ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, December 10, 2013

ಅಲಮೇಲಮ್ಮನ ಶಾಪವೇ ಅಷ್ಟೊಂದು ಪರಿಣಾಮಕಾರಿಯಾದರೆ ಬ್ರಹ್ಮಶಾಪದ ಪರಿಣಾಮ ಹೇಗಿರಬೇಡ!


ಅಲಮೇಲಮ್ಮನ ಶಾಪವೇ ಅಷ್ಟೊಂದು ಪರಿಣಾಮಕಾರಿಯಾದರೆ ಬ್ರಹ್ಮಶಾಪದ ಪರಿಣಾಮ ಹೇಗಿರಬೇಡ!

ಅದೊಂದು ಸುದೀರ್ಘ ಐತಿಹಾಸಿಕ ಕಥೆ! ವಿಜಯನಗರ ಸಾಮ್ರಾಜ್ಯ ಪತನಗೊಳ್ಳುವ ಕಾಲದಲ್ಲಿ, ಅವರ ಪಾಳೇಗಾರರು, ಸಾಮಂತರು ಎಲ್ಲರೂ ಬೆಳೆಯುತ್ತ ಸಬಲರಾಗತೊಡಗಿದ್ದರು. ವಿಜಯನಗರ ವಂಶಸ್ಥನಾಗಿದ್ದ ಶ್ರೀರಂಗರಾಯ ವಿರೋಧಿಗಳಿಂದ ತಪ್ಪಿಸಿಕೊಳ್ಳಲು ಶ್ರೀರಂಗಪಟ್ಟಣಕ್ಕೆ ಬಂದು ನೆಲೆಸಿದ್ದ. ಬರುವಾಗ ಆತನ ರಾಣಿ ಅಲಮೇಲಮ್ಮ ಪಾರಂಪರಿಕವಾಗಿ ಪ್ರಾಪ್ತವಾದ ಬಂಗಾರ, ಮುತ್ತು-ರತ್ನ-ಒಡವೆ ವಸ್ತುಗಳನ್ನೆಲ್ಲ ಕಟ್ಟಿಕೊಂಡು ಬಂದಿದ್ದಳು. ಮೈಸೂರು ಪ್ರಾಂತದಲ್ಲಿ ಪ್ರಬಲಗೊಳ್ಳುತ್ತಿದ್ದ ಯದುವಂಶದ ಅರಸ ಶ್ರೀರಂಗ ಪಟ್ಟಣದಮೇಲೆ ದಂಡೆತ್ತಿಹೋದ. ನಡೆದ ಯುದ್ಧದಲ್ಲಿ ಶ್ರೀರಂಗರಾಯ ಮಡಿದ. ಗತಿಸಿದ ಶ್ರೀರಂಗರಾಯನ ಪತ್ನಿ ಅಲಮೇಲಮ್ಮನಲ್ಲಿ ಇರುವ ಅನರ್ಘ್ಯ ರತ್ನಗಳನ್ನು ಬಯಸಿದವರು ಮೈಸೂರು ಅರಸರು. ತನ್ನ ಮುಂದಿನ ಉಪಜೀವಿತಕ್ಕೆ ಆಪದ್ಧನವಾದ ಅದನ್ನು ಕೊಡೆನೆಂದ ಆಕೆಯನ್ನು ಅರಸನ ಸೈನಿಕರು ಅಟ್ಟಿಸಿಕೊಂಡು ಹೋದರು. ಓಡುತ್ತಾ ಓಡುತ್ತಾ ಆಕೆ ಕಾವೇರಿ ನದಿಯ ಮಾಲಂಗಿ ಎಂಬ ಪ್ರದೇಶಕ್ಕೆ ಬಂದಳು. ಅಲ್ಲಿಗೆ ಬಂದಾಗ ಅಟ್ಟಿಸಿ ಬಂದ ಸೈನಿಕರು ಆಕೆಯ ತಲೆಗೂದಲನ್ನು ಹಿಡಿದೆಳೆದರೂ ಸಹ, ಅವರ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ರಾಣಿಯ ಕೂದಲುಗಳ ಒಂದಷ್ಟು ಭಾಗ ತುಂಡಾಗಿ, ಸೈನಿಕನೊಬ್ಬನ ಕೈಯ್ಯಲ್ಲಿ ಹಾಗೇ ಉಳಿಯಿತು. ಕೋಪೋದ್ರಿಕ್ತಳಾದ ಆ ತಾಯಿ, ತನ್ನ ಅಶಾಯಕತೆಯಲ್ಲಿ ಮೈಸೂರು ಅರಸರು ಕೊಟ್ಟ ಹಿಂಸೆಯನ್ನು ನೆನೆದು,  "ತಲಕಾಡು ಮರಳಾಗಲಿ, ಮಾಲಂಗಿ ಮಡುವಾಗಲಿ, ಮೈಸೂರು ಅರಸರಿಗೆ ಸಂತಾನ ಆಗದೇ ಹೋಗಲಿ" ಎಂದು ಶಪಿಸಿ ಕಾವೇರಿ ನದಿಯಾಳಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಳು.  

ಆ ಕ್ಷಣದಲ್ಲಿ ಮೈಸೂರು ರಾಜರಿಗೆ ಏನೂ ಅನ್ನಿಸಲಿಲ್ಲ; ಶಾಪವೆಲ್ಲ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಕೂಡ ಅವರಲ್ಲಿರಲಿಲ್ಲ. ಆದರೆ ನಂತರ ನಡೆದುಬಂದ ಮೈಸೂರು ಯದುವಂಶದ ಇತಿಹಾಸವನ್ನು ಗಮನಿಸುವಾಗ, [ಪಾಂಡವರ ಯುಧಿಷ್ಠಿರ ಬಳಸಿದ್ದ ಸಿಂಹಾಸನವೆಂಬ ಪ್ರತೀತಿ ಇದೆ]ವಿಜಯನಗರದಿಂದಲೇ ಬಂದಿತೆನ್ನಲಾದ  ಬಂಗಾರದ ಸಿಂಹಾಸನದಲ್ಲಿ ಪಟ್ಟಾಭಿಷಿಕ್ತನಾಗಿ ಅರಸನೆನಿಸಿಕೊಳ್ಳುವ ವ್ಯಕ್ತಿಗೆ ಮಕ್ಕಳು ಆಗಲೇ ಇಲ್ಲ! ದತ್ತು ತೆಗೆದುಕೊಂಡು ಪಟ್ಟಾಧಿಕಾರಕ್ಕೆ ಬರುವ ಅರಸರಿಗೆ ಒಂದು ಪೀಳಿಗೆಗೆ ಮಕ್ಕಳು ಇನೊಂದು ಪೀಳಿಗೆ ಬರುವಷ್ಟರಲ್ಲಿ ಮತ್ತೆ ಮಕ್ಕಳಿಲ್ಲ!  

ಮೈಸೂರು ಅರಸರ ಮಹಾ ಸಂಸ್ಥಾನ ಕಳೆಗುಂದುವುದಕ್ಕೆ ಅಲಮೇಲಮ್ಮನ ಶಾಪ ಕೂಡ ಕಾರಣವಾಗಿದೆ ಎಂಬುದು ನಂಬಬಹುದಾದ ವಿಷಯ; ಅದನ್ನು ಸ್ವತಃ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರೇ ಒಪ್ಪಿಕೊಂಡಿದ್ದರು-ಅದು ಅವರ ತಪ್ಪಲ್ಲ, ಅವರ ವಂಶದ ಪೂರ್ವಜರ ತಪ್ಪು.

ನಿಕಟಪೂರ್ವ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರಿಗೆ ಮದುವೆಯಾಗಿ ಕೆಲವುಕಾಲ ಪುತ್ರಸಂತಾನವಾಗಲೇ ಇಲ್ಲ. ಜಯಚಾಮರಾಜೇಂದ್ರ ಒಡೆಯರ್ ಅವರು ಅವರ ದೊಡ್ಡಪ್ಪನಿಂದ ದತ್ತು ತೆಗೆದುಕೊಳ್ಳಲ್ಪಟ್ಟು ಸಿಂಹಾಸನವನ್ನೇರಿದ್ದರು. ಕಾಲಾನಂತರದಲ್ಲಿ ಮೈಸೂರಿಗೆ ಭಗವಾನ್ ಶ್ರೀಧರ ಸ್ವಾಮಿಗಳು ಬಂದಿದ್ದರು. ಮೈಸೂರಿನಲ್ಲಿ ಶಿಷ್ಯರಿಂದ ತನ್ನರಿವಿಗಿಲ್ಲದೇ ಗೊತ್ತುಪಡಿಸಲಾಗಿದ್ದ-[ಎರಡು ಕಡೆಗೂ] ಒಂದೇ ಸಮಯದಲ್ಲಿ ಜರುಗುತ್ತದೆಂದು ಘೋಷಿತವಾಗಿದ್ದ ಪ್ರವಚನ ವೇದಿಕೆಗಳಲ್ಲಿ ಏಕಕಾಲಕ್ಕೆ ಎರಡು ಶ್ರೀಧರರಾಗಿ ಪ್ರವಚನ ನಡೆಸಿದ ಸಂನ್ಯಾಸ ಶಿಖರ ಶ್ರೀಧರ ಸ್ವಾಮಿಗಳು! ಅಂತಹ ಮಹಾತ್ಮರು ಮೈಸೂರಿಗೆ ಬಂದಿದ್ದನ್ನು ತಿಳಿದು, ಜಯಚಾಮರಾಜೇಂದ್ರ ಒಡೆಯರ್ ಅವರ ಭಾವ ಸ್ವಾಮಿಗಳಿದ್ದೆಡೆ ಬಂದು, ನಮಸ್ಕರಿಸಿ ತನ್ನ ಸಹೋದರಿಗೆ ಪುತ್ರಸಂತಾನವಾಗಬೇಕೆಂದು ಪ್ರಾರ್ಥಿಸಿದ. ಎರಡು ನಿಮಿಷ ಮೇಲ್ಮುಖವಾಗಿ ಏನನ್ನೋ ಯೋಚಿಸಿದ ಶ್ರೀಧರರು ಸ್ವಲ್ಪ ನೀರನ್ನು ನೆಲಕ್ಕೆ ಬಿಟ್ಟರು. ಆಮೇಲೆ ತೆಂಗಿನಕಾಯೊಂದನ್ನು ಅಭಿಮಂತ್ರಿಸಿ ಅವರಿಗೆ ಕೊಟ್ಟು, ರಾಜ-ರಾಣಿಗೆ ಅದನ್ನು ಬಳಸಲು ಹೇಳುವಂತೆ ತಿಳಿಸಿದರು. ಇದರ ಪರಿಣಾಮವಾಗಿ ಹುಟ್ಟಿದ ಮಗುವಿನ ಹೆಸರಿನ ಮಧ್ಯೆ ’ದತ್ತ’ ಎಂಬ ಪದವನ್ನು ಕಾಣಬಹುದು. ಶ್ರೀಧರರು ಸಾಕ್ಷಾತ್ ದತ್ತಾವತಾರಿಯಾದುದರಿಂದ ಆ ಹೆಸರು ಬಳಸಲ್ಪಟ್ಟಿತು. ಶ್ರೀಧರಸ್ವಾಮಿಗಳ ಚರಿತ್ರೆಯಿಂದ ಈ ಮಾಹಿತಿಯನ್ನು ಸಂಗ್ರಹಿಸಿ ತಮಗೆ ಹೇಳಿದ್ದೇನೆ.

ವರ್ಣಭೇದ ಎಂಬುದನ್ನು ಗೀತೆಯಲ್ಲಿ ಕೃಷ್ಣ ಹೇಗೆಂದು ಹೇಳಿದ್ದಾನೆ:

ಚಾತುರ್ವಣ್ಯಂ ಮಾಯಸೃಷ್ಟಂ ಗುಣಕರ್ಮ ವಿಭಾಗಶಃ |
ತಸ್ಯ ಕರ್ತಾರಮಪಿ ಮಾಂ ವಿದ್ಧ್ಯಕರ್ತಾರಮವ್ಯಯಮ್ ||

ಜಾತಿ ಪದ್ಧತಿ, ವರ್ಣ ಪದ್ಧತಿ ಇವೆರಡೂ ಒಂದೇ ಅಲ್ಲ! ಜಾತಿ ಹುಟ್ಟಿನಿಂದ ಬಂದದ್ದು; ವರ್ಣ ಮನುಷ್ಯನ ಸ್ವಭಾವಕ್ಕೆ ಸಂಬಂಧಪಟ್ಟದ್ದು. ಗೀತೆಯಲ್ಲಿ ಕೃಷ್ಣ ಹೇಳುವ "ಚಾತುರ್ವಣ್ಯಂ ಮಯಾಸೃಷ್ಟಂ ಗುಣಕರ್ಮ ವಿಭಾಗಶಃ"[ಗೀತಾ 4.13] ಎಂಬುದು ಮನುಷ್ಯನ ಸ್ವಭಾವದ ವರ್ಗೀಕರಣವಷ್ಟೆ. ಮನುಷ್ಯನ ಮನಸ್ಸಿನ ಜಾಯಮಾನಗಳು ಜಾತಿಗೆ ಸಂಬಂಧ ಪಟ್ಟಿದ್ದಲ್ಲ. "ನ ವರ್ಣಾನಾಂ ಭೇದಃ ನಾಸ್ತಿ | ಸರ್ವಂ ಬ್ರಾಹ್ಮಂ ಇದಂ ಜಗತ್" [ಎಲ್ಲರನ್ನೂ ಒಂದೇ ಸಮನಾಗಿ ಕಾಣು ಏಕೆಂದರೆ ಎಲ್ಲವನ್ನೂ ಮತ್ತು ಎಲ್ಲ ವರ್ಣದವರನ್ನು ಸೃಷ್ಟಿಸಿದ್ದು ಭಗವಂತನೇ ಆಗಿದ್ದಾನೆ.]ಎನ್ನುವ ಮಹಾಭಾರತದ ಮಾತು ಭೀಷ್ಮ ಧರ್ಮರಾಯನಿಗೆ ತಿಳಿಸುವ ಬುದ್ಧಿ ಮಾತು. ’ವರ್ಣ’ಎಂಬ ಪದಕ್ಕೆ ದೇಹದ ಬಣ್ಣ ಎಂಬ ಅರ್ಥವನ್ನಂತೂ ಇಲ್ಲಿ ಹೇಳಿಲ್ಲ. "ಅವರ ಬಣ್ಣ ಬಯಲಾಯ್ತು" ಎಂದರೆ, ಅದು ನಾಮ ನಮೂದಿತರ ದೇಹದ ಬಣ್ಣದ ಬಗ್ಗೆ ಹೇಳುತ್ತಿರುವುದಲ್ಲ ಎಂಬುದು ಯಾರಿಗಾದರೂ ಗೊತ್ತಾಗುತ್ತದೆ. ಮನುಷ್ಯ ವಸಾಹತುಳ್ಳ ಪ್ರಪಂಚದ ಎಲ್ಲ ಭಾಗಗಳಲ್ಲೂ ವರ್ಣ ಪದ್ಧತಿ ಇದ್ದೇ ಇದೆ. ಆದರೆ ಅದಕ್ಕೆ ಒಂದು ರೂಪಕೊಟ್ಟು ಮನುಷ್ಯರನ್ನು ಅವರವರ ಸ್ವಭಾವಕ್ಕೆ ಅನುಗುಣವಾಗಿ ವರ್ಗೀಕರಿಸಿ ಹೆಸರು ಕೊಟ್ಟವರು ಪ್ರಾಚೀನ ಭಾರತದ ಬುದ್ಧಿ ಜೀವಿಗಳು. ಬುದ್ಧಿಯ ಬಲದಿಂದ ಬಾಳುವವರ ಗುಂಪು, ತೋಳ್ಬಲದಿಂದ ಆಳುವವರ ಗುಂಪು, ವ್ಯಾಪಾರ- ವ್ಯವಸಾಯದಲ್ಲಿ ನುರಿತು ನಾಡನ್ನು ಶ್ರೀಮಂತಗೊಳಿಸುವವರ ಗುಂಪು, ಮತ್ತು ಒಂದಲ್ಲ ಒಂದು ಕಸುಬಿನಲ್ಲಿ ಪರಿಣತಿ ಹೊಂದಿದ ಶ್ರಮಜೀವಿಗಳ ಗುಂಪು-ಈ ರೀತಿಯ ನಾಲ್ಕು ವರ್ಗವಿಲ್ಲದ ಸಮಾಜ ಎಲ್ಲಿದೆ? ದುರ್ದೈವದಿಂದ ಜಾತಿ ಮತ್ತು ವರ್ಣ ಎರಡೂ ಒಂದೇ ಎಂಬ ನಂಬಿಕೆ ಬಂದುಬಿಟ್ಟಿದೆ. ವಿಭಿನ್ನ ಆಚಾರ-ವಿಚಾರ-ವ್ಯವಹಾರಗಳನ್ನು  ಹೊಂದಿದ ಒಟ್ಟಾರೆ ಸಮಾಜದಲ್ಲಿ, ಒಂದೇತೆರನಾದ ಆಚಾರ ವಿಚಾರಗಳನ್ನು ಹುಡುಕುತ್ತಾ ತಮ್ಮ ತಮ್ಮ ಗುಂಪುಗಳಲ್ಲೇ ಮದುವೆಯಾಗುವ ರೂಢಿ ಬಂದು ಸಮಾಜದಲ್ಲಿ ಜಾತಿಯ ಬಿಗಿತ ಬಂದು ಬಿಟ್ಟಿತು. ಇದರ ಪರಿಹಾರ ಕ್ರಮೇಣ ಸಮಾಜ ತನ್ನನು ತಾನೇ ತಿದ್ದಿಕೊಳ್ಳುವ ಮೂಲಕ ಆಗಬೇಕು. ಇನ್ನು ಹಿಂದೂ ಎನ್ನುವ ಶಬ್ದ ‘ಸಿಂಧೂ’[ನದಿಯ ಹೆಸರು] ಎಂಬ ಶಬ್ದದಿಂದ ಬಂದದ್ದು. ಈ ಶಬ್ದ ಧರ್ಮದ ಹೆಸರಿಗಿಂತ ಹೆಚ್ಚಾಗಿ ಒಂದು ಪ್ರದೇಶದ ಹೆಸರನ್ನು ಸೂಚಿಸುತ್ತದೆ. ಆ ದೃಷ್ಟಿಯಿಂದ ನೋಡಿದರೆ ಭಾರತವಾಸಿಗಳೆಲ್ಲ- ಅವರು ಯಾವ ಧರ್ಮಕ್ಕೆ ಸೇರಿದವರಾದರೂ- ಹಿಂದುಗಳೇ ಆಗಿದ್ದಾರೆ.

ಪ್ರಕೃತಿಯಲ್ಲಿ ಎಲ್ಲವುದರಲ್ಲೂ ವೈವಿಧ್ಯಗಳಿವೆ. ಮಾನವ ಜನಾಂಗದಲ್ಲಿ 5,000 ವಿಭಿನ್ನ ವಂಶಾವಳಿಗಳಿವೆ ಎಂದು ವಿಜ್ಞಾನಿಗಳೇ ಒಪ್ಪಿಕೊಂಡಿದ್ದಾರೆ. ಸಮಸ್ಯೆಯೊಂದರ ಕುರಿತ ಪರಿಹಾರಕ್ಕಾಗಿ ದೇಶದಾದ್ಯಂತ ತಿರುಗಿ ಈಗಾಗಲೇ 8,000 ವಿಭಿನ್ನ ಜನಾಂಗದ ಜನರ ಡಿ.ಎನ್.ಎ ಸಂಗ್ರಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ! ಭತ್ತದಿಂದ ಭತ್ತ, ತೆಂಗಿನಿಂದ ತೆಂಗು, ಮಾವಿನಿಂದ ಮಾವು, ಬೇವಿನಿಂದ ಬೇವು ಹೀಗೇ ಫಲಗಳಲ್ಲಿ ವೈವಿಧ್ಯತೆಯಿದೆ. ಜಾಜಿ, ಜೂಜಿ, ಮಲ್ಲಿಗೆ, ಸಂಪಿಗೆ, ಸೇವಂತಿಗೆ, ಕರವೀರ, ದಾಸವಾಳ, ನಾಗಲಿಂಗ, ಕದಳಿ ....ಹೀಗೇ ನೂರಾರು ವೈವಿಧ್ಯದ ಹೂವುಗಳನ್ನು ಕಾಣಬಹುದಾಗಿದೆ. ಸಸ್ಯಗಳಲ್ಲಿ ಪ್ರಭೇದ, ಜೀವಿಗಳಲ್ಲಿ ಪ್ರಭೇದ, ಕೀಟಗಳಲ್ಲಿ ಪ್ರಭೇದ, ಅದೆಲ್ಲಾ ಹಾಗಿರಲಿ ಪ್ರಾದೇಶಿಕವಾಗಿ ಒಂದೇ ಭೂಮಿಯ ಮಣ್ಣಿನಲ್ಲೇ ಪ್ರಭೇದಗಳಿವೆ! ಎಂದಾಗ, ಮನುಷ್ಯರ ನಡೆ-ನುಡಿ ವಂಶಾವಳಿಗಳಲ್ಲಿ ಪ್ರಭೇದಗಳು ಇರುವುದು ಸಹಜ ಮತ್ತು ಪ್ರಕೃತಿ ನಿರ್ಮಿತ! "ಮಾನವಕುಲ ತಾನೊಂದೆವಲಮ್" ಎಂಬ ಮಾತು ಸಾಮಾಜಿಕವಾಗಿ ಒಟ್ಟಾಗಿ ಬಾಳುವುದಕ್ಕಷ್ಟೇ ಬಿಟ್ಟರೆ ನಮ್ಮ ದಿನನಿತ್ಯದ ನಡತೆಯಲ್ಲಿ ಭಿನ್ನತೆಗಳು ಇದ್ದೇ ಇರುತ್ತವೆ. ಸಂಸ್ಕೃತಿ ಮತ್ತು ನಾಗರಿಕತೆಗಳ ಕುರಿತು ನಾನು ಈ ಹಿಂದೆ ಬರಿದಿದ್ದೆ. ನಾಗರಿಕತೆ ಮನುಷ್ಯರೆಲ್ಲಾ ಒಂದೇ ಎನ್ನುತ್ತದೆ-ಅದು ಸರಿ; ಒಂದೇ ಎಂಬ ಮನುಷ್ಯರು ಹೇಗಿರಬೇಕು ಎಂಬುದನ್ನು ಸಂಸ್ಕೃತಿ ಬೋಧಿಸುತ್ತದೆ-ಅದನ್ನು ಒಪ್ಪಿಕೊಳ್ಳಲು ’ಅಧುನಿಕ ಬುದ್ಧಿಜೀವಿಗಳು’ ಸಿದ್ಧರಿಲ್ಲ! ಮಾಂಸಾಹಾರ ತ್ಯಜಿಸಿ ಎಂದು ಬಿಟ್ಟರೆ ಮೈಮೇಲೆ ಬೀಳುವ ಮಂದಿ ಅದೆಷ್ಟಿಲ್ಲ? ಮಾಂಸಾಹಾರದಲ್ಲೂ ಹಿಂದೂಗಳಿಗೆ ಪೂಜ್ಯವಾದ ದನದಮಾಂಸವನ್ನು ತಿನ್ನುವ ಜನಾಂಗವನ್ನೂ ನೋಡುತ್ತೇವೆ. ಹೀಗೆಲ್ಲಾ ಇರುವಾಗ ’ಮಾನವಕುಲ ತಾನೊಂದೇವಲಮ್’ ಎಂಬುದು ಅಪ್ರಾಕೃತಿಕವಾಗುತ್ತದೆ-ಇದು ನನ್ನ ನೇರ, ಸ್ಪಷ್ಟ ದೃಷ್ಟಿಯ ನುಡಿ. ಯಾವಾಗ ಮನುಷ್ಯರೆಲ್ಲರ ಆಹಾರ-ವ್ಯವಹಾರ-ಆಚಾರ-ವಿಚಾರಗಳಲ್ಲಿ ಇಂಚಿಂಚೂ ಹೋಲಿಕೆಯಿರುತ್ತದೋ ಆಗ ಮಾತ್ರ ಮನುಷ್ಯರೆಲ್ಲರೂ ಒಂದೇ ಆಗಲು ಸಾಧ್ಯವಿದೆ-ಅಲ್ಲೀವರೆಗೂ ಗುಂಪುಗಳು ಹಾಗೇ ಇರುತ್ತವೆ, ಜಾತಿಗಳು ಹೋಗುವುದಿಲ್ಲ. ಈಗಿನ ಕಾಲದಲ್ಲಿ ಎಲ್ಲವೂ ಜಾತ್ಯಾತೀತ ಎಂದು ಚೀರಾಡಿಬಿಟ್ಟರೆ ಅದು ತಿಪ್ಪೆಸಾರಿಸಿದ ಕೆಲಸವಾಗಿ, ಒಳಗೆ ಹಾಗೇ ಕುಳಿತಿರುವ ತಿಪ್ಪೆಯ ಗಬ್ಬು ನಾತ ಹೊರಗಿರುವವರ ಮೂಗಿಗೆ ಹೊಡೆಯುತ್ತಲೇ ಇರುತ್ತದೆ! ಎಲ್ಲಿಯವರೆಗೆ ನಾನು ಹೇಳಿದ ಅಂಶಗಳಲ್ಲಿ ಸಾಮ್ಯತೆಯಿಲ್ಲವೋ ಅಲ್ಲೀವರೆಗೂ ಜಾತೀಯತೆ ಬದುಕುತ್ತದೆ ಮತ್ತು ಬಲಿಯುತ್ತದೆ. ಇದನ್ನು ಮನುಷ್ಯರಾಗಿ ನಾವು ಮೊದಲು ಮನಗಾಣಬೇಕು.

ವರ್ಣವ್ಯವಸ್ಥೆಯನ್ನು ಭಗವಂತ ಸ್ವತಃ ತಾನೇ ನಿರ್ಮಿಸಿದೆ ಎಂದಿದ್ದಾನೆ. ಒಂದೊಮ್ಮೆ ಗೀತಾಚಾರ್ಯ ಶ್ರೀಕೃಷ್ಣ ಗೀತೆ ಮಹಾಭಾರತದ ನಡುವೆ ಬಂದಿರುವುದೆಂಬ ಕಾರಣಕ್ಕೆ ಅದು ’ಬ್ರಾಹ್ಮಣ’ನೇ ಬರೆದಿದ್ದು ಎಂಬುದಾದರೆ ವ್ಯಾಸರು ಜಾತಿಯಿಂದ ಶೂದ್ರ ತಾಯಿಯಲ್ಲಿ ಜನಿಸಿದವರು. ಹಾಗಾದರೆ ಅವರು ಹಡೆದ ಮಾತೆಗೆ ದ್ರೋಹ ಬಗೆದರೇ? ಖಂಡಿತಕ್ಕೂ ಇಲ್ಲ. ಜಾತಿ ಪದ್ಧತಿಗೆ ಬ್ರಾಹ್ಮಣರೇ ಕಾರಣ ಎಂಬ ಅಪನಂಬಿಕೆ ಹುಟ್ಟಲಿಕ್ಕೆ ಇನ್ನೊಂದು ಕಾರಣ: ರಾಜರು ಬ್ರಾಹ್ಮಣರಿಗೆ ಕೊಡುತ್ತಿದ್ದ ರಾಜಾಶ್ರಯ ಮತ್ತು ಮರ್ಯಾದೆ. ರಾಜರುಗಳಿಗೆ ಬ್ರಾಹ್ಮಣ್ಯವೆಂಬುದರ ಮಹತ್ವ ಗೊತ್ತಿತ್ತು-ಹಾಗಾಗಿ ಅವರು ಅದಕ್ಕೆ ಮಹತ್ವ ಕೊಡುತ್ತಿದ್ದರು! ಇಂದು ಪ್ರಜೆಗಳೇ ತಲೆಯಿಲ್ಲದ ಪ್ರಭುಗಳು, ರಾಜಕೀಯ ಅತಂತ್ರ ಸ್ಥಿತಿಗಳು, ಮಿತಿಮೀರಿದ ಭ್ರಷ್ಟಾಚಾರ, ದೇಶವನ್ನೇ ಅಡವಿಡುವ ಪರಿಸ್ಥಿತಿ ಬಂದಿರುವುದಕ್ಕೆ ಕಾರಣ ರಾಜರಲ್ಲಿದ್ದ ಆಡಳಿತ ವೈಖರಿ ಪ್ರಜಾರಾಜರಲ್ಲಿಲ್ಲ! ಗೂಂಡಾಗಳೇ ಹಣಬಲ, ಜನಬಲ, ತೋಳ್ಬಲಗಳಿಂದ ಗೆದ್ದು ರಾಜಕೀಯ ಮಾಡುವಾಗ ಆಡಳಿತದ ಅನುಭವ ಅವರಿಗೆ ಹೇಗೆ ಬರಲು ಸಾಧ್ಯ? ಅಥವಾ ಪ್ರಜೆಗಳ ಸಂಕಷ್ಟವನ್ನು ಅರಿಯುವ ಮನಸ್ಸು ಅವರಿಗಾದರೂ ಹೇಗೆ ಬಂದೀತು? ಪ್ರಜಾತಂತ್ರದ ಸಮಸ್ಯೆಗಳನ್ನು ಇಂದು ನಾವು ಕಾಣತೊಡಗಿದ್ದೇವೆ; ಇದು ಮುಂದುವರಿಯುತ್ತದೆ-ಮುಂದೊಂದು ದಿನ ಘನಘೋರ ಯುದ್ಧ ಸಂಭವಿಸುತ್ತದೆ-ಅದರಲ್ಲಿ ಸಂಶಯವೇ ಇಲ್ಲ!

ಉತ್ತರಭಾರತದಲ್ಲಿ ಬ್ರಾಹ್ಮಣರಿಗೆ, ರಾಜರಿಗೆ ಇನ್ನೂ ಮಾನ್ಯತೆಯಿದೆ. ವಿನಾಕಾರಣ ಯಾರೂ ಅವರನ್ನು ದೂಷಿಸುವುದಿಲ್ಲ. ನಮ್ಮ ಕರ್ನಾಟಕದ ತುಂಬೆಲ್ಲ ರಾಜದ್ವೇಷಿಗಳು, ಬ್ರಾಹ್ಮಣ ದ್ವೇಷಿಗಳು  ಹುಟ್ಟಿಕೊಂಡಿದ್ದಾರೆ. ಬ್ರಾಹ್ಮಣರು ತಮ್ಮನ್ನು ತುಳಿದರು ಎಂಬ ತಪ್ಪು ಕಲ್ಪನೆಯಿಂದ ಪರಬ್ರಹ್ಮೋಪಾಸನೆಯನ್ನು ನಡೆಸುವ ಬ್ರಾಹ್ಮಣರನ್ನು ಬೈದು-ಜರಿದು-ಹೀಗಳೆದು ಪರೋಕ್ಷ ಬ್ರಹ್ಮನನ್ನೇ ದೂಷಿಸುತ್ತಿದ್ದಾರೆ. ಸಾಮಾನ್ಯ ರಾಜಸ್ತ್ರೀಯಾದ ಅಲಮೇಲಮ್ಮನ ಶಾಪವೇ ಇಷ್ಟೆಲ್ಲಾ ಕೆಲಸಮಾಡುತ್ತದೆ ಎಂದಾದಮೇಲೆ, ಆಚಾರವಂತ ಬ್ರಾಹ್ಮಣರ ಶಾಪ [ಬ್ರಾಹ್ಮಣರು ಶಾಪ ಹಾಕುತ್ತಿಲ್ಲ ಅದು ಬೇರೆ ಪ್ರಶ್ನೆ]ತಟ್ಟಿದರೆ ಏನಾಗಬಹುದೆಂದು ನೀವೇ ಊಹಿಸಿ!

ಒಂದೊಮ್ಮೆ ಬ್ರಾಹ್ಮಣರು ಎಂದುಕೊಂಡವರು ಏನನ್ನೂ ಹೇಳದೇ ಹೋಗಿದ್ದರೆ, ಕಲಿಸದೇ ಹೋಗಿದ್ದರೆ ಇಂದು ಮಾತನಾಡಲು ಬರುವ ಅದೆಷ್ಟೋ ಜನರಿಗೆ ಈ ಅರ್ಹತೆ ಕೂಡ ಇರುತ್ತಿರಲಿಲ್ಲ! ಇದು ಕೆಲವು ಓದುಗರ ಸ್ವಾಭಿಮಾನಕ್ಕೆ ವಿರೋಧವೆನಿಸಬಹುದು; ಆದರೆ ಸತ್ಯ ಎಂದೂ ಸುಳ್ಳಾಗಲು ಸಾಧ್ಯವಿಲ್ಲ. ಪಂಕ್ತಿ ಭೇದವನ್ನು ಮಾಡುವ ಬ್ರಾಹ್ಮಣರು ಯಾಕೆ ಹಾಗೆ ಮಾಡಿದರು ಎನ್ನುವ ಚಿಂತನೆ ಯಾರಿಗೂ ಇಲ್ಲ, ಬೇಕಾಗಿಯೂ ಇಲ್ಲ. ’ಬ್ರಾಹ್ಮಣ್ಯ’ ಎಂಬುದೊಂದು ಹುಟ್ಟಿದಾರಭ್ಯ-ಅಜೀವ ಪರ್ಯಂತ ನಡೆಯುವ ವ್ರತ ಎಂಬುದನ್ನು ಬಹಳ ಜನ ಅರಿತಿಲ್ಲ. ರಾಜಾಶ್ರಯ ಕಳೆದುಕೊಂಡ ಬ್ರಾಹ್ಮಣರು, ಪ್ರಜಾಪ್ರಭುತ್ವದಲ್ಲಿ, ಉದರನಿಮಿತ್ತವಾಗಿ ಅನ್ಯವೃತ್ತಿಗಳತ್ತ ಮುಖಮಾಡಬೇಕಾಗಿ ಬಂತು. ಇದರಿಂದ ಎಲ್ಲರ ಸಂಪರ್ಕ-ಸಂಸರ್ಗ ಆರಂಭವಾಯ್ತು. ಇದರ ಪರಿಣಾಮವಾಗಿ ಬ್ರಾಹ್ಮಣ ಜಾತಿಯಲ್ಲಿ ಜನಿಸಿದ ಕೆಲವರನ್ನು ಬಾರ್ ಅಂಡ್ ರೆಸ್ಟಾರೆಂಟುಗಳಲ್ಲೂ ನೋಡುತ್ತಿದ್ದೀರಿ! ಇದೆಲ್ಲಾ ಆಗಬಾರದು, ಬ್ರಾಹ್ಮಣರ ಪೂಜೆ, ಪೂಜೆಗೆ ಬಳಸುವ ಪರಿಕರಗಳು, ದೇವಸ್ಥಾನ/ಪೂಜಾ ಕೇಂದ್ರಗಳು ಇವೆಲ್ಲಾ ಪರಿಶುದ್ಧವಾಗಿರಬೇಕೆಂಬ ಸದುದ್ದೇಶದಿಂದ ಅವರು ಪ್ರತ್ಯೇಕತೆಯಲ್ಲಿರುತ್ತಿದ್ದರು. ಅವರ ಸಂಖ್ಯೆಯೂ ಕೂಡ ತೀರಾ ಕಡಿಮೆ.

ಇಂದು ಸಂಸರ್ಗ, ಮೊಬೈಲ್ ಫೋನು, ಗಾಡಿ, ವ್ಯವಹಾರ ಇದೆಲ್ಲಾ ಹೆಚ್ಚಿದ್ದರಿಂದ ನಿಜವಾದ ಬ್ರಾಹ್ಮಣರಿಗಿಂತ ಜೋರಾಗಿ ಮೆರೆಯುವ ಅರ್ಚಕ-ವ್ಯಭಿಚಾರಿಗಳು ಅಲ್ಲಲ್ಲಿ ಕಾಣುತ್ತಾರೆ-ಇದು ಕಾಲದ ಮಹಿಮೆ. ಊಟಕ್ಕೆ-ಕೂಟಕ್ಕೆ-ಚಟಕ್ಕೆ ಇಂಥಾದ್ದಕ್ಕೆಲ್ಲಾ ಸಾವಿರದೋಪಾದಿಯಲ್ಲಿ ಹಣ ಸುರಿಯುವ ಮಂದಿ ಆರತಿ ತಟ್ಟೆಗೆ ಕಾಸು ಹಾಕುವ ಸುದ್ದಿ ಬಂದಾಗ ಮಾತ್ರ ಕಣ್ಣು ಕೆಂಪಗೆ ಮಾಡಿಕೊಳ್ಳುವುದು ಆಶ್ಚರ್ಯವಾಗುತ್ತದೆ. ಅದು ವೃತ್ತಿಗೊಂದು ಗೌರವ, ಪುಣ್ಯಕ್ಕೆ ಸಾಧನವೆಂದು ತಿಳಿದೂ, ದಾನವೆಂಬುದನ್ನು ಅರಿತೂ ಹಿಂದಿಗಡೆಯಿಂದ ಈ ರೀತಿ ಆಡಿಕೊಳ್ಳುತ್ತ ದೇವಸ್ಥಾನಗಳಿಗೆ ಹೋದಾಗ ಹತ್ತೋ ಇಪ್ಪತ್ತೋ ರೂಪಾಯಿ ಹಾಕಿದರೆ ಅದರ ಫಲ ಹಾಕಿದವರಿಗೆ ಲಭಿಸುವುದಿಲ್ಲ. ಹಾಕುವ ಮನಸ್ಸುಳ್ಳವರು ಹಾಕಬಹುದು-ಅದರಿಂದ ಪಡೆದವ ಹೇಗೇ ಇದ್ದರೂ ಕೊಟ್ಟವನಿಗೆ ಫಲ ಲಭ್ಯ. ಚಂದದ ಹುಡುಗಿಯನ್ನು ನೋಡುತ್ತ ಮನಸ್ಸು ಕೆಡಿಸಿಕೊಂಡರೆ ಅಂತಹ ಅರ್ಚಕನ ಕರ್ಮಕ್ಕೆ ತಕ್ಕ ಫಲವನ್ನು ಆತ ಅನುಭವಿಸುತ್ತಾನೆ. ನೀವು ಹೇಳಿದ್ದಷ್ಟೇ ಸತ್ಯವೆಂದು ವಾದಿಸುವ ಮೊದಲು ನಾನು ಹೇಳುವ ಮುಖವನ್ನೂ ತಿಳಿದುಕೊಂಡರೆ ನಾನು ಏನು ಹೇಳುತ್ತಿದ್ದೇನೆ ಎಂಬ ಅರಿವುಂಟಾಗುತ್ತದೆ.

ಇವತ್ತು ಪ್ರಧಾನಿ, ರಾಷ್ಟ್ರಪತಿ, ರಾಜ್ಯಪಾಲ ಇವೆಲ್ಲಾ ಗೌರವದ ಹುದ್ದೆಗಳು. ಮಾನವರೆಲ್ಲರೂ ಒಂದೇ ಆದ್ದರಿಂದ ಅವರೂ ಎಲ್ಲರೊಂದಿಗೆ ಬೆರೆತುಬಿಡಲಿ ನೋಡೋಣ. ಅದು ಹಾಗಿರಲಿ, ಒಂದು ಸಣ್ಣ ತಾಲೂಕು ಮಟ್ಟದ ನ್ಯಾಯಾಧೀಶರು ಸಮಾಜದಲ್ಲಿ ಎಲ್ಲರೊಡನೆ ಬೆರೆಯುವುದಿಲ್ಲ; ಹಾಗೆ ಬೆರೆತರೆ ನ್ಯಾಯದಾನ ಸಾಧ್ಯವಿಲ್ಲ. ಇಂತಹ ಪ್ರತ್ಯೇಕತೆಗಳು ಯಾಕೆಂದರೆ ಉನ್ನತ ಮೌಲ್ಯಗಳನ್ನು ಆದರ್ಶಮಯವಾಗಿ ಎತ್ತಿ ಹಿಡಿಯುವುದಕ್ಕೆ. ವೇದ-ಶಾಸ್ತ್ರ-ಪುರಾಣ-ಮಹಾಕಾವ್ಯಗಳು ಅಷ್ಟು ಸುಲಭಕ್ಕೆ ಲಭ್ಯವಾಗುವ ಬದನೆಕಾಯಿಗಳಲ್ಲ! ಅವುಗಳನ್ನು ಅಭ್ಯಸಿಸಲು ಪೂರಕ ವಾತಾವರಣ ಬೇಕು, ಪೂರಕ ತಯಾರಿ ಬೇಕು, ಮನಸ್ಸು ನಿರುಮ್ಮಳವಾಗಿರಬೇಕು, ತ್ಯಾಗಜೀವನ ಬೇಕು, ಇದನ್ನೆಲ್ಲಾ ಹಿಂದಿನಿಂದ ನಡೆಸಿ ಬಂದವರು ಬ್ರಾಹ್ಮಣರು. ಬ್ರಹ್ಮಜ್ಞಾನವೇ ಅವರ ಪರಮೋಚ್ಚ ಆಸ್ತಿ. ಅವರ ಪ್ರವಚನ ಧಾರೆಗಳೇ ಉಳಿದ ಹಿಂದೂ ಜನರ ಕಲಿಕೆಗೆ ಆಧಾರವಾಗಿದ್ದು. ಇದನ್ನೆಲ್ಲಾ ಅರ್ಥಮಾಡಿಕೊಳ್ಳದೇ ಕೇವಲ ಒಂದೇ ನೇರಕ್ಕೆ ’ಮಾನವಕುಲ ತಾನೊಂದೆವಲಮ್’ ಎಂದುದನ್ನು ಅನುಮೋದಿಸಲು ಬ್ರಾಹ್ಮಣರು ಬ್ರಾಹ್ಮಣ್ಯವನ್ನು ಬಿಡಲು ಸಿದ್ಧರಿಲ್ಲ, ನಿಜ, ಅದೊಂದು ಪಾರಂಪರಿಕ ವ್ರತ, ಅದನ್ನು ಪರಿಪೂರ್ಣವಾಗಿ ಬಿಟ್ಟರೆ, ಬಿಡುವವರ ಕುಲ ನಶಿಸಿ ಹೋದೀತು!
’ಬ್ರಾಹ್ಮಣ್ಯ’ ಎಂದರೇನು ಎಂದು ತಿಳಿಯಲಿ ಇಲ್ಲಿ ಓದಿ :   ಆ ಮುಖ

ಹಾಗಂತ ಎಲ್ಲರನ್ನೂ ನಾನು ದೂಷಿಸುವುದಿಲ್ಲ, ಹಳೇ ಮೈಸೂರು ಪ್ರಾಂತದ ಒಕ್ಕಲಿಗರ ಮನೆಗಳಲ್ಲಿ ಮಹಾರಾಜರ ಭಾವಚಿತ್ರಗಳು ಪೂಜೆಗೊಳುತ್ತವೆ. ಅವರಿಗೆ ರಾಜರು ಮತ್ತು ವಿಶ್ವೇಶ್ವರಯ್ಯನವರ ಭಾವಚಿತ್ರಗಳು ಮನೆಯಲ್ಲಿ ಇರಲೇಬೇಕು ಯಾಕೆಂದರೆ ಅವರು ಸಲ್ಲಿಸಿದ ಸಮಾಜ ಸೇವೆ ಬೆಲೆಕಟ್ಟಲಾಗದ್ದು. ಆದರೂ ರಾಜಕೀಯವಾಗಿ ರಾಜರನ್ನು ಸೋಲಿಸಲು ಮುಂದಾಗುವುದಕ್ಕೆ ಕಾರಣ ಅಲಮೇಲಮ್ಮನ ಶಾಪವೇ,  ಆ ಶಾಪದ ಪರಿಹಾರಕ್ಕಾಗಿ ಶ್ರೀಕಂಠದತ್ತರು ಬಹಳ ಪ್ರಯತ್ನ ಮಾಡಿದರು,  ಆದರೆ ಸಾಧ್ಯವಾಗಲಿಲ್ಲ! ವ್ಯಾವಹಾರಿಕ ಜಗತ್ತಿನಲ್ಲಿ ಏರಲೈನ್ಸ್, ರೇಷ್ಮೆ ಸೀರೆ ವ್ಯಾಪಾರ, ಪಂಚತಾರ ಹೋಟೆಲ್ ಮೊದಲಾದ ಉದ್ದಿಮೆಗಳನ್ನು ನಡೆಸಿದರು. ಎಲ್ಲಿಗೇ ಹೋದರು ವಿಧಿ ತನ್ನ ವಿರುದ್ಧ ನಡೆಯುವುದು ಅವರಿಗೆ ಅನುಭವಕ್ಕೆ ಬರುತ್ತಿತ್ತು! ಆದರೂ ಅವರ ಪ್ರಯತ್ನಕ್ಕೆ ಜಗನ್ನಿಯಾಮಕ ಶಕ್ತಿ ಅವರ ವೈಯ್ಯಕ್ತಿಕದಲ್ಲಿ ಅವರಿಗೊಂದು ದೊಡ್ಡ ಗೌರವ ಕಲ್ಪಿಸಿಕೊಟ್ಟಿದೆ; ಜನ್ಮಾಂತರಗಳಲ್ಲಿ ಮಹಾರಾಜರು ಬಹುದೊಡ್ಡ ಆಧ್ಯಾತ್ಮಿಕ ಎತ್ತರವನ್ನು ಏರಲಿದ್ದಾರೆ-ಅವರೊಬ್ಬ ಸಂನ್ಯಾಸಿಯಾಗಿ ಮರುಜನ್ಮ ತಾಳುವ ಲಕ್ಷಣಗಳು ನನಗೆ ಭಾಸವಾಗುತ್ತಿದೆ. ಯಾಕೆಂದರೆ ೮೦ನೇ ಇಸವಿಯಿಂದ ಆಧ್ಯಾತ್ಮಿಕವಾಗಿ ಅವರು ಬಹಳ ಮುನ್ನಡೆದಿದ್ದರು.

ಸಂವತ್ಸರವೊಂದರಲ್ಲಿ ಒಟ್ಟೂ ಐದು ನವರಾತ್ರಿಗಳು ಬರುತ್ತವೆ: ವಸಂತ ನವರಾತ್ರಿ, ಗುಪ್ತನವರಾತ್ರಿ,  ಶರನ್ನವರಾತ್ರಿ, ಪೌಷ ನವರಾತ್ರಿ ಮತ್ತು ಮಾಘ ನವರಾತ್ರಿ. ಅವರು ವೈಭವೋಪೇತವಾಗಿ ಶಾಸ್ತ್ರೀಯವಾಗಿ ಆಚರಿಸುತ್ತಿದ್ದ ಶರನ್ನವರಾತ್ರಿಯನ್ನು ಮಾತ್ರ ನಾವೆಲ್ಲ ಮಾಧ್ಯಮಗಳ ಮೂಲಕ ಅಷ್ಟಿಷ್ಟು ಕಂಡಿದ್ದೇವೆ, ಆದರೆ ಅವರು ಆಚರಿಸುತ್ತಿದ್ದ ಇನ್ನುಳಿದ ಎರಡು ನವರಾತ್ರಿಗಳ ದೃಶ್ಯಗಳು ನಮಗೆ ಲಭ್ಯವಿಲ್ಲ. ದೇವರ ಪೂಜೆ ಅರಸರಲ್ಲಿ ಬಹಳ ರಕ್ತಗತವಾಗಿತ್ತು. ಇಷ್ಟೆಲ್ಲ ಇದ್ದೂ ಸಹ, ಅವರು ಮಾಡುವ ಕೆಲಸಗಳಲ್ಲಿ ಅವರಿಗೆ ಆಗಾಗ ಅಡ್ಡಿಯಾಗುತ್ತಿದ್ದುದು ಅಲಮೇಲಮ್ಮನ ಶಾಪ! ಇದು ವಿಷಾದದ ಸಂಗತಿ.      

Thursday, December 5, 2013

ಪ್ರಿಯೆ ಚಾರುಶೀಲೆ.....

 ಚಿತ್ರಋಣ: ಅಂತರ್ಜಾಲ

ಪ್ರಿಯೆ ಚಾರುಶೀಲೆ.....

ಆತ ಉತ್ತರದ ಬಂಗಾಲದ ಕಡೆಯ ಬ್ರಾಹ್ಮಣ ಹುಡುಗನಾಗಿದ್ದು ಸಂಚರಿಸುತ್ತಾ ಜಗನ್ನಾಥ ಪುರಿಗೆ ಬಂದಿದ್ದ ಮತ್ತು ಅಲ್ಲಿದ್ದ ಪದ್ಮಾವತಿ ಎಂಬ ನರ್ತಕಿಯನ್ನು ಬಹಳವಾಗಿ ಮೆಚ್ಚಿ, ಹಲವರ ವಿರೋಧದ ನಡೆವೆಯೂ ಆಕೆಯನ್ನು ಮದುವೆಯಾದ ಎಂಬುದು ಕೆಲವರ ಅಂಬೋಣ. ವಿದ್ವಾಂಸರು, ಬುಧಜನರು ಇದನ್ನು ಒಪ್ಪಿಲ್ಲ! ಆತನ ಬರಹಗಳಲ್ಲಿ ಅಲ್ಲಲ್ಲಿ ಪ್ರಸ್ತಾವವಾದ ಕೆಂದುಲಿಯೆಂಬ ಹೆಸರನ್ನೇ ಹಿಡಿದು ಬಂಗಾಲದಲ್ಲಿ ಅಂಥಾದ್ದೊಂದು ಊರಿರುವುದರಿಂದ ಆತ ಅಲ್ಲಿನವನೇ ಎಂದು ಕೆಲವರು ಹೇಳಿದರೆ, ಓಡಿಶಾದಲ್ಲಿಯೂ ಒಂದು ಕೆಂದುಲಿ ಇರುವುದರಿಂದ ಆತ ಓಡಿಶಾದವನೆಂದು ಒಂದಷ್ಟು ಜನ ಹೇಳುತ್ತಾರೆ. ಮಿಥಿಲಾದಲ್ಲಿರುವ ಕೆಂದುಲಿಯೆಂದು ಇನ್ನಷ್ಟು ಜನ ವಾದಿಸುತ್ತಾರೆ. ಆದರೆ ಜಯದೇವನ ಮೂಲವನ್ನು ಪಕ್ಕಾ ಇದೇ ಎಂದು ಬಲ್ಲವರಿಲ್ಲ! ಆತನ ತಂದೆ ಭಜದೇವಿ ಮತ್ತು ತಾಯಿ ರಮಾದೇವಿ ಎಂದು ಅವರಿವರು ಹೇಳುವುದಿದೆ. 

ಹಾಡನ್ನು ಎರಡೆರಡು ಸರ್ತಿ ಕೇಳಿದಾಗ ಮಾತ್ರ ಅದರಲ್ಲಿನ ಸ್ವರಮಾಧುರ್ಯ ಮತ್ತು ಕವಿಯ ಭಾವ ತನ್ಮಯತೆ ಗೊತ್ತಾಗುತ್ತದೆ. ಓಡಿಶಾದ ಕೋನಾರ್ಕ್ ಹತ್ತಿರದ ಕೂರ್ಮಪಾಠಕ ಎಂಬ ಪ್ರದೇಶದಲ್ಲಿ ಆತ ಸಂಸ್ಕೃತ ಕಾವ್ಯಭಾಗವನ್ನು ಅಭ್ಯಸಿಸಿದ ಎಂಬುದು ಕೆಲವು ದೇವಸ್ಥಾನಗಳಲ್ಲಿ ದೊರಕುವ ದಾಖಲೆಗಳ ಮೂಲಕ ತುಸುಮಟ್ಟಿಗೆ ತಿಳಿದುಬರುತ್ತದೆ; ಈ ಕಾರಣದಿಂದ ಆತ ಓಡಿಶಾದವನೇ ಎಂಬ ಸಂದೇಹ ದಟ್ಟವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಡಾ| ಸತ್ಯನಾರಾಯಣ ರಾಜಗುರು ಎಂಬ ಇತಿಹಾಸ ಸಂಶೋಧಕರ ಸಂಶೋಧನೆಗಳ ಫಲವಾಗಿ, ಲಿಂಗರಾಜ ದೇವಸ್ಥಾನ, ಮಧುಕೇಶ್ವರ ದೇವಸ್ಥಾನ ಮತ್ತು ಸಿಂಹಾಚಲ ದೇವಸ್ಥಾನಗಳಲ್ಲಿನ ಕೆಲವು ಶಾಸನಗಳನ್ನು ವಿಶ್ಲೇಷಿಸಿದಾಗ, ಅವು ಜಯದೇವ ಕವಿಯ ಜೀವನದ ಮೇಲೆ ಬೆಳಕುಚೆಲ್ಲಿವೆ ಎನ್ನಲಾಗಿದೆ. ಕೂರ್ಮಪಾಠಕದ ವಿದ್ಯಾಕೇಂದ್ರದಲ್ಲಿ ಉಪಾಧ್ಯಾಯರ ಸಾಲಿಬಲ್ಲಿ ಜಯದೇವನಿದ್ದ ಎಂಬುದನ್ನು ಆ ಶಾಸನಗಳು ಹೇಳುತ್ತವಂತೆ. ಅವನು ಅಲ್ಲಿಯೇ ಕಲಿತು ಅಲ್ಲಿಯೇ ಮುಂದೆ ಉಪಾಧ್ಯಾಯನಾಗಿ ಬದುಕಿದ ಎಂಬುದು ಅವರ ಹೇಳಿಕೆ. ಎಳವೆಯಲ್ಲಿಯೇ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ, ಕಾವ್ಯ ರಚನೆ-ಸಂಗೀತ ಮತ್ತು ನರ್ತನ ಕಲೆಗಳ ಅಭ್ಯಾಸಕ್ಕಾಗಿ ಆತ ಕೆಂದುಲಿಯನ್ನು ತೊರೆದು ಕೂರ್ಮಪಾಠಕಕ್ಕೆ ಹೋದ ಎಂದು ತಿಳಿದುಬರುತ್ತದೆ.

ಮಹಾರಾಣಾ ಪ್ರಥ್ವೀರಾಜ ಚೌಹಾಣನ ಆಸ್ಥಾನದಲ್ಲಿ ಜಯದೇವನಿದ್ದ ಎಂಬುದು ಇನ್ನೊಂದು ದಾಖಲೆ; ಓಡಿಶಾದ ಹೊರಗಿನ ರಾಜ್ಯಗಳಲ್ಲಿ ಜಯದೇವನ ಬಗೆಗೆ ದೊರೆಯುವ ಪ್ರಥಮ ಮಾಹಿತಿ ಇದೇ ಆಗಿದೆ. ಹನ್ನೆರಡನೆಯ ಶತಮಾನದಲ್ಲಿ ರಾಜ್ಯಭಾರ ನಡೆಸುತ್ತಿದ್ದ ರಾಜಾ ಸಾರಂಗದೇವನ ಆಸ್ಥಾನದಲ್ಲಿ, ಜಯದೇವ ಕವಿಯ ಬಗ್ಗೆ ಇನ್ನೊಂದು ದಾಖಲೆ ಸಿಗುತ್ತದೆ. ೧೨ನೆಯ ಶತಮಾನದ ಕವಿ ಜಯದೇವನ ರಚನೆಯಾಗಿದೆ. ಒರಿಸ್ಸಾ ರಾಜ್ಯದ ಪುರಿ ಬಳಿಯ ಕೆಂದುಲಿ ಸಾಸನ್ ಎಂಬಲ್ಲಿ ಜನಿಸಿದನು ಎಂತಲೇ ನಾವು ಸ್ವೀಕರಿಸೋಣ. ಕವಿಯ ’ಗೀತಗೋವಿಂದ’, ವೃಂದಾವನದ ಕೃಷ್ಣ ಮತ್ತು ಗೋಪಿಕೆಯರು, ರಾಧೆ ಇವರ ನಡುವಿನ ಸಂಬಂಧವನ್ನು ವರ್ಣಿಸುತ್ತದೆ.  ಭಕ್ತಿ ಪಂಥದ ಬೆಳೆವಣಿಗೆಯಲ್ಲಿ ಬಹು ಮುಖ್ಯವಾದ ಪಾತ್ರವನ್ನು ವಹಿಸಿದ ಕಾವ್ಯಕೃತಿ ಇದಾಗಿದೆ.

ಹನ್ನೆರಡು ಅಧ್ಯಾಯವಾಗಿ ವಿಭಾಗಿಸಲ್ಪಟ್ಟ ಗೀತಗೋವಿಂದದ  ಪ್ರತೀ ಅಧ್ಯಾಯವೂ ಪ್ರಬಂಧವೆಂಬ ೨೪ ಭಾಗವಾಗಿ ವಿಭಾಗಿಸಲ್ಪಟ್ಟಿದೆ. ಪ್ರಬಂಧಗಳು ಅಷ್ಟಪದಿಗಳೆಂಬ ಎಂಟು ದ್ವಿಪದಿಗಳನ್ನು ಒಳಗೊಂಡಿವೆ.  ರಾಧೆ ಕೃಷ್ಣನಿಗಿಂತ ಶ್ರೇಷ್ಠಳು ಎಂದು ಈ ಗ್ರಂಥ ಹೇಳುವುದರ ಜೊತೆಗೆ ನಾಯಿಕೆ ರಾಧೆಯ ಎಂಟು ಲಹರಿಗಳನ್ನು ವಿವರಿಸುತ್ತದೆ. ಈ ವಿವರಣೆಗಳು ನಿರಂತರವಾಗಿ ಭಾರತೀಯ ನೃತ್ಯ ಪ್ರಕಾರಗಳ ಮೇಲೆ ತನ್ನ ಪ್ರಭಾವವನ್ನು ಬೀರಿವೆ, ಬೀರುತ್ತಿವೆ, ಬೀರುತ್ತಲೇ ಇರುತ್ತವೆ. ಜಯದೇವನ ’ಗೀತ ಗೋವಿಂದ’ವೆಂಬ ಕೃತಿ ಅದನ್ನು ಬರೆದ ಕೆಲವೇ ವರ್ಷಗಳಲ್ಲಿ ಭಾರತದಾದ್ಯಂತ ಬಹಳ ಜನಪ್ರಿಯವಾಯ್ತು ಎಂಬುದು ಗೊತ್ತಾಗುತ್ತದೆ. ಅಂದಿನ ಕಾಲದಲ್ಲಿ ಮುದ್ರಣ ಸಲಕರಣೆಗಳು ಇಂದಿನಂತಿರಲಿಲ್ಲ. ಮುದ್ರಣವೆಂದರೆ ಕಂಠಪತ್ರಗಳೆಂದು ಕರೆಯಲ್ಪಡುವ ತಾಳೆಗರಿಗಳಲ್ಲಿ ಅಕ್ಷರಗಳನ್ನು ಕೊರೆಯುವುದೇ ಆಗಿತ್ತು. ತಾಡವೋಲೆ ಅಥವಾ ತಾಳೆಗರಿಗಳು ಬಹಳ ಬಾಳಿಕೆ ಬರುತ್ತಿದ್ದುದರಿಂದ ಅವುಗಳನ್ನೇ ಬರಹಗಳನ್ನು ಕಾಪಿಡಲಿಕ್ಕಾಗಿ ಬಳಸಲಾಗುತ್ತಿತ್ತು. ಚಪ್ಪನ್ನೈವತ್ತಾರು ರಾಜ್ಯಗಳುಳ್ಳ ಆ ಕಾಲದಲ್ಲಿ ಸಾವಿರಾರು ಪ್ರತಿಗಳು ಹಂಚಲ್ಪಟ್ಟಿದ್ದರೆ ಜಯದೇವನ ಮೂಲ ಕಾವ್ಯವನ್ನು ಹಲವರು ಕುಳಿತು ಪ್ರತಿ ತೆಗೆಯಬೇಕಾಗುತ್ತಿತ್ತು ಎಂಬುದು ತಿಳಿಯುತ್ತದೆ.

ಸಂಸ್ಕೃತವೊಂದು ಸಮೃದ್ಧ ಭಾಷೆಯಾದ್ದರಿಂದ ಅದರಲ್ಲಿ ಸುಲಲಿತವಾಗಿ ಜೋಡಿಸಿದ ಪದಪುಂಜಗಳು ಸಹಜವಾಗಿಯೇ ಎಲ್ಲರಿಗೂ ಹಿಡಿಸುತ್ತವೆ; ಅದರಲ್ಲಂತೂ ಭಾವನೆಗಳನ್ನು ಕಟ್ಟಿಹಾಕಿದ ಪದಪುಂಜಗಳ ಕೃತಿ ಹೊರಬಂದರೆ ಅದನ್ನು ಯಾರು ತಾನೇ ಅಲ್ಲಗಳೆದಾರು?  ಜಯದೇವ ಕವಿ ಎಲ್ಲಿದ್ದ ಏನು ಮಾಡಿದ ಎಂಬುದಕ್ಕಿಂತ, ಆತ ಕವಿಸಮಯವನ್ನು ಉಪಯೋಗಿಸಿಕೊಂಡ ರೀತಿ, ತನ್ನಲ್ಲೇ ಕೃಷ್ಣನನ್ನು ಕಂಡುಕೊಂಡು ರಾಧೆಗಾಗಿ ಕೃಷ್ಣ ಹಂಬಲಿಸುವ ರೀತಿ, ರಾಧಾ-ಕೃಷ್ಣರ ವಿನೋದ-ವಿಹಾರ-ವಿರಹಗಳ ಸುತ್ತ ನಲಿಯುವ ಆತನ ಕಥಾನಕ ’ಗೀತ ಗೋವಿಂದ’, ಗೋವಿಂದನಿಗೆ ಆತ ಶ್ರದ್ಧಾಭಕ್ತಿ ಪುರಸ್ಸರವಾಗಿ ಬರೆದು ಸಮರ್ಪಿಸಿದ ಕಾವ್ಯ ಗುಚ್ಛ. ಕೆಂದುಲಿ ಸಾಸನ ತನ್ನ ಊರೆಂದು ಗೀತಗೋವಿಂದದಲ್ಲಿ ಆತ ಹೇಳಿಕೊಂಡಿದ್ದಾನೆ. ಜಗನ್ನಾಥ ಪುರಿ ದೇವಸ್ಥಾನದಲ್ಲಿ ’ಗೀತ ಗೋವಿಂದ’ ನೃತ್ಯ ರೂಪಕವಾಗಿ, ಸಂಗೀತವಾಗಿ ದೇವರಿಗೆ ಅರ್ಪಿತವಾಗುತ್ತಲೇ ಇದ್ದಿದ್ದರಿಂದಲೂ ಅದರ ಜನಪ್ರಿಯತೆ  ಹೆಚ್ಚಿತು ಎನ್ನುವವರೂ ಇದ್ದಾರೆ.

ವೈಷ್ಣವ ಪಂಥದ ಮಾಧವ ಪಟ್ನಾಯ್ಕ್ ಎಂಬ ಓರಿಯಾ ಕವಿಯ ಗ್ರಂಥವೊಂದರಲ್ಲಿಯೂ ಸಹ ಜಯದೇವನ ಹೆಸರು ಉಲ್ಲೇಖಿತವಾಗಿದೆ. ಈ ಮಾಧವ ಪಟ್ನಾಯ್ಕ್ ಎಂಬವರು ಚೈತನ್ಯ ಮಹಾಪ್ರಭುವಿನ ಸಮಕಾಲೀನರಾಗಿದ್ದರು ಎಂದು ಇತಿಹಾಸ ಹೇಳುತ್ತದೆ. ಚೈತನ್ಯರು ಪುರಿಯ ಜಗನ್ನಾಥ ಕ್ಷೇತ್ರಕ್ಕೆ ಭೇಟಿಕೊಟ್ಟ ಬಗೆಗೆ ಮಾಧವ ಪಟ್ನಾಯ್ಕ್ ಬರೆದಿದ್ದಾರೆ. ಪುರಿ ಕ್ಷೇತ್ರಕ್ಕೆ ಹೋದ ಚೈತನ್ಯರು, ಕವಿ ಜಯದೇವನಿಗೆ ಗೌರವಾರ್ಪಣೆ ಮಾಡಲು, ಅಲ್ಲಿಗೆ ಹತ್ತಿರವೇ ಇರುವ ಆತನ ಹುಟ್ಟೂರಾದ ಕೆಂದುಲಿ ಸಾಸನ್ ಎಂಬ ಪ್ರದೇಶಕ್ಕೆ ಹೋಗಿಬಂದರು ಎಂತಲೂ ಅವರು ದಾಖಲಿಸಿದ್ದಾರೆ. ಬಾಲ್ಯದಲ್ಲಿಯೇ ಜಯದೇವ ಕವಿ ಹೇಗೆ ಶಾಸ್ತ್ರ, ಪುರಾಣ ಎಲ್ಲದರಲ್ಲೂ ಪಾರಂಗತನಾಗಿದ್ದ ಎಂಬುದನ್ನು ತಿಳಿಸುವ ಮಾಧವ ಪಟ್ನಾಯ್ಕ್, ಕವಿಯ ಜೀವನದಮೇಲೆ ಪ್ರಭಾವ ಬೀರಿದ ಹಲವು ದಂತಕಥೆಗಳ ಬಗೆಗೂ ಆ ಗ್ರಂಥ ತಿಳಿಸಿಕೊಡುತ್ತದೆ.

ಮಹಾವಿಷ್ಣುವಿನ ದಶಾವತಾರವನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸುವುದರಲ್ಲಿ ಕವಿ ಜಯದೇವ ಖ್ಯಾತನಾಗಿದ್ದನಂತೆ! ’ದಶಕೃತಿಕೃತೆ’ ಎಂಬ ಆತನ ಕೃತಿಯಲ್ಲಿ ಇದನ್ನು ಕಾಣಬಹುದು ಎಂಬುದು ವಿದ್ವಜ್ಜನರ ಹೇಳಿಕೆ. ಕೃಷ್ಣ ಮೂರು ಭಂಗಿಯಲ್ಲಿ ನಿಂತು ಹೇಗೆ ಮೋಹಕ ಮುರಳೀಗಾನವನ್ನು ಹೊಮ್ಮಿಸುತ್ತಿದ್ದ ಎಂಬುದನ್ನು ತನ್ನ ’ತ್ರಿಭಂಗಿ’ ಎಂಬ ಕೃತಿಯಲ್ಲಿ ಜಯದೇವ ಹೇಳಿದ್ದಾನೆ. ಜಯದೇವನೇ ರಚಿಸಿದನೆನ್ನಲಾದ ಎರಡು ಸ್ತೋತ್ರಗಳು ಸಿಖ್ಖರ ’ಗುರುಗ್ರಂಥ ಸಾಹಿಬ್’ನಲ್ಲಿ ಬಳಸಲ್ಪಟ್ಟಿವೆ ಎಂಬುದು ಇತಿಹಾಸ ತಜ್ಞರ ಅಭಿಪ್ರಾಯ. ಆ ಸ್ತೋತ್ರಗಳು ಭಾಗಶಃ ಸಂಸ್ಕೃತ ಮತ್ತು ಭಾಗಶಃ ಸಂಸ್ಕೃತದ ಅಲ್ಲಿನ ಸ್ಥಳೀಯ ಅಪಭ್ರಂಶಗಳು ಸೇರಿ ರೂಪಿತವಾಗಿವೆ ಎನ್ನುತ್ತಾರೆ. ಗುರುನಾನಕ್ರು ಜಗನ್ನಾಥ ಪುರಿಗೆ ಭೇಟಿ ಕೊಟ್ಟ ಸಮಯದಲ್ಲಿ, ಜಯದೇವನ ಕೃತಿಗಳು ಅವರಮೇಲೆ ಅಪಾರ ಪರಿಣಾಮವನ್ನು ಬೀರಿದವು ಎಂದು ಹೇಳುತ್ತಾರೆ.

ಓರಿಯಾ ದೇವಸ್ಥಾನಗಳಲ್ಲಿ ಅಸಂಘಟಿತ ದೇವದಾಸಿಯರನ್ನೆಲ್ಲ ಸೇರಿಸಿ, ಅವರಿಗೊಂದು ಸಾಂಘಿಕ ರೂಪವನ್ನು ಕೊಡುವಲ್ಲಿ ಜಯದೇವ ಕಾರಣನಾದ ಎಂದೂ ತಿಳಿದುಬರುತ್ತದೆ. ಓರಿಯಾ ಕವಿಗಳ ಕಾವ್ಯಗಳು ಹೆಚ್ಚಿದಂತೆ, ಓರಿಯಾ ದೇವಸ್ಥಾನಗಳಲ್ಲಿ ಅವುಗಳನ್ನು ಬಳಸಿಕೊಳ್ಳಲಾಗುತ್ತಿತ್ತಂತೆ. ದೇವರ ಸೇವೆಗಾಗಿಯೇ ತಮ್ಮನ್ನು ಮೀಸಲಾಗಿರಿಸಿ, ದೇವಸ್ಥಾನಗಳಲ್ಲಿ ಕವಿಗಳ ಕಾವ್ಯಾಲಾಪಕ್ಕೆ ನರ್ತಿಸುವ ಹೆಂಗಳೆಯರೇ ದೇವದಾಸಿಯರು. ಆ ಕಾಲದಲ್ಲಿ, ಅಂತಹ ದೇವದಾಸಿಯರು ನಡೆಸುವ ನರ್ತನ ಸೇವೆಗೆಂದೇ ನರ್ತನ ಮಂಟಪಗಳು ರೂಪುಗೊಳ್ಳುತ್ತಿದ್ದವು. ಸ್ವತಃ ಜಯದೇವನೂ ಒಬ್ಬ ಕವಿಯಾದ್ದರಿಂದ, ಆತನ ಕೃತಿಗಳೂ ನರ್ತನಕ್ಕೆ ಅಳವಡಿಸಲ್ಪಟ್ಟಿದ್ದರಿಂದ, ನರ್ತಕಿಯರೆನಿಸಿಕೊಂಡ ದೇವದಾಸಿಯರಿಗೊಂದು ಮರ್ಯಾದಿತ ಬದುಕನ್ನು ಒದಗಿಸಿಕೊಡುವ ಕಲ್ಪನೆ ಆ ಕಾಲದಲ್ಲೇ ಕವಿಯಲ್ಲಿ ಜಾಗೃತವಾಗಿತ್ತು ಎಂಬುದು ಆಶ್ಚರ್ಯವುಂಟುಮಾಡುತ್ತದೆ.

’ಗೀತ ಗೋವಿಂದದ’ದ ಇಂಗ್ಲಿಷ್ ಅವತರಣಿಕೆ ಪ್ರಧಮವಾಗಿ ಸರ್ ವಿಲಿಯಂ ಜೋನ್ಸ್ ಎಂಬವರಿಂದ ೧೭೯೨ರಲ್ಲಿ ನಡೆಯಿತು. ಓಡಿಶಾ ಅಥವಾ ಓರಿಸ್ಸಾಕ್ಕೆ ಅಂದು ಇದ್ದ ಹೆಸರು ಕಳಿಂಗ; ಆ ಕಳಿಂಗವೇ ಗೀತ ಗೋವಿಂದದ ತವರು ಎಂದು  ಈ ಹೊತ್ತಗೆಯ ಕರ್ತೃ ನಮೂದಿಸಿದ್ದಾರೆ. ನಂತರದ ದಿನಗಳಲ್ಲಿ, ಗೀತ ಗೋವಿಂದವು ಜಗದಾದ್ಯಂತ ಹಲವಾರು ಭಾಷೆಗಳಿಗೆ ಅನುವಾದಗೊಂಡಿತು. ಸಂಸ್ಕೃತ ಕಾವ್ಯ ಪ್ರಾಕಾರಕ್ಕೆ ಒಂದು ಅತ್ತ್ಯುತ್ತಮ ಉದಾಹರಣೆ ಇದೆಂದು ಪರಿಗಣಿಸಲ್ಪಟ್ಟಿದೆ. ಬಾರ್ಬರಾ ಸ್ಟಾಲರ್ ಮಿಲ್ಲರ್ ಎಂಬಾತ ’ಲವ್ ಸಾಂಗ್ ಆಫ್ ದಿ ಡಾರ್ಕ್ ಲಾರ್ಡ್ : ಜಯದೇವಾಸ್ ಗೀತ ಗೋವಿಂದ’["ಕಪ್ಪು ದೇವರ ಪ್ರೇಮ ಕಾವ್ಯ: ಜಯದೇವರ ಗೀತ ಗೋವಿಂದ"]"ಎಂಬ ಹೆಸರಿನಲ್ಲಿ ಇದನ್ನು ೧೯೭೭ರಲ್ಲಿ ಅನುವಾದಿಸಿದ್ದಾನೆ. ಈ ಪುಸ್ತಕವು ಜಾನ್ ಸ್ಟ್ರಾಟನ್ ಹಾವ್ಲೆಯ್ ಎಂಬವರ ಮುನ್ನುಡಿ ಮತ್ತು ವಿಸ್ತೃತವಾದ ವಿವರಣೆ ಯನ್ನು ಹೊಂದಿದೆ.

ತನ್ನ ಕಾವ್ಯಲೋಕದ ಮೂಲಕ ಸ್ವದೇಶೀಯರನ್ನೂ ಅಲ್ಲದೇ ವಿದೇಶೀಯರನ್ನೂ ಬರಸೆಳೆದ ಜಯದೇವ ಕವಿಯ     ಹುಟ್ಟೂರಿನ ಬಗೆಗೆ ಗೊಂದಲಗಳೇನೇ ಇದ್ದರೂ ಆತ ಕೊಟ್ಟಿರುವ ಕೃತಿಗಳು ಸಂಸ್ಕೃತ ಕಾವಲೋಕದ ರತ್ನಗಳಾಗಿವೆ. ಜಗನ್ನಾಥನಿಗೆ ತನ್ನನ್ನು ಸಮರ್ಪಿಸಿಕೊಂಡ ಕವಿಯ ಕಾವ ರಸದೌತಣ ಬಹಳ ಮನೋಜ್ಞವಾಗಿದೆ. ವಿನಮ್ರನಾಗಿ ಕವಿಗೆ ಸಾಷ್ಟಾಂಗವೆರಗುತ್ತ, ಆತನ ಕಾವ್ಯಗಳಿಗೆ ಜೀವತುಂಬಿದ ಕಲಾವಿದರಿಗೆ ನಮಿಸುತ್ತ, ಗೀತಗೋವಿಂದದ ಒಂದೆರಡು ಹಾಡುಗಳು ನಿಮಗಾಗಿ ಇದೋ ಈ ಕೆಳಗೆ ನೀಡಲ್ಪಟ್ಟಿವೆ, ನಮಸ್ಕಾರ :