತಮ್ಮ ಕರ್ತವ್ಯಗಳಲ್ಲಿ ತನ್ಮಗ್ನರಾಗಿರುವುದಕ್ಕೆ ಇದಕ್ಕಿಂತಾ ಉತ್ತಮ ಉದಾಹರಣೆ ಬೇಕೆ ? ಇದು ಸರಕಾರೀ ಇಲಾಖೆಗಳ ನಡುವೆ ಇರುವ ಪರಸ್ಪರ ಅನ್ಯೋನ್ಯತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಮನಗಂಡ ನಗರ ನಾಗರಿಕ ವೇದಿಕೆ ಆಯಾ ಇಲಾಖೆಗಳ ಸೇವಾ ಆಯುಕ್ತರು, ಅಭಿಯಂತರರುಗಳಿಗೆ ಸನ್ಮಾನಮಾಡುವ ಹಂಬಲ ಇದೆ ಎಂಬುದನ್ನು ಗೂಢವಾಗಿ ಹೇಳಿದೆ !

ಕಲಬೆರಕೆ ಆಹಾರ, ದೂಷಿತಹವೆ, ಕಲುಷಿತ ನೀರು ಇತ್ಯಾದಿಗಳಿಂದ ಎಲುವಿನ ಹಂದರವಾದ ನಾಗರಿಕರು ಅಲೋಪಥಿ ಔಷಧಿಗಳನ್ನು ಹೊತ್ತು ಹೊತ್ತಿಗೆ ಬೊಗಸೆತುಂಬಾ ಮೊಗೆದು ನುಂಗುವುದರಿಂದ ಅವರ ಶಾಂತಿಗಾಗಿ ದಿನಸಿ ಅಂಗಡಿಗಳಲ್ಲೂ ಬ್ರಾಂಡೆಡ್ ಮದ್ಯ ಬಾಟಲಿಗಳ ಮಾರಾಟವನ್ನು ವಿತರಿಸಲು ಅಬಕಾರೀ ಇಲಾಖೆ ಆಯೋಜನೆ ರೂಪಿಸುತ್ತಿದೆ. ನರ್ಸ್‍ಗಳ ಪ್ರೀತಿಗೆ ಪಾತ್ರವಾದ ಈ ಇಲಾಖೆ ಇದೀಗಾಗಲೇ ಮಹಿಳಾ ವೇಟರ್ ಗಳನ್ನು ಬಾರ್ ಗಳಲ್ಲಿ ನೇಮಕಾತಿ ಮಾಡಿಸುವುದರ ಮೂಲಕ ಹೊಸ ಸಾಧನೆಗೈದಿದೆ. ತಮ್ಮ ಇಲಾಖೆಯ ಗಿರಾಕಿಗಳೆಲ್ಲಾ ’ಬಾಟಲೀಪುತ್ರ’ರೇ ಆಗಿರುವುದರಿಂದ ಇದರ ಸಚಿವರು ನರ್ತನಕ್ಕೆ ಹೆಸರುವಾಸಿಯಾಗಿ ಹಗಲಿರುಳೂ ತುಸುವೂ ತೆರಪಿಲ್ಲದೇ ನರ್ತನಮಾಡುತ್ತಿದ್ದಾರೆ! ಸಮಾಜದಲ್ಲಿ ಎಲ್ಲರೂ ’ಬಾಟಲೀಪುತ್ರ’ರಾಗಿಬಿಟ್ಟರೆ ಆಗ ’ಮಾನವಕುಲ ತಾನೊಂದೆವಲಮ್’ ಆದಹಾಗೇ ಆಗಿಬಿಡುತ್ತದೆ. ಚುನಾವಣೆಗಳು ಬಂದಾಗ ಇನ್ನೂ ಅನುಕೂಲಕರವಾಗುತ್ತದೆ ಎಂಬ ದು[ದೂ]ರಾಲೋಚನೆಯಿಂದ ಇಂತಹ ಹಲವು ಯೋಜನೆಗಳು ಈ ಇಲಾಖೆಯ ಮುಂದಿವೆ. ಸಿಡಿದೆದ್ದರೆ ರಿಸಾರ್ಟು ಯಾತ್ರೆ ’ಒಡನಾಡಿದರೆ’ ಪಾದಯಾತ್ರೆ ಎಂಬ ಮಂತ್ರವನ್ನು ಎಲ್ಲರಿಗೂ ಬೋಧಿಸಿದ ಸನ್ಮಾನ್ಯರಿಗೆ ಯಾವಾಗ ಎಲ್ಲಿ ಯಾವ ಜ್ಞಾನೋದಯವಾಗುತ್ತದೆ ಎಂಬುದು ತಿಳಿಯುವುದಿಲ್ಲ ಎಂಬುದು ಹಲವರ ಅಭಿಪ್ರಾಯವಾಗಿದೆ. ಕೆಲವರು ’ಯಡ್ಯೂರಣ್ಣ ಹೊತ್ತುಬಂದಾಗ ಕತ್ತೆಕಾಲನ್ನೂ ಹಿಡಿಯುತ್ತಾರೆ’ ಎಂಬ ಕಟುಸತ್ಯವನ್ನು ಹಾಡಹಗಲೇ ಹೇಳಿ ಲೇವಡಿಮಾಡಿದ್ದಾರೆ!

ಕನ್ನಡ ನಾಡನ್ನು ಹಿಂದಿನಿಂದ ಸ್ವಾತಂತ್ರ್ಯ ಪೂರ್ವದವರೆಗೆ ಹಲವಾರು ಅರಸರು/ರಾಣಿಯರು ಆಳಿದ್ದಾರೆ. ಆದರೆ ಇತ್ತೀಚೆಗೆ ಯಾಕೋ ’ನಾಡಪ್ರಭು ಕೆಂಪೇಗೌಡ’ ಎಂಬ ಹೆಸರು ಪದೇ ಪದೇ ಕೇಳಿಬರುತ್ತಿದೆ. ಕೆಂಪೇಗೌಡರು ಮಾಗಡಿಯ ಸಾಮಂತರಾಗಿ ಬೆಂಗಳೂರನ್ನು ನಿರ್ಮಿಸಿದ್ದು ನಿಜ. ಅವರು ನಿರ್ಮಿಸಿದ ಹಳೆಯ ಬೆಂಗಳೂರಿಗೆ ಹೊಸರೂಪ ಕೊಡುವಲ್ಲಿ ಮೈಸೂರು ಅರಸರೂ ದುಡಿದಿದ್ದಾರೆ. ಹಾಗಾದರೆ ಮೈಸೂರು ಮಹಾರಾಜರುಗಳು ನಾಡಪ್ರಭುಗಳಾಗಿರಲಿಲ್ಲವೇ ? ಹೊಯ್ಸಳರು, ಕದಂಬರು, ವಿಜಯನಗರದವರು ಆಗಿರಲಿಲ್ಲವೇ ? ಅವರೆಲ್ಲರ ಕೊಡುಗೆ ಬಹು ಹೆಚ್ಚಿನದು. ಒಂದರ್ಥದಲ್ಲಿ ’ನಾಡಪ್ರಭು’, ’ರಾಷ್ಟ್ರಕವಿ’ ಈ ಶಬ್ದಗಳ ಪ್ರಯೋಗ ಸರಿಯಲ್ಲ. ಅದರಿಂದ ಕೆಲವರಿಗಷ್ಟೇ ಗೌರವ ಸಿಕ್ಕಂತಾಗುತ್ತದೆಯೇ ಹೊರತು ಸಮಕಾಲೀನರಾದ ಹಲವರಿಗೆ ಅದು ಬೇಸರತರುವ ವಿಷಯವಾಗಬಹುದು--ಎಂದು ಹಿರಿಯ ಸಾಹಿತಿಗಳಾದ ಗುಮ್ಮಣ್ಣ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ. ತಾವು ಕೆಂಪೇಗೌಡರ ಅಪ್ಪಟ ಅಭಿಮಾನಿಯಾಗಿದ್ದು ಹೀಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಯಾರೂ ವಿಚಲಿತರಾಗಬೇಕಿಲ್ಲಾ ಎಂದೂ ಅವರು ಹೇಳಿಕೆ ನೀಡಿದ್ದಾರೆ. ಅವರು ಇಂದು ಬೆಂಗಳೂರಿನ ಕೆಂಪೇಗೌಡ ಸರ್ಕಲ್‍ನಲ್ಲಿ ನಿಂತು ಮಾತನಾಡುತ್ತಿದ್ದರು. ಗಡಿಬಿಡಿಯಲ್ಲಿ ಮಾತನಾಡಿದ ಅವರು ಅಗತ್ಯ ಕೆಲಸದ ನಿಮಿತ್ತ ಪುಸ್ತಕ ಮಳಿಗೆಯೊಂದರ ಎರಡನೇ ಮಹಡಿಗೆ ಧಾವಿಸಿದರು.

ಒಂದೇ ವಿಷಯದಮೇಲೆ ಘಳಿಗೆಗೊಂದು ಬಾರಿ ಬೇರೆ ಬೇರೆ ಅಭಿಪ್ರಾಯವನ್ನು ಕೊಡುವವರಿಗೆ ' ತರಲೆ ಭಾರದ್ವಾಜ ಪ್ರಶಸ್ತಿ ' ಯನ್ನು ಕೊಡಲಾಗುವುದು ಎಂದು ಚಿಂತಕ ಜಿ.ಕೆ.ಮುಕುಂದರಾವ್ ಹೇಳಿದ್ದಾರೆ. ಅವರು ಚಿಂತಕರ ಚಾವಡಿಯ ಮೂರನೇ ಮೆಟ್ಟಿಲ ಮೇಲೆ ನಿಂತು ಮಾತನಾಡುತ್ತಿದ್ದರು. ಪ್ರಶಸ್ತಿ ಅಸಂಬದ್ಧ ಶಿಫಾರಸ್ಸು ಪತ್ರಗಳನ್ನಷ್ಟೇ ಒಳಗೊಂಡಿರುತ್ತದೆ ಎಂಬುದು ಇಲ್ಲಿನ ವಿಶೇಷ. ಕನ್ನಡ ಸಂಗಟನೆಗಳ ಹೆಸರಿನಲ್ಲಿ ಕೆಲವರು ರೋಲ್ ಕಾಲ್ ಮಾಡುತ್ತಿರುವುದು ಕನ್ನಡಾಭಿಮಾನಿಗಳ ದುರಾದೃಷ್ಟ ಎಂದೂ ಹೇಳುತ್ತಿದ್ದರು. ಮಾತನ್ನು ಮುಂದುವರಿಸಿದ ಅವರು ಮುಂದಿನ ಸರ್ತಿ ಚುನಾವಣೆಯಲ್ಲಿ ಆಯ್ಕೆಯಾಗಿ ಬರುವ ಶಾಸಕ ಮತ್ತು ಸಂಸದರಿಗೆ ಕಬ್ಬಿಣದ ಕೊಡಲಿ, ಮಚ್ಚು. ಲಾಂಗು ಇಂಥವನ್ನೆಲ್ಲಾ ಮೊದಲೇ ಕೊಟ್ಟು ನಾಗರಿಕ ಸನ್ಮಾನ ಮಾಡಿ ಆಮೇಲೆ ಅವರವರ ಕರ್ತವ್ಯಕ್ಕೆ ಕಲಿಸಲಾಗುವುದು ಎಂದರು.

ಅತ್ಯುತ್ತಮ ಸುದ್ದಿಗಳನ್ನು ಸಕಾಲದಲ್ಲಿ ಶೀಘ್ರಗತಿಯಲ್ಲಿ ವಿಲೇವಾರಿ ಮಾಡಿದ್ದಕ್ಕಾಗಿ ಕಳಪೆ ಟಿವಿಗೆ ’ಮಾಧ್ಯಮದ ಮಿಂಚು’ ಪ್ರಶಸ್ತಿ ಲಭ್ಯವಾಗಿದೆ. ಗೊತ್ತಿಲ್ಲದ ಸಂಘವೊಂದು ಕೊಡಮಾಡುವ ಈ ಪ್ರಶಸ್ತಿಗೆ ದೇಶದಲ್ಲೇ ಕಳಪೆ ಟಿವಿ ಪ್ರಪ್ರಥಮವಾಗಿ ಆಯ್ಕೆಗೊಂಡಿರುವುದು ನಮಗೆಲ್ಲಾ ಸಂತೋಷದ ವಿಷಯ. ಈ ಸಮಯದಲ್ಲಿ ನಮ್ಮ ಕಳಪೆ ಟಿವಿಯ ಮುಖ್ಯಸ್ಥರಾದ ಕಡ್ಡಿ ರಂಗಣ್ಣನವರು ವೀಕ್ಷಕರಿಗೆ ಕೃತಜ್ಞತೆ ತಿಳಿಸಿದ್ದಾರೆ. ನಿಮ್ಮ ಸಹಕಾರ ಇದೇ ರೀತಿ ಮುಂದುವರಿಯಲಿ ಎಂದು ಕಳಪೆ ಟಿವಿ ಬಳಗ ಹಾರೈಸುತ್ತದೆ.

ಒಟ್ಟಾರೆ ಗಣಕಯಂತ್ರದಿಂದಾದ ಸುಧಾರಣೆಗಳನ್ನು ಅಣುರೇಣುತೃಣಕಾಷ್ಠಾದಿಗಳೂ ಒಪ್ಪಲೇಬೇಕಾಗಿದೆ. ಇದು ನಿಜಕ್ಕೂ ನಾವು ಕಂಡ ಮಹತ್ತರ ಸಾಧನೆ ಎಂದು ವಿಜ್ಞಾನಿಗಳೂ ಗಣಕಶಾಸ್ತ್ರಿಗಳೂ ಒಳಗೊಳಗೇ ಬ್ರಷ್ಟಾಚಾರಕ್ಕೆ ಕರ್ತರಿ ಮತ್ತು ಕರ್ಮಣಿ ಪ್ರಯೋಗ ಮಾಡಲು ಮುನ್ನುಗ್ಗುತ್ತಿದ್ದಾರೆ. ಅತ್ಯಂತ ಕುತೂಹಲಕಾರಿ ಐಡಿಯೊಂದು ನಮ್ಮ ಗಮನವನ್ನು ತನ್ನತ್ತ ಸೆಳೆಯಿತು. ಅದೆಂದರೆ :

cute_raadhika@kswamy.net

ಇದೀಗ ತಾನೇ ಬಂದ ಸುದ್ದಿ :
ಕಾಯ್ದೆಬಾಹಿರ ವೆಬ್‍ಸೈಟ್‍ಗಳನ್ನು ಖಡಾಖಂಡಿತ ರದ್ದುಗೊಳಿಸಲಾಗುವುದು ಎಂದು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ತಡವಾಗಿ ಹೇಳಿಕೆ ನೀಡಿದೆ.

ಇದು ಈ ಹೊತ್ತಿನ ನ್ಯೂಸ್, ಕ್ಷಣ ಕ್ಷಣದ ಸುದ್ದಿಗಾಗಿ ಆತಂಕದಿಂದ ನೋಡುತ್ತಾ ಇರಿ: ಕಳಪೆ ಟಿವಿ ೨೪ ಬಾರ್ ೭, ನಮಸ್ಕಾರ.